Video: ದೆಹಲಿಯ ಎರಡು ಹೊಸ ಮೆಟ್ರೋ ಕಾರಿಡಾರ್​ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

Video: ದೆಹಲಿಯ ಎರಡು ಹೊಸ ಮೆಟ್ರೋ ಕಾರಿಡಾರ್​ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್​ 08: ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ದೆಹಲಿಯ  ಎರಡು ಹೊಸ ಮೆಟ್ರೋ ಕಾರಿಡಾರ್​ಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜೊತೆಗೆ 33,500 ಕೋಟಿ ರೂ. ಮೌಲ್ಯದ ಇತರ ಪ್ರಮುಖ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ಕೊಟ್ಟಿದ್ದಾರೆ. ಪಿಂಕ್ ಲೈನ್‌ನಲ್ಲಿ 12.3 ಕಿಮೀ ಮಜ್ಲಿಸ್ ಪಾರ್ಕ್-ಮೌಜ್‌ಪುರ್-ಬಾಬರ್‌ಪುರ್ ಕಾರಿಡಾರ್ ಮತ್ತು ಮೆಜೆಂಟಾ ಲೈನ್‌ನಲ್ಲಿ 9.9 ಕಿಮೀ ದೀಪಾಲಿ ಚೌಕ್-ಮಜ್ಲಿಸ್ ಪಾರ್ಕ್ ವಿಸ್ತರಣೆಯ ಕಾರ್ಯಾಚರಣೆಯನ್ನು ಪ್ರಾರಂಭಿಸುವುದು.

ಬುರಾರಿ, ಜಗತ್‌ಪುರ್-ವಜೀರಾಬಾದ್, ಖಜುರಿ ಖಾಸ್, ಭಜನ್‌ಪುರ ಮತ್ತು ಯಮುನಾ ವಿಹಾರ್‌ನಂತಹ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಪಿಂಕ್ ಲೈನ್ ವಿಸ್ತರಣೆಯು ಸುಮಾರು 71.56 ಕಿಮೀ ದೂರದಲ್ಲಿ ಪೂರ್ಣಗೊಳ್ಳಲಿದ್ದು, ದೆಹಲಿಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ರಿಂಗ್ ಮೆಟ್ರೋ ಹೊಂದಿರುವ ಭಾರತದ ಮೊದಲ ನಗರವಾಗಿದೆ.

ಇದು ಈಶಾನ್ಯ ಮತ್ತು ವಾಯುವ್ಯ ದೆಹಲಿಯ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ, ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ. ಏತನ್ಮಧ್ಯೆ, ಮೆಜೆಂಟಾ ಲೈನ್ ವಿಸ್ತರಣೆಯು ಜಾಲವನ್ನು ಸುಮಾರು 49 ಕಿ.ಮೀ.ಗೆ ವಿಸ್ತರಿಸುತ್ತದೆ, ಮಧುಬನ್ ಚೌಕ್, ಉತ್ತರ ಪಿತಂಪುರಾ-ಪ್ರಶಾಂತ್ ವಿಹಾರ್, ಹೈದರ್ಪುರ್ ಬದ್ಲಿ ಮೋರ್ ಮತ್ತು ಭಾಲಸ್ವಾ ಮುಂತಾದ ವಸತಿ ಕೇಂದ್ರಗಳನ್ನು ಸಂಪರ್ಕಿಸುತ್ತದೆ.

ಈ ಸೇರ್ಪಡೆಗಳು ವಾಣಿಜ್ಯ ಮತ್ತು ವಸತಿ ವಲಯಗಳನ್ನು ಹೇಗೆ ಸಂಯೋಜಿಸುತ್ತವೆ, ಸುಗಮ, ಪರಿಸರ ಸ್ನೇಹಿ ಪ್ರಯಾಣವನ್ನು ಉತ್ತೇಜಿಸುತ್ತವೆ ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುತ್ತವೆ ಎಂಬುದನ್ನು ಮುಖ್ಯಮಂತ್ರಿ ಗುಪ್ತಾ ಒತ್ತಿ ಹೇಳಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪತ್ನಿ 9 ತಿಂಗಳ ತುಂಬು ಗರ್ಭಿಣಿ: ವಿದ್ಯುತ್​​ ಶಾಕ್​​ ತಗುಲಿ ಪತಿ ಸಾವು; ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ತುಮಕೂರು, ಮಾರ್ಚ್​​ 08: ವಿದ್ಯುತ್ ಪರಿವರ್ತಕ ಅಳವಡಿಸುವಾಗ ಶಾಕ್​ ತಗುಲಿ ಲೈನ್​​ಮ್ಯಾನ್​​ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ನಡೆದಿದೆ. ಕೆ.ಪಿ. ಮನು (26) ಮೃತ ದುರ್ದೈವಿಯಾಗಿದ್ದು, ಈತನ ಪತ್ನಿ 9 ತಿಂಗಳ ತುಂಬು ಗರ್ಭಿಣಿ ಎನ್ನಲಾಗಿದೆ. ಟಿಸಿ ಬದಲಾಯಿಸುವ ವೇಳೆ ಬೆಸ್ಕಾಂ ಅಧಿಕಾರಿಗಳು ಲೈನ್ ಕ್ಲಿಯರೆನ್ಸ್ ನೀಡದೆ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದ್ದ ಆರೋಪ ಕೇಳಿಬಂದಿದ್ದು, ಲೈನ್​​ಮ್ಯಾನ್​​ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಮತ್ತು ​ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ. ಘಟನೆ ಬಗ್ಗೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ ಸಾವು

ಗದಗ ತಾಲೂಕಿನ ಲಕ್ಕುಂಡಿಯ ಕಣಗಿನಾಳ ರಸ್ತೆ ಸಮೀಪ ಅಕ್ರಮವಾಗಿ ನಡೆಸಲಾಗಿರುವ ಮಣ್ಣು ಗಣಿಗಾರಿಕೆಯ ಹೊಂಡದ ನೀರಲ್ಲಿ ಮುಳುಗಿ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ನಿನ್ನೆ ಬಣ್ಣ ಆಡಿ ಆರೇಳು ಸ್ನೇಹಿತರು ಸ್ನಾನಕ್ಕೆ ತೆರಳಿದ್ದು, ಈ ವೇಳೆ ದುರ್ಘಟನೆ ಸಂಭವಿಸಿದೆ. ಗದಗ ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, 30-40 ಅಡಿ ಆಳ ಹೊಂಡ ತೆಗೆಯಲಾಗ್ತಿದೆ. ಈ ಹಿಂದೆ ಶ್ಯಾಗೋಟಿ, ಚಿಕ್ಕಹಂದಿಗೋಳ, ಕಳಸಾಪೂರ, ಚಿಂಚಲಿ ಗ್ರಾಮಗಳಲ್ಲಿ ಇದೇ ರೀತಿಯ ಹೊಂಡದಲ್ಲಿ ಬಿದ್ದು ಮಕ್ಕಳು, ಯುವಕರು ಮೃತಪಟ್ಟಿದ್ದರು. ಕಳೆದ ವಾರವಷ್ಟೇ ಚಿಂಚಲಿ ಗ್ರಾಮದಲಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ಹೀಗಿದ್ದರೂ ಸಂಬಂಧಪಟ್ಟ ಇಲಾಖೆ ಇವುಗಳಿಗೆ ಬ್ರೇಕ್​​ ಹಾಕುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು; ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಕೆರೆಗೆ ಬಿದ್ದ ಕಾರು

ಕೋಲಾರ ತಾಲೂಕಿನ ಮುದುವಾಡಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಬಿದ್ದಿದ್ದು, ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷ ವೆಂಕಟೇಶ್ ಮೃತಪಟ್ಟಿದ್ದಾರೆ. ಇವರು ಕೋಲಾರ ತಾಲೂಕಿನ ತುರಾಂಡಹಳ್ಳಿ ನಿವಾಸಿಯಾಗಿದ್ದು, ನಾಳೆಯಿಂದ ಕೋಲಾರದಲ್ಲಿ ರೈತ ಸಂಘದ ರಾಜ್ಯ ಸಮ್ಮೇಳನ ಹಿನ್ನೆಲೆ, ಕಾರ್ಯಕ್ರಮದ ಸಿದ್ಧತೆಗಳನ್ನು ಮುಗಿಸಿ ಹೋಗುವ ವೇಳೆ ಅವಘಡ ನಡೆದಿದೆ ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಿನಲ್ಲಿ ಜೂ. ಎನ್​ಟಿಆರ್ ನೋಡಲು ಮುಗಿಬಿದ್ದ ಜನ; ಪೊಲೀಸ್ ಲಾಠಿ ಚಾರ್ಜ್

ಟಾಲಿವುಡ್ ನಟ ಜೂನಿಯರ್ ಎನ್​ಟಿಆರ್ (Jr NTR) ಅವರಿಗೆ ಬೆಂಗಳೂರಿನಲ್ಲೂ ಅಭಿಮಾನಿಗಳು ಇದ್ದಾರೆ. ಇಂದು (ಮಾರ್ಚ್ 8) ಮಹಾದೇವಪುರ ಕಿಮ್ಸ್ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಏನ್​ಟಿಆರ್ ಅವರನ್ನು ನೋಡಲು ಫ್ಯಾನ್ಸ್ ಮುಗಿಬಿದ್ದರು. ಆಸ್ಪತ್ರೆಯ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಫ್ಯಾನ್ಸ್ ಮುಗಿಬಿದ್ದರು. ಈ ವೇಳೆ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಜೂನಿಯರ್ ಎನ್​ಟಿಆರ್ ಅವರನ್ನು ಹತ್ತಿರದಿಂದ ನೋಡಬೇಕು ಎಂಬ ಆಸೆಯಿಂದ ಹಲವರು ಆಸ್ಪತ್ರೆಯ ಒಳಗೆ ನುಗ್ಗಿದರು. ಇದರಿಂದ ಆಸ್ಪತ್ರೆಯ ಎಸ್ಕಲೇಟರ್​​ಗೆ ಹಾನಿ ಆಗಿದೆ ಎಂಬ ಮಾಹಿತಿ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಸಿಂಹ ರಾಶಿಗೆ ಈ ವರ್ಷ ಹೇಗಿರಲಿದೆ?

ಡಾ. ಬಸವರಾಜ ಗುರೂಜಿಯವರ ಪ್ರಕಾರ, 2026ರ ಪರಾಭವ ನಾಮ ಸಂವತ್ಸರದ ಯುಗಾದಿಯಲ್ಲಿ ಸಿಂಹ ರಾಶಿಯವರಿಗೆ ಗುರು, ಶನಿ, ರಾಹು, ಕೇತು ಗ್ರಹಗಳ ಸಂಚಾರವು ವಿವಿಧ ಫಲಿತಾಂಶಗಳನ್ನು ನೀಡಲಿದೆ. ವರ್ಷವಿಡೀ ಅಷ್ಟಮ ಶನಿಯ ಪ್ರಭಾವವಿರುತ್ತದೆ. ಆದಾಯ ಆರು ಭಾಗವಿದ್ದರೆ, ಖರ್ಚು ನಾಲ್ಕು ಭಾಗವಿರುತ್ತದೆ. ಆರೋಗ್ಯದ ವಿಚಾರದಲ್ಲಿ 50-50 ಪರಿಸ್ಥಿತಿ ಇರುತ್ತದೆ. ಸುಖ ಮೂರು ಭಾಗ ಹಾಗೂ ದುಃಖ ಏಳು ಭಾಗ ಇರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಯೋಗವಿದೆ. ಮಹಿಳೆಯರಿಗೆ ಅಪೇಕ್ಷಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ ಮತ್ತು ಅದೃಷ್ಟ ಒಲಿದು ಬರುತ್ತದೆ.

ಮಕ್ಕಳ ಭವಿಷ್ಯವು ಶುಭವಾಗಲಿದೆ. ಗಂಡ-ಹೆಂಡತಿಯರ ನಡುವೆ ಸಣ್ಣಪುಟ್ಟ ಕಲಹಗಳು ಉಂಟಾಗುವ ಸಾಧ್ಯತೆಗಳಿರುತ್ತವೆ, ತಾಳ್ಮೆ ಅಗತ್ಯ. ಹನುಮಾನ್ ಚಾಲೀಸಾ ಪಠಣ ಮತ್ತು ಒಂಬತ್ತು ಶನಿವಾರ ಶನಿ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚುವುದು ಉತ್ತಮ. ಈ ವರ್ಷ ಸಿಂಹ ರಾಶಿಯವರಿಗೆ ಶೇ. 65 ಶುಭ ಫಲಗಳು ದೊರೆಯುತ್ತವೆ. ಭಾನುವಾರ ಮತ್ತು ಶುಕ್ರವಾರ ಕೈಗೊಳ್ಳುವ ಕೆಲಸಗಳು ಶುಭಕರ. ಕೇಸರಿ ಮತ್ತು ಗುಲಾಬಿ ಬಣ್ಣಗಳು ಅದೃಷ್ಟ ತರುತ್ತವೆ. 1 ಮತ್ತು 7 ಅದೃಷ್ಟ ಸಂಖ್ಯೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು; ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಬೆಂಗಳೂರು, ಮಾರ್ಚ್​ 08: ಬೆಂಗಳೂರು, ನೆಲಮಂಗಲ ಮತ್ತು ತುಮಕೂರಿನಲ್ಲಿ ಭಾನುವಾರ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು (Road Accidents) ಸಂಭವಿಸಿದ್ದು, ಒಬ್ಬರು ಮೃತಪಟ್ಟರೆ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂರೂ ಪ್ರಕರಣಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣಗಳು ಸಂಬಂಧಿತ ಠಾಣೆಗಳಲ್ಲಿ ದಾಖಲಾಗಿವೆ.

ಕಾರು-ಬೈಕ್ ಮುಖಾಮುಖಿ

ಬೆಂಗಳೂರಿನ ಜಯಮಹಲ್ ಮೊದಲನೇ ಕ್ರಾಸ್‌ನಲ್ಲಿ ಇನ್ನೋವಾ ಕಾರು ಚಾಲಕನಿಂದ ಹಿಟ್ ಅಂಡ್ ರನ್ ಘಟನೆ ನಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಕಾರು ಬೈಕ್ ಅನ್ನು ಕೆಲ ದೂರ ಎಳೆದೊಯ್ದಿದೆ. ಪರಿಣಾಮ ಬೈಕ್‌ನಲ್ಲಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್‌ನಿಂದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟುಹೋಗಿದೆ. ಘಟನೆ ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸ್ಥಳೀಯ ನಿವಾಸಿ ಗೌರಿ ಮಾಹಿತಿ ನೀಡಿದಂತೆ, ಇನೋವಾ ಕ್ರಿಸ್ಟಾ ಕಾರು ಬೈಕ್‌ಗೆ ಟಚ್ ಆಗಿ ಚಾಲಕ ವಾಹನವನ್ನು ನಿಲ್ಲಿಸದೇ ಮುಂದಕ್ಕೆ ಸಾಗಿದ್ದಾನೆ. ಕಾರಿನ ಸೈಡ್‌ಗೆ ಬೈಕ್ ಸಿಕ್ಕಿಕೊಂಡು ಎಳೆದೊಯ್ಯುವ ವೇಳೆ ಪೆಟ್ರೋಲ್ ಲೀಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಗಾಯಾಳು ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ನ್ಯಾಯಾಧೀಶರ ಕಾರಿಗೆ ಆ್ಯಕ್ಸಿಡೆಂಟ್

ಇನ್ನು ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ ಹೈಕೋರ್ಟ್ ನ್ಯಾಯಾಧೀಶ ಬಸವರಾಜು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅಪರಿಚಿತ ವ್ಯಕ್ತಿ ಅಡ್ಡ ಬಂದ ಹಿನ್ನೆಲೆಯಲ್ಲಿ ತಪ್ಪಿಸಲು ಹೋಗಿ ಪೊಲೀಸ್ ಎಸ್ಕಾರ್ಟ್ ವಾಹನ ಸಿಮೆಂಟ್ ಸ್ಲ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ನ್ಯಾಯಾಧೀಶರ ಕಾರು ಎಸ್ಕಾರ್ಟ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪೊಲೀಸ್ ವಾಹನದ ಚಾಲಕನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಯಾಧೀಶರು ಸೇರಿದಂತೆ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ ಖಾಸಗಿ ದೃಶ್ಯ ಇಟ್ಟುಕೊಂಡು 78 ವರ್ಷದ ವ್ಯಕ್ತಿಗೆ ಮಹಿಳೆ ಬ್ಲ್ಯಾಕ್​​ಮೇಲ್​​: ದೂರು ದಾಖಲು

ಅಪಘಾತಕ್ಕೆ ಯುವಕ ಬಲಿ

ಇದೇ ವೇಳೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಂಬಯ್ಯನಪಾಳ್ಯ ಗೇಟ್ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾರಾಯಣ (35) ಮೃತಪಟ್ಟಿದ್ದಾರೆ. ಕೊರಟಗೆರೆ ತಾಲೂಕಿನ ಮಲ್ಲೇಕಾವು ಗ್ರಾಮದ ನಿವಾಸಿಯಾಗಿದ್ದ ಅವರು ಮಧುಗಿರಿಯಿಂದ ತುಮಕೂರು ಕಡೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನೀರಿನ ಟ್ಯಾಂಕಿನಲ್ಲಿ ಮೂವರು ಬಾಲಕಿಯರು ಶವವಾಗಿ ಪತ್ತೆ, ತಂದೆಯೇ ತಳ್ಳಿ ಕೊಂದಿರುವ ಶಂಕೆ

ಕಾಮರೆಡ್ಡಿ, ಮಾರ್ಚ್​ 08: ಮೂವರು ಬಾಲಕಿಯರು ನೀರಿನ ಟ್ಯಾಂಕಿನಲ್ಲಿ ಶವ(Dead Body)ವಾಗಿ ಪತ್ತೆಯಾಗಿರುವ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿದೆ. ತಂದೆಯೇ ಅವರನ್ನು ನೀರಿಗೆ ತಳ್ಳಿರಬಹುದು ಎಂದು ಅನುಮಾನಿಸಲಾಗಿದೆ. ಬಾಲಕಿಯರು ಬೆಳಗ್ಗೆ ಆತನೊಂದಿಗೆ ಹೊರಗೆ ಹೋಗಿದ್ದರು ಮತ್ತು ಮನೆಗೆ ಹಿಂತಿರುಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು 8, 7 ಮತ್ತು 5 ವರ್ಷ ವಯಸ್ಸಿನವರಾಗಿದ್ದು, ಕಾಮರೆಡ್ಡಿ ನಿವಾಸಿಗಳಾಗಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಮಕ್ಕಳು ತಮ್ಮ ತಂದೆಯೊಂದಿಗೆ ಹತ್ತಿರದ ದಿನಸಿ ಅಂಗಡಿಯಿಂದ ತಿಂಡಿ ಖರೀದಿಸಲು ಹೋಗಿದ್ದರು. ಅವರು ಹಲವಾರು ಗಂಟೆಗಳ ಕಾಲ ಹಿಂತಿರುಗದಿದ್ದಾಗ, ಕುಟುಂಬ ಸದಸ್ಯರು ಅವರನ್ನು ಹುಡುಕಲು ಪ್ರಾರಂಭಿಸಿದರು.

ಮಕ್ಕಳು ಪತ್ತೆಯಾಗದ ನಂತರ, ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದರು, ಅವರನ್ನು ಪತ್ತೆಹಚ್ಚಲು ಮೂರು ವಿಶೇಷ ತಂಡಗಳನ್ನು ರಚಿಸಿದರು.

ಮತ್ತಷ್ಟು ಓದಿ: ಮೂತ್ರ ವಿಸರ್ಜನೆಗೆಂದು ಹೋದ ವ್ಯಕ್ತಿಗೆ ಕಂಡದ್ದು ಮಹಿಳೆಯ ಶವ: ಡಿಸಿಪಿ ಹೇಳಿದ್ದೇನು?

ತನಿಖೆಯ ಸಮಯದಲ್ಲಿ, ತಂದೆಯ ಮೇಲೆ ಅನುಮಾನ ಬಿತ್ತು. ಮಕ್ಕಳನ್ನು ನೀರಿನ ಟ್ಯಾಂಕ್‌ಗೆ ತಳ್ಳಿದವನು ಅವನೇ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾವಿನ ಸುತ್ತಲಿನ ನಿಖರವಾದ ಸಂದರ್ಭಗಳನ್ನು ನಿರ್ಧರಿಸಲು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೋಧ ತಂಡಗಳು ಜಲಾಶಯವನ್ನು ಶೋಧಿಸಲು ಪ್ರಾರಂಭಿಸಿದವು, ಮತ್ತು ಕಾರ್ಯಾಚರಣೆಯ ಸಮಯದಲ್ಲಿ, ಇಬ್ಬರು ಹುಡುಗಿಯರ ಶವಗಳನ್ನು ನೀರಿನಿಂದ ಹೊರತೆಗೆಯಲಾಯಿತು. 8 ವರ್ಷದ ಬಾಲಕಿಗಾಗಿ ಹುಡುಕಾಟ ಮುಂದುವರೆಯಿತು, ನಂತರ ಆಕೆಯ ಶವವೂ ಪತ್ತೆಯಾಗಿದೆ. ಕಾಮರೆಡ್ಡಿ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಚೈತನ್ಯ ರೆಡ್ಡಿ ಅವರ ಮೇಲ್ವಿಚಾರಣೆಯಲ್ಲಿ ಶೋಧ ಮತ್ತು ಮರುಪಡೆಯುವಿಕೆ ಕಾರ್ಯಾಚರಣೆಯನ್ನು ನಡೆಸಲಾಯಿತು.

ಈ ಘಟನೆಯು ಕಾಮರೆಡ್ಡಿಯಲ್ಲಿ ಆಘಾತದ ಅಲೆಗಳನ್ನು ಉಂಟುಮಾಡಿದೆ, ನಿವಾಸಿಗಳು ನೀರಿನ ಟ್ಯಾಂಕ್ ಬಳಿ ಜಮಾಯಿಸಿ ಮೂವರು ಸಹೋದರಿಯರ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಅಸಭ್ಯ ಸಾಹಿತ್ಯಕ್ಕೆ ವಿರೋಧ: ಕ್ಷಮೆ ಕೇಳಿ ರಾತ್ರೋರಾತ್ರಿ ಸಾಂಗ್ ಡಿಲೀಟ್ ಮಾಡಿದ ಬಾದ್​ಶಾ

ಬಾಲಿವುಡ್‌ನ ಖ್ಯಾತ ರ‍್ಯಾಪರ್ ಮತ್ತು ಗಾಯಕ ಆದಿತ್ಯ ಪ್ರತೀಕ್ ಸಿಂಗ್ ಸಿಸೋಡಿಯಾ ಅಲಿಯಾಸ್ ಬಾದ್‌ಶಾ (Badshah) ಅವರ ಹೊಸ ಹಾಡು ‘ಟಟೀರಿ’ (Tateeree) ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಈ ಹಾಡಿನ ದೃಶ್ಯಾವಳಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಹರಿಯಾಣ ಪೊಲೀಸರು ಗಾಯಕನ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನೂ ಪೊಲೀಸರು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾದ್​ಶಾ ಅವರು ಕ್ಷಮೆ ಕೇಳಿದ್ದಾರೆ.

‘ಟಟೀರಿ’ ಹಾಡಿನಲ್ಲಿ ಶಾಲಾ ಸಮವಸ್ತ್ರ ಧರಿಸಿದ ಹರಿಯಾಣದ ಹೆಣ್ಣುಮಕ್ಕಳು ಆಕ್ಷೇಪಾರ್ಹವಾಗಿ ನರ್ತಿಸಿದ್ದಾರೆ ಮತ್ತು ಅಸಭ್ಯ ಸನ್ನೆಗಳನ್ನು ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದು ಹರಿಯಾಣದ ಸಂಸ್ಕೃತಿ ಮತ್ತು ವಿದ್ಯಾರ್ಥಿನಿಯರ ಘನತೆಗೆ ಧಕ್ಕೆ ತಂದಿದೆ ಎಂದು ಅನೇಕರು ದೂರಿದ್ದಾರೆ. ಈ ಹಾಡಿನ ಸಾಹಿತ್ಯ ಅಸಭ್ಯವಾಗಿದೆ ಎಂದು ಅನೇಕರು ದೂರು ನೀಡಿದ್ದರು.

ವಿವಾದ ಅತಿರೇಕಕ್ಕೆ ಹೋಗುತ್ತಿದ್ದಂತೆಯೇ ಎಚ್ಚೆತ್ತ ಬಾದ್‌ಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ. ‘ನಾನು ಹರಿಯಾಣದವನು, ಹರಿಯಾಣವೇ ನನ್ನ ಗುರುತು. ಅಲ್ಲಿನ ಮಹಿಳೆಯರು ಅಥವಾ ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಉದ್ದೇಶ ನನಗಿಲ್ಲ. ಹಿಪ್-ಹಾಪ್ ಶೈಲಿಯಲ್ಲಿ ಪೈಪೋಟಿಗಾಗಿ ಸಾಹಿತ್ಯ ಬರೆಯಲಾಗುತ್ತದೆಯೇ ಹೊರತು ಯಾರಿಗೂ ನೋವುಂಟು ಮಾಡುವ ಉದ್ದೇಶ ಇರುವುದಿಲ್ಲ. ಹರಿಯಾಣದ ಮಗನೆಂದು ಭಾವಿಸಿ ನನ್ನನ್ನು ಕ್ಷಮಿಸಿ’ ಎಂದು ಅವರು ಮನವಿ ಮಾಡಿದ್ದಾರೆ.

ತೀವ್ರ ವಿರೋಧ ಮತ್ತು ಕಾನೂನು ಕ್ರಮದ ಭೀತಿಯ ಹಿನ್ನೆಲೆಯಲ್ಲಿ ಬಾದ್‌ಶಾ ಅವರು ಈ ಹಾಡನ್ನು ಎಲ್ಲಾ ಕಡೆಯಿಂದ ತೆಗೆದುಹಾಕುವುದಾಗಿ ಘೋಷಿಸಿದ್ದಾರೆ. ಯೂಟ್ಯೂಬ್, ಸ್ಪಾಟಿಫೈ ಸೇರಿದಂತೆ ಎಲ್ಲಾ ಪ್ರಮುಖ ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಿಂದ ‘ಟಟೀರಿ’ ಹಾಡನ್ನು ಡಿಲೀಟ್ ಮಾಡಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ನೀಡಿ, ವಿವಾದಕ್ಕೆ ಪೂರ್ಣವಿರಾಮ ಇಡಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ, ರ್ಯಾಪರ್ ಬಾದ್​ಶಾ ವಿರುದ್ಧ ಪ್ರಕರಣ

ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ‘ಟಟೀರಿ’ ಹಾಡಿನಲ್ಲಿರುವ ಕೆಲವು ಪದಗಳು ಅಸಭ್ಯತೆಯಿಂದ ಕೂಡಿವೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಕೆಡಿಸುವಂತಿವೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ಈ ಹಾಡು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಲ್ಲಿ ದೇಶಗಳ ಮೇಲೆ ಇರಾನ್​ನಿಂದ ಮುಂದುವರಿದ ದಾಳಿ; ಕುವೇತ್ ಏರ್​ಪೋರ್ಟ್ ಮೇಲೂ ದಾಳಿ

ನವದೆಹಲಿ, ಮಾರ್ಚ್ 8: ಅಮೆರಿಕದ ನೆಲೆಗಳನ್ನು ಹೊಂದಿರುವ ವಿವಿಧ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ವೈಮಾನಿಕ ದಾಳಿಗಳನ್ನು (Iran Attacks) ಮುಂದುವರಿಸಿದೆ. ಕುವೇತ್, ಬಹರೇನ್, ಕತಾರ್, ಸೌದಿ ಅರೇಬಿಯಾ, ಯುಎಇ, ಲೆಬನಾನ್ ದೇಶಗಳ ಮೇಲೆ ಇರಾನ್​ನಿಂದ ಡ್ರೋನ್, ಮಿಸೈಲ್​ಗಳಿಂದ ದಾಳಿಗಳಾಗಿವೆ. ನೆರೆಯ ದೇಶಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್​ಕಿಯನ್ ಭರವವಸೆ ನೀಡಿದ ಒಂದೇ ದಿನದಲ್ಲಿ ಈ ಸಾಲು ಸಾಲು ದಾಳಿಗಳಾಗಿರುವುದು ಗಮನಾರ್ಹ.

ಕುವೇತ್ ಏರ್​ಪೋರ್ಟ್​ನಲ್ಲಿರುವ ಇಂಧನ ಟ್ಯಾಂಕ್​ಗಳನ್ನು ಗುರಿಯಾಗಿಸಿ ಇರಾನ್​ನಿಂದ ಡ್ರೋನ್ ದಾಳಿಯಾಗಿದೆ. ಇದರಿಂದ ಫುಯೆಲ್ ಟ್ಯಾಂಕ್ ಹೊತ್ತಿ ಉರಿಯುತ್ತಿದೆ. ಕುವೇತ್​ನ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಯತ್ನಿಸುತ್ತಿದೆ. ಇದೇ ವೇಳೆ, ಕುವೇತ್​ನಲ್ಲಿ ಮುನ್ನೆಚ್ಚರಿಕೆಯಾಗಿ ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಅಲ್ಲಿನ ತೈಲ ಕಂಪನಿ ಹೇಳಿದೆ.

ಇದನ್ನೂ ಓದಿ: “ಮಧ್ಯಪ್ರಾಚ್ಯದ ಸೋಲೊಪ್ಪಿದ ರಾಷ್ಟ್ರ”: ಇಂದೇ ಆಗುತ್ತ ಇರಾನ್​​​ನ ಸರ್ವನಾಶ? ಮಹತ್ವದ ಹೇಳಿಕೆ ನೀಡಿದ ಟ್ರಂಪ್

ಕತಾರ್ ಮೇಲೆ 10ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳಿಂದ ದಾಳಿಯಾಗಿದೆ. ಆದರೆ, ಈ ಮಿಸೈಲ್​ನಗಳನ್ನು ಕತಾರ್​ನ ಡಿಫೆನ್ಸ್ ಸಿಸ್ಟಂಗಳು ತಡೆಯಲು ಯಶಸ್ವಿಯಾಗಿವೆ. ಸೌದಿ ಅರೇಬಿಯಾ ಹಾಗೂ ಇತರ ಗಲ್ಫ್ ದೇಶಗಳೂ ಕೂಡ ಇರಾನ್​ನಿಂದ ಕ್ಷಿಪಣಿ ಮತ್ತು ಡ್ರೋನ್​ಗಳ ದಾಳಿ ಎದುರಿಸಿವೆ.

ಬಹಳಷ್ಟು ವಿದೇಶಿಗರು ಇರುವ ದುಬೈನಲ್ಲಿ ಹಲವೆಡೆ ಸ್ಫೋಟಗಳಾಗಿರುವುದು ವರದಿಯಾಗಿದೆ. ಫೆಬ್ರುವರಿ 28ರಂದು ಯುದ್ಧ ಶುರುವಾದಾಗಿನಿಂದ ದುಬೈ ಹಾಗೂ ಯುಎಇಯ ಇತರ ನಗರಗಳಲ್ಲಿ 221 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 1,300ಕ್ಕೂ ಅಧಿಕ ಡ್ರೋನ್​ಗಳು ಪತ್ತೆಯಾಗಿವೆ.

ಇದನ್ನೂ ಓದಿ: ನಮ್ಮನ್ನು ಕ್ಷಮಿಸಿ: ಮುಂದೆ ಈ ತಪ್ಪು ನಡೆಯುವುದಿಲ್ಲ, ಆದರೆ ಈ ದೇಶಗಳನ್ನು ಬಿಡುವುದಿಲ್ಲ ಎಂದ ಇರಾನ್

ಇರಾನ್​ನ ಇಂಧನ ಪೂರೈಕೆ ಸ್ಥಗಿತಗೊಳಿಸಲು ಇಸ್ರೇಲ್ ಯತ್ನ

ಇಸ್ರೇಲ್ ಮತ್ತು ಅಮೆರಿಕ ದೇಶಗಳು ಜಂಟಿಯಾಗಿ ಇರಾನ್​ನ ಹಲವು ತೈಲ ಸಂಗ್ರಹಗಾರಗಳನ್ನು ಗುರಿ ಮಾಡಿ ಈ ವಾರ ದಾಳಿ ಮಾಡಿವೆ. ಇರಾನ್​ನ ದೇಶೀಯ ಇಂಧನ ಪೂರೈಕೆ ಸರಪಳಿಗೆ ಭಂಗ ತರುವುದು ಇದರ ಉದ್ದೇಶ. ಮಿಲಿಟರಿ ಸರಕು ಸಾಗಣೆ, ನಾಗರಿಕ ಸಾರಿಗೆ, ವಿದ್ಯುತ್ ಉತ್ಪಾದನೆಗೆ ಅಡ್ಡಿ ಪಡಿಸುವುದು ಗುರಿ. ಇರಾನ್​ನ ಆಡಳಿತವನ್ನು ಕೆಳಗಿಸುವುದು ಅಂತಿಮ ಗುರಿ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಖಾಸಗಿ ದೃಶ್ಯ ಇಟ್ಟುಕೊಂಡು 78 ವರ್ಷದ ವ್ಯಕ್ತಿಗೆ ಮಹಿಳೆ ಬ್ಲ್ಯಾಕ್​​ಮೇಲ್​​: ದೂರು ದಾಖಲು

ಬೆಂಗಳೂರು, ಮಾರ್ಚ್​​ 08: 78 ವರ್ಷದ ವ್ಯಕ್ತಿಯೋರ್ವರನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಅವರ ಜೊತೆ ಸ್ನೇಹ ಬೆಳೆಸಿ, ಈಗ ಬ್ಲ್ಯಾಕ್​​ಮೇಲ್​​ ಮಾಡುತ್ತಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. ಸಂತ್ರಸ್ತ ವ್ಯಕ್ತಿಯ ಸೊಸೆ ಈ ಬಗ್ಗೆ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಮಾರ್ಚ್​​ 3ರಂದೇ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿತ ಮಹಿಳೆ ಮೊದಲು ಫೇಸ್‌ಬುಕ್‌ನಲ್ಲಿ 78 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದಾಳೆ. ಬಳಿಕ ತನ್ನ ವಾಟ್ಸ್ಆಪ್ ಸಂಖ್ಯೆಯನ್ನು ನೀಡಿ ಅಲ್ಲಿ ಸಂಭಾಷಣೆಯನ್ನು ಮುಂದುವರಿಸಿದ್ದಾಳೆ. ಮಾಹಿತಿ ಪ್ರಕಾರ, ಆರಂಭದಲ್ಲಿ ಸ್ನೇಹಪೂರ್ಣವಾಗಿ ನಡೆದ ಮಾತುಕತೆ ನಂತರ ಆತ್ಮೀಯ ವಿಡಿಯೋ ಕರೆಗಳಿಗೆ ತಿರುಗಿದೆ ಎಂದು ಹೇಳಲಾಗಿದೆ. ಬಳಿಕ ಆರೋಪಿತ ಮಹಿಳೆ ವ್ಯಕ್ತಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದು, ಮೊದಲಿಗೆ 2 ಲಕ್ಷ ರೂ. ಹಣವನ್ನು ಬೇಡಿಕೆ ಇಟ್ಟು, ನಂತರ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್​​ ಮಾಡಿರೋದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆ ಕುಟುಂಬಕ್ಕೆ ತೀವ್ರ ಮಾನಸಿಕ ಒತ್ತಡ ಉಂಟುಮಾಡಿದ್ದು, ವಯಸ್ಸಿನ ಕಾರಣದಿಂದ ಮಾವ ಸ್ವತಃ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಗೃಹಿಣಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 90 ವರ್ಷದ ವೃದ್ಧೆ ಮೇಲೆ ನಾಲ್ವರು ಮುಸುಕುಧಾರಿಗಳಿಂದ ಸಾಮೂಹಿಕ ಅತ್ಯಾಚಾರ

ಈ ಸಂಬಂಧ ಸೈಬರ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (C), ಸೆಕ್ಷನ್ 67 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿದ ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ಫೋನ್ ಸಂಖ್ಯೆಗಳ ಪರಿಶೀಲನೆ ಕಾರ್ಯವನ್ನು ಆರಂಭಿಸಿದ್ದು, ಆರೋಪಿಗಾಗಿ ಬಲೆ ಬೀಸಲಾಗಿದೆ. ಇದಲ್ಲದೆ, ಆರೋಪಿತ ಮಹಿಳೆ ವ್ಯಕ್ತಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿದ್ದಾಳೆ ಎಂದು ಆರೋಪಿಸಲಾಗಿದ್ದು, ಕುಟುಂಬದ ಸದಸ್ಯರನ್ನು ಆ ಖಾತೆಗೆ ಸೇರಿಸಿ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್​​ ಮಾಡಿ ಅವಮಾನ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡಾರ್ಜಿಲಿಂಗ್​​ನಲ್ಲಿ ರಾಷ್ಟ್ರಪತಿ ಮುರ್ಮು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ, ವರದಿ ಕೇಳಿದ ಗೃಹ ಕಾರ್ಯದರ್ಶಿ

ಕೋಲ್ಕತ್ತಾ, ಮಾರ್ಚ್​ 08: ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi murmu) ಅವರನ್ನು ಸ್ವಾಗತಿಸುವ ಶಿಷ್ಟಾಚಾರದಲ್ಲಿನ ಲೋಪಗಳು, ಡಾರ್ಜಿಲಿಂಗ್​​ನಲ್ಲಿ ನಡೆದ ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನದ ಸ್ಥಳ ಬದಲಾವಣೆ ಮತ್ತು ಸಂಬಂಧಿತ ವ್ಯವಸ್ಥೆಗಳ ಕುರಿತು ಇಂದು(ಮಾರ್ಚ್​8) ಸಂಜೆ 5 ಗಂಟೆಯ ಒಳಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರವು ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಉತ್ತರ ಬಂಗಾಳದಲ್ಲಿ ನಡೆದ ಅಂತರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿಗಳಿಗೆ ಸ್ವಾಗತ ಕೋರಲು ಮುಖ್ಯಮಂತ್ರಿಯಾಗಲಿ ಅಥವಾ ಅವರ ಸಂಪುಟದ ಯಾವುದೇ ಸಚಿವರಾಗಲಿ ಬಂದಿರಲಿಲ್ಲ.

ಇದನ್ನು ಪ್ರಶ್ನಿಸಿದ ರಾಷ್ಟ್ರಪತಿ ಮಮತಾ ಬ್ಯಾನರ್ಜಿ ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಅದಕ್ಕಾಗಿಯೇ ಅವರು ಅಥವಾ ಅವರ ಸಚಿವರು ಬರಲಿಲ್ಲವೇ? ನಾನು ಕೂಡ ಬಂಗಾಳದ ಮಗಳು, ಮಮತಾ ನನಗೆ ತಂಗಿಯಂತೆ. ಕಾರ್ಯಕ್ರಮದ ಸ್ಥಳವನ್ನು ಕೂಡ ಕೊನೆಯ ಕ್ಷಣದಲ್ಲಿ ಬದಲಿಸಲಾಗಿದೆ, ಇದು ಯಾಕೆ ಎಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಮತ್ತಷ್ಟು ಓದಿ: ಮಮತಾ ನನ್ನ ಮೇಲೆ ಕೋಪಗೊಂಡಿದ್ದಾರೋ ಏನೋ..ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರ

ರಾಷ್ಟ್ರಪತಿಗಳ ಈ ಹೇಳಿಕೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಟಿಎಂಸಿ ಸರ್ಕಾರವು ಸಂತಾಲ್ ಸಂಸ್ಕೃತಿಯನ್ನು ಅತ್ಯಂತ ಹಗುರವಾಗಿ ಕಾಣುತ್ತಿದೆ ಮತ್ತು ರಾಷ್ಟ್ರಪತಿಗಳಿಗೆ ಅವಮಾನ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದರು. ಗೃಹ ಸಚಿವ ಅಮಿತ್ ಶಾ ಕೂಡ, ಟಿಎಂಸಿ ವರ್ತನೆಯು ಅರಾಜಕತೆಯ ಹೊಸ ಕೀಳುಮಟ್ಟವನ್ನು ತಲುಪಿದೆ ಎಂದು ಟೀಕಿಸಿದ್ದಾರೆ.

ಸಮಾವೇಶ ನಡೆದ ಗೋಸೈನ್‌ಪುರದಲ್ಲಿ ಹೆಚ್ಚಿನ ಕುರ್ಚಿಗಳು ಖಾಲಿ ಇದ್ದವು. ಇಲ್ಲಿ ಅಂತಾರಾಷ್ಟ್ರೀಯ ಸಂತಾಲ್ ಸಮಾವೇಶ ನಡೆಯುತ್ತಿದೆ ಎಂದು ನನಗೆ ಅನ್ನಿಸುತ್ತಿಲ್ಲ. ಖಾಲಿ ಇರುವ ಪ್ರೇಕ್ಷಕರನ್ನು ನೋಡಿದರೆ, ಸಂತಾಲ್ ಸಮುದಾಯಕ್ಕೆ ಯಾವುದೇ ಸರ್ಕಾರಿ ಸವಲತ್ತುಗಳು ಸಿಗುತ್ತವೆಯೇ ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದು ರಾಷ್ಟ್ರಪತಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವಲ್ಲಿನ ವಿಳಂಬ, ಸ್ಥಳ ಬದಲಾವಣೆ ಮತ್ತು ಪ್ರೋಟೋಕಾಲ್ ಪಾಲನೆಯಲ್ಲಿನ ಲೋಪಗಳ ಬಗ್ಗೆ ರಾಷ್ಟ್ರಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುರ್ಮು ಭಾಷಣ ಮಾಡುವಾಗ ಹಾಜರಿದ್ದ ಸ್ಥಳೀಯ ಬಿಜೆಪಿ ಸಂಸದ ರಾಜು ಬಿಸ್ತಾ, ರಾಜ್ಯ ಸರ್ಕಾರ ಕಾರ್ಯಕ್ರಮಕ್ಕೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version