LSG vs GT: W,W,W,W.. ಕನ್ನಡಿಗ ಪ್ರಸಿದ್ಧ್ ದಾಳಿಗೆ ತತ್ತರಿಸಿದ ಲಕ್ನೋ

LSG vs GT: W,W,W,W.. ಕನ್ನಡಿಗ ಪ್ರಸಿದ್ಧ್ ದಾಳಿಗೆ ತತ್ತರಿಸಿದ ಲಕ್ನೋ

ಐಪಿಎಲ್ 2026 ರ 19 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಏಕಾನಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ 20 ಓವರ್​ಗಳಲ್ಲಿ ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಗುಜರಾತ್ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿದ ಲಕ್ನೋ ಬ್ಯಾಟಿಂಗ್‌ ವಿಭಾಗಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅದರಲ್ಲೂ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಲಕ್ನೋ ಟಾಪ್ ಆರ್ಡರ್ ಬ್ಯಾಟರ್​ಗಳನ್ನು ಬಹುಬೇಗನೇ ಪೆವಿಲಿಯನ್​ಗಟ್ಟುವ ಕೆಲಸ ಮಾಡಿದರು.

ಈ ಪಂದ್ಯದಲ್ಲಿ 4 ಓವರ್​ಗಳನ್ನು ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಕೇವಲ 28 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್​ಗಳನ್ನು ಕಬಳಿಸಿದರು. ಈ 28 ರನ್​ಗಳಲ್ಲಿ 15 ರನ್​​ಗಳಲ್ಲಿ ಅವರ 4ನೇ ಓವರ್​ನಲ್ಲಿ ಬಂದವು. ಉಳಿದಂತೆ ಮೊದಲ ಮೂರು ಓವರ್​ಗಳಲ್ಲಿ ಪ್ರಸಿದ್ಧ್ ಕೇವಲ 13 ರನ್​ಗಳನ್ನು ಬಿಟ್ಟುಕೊಟ್ಟಿದ್ದರು. ಪ್ರಸಿದ್ಧ್ ಉರುಳಿಸಿದ 4 ವಿಕೆಟ್​ಗಳಲ್ಲಿ ಐಡೆನ್ ಮಾರ್ಕ್ರಾಮ್, ಆಯುಷ್ ಬಡೋನಿ, ನಿಕೋಲಸ್ ಪೂರನ್ ಹಾಗೂ ಕಳೆದ ಪಂದ್ಯದ ಹೀರೋ ಮುಕುಲ್ ಚೌಧರಿ ಸೇರಿದ್ದರು.

Source link

ವಯೋವೃದ್ದರು, ಮಹಿಳೆಯರ ಪಾಲಿಗೆ ‘ಆಸರೆ’: ಒಂಟಿ ಬದುಕಿಗೆ ಬೆನ್ನೆಲುಬಾದ ಪೊಲೀಸ್ ಭರವಸೆ

ಹುಬ್ಬಳ್ಳಿ, ಏಪ್ರಿಲ್​ 12: ಹುಬ್ಬಳ್ಳಿಯಂತಹ (hubballi) ಮಹಾನಗರಗಳಲ್ಲಿ ಅಥವಾ ಜನನಿಬಿಡ ಪ್ರದೇಶಗಳಲ್ಲಿ ವಯೋವೃದ್ಧರು, ಮಹಿಳೆಯರು ಸೇರಿದಂತೆ ಒಬ್ಬಂಟಿಯಾಗಿ ವಾಸಿಸುವುದು ಒಂದು ಸವಾಲೇ ಸರಿ. ಯಾವಾಗ ಏನಾಗಿ ಬಿಡುತ್ತದೆಯೋ ಎಂಬ ಭಯ ಕಾಡುತ್ತದೆ. ಹೀಗಾಗಿ ಹುಬ್ಬಳ್ಳಿ ಪೊಲೀಸರು ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ. ಅದೇನೆಂದರೆ ‘ಆಸರೆ’ (Asare). ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರ ಮತ್ತು ವಯೋವೃದ್ಧರಿಗೆ ಅಸುರಕ್ಷತೆ, ಅಭದ್ರತೆ ಕಾಡದಂತೆ ಕಾಳಜಿ ವಹಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಈ ಯೋಜನೆ ಜಾರಿ ಮಾಡಿದೆ.

ದೊಡ್ಡದೊಡ್ಡ ನಗರಗಳಲ್ಲಿ ಮಕ್ಕಳು ಇದ್ದು, ಹೆತ್ತವರು ಬೇರೆಡೆ ವಾಸವಾಗಿರುತ್ತಾರೆ. ಕೆಲವರು ಮದುವೆ ಆಗದೆ ಒಬ್ಬಂಟಿಯಾಗಿರುತ್ತಾರೆ. ಹೀಗೆ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಮತ್ತು ವಯೋವೃದ್ಧರಿಗೆ ಅಸುರಕ್ಷತೆ, ಅಭದ್ರತೆ ಕಾಡುತ್ತದೆ. ಅಂತವರಿಗೆ ಕಾಳಜಿ ವಹಿಸುವ ಉದ್ದೇಶದಿಂದ ರಾಜ್ಯ ಪೊಲೀಸ್ ಇಲಾಖೆಯಿಂದ ಆಸರೆ ಯೋಜನೆ ಜಾರಿಗೊಳಿಸಿದೆ.

ಇದನ್ನೂ ಓದಿ: ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಶಾಸಕ ವಿನೂತನ ಪ್ರಯತ್ನ: ರಾಜ್ಯದಲ್ಲೇ ಮೊದಲು

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 7500ಕ್ಕೂ ಹೆಚ್ಚು ಜನರನ್ನು ಗುರುತಿಸಿ ಅವರಿಗೆ ಸುರಕ್ಷತೆ, ಅಗತ್ಯ ಸಹಕಾರ ನೀಡಲಾಗುತ್ತಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಹಾಗೂ ಹಿರಿಯ ನಾಗರಿಕರ ಕಾಳಜಿಯ ದೃಷ್ಟಿಯಿಂದ ರಾಜ್ಯ ಪೊಲೀಸ್ ಇಲಾಖೆ ಈ ಯೋಜನೆ ಜಾರಿಗೆ ತಂದಿದೆ. ಇದರನ್ವಯ ಆಯಾ ವ್ಯಾಪ್ತಿಯಲ್ಲಿ ಒಂಟಿಯಾಗಿ ವಾಸವಾಗಿರುವ ವೃದ್ಧರ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಅವರಿಗೆ ಬೇಕಾದ ಅಗತ್ಯ ಕಾನೂನು ನೆರವು ನೀಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ 2 ತಿಂಗಳಿಂದ ಮನೆ-ಮನೆ ಸಮೀಕ್ಷೆ ನಡೆಸಿ 7500ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ.

ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ

ವೃದ್ದರು, ಒಂಟಿಯಾಗಿ ವಾಸಿಸುವವರನು ಭೇಟಿಯಾಗುತ್ತಿರುವ ಪೊಲೀಸರು, ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಕಳ್ಳತನ, ದರೋಡೆ ಕೃತ್ಯ ನಡೆದಾಗ ತುರ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ನೀಡಲಾಗುತ್ತಿದೆ. ಸಿಸಿ ಕ್ಯಾಮೆರಾ. ಅಪಾಯದ ಸೈರನ್ ಅಳವಡಿಕೆ ಸಹಿತ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆಯೂ ವಿವರಿಸುತ್ತಿದ್ದಾರೆ.

ತುರ್ತು ವೈದ್ಯಕೀಯ ಸೇವೆ ನೆರವು

ತುರ್ತು ವೈದ್ಯಕೀಯ ಅಗತ್ಯತೆ ಇದ್ದಲ್ಲಿ, ಔಷಧೋಪಚಾರದ ನೆರವು ಬೇಕಿದ್ದರೂ ಆಯಾ ಬೀಟ್ ಪೊಲೀಸರಿಗೆ ಕರೆ ಮಾಡಿದರೆ ಅವರು ಬಂದು ಸಹಾಯ ಮಾಡಲಿದ್ದಾರೆ. ಇದರೊಂದಿಗೆ ವೃದ್ಧಾಪ್ಯ ವೇತನ, ಪಡಿತರ ಚೀಟಿ, ಪಿಂಚಣಿ ಸೇರಿ ಸರ್ಕಾರದ ವಿವಿಧ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ: Viral Post: ಪರ ಭಾಷಿಕರಿಗೆ ಕನ್ನಡ ಕಲಿಸಲು ಬೆಂಗಳೂರು ಆಟೋ ಚಾಲಕನ ವಿನೂತನ ಪ್ರಯತ್ನ

ನಿಗದಿಗೊಳಿಸಿದ ಬೀಟ್ ಸಿಬ್ಬಂದಿಯ ಕರ್ತವ್ಯದ ಮೇಲೂ ನಿಗಾ ಇರಿಸಲಾಗಿದೆ. ಅವರು ಮನೆಗಳಿಗೆ ಭೇಟಿ ನೀಡಿ ನಿರ್ದಿಷ್ಟ ಕಡೆ ಇರಿಸಿದ್ದ ಲಾಗ್ ಬುಕ್‌ನಲ್ಲಿ ಸಹಿ ಮಾಡಬೇಕು. ಹಿರಿಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಜತೆಗೆ ಅವರ ಸಮಸ್ಯೆ ಆಲಿಸಿ ಪರಿಹರಿಸಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ.

Source link

ಆಶಾ ಭೋಸ್ಲೆ ಗಳಿಸಿದ ಆಸ್ತಿಗಳೇನು? ಅವರ ಹಾಡು, ಬ್ಯುಸಿನೆಸ್, ರಿಯಲ್ ಎಸ್ಟೇಟ್ ಆದಾಯ ಎಷ್ಟಿತ್ತು ಗೊತ್ತಾ?

ಭಾರತ ಕಂಡ ಅತ್ಯದ್ಭುತ ಗಾಯನ ಪ್ರತಿಭೆಗಳಲ್ಲಿ ಒಬ್ಬರೆನಿಸಿರುವ ಆಶಾ ಭೋಸ್ಲೆ (Asha Bhosle) ಭಾನುವಾರ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಸಂಗೀತ ಕ್ಷೇತ್ರದಲ್ಲಿ ಒಂದು ಯುಗದ ಅಂತ್ಯವಾಗಿದೆ. 92 ವರ್ಷ ವಯಸ್ಸಾಗಿದ್ದ ಅವರು ಅಪಾರ ಮತ್ತು ಅವಿಸ್ಮರಣೀಯ ಹಾಡುಗಳನ್ನು ನೀಡಿದ್ದಾರೆ. ಅವರಿಗೆ ಸಂಗೀತವೇ ಉಸಿರು ಮತ್ತು ಜೀವನವಾಗಿತ್ತು. ಲತಾ ಮಂಗೇಶ್ಕರ್, ಉಷಾ ಮಂಗೇಶ್ಕರ್, ಮೀನಾ ಮಂಗೇಶ್ಕರ್, ಹೃದಯನಾಥ್ ಮಂಗೇಶ್ಕರ್ ಅವರುಗಳ ಸೋದರಿಯಾದ ಆಶಾ ಭೋಸ್ಲೆ ಬಹಳ ಸುದೀರ್ಘ ಕಾಲ ಗಾಯನ ಕ್ಷೇತ್ರದಲ್ಲಿ ಮಿಂಚಿದವರು. ದಶಕಗಳ ಕಾಲ ಅವರ ಗಾಯನ ಇದೆ. ವಿವಿಧ ತಲೆಮಾರುಗಳ ಹಾಡುಗಳು ಅವರ ಕಂಠಸಿರಿಯಲ್ಲಿ ಬಂದಿವೆ.

ಆಶಾ ಭೋಸ್ಲೆ ಅವರು ಗಾಯನದ ಜೊತೆಗೆ ಬ್ಯುಸಿನೆಸ್, ಹೂಡಿಕೆ ವ್ಯವಹಾರಗಳನ್ನೂ ಮಾಡಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಆಶಾ ಭೋಸ್ಲೆ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಎಂಟು ದಶಕಗಳ ಕಾಲ ಗಾಯಕಿಯಾಗಿದ್ದ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದು 12,000ಕ್ಕೂ ಹೆಚ್ಚು ಹಾಡುಗಳು. ಶಾಸ್ತ್ರೀಯ ಸಂಗೀತ, ಘಜಲ್, ಕ್ಯಾಬರೆ, ಪಾಪ್ ಹೀಗೆ ವಿವಿಧ ಪ್ರಾಕಾರಗಳ ಹಾಡುಗಳು ಅವರ ಕಂಠದಿಂದ ಬಂದಿವೆ. 2011ರಲ್ಲಿ ಅವರಿಗೆ ಗಿನ್ನೆಸ್ ದಾಖಲೆಯ ಗೌರವವೂ ಸಿಕ್ಕಿತು.

ಇದನ್ನೂ ಓದಿ: ಚೆಲ್ಲಾ ಪಿಲ್ಲಿಯಾದ ಜೀವನ, ಕೈಹಿಡಿದ ಸಂಗೀತ: ಆಶಾ ಭೋಸ್ಲೆ ಎಂಬ ಫೀನಿಕ್ಸ್ ಹಕ್ಕಿ

250 ಕೋಟಿ ರೂ ಮೌಲ್ಯದ ಆಸ್ತಿವಂತೆಯಾಗಿದ್ದ ಆಶಾ

ಆಶಾ ಭೋಸ್ಲೆ ಅವರು ಹಾಡಿನಿಂದ ಸಾಕಷ್ಟು ಆದಾಯ ಗಳಿಸಿದ್ದಾರೆ. ಇತರ ವ್ಯವಹಾರಗಳನ್ನೂ ಸೇರಿಸಿದರೆ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 200-250 ಕೋಟಿ ರೂ ಎನ್ನಲಾಗಿದೆ.

ರೆಸ್ಟೋರೆಂಟ್ ಬ್ಯುಸಿನೆಸ್

ಆಶಾ ಭೋಸ್ಲೆ ಅವರು ಹಾಡು ಮಾತ್ರವಲ್ಲದೆ ಬ್ಯುಸಿನೆಸ್ಗೂ ಕೈಹಾಕಿದ್ದರು. ಆಶಾಸ್ ಎನ್ನುವ ಅಂತಾರಾಷ್ಟ್ರೀಯ ರೆಸ್ಟೋರೆಂಟ್ ಚೈನ್ ಅನ್ನು 2002ರಲ್ಲಿ ದುಬೈನಲ್ಲಿ ಆರಂಭಿಸಿದ್ದರು. ಯುಎಇ, ಕುವೇತ್, ಬಹರೇನ್ ಹಾಗೂ ಬ್ರಿಟನ್ ಮೊದಲಾದ ದೇಶಗಳಲ್ಲಿ ಅವರ ರೆಸ್ಟೋರೆಂಟ್​ಗಳಿವೆ.

ಇದನ್ನೂ ಓದಿ: ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ

ರಿಯಲ್ ಎಸ್ಟೇಟ್ ಆಸ್ತಿಗಳು

ಆಶಾ ಭೋಸ್ಲೆ ಅವರು ಮುಂಬೈ, ಪುಣೆ ನಗರಗಳಲ್ಲಿ ಮನೆ ಇತ್ಯಾದಿ ಆಸ್ತಿಗಳನ್ನು ಹೊಂದಿದ್ದಾರೆ. ಅವರುಗಳ ಮೌಲ್ಯ ಸುಮಾರು 80-100 ಕೋಟಿ ರೂ ಎಂದು ಹೇಳಲಾಗುತ್ತಿದೆ.

ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟ ಆಶಾ ಭೋಸ್ಲೆ ಅವರ ಅಂತ್ಯಸಂಸ್ಕಾರ ಏಪ್ರಿಲ್ 13, ಸೋಮವರ ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ನಡೆಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಕರ್ನಾಟಕದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಕ-ಯುವತಿಯರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯು (CRPF) ಭರ್ಜರಿ ಸಿಹಿ ಸುದ್ದಿ ನೀಡಿದೆ. 2026ನೇ ಸಾಲಿನ ತಾಂತ್ರಿಕ ಮತ್ತು ಟ್ರೇಡ್ಸ್‌ಮನ್ ವಿಭಾಗದ ಒಟ್ಟು 9,175 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ಹುದ್ದೆಗಳ ವಿವರ ಮತ್ತು ವೇತನ:

ಈ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ 9,096 ಪುರುಷ ಮತ್ತು 79 ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ-ಲೆವೆಲ್ 3ರ ಅಡಿಯಲ್ಲಿ 21,700 ರಿಂದ 69,100 ರೂ. ವರೆಗೆ ಮಾಸಿಕ ವೇತನ ಹಾಗೂ ಕೇಂದ್ರ ಸರ್ಕಾರದ ಇತರೆ ಭತ್ಯೆಗಳು ದೊರೆಯಲಿವೆ.

ಕರ್ನಾಟಕದಲ್ಲಿ 466 ಹುದ್ದೆಗಳು ಲಭ್ಯ:

ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಈ ಬಾರಿ ಉತ್ತಮ ಅವಕಾಶವಿದ್ದು, ಪುರುಷರ ವಿಭಾಗದಲ್ಲಿ ಮಾತ್ರ 466 ಹುದ್ದೆಗಳನ್ನು ಮೀಸಲಿಡಲಾಗಿದೆ. ಇದರಲ್ಲಿ ಡ್ರೈವರ್, ಕುಕ್, ವಾಟರ್ ಕ್ಯಾರಿಯರ್, ಸಫಾಯಿ ಕರ್ಮಚಾರಿ ಸೇರಿದಂತೆ ವಿವಿಧ ವೃತ್ತಿಪರ ಹುದ್ದೆಗಳು ಸೇರಿವೆ. ಅರ್ಜಿ ಸಲ್ಲಿಕೆ ಆರಂಭ ಏಪ್ರಿಲ್ 20 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 19 ಎಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಯಾವ ಯಾವ ಹುದ್ದೆಗಳಿವೆ? (Trades):

ನೇಮಕಾತಿಯಲ್ಲಿ ಚಾಲಕ (Driver) ಹುದ್ದೆಗೆ ಅತಿ ಹೆಚ್ಚು ಅಂದರೆ 3,176 ಸ್ಥಾನಗಳನ್ನು ನೀಡಲಾಗಿದೆ. ಉಳಿದಂತೆ ಅಡುಗೆಯವರು (Cook-1426), ಬಗ್ಲರ್ (1263), ಸಫಾಯಿ ಕರ್ಮಚಾರಿ (547), ವಾಟರ್ ಕ್ಯಾರಿಯರ್ (502) ಹಾಗೂ ಬಾರ್ಬರ್, ಟೈಲರ್, ಕಾರ್ಪೆಂಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತರು CRPF ನ ಅಧಿಕೃತ ನೇಮಕಾತಿ ಜಾಲತಾಣವಾದ www.rect.crpf.gov.in ಗೆ ಭೇಟಿ ನೀಡಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 011-26160255 ಅನ್ನು ಸಂಪರ್ಕಿಸಲು ಕೋರಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಗ್ರಹಗಳ ಬದಲಾವಣೆಯಿಂದ ಆಗುವ ರಾಜಕೀಯ ಲಾಭ, ನಷ್ಟಗಳು

​ಪ್ರಸ್ತುತ ಆಕಾಶಮಂಡಲದಲ್ಲಿ ಗುರುವು ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ಮತ್ತು ಶನಿಯು ಮೀನ ರಾಶಿಯಲ್ಲಿ ಇರುವುದು ರಾಜ್ಯದ ಆಡಳಿತಾರೂಢರಿಗೆ ಸವಾಲು ಮತ್ತು ಅವಕಾಶ ಎರಡನ್ನೂ ಒಟ್ಟಿಗೆ ತರುತ್ತಿದೆ. ಗುರುವಿನ ಪ್ರಭಾವದಿಂದಾಗಿ ಹೊಸ ಯೋಜನೆಗಳ ಘೋಷಣೆಯಾಗಬಹುದು, ಆದರೆ ಶನಿಯ ಪ್ರಭಾವದಿಂದಾಗಿ ಆ ಯೋಜನೆಗಳ ಅನುಷ್ಠಾನದಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಲಿದೆ.

​ಗೆಲುವು ಪಡೆಯುವ ರಾಶಿಗಳು:

​ಮೇಷ :

ಸೂರ್ಯನು ನಿಮ್ಮ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವುದರಿಂದ, ಈ ರಾಶಿಯ ನಾಯಕರಿಗೆ ಸಿಂಹ ಬಲ ಬರಲಿದೆ. ಅನಿರೀಕ್ಷಿತವಾಗಿ ದೊಡ್ಡ ಜವಾಬ್ದಾರಿಗಳು ಹುಡುಕಿಕೊಂಡು ಬರಬಹುದು. ಸರ್ಕಾರಿ ಮಟ್ಟದ ಮಾತುಕತೆಗಳಲ್ಲಿ ನಿಮ್ಮದೇ ಮೇಲುಗೈ ಆಗಲಿದೆ.

​ಕುಂಭ:

ನಿಮ್ಮ ರಾಶ್ಯಾಧಿಪತಿ ಶನಿಯು ಎರಡನೇ ಮನೆಯಲ್ಲಿರುವುದರಿಂದ ಆರ್ಥಿಕ ಮತ್ತು ಸಂಪನ್ಮೂಲ ಕ್ರೋಢೀಕರಣದಲ್ಲಿ ಯಶಸ್ಸು ಸಿಗಲಿದೆ. ಗುಪ್ತವಾಗಿ ನಡೆಸುವ ರಾಜಕೀಯ ತಂತ್ರಗಳು ಫಲಪ್ರದವಾಗಲಿವೆ.

​ಮಿಶ್ರ ಫಲದ ರಾಶಿಗಳು:

​ಕರ್ಕಾಟಕ:

ಚಂದ್ರನ ಚಲನೆಯಿಂದಾಗಿ ವಾರದ ಆರಂಭದಲ್ಲಿ ಅಸ್ಥಿರತೆ ಇರಲಿದ್ದರೂ, ವಾರಾಂತ್ಯಕ್ಕೆ ಪರಿಸ್ಥಿತಿ ಸುಧಾರಿಸಲಿದೆ. ಸಾರ್ವಜನಿಕ ಭಾಷಣ ಮಾಡುವಾಗ ಎಚ್ಚರವಿರಲಿ; ಮಾತು ತಪ್ಪಾಗಿ ಅರ್ಥೈಸಲ್ಪಡಬಹುದು.

​ಮಕರ:

ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಆದರೆ ವಿರೋಧಿಗಳ ಕುತಂತ್ರದಿಂದಾಗಿ ಗೆಲುವು ಸ್ವಲ್ಪ ವಿಳಂಬವಾಗಬಹುದು. ತಾಳ್ಮೆಯೇ ನಿಮ್ಮ ಯಶಸ್ಸಿನ ಮಂತ್ರ.

​ಸೋಲುವ ರಾಶಿಗಳು:

​ಕನ್ಯಾ:

ಸಪ್ತಮ ಸ್ಥಾನದಲ್ಲಿ ರಾಹುವಿನ ಸಂಚಾರವಿರುವುದರಿಂದ ಮಿತ್ರ ಪಕ್ಷಗಳಿಂದ ಅಥವಾ ಆಪ್ತರಿಂದಲೇ ನಂಬಿಕೆ ದ್ರೋಹವಾಗುವ ಸಾಧ್ಯತೆಯಿದೆ. ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಎಚ್ಚರಿಕೆ ಅಗತ್ಯ.

​ಮಿಥುನ:

ಹತ್ತನೇ ಮನೆಯಲ್ಲಿ ರಾಹು-ಬುಧರ ಯುತಿಯಿಂದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ತಪ್ಪು ಮಾಹಿತಿಯ ಆಧಾರದ ಮೇಲೆ ನೀವು ಇಡುವ ಹೆಜ್ಜೆ ರಾಜಕೀಯವಾಗಿ ದೊಡ್ಡ ಬೆಲೆ ತೆರುವಂತೆ ಮಾಡಬಹುದು.

ವಿಶೇಷ ಸೂಚನೆ ಎಂದರೆ ಮಂಗಳನು ಶನಿಯೊಂದಿಗೆ ಯುತಿಯಲ್ಲಿರುವುದರಿಂದ ರಾಜಕೀಯ ವಲಯದಲ್ಲಿ ತೀವ್ರ ಸ್ವರೂಪದ ವಾಕ್ಸಮರ ಅಥವಾ ಆಂತರಿಕ ಬಂಡಾಯ ಏಳುವ ಸಾಧ್ಯತೆಯಿದೆ. ಹಳೆಯ ನಾಯಕರ ಪ್ರಭಾವ ಕಡಿಮೆಯಾಗಿ, ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ಸಿಗುವಂತಹ ಬೆಳವಣಿಗೆಗಳು ತೆರೆಮರೆಯಲ್ಲಿ ನಡೆಯಲಿವೆ. ಈ ಬದಲಾವಣೆಗಳು ವಿಶೇಷವಾಗಿ ಏಪ್ರಿಲ್ ೧೪ರ ಸೌರಮಾನ ಯುಗಾದಿ ಅನಂತರ ವೇಗ ಪಡೆಯಲಿವೆ.

– ಲೋಹಿತ ಹೆಬ್ಬಾರ್

Source link

ಆಶಾ ಭೋಸ್ಲೆ ಬಗ್ಗೆ ಹಲವರಿಗೆ ತಿಳಿಯದ ವಿಷಯಗಳು ಇಲ್ಲಿವೆ…

ಭಾರತ ಚಿತ್ರರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ (Asha Bhosle) ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. ಆಶಾ ಭೋಸ್ಲೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಿಂದಿ, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಆಶಾ ಭೋಸ್ಲೆ ಹಾಡಿದ್ದರು. ಸುಮಾರು 80ಕ್ಕೂ ಹೆಚ್ಚು ವರ್ಷ ಅವರು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಇದೀಗ ಆಶಾ ಭೋಸ್ಲೆ ನಿಧನ ಹೊಂದಿದ್ದು, ಅವರ ಬಗ್ಗೆ ಹೆಚ್ಚು ಮಂದಿಗೆ ತಿಳಿಯದ ಕೆಲ ಅಪರೂಪದ ಸಂಗತಿಗಳು ಇಲ್ಲಿವೆ…

  • ಆಶಾ ಭೋಸ್ಲೆ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಆಶಾ ಅವರು ರಷ್ಯಾ ಮತ್ತು ಮಲಯ ಭಾಷೆಯಲ್ಲಿಯೂ ಹಾಡು ಹಾಡಿರುವುದು ವಿಶೇಷ.
  • ಆಶಾ ಭೋಸ್ಲೆ ಅವರು ಬಹಳ ಕಡಿಮೆ ವಯಸ್ಸಿನಲ್ಲೇ ಹಾಡಲು ಆರಂಭಿಸಿದರು. ಅವರು ಕೇವಲ 3 ವರ್ಷದವರಿರುವಾಗಲೇ ಸಂಗೀತ ಅಭ್ಯಾಸ ಆರಂಭಿಸಿದ್ದರು. ಮೊದಲ ಹಾಡು ಹಾಡಿದಾಗ ಅವರಿಗೆ ಕೇವಲ 10 ವರ್ಷ.
  • ಆಶಾ ಭೋಸ್ಲೆ ಅವರಿಗೆ ಗೌರವಪೂರ್ವಕವಾಗಿ ಬ್ರಿಟೀಷ್​​ ಬ್ಯಾಂಡ್ ಒಂದು ಆಶಾ ಅವರಗಾಗಿಯೇ ಆಲ್ಬಂ ಒಂದನ್ನು ಹೊರತಂದಿದೆ. ‘ಬ್ರಿಮ್​​ಫುಲ್ ಆಫ್ ಆಶಾ’ ಹೆಸರಿನ ಈ ಆಲ್ಬಂ 1997 ರಲ್ಲಿ ಬಿಡುಗಡೆ ಆಗಿತ್ತು.
  • ಆಶಾ ಭೋಸ್ಲೆ 16ರ ವಯಸ್ಸಿನಲ್ಲೇ ಓಡಿ ಹೋಗಿ 31 ವರ್ಷದ ಗಣಪತ್ ರಾವ್ ಭೋಸ್ಲೆ ಎಂಬಾತನ ವಿವಾಹವಾದರು. ಆ ವಿವಾಹದಿಂದ ತೀವ್ರ ಕಷ್ಟಗಳನ್ನು ಅವರು ಅನುಭವಿಸಿದರು.
  • ಆಶಾ ಭೊಸ್ಲೆ ಅವರು ತಮ್ಮ 20ನೇ ವಯಸ್ಸಿನಲ್ಲಿ ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಅವರು ನಾಲ್ಕು ತಿಂಗಳ ಗರ್ಭಿಣಿ.
  • ಒಂದು ಸಮಯದಲ್ಲಿ ಅಕ್ಕ ಲತಾ ಮಂಗೇಶ್ಕರ್ ಅವರಿಗಿಂತಲೂ ಹೆಚ್ಚು ಹಾಡುಗಳನ್ನು ಆಶಾ ಭೊಸ್ಲೆ ಹಾಡಿದ್ದರು. ಆದರೆ ‘ನನ್ನ ಅಕ್ಕ ನನಗಿಂತ ಹೆಚ್ಚು ಪ್ರತಿಭಾವಂತೆ’ ಎಂದಿದ್ದರು ಆಶಾ.
  • ಆಶಾ ಭೊಸ್ಲೆ ಮತ್ತು ಲತಾ ಮಂಗೇಶ್ಕರ್ ಹಲವು ವರ್ಷ ಪರಸ್ಪರ ಮಾತನಾಡಿರಲಿಲ್ಲ. ಪ್ರೀತಿಸಿದವನೊಟ್ಟಿಗೆ ಓಡಿ ಹೋಗಿದ್ದ ಆಶಾ ಮೇಲೆ ವಿಪರೀತ ಸಿಟ್ಟಿತ್ತು ಲತಾ ಅವರಿಗೆ. ವಯಸ್ಸಾದಂತೆ ಅದು ಕರಗಿತು.
  • ಪಾಪ್ ಮತ್ತು ಹಿಪ್ ಹಾಪ್ ರೀತಿಯ ಹಾಡುಗಳ ಟ್ರೆಂಡ್ ಆರಂಭಕ್ಕೂ ಮುಂಚೆಯೇ ಅವುಗಳನ್ನು ಹಾಡಿದ್ದರು ಆಶಾ ಭೋಸ್ಲೆ. ಭಾರತದ ಮೊದಲ ಪಾಪ್, ಹಿಪ್-ಹಾಪ್ ಹಾಡುಗಾರ್ತಿ ಆಶಾ ಭೋಸ್ಲೆ.
  • 2011 ರಲ್ಲಿ ಆಶಾ ಭೋಸ್ಲೆ ಹೆಸರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿಕೊಂಡಿತು. ಅತ್ಯಧಿಕ ಹಾಡುಗಳನ್ನು ರೆಕಾರ್ಡ್ ಮಾಡಿದ ದಾಖಲೆ ಅವರ ಹೆಸರಲ್ಲಿದೆ. ಆಗಲೇ ಅವರು 11 ಸಾವಿರಕ್ಕೂ ಹೆಚ್ಚು ಹಾಡುಗಳ ರೆಕಾರ್ಡ್ ಮಾಡಿದ್ದರು.
  • ಸಂಗೀತಕ್ಕೆ ನೀಡಲಾಗುವ ವಿಶ್ವದ ಅತ್ಯುನ್ನತ ಪ್ರಶಸ್ತಿ ಎಂದೆನಿಸಿಕೊಂಡಿರುವ ಗ್ರಾಮಿಗೆ ನಾಮಿನೇಟ್ ಆದ ಮೊದಲ ಭಾರತೀಯರು ಆಶಾ ಭೋಸ್ಲೆ. ಎರಡು ಬಾರಿ ಅವರು ನಾಮಿನೇಟ್ ಆಗಿದ್ದಾರೆ.
  • ಹಲವಾರು ವಿದೇಶಿ ಗಾಯಕರುಗಳೊಟ್ಟಿಗೆ ಆಶಾ ಭೋಸ್ಲೆ ಕೊಲ್ಯಾಬ್ ಆಗಿ ಕೆಲಸ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅವರೊಟ್ಟಿಗೆ ಸಹ ಒಂದು ಹಾಡು ಮಾಡಿದ್ದಾರೆ ಆಶಾ ಭೋಸ್ಲೆ.
  • ಆಶಾ ಭೋಸ್ಲೆ ಅದ್ಭುತವಾಗಿ ಅಡುಗೆ ಮಾಡುತ್ತಿದ್ದರು. ಕಪೂರ್ ಕುಟುಂಬಕ್ಕೆ ಆಶಾ ಭೋಸ್ಲೆ ಅವರ ಕೈಯಡುಗೆ ಬಹಳ ರುಚಿಸುತ್ತಿತ್ತು. ಇದೇ ಕಾರಣಕ್ಕೆ ಕಪೂರ್ ಕುಟುಂಬಕ್ಕೆ ಆಶಾ ಬಲು ಹತ್ತಿರವಾಗಿದ್ದರು.
  • ಆಶಾ ಭೋಸ್ಲೆ ಉದ್ಯಮಿ ಸಹ ಹೌದು. ‘ಆಶಾಸ್ ಕಿಚನ್’ ಹೆಸರಿನ ರೆಸ್ಟೊರೆಂಟ್ ಸಹ ಸ್ಥಾಪಿಸಿದರು. ದುಬೈ, ಕುವೈತ್, ಲಂಡನ್ ಹಲವೆಡೆ ಅವರ ರೆಸ್ಟೊರೆಂಟ್​​ಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂಟಿ ಕಾಲಿನ ಖದೀಮ, ಶಾಸಕರ ಕಾರಿಗೆ ಬೆಂಕಿ ಹಚ್ಚಿದ್ದ ಕಿರಾತಕ: ನಟೋರಿಯಸ್ ಕಳ್ಳರ ಫ್ಲ್ಯಾಶ್​ ಬ್ಯಾಕೇ ಭಯಾನಕ

ಆನೇಕಲ್​​, ಏಪ್ರಿಲ್​ 12: ಒಬ್ಬ ಒಂಟಿ ಕಾಲಿನಲ್ಲಿ ರಾಬರಿ ಮಾಡುವ ಖದೀಮ, ಮತ್ತೊಬ್ಬ ಶಾಸಕರ ಕಾರಿಗೆ ಬೆಂಕಿ ಹಚ್ಚಿದ್ದ ಕಿರಾತಕ. ಈ ಇಬ್ಬರು ಸೇರಿಕೊಂಡು ಸಿಕ್ಕ ಸಿಕ್ಕ ಕಡೆಗಳಲ್ಲಿ ದರೋಡೆ ಮಾಡುತ್ತಿದ್ದರು. ಆದರೆ ಇದೀಗ ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗದ ಜಿಗಣಿ ಪೊಲೀಸರು ನಟೋರಿಯಸ್ ದರೋಡೆಕೋರರನ್ನು (robbers) ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ. ಕೃಷ್ಣನಾಯಕ್​​ ಅಲಿಯಾಸ್​​ ಕುಂಟ ಕೃಷ್ಣ. ಇತನಿಗೆ ಹಾವಳಿ ಕೃಷ್ಣ ಅಂತ ಕೂಡ ಕರೆಯುತ್ತಾರೆ. ಇನ್ನೊಬ್ಬ ನವೀನ್​ ಅಲಿಯಾಸ್​​ ಕಾಳಪ್ಪ. ರಾಬರಿ ಕಾಳ ಅಂತ ಇನ್ನೊಂದು ಹೆಸರಿದೆ. ಸದ್ಯ ಪೊಲೀಸರು ಇವರಿಬ್ಬರ ಹೆಡೆಮುರಿ ಕಟ್ಟಿದ್ದಾರೆ.

ನಟೋರಿಯಸ್ ಕಳ್ಳರ ಫ್ಲ್ಯಾಶ್​ ಬ್ಯಾಕ್ ಭಯಾನಕ

ಇನ್ನು ಈ ಇಬ್ಬರು ನಟೋರಿಯಸ್ ಕಳ್ಳರ ಫ್ಲ್ಯಾಶ್​ ಬ್ಯಾಕ್ ಭಯಾನಕವಾಗಿದೆ. ಕೃಷ್ಣನಾಯರ್​​​ ಆಟೋ ಓಡಿಸಿಕೊಂಡಿದ್ದ. ಚಿಕ್ಕ ವಯಸ್ಸಿನಲ್ಲಿಯೇ ಕಳ್ಳತನ, ರಾಬರಿ ಮಾಡುತ್ತಿದ್ದ. ಆಟೋದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿ ರಾಬರಿ ಮಾಡುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಈತನ ಕಾಲಿಗೆ ಫೈರಿಂಗ್ ಮಾಡಿದ್ದರು. ಹೀಗಾಗಿ ಒಂದು ಕಾಲು ಕಳೆದುಕೊಂಡಿದ್ದ.

ಇದನ್ನೂ ಓದಿ: ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!

ಕಾಲು ಹೋಗಿದ್ದರು, ಅಷ್ಟೇ ಅಲ್ಲದೆ ಜೈಲಿಗೆ ಹೋಗಿ ಬಂದಿದ್ದರೂ ಬುದ್ಧಿ ಕಲಿಯದ ಕಿರಾತಕ, ಒಂದೇ ಕಾಲಿನಲ್ಲಿ ಆಟೋ ಓಡಿಸುತ್ತಾರೆ. ಅದೇ ಒಂಟಿ ಕಾಲಿನಲ್ಲಿ ಸಹಚರರ ಜೊತೆ ಅಮಾಯಕರ ಕಿಡ್ನ್ಯಾಪ್ ಮಾಡುತ್ತಾನೆ. ಹಣ ದೋಚಿ, ಹಲ್ಲೆ ನಡೆಸಿ ಬಿಟ್ಟು ಪರಾರಿಯಾಗುತ್ತಾನೆ. ಈವರೆಗೆ ಬರೋಬ್ಬರಿ 20ಕ್ಕೂ ಹೆಚ್ಚು ಕೇಸ್​ಗಳಲ್ಲಿ ಭಾಗಿಯಾಗಿದ್ದು, ಬನ್ನೇರುಘಟ್ಟ, ಸೂರ್ಯನಗರ, ಹೆಬ್ಬಗೋಡಿ, ಜಿಗಣಿ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಶಾಸಕರ ಕಾರಿಗೆ ಬೆಂಕಿಯಿಟ್ಟಿದ್ದ ಭೂಪ

ಮತ್ತೊರ್ವ ಕಳ್ಳ ನವೀನ್​​ ಅಲಿಯಾಸ್​​ ರಾಬರಿ ಕಾಳ, 2021ರಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟಿದ್ದ. ಮನೆಯ ಬಳಿ ನಿಲ್ಲಿಸಿದ್ದ ಎರಡು ಕಾರುಗಳು ಬೆಂಕಿಗಾಹುತಿಯಾಗಿದ್ದವು. ಆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಜೈಲಿನಿಂದ ಹೊರಬಂದು ಹಳೆ ಚಾಳಿ ಮುಂದುವರೆಸಿದ್ದ. ಈತ ಬೈಕ್ ಸೇರಿದಂತೆ ರಾಬರಿ ಮಾಡುತ್ತಿದ್ದ. ಬಳಿಕ ಹಾವಳಿ ಕೃಷ್ಣನ ಜೊತೆ ಸೇರಿದ ಕಾಳಪ್ಪ ಸಿಕ್ಕ ಸಿಕ್ಕ ಕಡೆಗಳಲ್ಲಿ ರಾಬರಿ ಮಾಡುತ್ತಿದ್ದ.

ಆಟೋಗೆ ಹತ್ತಿಸಿಕೊಂಡು ವ್ಯಕ್ತಿಯ ರಾಬರಿ: ಕಿವಿ ಕಟ್ ಮಾಡಿ ಚಿತ್ರಹಿಂಸೆ

ಇನ್ನು ಈ ಇಬ್ಬರು ನಟೋರಿಯಸ್​​ ದರೋಡೆಕೋರರು ಇತ್ತೀಚೆಗೆ ಯಾರಂಡಹಳ್ಳಿ ಸಮೀಪ ರಾಬರಿ ಮಾಡಿದ್ದಾರೆ. ಸುಂದರ್ ರಾಜ್​ ಎಂಬುವವರನ್ನು ಹಾವಳಿ ಕೃಷ್ಣನ ಆಟೋಗೆ ಹತ್ತಿಸಿಕೊಂಡ ಖದೀಮರು, ಮೊದಲಿಗೆ ಜೇಬಿನಲ್ಲಿದ್ದ ಹಣ, ಮೊಬೈಲ್ ಕಿತ್ತುಕೊಂಡಿದ್ದಾರೆ. ಬಳಿಕ ಎಟಿಎಂ ಕಾರ್ಡ್ ಕೊಡುವಂತೆ ಆವಾಜ್​​ ಹಾಕಿದ್ದಾರೆ. ಕೊಡದಿದ್ದಾಗ ಕಿವಿ ಕಟ್ ಮಾಡಿ ಚಿತ್ರಹಿಂಸೆ ನೀಡಿದ್ದಾರೆ. ಬಳಿಕ ಎಟಿಎಂ ಕಿತ್ತುಕೊಂಡು 1 ಲಕ್ಷ ರೂ ಹಣ ಡ್ರಾ ಮಾಡಿದ್ದಾರೆ. ನಂತರ ಆತನನ್ನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿ ಆಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಜಿಗಣಿ ಪೊಲೀಸರು, ಇನ್ಸ್​ಪೆಕ್ಟರ್​ ಮಂಜುನಾಥ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಂಗ್ರೆಸ್ ಯುವ ಮುಖಂಡನ ಹತ್ಯೆ: 24 ಗಂಟೆಯೊಳಗೇ ಹಂತಕರು ಅರೆಸ್ಟ್, ಕೊಲೆ ರಹಸ್ಯ ಬಯಲು

ಧಾರವಾಡ, (ಏಪ್ರಿಲ್ 12): ಮೊನ್ನೆ ಅಷ್ಟೇ ಧಾರವಾಡದ (Dharwad) ಮಾಳಾಪುರ ಬಡಾವಣೆಯ ಹಾಶ್ಮಿ ನಗರದಲ್ಲಿ ನಡೆದಿದ್ದ ಕಾಂಗ್ರೆಸ್ (Congress) ಯುವ ಮುಖಂಡ ಫೈರೋಜ್ ಪಠಾಣ್ (Fairoz Pathan Murder Case)  ಹಂತಕರನ್ನು ಪತ್ತೆ ಹಚ್ಚುವಲ್ಲಿ ಉಪ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ನಡೆದು 24 ಗಂಟೆಯೊಳಗೇ ಹಂತಕರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. 9 ಆರೋಪಿಗಳ ಪೈಕಿ 8 ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಿಂದಿನ ಕೆಲ ವೈಷಮ್ಯಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರವೇ ಈ ಕೊಲೆಗೆ ಕಾರಣ ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಕೊಲೆಗೆ ಅಸಲಿ ಕಾರಣ ಬಯಲಿಗೆ

ಕೊಲೆ ಮಾಡಲು ಮಹಮ್ಮದ್ ಶಾ ನೊಂದಿಗೆ ಬಂದಿದ್ದ ಸದ್ದಾಂ, ಗೌಸ್, ಪರ್ವೇಜ್ ಸಮೀರ್ ನನ್ನು ಬಂಧಿಸಲಾಗಿದೆ. ಇನ್ನು ಮತ್ತೊಬ್ಬ ಆರೋಪಿ ಕೈಫ್ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಅಷ್ಟಕ್ಕೂ ಈ ಕೊಲೆ ನಡೆದಿದ್ದು ಮಹಮ್ಮದ್ ಶಾ ಹಾಗೂ ಫೈರೋಜ್ ಪಠಾಣ್ ನಡುವಿನ ವೈಯಕ್ತಿಕ ದ್ವೇಷ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ಅದರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಈ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಶಾ ಹಿಂದಿನ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಕೊಲೆ ಮಾಡಿದ್ಧಾನೆ. ಈತನೊಂದಿಗೆ ಕೆಲ ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಭೀಕರವಾಗಿ ಹತ್ಯೆತಾಗಿದ್ದ ರೌಡಿ ಶೀಟರ್ ಫ್ರೂಟ್ ಇರ್ಫಾನ್ ಮಗ ಅರ್ಬಾಜ್ ಹಂಚಿನಮನಿ ಮತ್ತು ರೌಡಿ ಶೀಟರ್ ಮುಕ್ತುಂ ಸೊಗಲದ್ ಕೂಡ ಕೈ ಜೋಡಿಸಿದ್ದು, ಇದೀಗ ಎಲ್ಲರನ್ನೂ ವಿಚಾರಣೆಗೊಳಪಡಿಸಲಾಗಿದೆ.

ಇದನ್ನೂ ಓದಿ: ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್​ ಬರ್ಬರ ಹತ್ಯೆ!

ಹಂತಕರ ಸಂಚು ಹೇಗಿತ್ತು?

ಇನ್ನು ಕೆಲ ತಿಂಗಳ ಹಿಂದೆ ಫೈರೋಜ್ ಹಾಗೂ ಮಹಮ್ಮದ್ ಶಾ ನಡುವೆ ವೈಯಕ್ತಿಕ ವಿಚಾರವಾಗಿ ಜಗಳ ನಡೆದಿತ್ತು. ಆಗ ಫೈರೋಜ್ ಮಹಮ್ಮದ್ ಶಾ ಮನೆಗೆ ಕೆಲವರೊಂದಿಗೆ ಹೋಗಿ ಗಲಾಟೆ ಮಾಡಿ ಬಂದಿದ್ದ. ಅಲ್ಲದೇ ಅದನ್ನು ಪದೇ ಪದೇ ಬೇರೆಯವರ ಬಳಿ ಹೇಳಿ ತಮಾಷೆ ಮಾಡುತ್ತಿದ್ದ. ಇದು ಮಹಮ್ಮದ್ ಶಾನಿಗೆ ಸಿಟ್ಟು ತರಿಸಿತ್ತು. ಇದೇ ವೇಳೆ ರೌಡಿ ಶೀಟರ್ ಮುಕ್ತುಂ ಸೊಗಲದ್ ಹಾಗೂ ಫೈರೋಜ್ ನಡುವೆ ರಿಯಲ್ ಎಸ್ಟೇಟ್ ವಿಚಾರವಾಗಿ ಮನಸ್ತಾಪವಾಗಿತ್ತು. ಹೀಗೆ ಆತನಿಂದ ದೂರವಾದವರೆಲ್ಲ ಒಂದಾಗಿ ಈ ಕೊಲೆಯ ಸಂಚನ್ನು ರೂಪಿಸಿದ್ದರು. ಕೊಲೆ ಮಾಡೋ ದಿನ ಮಧ್ಯಾಹ್ನದವರೆಗೆ ಆರೋಪಿಗಳೆಲ್ಲರೂ ಸೇರಿ ಸಭೆ ನಡೆಸಿದ್ದು, ಏನೇ ಆಗಲಿ ಅವತ್ತೇ ಫೈರೋಜ್ ನನ್ನು ಮುಗಿಸಲೇಬೇಕು ಅಂದುಕೊಂಡಿದ್ದರು. ಅದಕ್ಕಾಗಿಯೇ ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಮಹಮ್ಮದ್ ಶಾ ಹಾಗೂ ಆತನ ಹುಡುಗರು, ಅದೇ ತಾನೇ ಮನೆಗೆ ಬಂದಿದ್ದ ಫೈರೋಜ್ ನ ಸುಳಿವನ್ನು ನೀಡಿದ್ದರು.

ಮನೆಗೆ ಹೊಕ್ಕು ಕೊಚ್ಚಿ ಕೊಂದರು

ಸಾಮಾನ್ಯವಾಗಿ ಫೈರೋಜ್ ತಡವಾಗಿ ಮನೆಗೆ ಬರುತ್ತಿದ್ದ. ಆದರೆ ಇದೇ ಏಪ್ರಿಲ್ 24 ಕ್ಕೆ ಮದುವೆ ನಿಶ್ಚಯವಾಗಿದ್ದರಿಂದ ಕೆಲ ದಿನಗಳಿಂದ ಮನೆಗೆ ಬೇಗ ಬರುತ್ತಿದ್ದ. ಅವತ್ತು ಕೂಡ ಅದೇ ಆಗಿದೆ. ಎಂದಿನಂತೆ ಸುಮಾರು 8 ಗಂಟೆ ಹೊತ್ತಿಗೆ ಮನೆಗೆ ಬಂದ ಫೈರೋಜ್ ಶೆಕೆ ಹೆಚ್ಚಾಗಿದೆ ಎಂದು ಹೊರಗಡೆ ಫೋನ್ ನಲ್ಲಿ ಮಾತಾಡುತ್ತಾ ಜೋಕಾಲಿಯಲ್ಲಿ ಕೂತಿದ್ದ. ಬಳಿಕ ಒಳಗಡೆ ಹೋಗುತ್ತಲೇ ಮನೆಗೆ ಬಂದ ಮಹಮ್ಮದ್ ಶಾ ಆತನನ್ನು ಕೂಗಿ ಕರೆದಿದ್ದು, ಬಳಿಕ ಗೇಟ್ ತೆರೆದು ಆತನ ಮನೆಯ ಮೆಟ್ಟಿಲುಗಳ ಮೇಲೆ ಕೂತಿದ್ದ. ಮತ್ತೆ ಫೋನ್ ನಲ್ಲಿ ಮಾತನಾಡುತ್ತಾ ಹೊರಗೆ ಬಂದ ಫೈರೋಜ್ ಗೇಟ್ ಬಳಿ ಬಂದು ನಿಂತಿದ್ದ. ಆಗ ಸ್ಥಳಕ್ಕೆ ಮತ್ತಿಬ್ಬರು ಯುವಕರು ಬಂದಿದ್ದರು. ಆದ್ರೆ, ಇತ್ತ ಏನೂ ಗೊತ್ತಿಲ್ಲದ ಫೈರೋಜ್ ಗೇಟ್ ಮುಂದೆ ಬಂದು ನಿಲ್ಲುತ್ತಿದ್ದಂತೆಯೇ ಮಹಮ್ಮದ್ ಶಾ, ಕಿಸೆಯಲ್ಲಿಟ್ಟುಕೊಂಡಿದ್ದ ಚಾಕುವನ್ನು ಹೊರ ತೆಗೆದು ಇರಿದಿದ್ದಾನೆ.ಆಗ ಎಚ್ಚೆತ್ತುಕೊಂಡ ಫೈರೋಜ್ ಒಳಗಡೆ ಓಡಿ ಹೋಗಿದ್ದ, ಆದರೂ ಬಿಡದ ಮಹಮ್ಮದ್ ಶಾ, ಹಿಂಬಾಲಿಸುತ್ತಿದ್ದಂತೆಯಾ ಹೊರಗಡೆ ನಿಂತಿದ್ದ ಮತ್ತೆ ಮೂವರು ಮನೆಯೊಳಗೆ ಹೋಗಿ ಫೈರೋಜ್ ನನ್ನು ಇರಿದು ಕೊಂದಿದ್ದದಾರೆ. ಬಳಿಕ ಫೈರೋಜ್ ನ ಮೊಬೈಲ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು.

ಹತ್ಯೆ ಬಳಿಕ ಕಾರಿನಲ್ಲಿ ಬೆಳಗಾವಿ ಜಿಲ್ಲೆ ಕಡೆಗೆ ಹೋಗುವಾಗ ಮೊಬೈಲ್ ನನ್ನು ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ಎಸೆದಿದ್ದಾರೆ. ಇನ್ನು ಫೈರೋಜ್ ಹಾಗೂ ಆತನ ಮಿತ್ರ ಅಬ್ದುಲ್ ದೇಸಾಯಿ ಕೆಲ ತಿಂಗಳ ಹಿಂದೆ ತಮಗೆ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಾಲಂಟರಿ ಪ್ರಾವಿಡೆಂಟ್ ಫಂಡ್; ನಿಮ್ಮ ಇಪಿಎಫ್ ಕಾರ್ಪಸ್ ಹೆಚ್ಚಿಸುವ ಒಂದು ಪ್ಲಾನ್

ಉದ್ಯೋಗಿಗಳ ನಿವೃತ್ತಿಗೆಂದು ರೂಪಿಸಲಾಗಿರುವ ಸ್ಕೀಮ್ ಇಪಿಎಫ್ (EPF) ಬಹಳ ಉತ್ತಮ ಬಡ್ಡಿ ಕೊಡಲಾಗುವ ಸ್ಕೀಮ್. ಫಿಕ್ಸೆಡ್ ಡೆಪಾಸಿಟ್​ಗಳಿಗಿಂತಲೂ ಹೆಚ್ಚಿನ ಬಡ್ಡಿ ಸಿಗುತ್ತದೆ. ಸದ್ಯ ಸರ್ಕಾರ ಪಿಎಫ್ ಅಕೌಂಟ್​ನಲ್ಲಿರುವ ಹಣಕ್ಕೆ ವಾರ್ಷಿಕ ಶೇ. 8.2 ರಂತೆ ಬಡ್ಡಿ ತುಂಬುತ್ತದೆ. ನಿವೃತ್ತಿ ವಯಸ್ಸೆಂದು ಪರಿಗಣಿಸಲಾಗಿರುವ 58 ವರ್ಷ ವಯಸ್ಸು ಮುಟ್ಟಿದ ಬಳಿಕ ಇಪಿಎಫ್ ಹಣ ಲಂಪ್ಸಮ್ ಆಗಿ ದೊರಕುತ್ತದೆ.

ಉದ್ಯೋಗಿಯ ಮೂಲ ವೇತನ ಮತ್ತು ಭತ್ಯೆಯನ್ನು ಇಪಿಎಫ್ ಸ್ಯಾಲರಿ ಎಂದು ಪರಿಗಣಿಸಬಹುದು. ಇದರ ಶೇ. 12ರಷ್ಟನ್ನು ಸಂಬಳದಲ್ಲೇ ಮುರಿದುಕೊಳ್ಳಲಾಗುತ್ತದೆ. ಕಂಪನಿ ವತಿಯಿಂದ ಇಷ್ಟೇ ಕೊಡುಗೆ ನೀಡಲಾಗುತ್ತದೆ. ಆದರೆ, ಕಂಪನಿಯ ಶೇ. 12 ಕೊಡುಗೆಯಲ್ಲಿ ಇಪಿಎಫ್​ಗೆ ಶೇ. 3.67 ಮತ್ತು ಇಪಿಎಸ್​ಗೆ ಶೇ. 8.33 ಹಂಚಿಹೋಗುತ್ತದೆ. ಇಪಿಎಸ್ ಎಂಬುದು ಅಪ್ಪಟ ಪಿಂಚಣಿ ಸ್ಕೀಮ್. ಇದರಲ್ಲಿರುವ ಹಣವನ್ನು ವಿತ್​ಡ್ರಾ ಮಾಡಲು ಆಗುವುದಿಲ್ಲ. ಇದು ಪಿಂಚಣಿಗಾಗಿ ಮಾತ್ರ ಬಳಕೆ ಆಗುವುದು.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಒಂದು ಕೋಟಿ ರೂ ಹಣ ಪಡೆಯುವುದು ಹೇಗೆ? 61,000 ರೂ ಮಾಸಿಕ ಆದಾಯ ಪಡೆಯಲು ಹೀಗೆ ಮಾಡಿ

ಉದ್ಯೋಗಿಗಳ ಇಪಿಎಫ್ ಅಕೌಂಟ್​ಗೆ ಕಂಪನಿಗಳು ಇನ್ನೂ ಹೆಚ್ಚಿನ ಕೊಡುಗೆ ನೀಡಲು ಅವಕಾಶ ಇರುತ್ತದೆ. ಆದರೆ, ಹೆಚ್ಚಿನ ಕಂಪನಿಗಳು ತಮ್ಮ ಕೊಡುಗೆಯನ್ನು ಶೇ. 12ಕ್ಕೆ ಮಾತ್ರ ಸೀಮಿತಗೊಳಿಸುತ್ತವೆ. ಆದರೆ, ಇಪಿಎಫ್ ಮೊತ್ತ ಹೆಚ್ಚಿಸಲು ಉದ್ಯೋಗಿಗೆ ಇನ್ನೊಂದು ಮಾರ್ಗ ಇದೆ. ಅದು ವಿಪಿಎಫ್. ವಾಲಂಟರಿ ಪ್ರಾವಿಡೆಂಟ್ ಫಂಡ್.

ಉದ್ಯೋಗಿಗಳು ತಮ್ಮ ವೇತನದ ಶೇ. 12ಕ್ಕಿಂತ ಹೆಚ್ಚಿನ ಹಣವನ್ನು ಇಪಿಎಫ್ ಅಕೌಂಟ್​ಗೆ ನೀಡಲು ಬಯಸಿದರೆ ವಿಪಿಎಫ್ ಅನ್ನು ಬಳಸಬಹುದು. ಕಂಪನಿ ಅವಕಾಶ ಕೊಟ್ಟರೆ ಇದು ಸಾಧ್ಯ. ಇಪಿಎಫ್ ಅಕೌಂಟ್​ಗೆ ಸಿಗುವಷ್ಟೇ ಬಡ್ಡಿ ವಿಪಿಎಫ್​ಗೂ ಸಿಗುತ್ತದೆ. ಹೀಗಾಗಿ, ಉದ್ಯೋಗಿಗಳಿಗೆ ಇದೊಂದು ಉತ್ತಮ ಹೂಡಿಕೆ ಉಪಾಯವೆನಿಸುತ್ತದೆ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ಒಂದು ಕೋಟಿ ರೂಗೂ ಅಧಿಕ ಇಪಿಎಫ್ ಕಾರ್ಪಸ್ ಸೃಷ್ಟಿಸಬೇಕಾ?

ನೀವು ನಿವೃತ್ತರಾದಾಗ ಇಪಿಎಫ್​ನ ಹಣ ಒಂದು ಕೋಟಿ ರೂ ದಾಟಬೇಕೆಂದಿದ್ದರೆ ಹೆಚ್ಚಿನ ವಿಪಿಎಫ್ ಕೊಡುಗೆ ಇರಬೇಕು. ತಿಂಗಳಿಗೆ 12,500 ರೂಗಳಷ್ಟು ವಿಪಿಎಫ್ ಕೊಡುಗೆ ಇದ್ದರೆ 23 ವರ್ಷದಲ್ಲಿ ಒಂದು ಕೋಟಿ ರೂ ಕಾರ್ಪಸ್ ನಿರ್ಮಾಣ ಆಗುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

LSG vs GT IPL 2026 Live Score: ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ – Kannada News | Lucknow Super Giants vs Gujarat Titans IPL 2026 Live Cricket Score LSG vs GT Match on 12th April latest news in Kannada

  • 12 Apr 2026 03:16 PM (IST)

    LSG vs GT IPL 2026: ಗುಜರಾತ್ ತಂಡ

    ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಅಶೋಕ್ ಶರ್ಮಾ, ಪ್ರಸಿದ್ಧ್ ಕೃಷ್ಣ

  • 12 Apr 2026 03:16 PM (IST)

    LSG vs GT IPL 2026: ಲಕ್ನೋ ತಂಡ

    ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ರಿಷಭ್ ಪಂತ್ (ನಾಯಕ), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಅವೇಶ್ ಖಾನ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್

  • 12 Apr 2026 03:13 PM (IST)

    LSG vs GT IPL 2026: ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

    ಐಪಿಎಲ್ 2026 ರ 19 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು.

  • Source link

    Exit mobile version