ಬೆಂಗಳೂರು: ಪಿಜಿಯಲ್ಲಿ ಸಿಲಿಂಡರ್ ಸ್ಫೋಟ, ನಿಜಕ್ಕೂ ಆಗಿದ್ದೇನು? ಪಿಜಿಯಲ್ಲಿ ಇದ್ದವರು ಹೇಳೋದೇನು ನೋಡಿ

ಬೆಂಗಳೂರು, ಡಿಸೆಂಬರ್ 30: ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯ ಪಿಜಿಯೊಂದರಲ್ಲಿ ಸೋಮವಾರ ಸಿಲಿಂಡರ್ ಸ್ಫೋಟಗೊಂಡು ಅರವಿಂದ್ (23) ಎಂಬ ಯುವಕ ಮೃತಪಟ್ಟಿದ್ದಾರೆ. ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ ಮೂರು ಮಂದಿ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಪಿಜಿಯಲ್ಲಿ ವಾಸವಿದ್ದವರೊಬ್ಬರು ‘ಟಿವಿ9’ಗೆ ಪ್ರತಿಕ್ರಿಯಿಸಿದ್ದು, ಘಟನೆಗೆ ಅನಿಲ ಸೋರಿಕೆಯೇ ಕಾರಣವೆಂದು ಶಂಕಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಾಗ ಸ್ಥಳಕ್ಕೆ ಬಂದಿದ್ದ ನಿವಾಸಿಗಳು ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ್ದಾರೆ. ಸಿಲಿಂಡರ್ ಸ್ಫೋಟದ ಪರಿಣಾಮವಾಗಿ ಕಟ್ಟಡದಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಸುಮಾರು 40-50 ಪಿಜಿ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಅವರಿಗೆ ತಾತ್ಕಾಲಿಕವಾಗಿ ಬೇರೆಡೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧುಮೇಹ ರೋಗಿಗಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆಯೇ? ನೀವು ತಿಳಿಯಲೇಬೇಕಾದ ಮಾಹಿತಿ ಇದು – Kannada News | Diabetes & Heart Attack Risk: What Experts Say

ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿವೆ. ಇದಕ್ಕೆ ಕಾರಣಗಳು ಹಲವು ಆದರೆ ಬದಲಾಗುತ್ತಿರುವ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಕೊರತೆ ಇವೆಲ್ಲವೂ ಕೂಡ ಈ ರೀತಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣವಾಗಬಹುದು. ಮಧುಮೇಹ ಕ್ರಮೇಣ ದೇಹದ ಅನೇಕ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವು ಮಧುಮೇಹ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಿಶ್ವ ಹೃದಯ ಒಕ್ಕೂಟದ ವರದಿಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ, ಮಧುಮೇಹದಿಂದ ಬಳಲುತ್ತಿರುವವರಲ್ಲಿ ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳ ಪ್ರಕರಣಗಳಲ್ಲಿ ತ್ವರಿತ ಏರಿಕೆ ಕಂಡುಬಂದಿದೆ, ಇದು ಕಳವಳಕಾರಿ ವಿಷಯವಾಗಿದ್ದು ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದೆಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾದರೆ ಮಧುಮೇಹ ಮತ್ತು ಹೃದ್ರೋಗಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು ಹೇಗೆ, ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗಲು ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚುತ್ತಿರುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಮಧುಮೇಹ ರೋಗಿಗಳಲ್ಲಿ ದೀರ್ಘಕಾಲದವರೆಗೆ ಅಧಿಕ ರಕ್ತದ ಸಕ್ಕರೆಯು ದೇಹದಲ್ಲಿನ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಇದು ಹೃದಯಕ್ಕೆ ರಕ್ತವನ್ನು ಸಾಗಿಸುವ ಅಪಧಮನಿಗಳನ್ನು ದುರ್ಬಲಗೊಳಿಸಬಹುದು ಅಥವಾ ಕಿರಿದಾಗಿಸಬಹುದು, ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ. ಜೊತೆಗೆ ಮಧುಮೇಹವು ಹೆಚ್ಚಾಗಿ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳೊಂದಿಗೆ ಸಂಬಂಧಿಸಿದ್ದು ಇದು ಹೃದಯಾಘಾತದ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಮಧುಮೇಹವು ದೇಹದಲ್ಲಿ ಉರಿಯೂತ ಮತ್ತು ಕೊಬ್ಬಿನ ಶೇಖರಣೆಯನ್ನು ವೇಗಗೊಳಿಸುವುದರಿಂದ, ಇದು ಅಪಧಮನಿಗಳನ್ನು ಗಟ್ಟಿಯಾಗಿಸುತ್ತದೆ. ಅದಲ್ಲದೆ ಅನೇಕ ಸಂದರ್ಭಗಳಲ್ಲಿ, ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಸಾಮಾನ್ಯ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ, ಇದು ಸಕಾಲಿಕ ಚಿಕಿತ್ಸೆಯಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ. ಈ ಕಾರಣಗಳಿಗಾಗಿ, ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚು.

ಲಕ್ಷಣಗಳು ಹೇಗಿರುತ್ತವೆ?

ಮಧುಮೇಹ ರೋಗಿಗಳಲ್ಲಿ, ಹೃದಯಾಘಾತದ ಲಕ್ಷಣಗಳು ಸಾಮಾನ್ಯ ವ್ಯಕ್ತಿಗಳಿಗಿಂತ ಭಿನ್ನವಾಗಿರುತ್ತವೆ. ತೀವ್ರವಾದ ಎದೆ ನೋವು, ಒತ್ತಡ, ಸುಡುವ ಸಂವೇದನೆ ಅಥವಾ ಅಸ್ವಸ್ಥತೆ ಕಂಡುಬರಬಹುದು. ಕೆಲವರಲ್ಲಿ ಉಸಿರಾಟದ ತೊಂದರೆ, ತೀವ್ರ ಆಯಾಸ, ತಲೆತಿರುಗುವಿಕೆ ಅಥವಾ ಬೆವರುವುದು ಸಹ ಕಂಡುಬರಬಹುದು. ಇನ್ನು ಕೆಲವರಲ್ಲಿ ದವಡೆ, ಕುತ್ತಿಗೆ, ಭುಜ ಅಥವಾ ಎಡಗೈಯಲ್ಲಿ ನೋವು ಕೂಡ ಕಂಡುಬರಬಹುದು. ಅನೇಕ ಸಂದರ್ಭಗಳಲ್ಲಿ, ವಾಕರಿಕೆ, ವಾಂತಿ ಅಥವಾ ಅಸ್ವಸ್ಥತೆಯಂತಹ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತವೆ. ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಮಧುಮೇಹ ಬರುವ ಮುನ್ನ ದೇಹದಲ್ಲಿ ಕಾಣಿಸಿಕೊಳ್ಳುವ 5 ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

ತಡೆಗಟ್ಟುವುದು ಹೇಗೆ?

  • ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಿ.
  • ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ.
  • ನಿಯಮಿತವಾಗಿ ವ್ಯಾಯಾಮ ಮಾಡಿ.
  • ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಮೇಲ್ವಿಚಾರಣೆ ಮಾಡಿ.
  • ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಜೊತೆಗೆ ಚೆನ್ನಾಗಿ ನಿದ್ರೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ? ವಿಶ್ವಾಸದಲ್ಲಿ ಡಿಕೆಶಿ ಆಪ್ತ ಶಾಸಕರು – Kannada News | 200 Precent DK Shivakumar Will be a Next CM Says Ramanagar Congress MLA Iqbal Hussain

ರಾಮನಗರ, (ಡಿಸೆಂಬರ್ 29): ಕಾಂಗ್ರೆಸ್ ಮನೆಯಲ್ಲಿನ ಸಿಎಂ ಕುರ್ಚಿ ಕಾಳಗಕ್ಕೆ ಸದ್ಯ ಜನವರಿ 15ರವರೆಗೆ ಅಲ್ಪವಿರಾಮ ಬಿದ್ದಿದೆ. ಆದ್ರೆ ಪಟ್ಟದ ಪಗಡೆಯಾಟೆ ಮಾತ್ರ ಕಂಡು ಕಾಣದಂತೆ ಒಳಗೊಳಗೆ ನಡೀತಾನೆ ಇದೆ. ಈ ಪೈಕಿ ಸಿಎಂ ಸಿದ್ದರಾಮಯ್ಯ (Siddaramaiah) ಬಣ ಉರುಳಿಸಿರುವ ಅಹಿಂದ ಶಕ್ತಿ ಪ್ರದರ್ಶನವೂ ಒಂದು. ಸಿದ್ದು ತವರು ಮೈಸೂರು ಅಹಿಂದ ಸಮಾವೇಶಕ್ಕೆ ಸಜ್ಜಾಗ್ತಿದೆ. ಇದರ ನಡುವೆ ಜನವರಿ 6 ಅಥವಾ 9ಕ್ಕೆ ಡಿಕೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದು ಡಿಕೆಶಿ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಶರಣರನ್ನು ಮುಂದಿಟ್ಟು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಮಾತನಾಡಿರುವ ಕೈ ಶಾಸಕ ಇಕ್ಬಾಲ್ ಹುಸೇನ್, ಜನವರಿ 6 ಅಥವಾ 9ಕ್ಕೆ ಡಿಕೆ ಅಧಿಕಾರ ಹಿಡಿಯುತ್ತಾರೆ. 200 ಪರ್ಸೆಂಟ್​​​ ಈ ಎರಡು ಡೇಟ್​​​ನಲ್ಲಿ ಅಧಿಕಾರ ಸಿಗಲಿದೆ. ಈಗಲು ಸಹ ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ನನಗೆ ವಿಶ್ವಾಸವಿದೆ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ. ಶರಣರು ಹೇಳುವ ಮಾತು ಸತ್ಯವಾಗುತ್ತದೆ. ಅಧಿಕಾರ ಹಂಚಿಕೆ ಬಗ್ಗೆ ನಮ್ಮ ನಾಯಕರು ಹೇಳಿದ್ದಾರೆ ಅಲ್ವಾ. ಹಾಗಾಗಿ ನನಗೆ ಈ ಬಗ್ಗೆ ನಂಬಿಕೆ ಇದೆ.​​ ಭಗವಂತ ನಮ್ಮ ಬೇಡಿಕೆ ಈಡೇರಿಸುತ್ತಾನೆ ಎಂದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 30ರ ದಿನಭವಿಷ್ಯ – Kannada News | Janam Sankhya Astrology: Dec 30th Fortune by Birth Number

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 30ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಇತರರನ್ನು ಮೆಚ್ಚಿಸುವುದಕ್ಕೆ ಬಹಳ ಸಮಯ ಹೋಗಲಿದೆ. ಉದ್ಯೋಗ ಮಾಡುವ ಸ್ಥಳದಲ್ಲಿಯೇ ಇರಬಹುದು ಅಥವಾ ವೃತ್ತಿಪರರಾಗಿದ್ದಲ್ಲಿ ಕ್ಲೈಂಟ್ ಗಳನ್ನು ಮೆಚ್ಚಿಸುವ ಪ್ರಯತ್ನ ಇರಬಹುದು. ಯಾವುದೇ ರೀತಿಯಲ್ಲೂ ಫಲವನ್ನು ನೀಡುವುದಿಲ್ಲ. ಸಿಗರೇಟ್ ಸೇದುವ ಚಟ ಇರುವವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ವಿಚಾರವನ್ನು ನಿರ್ಲಕ್ಷ್ಯ ಮಾಡದಂತೆ ಕೂಡಲೇ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳಲು ಆದ್ಯತೆ ನೀಡಿ. ಸಂಬಂಧಿಗಳಿಗೆ ತಾತ್ಕಾಲಿಕ ಅವಧಿಗೆ ಎಂದು ನೀಡಿದ ಸಾಲವನ್ನು ವಾಪಸ್ ಪಡೆಯುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಆ ವ್ಯವಹಾರದ ಕಾರಣಕ್ಕೆ ಸಂಬಂಧಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಚ್ಚರಿಕೆಯನ್ನು ವಹಿಸಿ. ವಿವಿಧ ತಳಿಯ ನಾಯಿಗಳ ಸಾಕಣೆ ಹಾಗೂ ಅವುಗಳ ಮಾರಾಟದ ಮೂಲಕ ಆದಾಯವನ್ನು ಪಡೆಯುತ್ತಾ ಇರುವವರಿಗೆ ತಪ್ಪಾದ ಮಾಹಿತಿಯನ್ನು ನೀಡಿ, ಕೆಲವರು ದಾರಿ ತಪ್ಪಿಸುತ್ತಾರೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಆರಂಭದಿಂದ ಕೊನೆ ಹಂತದ ತನಕ ಶ್ರಮ ಹಾಕಿ ಮಾಡಿದ ಕೆಲಸದ ಶ್ರೇಯಸ್ಸು ಬೇರೆಯವರಿಗೆ ದೊರೆಯುವಂತೆ ಆಗಲಿದೆ. ಯಾವುದೇ ಮುಖ್ಯ ಕೆಲಸ ಇದ್ದಲ್ಲಿ ಸಾಮಾನ್ಯಕ್ಕೆ ನೀವು ತೆರಳುವ ವೇಳೆಗಿಂತ ಮುಂಚಿತವಾಗಿ ಅಲ್ಲಿರುವಂತೆ ಯೋಜನೆ ರೂಪಿಸಿಕೊಳ್ಳಿ. ನೀವು ಮಾಡಿದ ಕೆಲಸ- ಕಾರ್ಯಗಳ ಬಗ್ಗೆ ಹೇಳಿಕೊಳ್ಳುವುದಕ್ಕೆ ಹಿಂಜರಿಕೆ ಮಾಡಬೇಡಿ. ಈ ಹಿಂದೆ ನಡೆದಂಥ ಕೆಲವು ಬಿಡಿ ಘಟನೆಗಳನ್ನು ಒಟ್ಟು ಮಾಡಿಕೊಂಡು, ಸೋದರ ಸಂಬಂಧಿಗಳ ಜೊತೆಗೆ ಜಗಳ- ಕಲಹಕ್ಕೆ ಮುಂದಾಗುವ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ಇದರಿಂದ ಮನಸ್ಸು ಇನ್ನಷ್ಟು ಕಹಿಯಾಗುತ್ತದೆ ವಿನಾ ಏನೂ ಫಲಿತಾಂಶ ಸಿಗುವುದಿಲ್ಲ ಎಂಬುದು ಗಮನದಲ್ಲಿ ಇರಲಿ. ವಾಸ್ತು ಹೇಳುವಂಥ ವೃತ್ತಿಯಲ್ಲಿ ಇರುವವರಿಗೆ ಆದಾಯದಲ್ಲಿ ಏರಿಕೆ ಆಗುವ ಯೋಗ ಇದೆ. ನಿಮ್ಮಲ್ಲಿ ಕೆಲವರು ಗ್ರಂಥ ರಚನೆ ಶುರು ಮಾಡುವ ಕುರಿತು ಚಿಂತನೆ ನಡೆಸುತ್ತೀರಿ, ಗ್ರಂಥದ ರಚನೆಯನ್ನೇ ಆರಂಭಿಸುವ ಸಾಧ್ಯತೆಯೂ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ವಿವಿಧ ಸ್ಪರ್ಧೆಗಳಲ್ಲಿ ಭಾಗೀ ಆಗಿ, ಅದರಲ್ಲಿ ಜಯ ಗಳಿಸುವಂಥ ದಿನ ಇದಾಗಿರುತ್ತದೆ. ನಿಮ್ಮ ಅಂದಾಜಿನಂತೆಯೇ ಕೆಲಸ ಮಾಡುವ ಸ್ಥಳದಲ್ಲಿ ಬದಲಾವಣೆ- ಬೆಳವಣಿಗೆಗಳು ಆಗಲಿವೆ. ಮೇಲ್ನೋಟಕ್ಕೆ ಬಹಳ ಕಠಿಣ ಎನಿಸಿದ್ದ ಕೆಲವು ಅವಕಾಶಗಳು ನಿಮಗೆ ಸಾಧಕವಾಗಿ ಪರಿಣಮಿಸಲಿವೆ. ಪ್ರತಿಷ್ಠಿತ ಸಂಸ್ಥೆಗಳು ಯೋಜನೆಗಳು ಅಥವಾ ಅಧ್ಯಯನ ವರದಿಗಳಿಗಾಗಿ ನೀಡುವ ಹಣಕಾಸಿನ ಅನುದಾನ, ಅಂದರೆ ಫೆಲೋಷಿಪ್ ಗಳು ನಿಮ್ಮಲ್ಲಿ ಕೆಲವರಿಗೆ ದೊರೆಯಬಹುದು. ಅಥವಾ ಆ ಬಗ್ಗೆ ನಿಮ್ಮ ಆಪ್ತರು ಸುಳಿವು ನೀಡಲಿದ್ದಾರೆ. ವಿವಾಹಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ರೆಫರೆನ್ಸ್ ಮೂಲಕವಾಗಿ ಸೂಕ್ತ ಸಂಬಂಧ ದೊರೆಯುವ ಯೋಗ ಇದೆ. ಕೋರ್ಟ್- ಕಚೇರಿಗಳಲ್ಲಿ ವ್ಯಾಜ್ಯಗಳು ನಡೆಯುತ್ತಾ ಇದ್ದಲ್ಲಿ ಅವುಗಳನ್ನು ಮಾತು-ಕತೆ ಮೂಲಕವಾಗಿ ಬಗೆಹರಿಸಿಕೊಳ್ಳುವುದಕ್ಕೆ ಬೇಕಾದಂಥ ವೇದಿಕೆ ನಿಮಗೆ ದೊರೆಯಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಪಾರ್ಟನರ್ ಷಿಪ್ ನಲ್ಲಿ ಮಾಡಿದಂಥ ವ್ಯವಹಾರಗಳು ಒಳ್ಳೆ ಲಾಭವನ್ನು ಹಾಗೂ ದೀರ್ಘಾವಧಿಗೂ ಆದಾಯ ತರುವಂಥ ಮಾರ್ಗವನ್ನು ಸಹ ತೆರೆದಿಡಲಿದೆ. ನಿಮಗೆ ದೊರೆಯುವಂಥ ಆಫರ್ ಗಳನ್ನು ಮುಕ್ತ ಮನಸ್ಸಿನಿಂದ ನೋಡುವುದು ಬಹಳ ಮುಖ್ಯವಾಗುತ್ತದೆ. ಈ ಹಿಂದಿನ ಅನುಭವಗಳ ಆಧಾರದಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಏಕೆಂದರೆ ಈ ದಿನ ನಿಮಗೆ ಮ್ಯಾಜಿಕ್ ಅನಿಸುವ ರೀತಿಯಲ್ಲಿ ಕೆಲವು ಘಟನೆಗಳು ನಡೆಯುತ್ತವೆ. ಪ್ರೇಮಿಗಳಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡುವ, ಮದುವೆ ಮಾಡಿಕೊಳ್ಳುವ ಇರಾದೆಯನ್ನು ತಿಳಿಸುವ ತೀರ್ಮಾನವನ್ನು ಮಾಡಲಿದ್ದೀರಿ. ಧಾರ್ಮಿಕವಾಗಿ ಪ್ರಾಶಸ್ತ್ಯ ಇರುವಂಥ ಕೆಲವು ಸ್ಥಳಗಳಿಗೆ ಹೋಗಿಬರುವಂಥ ಯೋಗ ನಿಮ್ಮ ಪಾಲಿಗೆ ಇದೆ. ಪ್ರಭಾವಿ ಹುದ್ದೆಯಲ್ಲಿ ಇರುವವರು ಈ ಹಿಂದೆ ನಿಮಗೆ ನೆರವಾಗಿದ್ದವರಿಗೆ ದೊಡ್ಡ ಮಟ್ಟದ ಸಹಾಯ ಮಾಡಿಕೊಡಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಏನು ಬೇಕೋ ಅದನ್ನು ಬಾಯಿ ಬಿಟ್ಟು ಕೇಳಿ ಪಡೆದುಕೊಳ್ಳುವ ಮನಸ್ಥಿತಿಯಲ್ಲಿ ಇರುತ್ತೀರಿ. ನಿಮ್ಮನ್ನು ತುಂಬ ಮುಖ್ಯ ಕೆಲಸದ ಮೇಲೆ ದೂರದ ಊರು ಅಥವಾ ವಿದೇಶಕ್ಕೆ ಕಳುಹಿಸುವ ಸಾಧ್ಯತೆ ಇದೆ. ಮೇಲಧಿಕಾರಿಗಳು ಈ ಬಗ್ಗೆ ನಿಮಗೆ ಸುಳಿವು ಬಿಟ್ಟುಕೊಡಬಹುದು. ಆದಾಯ ತೆರಿಗೆ ರೀಫಂಡ್ ಗೆ ಅಪ್ಲೈ ಮಾಡಿ, ಅದಕ್ಕಾಗಿ ಕಾಯುತ್ತಾ ಇರುವವರ ಪೈಕಿ ಕೆಲವರಿಗೆ ಆ ಬಗ್ಗೆ ಮಾಹಿತಿ ದೊರೆಯುವ ಯೋಗ ಇದೆ. ಸರ್ಕಾರದ ಕೆಲಸಗಳು ಯಾವುದಾದರೂ ಆಗಬೇಕಿದ್ದು, ಕೊನೆ ಹಂತದಲ್ಲಿ ಇದೆ ಎಂಬಂಥದ್ದು ನಾನಾ ಕಾರಣಗಳಿಗೆ ಅಲ್ಲಿಯೇ ನಿಂತುಬಿಡುವ ಸಾಧ್ಯತೆ ಇದೆ. ಹೊಸ ನಿಯಮಗಳು ಅಂತಲೋ ಅಥವಾ ನೀವು ಹಾಕಿದಂಥ ಅರ್ಜಿಯಲ್ಲಿ ಸಮಸ್ಯೆ ಇದೆ ಎಂಬ ಸಬೂಬು ನೀಡಿಯೋ ಹಾಗೇ ತಡೆಯಾಗಿ ಉಳಿದುಬಿಡಬಹುದು. ಒಂದು ವೇಳೆ ಹೀಗೆ ಆದಲ್ಲಿ ನಯವಾಗಿ ಕಾರ್ಯ ಮುಗಿಸಿಕೊಳ್ಳುವ ಕಡೆಗೆ ಗಮನವನ್ನು ನೀಡುವುದು ಮುಖ್ಯ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಇತರರಿಗೆ ಯಾವುದೇ ರೀತಿಯಲ್ಲೂ ರಿಯಾಯಿತಿ ತೋರಿಸುವುದಕ್ಕೋ ವಿನಾಯಿತಿ ನೀಡುವುದಕ್ಕೋ ನೀವು ಸಿದ್ಧರಿರುವುದಿಲ್ಲ. ಮೊದಲ ಬಾರಿಗೆ ಎಂಬಂತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ಲಾಭದ ರುಚಿ ನೋಡುವ ಯೋಗ ಇದೆ. ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಾ ಹಾಗೂ ಅದೇ ಆದಾಯದ ಮೂಲ ಸಹ ಆಗಿರುವವರು ಹೊಸದಾಗಿ ಹೂಡಿಕೆ ಮಾಡಲಿದ್ದೀರಿ. ಉದಾಹರಣೆಗೆ ಲ್ಯಾಪ್ ಟಾಪ್, ಕೆಲವು ಸಾಫ್ಟ್ ವೇರ್ ಗಳು ಮತ್ತಿತರ ಪರಿಕರಗಳ ಖರೀದಿಗಾಗಿ ಹಣವನ್ನು ಮೀಸಲಿಡಲಿದ್ದೀರಿ. ಸಂಗಾತಿಯ ಆರೋಗ್ಯ ಪರಿಸ್ಥಿತಿ ನಿಮ್ಮಲ್ಲಿ ಕೆಲವರನ್ನು ಚಿಂತೆಗೆ ಗುರಿ ಮಾಡಲಿದೆ. ನಿಮ್ಮದೇ ನಿರ್ಲಕ್ಷ್ಯದಿಂದ ಇಂಥದ್ದೊಂದು ಸ್ಥಿತಿಗೆ ತಲುಪಿತು ಎಂಬ ಅಪರಾಧಿ ಪ್ರಜ್ಞೆಯೊಂದು ವಿಪರೀತ ಕಾಡಲಿದೆ. ಭಾರದ ವಸ್ತುಗಳನ್ನು ಎತ್ತುವಾಗ ಜಾಗ್ರತೆ ವಹಿಸಿ. ಏಕೆಂದರೆ, ಸಣ್ಣ ಪ್ರಮಾಣದ ಅಜಾಗರೂಕತೆಯಿಂದ ದೊಡ್ಡ ಮಟ್ಟದ ತೊಂದರೆಗಳು ಅನುಭವಿಸುವಂತೆ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನೀವು ನೀಡಿದಂಥ ಸಮಯ, ತೋರಿದಂಥ ಕಾಳಜಿ ಇತರರಿಗೆ ಅದು ಮುಖ್ಯ ಎಂದೆನಿಸುತ್ತಿಲ್ಲ ಎಂಬ ಭಾವನೆ ಕಾಡಲಿದೆ. ಸಂಗಾತಿಯ ಆದಾಯದಲ್ಲಿ ಸ್ಥಿರತೆ ಇಲ್ಲದಂತಾಗಬಹುದು ಎಂಬ ಸೂಚನೆ ನಿಮಗೆ ಆತಂಕವನ್ನು ತರಲಿದೆ. ನಿಮ್ಮ ಧ್ವನಿಯಲ್ಲಿನ ಬದಲಾವಣೆ ಕಾರಣಕ್ಕೆ ನೀವಾಡುವ ಮಾತು- ಪದಗಳ ಬಳಕೆ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇದೆ. ಇವರಿಗೇನು ನಾನು ಸಮಜಾಯಿಷಿ ಕೊಡುವುದು ಎಂಬ ಧೋರಣೆ ಬೇಡ. ಅದರಲ್ಲೂ ನಿಮ್ಮ ಮನಸ್ಸಿಗೆ ಹತ್ತಿರವಾದ ಸ್ನೇಹಿತರನ್ನು ಬೇಸರ ಉಳಿಯದಂತೆ ನೋಡಿಕೊಳ್ಳಿ. ನಿಮ್ಮಲ್ಲಿ ಕೆಲವರು ಅಪರೂಪದ ಸ್ಥಳವೊಂದಕ್ಕೆ ತೆರಳಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಚಿತ್ರಕಲೆ- ಅಭಿನಯ ಇಂಥವುಗಳಿಗೆ ಸಂಬಂಧಪಟ್ಟಂತೆ ತರಬೇತಿ ತೆಗೆದುಕೊಳ್ಳಲು ಸಂಸ್ಥೆಯೊಂದಕ್ಕೆ ಸೇರ್ಪಡೆ ಆಗುವುದಕ್ಕೆ ಅವಕಾಶ ಸಿಗಲಿದೆ. ಕ್ಯಾಟರಿಂಗ್ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ.

ಇದನ್ನೂ ಓದಿ: ಹೊಸ ವರ್ಷದ ಮೊದಲ ತಿಂಗಳಲ್ಲಿ ಈ ರಾಶಿಯವರಿಗೆ ಶುಭ

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವು ಇಷ್ಟು ಸಮಯ ಆಸಕ್ತಿಯಿಂದ ಮುನ್ನಡೆಸಿಕೊಂಡು ಬಂದ ಪ್ರಾಜೆಕ್ಟ್ ವೊಂದರಿಂದ ದೂರ ಉಳಿಯಬೇಕಾದ ಸನ್ನಿವೇಶ ಎದುರಾಗಲಿದೆ. ಅಥವಾ ನಿಮಗೆ ಬೇರೆ ಜವಾಬ್ದಾರಿ ವಹಿಸಿ, ಈಗ ನಿರ್ವಹಣೆ ಮಾಡುತ್ತಿರುವ ಪ್ರಾಜೆಕ್ಟ್ ನಲ್ಲಿ ತೊಡಗಿಕೊಳ್ಳಲು- ಸಮಯ ನೀಡುವುದಕ್ಕೆ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿಮಗೆ ಎದುರಾಗಲಿದೆ. ಧಾರವಾಹಿಗಳಲ್ಲಿ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ನೀವು ಈ ಹಿಂದೆ ಕೆಲಸ ಮಾಡಿದ್ದಿರಿ, ಅದರ ಬಾಕಿ ಬರಬೇಕಿದ್ದಲ್ಲಿ ಸ್ನೇಹಿತರೊಬ್ಬರ ನೆರವಿನಿಂದ ವಸೂಲಿ ಮಾಡಲು ಸಾಧ್ಯವಿದೆ. ಅಥವಾ ಇಂಥ ದಿನ ನಿಮಗೆ ನೀಡಬೇಕಾದ ಬಾಕಿ ಮೊತ್ತವನ್ನು ವಾಪಸ್ ನೀಡುತ್ತೇನೆ ಎಂದು ಸಂಬಂಧಪಟ್ಟವರು ಮಾತನ್ನಾದರೂ ನೀಡಬಹುದು. ವ್ಯವಹಾರದ ಕಾರಣಕ್ಕೆ ಬ್ಯಾಂಕ್ ಅಥವಾ ಖಾಸಗಿ ಲೇವಾದೇವಿ ಮಾಡುವವರಿಂದ ಸಾಲ ಪಡೆದುಕೊಳ್ಳಬೇಕಾದ ಅನಿವಾರ್ಯ ನಿಮಗೆ ಎದುರಾಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮಗೆ ನೀವೇ ಏನೇನೋ ಊಹೆ ಮಾಡಿಕೊಂಡು, ಗಾಬರಿ ಆಗುತ್ತೀರಿ. ನೆನಪಿನಲ್ಲಿಡಿ, ವಾಸ್ತವ ಏನಿದೆಯೋ ಹಾಗೂ ಏನಾಗಿದೆಯೋ ಅದನ್ನು ಮಾತ್ರ ಆಲೋಚಿಸಿ. ಡ್ರೈ ಕ್ಲೀನಿಂಗ್ ಸಲುವಾಗಿ ಈ ದಿನ ಹೆಚ್ಚಿನ ವೆಚ್ಚ ಮಾಡುವಂತೆ ಆಗಲಿದೆ. ಮನೆಯಲ್ಲಿನ ಕರ್ಟನ್ ಗಳು, ಬಟ್ಟೆ- ಬರೆಗಳು ಹೀಗೆ ಅವುಗಳ ಸ್ವಚ್ಛತೆಗೆ ಹಣವನ್ನು ಖರ್ಚು ಮಾಡಲಿದ್ದೀರಿ. ಸಾಧ್ಯವಾದಷ್ಟೂ ಪಾಸಿಟಿವ್ ಆದ ಆಲೋಚನೆ- ಚಿಂತನೆ ಮಾಡುವುದಕ್ಕೆ ಆದ್ಯತೆ ಕೊಡಿ. ಇಬ್ಬರು ಮಾಡಬೇಕಾದ ಕೆಲಸ ಒಬ್ಬರೇ ಮುಗಿಸಿ ಕೊಡಬೇಕಾದ ಪರಿಸ್ಥಿತಿ ನಿಮ್ಮಲ್ಲಿ ಕೆಲವರಿಗೆ ಬರಲಿದೆ. ಆ ಕಾರಣಕ್ಕೆ ಸಿಟ್ಟು, ಒತ್ತಡ, ಬೇಸರ ಇವೆಲ್ಲ ಕಾಡಬಹುದು. ಆದರೆ ಇದನ್ನು ಕುಟುಂಬ ಸದಸ್ಯರ ಮೇಲೋ ಅಥವಾ ಸ್ನೇಹಿತರ ಮೇಲೋ ತೋರಿಸಿಕೊಳ್ಳಬೇಡಿ. ಹತ್ತಿ ಬೆಳೆಯುವ ಕೃಷಿಕರಿಗೆ ಆದಾಯ ಮೂಲಗಳು ಜಾಸ್ತಿ ಆಗುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಯಲ್ಲೂ ಸಹ ತೊಡಗಿಕೊಳ್ಳಬಹುದು.

ಲೇಖನ- ಎನ್‌.ಕೆ.ಸ್ವಾತಿ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಾನವಿ ಕೇಸ್​​: ಕೋರ್ಟ್​​ ಮೆಟ್ಟಿಲೇರಿದ ಸೂರಜ್​​ ಕುಟುಂಬ; ಕಾರಣ ಇಲ್ಲಿದೆ – Kannada News | Ganavi Case: Suraj Family Moves Court for Bail Amid Suicide and Harassment Claims

ಬೆಂಗಳೂರು, ಡಿಸೆಂಬರ್​​ 29: ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಗಾನವಿ ಪತಿ ಸೂರಜ್​​ ಸಹೋದರ ಮತ್ತು ತಾಯಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿದಾರರಾದ ಸಂಜಯ್ ಮತ್ತು ಜಯಂತಿ ಪರ ವಕೀಲೆ ಡಾ.ವಂದನಾ ಪಿ.ಎಲ್ ಮನವಿ ಸಲ್ಲಿಸಿದ್ದಾರೆ.

ವರನ ಕಡೆಯಿಂದಲೇ 60 ಲಕ್ಷ ವೆಚ್ಚ ಮಾಡಿ ಮದುವೆ ಮಾಡಲಾಗಿತ್ತು. ಆರಂಭದ ಹೊಂದಾಣಿಕೆ ಕೊರತೆಯಿಂದಾಗಿ ದೈಹಿಕ ಸಂಬಂಧವಿರಲಿಲ್ಲ. ಡಿ.22ಕ್ಕೆ ತವರು ಮನೆಗೆ ತೆರಳಿದ್ದ ಗಾನವಿ ಡಿ.25ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಗೆ ಸೂರಜ್​​ ಮನೆಯವರಿಂದ ಯಾವುದೇ ಕಿರುಕುಳವಾಗಿಲ್ಲ. ಮಾನಸಿಕ ವೈದ್ಯರೊಂದಿಗೆ ಸೂರಜ್ ಸಮಾಲೋಚನೆ ನಡೆಸಲಾಗಿದೆ. ಯಾವುದೇ ಮಾನಸಿಕ, ವೈದ್ಯಕೀಯ ಕಾರಣಗಳಿಲ್ಲ. ಹೀಗಿದ್ದರೂ ಅವರ ಕುಟುಂಬದ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ. ಅಪಮಾನ, ನಿಂದನೆ ತಡೆಯದೇ ಸೂರಜ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರ್ಟ್​​ಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಗಾನವಿ-ಸೂರಜ್ ಪ್ರಕರಣ; ಹನಿಮೂನ್‌ನಿಂದ ಅರ್ಧಕ್ಕೆ ಬಂದಿದ್ಯಾಕೆ? ಸ್ಫೋಟಕ ರಹಸ್ಯ ಬಯಲು

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ನಿನ್ನೆಯಷ್ಟೇ ಹೊಸ ಟ್ವಿಸ್ಟ್​​ ಸಿಕ್ಕಿತ್ತು. ಗಾನವಿ ಈ ಹಿಂದೆ ಹರ್ಷ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳು. ಆತನನ್ನೆ ಮದುವೆಯಾಗ್ಬೇಕು ಎಂದು ನಿರ್ಧರಿಸಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಗಾನವಿ ಸೂರಜ್​​ನ ಮದುವೆಯಾಗಿದ್ದಳು. ಶ್ರೀಲಂಕಾಗೆ ಹನಿಮೂನ್​​ಗೆ ಹೋದಾಗ ಹರ್ಷ ಜೊತೆಗಿನ ಪ್ರೀತಿ ವಿಚಾರವನ್ನು ಆಕೆಯೇ ಸೂರಜ್​​ಗೆ ತಿಳಿಸಿದ್ದಳು. ಹೀಗಾಗಿಯೇ ಹನಿಮೂನ್​​ಗೆ ತೆರಳಿದ್ದ ಅವರು ಅರ್ಧಕ್ಕೇ ಬೆಂಗಳೂರಿಗೆ ಹಿಂದಿರುಗಿದ್ದರು. ನಂತರ ತವರಿಗೆ ತೆರಳಿದ್ದ ಆಕೆ ಅಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ ಆರೋಪವನ್ನು ನಮ್ಮ ಕುಟುಂಬದ ವಿರುದ್ಧ ಹೊರಿಸಲಾಗಿದೆ ಎಂದು ಸೂರಜ್​​ ಭಾವ ರಾಜ್​​ಕುಮಾರ್​​ ವಿದ್ಯಾರಣ್ಯಪುರ ಪೊಲೀಸ್​​ ಠಾಣೆಗೆ ದೂರು ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಹಿಳೆಯರೇ ಡ್ರಾಪ್ ಕೇಳುವ ಮುನ್ನ ಹುಷಾರ್: ಸಹಾಯ ಮಾಡುವ ನೆಪದಲ್ಲಿ ಹೀಗಾ ಮಾಡೋದು? – Kannada News | Haveri: Woman Robbed of 29g Gold Chain After Asking for a Ride

ಹಾವೇರಿ, ಡಿಸೆಂಬರ್​ 29: ಡ್ರಾಪ್​ ಕೇಳಿದ್ದ ಮಹಿಳೆಯ ಮೂರು ಲಕ್ಷ ಮೌಲ್ಯದ ಚಿನ್ನದ ಸರವನ್ನು (Chain Snatching) ಖದೀಮ ಎಗರಿಸಿದ ಘಟನೆ ಹಾವೇರಿ (Haveri) ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿರ್ಲಾಪುರ ಕ್ರಾಸ್​​​ ಬಳಿ ನಡೆದಿದೆ. ರತ್ನಾ ಬಣಕಾರ್​​ ಸರ ಕಳೆದುಕೊಂಡ ಮಹಿಳೆ. 29 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಖದೀಮ ಪರಾರಿಯಾಗಿದ್ದಾನೆ. ಕಾಗಿನೆಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ರತ್ನಾ ಬಣಕಾರ್​​ ಅವರು ಬೈಕ್​​ಗೆ ಕೈ ಮಾಡಿ ಕುಮ್ಮೂರು ಕ್ರಾಸ್​ನಿಂದ ಗುಮ್ಮನಹಳ್ಳಿವರೆಗೆ ಡ್ರಾಪ್ ಕೇಳಿದ್ದಾರೆ. ಬೈಕ್ ಸವಾರ ಹತ್ತಿಸಿಕೊಂಡಿದ್ದಾನೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿಪಲಾಪುರ ಕ್ರಾಸ್​​ ಬಳಿ ನಮ್ಮ ಸಂಬಂಧಿಕರು ಬರುತ್ತಿದ್ದಾನೆ ಅಂತಾ ರತ್ನಾ ಅವರನ್ನು ಇಳಿಸಿದ್ದಾನೆ. ಈ ವೇಳೆ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಖದೀಮ ಪರಾರಿ ಆಗಿದ್ದಾನೆ.

ಬೆಂಗಳೂರಿನಲ್ಲಿ ಸರಣಿ ಕಳ್ಳತನ

ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹುಳಿಮಾವು 80 ಅಡಿ ರಸ್ತೆಯ ಪ್ಯಾರಮೌಂಟ್ ಅಪಾರ್ಟ್ಮೆಂಟ್ ಮುಂಭಾಗದ ಮಳಿಗೆಗಳಲ್ಲಿ ಸರಣಿ ಕಳ್ಳತನ ನಡೆದಿದೆ. ತಾರಸಿ ಶೀಟ್ ಮುರಿದು ಒಳ ನುಗ್ಗಿರುವ ಕಳ್ಳ ಮೊದಲು ಎಸ್​.ಎಸ್ ಲಿಕ್ಕರ್ ಶಾಪ್​ನಲ್ಲಿ 3 ಸಾವಿರ ನಗದು ಮದ್ಯದ ಬಾಟಲಿ ಕದ್ದಿದ್ದಾರೆ.

ಇದನ್ನೂ ಓದಿ: ಗೋಲ್ಡ್ ಇಟ್ಟಿಲ್ಲ, ಲೋನ್ ಪಡೆದಿಲ್ಲ: ಮತ್ತೊಂದು ಕೆನರಾ ಬ್ಯಾಂಕಿನಿಂದ ಮಹಾ ಮೋಸ

ಕರ್ನಾಟಕ ಪ್ಲೈವುಡ್ ಮತ್ತು ಹಾರ್ಡ್ ವೇರ್ ಶಾಪ್​​ನಲ್ಲಿ 50 ಸಾವಿರ ನಗದು ಎಗರಿಸಿದ್ದಾರೆ. ಪಕ್ಕದ ಆಟೋಮೊಬೈಲ್ ಶಾಪ್​​ನಲ್ಲಿ ಹತ್ತು ಸಾವಿರ ನಗದು ಕಳವು ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಸೋಮವಾರ ಬೆಳಗ್ಗೆ ಸಿಬ್ಬಂದಿಗಳು ಮಳಿಗೆ ಬಳಿ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬಾರ್ ಮೇಲ್ವಿಚಾರಣೆ ತೆಗೆದು ಕಳ್ಳ ಒಳಗೆ ಎಂಟ್ರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಸರಣಿ ಕಳ್ಳತನ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೊಟ್ಟ ಮಾತು ತಪ್ಪಿದ್ರಾ ಸಚಿವರು? ಗೃಹಲಕ್ಷ್ಮೀ ಹಣ ಖಾತೆಗೆ ಬೀಳುವುದು ಯಾವಾಗ? ಇಲ್ಲಿದೆ ಸಹಾಯವಾಣಿ – Kannada News | Karnataka government lapse delays Gruha Lakshmi scheme instalments, here Is Helpline For Money

ಬೆಂಗಳೂರು, (ಡಿಸೆಂಬರ್ 29): ರಾಜ್ಯ ಸರ್ಕಾರ(Karnataka Congress Government)  ಅತ್ಯಂತ ಜನಪ್ರಿಯ ‘ಗೃಹಲಕ್ಷ್ಮಿ’ ಯೋಜನೆಯ (gruhalakshmi scheme) ಬಾಕಿ ಕಂತಿನ ಹಣಕ್ಕಾಗಿ ಮಹಿಳೆಯರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ಹಣ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳಿಗೆ ಇದೀಗ ತಾಂತ್ರಿಕ ವಿಘ್ನಗಳು ಎದುರಾಗಿದ್ದು, ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಗ್ರಹಣ ಹಿಡಿದಂತಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದ ಡೆಡ್​ಲೈನ್ ಮುಗಿದು ಇವತ್ತಿಗೆ ಎರಡು ದಿನಗಳಾಗಿವೆ. ಆದ್ರೆ ಗೃಹಲಕ್ಷ್ಮೀಯರ ಅಕೌಂಟ್​​ಗಳಿಗೆ ಇನ್ನೂ ಹಣ ಬಂದಿಲ್ಲ. ಸಚಿವೆಯ ತವರು ಜಿಲ್ಲೆಯಲ್ಲೇ ಮಹಿಳೆಯರು ರೊಚ್ಚಿಗೆದ್ದಿದ್ದಾರೆ.

ತಡವಾಗುತ್ತಿರುವುದಕ್ಕೆ ಗೃಹಲಕ್ಷ್ಮಿಯರು ಆಕ್ರೋಶ

ಬೆಳಗಾವಿ ಸೇರಿದಂತೆ ಕರ್ನಾಟಕದ ಗೃಹಲಕ್ಷ್ಮೀ ಯೋಜನೆಯ ಈ ಬಗ್ಗೆ ಕಿಡಿಕಾರಿದ ಮಹಿಳೆಯರು, ಫೆಬ್ರವರಿ, ಮಾರ್ಚ್ ತಿಂಗಳ ಹಣ ಕೂಡ ಹಾಕಿಲ್ಲ. ಕೆಲವರಿಗೆ 19ನೇ ಕಂತಿನ ಹಣವನ್ನ ಕೊಟ್ಟಿದ್ದಾರೆ. ಕೆಲವರಿಗೆ 22ನೇ ಕಂತಿನ ಹಣ ಮಾತ್ರ ಬಂದಿದೆ. ಕೊಡುವುದಾದ್ರೆ ಎಲ್ಲರಿಗೂ ಸಮಾನವಾಗಿ ಕೊಡಿ ಎಂದು ಆಕ್ರೋಶಗೊಂಡಿದ್ದು,ಸರ್ಕಾರವು ಆದಷ್ಟು ಬೇಗ ಬಾಕಿ ಕಂತುಗಳನ್ನು ಬಿಡುಗಡೆ ಮಾಡಿ ಹೊಸ ವರ್ಷದ ಕೊಡುಗೆ ನೀಡಲಿ ಎಂಬುದು ಲಕ್ಷಾಂತರ ಗೃಹಲಕ್ಷ್ಮಿಯರ ಒತ್ತಾಯವಾಗಿದೆ.

ಇದನ್ನೂ ನೋಡಿ: ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್ ​ ಲಕ್ಷ್ಮೀ ಬರ್ತಾಳೆ

5500 ಕೋಟಿ ರೂಪಾಯಿ ಬಾಕಿ

ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸುಮಾರು 5500 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತದ ಹಣ ಫಲಾನುಭವಿಗಳಿಗೆ ಇನ್ನೂ ಪಾವತಿಯಾಗಿಲ್ಲ. ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿಯೂ ಈ ಬಗ್ಗೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಸದನ ಮುಗಿದು ವಾರ ಕಳೆದರೂ ಹಣ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು-ನಾಳೆ ಎಂದು ಹೇಳುತ್ತಾ ಕಾಲ ತಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಸರ್ಕಾರವು ಬಾಕಿ ಹಣವನ್ನು ಪಾವತಿಸಲು ಶತಪ್ರಯತ್ನ ನಡೆಸುತ್ತಿದೆ. ಆದರೆ, ಬೃಹತ್ ಮೊತ್ತದ ಹಣದ ಹರಿವು ಮತ್ತು ತಾಂತ್ರಿಕ ಕಾರಣಗಳಿಂದಾಗಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರಿಂದಾಗಿ ಪ್ರತಿ ತಿಂಗಳು 2000 ರೂಪಾಯಿ ನಂಬಿಕೊಂಡಿದ್ದ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಹಣಕ್ಕಾಗಿ ದಾರಿ ಕಾಯುವಂತಾಗಿದೆ.

ಪರಿಹಾರಕ್ಕೆ ಬಂತು ‘181’ ಸಹಾಯವಾಣಿ

ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಎಂದು ಮಹಿಳೆಯರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇದೀಗ ‘181’ ಸಹಾಯವಾಣಿಯನ್ನು ಆರಂಭಿಸಿದೆ. ಹೀಗಾಗಿ ಇನ್ಮುಂದೆ ಹಣ ಜಮೆಯಾಗದ ಬಗ್ಗೆ ಮಹಿಳೆಯರು ಕಚೇರಿಗೆ ಹೋಗಬೇಕಿಲ್ಲ. 181 ಕ್ಕೆ ಕರೆ ಮಾಡಿದರೆ, ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ತಾಲೂಕಿನ ಮಾಹಿತಿ ಪಡೆದು ಸಮಸ್ಯೆಗೆ ಇರುವ ಕಾರಣ ಮತ್ತು ಪರಿಹಾರದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ಘೋಷಿಸಲಾದ ಗೃಹಲಕ್ಷ್ಮೀ ಗ್ಯಾರಂಟಿಗೆ ಹಲವು ಬಾರಿ ಗ್ರಹಣ ಬಡಿದಿದೆ. ಇದೀಗ ಮತ್ತೆ ಹಲವು ತಿಂಗಳ ಹಣವನ್ನೂ ನೀಡಿಲ್ಲ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷಕ್ಕೆ ಗುಡ್​​ನ್ಯೂಸ್​​: ಡಿ. 31ರ ತಡರಾತ್ರಿವರೆಗೂ ಮೆಟ್ರೋ, BMTC ಬಸ್​​ ಸಂಚಾರ – Kannada News | New Year 2026: Bengaluru Namma Metro run time extended on 31st December 2025

ಬೆಂಗಳೂರು, ಡಿಸೆಂಬರ್​​ 29: ಹೊಸ ವರ್ಷದ ಹಿನ್ನೆಲೆ ಮೆಟ್ರೋ ಸೇವೆ ಸಮಯವನ್ನು ವಿಸ್ತರಣೆಗೊಳಿಸಲಾಗಿದ್ದು, ಡಿ.31ರಂದು ಬೆಳಗಿನಜಾವ 3:10ರ ವರೆಗೂ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಪ್ರಕಟಣೆ ಮೂಲಕ ಬಿಎಂಆರ್​​ಸಿಎಲ್​​ ತಿಳಿಸಿದೆ.

ಕೊನೆಯ ಮೆಟ್ರೋ ರೈಲಿನ ಸಮಯ

ನೇರಳೆ ಮಾರ್ಗ

ವೈಟ್‌ ಫೀಲ್ಡ್​​ನಿಂದ ಚಲ್ಲಘಟ್ಟದ ವರೆಗೆ- ರಾತ್ರಿ 1:45 ಗಂಟೆ

ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ವರೆಗೆ- ರಾತ್ರಿ 2  ಗಂಟೆ

ಹಸಿರು ಮಾರ್ಗ

ಮಾದಾವರದಿಂದ ರೇಷ್ಮೆ ಸಂಸ್ಥೆಯ ವರೆಗೆ- ರಾತ್ರಿ 2 ಗಂಟೆ

ರೇಷ್ಮೆ ಸಂಸ್ಥೆಯಿಂದ ಮಾದಾವರದ ವರೆಗೆ- ರಾತ್ರಿ 2 ಗಂಟೆ

ಹಳದಿ ಮಾರ್ಗ

ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದ ವರೆಗೆ- ಬೆಳಗಿನಜಾವ 3:10 ಗಂಟೆ

ಬೊಮ್ಮಸಂದ್ರದಿಂದ ಆರ್‌.ವಿ ರಸ್ತೆಯ ವರೆಗೆ- 1:30 ಗಂಟೆ

ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಬೆಂಗಳೂರಿನ ಈ ಫ್ಲೈಓವರ್​ಗಳು, ಮಟ್ರೋ ಸ್ಟೇಷನ್ ಕ್ಲೋಸ್

ಮೆಜೆಸ್ಟಿಕ್​​ನಿಂದ ಕೊನೆಯ ಮೆಟ್ರೋ ಸಮಯ

ನೇರಳೆ ಮಾರ್ಗದ ವೈಟ್‌ಫೀಲ್ಡ್ ಮತ್ತು ಚಲ್ಲಘಟ್ಟ ಕಡೆಗೆ ಹಾಗೂ ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆ ಕಡೆಗೆ ಹೊರಡುವ ಕೊನೆಯ ರೈಲು ರಾತ್ರಿ 2:45ಕ್ಕೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್​​ನಿಂದ ಹೊರಡಲಿದೆ.

ರೈಲು ಸಂಚಾರದ ಅಂತರ

31ನೇ ಡಿಸೆಂಬರ್ 2025ರ ರಾತ್ರಿ 11:30ರಿಂದ ವಿಸ್ತರಿತ ಸೇವೆ ಮುಗಿಯುವವರೆಗೂ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 8 ನಿಮಿಷಗಳ ಅಂತರದಲ್ಲಿ ಹಾಗೂ ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ.

ಎಂ.ಜಿ. ರೋಡ್​​ ನಿಲ್ದಾಣ ಬಂದ್​​

ಎಂ.ಜಿ. ರಸ್ತೆ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ನಿರೀಕ್ಷೆಯಿರುವುದರಿಂದ, ಡಿಸೆಂಬರ್ 31, 2025ರ ರಾತ್ರಿ 10ರಿಂದ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ಪವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಆದರೆ, ರೈಲುಗಳು ಪಕ್ಕದ ನಿಲ್ದಾಣಗಳಾದ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದ್ದು, ಪುಯಾಣಿಕರು ಅಲ್ಲಿ ರೈಲನ್ನು ಹತ್ತಿ-ಇಳಿಯಬಹುದು.

ಟಿಕೆಟ್‌ ಕೌಂಟರ್‌ಗಳಲ್ಲಿ ಜನದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ, ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 11ರ ನಂತರ ಟೋಕನ್ ಮಾರಾಟ ಇರುವುದಿಲ್ಲ. ಈ ನಿಲ್ದಾಣಗಳಿಂದ ರಾತ್ರಿ 11 ಗಂಟೆಯ ನಂತರ ಪಯಾಣಿಸುವ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ಗಳ ಮೂಲಕ ಅಥವಾ ಮುಂಗಡವಾಗಿ ರಿಟರ್ನ್ ಟಿಕೆಟ್ ಖರೀದಿಸಿ ಪ್ರಯಾಣಿಸುವಂತೆ BMRCL ತಿಳಿಸಿದೆ.

ತಡರಾತ್ರಿವರೆಗೆ BMTC ಬಸ್ ಕೂಡ​​ ಓಡಾಟ

ಡಿಸೆಂಬರ್ 31ರಂದು ತಡರಾತ್ರಿವರೆಗೂ ಬಿಎಂಟಿಸಿ ಬಸ್​​ಗಳು ಕೂಡ ಕಾರ್ಯಾಚರಣೆ ನಡೆಸಲಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಇರಲಿದೆ. ರಾತ್ರಿ 11 ಗಂಟೆಯ ನಂತರ ತಡರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್​​ಗಳು ಓಡಾಟ ನಡೆಸಲಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಸಾರ ಬಸ್​​ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಪೂರ್ವ, ಜಿಗಣಿ, ಸರ್ಜಾಪುರ, ಕೆಂಗೇರಿ KHB ಕ್ವಾಟರ್ಸ್, ಜನಪ್ರಿಯ ಟೌನ್ ಶಿಪ್, ನೆಲಮಂಗಲ, ಯಲಹಂಕ, ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿ, ಜೀವನ್ ಭೀಮಾನಗರ ಸೇರಿ ಹಲವೆಡೆ ಹೆಚ್ಚುವರಿ ಬಸ್​​ಗಳು ಕಾರ್ಯಾಚರಣೆ ನಡೆಸಲಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:49 pm, Mon, 29 December 25

Source link

Horoscope Today 30 December: ಇಂದು ಈ ರಾಶಿಯವರಿಗೆ ಪ್ರೇಮದಲ್ಲಿ ಅತಂತ್ರ ಸ್ಥಿತಿಯಿಂದ ದುಃಖ – Kannada News | Horoscope Today 30 December: Meena and Vrishabha Astrological Forecast for Tuesday

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ದಶಮೀ ತಿಥಿ ಮಂಗಳವಾರ ವಿಚಿತ್ರ ಸ್ಫುರಣೆ, ಲೌಕಿಕ ಸುಖ, ಪದಚ್ಯುತಿ, ದೇಹಾರೋಗ್ಯ, ಹೊಸ ವಸ್ತು ಖರೀದಿ, ಪ್ರೇಮದಿಂದ ಪಾಠ, ಮಕ್ಕಳ ಬೇಸರ, ಅನಿಶ್ಚಿತ ಸವಾಲು, ಸೌಕರ್ಯಕ್ಕೆ ಸೆಣೆಸಾಟ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ದಶಮೀ ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಬ್ರಹ್ಮ, ಕರಣ : ಗರಜ, ಸೂರ್ಯೋದಯ – 06 – 49 am, ಸೂರ್ಯಾಸ್ತ – 06 – 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:16 – 16:40, ಯಮಗಂಡ ಕಾಲ 09:38 – 11:03, ಗುಳಿಕ ಕಾಲ 12:27 – 13:51

ಮೇಷ ರಾಶಿ :

ಇಂದು ಅಂತಃಪ್ರಜ್ಞೆ ಬಲವಾಗಿದ್ದರೆ, ಯಾವುದಕ್ಕೂ ಭೀತಿ ಇರದು. ಉದ್ಯೋಗದಲ್ಲಿ ಗೊಂದಲ ಇದ್ದರೂ ಸರಿಯಾದ ಮಾರ್ಗ ಸಿಗುತ್ತದೆ. ಹಣಕಾಸಿನಲ್ಲಿ ಸಾಲದ ವಿಚಾರಗಳು ಚಿಂತೆಗೆ ಕಾರಣವಾಗಬಹುದು. ಮಕ್ಕಳ ಮೇಲಿಟ್ಟ ಭರವಸೆಯು ಫಲಿಸಬಹುದು. ನಿಮ್ಮವರಿಗೆಂದು ಕೊಡುವ ಸಮಯು ವ್ಯರ್ಥವಾಗುವುದು. ಸಣ್ಣ ಮಟ್ಟಿನ ಸಾಲವನ್ನು ನೀವು ಮಾಡಬೇಕಾದ ಸ್ಥಿತಿಯು ಬರಬಹುದು. ತಾಯಿಯ ಕಡೆಯಿಂದ ನಿಮಗೆ ಯಾವ ಸಹಾಯವೂ ಸಿಗದೇಹೋಗಬಹುದು. ನಿರಂತರ ಕೆಲಸದಿಂದ ನಿಮಗೆ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇದೆ. ಯಾವ ಬಂಧನಕ್ಕೂ ಒಳಪಡದೇ ಮನಸ್ಸು ಮುಕ್ತವಾಗಿರಲು ಬಯಸುವುದು. ಸಾಮರಸ್ಯದ ಅಭಾವವು ದ್ವೇಷಕ್ಕೆ ಕಾರಣವಾಗಬಹುದು. ಕುಟುಂಬದಲ್ಲಿ ಸಹಾನುಭೂತಿ ಅಗತ್ಯ. ಆರೋಗ್ಯದಲ್ಲಿ ಕಣ್ಣು ಸಮಸ್ಯೆ ಕಾಣಿಸಿಕೊಳ್ಳುವುದು. ಧ್ಯಾನ, ಜಪ ದಿನಕ್ಕೆ ಶಾಂತಿ ನೀಡುತ್ತದೆ. ಸಿಕ್ಕ ವಸ್ತುವನ್ನು ಸರಿಯಾಗಿ ಬಳಸಿಕೊಳ್ಳಿ. ಯಾವುದನ್ನೇ ಆದರೂ ನಿರಂತರ ಮಾಡಿದರೆ ನಿಮ್ಮ ವಶವಾಗುವುದು. ಭಿನ್ನಾಭಿಪ್ರಾಯಗಳು ಪರಸ್ಪರ ಮಾತುಕತೆಯ ಮೂಲಕ‌ ಪರಿಹಾರವಾಗುವುದು.

ವೃಷಭ ರಾಶಿ :

ವಿಚಾರಗಳಲ್ಲಿ ಕಾರ್ಯಗಳಲ್ಲಿ ಹೊಸತನ ಕಾಣಿಸುವಂತೆ ಮಾಡುವಿರಿ. ಉದ್ಯೋಗದಲ್ಲಿ ತಾಂತ್ರಿಕ ಅಥವಾ ಸೃಜನಾತ್ಮಕ ಕೆಲಸದಲ್ಲಿ ಯಶಸ್ಸು. ಹಣಕಾಸಿನ ಸ್ಥಿರತೆಗೆ ಕಲಹವಾಗಲಿದೆ. ಸ್ನೇಹಿತರ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಬಗ್ಗೆ ಭಿನ್ನಾಭಿಪ್ರಾಯ ಬರಬಹುದು. ಹಿತಶತ್ರುಗಳನ್ನು ನೀವು ನಿಭಾಯಿಸುವುದು ಕಷ್ಟವಾದೀತು. ಅಮೂಲ್ಯ ವಸ್ತುವನ್ನು ನಿರ್ಲಕ್ಷ್ಯದಿಂದ ಎಲ್ಲಿಯೋ ಇಟ್ಟು ಕಳೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳಿಂದ ನೀವು ಸಾಮಾಜಿಕ ಕಾರ್ಯಕ್ಕೆ ಹಣವನ್ನು ಪಡೆಯುವಿರಿ. ನಿಮ್ಮ ಇಷ್ಟದ ಪ್ರಯಾಣಕ್ಕೆ ಕ್ಷಣಗಣನೆ ಮಾಡುವಿರಿ. ಕುಟುಂಬದಲ್ಲಿ ಸ್ವಲ್ಪ ಅಸಮಾಧಾನ ಕಂಡರೂ ಮಾತುಕತೆಯಿಂದ ಪರಿಹಾರ. ಆರೋಗ್ಯದಲ್ಲಿ ನರಕ್ಕೆ ಸಂಬಂಧಿತ ಪೀಡೆ ಉಂಟಾಗಲಿದೆ. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮವರು ನಿಮ್ಮನ್ನು ಬೇರೆ ಕೆಲಸಗಳಿಗೆ ಕರೆದುಕೊಂಡು ಹೋಗುವರು. ನಿಮ್ಮ ಪಕ್ಷಪಾತವು ಕೆಲವರಿಗೆ ಇಷ್ಟವಾಗದು. ಅನ್ಯರ ಜೊತೆ ಸಮಾನಸ್ಥಾನವನ್ನು ಗಳಿಸುವುದು ಕಷ್ಟವಾಗುವುದು. ಇಂದು ಪ್ರಾಬಲ್ಯವನ್ನು ಪ್ರದರ್ಶಿಸುವುದು ಮುಖ್ಯವಾಗಬಹುದು.

ಮಿಥುನ ರಾಶಿ :

ಇಂದಿನ ನಿಮ್ಮ ಸಾಧನೆಗೆ ಶ್ರಮವೇ ಹೆಚ್ಚಾಗಿರುವುದು. ಉದ್ಯೋಗದಲ್ಲಿ ಹಿರಿಯರ ಮೆಚ್ಚುಗೆ ದೊರೆಯುತ್ತದೆ. ಅಮೂಲ್ಯ ವಸ್ತುಗಳ ಮೇಲೆ ಹೂಡಿಕೆ ಮಾಡುವಾಗ ಜಾಗ್ರತೆ ಅಗತ್ಯ. ಕುಟುಂಬದಲ್ಲಿ ನಿಮ್ಮ ಹೊಣೆಗಾರಿಕೆ ಹೆಚ್ಚಾಗಬಹುದು. ಸ್ನೇಹಿತರ ಜೊತೆ ಮೋಜಿನಲ್ಲಿ ಕಾಲ ಕಳೆಯುವಿರಿ. ಮನಸ್ಸು ಬಹಳ ಖಿನ್ನತೆಗೆ ಹೋಗಬಹುದು. ಯಾವ ವಿಚಾರವನ್ನೂ ತೀರ್ಮಾನಿಸಲಾಯಿತು ಆಗದು. ವ್ಯಾಪಾರದಲ್ಲಿ ನಿಮ್ಮ ಜಾಣ್ಮೆಯನ್ನು ತೋರಿಸುವಿರಿ. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು. ತಾಯಿಯ ಆರೋಗ್ಯದ ವ್ಯತ್ಯಾಸದಿಂದ ಚಿಕಿತ್ಸೆ ಕೊಡಿಸಿ. ಸ್ನೇಹಿತರು ನಿಮ್ಮ ಬಳಿ ಧನಸಹಾಯವನ್ನು ಕೇಳಬಹುದು. ಪ್ರಖ್ಯಾತ ವ್ಯಕ್ತಿಗಳ ಭೇಟಿಯಾಗಬಹುದು. ಆರೋಗ್ಯದಲ್ಲಿ ಮೊಣಕಾಲು ಸಮಸ್ಯೆ ಅಧಿಕವಾಗುವ ಸಾಧ್ಯತೆ ಇದೆ. ಶಿಸ್ತಿನ ಜೀವನಶೈಲಿ ಹಾಗೂ ನಿಯಮಿತ ವ್ಯಾಯಾಮ ಲಾಭಕರ. ಸಂಗಾತಿಯ ಇಂಗಿತವನ್ನು ತಿಳಿಯಲು ಪ್ರಯತ್ನಿಸಿ. ಎಂದೋ ಆಡಿದ ನಿಮ್ಮ ಮಾತು ನಿಮಗೇ ಪುನಃ ಬರಬಹುದು. ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಅಭ್ಯಾಸ ಮಾಡುವಿರಿ. ನಿಮಗಾದ ಒಳ್ಳೆಯದನ್ನು ಮರೆಯುವುದು ಬೇಡ.

ಕರ್ಕಾಟಕ ರಾಶಿ :

ಬಹಳ ದಿನಗಳ ಅನಂತರ ಯಾತ್ರೆ ಮಾಡುವಿರಿ. ಉದ್ಯೋಗದಲ್ಲಿ ಹೊಸ ಯೋಜನೆ ಆರಂಭಿಸಲು ಸೂಕ್ತ ಸಮಯ. ಹಣಕಾಸಿನಲ್ಲಿ ನಿಧಾನವಾದರೂ ಸ್ಥಿರತೆ ಇರುತ್ತದೆ. ಕುಟುಂಬದಲ್ಲಿ ಸಂತೋಷದ ಸುದ್ದಿ ಸಿಗಬಹುದು. ನಿಮ್ಮ ಬಗ್ಗೆ ಸಲ್ಲದ ಆರೋಪಗಳು ಕೇಳಿಬರಬಹುದು. ಭೂಮಿಯ ವ್ಯವಹಾರವನ್ನು ಸಂಕೋಚದಿಂದ ಮಾಡುವುದು ಬೇಡ. ನಿಮ್ಮ ನಿರ್ಧಾರವನ್ನು ಬದಲಿಸದೇ ಮುಂದುವರಿಯಿರಿ. ವಾಹನವನ್ನು ಪರೀಕ್ಷಿಸಿ ಖರೀದಿಸಿ. ಶತ್ರುಗಳು ನಿಮ್ಮ ಮೇಲೆ‌ ಆರೋಪಗಳನ್ನು ಮಾಡಬಹುದು. ಎಲ್ಲದರಲ್ಲಿಯೂ ನೀವೇ ಬುದ್ಧಿವಂತರು ಎಂದು ತೋರಿಸಿಕೊಳ್ಳುವುದು‌ ಬೇಡ. ಅಧಿಕಾರದಿಂದ‌ ಕೂಡಿದ ಮಾತು ನಿಮಗೆ ಪ್ರಯೋಜನವಾಗದು. ಕಾಲು ನೋವಿನಿಂದ ಅನೇಕ ಕೆಲಸಗಳು ಸ್ಥಗಿತವಾಗಲಿವೆ. ಸಂಶೋಧನೆ ಅಧ್ಯಯನ ಕಾರ್ಯಗಳಲ್ಲಿ ಮನಸ್ಸು ತೊಡಗುತ್ತದೆ. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಮನೆಯ ಕೆಲಸವು ಬಹಳ ಆಯಾಸವನ್ನು ಕೊಡಬಹುದು. ಕೆಲಸವನ್ನು ಮುಗಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಕೊನೆಯ ಹಂತದಲ್ಲೂ ವ್ಯತ್ಯಾಸವಾಗಬಹುದು.

ಸಿಂಹ ರಾಶಿ :

ರಹಸ್ಯ ವಿಚಾರಗಳು ಬಹಿರಂಗವಾಗುವ ಸಾಧ್ಯತೆ. ಉದ್ಯೋಗದಲ್ಲಿ ಸ್ಪರ್ಧೆ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ಅನಿರೀಕ್ಷಿತ ನಷ್ಟ ಸಂಭವಿಸಬಹುದು. ಕುಟುಂಬದಲ್ಲಿ ಹಳೆಯ ವಿಷಯಗಳು ಚರ್ಚೆಗೆ ಬರುತ್ತವೆ. ಇಂದು ಎಲ್ಲದಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡುವಿರಿ. ಗೊತ್ತಿಲ್ಲದೇ ಕೆಟ್ಟ ಮಾರ್ಗವನ್ನು ನೀವು ಅನುಸರಿಸಬಹುದು. ನಿಮ್ಮ ಪ್ರಾಮಾಣಿಕತೆಗೆ ಬೆಲೆ ಇಲ್ಲವೆನಿಸುವುದು. ಹೂಡಿಕೆಗೆ ನಿಮ್ಮದಾದ ತಂತ್ರವನ್ನು ಬಳಸುವಿರಿ. ಉದ್ಯೋಗದ ಹುಡುಕಾಟಕ್ಕೆ ಓಡಾಡುವುದು ನಿಮಗೆ ಕಷ್ಟವಾದೀತು. ಅಪರಿಚಿತರ ವಿದ್ಯಾಭ್ಯಾಸಕ್ಕೆ ನಿಮ್ಮಿಂದ ಸಹಾಯವು ಸಿಗಲಿದೆ. ಅಧಿಕಾರಿಗಳು ವೃತ್ತಿಯನ್ನು ಸರಿಯಾಗಿ ನಿರ್ವಹಿಸುವರು. ಒತ್ತಾಯಪೂರ್ವಕವಾಗಿ ಯಾರ ಸ್ನೇಹವನ್ನೂ ಬಯಸದಿರಿ. ಆರೋಗ್ಯದಲ್ಲಿ ರಕ್ತದ ಒತ್ತಡದ ನಿಯಂತ್ರಣ ಸಾಧ್ಯವಾಗದು. ಧೈರ್ಯ ಹಾಗೂ ಸಂಯಮ ದಿನವನ್ನು ಸುಗಮಗೊಳಿಸುತ್ತದೆ. ದೇವರಲ್ಲಿ ಶ್ರದ್ಧೆ ಇರಲಿದೆ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕಾದೀತು. ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮಗೆ ಆದಾಯ ಕಡಿಮೆ ಆಗಬಹುದು.

ಕನ್ಯಾ ರಾಶಿ :

ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ. ಉದ್ಯೋಗದಲ್ಲಿ ಸಹಕಾರದಿಂದ ಕೆಲಸ ಮುನ್ನಡೆಯುತ್ತದೆ. ಹಣಕಾಸಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚನೆ ಅಗತ್ಯ. ದೂರದ ಊರಿಗೆ ಉದ್ಯೋಗಕ್ಕೆ ಆಹ್ವಾನ ಬರಬಹುದು. ಸ್ನೇಹಿತರಿಂದ ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯಮದಲ್ಲಿ ಉಂಟಾದ ಬೆಳವಣಿಗೆಯನ್ನು ಸಕಾರಾತ್ಮಕವಾಗಿ ಆಲೋಚಿಸಿ. ರಾಜಕೀಯ ವ್ಯಕ್ತಿಗಳು ತಮ್ಮ ಲಾಭವನ್ನು ಪಡೆದುಕೊಳ್ಳುವರು. ಯಾರನ್ನೋ‌ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಡುವಿರಿ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು. ದಾಂಪತ್ಯ ಅಥವಾ ಪ್ರೇಮದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಹೆಚ್ಚುತ್ತದೆ. ಆರೋಗ್ಯದಲ್ಲಿ ಕಣ್ಣು ಅಥವಾ ಬೆನ್ನುನೋವು ಸಾಧ್ಯ. ಶಾಂತ ವಾತಾವರಣದಿಂದ ಮನೋಲ್ಲಾಸ. ವಿವಾಹದ ಬಗ್ಗೆ ಇರುವ ಗೊಂದಲವು ನಿವಾರಣೆಯಾಗಲಿದೆ. ಆಗದವರು ನಿಮ್ಮ ರಹಸ್ಯ ವಿಚಾರಗಳನ್ನು ತಿಳಿದುಕೊಳ್ಳಲು ಇಚ್ಛಿಸುವರು. ಒತ್ತಡದಿಂದ ನಿಮ್ಮ ಎಲ್ಲ ಚಿಂತೆಗಳೂ ಕಾಣಿಸಿಕೊಳ್ಳದು. ನಿಮ್ಮ ಸ್ಥಾನವನ್ನು ಕಳೆದುಕೊಳ್ಳುವುದು ಬೇಡ.

ತುಲಾ ರಾಶಿ :

ವಿವರಗಳಿಗೆ ಹೆಚ್ಚಿನ ಗಮನ ನೀಡಬೇಕಾದ ದಿನ. ಉದ್ಯೋಗದಲ್ಲಿ ಲೆಕ್ಕಪತ್ರ, ದಾಖಲೆ ಕೆಲಸಗಳು ಯಶಸ್ವಿಯಾಗುತ್ತವೆ. ಹಣಕಾಸಿನಲ್ಲಿ ಸಣ್ಣ ವೆಚ್ಚಗಳು ಹೆಚ್ಚಾಗಬಹುದು. ನೀವು ಪಾಲುದಾರಿಕೆಯನ್ನು ಬಿಡುವ ಬಗ್ಗೆ ಯೋಚಿಸುವಿರಿ. ನೀವು ಆಸ್ತಿಯನ್ನು ಮಾರಾಟ ಮಾಡಲು ಯೋಜಿಸುವಿರಿ. ಸಂಗಾತಿಯ ಜೊತೆ ವ್ಯವಹಾರದ ವಿಚಾರಕ್ಕೆ ಕಲಹವಾಗಬಹುದು. ಅಪರೂಪದ ಮಿತ್ರರ ಭೇಟಿಯಿಂದ ಸಂತೋಷವಾಗಲಿದೆ. ದ್ವಿಚಕ್ರದ ವಾಹನವನ್ನು ಚಲಾಯಿಸುವಾಗ ಜಾಗರೂಕತೆ ಇರಲಿ. ನೀವು ನಡೆದದ್ದೇ ಹಾದಿಯಾದರೂ ಒಮ್ಮೆ ದಾರಿಯು ನೋಡುವುದು ಸೂಕ್ತ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು. ಕುಟುಂಬದಲ್ಲಿ ಸಣ್ಣ ಚಿಂತೆ ಕಂಡರೂ ಪರಿಹಾರ ಸಿಗುತ್ತದೆ. ಆರೋಗ್ಯದಲ್ಲಿ ನರದ ಸಮಸ್ಯೆ ಸಾಧ್ಯ. ಯೋಗ, ವ್ಯಾಯಾಮದಿಂದ ಶಕ್ತಿ ವೃದ್ಧಿಯಾಗಲಿದೆ. ನಿಮ್ಮ ಬಗ್ಗೆ ಬರುವ ನಕಾರಾತ್ಮಕ ಅಂಶಗಳನ್ನು ಅಲ್ಲಗಳೆಯುವಿರಿ. ಸಹೋದರರ ನಡುವೆ ಭಿನ್ನಾಭಿಪ್ರಾಯ ಬರಬಹುದು. ಕಲಾವಿದರು ಪ್ರಯತ್ನಪೂರ್ವಕವಾಗಿ ಉತ್ತಮ‌ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ :

ಇಂದು ನಿಮ್ಮ ಒಳ್ಳೆಯ ಸ್ವಭಾವ ಹೊರಹೊಮ್ಮುತ್ತವೆ. ಕೆಲಸದಲ್ಲಿ ಪ್ರಶಂಸೆ ಅಥವಾ ಗೌರವ ಸಿಗುವ ಸಾಧ್ಯತೆ. ಹಣಕಾಸಿನಲ್ಲಿ ಲಾಭದ ಅವಕಾಶ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮೌಲ್ಯ ಸಿಗುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ. ಅನಿರೀಕ್ಷಿತವಾಗಿ ದೂರಪ್ರಯಾಣ ಮಾಡಬೇಕಾದೀತು. ನಿಮ್ಮ ಕೆಲಸಕ್ಕೆ ವೃತ್ತಿಯಲ್ಲಿ ಉತ್ತಮ‌ ಪ್ರಶಂಸೆಯು ಸಿಗುವುದು. ಇಂದು ನಿಮಗೆ ಉತ್ಸಾಹದ ದಿನವೂ ಆಗಲಿದೆ. ಸ್ನೇಹಿತರಿಗಾಗಿ ಮಾಡಿದ ಸಾಲವು ಕೊನೆಗೆ ನಿಮಗೇ ಸುತ್ತಿಕೊಳ್ಳುವುದು. ಕರಕುಶಲ ಕರ್ಮಕ್ಕೆ ಮೆಚ್ಚುಗೆ ಅಗುವುದು. ಸಂಶೋಧನೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಸರ್ಕಾರಿ ಉದ್ಯೋಗಿಗಳ ಸ್ಥಾನವು ಹೆಚ್ಚಾಗಬಹುದು. ಆರೋಗ್ಯದಲ್ಲಿ ಶಕ್ತಿ ಹೆಚ್ಚಿರುತ್ತದೆ. ಅಹಂಕಾರ ತಪ್ಪಿಸಿದರೆ ದಿನ ಸಂಪೂರ್ಣವಾಗಿ ಅನುಕೂಲಕರವಾಗಿರುತ್ತದೆ. ಎಲ್ಲ ತಪ್ಪುಗಳಿಗೂ ಸಂಗಾತಿಯನ್ನು ಬೊಟ್ಟು ಮಾಡಿ ತೋರಿಸುವಿರಿ. ಮಕ್ಕಳ ಹಠದ ಸ್ವಭಾವಕ್ಕೆ ನೀವು ಮಣಿಯುವಿರಿ.‌ ಯೋಜಿತ ಕಾರ್ಯವನ್ನು ಪೂರೈಸಲು ನಡುವೆ ಅನ್ಯ ಕಾರ್ಯವು ಬರಬಹುದು.

ಧನು ರಾಶಿ :

ಭಾವನಾತ್ಮಕ ವಿಚಾರಗಳು ಇಂದು ಮೇಲುಗೈ ಸಾಧಿಸುತ್ತವೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಉದ್ಯೋಗದಲ್ಲಿ ನಿಧಾನಗತಿ ಇದ್ದರೂ ಆತಂಕ ಬೇಡ. ಹಣಕಾಸಿನಲ್ಲಿ ಉಳಿಸುವ ಮನೋಭಾವ ಉಂಟಾಗುವುದು. ಇಂದು ಆರ್ಥಿಕ ಲಾಭದ ಹೊಸ ಮೂಲಗಳು ಗೊತ್ತಾಗುವುದು. ಯಾರದೋ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ನಿಮ್ಮವರ ಮೇಲೆ ಸಿಟ್ಟುಗೊಳ್ಳುವಿರಿ. ಶತ್ರುಗಳಿಂದ ನಿಮಗೆ ವಂಚನೆಯಾಗಿದ್ದು ವಿಳಂಬವಾಗಿ ಗೊತ್ತಾಗುವುದು.‌ ಸಿಟ್ಟಿನ ಸ್ವಭಾವದಿಂದ ಮನೆಯಲ್ಲಿ ಅಸಮಾಧಾನ ಇರುವುದು. ಎಲ್ಲ ವಿಚಾರದಲ್ಲಿಯೂ ಒಂದಿಲ್ಲೊಂದು ಕಿರಿಕಿರಿ ಕಾಣಿಸೀತು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು.‌ ಸಂಬಂಧಗಳಲ್ಲಿ ಮೃದುವಾದ ಮಾತು ಅಗತ್ಯ. ಆರೋಗ್ಯದಲ್ಲಿ ಹೊಟ್ಟೆ ಅಥವಾ ಎದೆ ಸಂಬಂಧಿತ ಅಸ್ವಾಸ್ಥ್ಯ ಕಾಡಲಿದೆ. ಆಹಾರದಲ್ಲಿ ಎಚ್ಚರಿಕೆ ವಹಿಸಿ. ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ. ನಿಮ್ಮ ಆರ್ಥಿಕ ಸ್ಥಿತಿಯೂ ಕ್ಷೀಣಿಸಿದ್ದು ಆತಂಕವಾಗಬಹುದು. ನಿಮ್ಮದಲ್ಲದ ವಸ್ತುವನ್ನೂ ನೀವು ಬಿಟ್ಟುಕೊಡಲಾರಿರಿ.

ಮಕರ ರಾಶಿ :

ಸಂವಹನ ಕೌಶಲ್ಯವು ಇಂದು ನಿಮಗೆ ಯಶಸ್ಸು ತರುತ್ತದೆ. ಹೊಸ ಸಂಪರ್ಕಗಳು ಭವಿಷ್ಯಕ್ಕೆ ಉಪಯೋಗವಾಗುತ್ತವೆ. ಉದ್ಯೋಗದಲ್ಲಿ ಬದಲಾವಣೆ ಅಥವಾ ಹೊಸ ಅವಕಾಶದ ಸೂಚನೆ. ವಿದ್ಯಾರ್ಥಿಗಳು ಪ್ರೇಮದಲ್ಲಿ ಬೀಳುವ ಸಾಧ್ಯತೆ ಇದೆ.‌ ಮನೆಯವರ ಮಕ್ಕಳ‌ ಮೇಲೆ‌ ಗಮನ ಇರಿಸುವುದು ಮುಖ್ಯ. ಮಾತುಗಾರರಿಗೆ ಅವಕಾಶವು ಸಿಗಲಿದೆ. ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಅದನ್ನು ನಿಮ್ಮ ಹಿಡಿತದಲ್ಲಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಕಾರ್ಯಗಳಿಗೆ ಪರಿಚಿತರು ಸಹಾಯ ಮಾಡುವರು. ಆಸ್ತಿಯ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಪಡೆಯಿರಿ. ಇನ್ನೊಬ್ಬರ ಸಂಕಷ್ಟವನ್ನು ನಿವಾರಿಸಲು ಉತ್ಸಾಹದಿಂದ ಇರುವಿರಿ. ಕುಟುಂಬದಲ್ಲಿ ಸಂತೋಷಕರ ವಾತಾವರಣ. ಆರೋಗ್ಯದಲ್ಲಿ ನಿದ್ರಾಭಂಗ ಸಾಧ್ಯ. ಸಂಜೆ ಸಮಯದಲ್ಲಿ ಮನರಂಜನೆ ಅಥವಾ ಓದು ಲಾಭಕರ. ಸಂಗಾತಿಯ‌ ಆರೋಗ್ಯವು ಕೆಡಲಿದ್ದು ಓಡಾಟ ಮಾಡಬೇಕಾದೀತು. ಸರ್ಕಾರಿ ಕೆಲಸದಲ್ಲಿ ತೊಡಕಾಗುವುದು. ಉನ್ನತ ಅಧ್ಯಯನಕ್ಕಾಗಿ ನೀವು ಬೇರೆ ಕಡೆಗೆ ಹೋಗಬೇಕಾದೀತು.

ಕುಂಭ ರಾಶಿ :

ಆರ್ಥಿಕ ವಿಚಾರಗಳಲ್ಲಿ ಜಾಗ್ರತೆ ಅಗತ್ಯ. ಅಚಾತುರ್ಯದಿಂದ ನಷ್ಟ ಸಂಭವಿಸಬಹುದು. ಉದ್ಯೋಗದಲ್ಲಿ ಒತ್ತಡ ಇದ್ದರೂ ಫಲಿತಾಂಶ ಒಳ್ಳೆಯದು. ಕುಟುಂಬದವರ ಸಲಹೆ ಉಪಯುಕ್ತ. ಸ್ವಪ್ರತಿಷ್ಠೆಯನ್ನು ಬಿಟ್ಟು ನೀವು ಸಹಜವಾಗಿ ಇರಬೇಕಾಗುವುದು. ಮಕ್ಕಳ ವಿವಾಹವು ವಿಳಂಬವಾಗುತ್ತಿರುವುದು ನಿಮಗೆ ಆತಂಕವಾಗಬಹುದು. ನೂತನ ಗೃಹನಿರ್ಮಾಣದ ಬಗ್ಗೆ ಮನೆಯವರ ಜೊತೆ ಮಾತನಾಡುವಿರಿ. ಸ್ನೇಹವು ದೂರ ಮಾಡಿಕೊಳ್ಳುವಿರಿ. ಹೊಸ ಕೆಲಸಗಳ‌ ಕಡೆ ಗಮನ ಇರುವುದು. ದಾಂಪತ್ಯದಲ್ಲಿ ಸಹನಶೀಲತೆ ಮುಖ್ಯ. ಆರೋಗ್ಯದಲ್ಲಿ ಜೀರ್ಣಕ್ರಿಯೆ ಸಮಸ್ಯೆ ಸಾಧ್ಯ. ಇಂದು ಶಾಂತ ಸ್ವಭಾವ ಹಾಗೂ ನಿಯಮಿತ ಆಹಾರ ಲಾಭಕರ. ಸ್ನೇಹವಿಲ್ಲದೇ ಜನರನ್ನು ದೂರಮಾಡಿಕೊಳ್ಳುವಿರಿ. ನಿಮ್ಮ ಅಮೂಲ್ಯ ವಸ್ತುಗಳು ಕಾಣೆಯಾಗಬಹುದು. ಮನೆಯ ಸದ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ. ಹಿತಶತ್ರುಗಳ ಬಾಧೆಯು ಕಾಣಿಸಿಕೊಳ್ಳುವುದು.

ಇದನ್ನೂ ಓದಿ: ಹೊಸ ವರ್ಷದ ಮೊದಲ ತಿಂಗಳಲ್ಲಿ ಈ ರಾಶಿಯವರಿಗೆ ಶುಭ

ಮೀನ ರಾಶಿ :

ಇಂದು ಕೆಲಸದಲ್ಲಿ ತ್ವರಿತ ನಿರ್ಧಾರಗಳು ಲಾಭ ಕೊಡಬಹುದು. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಹಣಕಾಸಿನಲ್ಲಿ ನಿರೀಕ್ಷಿತ ಫಲ ದೊರೆಯುವ ಸಾಧ್ಯತೆ. ಇಂದು ಮಹಿಳೆಯರಿಗೆ ಬಿಡುವಿಲ್ಲದ ಕಾರ್ಯವು ಇರಲಿದೆ. ಗೆಲ್ಲಬೇಕು ಎನ್ನುವ ಉತ್ಕಟ ಇಚ್ಛೆ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಹೆಚ್ಚು ಲವಲವಿಕೆ ಇರಲಿದೆ. ಸಣ್ಣ ಕಾರ್ಯಕ್ಕೆ ಹೆಚ್ಚು ಶ್ರಮವಹಿಸಬೇಕಾದೀತು. ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ಆರ್ಥಿಕತೆಗೆ ಸಂಬಂಧಿಸಿದಂತೆ ಪೂರ್ಣ ಸಮಾಧಾನ ಇರದು.‌ ಇನ್ನೊಬ್ಬರ‌ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ. ಸೋತರೂ ಗೆದ್ದವರ ಜೊತೆ ನಿಮ್ಮ‌ ಪ್ರತಿಷ್ಠೆಯನ್ನು ತೋರಿಸುವಿರಿ. ಕುಟುಂಬದಲ್ಲಿ ಸಣ್ಣ ಭಿನ್ನಾಭಿಪ್ರಾಯ ಉಂಟಾದರೂ ಸಂಯಮದಿಂದ ಪರಿಹಾರ ಸಾಧ್ಯ. ಆರೋಗ್ಯದಲ್ಲಿ ತಲೆನೋವು ಅಥವಾ ದಣಿವು ಕಾಣಬಹುದು. ಧ್ಯಾನ, ಪ್ರಾರ್ಥನೆ ಮನಸ್ಸಿಗೆ ಶಾಂತಿ ನೀಡುತ್ತದೆ. ನೀವು ಇಂದು ಯಾರ‌ ಮಾತನ್ನೂ ನಂಬುವ ಮನಃಸ್ಥಿತಿಯಲ್ಲಿ ಇಲ್ಲ. ಆರ್ಥಿಕತೆಯ ತೊಂದರೆಯಿಂದ ಮನೆಯ ಕಾರ್ಯವು ಅರ್ಧಕ್ಕೇ ನಿಲ್ಲುವುದು.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

-ಲೋಹಿತ ಹೆಬ್ಬಾರ್ – 8762924271 (what’s app only)

Source link

‘ಗೌರಿ’ ಧಾರಾವಾಹಿ ನಟಿ ನಂದಿನಿ ನಿಧನ: ಆರ್​ಆರ್​ ನಗರದಲ್ಲಿ ದುರಂತ ಅಂತ್ಯ – Kannada News | Gauri Serial actress Nandini CM Death in Bengaluru

ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿ (Serial) ನಟಿಸಿ ಖ್ಯಾತಿ ಪಡೆದಿದ್ದ ನಂದಿನಿ ಸಿಎಂ (Nandini CM) ಅವರು ನಿಧನರಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ಅವರು ಕೊನೆಯುಸಿರು ಎಳೆದಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಆರ್​ಆರ್​ ನಗರದಲ್ಲಿ ನಂದಿನಿ ಅವರು ಸಾವಿಗೆ ಶರಣಾಗಿದ್ದಾರೆ. ಅವರ ಸಾವಿಗೆ (Nandini CM Death) ನಿಖರ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಬಣ್ಣದ ಲೋಕದಲ್ಲಿ ಮಿಂಚುವ ಕನಸು ಕಂಡಿದ್ದ ನಂದಿನಿ ಅವರು ಈ ರೀತಿ ದುರಂತ ಅಂತ್ಯ ಕಂಡಿರುವುದು ನೋವಿನ ಸಂಗತಿ.

ಕನ್ನಡದ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’ ಧಾರಾವಾಹಿಗಳಲ್ಲಿ ನಂದಿನಿ ಅವರು ನಟಿಸಿದ್ದರು. ತಮಿಳಿನ ‘ಗೌರಿ’ ಧಾರಾವಾಹಿಯಲ್ಲಿ ನಂದಿನಿ ಅವರು ನಾಯಕಿಯ ಪಾತ್ರ ಮಾಡುತ್ತಿದ್ದರು. ದುರ್ಗಾ ಮತ್ತು ಕನಕ ಎಂಬ ಪಾತ್ರಗಳ ಮೂಲಕ ಅವರು ವೀಕ್ಷಕರಿಗೆ ಪರಿಚಿತರಾಗಿದ್ದರು. ಅವರ ನಿಧನದಿಂದ ಕಿರುತೆರೆ ಲೋಕದಲ್ಲಿ ಶೋಕ ಆವರಿಸಿದೆ.

ಇದನ್ನೂ ಓದಿ: ಸ್ತನ ಕ್ಯಾನ್ಸರ್​ನಿಂದ ಕಿರುತೆರೆ ನಟಿ ಕಮಲಶ್ರೀ ನಿಧನ

ನಂದಿನಿ ಅವರು ಮೂಲತಃ ಕೊಟ್ಟೂರಿನವರು. ಆದರೆ ಬೆಂಗಳೂರಿನಲ್ಲಿ ವಾಸವಿದ್ದರು. ಪಿಜಿಯಲ್ಲಿ ವಾಸವಿದ್ದ ಅವರು ತಾಯಿಗೆ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ನಂದಿನಿ ನಿಧನದ ಸುದ್ದಿ ಕೇಳಿ ‘ಗೌರಿ’ ಧಾರಾವಾಹಿ ತಂಡಕ್ಕೆ ಆಘಾತ ಎದುರಾಗಿದೆ. ವೀಕ್ಷಕರು ಹಾಗೂ ಆಪ್ತರು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

‘ಗೌರಿ’ ಧಾರಾವಾಹಿಯಲ್ಲಿ ದ್ವಿಪಾತ್ರ ಮಾಡುವ ಅವಕಾಶವನ್ನು ನಂದಿನಿ ಅವರು ಪಡೆದಿದ್ದರು. ಅವರ ನಟನೆಗೆ ವೀಕ್ಷಕರಿಗೆ ಮೆಚ್ಚುಗೆ ಸಿಕ್ಕಿತ್ತು. ಕಿರುತೆರೆ ಲೋಕದಲ್ಲಿ ಹೊಸ ಹೊಸ ಅವಕಾಶಗಳು ಅವರಿಗೆ ಸಿಗುವ ಸಾಧ್ಯತೆ ದಟ್ಟವಾಗಿತ್ತು. ಈ ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:21 pm, Mon, 29 December 25

Source link

Exit mobile version