MI vs PBKS: ಬ್ಯಾಕ್ ಟು ಬ್ಯಾಕ್ ವಿಕೆಟ್; ಐಪಿಎಲ್‌ನಲ್ಲಿ ವಿಶೇಷ ಶತಕ ಪೂರೈಸಿದ ಅರ್ಶ್‌ದೀಪ್ ಸಿಂಗ್ – Kannada News | Arshdeep Singh’s IPL Century: Punjab Kings Pacer Dominates MI with 100 Wickets

ಪಂಜಾಬ್ ಕಿಂಗ್ಸ್ ತಂಡದ ವೇಗಿ ಅರ್ಶ್‌ದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದರು. ಪವರ್‌ಪ್ಲೇನಲ್ಲಿ ಸತತ ಎರಡು ಎಸೆತಗಳಲ್ಲಿ ರಿಕಿ ಪಾಂಟಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡುವ ಮೂಲಕ ಅವರು ಮುಂಬೈ ಇಂಡಿಯನ್ಸ್ ತಂಡದ ಬೆನ್ನೆಲುಬನ್ನು ಮುರಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಕೇವಲ ಒಂದು ರನ್ ನೀಡಿದರು ಆದರೆ ಎರಡನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು. ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಅರ್ಶ್‌ದೀಪ್, ರಿಕಲ್ಟನ್ ಅವರನ್ನು ಔಟ್ ಮಾಡಿದರೆ, ಮುಂದಿನ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡಿದರು. ಈ ಮೂಲಕ ವಿಶೇಷ ದಾಖಲೆಯನ್ನು ನಿರ್ಮಿಸಿದರು.

ರಿಕಲ್ಟನ್ ಅವರನ್ನು ಔಟ್ ಮಾಡುವ ಮೂಲಕ ಅರ್ಶ್‌ದೀಪ್ ಸಿಂಗ್ ಐಪಿಎಲ್​ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. ಐಪಿಎಲ್​ನಲ್ಲಿ 100 ವಿಕೆಟ್ ಪಡೆದ ಐದನೇ ಎಡಗೈ ವೇಗಿ ಮತ್ತು ಪಂಜಾಬ್ ಪರ 100 ವಿಕೆಟ್ ಪಡೆದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದಾಗ್ಯೂ ಅರ್ಶ್‌ದೀಪ್ ಕೆಲವು ಸಮಯದಿಂದ ಕಳಪೆ ಫಾರ್ಮ್ ನಲ್ಲಿದ್ದಾರೆ. ಪವರ್ ಪ್ಲೇನಲ್ಲಿ ವಿಕೆಟ್ ಉರುಳಿಸಲು ಹೆಸರುವಾಸಿಯಾಗಿರುವ ಅವರು ಕಳೆದ 10 ಇನ್ನಿಂಗ್ಸ್ ಗಳಲ್ಲಿ ಪವರ್ ಪ್ಲೇನಲ್ಲಿ ವಿಕೆಟ್ ಪಡೆದಿರಲಿಲ್ಲ. ಆದರೆ ಈಗ, ಮುಂಬೈ ಇಂಡಿಯನ್ಸ್ ವಿರುದ್ಧ ಪವರ್ ಪ್ಲೇನಲ್ಲಿ ರಿಕಲ್ಟನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆದರು.

ಅರ್ಶ್‌ದೀಪ್ ಸಿಂಗ್ ತಮ್ಮ ಅಲ್ಪ ವೃತ್ತಿಜೀವನದಲ್ಲಿ ಅನೇಕ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಐಪಿಎಲ್ ಜೊತೆಗೆ, ಅವರು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 100 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಅವರಿಗೆ ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಎಂಬ ಪ್ರಶಸ್ತಿಯೂ ಲಭಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಜರಾತ್​ನಲ್ಲಿ ಟಾಟಾದ ಚಿಪ್ ಘಟಕಕ್ಕೆ ಸರ್ಕಾರದ ಅನುಮೋದನೆ; 91,000 ಕೋಟಿ ರೂ ಹೂಡಿಕೆಗೆ ಯೋಜನೆ – Kannada News | India’s First Semiconductor Fab Plant in Dholera SEZ: A New Era of Chip Manufacturing

ನವದೆಹಲಿ, ಏಪ್ರಿಲ್ 16: ಭಾರತದ ಆರ್ಥಿಕ ಮತ್ತು ತಾಂತ್ರಿಕ ವಲಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ನಿಟ್ಟಿನಲ್ಲಿ, ಗುಜರಾತ್‌ನ ಧೋಲೇರಾದಲ್ಲಿ ದೇಶದ ಮೊದಲ ಸೆಮಿಕಂಡಕ್ಟರ್ ತಯಾರಿಕಾ ಘಟಕಕ್ಕೆ (Semiconductor Fab Plant) ಕೇಂದ್ರ ಸರ್ಕಾರವು ವಿಶೇಷ ಆರ್ಥಿಕ ವಲಯವಾಗಿ (SEZ) ಅನುಮೋದನೆ ನೀಡಿದೆ. ಈ ಯೋಜನೆಯನ್ನು ‘ಟಾಟಾ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್’ ನಿರ್ವಹಿಸುತ್ತಿದ್ದು, ಸುಮಾರು 91,000 ಕೋಟಿ ರೂ ಹೂಡಿಕೆ ಮಾಡಲು ಯೋಜಿಸಿದೆ.

66.16 ಹೆಕ್ಟೇರ್ ಪ್ರದೇಶದಲ್ಲಿ ತಲೆಯೆತ್ತಲಿರುವ ಈ ಘಟಕದಿಂದ ಸುಮಾರು 21,000 ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಏಪ್ರಿಲ್ 9 ರಂದು ವಾಣಿಜ್ಯ ಸಚಿವಾಲಯವು ಈ SEZ ಕುರಿತು ಅಧಿಸೂಚನೆ ಹೊರಡಿಸಿದ್ದು, ಇದು ಎಲೆಕ್ಟ್ರಾನಿಕ್ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ಐಟಿ ಸೇವೆಗಳಿಗೆ ಪ್ರತ್ಯೇಕವಾಗಿ ಮೀಸಲಾಗಿರುತ್ತದೆ.

ಇದನ್ನೂ ಓದಿ: ಟಿಸಿಎಸ್ ಪ್ರಕರಣ: ತನಿಖೆ ತೀವ್ರ, ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್

ಹೂಡಿಕೆ ಉತ್ತೇಜನಕ್ಕಾಗಿ ನಿಯಮಗಳ ಸಡಿಲಿಕೆ

ಸೆಮಿಕಂಡಕ್ಟರ್ ಹೂಡಿಕೆಯನ್ನು ಉತ್ತೇಜಿಸಲು ಸರ್ಕಾರವು 2025ರ ಜೂನ್‌ನಲ್ಲಿ SEZ ನಿಯಮಗಳಿಗೆ ತಿದ್ದುಪಡಿ ತಂದಿತ್ತು. ಇದರ ಅನ್ವಯ, ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲು ಬೇಕಾದ ಕನಿಷ್ಠ ಭೂಮಿಯ ಅಗತ್ಯತೆಯನ್ನು 50 ಹೆಕ್ಟೇರ್‌ನಿಂದ 10 ಹೆಕ್ಟೇರ್‌ಗೆ ಇಳಿಸಲಾಗಿತ್ತು. ಈ ನಿಯಮ ಬದಲಾವಣೆಯು ಕಂಪನಿಗಳಿಗೆ ಪ್ರಾಜೆಕ್ಟ್ ಆರಂಭಿಸಲು ಸುಲಭಗೊಳಿಸಿದಂತಾಗಿದೆ. ಟಾಟಾ ಸಂಸ್ಥೆಗೂ ಇದು ಅನುಕೂಲವಾಯಿತು.

ಇತರ ಪ್ರಮುಖ ಯೋಜನೆಗಳು

ಟಾಟಾ ಸಂಸ್ಥೆಯಲ್ಲದೆ, ಇನ್ನೂ ನಾಲ್ಕು ಕಂಪನಿಗಳ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಘಟಕಗಳಿಗೆ ಸರ್ಕಾರ ಅನುಮೋದನೆ ನೀಡಿದೆ:

  1. ಮೈಕ್ರಾನ್ (Micron): 13,000 ಕೋಟಿ ರೂ ಹೂಡಿಕೆ, 20,000 ಉದ್ಯೋಗಗಳ ಗುರಿ.
  2. ಸಿಜಿ ಸೆಮಿ (CG Semi): 2,150 ಕೋಟಿ ರೂ ಹೂಡಿಕೆ (ಅಸೆಂಬ್ಲಿ ಮತ್ತು ಟೆಸ್ಟಿಂಗ್).
  3. ಕೇನ್ಸ್ ಸೆಮಿಕಾನ್ (Kaynes Semicon): 681 ಕೋಟಿ ರೂ ಹೂಡಿಕೆ.

ಇದನ್ನೂ ಓದಿ: ಹಿಜಾಬ್ vs ಕುಂಕುಮ; ವಿವಾದ ಸೃಷ್ಟಿಸಿದ ಲೆನ್ಸ್​ಕಾರ್ಟ್ ಪಾಲಿಸಿ ಡಾಕ್ಯುಮೆಂಟ್; ಆನ್​ಲೈನ್​ನಲ್ಲಿ ತಕರಾರು

ಇದರ ಪ್ರಾಮುಖ್ಯತೆ ಏನು?

ಪ್ರಸ್ತುತ ಕೃತಕ ಬುದ್ಧಿಮತ್ತೆ (AI), ಆಟೋಮೊಬೈಲ್ ಮತ್ತು ಸ್ಮಾರ್ಟ್‌ಫೋನ್ ವಲಯಗಳಲ್ಲಿ ಚಿಪ್‌ಗಳ ಬೇಡಿಕೆ ಹೆಚ್ಚಿದೆ. ಸದ್ಯ ಭಾರತವು ಇವುಗಳಿಗಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದೆ. ಈ ಸ್ವದೇಶಿ ತಯಾರಿಕಾ ಘಟಕಗಳು ಆರಂಭವಾದರೆ, ಆಮದು ಅವಲಂಬನೆ ಕಡಿಮೆಯಾಗುವುದಲ್ಲದೆ, ಭಾರತವು ಜಾಗತಿಕ ‘ಸೆಮಿಕಂಡಕ್ಟರ್ ಹಬ್’ ಆಗಿ ಹೊರಹೊಮ್ಮಲು ಸಹಕಾರಿಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಿಮ್‌ನಲ್ಲಿ ಧರಿಸುವ ಟೈಟ್ ಬಟ್ಟೆಗಳು ಹಾರ್ಮೋನ್ ಬದಲಾವಣೆಗೆ ಕಾರಣವಾಗುತ್ತದೆಯೇ? ತಜ್ಞರು ಹೇಳುವುದೇನು? – Kannada News | Toxic Chemicals in Gym Clothes in India: What Experts Say

ಇಂದಿನ ಫಿಟ್ನೆಸ್ ಟ್ರೆಂಡ್‌ನಲ್ಲಿ ಜಿಮ್‌ಗೆ (Gym) ಹೋಗುವವರು ವಿಶೇಷವಾಗಿ ಟೈಟ್ ‘ಆಕ್ಟಿವ್‌ವೇರ್’ ಬಟ್ಟೆಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಆದರೆ ಇವು ಆರೋಗ್ಯಕ್ಕೆ ಹಾನಿಕರವಾಗಬಹುದೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಅಮೆರಿಕದಲ್ಲಿ ನಡೆದ ಒಂದು ಅಧ್ಯಯನದಲ್ಲಿ ಕೆಲವು ಜಿಮ್ ಬಟ್ಟೆಗಳಲ್ಲಿ ರಾಸಾಯನಿಕಗಳ ಬಳಕೆ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಈ ವಿಷಯ ಭಾರತದಲ್ಲೂ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ಜಿಮ್‌ನಲ್ಲಿ ಧರಿಸುವ ಟೈಟ್ ಬಟ್ಟೆಗಳು ನಿಜವಾಗಿಯೂ ಆರೋಗ್ಯಕ್ಕೆ ಹಾನಿಕಾರಕವೇ, ಇದು ಚರ್ಮದ ಮೇಲೆ ಪರಿಣಾಮ ಬೀರುತ್ತದೆಯೇ, ಇದಕ್ಕೆ ಪರಿಹಾರವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆಕ್ಟಿವ್‌ವೇರ್‌ನಲ್ಲಿ ಇರುವ ಸಮಸ್ಯೆ ಏನು?

ತಜ್ಞರ ಪ್ರಕಾರ, ಬಹುತೇಕ ಜಿಮ್ ಬಟ್ಟೆಗಳು ಸಿಂಥೆಟಿಕ್ ಫ್ಯಾಬ್ರಿಕ್‌ನಿಂದ ತಯಾರಾಗಿರುತ್ತವೆ. ಇವುಗಳಲ್ಲಿ ‘ಫಥಾಲೇಟ್ಸ್’ (Phthalates) ಎಂಬ ರಾಸಾಯನಿಕಗಳನ್ನು ಬಳಸುವ ಸಾಧ್ಯತೆ ಇದೆ. ಈ ರಾಸಾಯನಿಕಗಳು ದೇಹದ ಹಾರ್ಮೋನ್ ವ್ಯವಸ್ಥೆಗೆ ಹಾನಿ ಉಂಟುಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ. ವೈದ್ಯರಾದ ಡಾ. ಸೌಮ್ಯಾ ಅವರ ಪ್ರಕಾರ, ತುಂಬಾ ಟೈಟ್ ಮತ್ತು ಸಿಂಥೆಟಿಕ್ ಬಟ್ಟೆಗಳನ್ನು ಹೆಚ್ಚು ಸಮಯ ಧರಿಸುವುದರಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ವ್ಯಾಯಾಮದ ಸಮಯದಲ್ಲಿ ಬೆವರು ಹೊರಬರುತ್ತದೆ, ಟೈಟ್ ಬಟ್ಟೆಗಳಿಂದ ಅದು ಚರ್ಮದಲ್ಲೇ ಉಳಿಯುತ್ತದೆ. ಇದರಿಂದ ಫಂಗಲ್ ಇನ್ಫೆಕ್ಷನ್, ರಾಶ್‌ ಮತ್ತು ಚರ್ಮದಲ್ಲಿ ಉರಿ ಕಾಣಿಸಿಕೊಳ್ಳಬಹುದು. ಬೇಸಿಗೆ ಸಮಯದಲ್ಲಿ ಈ ಸಮಸ್ಯೆಗಳು ಇನ್ನಷ್ಟು ತೀವ್ರವಾಗಬಹುದು. ಟೈಟ್ ಬಟ್ಟೆಗಳು ದೇಹಕ್ಕೆ ಸೂಕ್ತ ಗಾಳಿಯ ಹರಿವನ್ನು ತಡೆಯುತ್ತವೆ. ಇದರಿಂದ ಚರ್ಮದ ಮೇಲೆ ಒತ್ತಡ ಹೆಚ್ಚಾಗಿ, ಅಸ್ವಸ್ಥತೆ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ದೀರ್ಘಕಾಲ ಬಳಸಿದರೆ ಹಾರ್ಮೋನಲ್ ಸಮಸ್ಯೆಗಳಿಗೂ ಕಾರಣವಾಗಬಹುದು ಎಂಬ ಆತಂಕ ಇದೆ.

ಇದನ್ನೂ ಓದಿ: ಜಿಮ್ ಪ್ರಾರಂಭಿಸಿ ಮಧ್ಯದಲ್ಲಿಯೇ ಬಿಟ್ಟಿದ್ದೀರಾ? ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ ತಿಳಿದುಕೊಳ್ಳಿ

ತಡೆಗಟ್ಟುವ ಕ್ರಮಗಳು:

  • ತುಂಬಾ ಟೈಟ್ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ
  • ವ್ಯಾಯಾಮದ ನಂತರ ತಕ್ಷಣ ಬಟ್ಟೆ ಬದಲಾಯಿಸಿ
  • ಕಾಟನ್ ಅಥವಾ ಹಗುರವಾದ ಬಟ್ಟೆಗಳಿಗೆ ಆದ್ಯತೆ ನೀಡಿ
  • ಚರ್ಮದಲ್ಲಿ ಉರಿ ಅಥವಾ ಇನ್ಫೆಕ್ಷನ್ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದ್ವಿತೀಯ PU ಪರೀಕ್ಷೆ-2 ಪುನಾವರ್ತಿತ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ – Kannada News | Karnataka 2nd PUC Exam 2 Application Deadline Extended to April 18th by KSEAB

ಪ್ರಾತಿನಿಧಿಕ ಚಿತ್ರImage Credit source: timesofindia

ಬೆಂಗಳೂರು, ಏಪ್ರಿಲ್​​ 16: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ (2nd PUC Exam-2) ಅರ್ಜಿ ಸಲ್ಲಿಸಲು ಬಯಸುವ ಪುನರಾವರ್ತಿತ ಅಭ್ಯರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಗುಡ್​ ನ್ಯೂಸ್​​ ನೀಡಿದೆ. ಅರ್ಜಿ ಸಲ್ಲಿಸುವ ಕಾಲಾವಧಿಯನ್ನು ಏಪ್ರಿಲ್ 18ರವರೆಗೆ ವಿಸ್ತರಿಸಿ ಮಂಡಳಿ ಗುರುವಾರ ಆದೇಶ ಹೊರಡಿಸಿದೆ.

ತಾಂತ್ರಿಕ ತೊಂದರೆ

ಈ ಮೊದಲು ಅರ್ಜಿ ಸಲ್ಲಿಸಲು ಏಪ್ರಿಲ್ 17 ಕೊನೆಯ ದಿನವಾಗಿತ್ತು. ಆದರೆ, ರಾಜ್ಯದ ಹಲವೆಡೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ತಾಂತ್ರಿಕ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು ಮಂಡಳಿಯು ಅರ್ಜಿ ಸಲ್ಲಿಕೆಯ ಅವಧಿಯನ್ನು ಈಗ ಒಂದು ದಿನದ ಮಟ್ಟಿಗೆ ಅಂದರೆ ಏಪ್ರಿಲ್ 18ರವರೆಗೆ ವಿಸ್ತರಿಸಿದೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಮರುನಿಗದಿ! ನೋಂದಣಿಗೆ ಏಪ್ರಿಲ್ 17ರವರೆಗೆ ಅವಕಾಶ

ಅರ್ಜಿ ಸಲ್ಲಿಸಲು ಬಾಕಿ ಇರುವ ವಿದ್ಯಾರ್ಥಿಗಳು ಈ ಕೂಡಲೇ ವಿಸ್ತರಿಸಿದ ಕಾಲಾವಧಿಯ ಸದುಪಯೋಗ ಪಡೆದುಕೊಳ್ಳಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಅಥವಾ ಆಯಾ ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಬಹುದಾಗಿದೆ.

ಸುತ್ತೋಲೆಯಲ್ಲಿ ಏನಿದೆ?

2026ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಪುನಾವರ್ತಿತ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏಪ್ರಿಲ್​ 09 ರಿಂದ 17ರವರೆಗೆ ಆನ್‌ಲೈನ್ (http://tinyurl.com/mvp9k6es) ಮುಖಾಂತರ ಸಂಬಂಧಪಟ್ಟ ಕಾಲೇಜುಗಳಲ್ಲಿ ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಇದನ್ನೂ ಓದಿ: 2nd PUC Exam 2 Time Table: ಫೇಲಾದ್ರೇನಂತೆ ಇನ್ನೊಂದು ಎಕ್ಸಾಮ್ ಟೈಮ್ ಟೇಬಲ್ ಇಲ್ಲಿದೆ ನೋಡಿ

ಈ ಸಂಬಂಧ ವಿದ್ಯಾರ್ಥಿ, ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸುವಂತೆ ಮನವಿಗಳು ಬಂದಿದ್ದವು. ಹೀಗಾಗಿ 2026ರ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಪುನಾವರ್ತಿತ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ಅಭ್ಯರ್ಥಿಗಳು ಆನ್‌ಲೈನ್, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಅಂತಿಮ ದಿನಾಂಕವನ್ನು ಏಪ್ರಿಲ್​​ 18ರ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

ಮತ್ತಷ್ಟು ಶಿಕ್ಷಣದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ರೋಹಿತ್ ಕಂಬ್ಯಾಕ್ ಬಗ್ಗೆ ಆಘಾತಕ್ಕಾರಿ ಮಾಹಿತಿ ನೀಡಿದ ಹಾರ್ದಿಕ್ – Kannada News | Rohit Sharma Injury Update: MI Star Misses IPL 2026 Matches, Hardik Pandya Faces Pressure

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ (Mumbai Indians) ಐಪಿಎಲ್ 2026 (IPL 2026) ಸೀಸನ್ ಉತ್ತಮವಾಗಿ ಆರಂಭವಾಗಿಲ್ಲ. ಮೊದಲ ಪಂದ್ಯವನ್ನು ಗೆದ್ದ ನಂತರ, ಸತತ ಮೂರು ಪಂದ್ಯಗಳನ್ನು ಸೋತಿದೆ. ಇದು ಹಾರ್ದಿಕ್ ಪಾಂಡ್ಯ ತಂಡವನ್ನು ಚಿಂತೆಗೀಡುಮಾಡಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ತನ್ನ ಐದನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಮುಂಬೈ ತಂಡವಿದೆ. ಆದರೆ ಇದಕ್ಕೆ ಹಿನ್ನಡೆ ಎಂಬಂತೆ ತಂಡದ ಸ್ಟಾರ್ ಆರಂಭಿಕ ಆಟಗಾರ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಗಾಯಗೊಂಡಿರುವ ರೋಹಿತ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅಲ್ಲದೆ ಅವರು ಕನಿಷ್ಠ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂಬುದನ್ನು ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರೇ ಹೇಳಿದ್ದಾರೆ.

ರೋಹಿತ್ ಶರ್ಮಾ ಕಂಬ್ಯಾಕ್ ಯಾವಾಗ?

ಏಪ್ರಿಲ್ 16 ರ ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರೋಹಿತ್ ಅವರ ಫಿಟ್ನೆಸ್ ಪ್ರಮುಖ ಚರ್ಚೆಯ ವಿಷಯವಾಗಿತ್ತು. ಇದೇ ಮೈದಾನದಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬ್ಯಾಟಿಂಗ್ ಮಾಡುವಾಗ ರೋಹಿತ್ ಶರ್ಮಾ ಮಂಡಿರಜ್ಜು ಗಾಯಕ್ಕೆ ಒಳಗಾದರು. ಹೀಗಾಗಿ ಮಧ್ಯದಲ್ಲೇ ಬ್ಯಾಟಿಂಗ್‌ ನಿಲ್ಲಿಸಿ ಮೈದಾನ ತೊರೆದಿದ್ದ ರೋಹಿತ್, ಮತ್ತೆ ಬ್ಯಾಟಿಂಗ್‌ಗೆ ಹಿಂತಿರುಗಲಿಲ್ಲ. ಆ ಸಮಯದಲ್ಲಿ, ರೋಹಿತ್ ಕೇವಲ 13 ಎಸೆತಗಳಲ್ಲಿ 19 ರನ್ ಗಳಿಸಿದ್ದರು.

ಸ್ಪಷ್ಟನೆ ನೀಡಿದ ಹಾರ್ದಿಕ್

ಈ ಪಂದ್ಯದ ನಂತರ, ರೋಹಿತ್ ಅವರ ಫಿಟ್ನೆಸ್ ಬಗ್ಗೆ ಮತ್ತು ಅವರು ಪಂಜಾಬ್ ವಿರುದ್ಧ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಮೂಡಿದ್ದವು. ರೋಹಿತ್ ನಿಯಮಿತವಾಗಿ ಅಭ್ಯಾಸದಲ್ಲಿ ಭಾಗವಹಿಸಿದ್ದು ಸ್ವಲ್ಪ ಭರವಸೆ ಮೂಡಿಸಿತ್ತು. ಆದಾಗ್ಯೂ, ಟಾಸ್ ಸಮಯದಲ್ಲಿ, ನಾಯಕ ಹಾರ್ದಿಕ್ ಪಾಂಡ್ಯ ಕೆಟ್ಟ ಸುದ್ದಿಯನ್ನು ನೀಡಿದರು. ರೋಹಿತ್ ಈ ಪಂದ್ಯದ ಭಾಗವಾಗಿರುವುದಿಲ್ಲ. ಅಷ್ಟೇ ಅಲ್ಲ, ಅವರು ಕನಿಷ್ಠ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಮತ್ತು ಅವರ ಫಿಟ್ನೆಸ್ ಪರೀಕ್ಷೆಯ ನಂತರವೇ ಅವರ ಭಾಗವಹಿಸುವಿಕೆಯ ಕುರಿತು ಯಾವುದೇ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪಾಂಡ್ಯ ಹೇಳಿದ್ದಾರೆ. ಇದರರ್ಥ ಪಂಜಾಬ್ ನಂತರ, ಏಪ್ರಿಲ್ 20 ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದಲೂ ರೋಹಿತ್ ಹೊರಗುಳಿಯಲಿದ್ದಾರೆ ಎಂಬುದು ಖಚಿತವಾಗಿದೆ.

MI vs PBKS: ಟಾಸ್ ಗೆದ್ದ ಪಂಜಾಬ್; ರೋಹಿತ್ ಸೇರಿದಂತೆ ಮುಂಬೈ ತಂಡದಲ್ಲಿ 2 ಬದಲಾವಣೆ

ಈ ಆಟಗಾರನಿಗೆ ಅವಕಾಶ

ರೋಹಿತ್ ಮಾತ್ರವಲ್ಲ, ಸ್ಪಿನ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಕೂಡ ಗಾಯದ ಕಾರಣದಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಮುಂಬೈ ಕ್ವಿಂಟನ್ ಡಿ ಕಾಕ್ ಮತ್ತು ದೆಹಲಿಯ ಯುವ ಬ್ಯಾಟಿಂಗ್ ಆಲ್‌ರೌಂಡರ್ ಮಯಾಂಕ್ ರಾವತ್‌ಗೆ ಅವಕಾಶ ನೀಡಿದೆ. ಇದು ಮಯಾಂಕ್ ರಾವತ್‌ ಅವರ ಐಪಿಎಲ್ ಚೊಚ್ಚಲ ಪಂದ್ಯವಾಗಲಿದೆ. ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಸಾಕಷ್ಟು ಖ್ಯಾತಿ ಗಳಿಸಿದ್ದ ಮಯಾಂಕ್ ರಾವತ್‌ ಅಂತಿಮ ಪಂದ್ಯದಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದರು. ಅಲ್ಲದೆ ಐಪಿಎಲ್ ತಂಡದ ಟ್ರಯಲ್‌ನಲ್ಲಿಯೂ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು, ಆದರೆ ಆಗ ಯಾರೂ ಅವರನ್ನು ಖರೀದಿಸಿರಲಿಲ್ಲ. ಆದರೆ ಈ ಬಾರಿ, ಮಯಾಂಕ್ ಅವರನ್ನು ಹರಾಜಿನಲ್ಲಿಯೇ ಮುಂಬೈ 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂತ್ರಾಲಯ ರಾಯರ ದರ್ಶನಕ್ಕೆ ತೆರಳುತ್ತಿದ್ದವರು ದುರಂತ ಅಂತ್ಯ: ಭಯಾನಕ ದುರ್ಘಟನೆ ನಡೆದಿದ್ದು ಹೇಗೆ ಗೊತ್ತಾ? – Kannada News | 8 Devotees Killed in Bolero Lorry Crash Near Mantralaya: Injured Manoj Talks about Incident

ರಾಯಚೂರು, (ಏಪ್ರಿಲ್ 16): ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಹೊರಟಿದ್ದ ಚಿಕ್ಕಮಗಳೂರು ಮೂಲಲದ ಭಕ್ತರ ಬೊಲೆರೊ ವಾಹನಕ್ಕೆ ಟ್ಯಾಂಕರ್ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘೋರ ದುರಂತದಿಂದ ಪವಾಡ ರೀತಿಯಲ್ಲಿ ಮನೋಜ್ ಬದುಕಿದಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಬಾಗಿಲು ಪಕ್ಕದ ಸೀಟಿನಲ್ಲಿ ಮಲಗಿದ್ದ ಮನೋಜ್ ಹಾರಿ ರಸ್ತೆಗೆ ಬಿದ್ದಿದ್ದಾನೆ. ಇನ್ನು ಘಟನೆಯಲ್ಲಿ ತಾಯಿ ಮೀನಾಕ್ಷಮ್ಮ ಹಾಗೂ ಅಜ್ಜಿ ಪುಟ್ಟಮ್ಮನನ್ನು ಕಳೆದುಕೊಂಡಿರುವ ಮನೋಜ್, ಟಿವಿ9 ಎದುರು ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ರಾಯರ ದರ್ಶನಕ್ಕೆ ತೆರಳುತ್ತಿದ್ದ ಚಿಕ್ಕಮಗಳೂರಿನ 8 ಮಂದಿ ಭಕ್ತರು ಸಾವು

Source link

ಸಾಯಿ ಪಲ್ಲವಿ ಜೊತೆ ಆಮಿರ್ ಖಾನ್ ಮಗನ ಒಂದು ದಿನದ ಪ್ರೀತಿ; ಏನಿದು ಕಥೆ? – Kannada News | Aamir Khan son Junaid Khan Sai Pallavi Ek Din movie Trailer release

ಬಾಲಿವುಡ್ ನಟ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ (Junaid Khan) ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಬಹುಭಾಷಾ ನಟಿ ಸಾಯಿ ಪಲ್ಲವಿ (Sai Pallavi) ಜೊತೆ ಜುನೈದ್ ಖಾನ್ ಅಭಿನಯದ ‘ಏಕ್ ದಿನ್’ ಸಿನಿಮಾ ಮೇಲೆ ನಿರೀಕ್ಷೆ ಇದೆ. ಈ ಸಿನಿಮಾದ ಟ್ರೇಲರ್ ಗುರುವಾರ (ಏಪ್ರಿಲ್ 16) ಬಿಡುಗಡೆಯಾಗಿದೆ. ಸುನಿಲ್ ಪಾಂಡೆ ನಿರ್ದೇಶನದ ಈ ಚಿತ್ರವು ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ನಿರ್ಮಾಣ ಆಗಿದೆ. ‘ಏಕ್ ದಿನ್’ (Ek Din) ಸಿನಿಮಾದ ಕಥೆ ಏನು ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ.

‘ಏಕ್ ದಿನ್’ ಚಿತ್ರದ ಮೂಲಕ ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗುತ್ತಿದ್ದಾರೆ. ಬಿಡುಗಡೆಯಾಗಿರುವ 2 ನಿಮಿಷ 54 ಸೆಕೆಂಡುಗಳ ಟ್ರೇಲರ್​ನಲ್ಲಿ ಒಂದು ಸುಂದರವಾದ ಲವ್ ಸ್ಟೋರಿ ಕಾಣಿಸಿದೆ. ಹೀರೋ ಮತ್ತು ಹೀರೋಯಿನ್ ನಡುವೆ ನಡೆಯುವ ಒಂದೇ ದಿನದ ಪ್ರೀತಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ.

ಟ್ರೇಲರ್‌ನಲ್ಲಿ ಜುನೈದ್ ಖಾನ್ ಒಬ್ಬ ನಾಚಿಕೆ ಸ್ವಭಾವದ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಒಂದೇ ಆಫೀಸ್​ನಲ್ಲಿ ಕೆಲಸ ಮಾಡುವ ಸಾಯಿ ಪಲ್ಲವಿ ಮೇಲೆ ಅವರಿಗೆ ಪ್ರೀತಿ ಇರುತ್ತದೆ. ಆದರೆ ಅದನ್ನು ವ್ಯಕ್ತಪಡಿಸಲು ಧೈರ್ಯ ಸಾಲದೆ ಒದ್ದಾಡುತ್ತಿರುತ್ತಾರೆ. ಆದರೆ, ಇಡೀ ಆಫೀಸ್​ನವರು ಜಪಾನ್‌ ಪ್ರವಾಸಕ್ಕೆ ತೆರಳಿದಾಗ ನಡೆಯುವ ಒಂದು ಅಪಘಾತದಿಂದ ಕಥೆಗೆ ರೋಚಕ ತಿರುವು ಬರುತ್ತದೆ.

‘ಏಕ್ ದಿನ್’ ಚಿತ್ರದ ಟ್ರೇಲರ್‌:

ಅಪಘಾತದ ನಂತರ ಸಾಯಿ ಪಲ್ಲವಿ ಪಾತ್ರಕ್ಕೆ ಒಂದು ದಿನದ ಮಟ್ಟಿಗೆ ಹಳೆಯದೆಲ್ಲ ಮರೆತು ಹೋಗುತ್ತದೆ. ಆ ಒಂದೇ ದಿನದಲ್ಲಿ ಜುನೈದ್ ಖಾನ್ ಪಾತ್ರದ ಜೊತೆ ಲವ್ ಆಗುತ್ತದೆ. ಆ ಲವ್ ಸ್ಟೋರಿಗೆ ಒಂದು ದಿನ ಮಾತ್ರ ಆಯಸ್ಸು. ಹಾಗಾದರೆ ಮುಂದೇನಾಗುತ್ತದೆ? ಮೇ 1ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಅಂದೇ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

ಇದನ್ನೂ ಓದಿ: ರಣಬೀರ್, ಸಾಯಿ ಪಲ್ಲವಿ ‘ರಾಮಾಯಣ’ ಫೋಟೋ ಫೇಕ್; ಅಸಲಿ ವಿಷಯ ಬಿಚ್ಚಿಟ್ಟ ನಟ

ಆಮಿರ್ ಖಾನ್, ಮನ್ಸೂರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ಅವರು ಜೊತೆಯಾಗಿ ಈ ಸಿನಿಮಾ ನಿರ್ಮಿಸಿದ್ದಾರೆ. ರಾಮ್ ಸಂಪತ್ ಅವರು ಸಂಗೀತ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಟ್ರೇಲರ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಜನ ನಾಯಗನ್’ ಸಿನಿಮಾ ಸೋರಿಕೆ: ಮೂವರ ಬಂಧನ – Kannada News | Jana Nayagan movie piracy three people arrested by Tamil Nadu police

ನಟ ಮತ್ತು ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಸಂಸ್ಥಾಪಕ ವಿಜಯ್ (Thalapaty Vijay) ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಮುನ್ನವೇ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ. ಈ ಕುರಿತು ಈಗಾಗಲೇ ದೂರು ದಾಖಲಾಗಿದ್ದು, ತಮಿಳುನಾಡು ಸೈಬರ್ ಕ್ರೈಮ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ತಾತ್ಕಾಲಿಕ ನೌಕರನೊಬ್ಬನಿಂದಾಗಿ ‘ಜನ ನಾಯಗನ್’ ಸಿನಿಮಾ ಸೋರಿಕೆ ಆಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬುಧವಾರ (ಏಪ್ರಿಲ್ 15) ಈ ಪ್ರಕರಣದ ಮುಖ್ಯ ಆರೋಪಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಏಪ್ರಿಲ್ 9 ರಂದು ಚಿತ್ರದ ಕೆಲವು ಪ್ರಮುಖ ದೃಶ್ಯಗಳು ಮತ್ತು ನಂತರ ಪೂರ್ಣ ಎಚ್‌ಡಿ (HD) ಆವೃತ್ತಿಯು ಪೈರಸಿ ಸೈಟ್‌ಗಳಲ್ಲಿ ಕಾಣಿಸಿಕೊಂಡಿತ್ತು. ಇದು ಚಿತ್ರತಂಡ ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಎಡಿಟಿಂಗ್ ಸ್ಟುಡಿಯೋದಿಂದ ಸಿನಿಮಾ ಲೀಕ್ ಆಗಿದ್ದು, ಸ್ಟುಡಿಯೋನಲ್ಲಿ ಬೇರೆ ಸಿನಿಮಾಕ್ಕೆ ಕೆಲಸ ಮಾಡಲು ಬಂದಿದ್ದ ತಾತ್ಕಾಲಿಕ ನೌಕರನೊಬ್ಬ ‘ಜನ ನಾಯಗನ್’ ಸಿನಿಮಾವನ್ನು ಅಲ್ಲಿನ ಕಂಪ್ಯೂಟರ್​​ಗಳಿಂದ ಡೌನ್​​ಲೋಡ್ ಮಾಡಿಕೊಂಡು ಆ ಬಳಿಕ ಬಿಡುಗಡೆ ಮಾಡಿದ್ದಾನೆ. ಇದೀಗ ಪೊಲೀಸರು ಆತನನ್ನೂ ಸೇರಿದಂತೆ ಆತನಿಗೆ ಸಹಕಾರ ನೀಡಿದ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಮಾತ್ರವಲ್ಲದೆ ಪೊಲೀಸರು ಈವರೆಗೆ 300ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಿದ್ದಾರೆ. ಕ್ಲೌಡ್ ಸ್ಟೋರೇಜ್ ಮತ್ತು ಡ್ರೈವ್ ಲಿಂಕ್‌ಗಳ ಮೂಲಕ ಚಿತ್ರವನ್ನು ಹಂಚುತ್ತಿದ್ದವರನ್ನು ಪತ್ತೆಹಚ್ಚಲು ಡಿಜಿಟಲ್ ವಿಧಿವಿಜ್ಞಾನದ ನೆರವು ಪಡೆಯಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಆಶಾ ಭೋಸ್ಲೆಗೆ ಸುಮಲತಾ-ವಿಜಯ್ ಪ್ರಕಾಶ್ ವಿಶೇಷ ಗೌರವ

‘ಜನ ನಾಯಗನ್’ ಸಿನಿಮಾ ಜನವರಿ 9 ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಕೆಲವು ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಸೆನ್ಸಾರ್ ಪ್ರಮಾಣಪತ್ರ ನೀಡಲು ವಿಳಂಬ ಮಾಡಿತು. ಚಿತ್ರದಲ್ಲಿನ ಕೆಲವು ರಾಜಕೀಯ ಮತ್ತು ಧಾರ್ಮಿಕ ಅಂಶಗಳು ಸಮಾಜದಲ್ಲಿ ಅಶಾಂತಿ ಮೂಡಿಸಬಹುದು ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿಯು ಈ ವಿಷಯವನ್ನು ರಿವೈಸಿಂಗ್ ಕಮಿಟಿಗೆ ವರ್ಗಾಯಿಸಿತ್ತು. ಆದರೆ ಈ ವರೆಗೆ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಿಲ್ಲ.

ವಿಜಯ್ ಅವರ ರಾಜಕೀಯ ಪ್ರವೇಶದ ಹಿನ್ನೆಲೆಯಲ್ಲಿ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ಈ ವಿಳಂಬದ ಹಿಂದೆ ರಾಜಕೀಯ ಹಸ್ತಕ್ಷೇಪವಿದೆ ಎಂದು ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಅನೇಕ ನಟರು ಪೈರಸಿ ಮತ್ತು ಸೆನ್ಸಾರ್ ವಿಳಂಬವನ್ನು ಖಂಡಿಸಿದ್ದಾರೆ. ಸಿಬಿಎಫ್​​ಸಿಯಿಂದಲೇ ಸಿನಿಮಾ ಲೀಕ್ ಆಗಿದೆ ಎಂದು ಸಹ ಆರೋಪಿಸಲಾಗಿತ್ತು. ಆದರೆ ತನಿಖೆಯಿಂದ ಇದೀಗ ಸಿಬಿಎಫ್​​ಸಿಯಿಂದ ಲೀಕ್ ಆಗಿಲ್ಲ ಎಂಬುದು ಪತ್ತೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಪ್ಪಿದ ಭಾರೀ ದುರಂತ; ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್ – Kannada News | SpiceJet Plane Hits parked Akasa Aircraft At Delhi Airport

ನವದೆಹಲಿ, ಏಪ್ರಿಲ್ 16: ದೆಹಲಿ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಆಕಾಶ ಏರ್ ವಿಮಾನಕ್ಕೆ ಸ್ಪೈಸ್‌ಜೆಟ್ ವಿಮಾನ (SpiceJet Plane) ಡಿಕ್ಕಿ ಹೊಡೆದ ಕಾರಣದಿಂದ ಎರಡೂ ಜೆಟ್‌ಗಳಿಗೆ ಹಾನಿಯಾಗಿದ್ದು, ಈ ಬಗ್ಗೆ ತನಿಖೆ ಆರಂಭವಾಗಿದೆ. ಸ್ಪೈಸ್‌ಜೆಟ್ ಬಿ737-700 ವಿಮಾನದ ಬಲಭಾಗದ ರೆಕ್ಕೆಗೆ ಹಾನಿಯಾಗಿದೆ. “ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಇಳಿಸಲಾಯಿತು. ನಮ್ಮ ತಂಡಗಳು ನಮ್ಮ ಪ್ರಯಾಣಿಕರನ್ನು ಹೈದರಾಬಾದ್‌ಗೆ ಆದಷ್ಟು ಬೇಗ ಕಳುಹಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ” ಎಂದು ಸ್ಪೈಸ್​ಜೆಟ್ ವಕ್ತಾರರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡಿಕೆ ತೋಟದ ಬಳಿ ಮಹಿಳೆಯ ತಲೆ ಬುರುಡೆ, ಮೂಳೆಗಳು ಪತ್ತೆ: ಅಕ್ರಮ ಸಂಬಂಧಕ್ಕೆ ನಡೆಯಿತಾ ಹತ್ಯೆ? – Kannada News | Nelamangala: Missing Woman Skeleton Found; Illicit Affair Suspected Murder Case

ನೆಲಮಂಗಲ, ಏಪ್ರಿಲ್​ 16: ಮಹಿಳೆಯೊಬ್ಬರ (Woman) ಅಸ್ಥಿಪಂಜರ (Skeleton) ಪತ್ತೆಯಾದ ಘಟನೆ ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಹಳೇ ನಿಜಗಲ್‌ನಲ್ಲಿ ಗ್ರಾಮದಲ್ಲಿ ನಡೆದಿದೆ. ಅಡಿಕೆ ತೋಟದ ಪಕ್ಕದಲ್ಲಿ ಮಹಿಳೆಯ ತಲೆ ಬುರುಡೆ, ಕೈ-ಕಾಲುಗಳ ಕೆಲ ಮೂಳೆಗಳು ಪತ್ತೆ ಆಗಿವೆ. ಯಮುನಾ (35) ಮೃತ ಮಹಿಳೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಸದ್ಯ ಇವರ ಅಸ್ಥಿಪಂಜರ ಪತ್ತೆಯಾಗಿದೆ. ಅಕ್ರಮ ಸಂಬಂಧದ ಹಿನ್ನೆಲೆ ಈ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ನಡೆದಿದ್ದೇನು?

ಮೃತ ಮಹಿಳೆ ಯಮುನಾ ತುಮಕೂರು ನಿವಾಸಿ. 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ಎಂಬುವವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ, ಎಂಟು ವರ್ಷಗಳ ಹಿಂದೆ ರಾಘವೇಂದ್ರ ಎಂಬಾತನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ ಯಮುನಾ, ಪತಿಯನ್ನು ಬಿಟ್ಟು ಐದು ವರ್ಷಗಳ ಕಾಲ ಆತನೊಂದಿಗೆ ದೊಡ್ಡಬಳ್ಳಾಪುರದಲ್ಲಿ ವಾಸವಿದ್ದರು.

ಇದನ್ನೂ ಓದಿ: ವಿಜಯಪುರದಲ್ಲೊಂದು ಅಮಾನವೀಯ ಘಟನೆ: ನೋಡಲು ತನ್ನಂತಿಲ್ಲ ಎಂದು ಮಗನನ್ನೇ ಕೊಂದ ತಂದೆ

ತನ್ನ ತಪ್ಪಿನ ಅರಿವಾಗಿ ಎರಡು ವರ್ಷಗಳ ಹಿಂದೆ ಯಮುನಾ ಮರಳಿ ಪತಿಯ ಮನೆಗೆ ಬಂದು ಜೀವನ ನಡೆಸುತ್ತಿದ್ದರು. ಆದರೆ, ಕಳೆದ ಮಾರ್ಚ್ 21ರಂದು ಯಮುನಾ ಹುಟ್ಟುಹಬ್ಬ ಇತ್ತು. ಹೀಗಾಗಿ ಭೇಟಿ ಮಾಡುವಂತೆ ರಾಘವೇಂದ್ರ ಒತ್ತಾಯಿಸಿದ್ದ. ಕೆಲಸ ಮುಗಿಸಿ ಆತನನ್ನು ಭೇಟಿ ಮಾಡಲು ಹೋದ ಯಮುನಾ ಅಂದಿನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತುಮಕೂರು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು.

ಅಸ್ಥಿಪಂಜರವಾಗಿ ಪತ್ತೆ

ಹಳೇ ನಿಜಗಲ್ ಗ್ರಾಮದ ಅಡಿಕೆ ತೋಟದ ಪಕ್ಕದಲ್ಲಿ ತಲೆಬುರುಡೆ ಹಾಗೂ ಕೈಕಾಲುಗಳ ಮೂಳೆಗಳು ಪತ್ತೆಯಾಗಿವೆ. ಮೂಳೆಗಳ ಪಕ್ಕದಲ್ಲೇ ಮಹಿಳೆಯ ಬ್ಯಾಗ್ ಹಾಗೂ ಐಡಿ ಕಾರ್ಡ್ ಸಿಕ್ಕಿದ್ದರಿಂದ, ಯಮುನಾ ಎಂದು ಗುರುತಿಸಲಾಗಿದೆ. ಪೊಲೀಸರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು: 6 ಸುತ್ತು ಫೈರಿಂಗ್ ಮಾಡಿ ಗ್ರಾ.ಪಂ ಸದಸ್ಯನ ಹತ್ಯೆ

ಸ್ಥಳಕ್ಕೆ ಡಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ರಾಘವೇಂದ್ರ ಎಂಬಾತನೇ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಅಡಿಕೆ ತೋಟದ ಬಳಿ ಎಸೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವರದಿ: ಮಂಜುನಾಥ್​

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version