ಬೆಂಗಳೂರು, ಏಪ್ರಿಲ್ 04: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಾಳೆ ಐಪಿಎಲ್ ಮ್ಯಾಚ್ ಹಿನ್ನೆಲೆ ಈಗಾಗಲೇ ಅಗತ್ಯ ಕ್ರಮಗಳನ್ನು ಆಯೋಜಕರು ಮತ್ತು ಬೆಂಗಳೂರು ಪೊಲೀಸರು ಕೈಗೊಂಡಿದ್ದಾರೆ. ಅಭಿಮಾನಿಗಳ ಅನುಕೂಲಕ್ಕಾಗಿ ಬಿಎಂಆರ್ಸಿಎಲ್ ಈಗಾಗಲೇ ಮೆಟ್ರೋ ರೈಲುಗಳ ಸಮಯ ವಿಸ್ತರಣೆ ಮಾಡಿರುವ ನಡುವೆ, ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಜನಸಂದಣಿ ನಿಯಂತ್ರಣದ ನಿಟ್ಟಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬಿಎಂಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, 8 ಬಸ್ಗಳು ಓಡಾಟ ನಡೆಸಲಿವೆ.
ಬಸ್ ಸಂಚರಿಸಲಿರುವ ಮಾರ್ಗಗಳು
ಚಿನ್ನಸ್ವಾಮಿ ಸ್ಟೇಡಿಯಂ ಟು ಕಾಡುಗೋಡಿ ಬಸ್ ನಿಲ್ದಾಣ, HAL ರಸ್ತೆ
ಚಿನ್ನಸ್ವಾಮಿ ಸ್ಟೇಡಿಯಂ ಟು ಸರ್ಜಾಪುರ
ಚಿನ್ನಸ್ವಾಮಿ ಸ್ಟೇಡಿಯಂ ಟು ಎಲೆಕ್ಟ್ರಾನಿಕ್ ಸಿಟಿ
ಚಿನ್ನಸ್ವಾಮಿ ಸ್ಟೇಡಿಯಂ ಟು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್
ಚಿನ್ನಸ್ವಾಮಿ ಸ್ಟೇಡಿಯಂ ಟು ಜನಪ್ರಿಯ ಟೌನ್ಶಿಪ್, ಮಾಗಡಿ ರಸ್ತೆ
ಈ ವಿಶೇಷ ಬಿಎಂಟಿಸಿ ಬಸ್ಗಳು ಸಿ.ಟಿ.ಒ ಜಂಕ್ಷನ್ನಿಂದ ಬಿ.ಆರ್.ವಿ ಜಂಕ್ಷನ್ ವರೆಗೆ ರಸ್ತೆಯ ಎಡ ಭಾಗದಲ್ಲಿ ನಿಲುಗಡೆಯಾಗಲಿದೆ. ಸಾರ್ವಜನಿಕರು ಈ ವ್ಯವಸ್ಥೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
ಸ್ಟೇಡಿಯಂಗೆ ಕೆಲ ವಸ್ತುಗಳನ್ನು ತರುವುದು ನಿಷೇಧ
ಕ್ರಿಕೆಟ್ ಪಂದ್ಯದ ದಿನದ ಸಲಹೆ:
ಸುರಕ್ಷತೆ ಮತ್ತು ನಿರಂತರತೆಯಿಂದ ಪಂದ್ಯ ನಡೆಸುವ ನಿಮಿತ್ತ, ಕ್ರೀಡಾಂಗಣದಲ್ಲಿ ಕೆಲ ವಸ್ತುಗಳನ್ನು ತರುವುದು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ದಯವಿಟ್ಟು ನಿರ್ಬಂಧಿತ ವಸ್ತುಗಳನ್ನು ತರದೇ, ಸುರಕ್ಷತಾ ತಪಾಸಣೆಯ ಸಿಬ್ಬಂದಿಗಳೊಂದಿಗೆ ಸಹಕರಿಸಿ.
ಪ್ರತಿಯೊಬ್ಬರಿಗೂ ಸುರಕ್ಷಿತವಾದ ಮತ್ತು ಉತ್ಸಾಹಭರಿತ ಪಂದ್ಯದ… pic.twitter.com/to7NDof6Hy
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) April 4, 2026
ಸುರಕ್ಷತೆ ದೃಷ್ಟಿಯಿಂದ ಕ್ರೀಡಾಂಗಣಕ್ಕೆ ಅಭಿಮಾನಿಗಳು ಕೆಲ ವಸ್ತುಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ದಯವಿಟ್ಟು ನಿರ್ಬಂಧಿತ ವಸ್ತುಗಳನ್ನು ತರದೇ, ಸುರಕ್ಷತಾ ತಪಾಸಣೆಯ ಸಿಬ್ಬಂದಿಗಳೊಂದಿಗೆ ಸಹಕರಿಸಿ ಎಂದೂ ಪೊಲೀಸರು ಮನವಿ ಮಾಡಿದ್ದಾರೆ. ಸಂಶಯಾಸ್ಪದ ವಸ್ತುಗಳು ಕಂಡಿಬಂದಲ್ಲಿ ಅವನ್ನು ವಶಕ್ಕೆ ಪಡೆಯುವುದಾಗಿಯೂ ಮುನ್ನೆಚ್ಚರಿಕೆ ನೀಡಲಾಗಿದೆ.
ನವದೆಹಲಿ, ಏಪ್ರಿಲ್ 4: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಇಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ತ್ರಿಭಾಷಾ ಸೂತ್ರದ ಕುರಿತು ನೀಡಿದ ಹೇಳಿಕೆಗಳನ್ನು ಟೀಕಿಸಿದ್ದಾರೆ. “ತ್ರಿಭಾಷಾ ಹೇರಿಕೆ” ಹೇಳಿಕೆಯನ್ನು ರಾಜಕೀಯ ನ್ಯೂನತೆಗಳನ್ನು ಮುಚ್ಚಲು ಮಾಡುತ್ತಿರುವ “ವಿಫಲ ಪ್ರಯತ್ನ” ಎಂದು ಅವರು ಟೀಕಿಸಿದ್ದಾರೆ.
ಸಿಎಂ ಸ್ಟಾಲಿನ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, “ರಾಷ್ಟ್ರೀಯ ಶಿಕ್ಷಣ ನೀತಿ, 2020 ಭಾಷಾ ವಿಮೋಚನೆಗಾಗಿ ಪ್ರಣಾಳಿಕೆಯಾಗಿದೆ. ಇದು ಮಾತೃಭಾಷೆಗೆ ಆದ್ಯತೆ ನೀಡುತ್ತದೆ. ಆದ್ದರಿಂದ ಪ್ರತಿ ತಮಿಳು ಮಗುವೂ ತಮ್ಮದೇ ಆದ ಅದ್ಭುತ ಭಾಷೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಬಹುದು” ಎಂದು ಹೇಳಿದ್ದಾರೆ.
ಬಹುಭಾಷಾವಾದವನ್ನು ಬೆದರಿಕೆಯಾಗಿ ಚಿತ್ರಿಸುವುದು ತಪ್ಪು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಪಾದಿಸಿದ್ದಾರೆ. ತಮಿಳು ಭಾಷಿಕರು ಬಹುಭಾಷಾ, ಆತ್ಮವಿಶ್ವಾಸ ಮತ್ತು ಭಾಷಾಶಾಸ್ತ್ರೀಯವಾಗಿ ಸಬಲೀಕರಣಗೊಂಡಾಗ ಆ ಭಾಷೆ ಶ್ರೀಮಂತವಾಗುತ್ತದೆ ಎಂದು ಹೇಳಿದ್ದಾರೆ. NEP ಎಲ್ಲಾ ಭಾಷೆಗಳನ್ನು ಸಮಾನವಾಗಿ ಉತ್ತೇಜಿಸುವ ಮೂಲಕ ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯುತ್ತದೆ ಮತ್ತು ಅಸ್ತಿತ್ವದಲ್ಲಿರುವ ದ್ವಿಭಾಷಾ ವ್ಯವಸ್ಥೆಯ ಮಿತಿಗಳನ್ನು ಪರಿಹರಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Hon’ble Chief Minister of Tamil Nadu, Thiru @mkstalin ji, your narrative of “imposition” is a tired attempt to mask political failures. The National Education Policy 2020 is, in fact, a manifesto for linguistic liberation. It prioritises the mother tongue so every Tamil child can… https://t.co/DhDP5ECM4e
ಸಮಗ್ರ ಶಿಕ್ಷಾ, ಶಿಕ್ಷಕರ ತರಬೇತಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಬಲಪಡಿಸುವುದು ಮತ್ತು ಶಿಕ್ಷಕರಿಗೆ ರಾಷ್ಟ್ರೀಯ ವೃತ್ತಿಪರ ಮಾನದಂಡಗಳು ಮತ್ತು ಮಾರ್ಗದರ್ಶನಕ್ಕಾಗಿ ರಾಷ್ಟ್ರೀಯ ಮಿಷನ್ನಂತಹ ರಾಷ್ಟ್ರೀಯ ಚೌಕಟ್ಟುಗಳಂತಹ ಉಪಕ್ರಮಗಳ ಮೂಲಕ ಅದರ ಅನುಷ್ಠಾನವನ್ನು ಧರ್ಮೇಂದ್ರ ಪ್ರಧಾನ್ ಎತ್ತಿ ತೋರಿಸಿದ್ದಾರೆ.
ತಮಿಳುನಾಡಿನಲ್ಲಿ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲು ಭಾರತದ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಿದ್ದರೂ ಡಿಎಂಕೆ ಸರ್ಕಾರವು ಶೈಕ್ಷಣಿಕ ಸಮಾನತೆಗಿಂತ ರಾಜಕೀಯ ನಿರೂಪಣೆಗಳಿಗೆ ಆದ್ಯತೆ ನೀಡುತ್ತಾ ಅವುಗಳ ಅನುಷ್ಠಾನಕ್ಕೆ ಅಡ್ಡಿಯಾಗುತ್ತಲೇ ಇದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಸಿನಿಮಾಗಳಲ್ಲಿ (Indian Cinema) ಸ್ಟಾರ್ ನಟರಿಗೆ ಸಿಕ್ಕಷ್ಟು ಸಂಭಾವನೆ, ಮಾನ್ಯತೆ ಸಿನಿಮಾದ ಇನ್ಯಾವುದೇ ವಿಭಾಗದ ಇನ್ಯಾವುದೇ ತಂತ್ರಜ್ಞರಿಗೆ ದೊರೆಯುವುದಿಲ್ಲ. ಸಂಗೀತ ನಿರ್ದೇಶಕರನ್ನಂತೂ ಕೇಳುವವರೇ ಇಲ್ಲ. ಎಷ್ಟೋ ಬಾರಿ ಕೇವಲ ಸಂಗೀತದಿಂದಲೇ ಸಿನಿಮಾಗಳು ಗೆದ್ದಿರುವುದುಂಟು. ಆದರೂ ಸಹ ಸಂಗೀತ ನಿರ್ದೇಶಕರಿಗೆ ಅವರ ಪ್ರತಿಭೆಗೆ ತಕ್ಕಷ್ಟು ಸೂಕ್ತ ಸಂಭಾವನೆ ದೊರೆಯುವುದಿಲ್ಲ. ಇದೀಗ ಎಆರ್ ರೆಹಮಾನ್ ಅವರಿಗೆ ಭಾರಿ ಮೊತ್ತದ ಸಂಭಾವನೆ ದೊರೆತಿದ್ದು, ಭಾರತದ ಇನ್ಯಾವ ಸಂಗೀತ ನಿರ್ದೇಶಕನಿಗೂ ಇಷ್ಟು ದೊಡ್ಡ ಸಂಭಾವನೆ ದೊರೆತಿಲ್ಲ ಎನ್ನಲಾಗುತ್ತಿದೆ.
ವರದಿಗಳ ಪ್ರಕಾರ, ‘ರಾಮಾಯಣ’ ಸಿನಿಮಾಕ್ಕಾಗಿ ಎಆರ್ ರೆಹಮಾನ್ ಅವರು 30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಭಾರತದ ಯಾವುದೇ ಸಂಗೀತ ನಿರ್ದೇಶಕರು ಇದುವರೆಗೆ ಪಡೆದ ಅತಿ ದೊಡ್ಡ ಸಂಭಾವನೆ ಪಡೆದಿದ್ದೇ ಇಲ್ಲ. ಅವರು ಮಾತ್ರವೇ ಅಲ್ಲದೆ ಸಿನಿಮಾಕ್ಕೆ ಸಂಗೀತ ನೀಡಿರುವ ಹಾನ್ಸ್ ಜಿಮ್ಮರ್ ಸಹ ಭಾರಿ ಮೊತ್ತದ ಸಂಭಾವನೆಯನ್ನು ಈ ಸಿನಿಮಾಕ್ಕೆ ಪಡೆಯುತ್ತಿದ್ದಾರೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾಕ್ಕೆ ನಾಲ್ಕು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದು ಕಲಾವಿದರು ಮತ್ತು ತಂತ್ರಜ್ಞರಿಗೆ ದೊಡ್ಡ ಮೊತ್ತದ ಸಂಭಾವನೆಯನ್ನೇ ನೀಡಲಾಗಿದೆ.
ಎಆರ್ ರೆಹಮಾನ್ ಈ ಚಿತ್ರಕ್ಕಾಗಿ ಸುಮಾರು 30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರುವ ಜೊತೆಗೆ ಒಪ್ಪಂದದಲ್ಲಿ ಪಾಲು ಸಹ ಪಡೆಯಲಿದ್ದಾರೆ. ಆಡಿಯೋ ಹಕ್ಕುಗಳು ಮಾರಾಟವಾಗುವ ಮೊತ್ತದಲ್ಲಿ ಸಹ ಎಆರ್ ರೆಹಮಾನ್ ಅವರಿಗೆ ನಿರ್ದಿಷ್ಟ ಪಾಲು ಸಿಗಲಿದೆ ಎನ್ನಲಾಗುತ್ತಿದೆ. ‘ರಾಮಾಯಣ’ ಚಿತ್ರವು ಅಂತರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವುದರಿಂದ, ಹ್ಯಾನ್ಸ್ ಜಿಮ್ಮರ್ ಅವರನ್ನು ಸಹ ಸಂಗೀತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
‘ರಾಮಾಯಣ’ ಸಿನಿಮಾವು ಭಾರತದ ಈ ವರೆಗೆ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿದ್ದು, ಸಿನಿಮಾಕ್ಕೆ 4000 ಕೋಟಿ ಬಜೆಟ್ ಹೂಡಲಾಗಿದೆ. ಸಿನಿಮಾದ ನಾಯಕ ರಣ್ಬೀರ್ ಕಪೂರ್ ಅವರಿಗೆ 150 ಕೋಟಿಗೂ ಹೆಚ್ಚು ಸಂಭಾವನೆ ನೀಡಲಾಗಿದೆಯಂತೆ. ಇನ್ನು ನಟ ಯಶ್ಗೆ ಸುಮಾರು 100 ಕೋಟಿ ಸಂಭಾವನೆ ನೀಡಲಾಗಿದೆ ಎನ್ನಲಾಗುತ್ತಿದೆ. ನಿರ್ದೇಶಕ ನಿತೀಶ್ ತಿವಾರಿಗೆ 50 ಕೋಟಿ ಸಂಭಾವನೆ ಕೊಡಲಾಗಿದೆಯಂತೆ. ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಮೊದಲ ಭಾಗ ದೀಪಾವಳಿಯಂದು ಬಿಡುಗಡೆ ಆಗಲಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026 ) ರ 8 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs Mumbai Indians) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 162 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಸಮೀರ್ ರಿಜ್ವಿ (Sameer Rizvi) ಅವರ ಸತತ ಎರಡನೇ ಅರ್ಧಶತಕದ ನೆರವಿನಿಂದ 18.1 ಓವರ್ಗಳಲ್ಲಿ 4 ವಿಕೆಟ್ಗಳನ್ನು ಕಳೆದುಕೊಂಡು ಜಯದ ನಗೆ ಬೀರಿತು. ಈ ಗೆಲುವಿನೊಂದಿಗೆ ಡೆಲ್ಲಿ ಲೀಗ್ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದರೆ, ಇತ್ತ ಮುಂಬೈ ಇಂಡಿಯನ್ಸ್ ತನ್ನ ಮೊದಲ ಸೋಲನ್ನು ಅನುಭವಿಸಿದೆ.
ಮುಂಬೈಗೆ ಆರಂಭಿಕ ಆಘಾತ
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 162 ರನ್ ಗಳಿಸಿತು. ಆದಾಗ್ಯೂ ತಂಡದ ಆರಂಭ ಉತ್ತಮವಾಗಿರಲಿಲ್ಲ. ಡೆಲ್ಲಿ ವೇಗಿ ಮುಖೇಶ್ ಕುಮಾರ್ ಒಂದೇ ಓವರ್ನಲ್ಲಿ ರಯಾನ್ ರಿಕಲ್ಟನ್ ಮತ್ತು ತಿಲಕ್ ವರ್ಮಾ ಅವರನ್ನು ಔಟ್ ಮಾಡುವ ಮೂಲಕ ಮುಂಬೈಗೆ ಆಘಾತ ನೀಡಿದರು. ಆದರೆ ಅನುಭವಿ ರೋಹಿತ್ ಶರ್ಮಾ 26 ಎಸೆತಗಳಲ್ಲಿ 35 ರನ್ ಗಳಿಸಿ ಇನ್ನಿಂಗ್ಸ್ ನಿಭಾಯಿಸುವ ಕೆಲಸ ಮಾಡಿದರು, ಆದರೆ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಔಟಾಗುವ ಮೂಲಕ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು.
ಸೂರ್ಯಕುಮಾರ್ ಅರ್ಧಶತಕ
ಇನ್ನು ಈ ಪಂದ್ಯದಲ್ಲಿ ಮುಂಬೈ ತಂಡದ ನಾಯಕತ್ವವಹಿಸಿದ್ದ ಸೂರ್ಯಕುಮಾರ್ ಯಾದವ್ 51 ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇವರ ಜೊತೆಗೆ ನಮನ್ ಧೀರ್ 28 ರನ್ಗಳ ಕಾಣಿಕೆ ನೀಡಿದರು. ದೆಹಲಿ ಪರ ಮುಖೇಶ್ ಕುಮಾರ್ 2 ವಿಕೆಟ್ ಪಡೆದರೆ,ಅಕ್ಷರ್ ಪಟೇಲ್, ಲುಂಗಿ ಎನ್ಗಿಡಿ, ವಿಪ್ರಜ್ ನಿಗಮ್ ಮತ್ತು ಟಿ ನಟರಾಜನ್ ತಲಾ 1 ವಿಕೆಟ್ ಪಡೆದರು.
ಡೆಲ್ಲಿಗೂ ಉತ್ತಮ ಆರಂಭ ಸಿಗಲಿಲ್ಲ
162 ರನ್ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು ಕಳಪೆ ಆರಂಭವನ್ನೇ ಪಡೆಯಿತು. ಕೆಎಲ್ ರಾಹುಲ್ ಕೇವಲ ಒಂದು ರನ್ಗೆ ಔಟಾದರು. ನಿತೀಶ್ ರಾಣಾ ಕೂಡ ರನೌಟ್ ಆದರು. ನಂತರ ಪಾಥುಮ್ ನಿಸ್ಸಂಕಾ 44 ರನ್ ಬಾರಿಸುವ ಮೂಲಕ ತಂಡವನ್ನು ಒತ್ತಡದಿಂದ ಹೊರತಂದರು. ಆದರೆ ಮೂರನೇ ವಿಕೆಟ್ 73 ರನ್ಗಳಿಗೆ ಪತನವಾದ ನಂತರ ತಂಡದ ಒತ್ತಡ ಮತ್ತಷ್ಟು ಹೆಚ್ಚಾಯಿತು. ನಂತರ ತಂಡದ ಇನ್ನಿಂಗ್ಸ್ ನಿಭಾಯಿಸಿದ ಸಮೀರ್ ರಿಜ್ವಿ ಅರ್ಧಶತಕ ಇನ್ನಿಂಗ್ಸ್ ಆಡಿ ತಂಡದ ಗೆಲುವು ಖಚಿತಪಡಿಸಿದರು.
ಆದಾಗ್ಯೂ ಶತಕದಂಚಿನಲ್ಲಿ ಎಡವಿದ ಸಮೀರ್ ರಿಜ್ವಿ 51 ಎಸೆತಗಳಲ್ಲಿ 176.47 ಸ್ಟ್ರೈಕ್ ರೇಟ್ನಲ್ಲಿ 90 ರನ್ ಗಳಿಸಿ ಮುಂಬೈ ತಂಡದ ಗೆಲುವಿನ ಹಾದಿಗೆ ಅಡ್ಡಲಾಗಿ ನಿಂತರು. ಅವರ ಇನ್ನಿಂಗ್ಸ್ನಲ್ಲಿ ಏಳು ಬೌಂಡರಿ ಮತ್ತು ಏಳು ಸಿಕ್ಸರ್ಗಳು ಸೇರಿದ್ದವು. ಅಂದರೆ ಅವರು ಕೇವಲ ಬೌಂಡರಿ ಮತ್ತು ಸಿಕ್ಸರ್ಗಳಿಂದ 70 ರನ್ ಗಳಿಸಿದರು. ಸಮೀರ್ ರಿಜ್ವಿ ಅವರ ಈ ಸ್ಮರಣೀಯ ಇನ್ನಿಂಗ್ಸ್ನಿಂದಾಗಿ, ದೆಹಲಿ 18.1 ಓವರ್ಗಳಲ್ಲಿ ಗುರಿ ತಲುಪಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಿಜಯಪುರ/ಚಿಕ್ಕಮಗಳೂರು, ಏಪ್ರಿಲ್ 04: ಹಳ್ಳಿಗಳಲ್ಲಿ ನೆಲೆಸಿರುವವರಿಗೆ ಅದರಲ್ಲೂ ಕೃಷಿಕ ಯುವಕರಿಗೆ ಮದುವೆಗೆ ಹೆಣ್ಣು ಸಿಗೋದೇ ಕಷ್ಟ ಎಂಬ ಸ್ಥಿತಿ ಸದ್ಯ ಸಮಾಜದಲ್ಲಿದೆ. ಇದೇ ಕಾರಣಕ್ಕೆ ಅದೆಷ್ಟೋ ಯುವಕರಿಗೆ ಈವರೆಗೂ ಕಂಕಣ ಭಾಗ್ಯವೇ ಕೂಡಿಬರುತ್ತಿಲ್ಲ. ಈ ನಡುವೆ ವಿವಾಹಕ್ಕೆ ಹುಡುಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಾನಸಿಕವಾಗಿ ತೀವ್ರ ನೊಂದು ಯುವಕರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ರಾಜ್ಯದಲ್ಲಿ ನಡೆದಿವೆ. ವಿಜಯಪುರದಲ್ಲಿ ಕುರಿಗಾಹಿ ನೇಣಿಗೆ ಶರಣಾಗಿದ್ದರೆ ಇತ್ತ ಚಿಕ್ಕಮಗಳೂರಲ್ಲಿ ಕುಡಿದ ಮತ್ತಿನಲ್ಲಿ ಮತ್ತೋರ್ವ ಪ್ರಾಣ ಕಳೆದುಕೊಂಡಿದ್ದಾನೆ.
ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ
2 ವರ್ಷದ ಹಿಂದೆ ಮದುವೆ ನಿಶ್ಚಯವಾಗಿ ಮುರಿದು ಬಿದ್ದಬಳಿಕ ಎಷ್ಟೇ ಹುಡುಕಿದ್ರೂ ಹೆಣ್ಣು ಸಿಗದಿದ್ದಕ್ಕೆ ತೀವ್ರವಾಗಿ ನೊಂದಿದ್ದ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ 2 ಗ್ರಾಮದ ಯುವಕ ಶಂಕರ ತಳವಾರ(25) ಮರಕ್ಕೆ ನೇಣುಹಾಕಿಕೊಂಡು ಪ್ರಾಣ ಬಿಟ್ಟಿದ್ದಾನೆ. ಈ ಬಗ್ಗೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಇತ್ತ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೋರಗಾನಹಳ್ಳಿಯಲ್ಲೂ ಕುಮಾರ್(26) ಇದೇ ಕಾರಣಕ್ಕೆ ಸೂಸೈಡ್ ಮಾಡಿಕೊಂಡಿದ್ದಾನೆ. ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ನಿವಾಸಿಯಾಗಿದ್ದ ಯುವಕ ಕುಡಿದ ಮತ್ತಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಹೆಣ್ಣು ಸಿಗದಿದ್ದಕ್ಕೆ ಮಾನಸಿಕವಾಗಿ ಈತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದ್ದು, ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಡೂರು ತಾಲೂಕಿನ ಬೋರಗಾನಹಳ್ಳಿಯ ಪರಮೇಶ್ವರಪ್ಪ ಎಂಬುವವರ ತೋಟದಲ್ಲಿ ಕುರಿ ಮಂದೆ ಬಿಟ್ಟುಕೊಂಡಿದ್ದ ಕುಮಾರ್, ರಾಮನವಮಿ ಹಬ್ಬಕ್ಕೆ ಊರಿಗೆ ಹೋದಾಗ ಮದುವೆ ಮಾಡುವಂತೆ ಮನೆಯವರನ್ನು ಒತ್ತಾಯಿಸಿದ್ದ. ಆದರೆ ಇಬ್ಬರು ಸಹೋದರರ ಮದುವೆಯಾದ ಬಳಿಕ ವಿವಾಹ ಮಾಡುವುದಾಗಿ ಪೋಷಕರು ಹೇಳಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಶಿರಾ ಬ್ರಹ್ಮಸಂದ್ರ ಗ್ರಾಮಕ್ಕೆ ರವಾನೆ ಮಾಡಲಾಗಿದೆ.
ಬೆಂಗಳೂರು, ಏಪ್ರಿಲ್ 04: ಉಭಯ ಕ್ಷೇತ್ರಗಳಲ್ಲಿ ಉಭಯ ಪಕ್ಷದಿಂದ ಮತ ಶಿಕಾರಿ ನಡೆಯುತ್ತಿದೆ. ಮತದಾನಕ್ಕೆ ಇನ್ನೂ ಐದು ದಿನ ಬಾಕಿ ಇದ್ದು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಅಬ್ಬರದ ಪ್ರಚಾರ ಮಾಡಲಾಗಿದೆ. ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah)ಎರಡನೇ ಸುತ್ತಿನ ಪ್ರಚಾರ ಮಾಡಿದ್ದು, ಅಭ್ಯರ್ಥಿ ಉಮೇಶ್ ಮೇಟಿ ಪರ ಅಬ್ಬರದ ಕ್ಯಾಂಪೇನ್ ಮಾಡಿದ್ದಾರೆ. ವಿವಿಧ ಸಮುದಾಯಗಳ ಮತಗಳ ಮೇಲೂ ಕಣ್ಣಿಡಲಾಗಿದೆ. ಈ ಮಧ್ಯೆ ಸಚಿವ ಜಮೀರ್ಗೆ ಸಿದ್ದರಾಮಯ್ಯರಿಂದ ತುರ್ತು ಬುಲಾವ್ ನೀಡಲಾಗಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಚಿವ ಜಮೀರ್ಗೆ ಸಿದ್ದರಾಮಯ್ಯರಿಂದ ತುರ್ತು ಬುಲಾವ್
ಇನ್ನು ಅಹಿಂದ ಮತಗಳ ಕ್ರೋಢೀಕರಣಕ್ಕಾಗಿ ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ವಿಶೇಷ ಸಭೆ ಮಾಡಿದ್ದಾರೆ. ಎಂ.ಸಿ.ವೇಣುಗೋಪಾಲ್, ಡಾ.ಪರಮೇಶ್ವರ್ ಮತ್ತು ಮಹದೇವಪ್ಪ ಜೊತೆ ಸಭೆ ಮಾಡಿದ್ದು, ಈ ವೇಳೆ ಉಪಚುನಾವಣೆ ಪ್ರಚಾರಕ್ಕೆ ಬರುವಂತೆ ಜಮೀರ್ಗೆ ಕರೆ ಮಾಡುವಂತೆ ಕೆ.ಸಿ.ವೇಣುಗೋಪಾಲ್ಗೆ ಸೂಚಿಸಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಗಲಿಲ್ಲ ಅಂತಾ ಬೇಸರಗೊಂಡಿದ್ದ ಸಚಿವ ಜಮೀರ್ ನಾಳೆ ದಾವಣಗೆರೆ ಎಂಟ್ರಿ ಕೊಡಲಿದ್ದಾರೆ. ಕೇರಳದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಜಮೀರ್, ನಾಳೆ ದಾವಣಗೆರೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಜಮೀರ್ಗಾಗಿಯೇ ವಿಶೇಷ ವಿಮಾನ ಬುಕ್ ಮಾಡಿರುವ ಸಿಎಂ, ಕೇರಳದಿಂದ ದಾವಣಗೆರೆಗೆ ಕರೆಸಿಕೊಳ್ಳುತ್ತಿದ್ದಾರೆ. ನಂತರ ಬಾಗಲಕೋಟೆಯಲ್ಲಿ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಈ ಸಂಬಂಧ ಸಭೆ ನಡೆಸಿರುವ ಸಿಎಂ, ಅಹಿಂದ ಮತಗಳನ್ನ ಸೆಳೆಯಲು ತಂತ್ರ ರೂಪಿಸಿದ್ದಾರೆ.
ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ
ಇನ್ನು ಟಿವಿ9 ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವರಿಗೆ ನನ್ನ ಅಟ್ಯಾಕ್ ಮಾಡುವುದು ಬಿಟ್ಟರೇ ಬೇರೆನಿದೆ ಅಂತಾ ವಾಗ್ದಾಳಿ ಮಾಡಿದ್ದಾರೆ. ಕುಟುಂಬದವರಿಗೆ ಟಿಕೆಟ್ ನೀಡಿರುವ ಬಗ್ಗೆ ಸ್ಫಷ್ಟನೆ ನೀಡಿದ್ದಾರೆ. ಹಾಗೆಯೇ 2028ಕ್ಕೂ ಈ ಚುನಾವಣೆಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ಸಮುದಾಯವಾರು ಮತಬೇಟೆ
ಬಿಜೆಪಿ ಕಲಿಗಳು ಕೂಡಾ ಅಖಾಡದಲ್ಲಿ ಅಬ್ಬರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿ ಮಠ ಪರವಾಗಿ ಮತಬೇಟೆಯಾಡಿದ್ದಾರೆ. ಬಿಜೆಪಿ ಲಿಂಗಾಯತ ಮತಗಳ ಕಬ್ಜ ಮಾಡಲು ಕ್ಯಾಂಪೇನ್ ಮಾಡುತ್ತಿದೆ. ಕಾಂಗ್ರೆಸ್ ಪರ ಸಚಿವರು, ಶಾಸಕರು ಅಖಾಡಕ್ಕಿಳಿದಿದ್ರೆ, ಬಿಜೆಪಿ ಪರ ಬಿ.ವೈ ವಿಜಯೇಂದ್ರ, ವಿ.ಸೋಮಣ್ಣ, ಹೆಚ್.ಡಿ ಕುಮಾರಸ್ವಾಮಿ ಕ್ಯಾಂಪೇನ್ ಮಾಡಿದ್ದಾರೆ. ಗ್ಯಾರಂಟಿಯನ್ನೇ ಅಸ್ತ್ರ ಮಾಡಿಕೊಂಡಿರುವ ಕಾಂಗ್ರೆಸ್ಗೆ ತಿವಿದಿದ್ದಾರೆ.
ಐಪಿಎಲ್ 2026 ರ ಒಂಬತ್ತನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಗುಜರಾತ್ ಟೈಟಾನ್ಸ್ ತಂಡವು ತಮ್ಮ ತವರು ಮೈದಾನವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿದ್ದು, ಸೀಸನ್ನ ಮೊದಲ ಗೆಲುವನ್ನು ಎದುರು ನೋಡುತ್ತಿದೆ. ಇತ್ತ ತನ್ನ ಮೊದಲ ಪಂದ್ಯದಲ್ಲಿನ ಗೆಲುವಿನೊಂದಿಗೆ ಮಿಂಚುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡವು ಅಜೇಯ ಓಟವನ್ನು ಮುಂದುವರೆಸಲು ನೋಡಲಿದೆ.
ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ (Thyroid) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಈ ಸಮಸ್ಯೆಯಲ್ಲಿ ಆಹಾರ ಪದ್ಧತಿ ಬಹಳ ಮಹತ್ವದ್ದಾಗಿದ್ದು, ಕೆಟ್ಟ ಆಹಾರ ಸೇವನೆಯಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು. ನಿಮಗೆ ತಿಳಿರಿರಬಹುದು ಥೈರಾಯ್ಡ್ ಒಂದು ಗ್ರಂಥಿಯಾಗಿದ್ದು, ಇದು ಕುತ್ತಿಗೆಯ ಭಾಗದಲ್ಲಿ ಇರುತ್ತದೆ ಮತ್ತು ದೇಹದ ಮೆಟಾಬಾಲಿಸಮ್ನ್ನು ನಿಯಂತ್ರಿಸುತ್ತದೆ. ಇದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ದಣಿವು, ಕೂದಲು ಉದುರುವುದು ಮುಂತಾದ ಸಮಸ್ಯೆಗಳು ಕಂಡುಬರಬಹುದು. ಜೀವನಶೈಲಿ, ಒತ್ತಡ, ಹಾರ್ಮೋನ್ ಬದಲಾವಣೆಗಳು ಮತ್ತು ಪೌಷ್ಟಿಕಾಂಶ ಕೊರತೆ ಇದಕ್ಕೆ ಕಾರಣವಾಗಬಹುದು. ಹಾಗಾಗಿ ಥೈರಾಯ್ಡ್ ಸಮಸ್ಯೆ ಬರಬಾರದು ಎಂದರೆ ಅಥವಾ ಈಗಾಗಲೇ ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತವರು ತಮ್ಮ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಉತ್ತಮ. ಹಾಗಾದರೆ ಥೈರಾಯ್ಡ್ ಸಮಸ್ಯೆ ಇದ್ದಾಗ ಯಾವ ರೀತಿಯ ಆಹಾರಗಳ ಸೇವನೆ ಮಾಡಬಾರದು, ಜೀವನಶೈಲಿಯಲ್ಲಿ ಯಾವ ರೀತಿ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಥೈರಾಯ್ಡ್ ಸಮಸ್ಯೆ ಇದ್ದಾಗ ಯಾವ ಆಹಾರಗಳ ಸೇವನೆ ಮಾಡಬಾರದು?
ಸೋಯಾ ಮತ್ತು ಸೋಯಾ ಉತ್ಪನ್ನಗಳು ಇವು ಥೈರಾಯ್ಡ್ ಹಾರ್ಮೋನ್ ಕಾರ್ಯಕ್ಕೆ ಅಡ್ಡಿಯಾಗಬಹುದು
ಕಚ್ಚಾ ತರಕಾರಿಗಳು (ಗೋಬಿ, ಬ್ರೋಕೊಲಿ) ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡುವುದನ್ನು ತಪ್ಪಿಸಬೇಕು
ಪ್ರೊಸೆಸ್ಡ್ ಮತ್ತು ಜಂಕ್ ಫುಡ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ
ಹೆಚ್ಚು ಉಪ್ಪು ಮತ್ತು ಸಕ್ಕರೆ ಇರುವ ಆಹಾರಗಳು
ಕೆಫೀನ್ ಮತ್ತು ಮದ್ಯಪಾನ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು
ಥೈರಾಯ್ಡ್ ನಿಯಂತ್ರಣಕ್ಕೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು?
ಐಯೋಡಿನ್ ಇರುವ ಆಹಾರಗಳು (ಉಪ್ಪು, ಹಾಲು ಉತ್ಪನ್ನಗಳು, ಮೀನು)
ಸೆಲೆನಿಯಂ ಮತ್ತು ಜಿಂಕ್ ಇರುವ ಆಹಾರಗಳು (ಡ್ರೈಫ್ರೂಟ್ಸ್, ಬೀಜಗಳು, ಸಂಪೂರ್ಣ ಧಾನ್ಯಗಳು)
ಹಸಿರು ತರಕಾರಿಗಳು ಮತ್ತು ಹಣ್ಣುಗಳು
ಪ್ರೋಟೀನ್ ಆಹಾರಗಳು (ಬೇಳೆ, ಮೊಟ್ಟೆ, ಪನೀರ್)
ಸಾಕಷ್ಟು ನೀರು ಕುಡಿಯುವುದು ಮತ್ತು ಸಮತೋಲನ ಆಹಾರ ಸೇವಿಸುವುದು ಕೂಡ ಮುಖ್ಯವಾಗುತ್ತದೆ.
ಒಟ್ಟಿನಲ್ಲಿ, ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಥೈರಾಯ್ಡ್ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಅದರ ಜೊತೆಗೆ ತಜ್ಞರ ಸಲಹೆಯನ್ನು ಪಾಲಿಸುವುದು ಕೂಡ ಬಹಳ ಮುಖ್ಯ.
ಹೈದರಾಬಾದ್: ಹೋಟೆಲ್ ಒಂದಕ್ಕೆ ಆಹಾರದ ಆಸೆಯಿಂದ ಬಂದ ಭಿಕ್ಷುಕನ ಮೇಲೆ ಹೋಟೆಲ್ನ ಸಿಬ್ಬಂದಿ ಬಿಸಿನೀರು ಸುರಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಈ ಅಮಾನವೀಯ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಇಬ್ರಾಹಿಂ ಖಾನ್ ಈ ಕೃತ್ಯವನ್ನು ವಿಡಿಯೋ ಮಾಡಿ ಬಹಿರಂಗಪಡಿಸಿದ ಬೆನ್ನಲ್ಲೇ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಬಿಸಿನೀರಿನಿಂದ ಕಂಗೆಟ್ಟು ನೋವಿನಿಂದ ನರಳುತ್ತಿದ್ದ ಆ ವ್ಯಕ್ತಿಯ ಪರವಾಗಿ ಹೋಟೆಲ್ನ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, “ಆತ ಪ್ರತಿದಿನ ಗ್ರಾಹಕರಿಗೆ ತೊಂದರೆ ನೀಡುತ್ತಿದ್ದ” ಎಂಬ ಬೇಜವಾಬ್ದಾರಿಯ ಸಮರ್ಥನೆ ಕೇಳಿಬಂದಿದೆ. “ಒಂದು ವೇಳೆ ತೊಂದರೆ ನೀಡುತ್ತಿದ್ದರೆ ಆತನನ್ನು ಬೆದರಿಸಿ ಕಳುಹಿಸಬೇಕಿತ್ತು ಅಥವಾ ಪೊಲೀಸರಿಗೆ ದೂರು ನೀಡಬೇಕಿತ್ತು, ಅದನ್ನು ಬಿಟ್ಟು ಇಷ್ಟು ಕ್ರೂರವಾಗಿ ವರ್ತಿಸುವುದು ಸರಿಯೇ?” ಎಂದು ಸಾಮಾಜಿಕ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಾಗ ಹೋಟೆಲ್ ಸಿಬ್ಬಂದಿ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ. ಸದ್ಯ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.
ನವದೆಹಲಿ, ಏಪ್ರಿಲ್ 4: ನಮೆಲ್ಲರಿಗೂ ಗೊತ್ತಿರುವಂತೆ ಇರಾನ್ (Iran War) ಮೇಲೆ ಇಸ್ರೇಲ್ ಮತ್ತು ಅಮೆರಿಕ ಯುದ್ಧ ಸಾರಿ ತಿಂಗಳೇ ಕಳೆದಿದೆ. ಆದರೂ ಅಲ್ಲಿನ ಪರಿಸ್ಥಿತಿ ಶಾಂತವಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಯುದ್ಧದಲ್ಲಿ ಭಾರತ ತಟಸ್ಥ ನೀತಿಯನ್ನು ತಳೆದಿದ್ದು, ಬಹಿರಂಗವಾಗಿ ಯಾವ ದೇಶಕ್ಕೂ ಬೆಂಬಲ ಘೋಷಿಸಿಲ್ಲ. ಆದರೂ ಯುದ್ಧಪೀಡಿತ ದೇಶಗಳಿಗೆ ವೈದ್ಯಕೀಯ ಕಿಟ್ ಕಳುಹಿಸುವ ಮಾನವೀಯ ಕಾರ್ಯವನ್ನು ಮಾಡಿರುವ ಭಾರತ ಶಾಂತಿಯುತ ಮಾತುಕತೆಯ ಮೂಲಕ ಯುದ್ಧ ನಿಲ್ಲಿಸುವುದರ ಅಗತ್ಯವನ್ನು ಒತ್ತಿ ಹೇಳುತ್ತಲೇ ಇದೆ. ಈ ಯುದ್ಧದ ಬಗ್ಗೆ ಭಾರತೀಯರ ಅಭಿಪ್ರಾಯವೇನು? ಭಾರತದ ಜನರು ಯಾವ ದೇಶದ ಪರವಾಗಿ ನಿಲುವು ತಳೆದಿದ್ದಾರೆ ಎಂಬ ಕುರಿತು ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಆ ಕುರಿತು ಪೂರ್ತಿ ವಿವರ ಇಲ್ಲಿದೆ.
ಯುದ್ಧ ಆರಂಭವಾದ ಮೊದಲ ವಾರದಿಂದ 4ನೇ ವಾರದ ವೇಳೆಗೆ ಭಾರತೀಯರ ಅಭಿಪ್ರಾಯವೂ ಬದಲಾಗಿರುವುದನ್ನು ಈ ಸಮೀಕ್ಷೆಯಲ್ಲಿ ಗಮನಿಸಬಹುದು. ದೇಶಾದ್ಯಂತ 18 ವರ್ಷದ ಮೇಲಿನವರಲ್ಲಿ ನಡೆಸಿದ ಸಿವೋಟರ್ ಸ್ನ್ಯಾಪ್ ಪೋಲ್ CATI ಸಂದರ್ಶನಗಳು (ಕಂಪ್ಯೂಟರ್ ಅಸಿಸ್ಟೆಡ್ ಟೆಲಿಫೋನ್ ಇಂಟರ್ವ್ಯೂಯಿಂಗ್) ಅನ್ನು ಆಧರಿಸಿವೆ (BARC-ALL INDIA). ದೇಶಾದ್ಯಂತ ಸಿವೋಟರ್ ನಡೆಸಿದ ಈ ಸಮೀಕ್ಷೆಯಲ್ಲಿ ಒಟ್ಟು 10,854 ಜನರು ಭಾಗವಹಿಸಿದ್ದರು. ಮಾರ್ಚ್ ಎರಡನೇ ವಾರದಿಂದ ನಾಲ್ಕನೇ ವಾರದವರೆಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಫೋನ್ ಮೂಲಕ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಸಮೀಕ್ಷೆಯಲ್ಲಿ ಕೇಳಲಾಗಿದ್ದ ಪ್ರಮುಖ ಪ್ರಶ್ನೆಗಳು ಇಲ್ಲಿವೆ.
1. ಬಿಕ್ಕಟ್ಟಿನ ಸಮಯದಲ್ಲಿ ಭಾರತ ಯಾರನ್ನು ನಂಬಬೇಕು?
ಮಾರ್ಚ್ ಎರಡನೇ ವಾರ:
ಅಮೆರಿಕ – 26%
ಇರಾನ್ – 27%
ಹೇಳಲು ಸಾಧ್ಯವಿಲ್ಲ – 47%
ಮಾರ್ಚ್ ಮೂರನೇ ವಾರ:
ಅಮೆರಿಕ – 26%
ಇರಾನ್ – 38%
ಹೇಳಲು ಸಾಧ್ಯವಿಲ್ಲ – 36%
ಮಾರ್ಚ್ ನಾಲ್ಕನೇ ವಾರ:
ಅಮೆರಿಕ – 15%
ಇರಾನ್ – 58%
ಹೇಳಲು ಸಾಧ್ಯವಿಲ್ಲ – 27%
ಸಮೀಕ್ಷೆ ಪ್ರಕಾರ 3 ವಾರಗಳಲ್ಲಿ ಭಾರತೀಯರ ಅಭಿಪ್ರಾಯದಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂದಿತು. ಇರಾನ್ ಮೇಲಿನ ನಂಬಿಕೆ ವೇಗವಾಗಿ ಬೆಳೆಯಿತು.
2. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ತಟಸ್ಥವಾಗಿರಬೇಕೇ?
ಎರಡನೇ ವಾರ – 58% ಹೌದು
ಮೂರನೇ ವಾರ – 61% ಹೌದು
ನಾಲ್ಕನೇ ವಾರ – 60% ಹೌದು
ಭಾರತ ಯುದ್ಧದಿಂದ ದೂರವಿರಬೇಕು ಎಂದು ಭಾರತದ ಬಹುಪಾಲು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
3. ಭಾರತವು ಒಂದು ನಿಲುವು ತೆಗೆದುಕೊಳ್ಳಬೇಕಾದರೆ ಯಾವ ದೇಶದ ಪರವಾಗಿರಬೇಕು?
ಎರಡನೇ ವಾರ – ಇರಾನ್ 56%, ಅಮೆರಿಕ 44%
ಮೂರನೇ ವಾರ – ಇರಾನ್ 62%, ಅಮೆರಿಕ 38%
ನಾಲ್ಕನೇ ವಾರ – ಇರಾನ್ 74%, ಅಮೆರಿಕ 26%
ಪ್ರತಿ ವಾರ ಇರಾನ್ಗೆ ಭಾರತೀಯರ ಬೆಂಬಲ ಹೆಚ್ಚುತ್ತಿರುವುದನ್ನು ನೋಡಬಹುದು.
4. ಅಂತಾರಾಷ್ಟ್ರೀಯವಾಗಿ ಯಾವ ದೇಶವನ್ನು ನಂಬಬೇಕು?
ಎರಡನೇ ವಾರ – ರಷ್ಯಾ 67%, ಅಮೆರಿಕ 10%
ಮೂರನೇ ವಾರ – ರಷ್ಯಾ 73%, ಅಮೆರಿಕ 11%
ನಾಲ್ಕನೇ ವಾರ – ರಷ್ಯಾ 70%, ಅಮೆರಿಕ 14%
ಮೂರು ವಾರಗಳಲ್ಲಿಯೂ ಭಾರತೀಯರಿಗೆ ರಷ್ಯಾದ ಬಗ್ಗೆ ಹೆಚ್ಚು ಅಗಾಧವಾದ ವಿಶ್ವಾಸವಿದೆ.
5. ಭಾರತಕ್ಕೆ ಯಾವ ದೇಶ ಬೆದರಿಕೆಯಾಗಿದೆ?
ಎರಡನೇ ವಾರ – ಚೀನಾ 41%, ಪಾಕಿಸ್ತಾನ 30%
ಮೂರನೇ ವಾರ – ಚೀನಾ 44%, ಪಾಕಿಸ್ತಾನ 31%
ನಾಲ್ಕನೇ ವಾರ – ಚೀನಾ 44%, ಪಾಕಿಸ್ತಾನ 34%
ಜನರು ಪಾಕಿಸ್ತಾನಕ್ಕಿಂತಲೂ ಚೀನಾವನ್ನು ದೇಶಕ್ಕೆ ಪ್ರಮುಖ ಬೆದರಿಕೆಯಾಗಿ ನೋಡುತ್ತಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
6. ಭಾರತದ ವಿದೇಶಾಂಗ ನೀತಿ ಹೇಗಿದೆ?
ಹೆಚ್ಚಾಗಿ ತೃಪ್ತಿಕರವಾಗಿದೆ – 32%
ಸ್ವಲ್ಪ ಮಟ್ಟಿಗೆ ತೃಪ್ತಿಕರ – 21%
ಅತೃಪ್ತಿ – ಸುಮಾರು 42%
ಒಟ್ಟಾರೆಯಾಗಿ ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಯಿತು.
7. ನಮ್ಮ ದೇಶದ ಯಾವ ವಲಯಗಳು ಯುದ್ಧದಿಂದ ಹೆಚ್ಚು ಪರಿಣಾಮ ಬೀರಿವೆ?
ಆರ್ಥಿಕತೆ – 45% ರಿಂದ 50%
ವಿದೇಶಾಂಗ ನೀತಿ – 13% ರಿಂದ 16%
ರಾಜಕೀಯ – 11% ರಿಂದ 13%
ಜನರ ಕಾಳಜಿ ಹೆಚ್ಚಾಗಿ ಆರ್ಥಿಕತೆಯ ಬಗ್ಗೆ ಇದೆ ಎಂದು ಈ ವರದಿ ಸ್ಪಷ್ಟಪಡಿಸುತ್ತದೆ.
8. ಗ್ಯಾಸ್ ಸಮಸ್ಯೆ: ಇದು ಇನ್ನೂ ಪರಿಣಾಮ ಬೀರುತ್ತಿದೆಯೇ?
ಎರಡನೇ ವಾರ – 64% ತೊಂದರೆ ನೀಡುತ್ತಿದೆ
ಮೂರನೇ ವಾರ – 65% ತೊಂದರೆ ನೀಡುತ್ತಿದೆ
ನಾಲ್ಕನೇ ವಾರ – 65% ತೊಂದರೆ ನೀಡುತ್ತಿದೆ
ಮೂರು ವಾರಗಳಲ್ಲಿಯೂ ಪರಿಸ್ಥಿತಿ ಬದಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
9. ಇಂಧನ ಬೆಲೆ ಏರಿಕೆಯ ಬಗ್ಗೆ ನೀವು ಚಿಂತಿತರಾಗಿದ್ದೀರಾ?
82% ಜನರು ಬೆಲೆಗಳು ಹೆಚ್ಚಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಚ್ಚಿನವರು 10%ರಿಂದ 50%ರಷ್ಟು ಹೆಚ್ಚಳವನ್ನು ಊಹಿಸಿದ್ದಾರೆ.
ಇಂಧನ ಕೊರತೆಯ ಸಂದರ್ಭದಲ್ಲಿ 66% ಜನರು ಸೌದೆ ಒಲೆಗಳತ್ತ ಮುಖ ಮಾಡಿದ್ದಾರೆ. 16% ಜನ ವಿದ್ಯುತ್ ಉಪಕರಣಗಳನ್ನು ಬಳಸುತ್ತಿದ್ದಾರೆ. 8% ಜನ ಅಡುಗೆ ಮಾಡುವುದನ್ನೇ ನಿಲ್ಲಿಸಿದ್ದಾರೆ.
10. ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶ್ವ ವ್ಯವಸ್ಥೆಯು ಬದಲಾಗುತ್ತದೆಯೇ?
ಸುಮಾರು 52%ರಷ್ಟು ಜನರು ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಈ ಸಮೀಕ್ಷೆಯು ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಭಾರತದ ಜನರು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ದೂರವಿರಲು ಬಯಸುತ್ತಾರೆ. ಆದರೆ ನಿಲುವು ತೆಗೆದುಕೊಳ್ಳುವ ಅನಿವಾರ್ಯತೆ ಬಂದರೆ ಅವರು ಇರಾನ್ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಸಮೀಕ್ಷೆಯು ಇರಾನ್-ಅಮೆರಿಕ-ಇಸ್ರೇಲ್ ನಡುವಿನ ಯುದ್ಧದ ಪರಿಣಾಮವು ಈಗಾಗಲೇ ಭಾರತದ ಜನರ ಜೀವನವನ್ನು ತಲುಪಿದೆ ಎಂದು ಸ್ಪಷ್ಟಪಡಿಸುತ್ತದೆ. ಈ ಸಮೀಕ್ಷೆಯನ್ನು ದೂರವಾಣಿ ಮೂಲಕ ನಡೆಸಲಾಗಿತ್ತು. ಈ ಸಮೀಕ್ಷೆ ಜಾಗತಿಕ ಯುದ್ಧವನ್ನು ಭಾರತೀಯರು ಯಾವ ದೃಷ್ಟಿಕೋನದಿಂದ ನೋಡುತ್ತಿದ್ದಾರೆ ಎಂಬುದರ ಪ್ರತಿಬಿಂಬವಾಗಿದೆ ಎನ್ನಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ