ಪುರುಷರಿಗೆ ದೊಡ್ಡ ಹೊಟ್ಟೆ ಬರುವುದಕ್ಕೆ ಕೇವಲ ಆಹಾರ ಮಾತ್ರ ಕಾರಣವಲ್ಲ! ಹಾಗಾದ್ರೆ ಯಾಕೆ ಈ ರೀತಿ ಆಗುತ್ತೆ? – Kannada News

ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಹೊಟ್ಟೆ ಭಾಗದಲ್ಲಿ ಕೊಬ್ಬು (Belly Fat) ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚಿನವರು ಇದನ್ನು ಹೆಚ್ಚು ಆಹಾರ ಸೇವನೆ, ವ್ಯಾಯಾಮದ ಕೊರತೆ ಅಥವಾ ಅಸ್ವಸ್ಥ ಜೀವನಶೈಲಿಯ ಪರಿಣಾಮ ಎಂದುಕೊಳ್ಳುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಕೆಲ ಸಂದರ್ಭಗಳಲ್ಲಿ ಹೊಟ್ಟೆ ಹೊರಬರುವುದಕ್ಕೆ ದೇಹದ ಒಳಗಿನ ಹಾರ್ಮೋನಲ್ ಬದಲಾವಣೆಗಳೂ ಕಾರಣವಾಗಬಹುದು. ವಯಸ್ಸು ಹೆಚ್ಚಾದಂತೆ ಪುರುಷರ ದೇಹದಲ್ಲಿ ಹಲವು ಹಾರ್ಮೋನಲ್ ಬದಲಾವಣೆಗಳು ಸಂಭವಿಸುತ್ತವೆ. ಅಸಮತೋಲನವಾದ ಆಹಾರ ಪದ್ಧತಿ, ಒತ್ತಡ, ನಿದ್ರಾಹೀನತೆ, ಶಾರೀರಿಕ ಚಟುವಟಿಕೆಯ ಕೊರತೆ ಮತ್ತು ಅಸ್ವಸ್ಥ ಜೀವನಶೈಲಿ ಹಾರ್ಮೋನ್ ಮಟ್ಟವನ್ನು ಪ್ರಭಾವಿಸಬಹುದು. ಹಾರ್ಮೋನುಗಳು ದೇಹದ ಮೆಟಾಬಾಲಿಸಂ, ಕೊಬ್ಬು ಸಂಗ್ರಹಣೆ ಮತ್ತು ಶಕ್ತಿಯ ಸಮತೋಲನವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಸಮತೋಲನದಲ್ಲಿ ವ್ಯತ್ಯಾಸ ಉಂಟಾದರೆ ಹೊಟ್ಟೆ ಭಾಗದಲ್ಲಿ ಕೊಬ್ಬು ಹೆಚ್ಚಾಗುವ ಸಾಧ್ಯತೆ ಹೆಚ್ಚುತ್ತದೆ. ಹಾಗಾದರೆ ಯಾವ ಹಾರ್ಮೋನ್ ಸಮಸ್ಯೆಯಿಂದ ಹೊಟ್ಟೆ ಬೊಜ್ಜು ಕಂಡುಬರುತ್ತದೆ, ಯಾವ ರೀತಿಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಮತ್ತು ಹಾರ್ಮೋನ್ ಸಮತೋಲನ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಹಾರ್ಮೋನ್ ಸಮಸ್ಯೆಯಿಂದ ಹೊಟ್ಟೆ ಹೆಚ್ಚಾಗಬಹುದು?

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (NLM) ಪ್ರಕಟಿಸಿದ ಅಧ್ಯಯನದ ಪ್ರಕಾರ, ಪುರುಷರಲ್ಲಿ ಟೆಸ್ಟೋಸ್ಟೆರೋನ್ ಹಾರ್ಮೋನ್ ಮಟ್ಟ ಕಡಿಮೆಯಾಗುವುದರಿಂದ ಹೊಟ್ಟೆ ಭಾಗದಲ್ಲಿ ಕೊಬ್ಬು ಹೆಚ್ಚಾಗುವ ಅಪಾಯ ಇದೆ. ಟೆಸ್ಟೋಸ್ಟೆರೋನ್ ದೇಹದ ಸ್ನಾಯುಗಳ ಬೆಳವಣಿಗೆ ಮತ್ತು ಕೊಬ್ಬಿನ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಮಟ್ಟ ಕಡಿಮೆಯಾದರೆ ದೇಹದಲ್ಲಿ ಕೊಬ್ಬು ಹೆಚ್ಚಾಗಿ ಸಂಗ್ರಹವಾಗಬಹುದು. ಇದರ ಜೊತೆಗೆ ಇನ್ಸುಲಿನ್, ಕಾರ್ಟಿಸೋಲ್ ಮತ್ತು ಥೈರಾಯ್ಡ್ ಹಾರ್ಮೋನುಗಳ ಅಸಮತೋಲನವೂ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾರ್ಮೋನುಗಳ ವ್ಯತ್ಯಾಸದಿಂದ ದೇಹದ ಶಕ್ತಿ ಬಳಕೆ ಮತ್ತು ಕೊಬ್ಬಿನ ಸಂಗ್ರಹಣೆಯ ಪ್ರಕ್ರಿಯೆ ಬದಲಾಗಬಹುದು.

ಇದನ್ನೂ ಓದಿ: ಮದುವೆಯ ನಂತರ ಪುರುಷರ ತೂಕ ಹೆಚ್ಚಾಗಿ ಬೊಜ್ಜಿನ ಸಮಸ್ಯೆ ಕಂಡು ಬರಲು ಕಾರಣವೇನು?

ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ;

ಹೊಟ್ಟೆ ಹೆಚ್ಚಾಗುವುದರ ಜೊತೆಗೆ ದಣಿವು, ಶಕ್ತಿಯ ಕೊರತೆ, ಸ್ನಾಯು ದುರ್ಬಲತೆ, ನಿದ್ರಾಹೀನತೆ, ಮನಸ್ಥಿತಿ ಬದಲಾವಣೆ ಅಥವಾ ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಕಂಡುಬಂದರೆ ಅದು ಹಾರ್ಮೋನ್ ಸಮಸ್ಯೆಯ ಸೂಚನೆಯಾಗಿರಬಹುದು. ಈ ರೀತಿಯ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಹಾರ್ಮೋನ್ ಸಮತೋಲನ ಕಾಪಾಡಲು ಏನು ಮಾಡಬೇಕು?

ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ ಮತ್ತು ಸರಿಯಾಗಿ ನಿದ್ರೆ ಮಾಡುವುದರಿಂದ ಹಾರ್ಮೋನ್ ಸಮತೋಲನ ಕಾಪಾಡಲು ಸಹಕಾರಿ. ಒತ್ತಡವನ್ನು ನಿಯಂತ್ರಿಸುವುದೂ ಬಹಳ ಮುಖ್ಯ. ಜೊತೆಗೆ ಆರೋಗ್ಯ ತಪಾಸಣೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಬೇಕು. ತೂಕ ವೇಗವಾಗಿ ಹೆಚ್ಚಾಗುತ್ತಿದ್ದರೆ ಅಥವಾ ಸಾಮಾನ್ಯವಲ್ಲದ ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಆರೋಗ್ಯಕರ ಜೀವನಶೈಲಿ ಅನುಸರಿಸುವುದರಿಂದ ತೂಕ ನಿಯಂತ್ರಣದ ಜೊತೆಗೆ ಹಾರ್ಮೋನ್ ಸಮತೋಲನವನ್ನೂ ಕಾಪಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಬಾರಿ ಜಡ್ಜ್ ಪಾತ್ರದಲ್ಲಿ ನಟಿ ತಾರಾ, ಪಾತ್ರದ ಬಗ್ಗ ನಟಿ ಮಾತು

‘ಉತ್ತರ’ (Uthara) ಮತ್ತು ‘ಅಭ್ಯಂಜನ’ ಹೆಸರಿನ ಎರಡು ಕನ್ನಡ ಸಿನಿಮಾಗಳ ಟ್ರೈಲರ್ ಇತ್ತೀಚೆಗಷ್ಟೆ ಒಟ್ಟಿಗೆ ಬಿಡುಗಡೆ ಆಗಿದೆ. ಎರಡೂ ಸಿನಿಮಾಗಳಿಗೂ ಒಬ್ಬರೇ ನಿರ್ದೇಶಕ. ಕಾರ್ಯಕ್ರಮದಲ್ಲಿ ನಟಿ ತಾರಾ ಸೇರಿದಂತೆ ಎರಡೂ ಸಿನಿಮಾಗಳ ಕಲಾವಿದರು ಮತ್ತು ಕೆಲ ತಂತ್ರಜ್ಞರು ಸಹ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ತಾರಾ, ಸಿನಿಮಾದ ನಿರ್ದೇಶಕ ದಿನೇಶ್ ಬಾಬು ಮತ್ತು ನಿರ್ಮಾಪಕ ನಾಗೇಶ್ವರ ಅವರನ್ನು ಕೊಂಡಾಡಿದರು. ಸಿನಿಮಾನಲ್ಲಿ ತಾವು ಜಡ್ಜ್ ಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದ ನಟಿ ತಾರಾ. ಇದೊಂದು ಬಹಳ ಕ್ಲಿಷ್ಟವಾದ ವಿಷಯ ಹೊಂದಿರುವ ಸಿನಿಮಾ. ಇದನ್ನು ಬಹಳ ಪರಿಣಾಮಕಾರಿಯಾಗಿ ತೆರೆಗೆ ತರಲಾಗಿದೆ ಎಂದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ನಿರ್ಣಾಯಕ ಆಡಳಿತ, ದೂರದೃಷ್ಟಿ ಕ್ರಮಗಳು, ಕಾನೂನು ಸರಳತೆ, ಉದ್ಯಮಕ್ಕೆ ಪುಷ್ಟಿ; ಮೋದಿ ಸರ್ಕಾರದ 12 ವರ್ಷಗಳ ಸಾಧನೆಯ ಝಲಕ್ – Kannada News

ನವದೆಹಲಿ, ಜೂನ್ 9: ಪ್ರಧಾನಿ ಮೋದಿ (Narendra Modi) ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದು 12 ವರ್ಷಗಳು ಗತಿಸಿವೆ. ಈ ಡಜನ್ ವರ್ಷಗಳ ಆಡಳಿತದ ದಾಖಲೆಯು ಭಾರತದ ಹಾದಿಯನ್ನೇ ಬದಲಾಯಿಸಿದೆ ಎಂದು ವಿವಿಧ ಕ್ಷೇತ್ರಗಳ ಪರಿಣಿತರು ಹೇಳುತ್ತಾರೆ. ಸಾಕಷ್ಟು ಜಾಗತಿಕ ಪ್ರತಿಕೂಲಕಾರಿ ವಾತಾವರಣಗಳ ನಡುವೆಯೂ ದೇಶದ ಬೆಳವಣಿಗೆ ಸ್ಥಿರವಾಗಿ ಸಾಗುವಂತಾಗಲು ಸರ್ಕಾರ ಕಾಲಕಾಲಕ್ಕೆ ತೆಗೆದುಕೊಂಡ ಸೂಕ್ತ ನಿರ್ಧಾರಗಳು ನಿರ್ಣಾಯಕ ಎನಿಸಿವೆ. 2014ಕ್ಕೆ ಮೊದಲು ನೀತಿ ಪಾರ್ಶ್ವವಾಯುವಿನಿಂದ (Policy Paralysis) ಸರ್ಕಾರ ದಿಕ್ಕೆಟ್ಟಿತ್ತು. ಆ ಪರಿಸ್ಥಿಯಿಂದ ನಿರ್ಣಾಯಕ ಆಡಳಿತದ ಕಡೆಗೆ, ಮಧ್ಯವರ್ತಿಗಳ ಸೋರಿಕೆಯಿಂದ ನೇರ ವಿತರಣೆಯ ಕಡೆಗೆ, ಮತ್ತು ಮೂಲಭೂತ ಮೂಲಸೌಕರ್ಯಗಳ ಕೊರತೆಯಿಂದ ಭವಿಷ್ಯಕ್ಕೆ ಸಿದ್ಧವಿರುವ ಬೆಳವಣಿಗೆಯ ಕಡೆಗೆ ದೇಶವನ್ನು ಮುನ್ನಡೆಸಲಾಗಿದೆ.

ಈ ಆಡಳಿತದ ಪಯಣವನ್ನು ಮೂರು ಪ್ರಮುಖ ಹಂತಗಳಾಗಿ ವಿಂಗಡಿಸಬಹುದು:

  • 2014–2019: ವ್ಯವಸ್ಥೆಯ ಶುದ್ಧೀಕರಣ ಮತ್ತು ರಚನಾತ್ಮಕ ಅಡಿಪಾಯ.
  • 2019–2022: ಕೋವಿಡ್-19 ಸಾಂಕ್ರಾಮಿಕದ ನಡುವೆ ಚೇತರಿಸಿಕೊಳ್ಳುವ ಬಿಕ್ಕಟ್ಟು ನಿರ್ವಹಣೆ.
  • 2022–2026: ವೇಗವರ್ಧಿತ, ಭವಿಷ್ಯಕ್ಕೆ ಸಿದ್ಧವಿರುವ ರಾಷ್ಟ್ರ ನಿರ್ಮಾಣ.

ಹಣಕಾಸು ಸೇರ್ಪಡೆ ಮತ್ತು ಸೋರಿಕೆ ತಡೆಗಟ್ಟುವಿಕೆ

  • ಹಣಕಾಸು ಸೇರ್ಪಡೆ: ಜನ ಧನ್ ಯೋಜನೆ ಮೂಲಕ 56 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ಬಡ ಕುಟುಂಬಗಳನ್ನು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸಲಾಯಿತು.
  • ನೇರ ನಗದು ವರ್ಗಾವಣೆ (DBT): ಮಧ್ಯವರ್ತಿಗಳನ್ನು ತಡೆದು, ಸೋರಿಕೆಯನ್ನು ನಿಲ್ಲಿಸುವ ಮೂಲಕ ನೇರ ನಗದು ವರ್ಗಾವಣೆ ವ್ಯವಸ್ಥೆಯು ₹2.5 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಉಳಿಸಿದೆ.
  • ಸರಳೀಕೃತ ತೆರಿಗೆ ವ್ಯವಸ್ಥೆ: ಜಿಎಸ್‌ಟಿ (GST) ಮೂಲಕ ಇಡೀ ದೇಶವನ್ನು ಒಂದೇ ಮಾರುಕಟ್ಟೆಯಾಗಿ ಒಟ್ಟುಗೂಡಿಸಲಾಯಿತು. ಇದರಿಂದಾಗಿ ಸರಕುಗಳ ಸಾಗಣೆ ಸರಳಗೊಂಡಿತು ಮತ್ತು ಮಾಸಿಕ ತೆರಿಗೆ ಸಂಗ್ರಹವು ₹1.7 lakh ಕೋಟಿಗೂ ಹೆಚ್ಚು ದಾಟುವ ಮೂಲಕ ಆದಾಯ ಹೆಚ್ಚಳವಾಗಿದೆ.

ಕಲ್ಯಾಣ ಯೋಜನೆಗಳು, ಗೌರವ ಮತ್ತು ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ

  • ಸ್ವಚ್ಛತೆ ಮತ್ತು ಆರೋಗ್ಯ: ಸ್ವಚ್ಛ ಭಾರತ ಅಭಿಯಾನದಡಿ 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ವಿಶೇಷವಾಗಿ ಮಹಿಳೆಯರ ಗೌರವ ಹಾಗೂ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ.
  • ಮೂಲಭೂತ ಸೌಕರ್ಯಗಳು: ಪೈಪ್ ಮೂಲಕ ಕುಡಿಯುವ ನೀರು (ಜಲ ಜೀವನ್ ಮಿಷನ್), ವಸತಿ (ಪಿಎಂ ಆವಾಸ್) ಮತ್ತು ವಿದ್ಯುತ್ ಸಂಪರ್ಕವನ್ನು ಒದಗಿಸುವ ಮೂಲಕ ಜನರ ದೈನಂದಿನ ಜೀವನವನ್ನು ಬದಲಾಯಿಸಲಾಗಿದೆ; ಕಲ್ಯಾಣ ಯೋಜನೆಗಳನ್ನು ಆಸ್ತಿ ಮಾಲೀಕತ್ವವನ್ನಾಗಿ ಪರಿವರ್ತಿಸಲಾಗಿದೆ.
  • ಸಾಂಕ್ರಾಮಿಕದ ಸಮಯದಲ್ಲಿ ಸುರಕ್ಷತೆ: ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ಒದಗಿಸಲಾಯಿತು ಮತ್ತು ಸಂಕಷ್ಟದಲ್ಲಿದ್ದ ಕುಟುಂಬಗಳನ್ನು ರಕ್ಷಿಸಲು ಡಿಬಿಟಿ (DBT) ಮೂಲಸೌಕರ್ಯವನ್ನು ಬಳಸಲಾಯಿತು.

ಇದನ್ನೂ ಓದಿ: 12 ವರ್ಷಗಳ ಅಭಿವೃದ್ಧಿ, ವಿಶ್ವಾಸ ಮತ್ತು ಸಾರ್ವಜನಿಕ ಕಲ್ಯಾಣ: ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ

ಆರ್ಥಿಕ ಚೇತರಿಕೆ ಮತ್ತು ಸ್ವಾವಲಂಬಿ ಭಾರತ

  • ನನೆಗುದಿಗೆ ಬಿದ್ದ ಯೋಜನೆಗಳ ಪುನಶ್ಚೇತನ: ನೀತಿ ಪಾರ್ಶ್ವವಾಯುವನ್ನು ಕೊನೆಗೊಳಿಸಿ, ₹10 lakh ಕೋಟಿಗೂ ಹೆಚ್ಚು ಮೌಲ್ಯದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಉದ್ಯೋಗ ಸೃಷ್ಟಿ ಮಾಡಲಾಗಿದೆ.
  • ಸಂಕಷ್ಟವನ್ನೇ ಅವಕಾಶವನ್ನಾಗಿ ಬದಲಿಸಿದ್ದು: ಉದ್ಯಮಗಳು, ಉದ್ಯೋಗಗಳು, ಎಲೆಕ್ಟ್ರಾನಿಕ್ಸ್ ಮತ್ತು ಫಾರ್ಮಾ ವಲಯವನ್ನು ಬೆಂಬಲಿಸಲು ₹20 ಲಕ್ಷ ಕೋಟಿಯ ಆತ್ಮನಿರ್ಭರ ಭಾರತ ಪ್ಯಾಕೇಜ್ ಮತ್ತು ಪಿಎಲ್‌ಐ (PLI) ಯೋಜನೆಗಳನ್ನು ಜಾರಿಗೊಳಿಸಲಾಯಿತು.
  • ಉತ್ಪಾದನಾ ವಲಯದ ಜಿಗಿತ: ಭಾರತವನ್ನು ಆಮದು ಅವಲಂಬನೆಯಿಂದ ಸ್ವಾವಲಂಬಿ ಉತ್ಪಾದನಾ ಶಕ್ತಿಯಾಗಿ ಪರಿವರ್ತಿಸಲಾಗಿದೆ. ಭಾರತದ ಮೊಬೈಲ್ ಉತ್ಪಾದನೆ ಮತ್ತು ರಫ್ತು ತೀವ್ರವಾಗಿ ಬೆಳೆದಿದ್ದು, ರಫ್ತು ಪ್ರಮಾಣವು ₹1.9 ಲಕ್ಷ ಕೋಟಿಯನ್ನು ದಾಟಿದೆ.

ಮೂಲಸೌಕರ್ಯ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI)

  • ಭೌತಿಕ ಮೂಲಸೌಕರ್ಯ: ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು, ವಂದೇ ಭಾರತ್ ರೈಲುಗಳು ಮತ್ತು ಲಾಜಿಸ್ಟಿಕ್ಸ್ ಕಾರಿಡಾರ್‌ಗಳನ್ನು ಅಭೂತಪೂರ್ವ ವೇಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಯಾಣದ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡಲು ಇವೆಲ್ಲವನ್ನೂ ಪಿಎಂ ಗತಿ ಶಕ್ತಿ ಅಡಿಯಲ್ಲಿ ಸಂಯೋಜಿಸಲಾಗಿದೆ.
  • ಡಿಜಿಟಲ್ ಕ್ರಾಂತಿ: ಯುಪಿಐ (UPI) ಮೂಲಕ ತಳಮಟ್ಟದ ಆರ್ಥಿಕತೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ರೈತರು ಮತ್ತು ಸಾಮಾನ್ಯ ನಾಗರಿಕರು ಡಿಜಿಟಲ್ ಆರ್ಥಿಕತೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗಿದೆ.

ರಾಷ್ಟ್ರೀಯ ಭದ್ರತೆ ಮತ್ತು ಸಾಂಸ್ಕೃತಿಕ ಹೆಮ್ಮೆ

  • ಭದ್ರತೆಯಲ್ಲಿ ಶೂನ್ಯ ಸಹಿಷ್ಣುತೆ: ಆರ್ಟಿಕಲ್ 370 ರದ್ದತಿ, ಬಾಲಾಕೋಟ್ ವೈಮಾನಿಕ ದಾಳಿ, ರಕ್ಷಣಾ ಆಧುನೀಕರಣ ಮತ್ತು ಐಎನ್ಎಸ್ ವಿಕ್ರಾಂತ್ ನೌಕೆಯನ್ನು ಸೇನೆಗೆ ಸೇರ್ಪಡೆಗೊಳಿಸುವ ಮೂಲಕ ಭಾರತದ ರಕ್ಷಣಾತ್ಮಕ ಆತ್ಮವಿಶ್ವಾಸವನ್ನು ಪ್ರದರ್ಶಿಸಲಾಗಿದೆ.
  • ಸಾಂಸ್ಕೃತಿಕ ಜಾಗೃತಿ: ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರ, ಶ್ರೀ ಕಾಶಿ ವಿಶ್ವನಾಥ ಕಾರಿಡಾರ್ ಮುಂತಾದ ಐತಿಹಾಸಿಕ ಯೋಜನೆಗಳ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಲಾಗಿದೆ ಮತ್ತು ಬಲಪಡಿಸಲಾಗಿದೆ.

ಭವಿಷ್ಯಕ್ಕೆ ಸಿದ್ಧವಿರುವ ತಂತ್ರಜ್ಞಾನ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿ

  • ಮುಂದಿನ ಪೀಳಿಗೆಯ ಆರ್ಥಿಕತೆ: ಸೆಮಿಕಂಡಕ್ಟರ್ ಮಿಷನ್, ಕೃತಕ ಬುದ್ಧಿಮತ್ತೆ (AI), ಇವಿ (EV) ಪರಿಸರ ವ್ಯವಸ್ಥೆ, ಹಸಿರು ಇಂಧನ ಮತ್ತು ನವೋದ್ಯಮಗಳ (Startups) ಬೆಳವಣಿಗೆಯ ಮೂಲಕ ಮುಂದಿನ ದಶಕಕ್ಕಾಗಿ ಭಾರತವನ್ನು ಸಜ್ಜುಗೊಳಿಸಲಾಗಿದೆ.
  • ಮಹಿಳಾ ಸಬಲೀಕರಣ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸುವ ಐತಿಹಾಸಿಕ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಜಾರಿಗೆ ತರಲಾಗಿದೆ.

ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ

ವಿಶ್ವ ಬಂಧು: ವ್ಯಾಕ್ಸಿನ್ ಮೈತ್ರಿ, ಯಶಸ್ವಿ ಜಿ-20 (G20) ಅಧ್ಯಕ್ಷತೆ, ಹೆಚ್ಚುತ್ತಿರುವ ರಫ್ತು ಮತ್ತು ಆಳವಾದ ಕಾರ್ಯತಂತ್ರದ ಪಾಲುದಾರಿಕೆಗಳ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ವಿಶ್ವಾಸಾರ್ಹ “ವಿಶ್ವ ಬಂಧು” ಆಗಿ ಬಿಂಬಿಸಲಾಗಿದೆ.

ಇದನ್ನೂ ಓದಿ: ಕಳೆದ 12 ವರ್ಷದಲ್ಲಿ ಐಟಿ ಮೊದಲಾದ ಸೆಕ್ಟರ್​ಗಳಲ್ಲಿ ಭಾರತದ ರಫ್ತು ಗಣನೀಯ ಏರಿಕೆ: ದರ್ಪಣ್ ಜೈನ್

12 ವರ್ಷಗಳ ಸಾಧನೆಯ ಸಣ್ಣ ಝಲಕ್

  • 12 ವರ್ಷಕ್ಕೂ ಹಿಂದೆ ಆಡಳಿತ ಎಂದರೆ ‘ಕೇವಲ ಭರವಸೆ ನೀಡುವುದು’ ಎಂದಾಗಿತ್ತು. ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಆಡಳಿತದ ಚರ್ಯೆಯನ್ನೇ ಬದಲಾಯಿಸಿದೆ. ಭರವಸೆ ಕೊಡುವುದಷ್ಟೇ ಅಲ್ಲ, ಅದನ್ನು ನೆರವೇರಿಸುವ ಡೆಲಿವರಿ ಟ್ರ್ಯಾಕಿಂಗ್ ಸಿಸ್ಟಂ ಆಗಿ ಆಡಳಿತವನ್ನು ಮಾರ್ಪಾಡು ಮಾಡಿದೆ.
  • ಕಳೆದ 12 ವರ್ಷಗಳು ಕೇವಲ ಯೋಜನೆಗಳನ್ನು ಘೋಷಿಸಿದ ವರ್ಷಗಳಲ್ಲ; ಅವು ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸಿದ ವರ್ಷಗಳು.
  • ನೇರ ವಿತರಣೆ, ಡಿಜಿಟಲ್ ಇಂಡಿಯಾ, ನಿರ್ಣಾಯಕ ನಾಯಕತ್ವ ಮತ್ತು ಬಡವರ ಗೌರವವೇ ಈ ಸರ್ಕಾರದ ಸಾಧನೆಯ ಗುರುತಾಗಿದೆ.
  • ಭಾರತವು ಕೇವಲ ಒಂದು ‘ಉದಯೋನ್ಮುಖ ಮಾರುಕಟ್ಟೆ’ ಎಂಬ ಚರ್ಚೆಯಿಂದ ಇಂದು ಜಾಗತಿಕ ಮಟ್ಟದಲ್ಲಿ ‘ಉದಯೋನ್ಮುಖ ಮಹಾಶಕ್ತಿ’ ಎಂದು ಗೌರವಿಸಲ್ಪಡುವ ಹಂತಕ್ಕೆ ತಲುಪಿದೆ.
  • ಮೋದಿ ಸರ್ಕಾರದ ಯಶಸ್ಸಿನ ಸೂತ್ರ: ಸುಧಾರಣೆ (Reform), ಪ್ರದರ್ಶನ (Perform), ಪರಿವರ್ತನೆ (Transform) ಮತ್ತು ಬೃಹತ್ ಪ್ರಮಾಣದ ವಿಸ್ತರಣೆ (Scale).
  • ರಾಷ್ಟ್ರದ ಪ್ರಗತಿಯು ಇಂದು ಪ್ರತಿಯೊಬ್ಬ ನಾಗರಿಕನ ದೈನಂದಿನ ಜೀವನದಲ್ಲಿ ನೇರವಾಗಿ ಗೋಚರಿಸುತ್ತಿರುವುದೇ ಈ ಸರ್ಕಾರದ ಅತಿ ದೊಡ್ಡ ಸಾಧನೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಾಲೂರಿನಲ್ಲಿ 80 ಕೋಟಿ ರೂ. ಸರ್ಕಾರಿ ಭೂ ಹಗರಣ: ದಾಖಲೆ ನೋಡ್ತಿದ್ದಂತೆ ಚೇರ್ ಬಿಟ್ಟು ಎದ್ದ ತಹಶೀಲ್ದಾರ್ ರೂಪಾ! – Kannada News

ಮಾಲೂರು, ಜೂ.9: ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ತೊರ್ನಹಳ್ಳಿ ಬಳಿ ಇರುವ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸುಮಾರು 16 ಎಕರೆ ಸರ್ಕಾರಿ ಭೂಮಿಯನ್ನು ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎಂದು ಆರೋಪಿಸಿ ಮಾಲೂರು ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ಧಿಡೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾಜಿ ಶಾಸಕರು ತಹಶೀಲ್ದಾರ್ ರೂಪಾ ಅವರನ್ನು ದಾಖಲೆ ಸಮೇತ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಪ್ರತಿಭಟನೆಯ ವೇಳೆ ಕಬಳಿಕೆಯಾಗಿರುವ ಭೂಮಿಯ ಅಸಲಿ ದಾಖಲೆಗಳನ್ನು ಪ್ರದರ್ಶಿಸಿದ ಮಾಜಿ ಶಾಸಕ ಮಂಜುನಾಥ್ ಗೌಡ, “ತೊರ್ನಹಳ್ಳಿ ಬಳಿಯಿರುವ ಈ 16 ಎಕರೆ ಜಾಗವು 1961ರ ದಾಖಲೆಗಳ ಪ್ರಕಾರ ಅಧಿಕೃತವಾಗಿ ಸರ್ಕಾರಿ ಜಮೀನು ಎಂದು ನಮೂದಾಗಿದೆ. ಆದರೆ, 1963 ರಲ್ಲಿ ಸರ್ಕಾರಿ ರಜಾ ದಿನದಂದೇ ಅಧಿಕಾರಿಗಳ ಶಾಮೀಲಿನಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಶೋಕ್ ಜೈನ್ ಎಂಬುವರ ಹೆಸರಿಗೆ ಕಾನೂನುಬಾಹಿರವಾಗಿ ಖಾತೆ ಬದಲಾವಣೆ ಮಾಡಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು. ಸದ್ಯ ಈ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು 80 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಮಾಜಿ ಶಾಸಕರು ಹಳೆಯ ಕಂದಾಯ ದಾಖಲೆಗಳನ್ನು ಒಂದೊಂದಾಗಿ ಹೊರತೆಗೆದು ಅಧಿಕಾರಿಗಳ ಅಕ್ರಮವನ್ನು ತಹಶೀಲ್ದಾರ್ ರೂಪಾ ಅವರ ಮುಂದೆ ಸಾಬೀತುಪಡಿಸಲು ಆರಂಭಿಸುತ್ತಿದ್ದಂತೆ, ಉತ್ತರಿಸಲಾಗದೆ ತಹಶೀಲ್ದಾರ್ ಕಚೇರಿಯಿಂದ ಹೊರನಡೆದರು.ಈ ವರ್ತನೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟು ದೊಡ್ಡ ಮಟ್ಟದ ಭೂಹಗರಣಕ್ಕೆ ಸಹಕರಿಸಿದ ಅಂದಿನ ಮತ್ತು ಇಂದಿನ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಮಂಜುನಾಥ್ ಗೌಡ ಆಗ್ರಹಿಸಿದರು. ಕಬಳಿಕೆಯಾಗಿರುವ 16 ಎಕರೆ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆ ಕೂಡಲೇ ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕರು ಜಿಲ್ಲಾಡಳಿತಕ್ಕೆ ಕಡಕ್ ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗಿವಿ ವಂಚನೆ ಪ್ರಕರಣ: ಸನ್ನಿ ಲಿಯೋನಿಗೆ ನೊಟೀಸ್ ನೀಡಿದ ಕರ್ನಾಟಕ ಸಿಐಡಿ ಪೊಲೀಸರು – Kannada News

ಕರ್ನಾಟಕ ಸಿಐಡಿ ಪೊಲೀಸರು ನಟಿ ಸನ್ನಿ ಲಿಯೋನಿಗೆ (Sunny Leone) ನೊಟೀಸ್ ನೀಡಿದ್ದಾರೆ. ಹೆಚ್ಚಿನ ಬಡ್ಡಿ ಕೊಡುವುದಾಗಿ ಆಮಿಷವೊಡ್ಡಿ ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಬೆಳಗಾವಿಯ ‘ಶಿವಂ ಅಸೋಸಿಯೇಟ್ಸ್’ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಿಗೆ ಕರ್ನಾಟಕ ಅಪರಾಧ ತನಿಖಾ ಇಲಾಖೆ (CID) ನೋಟಿಸ್ ಜಾರಿ ಮಾಡಿದೆ. ಕಂಪನಿಯ ಮಾಲೀಕ ಶಿವಾನಂದ ನೀಲಣ್ಣವರ, ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಸಂಗ್ರಹಿಸಿದ ಹಣದ ಒಂದು ದೊಡ್ಡ ಭಾಗವನ್ನು ಸನ್ನಿ ಲಿಯೋನ್ ಸೇರಿದಂತೆ ಹಲವು ಚಿತ್ರರಂಗದ ಪ್ರಮುಖ ನಟ-ನಟಿಯರಿಗೆ ವರ್ಗಾವಣೆ ಮಾಡಿರುವುದು ಸಿಐಡಿ ತನಿಖೆಯಿಂದ ಬಹಿರಂಗವಾಗಿದೆ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಿಐಡಿ ಡಿಐಜಿ ಭೀಮಾಶಂಕರ ಗುಳೇದ ಅವರು, ‘ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಸಾರ್ವಜನಿಕರ ಹಣವನ್ನು ಸಿನಿಮಾ ನಟರಿಗೆ ನೀಡಿರುವ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಸನ್ನಿ ಲಿಯೋನ್ ಸೇರಿದಂತೆ ಹಣ ಪಡೆದ ಇತರೆ ನಟ-ನಟಿಯರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಯಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ಸಿಐಡಿ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಶಿವಾನಂದ ನೀಲಣ್ಣವರ ಒಟ್ಟು 40,700 ಹೂಡಿಕೆದಾರರಿಂದ ಬರೊಬ್ಬರಿ 2,400 ಕೋಟಿ ರೂಪಾಯಿಗಳನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ್ದಾನೆ. ಇದರಲ್ಲಿ ಸುಮಾರು 10,000 ಹೂಡಿಕೆದಾರರು ನೆರೆಯ ಮಹಾರಾಷ್ಟ್ರ ರಾಜ್ಯದವರಾಗಿದ್ದಾರೆ. ಸಂಗ್ರಹಿಸಿದ ಭಾರಿ ಮೊತ್ತದಲ್ಲಿ 540 ಕೋಟಿ ರೂಪಾಯಿಗಳನ್ನು ಆತ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ, ಅದರಲ್ಲಿ 170 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾನೆ. ಈ ವಂಚನೆಯ ಜಾಲವನ್ನು ನಡೆಸಲು ಆತ ಸುಮಾರು 30 ಬ್ಯಾಂಕ್ ಖಾತೆಗಳನ್ನು ಬಳಸಿದ್ದು, ಕೇವಲ ಒಂದು ಖಾತೆಯಲ್ಲೇ 36,200 ಪುಟಗಳಷ್ಟು ದೀರ್ಘವಾದ ವಹಿವಾಟಿನ ಇತಿಹಾಸ ಇರುವುದು ಪತ್ತೆಯಾಗಿದೆ.

ಆರೋಪಿ ಶಿವಾನಂದ ನೀಲಣ್ಣವರ ಹಣಕಾಸು ವಂಚನೆಗೆ ಜಾಲವನ್ನು ಬಳಸುತ್ತಿದ್ದ. ಹೊಸದಾಗಿ ಸೇರುತ್ತಿದ್ದ ಹೂಡಿಕೆದಾರರಿಂದ ಬರುತ್ತಿದ್ದ ಹಣವನ್ನು, ಹಳೆಯ ಹೂಡಿಕೆದಾರರಿಗೆ ಮಾಸಿಕ ಬಡ್ಡಿ ಅಥವಾ ಲಾಭಾಂಶದ ರೂಪದಲ್ಲಿ ಹಂಚುತ್ತಿದ್ದ. ಸಾರ್ವಜನಿಕರು ಬಡ್ಡಿಯ ದುರಾಸೆಗೆ ಬಿದ್ದು ಹಣ ಹೂಡಿಕೆ ಮಾಡಿದ್ದರು. ಅಚ್ಚರಿಯ ವಿಷಯವೆಂದರೆ, ಆರೋಪಿಯನ್ನು ಪೊಲೀಸರು ಬಂಧಿಸಿದ ನಂತರವೂ ಜನರ ಮೂಢನಂಬಿಕೆ ಕಡಿಮೆಯಾಗಿಲ್ಲ. ಬಂಧನದ ಕೇವಲ 20 ದಿನಗಳ ಅವಧಿಯಲ್ಲೂ ವಂಚಕನ ಖಾತೆಗೆ ಸಾರ್ವಜನಿಕರು ಮತ್ತೆ 5 ಕೋಟಿಗೂ ಅಧಿಕ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:ಬಣ್ಣಗಳ ನಡುವೆ ಮಾದಕವಾಗಿ ಡ್ಯಾನ್ಸ್ ಮಾಡಿದ ಸನ್ನಿ ಲಿಯೋನಿ

ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ, ವಂಚನೆಯ ಹಣದಿಂದ ಖರೀದಿಸಲಾದ ಆಸ್ತಿಗಳನ್ನು ಜಪ್ತಿ ಮಾಡಲು ಮುಂದಾಗಿದೆ. ಶಿವಾನಂದ ನೀಲಣ್ಣವರ ಕಂಪನಿಯ ಹಣವನ್ನು ತನ್ನ ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ಸುಮಾರು 55 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ವೆಲ್ಫೈರ್, ಎರಡು ಮರ್ಸಿಡಿಸ್ ಬೆಂಜ್, ಡಿಫೆಂಡರ್, ವರ್ನಾ ಮತ್ತು ವೋಲ್ವೋ ಎಕ್ಸ್‌ಸಿ90 ಸೇರಿದಂತೆ ಹಲವು ದುಬಾರಿ ಕಾರುಗಳನ್ನು ಖರೀದಿಸಿದ್ದಾನೆ. ಈ ವಾಹನಗಳು ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿಯಾಗಿದ್ದು, ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಇದರೊಂದಿಗೆ, ಆರಂಭದಲ್ಲಿ ನಿಯಮ ಮೀರಿ ಕಂಪನಿಯಿಂದ ಅತಿಯಾದ ಲಾಭಾಂಶ ಪಡೆದ ಹಳೆಯ ಹೂಡಿಕೆದಾರರಿಗೂ ನೋಟಿಸ್ ನೀಡಿ, ಅವರಿಂದ ಒಟ್ಟು 400 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿ ಇತರೆ ಸಂತ್ರಸ್ತರಿಗೆ ತಲುಪಿಸಲು ಸಿಐಡಿ ಸಿದ್ಧತೆ ನಡೆಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿ ಬಿಕ್ಕಟ್ಟಿನ ನಡುವೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ – Kannada News

ನವದೆಹಲಿ, ಜೂನ್ 9: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ತೀವ್ರ ಆಂತರಿಕ ಬಿಕ್ಕಟ್ಟು ಮತ್ತು ಸಂಸದರ ಬಂಡಾಯದ ವಾತಾವರಣ ನಿರ್ಮಾಣವಾಗಿದೆ. ಇದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ದೊಡ್ಡ ರಾಜಕೀಯ ಹೊಡೆತವಾಗಿದೆ. ಇದರ ಬೆನ್ನಲ್ಲೇ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಇಂದು ನವದೆಹಲಿಯಲ್ಲಿ ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನವದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ವಿರೋಧ ಪಕ್ಷಗಳ ‘ಇಂಡಿಯ’ (INDIA) ಒಕ್ಕೂಟದ ಪ್ರಮುಖ ಸಭೆಯ ಮರುದಿನವೇ ಈ ಭೇಟಿ ನಡೆದಿರುವುದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಟಿಎಂಸಿಯಲ್ಲಿನ ರಾಜಕೀಯ ಬೆಳವಣಿಗೆಗಳ ನಡುವೆ, ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಈ ಇಬ್ಬರು ಹಿರಿಯ ನಾಯಕಿಯರ ಸಭೆ ನಡೆದಿದೆ. ಸೋಮವಾರ ನಡೆದ ಇಂಡಿಯ ಒಕ್ಕೂಟದ ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಪರಸ್ಪರ ಆಲಂಗಿಸಿಕೊಂಡು ಆತ್ಮೀಯತೆ ಪ್ರದರ್ಶಿಸಿದ್ದ ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇತ್ತೀಚಿನ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೋಲು ಕಂಡ ನಂತರ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತ ಕೊನೆಗೊಂಡಿದ್ದು, ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿದಿದೆ.

ಇದನ್ನೂ ಓದಿ: ಲೋಕಸಭೆಯತ್ತ ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಹೆಜ್ಜೆ, ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ

ಈ ಹಿನ್ನಲೆಯಲ್ಲಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ಒಟ್ಟಾಗಿ ಕೆಲಸ ಮಾಡುವ ಮತ್ತು ಸಂಸತ್ತಿನಲ್ಲಿ ಜಂಟಿ ಕಾರ್ಯತಂತ್ರ ರೂಪಿಸುವ ಕುರಿತು ಇಬ್ಬರೂ ನಾಯಕಿಯರು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಮತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ಒಕ್ಕೂಟದ ಬಲವರ್ಧನೆಗೆ ಯತ್ನಿಸುತ್ತಿದ್ದರೆ, ಇತ್ತ ಅವರ ಸ್ವಂತ ಪಕ್ಷದಲ್ಲೇ ಭಾರಿ ಬಂಡಾಯ ಭುಗಿಲೆದ್ದಿದೆ. ಟಿಎಂಸಿಯ ಪ್ರಮುಖ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಸೇರಿದಂತೆ ಸುಮಾರು 20 ಲೋಕಸಭಾ ಸಂಸದರು ದೆಹಲಿಯಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ತಾವು ಟಿಎಂಸಿ ನಾಯಕತ್ವದಿಂದ ಬೇಸತ್ತಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಎನ್‌ಡಿಎ ಒಕ್ಕೂಟವನ್ನು ಸೇರಲು ಅಥವಾ ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳಲು ಅವಕಾಶ ಕೋರಿದ್ದಾರೆ.

ಬಂಡಾಯ ಸಂಸದರಾದ ಪ್ರಸೂನ್ ಬ್ಯಾನರ್ಜಿ, ಶತಬ್ದಿ ರಾಯ್ ಸೇರಿದಂತೆ ಹಲವರು ಕೇಂದ್ರ ಸಚಿವ ಹಾಗೂ ಬಂಗಾಳದ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ಸಭೆ ನಡೆಸಿರುವುದು ಟಿಎಂಸಿಗೆ ದೊಡ್ಡ ಆಘಾತ ನೀಡಿದೆ. ಇದೇ ಬಿಕ್ಕಟ್ಟಿನ ನಡುವೆ ಸೋಮವಾರವಷ್ಟೇ ಟಿಎಂಸಿ ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ತಮ್ಮ ರಾಜ್ಯಸಭಾ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಶಾಕ್; ಟಿಎಂಸಿಯಿಂದ ಉಚ್ಚಾಟಿತರಾಗಿದ್ದ ರಿತಬ್ರತಾ ಬ್ಯಾನರ್ಜಿ ಈಗ ಪ್ರತಿಪಕ್ಷ ನಾಯಕ!

ನಿನ್ನೆ ನಡೆದ 23 ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ಸಭೆಯಲ್ಲಿ ಮುಖ್ಯವಾಗಿ 5 ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೇಶದ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರ ತಡೆಗೆ ಸರ್ವಪಕ್ಷ ಸಭೆ ಕರೆಯಲು ಕೇಂದ್ರಕ್ಕೆ ಒತ್ತಾಯ ಮಾಡಲು ನಿರ್ಧರಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿನ ಗೊಂದಲಗಳಿಗೆ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಲು ಚರ್ಚಿಸಲಾಗಿದೆ. ಚುನಾವಣಾ ಅಕ್ರಮಗಳ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಜಂಟಿ ಪತ್ರ ಬರೆಯಲು ನಿರ್ಧರಿಸಲಾಗಿದೆ.

ಪ್ರತಿ 2 ತಿಂಗಳಿಗೊಮ್ಮೆ ಸಮನ್ವಯ ಸಭೆ ನಡೆಸಲು ನಿರ್ಧರಿಸಲಾಗಿದೆ. ಸಂಸತ್ತಿನ ಅಧಿವೇಶನದಲ್ಲಿ ಪ್ರತಿದಿನ ಒಟ್ಟಾಗಿ ಆಡಳಿತ ಪಕ್ಷವನ್ನು ಎದುರಿಸಲು ನಿರ್ಧರಿಸಲಾಗಿದೆ. ಆಮ್ ಆದ್ಮಿ ಪಾರ್ಟಿ (AAP) ಒಕ್ಕೂಟದಿಂದ ಹೊರಬಂದಿರುವುದು ಮತ್ತು ತಮಿಳುನಾಡು ಚುನಾವಣೆಯ ಬಳಿಕ ಡಿಎಂಕೆ ಈ ಸಭೆಯಿಂದ ಸಂಪೂರ್ಣವಾಗಿ ದೂರ ಉಳಿದಿರುವುದು ಒಕ್ಕೂಟದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿಯ ಬೆಂಬಲ ಕೋರಿರುವುದು ಪಶ್ಚಿಮ ಬಂಗಾಳ ಹಾಗೂ ಕೇಂದ್ರ ರಾಜಕಾರಣದಲ್ಲಿ ಹೊಸ ಸಮೀಕರಣಗಳಿಗೆ ನಾಂದಿ ಹಾಡಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಕುಟುಂಬದ ಮೂವರು ನಿಗೂಢ ಸಾವು: ಡೆತ್​​ ನೋಟ್​​ನಿಂದ ಸಾವಿನ ರಹಸ್ಯ ಬಯಲಿಗೆ – Kannada News

ಮಂಡ್ಯ, (ಜೂನ್ 09):ಒಂದೇ ಕುಟುಂಬದ ಮೂವರು ಅನುಮಾನಾಸ್ಪಾದವಾಗಿ ಮೃತಪಟ್ಟಿರುವ ಘಟನೆ ಮಂಡ್ಯ (Mandya) ನಗರದ  ನೆಹರು ನಗರದಲ್ಲಿ ನಡೆದಿದೆ. ಪತ್ನಿ ಜ್ಯೋತಿ, ಪತಿ ಪ್ರಭಾಕರ್ ಹಾಗೂ ಇವರ ಪುತ್ರ ಸಂತೋಷ್ ಮೃತರು. ಕಳೆದ ರಾತ್ರಿ ಮನೆಯಲ್ಲಿ ತಾಯಿ ಜ್ಯೋತಿ, ಮಗ ಸಂತೋಷ್​ ಸಾವನ್ನಪ್ಪಿದ್ದರೆ, ಇಂದು (ಜೂನ್ 09) ತಮ್ಮ ಬಟ್ಟೆ ಅಂಗಡಿಯಲ್ಲಿ ಪ್ರಭಾಕರ್ ನೇಣಿಗೆ ಶರಣಾಗಿದ್ದಾರೆ. ಮೊದಲು ಸಾವಿನ ರಹಸ್ಯ ನಿಗೂಢವಾಗಿತ್ತು. ಆದ್ರೆ, ತನಿಖೆ ವೇಳೆ ಪತ್ತೆಯಾದ ಡೆತ್‌ನೋಟ್ (death note) ಹಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಹೌದು…ಪ್ರಭಾಕರ್ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು,  ಸಾವಿಗೆ ನಿಜವಾದ ಕಾರಣ ಬಯಲಿಗೆ ಬಂದಿದೆ.

ಮುಖ್ಯಾಂಶಗಳು

  • ಮಂಡ್ಯದಲ್ಲಿ ಒಂದೇ ಕುಟುಂಬದ ಮೂವರು ಸಾವನಪ್ಪಿದ‌ ಪ್ರಕರಣ
  • ಹೆಂಡತಿ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಭಾಕರ್
  • ಪತ್ನಿ ಜ್ಯೋತಿ, ಮಗ ಸಂತೋಷ್ನನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾನು ಆತ್ಮಹತ್ಯೆ
  • ಆರ್ಥಿಕ ಸಂಕಷ್ಟದಿಂದ ನೊಂದಿದ್ದಾಗಿ ಡೆತ್​ ನೊಟ್​​​​ನಲ್ಲಿ ಉಲ್ಲೇಖ

ಡೆತ್​​ನೋಟ್​​​ನಲ್ಲೇನಿದೆ?

ಪ್ರಭಾಕರ್ ಅವರೇ ಪತ್ನಿ ಜ್ಯೋತಿ ಹಾಗೂ ಮಗ ಸಂತೋಷ್​​ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಬಳಿಕ ತಾನೂ ಸಹ ಬಟ್ಟೆ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಪ್ರಭಾಕರ್​​ ಬರೆದಿರುವ ಡೆತ್​ನೋಟ್​ (Death Note) ಪತ್ತೆಯಾಗಿದ್ದು, ಡೆತ್‌ನೋಟ್‌ನಲ್ಲಿ ಪ್ರಭಾಕರ್ ಅವರು ತಮ್ಮ ಆರ್ಥಿಕ ಸಂಕಷ್ಟವನ್ನು ಉಲ್ಲೇಖಿಸಿದ್ದಾರೆ. ಬಟ್ಟೆ ವ್ಯಾಪಾರ ಕುಸಿತಗೊಂಡಿದ್ದು, ಸಾಲದ ಒತ್ತಡ ಹೆಚ್ಚಾಗಿತ್ತು. ಖಾಸಗಿ ಫೈನಾನ್ಸ್ ಸಂಸ್ಥೆಗಳ ಸಾಲದ ಒತ್ತಡ ಮತ್ತು ಕಿರುಕುಳದಿಂದ ಮಾನಸಿಕವಾಗಿ ಕುಗ್ಗಿದ್ದೆ. ಅದೇ ಕಾರಣಕ್ಕೆ ಮಗ ಮತ್ತು ಹೆಂಡತಿಯನ್ನು ಸಾಯಿಸಿರುವುದಾಗಿ ಉಲ್ಲೇಖಿಸಿದ್ದಾನೆ.

ಪ್ರಕರಣ ಬೆಳಕಿಗೆ ಬಂದಿದ್ಹೇಗೆ?

ಪತ್ನಿ ಜ್ಯೋತಿ ಅವರನ್ನು ಪಂಚೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಈ ವೇಳೆ ಅಲ್ಲಿಗೆ ಬಂದ ಪುತ್ರ ಸಂತೋಷ್‌ನನ್ನೂ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಮೃತ ಸಂತೋಷ್ ಅವರಿಗೆ ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಘಟನೆ ನಡೆದ ವೇಳೆ ಸೊಸೆ ಗಾಢ ನಿದ್ರೆಯಲ್ಲಿದ್ದ ಕಾರಣ ಮನಯಲ್ಲೇ ಇದ್ದರೂ ಈ ಘಟನೆ ಆಕೆಯ ಗಮನಕ್ಕೆ ಬಂದಿಲ್ಲ.ಬೆಳಿಗ್ಗೆ ಎದ್ದು ತಿಂಡಿ ತಯಾರಿಸಿದ ಬಳಿಕ ಅತ್ತೆಯನ್ನು ಎಬ್ಬಿಸಲು ಕೊಠಡಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಮೃತ ಪ್ರಭಾಕರ್ ಸಹೋದರ ವೆಂಕಟರಾಮು ಪ್ರತಿಕ್ರಿಯಿಸಿದ್ದು, ತಮ್ಮ ನನ್ನ ಬಳಿ ಏನು ಹೇಳಿಕೊಂಡರಲಿಲ್ಲ. ಒಂದು ತಿಂಗಳ ಹಿಂದೆಯಷ್ಟೆ ಮಗನನ್ನ ಮದುವೆ ಮಾಡಿದ್ದ. ಆ ವೇಳೆ ಹಣಕಾಸು ಸಹಾಯ ಬೇಕಾ ಎಂದು ಕೇಳಿದ್ದೆ. ಹಣ ಸಹಾಯ ಏನು ಬೇಡ, ಹಣ ಅಡ್ಜೆಸ್ಟ್ ಆಗಿದೆ ಎಂದಿದ್ದ. ಆಗ ನಾನು ಬಡ್ಡಿಗೆ ಸಾಲ ಮಾಡಬೇಡಾ ಎಂದಿದ್ದೆ. ಆದ್ರೆ ಹಣ ಬೇಕಿದ್ರೆ ಕೇಳ್ತೀನಿ ಎಂದ್ದಿದ್ದ. ಸಂತೋಷ್ ಕೂಡ ಅಪ್ಪನೊಂದಿಗೆ ಅಂಗಡಿ ನೋಡಿಕೊಳ್ತಿದ್ದ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಂಡ್ಯ ಜಿಲ್ಲಾ ಪೊಲೀಸ್ ಎಸ್‌ಪಿ ಶೋಭಾರಾಣಿ, ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿರುವ ಅಂಶಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RSS ವಿರುದ್ಧ ಮತ್ತೆ ಸಮರ ಸಾರಿದ ಪ್ರಿಯಾಂಕ್​​ ಖರ್ಗೆ: ಏಕಾಏಕಿ ಖಡಕ್​​ ಎಚ್ಚರಿಕೆ ಕೊಟ್ಟಿದ್ದೇಕೆ ಗೃಹ ಸಚಿವ? – Kannada News

ಪ್ರಿಯಾಂಕ್​​ ಖರ್ಗೆImage Credit source: Priyank Khrage X Account and PTI

ಬೆಂಗಳೂರು, ಜೂನ್​​ 09: ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವರಾಗಿದ್ದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಬಹಿರಂಗ ಸಮರ ಸಾರಿದ್ದ ಪ್ರಿಯಾಂಕ್​​ ಖರ್ಗೆ ಈಗಿನ ಸಿಎಂ ಡಿ.ಕೆ. ಶಿವಕುಮಾರ್​​ ಅವರ ಸಚಿವ ಸಂಪುಟದಲ್ಲಿ ಗೃಹ ಸಚಿವರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಬಿಜೆಯನ್ನು ಉದ್ದೇಶಿಸಿ ಎಕ್ಸ್​​ ಪೋಸ್ಟ್​​ ಮಾಡಿರುವ ಪ್ರಿಯಾಂಕ್, RSSಗೆ ಪರೋಕ್ಷ ಎಚ್ಚರಿಕೆ ನೀಡಿರೋದೀಗ ಮತ್ತೊಂದು ಸುತ್ತಿನ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಪ್ರಿಯಾಂಕ್​​ ಖರ್ಗೆ ಪೋಸ್ಟ್​​ನಲ್ಲಿ ಏನಿದೆ?

ರಾಜ್ಯ ಬಿಜೆಪಿ ನಾಯಕರೇ ಏಕಿಷ್ಟು ಚಿಂತೆಗೊಳಗಾಗಿದ್ದೀರಿ? ಎಂದು ಜೂನ್​​ 7ರಂದು ಎಕ್ಸ್ ಪೋಸ್ಟ್​​​ ಮೂಲಕ  ಗೃಹ ಸಚಿವ ಪ್ರಿಯಾಂಕ್ ಖರ್ಗೆ​​ ಪ್ರಶ್ನೆ ಮಾಡಿದ್ದರು. ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡು 48 ಗಂಟೆ ಕೂಡ ಆಗಿಲ್ಲ. ನಿಮ್ಮಲ್ಲಿನ ಭಯ, ಆತಂಕ, ನಿಮ್ಮಲ್ಲಿನ ದುಗುಡ ಎಲ್ಲವೂ ವ್ಯಕ್ತವಾಗುತ್ತಿದೆ. ಈಗಾಗಲೇ ಆರ್‌ಎಸ್‌ಎಸ್‌ನ್ನು ಬಳಸಿಕೊಂಡು ನನ್ನನ್ನು ನಿಂದಿಸುತ್ತಿದ್ದೀರಿ. ನನಗೆ ಜೀವ ಬೆದರಿಕೆ ಹಾಕುತ್ತಿದ್ದೀರಿ, ನೀವು ಮಾಡೋದನ್ನ ಮಾಡಿ. ಮುಖ್ಯವಾಗಿ, ನಿಮ್ಮ ‘ವ್ಯಕ್ತಿಗಳ ಸಂಘ’ಕ್ಕೆ ನನ್ನ ನಮಸ್ಕಾರವನ್ನೂ ತಿಳಿಸಿ. ನಿಮ್ಮ ರಾಜಕೀಯ ಮೇಲಧಿಕಾರದ ಸಂಘಟನೆಯ ನೋಂದಣಿಗಾಗಿ ದಾಖಲೆಗಳನ್ನು ಸಿದ್ಧವಾಗಿಡಲು ಹೇಳಿ ಎಂದು ಬರೆದುಕೊಂಡಿದ್ದೀಗ ಬಿಜೆಪಿಗರನ್ನು ಕೆರಳಿಸಿದೆ.

ಇದನ್ನೂ ಓದಿ: ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್​​ ಕೈತಪ್ಪಿದ್ದೇಕೆ?; ಅಸಲಿ ಸತ್ಯ ಬಹಿರಂಗಪಡಿಸಿದ ಕುಮಾರಸ್ವಾಮಿ

‘ಯಾರೂ ಕಾನೂನಿಗಿಂತ ದೊಡ್ಡವರಲ್ಲ’

ಇನ್ನು RSS ನೋಂದಣಿ ವಿಚಾರವಾಗಿ ಪ್ರಿಯಾಂಕ್ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಗೃಹ ಸಚಿವರ ಹೇಳಿಕೆ ಸರಿ ಇದೆ. ಕಾನೂನು ಪ್ರಕಾರ ಕೆಲಸ ಮಾಡಲು ನೋಂದಣಿ ಅವಶ್ಯಕತೆ ಇದೆ. ನೋಂದಣಿ ಮಾಡಿಕೊಳ್ಳಲು ಆರ್​ಎಸ್​ಎಸ್​​ಗೆ ಏನು ಸಮಸ್ಯೆ? ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದಿದ್ದಾರೆ.

ಕಾಂಗ್ರೆಸಿಗರ ಹೇಳಿಕೆಗೆ ಸಂಸದ ಕೋಟ ಕಿಡಿ

ಕಾಂಗ್ರೆಸಿಗರ ಈ ಹೇಳಿಕೆಗಳಿಗೆ ಬಿಜೆಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಿಡಿ ಕಾರಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕದಲ್ಲಿ ಮಾತ್ರ ಅಲ್ಲ, ಭಾರತ ಸೇರಿ ವಿಶ್ವದ 50 ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಸಂಘದ ಹಿರಿಯರು ನೋಂದಣಿ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ನಾವು ಉತ್ತರ ಕೊಡುವ ಅಗತ್ಯವಿಲ್ಲ, ಸಂಘವೇ ಉತ್ತರ ನೀಡುತ್ತೆ. ಆರ್​ಎಸ್​ಎಸ್​ನ್ನು ಜವಾಹರಲಾಲ್ ನೆಹರು ಬ್ಯಾನ್ ಮಾಡಿದ್ದರು. ನಿಷೇಧಿಸಿದ ಬಳಿಕ ಗಣರಾಜೋತ್ಸವ ಪರೇಡ್​ನಲ್ಲಿ ಭಾಗಿಯಾಗಲು ಮನವಿ ಮಾಡಿದರು. ಇಂದಿರಾ ಗಾಂಧಿ ಬ್ಯಾನ್ ಮಾಡಲು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ ಎಮಬುದನ್ನು ಅವರು ಕಾಂಗ್ರೆಸಿಗರಿಗೆ ನೆನಪಿಸಿದ್ದಾರೆ.

ಸಿಎಂ ಶಿವಕುಮಾರ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗ್ತೇವೆ ಅಂತಾರೆ. ಆದರೆ ಅಪಪ್ರಚಾರ ಮಾಡುವ ವ್ಯಕ್ತಿಯನ್ನು ಗೃಹ ಮಂತ್ರಿ ಮಾಡಿದ್ದಾರೆ. ಆರ್‌ಎಸ್‌ಎಸ್​ಗೆ ಕಿರುಕುಳ ಕೊಡುವ ಬಗ್ಗೆ ಸಿಎಂ ಡಿಕೆಶಿ ಗಮನಹರಿಸಲಿ. ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಇತಿಮಿತಿಗಳಲ್ಲಿ ಕೆಲಸ ಮಾಡಬೇಕು. ಆರ್‌ಎಸ್‌ಎಸ್ ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ. ಇದನ್ನು ಪ್ರಿಯಾಂಕ್ ಖರ್ಗೆ ಅರ್ಥ ಮಾಡಿಕೊಳ್ಳುತ್ತಾರೆ ಅನ್ನೋದು ನನ್ನ ಭಾವನೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆಧ್ಯಾತ್ಮಿಕ ಸ್ಥಳಗಳಿಗೆ ಪ್ರವಾಸ ಹೋಗುವವರಲ್ಲಿ ಜೆನ್‌ ಝೀ ಯುವಕರೇ ಹೆಚ್ಚು; ವರದಿ – Kannada News

ಪ್ರವಾಸ ಎಂದ ತಕ್ಷಣ ನೆನಪಿಗೆ ಬರೋದೇ ಗೋವಾ, ಯುರೋಪ್‌ ಇತ್ಯಾದಿ ಮೋಜು ಮಸ್ತಿಯ ತಾಣ. ಯುವಕರೆಲ್ಲಾ ಇಂತಹ ತಾಣಗಳನ್ನೇ ಇಷ್ಟಪಡುತ್ತಾರೆ, ಆಧ್ಯಾತ್ಮಿಕ ತಾಣಗಳಿಗೆ ಪ್ರವಾಸ (spiritual travel) ಕೈಗೊಳ್ಳೋದು ಹಿರಿ ಜೀವಗಳು ಮಾತ್ರ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಈಗಂತೂ ಹಿರಿಯರಿಗಿಂತ ಯುವಕರೇ ಅತಿ ಹೆಚ್ಚಾಗಿ ಆಧ್ಯಾತ್ಮಿಕ ತಾಣಗಳಿಗೆ ಭೇಟಿ ನೀಡುತ್ತಿದ್ದಾರಂತೆ. ಕಡಲ ತೀರ, ಇತ್ಯಾದಿ ಮೋಜು ಮಸ್ತಿಯ ತಾಣಗಳಿಗೆ ಹೋಗುವ ಬದಲಾಗಿ ಶಾಂತಿ, ನೆಮ್ಮದಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಕಂಡುಕೊಳ್ಳಲು ಭಾರತದ ಜೆನ್‌ ಝೀ ಯುವಕರು ಇತ್ತೀಚಿಗೆ ತಿರುಪತಿ, ಋಷಿಕೇಶ ಮತ್ತು ವಾರಣಾಸಿಯಂತಹ ಧಾರ್ಮಿಕ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. 2026 ರ ಆರ್ಥಿಕ ವರ್ಷದಲ್ಲಿ ಆಧ್ಯಾತ್ಮಿಕ ತಾಣಗಳಿಗೆ ಪ್ರಯಾಣಿಸುವ ಪ್ರಯಾಣಿಕರಲ್ಲಿ ಜನರೇಷನ್ Z ಈಗ 53% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ ಎಂದು ರೆಡ್‌ಬಸ್ ವರದಿ ಮಾಡಿದೆ.

ಧಾರ್ಮಿಕ ತಾಣಗಳಿಗೆ ಹೆಚ್ಚು ಭೇಟಿ ನೀಡುತ್ತಿದ್ದಾರೆ ಭಾರತದ ಜೆನ್‌ ಝೀ ಯುವಕರು:

ವಿಶ್ವದ ಅತಿದೊಡ್ಡ ಆನ್‌ಲೈನ್ ಬಸ್ ಟಿಕೆಟ್ ವೇದಿಕೆಯಾದ ರೆಡ್‌ಬಸ್‌ನ ದತ್ತಾಂಶದ ಪ್ರಕಾರ, ಜೆನ್‌ ಝೀ ಯುವಕರು ಈಗ ಭಾರತದ ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದ್ದಾರೆ.  2026 ರ ಆರ್ಥಿಕ ವರ್ಷದಲ್ಲಿ, ಆಧ್ಯಾತ್ಮಿಕ ತಾಣಗಳಿಗೆ ಪ್ರಯಾಣಿಸುವ ಪ್ರಯಾಣಿಕರಲ್ಲಿ ಯುವ ಪ್ರಯಾಣಿಕರು, ವಿಶೇಷವಾಗಿ ಜೆನ್‌ ಝೀ ಗಳು  53% ಕ್ಕಿಂತ ಹೆಚ್ಚು ಪಾಲನ್ನು ಹೊಂದ್ದಾರೆ. ಇದರಲ್ಲಿ ಸುಮಾರು ಶೇ. 69 ರಷ್ಟು ಯುವಕರಾದರೆ, ಶೇ. 31 ರಷ್ಟು ಯುವತಿಯರು. 2025 ಕ್ಕೆ ಹೋಲಿಸಿದರೆ ಈ ಸಂಖ್ಯೆ ಗಮನಾರ್ಹ ಹೆಚ್ಚಳವಾಗಿದೆ. ಈ ಬದಲಾವಣೆಯು ಯುವಕರಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಜಾಗೃತಿಯ ಸಂಕೇತವಾಗಿದೆ. ಕಡಲತೀರಗಳು, ಪಾರ್ಟಿ, ಮೋಜು ಮಸ್ತಿ ಮತ್ತು ನೈಟ್‌ ಲೈಫ್‌ ತಾಣಗಳ ಬದಲಾಗಿ ದೇವಾಲಯಗಳು, ಧಾರ್ಮಿಕ ಸ್ಥಳಗಳು, ಯೋಗ ಕೇಂದ್ರಗಳು ಮತ್ತು ಧ್ಯಾನ ಕೇಂದ್ರಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ತಿರುಪತಿ, ವಾರಣಾಸಿ, ಉಜ್ಜಯಿನಿ, ಋಷಿಕೇಶ ಮತ್ತು ನಾಂದೇಡ್‌ನಂತಹ ಸ್ಥಳಗಳು ನಂಬಿಕೆ, ಸಂಸ್ಕೃತಿ ಮತ್ತು ಅರ್ಥಪೂರ್ಣ ಅನುಭವಗಳನ್ನು ಬಯಸುವ ಜೆನ್‌ ಝೀಗಳನ್ನು ಹೆಚ್ಚು ಆಕರ್ಷಿಸುತ್ತಿವೆ. ಇವರು ಈ ಪ್ರವಾಸಗಳನ್ನು ಕೇವಲ ದೃಶ್ಯವೀಕ್ಷಣೆಗೆ ಮಾತ್ರವಲ್ಲ, ಸ್ಥಳೀಯ ಸಂಸ್ಕೃತಿಯನ್ನು ಅನುಭವಿಸಲು, ಆಧ್ಯಾತ್ಮಿಕ ಶಾಂತಿಯನ್ನು ಪಡೆಯಲು ಮತ್ತು ತಮ್ಮ ಜೀವನಕ್ಕೆ ಅರ್ಥಪೂರ್ಣ ಅನುಭವಗಳನ್ನು ಸೇರಿಸಲು ಆಯ್ಕೆ ಮಾಡುತ್ತಿದ್ದಾರೆ.

ಜೆನ್‌ ಝೀ ಯುವಕರ ಮೊದಲ ಆಯ್ಕೆ ತಿರುಪತಿ:

ರೆಡ್‌ ಬಸ್‌ ವರದಿಯ ಪ್ರಕಾರ ತಿರುಪತಿ ಅತ್ಯಂತ ಜನಪ್ರಿಯ ಆಧ್ಯಾತ್ಮಿಕ ತಾಣವಾಗಿ ಹೊರಹೊಮ್ಮಿದೆ. ವಿಶೇಷವಾಗಿ ಬೆಂಗಳೂರು-ತಿರುಪತಿ, ಹೈದರಾಬಾದ್–ತಿರುಪತಿ ಆಧ್ಯಾತ್ಮಿಕ ಮಾರ್ಗಗಳಲ್ಲಿ ಜನರೇಷನ್ ಝಡ್ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಲಕ್ಷಾಂತರ ಯುವಕರು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಈ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಇದು ದಕ್ಷಿಣ ಭಾರತದ ಯುವಕರಲ್ಲಿ ತಿರುಪತಿಯನ್ನು ಅತ್ಯಂತ ಆದ್ಯತೆಯ ಯಾತ್ರಾ ಸ್ಥಳವನ್ನಾಗಿ ಮಾಡಿದೆ.

ಇದನ್ನೂ ಓದಿ: ಮೊಬೈಲ್‌ ಇಂಟರ್ನೆಟ್‌ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವಿದು

ಯುವ ಜನತೆಯನ್ನು ಆಕರ್ಷಿಸುವ ಇತರ ಆಧ್ಯಾತ್ಮಿಕ ತಾಣಗಳು:

ತಿರುಪತಿಯ ನಂತರ, ಋಷಿಕೇಶ, ತಂಜಾವೂರು, ವಾರಣಾಸಿ (ಕಾಶಿ), ಉಜ್ಜಯಿನಿ ಮತ್ತು ನಾಂದೇಡ್‌ನಂತಹ ಧಾರ್ಮಿಕ ಸ್ಥಳಗಳಿಗೆ ಈಗಿನ ಯುವಕರು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ.  ಯುವ ಯಾತ್ರಿಕರಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಯೋಗ ಮತ್ತು ಧ್ಯಾನಕ್ಕೆ ವಿಶ್ವಾದ್ಯಂತ ಪ್ರಸಿದ್ಧವಾಗಿರುವ ಋಷಿಕೇಶಕ್ಕೆ ಹೋಗುವವರಲ್ಲಿ ಶೇಕಡಾ 59 ರಷ್ಟು ಪ್ರವಾಸಿಗರು Gen Z ಯುವಕರಾಗಿದ್ದಾರೆ. ಡಿಸೆಂಬರ್ 2025 ರ ಕೊನೆಯ ವಾರದಿಂದ ಜನವರಿ 2026 ರ ಆರಂಭದವರೆಗೆ 12 ಲಕ್ಷಕ್ಕೂ ಹೆಚ್ಚು ಭಕ್ತರು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವಾರಣಾಸಿ, ಪುರಿ, ಅಮೃತಸರ ಮತ್ತು ಹರಿದ್ವಾರದಂತಹ ಸಾಂಪ್ರದಾಯಿಕ ಆಧ್ಯಾತ್ಮಿಕ ಕೇಂದ್ರಗಳು ಸಹ ಯುವ ಪ್ರವಾಸಿಗರಿಂದ ತುಂಬಿವೆ. 2026 ರ ಹೊಸ ವರ್ಷದ ದಿನದಂದು ಐದು ಲಕ್ಷಕ್ಕೂ ಹೆಚ್ಚು ಭಕ್ತರು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಮತ್ತೊಂದೆಡೆ, ಅಯೋಧ್ಯೆಯಲ್ಲಿ ಸಂದರ್ಶಕರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಪುರಿಯ ಜಗನ್ನಾಥ ಧಾಮದಲ್ಲಿಯೂ ಯಾತ್ರಾರ್ಥಿಗಳ ದಟ್ಟಣೆ ದಾಖಲೆಯ ಮಟ್ಟವನ್ನು ತಲುಪಿದೆ.

ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ದೊರೆಯುತ್ತಿದೆ ಉಜ್ವಲ ಭವಿಷ್ಯ:

ಭಾರತದ ಆಧ್ಯಾತ್ಮಿಕ ಪ್ರವಾಸೋದ್ಯಮ ಕ್ಷೇತ್ರವು 2033 ರ ವೇಳೆಗೆ $4.6 ಶತಕೋಟಿ ಮಾರುಕಟ್ಟೆಗೆ ಬೆಳೆಯುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದ ಯುವಕರಲ್ಲಿ ಆಧ್ಯಾತ್ಮಿಕ ಪ್ರಯಾಣದ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ಹೊಸ ಸಾಂಸ್ಕೃತಿಕ ಪುನರುಜ್ಜೀವನದ ಸಂಕೇತವಾಗಿದೆ. ಯುವಕರು ಕೇವಲ ಮನರಂಜನೆ, ಮೋಜು ಮಸ್ತಿ ಮಾತ್ರವಲ್ಲ ನಂಬಿಕೆ, ಸಂಪ್ರದಾಯ, ಆತ್ಮಾವಲೋಕನ ಮತ್ತು ಅರ್ಥಪೂರ್ಣ ಅನುಭವಗಳನ್ನು ಪಡೆಯಲು ಆಸಕ್ತಿಯನ್ನು ತೋರುತ್ತಿದ್ದಾರೆ. ಈ ಪ್ರವೃತ್ತಿ ಮುಂಬರುವ ವರ್ಷಗಳಲ್ಲಿ ಭಾರತದ ಆಧ್ಯಾತ್ಮಿಕ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಯಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಬುಕಿಂಗ್ ಸೌಲಭ್ಯಗಳು ಈ ಬದಲಾವಣೆಯನ್ನು ಮತ್ತಷ್ಟು ವೇಗಗೊಳಿಸುತ್ತಿವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಜ್ವಲ ಗ್ಯಾಸ್ ಯೋಜನೆಯಲ್ಲಿ ಸಬ್ಸಿಡಿಯುಕ್ತ ಸಿಲಿಂಡರ್ ಸಂಖ್ಯೆ ಕಡಿಮೆ ಮಾಡಲು ನಿಜವಾದ ಕಾರಣ ಇದಾ? – Kannada News

ನವದೆಹಲಿ, ಜೂನ್ 9: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY- PM Ujjwala Yojana) ಅಡಿಯಲ್ಲಿ ಫಲಾನುಭವಿಗಳಿಗೆ ಸಿಗುತ್ತಿದ್ದ ಸಬ್ಸಿಡಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಸಂಖ್ಯೆಯನ್ನು ಕಡಿತಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪ್ರಬಲ ಕಾರಣವೊಂದು ಇದೆ ಎಂದು ಹೇಳಲಾಗುತ್ತಿದೆ. ಬಡವರಿಗೆಂದು ಇರುವ ಈ ಸ್ಕೀಮ್ ಅನ್ನು ಕೆಲ ದುರುಳರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಎನ್​ಎನ್ ನ್ಯೂಸ್18 ವಾಹಿನಿ ವರದಿ ಮಾಡಿದೆ. ಪಿಎಂ ಉಜ್ವಲ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಿಗುತ್ತಿದ್ದ ಸಬ್ಸಿಡಿಯುಕ್ತ ಸಿಲಿಂಡರ್​ಗಳ ಸಂಖ್ಯೆಯನ್ನು 9ರಿಂದ 4ಕ್ಕೆ ಇಳಿಸಲಾಗಿದೆ.

ದುರುಪಯೋಗ ಮತ್ತು ಅಕ್ರಮ ನಿಯಂತ್ರಣ: ಉಜ್ವಲ ಯೋಜನೆಯಡಿ ಸಿಗುವ ಸಬ್ಸಿಡಿ ಸಿಲಿಂಡರ್‌ಗಳನ್ನು ಕೆಲವು ವಂಚಕರು ವಾಣಿಜ್ಯ (Commercial) ಉದ್ದೇಶಗಳಿಗಾಗಿ ಅಕ್ರಮವಾಗಿ ಬೇರೆಡೆಗೆ ಸಾಗಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಫಲಾನುಭವಿಗಳ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ವರ್ಷಕ್ಕೆ 9 ಸಿಲಿಂಡರ್‌ಗಳನ್ನು ಪಡೆದು, ಅವುಗಳನ್ನು ಹೊರಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆಯನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಉಜ್ವಲ ಯೋಜನೆಯ ಗ್ರಾಹಕರು ವರ್ಷಕ್ಕೆ ಬಳಸುವ ಸಿಲಿಂಡರ್‌ಗಳ ಸರಾಸರಿ ಸಂಖ್ಯೆ 4 ಆಗಿದೆ. ಹೀಗಾಗಿ, ನೈಜ ಬಳಕೆಯ ಆಧಾರದ ಮೇಲೆಯೇ ಈ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೆಚ್ಚುವರಿ ಸಿಲಿಂಡರ್ ಖರೀದಿಗೆ ಮುಕ್ತ ಅವಕಾಶ

ಉಜ್ವಲ ಯೋಜನೆ ಅಡಿ ಸಬ್ಸಿಡಿಯುಕ್ತ ಸಿಲಿಂಡರ್​ಗಳ ಸಂಖ್ಯೆಯನ್ನು 4ಕ್ಕೆ ಮಿತಿಗೊಳಿಸಿರುವ ನಿಯಮದಿಂದ ಗ್ರಾಹಕರಿಗೆ ಸಿಲಿಂಡರ್ ಲಭ್ಯತೆಯಲ್ಲಿ ವ್ಯತ್ಯಯ ಆಗುವುದಿಲ್ಲ. ಯೋಜನೆಯ ಫಲಾನುಭವಿಗಳು ಅಗತ್ಯ ಇದ್ದಲ್ಲಿ ಹೆಚ್ಚು ಸಿಲಿಂಡರ್​ಗಳನ್ನು ಪಡೆಯಲು ಅವಕಾಶ ಇರುತ್ತದೆ. ಅದರಲ್ಲಿ ಯಾವುದೆ ನಿರ್ಬಂಧ ಇರುವುದಿಲ್ಲ.

ಗ್ರಾಹಕರು ಎಷ್ಟು ಬೇಕಾದರೂ ಸಿಲಿಂಡರ್ ಖರೀದಿಸಬಹುದಾದರೂ, ಅವರ ಬ್ಯಾಂಕ್ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣವು ಕೇವಲ ಮೊದಲ 4 ಸಿಲಿಂಡರ್‌ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅದಕ್ಕಿಂತ ಹೆಚ್ಚು ಖರೀದಿಸುವ ಸಿಲಿಂಡರ್‌ಗಳಿಗೆ ಪೂರ್ಣ ಮಾರುಕಟ್ಟೆ ಬೆಲೆಯನ್ನು ತೆರಬೇಕಾಗುತ್ತದೆ.

ಇದನ್ನೂ ಓದಿ: Ujjwala Yojana: ಉಜ್ವಲ ಫಲಾನುಭವಿಗಳಿಗೆ ಶಾಕ್, 9 ಅಲ್ಲ, ಇನ್ಮುಂದೆ ಸಿಗಲಿದೆ ನಾಲ್ಕೇ ನಾಲ್ಕು ಸಿಲಿಂಡರ್​ಗಳು

ಒಟ್ಟಾರೆಯಾಗಿ, ಸಬ್ಸಿಡಿ ವ್ಯವಸ್ಥೆಯಲ್ಲಿನ ಸೋರಿಕೆಯನ್ನು (Leakage) ತಡೆದು, ಸರ್ಕಾರದ ಹಣ ದುರುಪಯೋಗವಾಗದಂತೆ ತಡೆಯುವುದು ಮತ್ತು ನಿಜವಾದ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪುವಂತೆ ಮಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version