ಬೆಂಗಳೂರು, ಮಾರ್ಚ್ 08: ಜಯಮಹಲ್ ಬಳಿ ಹಿಟ್ ಆ್ಯಂಡ್ ರನ್ ಪ್ರಕರಣವೊಂದು ನಡೆದಿದೆ. ಇನ್ನೋವಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಸುಮಾರು ನಾಲ್ಕರಿಂದ ಐದು ಮೀಟರ್ಗಳಷ್ಟು ದೂರ ಎಳೆದುಕೊಂಡು ಹೋಗಿದೆ. ಈ ಭೀಕರ ಅಪಘಾತದ ಪರಿಣಾಮವಾಗಿ ಬೈಕ್ನಲ್ಲಿ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬೈಕ್ನಲ್ಲಿ ಸಂಚರಿಸುತ್ತಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಸಂಭವಿಸಿದ ಕೂಡಲೇ ಇನ್ನೋವಾ ಚಾಲಕ ಮತ್ತು ಕಾರಿನಲ್ಲಿದ್ದ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಾರಿಯಾದ ಚಾಲಕನ ಪತ್ತೆಗಾಗಿ ತೀವ್ರ ಶೋಧ ಮುಂದುವರಿದಿದೆ.
ವಾಷಿಂಗ್ಟನ್, ಮಾರ್ಚ್ 8: ಇರಾನ್ ಯುದ್ಧದಲ್ಲಿ ಬ್ರಿಟನ್ ವರ್ತನೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಸಮಾಧಾನ ಹೊಂದಿದ್ದಾರೆ. ಮಧ್ಯಪ್ರಾಚ್ಯದತ್ತ ಎರಡು ವಿಮಾನ ವಾಹಕಗಳನ್ನು (Aircraft Carrier) ಕಳುಹಿಸಲು ಗಂಭೀರವಾಗಿ ಯೋಚಿಸುತ್ತಿರುವುದಾಗಿ ಬ್ರಿಟನ್ ನೀಡಿರುವ ಹೇಳಿಕೆಯನ್ನು ಟ್ರಂಪ್ ಲೇವಡಿ ಮಾಡಿದ್ದಾರೆ. ಯುದ್ಧವೇ ಮುಗಿಯುತ್ತಿದೆ. ಈಗ್ಯಾಕೆ ಇವರ ನೆರವು. ಇವರ ಈ ಬುದ್ಧಿಯನ್ನು ಯಾವತ್ತೂ ನೆನಪಲ್ಲಿಟ್ಟಿರುತ್ತೇನೆ ಎಂದು ಅಮೆರಿಕ ಅಧ್ಯಕ್ಷರು ಗುಡುಗಿದ್ದಾರೆ.
ಕಳೆದ ಕೆಲ ದಿನಗಳಿಂದ ಡೊನಾಲ್ಡ್ ಟ್ರಂಪ್ ಅವರು ಬ್ರಿಟಿಷ್ ಪ್ರಧಾನಿ ಕೇರ್ ಸ್ಟಾರ್ಮರ್ (Keir Starmer) ಅವರನ್ನು ಟೀಕಿಸುತ್ತಲೇ ಇದ್ದಾರೆ. ಇರಾನ್ ಮೇಲೆ ದಾಳಿ ಮಾಡಲು ಅಮೆರಿಕಕ್ಕೆ ಬ್ರಿಟನ್ ನೆಲೆಗಳನ್ನು ನೀಡಲು ಅಸಮ್ಮತಿಸಿದ ಬಳಿಕ ಟ್ರಂಪ್ ವ್ಯಗ್ರಗೊಂಡಿದ್ದಾರೆ.
ಐತಿಹಾಸಿಕವಾಗಿ ನಿಕಟ ಸಂಬಂಧ ಇರುವ ದೇಶಗಳನ್ನು ಹಾಳು ಮಾಡಲು ಬ್ರಿಟನ್ ಪ್ರಧಾನಿ ಕೇರ್ ಸ್ಟಾರ್ಮರ್ ಸಹಾಯವಾಗಿದ್ದಾರೆ ಎಂದು ಟ್ರಂಪ್ ಬಾರಿ ಬಾರಿ ಆರೋಪಿಸುತ್ತಿದ್ದಾರೆ.
‘ಒಂದು ಕಾಲದಲ್ಲಿ ನಮ್ಮ ದೊಡ್ಡ ಮಿತ್ರನಾಗಿದ್ದ, ನಮ್ಮ ಮಿತ್ರರಲ್ಲೇ ಅತಿಹೆಚ್ಚಿನವರಾಗಿದ್ದ ಯುನೈಟೆಡ್ ಕಿಂಗ್ಡಂ ಕೊನೆಗೂ ಮಧ್ಯಪ್ರಾಚ್ಯಕ್ಕೆ ಎರಡು ಏರ್ಕ್ರಾಫ್ಟ್ ಕ್ಯಾರಿಯರ್ಗಳನ್ನು ಕಳುಹಿಸಲು ಗಂಭೀರವಾಗಿ ಯೋಚಿಸುತ್ತಿದ್ದಾರೆ. ಪರವಾಗಿಲ್ಲ ಪ್ರಧಾನಿ ಸ್ಟಾರ್ಮರ್ ಅವರೆ, ನಮಗೆ ಅವುಗಳ ಅವಶ್ಯಕತೆ ಈಗ ಇಲ್ಲ. ಆದರೆ, ಇದು ನೆನಪ್ಪಿರುತ್ತದೆ. ನಾವು ಈಗಾಗಲೇ ಯುದ್ಧ ಗೆದ್ದಾದ ಬಳಿಕ ನೆರವಾಗಲು ಬರುವ ಜನರ ಅವಶ್ಯಕತೆ ಇಲ್ಲ’ ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಬ್ರಿಟನ್ ಸೇನಾ ನೆಲೆಗಳನ್ನು ಬಳಸಲು ಅಮೆರಿಕಕ್ಕೆ ನಿರಾಕರಿಸಿದ್ಯಾಕೆ?
ಇರಾನ್ ಮೇಲೆ ದಾಳಿಗಳನ್ನು ಮಾಡಲು ಬ್ರಿಟಿಷ್ ನೆಲೆಗಳನ್ನು ಬಳಸಲು ಅಮೆರಿಕ ಮುಂದಾಗಿತ್ತು. ಆದರೆ, ಅದಕ್ಕೆ ಅವಕಾಶ ಕೊಡಲಿಲ್ಲ. ಸರಿಯಾಗಿ ಯೋಜಿಸಲಾಗಿದೆಯಾ ಮತ್ತು ಕಾನೂನಾತ್ಮಕವಾಗಿದೆಯಾ ಎಂಬುದು ಮನವರಿಕೆ ಆದರೆ ಮಾತ್ರ ಸೇನಾ ನೆಲೆಗಳನ್ನು ಬಳಸಲು ಅನುಮತಿಸಬಹುದು ಎಂಬುದು ಬ್ರಿಟನ್ ನಿಲುವು. ಆದರೆ, ರಕ್ಷಣಾ ಉದ್ದೇಶಕ್ಕೆ ಸೇನಾ ನೆಲೆಗಳನ್ನು ಬಳಸಲು ನಂತರ ಅನುಮತಿಸಿತ್ತು ಬ್ರಿಟನ್.
ಬ್ರಿಟನ್ ಮಾತ್ರವಲ್ಲ, ಹಲವು ಐರೋಪ್ಯ ದೇಶಗಳು ಅಮೆರಿಕದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಗ್ರೀನ್ಲ್ಯಾಂಡ್ ಅನ್ನು ಅಮೆರಿಕ ಖರೀದಿಸುವ ಪ್ರಸ್ತಾಪವನ್ನು ಅನೇಕ ಐರೋಪ್ಯ ದೇಶಗಳು ವಿರೋಧಿಸಿವೆ. ಅದರಲ್ಲೂ ಬ್ರಿಟನ್ನಿಂದ ತೀವ್ರ ಪ್ರತಿರೋಧ ಬಂದಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಆಪ್ಟಿಕಲ್ ಇಲ್ಯೂಷನ್ (Optical Illusion) ಒಗಟಿನ ಚಿತ್ರಗಳೇ ಹಾಗೆ, ಗೊಂದಲಕ್ಕೀಡು ಮಾಡುವುದು ಸಹಜ. ಕೆಲವೊಮ್ಮೆ ಈ ಒಗಟಿನ ಚಿತ್ರಗಳು ತಲೆಗೆ ಹುಳ ಬಿಡುತ್ತವೆ. ಆದರೆ, ಕೆಲವರು ಕ್ಷರ್ಣಾಧದಲ್ಲಿ ಒಗಟು ಬಿಡಿಸಿ ಉತ್ತರ ಕಂಡು ಕೊಳ್ಳುತ್ತಾರೆ. ಇನ್ನು ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಒಗಟು ಬಿಡಿಸಲು ಸಾಧ್ಯವಾಗಲ್ಲ. ನಿಮಗೂ ಇದೇ ರೀತಿ ಆಗಿರಬಹುದು. ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರದಲ್ಲಿ ಚುಕ್ಕೆಗಳಿಲ್ಲದ ಶ್ವಾನವೊಂದಿದೆ. ನೀವು ಈ ನಿಷ್ಠಾವಂತ ಪ್ರಾಣಿಯನ್ನು ಐದು ಸೆಕೆಂಡುಗಳಲ್ಲಿ ಕಂಡು ಹಿಡಿಯಬೇಕು.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?
ಈ ಇಲ್ಯೂಷನ್ ಚಿತ್ರ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತದೆ. ಈ ಚಿತ್ರವು ಅದೇ ರೀತಿಯಾಗಿದ್ದು, ಈ ಚಿತ್ರದಲ್ಲಿ ಸಾಲಾಗಿ ಬಿಳಿ ನಾಯಿಗಳಿವೆ. ಎಲ್ಲಾ ನಾಯಿಗಳ ಮೇಲೂ ಚುಕ್ಕೆಗಳಿವೆ. ಈ ಚಿತ್ರದಲ್ಲಿ ಚುಕ್ಕೆಗಳಿಲ್ಲದ ಶ್ವಾನವನ್ನು ಕಂಡುಹಿಡಿಯುವುದು. ನೀವು 5 ಸೆಕೆಂಡುಗಳ ಒಳಗೆ ನಿಷ್ಠಾವಂತ ಪ್ರಾಣಿಯನ್ನು ಹುಡುಕಲು ಸಾಧ್ಯವಾದರೆ ನೀವು ಅತೀ ಬುದ್ಧಿವಂತರು ಎಂದರ್ಥ.
ಇದು ಟ್ರಿಕ್ಕಿ ಒಗಟಿನ ಚಿತ್ರವಾಗಿರುವುದರಿಂದ ಚುಕ್ಕೆಗಳಿಲ್ಲದ ಶ್ವಾನವನ್ನು ಕಂಡು ಹಿಡಿಯುವುದು ಕಷ್ಟ. ನೀವು ಈ ಒಗಟನ್ನು ಬಿಡಿಸುವಲ್ಲಿ ವಿಫಲರಾಗಿದ್ದೀರಬಹುದು. ಹೆಚ್ಚು ಚಿಂತಿಸಬೇಡಿ. ಈ ಕೆಳಗಿನ ಫೋಟೋವನ್ನು ನೋಡಿ. ಶ್ವಾನ ಎಲ್ಲಿದೆ ಎಂದು ನಿಮಗೆ ತಿಳಿಯುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
254 ವರ್ಷಗಳ ಕ್ರಿಕೆಟ್ ಇತಿಹಾಸ ಹೊಂದಿರುವ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಅದು ಕೂಡ 5 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಇದೇ ಮೊದಲ ಬಾರಿಗೆ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಬೌಲರ್ರೊಬ್ಬರು 5 ಎಸೆತಗಳಲ್ಲಿ ಸತತ 5 ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ಬೌಲರ್ ಹೆಸರು ಬ್ರೆಟ್ ರಾಂಡೆಲ್.
ನ್ಯೂಝಿಲೆಂಡ್ನ ಪ್ಲಂಕೆಟ್ ಶೀಲ್ಡ್ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಲ್ಲಿ ನಡೆದ ಪಂದ್ಯದಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಹಾಗೂ ನಾರ್ದನ್ ಡಿಸ್ಟ್ರಿಕ್ಟ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಮ್ಯಾಚ್ನಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಪರ ಕಣಕ್ಕಿಳಿದ ಬ್ರೆಟ್ ರಾಂಡೆಲ್ ಕೇವಲ 5 ಎಸೆತಗಳಲ್ಲಿ 5 ವಿಕೆಟ್ ಪಡೆಯುವ ಮೂಲಕ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದಾರೆ.
ರಾಂಡೆಲ್ ಅವರು ತಮ್ಮ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಪಡೆದಿದ್ದರು. ಆ ನಂತರ ತಮ್ಮ ಮುಂದಿನ ಓವರ್ನ ಮೊದಲ ನಾಲ್ಕು ಎಸೆತಗಳಲ್ಲಿ ಸತತವಾಗಿ 4 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಐದು ಎಸೆತಗಳಲ್ಲಿ ಐದು ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಕೇವಲ 25 ರನ್ ನೀಡಿದ ಬ್ರೆಟ್ ರಾಂಡೆಲ್ 7 ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ನಾರ್ದನ್ ಡಿಸ್ಟ್ರಿಕ್ಟ್ಸ್ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 82 ರನ್ಗಳಿಗೆ ಆಲೌಟ್ ಆಗಿದೆ.
ನವದೆಹಲಿ, ಮಾರ್ಚ್ 08: ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ದೆಹಲಿಯ ಎರಡು ಹೊಸ ಮೆಟ್ರೋ ಕಾರಿಡಾರ್ಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜೊತೆಗೆ 33,500 ಕೋಟಿ ರೂ. ಮೌಲ್ಯದ ಇತರ ಪ್ರಮುಖ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ಕೊಟ್ಟಿದ್ದಾರೆ. ಪಿಂಕ್ ಲೈನ್ನಲ್ಲಿ 12.3 ಕಿಮೀ ಮಜ್ಲಿಸ್ ಪಾರ್ಕ್-ಮೌಜ್ಪುರ್-ಬಾಬರ್ಪುರ್ ಕಾರಿಡಾರ್ ಮತ್ತು ಮೆಜೆಂಟಾ ಲೈನ್ನಲ್ಲಿ 9.9 ಕಿಮೀ ದೀಪಾಲಿ ಚೌಕ್-ಮಜ್ಲಿಸ್ ಪಾರ್ಕ್ ವಿಸ್ತರಣೆಯ ಕಾರ್ಯಾಚರಣೆಯನ್ನು ಪ್ರಾರಂಭಿಸುವುದು.
ಬುರಾರಿ, ಜಗತ್ಪುರ್-ವಜೀರಾಬಾದ್, ಖಜುರಿ ಖಾಸ್, ಭಜನ್ಪುರ ಮತ್ತು ಯಮುನಾ ವಿಹಾರ್ನಂತಹ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಪಿಂಕ್ ಲೈನ್ ವಿಸ್ತರಣೆಯು ಸುಮಾರು 71.56 ಕಿಮೀ ದೂರದಲ್ಲಿ ಪೂರ್ಣಗೊಳ್ಳಲಿದ್ದು, ದೆಹಲಿಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ರಿಂಗ್ ಮೆಟ್ರೋ ಹೊಂದಿರುವ ಭಾರತದ ಮೊದಲ ನಗರವಾಗಿದೆ.
ಇದು ಈಶಾನ್ಯ ಮತ್ತು ವಾಯುವ್ಯ ದೆಹಲಿಯ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ, ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ. ಏತನ್ಮಧ್ಯೆ, ಮೆಜೆಂಟಾ ಲೈನ್ ವಿಸ್ತರಣೆಯು ಜಾಲವನ್ನು ಸುಮಾರು 49 ಕಿ.ಮೀ.ಗೆ ವಿಸ್ತರಿಸುತ್ತದೆ, ಮಧುಬನ್ ಚೌಕ್, ಉತ್ತರ ಪಿತಂಪುರಾ-ಪ್ರಶಾಂತ್ ವಿಹಾರ್, ಹೈದರ್ಪುರ್ ಬದ್ಲಿ ಮೋರ್ ಮತ್ತು ಭಾಲಸ್ವಾ ಮುಂತಾದ ವಸತಿ ಕೇಂದ್ರಗಳನ್ನು ಸಂಪರ್ಕಿಸುತ್ತದೆ.
ಈ ಸೇರ್ಪಡೆಗಳು ವಾಣಿಜ್ಯ ಮತ್ತು ವಸತಿ ವಲಯಗಳನ್ನು ಹೇಗೆ ಸಂಯೋಜಿಸುತ್ತವೆ, ಸುಗಮ, ಪರಿಸರ ಸ್ನೇಹಿ ಪ್ರಯಾಣವನ್ನು ಉತ್ತೇಜಿಸುತ್ತವೆ ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುತ್ತವೆ ಎಂಬುದನ್ನು ಮುಖ್ಯಮಂತ್ರಿ ಗುಪ್ತಾ ಒತ್ತಿ ಹೇಳಿದರು.
ತುಮಕೂರು, ಮಾರ್ಚ್ 08: ವಿದ್ಯುತ್ ಪರಿವರ್ತಕ ಅಳವಡಿಸುವಾಗ ಶಾಕ್ ತಗುಲಿ ಲೈನ್ಮ್ಯಾನ್ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ನಡೆದಿದೆ. ಕೆ.ಪಿ. ಮನು (26) ಮೃತ ದುರ್ದೈವಿಯಾಗಿದ್ದು, ಈತನ ಪತ್ನಿ 9 ತಿಂಗಳ ತುಂಬು ಗರ್ಭಿಣಿ ಎನ್ನಲಾಗಿದೆ. ಟಿಸಿ ಬದಲಾಯಿಸುವ ವೇಳೆ ಬೆಸ್ಕಾಂ ಅಧಿಕಾರಿಗಳು ಲೈನ್ ಕ್ಲಿಯರೆನ್ಸ್ ನೀಡದೆ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದ್ದ ಆರೋಪ ಕೇಳಿಬಂದಿದ್ದು, ಲೈನ್ಮ್ಯಾನ್ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಮತ್ತು ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ. ಘಟನೆ ಬಗ್ಗೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಸಾವು
ಗದಗ ತಾಲೂಕಿನ ಲಕ್ಕುಂಡಿಯ ಕಣಗಿನಾಳ ರಸ್ತೆ ಸಮೀಪ ಅಕ್ರಮವಾಗಿ ನಡೆಸಲಾಗಿರುವ ಮಣ್ಣು ಗಣಿಗಾರಿಕೆಯ ಹೊಂಡದ ನೀರಲ್ಲಿ ಮುಳುಗಿ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ನಿನ್ನೆ ಬಣ್ಣ ಆಡಿ ಆರೇಳು ಸ್ನೇಹಿತರು ಸ್ನಾನಕ್ಕೆ ತೆರಳಿದ್ದು, ಈ ವೇಳೆ ದುರ್ಘಟನೆ ಸಂಭವಿಸಿದೆ. ಗದಗ ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, 30-40 ಅಡಿ ಆಳ ಹೊಂಡ ತೆಗೆಯಲಾಗ್ತಿದೆ. ಈ ಹಿಂದೆ ಶ್ಯಾಗೋಟಿ, ಚಿಕ್ಕಹಂದಿಗೋಳ, ಕಳಸಾಪೂರ, ಚಿಂಚಲಿ ಗ್ರಾಮಗಳಲ್ಲಿ ಇದೇ ರೀತಿಯ ಹೊಂಡದಲ್ಲಿ ಬಿದ್ದು ಮಕ್ಕಳು, ಯುವಕರು ಮೃತಪಟ್ಟಿದ್ದರು. ಕಳೆದ ವಾರವಷ್ಟೇ ಚಿಂಚಲಿ ಗ್ರಾಮದಲಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ಹೀಗಿದ್ದರೂ ಸಂಬಂಧಪಟ್ಟ ಇಲಾಖೆ ಇವುಗಳಿಗೆ ಬ್ರೇಕ್ ಹಾಕುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕೋಲಾರ ತಾಲೂಕಿನ ಮುದುವಾಡಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಬಿದ್ದಿದ್ದು, ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷ ವೆಂಕಟೇಶ್ ಮೃತಪಟ್ಟಿದ್ದಾರೆ. ಇವರು ಕೋಲಾರ ತಾಲೂಕಿನ ತುರಾಂಡಹಳ್ಳಿ ನಿವಾಸಿಯಾಗಿದ್ದು, ನಾಳೆಯಿಂದ ಕೋಲಾರದಲ್ಲಿ ರೈತ ಸಂಘದ ರಾಜ್ಯ ಸಮ್ಮೇಳನ ಹಿನ್ನೆಲೆ, ಕಾರ್ಯಕ್ರಮದ ಸಿದ್ಧತೆಗಳನ್ನು ಮುಗಿಸಿ ಹೋಗುವ ವೇಳೆ ಅವಘಡ ನಡೆದಿದೆ ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ (Jr NTR) ಅವರಿಗೆ ಬೆಂಗಳೂರಿನಲ್ಲೂ ಅಭಿಮಾನಿಗಳು ಇದ್ದಾರೆ. ಇಂದು (ಮಾರ್ಚ್ 8) ಮಹಾದೇವಪುರ ಕಿಮ್ಸ್ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಏನ್ಟಿಆರ್ ಅವರನ್ನು ನೋಡಲು ಫ್ಯಾನ್ಸ್ ಮುಗಿಬಿದ್ದರು. ಆಸ್ಪತ್ರೆಯ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಫ್ಯಾನ್ಸ್ ಮುಗಿಬಿದ್ದರು. ಈ ವೇಳೆ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಜೂನಿಯರ್ ಎನ್ಟಿಆರ್ ಅವರನ್ನು ಹತ್ತಿರದಿಂದ ನೋಡಬೇಕು ಎಂಬ ಆಸೆಯಿಂದ ಹಲವರು ಆಸ್ಪತ್ರೆಯ ಒಳಗೆ ನುಗ್ಗಿದರು. ಇದರಿಂದ ಆಸ್ಪತ್ರೆಯ ಎಸ್ಕಲೇಟರ್ಗೆ ಹಾನಿ ಆಗಿದೆ ಎಂಬ ಮಾಹಿತಿ ಕೇಳಿಬಂದಿದೆ.
ಡಾ. ಬಸವರಾಜ ಗುರೂಜಿಯವರ ಪ್ರಕಾರ, 2026ರ ಪರಾಭವ ನಾಮ ಸಂವತ್ಸರದ ಯುಗಾದಿಯಲ್ಲಿ ಸಿಂಹ ರಾಶಿಯವರಿಗೆ ಗುರು, ಶನಿ, ರಾಹು, ಕೇತು ಗ್ರಹಗಳ ಸಂಚಾರವು ವಿವಿಧ ಫಲಿತಾಂಶಗಳನ್ನು ನೀಡಲಿದೆ. ವರ್ಷವಿಡೀ ಅಷ್ಟಮ ಶನಿಯ ಪ್ರಭಾವವಿರುತ್ತದೆ. ಆದಾಯ ಆರು ಭಾಗವಿದ್ದರೆ, ಖರ್ಚು ನಾಲ್ಕು ಭಾಗವಿರುತ್ತದೆ. ಆರೋಗ್ಯದ ವಿಚಾರದಲ್ಲಿ 50-50 ಪರಿಸ್ಥಿತಿ ಇರುತ್ತದೆ. ಸುಖ ಮೂರು ಭಾಗ ಹಾಗೂ ದುಃಖ ಏಳು ಭಾಗ ಇರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಯೋಗವಿದೆ. ಮಹಿಳೆಯರಿಗೆ ಅಪೇಕ್ಷಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ ಮತ್ತು ಅದೃಷ್ಟ ಒಲಿದು ಬರುತ್ತದೆ.
ಮಕ್ಕಳ ಭವಿಷ್ಯವು ಶುಭವಾಗಲಿದೆ. ಗಂಡ-ಹೆಂಡತಿಯರ ನಡುವೆ ಸಣ್ಣಪುಟ್ಟ ಕಲಹಗಳು ಉಂಟಾಗುವ ಸಾಧ್ಯತೆಗಳಿರುತ್ತವೆ, ತಾಳ್ಮೆ ಅಗತ್ಯ. ಹನುಮಾನ್ ಚಾಲೀಸಾ ಪಠಣ ಮತ್ತು ಒಂಬತ್ತು ಶನಿವಾರ ಶನಿ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚುವುದು ಉತ್ತಮ. ಈ ವರ್ಷ ಸಿಂಹ ರಾಶಿಯವರಿಗೆ ಶೇ. 65 ಶುಭ ಫಲಗಳು ದೊರೆಯುತ್ತವೆ. ಭಾನುವಾರ ಮತ್ತು ಶುಕ್ರವಾರ ಕೈಗೊಳ್ಳುವ ಕೆಲಸಗಳು ಶುಭಕರ. ಕೇಸರಿ ಮತ್ತು ಗುಲಾಬಿ ಬಣ್ಣಗಳು ಅದೃಷ್ಟ ತರುತ್ತವೆ. 1 ಮತ್ತು 7 ಅದೃಷ್ಟ ಸಂಖ್ಯೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 08: ಬೆಂಗಳೂರು, ನೆಲಮಂಗಲ ಮತ್ತು ತುಮಕೂರಿನಲ್ಲಿ ಭಾನುವಾರ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು (Road Accidents) ಸಂಭವಿಸಿದ್ದು, ಒಬ್ಬರು ಮೃತಪಟ್ಟರೆ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂರೂ ಪ್ರಕರಣಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣಗಳು ಸಂಬಂಧಿತ ಠಾಣೆಗಳಲ್ಲಿ ದಾಖಲಾಗಿವೆ.
ಕಾರು-ಬೈಕ್ ಮುಖಾಮುಖಿ
ಬೆಂಗಳೂರಿನ ಜಯಮಹಲ್ ಮೊದಲನೇ ಕ್ರಾಸ್ನಲ್ಲಿ ಇನ್ನೋವಾ ಕಾರು ಚಾಲಕನಿಂದ ಹಿಟ್ ಅಂಡ್ ರನ್ ಘಟನೆ ನಡೆದಿದೆ. ಬೈಕ್ಗೆ ಡಿಕ್ಕಿ ಹೊಡೆದ ಕಾರು ಬೈಕ್ ಅನ್ನು ಕೆಲ ದೂರ ಎಳೆದೊಯ್ದಿದೆ. ಪರಿಣಾಮ ಬೈಕ್ನಲ್ಲಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ನಿಂದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟುಹೋಗಿದೆ. ಘಟನೆ ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸ್ಥಳೀಯ ನಿವಾಸಿ ಗೌರಿ ಮಾಹಿತಿ ನೀಡಿದಂತೆ, ಇನೋವಾ ಕ್ರಿಸ್ಟಾ ಕಾರು ಬೈಕ್ಗೆ ಟಚ್ ಆಗಿ ಚಾಲಕ ವಾಹನವನ್ನು ನಿಲ್ಲಿಸದೇ ಮುಂದಕ್ಕೆ ಸಾಗಿದ್ದಾನೆ. ಕಾರಿನ ಸೈಡ್ಗೆ ಬೈಕ್ ಸಿಕ್ಕಿಕೊಂಡು ಎಳೆದೊಯ್ಯುವ ವೇಳೆ ಪೆಟ್ರೋಲ್ ಲೀಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಗಾಯಾಳು ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ನ್ಯಾಯಾಧೀಶರ ಕಾರಿಗೆ ಆ್ಯಕ್ಸಿಡೆಂಟ್
ಇನ್ನು ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ ಹೈಕೋರ್ಟ್ ನ್ಯಾಯಾಧೀಶ ಬಸವರಾಜು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅಪರಿಚಿತ ವ್ಯಕ್ತಿ ಅಡ್ಡ ಬಂದ ಹಿನ್ನೆಲೆಯಲ್ಲಿ ತಪ್ಪಿಸಲು ಹೋಗಿ ಪೊಲೀಸ್ ಎಸ್ಕಾರ್ಟ್ ವಾಹನ ಸಿಮೆಂಟ್ ಸ್ಲ್ಯಾಬ್ಗೆ ಡಿಕ್ಕಿ ಹೊಡೆದಿದೆ. ಬಳಿಕ ನ್ಯಾಯಾಧೀಶರ ಕಾರು ಎಸ್ಕಾರ್ಟ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪೊಲೀಸ್ ವಾಹನದ ಚಾಲಕನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಯಾಧೀಶರು ಸೇರಿದಂತೆ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದೇ ವೇಳೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಂಬಯ್ಯನಪಾಳ್ಯ ಗೇಟ್ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾರಾಯಣ (35) ಮೃತಪಟ್ಟಿದ್ದಾರೆ. ಕೊರಟಗೆರೆ ತಾಲೂಕಿನ ಮಲ್ಲೇಕಾವು ಗ್ರಾಮದ ನಿವಾಸಿಯಾಗಿದ್ದ ಅವರು ಮಧುಗಿರಿಯಿಂದ ತುಮಕೂರು ಕಡೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಕಾಮರೆಡ್ಡಿ, ಮಾರ್ಚ್ 08: ಮೂವರು ಬಾಲಕಿಯರು ನೀರಿನ ಟ್ಯಾಂಕಿನಲ್ಲಿ ಶವ(Dead Body)ವಾಗಿ ಪತ್ತೆಯಾಗಿರುವ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿದೆ. ತಂದೆಯೇ ಅವರನ್ನು ನೀರಿಗೆ ತಳ್ಳಿರಬಹುದು ಎಂದು ಅನುಮಾನಿಸಲಾಗಿದೆ. ಬಾಲಕಿಯರು ಬೆಳಗ್ಗೆ ಆತನೊಂದಿಗೆ ಹೊರಗೆ ಹೋಗಿದ್ದರು ಮತ್ತು ಮನೆಗೆ ಹಿಂತಿರುಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು 8, 7 ಮತ್ತು 5 ವರ್ಷ ವಯಸ್ಸಿನವರಾಗಿದ್ದು, ಕಾಮರೆಡ್ಡಿ ನಿವಾಸಿಗಳಾಗಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಮಕ್ಕಳು ತಮ್ಮ ತಂದೆಯೊಂದಿಗೆ ಹತ್ತಿರದ ದಿನಸಿ ಅಂಗಡಿಯಿಂದ ತಿಂಡಿ ಖರೀದಿಸಲು ಹೋಗಿದ್ದರು. ಅವರು ಹಲವಾರು ಗಂಟೆಗಳ ಕಾಲ ಹಿಂತಿರುಗದಿದ್ದಾಗ, ಕುಟುಂಬ ಸದಸ್ಯರು ಅವರನ್ನು ಹುಡುಕಲು ಪ್ರಾರಂಭಿಸಿದರು.
ಮಕ್ಕಳು ಪತ್ತೆಯಾಗದ ನಂತರ, ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದರು, ಅವರನ್ನು ಪತ್ತೆಹಚ್ಚಲು ಮೂರು ವಿಶೇಷ ತಂಡಗಳನ್ನು ರಚಿಸಿದರು.
ತನಿಖೆಯ ಸಮಯದಲ್ಲಿ, ತಂದೆಯ ಮೇಲೆ ಅನುಮಾನ ಬಿತ್ತು. ಮಕ್ಕಳನ್ನು ನೀರಿನ ಟ್ಯಾಂಕ್ಗೆ ತಳ್ಳಿದವನು ಅವನೇ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾವಿನ ಸುತ್ತಲಿನ ನಿಖರವಾದ ಸಂದರ್ಭಗಳನ್ನು ನಿರ್ಧರಿಸಲು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೋಧ ತಂಡಗಳು ಜಲಾಶಯವನ್ನು ಶೋಧಿಸಲು ಪ್ರಾರಂಭಿಸಿದವು, ಮತ್ತು ಕಾರ್ಯಾಚರಣೆಯ ಸಮಯದಲ್ಲಿ, ಇಬ್ಬರು ಹುಡುಗಿಯರ ಶವಗಳನ್ನು ನೀರಿನಿಂದ ಹೊರತೆಗೆಯಲಾಯಿತು. 8 ವರ್ಷದ ಬಾಲಕಿಗಾಗಿ ಹುಡುಕಾಟ ಮುಂದುವರೆಯಿತು, ನಂತರ ಆಕೆಯ ಶವವೂ ಪತ್ತೆಯಾಗಿದೆ. ಕಾಮರೆಡ್ಡಿ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಚೈತನ್ಯ ರೆಡ್ಡಿ ಅವರ ಮೇಲ್ವಿಚಾರಣೆಯಲ್ಲಿ ಶೋಧ ಮತ್ತು ಮರುಪಡೆಯುವಿಕೆ ಕಾರ್ಯಾಚರಣೆಯನ್ನು ನಡೆಸಲಾಯಿತು.
ಈ ಘಟನೆಯು ಕಾಮರೆಡ್ಡಿಯಲ್ಲಿ ಆಘಾತದ ಅಲೆಗಳನ್ನು ಉಂಟುಮಾಡಿದೆ, ನಿವಾಸಿಗಳು ನೀರಿನ ಟ್ಯಾಂಕ್ ಬಳಿ ಜಮಾಯಿಸಿ ಮೂವರು ಸಹೋದರಿಯರ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.