ಪ್ರೇಯಸಿಗೆ ಕೈಕೊಟ್ಟು ಮತ್ತೊಬ್ಬಳ ಜತೆ ಕದ್ದುಮುಚ್ಚಿ ಮದ್ವೆ: ಪ್ರಿಯಕರನ್ನ ಜೈಲಿಗಟ್ಟಿದ ಯುವತಿ – Kannada News | Chikkamagaluru: Ex Lover Arrested After Marrying Another Woman

ಚಿಕ್ಕಮಗಳೂರು, ಡಿಸೆಂಬರ್​​ 23: ಅವರಿಬ್ಬರೂ 10 ವರ್ಷಗಳಿಂದ ಪ್ರೀತಿಸುತ್ತಿದ್ದರು (Love). ಮದುವೆಯಾಗುವುದಾಗಿ ನಂಬಿಸಿದ್ದ ಯುವಕ ಬಳಿಕ ಪ್ರೇಯಸಿಗೆ ಕೈ ಕೊಟ್ಟು ಮತ್ತೊಬ್ಬಳ ಜೊತೆ ಮದುವೆಯಾಗಿದ್ದ. ಬೇರೆಯವರನ್ನ ಮದುವೆಯಾಗುತ್ತಿದ್ದಂತೆ ಇತ್ತ ಪ್ರೇಯಸಿ ಹುಡುಗನ ಮನೆ, ಕಲ್ಯಾಣ ಮಂಟಪಕ್ಕೆ ಹೋಗಿ ನನ್ನನ್ನು ಮದುವೆಯಾಗುವಂತೆ ಪಟ್ಟು ಹಿಡಿದು ರಂಪಾಟ ಮಾಡಿರುವಂತಹ ಘಟನೆ ಚಿಕ್ಕಮಗಳೂರಿನ (Chikkamagaluru) ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಕಾನೂನು ಹೋರಾಟದ ಶಪತ ಮಾಡಿದ್ದ ನೊಂದ ಯುವತಿ, ಮೋಸ ಮಾಡಿದ್ದ ಲವರ್​​ನನ್ನು ಜೈಲಿಗೆ ಕಳುಹಿಸಿದ್ದಾರೆ.

ಚಿಕ್ಕಮಗಳೂರು ನಗರದ ಕಲ್ಯಾಣ ನಗರದ ನಿವಾಸಿ ಶರತ್​​​ ಮತ್ತು ಬೇಲೂರು ಮೂಲದ ಅಶ್ವಿನಿ ಇಬ್ಬರು ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ನಿನ್ನನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಶರತ್​ ಭರವಸೆ ಕೂಡ ಕೊಟ್ಟಿದ್ದ. ಅಷ್ಟೇ ಅಲ್ಲದೆ ಅಶ್ವಿನಿಗೆ ಬಂದಿದ್ದ ಐದಾರು ಒಳ್ಳೆಯ ಸಂಬಂಧಗಳನ್ನು ಸಹ ತಪ್ಪಿಸಿದ್ದ. ಆದರೆ ಅಶ್ವಿನಿಗೆ ಗೊತ್ತಾಗದಂತೆ ಗುಪ್ತವಾಗಿ ಬೇರೊಬ್ಬ ಯುವತಿಯ ಜೊತೆ ಹಸೆಮಣೆ ಏರಲು ಸಿದ್ಧನಾಗಿದ್ದ.

ಇದನ್ನೂ ಓದಿ: ಮರ್ಯಾದೆ ಹತ್ಯೆ: ಮಾನ್ಯಾ ಜತೆ ಮಗುನೂ ಹೋಯ್ತು, ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಅಮ್ಮನೂ ಸೀರಿಯಸ್

ಇತ್ತ ಶರತ್ ನನಗೆ ಕೈಕೊಟ್ಟು ಬೇರೆಯವಳನ್ನ ಮದುವೆಯಾಗುತ್ತಾನೆ ಅನ್ನೋದು ಗೊತ್ತಾಗ್ತಿದ್ದಂತೆ ಕಲ್ಯಾಣ ಮಂಟಪಕ್ಕೆ ಹೋಗಿ ಮದುವೆ ದಿನವೇ ಅಶ್ವಿನಿ ನ್ಯಾಯ ಕೇಳಿ ರಂಪಾಟ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಶರತ್ ಬೇರೆ ಹುಡುಗಿಯೊಂದಿಗೆ ಮದುವೆಯಾಗಿ ಹೋಗಿತ್ತು. ಈ ಸಂದರ್ಭದಲ್ಲಿ ಮಹಿಳಾ ಆಯೋಗ ಸೇರಿದಂತೆ ಕಾನೂನು ಹೋರಾಟದ ಶಪಥ ಮಾಡಿದ್ದ ಅಶ್ವಿನಿ, ಇದೀಗ ತನಗೆ ಮೋಸ ಮಾಡಿದ ಶರತ್​​ನನ್ನ ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮನಸೋ ಇಚ್ಛೆ ಹಲ್ಲೆ: ದೂರು ದಾಖಲು

ತನಗೆ ಮೋಸ ಮಾಡಿ ಬೇರೊಬ್ಬ ಯುವತಿಯ ಜೊತೆ ಮದುವೆಯಾದ ಶರತ್ ವಿರುದ್ಧ ಅಶ್ವಿನಿ ಚಿಕಮಗಳೂರಿನ ಡಿಸಿಆರ್​ಇ ಠಾಣೆಯಲ್ಲಿ ದೂರು ನೀಡಿದ್ದರು. ನನನ್ನು ಮದುವೆಯಾಗುವುದಾಗಿ ಮೋಸ ಮಾಡಿ ಬೇರೊಬ್ಬ ಯುವತಿಯ ಜೊತೆ ಮದುವೆಯಾಗಿದ್ದು, ಅಷ್ಟೇ ಅಲ್ಲದೆ ಮದುವೆಯ ದಿನ ಕಲ್ಯಾಣಮಂಟಪದಲ್ಲಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ನಾನು ಕಲ್ಯಾಣ ಮಂಟಪದ ಒಳಗೆ ಹೋಗುತ್ತಿದ್ದಂತೆ ಬಾಗಿಲು ಹಾಕಿಕೊಂಡು ಒಬ್ಬ ಹೆಣ್ಣು ಅನ್ನೋದನ್ನ ಕೂಡ ನೋಡದೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಅಶ್ವಿನಿ ನೀಡಿದ ದೂರಿನನ್ವಯ ಶರತ್, ಶರತ್‌ನ ತಂದೆ-ತಾಯಿ ಹಾಗೂ ಆತನ ಪತ್ನಿ ಮತ್ತು ಪತ್ನಿಯ ಪೋಷಕರ ಮೇಲೂ FIR ದಾಖಲಾಗಿದ್ದು, ಸದ್ಯ ಶರತ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಸೆಂಬರ್ 14ರಂದು ಘಟನೆ ನಡೆದಿದ್ದು, ಸತತ 9 ದಿನದ ಕಾನೂನು ಹೋರಾಟದ ಬಳಿಕ ಶರತ್ ಅಂದರ್ ಆಗಿದ್ದಾರೆ. ಶರತ್ ತಂದೆ-ತಾಯಿ, ಪತ್ನಿ ಹಾಗೂ ಪತ್ನಿಯ ಪೋಷಕರನ್ನ ವಿಚಾರಣೆ ನಡೆಸಿ ಸಾಕ್ಷ್ಯ ಕಲೆ ಹಾಕಲಾಗಿದ್ದು, ಅವರನ್ನು ಅರೆಸ್ಟ್ ಮಾಡುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಂತಕನ ಪ್ಲಾನ್ ಏನಿತ್ತು ಗೊತ್ತಾದ್ರೆ ಬೆಚ್ಚಿಬೀಳ್ತೀರಿ!

ಒಟ್ಟಿನಲ್ಲಿ ಪ್ರೀತಿ-ಪ್ರೇಮದ ಹೆಸರಲ್ಲಿ ಯುವತಿ ಬಾಳಲ್ಲಿ ಚೆಲ್ಲಾಟವಾಡಿ ಕೈಕೊಟ್ಟು ಬೇರೊಬ್ಬ ಯುವತಿಯನ್ನ ಮದುವೆಯಾಗಿ ಸುಖ-ಸಂಸಾರ ನಡೆಸಬೇಕಿದ್ದ ಯುವಕ ಮಾಡಿದ ತಪ್ಪಿಗೆ ರಾತ್ರೋರಾತ್ರಿ ಜೈಲು ಸೇರುವ ಸ್ಥಿತಿ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್​ಗೆ ಬಿಗ್ ಶಾಕ್ – Kannada News | Bikla Shiva murder case: Court Rejects KR Puram BJP MLA Byrathi Basavaraj Bail plea

ಬೆಂಗಳೂರು, (ಡಿಸೆಂಬರ್ 23): ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ (Bikla Shiva murder case) ಸಂಬಂಧಿಸಿದಂತೆ ಕೆಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ (BJP MLA Byrathi Basavaraj )ಜಾಮೀನು ಅರ್ಜಿಯಲ್ಲಿ ಕೋರ್ಟ್ ವಜಾಗೊಳಿಸಿದೆ. ಇಂದು (ಡಿಸೆಂಬರ್ 23) ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ (anticipatory bail application) ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ (Special Court) ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್, ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸದ್ಯ ನಾಪತ್ತೆಯಾಗಿರುವ ಬೈರತಿ ಬಸವರಾಜ್‌ ಯಾವುದೇ ಸಂದರ್ಭದಲ್ಲೂ ಅರೆಸ್ಟ್ ಆಗಬಹುದು.

ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿಂದು ನಡೆಯಿತು. ಬೈರತಿ ಬಸವರಾಜ್ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ರೆ, ಸಿಐಡಿ ಪರ ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡಿಸಿದರು.

ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್​​: ಬೈರತಿ ಬಸವರಾಜ್​​ಗಾಗಿ​ ತಲಾಶ್, ಪುಣೆಯಲ್ಲಿ ತಲೆಮರೆಸಿಕೊಂಡ್ರಾ ಬಿಜೆಪಿ ಶಾಸಕ?

ವಾದ- ಪ್ರತಿವಾದ ಹೇಗಿತ್ತು?

SPP ಅಶೋಕ್ ನಾಯ್ಕ್:  SPP ಅಶೋಕ್ ನಾಯ್ಕ್​ ಅವರು ಕೋರ್ಟ್​​ಗೆ ಚಾರ್ಜ್​ಶೀಟ್​ ಪ್ರತಿ ಸಲ್ಲಿಕೆ ಮಾಡಿದ್ದು, ಚಾರ್ಜ್​ಶೀಟ್​ನ ಪೇಜ್ ನಂ.298ರಲ್ಲಿ ಟವರ್ ಲೊಕೇಷನ್ ನಮೂದಿಸಿದೆ. ಎ1 ಮತ್ತು ಎ 5 ನಡುವೆ ದೂರವಾಣಿ ಮಾತುಕತೆ ಇರುವ ದಾಖಲೆಯಿದೆ. ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ. ಪ್ರಮುಖ ಲಿಂಕ್​ಗಳೇನಿದೆ ಎಂಬುದು ಬಳಿಕ ತಿಳಿಯಲಿದೆ ಎಂದು ವಾದ ಮಂಡಿಸಿದರು.

ಬೈರತಿ ಪರ ಸಂದೇಶ್ ಚೌಟ ವಾದ :ಇದಕ್ಕೆ ಪ್ರತಿಯಾಗಿ ಬೈರತಿ ಬಸವರಾಜ್ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದು, ಒಳಸಂಚು, ಉದ್ದೇಶವಾಗಿದೆ. ಇದಕ್ಕೆ ಸಾಕ್ಷ್ಯಗಳು ಯಾವುದೂ ಲಭ್ಯವಿಲ್ಲ. 5 ತಿಂಗಳಾದರೂ ಇವರಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಎ1 ಜಗ್ಗ, ಎ 5 ಬೈರತಿ ಬಸವರಾಜ್ ನಡುವಿನ ಸಂಪರ್ಕ ಸಾಬೀತಿಗೆ ಯತ್ನಿಸುತ್ತಿದ್ದಾರೆ. ಹುಟ್ಟುಹಬ್ಬ, ಕುಂಭ ಮೇಳಕ್ಕೆ ಹೋಗಿರುವುದನ್ನು ಉಲ್ಲೇಖಿಸಿದ್ದಾರೆ. ಆದರೆ ಕೊಲೆಯ ಸಂಚಿನ ಬಗ್ಗೆ ಯಾವುದೇ ಸಾಕ್ಷ್ಯ ಸಂಗ್ರಹಿಸಿಲ್ಲ.ಅಲ್ಲದೇ ತನಿಖೆಗೆ ಸಿದ್ಧವೆಂದು ಪದೇ ಪದೇ ಹೇಳಿದ್ದರೂ ಸಮನ್ಸ್ ನೀಡಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದರು.

ಎರಡೂ ಕಡೆಯಿಂದ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಸಂಜೆ ಆದೇಶ ಜಾಯ್ದಿರಿಸಿದ್ದರು.

ಬೈರತಿ ಮುಂದಿನ ಕಾನೂನು ನಡೆ ಏನು?

ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಕರ್ನಾಟಕ ಹೈಕೋರ್ಟ್, ವಿಚಾರಣಾ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಇದೀಗ ಇಲ್ಲೂ ಸಹ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ಬೈರತಿ ಬಸವರಾಜ್ ಪರ ವಕೀಲರು, ಹೈಕೋರ್ಟ್​​​ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಡಿಸೆಂಬರ್ 26ರಂದು ಹೈಕೋರ್ಟ್ ರಜಾಕಾಲದ ಪೀಠ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಅಂದೇ ಬೈರತಿ ಬಸವರಾಜ್ ಅರ್ಜಿ ವಿಚಾರಣೆ ಸಾಧ್ಯತೆ ಇದೆ. ಒಂದು ವೇಳೆ ಹೈಕೋರ್ಟ್​​ನಲ್ಲೂ ಜಾಮೀನು ಅರ್ಜಿ ತಿರಸ್ಕೃತಗೊಂಡಿರೆ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ.

ಬೈರತಿ ಬಸವರಾಜ್​​ಗಾಗಿ ತೀವ್ರ ಹುಡುಕಾಟ

ಮೊನ್ನೆ ಹೈಕೋರ್ಟ್​ ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ಬಂಧನ ಭೀತಿಯಿಂದಾಗಿ ಬೈರತಿ ಬಸವರಾಜ್ ತಲೆಮರೆಸಿಕೊಂಡಿದ್ದಾರೆ. ಗೋವಾ ಅಥವಾ ಮಹಾರಾಷ್ಟ್ರಕ್ಕೆ ಹೋಗಿರುವ ಮಾಹಿತಿ ಲಭ್ಯವಾಗಿತ್ತು. ತನಿಖೆ ಮುಂದುವರೆಸಿದ ಅಧಿಕಾರಿಗಳಿಗೆ ಬೈರತಿ ಬಸವರಾಜ್ ಕೊನೆಯದಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಲೈವ್ ಲೊಕೇಶನ್ ಪತ್ತೆಯಾಗಿದ್ದು, ಆನಂತರ ಮೊಬೈಲ್​ ಸ್ವಿಚ್ ಆಫ್​​ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಇತ್ತ ಸಿಐಡಿ ಅಧಿಕಾರಿಗಳು ಸಹ ತೀವ್ರ ಹುಡುಕಾಟ ನಡೆಸಿದ್ದು, ಯಾವುದೇ ಸಂದರ್ಭದಲ್ಲೂ ಬೈರತಿ ಬಸವರಾಜ್ ಅರೆಸ್ಟ್ ಆಗಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:04 pm, Tue, 23 December 25

Source link

Madikeri: ಅರಣ್ಯ ಸಿಬ್ಬಂದಿಯಿಂದಲೇ ಮರಗಳ್ಳತನ; ರಕ್ಷಕನೇ ಇಲ್ಲಿ ಭಕ್ಷಕ! – Kannada News | Karnataka Timber Theft: Kodagu Forest Staff Involved in Teak Smuggling

ವಶಪಡಿಸಿಕೊಳ್ಳಲಾಗಿರುವ ಮರದ ದಿಮ್ಮಿಗಳು.

ಮಡಿಕೇರಿ, ಡಿಸೆಂಬರ್​​ 23: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಕೊಡಗಿನಲ್ಲಿ ಅಕ್ಷರಶಃ ಸತ್ಯವಾಗಿದೆ. ಕಾಡಿನಲ್ಲಿರುವ ಅಪಾರ ಬೆಲೆ ಬಾಳುವ ಮರಗಳ ರಕ್ಷಣೆ ಕೆಲಸ ಮಾಡಬೇಕಿದ್ದ ಸಿಬ್ಬಂದಿಯೇ ಅವುಗಳ ಮಾರಣ ಹೋಮ ಮಾಡಿ ಕಳ್ಳತನ ನಡೆಸುತ್ತಿದ್ದ ಎಂಬ ಆಘಾತಕಾರಿ ವಿಷಯ ಇಲಾಖೆ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.  ಮರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯಲು ಹೋದ ಅರಣ್ಯ ಇಲಾಖೆಯ ಸಿಬ್ಬಂದಿಯೇ ಘಟನೆಯಿಂದಾಗಿ ಶಾಕ್​​ ಆಗಿದ್ದಾರೆ.

ಘಟನೆ ಏನು?

ಮರಗಳ್ಳತನದ ಉದ್ದೇಶದಿಂದ ಗ್ಯಾಂಗೊಂದು ಸೋಮವಾರಪೇಟೆ ತಾಲೂಕಿನ ಕಾಜೂನು ಬಳಿ ಮೀಸಲು ಅರಣ್ಯದಲ್ಲಿ 7 ತೇಗದ ಮರ ಕಡಿದು ಉರುಳಿಸಿರೋದು ಗಸ್ತು ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಗಮನಕ್ಕೆ ಬಂದಿತ್ತು. ಹೀಗಾಗಿ ಆರೋಪಿಗಳ ಸೆರೆಗೆ ಸಿಬ್ಬಂದಿ 4 ದಿನಗಳ ಕಾಲ ಕಾದು ಕುಳಿತಿದ್ದರು. ಡಿಸೆಂಬರ್ 12ರಂದು ಮಧ್ಯರಾತ್ರಿ ಮರಗಳ್ಳರು ಅರಣ್ಯಕ್ಕೆ ಎಂಟ್ರಿಕೊಟ್ಟಿದ್ದು, ಮರಗಳ್ಳರನ್ನು ಹಿಡಿಯುವ ಸಂದರ್ಭದಲ್ಲಿ ಘರ್ಷಣೆಯಾಗಿತ್ತು. ಈ ವೇಳೆ ಅಧಿಕಾರಿ ಚಂದ್ರಶೇಖರ್ ಗಾಳಿಯಲ್ಲಿ 2 ಸುತ್ತು ಗುಂಡುಹಾರಿಸಿದ್ದರು. ಘಟನೆಯಲ್ಲಿ ಲೋಡರ್​​ ಸಂತೋಷ್​​ನನ್ನು ಸಿಬ್ಬಂದಿ ಬಂಧಿಸಿದ್ದರೆ, ಉಳಿದ ನಾಲ್ವರು ಆರೋಪಿಗಳು ಎಸ್ಕೇಪ್​​ ಆಗಿದ್ದಾರೆ. ಎಡವಾರೆ ಮೀಸಲು ಅರಣ್ಯದಲ್ಲಿ ಒಟ್ಟು 25 ತೇಗದ ಮರಗಳು ಕಳವಾಗಿದೆ ಎನ್ನಲಾಗಿದೆ. ಕತ್ತರಿಸಿದ್ದ 7 ತೇಗದ ಮರಗಳ ಜೊತೆ ಪಿಕ್​ಅಪ್ ವಾಹನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಚೆಂದುಳ್ಳಿ ಚೆಲುವೆಯ ಮಾತಿಗೆ ಮರುಳಾಗಿ ಹೋಗಿದ್ದವ ರಸ್ತೆಯಲ್ಲಿ ಬೆತ್ತಲಾಗಿ ನಿಂತ; ಆಗಿದ್ದೇನು?

ಬಂಧಿತ ಸಂತೋಷ್ ವಿಚಾರಣೆ ವೇಳೆ ಮರಗಳ್ಳರಿಗೆ ಸಹಕಾರ ನೀಡುತ್ತಿದ್ದ ಆರ್​ಆರ್​ಟಿ ಸಿಬ್ಬಂದಿ ವಿನೋದ್ ಪಾತ್ರ ಬಯಲಾಗಿದೆ. ಅರಣ್ಯದ ಬಳಿ ಬೈಕ್​ನಲ್ಲಿ ಓಡಾಡಿ ಈತ ಮಾಹಿತಿ ನೀಡುತ್ತಿದ್ದ ಎನ್ನಲಾಗಿದ್ದು, ಮರಗಳ್ಳತನ ಬಹಿರಂಗವಾಗ್ತಿದ್ದಂತೆ ವಿನೋದ್ ತಲೆಮರೆಸಿಕೊಂಡಿದ್ದಾನೆ. ಘಟನೆ ಸಂಬಂಧ ಆರ್​ಆರ್​ಟಿ ಸಿಬ್ಬಂದಿ ವಿನೋದ್ ಸೇರಿದಂತೆ 6 ಜನರ ವಿರುದ್ಧ FIR ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:05 pm, Tue, 23 December 25

Source link

ಅಂತಿಮ ಡೆಡ್​ಲೈನ್; ಆಧಾರ್​ಗೆ ಲಿಂಕ್ ಆಗದ ಪ್ಯಾನ್ ಜನವರಿ 1ರಿಂದ ಡೆಡ್; ಹಣಕಾಸು ತೊಂದರೆಗಳೇನಾಗಬಹುದು? – Kannada News | Aadhaar linking final deadline on 2025 Dec 31st, PAN will become inoperative from Jan 1st

ವಿವಿಧ ಸಕಾರಣಗಳಿಗಾಗಿ ಆದಾಯ ತೆರಿಗೆ ಇಲಾಖೆಯು (Income Tax) ಎಲ್ಲಾ ಪ್ಯಾನ್ ಕಾರ್​ಡ್​ಗಳನ್ನು ಆಧಾರ್​ಗೆ ಲಿಂಕ್ ಮಾಡಲು ಪದೇ ಪದೇ ಹೇಳುತ್ತಲೇ ಬಂದಿದೆ. ಈಗಲೂ ಕೂಡ ಬಹಳಷ್ಟು ಜನರು ಪಾನ್ ಮತ್ತು ಆಧಾರ್ ಲಿಂಕ್ ಮಾಡಿಲ್ಲ. ಸರ್ಕಾರ ಹಲವು ಬಾರಿ ಡೆಡ್​ಲೈನ್ ಕೊಟ್ಟಿದೆ. ಈಗ ಫೈನಲ್ ಡೆಡ್​ಲೈನ್ ಡಿಸೆಂಬರ್ 31ಕ್ಕೆ ಇದೆ. ಅಷ್ಟರೊಳಗೆ ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರಬೇಕು. ಇಲ್ಲದಿದ್ದರೆ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್ ಇನಾಪರೇಟಿವ್ ಆಗುತ್ತದೆ. ಅಂದರೆ, ಅದು ನಿಷ್ಕ್ರಿಯಗೊಳ್ಳುತ್ತದೆ. ಅದರ ಪರಿಣಾಮಗಳು ವಿವಿಧ ಸ್ತರಗಳಲ್ಲಿ ಆಗಬಹುದು.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ 2017ರ ಜುಲೈ 1ರ ನಂತರ ಅಲಾಟ್ ಆಗಿರುವ ಪ್ಯಾನ್ ನಂಬರ್​ಗಳೆಲ್ಲವೂ ಆಧಾರ್​ಗೆ ಲಿಂಕ್ ಆಗಿರುತ್ತವೆ. ಯಾಕೆಂದರೆ ಆ ಪ್ಯಾನ್​ಗೆ ಅರ್ಜಿ ಸಲ್ಲಿಸುವಾಗಲೇ ಕಡ್ಡಾಯವಾಗಿ ಆಧಾರ್ ದಾಖಲೆಯನ್ನು ಪಡೆದಿರಲಾಗುತ್ತದೆ. ಅಲಾಟ್ ಮಾಡುವಾಗಲೇ ಆಧಾರ್ ಅನ್ನು ಲಿಂಕ್ ಮಾಡಲಾಗಿರುತ್ತದೆ.

ಇದನ್ನೂ ಓದಿ: ಸಿಮ್ ವೆರಿಫಿಕೇಶನ್​ನಿಂದ ಹಿಡಿದು ಕ್ರೆಡಿಟ್ ಸ್ಕೋರ್​ವರೆಗೆ ಜನವರಿ 1ರಿಂದ ಆಗಲಿರುವ ಪ್ರಮುಖ ಹಣಕಾಸು ನಿಯಮ ಬದಲಾವಣೆಗಳು

2017ರ ಜುಲೈ 1ಕ್ಕೆ ಮುಂಚೆ ಪ್ಯಾನ್ ಅಲಾಟ್ ಮಾಡುವಾಗ ಆಧಾರ್ ದಾಖಲೆ ಪಡೆಯುವುದು ಕಡ್ಡಾಯ ಇರಲಿಲ್ಲ. ಕೆಲವರು ಆಧಾರ್ ದಾಖಲೆ ಕೊಟ್ಟಿರುತ್ತಿದ್ದರು. ಕೆಲವರು ವೋಟರ್ ಐಡಿ ಇತ್ಯಾದಿ ದಾಖಲೆ ಕೊಡುತ್ತಿದ್ದರು. ಹೀಗಾಗಿ, ಡೂಪ್ಲಿಕೇಟ್ ಪ್ಯಾನ್​ಗಳು ಹೆಚ್ಚಾಗುತ್ತಿದ್ದುವು. ಇದನ್ನು ತಪ್ಪಿಸಲೆಂದು ಸರ್ಕಾರವು ಪ್ಯಾನ್​ಗೆ ಆಧಾರ್ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.

ಆಧಾರ್​ಗೆ ಪ್ಯಾನ್ ಲಿಂಕ್ ಆಗದಿದ್ದರೆ ಏನಾಗುತ್ತದೆ?

  • ಬ್ಯಾಂಕುಗಳಲ್ಲಿ ಅಕೌಂಟ್ ತೆರೆಯಲು ಆಗುವುದಿಲ್ಲ
  • ಐಟಿ ರಿಟರ್ನ್ ಸಲ್ಲಿಸಲು ಆಗುವುದಿಲ್ಲ
  • ರೀಫಂಡ್​ಗಳು ಬರುವುದಿಲ್ಲ
  • ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಸಹಾಯಧನ ಬಿಡುಗಡೆ ಆಗದೇ ಇರಬಹುದು.
  • ಫಿಕ್ಸೆಡ್ ಡೆಪಾಸಿಟ್ ಇತ್ಯಾದಿಗೆ ಎರಡು ಪಟ್ಟು ಹೆಚ್ಚು ಟಿಡಿಎಸ್ ಕಡಿತ ಆಗಬಹುದು.

ಇದನ್ನೂ ಓದಿ: ಭಾರತದ ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ 2011-12 ಅಲ್ಲ, 2022-23; ಇದರಿಂದೇನು ಪ್ರಯೋಜನ?

ಪ್ಯಾನ್​ಗೆ ಆಧಾರ್ ಲಿಂಕ್ ಮಾಡುವ ಕ್ರಮ

  • ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್​ಗೆ ಹೋಗಬೇಕು: www.incometax.gov.in
  • ಮುಖ್ಯಪುಟದಲ್ಲಿ ಕ್ವಿಕ್ ಲಿಂಕ್ಸ್ ಸೆಕ್ಷನ್ ಅಡಿ ‘ಲಿಂಕ್ ಆಧಾರ್’ ಕ್ಲಿಕ್ ಮಾಡಿ.
  • ಪ್ಯಾನ್ ನಂಬರ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ.
  • ಆಧಾರ್​ನಲ್ಲಿರುವ ಹೆಸರು ನಮೂದಿಸಿ

ಇದನ್ನು ವ್ಯಾಲಿಡೇಟ್ ಮಾಡಬೇಕು. ನಂತರ, ಇ-ಪೇ ಟ್ಯಾಕ್ಸ್ ಪೇಜ್ ಮೂಲಕ 1,000 ರೂ ಪೆನಾಲ್ಟಿ ಕಟ್ಟಬೇಕಾಗುತ್ತದೆ. ದಂಡ ಕಟ್ಟಿದ ಬಳಿಕ ವಾಪಸ್ ಇಫೈಲಿಂಗ್ ಪೋರ್ಟಲ್​ಗೆ ಬಂದು ಮತ್ತೊಮ್ಮೆ ಪ್ಯಾನ್, ಆಧಾರ್ ವಿವರ ತುಂಬಿಸಿ. ಮೊಬೈಲ್​ಗೆ ಬರುವ ಒಟಿಪಿ ಹಾಕಿ, ವ್ಯಾಲಿಡೇಟ್ ಮಾಡಿ. ಈಗ ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್ – Kannada News | Tharun Sudhir talks about Darshan and Kichcha Sudeep Fans war

ಕನ್ನಡ ಚಿತ್ರರಂಗದಲ್ಲಿ ಸುದೀಪ್ (Kichcha Sudeep) ಫ್ಯಾನ್ಸ್ ಮತ್ತು ದರ್ಶನ್ ಫ್ಯಾನ್ಸ್ ನಡುವೆ ವಾರ್ ಶುರುವಾಗಿದೆ. ಈ ಬಗ್ಗೆ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ತಾವು ಕಂಡಂತೆ ದರ್ಶನ್ ಫ್ಯಾನ್ಸ್ (Darshan Fans) ಎಂಥವರು ಎಂಬುದನ್ನು ತರುಣ್ ಸುಧೀರ್ ವಿವರಿಸಿದ್ದಾರೆ. ‘ಫ್ಯಾನ್ಸ್ ವಾರ್ ಎಲ್ಲ ಚಿತ್ರರಂಗದಲ್ಲೂ ಇದೆ. 10ರಲ್ಲಿ ಒಂದಾದರೂ ನೆಗೆಟಿವ್ ಕಮೆಂಟ್ ಇರತ್ತೆ. ವಿಕೃತ ಖುಷಿಪಡುವವರು ಯಾರ ಫ್ಯಾನ್ಸ್ ಕೂಡ ಅಲ್ಲ. ದರ್ಶನ್ ಅಭಿಮಾನಿಗಳನ್ನು ನಾನು ನೋಡಿದ್ದೇನೆ. ಅವರು ಆ ರೀತಿ ಇಲ್ಲ. ಅವರು ಸಿನಿಮಾಗೆ ಬೆಂಬಲ ಕೊಡುತ್ತಾರೆ. ಅವರು ಎಷ್ಟು ಚೆನ್ನಾಗಿ ಮಾತನಾಡುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ’ ಎಂದು ತರುಣ್ ಸುಧೀರ್ (Tharun Sudhir) ಅವರು ಹೇಳಿದ್ದಾರೆ. ನಟ ಸಾಧು ಕೋಕಿಲ ಕೂಡ ನೀಡಿದ ಪ್ರತಿಕ್ರಿಯೆ ಈ ವಿಡಿಯೋದಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

4 ಶಿಶುಗಳಿಗೆ ಜನ್ಮ ನೀಡಿ 7 ಹೆಣ್ಣುಮಕ್ಕಳ ತಾಯಿಯಾದ ಮಹಿಳೆ! – Kannada News | Viral news 30 year old woman gives birth to 4 Babies in Kannauj

ನವದೆಹಲಿ, ಡಿಸೆಂಬರ್ 23: ಉತ್ತರ ಪ್ರದೇಶದಲ್ಲೊಂದು ಅತ್ಯಂತ ಅಪರೂಪದ ಘಟನೆ ನಡೆದಿದೆ. ಮಹಿಳೆಯೊಬ್ಬರು ನಾರ್ಮಲ್ ಡೆಲಿವರಿ ಮೂಲಕ 4 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಕೆ ಈಗಾಗಲೇ 3 ಹೆಣ್ಣುಮಕ್ಕಳ ತಾಯಿಯಾಗಿದ್ದು, ಒಟ್ಟಾರೆ 7 ಮಕ್ಕಳ ತಾಯಿಯಾಗಿದ್ದಾರೆ. ಇವರೆಲ್ಲರೂ ನಾರ್ಮಲ್ ಡೆಲಿವರಿ ಮೂಲಕವೇ ಜನಿಸಿದ್ದು ಎಂಬುದು ವಿಶೇಷ.

ಉತ್ತರ ಪ್ರದೇಶದ ಕನ್ನೌಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆ ವೈಷ್ಣವಿ ನರ್ಸಿಂಗ್ ಹೋಂನಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಅಪರೂಪದ ಘಟನೆ ಆಸ್ಪತ್ರೆ ಸಿಬ್ಬಂದಿಯನ್ನು ಅಚ್ಚರಿಗೊಳಿಸಿದೆ. ಡಿಸೆಂಬರ್ 21ರಂದು ಅನಿತಾ ಎಂಬ ಮಹಿಳೆ ನಾರ್ಮಲ್ ಡೆಲಿವರಿ ಮೂಲಕ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅನಿತಾ ಜನ್ಮ ನೀಡಿದ 4 ಹೆಣ್ಣು ಮಕ್ಕಳ ಜನನಗಳ ನಡುವೆ ಎರಡರಿಂದ ಮೂರು ನಿಮಿಷಗಳ ಅಂತರವಿತ್ತು.

ಇದನ್ನೂ ಓದಿ: ಮೈ ಮೇಲೆ ಕಕ್ಕ ಮಾಡಿದ್ದಕ್ಕೆ ತಾಯಿಯ ಪ್ರಿಯಕರನಿಂದ 3 ವರ್ಷದ ಮಗುವಿನ ಕೊಲೆ!

ತಥಿಯಾ ಪಟ್ಟಣದ ನಿವಾಸಿ 30 ವರ್ಷದ ಅನಿತಾ ಅವರನ್ನು ಡಿಸೆಂಬರ್ 20ರಂದು ಅವರ ಪತಿ ಅನುಜ್ ಸಿಂಗ್ ಹೆರಿಗೆಗಾಗಿ ಬರ್ಧೈಯಾ ರಸ್ತೆಯಲ್ಲಿರುವ ವೈಷ್ಣವಿ ನರ್ಸಿಂಗ್ ಹೋಂಗೆ ದಾಖಲಿಸಿದ್ದರು. ಇಬ್ಬರು ಹೆಣ್ಣು ಮಕ್ಕಳ ತೂಕ ಸುಮಾರು ಒಂದು ಕೆಜಿ ಆಗಿದ್ದರೆ, ಉಳಿದ ಶಿಶುಗಳು ಒಂದೂವರೆ ಕೆಜಿಗಿಂತಲೂ ಹೆಚ್ಚು ತೂಕವಿತ್ತು.

ಇದೇ ರೀತಿ ಕೆಲವು ದಿನಗಳ ಹಿಂದೆ, ಮಹಾರಾಷ್ಟ್ರದ ಸತಾರಾದ ಜಿಲ್ಲಾ ಆಸ್ಪತ್ರೆಯಲ್ಲಿ 30 ವರ್ಷದ ಮಹಿಳೆ 4 ಮಕ್ಕಳಿಗೆ ಜನ್ಮ ನೀಡಿದ್ದರು. ಅವರಿಗೂ ಮೂವರು ಮಕ್ಕಳಿದ್ದರು. ಈ ಮೂಲಕ ಅವರು ಕೂಡ 7 ಮಕ್ಕಳ ತಾಯಿಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND-W vs SL-W: ಶಫಾಲಿ ಸಿಡಿಲಬ್ಬರದ ಬ್ಯಾಟಿಂಗ್‌; ಟೀಂ ಇಂಡಿಯಾಗೆ ಸತತ 2ನೇ ಗೆಲುವು – Kannada News | India Women vs Sri Lanka 2nd T20: Shafali Verma’s 69* Secures India’s 2 0 Series Lead

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಆತಿಥೇಯ ಭಾರತ ತಂಡ ಈ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 129 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ, ಯುವ ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಇನ್ನು 49 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

ಲಂಕಾಗೆ ಸ್ಫೋಟಕ ಆರಂಭ

ಈ ಪಂದ್ಯದಲ್ಲೂ ಟಾಸ್ ಗೆದ್ದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಂಡ ಬೌಲರ್‌ಗಳು ಶ್ರೀಲಂಕಾ ತಂಡ ಬೃಹತ್ ಮೊತ್ತ ಕಲೆಹಾಕದಂತೆ ತಡೆದರು. ಆದಾಗ್ಯೂ ಲಂಕಾ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟ ನಾಯಕಿ ಚಾಮರಿ ಅಟಪಟ್ಟು 31 ರನ್‌ಗಳ ಕೊಡುಗೆ ನೀಡಿದರು. ಚಾಮರಿ ಅಟಪಟ್ಟು ಇರುವವರೆಗೂ ಲಂಕಾ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವ ಸುಳಿವು ನೀಡಿತ್ತು. ಆದರೆ ಅವರು ಔಟಾದ ಬಳಿಕ ಎಂದಿನಂತೆ ತಂಡದ ಇನ್ನಿಂಗ್ಸ್ ಕುಸಿಯಿತು. ನಾಯಕಿ ಹೊರತುಪಡಿಸಿ, ಹರ್ಷಿತಾ ಸಮರವಿಕ್ರಮ 33 ರನ್‌ಗಳ ಕೊಡುಗೆ ನೀಡಿದರು. ಇವರನ್ನು ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್ 25 ರನ್‌ಗಳನ್ನು ತಲುಪಲು ಸಾಧ್ಯವಾಗಲಿಲ್ಲ.

ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಶ್ರೀ ಚರಣಿ ನಾಲ್ಕು ಓವರ್‌ಗಳಲ್ಲಿ ಕೇವಲ 23 ರನ್‌ಗಳನ್ನು ಬಿಟ್ಟುಕೊಟ್ಟು ಎರಡು ವಿಕೆಟ್‌ಗಳನ್ನು ಪಡೆದರು . ವೈಷ್ಣವಿ ಶರ್ಮಾ ಕೂಡ 32 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು. ಉಳಿದಂತೆ ಕ್ರಾಂತಿ ಗೌರ್ ಮತ್ತು ಸ್ನೇಹ್ ರಾಣಾ ಕೂಡ ತಲಾ ಒಂದು ವಿಕೆಟ್ ಪಡೆದರು .

ಶಫಾಲಿ ಸಿಡಿಲಬ್ಬರದ ಅರ್ಧಶತಕ

129 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಮೊದಲ ವಿಕೆಟ್‌ಗೆ 3.1 ಓವರ್‌ಗಳಲ್ಲಿ 29 ರನ್‌ಗಳ ಜೊತೆಯಾಟ ನಡೆಸಿದರು. ಆದಾಗ್ಯೂ ಸ್ಮೃತಿ ಮಂಧಾನ ಸತತ 2ನೇ ಪಂದ್ಯದಲ್ಲಿ ವಿಫಲರಾಗಿ 14 ರನ್​ಗಳಿಗೆ ಔಟಾದರು. ಆದರೆ ಶೆಫಾಲಿ ವರ್ಮಾ ಒಂದು ತುದಿಯಿಂದ ತಮ್ಮ ಸ್ಫೋಟಕ ಬ್ಯಾಟಿಂಗ್ ಅನ್ನು ಮುಂದುವರಿಸಿ ಕೇವಲ 34 ಎಸೆತಗಳಲ್ಲಿ ಅಜೇಯ 69 ರನ್ ಬಾರಿಸಿದರು . ಅವರ ಇನ್ನಿಂಗ್ಸ್​ನಲ್ಲಿ 11 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಕೂಡ ಸೇರಿತ್ತು. ಶೆಫಾಲಿ ವರ್ಮಾ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಜೆಮಿಮಾ ರೊಡ್ರಿಗಸ್ ಕೂಡ 15 ಎಸೆತಗಳಲ್ಲಿ 26 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಪರಿಣಾಮವಾಗಿ, ಟೀಂ ಇಂಡಿಯಾ ಕೇವಲ 11.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ಮುಟ್ಟಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND-W vs SL-W: ಟಾಸ್ ಗೆದ್ದ ಟೀಂ ಇಂಡಿಯಾ; ತಂಡದಲ್ಲಿ 1 ಬದಲಾವಣೆ – Kannada News | India vs Sri Lanka Women 2nd T20 toss and playing 11 updates

ಭಾರತ ಮತ್ತು ಶ್ರೀಲಂಕಾ ಮಹಿಳಾ (India vs Sri Lanka Women) ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಟಿ20 ಪಂದ್ಯ ವಿಶಾಖಪಟ್ಟಣದಲ್ಲಿ (Visakhapatnam) ನಡೆಯುತ್ತಿದೆ. ಈ ಸರಣಿಯಲ್ಲಿ ಆತಿಥೇಯ ಭಾರತ 1-0 ಅಂತರದ ಮುನ್ನಡೆ ಸಾಧಿಸಿದ್ದು ಇದೀಗ ಈ ಪಂದ್ಯವನ್ನು ಗೆಲ್ಲುವ ಮೂಲಕ ಈ ಮುನ್ನಡೆಯನ್ನು 2-0 ಅಂತರಕ್ಕೆ ಕೊಂಡೊಯ್ಯಲು ಹರ್ಮನ್​ಪ್ರೀತ್ ಕೌರ್ ಪಡೆ ನೋಡುತ್ತಿದೆ. ಉಭಯ ತಂಡಗಳ ನಡುವೆ ಇದೇ ವಿಶಾಖಪಟ್ಟಣನಲ್ಲಿ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ ಕೇವಲ 126 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಜೆಮಿಮಾ 44 ಎಸೆತಗಳಲ್ಲಿ 69 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಟಾಸ್ ಗೆದ್ದ ಟೀಂ ಇಂಡಿಯಾ

ಸತತ ಎರಡನೇ ಪಂದ್ಯದಲ್ಲೂ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್‌ ಮಾಡಲಿದೆ. ಆದಾಗ್ಯೂ ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ತಂಡದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅನಾರೋಗ್ಯ ಕಾರಣದಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಸ್ನೇಹ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಲಂಕಾ ತಂಡ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಟಗಾರ್ತಿಯರನ್ನೇ ಕಣಕ್ಕಿಳಿಸುತ್ತಿದೆ.

ಉಭಯ ತಂಡಗಳು

ಭಾರತ ತಂಡದ ಪ್ಲೇಯಿಂಗ್ 11: ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಶ್ರೀ ಚರಣಿ.

ಶ್ರೀಲಂಕಾ ತಂಡ: ಚಾಮರಿ ಅಟಪಟ್ಟು (ನಾಯಕಿ), ಹಾಸಿನಿ ಪೆರೇರಾ, ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ನೀಲಾಕ್ಷಿಕಾ ಸಿಲ್ವಾ, ಕೌಶಿನಿ ನುತ್ತಯಂಗನಾ (ವಿಕೆಟ್ ಕೀಪರ್), ಕವಿಶಾ ದಿಲ್ಹಾರಿ, ಮಲ್ಕಿ ಮುದಾರ, ಇನೋಕಾ ರಣವೀರ, ಕಾವ್ಯಾ ಕವಿಂದಿ, ಶಶಿನಿ ಗಿಮ್ಹಾನಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:37 pm, Tue, 23 December 25

Source link

ಬೆಂಗಳೂರಿನಲ್ಲಿ ಶೂಟೌಟ್: ವಿಚ್ಛೇದನ ಕೋರ್ಟ್​​​​​ನಲ್ಲಿರುವಾಗಲೇ ಹೆಂಡ್ತಿಯನ್ನ ಗುಂಡಿಕ್ಕಿ ಕೊಂದ ಪತಿ – Kannada News | A man shots his wife dead on a busy road In Bengaluru after she asking divorce

ಬೆಂಗಳೂರು, (ಡಿಸೆಂಬರ್ 23):  ಗಂಡ ಹೆಂಡತಿ (Husband And Wife) ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಹೆಂಡತಿ ಜೊತೆ ಜಗಳ ತೆಗೆದ ಪತಿ ಏಕಾಏಕಿ ಗನ್‌ ತೆಗೆದು ಹೆಂಡತಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಬಸವೇಶ್ವರ ನಗರದ ವೆಸ್ಟಿನ್ ಹೋಟೆಲ್‌ ಬಳಿ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡು ಪತ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಮೃತ ಮಹಿಳೆಯನ್ನು ಭುವನೇಶ್ವರಿ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಪತಿ ಬಾಲ ಮುರುಗನ್ ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ವಿಚ್ಛೇದನ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಬರುತ್ತಿರುವಾಗಲೇ ಬಾಲ ಮುರುಗನ್, ನಡುರಸ್ತೆಯಲ್ಲೇ ಹೆಂಡತಿ ಭುವನೇಶ್ವರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಶೂಟೌಟ್​​​ನಿಂದ ಬಸವೇಶ್ವರ ನಗರವೇ ಬೆಚ್ಚಿಬಿದ್ದಿದೆ.

ಹೆಂಡ್ತಿ ಮೇಲೆ ಅನುಮಾನಪಟ್ಟು ಶೂಟ್​

ಬಾಲಮುರುಗನ್​ ಹಾಗೂ ಭುವನೇಶ್ವರಿ 2011ರಲ್ಲಿ ಮದುವೆಯಾಗಿದ್ದು, ಬಳಿಕ ತಮಿಳುನಾಡಿನ ಸೇಲಂನಿಂದ ಬಂದು ಬೆಂಗಳೂರಿನ ರಾಜಾಜಿನಗರದಲ್ಲಿ ಎರಡು ಮಕ್ಕಳೊಂದಿಗೆ ನೆಲೆಸಿದ್ದರು. ಬಾಲಮುರುಗನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿ ಆಗಿದ್ದರು.ಆದ್ರೆ, ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಆಗಾಗ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತು ಭುವನೇಶ್ವರಿ, ವಿಚ್ಛೇದನ ಕೇಳಿದ್ದಳು. ಇದಕ್ಕೆ ಮುರುಗನ್ ಒಪ್ಪಿರಲಿಲ್ಲ. ಕೊನೆಗೆ ಭುವನೇಶ್ವರಿ 2024ರಲ್ಲಿ ಮುರುಗನ್​​ನಿಂದ ದೂರವಾಗಿ ಕೆಪಿ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದರು. ಬಳಿಕ ಅವರು ಡಿವೋರ್ಸ್‌ ಗಾಗಿ ಕೋರ್ಟ್​​​ಗೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕೋರ್ಟ್​​ ಮುರುಗನ್​​ಗೆ ನೋಟಿಸ್ ನೀಡಿತ್ತು. ಅದರಂತೆ ಮುರುಗನ್ ನ್ಯಾಯಾಲಯಕ್ಕೆ ಹಾಜರಾಗಿದ್ದ. ಇತ್ತ ಭುವನೇಶ್ವರಿ ಸಹ ವಿಚಾರಣೆಗೆ ಹಾಜರಾಗಿದ್ದು, ಎಲ್ಲಾ ವಿಚಾರಣೆ ಮುಗಿಸಿ ಕೋರ್ಟ್​​​ನಿನಿಂದ ಇಬ್ಬರು ಆಚೆ ಬಂದಿದ್ದರು.

ಇದನ್ನೂ ಓದಿ: ತನಗೆ ಮರ್ಯಾದೆ ಕೊಡ್ಲಿಲ್ಲ ಅಂತಾ ಹೆಂಡತಿಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಪತಿ!

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ತೀವ್ರ ಸ್ವರೂಪ ಹೋಗಿದೆ. ಇದರಿಂದ ಆಕ್ರೋಶಗೊಂಡ ಪತಿ ಮುರುಗನ್, ನಡು ರಸ್ತೆಯಲ್ಲೇ ಗನ್ ತೆಗೆದು ಪತ್ನಿ ಭುವನೇಶ್ವರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಭುವನೇಶ್ವರಿಯನ್ನು ಕೂಡಲೇ ಆಸ್ಪತ್ರೆಗೆ ದಾಖಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಹೆಂಡ್ತಿಗೆ ಶೂಟ್ ಮಾಡಿ ಪೊಲೀಸ್ ಠಾಣೆಗೆ

ಹೆಂಡತಿ ಮೇಲೆ ಗುಂಡು ಹಾರಿಸಿದ ಬಳಿಕ ಮುರುಗನ್​ ನೇರವಾಗಿ ಮಾಗಡಿ ರಸ್ತೆ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೂಡಲೇ ಪೊಲಿಸರು, ಶೂಟೌಟ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಅನೈತಿಕ ಸಂಬಂಧ ಅನುಮಾನ ಹಾಗೂ ಡಿವೋರ್ಸ್​​ ಕೇಳಿರುವುದಕ್ಕೆ ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಇನ್ನು ಆರೋಪಿ ಪಿಸ್ತೂಲನ್ನು ಅಕ್ರಮವಾಗಿ ತರಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ  ತನಿಖೆ ಕೈಗೊಂಡಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಸರ್​​ಪ್ರೈಸ್ – Kannada News | Surprise Visit to Wedding Monkey jumps on bride during kanyadaan ritual watch viral video

ರಿಷಿಕೇಶ, ಡಿಸೆಂಬರ್ 23: ಉತ್ತರಾಖಂಡದ ರಿಷಿಕೇಶದಲ್ಲಿ ವಧು-ವರ ವಿವಾಹವಾಗುತ್ತಿದ್ದರು. ಮದುವೆ ಭರದಿಂದ ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ಕೋತಿ ಮದುವೆಯ ಮಂಟಪಕ್ಕೆ ನುಗ್ಗಿ ಕೋಲಾಹಲ ಸೃಷ್ಟಿಸಿತು. ನದಿಯ ದಡದಲ್ಲಿ ನಡೆದ ಮದುವೆಯಲ್ಲಿ ಪುರೋಹಿತರು ವೇದ ಮಂತ್ರಗಳನ್ನು ಪಠಿಸುತ್ತಿದ್ದಾಗ ಕೋತಿಯೊಂದು ಸರ್​​ಪ್ರೈಸ್ ವಿಸಿಟ್ ನೀಡಿದೆ. ಕನ್ಯಾದಾನದ ವೇಳೆ ಕೋತಿಯೊಂದು ಮದುಮಗಳ ಮೇಲೆ ಹಾರಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವೈರಲ್ ವಿಡಿಯೋವನ್ನು (Viral Video) ನೋಡಿದ ಜನರು ಇದು ಕೇವಲ ತಮಾಷೆಯಲ್ಲ, ಬದಲಾಗಿ ಹನುಮಂತನ ಆಶೀರ್ವಾದ ಎಂದು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version