ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ; ಆ ಕೆಟ್ಟ ಸ್ಥಿತಿ ನಮಗೆ ಬಂದಿಲ್ಲ, ಹೈದರಬಾದ್​​​ಗೆ ಸಿಂಗಾಪುರ ಪ್ರತಿಸ್ಪರ್ಧಿ : ಸಿಎಂ ರೇವಂತ್ ರೆಡ್ಡಿ

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ; ಆ ಕೆಟ್ಟ ಸ್ಥಿತಿ ನಮಗೆ ಬಂದಿಲ್ಲ, ಹೈದರಬಾದ್​​​ಗೆ  ಸಿಂಗಾಪುರ ಪ್ರತಿಸ್ಪರ್ಧಿ : ಸಿಎಂ ರೇವಂತ್ ರೆಡ್ಡಿ

ಹೈದರಾಬಾದ್, ಮಾ.9: ಐಟಿ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಈಗ ನೆರೆರಾಜ್ಯದ ರಾಜಕೀಯ ಅಖಾಡದಲ್ಲೂ ಸದ್ದು ಮಾಡುತ್ತಿದೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬೆಂಗಳೂರಿನ ಟ್ರಾಫಿಕ್ ಮತ್ತು ಮುಂಬೈ-ಚೆನ್ನೈನ ಮೂಲಸೌಕರ್ಯಗಳ ಕುರಿತು ವ್ಯಂಗ್ಯವಾಡಿದ್ದಾರೆ. ಬೆಂಗಳೂರು ನಗರ ಇಂದು ಕೇವಲ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾಗಿದೆ. ಐಟಿ ಸಿಟಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರಿನ ಇಂದಿನ ಸ್ಥಿತಿ ಏನಾಗಿದೆ ನೋಡಿ? ಅಲ್ಲಿನ ಜನ ಟ್ರಾಫಿಕ್‌ನಿಂದ ಹೈರಾಣಾಗಿದ್ದಾರೆ. ಆದರೆ ನಮ್ಮ ಹೈದರಾಬಾದ್‌ನಲ್ಲಿ ಅಂತಹ ಪರಿಸ್ಥಿತಿ ಇಲ್ಲ,” ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. ಳೆ ಬಂದರೆ ಚೆನ್ನೈ ಮತ್ತು ಮುಂಬೈ ನಗರಗಳು ಹೇಗೆ ಸ್ಥಗಿತಗೊಳ್ಳುತ್ತವೆ ಎಂಬುದನ್ನು ಪ್ರಸ್ತಾಪಿಸಿದ ಅವರು, ಹೈದರಾಬಾದ್ ಅಂತಹ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ಪ್ರತಿಪಾದಿಸಿದರು.”ಹೈದರಾಬಾದ್ ಅನ್ನು ಮಾಲಿನ್ಯ ಮುಕ್ತ ನಗರವನ್ನಾಗಿ ಮಾಡುತ್ತೇವೆ. ನಮಗೆ ಬೆಂಗಳೂರು ಅಥವಾ ಮುಂಬೈ ನಗರಗಳು ಸ್ಪರ್ಧಿಯಲ್ಲ. ನಮ್ಮ ಸ್ಪರ್ಧೆ ಏನಿದ್ದರೂ ಸಿಂಗಾಪುರ ಮತ್ತು ಟೋಕಿಯೋದಂತಹ ಜಾಗತಿಕ ನಗರಗಳ ಜೊತೆಗೆ,” ಎಂದು ಅವರು ಘೋಷಿಸಿದ್ದಾರೆ.ಇದೀಗ ಈ ಹೇಳಿಕೆ ಕನ್ನಡಿಗರ ಮತ್ತು ಕರ್ನಾಟಕದ ರಾಜಕೀಯ ನಾಯಕರ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಸಿಗರೇಟ್‌ಗೆ ಗಾಂಜಾ ತುಂಬಿಸಿ ನಶೆ ಏರಿಸುತ್ತಿದ್ದವರನ್ನು ರೆಡ್​​ ಹ್ಯಾಂಡ್​​ ಆಗಿ ಹಿಡಿದ ಖಾಕಿ

ಬೆಂಗಳೂರು, ಮಾರ್ಚ್​ 09: ಕಬ್ಬನ್​ಪಾರ್ಕ್​ನ ಶೌಚಾಲಯದ ಸಮೀಪ ಸಿಗರೇಟ್‌ಗೆ ಗಾಂಜಾ ತುಂಬಿಸಿ ಸೇದುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಫೋಟೋಗ್ರಾಫರ್​ಗಳಾದ ವಿ.ಸಚಿನ್(21), ಪವನ್ ಕಲ್ಯಾಣ್(22) ಬಂಧಿತರಾಗಿದ್ದು, ಫೋಟೋ ತೆಗೆಯುವ ಉದ್ದೇಶದಿಂದ ಇವರು ಪಾರ್ಕ್‌ಗೆ ಬಂದಿದ್ದರು. ಆದರೆ ಗಾಂಜಾ ಸೇದುತ್ತಿದ್ದ ಇವರನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಕಬ್ಬನ್​ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢ ‌‌‌ಪಟ್ಟಿದೆ. ಈ ಹಿನ್ನೆಲೆ ಎನ್‌ಡಿಪಿಎಸ್‌ ಕಾಯ್ದೆ ಕಲಂ 27(ಬಿ) ಅನ್ವಯ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು, ಇವರು ಗಾಂಜಾ ಖರೀದಿಸಿದ್ದು ಎಲ್ಲಿ? ಪೆಡ್ಲರ್‌ಗಳು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆಗಿಳಿದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೆಟ್ರೋದಲ್ಲಿ ಗನ್ ಪ್ರಾಂಕ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಯುವಕ!

ಬೆಂಗಳೂರು, ಮಾರ್ಚ್​ 09: ನಮ್ಮ ಮೆಟ್ರೋದಲ್ಲಿ (Namma Metro) ಆಟಿಕೆ ಗನ್ ಬಳಸಿ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದ ಯುವಕನನ್ನು ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾಂಡಿಚೇರಿ ಮೂಲದ ಅರ್ಜುನ್ ಎಂಬ ಯುವಕ ಈ ಕೃತ್ಯ ನಡೆಸಿರುವುದು ತಿಳಿದುಬಂದಿದೆ.

ಸೋಶಿಯಲ್ ಮೀಡಿಯಾ ಹುಚ್ಚಿಗೆ ದಂಡ ಕಟ್ಟಿದ ಆಸಾಮಿ

ಫೆಬ್ರವರಿ 6ರಂದು ಅರ್ಜುನ್ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಿಂದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಾಮಾಜಿಕ ಜಾಲತಾಣಕ್ಕಾಗಿ ಪ್ರಾಂಕ್ ವಿಡಿಯೋ ಮಾಡುವ ಉದ್ದೇಶದಿಂದ ತನ್ನ ಜೇಬಿನಲ್ಲಿ ಆಟಿಕೆಯ ಗನ್ ಇಟ್ಟುಕೊಂಡಿದ್ದನು. ಪ್ರಯಾಣದ ವೇಳೆ ಅವನ ಜೇಬಿನಲ್ಲಿ ಗನ್ ಇರುವುದನ್ನು ಗಮನಿಸಿದ ಸಹ ಪ್ರಯಾಣಿಕರು ಆತಂಕಗೊಂಡು ತಕ್ಷಣ ಮೆಟ್ರೋ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಅರ್ಜುನ್​ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅದು ನಕಲಿ ಆಟಿಕೆಯ ಗನ್ ಆಗಿದ್ದು, ಕೇವಲ ಪ್ರಾಂಕ್ ವಿಡಿಯೋ ಮಾಡಲು ಇಟ್ಟುಕೊಂಡಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ.ನಂತರ ಪೊಲೀಸರು ಆತನಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡು ಕಠಿಣ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅರ್ಜುನ್ ಮೇಲೆ 400 ರೂಪಾಯಿ ದಂಡ ವಿಧಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ Vs ಮಾಜಿ ಶಾಸಕರ ವಾರ್​​: ದೇವರ ಅಂಗಳ ತಲುಪಿದ ರಾಜಕೀಯ ಕಚ್ಚಾಟ

ಉಡುಪಿ, ಮಾರ್ಚ್​ 09: ಕಂಬಳದ ವಿಚಾರವಾಗಿ ಉಡುಪಿಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಶುರುವಾದ ರಾಜಕೀಯ ಕಚ್ಚಾಟವೀಗ ದೈವ ಮತ್ತು ದೇವರ ಅಂಗಳ ತಲುಪಿದೆ. ತನ್ನ ಮೇಲೆ ವೈಯಕ್ತಿಕ ದಾಳಿ ನಡೆಯುತ್ತಿದೆ ಎಂದು ಆರೋಪಿಸಿ ಬೇಸರಗೊಂಡಿರುವ ಬಿಜೆಪಿ ಶಾಸಕ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ದೇವರು ಮತ್ತು ದೈವದ ಮೊರೆ ಹೋಗಿದ್ದಾರೆ. ಕಾಪು ಶ್ರೀ ಹೊಸ ಮಾರಿಗುಡಿ ಅಮ್ಮನ ದೇಗುಲ ಮತ್ತು ಪೇಟೆಬೆಟ್ಟು ಬಬ್ಬು ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ಈ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ.

ಕಾಂಗ್ರೆಸ್​​ನ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ವಿರುದ್ಧ ಬೇಸರ ಹೊರಹಾಕಿರುವ ಗುರ್ಮೆ ಸುರೇಶ್ ಶೆಟ್ಟಿ, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಾರೆ ಎಂದು ಆರೋಪಿಸಿದ್ದಾರೆ. ಮಾರಿಯಮ್ಮನ ಮುಂದೆ ಸತ್ಯ ಸಮರ್ಪಿಸಿದ್ದೇನೆ. ಎಲ್ಲವನ್ನು ತಾಯಿಯೇ ನೋಡಿಕೊಳ್ಳಲಿ ಎಂದು ಹೇಳುವ ಮೂಲಕ ವೈಯಕ್ತಿಕ ನಿಂದನೆ ವಿಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಬ್ಬು ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿಯೂ ಕೈ ಮುಗಿದು ಶಾಸಕರು ಪ್ರಾರ್ಥಿಸಿದ್ದು, ಸೊರಕೆ ಸವಾಲಿನ ಹಿನ್ನೆಲೆ ಈ ರೀತಿ ನಡೆದುಕೊಂಡಿರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ ಹಗರಣ ಆರೋಪ ಬೆನ್ನಲ್ಲೇ ದೈವದ ಮೊರೆ ಹೋದ ಸಚಿವ ತಿಮ್ಮಾಪುರ!

ತಮ್ಮ ಮೇಲಿನ ಅದಿರು ಲೂಟಿ ಆರೋಪದ ಬಗ್ಗೆಯೂ ಬೇಸರ ವ್ಯಕ್ತಪಡಿಸಿರುವ ಶಾಸಕ ಗುರ್ಮೆ ಸುರೇಶ್​​ ಶೆಟ್ಟಿ, ನಾನು ಯಾವುದೇ ಅನ್ಯಾಯ ಮಾಡಿಲ್ಲ. ಮಗನ ಆರ್ಥಿಕ ವ್ಯವಹಾರದ ಬಗ್ಗೆ ಸೊರಕೆ ಮಾಡಿರುವ ಆರೋಪದಿಂದ ಮನನೊಂದು ದೇವರಿಗೆ ಶರಣಾಗಿದ್ದೇನೆ. ನನ್ನ ಕುಟುಂಬ ಯಾವುದೇ ಅವ್ಯವಹಾರದಲ್ಲಿ ತೊಡಗಿಲ್ಲ. ಪ್ರತಿ ಬಾರಿ ತನ್ನ ಕುಟುಂಬದ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಾರೆ. ಅನಾಚಾರ, ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದ್ದಾರೆ. ಒಂದು ಸುಳ್ಳನ್ನು 10 ಸರಿ ಹೇಳಿದಾಗ ಜನರು ನಂಬುತ್ತಾರೆ. ಅದೇ ಕಾರಣಕ್ಕೆ ನಾನು ದೇವರಿಗೆ ಮೊರೆ ಹೋಗಿದ್ದೇನೆ. ಸುಳ್ಳು ಸಾಯಬೇಕು ಸತ್ಯ ಗೆಲ್ಲಬೇಕು. ನನಗೆ ಬದುಕಿಗೆ ಬೇಕಾದಷ್ಟು ಸಂಪತ್ತು ಭಗವಂತ ಕೊಟ್ಟಿದ್ದು, 40 ವರ್ಷದಿಂದ ಉದ್ಯಮ ನಡೆಸುತ್ತಿದ್ದೇನೆ. ರಾಜಕೀಯ ನನಗೆ ಗಂಜಿ ಕೇಂದ್ರ ಅಲ್ಲ, ಅನಿವಾರ್ಯವೂ ಅಲ್ಲ. ಆದರೆ ಜನರಿಗೆ ತಪ್ಪು ಸಂದೇಶ ಹೋಗಬಾರದು. ನಾನು ಮಾಡಿರುವುದು ಪ್ರಾರ್ಥನೆ ಹೊರತು ಆಣೆ ಪ್ರಮಾಣ ಅಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅನಾರೋಗ್ಯದ ಕಾರಣ ಕೊಟ್ಟು ‘ಜನ ನಾಯಗನ್’ ನೋಡೋದನ್ನು ಮುಂದಕ್ಕೆ ಹಾಕಿದ ರಿವಿಶನ್ ಸಮಿತಿ

‘ಜನ ನಾಯಗನ್’ ಸಿನಿಮಾ (Jana Nayagan Movie)  ಜನವರಿ 9ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಸಾಧ್ಯವಾಗಿಲ್ಲ. ಮೂಲ ದಿನಾಂಕ ಮುಗಿದು ಎರಡು ತಿಂಗಳು ಕಳೆದರೂ ಸಿನಿಮಾಗೆ ರಿಲೀಸ್ ಭಾಗ್ಯ ಸಿಗುತ್ತಿಲ್ಲ. ಈ ಮಧ್ಯೆ, ‘ಜನ ನಾಯಗನ್’ ಸಿನಿಮಾ ಮಾರ್ಚ್ 19ರ ರಿಲೀಸ್ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೂ ಅವಕಾಶ ಸಿಗಬಾರದು ಎಂದು ಎಲ್ಲರೂ ನಿರ್ಧರಿಸಿದಂತೆ ಇದೆ. ಏಕೆಂದರೆ, ಸಿನಿಮಾ ವಿಮರ್ಶೆ ಮಾಡೋದಕ್ಕೆ ಪುರನ್ ವಿಮರ್ಶೆ ಸಮಿತಿ ರೆಡಿ ಇದ್ದಂತೆ ಕಾಣಿಸುತ್ತಿಲ್ಲ.

‘ಜನ ನಾಯಗನ್’ ಚಿತ್ರವನ್ನು ವಿಮರ್ಶೆ ಮಾಡಲು ಕೆವಿಎನ್ ಸಂಸ್ಥೆ ಡಿಸೆಂಬರ್​​​ನಲ್ಲಿಯೇ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಸಿನಿಮಾ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ಪುನರ್ ವಿಮರ್ಶೆ ಸಮಿತಿಗೆ ಸಿನಿಮಾ ಸಲ್ಲಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾಗಿ ಹೇಳಿತ್ತು. ಇದರಿಂದ ಸಿಟ್ಟಾದ ಕೆವಿಎನ್​ ಕೋರ್ಟ್ ಮೆಟ್ಟಿಲೇರಿತ್ತು. ಸ್ಥಳೀಯ ಕೋರ್ಟ್​​ನಿಂದ ಹಿಡಿದು ಸುಪ್ರೀಂಕೋರ್ಟ್​​ವರೆಗೆ ತಂಡ ಅರ್ಜಿ ಸಲ್ಲಿಸಿತ್ತು.

ಆದರೆ, ಕೋರ್ಟ್​​​ನಲ್ಲಿ ಇದಕ್ಕೆ ಪರಿಹಾರ ಸಿಗುವುದಿಲ್ಲ ಎಂಬ ಸ್ಪಷ್ಟತೆ ಸಿಕ್ಕ ಬಳಿಕ ‘ಜನ ನಾಯಗನ್’ ತಂಡ ಕೋರ್ಟ್​​ನಿಂದ ಅರ್ಜಿ ಹಿಂಪಡೆದು, ಪುನರ್ ವಿಮರ್ಶೆ ಸಮಿತಿಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇಂದು (ಮಾರ್ಚ್ 9) ಮಧ್ಯಾಹ್ನ ‘ಜನ ನಾಯಗನ್’ ಸಿನಿಮಾ ನೋಡುವುದಾಗಿ ಪುನರ್ ವಿಮರ್ಶೆ ಸಮಿತಿ ಹೇಳಿದ್ದಾಗಿ ವರದಿ ಆಗಿತ್ತು. ಆದರೆ, ಈಗ ಈ ಪ್ರಕ್ರಿಯೆಯೂ ವಿಳಂಬ ಆಗುತ್ತಿದೆ.

ಸಮಿತಿಯಲ್ಲಿರುವ ಒಬ್ಬರಿಗೆ ತೀವ್ರ ಅನಾರೋಗ್ಯ ಉಂಟಾಗಿದೆಯಂತೆ. ಇದೇ ಕಾರಣ ನೀಡಿ ಸಿನಿಮಾ ವಿಮರ್ಶೆಯನ್ನು ಮುಂದಕ್ಕೆ ಹಾಕಲಾಗಿದೆ. ಇದು ತಂಡದ ಅಸಮಾಧಾನಕ್ಕೆ ಕಾರಣ ಆಗಿದೆ. ಇನ್ನು ಅಭಿಮಾನಿಗಳಿಗೂ ಸಾಕಷ್ಟು ನೋವುಂಟು ಮಾಡಿದೆ. ಈ ಬೆಳವಣಿಗೆಯಿಂದ ಮಾರ್ಚ್ 19ರ ದಿನಾಂಕ ಕೂಡ ಮಿಸ್ ಆಗುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಮಾರ್ಚ್ 9ಕ್ಕೆ ನಿರ್ಧಾರವಾಗಲಿದೆ ‘ಜನ ನಾಯಗನ್’ ಭವಿಷ್ಯ: ಆತಂಕದಲ್ಲಿ ಕೆವಿಎನ್

‘ಜನ ನಾಯಗನ್’ ಚಿತ್ರವನ್ನು ವಿನೋದ್ ನಿರ್ದೇಶನ ಮಾಡಿದ್ದಾರೆ. ಕೆಲವು ಆ್ಯಕ್ಷನ್ ಚಿತ್ರಗಳನ್ನು ಅವರು ನೀರ್ದೇಶನ ಮಾಡಿದ್ದರು. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಇದನ್ನು ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Video: ತಿರುಪತಿಗೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ, ತುಂಬಿಸಿಕೊಳ್ಳಲು ಮುಗಿಬಿದ್ದ ಜನ

ಕಡಪ, ಮಾರ್ಚ್​ 09: ಕಡಪ ಜಿಲ್ಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾಗಿತ್ತು.ಜನರು ಟಿನ್, ಬಕೆಟ್, ಬಾಟಲಿ ಮತ್ತು ಡ್ರಮ್‌ಗಳನ್ನು ಬಳಸಿ ತುಂಬಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.ಸರಿಸುಮಾರು 21,000 ಲೀಟರ್ ತುಪ್ಪದಲ್ಲಿ ಕೇವಲ 500 ಲೀಟರ್ ಮಾತ್ರ ಉಳಿದಿತ್ತು. ಪೊಲೀಸರು ಬರುವ ಮೊದಲೇ ಹೆಚ್ಚಿನ ಪ್ರಮಾಣದ ತುಪ್ಪವನ್ನು ತೆಗೆದುಕೊಂಡು ಹೋಗಲಾಗಿತ್ತು.ಕಡಪ ಜಿಲ್ಲೆಯ ಜಮ್ಮಲಮಡುಗು ಕ್ಷೇತ್ರದ ಕೊಂಡಾಪುರಂ ಮಂಡಲದ ಚಿತ್ರಾವತಿ ಸೇತುವೆಯ ಬಳಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Source link

ಕಸ್ಟಮರ್ ಮನೆಯಲ್ಲಿ ಚಿನ್ನ ಕದ್ದ ಕ್ಯಾಬ್​​ ಚಾಲಕ ಲಾಕ್​​: ದೋಚಿದ್ದಿದ್ದು ಬರೋಬ್ಬರಿ 25 ಲಕ್ಷ ಮೌಲ್ಯದ ಬಂಗಾರ!

ಬೆಂಗಳೂರು, ಮಾರ್ಚ್​ 09: ಕಸ್ಟಮರ್ ಮನೆಯಲ್ಲಿ 25 ಲಕ್ಷ ಮೌಲ್ಯದ ಚಿನ್ನಾಭರಣ ದೊಚ್ಚಿದ್ದ ಕ್ಯಾಬ್ ಚಾಲಕನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರೆಹಮಾನ್ ಬಂಧಿತ ಆರೋಪಿಯಾಗಿದ್ದು, ಚಿನ್ನಾಭರಣ ಸಮೇತ ಚಾಲಕನನ್ನು ಪೊಲೀಸರು ಲಾಕ್​​ ಮಾಡಿದ್ದಾರೆ. ಫೆಬ್ರವರಿ 11 ಶಾಪಿಂಗ್​​ಗೆ ಮುಂಬೈಗೆ ಹೊರಟಿದ್ದ ದಂಪತಿ, ಹೆಬ್ಬಾಳದಿಂದ ಯಶವಂತಪುರಕ್ಕೆ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ಸೈಯದ್ ಸಲ್ಮಾನ್ ಪತ್ನಿಗೆ ಮನೆಯಲ್ಲಿ ಚಿನ್ನಾಭರಣ ಇರುವ ಕಪಾಟು ಲಾಕ್ ಮಾಡಿದ್ದೀಯಾ ಎಂದು ಕೇಳಿದ್ದರು. ಮಾರ್ಗ ಮಧ್ಯೆ ಮೂರು ದಿನಗಳ ಕಾಲ ಮನೆಗೆ ವಾಪಾಸ್ ಬರಲ್ಲ ಎಂದು ಇವರು ಮಾತಾಡಿದ್ದನ್ನೂ ಸಹ ಆರೋಪಿ ಕೇಳಿಸಿಕೊಂಡಿದ್ದ. ಸೈಯದ್ ಕುಟುಂಬವನ್ನು ಯಶವಂತಪುರಕ್ಕೆ ಡ್ರಾಪ್ ಮಾಡಿ ಹೆಬ್ಬಾಳಕ್ಕೆ ಬಂದಿದ್ದ ಅಬ್ದುಲ್ ರೆಹಮಾನ್,  ಸೈಯದ್ ಸಲ್ಮಾನ್ ಮನೆಯಲ್ಲಿ ಕಳ್ಳತನ ನಡೆಸಿದ್ದ. ಈ ಸಂಬಂಧ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಕ್ಯಾಬ್ ಚಾಲಕ ಬಂದಿರೋದು ಪತ್ತೆಯಾಗಿದ್ದು, ಆತನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಈತ ಈ ಹಿಂದೆಯೂ ಇದೇ ರಿತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದ ಎಂಬುದು ಗೊತ್ತಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟಿ20 ವಿಶ್ವಕಪ್​ ಗೆದ್ದರೂ ಸೂರ್ಯಕುಮಾರ್ ಯಾದವ್ ‘ಸ್ಥಾನ’ಕ್ಕೆ ಕುತ್ತು!

T20 World Cup 2026: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಯಶಸ್ಸಿನೊಂದಿಗೆ ಟೀಮ್ ಇಂಡಿಯಾ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ನಾಯಕನಾಗಿ ಮುಂದುವರೆಯುವುದು ಅನುಮಾನ.

ಏಕೆಂದರೆ ಬಿಸಿಸಿಐ 2026ರ ಟಿ20 ವಿಶ್ವಕಪ್​ಗಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಇದೀಗ ಅವರು ವಯಸ್ಸು 35 ವರ್ಷ. ಮುಂಬರುವ ಟಿ20 ವಿಶ್ವಕಪ್​ನಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎಂದೇ ಹೇಳಬಹುದು.

ಇದಕ್ಕೂ ಮುನ್ನ 2024ರ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸುವ ಸೂಚನೆ ನೀಡಲಾಗಿತ್ತು. ಹೀಗಾಗಿ ಹಿಟ್​ಮ್ಯಾನ್ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

ಇತ್ತ ಸೂರ್ಯಕುಮಾರ್ ಯಾದವ್​ಗೂ ಇದೇ ರೀತಿಯ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದಾಗ್ಯೂ ಅವರು ಭಾರತ ಟಿ20 ತಂಡದಲ್ಲಿ ಮುಂದುವರೆಯಲು ಇಚ್ಛಿಸಿದ್ದಾರೆ. ಹೀಗಾಗಿ ಮುಂದಿನ ಸರಣಿಯಲ್ಲೂ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರು ನಾಯಕನಾಗಿ ಕಣಕ್ಕಿಳಿಯುವುದು ಡೌಟ್ ಎನ್ನಲಾಗುತ್ತಿದೆ.

ಸೂರ್ಯಕುಮಾರ್ ಯಾದವ್ ಬದಲಿಗೆ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಚಿಂತಿಸಿದೆ. ಅದರಲ್ಲೂ ಮೂರು ಸ್ವರೂಪಗಳ ತಂಡಕ್ಕೆ ಏಕೈಕ ನಾಯಕ ಇರಬೇಕೆಂಬ ಆಶಯವನ್ನು ಬಿಸಿಸಿಐ ಹೊಂದಿದೆ.

ಹೀಗಾಗಿ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿರುವ ಶುಭ್​​ಮನ್ ಗಿಲ್​ಗೆ ಕ್ಯಾಪ್ಟನ್ ಪಟ್ಟ ನೀಡಬಹುದು. ಆದರೆ ಅದಕ್ಕೂ ಮುನ್ನ ಗಿಲ್ ಭಾರತ ಟಿ20 ತಂಡಕ್ಕೆ ಕಂಬ್ಯಾಕ್ ಮಾಡಬೇಕಿದೆ.

ಹೀಗೆ ಕಂಬ್ಯಾಕ್ ಮಾಡಲು ಶುಭ್​ಮನ್ ಗಿಲ್ ಮುಂದಿರುವ ದಾರಿ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್. ಅಂದರೆ ಈ ಬಾರಿಯ ಐಪಿಎಲ್​ನಲ್ಲಿ ಗಿಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಭಾರತ ಟಿ20 ತಂಡಕ್ಕೆ ಕಂಬ್ಯಾಕ್ ಮಾಡುವುದು ಖಚಿತ.

ಅದರಲ್ಲೂ ಸ್ಥಿರ ಪ್ರದರ್ಶನದೊಂದಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರೆ ಭಾರತ ಟಿ20 ತಂಡದ ನಾಯಕನಾಗಿ ಶುಭ್​ಮನ್ ಗಿಲ್ ಆಯ್ಕೆಯಾಗಲಿದ್ದಾರೆ. ಇಲ್ಲದಿದ್ದರೆ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ನೀಡಬಹುದು.

ಅಂದರೆ ಮುಂಬರುವ ಟಿ20 ಸರಣಿಗೂ ಮುನ್ನ ವಿಶ್ವ ಚಾಂಪಿಯನ್ ಟೀಮ್ ಇಂಡಿಯಾದ ನಾಯಕ ಬದಲಾಗುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ 2028 ರ ಟಿ20 ವಿಶ್ವಕಪ್​ಗೆ ಈಗಲೇ ನಾಯಕನನ್ನು ರೂಪಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ.

ಇದನ್ನೂ ಓದಿ: ತಲೆಕೆಳಗಾದ ಲೆಕ್ಕಾಚಾರ… ನನ್ನ ಮನೆಗೇನು ತರಲ್ಲ ಎಂದು ಕಿಡಿಕಾರಿದ ಅಮೀರ್

ಅದರಂತೆ ಸೂರ್ಯಕುಮಾರ್ ಯಾದವ್ ಅವರ ಉತ್ತರಾಧಿಕಾರಿಯಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸುವವರು ಯಾರೆಂಬುದು ಖಚಿತವಾಗಲು ಐಪಿಎಲ್ ಮುಗಿಯುವವರೆಗೆ ಕಾಯಲೇಬೇಕು.

 

 

Source link

ಮದ್ಯ ನೀತಿ ಪ್ರಕರಣ: ಕೇಜ್ರಿವಾಲ್ ಮತ್ತು ಇತರ 23 ಜನರಿಗೆ ಹೈಕೋರ್ಟ್ ನೋಟಿಸ್

ನವದೆಹಲಿ, ಮಾರ್ಚ್​ 09: ದೆಹಲಿಯ ಅಬಕಾರಿ ನೀತಿಯಲ್ಲಿನ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್(Arvind Kejriwal) ಮತ್ತು ರೌಸ್ ಅವೆನ್ಯೂ ನ್ಯಾಯಾಲಯದಿಂದ ಖುಲಾಸೆಗೊಂಡ ಎಲ್ಲಾ 23 ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯವು ಈಗ ಮಾರ್ಚ್ 16 ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮಕ್ಕೆ ನಿರ್ದೇಶಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ತಡೆಹಿಡಿದಿದೆ.

ಸೋಮವಾರ, ಸಿಬಿಐ ಅರ್ಜಿಯ ನಂತರ ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರರ ಬಿಡುಗಡೆ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತು. ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸಿಬಿಐ ಪರವಾಗಿ ವಾದ ಮಂಡಿಸಿದ ಎಸ್‌ಜಿ ತುಷಾರ್ ಮೆಹ್ತಾ, ಕೇಜ್ರಿವಾಲ್ ಮತ್ತು ಸಿಸೋಡಿಯಾ ಸೇರಿದಂತೆ ಇತರ 23 ಜನರ ಬಿಡುಗಡೆ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದರು. ನ್ಯಾಯಾಲಯ ಈ ಆದೇಶವನ್ನು ನೀಡಲು ನಿರಾಕರಿಸಿತು.

ಎಲ್ಲಾ ಆರೋಪಿಗಳ ಬಿಡುಗಡೆಯ ವಿರುದ್ಧ ಸಿಬಿಐ ಸಲ್ಲಿಸಿದ ಪರಿಷ್ಕರಣಾ ಅರ್ಜಿಯನ್ನು ಹೈಕೋರ್ಟ್ ನಿರ್ಧರಿಸುವವರೆಗೆ ಇಡಿ ಪ್ರಕರಣವನ್ನು ಮುಂದೂಡುವಂತೆ ನ್ಯಾಯಮೂರ್ತಿ ವಿಚಾರಣಾ ನ್ಯಾಯಾಲಯವನ್ನು ಕೇಳಿದ್ದಾರೆ.

ಮತ್ತಷ್ಟು ಓದಿ:

ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ನೋಟಿಸ್ ಜಾರಿಗೊಳಿಸಿ, ಸಿಬಿಐ ಮನವಿಯನ್ನು ಹೈಕೋರ್ಟ್ ಆಲಿಸುವವರೆಗೆ ಜಾರಿ ನಿರ್ದೇಶನಾಲಯದ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದರು.
ಈ ಪ್ರಕರಣದಲ್ಲಿ ದೋಷಮುಕ್ತರಾದ ಎಲ್ಲರಿಗೂ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ತನಿಖಾಧಿಕಾರಿಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ವಿಚಾರಣಾ ನ್ಯಾಯಾಲಯವು ಈ ಹಿಂದೆ ಶಿಫಾರಸು ಮಾಡಿತ್ತು.

ಫೆಬ್ರವರಿ 27 ರಂದು, ದೆಹಲಿ ನ್ಯಾಯಾಲಯವು ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರರನ್ನು ಖುಲಾಸೆಗೊಳಿಸಿತು, ಅಬಕಾರಿ ನೀತಿಯಲ್ಲಿ ಯಾವುದೇ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ ಇರಲಿಲ್ಲ ಎಂಬುದನ್ನು ಗಮನಿಸಿತು.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Iran Israel War: ಯುದ್ಧದ ಪರಿಣಾಮ ಕಾರವಾರ ಬಂದರಿಗೆ ಡಾಂಬರ್ ಸರಬರಾಜು ಬಂದ್; ತಿಂಗಳಿಗೆ 80 ಲಕ್ಷ ರೂ. ನಷ್ಟ!

ಕಾರವಾರ, ಮಾರ್ಚ್​ 09: ಉತ್ತರ ಕನ್ನಡ ಜಿಲ್ಲೆಯ (Uttara Kannada) ಕಾರವಾರದಲ್ಲಿ ಮಧ್ಯಪ್ರಾಚ್ಯ ಯುದ್ಧ ಸಂಘರ್ಷದ ಪರಿಣಾಮ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಇರಾನ್‌ನಿಂದ ಕಾರವಾರದ ವಾಣಿಜ್ಯ ಬಂದರಿಗೆ ಬರುತ್ತಿದ್ದ ಕಚ್ಚಾ ಡಾಂಬರ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ತಿಂಗಳಿಗೆ 80 ಲಕ್ಷ ರೂ.ಗಳವರೆಗೂ ನಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ.

ಡೀಸೆಲ್ ಸರಬರಾಜಿಗೂ ಸಂಕಷ್ಟ

ಸಾಮಾನ್ಯವಾಗಿ ಪ್ರತಿ ತಿಂಗಳು ಇರಾನ್‌ನಿಂದ ಕಚ್ಚಾ ಡಾಂಬರ್ ಸಾಗಣೆ ಹಡಗುಗಳು ಕಾರವಾರ ಬಂದರಿಗೆ ಆಗಮಿಸುತ್ತಿದ್ದವು. ಆದರೆ ಯುದ್ಧ ಪರಿಸ್ಥಿತಿಯಿಂದ ಈಗ ಹಡಗುಗಳು ಬಾರದ ಕಾರಣ ಬಂದರು ಬಿಕೋ ಎನ್ನುತ್ತಿದೆ. ಇದರಿಂದ ಗಲ್ಪ್ ರಾಷ್ಟ್ರಗಳಿಂದ ಬರುತ್ತಿದ್ದ ಡೀಸೆಲ್ ಸರಬರಾಜಿಗೂ ಸಂಕಷ್ಟ ಉಂಟಾಗಿದೆ. ಕಾರವಾರದ ಕದಂಬ ನೌಕಾ ನೆಲೆಗೆ ಅಗತ್ಯವಿರುವ ಡೀಸೆಲ್ ಅನ್ನು ಈಗ ಮುಂಬೈಯಿಂದ ತರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಬಂದರು ವಾಣಿಜ್ಯ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದ್ದ ಲಾರಿ ಮಾಲೀಕರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ ಜಗತ್ತಿಗೇ ಕಂಟಕವಾಗಲಿದೆ ಇರಾನ್ ಯುದ್ಧ: ಮಾರಕ ಕಾಯಿಲೆ ಹರಡುವ ಭೀತಿ, ಭಾರತಕ್ಕೂ ಇದೆ ಆತಂಕ!

ಕಚ್ಚಾ ಡಾಂಬರ್ ಸಾಗಣೆಗಾಗಿ ಬಂದಿದ್ದ ಲಾರಿಗಳು ಕಾರವಾರ ವಾಣಿಜ್ಯ ಬಂದರು ಬಳಿ ಸಾಲುಗಟ್ಟಿ ನಿಂತಿದ್ದು, ಕಳೆದ ಹತ್ತು ದಿನಗಳಿಂದ ಕೆಲಸವಿಲ್ಲದೇ ನಿಂತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಡಗು ಸಂಚಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬಂದರಿಗೆ ಪ್ರತಿ ತಿಂಗಳು ಸುಮಾರು 70 ರಿಂದ 80 ಲಕ್ಷ ರೂಪಾಯಿ ನಷ್ಟ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ. ಇದರಿಂದ ಬಂದರು ಆಧಾರಿತ ವ್ಯಾಪಾರಿಗಳು ಹಾಗೂ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version