ತ್ರಿಷಾನ ರಾಜಕುಮಾರಿ ಎಂದು ಕರೆದಿದ್ದ ದಳಪತಿ ವಿಜಯ್

ತ್ರಿಷಾನ ರಾಜಕುಮಾರಿ ಎಂದು ಕರೆದಿದ್ದ ದಳಪತಿ ವಿಜಯ್

ದಳಪತಿ ವಿಜಯ್ ಹಾಗೂ ಸಂಗೀತಾ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಪತಿಗೆ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿ, ಸಂಗೀತಾ ಅವರು ಕೌಟುಂಬಿಕ ನ್ಯಾಯಾಲದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.ಈ ವಿಷಯ ಚರ್ಚೆ ಹುಟ್ಟುಹಾಕಿದೆ. ದಂಪತಿ ಬೇರೆ ಆಗಲು ತ್ರಿಷಾ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಿರುವಾಗಲೇ ಇವರಿಬ್ಬರೂ ವಿವಾಹ ಕಾರ್ಯಕ್ರಮ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಬಳಿಕೆ ಅವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ.

ತ್ರಿಷಾ ಹಾಗೂ ವಿಜಯ್ ಒಟ್ಟಾಗಿ ಕಾಣಿಸಿಕೊಂಡ ಬೆನ್ನಲ್ಲೇ ಅಭಿಮಾನಿಗಳು ವಿಜಯ್ ಅವರನ್ನು ಬೆಂಬಲಿಸಿದರು. ವಿಜಯ್ ಅವರು ಮಾಡಿದ್ದು ಸರಿ ಇದೆ ಎಂದು ಹೇಳಿದರು. ಸಾಮಾನ್ಯವಾಗಿ ಈ ರೀತಿಯ ಅಫೇರ್ ವಿಷಯ ಬಂದಾಗ ಪರಸ್ಪರ ದೂರ ಆಗುತ್ತಾರೆ. ಒಟ್ಟಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸಲು ನೋಡುತ್ತಾರೆ. ಆದರೆ, ವಿಜಯ್ ಆ ರೀತಿ ಮಾಡಿಲ್ಲ. ಅವರು ಯಾವುದೇ ಮುಚ್ಚುಮರೆ ಇಲ್ಲದೆ ವಿವಾಹ ಸಮಾರಂಭಕ್ಕೆ ಬಂದರು. ಈಗ ತ್ರಿಷಾ ಹಾಗೂ ವಿಜಯ್ ಇಬ್ಬರೂ ಆಡಿದ ವಿಷಯ ಚರ್ಚೆ ಆಗುತ್ತಿದೆ.

ಈವೆಂಟ್ ಒಂದರಲ್ಲಿ ವಿಜಯ್ ಹಾಗೂ ತ್ರಿಷಾ ಇಬ್ಬರೂ ಇದ್ದರು. ವಿಜಯ್ ನನ್ನ ಮನೆ ಇದ್ದಂತೆ ಎಂದು ತ್ರಿಷಾ ಹೇಳಿದ್ದರು. ಇದು ಇಬ್ಬರ ಬಾಂಡಿಂಗ್ ಹೇಗಿದೆ ಎಂಬುದನ್ನು ತೋರಿಸುತ್ತದೆ. ‘ವಿಜಯ್ ನನ್ನ ಕುಟುಂಬದವರ ರೀತಿ’ ಎಂದು ಹೇಳಲು ತ್ರಿಷಾ ಆ ರೀತಿ ಹೇಳಿರಬಹುದು ಎಂದು ಅನೇಕರರು ಊಹಿಸುತ್ತಿದ್ದಾರೆ. ಇದನ್ನು ಕೆಲವರು ತಪ್ಪಾಗಿ ಅರ್ಥೈಸುತ್ತಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್ ವಿಚ್ಛೇದನಕ್ಕೆ ದೊಡ್ಡ ಟ್ವಿಸ್ಟ್: ತ್ರಿಷಾ ಜತೆ ಮದುವೆಗೆ ಹಾಜರಿ

ವೇದಿಕೆ ಒಂದರಲ್ಲಿ ತ್ರಿಷಾ ಅವರನ್ನು ವಿಜಯ್ ಹೊಗಳಿದ್ದರು. ‘ಚಿತ್ರರಂಗಕ್ಕೆ ಬಂದ 20 ವರ್ಷಗಳ ನಂತರವೂ ಅದೇ ಸೌಂದರ್ಯವನ್ನು ಕಾಪಾಡಿಕೊಂಡು ಟಾಪ್ ಹೀರೋಯಿನ್ ಆಗಿ ಮುಂದುವರೆಯುತ್ತಿರುವ ತ್ರಿಷಾಗೆ ಅಭಿನಂದನೆಗಳು. ಅವರು ರಾಜಕುಮಾರಿ’ ಎಂದು ವಿಜಯ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಂದಿನ ಗೊರಜು ಭೂಮಿಗೆ ಇಂದು ಬಂಗಾರದ ಬೆಲೆ: ಏನಿದು ನೂರಾರು ಕೋಟಿ ಬೆಲೆಬಾಳುವ ಭೂಮಿಯ ಕಥೆ

ಕೋಲಾರ, ಮಾರ್ಚ್​​ 06: ಅದು ಬೆಟ್ಟಗುಡ್ಡಗಳಿರುವ ಭೂಮಿ (land). ಅಲ್ಲಿ ಕೃಷಿ ಮಾಡಲು ಯೋಗ್ಯವಲ್ಲ, ಹಾಗಾಗಿ ಅದನ್ನು ರೈತರಿಗೆ ಮಂಜೂರು ಮಾಡುವುದು ಬೇಡ ಎಂದು ಅಧಿಕಾರಿಗಳೇ ತಿರಸ್ಕರಿಸಿದ್ದರು. ಆದರೆ ಇಂದು ಆ ಭೂಮಿಗೆ ಬಂಗಾರದ ಬೆಲೆ ಬಂದ ಹಿನ್ನಲೆ ಅಧಿಕಾರಿಗಳೇ ಶಾಮೀಲಾಗಿ ನೂರಾರು ಕೋಟಿ ರೂ ಬೆಲೆಬಾಳುವ ಭೂಮಿಯನ್ನು ಅಕ್ರಮವಾಗಿ ರಾತ್ರೋರಾತ್ರಿ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ.

ಕೋಲಾರ ಜಿಲ್ಲೆಯ ಮಾಲೂರು ಬಹುತೇಕ ಬೆಂಗಳೂರಿಗೆ ಹೊಂದಿಕೊಂಡಿರುವ ತಾಲ್ಲೂಕು. ಹಾಗಾಗಿ ಮಾಲೂರು ತಾಲ್ಲೂಕಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಕಳೆದ ಕೆಲವು ದಿನಗಳಿಂದ ಮಾಲೂರು ತಾಲ್ಲೂಕಿನಲ್ಲಿ ಮೇಲಿಂದ ಮೇಲೆ ಭೂ ಹಗರಣಗಳು ನಡೆಯುತ್ತಿವೆ. ಅದರಂತೆ ಮಾಲೂರು ತಾಲ್ಲೂಕು ಚೆನ್ನಿಗರಾಯಪುರ ಗ್ರಾಮದ ಸರ್ವೆ ನಂ-6ರಲ್ಲಿನ ಸುಮಾರು 250 ಕೋಟಿ ರೂ ಬೆಲೆಬಾಳುವ ಸುಮಾರು 81 ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ ಕೆಲವೊಂದು ಪ್ರಭಾವಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳೇ ಶಾಮೀಲಾಗಿರುವ ಆರೋಪವೂ ಇದೆ.

ಕೂಲಂಕುಷವಾಗಿ ತನಿಖೆಗೆ ಸೂಚನೆ

ಸದ್ಯ ನೂರಾರು ಕೋಟಿಯ ಭೂ ಅಕ್ರಮ ಕುರಿತು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ವಿಚಾರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯ ವಿಷಯವಾಗಿದ್ದು ಸ್ವತ: ಜಿಲ್ಲಾ ಉಸ್ತವಾರಿ ಸಚಿವರೇ ಚೆನ್ನಿಗರಾಯಪುರ ಭೂ ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಜಮೀನು ಮಂಜೂರಾತಿಗೆ ತಡೆಯಾಜ್ಞೆ ನೀಡಿ ಕೂಲಂಕುಷವಾಗಿ ತನಿಖೆ ನಡೆಸಿ ಕ್ರಮವಹಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಾದ್ಯಂತ ಎರಡೇ ವರ್ಷಗಳಲ್ಲಿ 90 ಸಾವಿರ ಸರ್ಕಾರಿ ಭೂಮಿ ಅಕ್ರಮ ಒತ್ತುವರಿ!

ಅಷ್ಟಕ್ಕೂ ಏನಿದು ಚೆನ್ನಿಗರಾಯಪುರ ಗ್ರಾಮದ ನೂರಾರು ಕೋಟಿ ರೂ ಬೆಲೆಬಾಳುವ ಭೂಮಿಯ ಕಥೆ ಅಂತ ನೋಡುವುದಾರೆ ಅದು ಸುಮಾರು 44 ವರ್ಷಗಳ ಹಿಂದೆ ಅಂದರೆ 1982ರಲ್ಲಿ ಚೆನ್ನಿಗರಾಯಪುರ ಗ್ರಾಮದ ಸರ್ವೆ ನಂ-6 ರಲ್ಲಿದ್ದ ಗೊರಜು ಹಾಗೂ ಮಣ್ಣು ಗುಡ್ಡವಿದ್ದ ಭೂಮಿಯನ್ನು ಮಂಜೂರು ಮಾಡುವಂತೆ 27 ಜನರು ತಲಾ ಮೂರು ಎಕರೆಯಂತೆ 81 ಎಕರೆ ಭೂಮಿ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಅಂದಿನ ಭೂ ವಿತರಣಾ ಸಲಹಾ ಸಮಿತಿ ಸ್ಥಳ ಪರಿಶೀಲನೆ ನಡೆಸಿ ಈ ಭೂಮಿ ವ್ಯವಸಾಯ ಮಾಡಲು ಯೋಗ್ಯವಿಲ್ಲ, ಅಲ್ಲಿ ಕಲ್ಲುಗುಡ್ಡ, ಬೆಟ್ಟಗಳಿದ್ದು ಅಲ್ಲಿ ವ್ಯವಸಾಯ ಮಾಡಲು ಆಗೋದಿಲ್ಲ. ಅದನ್ನು ಅರಣ್ಯ ಬೆಳೆಸಲು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿತ್ತು. ಅದರಂತೆ ಜಿಲ್ಲಾಧಿಕಾರಿಗಳು ತಾಲ್ಲೂಕು ಅಭಿವೃದ್ದಿ ಮಂಡಳಿಗೆ ನಿರ್ದೇಶನ ನೀಡಿ ಆದೇಶಿಸಿದ್ದರು. ಆದರೆ ಈ ಆದೇಶವನ್ನು ಪ್ರಶ್ನಿಸಿ ಭೂ ಮಂಜೂರಾತಿಗೆ ಅರ್ಜಿಸಲ್ಲಿಸಿದ್ದ ಅರ್ಜಿದಾರರು ಎ.ಸಿ. ಅವರಿಗೆ ಮೇಲ್ಮನವಿ ಸಲ್ಲಿಸಿದ್ದರು. ನಂತರ ಎಸಿ ಅವರು ಕೂಡ ಅವರ ಮನವಿಯನ್ನು ತಿರಸ್ಕರಿಸಿದ್ದರು.

ಎಸಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್​ 2011-12 ರಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ 2017ರಲ್ಲಿ ಭೂ ಮಂಜೂರಾತಿ ಕಮಿಟಿಯವರು ಅರ್ಜಿದಾರರಿಗೆ ನೋಟಿಸ್ ನೀಡಿ. ವಿಚಾರಣೆ ನಡೆಸಿ ಮುಂದಿನ ಕ್ರಮ ಜರುಗಿಸುವಂತೆ ಆದೇಶ ನೀಡಿತ್ತು. 2017ರಿಂದ ಬಂದಂತ ಯಾವುದೇ ಅಧಿಕಾರಿಗಳು ಈ ಪ್ರಕರಣವನ್ನು ಕೈಗೆತ್ತುಕೊಂಡಿರಲಿಲ್ಲ. 2025 ಅಕ್ಟೋಬರ್​​ನಲ್ಲಿ ಎಸಿ ಅವರು ಏಕಾಏಕಿ ಮಂಜೂರಾತಿ ಆದೇಶವನ್ನು ಮಾಡಿದ್ದಾರೆ. ಆದರೆ ಮಂಜೂರಾತಿ ಮಾಡುವ ವೇಳೆಯಲ್ಲಿ ಮಂಜೂರಾತಿಗೆ ಅರ್ಜಿಸಲ್ಲಿಸಿದ್ದ ಅರ್ಜಿದಾರರಿಗೆ ನೋಟಿಸ್​ ನೀಡಿಲ್ಲ. 44 ವರ್ಷದ ಹಿಂದಿನ ಪ್ರಕರಣವಾಗಿದ್ದ ಹಿನ್ನೆಲೆ ಅವರ ಪ್ರಸ್ತುತ ಪರಿಸ್ಥಿತಿ ಸ್ಥಿತಿಗತಿ, ಎಲ್ಲಿ ವಾಸವಿದ್ದಾರೆ ಅನ್ನೋದರ ಕುರಿತು ವರದಿ ಪಡೆದಿಲ್ಲ. ಅವರ ಹೇಳಿಕೆಗಳನ್ನು ದಾಖಲಿಸದೆ ಏಕಾಏಕಿ ಆದೇಶ ಮಾಡಿದ್ದಾರೆ. ಇದು ಅಕ್ರಮ ಮಂಜೂರಾತಿಗೆ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಇನ್ನು 44 ವರ್ಷಗಳ ಹಿಂದೆ ಈ ಪ್ರದೇಶ ಬೆಟ್ಟ, ಗುಡ್ಡಗಳಿಂದ ಕೂಡಿದ್ದ ಗೊರಜು ಪ್ರದೇಶವಾಗಿತ್ತು, ಆದರೆ ಈಗ ಅಲ್ಲಿದ್ದ ಬೆಟ್ಟಗುಡ್ಡವನ್ನು ಹೆದ್ದಾರಿ ಕಾಮಗಾರಿಗೆ ಹಾಗೂ ಅಕ್ರಮ ಮಣ್ಣು ಮಾಫಿಯಾ ಮಣ್ಣನ್ನೇ ಲೂಟಿ ಮಾಡಿದ್ದು, ಅಲ್ಲಿದ್ದ ಬೆಟ್ಟವೇ ನಾಪತ್ತೆಯಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ಕೂಗಳತೆ ದೂರದಲ್ಲಿದ್ದು, ಸದ್ಯ ಅದು ರಿಯಲ್​ ಎಸ್ಟೇಟ್​ ಉದ್ಯಮಿಗಳ ಕಣ್ಣುಕುಕ್ಕುವ ಸ್ಥಳವಾಗಿ ಮಾರ್ಪಟ್ಟಿದೆ. ಹಾಗಾಗಿ ಇಂದಿಗೆ ಆ ಪ್ರದೇಶದಲ್ಲಿ ಒಂದು ಎಕರೆಗೆ ನಾಲ್ಕರಿಂದ ಐದು ಕೋಟಿ ರೂ ಮಾರುಕಟ್ಟೆ ಬೆಲೆ ಇದ್ದು 81 ಎಕರೆ ಭೂಮಿ ಮಂಜೂರಾತಿ ಹಿಂದೆ ಪ್ರಭಾವಿಗಳು ಹಾಗೂ ರಿಯಲ್ ಎಸ್ಟೇಟ್​ ಉದ್ಯಮಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಆ ಭೂಮಿಯನ್ನು ಪ್ರಸ್ತುತ ಅನುಭೋಗದಲ್ಲಿರುವವರಿಗೆ ಮಂಜೂರು ಮಾಡಬೇಕು. ಇಲ್ಲ ಅದನ್ನು ಸರ್ಕಾರ ವಾಪಸ್​ ಪಡೆಯಬೇಕು. ಅದರ ಜೊತೆಗೆ ಅಕ್ರಮದ ತನಿಖೆ ನಡೆಸಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.

ಇದನ್ನೂ ಓದಿ: ಕೋಗಿಲು ಲೇಔಟ್:​ ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ

ಒಟ್ಟಾರೆ ಕಾಲ ಬದಲಾದಂತೆ ಅಲ್ಲಿನ ಪರಿಸ್ಥಿತಿಯೂ ಬದಲಾಗುತ್ತದೆ ಎನ್ನುವಂತೆ 44 ವರ್ಷಗಳ ಹಿಂದೆ ಯಾವುದಕ್ಕೂ ಯೋಗ್ಯವಲ್ಲದ ಭೂಮಿಗೆ ಇಂದು ಬಂಗಾರದ ಬೆಲೆ ಬಂದಿದೆ. ತಿರಸ್ಕರವಾಗಿದ್ದ ಭೂಮಿಯನ್ನು ಪಡೆಯಲು ಇಂದು ನೂರಾರು ಕೋಟಿ ರೂ ಅಕ್ರಮ ಮಾಡಲು ಮುಂದಾಗಿರುವುದು ನಿಜಕ್ಕೂ ಆಶ್ಚರ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಅಕ್ರಮ ಬಯಲಿಗೆಳೆಯಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಂತಾರಾಷ್ಟ್ರೀಯ ಬಿಕ್ಕಟ್ಟಿನ ನಡುವೆಯೂ ಭಾರತದಲ್ಲಿ ಸಿಎನ್​ಜಿ, ಪಿಎನ್​ಜಿ ಗ್ಯಾಸ್ ಬೆಲೆಗಳ ಏರಿಕೆ ಮಾಡದ ಅದಾನಿ ಕಂಪನಿ

ನವದೆಹಲಿ, ಮಾರ್ಚ್ 6: ಇರಾನ್ ಯುದ್ಧದಿಂದಾಗಿ ಜಾಗತಿಕವಾಗಿ ತೈಲ ಪೂರೈಕೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದ್ದರೂ ಭಾರತದಲ್ಲಿ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ (Adani Total Gas Ltd) ತನ್ನ ಸಿಎನ್​ಜಿ ಮತ್ತು ಪಿಎನ್​ಜಿ ಅನಿಲಗಳ ಬೆಲೆ ಏರಿಕೆ ಮಾಡಿಲ್ಲ. ಔದ್ಯಮಿಕ ಗ್ರಾಹಕರಿಗೆ ಅದಾನಿ ಕಂಪನಿ ಎಲ್​ಎನ್​ಜಿ ಪೂರೈಕೆಯನ್ನು ಮಿತಿಗೊಳಿಸಿದೆ. ಅದು ಬಿಟ್ಟರೆ ಗೃಹಬಳಕೆಗೆ ಎಟಿಜಿಎಲ್​ನಿಂದ ಸರಬರಾಜಾಗುವ ಕೊಳವೆ ಅಡುಗೆ ಅನಿಲ ಹಾಗೂ ವಾಹನಗಳಿಗೆ ಬಳಕೆಯಾಗುವ ಸಿಎನ್​ಜಿ ಗ್ಯಾಸ್​ನ ಪೂರೈಕೆಯಲ್ಲಿ ಯಾವ ನಿರ್ಬಂಧ ಇಲ್ಲ. ಬೆಲೆಯಲ್ಲೂ ವ್ಯತ್ಯಯವಾಗಿಲ್ಲ.

ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಕಂಪನಿಯು ತನ್ನ ಶೇ. 70ರಷ್ಟು ಗ್ಯಾಸ್ ಅನ್ನು ದೇಶೀಯವಾಗಿ ಪಡೆಯುತ್ತಿದೆ. ಸಿಎನ್​ಜಿ ಬಳಕೆದಾರರಿಗೆ ಮತ್ತು ಗೃಹ ಅಡುಗೆಮನೆಗಳಿಗೆ ಇವು ಸರಬರಾಜಾಗುತ್ತವೆ. ಕಂಪನಿಯ ಉಳಿದ ಶೇ. 30ರಷ್ಟು ಅನಿಲವು ಎಲ್​ಎನ್​ಜಿಯಾಗಿದ್ದು ಇದನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತದೆ. ಎಲ್​ಎನ್​ಜಿ ಗ್ಯಾಸ್ ಅನ್ನು ಕಮರ್ಷಿಯಲ್ ಮತ್ತು ಕೈಗಾರಿಕಾ ಬಳಕೆಗೆ ನೀಡಲಾಗುತ್ತದೆ.

ಇದನ್ನೂ ಓದಿ: ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ- ಸಿದ್ದರಾಮಯ್ಯ

ಎಲ್​ಎನ್​ಜಿಯನ್ನು ಭಾರತೀಯ ಕಂಪನಿಗಳು ಗಲ್ಫ್ ರಾಷ್ಟ್ರಗಳಿಂದ ಪಡೆಯುತ್ತವೆ. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಕಚ್ಚಾ ತೈಲ ಮತ್ತು ಅನಿಲಗಳ ಸಾಗಣೆಗೆ ತಡೆ ಬಿದ್ದಿರುವುದರಿಂದ ಅದಾನಿ ಟೋಟಲ್ ಗ್ಯಾಸ್ ಕಂಪನಿಗೆ ಎಲ್​ಎಲ್​ಜಿ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ.

ಎಲ್​ಎನ್​ಜಿ ಗ್ಯಾಸ್ ಅನ್ನು ಬಳಸುವ ಕಮರ್ಷಿಯಲ್ ಹಾಗೂ ಕೈಗಾರಿಕಾ ಗ್ರಾಹಕರು, ಗ್ಯಾಸ್ ಬಳಕೆಯನ್ನು ಶೇ. 40ರಷ್ಟು ಕಡಿಮೆ ಮಾಡಬೇಕೆಂದು ಮನವಿ ಪಡೆದಿದ್ದಾರೆ. ಈ ಗ್ರಾಹಕರು ಈಗಾಗಲೆ ಒಪ್ಪಂದ ಮಾಡಿಕೊಂಡಿದ್ದಾರಾದರೂ ಕಾಂಟ್ರಾಕ್ಟ್​ನಲ್ಲಿರುವಷ್ಟು ಎಲ್​ಎನ್​ಜಿ ಗ್ಯಾಸ್ ಬಳಕೆಗೆ ಮುಕ್ತಾವಕಾಶ ಇರುವುದಿಲ್ಲ. ಕಾಂಟ್ರಾಕ್ಟ್ ದರವು ಪ್ರತೀ ಸ್ಟ್ಯಾಂಡರ್ಸ್ ಕ್ಯೂಬಿಕ್ ಮೀಟರ್​ಗೆ 40 ರೂ ಇದೆ. ಶೇ. 40ರಷ್ಟು ಎನ್​ಎನ್​ಜಿಯನ್ನು ಇದೇ ಬೆಲೆಯಲ್ಲಿ ಬಳಸಬಹುದು. ಇದಕ್ಕಿಂತ ಹೆಚ್ಚಿನ ಸಿಎನ್​ಜಿ ಗ್ಯಾಸ್ ಬಳಸಿದರೆ, ಹಾಲಿ ಮಾರುಕಟ್ಟೆ ದರ ಅಥವಾ ಸ್ಪಾಟ್ ಪ್ರೈಸ್ ಪಾವತಿಸಬೇಕಾಗುತ್ತದೆ. ಸ್ಪಾಟ್ ಪ್ರೈಸ್ ಸಾಮಾನ್ಯವಾಗಿ ಕಾಂಟ್ರಾಕ್ಟ್ ಪ್ರೈಸ್​ಗಿಂತ ಎರಡು ಪಟ್ಟು ಹೆಚ್ಚಿರುತ್ತದೆ.

ಇದನ್ನೂ ಓದಿ: ಇಂಧನಕ್ಕೆ ಯಾವ ತೊಂದರೆ ಇಲ್ಲ, ಸಾಕಷ್ಟು ದಾಸ್ತಾನು ಇದೆ; ದಿನವೂ ಭರಿಸುತ್ತಿದ್ದೇವೆ: ಸರ್ಕಾರದ ಮೂಲಗಳು

ಔದ್ಯಮಿಕ ಗ್ರಾಹಕರು ಎಲ್​ಎನ್​ಜಿ ಬಿಟ್ಟು ಪರ್ಯಾಯ ಇಂಧನ ಮೂಲಗಳನ್ನು ಅವಲೋಕಿಸಲು ಸಲಹೆ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ವಾಕಿಂಗ್ ಹೋದ ಮಹಿಳೆ 25 ಅಡಿ ಗುಂಡಿಗೆ ಬಿದ್ದು ಪರದಾಟ: ಪತ್ತೆ ಮಾಡಿ ರಕ್ಷಿಸಿದ್ದೇ ರೋಚಕ!

ಬೆಂಗಳೂರು, (ಮಾರ್ಚ್ 06): ವಾಕಿಂಗ್ ಹೋಗಿದ್ದ ಮಹಿಳೆ 25 ಅಡಿ ಆಳದ ಗುಂಡಿಗೆ ಬಿದ್ದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ 56 ವರ್ಷದ ಮಹಿಳೆಯನ್ನು (Woman) ಬೆಂಗಳೂರಿನ (Bengaluru) ಚಂದ್ರಲೇಔಟ್ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. 56 ವರ್ಷದ ಮಹಿಳೆಯೊಬ್ಬರು ಇಂದು (ಮಾರ್ಚ್ 06) ವಾಕಿಂಗ್ ಹೋಗುವಾಗ ನಾಗರಭಾವಿ ಪಾರ್ಕ್ ಸಮೀಪದ ಸುಮಾರು 25 ಅಡಿ ಆಳದ ಗುಂಡಿಗೆ ಬಿದ್ದು ಮೇಲೆ ಬರಲಾಗದೇ ಒಳಗೆ ಅಪಾಯಕ್ಕೆ ಸಿಲುಕಿದ್ದರು. ಬಳಿಕ ಮಗ ತಾಯಿ ಮನೆಗೆ ಬರದಿರುವುದರಿಂದ ಆತಂಕಗೊಂಡು 112ಗೆ ಕರೆ ಮಾಡಿ ತಿಳಿಸಿದ್ದ. ಈ ಕರೆ ಬಳಿಕ ಅಲರ್ಟ್ ಆದ ಚಂದ್ರಲೇಔಟ್ ಪೊಲೀಸರು, ಮಹಿಳೆಯ ಮೊಬೈಲ್ ಲೋಕೇಷನ್ ಟ್ರೇಸ್ ಮಾಡಿ ಆಕೆಯನ್ನು ಹುಡುಕಿಕೊಂಡು ಹೋಗಿ ರಕ್ಷಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಧಾ ಪರಿಮಳ (56) ಎಂಬ ಮಹಿಳೆ ಮಾರ್ಚ್ 06ರ ಬೆಳಗಿನ ಜಾವ ನಾಗರಭಾವಿ ಪಾರ್ಕ್ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿ ಅಗೆಯಲಾಗಿದ್ದ ಸುಮಾರು 25 ಅಡಿ ಆಳದ ಬೃಹತ್ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ಗುಂಡಿ ತೀವ್ರ ಆಳವಾಗಿದ್ದರಿಂದ ಹೊರಬರಲು ಸಾಧ್ಯವಾಗದೆ ಸುಧಾ ಅವರು ಅಲ್ಲಿಯೇ ಪರದಾಡಿದ್ದಾರೆ. ಬೆಳಗಿನ ಜಾವವಾಗಿದ್ದರಿಂದ ಅಲ್ಲಿ ಜನಸಂಚಾರವೂ ವಿರಳವಾಗಿತ್ತು. ಗುಂಡಿಯೊಳಗೆ ಬಿದ್ದ ಆಘಾತದಿಂದ ಸುಧಾ ಅವರು ಅಲ್ಲೇ ಅಸ್ವಸ್ಥರಾಗಿದ್ದರು.

ಇದನ್ನೂ ಒದಿ: ಡಿಕೆ ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರಿಗೆ ಬಜೆಟ್​ನಲ್ಲಿ ಸಿದ್ದರಾಮಯ್ಯ ಭರಪೂರ ಕೊಡುಗೆ

ಇತ್ತ ಸುಧಾ ಅವರು ಸಮಯಕ್ಕೆ ಸರಿಯಾಗಿ ಮನೆಗೆ ಮರಳದಿದ್ದಾಗ ಆತಂಕಗೊಂಡ ಮಗ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಚಂದ್ರಲೇಔಟ್ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ, ಮಹಿಳೆಯ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದ್ದಾರೆ. ಆಗ ಮಹಿಳೆಯ ಮೊಬೈಲ್ ಸಿಗ್ನಲ್ ನಾಗರಭಾವಿ ಪಾರ್ಕ್ ಬಳಿ ತೋರಿಸಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದ್ದಾರೆ.

ಈ ವೇಳೆ ಪಾರ್ಕ್ ಬಳಿ ಅಗೆಯಲಾಗಿದ್ದ ಆಳವಾದ ಗುಂಡಿಯೊಳಗೆ ಮಹಿಳೆ ಅಸ್ವಸ್ಥರಾಗಿ ಬಿದ್ದಿರುವುದು ಕಂಡುಬಂದಿದ್ದು, ಕೂಡಲೇ ಪೊಲೀಸರು, ಸ್ಥಳೀಯ ಸಾರ್ವಜನಿಕರ ಸಹಾಯ ಪಡೆದ ಹರಸಾಹಸ ಪಟ್ಟು 25 ಅಡಿ ಆಳದ ಗುಂಡಿಯಿಂದ ಸುಧಾ ಅವರನ್ನು ಮೇಲೆತ್ತಿದ್ದಾರೆ. ಬಳಿಕ ಸ್ವಸ್ಥರಾಗಿದ್ದ ಸುಧಾ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರ ರೋಚಕ ಕಾರ್ಯಚರಣೆ ಕುಟುಂಬದವರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಗುಂಡಿ ಅಗೆದು ಹಾಗೆ ಬಿಟ್ಟು ಹೋಗಿರುವವರು ಯಾರು ಎನ್ನುವುದನ್ನು ಪೊಲೀಸರು ತನಿಖೆ ನಡೆಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಟಿ20 ವಿಶ್ವಕಪ್ ಫೈನಲ್

Source link

ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ; ಶಾಕಿಂಗ್ ವಿಡಿಯೋ ನೋಡಿ

ಚೆನ್ನೈ, ಮಾರ್ಚ್ 6: ತಮಿಳುನಾಡಿನಲ್ಲಿ ಪ್ರಾಣಿ ಪ್ರಿಯರನ್ನು ಆಘಾತಕ್ಕೀಡು ಮಾಡಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ನಾಯಿಗಳ (Dog Video) ಮೇಲೆ ತನ್ನ ಕೋಪವನ್ನು ಹೊರಹಾಕುವ ಭರದಲ್ಲಿ ಅವುಗಳ ಜೀವದ ಜೊತೆ ಆಟವಾಡಿದ್ದಾಳೆ. ತನ್ನ ಮನೆಯ ಮುಂದೆ ನಿಂತಿದ್ದ ಆಟೋದ ಕೆಳಗೆ ಹೋಗಿದ್ದ ಪುಟ್ಟ ನಾಯಿಮರಿಗಳನ್ನು ಎತ್ತಿ ಆಕೆ ಕಾಂಪೌಂಡ್​ ಗೋಡೆಗೆ ಬಡಿದಿದ್ದಾಳೆ. ಇದರಿಂದ ಚೀರಾಡುತ್ತಾ ಆ ನಾಯಿಮರಿಗಳು ಕೆಳಗೆ ಬಿದ್ದಿವೆ. ಇನ್ನೆರಡು ನಾಯಿಗಳನ್ನು ಕುತ್ತಿಗೆಗೆ ಹಗ್ಗ ಹಾಕಿ ನೇತು ಹಾಕಿದ್ದಾಳೆ. ಅವುಗಳಲ್ಲಿ ಎರಡು ಮರಿಗಳು ಸತ್ತುಹೋಗಿವೆ. ನಾಯಿ ಮರಿಗಳ ಮೇಲಿನ ಈ ಕ್ರೌರ್ಯವನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ಯುವತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಚಿತ್ರಕ್ಕೆ ಮಾತ್ರ ಯುದ್ಧದ ಬಿಸಿ: ‘ಧುರಂಧರ್ 2’ ಸಿನಿಮಾಗೆ ಚಿಂತೆ ಇಲ್ಲ ಯಾಕೆ?

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಭೀತಿ ಭಾರತೀಯ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ ಕನ್ನಡದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಮಾರ್ಚ್ 19ರಂದು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಅದೇ ದಿನ ರಿಲೀಸ್ ಆಗಲು ಸಜ್ಜಾಗಿರುವ ಬಾಲಿವುಡ್‌ನ ‘ಧುರಂಧರ್ 2’ ಮಾತ್ರ ಬಿಡುಗಡೆ ದಿನಾಂಕ ಬದಲಾಯಿಸಿಕೊಂಡಿಲ್ಲ. ಯಾಕೆಂದರೆ, ‘ಧುರಂಧರ್ 2’ (Dhurandhar 2) ಚಿತ್ರಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದ ಬಿಸಿ ತಟ್ಟುವುದಿಲ್ಲ.

ಬಿಡುಗಡೆಗೆ ಕೇವಲ ಎರಡು ವಾರ ಬಾಕಿ ಇರುವಾಗ ‘ಟಾಕ್ಸಿಕ್’ ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿತು. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಅನಿಶ್ಚಿತತೆ ಮೂಡಿದೆ. ಭಾರತೀಯ ಸಿನಿಮಾಗಳಿಗೆ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳು ದೊಡ್ಡ ಮಾರುಕಟ್ಟೆಯಾಗಿದ್ದು, ಅಲ್ಲಿನ ಸದ್ಯದ ಪರಿಸ್ಥಿತಿಯು ಸಿನಿಮಾದ ಕಲೆಕ್ಷನ್ ಮೇಲೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರವನ್ನು ಜೂನ್ ತಿಂಗಳಿಗೆ ಮುಂದೂಡಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಇರಾನ್ ಕೂಡ ಅಮೆರಿಕ ಮತ್ತು ಇಸ್ರೇಲ್ ನೆಲೆಗಳ ಮೇಲೆ ದಾಳಿ ಮಾಡಿದೆ. ಪ್ರಸ್ತುತ ಗಲ್ಫ್ ರಾಷ್ಟ್ರಗಳಲ್ಲಿ ವಿಮಾನ ನಿಲ್ದಾಣಗಳು ಬಂದ್ ಆಗಿದ್ದು, ಪ್ರವಾಸಿಗರನ್ನು ಸ್ಥಳಾಂತರಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂಬುದು ತಜ್ಞರ ಅಭಿಪ್ರಾಯ.

ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ‘ಟಾಕ್ಸಿಕ್’ ಹಿಂದೆ ಸರಿದಿದ್ದರೂ ‘ಧುರಂಧರ್ 2’ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಿರ್ಮಾಣ ಸಂಸ್ಥೆ ‘ಜಿಯೋ ಸ್ಟುಡಿಯೋಸ್’ ಸ್ಪಷ್ಟಪಡಿಸಿದೆ. ಇದಕ್ಕೆ ಕಾರಣ ಕೂಡ ಇದೆ. ಗಲ್ಫ್ ರಾಷ್ಟ್ರಗಳಲ್ಲಿ ‘ಧುರಂಧರ್ 2’ ಬಿಡುಗಡೆ ಆಗುತ್ತಿಲ್ಲ. ಕಳೆದ ವರ್ಷ ತೆರೆಕಂಡಿದ್ದ ‘ಧುರಂಧರ್’ ಸಿನಿಮಾದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ತಾಣ ಎಂದು ಬಿಂಬಿಸಿದ್ದರಿಂದ ಯುಎಇ, ಸೌದಿ ಅರೇಬಿಯಾ, ಖತಾರ್ ಸೇರಿದಂತೆ ಆರು ಗಲ್ಫ್ ರಾಷ್ಟ್ರಗಳು ಚಿತ್ರಕ್ಕೆ ನಿಷೇಧ ಹೇರಿದ್ದವು.

ಇದನ್ನೂ ಓದಿ: ‘ಧುರಂಧರ್ 2’ ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಶುರು ಆಗಲಿದೆ ಅಡ್ವಾನ್ಸ್ ಬುಕಿಂಗ್

ಸೀಕ್ವೆಲ್ ಮೇಲೂ ನಿಷೇಧ ಹೇರಲಾಗಿದೆ. ‘ಧುರಂಧರ್ 2’ ಕೂಡ ಮೊದಲ ಭಾಗದ ಕಥೆಯ ಮುಂದುವರಿದ ಭಾಗವಾಗಿದ್ದು, ಪಾಕಿಸ್ತಾನದ ಕುರಿತಾದ ಕಠಿಣ ನಿಲುವು ಹೊಂದಿರುವುದರಿಂದ ಇದು ಕೂಡ ಗಲ್ಫ್‌ನಲ್ಲಿ ಬಿಡುಗಡೆ ಆಗುವುದಿಲ್ಲ. ಹಾಗಾಗಿ ಅಲ್ಲಿನ ಯುದ್ಧದ ಪರಿಸ್ಥಿತಿ ಈ ಚಿತ್ರದ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ ‘ಧುರಂಧರ್ 2’ ಸಿನಿಮಾ ಯಾವುದೇ ಭೀತಿ ಇಲ್ಲದೇ ಮಾರ್ಚ್ 19ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs ENG: ದೇಶಕ್ಕಿಂತ ಆರ್​ಸಿಬಿ ತಂಡ ಮುಖ್ಯವೇ? ಆರ್​ಸಿಬಿ ಫ್ಯಾನ್ಸ್ ವಿರುದ್ಧ ಗಂಭೀರ ಆರೋಪ

2026 ರ ಟಿ20 ವಿಶ್ವಕಪ್‌ (T20 World Cup 2026) ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 7 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ (India vs England) ಫೈನಲ್​ಗೇರಿತು. ರನ್​ಗಳ ಮಳೆಯೇ ಹರಿದ ಈ ಪಂದ್ಯದಲ್ಲಿ ಬೌಲರ್​ಗಳು ಹೈರಾಣಾದರೆ ಬ್ಯಾಟ್ಸ್​ಮನ್​ಗಳು ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದರು. ಅದರಲ್ಲೂ ಕ್ರೀಡಾಂಗಣದಲ್ಲಿ ಭಾರತದ ಅಭಿಮಾನಿಗಳು ಹೆಚ್ಚಿದ್ದ ಕಾರಣ, ಟೀಂ ಇಂಡಿಯಾದ ಬ್ಯಾಟಿಂಗ್‌ ವೇಳೆ ಇಡೀ ಕ್ರೀಡಾಂಗಣವೇ ಜೈಕಾರಗಳಿಂದ ತುಂಬಿ ತುಳುಕಿತ್ತು. ಇತ್ತ ಇಂಗ್ಲೆಂಡ್ ಬ್ಯಾಟಿಂಗ್‌ ವೇಳೆ ಆಂಗ್ಲ ಆಭಿಮಾನಿಗಳು ಕಡಿಮೆ ಇದ್ದ ಕಾರಣ, ಇಂಗ್ಲೆಂಡ್ ಬ್ಯಾಟ್ಸ್‌ಮನ್​ಗಳು ಬೌಂಡರಿ, ಸಿಕ್ಸರ್ ಬಾರಿಸುತ್ತಿದ್ದಂತೆ ಇಡೀ ಕ್ರೀಡಾಂಗಣವೇ ನಿಶ್ಯಬ್ದವಾಗಿತ್ತು. ಆದಾಗ್ಯೂ ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ ವೇಳೆ ಆರ್​ಸಿಬಿ ಅಭಿಮಾನಿಗಳ (RCB Fans) ಅತಿರೇಕ ಇತರ ಅಭಿಮಾನಿಗಳನ್ನು ಅಸಮಾಧಾನಗೊಳ್ಳುವಂತೆ ಮಾಡಿತು. ಇದೀಗ ಆರ್​ಸಿಬಿ ಫ್ಯಾನ್ಸ್ ಅಂಧಾಭಿಮಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಆರ್​ಸಿಬಿ ಫ್ಯಾನ್ಸ್ ಅಂಧಾಭಿಮಾನ

ವಾಸ್ತವವಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಬರೋಬ್ಬರಿ 253 ರನ್ ಕಲೆಹಾಕಿತು. ಗುರಿ ದೊಡ್ಡದಿದ್ದರಿಂದ ಟೀಂ ಇಂಡಿಯಾ ಈ ಪಂದ್ಯವನ್ನು ಸುಲಭವಾಗಿ ಗೆದ್ದುಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಕೊನೆಯವರೆಗೂ ಸೋಲೊಪ್ಪಿಕೊಳ್ಳದ ಇಂಗ್ಲೆಂಡ್ ಆಟಗಾರರು ಪಂದ್ಯವನ್ನು ಕೊನೆಯವರೆಗೂ ರೋಚಕಗೊಳಿಸಿದರು. ಇದರಿಂದ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಕೊನೆಯ ಓವರ್​ವರೆಗೂ ಆತಂಕ ಮನೆಮಾಡಿತ್ತು. ಆದರೆ ಆರ್​ಸಿಬಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ವರ್ತಿಸಿದ ರೀತಿ ನಿಜಕ್ಕೂ ಟೀಂ ಇಂಡಿಯಾ ಅಭಿಮಾನಿಗಳನ್ನು ಬೇಸರಗೊಳಿಸಿದಲ್ಲದೆ, ಕೋಪಗೊಳ್ಳುವಂತೆ ಮಾಡಿತು.

ಅಷ್ಟಕ್ಕೂ ಆರ್​ಸಿಬಿ ಫ್ಯಾನ್ಸ್ ಮಾಡಿದ್ದಾದರೂ ಏನು ಎಂಬುದನ್ನು ನೋಡುವುದಾದರೆ… ಇಂಗ್ಲೆಂಡ್ ಪರ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ಜೆಕಬ್ ಬೆಥೆಲ್ ಸ್ಫೋಟಕ ಶತಕ ಸಿಡಿಸುವುದರ ಜೊತೆಗೆ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ಯುವ ಕೆಲಸ ಮಾಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 48 ಎಸೆತಗಳನ್ನು ಎದುರಿಸಿದ ಬೆಥೆಲ್ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಬಾರಿಸಿದರು. ಹೀಗೆ ಬೆಥೆಲ್ ಭಾರತದ ಬೌಲರ್​ಗಳನ್ನು ದಂಡಿಸುತ್ತಿದ್ದರೆ ಒಂದೆಡೆ ಟೀಂ ಇಂಡಿಯಾ ಅಭಿಮಾನಿಗಳು ಬೇಸರದಿಂದ ತಲೆಮೇಲೆ ಕೈಹೊತ್ತು ಕುಳಿತಿದ್ದರು. ಆದರೆ ಕ್ರೀಡಾಂಗಣದಲ್ಲಿದ್ದ ಕೆಲವು ಆರ್​ಸಿಬಿ ಫ್ಯಾನ್ಸ್, ಬೆಥೆಲ್ ಬೌಂಡರಿ ಸಿಕ್ಸರ್‌ಗಳನ್ನು ಬಾರಿಸುತ್ತಿದ್ದಂತೆ ಆರ್​ಸಿಬಿ, ಆರ್​ಸಿಬಿ ಎಂದು ಕೂಗಲು ಶುರು ಮಾಡುತ್ತಿದ್ದರು.

ದೇಶಕ್ಕಿಂತ ಆರ್​ಸಿಬಿ ತಂಡ ಮುಖ್ಯವೇ?

ಏಕೆಂದರೆ ಬೆಥೆಲ್ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುತ್ತಾರೆ. ಹೀಗಾಗಿ ಕೆಲವು ಆರ್​ಸಿಬಿ ಅಭಿಮಾನಿಗಳು ಬೆಥೆಲ್​, ಭಾರತದ ಬೌಲರ್​ಗಳನ್ನು ದಂಡಿಸುತ್ತಿದ್ದಾಗ ಆರ್​ಸಿಬಿ, ಆರ್​ಸಿಬಿ ಎಂದು ಕೂಗಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಇರಿಸು ಮುರಿಸು ಉಂಟುಮಾಡಿದರು. ಆರ್​ಸಿಬಿ ಅಭಿಮಾನಿಗಳ ಈ ಅತಿರೇಕ ಎಲ್ಲರನ್ನು ಅಸಮಾಧಾನಗೊಳಿಸಿದೆ. ಅಂತರರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ದೇಶವನ್ನು ಬೆಂಬಲಿಸುವ ಬದಲು ಫ್ರಾಂಚೈಸ್ ಕ್ರಿಕೆಟ್​ನಲ್ಲಿ ಒಂದು ತಂಡವನ್ನು ಪ್ರತಿನಿಧಿಸುವ ಆಟಗಾರನನ್ನು ಬೆಂಬಲಿಸುವುದು ಎಷ್ಟು ಸರಿ ಎಂಬುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

T20 World Cup 2026: ಫೈನಲ್ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ? ಐಸಿಸಿ ನಿಯಮ ಏನು ಹೇಳುತ್ತದೆ?

ಆರ್​ಸಿಬಿ ಅಭಿಮಾನಿಗಳ ಈ ಅಂಧಾಭಿಮಾನ ಸೋಶಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಟೀಂ ಇಂಡಿಯಾ ಅಭಿಮಾನಿಗಳ ಇದನ್ನು ನಾಚಿಕೆಗೇಡಿನ ಸಂಗತಿ ಎಂದು ಜರಿದಿದ್ದಾರೆ. ದೇಶದ ತಂಡವು ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡುತ್ತಿರುವಾಗ ಫ್ರಾಂಚೈಸಿ ನಿಷ್ಠೆಯನ್ನು ತೋರಿಸುವುದು ತಪ್ಪು ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ‘ಫ್ರಾಂಚೈಸಿ ಕ್ರಿಕೆಟ್​ಗಿಂತ ದೇಶವೇ ಮೊದಲು, ಐಪಿಎಲ್ ಅಲ್ಲ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಯಚೂರು: ಬೆಂಕಿ ಅವಘಡಕ್ಕೆ 700 ಕುರಿಗಳ ಸಮೇತ ಶೆಡ್ ಸುಟ್ಟು ಭಸ್ಮ; ಗರ್ಭದಲ್ಲೇ ಮರಿಗಳ ಮಾರಣ ಹೋಮ

ರಾಯಚೂರು, ಮಾರ್ಚ್​ 06: ಅದು ರಣಭೀಕರ ಅಗ್ನಿ (fire) ಅವಘಡ. ರಾತ್ರೋರಾತ್ರಿ ಕುರಿಗಳ ಶೆಡ್​ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಇಡೀ ಕುರಿ (sheep) ಶೆಡ್ ಬೆಂಕಿಗಾಹುತಿಯಾಗಿದ್ದು, ಸುಮಾರು 700 ಕುರಿಗಳು ಸುಟ್ಟು ಕರಕಲಾಗಿವೆ‌‌. ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕಬೇಕಿದ್ದ ಕುರಿಗಳು ಗರ್ಭದಲ್ಲಿರುವ ಮರಿ ಸಮೇತ ಸುಟ್ಟುಹೋಗಿವೆ. ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಕ್ಕುಂದ ಗ್ರಾಮದ ಹೊರ ಭಾಗದಲ್ಲಿ ಘಟನೆ ನಡೆದಿದೆ.

1 ಕೋಟಿ ರೂ ವೆಚ್ಚದ ಕುರಿ ಶೆಡ್ ಬೆಂಕಿಗಾಹುತಿ

ಹೇಮಲತಾ ಮಧುಸೂದನ್ ಎನ್ನುವವರು ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಕುರಿಗಳ ಶೆಡ್ ನಿರ್ಮಿಸಿದ್ದರು. ಕಳೆದ ಮೂರು ವರ್ಷಗಳಿಂದ ನೂರಾರು ಕುರಿಗಳನ್ನ ಸಾಕಾಣಿಕೆ ಮಾಡುತ್ತಿದ್ದರು. ಶೆಡ್​ನ ಬಂಡವಾಳದ ಹಣದಲ್ಲಿ ಕೇಂದ್ರ ಸರ್ಕಾರಿಂದ 47 ಲಕ್ಷ ರೂ ಸಬ್ಸಿಡಿ ಹೇಮಲತಾಗೆ ಬಂದಿತ್ತು. ಉಳಿದ ಹಣವನ್ನ ಸಾಲ ಸೋಲ‌ ಮಾಡಿ ಶೆಡ್ ನಿರ್ಮಿಸಿದ್ದರು.

ಇದನ್ನೂ ಓದಿ: ರಾಯಚೂರಿನಲ್ಲಿ ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ

ಶೆಡ್​ನಲ್ಲಿ ಸುಮಾರು 700ಕ್ಕೂ ಹೆಚ್ಚು ಕುರಿಗಳನ್ನ ಸಾಕಾಣಿಕೆ ಮಾಡಲಾಗುತ್ತಿತ್ತು. ಈ ಕುರಿಗಳನ್ನ ನೋಡಿಕೊಳ್ಳುವುದಕ್ಕೆ 6 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ‌ 2.30ರ ಸುಮಾರಿಗೆ ಕುರಿ ಶೆಡ್​ಗೆ ಬೆಂಕಿ ತಗುಲಿದೆ. ಇತ್ತ ಕಾರ್ಮಿಕರು ಗಾಢ ನಿದ್ರೆಯಲ್ಲಿದ್ದ ಹಿನ್ನೆಲೆ ತಡವಾಗಿ ವಿಷಯ ಗೊತ್ತಾಗಿದೆ. ನಂತರ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬರುವಷ್ಟರಲ್ಲಿ ದೊಡ್ಡ ದುರಂತವೇ ನಡೆದು ಹೋಗಿದೆ.

ತಡ ರಾತ್ರಿ ಘಟನೆ ಬಳಿಕ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರ ಸಹಾಯದೊಂದಿಗೆ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಘಟನೆಯಲ್ಲಿ ಇಡೀ ಕುರಿ ಶೆಡ್ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಸುಮಾರು‌ 700 ಕುರಿಗಳು ಸುಟ್ಟು ಭಸ್ಮವಾಗಿವೆ. ಈ ಪೈಕಿ 100ಕ್ಕೂ ಹೆಚ್ಚು ಕುರಿಗಳು ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕಬೇಕಿದ್ದವು.

ಸೂಕ್ತ ಪರಿಹಾರಕ್ಕೆ ಸರ್ಕಾರ ಒತ್ತಾಯ

ಇತ್ತ ಶೆಡ್​ನಲ್ಲಿ 700ಕ್ಕೂ ಹೆಚ್ಚು ಕುರಿಗಳ ಪೈಕಿ 525 ಕುರಿಗಳಿಗೆ ವಿಮೆ ಇದೆ. ಈ ಬಗ್ಗೆ ಈಗಾಗಲೇ ವಿಮೆ ಕಂಪನಿಗೂ ಮಾಹಿತಿ ನೀಡಲಾಗಿದೆ. ಘಟನೆಯಿಂದ ಸುಮಾರು 2 ಕೋಟಿ ರೂ ವರೆಗೆ ನಷ್ಟವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಅಂತ ಶೆಡ್ ಮಾಲೀಕರ ಸಂಬಂಧಿ ಪದ್ಮಾನಾಯ್ಡು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ರಾಯಚೂರು: ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸನ್ನದ್ಧ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ

ಸದ್ಯ ಘಟನೆ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಯೋಧ್ಯೆಯಲ್ಲಿ ಮತ್ತಷ್ಟು ಆಸ್ತಿ ಖರೀದಿಸಿದ ಅಮಿತಾಬ್ ಬಚ್ಚನ್: ಬೆಲೆ ಎಷ್ಟು?

ಅಮಿತಾಬ್ ಬಚ್ಚನ್ (Amitabh Bachchan) ಭಾರತದ ಲಿಜೆಂಡರಿ ನಟ, ಅವರು ಅದ್ಭುತ ನಟ ಆಗಿರುವ ಜೊತೆಗೆ ಒಳ್ಳೆಯ ಹೂಡಿಕೆದಾರ ಸಹ ಹೌದು. ಅದರಲ್ಲೂ ರಿಯಲ್ ಎಸ್ಟೇಟ್, ಅಮಿತಾಬ್ ಬಚ್ಚನ್ ಅವರ ಬಹಳ ಮೆಚ್ಚಿನ ಹೂಡಿಕೆ. ಅಮಿತಾಬ್ ಬಚ್ಚನ್ ಅವರು ಮುಂಬೈ, ಪುಣೆ, ಅಹಮದಾಬಾದ್ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳಲ್ಲಿ ಹೂಡಿಕೆ ಮಾಡಿರುವ ಜೊತೆಗೆ ತಮ್ಮ ಮಕ್ಕಳಿಗೂ ಹೂಡಿಕೆಯ ಪಾಠ ಹೇಳಿಕೊಟ್ಟಿದ್ದಾರೆ. ಈಗಲೂ ಸಹ ವರ್ಷಕ್ಕೆ ಒಂದು ಅಥವಾ ಎರಡು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಮೇಲೆ ಬಚ್ಚನ್ ಹೂಡಿಕೆ ಮಾಡುತ್ತಲೇ ಇರುತ್ತಾರೆ. ಇದೀಗ ಅವರು ಅಯೋಧ್ಯೆಯಲ್ಲಿ ತಮ್ಮ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

‘ಹೌಸ್ ಆಫ್ ಅಭಿನಂದನ್ ಲೋಧಾ’ ಸಂಸ್ಥೆಯಿಂದ ಕೆಲ ವರ್ಷಗಳ ಹಿಂದೆಯೇ ಅಮಿತಾಬ್ ಬಚ್ಚನ್ ಅವರು ಆಸ್ತಿ ಖರೀದಿ ಮಾಡಿದ್ದರು. ಈ ವಿಷಯವನ್ನು ಕಳೆದ ವರ್ಷ ರಿಯಲ್ ಎಸ್ಟೇಟ್​​ ಉದ್ಯಮದ ಪ್ರಮುಖ ಸಂಸ್ಥೆಯಾಗಿರುವ ಲೋಧಾದ ಮುಖ್ಯಸ್ಥರು ಹೇಳಿಕೊಂಡಿದ್ದರು. ತಾವು ಅಯೋಧ್ಯೆಗೆ ಭೇಟಿ ನೀಡುವ ಮುಂಚೆ ಅದರ ನಾಗರೀಕರಾಗಬೇಕು ಎಂಬ ಆಸೆಯಿಂದ ತಾವು ಅಲ್ಲಿ ಜಮೀನು ಖರೀದಿ ಮಾಡಿದ್ದರು. ಇದೀಗ ಆ ಹೂಡಿಕೆಯನ್ನು ಅಮಿತಾಬ್ ಬಚ್ಚನ್ ಅವರು ಮತ್ತಷ್ಟು ವಿಸ್ತರಣೆ ಮಾಡಿದ್ದಾರೆ. ಅಯೋಧ್ಯೆಯ ರಾಮ ಮಂದಿರದ ಸಮೀಪ 2.67 ಎಕರೆ ಭೂಮಿಯನ್ನು 35 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ.

ಇದು ಅಯೋಧ್ಯೆಯಲ್ಲಿ ಅವರ ನಾಲ್ಕನೇ ಹೂಡಿಕೆ ಎನ್ನಲಾಗುತ್ತಿದೆ. ಈ ಪ್ರದೇಶದ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅಯೋಧ್ಯೆ ಭಾರತದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ರಾಮ ಮಂದಿರ ಈಗಾಗಲೇ ಉದ್ಘಾಟನೆಗೊಂಡಿದೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯೂ ಏರುತ್ತಲೇ ಇದೆ. ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳ ಕಾರ್ಯವೂ ಹೆಚ್ಚುತ್ತಿದೆ ಹಾಗಾಗಿ ಬಚ್ಚನ್ ಅವರು ಇಲ್ಲಿ ಹೂಡಿಕೆ ಹೆಚ್ಚಿಸಿಕೊಂಡಿದ್ದಾರೆ.

ಇದನ್ನೂ ಓದಿ:ಅಮಿತಾಬ್ ಬಚ್ಚನ್ ಹೂಡಿಕೆ ಮಾಡುವ ವಿಧಾನ ತಿಳಿಸಿದ ಅಭಿಷೇಕ್ ಬಚ್ಚನ್

ಅಮಿತಾಬ್ ಬಚ್ಚನ್ ಅವರು ದೇಶ ಮತ್ತು ವಿದೇಶಗಳಲ್ಲಿಯೂ ಹಲವು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳನ್ನು ಹೊಂದಿದ್ದಾರೆ. ಮುಂಬೈನ ಜುಹುನಲ್ಲಿರುವ ಅವರ ಪ್ರಮುಖ ನಿವಾಸ ಜಲ್ಸಾ. ಇದರ ಮೌಲ್ಯ ಸುಮಾರು 200 ಕೋಟಿ ರೂಪಾಯಿ ಆಗಿರಬಹುದು. ಮುಂಬೈನ ಪ್ರತೀಕ್ಷಾ ಇದು ಅವರ ಮೊದಲ ಬಂಗಲೆ, ಭಾವನಾತ್ಮಕವಾಗಿ ಅವರಿಗೆ ಬಹಳ ಹತ್ತಿರವಾದುದು. ಇದನ್ನು ಇತ್ತೀಚೆಗೆ ಮಗಳು ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅದರ ಮೌಲ್ಯವೂ ಸಹ ಸುಮಾರು 200 ಕೋಟಿ ರೂಪಾಯಿಗಳಿರಬಹುದು.

ಇವುಗಳ ಹೊರತಾಗಿ ಮುಂಬೈನಲ್ಲಿಯೇ ಜನಕ್ ಹೆಸರಿನ ಪ್ರಾಪರ್ಟಿ ಬಚ್ಚನ್ ಅವರಿಗಿದ್ದು ಅವರ ಕುಟುಂಬದ ಕಚೇರಿಯಾಗಿ ಕಾರ್ಯನಿರ್ವಹಿಸುವ ಈ ಬಂಗಲೆ ಜಲ್ಸಾ ಸಮೀಪದಲ್ಲಿದೆ. ವತ್ಸ ಹೆಸರಿನ ಪ್ರಾಪರ್ಟಿ ಜುಹುನಲ್ಲಿರುವ ಮತ್ತೊಂದು ಆಸ್ತಿ, ಇದನ್ನು ಬ್ಯಾಂಕ್‌ಗೆ ಬಾಡಿಗೆಗೆ ನೀಡಲಾಗಿದೆ. ಅಲಿಬಾಗ್ ನಲ್ಲಿ ಸಹ ಆಸ್ತಿ ಹೊಂದಿದ್ದಾರೆ. ಅಲ್ಲದೆ ಕೆಲವು ಐಶಾರಾಮಿ ಅಪಾರ್ಟ್​​​ಮೆಂಟ್​​ಗಳಲ್ಲಿ ಫ್ಲ್ಯಾಟ್​​ಗಳನ್ನು ಸಹ ಖರೀದಿ ಮಾಡಿ ಬಾಡಿಗೆಗೆ ಬಿಟ್ಟಿದ್ದಾರೆ. ದುಬೈನ ಎಮಿರೇಟ್ಸ್ ಹಿಲ್ಸ್‌ನಲ್ಲಿ ಐಷಾರಾಮಿ ವಿಲ್ಲಾ ಮತ್ತು ಪ್ಯಾರಿಸ್‌ನಲ್ಲಿ ಒಂದು ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಇತ್ತೀಚಿಗೆ ಸಹ ಮುಂಬೈನ ಮುಲುಂಡ್‌ನಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ 10 ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ.

ಅಮಿತಾಭ್ ಮತ್ತು ಜಯಾ ಬಚ್ಚನ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 1,578 ಕೋಟಿ ರೂಪಾಯಿಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಅಮಿತಾಭ್ ಬಚ್ಚನ್ ಅವರು ಸುಮಾರು 350 ಕೋಟಿ ರೂ ಆದಾಯ ಗಳಿಸಿದ್ದು, 120 ಕೋಟಿ ರೂ. ತೆರಿಗೆ ಪಾವತಿಸುವ ಮೂಲಕ ಭಾರತದ ಅತಿ ಹೆಚ್ಚು ತೆರಿಗೆ ಪಾವತಿಸುವ ನಟರಾಗಿದ್ದಾರೆ. ಬಚ್ಚನ್ ಅವರ ಬಳಿ ಬೆಂಟ್ಲಿ, ರೇಂಜ್ ರೋವರ್ ಮತ್ತು ಮರ್ಸಿಡಿಸ್ ಬೆಂಜ್ ಸೇರಿದಂತೆ ಸುಮಾರು 16ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version