ಹೊಸ ವರ್ಷಕ್ಕೆ ಆನ್‌ಲೈನ್ ಆಹಾರ ವಿತರಕರಿಗೆ ಭರ್ಜರಿ ಬಿಸಿನೆಸ್ ನಿರೀಕ್ಷೆ, ಆದರೆ ಡೆಲಿವರಿ ಬಾಯ್ಸ್​​ಗೆ ಸಂಕಷ್ಟ! – Kannada News | Delivery Challenges in Bengaluru: High Traffic, Strict Timelines, and Low Pay Plague Riders

ಬೆಂಗಳೂರು, ಡಿ.30: ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಆನ್‌ಲೈನ್ ಆಹಾರ ವಿತರಣೆ  ಭರ್ಜರಿ ಬಿಸಿನೆಸ್ ನಡೆಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಆದರೆ, ಈ ಅವಧಿಯಲ್ಲಿ ಆಹಾರ ತಲುಪಿಸುವ ಡೆಲಿವರಿ ಬಾಯ್‌ಗಳ ಸಂಕಷ್ಟಗಳು ಹೆಚ್ಚಾಗುತ್ತಿವೆ. ವಿತರಣಾ ಕಂಪನಿಗಳು ಗ್ರಾಹಕರಿಗೆ ತ್ವರಿತ ವಿತರಣೆಯ ಭರವಸೆ ನೀಡುವುದರಿಂದ, ಡೆಲಿವರಿ ಬಾಯ್‌ಗಳು ಕಠಿಣ ಸಮಯ ಮಿತಿಯ ಒತ್ತಡಕ್ಕೆ ಸಿಲುಕಿದ್ದಾರೆ. ಇದೀಗ ಹೊಸ ವರ್ಷಕ್ಕೂ ಮುನ್ನವೇ ಹೆಚ್ಚು ಹೆಚ್ಚು ಫುಡ್​​​ ಆರ್ಡರ್ ಮಾಡಲು ಶುರುವಾಗಿದೆ.​​​​​​  ಬೆಂಗಳೂರಿನಲ್ಲಿ ವಿಪರೀತ ಸಂಚಾರ ದಟ್ಟಣೆ ಮತ್ತು ಹದಗೆಟ್ಟ ರಸ್ತೆಗಳಿಂದಾಗಿ ನಿಗದಿತ ಸಮಯಕ್ಕೆ ಆಹಾರ ತಲುಪಿಸುವುದು ಅವರಿಗೆ ಅಸಾಧ್ಯವಾಗಿದೆ. 10-20 ನಿಮಿಷಗಳಲ್ಲಿ ಡೆಲಿವರಿ ಆಗಲ್ಲ, ರೆಸ್ಟೋರೆಂಟ್‌ಗಳಲ್ಲಿ ಕಾಯಬೇಕು, ಆದರೂ ಗ್ರಾಹಕರು ಬೇಗ ಬನ್ನಿ ಎಂದು ಒತ್ತಾಯಿಸುತ್ತಾರೆ ಎಂದು ಡೆಲಿವರಿ ಬಾಯ್‌ಗಳು ಹೇಳುತ್ತಾರೆ. ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಗ್ರಾಹಕರು ಮತ್ತು ರೆಸ್ಟೋರೆಂಟ್‌ಗಳಿಂದ ತಡವಾದರೆ, ಡೆಲಿವರಿ ಬಾಯ್‌ಗಳೇ ಬೈಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಪೊಲೀಸರ ರಸ್ತೆ ನಿಯಂತ್ರಣಗಳು ಮತ್ತು ಪಾರ್ಕಿಂಗ್ ಸಮಸ್ಯೆಗಳಿಂದಾಗಿ ರೆಸ್ಟೋರೆಂಟ್‌ಗಳಿಗೂ ವ್ಯಾಪಾರದಲ್ಲಿ ಹಿನ್ನಡೆಯಾಗಿದೆ. ಈ ಎಲ್ಲಾ ಅಂಶಗಳು ಡೆಲಿವರಿ ಬಾಯ್‌ಗಳ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ 2025ರ ಸುಧಾರಣೆಗಳು: GST, ಉದ್ಯೋಗ, ಶಿಕ್ಷಣ ಕ್ಷೇತ್ರದ ಪ್ರಮುಖ ಬದಲಾವಣೆಗಳು – Kannada News | PM Modi’s 2025 Vision: India’s Major Reforms in GST, Jobs & Education

2025ರ ವರ್ಷದಲ್ಲಿ ಭಾರತದಲ್ಲಿ ಬಹಳ ವ್ಯಾಪಕವಾದ ಮತ್ತು ದೊಡ್ಡದೊಡ್ಡ ಸುಧಾರಣೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೆಯೇ ತಮ್ಮ ಲಿಂಕ್ಡ್​ಇನ್​ನಲ್ಲಿ ಒಂದು ಬ್ಲಾಗ್ ಬರೆದಿದ್ದು, 2025ರಲ್ಲಿ ಸರ್ಕಾರ ಕೈಗೊಂಡ ವಿವಿಧ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತವು ಸುಧಾರಣೆ ಎಕ್ಸ್​ಪ್ರೆಸ್ ಗಾಡಿ ಹತ್ತಿದೆ. ಈ ದೇಶದ ಜನರೇ ಈ ಎಕ್ಸ್​ಪ್ರೆಸ್​ನ ಎಂಜಿನ್ ಎಂದು ಪ್ರಧಾನಿಗಳು ವ್ಯಾಖ್ಯಾನಿಸಿದ್ದಾರೆ. ಅವರು ಈ ವರ್ಷ ಜಾರಿಯಾದ ಕೆಲ ಸುಧಾರಣೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಜಿಎಸ್​ಟಿ ಸುಧಾರಣೆ, ಆದಾಯ ತೆರಿಗೆ ಇಳಿಕೆ, ಸಣ್ಣ ಉದ್ದಿಮೆಗಳಿಗೆ ರಿಲೀಫ್, ಇನ್ಷೂರೆನ್ಸ್ ಸೆಕ್ಟರ್​ಗೆ ಎಫ್​ಡಿಐ, ಸೆಕ್ಯೂರಿಟೀಸ್ ಮಾರ್ಕೆಟ್ ಸುಧಾರಣೆ, ಸಮುದ್ರ ಆರ್ಥಿಕತೆ ಸುಧಾರಣೆ, ಜನ್ ವಿಶ್ವಾಸ್, ಸುಲಭ ಉದ್ಯಮ ವಾತಾವರಣ, ಕಾರ್ಮಿಕ ಸುಧಾರಣೆ, ವ್ಯಾಪಾರ ಮಾರುಕಟ್ಟೆ ವೃದ್ಧಿ, ಪರಮಾಣ ಶಕ್ತಿ ಸುಧಾರಣೆ, ಗ್ರಾಮೀಣ ಉದ್ಯೋಗ ಖಾತ್ರಿ ಸುಧಾರಣೆ, ಶಿಕ್ಷಣ ಸುಧಾರಣೆ, ಇವುಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.

ಜಿಎಸ್​ಟಿ ಸುಧಾರಣೆ

ಶೇ. 5, ಶೇ. 12, ಶೇ. 18 ಮತ್ತು ಶೇ. 28, ಹೀಗೆ ನಾಲ್ಕು ಇದ್ದ ಜಿಎಸ್​ಟಿ ಸ್ಲ್ಯಾಬ್​ಗಳನ್ನು ಎರಡಕ್ಕೆ ಇಳಿಸಲಾಗಿದೆ. ಶೇ. 5 ಮತ್ತು ಶೇ. 18 ಟ್ಯಾಕ್ಸ್ ಸ್ಲ್ಯಾಬ್ ಮಾತ್ರವೇ ಇರುವುದು. ಶೇ. 12 ಮತ್ತು ಶೇ. 28 ಟ್ಯಾಕ್ಸ್ ಸ್ಲ್ಯಾಬ್​ಗಳನ್ನು ರದ್ದು ಮಾಡಲಾಗಿದೆ. ನರೇಂದ್ರ ಮೋದಿ ಅವರು ಈ ಕ್ರಮದಿಂದ ಗ್ರಾಹಕರ ಉತ್ಸಾಹ ಹೆಚ್ಚಿಸಲು ಸಹಾಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೆಕ್ಯೂರಿಟೀಸ್ ಮಾರ್ಕೆಟ್ ರಿಫಾರ್ಮ್

ಸೆಕ್ಯೂರಿಟೀಸ್ ಮಾರ್ಕೆಟ್ ಕೋಡ್ ಬಿಲ್ ಅನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಸೆಬಿ ಆಡಳಿತ ನಿಯಮಗಳನ್ನು ಇದು ಸುಧಾರಿಸುತ್ತದೆ. ಹೂಡಿಕೆದಾರರಿಗೆ ಹೆಚ್ಚಿನ ಭದ್ರತೆ, ಕಟ್ಟುಪಾಡು ಸಡಿಲಿಕೆಗೆ ನೆರವಾಗುತ್ತದೆ. ತಂತ್ರಜ್ಞಾನ ಶಕ್ತ ಮಾರುಕಟ್ಟೆಯನ್ನು ಬಲಗೊಳಿಸುತ್ತದೆ ಎಂದು ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ನರೇಂದ್ರ ಮೋದಿ ಬರೆದಿದ್ದಾರೆ.

ಇದನ್ನೂ ಓದಿ: ಬದಲಾಗುತ್ತಿದೆ ಭಾರತ; 2025ರಲ್ಲಿ ಮಹಾಪರಿವರ್ತನೆ; ಜಿಎಸ್​ಟಿಯಿಂದ ಹಿಡಿದು ಜಿ ರಾಮ್ ಜಿವರೆಗೆ ಹಲವು ಆರ್ಥಿಕ ಸುಧಾರಣೆಗಳು

ಸಾಗರ ಆರ್ಥಿಕತೆಯ ಸುಧಾರಣೆಗಳು…

ಈ ವರ್ಷ ಮುಂಗಾರು ಅಧಿವೇಶನದಲ್ಲಿ ಲೇಡಿಂಗ್ ಆ್ಯಕ್ಟ್, ಸಮುದ್ರ ಮೂಲಕ ಸರಕು ಸಾಗಣೆ ಮಸೂದೆ, ಕರಾವಳಿ ಸಾಗಣೆ ಮಸೂದೆ, ವ್ಯಾಪಾರಿ ಸಾಗಣೆ ಮಸೂದೆ ಮತ್ತು ಭಾರತೀಯ ಬಂದರುಗಳ ಮಸೂದೆ, ಹೀಗೆ ಒಂದೇ ಅಧಿವೇಶನದಲ್ಲಿ ಸಮುದ್ರ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಲ್ಲ ಐದು ಬಿಲ್​ಗಳನ್ನು ಮಂಡಿಸಲಾಗಿದೆ. ಹಲವಾರು ದಶಕಗಳ ಹಿಂದಿನ ಕಾಯ್ದೆಗಳಿಗೆ ಸುಧಾರಣೆಗಳನ್ನು ತರಲಾಗಿದೆ.

ಸುಗಮ ವ್ಯಾಪಾರ ವಾತಾವರಣ

ಉದ್ದಿಮೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಹಲವು ಉತ್ಪನ್ನಗಳಿಗೆ ಕ್ಯುಸಿಒಗಳನ್ನು (ಕ್ವಾಲಿಟಿ ಕಂಟ್ರೋಲ್ ಆರ್ಡರ್) ಹಿಂಪಡೆದಿದೆ. ಸಿಂತೆಟಿಕ್ ಫೈಬರ್, ಯಾರ್ನ್, ಪ್ಲಾಸ್ಟಿಕ್, ಪಾಲಿಮರ್, ಸ್ಟೀಲ್, ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಇತ್ಯಾದಿ ವಿವಿಧ ಕೆಟಗರಿಗಳಲ್ಲಿನ 70ಕ್ಕೂ ಹೆಚ್ಚು ಕ್ಯುಸಿಒಗಳನ್ನು ಕೈಬಿಡಲಾಗಿದೆ. ಇದರಿಂದ ಪಾದರಕ್ಷೆ, ವಾಹನ ಇತ್ಯಾದಿ ಹಲವು ಸೆಕ್ಟರ್​ಗಳಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಆಗುತ್ತದೆ, ರಫ್ತು ಬೆಲೆ ಹೆಚ್ಚು ಸ್ಪರ್ಧಾತ್ಮಕವಾಗುತ್ತದೆ.

ಭಾರತೀಯ ಉತ್ಪನ್ನಗಳಿಗೆ ಜಾಗತಿಕವಾಗಿ ಹೆಚ್ಚು ಮಾರುಕಟ್ಟೆ

2025ರಲ್ಲಿ ನ್ಯೂಜಿಲ್ಯಾಂಡ್, ಓಮನ್ ಮತ್ತು ಬ್ರಿಟನ್ ಜೊತೆ ಭಾರತ ಟ್ರೇಡ್ ಡೀಲ್ ಮಾಡಿಕೊಂಡಿದೆ. ಇದರಿಂದ ಭಾರತದ ಹಲವು ಉತ್ಪನ್ನಗಳಿಗೆ ಈ ದೇಶಗಳು ಆಮದು ಸುಂಕವನ್ನು ರದ್ದು ಮಾಡಬಹುದು, ಅಥವಾ ಕಡಿಮೆ ಮಾಡಬಹುದು. ಇದರಿಂದ ಹೆಚ್ಚಿನ ಮಾರುಕಟ್ಟೆ ಪ್ರವೇಶ ಸಿಗುತ್ತದೆ. ಸ್ವಿಟ್ಜರ್​ಲ್ಯಾಂಡ್, ನಾರ್ವೆ, ಐಸ್​ಲ್ಯಾಂಡ್ ಮತ್ತು ಲೀಕ್ಟನ್​ಸ್ಟೀನ್ ದೇಶಗಳಿರುವ ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್ ಜೊತೆಗೂ ಭಾರತ ಎಫ್​ಟಿಎ ಮಾಡಿಕೊಂಡಿದೆ.

ಇದನ್ನೂ ಓದಿ: ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ

ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಸುಧಾರಣೆ

ಸರ್ಕಾರವು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೊಸ ಸ್ವರೂಪ ಕೊಟ್ಟಿದೆ. ವಿಕಸಿತ ಭಾರತ ಜಿ ರಾಮ್ ಜಿ ಕಾಯ್ದೆ ಜಾರಿಗೆ ತರುತ್ತಿದೆ. ಮನ್ರೇಗಾ ಬದಲು ಈ ಹೊಸ ಕಾಯ್ದೆ ಬರುತ್ತದೆ. ವರ್ಷಕ್ಕೆ ಖಾತ್ರಿ ಉದ್ಯೋಗ ಕೊಡಲಾಗುವ ದಿನಗಳ ಸಂಖ್ಯೆಯನ್ನು 100ರಿಂದ 125ಕ್ಕೆ ಹೆಚ್ಚಿಸಲಾಗಿರುವುದು ಸೇರಿದಂತೆ ಕೆಲ ಮಹತ್ವದ ಸುಧಾರಣೆಗಳನ್ನು ತರಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಆದಾಯ ಹರಿವು ಸಿಗಲು ಅವಕಾಶ ಇರುತ್ತದೆ.

ಶಿಕ್ಷಣ ಸುಧಾರಣೆಗಳು

ಸಂಸತ್​ನಲ್ಲಿ ವಿಕಸಿತ ಭಾರತ ಶಿಕ್ಷಾ ಅಧಿಸ್ಥಾನ್ ಮಸೂದೆಯನ್ನು ಮಂಡಿಸಲಾಗಿದೆ. ಇದು ಕಾಯ್ದೆಯಾದರೆ, ಏಕೀಕೃತ ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆ ಸ್​ಥಾಪಿತವಾಗುತ್ತದೆ. ಯುಜಿಸಿ, ಎಐಸಿಟಿಇ, ಎನ್​ಸಿಟಿಇ ಇತ್ಯಾದಿ ವಿವಿಧ ರೆಗ್ಯುಲೇಟರಿ ಸಂಸ್ಥೆಗಳ ಬದಲು ಒಂದೇ ಸಂಸ್ಥೆಯು ನಿಯಂತ್ರಕವಾಗಿ ಇರುತ್ತದೆ.

ಲಿಂಕ್ಡ್​ಇನ್ ಲೇಖನ ಇರುವ ನರೇಂದ್ರ ಮೋದಿ ಅವರ ಎಕ್ಸ್ ಪೋಸ್ಟ್

(ಮಾಹಿತಿ ಆಧಾರ: ಲಿಂಕ್ಡ್​ಇನ್​ನಲ್ಲಿ ಪ್ರಧಾನಿ ಮೋದಿ ಅವರ ಲೇಖನ)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವರ್ಷಗಳ ಕಾಲ ನೆನಪುಳಿವ ಸಿನಿಮಾ: ‘ಫಾದರ್’ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತು – Kannada News | Darling Krishna talks about his upcoming movie Father

ಡಾರ್ಲಿಂಗ್ ಕೃಷ್ಣ (Darling Krishna) ಕಳೆದ ಕೆಲ ವರ್ಷಗಳಿಂದ ಗಮನ ಸೆಳೆಯುವ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. ‘ಕೌಸಲ್ಯ ಸುಪ್ರಬಾ ರಾಮ’, ‘ಬ್ರಾಟ್’ ಇನ್ನೂ ಕೆಲ ಒಳ್ಳೆಯ ಸಿನಿಮಾಗಳನ್ನು ಡಾರ್ಲಿಂಗ್ ಕೃಷ್ಣ ಮಾಡುತ್ತಾ ಬರುತ್ತಿದ್ದಾರೆ. ಇದೀಗ ‘ಫಾದರ್’ ಹೆಸರಿನ ಭಿನ್ನ ರೀತಿಯ ಸಿನಿಮಾನಲ್ಲಿ ನಟಿಸಿದ್ದಾರೆ. ಪ್ರಕಾಶ್ ರೈ ಅವರು ಸಿನಿಮಾನಲ್ಲಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿರುವ ಡಾರ್ಲಿಂಗ್ ಕೃಷ್ಣ, ‘ಫಾದರ್’ ಸಿನಿಮಾ ಬಹಳ ಭಿನ್ನವಾದ ಆದರೆ ಮನಸ್ಸಿಗೆ ತಾಗುವ ಸಿನಿಮಾ, ಬಹಳ ವರ್ಷಗಳ ಕಾಲ ಈ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಲಿದೆ’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Bhagavad Gita: ಭಗವದ್ಗೀತೆಯನ್ನು ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ? – Kannada News | Bhagavad Gita: Do you know how many benefits there are from reading the Bhagavad Gita?

ಶ್ರೀಮದ್ ಭಗವದ್ಗೀತೆ (Bhagavad Gita) ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿದೆ. 18 ಅಧ್ಯಾಯಗಳು ಮತ್ತು 700 ಶ್ಲೋಕಗಳನ್ನು ಒಳಗೊಂಡಿರುವ ಭಗವದ್ಗೀತೆ  ಅಪಾರ ಮಹತ್ವವನ್ನು ಹೊಂದಿದೆ. ಈ ಪ್ರತಿ ಅಧ್ಯಾಯಗಳು ಆತ್ಮ, ಪರಮಾತ್ಮ, ಭಕ್ತಿ, ಕರ್ಮ ಮತ್ತು ಜೀವನದ ಸಾರವನ್ನು ಒಳಗೊಂಡಿದೆ. ಇಂತಹ ಪವಿತ್ರ ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ ನಮ್ಮ ಜೀವನಕ್ಕೆ ಮಾರ್ಗಸೂಚಿಯಿದ್ದಂತೆ. ಹೌದು ಪ್ರತಿನಿತ್ಯ ಗೀತೆಯನ್ನು ಓದುವ ಮೂಲಕ ಯಶಸ್ವಿ, ಸಂತೋಷದಾಯಕ ಜೀವನವನ್ನು ಹೇಗೆ ನಡೆಸುವುದು ಎಂಬುದನ್ನು ಕಲಿಯುವುದರ ಜೊತೆಗೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಈ ಲೇಖನದಲ್ಲಿ ಭಗವದ್ಗೀತೆಯನ್ನು ಓದುವುದರಿಂದ ಲಭಿಸುವ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.

ಭಗವದ್ಗೀತೆಯನ್ನು ಓದುವುದರಿಂದ ಲಭಿಸುವ ಪ್ರಯೋಜನಗಳು:

ಮಾನಸಿಕ ಶಾಂತಿ ಮತ್ತು ನಿಯಂತ್ರಣ: ಪ್ರತಿದಿನ ಗೀತೆಯನ್ನು ಪಠಿಸುವುದರಿಂದ ಮಾನಸಿಕ ಶಾಂತಿ ಮತ್ತು ಸಂಯಮವನ್ನು ಕಾಪಾಡಿಕೊಳ್ಳಬಹುದು. ಹಾಗೂ ಜೀವನವು ಎಷ್ಟೇ ಸವಾಲುಗಳನ್ನು ಒಡ್ಡಿದರೂ, ಭಾವನೆಗಳ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಬಹುದು. ಗೀತೆಯನ್ನು ಓದುವ ಮೂಲಕ, ಒಬ್ಬ ವ್ಯಕ್ತಿಯು ತನ್ನನ್ನು ತಾನು ಅರ್ಥಮಾಡಿಕೊಳ್ಳಲು ಕಲಿಯುತ್ತಾನೆ ಮತ್ತು ಸಂದರ್ಭಗಳ ಆಧಾರದ ಮೇಲೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಲಿಯುತ್ತಾನೆ.

ಸಕಾರಾತ್ಮಕ ಶಕ್ತಿ: ಶ್ರೀಮದ್ ಭಗವದ್ಗೀತೆಯನ್ನು ಪಠಿಸುವುದರಿಂದ ಜೀವನದಿಂದ ಎಲ್ಲಾ ನಕಾರಾತ್ಮಕತೆಗಳು ದೂರವಾಗುತ್ತವೆ ಮತ್ತು ಸಕಾರಾತ್ಮಕ ಶಕ್ತಿಯು ಹರಡುತ್ತದೆ. ಗೀತೆಯನ್ನು ನಿಯಮಿತವಾಗಿ ಪಠಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಒಬ್ಬ ವ್ಯಕ್ತಿಯು ತನ್ನ ಗುರಿಗಳ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ.

ಕೋಪ ಕಡಿಮೆಯಾಗುತ್ತದೆ: ನಿರಂತರವಾಗಿ ಕೋಪಗೊಳ್ಳುವವರು ಗೀತೆಯನ್ನು ಪಠಿಸಬೇಕು. ಗೀತೆಯನ್ನು ಪಠಿಸುವುದರಿಂದ ವ್ಯಕ್ತಿಯು ಕೋಪ, ದುರಾಸೆ, ಭ್ರಮೆ ಮತ್ತು ಮೋಹದ ಬಂಧಗಳಿಂದ ಮುಕ್ತನಾಗುತ್ತಾನೆ. ಮತ್ತು ಆತನ ಜೀವನದಲ್ಲಿ ಸಂತೋಷ ಮತ್ತು ತೃಪ್ತಿ ಹೆಚ್ಚಾಗುತ್ತದೆ.

ಒತ್ತಡ ಮತ್ತು ಆತಂಕದಿಂದ ಮುಕ್ತಿ: ಇಂದಿನ ಕಾರ್ಯನಿರತ  ಜೀವನದಲ್ಲಿ ಒತ್ತಡ ಮತ್ತು ಆತಂಕ ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಗೀತೆಯನ್ನು ಓದುವುದರಿಂದ ಒಬ್ಬ ವ್ಯಕ್ತಿಗೆ ಜೀವನದ ಸರಿ ಮತ್ತು ತಪ್ಪುಗಳ ಜ್ಞಾನ ಸಿಗುತ್ತದೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಮತ್ತು ಮಾನಸಿಕ ಶಾಂತತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾನೆ. ಗೀತೆಯು ವ್ಯಕ್ತಿಯನ್ನು ಒಳಗಿನಿಂದ ಬಲಪಡಿಸುತ್ತದೆ  ಮತ್ತು ಯಾವುದೇ ಬಿಕ್ಕಟ್ಟನ್ನು ತಾಳ್ಮೆ ಮತ್ತು ತಿಳುವಳಿಕೆಯಿಂದ ಎದುರಿಸಲು ಸಹಾಯ ಮಾಡುತ್ತದೆ.

ಜೀವನದ ಉದ್ದೇಶದ ಸ್ಪಷ್ಟತೆ: ಗೀತೆಯನ್ನು ಓದುವುದರಿಂದ ಒಬ್ಬ ವ್ಯಕ್ತಿಯು ತನ್ನ ಜೀವನದ ಉದ್ದೇಶವನ್ನು ಅರ್ಥಮಾಡಿಕೊಳ್ಳಬಹುದು. ಈ ಜ್ಞಾನವು ವ್ಯಕ್ತಿಯನ್ನು ಸ್ವಾವಲಂಬನೆಯೊಂದಿಗೆ ಯಶಸ್ವಿ ಮತ್ತು ಸಂತೋಷದಾಯಕ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: ಪ್ರತಿನಿತ್ಯ ಪುಸ್ತಕ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಭಗವದ್ಗೀತೆಯನ್ನು ಪಠಿಸುವ ನಿಯಮಗಳು:

  • ಬೆಳಿಗ್ಗೆ ಭಗವದ್ಗೀತೆಯನ್ನು ಓದಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ ಏಕೆಂದರೆ ಈ ಸಮಯದಲ್ಲಿ ಮನಸ್ಸು, ಮೆದುಳು ಮತ್ತು ಪರಿಸರದಲ್ಲಿ ಶಾಂತಿ, ಸಕಾರಾತ್ಮಕತೆ ಇರುತ್ತದೆ.
  • ಸ್ನಾನದ ನಂತರ ಯಾವಾಗಲೂ ಗೀತೆಯನ್ನು ಪಠಿಸಿ. ಮತ್ತು ಈ ಸಮಯದಲ್ಲಿ ನಿಮ್ಮ ಮನಸ್ಸು ಸಂಪೂರ್ಣವಾಗಿ ಶಾಂತವಾಗಿರಬೇಕು.
  • ಗೀತೆಯನ್ನು ಪಠಿಸುವಾಗ ಯಾರೊಂದಿಗೂ ಹೆಚ್ಚು ಮಾತನಾಡಬೇಡಿ ಮತ್ತು ಒಂದೇ ಸ್ಥಳದಲ್ಲಿ ಕುಳಿತು ಓದಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋಹನ್​ಲಾಲ್ ತಾಯಿ ಶಾಂತಕುಮಾರಿ ನಿಧನ; ಅಂತಿಮ ನಮನ ಸಲ್ಲಿಸಿದ ಮಮ್ಮುಟಿ – Kannada News | Mohanlal Mother Shanthakumari dies due to illness at the age of 90 in Ernakulam

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್​ಲಾಲ್ (Mohanlal) ಅವರಿಗೆ ಈ ವರ್ಷದ ಕೊನೆಯಲ್ಲಿ ನೋವಿನ ಸಂದರ್ಭ ಎದುರಾಗಿದೆ. ಅವರ ತಾಯಿ ಶಾಂತಕುಮಾರಿ ನಿಧನರಾಗಿದ್ದಾರೆ. ಮಂಗಳವಾರ (ಡಿಸೆಂಬರ್ 30) ಶಾಂತಕುಮಾರಿ (Shanthakumari) ಅವರು ಎರ್ನಾಕಲಮ್ ನಿವಾಸದಲ್ಲಿ ಕೊನೆಯುಸಿರು ಎಳೆದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಶಾಂತಕುಮಾರಿ ಅವರು ನಿಧನರಾಗುವ ವೇಳೆಗೆ ಮೋಹನ್​​ಲಾಲ್ ಅವರು ಮನೆಯಲ್ಲಿ ಇರಲಿಲ್ಲ. ಚಿತ್ರೀಕರಣದ ಸಲುವಾಗಿ ಅವರು ಹೊರಗಡೆ ಹೋಗಿದ್ದರು. ತಾಯಿಯ ನಿಧನದ (Mohanlal Mother Death) ಸುದ್ದಿ ತಿಳಿದು ಕೂಡಲೇ ಮನೆಗೆ ವಾಪಸ್ಸಾದರು.

ಶಾಂತಕುಮಾರಿ ಅವರ ನಿಧನದಿಂದಾಗಿ ಮೋಹನ್​​ಲಾಲ್ ಅವರ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಸ್ನೇಹಿತರು ಮತ್ತು ಆಪ್ತರು ಬಂದು ಸಂತಾಪ ಸೂಚಿಸುತ್ತಿದ್ದಾರೆ. ಖ್ಯಾತ ನಟ ಮಮ್ಮುಟಿ ಅವರು ಆಗಮಿಸಿ ಶಾಂತಕುಮಾರಿ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಶಾಂತಕುಮಾರಿ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.

ಹಲವು ವರ್ಷಗಳಿಂದ ಶಾಂತಕುಮಾರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ತಿರುವನಂತಪುರಂನಲ್ಲಿ ಅವರು ಹೆಚ್ಚು ಕಾಲ ವಾಸವಾಗಿದ್ದರು. ಆದರೆ ಸ್ಟ್ರೋಕ್ ಆದ ಬಳಿಕ ಅವರನ್ನು ಕೊಚ್ಚಿಗೆ ಕರೆದುಕೊಂದು ಬಂದು ಮೋಹನ್​​ಲಾಲ್ ಚಿಕಿತ್ಸೆ ಕೊಡಿಸುತ್ತಿದ್ದರು. ಕಳೆದ 10 ವರ್ಷಗಳಿಂದ ಶಾಂತಕುಮಾರಿ ಅವರು ಹಾಸಿಗೆ ಹಿಡಿದಿದ್ದರು. ಎರ್ನಾಕುಲಂ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು.

ಮೋಹನ್​ಲಾಲ್ ಅವರ ಸಾಧನೆಗೆ ತಾಯಿ ಶಾಂತಕುಮಾರಿ ಅವರು ಪ್ರೇರಣೆ ಆಗಿದ್ದರು. ಈ ವರ್ಷ ಮೋಹನ್​​ಲಾಲ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂತು. ಪ್ರಶಸ್ತಿ ಸ್ವೀಕರಿಸಿ ಕೊಚ್ಚಿಗೆ ಮರಳಿದ ಬಳಿಕ ಅವರು ಮೊದಲು ಭೇಟಿ ಆಗಿದ್ದೇ ತಮ್ಮ ತಾಯಿಯನ್ನು. ‘ಅಮ್ಮಂದಿರ ದಿನ’ದ ಪ್ರಯುಕ್ತ ಮೋಹನ್​ಲಾಲ್ ಅವರು ತಾಯಿಯ ಫೋಟೋವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಗೌರವ ಪಡೆದ ಮಲಯಾಳಂ ನಟ ಮೋಹನ್​ಲಾಲ್​

ಶಾಂತಕುಮಾರಿ ಅವರ ಪತಿ ವಿಶ್ವನಾಥ್ ನಾಯರ್ ಅವರು ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಅವರು ಕೂಡ ಅನಾರೋಗ್ಯದಿಂದ ಮೃತರಾಗಿದ್ದರು. ಹಿರಿಯ ಮಗ ಪ್ಯಾರೆಲಾಲ್ ಅವರು 2000ನೇ ಇಸವಿಯಲ್ಲಿ ಮರಣಹೊಂದಿದ್ದರು. ಮೋಹನ್​​ಲಾಲ್ ಅವರು ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ತಾಯಿಗಾಗಿ ಸಮಯ ನೀಡುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPL 2026: ಆರ್​ಸಿಬಿಗೆ ಆಘಾತ; 2026 ರ ಡಬ್ಲ್ಯುಪಿಎಲ್​ನಿಂದ ಹಿಂದೆ ಸರಿದ ಎಲ್ಲಿಸ್ ಪೆರ್ರಿ – Kannada News | Ellyse Perry Exits WPL 2026: RCB Faces Major Setback Before Season Start

ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್ (Women’s Premier League) ಮುಂದಿನ ವರ್ಷ ಅಂದರೆ 2026 ರ ಜನವರಿ 9 ರಿಂದ ಆರಂಭವಾಗಲಿದೆ. ಈ ಆವೃತ್ತಿಯ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಡುವೆ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಚಾಂಪಿಯನ್ ಆಟಗಾರ್ತಿ ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್ ಎಲ್ಲಿಸ್ ಪೆರ್ರಿ (Ellyse Perry) ಮುಂದಿನ ಆವೃತ್ತಿಯ ಡಬ್ಲ್ಯುಪಿಎಲ್​ನಿಂದ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಆವೃತ್ತಿಯ ಡಬ್ಲ್ಯುಪಿಎಲ್​ನಿಂದ ಹಿಂದೆ ಸರಿಯುತ್ತಿರುವುದಾಗಿ ಪೆರ್ರಿ ತಿಳಿಸಿದ್ದಾರೆ. ಪೆರ್ರಿ ಅವರ ಈ ನಿರ್ಧಾರ ಆರ್​ಸಿಬಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.

ಪೆರ್ರಿ ಬದಲಿಯಾಗಿ ಬಂದಿದ್ಯಾರು?

ವಾಸ್ತವವಾಗಿಮಿನಿ ಹರಾಜಿಗೂ ಮುನ್ನವೇ ಆರ್​ಸಿಬಿ ಎಲ್ಲಿಸ್ ಪೆರ್ರಿ ಅವರನ್ನು 2 ಕೋಟಿ ರೂ. ಬೆಲೆಗೆ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಪೆರ್ರಿ ಈ ಆವೃತ್ತಿಯಲ್ಲಿ ಆಡುತ್ತಿಲ್ಲ. ಎಲ್ಲಿಸ್ ಪೆರ್ರಿ ತಂಡದಿಂದ ಹಿಂದೆ ಸರಿದ ನಂತರ, ಆರ್‌ಸಿಬಿ ಈಗ ಅವರ ಬದಲಿ ಆಟಗಾರ್ತಿಯನ್ನು ಘೋಷಿಸಿದೆ. 25 ವರ್ಷದ ಆಲ್‌ರೌಂಡರ್ ಸಯಾಲಿ ಸತ್‌ಘರೆ ಅವರನ್ನು ಆರ್‌ಸಿಬಿ ಬದಲಿಯಾಗಿ ಸೇರಿಸಿಕೊಳ್ಳಲಾಗಿದೆ. ಈ ಆಟಗಾರ್ತಿ ಭಾರತ ಪರ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ.

ಈ ಹಿಂದೆ ಗುಜರಾತ್ ಜೈಂಟ್ಸ್ ತಂಡದ ಪರ ನಾಲ್ಕು ಪಂದ್ಯಗಳನ್ನು ಆಡಿರುವ ಸತ್‌ಘರೆ ಎರಡು ಇನ್ನಿಂಗ್ಸ್‌ಗಳಲ್ಲಿ ಒಂದು ವಿಕೆಟ್ ಪಡೆದು 20 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಸಯಾಲಿ ಅವರನ್ನು ಯಾವುದೇ ತಂಡವು ಖರೀದಿಸಿರಲಿಲ್ಲ. ಆದರೆ ಎಲೀಸ್ ಪೆರ್ರಿ ಗಾಯಗೊಂಡ ನಂತರ, ಅವರು ಈಗ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪೆರ್ರಿ WPL ದಾಖಲೆ

ಎಲಿಸ್ ಪೆರ್ರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಇದುವರೆಗೆ 25 ಪಂದ್ಯಗಳನ್ನಾಡಿದ್ದು 64.8 ಸರಾಸರಿಯಲ್ಲಿ 972 ರನ್ ಗಳಿಸಿದ್ದಾರೆ, 132 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ಎಂಟು ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲೂ 14 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:24 pm, Tue, 30 December 25

Source link

ವಿಜಯಪುರ PSI ಜೊತೆಗೆ ವಿವಾಹಿತ ಮಹಿಳೆ ಪರಾರಿ ಕೇಸ್​ಗೆ ಟ್ವಿಸ್ಟ್: ಸತ್ಯ ಬಿಚ್ಚಿಟ್ಟ ಸಂತ್ರಸ್ತೆ – Kannada News | Vijayapura Police Officer Illicit Affair Case: Victim Clarifies Rumours

ವಿಜಯಪುರ, ಡಿಸೆಂಬರ್​​ 30: ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದವಳ ಜೊತೆ ಪೊಲೀಸ್ ಅಧಿಕಾರಿ ಸಂಬಂಧ ಆರೋಪ ವಿಚಾರವಾಗಿ ಸ್ವತಃ ಮಹಿಳೆಯೇ ಟವಿ9 ಕನ್ನಡದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಭೀಮಾಶಂಕರ ಪತ್ನಿ ಅನುರಾಧಾ ತನಗಾದ ಸಮಸ್ಯೆಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದು, ಗಂಡನ ಕಿರುಕುಳದಿಂದ ನಾನು ಆತನಿಂದ ದೂರವಾಗಿದ್ದೇನೆ. ಕುಡಿದು ಬಂದು ಹಲ್ಲೆ ಜೊತೆಗೆ ಕೊಲೆಗೂ ಆತ ಯತ್ನಿಸಿದ್ದ. ಹೀಗಾಗಿ ಗಂಡನಿಂದ ದೂರವಾಗಿ 4 ವರ್ಷಗಳು ಕಳೆದಿವೆ ಎಂದು ತಿಳಿಸಿದ್ದಾರೆ.

ಊರಲ್ಲಿದ್ದ ಜಮೀನು ಮಾರಿ ಬೆಂಗಳೂರಿನಲ್ಲಿ ನಿವೇಶನ ಖರೀದಿ ಮಾಡಿದ್ದೆವು. ಆ ಜಾಗ ನನ್ನ ಹಾಗೂ ಪತಿ ಭೀಮಾಶಂಕರ ಹೆಸರಿನಲ್ಲಿದೆ. ಹೀಗಾಗಿ ಅದನ್ನೂ ತನಗೆ ನೀಡುವಂತೆ ಆತ ಪೀಡಿಸಿದ್ದ. ಈ ಬಗ್ಗೆ ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಲ್ಲೇ ರಾಜಿ ಪಂಚಾಯಿತಿಯೂ ಆಗಿತ್ತು. ಆ ವೇಳೆ ನನಗೆ ಪೊಲೀಸ್ ಅಧಿಕಾರಿ ಮನೋಹರ್ ಕಂಚಗಾರ ಪರಿಚಯವಾಗಿದ್ದರು. ಬಳಿಕ ನಾನು ಒಬ್ಬಳೇ ಬೆಂಗಳೂರಿಗೆ ಬಂದು ನೆಲೆಸಿದರೂ ಗಂಡನ ಹಿಂಸೆ ತಪ್ಪಿರಲಿಲ್ಲ. ಹೀಗಾಗಿ 2022ರಲ್ಲಿ ರಕ್ಷಣೆಯಾಗಿ ಮನೋಹರ್ ಕಂಚಗಾರ ಸಹಾಯ ಪಡೆದಿದ್ದೆ. ಆ ಪರಿಚಯ, ಸ್ನೇಹದಿಂದ ನಾನು ಅವರ ಜೊತೆ ಚಾಟ್ ಮಾಡಿದ್ದೇನೆ. ಈಗ ಅವರ ಜೊತೆ ನನಗೆ ಸಂಪರ್ಕ ಇಲ್ಲ ಎಂದು ಅನುರಾಧಾ ತಿಳಿಸಿದ್ದಾರೆ. ಜೊತೆಗೆ ಪತಿಯಿಂದ ಹಲ್ಲೆಗೊಳಗಾದ ಫೋಟೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು: ಬಯೋಕಾನ್ ಕಂಪನಿಯ 3ನೇ ಮಹಡಿಯಿಂದ ಜಿಗಿದು ಉದ್ಯೋಗಿ ಆತ್ಮಹತ್ಯೆ – Kannada News | Bengaluru: Biocon Employee Dies by Suicide After Jumping From Third Floor

ಬೆಂಗಳೂರು, ಡಿಸೆಂಬರ್​ 30: ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದಲ್ಲಿರುವ ಬಯೋಕಾನ್ ಕಂಪನಿಯ (biocon company) ಉದ್ಯೋಗಿ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಅನಂತ್ ಭಟ್(35) ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಸದ್ಯ ಅನಂತ್ ಮೃತದೇಹವನ್ನು ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅನಾರೋಗ್ಯ: ಮನನೊಂದು ಆಟೋ ಡ್ರೈವರ್ ಆತ್ಮಹತ್ಯೆ

ಅನಾರೋಗ್ಯದ ಹಿನ್ನೆಲೆ ಮನನೊಂದು ಆಟೋ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ನಗರದ ಜಯನಗರ ಬಡಾವಣೆ ನಿವಾಸಿ ಚಂದ್ರಶೇಖರ್ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಮನೆಗೆ ಬರ್ತಾನೆಂದು ಮಗನ ದಾರಿ ಕಾಯುತ್ತಿದ್ದ ತಾಯಿಗೆ ಬರಸಿಡಿಲು: 10 ದಿನದ ಬಳಿಕ ಪುತ್ರ ಶವವಾಗಿ ಪತ್ತೆ

ಕಳೆದ ಹಲವು ವರ್ಷಗಳಿಂದ ಆಟೋ ಚಾಲಕ ಚಂದ್ರಶೇಖರ್‌ಗೆ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದರು. ಆಟೋ ಚಾಲಕನಾಗಿರುವ ಇವರಿಗೆ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಹಣಕಾಸು ಕೊರತೆ ಎದುರಾಗಿದ್ದು, ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇನ್ನೂ ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಚಿತ್ರದುರ್ಗದಲ್ಲಿ​ ಗೀಸರ್​ ಸೋರಿಕೆ: ಉಸಿರುಗಟ್ಟಿ ಯುವತಿ ಸಾವು

ಗೀಸರ್​ ಸೋರಿಕೆ ಆಗಿ ಉಸಿರುಗಟ್ಟಿ ಯುವತಿ ಸಾವನ್ನಪ್ಪಿರುವಂತಹ ಘಟನೆ ಚಿತ್ರದುರ್ಗದ ವಿನಾಯಕ ಕಲ್ಯಾಣ ಮಂಟಪದ ಬಳಿ ‌ಮನೆಯಲ್ಲಿ ನಡೆದಿದೆ. ಬಿಎಸ್​ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೂತನ(20) ಮೃತ ಯುವತಿ. ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ; ಆರೋಪಿ ಅರೆಸ್ಟ್

ವೈದ್ಯರು ಸಾವು ಖಚಿತ ಪಡಿಸಿ ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಗೆ ವಿರೋಧಿಸಿ ಸಂಬಂಧಿಕರು ಯುವತಿಯ ಮೃತದೇಹವನ್ನು ಬೈಕ್​ನಲ್ಲೇ ತೆಗೆದುಕೊಂಡು ಹೋಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಕುಡಿದ ಅಮಲಿನಲ್ಲಿ ಪೊಲೀಸರನ್ನು ಎಳೆದಾಡಿದ ಯುವಕರು, ಐವರ ಮೇಲೆ ಬಿತ್ತು ಎಫ್​​​ಐಆರ್​​ – Kannada News | Devanahalli Bypass: Drunk Driving Check Turns Violent, Youths Assault Police

ದೇವನಹಳ್ಳಿ, ಡಿ.30: ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಮದ್ಯಪಾನದ ಅಮಲಿನಲ್ಲಿದ್ದ ಯುವಕರು ಅವಾಜ್ ಹಾಕಿರುವ ಘಟನೆ ಬೆಂಗಳೂರಿನ ದೇವನಹಳ್ಳಿ ಬೈಪಾಸ್​​​ನಲ್ಲಿ ನೆನ್ನೆ (ಡಿ.29) ರಾತ್ರಿ ನಡೆದಿದೆ. ಡಿಡಿ ಕೇಸ್ ಚೇಕಿಂಗ್ (ಮದ್ಯಪಾನ ಮಾಡಿ ವಾಹನ ಚಲಾಯಿಸುವುದು) ವೇಳೆ ಅವಾಜ್ ಹಾಕಿದ್ದ ಈ ಯುವಕರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕಾರು ಚಾಲಕನನ್ನು ಬ್ರೆತ್ ಅನಾಲೈಸರ್​​ಗೆ ಊದಲು ಹೇಳಿದ್ದಾರೆ. ಆದರೆ ಇದಕ್ಕೆ ಚಾಲಕ ನಿರಾಕರಿಸಿದ್ದಾನೆ. ಈ ವಿಚಾರವಾಗಿ ಪೊಲೀಸರು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಕಾರಿನಿಂದ ಕೆಳಗಿಳಿದು ಟ್ರಾಫಿಕ್ ಪೊಲೀಸರ ಮೇಲೆ ದರ್ಪ ತೋರಿಸಿದ್ದಾನೆ. ಕಾರಿನಲ್ಲಿದ್ದ ಇತರರು ಕೂಡ ಪೊಲೀಸರನ್ನ‌ ಎಳೆದಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ‌ ಮಾಡಿದ್ದಾರೆ ಎಂದು ಹೇಳಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕವಾಗಿ ಅವಮಾನಿಸಿರುವ ಹಿನ್ನೆಲೆ‌ ಪ್ರಕರಣ ದಾಖಲಿಸಲಾಗಿದೆ. ಎ1 ಕಿಶೋರ್, ಎ2 ಪ್ರತಾಪ್, ಎ3 ರಘುನಂದನ್,ಎ4 ಕಾರ್ತಿಕ್ ಮೇಲೆ ಎಫ್ ಐ ಆರ್ ದಾಖಲಾಗಿದೆ. ಟ್ರಾಫಿಕ್ ಪೊಲೀಸರು ನೀಡಿರುವ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

India Post Recruitment 2026: ಭಾರತೀಯ ಅಂಚೆ ಇಲಾಖೆಯಲ್ಲಿ 30,000ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು! – Kannada News | India Post GDS Recruitment 2026: Apply for 30,000+ Posts | 10th Pass Jobs

ಭಾರತೀಯ ಅಂಚೆ ಇಲಾಖೆಯಲ್ಲಿ ನೇಮಕಾತಿ

ಭಾರತೀಯ ಅಂಚೆ ಇಲಾಖೆಯು ದೇಶದ ಅತಿದೊಡ್ಡ ಸರ್ಕಾರಿ ಇಲಾಖೆಗಳಲ್ಲಿ ಒಂದಾಗಿದೆ. ಅಂಚೆ ಇಲಾಖೆಯು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ, ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವುದು ಕೇಂದ್ರ ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಉತ್ತಮ ಅವಕಾಶವಾಗುತ್ತದೆ. ಪ್ರತಿ ವರ್ಷ, ಸಾವಿರಾರು ಯುವಕರು ಅಂಚೆ ಇಲಾಖೆಯ ಉದ್ಯೋಗ ಜಾಹೀರಾತಿಗಾಗಿ ಕಾಯುತ್ತಿರುತ್ತಾರೆ. ಈ ಕ್ರಮದಲ್ಲಿ, ಭಾರತೀಯ ಅಂಚೆ ಇಲಾಖೆಯಲ್ಲಿನ ಉದ್ಯೋಗಗಳಿಗಾಗಿ ಪ್ರಮುಖ ಜಾಹೀರಾತು ಬಿಡುಗಡೆಯಾಗಿದೆ.

2026ರ ಜನವರಿ 15ರಂದು ಅಧಿಕೃತ ಅಧಿಸೂಚನೆ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಅಂದರೆ, ಭಾರತೀಯ ಅಂಚೆ ಇಲಾಖೆಯಲ್ಲಿ ಶಾಖೆಯೇತರ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದರಲ್ಲಿ ಗ್ರಾಮ ಮಟ್ಟದ ನೌಕರರು ಮತ್ತು ಶಾಖಾ ಪೋಸ್ಟ್‌ಮಾಸ್ಟರ್‌ಗಳಂತಹ ಹುದ್ದೆಗಳು ಸೇರಿವೆ.

ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ:

ಇದರ ಜೊತೆಗೆ, ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಜಾಹೀರಾತು ಕೂಡ ಬಿಡುಗಡೆಯಾಗಿದೆ. ಶಾಖೆ ಪೋಸ್ಟ್ ಮಾಸ್ಟರ್ (ಬಿಪಿಎಂ), ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ಎಬಿಪಿಎಂ), ಪೋಸ್ಟ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ ಒಟ್ಟು 30,000 ಹುದ್ದೆಗಳನ್ನು ಭರ್ತಿ ಮಾಡುವ ಸಾಧ್ಯತೆಯಿದೆ. ಈ ಉದ್ಯೋಗಗಳಿಗೆ ಅಧಿಕೃತ ಜಾಹೀರಾತು ಜನವರಿ 15 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು 18 ವರ್ಷ ವಯಸ್ಸಿನವರಾಗಿರಬೇಕು. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಇದರಲ್ಲಿ, ಪರಿಶಿಷ್ಟ ಜಾತಿ (SC) 5 ವರ್ಷಗಳು, ಪರಿಶಿಷ್ಟ ಪಂಗಡ (ST) 5 ವರ್ಷಗಳು, ಇತರ ಹಿಂದುಳಿದ ವರ್ಗಗಳಿಗೆ 3 ವರ್ಷಗಳು ಮತ್ತು ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ ಇದೆ. ಈ ಕೆಲಸಕ್ಕೆ, ನೀವು 10 ನೇ ತರಗತಿ ಅಥವಾ ಅದಕ್ಕೆ ಸಮಾನವಾದ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. 10 ನೇ ತರಗತಿಯಲ್ಲಿ ಪಡೆದ ಅಂಕಗಳ ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವವರು ಸ್ಥಳೀಯ ಭಾಷೆಯನ್ನು ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ದ್ವಿಚಕ್ರ ವಾಹನ ಅಥವಾ ಸೈಕಲ್ ಸವಾರಿ ಮಾಡಲು ತಿಳಿದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಈ ಅಂಚೆ ಇಲಾಖೆಯ ಕೆಲಸಕ್ಕೆ ಅರ್ಜಿ ಸಲ್ಲಿಸಲು, indiapostgdsonline.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಇದಲ್ಲದೆ, ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಶೈಕ್ಷಣಿಕ ಅರ್ಹತೆ, ಜಾತಿ ಪ್ರಮಾಣಪತ್ರ, ಫೋಟೋ, ಸಹಿ, ಫೋನ್ ಸಂಖ್ಯೆ ಇತ್ಯಾದಿಗಳನ್ನು ನೋಂದಾಯಿಸಿಕೊಳ್ಳಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರು, ಟ್ರಾನ್ಸ್‌ಜೆಂಡರ್‌ನಂತಹ ವರ್ಗಗಳಿಗೆ ಸೇರಿದವರು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇತರ ವರ್ಗಗಳಿಗೆ ಸೇರಿದವರು ಅರ್ಜಿ ಶುಲ್ಕವಾಗಿ ರೂ.100 ಪಾವತಿಸಬೇಕು. ಅರ್ಜಿ ಶುಲ್ಕವನ್ನು UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇತ್ಯಾದಿಗಳ ಮೂಲಕವೂ ಪಾವತಿಸಬಹುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version