ಉಜ್ವಲ ಗ್ಯಾಸ್ ಯೋಜನೆಯಲ್ಲಿ ಸಬ್ಸಿಡಿಯುಕ್ತ ಸಿಲಿಂಡರ್ ಸಂಖ್ಯೆ ಕಡಿಮೆ ಮಾಡಲು ನಿಜವಾದ ಕಾರಣ ಇದಾ? – Kannada News

ನವದೆಹಲಿ, ಜೂನ್ 9: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY- PM Ujjwala Yojana) ಅಡಿಯಲ್ಲಿ ಫಲಾನುಭವಿಗಳಿಗೆ ಸಿಗುತ್ತಿದ್ದ ಸಬ್ಸಿಡಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಸಂಖ್ಯೆಯನ್ನು ಕಡಿತಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪ್ರಬಲ ಕಾರಣವೊಂದು ಇದೆ ಎಂದು ಹೇಳಲಾಗುತ್ತಿದೆ. ಬಡವರಿಗೆಂದು ಇರುವ ಈ ಸ್ಕೀಮ್ ಅನ್ನು ಕೆಲ ದುರುಳರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಎನ್​ಎನ್ ನ್ಯೂಸ್18 ವಾಹಿನಿ ವರದಿ ಮಾಡಿದೆ. ಪಿಎಂ ಉಜ್ವಲ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಿಗುತ್ತಿದ್ದ ಸಬ್ಸಿಡಿಯುಕ್ತ ಸಿಲಿಂಡರ್​ಗಳ ಸಂಖ್ಯೆಯನ್ನು 9ರಿಂದ 4ಕ್ಕೆ ಇಳಿಸಲಾಗಿದೆ.

ದುರುಪಯೋಗ ಮತ್ತು ಅಕ್ರಮ ನಿಯಂತ್ರಣ: ಉಜ್ವಲ ಯೋಜನೆಯಡಿ ಸಿಗುವ ಸಬ್ಸಿಡಿ ಸಿಲಿಂಡರ್‌ಗಳನ್ನು ಕೆಲವು ವಂಚಕರು ವಾಣಿಜ್ಯ (Commercial) ಉದ್ದೇಶಗಳಿಗಾಗಿ ಅಕ್ರಮವಾಗಿ ಬೇರೆಡೆಗೆ ಸಾಗಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಫಲಾನುಭವಿಗಳ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ವರ್ಷಕ್ಕೆ 9 ಸಿಲಿಂಡರ್‌ಗಳನ್ನು ಪಡೆದು, ಅವುಗಳನ್ನು ಹೊರಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆಯನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಉಜ್ವಲ ಯೋಜನೆಯ ಗ್ರಾಹಕರು ವರ್ಷಕ್ಕೆ ಬಳಸುವ ಸಿಲಿಂಡರ್‌ಗಳ ಸರಾಸರಿ ಸಂಖ್ಯೆ 4 ಆಗಿದೆ. ಹೀಗಾಗಿ, ನೈಜ ಬಳಕೆಯ ಆಧಾರದ ಮೇಲೆಯೇ ಈ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೆಚ್ಚುವರಿ ಸಿಲಿಂಡರ್ ಖರೀದಿಗೆ ಮುಕ್ತ ಅವಕಾಶ

ಉಜ್ವಲ ಯೋಜನೆ ಅಡಿ ಸಬ್ಸಿಡಿಯುಕ್ತ ಸಿಲಿಂಡರ್​ಗಳ ಸಂಖ್ಯೆಯನ್ನು 4ಕ್ಕೆ ಮಿತಿಗೊಳಿಸಿರುವ ನಿಯಮದಿಂದ ಗ್ರಾಹಕರಿಗೆ ಸಿಲಿಂಡರ್ ಲಭ್ಯತೆಯಲ್ಲಿ ವ್ಯತ್ಯಯ ಆಗುವುದಿಲ್ಲ. ಯೋಜನೆಯ ಫಲಾನುಭವಿಗಳು ಅಗತ್ಯ ಇದ್ದಲ್ಲಿ ಹೆಚ್ಚು ಸಿಲಿಂಡರ್​ಗಳನ್ನು ಪಡೆಯಲು ಅವಕಾಶ ಇರುತ್ತದೆ. ಅದರಲ್ಲಿ ಯಾವುದೆ ನಿರ್ಬಂಧ ಇರುವುದಿಲ್ಲ.

ಗ್ರಾಹಕರು ಎಷ್ಟು ಬೇಕಾದರೂ ಸಿಲಿಂಡರ್ ಖರೀದಿಸಬಹುದಾದರೂ, ಅವರ ಬ್ಯಾಂಕ್ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣವು ಕೇವಲ ಮೊದಲ 4 ಸಿಲಿಂಡರ್‌ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅದಕ್ಕಿಂತ ಹೆಚ್ಚು ಖರೀದಿಸುವ ಸಿಲಿಂಡರ್‌ಗಳಿಗೆ ಪೂರ್ಣ ಮಾರುಕಟ್ಟೆ ಬೆಲೆಯನ್ನು ತೆರಬೇಕಾಗುತ್ತದೆ.

ಇದನ್ನೂ ಓದಿ: Ujjwala Yojana: ಉಜ್ವಲ ಫಲಾನುಭವಿಗಳಿಗೆ ಶಾಕ್, 9 ಅಲ್ಲ, ಇನ್ಮುಂದೆ ಸಿಗಲಿದೆ ನಾಲ್ಕೇ ನಾಲ್ಕು ಸಿಲಿಂಡರ್​ಗಳು

ಒಟ್ಟಾರೆಯಾಗಿ, ಸಬ್ಸಿಡಿ ವ್ಯವಸ್ಥೆಯಲ್ಲಿನ ಸೋರಿಕೆಯನ್ನು (Leakage) ತಡೆದು, ಸರ್ಕಾರದ ಹಣ ದುರುಪಯೋಗವಾಗದಂತೆ ತಡೆಯುವುದು ಮತ್ತು ನಿಜವಾದ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪುವಂತೆ ಮಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಕಲಿ ಜಡ್ಜ್, ನಕಲಿ ಕೋರ್ಟ್ ಸೃಷ್ಟಿಸಿ ಬಾಗಲಕೋಟೆಯ ಸರ್ಕಾರಿ ನೌಕರನಿಗೆ 83 ಲಕ್ಷ ರೂ. ಟೋಪಿ ಹಾಕಿದ ಸೈಬರ್ ವಂಚಕರು – Kannada News

ಬಾಗಲಕೋಟೆ, ಜೂ.9: ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಸೈಬರ್​ ವಂಚನೆಗಳು ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಒಂದಲ್ಲ ಒಂದು ಇಂತಹ ಸೈಬರ್​​​​ ವಂಚನೆ ಪ್ರಕರಣಗಳು ಕಂಡು ಬರುತ್ತಿದೆ. ಬೇರೆ ಬೇರೆ ವೇಷದಲ್ಲಿ ಬಂದು ಜನರಿಂದ ಹಣ-ಸಂಪತ್ತುಗಳನ್ನು ದೋಚುತ್ತಿದ್ದಾರೆ. ದೇಶಾದ್ಯಂತ ಸಾರ್ವಜನಿಕರನ್ನು ನಡುಗಿಸುತ್ತಿರುವ ‘ಡಿಜಿಟಲ್ ಅರೆಸ್ಟ್’ ಮತ್ತು ಸೈಬರ್ ವಂಚನೆಯ ಬಲೆಗೆ ಈಗ ಬಾಗಲಕೋಟೆಯ ಹಿರಿಯ ಸರ್ಕಾರಿ ನೌಕರರೊಬ್ಬರು ಬಲಿಯಾಗಿದ್ದಾರೆ. ನಕಲಿ ಪೊಲೀಸ್ ಠಾಣೆ, ನಕಲಿ ವಕೀಲರು ಹಾಗೂ ನಕಲಿ ಜಡ್ಜ್ ಸೃಷ್ಟಿಸಿ ಬೆದರಿಕೆ ಹಾಕಿದ ವಂಚಕರ ಗ್ಯಾಂಗ್, ಅವರಿಂದ ಬರೋಬ್ಬರಿ 83,22,000 ರೂಪಾಯಿ (83.22 ಲಕ್ಷ ರೂ.) ಸುಲಿಗೆ ಮಾಡಿದೆ. ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಯೋಜನೆ (UKP) ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಚೇರಿಯ ಹಿರಿಯ ಟೈಪಿಸ್ಟ್‌ (Senior Typist) ಹೆಚ್.ವಿ. ಸುರೇಶ್ ರಾವ್ (59) ವಂಚನೆಗೊಳಗಾದ ವ್ಯಕ್ತಿ ಎಂದು ಹೇಳಲಾಗಿದೆ . ಈ ಸಂಬಂಧ ಬಾಗಲಕೋಟೆ ಸಿಇಎನ್ (CEN) ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶ್ ರಾವ್ ಅವರಿಗೆ ವಂಚಕರ ಗ್ಯಾಂಗ್ ವಿವಿಧ ನಂಬರ್‌ಗಳಿಂದ ಕರೆ ಮಾಡಿ, ತಾವು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಇಲಾಖೆಯಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದರು. “ನಿಮ್ಮ ಆಧಾರ್ ಕಾರ್ಡ್ ಬಳಸಿ ಖರೀದಿಸಲಾದ ಸಿಮ್ ಕಾರ್ಡ್ ಒಂದರಿಂದ ಸಾರ್ವಜನಿಕರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಮುಂಬೈ ಕ್ರೈಂ ಬ್ರ್ಯಾಂಚ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ” ಎಂದು ಹೆದರಿಸಿದ್ದರು.

ವಂಚಕರು ಕೇವಲ ಆಡಿಯೋ ಕರೆಯಲ್ಲಿ ಬೆದರಿಸದೆ, ಸುರೇಶ್ ರಾವ್ ಅವರಿಗೆ ವಿಡಿಯೋ ಕಾಲ್ ಮಾಡಿದ್ದರು. ಇನ್ನು ವಂಚಕರು ಮೋಸ ಮಾಡಲು ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದರು. ವಿಡಿಯೋದಲ್ಲಿ ಅಸಲಿ ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಸೆಟ್‌ಅಪ್‌ ಮಾದರಿಯನ್ನೇ ಸೃಷ್ಟಿಸಲಾಗಿತ್ತು. ಪೊಲೀಸರು, ವಕೀಲರು ಮತ್ತು ನ್ಯಾಯಾಧೀಶರ ವೇಷ ಧರಿಸಿದ್ದ ನಕಲಿ ಗ್ಯಾಂಗ್, ವಿಡಿಯೋ ಕಾಲ್ ಮೂಲಕ ಸುರೇಶ್ ರಾವ್ ಮತ್ತು ಅವರ ಕುಟುಂಬಸ್ಥರನ್ನು ವರ್ಚುಯಲ್ ವಿಚಾರಣೆಯ ನಾಟಕವಾಡಿ ತೀವ್ರ ಆತಂಕ ಸೃಷ್ಟಿಸಿತ್ತು. ಖ್ಯಾತ ಉದ್ಯಮಿ ನರೇಶ್ ಗೋಯಲ್ ಹಣ ಅಕ್ರಮ ವರ್ಗಾವಣೆ ಕೇಸ್‌ನಲ್ಲಿ ನಿಮ್ಮ ಮುಂಬೈನ ಕೆನರಾ ಬ್ಯಾಂಕ್ ಖಾತೆಗೆ ಹಣ ಬಂದಿದೆ. ಐಪಿಎಸ್ ಅಧಿಕಾರಿ ಬಾಲ್ ಸಿಂಗ್ ರಜಪೂತ್ ನಿರ್ದೇಶನದ ಮೇರೆಗೆ ನಾವು ತನಿಖೆ ಮಾಡುತ್ತಿದ್ದೇವೆ. ಅರೆಸ್ಟ್ ಆಗುವುದರಿಂದ ತಪ್ಪಿಸಿಕೊಳ್ಳಬೇಕಾದರೆ ಹಣ ನೀಡಬೇಕು ಎಂದು ಹೆದರಿಸಿದ್ದರು.

ಇದನ್ನೂ ಓದಿ: ‘ಶ್ರೀರಾಮ ದಶರಥನ ಮಗ ಅಲ್ಲ’: ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರೊ. ಭಗವಾನ್

ಈ ಕೇಸ್​​​​​​ ಕೈಬಿಡಲು ಮತ್ತು ಎಫ್‌ಐಆರ್ ರದ್ದುಪಡಿಸಲು ಮೊದಲ ಹಂತವಾಗಿ ಮಾರ್ಚ್ 18 ರಿಂದ ಏಪ್ರಿಲ್ 15 ರವರೆಗೆ ಐಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಖಾತೆಗಳ ಮೂಲಕ ಹಂತ ಹಂತವಾಗಿ 45 ಲಕ್ಷದ 22 ಸಾವಿರ ರೂಪಾಯಿಗಳನ್ನು ಹಾಕಿಸಿಕೊಂಡಿದ್ದರು. ಇದಾದ ಬಳಿಕ ಪ್ರಕರಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ಲಿಯರ್ ಮಾಡಲು ಕ್ರಿಪ್ಟೋ ಕರೆನ್ಸಿ ಖರೀದಿಸಿ ಅಮೆರಿಕನ್ ಡಾಲರ್‌ಗೆ ಕನ್ವರ್ಟ್ ಮಾಡಬೇಕು ಎಂದು ನಂಬಿಸಿದ್ದರು. ಇದನ್ನು ನಂಬಿದ ನೌಕರ ಸುರೇಶ್ ರಾವ್, ಫೆಬ್ರವರಿಯಿಂದ ಏಪ್ರಿಲ್ ಅವಧಿಯಲ್ಲಿ ಬೆಳಗಾವಿ ಮೂಲದ ಶಂಕರ್ ಶಿಂಧೆ ಎಂಬುವವರಿಂದ 38 ಲಕ್ಷ ರೂಪಾಯಿ ಮೌಲ್ಯದ ಯುಎಸ್‌ಡಿಟಿ ಡಾಲರ್ ಖರೀದಿಸಿ ವಂಚಕರ ಖಾತೆಗೆ ವರ್ಗಾಯಿಸಿದ್ದರು.

ಹಣ ಕಳೆದುಕೊಂಡು ಸಂಪೂರ್ಣ ದಾರಿ ಕಾಣದಾದಾಗ ತಮಗೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚನೆಯಾಗಿರುವುದು ಸುರೇಶ್ ರಾವ್ ಅವರಿಗೆ ಅರಿವಾಗಿದೆ. ಈ ಕುರಿತು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಸಿದ್ದಾರ್ಥ್ ಗೋಯಲ್ ಮಾಹಿತಿ ನೀಡಿದ್ದು, ಸಿಇಎನ್ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಈ ಬಗ್ಗೆ ಸಾರ್ವಜನಿಕವಾಗಿ ಎಲ್ಲರಿಗೂ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಳೆದ 12 ವರ್ಷದಲ್ಲಿ ಐಟಿ ಮೊದಲಾದ ಸೆಕ್ಟರ್​ಗಳಲ್ಲಿ ಭಾರತದ ರಫ್ತು ಗಣನೀಯ ಏರಿಕೆ: ದರ್ಪಣ್ ಜೈನ್ – Kannada News

ಬೆಂಗಳೂರು, ಜೂನ್ 9: ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಉಪಕರಣ, ಮಸಾಲೆ ಪದಾರ್ಥ, ಔಷಧ ಹಾಗು ಇನ್ನೂ ಬೇರೆ ಬೇರೆ ಸೆಕ್ಟರ್​ಗಳಲ್ಲಿ ಭಾರತದ ರಫ್ತು ಕಳೆದ 12 ವರ್ಷದಲ್ಲಿ ಗಣನೀಯವಾಗಿ ಹೆಚ್ಚಳ ಆಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲದಯ ಹೆಚ್ಚುವರಿ ಕಾರ್ಯದರ್ಶಿ ದರ್ಪಣ್ ಜೈನ್ (Darpan Jain) ಹೇಳಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಮುಕ್ತ ವ್ಯಾಪಾರ ಒಪ್ಪಂದಗಳ ದೆಸೆಯಿಂದ ಭಾರತದ ಮಾರುಕಟ್ಟೆ ಮತ್ತಷ್ಟು ವಿಸ್ತರಣೆ ಆಗಿರುವ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಕಳೆದ 12 ವರ್ಷದ ಅವಧಿಯಲ್ಲಿ (2014ರಿಂದ) ದೇಶ ಕಂಡ ಅಭ್ಯುದಯದ ಕುರಿತಾಗಿ ವಿವಿಧೆಡೆ ವಿಚಾರ ಗೋಷ್ಠಿಗಳು, ಸಂವಾದಗಳು ನಡೆಯುತ್ತಿದ್ದು, ಅದರ ಭಾಗವಾಗಿ ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ‘ಮುಕ್ತ ವ್ಯಾಪಾರ ಒಪ್ಪಂದಗಳು ಮತ್ತು ಐಟಿ ಸೆಕ್ಟರ್​ನಲ್ಲಿ ಭಾರತದ 12 ವರ್ಷಗಳ ಪ್ರಗತಿ’ ವಿಚಾರದ ಬಗ್ಗೆ ಈ ಸಂವಾದ ನಡೆಯಿತು. ವಾಣಿಜ್ಯ ಸಚಿವಾಲಯದ ನಿರ್ದೇಶಕ ಅನೂಪಾ ಎಸ್ ನಾಯರ್ ಅವರು ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

ಹಿರಿಯ ಐಎಎಸ್ ಅಧಿಕಾರಿಯಾದ ದರ್ಪಣ್ ಜೈನ್ ಅವರು ಭಾರತ ಮತ್ತು ಅಮೆರಿಕ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುದುರಿಸಲು ಸಂಧಾನದಲ್ಲಿರುವ ಭಾರತೀಯ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಕರ್ನಾಟಕ ಕೇಡರ್​ನ ಐಎಎಸ್ ಅಧಿಕಾರಿಯಾದ ಇವರು ಭಾರತದ ಮುಖ್ಯ ಸಂಧಾನಕಾರರೂ ಹೌದು.

ಪಿಐಬಿ ಬೆಂಗಳೂರಿನ ಟ್ವೀಟ್

12 ವರ್ಷಗಳ ಸಾಧನೆಯ ಹೈಲೈಟ್ಸ್

  1. ಒಂಬತ್ತು ಮುಕ್ತ ವ್ಯಾಪಾರ ಒಪ್ಪಂದಗಳು
  2. ಸುಲಭ ವ್ಯಾಪಾರ ವಾತಾವರಣದಲ್ಲಿ ವಿಶ್ವಬ್ಯಾಂಕ್ ರಾಂಕಿಂಗ್ ಪಟ್ಟಿಯಲ್ಲಿ ಭಾರತ 79ನೇ ಸ್ಥಾನಕ್ಕೆ ಏರಿಕೆ.
  3. 47,000 ಕಾನೂನು ನಿಯಮಗಳ ಸರಳೀಕರಣ
  4. 9,000ಕ್ಕೂ ಅಧಿಕ ಆರ್​ಬಿಐ ಸುತ್ತೋಲೆಗಳನ್ನು 244 ನಿರ್ದೇಶನಗಳಾಗಿ ಸರಳೀಕರಣಗೊಳಿಸಲಾಗಿರುವುದು.
  5. 4,623 ಕಾನೂನುಗಳನ್ನು ಅಪರಾಧಮುಕ್ತಗೊಳಿಸಲಾಗಿದೆ. 4,270 ಕಾನೂನುಗಳನ್ನು ಅಂತ್ಯಗೊಳಿಸಲಾಗಿದೆ.
  6. ಬ್ರಾಪ್ 2026 ಅಡಿಯಲ್ಲಿ 9,700ಕ್ಕೂ ಅಧಿಕ ಸುಧಾರಣೆಗಳು ಜಾರಿ
  7. ದಿವಾಳಿ ಕಾನೂನು ಅಡಿ 4 ಲಕ್ಷ ಕೋಟಿ ರೂ ವಸೂಲಿ
  8. ‘ಪ್ರಗತಿ’ ಮೂಲಕ 85 ಲಕ್ಷ ಕೋಟಿ ರೂ ಮೌಲ್ಯದ ಯೋಜನೆಗಳ ಶೀಘ್ರ ವಿಲೇವಾರಿ.
  9. 29 ಕಾರ್ಮಿಕ ಕಾನೂನುಗಳನ್ನು 4 ಕಾರ್ಮಿಕ ಸಂಹಿತೆಯಾಗಿ ವರ್ಗೀಕರಣ
  10. 2014ರಿಂದ 2025ರವರೆಗೆ 748 ಬಿಲಿಯನ್ ಡಾಲರ್​ಗೂ ಅಧಿಕ ಎಫ್​ಡಿಐ ಹೂಡಿಕೆ ಒಳಹರಿವು
  11. ಸ್ಟಾರ್ಟಪ್​ಗಳ ಲಾಭಗಳಿಗೆ ಶೇ. 100ರಷ್ಟು ತೆರಿಗೆ ಕಡಿತ
  12. ಸರ್ಕಾರಿ ಇಮಾರ್ಕೆಟ್ ಪ್ಲೇಸ್​ನ ಪೋರ್ಟಲ್​ನಲ್ಲಿ (GeM Portal- Govt eMarketPlace) ಬಿಕರಿಯಾದ ಒಟ್ಟು ಸರಕು ಮೌಲ್ಯ (GMV- Gross Merchandise Value) 18.42 ಲಕ್ಷ ಕೋಟಿ ರೂಗೂ ಅಧಿಕ.

ಇದನ್ನೂ ಓದಿ: ಹೊಸ DL, ವಾಹನ ನಿಯಮ: ಪರವಾನಗಿ ಅವಧಿ ವಿಸ್ತರಣೆ, ಆನ್​ಲೈನ್​ನಲ್ಲೇ ವಾಹನ ಮಾಲಕತ್ವ ವರ್ಗಾವಣೆ
ಕಿರಣ್ ರಿಜಿಜು ಅವರ ಎಕ್ಸ್ ಪೋಸ್ಟ್

12 ವರ್ಷಗಳ ಸೇವೆಯ ಮತ್ತಷ್ಟು ಹೈಲೈಟ್ಸ್

  • ಭಾರತ 2024ರಲ್ಲಿ ಟ್ರಚೋಮಾ ಮುಕ್ತ ದೇಶವೆಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣೀಕರಣ ಪಡೆಯಿತು. ಈ ಸಾಧನೆ ಮಾಡಿದ ಮೂರನೇ ಏಷ್ಯನ್ ದೇಶವೆನಿಸಿದೆ. ಟ್ರಚೋಮಾ ಎಂಬುದು ಕುರುಡುತನ ತರಬಲ್ಲಂತಹ ಅಪಾಯಕಾಗಿ ಬ್ಯಾಕ್ಟೀರಿಯಾ ಸೋಂಕು. ಸ್ವಚ್ಛತೆ ಇಲ್ಲದ ಪರಿಸರದಲ್ಲಿ ಈ ಸೋಂಕು ಹೆಚ್ಚಿರುತ್ತದೆ. ಭಾರತ ಈ ಸೋಂಕಿನಿಂದ ಮುಕ್ತಗೊಂಡಿರುವುದು ಗಮನಾರ್ಹ ಸಾಧನೆ.
  • ಉಜ್ವಲ ಯೋಜನೆ ಅಡಿ 10 ಕೋಟಿಗೂ ಅಧಿಕ ಕುಟುಂಬಗಳು ಎಲ್​ಪಿಜಿ ಸೌಲಭ್ಯ ಪಡೆದಿವೆ. ಕಟ್ಟಿಗೆ ಒಲೆಗಳಿಂದ ಮುಕ್ತರಾಗಿದ್ದಾರೆ.
  • 12 ವರ್ಷದಲ್ಲಿ 12 ಕೋಟಿಗೂ ಅಧಿಕ ಶೌಚಾಲಯಗಳ ನಿರ್ಮಾಣವಾಗಿದೆ.
  • ಚಿಮಣಿ ದೀಪಗಳನ್ನು ಬಳಸುತ್ತಿದ್ದ ಮನೆಗಳಿಗೆ ವಿದ್ಯುತ್ ದೀಪ ಬೆಳಗುತ್ತಿದೆ. ಸೌಭಾಗ್ಯ ಯೋಜನೆ ಅಡಿ ಹತ್ತಿರಹತ್ತಿರ ಮೂರು ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ.
  • ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಡೈರೆಕ್ಟ್ ಬೆನಿಫಿಶಿಯರಿ ಟ್ರಾನ್ಸ್​ಫರ್ ಮೂಲಕ ನೇರವಾಗಿ ಅಕೌಂಟ್​ಗೆ ವರ್ಗಾವಣೆ ಆಗಿರುವ ಹಣ ಬರೋಬ್ಬರಿ 50 ಲಕ್ಷ ಕೋಟಿ ರೂಗೂ ಅಧಿಕ.
  • ಕಿಲೋಮೀಟರ್​ಗಟ್ಟಲೆ ನಡೆದು ಹೋಗಿ ನೀರು ತರಬೇಕಾದ ಸ್ಥಿತಿ ಇದ್ದ ಮನೆಗಳಿಗೆ ಈಗ ನೇರವಾಗಿ ನಲ್ಲಿ ಭಾಗ್ಯ ಸಿಗುತ್ತದೆ. 15 ಕೋಟಿಗೂ ಅಧಿಕ ಗ್ರಾಮೀಣ ಮನೆಗಳಿಗೆ ಕೊಳವೆ ನೀರಿನ ಸಂಪರ್ಕ ಕೊಡಲಾಗಿದೆ.
  • ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ, ಪ್ರತ್ಯೇಕತೆಯ ಕೂಗಿಗೆ ಆಹಾರವಾಗುತ್ತಿದ್ದ ಆರ್ಟಿಲ್ 370 ಅನ್ನು ರದ್ದುಗೊಳಿಸಲಾಯಿತು. ಇದರಿಂದ ಕಣಿವೆ ರಾಜ್ಯ ದೇಶದ ಮುಖ್ಯವಾಹಿನಿಯೊಂದಿಗೆ ಮಿಳಿತಗೊಳ್ಳಲು ಸಾಧ್ಯವಾಗಿದೆ.
  • ಕುನೋ ನ್ಯಾಷನಲ್ ಪಾರ್ಕ್​ಗೆ ಚೀತಾಗಳನ್ನು ತಂದು ಬಿಡಲಾಗಿದೆ. ಇದರೊಂದಿಗೆ ಭಾರತಕ್ಕೆ ಚೀತಾ 70 ವರ್ಷದ ನಂತರ ಮರಳಿದಂತಾಗಿದೆ.
  • ಪಿಎಂ ಸೂರ್ಯಘರ್ ಯೋಜನೆ ಅಡಿ ಇಲ್ಲಿಯವರೆಗೆ 35 ಲಕ್ಷಕ್ಕೂ ಅಧಿಕ ಮನೆಗಳಿಗೆ ಮೇಲ್ಛಾವಣಿ ಸೌರವಿದ್ಯುತ್ ಘಟಕ ಅಳವಡಿಸಲಾಗಿದೆ. ಒಟ್ಟು 10.7 ಗಿಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಈ ಮನೆಗಳಿಗೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನೆಹರೂ ಅವರಿಂದ ಮೋದಿವರೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಮಹಿಳೆಯರ ಪಾತ್ರ ಹೇಗೆಲ್ಲ ಬದಲಾಯ್ತು? – Kannada News

ನವದೆಹಲಿ, ಜೂನ್ 9: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ನಾಳೆ (ಜೂನ್ 10) ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 4,398 ದಿನಗಳ ದಾಖಲೆಯನ್ನು ಪ್ರಧಾನಿಯಾಗಿ ಹಿಂದಿಕ್ಕಲಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲಿ ಸುದೀರ್ಘ ಅವಧಿಗೆ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಮೊದಲ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸತತ 4,399 ದಿನಗಳ ಕಾಲ ಅಧಿಕಾರದಲ್ಲಿರುವ ಈ ಮೈಲಿಗಲ್ಲು ದೇಶದ ಆಡಳಿತದಲ್ಲಿ ಭಾರಿ ಬದಲಾವಣೆಗಳನ್ನು ತಂದಿದೆ. ಸಾರ್ವಜನಿಕ ಚರ್ಚೆಗಳು ಹೆಚ್ಚಾಗಿ ಮೂಲಸೌಕರ್ಯ ಮತ್ತು ಆರ್ಥಿಕ ಬದಲಾವಣೆಗಳ ಸುತ್ತ ಸುತ್ತುತ್ತಿದ್ದರೆ, ಕೇಂದ್ರ ಸಚಿವ ಸಂಪುಟದ ಸಾಮಾಜಿಕ ರಚನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಭಾರತದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೇಗೆ ಬದಲಾಗಿದೆ ಎಂಬ ಆಸಕ್ತಿದಾಯಕ ಸತ್ಯ ಹೊರಬೀಳುತ್ತದೆ.

ಜವಾಹರಲಾಲ್ ನೆಹರೂ ಅವರು 1952ರ ನಂತರ ಮೊದಲ ಬಾರಿಗೆ ಚುನಾಯಿತ ಸಚಿವ ಸಂಪುಟಗಳನ್ನು ರಚಿಸಿದಾಗ, ರಾಜಕೀಯ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. ಆಗ ಮಹಿಳೆಯರ ಪ್ರಾತಿನಿಧ್ಯವು ಕೇವಲ ಸಾಂಕೇತಿಕವಾಗಿತ್ತು ಮತ್ತು ಅತ್ಯಂತ ಸೀಮಿತವಾಗಿತ್ತು. ರಾಜಕುಮಾರಿ ಅಮೃತ್ ಕೌರ್ ಅವರಂತಹ ನಾಯಕಿಯರಿಗೆ ಕೇವಲ ಆರೋಗ್ಯದಂತಹ ಸಾಂಪ್ರದಾಯಿಕ ಮತ್ತು ಸೀಮಿತ ಖಾತೆಗಳನ್ನು ನೀಡಲಾಗಿತ್ತು. ದಶಕಗಳ ಕಾಲ, ನಿರ್ಧಾರ ತೆಗೆದುಕೊಳ್ಳುವ ಉನ್ನತ ಮಟ್ಟದ ಸಮಿತಿಗಳಲ್ಲಿ ಮಹಿಳೆಯರ ಉಪಸ್ಥಿತಿಯು ಕೇವಲ ಹೆಸರಿಗಷ್ಟೇ ಇರುತ್ತಿತ್ತೇ ವಿನಃ ಆರ್ಥಿಕ ಅಥವಾ ಭದ್ರತೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ.

ಇದನ್ನೂ ಓದಿ: 12 ವರ್ಷಗಳ ಅಭಿವೃದ್ಧಿ, ವಿಶ್ವಾಸ ಮತ್ತು ಸಾರ್ವಜನಿಕ ಕಲ್ಯಾಣ: ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ

ಆದರೆ, ಕಳೆದ ಕೆಲವು ದಶಕಗಳಲ್ಲಿ ಸಂಪುಟದಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಹೆಚ್ಚಾಗಿದ್ದರೂ, ಖಾತೆಗಳ ಹಂಚಿಕೆಯಲ್ಲಿ ನಿಜವಾದ ರಚನಾತ್ಮಕ ಬದಲಾವಣೆ ಕಂಡುಬಂದಿದ್ದು ತಡವಾಗಿ. ಅದು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ. ಪ್ರಧಾನಿ ಮೋದಿಯವರ ಸಚಿವ ಸಂಪುಟದಲ್ಲಿ ಮಹಿಳೆಯರ ಪಾತ್ರವು ಕೇವಲ ‘ಸಂಖ್ಯೆ’ಯಾಗಿ ಉಳಿಯದೆ ಮಹತ್ವದ ಸ್ಥಾನಗಳನ್ನು ಅಲಂಕರಿಸುವ ಮಟ್ಟಿಗೆ ಬದಲಾಯಿತು.

ಭಾರತದ ಆಡಳಿತದ ಅತ್ಯುನ್ನತ ಮತ್ತು ಅತ್ಯಂತ ಶಕ್ತಿಶಾಲಿ ಸಮಿತಿಯಾದ ಕ್ಯಾಬಿನೆಟ್ ಭದ್ರತಾ ಸಮಿತಿ (CCS) ಒಳಗೆ ಮಹಿಳೆಯರ ಪ್ರವೇಶವಾಗಿದ್ದು ಇತ್ತೀಚಿನ ಇತಿಹಾಸದ ಅತ್ಯಂತ ಪ್ರಮುಖ ಬದಲಾವಣೆಯಾಗಿದೆ. ಈ ಹಿಂದೆ ಮಹಿಳೆಯರಿಗೆ ಸಂಸ್ಕೃತಿ, ಕಲ್ಯಾಣ ಅಥವಾ ಆರೋಗ್ಯದಂತಹ ಮೃದು ಖಾತೆಗಳನ್ನು ನೀಡಲಾಗುತ್ತಿತ್ತು. ಆದರೆ, ನರೇಂದ್ರ ಮೋದಿ ಸರ್ಕಾರದಲ್ಲಿ ರಕ್ಷಣೆ ಮತ್ತು ಹಣಕಾಸಿನಂತಹ ಪ್ರಭಾವಿ ಹಾಗೂ ಭಾರೀ ಜವಾಬ್ದಾರಿಯ ಖಾತೆಗಳನ್ನು ಮಹಿಳಾ ಸಚಿವರಿಗೆ ನೀಡುವ ಮೂಲಕ ಹಳೆಯ ಸಂಪ್ರದಾಯವನ್ನು ಮುರಿಯಲಾಯಿತು. ನಿರ್ಮಲಾ ಸೀತಾರಾಮನ್ ಈ ಅವಧಿಯಲ್ಲೂ ಹಣಕಾಸು ಸಚಿವೆಯಾಗಿ ಮುಂದುವರೆಯುತ್ತಿರುವುದು ಇದಕ್ಕೆ ಉದಾಹರಣೆ.

ಇದನ್ನೂ ಓದಿ: ನೆಹರು ದಾಖಲೆ ಮುರಿಯಲು ಸಜ್ಜಾದ ಮೋದಿ; ಇಬ್ಬರೂ ಪ್ರಧಾನಿಗಳ ಅಧಿಕಾರಾವಧಿಯ ನಡುವಿನ ಹೋಲಿಕೆಗಳೇನು?

ಕೇವಲ ಹೈ ಪ್ರೊಫೈಲ್ ಪಾತ್ರಗಳಲ್ಲದೆ, ಇತ್ತೀಚಿನ ಸಚಿವ ಸಂಪುಟಗಳಲ್ಲಿ ಕಾರ್ಪೊರೇಟ್ ವ್ಯವಹಾರಗಳಿಂದ ಹಿಡಿದು ಅಲ್ಪಸಂಖ್ಯಾತರ ವ್ಯವಹಾರಗಳವರೆಗೆ ಪ್ರಮುಖ ನೀತಿ ನಿರೂಪಣಾ ವಲಯಗಳನ್ನು ಮಹಿಳಾ ನಾಯಕಿಯರೇ ಮುನ್ನಡೆಸುತ್ತಿದ್ದಾರೆ. ಮಹಿಳಾ ನಾಯಕತ್ವವು ಕೇವಲ ಅಂಚಿನಲ್ಲಿ ಉಳಿಯದೆ ರಾಷ್ಟ್ರೀಯ ನೀತಿಯನ್ನು ನಿರ್ದೇಶಿಸುವಲ್ಲಿ ಸಕ್ರಿಯವಾಗಿದೆ ಎಂಬುದನ್ನು ಇದು ತೋರಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 10, 2026ರಂದು ನಿರಂತರವಾಗಿ 4,399 ದಿನಗಳನ್ನು ಪೂರೈಸುವ ಮೂಲಕ ನೆಹರೂ ಅವರ ದಾಖಲೆಯನ್ನು ಮೀರಿ ದೇಶದ ಸುದೀರ್ಘ ಅವಧಿಯ ಅಧಿಕಾರ ನಡೆಸಿದ ಪ್ರಧಾನಿಯಾಗಲಿದ್ದಾರೆ. ಇಷ್ಟೆಲ್ಲಾ ಮೈಲಿಗಲ್ಲುಗಳ ಹೊರತಾಗಿಯೂ, ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಸಕ್ರಿಯ ಸಚಿವ ಸಂಪುಟದಲ್ಲಿ ಮಹಿಳೆಯರ ಶೇಕಡಾವಾರು ಪ್ರಮಾಣ ಇನ್ನೂ ಸಾಧಾರಣ ಮಟ್ಟದಲ್ಲೇ ಇದೆ. ಪರಿಪೂರ್ಣ ರಾಜಕೀಯ ಒಳಗೊಳ್ಳುವಿಕೆಗೆ ಇನ್ನೂ ದೀರ್ಘ ಹಾದಿ ಸಾಗಬೇಕಿದೆ ಎಂಬುದನ್ನು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Palmistry: ಕೈಯಲ್ಲಿ ಆರು ಬೆರಳುಗಳಿದ್ದರೆ ಅದೃಷ್ಟವೇ? ಹಸ್ತಸಾಮುದ್ರಿಕ ಶಾಸ್ತ್ರ ಹೇಳುವುದೇನು? – Kannada News

ಮನುಷ್ಯನ ಭವಿಷ್ಯ, ವ್ಯಕ್ತಿತ್ವ ಮತ್ತು ಸ್ವಭಾವವನ್ನು ತಿಳಿಯಲು ಜ್ಯೋತಿಷ್ಯ ಮತ್ತು ಸಾಮುದ್ರಿಕ ಶಾಸ್ತ್ರದಂತಹ ಹಲವು ಸಾಂಪ್ರದಾಯಿಕ ವಿಧಾನಗಳು ನಮ್ಮಲ್ಲಿ ಬಳಕೆಯಲ್ಲಿವೆ. ವಿಶೇಷವಾಗಿ ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ, ಒಬ್ಬ ವ್ಯಕ್ತಿಯ ಕೈಯ ಆಕಾರ, ರೇಖೆಗಳು ಮತ್ತು ಬೆರಳುಗಳ ರಚನೆಯು ಆತನ ಜೀವನದ ಹಲವು ಆಸಕ್ತಿದಾಯಕ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೈಯಲ್ಲಿ ಐದು ಬೆರಳುಗಳಿರುತ್ತವೆ. ಆದರೆ, ಕೆಲವು ಜನರು ಹುಟ್ಟಿನಿಂದಲೇ ಆರನೇ ಬೆರಳನ್ನು ಹೊಂದಿರುತ್ತಾರೆ. ಈ ಅಪರೂಪದ ಲಕ್ಷಣದ ಹಿಂದಿನ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

ವೈದ್ಯಕೀಯ ವಿಜ್ಞಾನದಲ್ಲಿ ಇದಕ್ಕೆ ಏನಂತಾರೆ?

ಸಾಮಾನ್ಯವಾಗಿ ಕೈ ಅಥವಾ ಕಾಲಿನಲ್ಲಿ ಐದಕ್ಕಿಂತ ಹೆಚ್ಚು ಬೆರಳುಗಳಿರುವ ಸ್ಥಿತಿಯನ್ನು ವೈದ್ಯಕೀಯ ವಿಜ್ಞಾನದಲ್ಲಿ ‘ಪಾಲಿಡಾಕ್ಟಿಲಿ’ (Polydactyly) ಎಂದು ಕರೆಯಲಾಗುತ್ತದೆ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಇದು ಒಂದು ಜೀನ್ ಆಧಾರಿತ ಬದಲಾವಣೆಯಾಗಿದ್ದು, ಪ್ರಪಂಚದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ ಸುಮಾರು 50 ಜನರು ಇಂತಹ ಹೆಚ್ಚುವರಿ ಬೆರಳಿನೊಂದಿಗೆ ಜನಿಸುತ್ತಾರೆ. ವಿಜ್ಞಾನ ಇದನ್ನು ಕೇವಲ ಶಾರೀರಿಕ ಲಕ್ಷಣ ಎಂದು ಪರಿಗಣಿಸಿದರೆ, ಹಸ್ತಸಾಮುದ್ರಿಕ ಶಾಸ್ತ್ರವು ಇದಕ್ಕೆ ವಿಶೇಷ ಅರ್ಥಗಳನ್ನು ನೀಡುತ್ತದೆ.

ಆರು ಬೆರಳುಗಳಿದ್ದರೆ ಅದೃಷ್ಟ ಮತ್ತು ವಿಶೇಷ ಪ್ರತಿಭೆಯ ಸಂಕೇತ:

ಪ್ರಾಚೀನ ನಂಬಿಕೆಗಳು ಮತ್ತು ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿ ಆರನೇ ಬೆರಳು ಇರುವುದು ಅತ್ಯಂತ ಅದೃಷ್ಟ ಹಾಗೂ ವಿಶೇಷ ಪ್ರತಿಭೆಯ ಸಂಕೇತವೆಂದು ಪರಿಗಣಿಸಲಾಗಿದೆ. ಇಂತಹ ವ್ಯಕ್ತಿಗಳು ಇತರರಿಗಿಂತ ಭಿನ್ನವಾದ ಯೋಚನಾ ಶಕ್ತಿಯನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ. ಆದಾಗ್ಯೂ, ಈ ಹೆಚ್ಚುವರಿ ಬೆರಳು ಕೈಯ ಯಾವ ಭಾಗದಲ್ಲಿದೆ ಎಂಬುದರ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ ಮತ್ತು ಜೀವನ ದೃಷ್ಟಿಕೋನವನ್ನು ವಿಶ್ಲೇಷಿಸಲಾಗುತ್ತದೆ.

ಕಿರುಬೆರಳಿನ ಪಕ್ಕದಲ್ಲಿ ಆರನೇ ಬೆರಳು ಇದ್ದರೆ ಏನರ್ಥ?

ಒಂದು ವೇಳೆ ಹೆಚ್ಚುವರಿ ಬೆರಳು ಕಿರುಬೆರಳಿನ (Little Finger) ಪಕ್ಕದಲ್ಲಿದ್ದರೆ, ಸಾಮುದ್ರಿಕ ತಜ್ಞರ ಪ್ರಕಾರ ಅಂತಹ ವ್ಯಕ್ತಿಗಳು ಅತಿ ಹೆಚ್ಚು ಬುದ್ಧಿವಂತರು, ಸಮಾಜದಲ್ಲಿ ಉತ್ತಮ ಅನುಭವ ಹೊಂದಿದವರು ಮತ್ತು ರಾಜತಾಂತ್ರಿಕ ಗುಣವುಳ್ಳವರಾಗಿರುತ್ತಾರೆ. ಇವರು ಯಾವುದೇ ಪರಿಸ್ಥಿತಿಗೆ ತಕ್ಕಂತೆ ತಕ್ಷಣ ತಮ್ಮ ನಿರ್ಧಾರ ಅಥವಾ ಮನಸ್ಸನ್ನು ಬದಲಾಯಿಸುವ ಚತುರತೆ ಹೊಂದಿರುತ್ತಾರೆ. ಆದರೆ, ಇವರ ಮನಸ್ಸಿನಲ್ಲಿ ಏನು ಓಡುತ್ತಿದೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಎದುರಿಗಿರುವವರಿಗೆ ಒಂದು ದೊಡ್ಡ ಸವಾಲೇ ಸರಿ!

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಹೆಬ್ಬೆರಳಿನ ಪಕ್ಕದಲ್ಲಿ ಆರನೇ ಬೆರಳು ಇದ್ದರೆ ಏನರ್ಥ?

ಹೆಬ್ಬೆರಳಿನ (Thumb) ಪಕ್ಕದಲ್ಲಿ ಹೆಚ್ಚುವರಿ ಬೆರಳನ್ನು ಹೊಂದಿರುವ ಜನರು ಹೆಚ್ಚು ದೃಢ ನಿರ್ಧಾರ ತೆಗೆದುಕೊಳ್ಳುವವರು, ಚುರುಕು ಬುದ್ಧಿಯವರು ಮತ್ತು ಅತಿಯಾದ ಆತ್ಮವಿಶ್ವಾಸ ಉಳ್ಳವರಾಗಿರುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ. ಇವರ ಯಶಸ್ಸು ಹೆಚ್ಚಾಗಿ ಇವರು ತಮ್ಮ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್. ಇವರು ಸಹ ಹೆಬ್ಬೆರಳಿನ ಪಕ್ಕದಲ್ಲಿ ಹೆಚ್ಚುವರಿ ಬೆರಳನ್ನು ಹೊಂದಿರುವ ಅತ್ಯಂತ ಯಶಸ್ವಿ ವ್ಯಕ್ತಿಯಾಗಿದ್ದಾರೆ.

ಈ ರೀತಿಯ ವಿಶ್ಲೇಷಣೆಗಳು ಸಂಪೂರ್ಣವಾಗಿ ಹಸ್ತಸಾಮುದ್ರಿಕ ಶಾಸ್ತ್ರ ಮತ್ತು ಸಾಂಪ್ರದಾಯಿಕ ನಂಬಿಕೆಗಳನ್ನು ಆಧರಿಸಿವೆಯೇ ಹೊರತು ಇವುಗಳಿಗೆ ಯಾವುದೇ ಬಲವಾದ ವೈಜ್ಞಾನಿಕ ಪುರಾವೆಗಳಿಲ್ಲ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಆತನ ಸಾಧನೆಗಳು ಅಥವಾ ಉಜ್ವಲ ಭವಿಷ್ಯ ಎಂಬುದು ಕೇವಲ ದೈಹಿಕ ಲಕ್ಷಣಗಳಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಬದಲಿಗೆ ಆತ ಪಡೆಯುವ ಶಿಕ್ಷಣ, ಬೆಳೆಯುವ ಪರಿಸರ, ಆತನ ಕಠಿಣ ಪರಿಶ್ರಮ ಮತ್ತು ಜೀವನದಲ್ಲಿ ಗಳಿಸುವ ಅನುಭವಗಳೇ ಆತನ ನಿಜವಾದ ಯಶಸ್ಸಿನ ಸೂತ್ರಗಳಾಗಿವೆ ಎಂಬುದನ್ನು ಮರೆಯಬಾರದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಶ್ರೀರಾಮ ದಶರಥನ ಮಗ ಅಲ್ಲ’: ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರೊ. ಭಗವಾನ್ – Kannada News

ಪ್ರೊ. ಭಗವಾನ್Image Credit source: Tv9 Kannada

ದಾವಣಗೆರೆ, ಜೂನ್​ 09: ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಪ್ರೊ. ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನೀವು ಪೂಜೆ ಮಾಡುವ ಶ್ರೀರಾಮ ದಶರಥನಿಗೆ ಹುಟ್ಟಿದವ ಅಲ್ಲ. ರಾಮನ ತಂದೆ ದಶರಾಥ ಪುತ್ರ ಕಾಮೇಷ್ಠಿ ಪೂಜೆ ಮಾಡ್ತಾನೆ. ಅ ಪೂಜೆಯಲ್ಲಿ ರಾಣಿ ಪುರೋಹಿತರ ಜೊತೆ ರಾತ್ರಿ ಮಲಗಬೇಕು. ಪೂರೋಹಿತರ ಜೊತೆ ರಾಣಿ ರಾತ್ರಿ ಕಳೆದಿದ್ದಾಳೆ ಎಂದರೆ ಅರ್ಥ ಮಾಡಿಕೊಳ್ಳಿ. ಇದನ್ನು ರಾಮ ಮಂದಿರ ಏಕೆ ಬೇಕು ಎನ್ನುವ ಪುಸ್ತಕದಲ್ಲಿ ನಾನು ಬರೆದಿದ್ದು, ವಾಲ್ಮೀಕಿ ರಾಮಾಯಣದಲ್ಲಿ ಇದರ ಬಗ್ಗೆ ಉಲ್ಲೇಖಿಸಿರೋದಾಗಿ ಹೇಳಿದ್ದಾರೆ.

ಮುಖ್ಯಾಂಶಗಳು

  • ಶ್ರೀರಾಮನ ಬಗ್ಗೆ ಪ್ರೊ. ಭಗವಾನ್ ವಿವಾದಾತ್ಮಕ ಹೇಳಿಕೆ
  • ಶ್ರೀರಾಮ ದಶರಥನಿಗೆ ಹುಟ್ಟಿದವ ಅಲ್ಲ ಎಂದ ಭಗವಾನ್​​
  • ವಾಲ್ಮೀಕಿ ರಾಮಾಯಣದಲ್ಲಿ ಇದರ ಉಲ್ಲೇಖವಿದೆ ಎಂದ ಚಿಂತಕ

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಗವಾನ್​​, ಶೂದ್ರನಾದ ಶಂಭೂಕ, ಪತ್ನಿ ಸೀತೆ, ಸಹೋದರ ಲಕ್ಷ್ಮಣನನ್ನೇ ರಾಮ ಸಾಯಿಸಿದ್ದಾನೆ. ಇಂಥವರು ನಮಗೆ ಅದರ್ಶ ಆಗಬೇಕಾ? ಪಂಚಾಂಗವನ್ನು ಕೇಳೋದು ಮೊದಲು ಬಿಟ್ಟು ಬಿಡಿ, ಮೊದಲು ನಿಮ್ಮ ಮೇಲೆ‌ ನೀವು ನಂಬಿಕೆ ಬೆಳಸಿಕೊಳ್ಳುವುದನ್ನು ಅಭ್ಯಾಸ ಮಾಡಿ ಎಂದಿದ್ದಾರೆ. ಶೂದ್ರರೆಲ್ಲರೂ ಬ್ರಾಹ್ಮಣರ ಗುಲಾಮರು ಎಂದು ಮನಸ್ಮೃತಿ ಹೇಳುತ್ತೆ. ಗಾಂಧೀಜಿ ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದರೆ, ಡಾ. ಬಾಬಾ ಸಾಹೇಬ್​​ ಅಂಬೇಡ್ಕರ್​​ ಅವರು ಈ ಗುಲಾಮಗಿರಿಯಿಂದ ಜನತೆಗೆ ಮುಕ್ತಿ ಕೊಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಆರೋಪ; ತಾರತಮ್ಯದ ಬಗ್ಗೆಯೂ ಭಕ್ತರ ಅಸಮಾಧಾನ

ಮದುವೆ ಮಾಡಿಸುವ ಸಂದರ್ಭದಲ್ಲಿ ಪುರೋಹಿತರು ಹೇಳುವ ಮಂತ್ರದ ಅರ್ಥ ನಿಮಗೆ ಗೊತ್ತಿಲ್ಲ. ಅದು ಗೊತ್ತಾಗಿಯೇ ನನ್ನ ಮದುವೆಗೆ ಯಾವುದೇ ಪುರೋಹಿತರನ್ನು ಕರೆಸದಂತೆ ತಂದೆಯವರಿಗೆ ಹೇಳಿದ್ದೆ. ಪಠ್ಯ ಪುಸ್ತಕಗಳು ಈಗ ಸತ್ಯ ಇಲ್ಲದೆ ತನ್ನ ಸತ್ವವನ್ನು ಕಳೆದುಕೊಂಡಿವೆ. ಸ್ವಾಮಿ ವಿವೇಕಾನಂದರು ತಾವು ಬೌದ್ಧ ಧರ್ಮಕ್ಕೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ. ಬೌದ್ಧ ಧರ್ಮ ಅತ್ಯಂತ ಮಾನವೀಯವಾದ ಧರ್ಮ, ವೈಜ್ಞಾನಿಕ ಧರ್ಮವಾಗಿದೆ. ನನ್ನ ಮಾತಿನ ಬಗ್ಗೆ ಯಾರಾದ್ರು ಕೇಸ್ ಹಾಕಬೇಕು ಎಂದುಕೊಂಡರೆ ಎಲ್ಲ ಮಾಹಿತಿ ತಿಳಿದುಕೊಂಡು ಕೇಸ್ ಹಾಕಿ ಎಂದು ಇದೇ ವೇಳೆ ಭಗವಾನ್​​ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:06 pm, Tue, 9 June 26

Source link

ದುನಿಯಾ ವಿಜಯ್​​ರ ಕೊಂಡಾಡಿದ ಪರಭಾಷಾ ಸ್ಟಾರ್ ನಟ – Kannada News

ದುನಿಯಾ ವಿಜಯ್ (Duniya Vijay), ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ದೇಶಕ ಸಹ. ಸಿನಿಮಾಗಳಲ್ಲಿ ಡ್ಯೂಪ್ ಆಗಿ, ಫೈಟರ್ ಆಗಿ ವೃತ್ತಿ ಆರಂಭಿಸಿದ ವಿಜಯ್, ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದು ಸ್ಟಾರ್ ನಟರಾದವರು. ವೃತ್ತಿಯ ಮೇಲಿರುವ ಪ್ರೀತಿ, ಗೌರವ ಮತ್ತು ಶ್ರಮವೇ ಅವರನ್ನು ಇಂದಿನ ಅವರ ಸ್ಥಿತಿಗೆ ಕರೆದು ತಂದು ನಿಲ್ಲಿಸಿದೆ. ಈಗ ದುನಿಯಾ ವಿಜಯ್ ಅವರು ಕನ್ನಡದ ಸಿನಿಮಾಗಳು ಮಾತ್ರವೇ ಅಲ್ಲದೆ ತೆಲುಗು, ತಮಿಳಿನ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಕೆಲವು ಸ್ಟಾರ್ ನಟರುಗಳ ಸಿನಿಮಾಗಳಲ್ಲಿ ದುನಿಯಾ ವಿಜಯ್ ನಟಿಸಿದ್ದಾರೆ. ಇದೀಗ ತಮಿಳು, ತೆಲುಗಿನಲ್ಲಿ ಬಲು ಜನಪ್ರಿಯರಾಗಿರುವ ಸ್ಟಾರ್ ನಟರೊಬ್ಬರು ದುನಿಯಾ ವಿಜಯ್ ಅವರನ್ನು ಕೊಂಡಾಡಿದ್ದಾರೆ.

ದುನಿಯಾ ವಿಜಯ್, ತೆಲುಗಿನ ‘ಸ್ಲಂ ಡಾಗ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾನಲ್ಲಿ ದುನಿಯಾ ವಿಜಯ್ ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ‘ಸ್ಲಂ ಡಾಗ್’ ಸಿನಿಮಾನಲ್ಲಿ ವಿಜಯ್ ಸೇತುಪತಿ ನಾಯಕನಾಗಿ ನಟಿಸಿದ್ದಾರೆ. ನಿನ್ನೆಯಷ್ಟೆ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ದುನಿಯಾ ವಿಜಯ್ ಅವರ ಪಾತ್ರಕ್ಕೆ ಮಹತ್ವ ಇರುವುದು ಟೀಸರ್​​ನಿಂದ ತಿಳಿದು ಬರುತ್ತಿದೆ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ನಟ ವಿಜಯ್ ಸೇತುಪತಿ, ವಿಜಯ್ ಅವರ ಪ್ರತಿಭೆ, ವ್ಯಕ್ತಿತ್ವ ಮತ್ತು ಶ್ರಮವನ್ನು ಕೊಂಡಾಡಿದ್ದಾರೆ.

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಜಯ್ ಸೇತುಪತಿ, ‘ನಾನು ಬಹಳ ವರ್ಷಗಳ ಹಿಂದೆ ಒಂದು ಕನ್ನಡ ಸಿನಿಮಾನಲ್ಲಿ ಹೋಗಿದ್ದೆ, ಆಗಷ್ಟೆ ‘ದುನಿಯಾ’ ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಆಗಲೇ ನನಗೂ ಗೊತ್ತಾಗಿದ್ದು ದುನಿಯಾ ವಿಜಯ್ ಅವರ ಬಗ್ಗೆ. ಈಗ ಅವರೊಟ್ಟಿಗೆ ನಟಿಸುವಾಗ, ಸೆಟ್​​ನಲ್ಲಿ ಅವರ ಶಿಸ್ತು ನೋಡಿ ಆಶ್ಚರ್ಯವಾಯ್ತು. ಅವರು ಬಹಳ ಪ್ರತಿಭಾವಂತ ನಟ. ಅವರೊಟ್ಟಿಗೆ ಕೆಲಸ ಮಾಡಿದ್ದು ನನಗೆ ಬಹಳ ಖುಷಿಯ ವಿಷಯ ಜೊತೆಗೆ ಗೌರವ ಸಹ’ ಎಂದಿದ್ದಾರೆ.

ಇದನ್ನೂ ಓದಿ:ಹಳ್ಳಿಯಲ್ಲಿ ಮಕ್ಕಳ ಜೊತೆ ಆಟ ಆಡಿದ ದುನಿಯಾ ವಿಜಯ್

‘ಅವರು ನಟಿಸುವಾಗ ಪಾತ್ರಕ್ಕೆ ಅವರು ತಯಾರಿ ನಡೆಸಿಕೊಳ್ಳುವ ರೀತಿ. ನಿರ್ದೇಶಕರೊಟ್ಟಿಗೆ ಅವರು ನಡೆಸುವ ಚರ್ಚೆ, ನಿರ್ದೇಶಕರು ಹೇಳಿದ್ದರಲ್ಲೇ ಅವರು ತಮ್ಮತನವನ್ನು ತಂದುಕೊಳ್ಳುವ ರೀತಿ. ಪ್ರತಿ ಶಾಟ್​​ನಲ್ಲೂ ಭಿನ್ನವಾದುದನ್ನು ಕೊಡುವ ಬಯಕೆ ಅವರಲ್ಲಿ ನಾನು ಗಮನಿಸಿದೆ. ಅವರೊಬ್ಬ ಅದ್ಭುತವಾದ ಮನುಷ್ಯ ಜೊತೆಗೆ ಅದ್ಭುತವಾದ ನಟ. ವಿಜಯ್ ಸರ್, ಬಹಳ ಥ್ಯಾಂಕ್ಸ್ ಈ ಸಿನಿಮಾನಲ್ಲಿ ನೀವು ನಮ್ಮೊಂದಿಗೆ ನಟಿಸಿದ್ದಕ್ಕೆ’ ಎಂದಿದ್ದಾರೆ ವಿಜಯ್ ಸೇತುಪತಿ.

ವಿಜಯ್ ಸೇತುಪತಿ ಮಾತ್ರವೇ ಅಲ್ಲದೆ ‘ಸ್ಲಂ ಡಾಗ್’ ಸಿನಿಮಾದ ನಿರ್ದೇಶಕ ಪುರಿ ಜಗನ್ನಾಥ್ ಸಹ ವಿಜಯ್ ಅವರ ನಟನೆಯನ್ನು ಕೊಂಡಾಡಿದ್ದಾರೆ. ‘ಸ್ಲಂ ಡಾಗ್’ ಸಿನಿಮಾ ಭಿಕ್ಷಕ ಮಾಫಿಯಾದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ವಿಜಯ್ ಸೇತುಪತಿ, ಟಬು, ದುನಿಯಾ ವಿಜಿ ಇನ್ನೂ ಹಲವು ಪ್ರತಿಭಾವಂತ ನಟರಿದ್ದಾರೆ. ಸಿನಿಮಾ ಶೀಘ್ರವೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚುನಾವಣೆ ಇಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ, ಯಾರ್ಯಾರು? – Kannada News

ಬೆಂಗಳೂರು, (ಜೂನ್ 09): ಕರ್ನಾಟಕ ರಾಜ್ಯಸಭೆಯ (Karnataka Rajyasabha) ನಾಲ್ಕು ಸ್ಥಾನಗಳಿಗೆ ಸ್ಪರ್ಧಿಸಿದ್ದ ಮೂವರು ಕಾಂಗ್ರೆಸ್ (Congress) ಅಭ್ಯರ್ಥಿಗಳು ಹಾಗೂ ಓರ್ವ ಬಿಜೆಪಿ (BJP) ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಲ್ಲಿಕಾರ್ಜುನ್ ಖರ್ಗೆ, ಪವನ್ ಖೇರಾ,ಮನ್ಸೂರ್ ಆಲಿ ಖಾನ್ ಹಾಗೂ ಬಿಜೆಪಿಯ ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ರಾಜ್ಯಸಭೆ ಚುನಾವಣೆಗೆ ಸಲ್ಲಿಕೆಯಾಗಿದ್ದ ಎಲ್ಲಾ ನಾಮಪತ್ರಗಳನ್ನು ಇಂದು (ಜೂನ್ 09) ಚುನಾವಣಾಧಿ ಕಾರಿ ಕೆ.ಎಂ.ವಿಶಾಲಾಕ್ಷಿ ಅವರು ಪರಿಶೀಲನೆ ನಡೆಸಿದ್ದು, ನಾಲ್ವರ ನಾಪತ್ರಗಳು ಕ್ರಮಬದ್ಧವಾಗಿವೆ. ಆದ್ರೆ, ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಭೋಜಣ್ಣ ಸೋಮಣ್ಣ ನಾಮಪತ್ರ ತಿರಸ್ಕೃತವಾಗಿದೆ. ಹೀಗಾಗಿ ಚುನಾವಣೆ ಇಲ್ಲದೇ ನಾಲ್ವರು ಅವಿರೋಧ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಮುಖ್ಯಾಂಶಗಳು

  • ಕರ್ನಾಟಕದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ
  • ಕಾಂಗ್ರೆಸ್​ನ ಮೂವರು, ಓರ್ವ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ
  • ನಾಲ್ವರು ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿದೆ
  • ನಾಮಪತ್ರ ಪರಿಶೀಲನೆ ನಡೆಸಿದ್ದ ಚುನಾವಣಾಧಿಕಾರಿ ಕೆ.ಎಂ.ವಿಶಾಲಾಕ್ಷಿ
  • ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್, ಪವನ್ ಖೇರಾ, ಬಿಜೆಪಿಯ ನಾಗರಾಜು ನಾಮಪತ್ರ ಸಲ್ಲಿಸಿದ್ದರು

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆ ನಾಲ್ಕು ಸ್ಥಾನ ಹಾಗೂ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಸೋಮವಾರ ಮುಕ್ತಾಯಗೊಂಡಿದ್ದು, ರಾಜ್ಯಸಭೆ ಚುನಾವಣೆಗೆ ನಾಲ್ಕು ಮಂದಿ ಹಾಗೂ ಪರಿಷತ್‌ ಚುನಾವಣೆಗೆ 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇಂದು (ಜೂನ್‌ 09) ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ನಡೆದಿದ್ದು, ರಾಜ್ಯಸಭೆಗೆ ಪಕ್ಷೇತರ ಅಭ್ಯರ್ಥಿಯ ಸ್ಪರ್ಧಿಸಿದ್ದ ಭೋಜಣ್ಣ ಸೋಮಣ್ಣ ಅವರ ನಾಮಪತ್ರ ತಿರಸ್ಕೃತವಾಗಿದೆ. ಯಾವುದೇ ಅನುಮೋದಕರ ಸಹಿ ಇಲ್ಲದ ಕಾರಣ ಪಕ್ಷೇತರ ಅಭ್ಯರ್ಥಿ ಭೋಜಣ್ಣ ಸೋಮಣ್ಣ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಕೆ.ಎಂ.ವಿಶಾಲಾಕ್ಷಿ ಅವರು ತಿರಸ್ಕೃತ ಮಾಡಿದ್ದಾರೆ.

ಇದನ್ನೂ ಓದಿ: ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್​​ ಕೈತಪ್ಪಿದ್ದೇಕೆ?: ಅಸಲಿ ಸತ್ಯ ಬಹಿರಂಗಪಡಿಸಿದ ಕುಮಾರಸ್ವಾಮಿ

ನಾಲ್ವರು ಅವಿರೋಧವಾಗಿ ಆಯ್ಕೆ

ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪವನ್‌ ಖೇರಾ, ಮನ್ಸೂರ್‌ ಅಲಿ ಖಾನ್‌ ಹಾಗೂ ಬಿಜೆಪಿಯಿಂದ ಪ್ರೊ.ಎಂ.ನಾಗರಾಜ್‌ ನಾಮಪತ್ರ ಸರಿಯಾಗಿದೆ. ಇನ್ನು ನಾಲ್ಕು ಸ್ಥಾನಗಳಿಗೆ ನಾಲ್ವರು ಅಭ್ಯರ್ಥಿಗಳಿದ್ದಾರೆ. ಹೀಗಾಗಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲದಿದ್ದರಿಂದ ಮತದಾನ ನಡೆಯದೇ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದ್ರೆ, ಜೂನ್ 11 ನಾಮಪತ್ರ ವಾಪಸ್‌ ಕೊನೆಯ ದಿನವಾಗಿದ್ದು, ಯಾರು ನಾಮಪತ್ರ ಪಡೆಯದಿದ್ದಲ್ಲಿ ಅಂದು ನಾಲ್ವರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆಯಾಗಲಿದೆ.

ಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆ

ಇನ್ನು ಪರಿಷತ್‌ನ ಏಳು ಸ್ಥಾನಗಳಿಗೆ ಕಾಂಗ್ರೆಸ್‌ನಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ , ತಿಪ್ಪಣ್ಣಪ್ಪ ಕಮಕನೂರ, ಮಳವಳ್ಳಿ ಶಿವಣ್ಣ, ಪಿ.ವಿ.ಮೋಹನ್‌, ಕಾಂಗ್ರೆಸ್‌ನಿಂದ ಐದನೇ ಅಭ್ಯರ್ಥಿಯಾಗಿ ವಿನಯ್‌ ಕಾರ್ತಿಕ್‌ ನಾಮಪತ್ರ ಸಲ್ಲಿಸಿದರೆ, ಬಿಜೆಪಿಯಿಂದ ಲಿಂಗರಾಜ್‌ ಪಾಟೀಲ್‌, ರಘು ಕೌಟಿಲ್ಯ ಹಾಗೂ ಜೆಡಿಎಸ್‌ನಿಂದ ಗೋವಿಂದರಾಜು ಅವರು ನಾಮಪತ್ರ ಸಲ್ಲಿಸಿದ್ದು, ಜೂ. 11ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಯಾರೊಬ್ಬರೂ ನಾಮಪತ್ರ ಹಿಂಪಡೆಯದಿದ್ದರೆ ಜೂ.18ರಂದು ಮತದಾನ ನಡೆಯಲಿದೆ. ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಆಧರಿಸಿ ಕಾಂಗ್ರೆಸ್‌ನ ನಾಲ್ಕು ಹಾಗೂ ಬಿಜೆಪಿಯ ಇಬ್ಬರು ಅನಾಯಾಸವಾಗಿ ಗೆಲುವು ಸಾಧಿಸಬಹುದಾಗಿದೆ. ಬಾಕಿ ಒಂದು ಸ್ಥಾನಕ್ಕೆ ಕಾಂಗ್ರೆಸ್‌ನ ವಿನಯ್‌ ಕಾರ್ತಿಕ್‌ ಹಾಗೂ ಜೆಡಿಎಸ್‌ನ ಗೋವಿಂದರಾಜು ನಡುವೆ ಸ್ಪರ್ಧೆ ನಡೆಯಲಿದ್ದು, ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vasthu Shastra: ಮನೆಯಲ್ಲಿ ಬೆಕ್ಕು ಸಾಕುವುದು ಅಶುಭವೇ? ವಾಸ್ತು ಮತ್ತು ಜ್ಯೋತಿಷ್ಯ ತಜ್ಞರು ಹೇಳುವುದೇನು? – Kannada News

ಮನೆಯಲ್ಲಿ ಬೆಕ್ಕು ಸಾಕುವುದು ಅಶುಭವೇ? Image Credit source: Pinterest

ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಅನೇಕರ ನೆಚ್ಚಿನ ಹವ್ಯಾಸವಾಗಿದೆ. ಅದರಲ್ಲೂ ವಿಶೇಷವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಜಾಗದ ಅಭಾವ ಅಥವಾ ನಿರ್ವಹಣೆಯ ಕಾರಣಗಳಿಂದಾಗಿ ನಾಯಿಗಳಿಗಿಂತ ಬೆಕ್ಕುಗಳನ್ನು ಸಾಕುವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದಾಗ್ಯೂ, ಮನೆಯಲ್ಲಿ ಬೆಕ್ಕನ್ನು ಸಾಕುವುದು ಅದೃಷ್ಟವನ್ನು ತರುತ್ತದೆಯೇ ಅಥವಾ ದುರದೃಷ್ಟವನ್ನು ಉಂಟುಮಾಡುತ್ತದೆಯೇ ಎಂಬ ಗೊಂದಲ ಇಂದಿಗೂ ಅನೇಕರಲ್ಲಿದೆ. ಈ ಬಗ್ಗೆ ವಾಸ್ತು ಮತ್ತು ಜ್ಯೋತಿಷ್ಯ ತಜ್ಞರು ಏನು ಹೇಳುತ್ತಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಬೆಕ್ಕು ಮತ್ತು ರಾಹು ಗ್ರಹದ ನಂಟು: ಅಶುಭ ಎಂಬುದು ಕೇವಲ ಭ್ರಮೆಯೇ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಕ್ಕುಗಳನ್ನು ರಾಹು ಗ್ರಹಕ್ಕೆ ಸಂಬಂಧಿಸಿದ ಜೀವಿಯೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಹಳೇ ಕಾಲದಿಂದಲೂ ಬೆಕ್ಕು ದಾರಿಗಡ್ಡ ಬಂದರೆ ಅಶುಭ ಎನ್ನುವ ನಂಬಿಕೆ ಬಲವಾಗಿ ಬೆಳೆದುಬಂದಿದೆ. ಆದರೆ, ಜ್ಯೋತಿಷಿಗಳ ಪ್ರಕಾರ ಇದು ಕೇವಲ ತಪ್ಪು ಕಲ್ಪನೆ ಅಷ್ಟೇ. ವಾಸ್ತವವಾಗಿ, ಬೆಕ್ಕುಗಳಿಗೆ ನಿಯಮಿತವಾಗಿ ಆಹಾರ ನೀಡುವುದು ಮತ್ತು ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದರಿಂದ ಜಾತಕದಲ್ಲಿರುವ ರಾಹು ಸಂಬಂಧಿತ ದೋಷಗಳು ಹಾಗೂ ಋಣಾತ್ಮಕ ಪ್ರಭಾವಗಳು ಕಡಿಮೆಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.

ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಬೆಕ್ಕುಗಳು:

ಮನೆಯಲ್ಲಿ ಬೆಕ್ಕನ್ನು ಸಾಕುವುದರಿಂದ ಯಾವುದೇ ರೀತಿಯ ಪ್ರಮುಖ ನಕಾರಾತ್ಮಕ ಪರಿಣಾಮಗಳು ಬೀರುವುದಿಲ್ಲ ಎಂದು ವಾಸ್ತು ತಜ್ಞರು ಸ್ಪಷ್ಟಪಡಿಸುತ್ತಾರೆ. ಕೆಲವು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಬೆಕ್ಕುಗಳು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು (Negative Energy) ತಾವೇ ಹೀರಿಕೊಂಡು, ಮನೆಯುದ್ದಕ್ಕೂ ಸಕಾರಾತ್ಮಕ ವಾತಾವರಣವನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲದೆ, ಇಂದಿನ ಜಂಜಾಟದ ಜೀವನದಲ್ಲಿ ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಶಾಂತಿ ಸಿಗುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ವಾಸ್ತು ಪ್ರಕಾರ ಬೆಕ್ಕಿನ ನಿವಾಸಕ್ಕೆ ಯಾವ ದಿಕ್ಕು ಉತ್ತಮ?

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ವಸ್ತುವಿಗೂ ದಿಕ್ಕುಗಳ ವಿಶೇಷ ಮಹತ್ವವಿರುವಂತೆ, ಸಾಕುಪ್ರಾಣಿಗಳ ಮಲಗುವ ಜಾಗಕ್ಕೂ ನಿಯಮಗಳಿವೆ. ಮನೆಯಲ್ಲಿ ಬೆಕ್ಕನ್ನು ಸಾಕುವವರು ಅದರ ವಿಶ್ರಾಂತಿ ಅಥವಾ ಮಲಗುವ ಸ್ಥಳವನ್ನು ವಾಯುವ್ಯ (North-West) ಅಥವಾ ಉತ್ತರ (North) ದಿಕ್ಕಿನಲ್ಲಿ ಜೋಡಿಸುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕುಗಳು ಸ್ವಾತಂತ್ರ್ಯ, ಚುರುಕುತನ ಮತ್ತು ಸಂತೋಷವನ್ನು ಸಂಕೇತಿಸುತ್ತವೆ. ಆದರೆ, ಯಾವುದೇ ಕಾರಣಕ್ಕೂ ಮನೆಯ ಆಗ್ನೇಯ (South-East) ಮತ್ತು ನೈಋತ್ಯ (South-West) ದಿಕ್ಕುಗಳಲ್ಲಿ ಬೆಕ್ಕಿನ ಮಲಗುವ ವ್ಯವಸ್ಥೆ ಮಾಡಬೇಡಿ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಮೂಢನಂಬಿಕೆಗಿಂತ ಪ್ರಾಣಿ ಮೇಲಿನ ಪ್ರೀತಿಯೇ ಶ್ರೇಷ್ಠ:

ವಾಸ್ತು ಅಥವಾ ಜ್ಯೋತಿಷ್ಯ ಏನೇ ಹೇಳಿದರೂ, ಅಂತಿಮವಾಗಿ ಯಾವುದೇ ಒಂದು ಜೀವಿಯನ್ನು ನಾವು ಎಷ್ಟು ಪ್ರೀತಿಯಿಂದ ಬೆಳೆಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಯಾವುದೇ ಪ್ರಾಣಿಯನ್ನು ದಯೆಯಿಂದ ಕಾಣುವುದರಿಂದ ನಮ್ಮ ಜೀವನಕ್ಕೆ ಸಕಾರಾತ್ಮಕತೆ ಬರುತ್ತದೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು, ಸಾಕುಪ್ರಾಣಿಗಳನ್ನು ಆರೋಗ್ಯವಾಗಿ ನೋಡಿಕೊಂಡರೆ ಅಲ್ಲಿ ಯಾವುದೇ ವಾಸ್ತು ದೋಷ ಸುಳಿಯುವುದಿಲ್ಲ. ಆದ್ದರಿಂದ ಬೆಕ್ಕುಗಳನ್ನು ಪ್ರೀತಿಯಿಂದ ಸಾಕಿ, ಅವುಗಳೊಂದಿಗೆ ಕಳೆಯುವ ಪ್ರತಿ ಕ್ಷಣವನ್ನು ಆನಂದಿಸಿ. ಏಕೆಂದರೆ ಮೂಕ ಜೀವಿಗಳ ಕಡೆಗೆ ತೋರುವ ಕರುಣೆಯೇ ನಿಜವಾದ ಸಂತೋಷದ ಮೂಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:09 pm, Tue, 9 June 26

Source link

ರಾಷ್ಟ್ರ ಪ್ರಶಸ್ತಿ ಸಿಕ್ಕ ಬಳಿಕವೂ ನನಗೆ ಕೆಲಸ ಸಿಗಲಿಲ್ಲ: ಸತ್ಯ ತೆರೆದಿಟ್ಟ ಕಂಗನಾ ರಣಾವತ್ – Kannada News

ಬಾಲಿವುಡ್‌ನ ಖ್ಯಾತ ನಟಿ, ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಚಿತ್ರರಂಗದಲ್ಲಿ ತಮಗಿದ್ದ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ‘ಫ್ಯಾಷನ್’ ಚಿತ್ರದ ಭರ್ಜರಿ ಯಶಸ್ಸು ಮತ್ತು ಅದಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಂತರವೂ ತಮಗೆ ಚಿತ್ರರಂಗದಲ್ಲಿ ಕೆಲಸ ಸಿಗುತ್ತಿರಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ಕೇವಲ ಬದುಕುಳಿಯಲು ತಮ್ಮ ಸಾಮರ್ಥ್ಯಕ್ಕೆ ಹೊಂದದ ಕಳಪೆ ಸಿನಿಮಾಗಳನ್ನೂ ಮಾಡಬೇಕಾಗಿ ಬಂದಿತ್ತು ಎಂದು ಅವರು ಹೇಳಿದ್ದಾರೆ.

2006ರಲ್ಲಿ ಅನುರಾಗ್ ಬಸು ನಿರ್ದೇಶನದ ‘ಗ್ಯಾಂಗ್‌ಸ್ಟರ್: ಎ ಲವ್ ಸ್ಟೋರಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಕಂಗನಾ, ಚಿತ್ರರಂಗದಲ್ಲಿ ಈಗ ಯಶಸ್ವಿಯಾಗಿ 20 ವರ್ಷಗಳನ್ನು ಪೂರೈಸಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ‘ಭಾರತ್ ಭಾಗ್ಯ ವಿಧಾತ’ ಚಿತ್ರದ ಪ್ರಚಾರದ ವೇಳೆ ಅವರು ತಮ್ಮ ಹಳೆಯ ದಿನಗಳ ಹೋರಾಟವನ್ನು ಬಿಚ್ಚಿಟ್ಟಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕಂಗನಾ, ‘ಜೀವನದಲ್ಲಿ ಹೋರಾಟದ ದಿನಗಳು ಎದುರಾದಾಗ ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ಯಾಕೆಂದರೆ ಆ ಸಂದರ್ಭದಲ್ಲಿ ಜೀವನ ನಮಗೆ ಏನನ್ನೋ ಕಲಿಸಲು ಪ್ರಯತ್ನಿಸುತ್ತಿರುತ್ತದೆ. 2007-2008ರ ಅವಧಿಯಲ್ಲಿ, ಅಂದರೆ ಫ್ಯಾಷನ್ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದ ನಂತರವೂ ನನಗೆ ಚಿತ್ರರಂಗದಲ್ಲಿ ಯಾವುದೇ ಕೆಲಸ ಸಿಗುತ್ತಿರಲಿಲ್ಲ. ಆಗ ನಾನು ಯಾಕೆ ನನಗೆ ಕೆಲಸ ಸಿಗುತ್ತಿಲ್ಲ? ನಾನೇಕೆ ಇದಕ್ಕಿಂತ ಉತ್ತಮವಾದುದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಅಂತ ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ’ ಎಂದು ಹೇಳಿದ್ದಾರೆ.

‘ಆ ಸಮಯದಲ್ಲಿ ದೊಡ್ಡ ಸ್ಟಾರ್ ಕಲಾವಿದರ ಮ್ಯಾನೇಜರ್‌ಗಳನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತೆ ನನಗೆ ಹಲವರು ಸಲಹೆ ನೀಡಿದರು. ನಾನು ಹಾಗೆಯೇ ಮಾಡಿದೆ. ಆದರೆ ಅದರ ಪರಿಣಾಮವಾಗಿ ನನಗೆ ‘ರಾಸ್ಕಲ್ಸ್’ ಮತ್ತು ‘ಡಬಲ್ ಧಮಾಲ್’ ರೀತಿಯ ಕಮರ್ಷಿಯಲ್ ಸಿನಿಮಾಗಳು ಸಿಕ್ಕವು. ನಾನು ನನ್ನ ಬುದ್ಧಿಮತ್ತೆಗಿಂತ ತೀರಾ ಕೆಳಮಟ್ಟದ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ ಬದುಕಲು ನನಗೆ ಬೇರೆ ದಾರಿ ಇರಲಿಲ್ಲ. ಇವತ್ತಿನ ದಿನಗಳಲ್ಲಿ ಜನರು ನಿಮಗೆ ಇಷ್ಟ ಬಂದಿದ್ದನ್ನು ಮಾತ್ರ ಮಾಡಿ ಎಂದು ಸುಲಭವಾಗಿ ಹೇಳುತ್ತಾರೆ. ಆದರೆ ಅದು ತೀರಾ ಮೂರ್ಖತನದ ಹೇಳಿಕೆ. ಆಯಾ ಪರಿಸ್ಥಿತಿಗೆ ಏನು ಅಗತ್ಯವಿದೆಯೋ ಮತ್ತು ನಮ್ಮಿಂದ ಏನು ಸಾಧ್ಯವೋ ಅದನ್ನು ನಾವು ಮಾಡಬೇಕಾಗುತ್ತದೆ’ ಎಂದು ಕಂಗನಾ ಮಾರ್ಮಿಕವಾಗಿ ನುಡಿದಿದ್ದಾರೆ.

ಕಂಗನಾ ರಣಾವತ್ ‘ವೋ ಲಮ್ಹೆ’, ಲೈಫ್ ಇನ್ ಎ ಮೆಟ್ರೋ’ ಚಿತ್ರಗಳ ಮೂಲಕ ಗುರುತಿಸಿಕೊಂಡು, ‘ಕ್ವೀನ್’ ಸಿನಿಮಾ ಮೂಲಕ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು. ನಂತರ ‘ಮಣಿಕರ್ಣಿಕಾ’, ‘ಪಂಗಾ’ ಮತ್ತು ‘ಎಮರ್ಜೆನ್ಸಿ’ ರೀತಿಯ ಮಹಿಳಾ ಪ್ರಧಾನ ಚಿತ್ರಗಳ ಮೂಲಕ ಜನರನ್ನು ರಂಜಿಸುವ ಪ್ರಯತ್ನ ಮಾಡಿದರು.

ಇದನ್ನೂ ಓದಿ: 26/11 ಮುಂಬೈ ಉಗ್ರರ ದಾಳಿ ನಡೆದಾಗ ಪಾರ್ಟಿ ಮಾಡುತ್ತಿದ್ದ ನಟಿ ಕಂಗನಾ ರಣಾವತ್

ಕಂಗನಾ ರಣಾವತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಭಾರತ್ ಭಾಗ್ಯ ವಿಧಾತ’ ಸಿನಿಮಾ ಜೂನ್ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಮುಂಬೈನ ಕಾಮಾ ಆಸ್ಪತ್ರೆಯ ಹಿನ್ನೆಲೆಯಲ್ಲಿ ಈ ಕಥೆ ನಡೆಯುತ್ತದೆ. 26/11 ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ನರ್ಸ್‌ಗಳು ಮತ್ತು ವಾರ್ಡ್ ಬಾಯ್‌ಗಳ ನಡೆಸಿದ ಧೀರತನದ ಕಥೆಯನ್ನು ಈ ಸಿನಿಮಾ ಅನಾವರಣಗೊಳಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version