ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಇನ್ಮುಂದೆ ರೈಲಿಗೆ ಹೆಚ್ಚು ಹೊತ್ತು ಕಾಯಬೇಕಿಲ್ಲ – Kannada News | Good News for Yellow Line Metro Passengers: Sixth Train to Begin Operations from December 23

ಬೆಂಗಳೂರು, ಡಿಸೆಂಬರ್​ 22: ನಾಳೆಯಿಂದ ಅಂದರೆ ಡಿಸೆಂಬರ್ 23ರಿಂದ 6ನೇ ಹೊಸ ಮೆಟ್ರೋ (Namma Metro) ರೈಲು ಟ್ರ್ಯಾಕಿಗಿಳಿಯಲಿದೆ. ಆ ಮೂಲಕ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಗುಡ್​ ನ್ಯೂಸ್ ನೀಡಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಆರನೇ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಹಾಗಾಗಿ ಹೆಚ್ಚು ಹೊತ್ತು ರೈಲಿಗಾಗಿ ಕಾಯುವಿಕೆಗೆ ಬ್ರೇಕ್​​ ಬೀಳಲಿದೆ. ಈ ಬಗ್ಗೆ ಬಿಎಂಆರ್​ಸಿಎಲ್ (BMRCL)​​ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಬಿಎಂಆರ್​ಸಿಎಲ್​​ ಮಾಧ್ಯಮ ಪ್ರಕಟಣೆ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಹಳದಿ ಮಾರ್ಗದಲ್ಲಿ 6ನೇ ಮೆಟ್ರೋ ರೈಲನ್ನು ಡಿಸೆಂಬರ್ 23ರಿಂದ (ಮಂಗಳವಾರ) ಪ್ರಯಾಣಿಕರ ಸೇವೆಗೆ ಪ್ರಾರಂಭಿಸಲಾಗುತ್ತಿದೆ. ಈ ರೈಲಿನ ಸೇರ್ಪಡೆಯೊಂದಿಗೆ, ಸೋಮವಾರದಿಂದ ಶನಿವಾರದವರೆಗೆ ಜನದಟ್ಟನೆಯ ಅವಧಿಯಲ್ಲಿ ಮೆಟ್ರೋ ಸೇವೆಗಳು ಪ್ರಸ್ತುತ ಇರುವ 15 ನಿಮಿಷಗಳ ಅಂತರದ ಬದಲು 13 ನಿಮಿಷಗಳ ಅವಧಿಯಲ್ಲಿ ಸಂಚರಿಸಲಿವೆ. ಭಾನುವಾರದಂದು ಪೀಕ್ ಅವಧಿಯ ಸೇವಾ ಅವಧಿ 15 ನಿಮಿಷ ಇರಲಿದೆ.

ನಮ್ಮ ಮೆಟ್ರೋ ಟ್ವೀಟ್​​​

ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ನಿಲ್ದಾಣಗಳ ಎರಡೂ ಟರ್ಮಿನಲ್‌ಗಳಿಂದ ಮೊದಲ ಹಾಗೂ ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಮೇಲ್ಕಂಡ ಬದಲಾವಣೆಗಳನ್ನು ಗಮನಿಸಿ, ಮೆಟ್ರೋ ಸೇವೆಗಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಿಎಂಆರ್​ಸಿಎಲ್​​ ಕೋರಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ

ಇತ್ತೀಚೆಗೆ ನವೆಂಬರ್ 18 ರಂದು ಕೊಲ್ಕತ್ತಾದ ಟಿಟಾಗರ್​​ನಿಂದ ಹೊರಟು ಆರನೇ ಡ್ರೈವರ್ ಲೆಸ್ ಮೆಟ್ರೋ ರೈಲು ಸೆಟ್​​ ಡಿಸೆಂಬರ್​ 3ರಂದು ಸಂಜೆ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿತ್ತು. ಈ ಹೊಸ ರೈಲು ಸೇರ್ಪಡೆಯಿಂದ ರೈಲುಗಳ ನಡುವಿನ ಓಡಾಟದ ಸಮಯದಲ್ಲಿ ಇಳಿಕೆಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:12 pm, Mon, 22 December 25

Source link

ಕಳೆದ ವರ್ಷ ಈ ದೇಶದಲ್ಲಿ ಚಿಕಿತ್ಸೆಗಾಗಿ ಕಾಯುತ್ತಿರುವಾಗಲೇ ಪ್ರಾಣ ಬಿಟ್ಟಿದ್ದಾರೆ 23,746 ರೋಗಿಗಳು! – Kannada News | More than 23 thousand Patients died waiting for medical treatment in the country in Last year

ನವದೆಹಲಿ, ಡಿಸೆಂಬರ್ 22: ಹಿಂದೆಲ್ಲ ಆಸ್ಪತ್ರೆಯ (Hospital) ಮೆಟ್ಟಿಲನ್ನೂ ಹತ್ತದೇ ಆರೋಗ್ಯಯುತವಾಗಿಯೇ ಆಯಸ್ಸನ್ನು ಕಳೆದು ಪ್ರಾಣ ಬಿಟ್ಟವರ ಸಂಖ್ಯೆಯೇ ಹೆಚ್ಚಿತ್ತು. ಆದರೆ, ಇಂದಿನ ಕಾಲದಲ್ಲಿ ಜೀವನಶೈಲಿ, ಕೆಲಸದೊತ್ತಡ, ಆಹಾರದ ಬದಲಾವಣೆ, ರಾಸಾಯನಿಕಗಳ ಪ್ರಭಾವ, ಹವಾಮಾನ ಸಮಸ್ಯೆಗಳು ಹೀಗೆ ನಾನಾ ಕಾರಣಗಳಿಂದ ಮನುಷ್ಯನ ಆಯಸ್ಸೂ ಕಡಿಮೆಯಾಗುತ್ತಿದೆ, ಅನಾರೋಗ್ಯವೂ ಹೆಚ್ಚಾಗುತ್ತಿದೆ. ಆರೋಗ್ಯ ಕೈಕೊಟ್ಟಾಗ ಆಸ್ಪತ್ರೆಗೆ ಹೋಗಲು ಸರಿಯಾದ ಮೂಲಸೌಕರ್ಯಗಳು ಇಲ್ಲದೆ ಭಾರತದಲ್ಲಿ ಅನೇಕ ಹಳ್ಳಿಗಳ ಜನರು ಒದ್ದಾಡುತ್ತಾರೆ. ಇನ್ನು ಕೆಲವು ಕಡೆ ಆಸ್ಪತ್ರೆಯಿದ್ದರೂ ವೈದ್ಯರಿಲ್ಲದ ಗೋಳಾಟ. ಇದೆಲ್ಲದರಿಂದ ಪ್ರಾಣ ಕಳೆದುಕೊಂಡ ರೋಗಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಆದರೆ, ಕಳೆದ ವರ್ಷ ವೈದ್ಯಕೀಯ ಚಿಕಿತ್ಸೆಗಾಗಿ ಕಾಯುತ್ತಲೇ ಪ್ರಾಣ ಕಳೆದುಕೊಂಡವರ ಸಂಖ್ಯೆ ಜಗತ್ತಿನ ಈ ಮುಂದುವರೆದ ದೇಶದಲ್ಲಿ 23 ಸಾವಿರವಂತೆ! ಯಾವುದು ಆ ದೇಶ? ಇಲ್ಲಿದೆ ಕುತೂಹಲಕಾರಿ ಮತ್ತು ಆತಂಕಕಾರಿ ಮಾಹಿತಿ.

ಈ ರೀತಿಯ ಘಟನೆ ನಡೆದಿರುವುದು ಕೆನಡಾದಲ್ಲಿ. ಸಾರ್ವಜನಿಕ ನೀತಿ ಚಿಂತಕರ ಚಾವಡಿ SecondStreet.orgನ ವರದಿಯು ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಕೆನಡಾದಲ್ಲಿ ಏಪ್ರಿಲ್ 2024 ಮತ್ತು ಮಾರ್ಚ್ 2025ರ ನಡುವೆ ಶಸ್ತ್ರಚಿಕಿತ್ಸೆಗಳು ಅಥವಾ ರೋಗನಿರ್ಣಯ ಕಾರ್ಯವಿಧಾನಗಳಿಗಾಗಿ ಕಾಯುತ್ತಿರುವಾಗಲೇ ಕೆನಡಾದಲ್ಲಿ ಕನಿಷ್ಠ 23,746 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ಈ ಅಂಕಿ ಅಂಶವು ಕೆನಡಾದ ಆರೋಗ್ಯ ವ್ಯವಸ್ಥೆಯ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ಈ ಅಂಕಿ-ಅಂಶಗಳು ಹಿಂದಿನ ವರ್ಷಕ್ಕಿಂತ ಶೇ.3ರಷ್ಟು ಹೆಚ್ಚಾಗಿದೆ. ಇದರಿಂದ 2018ರಿಂದ ವರದಿಯಾದ ರೋಗಿಗಳ ಒಟ್ಟು ಕಾಯುವಿಕೆ ಪಟ್ಟಿಯ ಸಾವುಗಳ ಸಂಖ್ಯೆ 1,00,000ಕ್ಕಿಂತ ಹೆಚ್ಚಾಗಿದೆ. ಈ ಸಂಶೋಧನೆಗಳು 40ಕ್ಕೂ ಹೆಚ್ಚು ಪ್ರಾಂತೀಯ ಮತ್ತು ಪ್ರಾದೇಶಿಕ ಆರೋಗ್ಯ ಸಂಸ್ಥೆಗಳಿಗೆ ನೀಡಲಾದ ಮಾಹಿತಿ ಸ್ವಾತಂತ್ರ್ಯ (FOI) ವಿನಂತಿಗಳನ್ನು ಆಧರಿಸಿವೆ ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ: ನೀವು ಕೂಡ ಮುಖದವರೆಗೂ ಬ್ಲಾಂಕೆಟ್ ಹೊದ್ದು ಮಲಗ್ತೀರಾ ಈ ಅಭ್ಯಾಸ ಎಷ್ಟು ಡೇಂಜರ್ ನೋಡಿ!

“ಸರ್ಕಾರಗಳು ನಿಯಮಿತವಾಗಿ ರೆಸ್ಟೋರೆಂಟ್‌ಗಳನ್ನು ಪರಿಶೀಲಿಸುತ್ತವೆ ಮತ್ತು ಪೇಪರ್ ಟವಲ್ ಹೋಲ್ಡರ್ ಹಾಕದಿರುವಂತಹ ಸಣ್ಣ ಸಮಸ್ಯೆ ಇದ್ದರೆ ಅದನ್ನೂ ಸಾರ್ವಜನಿಕವಾಗಿ ವರದಿ ಮಾಡುತ್ತವೆ. ಆದರೆ, ಯಾವುದೇ ಸರ್ಕಾರವು ಕಾಯುವ ಪಟ್ಟಿಯಲ್ಲಿರುವಾಗಲೇ ಸಾಯುತ್ತಿರುವ ರೋಗಿಗಳ ಬಗ್ಗೆ ಸಾರ್ವಜನಿಕವಾಗಿ ವರದಿ ಮಾಡುವುದಿಲ್ಲ. ಇದು ಸರ್ಕಾರ ಬೇಕೆಂದೇ ಮುಚ್ಚಿಡುತ್ತಿರುವ ಸತ್ಯವಾಗಿದೆ” ಎಂದು SecondStreet.org ವರದಿ ಮಾಡಿದೆ.

ಇದಕ್ಕೆ ಹಲವು ಉದಾಹರಣೆಗಳನ್ನೂ ವರದಿ ನೀಡಿದೆ. ಡೆಬ್ಬಿ ಫ್ಯೂಸ್ಟರ್‌ ಎಂಬ ಕೆನಡಿಯನ್ ಮಹಿಳೆ 3 ಮಕ್ಕಳ ತಾಯಿಯಾಗಿದ್ದು, ಜುಲೈ 2024ರಲ್ಲಿ ಅವರಿಗೆ 3 ವಾರಗಳಲ್ಲಿ ಹೃದಯದ ಆಪರೇಷನ್ ಮಾಡಿಸಬೇಕು ಎಂದು ಹೇಳಲಾಗಿತ್ತು. ಅವರು 2 ತಿಂಗಳಿಗಿಂತ ಹೆಚ್ಚು ಕಾಲ ತಮ್ಮ ಆಪರೇಷನ್​​ನ ಸಮಯ ನಿಗದಿಗಾಗಿ ಕಾಯುತ್ತಲೇ ಇದ್ದರು. ಕೊನೆಗೆ ಅವರು ಆಪರೇಷನ್ ಆಗದೆ ನಿಧನರಾದರು. ಈ ರೀತಿ ಕಾಯುತ್ತಿರುವಾಗಲೇ ನಿಧನರಾದವರಲ್ಲಿ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಇರುವವರೇ ಹೆಚ್ಚು.

ಕೆನಡಾದ ಒಂಟಾರಿಯೊದಲ್ಲಿ ಅತಿ ಹೆಚ್ಚು ಕಾಯುವಿಕೆಯಿಂದ ಉಂಟಾದ ಸಾವುಗಳು ದಾಖಲಾಗಿವೆ. ಕ್ವಿಬೆಕ್ 6,290ರೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, BC 4,620 ರೊಂದಿಗೆ ನಂತರದ ಸ್ಥಾನದಲ್ಲಿದೆ. ನೋವಾ ಸ್ಕಾಟಿಯಾ (727), ನ್ಯೂಫೌಂಡ್‌ಲ್ಯಾಂಡ್ ಮತ್ತು ಲ್ಯಾಬ್ರಡಾರ್ (542), ಸಾಸ್ಕಾಚೆವಾನ್ (419), ಪ್ರಿನ್ಸ್ ಎಡ್ವರ್ಡ್ ದ್ವೀಪ (178) ಮತ್ತು ನ್ಯೂ ಬ್ರನ್ಸ್‌ವಿಕ್ (121) ಸೇರಿದಂತೆ ಸಣ್ಣ ಪ್ರಾಂತ್ಯಗಳು ಸಹ ಈ ರೀತಿಯ ಹಲವಾರು ಸಾವುಗಳನ್ನು ಕಂಡಿವೆ.

ಇದನ್ನೂ ಓದಿ: ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಮಕ್ಕಳು, ಗರ್ಭಿಣಿಯರಿಗೆ ಅಪಾಯ; ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ಹೃದಯ ಸಮಸ್ಯೆ, ಕ್ಯಾನ್ಸರ್, ಸೊಂಟ ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆಗಳು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳು ಮತ್ತು MRIಗಳಂತಹ ಅವರ ಜೀವನದ ಗುಣಮಟ್ಟವನ್ನು ಸುಧಾರಿಸಬಹುದಾದ ಕಾರ್ಯವಿಧಾನಗಳಿಗಾಗಿ ಕಾಯುತ್ತಿರುವ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಇವುಗಳಲ್ಲಿ ಕೆಲವು ಸಾವುಗಳಿಗೆ ಸಂಬಂಧಿಸಿದ ಕಾಯುವ ಸಮಯ ಒಂದು ವಾರದಿಂದ ಸುಮಾರು 9 ವರ್ಷಗಳವರೆಗೂ ಇದೆ!

ಕೆನಡಾವು ಇತರ ಅನೇಕ ದೇಶಗಳಿಗಿಂತ ಕಡಿಮೆ ವೈದ್ಯರು, ಆಸ್ಪತ್ರೆ ಹಾಸಿಗೆಗಳು ಮತ್ತು MRI ಯಂತ್ರಗಳನ್ನು ಹೊಂದಿದೆ. ಇದರಿಂದಲೇ ರೋಗಿಗಳು ದೀರ್ಘವಾದ ಕಾಯುವ ಸಮಯವನ್ನು ಎದುರಿಸಬೇಕಾಗುತ್ತದೆ. ಯಾವುದೇ ತ್ವರಿತ ಆಪರೇಷನ್ ಸಿಗುವುದು ಕೆನಡಾದಲ್ಲಿ ಅತ್ಯಪರೂಪವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ಕನ್ನಡಿಗ ಕೃಷ್ಣಪ್ಪ ಗೌತಮ್ – Kannada News | Krishnappa Gowtham Retires: Karnataka All Rounder Ends 14 Year Cricket Journey

2025 ರ ವರ್ಷ ಅಂತ್ಯವಾಗುತ್ತಿರುವ ಬೆನ್ನಲ್ಲೇ ಕರ್ನಾಟಕ ಕ್ರಿಕೆಟ್‌ಗೆ ಆಘಾತ ಎದುರಾಗಿದೆ. ರಾಜ್ಯದ ಖ್ಯಾತ ಕ್ರಿಕೆಟಿಗ ಕೃಷ್ಣಪ್ಪ ಗೌತಮ್ ತಮ್ಮ 37 ನೇ ವಯಸ್ಸಿನಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ಗೌತಮ್ ತಮ್ಮ 14 ವರ್ಷಗಳ ಕ್ರಿಕೆಟ್ ಬದುಕಿಗೆ ಫುಲ್​ಸ್ಟಾಪ್ ಇಟ್ಟಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ರಾಜ್ಯ ತಂಡವನ್ನು ಹಲವು ಗೆಲುವುಗಳಿಗೆ ಮುನ್ನಡೆಸಿದ್ದ ಗೌತಮ್​ಗೆ ರಾಷ್ಟ್ರೀಯ ತಂಡದಲ್ಲಿ ಆಡಲು ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಟೀಂ ಇಂಡಿಯಾ ಪರ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿರುವ ಗೌತಮ್ ಐಪಿಎಲ್‌ನಲ್ಲಿ ಮೂರು ಸ್ಟಾರ್ ತಂಡಗಳನ್ನು ಪ್ರತಿನಿಧಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ನಿವೃತ್ತಿ ಘೋಷಿಸಿದ ಕೃಷ್ಣಪ್ಪ ಗೌತಮ್

ಆಫ್​ ಸ್ಪಿನ್ನರ್ ಹಾಗೂ ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ಕರ್ನಾಟಕದ ಸ್ಟಾರ್ ಆಲ್‌ರೌಂಡರ್ ಮತ್ತು ಮಾಜಿ ಐಪಿಎಲ್ ಆಟಗಾರ ಕೃಷ್ಣಪ್ಪ ಗೌತಮ್ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ದೇಶೀಯ ಕ್ರಿಕೆಟ್‌ ಜೊತೆಗೆ ಐಪಿಎಲ್‌ನಲ್ಲಿ ಅನೇಕ ಸ್ಮರಣೀಯ ಪ್ರದರ್ಶನಗಳನ್ನು ನೀಡಿದ್ದ ಗೌತಮ್ ಅವರ ಕ್ರಿಕೆಟ್ ಪ್ರಯಾಣವು 2012 ರ ರಣಜಿ ಟ್ರೋಫಿಯೊಂದಿಗೆ ಪ್ರಾರಂಭವಾಯಿತು, ಉತ್ತರ ಪ್ರದೇಶ ವಿರುದ್ಧದ ತಮ್ಮ ಚೊಚ್ಚಲ ಪಂದ್ಯವನ್ನಾಡಿದ್ದ ಗೌತಮ್, ಸುರೇಶ್ ರೈನಾ ಮತ್ತು ಭುವನೇಶ್ವರ್ ಕುಮಾರ್‌ರಂತಹ ಸ್ಟಾರ್ ಆಟಗಾರರನ್ನು ಔಟ್ ಮಾಡಿದ್ದರು.

ಗೌತಮ್ ವೃತ್ತಿಜೀವನ

2016-17ರ ರಣಜಿ ಟ್ರೋಫಿ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಗೌತಮ್ ಆ ಆವೃತ್ತಿಯಲ್ಲಿ ಆಡಿದ್ದ ಎಂಟು ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಕಬಳಿಸಿದ್ದರು. ಹಾಗೆಯೇ ಅದೇ ಆವೃತ್ತಿಯಲ್ಲಿ ಮೈಸೂರಿನಲ್ಲಿ ನಡೆದ ಅಸ್ಸಾಂ ವಿರುದ್ಧ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಪಂದ್ಯಗಳನ್ನು ಸೇರಿದಂತೆ ಒಟ್ಟು 320 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿರುವ ಗೌತಮ್ ಬ್ಯಾಟಿಂಗ್​ನಲ್ಲಿ ಹಲವಾರು ಉಪಯುಕ್ತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. 2023 ರವರೆಗೆ ಕರ್ನಾಟಕ ತಂಡದ ಪ್ರಮುಖ ಸದಸ್ಯರಾಗಿದ್ದ ಗೌತಮ್, 2021 ರ ಶ್ರೀಲಂಕಾ ಪ್ರವಾಸದಲ್ಲಿ ಭಾರತದ ಪರ ಏಕೈಕ ಏಕದಿನ ಪಂದ್ಯವನ್ನಾಡಿ ವಿಕೆಟ್ ಕೂಡ ಪಡೆದಿದ್ದರು. ಆದಾಗ್ಯೂ, ಆ ನಂತರ ಅವರು ಟೀಂ ಇಂಡಿಯಾ ಪರ ಎಂದಿಗೂ ಆಡಲಿಲ್ಲ. ಕೃಷ್ಣಪ್ಪ ಗೌತಮ್ ಭಾರತ ತಂಡದಲ್ಲಿ ಆಡಿದ್ದು ಏಕೈಕ ಪಂದ್ಯವಾದರೂ, ಭಾರತ ಎ ತಂಡದ ಪರ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಈ ತಂಡದ ಪರ ಅವರು ನ್ಯೂಜಿಲೆಂಡ್ ಎ, ವೆಸ್ಟ್ ಇಂಡೀಸ್ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ವಿರುದ್ಧ ಹಲವಾರು ಬಾರಿ ಆಡಿದ್ದರು.

ಐಪಿಎಲ್​ನಲ್ಲಿ ಅಧಿಕ ಬೆಲೆ

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ ಎನಿಸಿಕೊಂಡಿದ್ದ ಕೃಷ್ಣಪ್ಪ ಗೌತಮ್ ಅವರನ್ನು ಐಪಿಎಲ್ 2021 ರ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ 9.25 ಕೋಟಿ ನೀಡಿ ಖರೀದಿಸಿತ್ತು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಇನ್ನು ಕರ್ನಾಟಕ ಪ್ರೀಮಿಯರ್ ಲೀಗ್‌ನ ಒಂದೇ ಪಂದ್ಯದಲ್ಲಿ 134 ರನ್ ಗಳಿಸಿ 8 ವಿಕೆಟ್‌ಗಳನ್ನು ಪಡೆದ ಅಪರೂಪದ ದಾಖಲೆಯನ್ನು ಗೌತಮ್ ಹೊಂದಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್‌ರೌಂಡ್ ಪ್ರದರ್ಶನಗಳಲ್ಲಿ ಒಂದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊರೆಯುವ ಚಳಿಗೆ ನಡುಗಿದ ವಿಜಯಪುರ: ಶಾಲೆ ಸಮಯ ಬದಲಾವಣೆ, ಡಿಸಿ ಆದೇಶಕ್ಕೂ ಕಿಮ್ಮತ್ತಿಲ್ಲ – Kannada News | Vijayapura Cold Wave: DC Orders Change in School Timings, But Not Implemented

ವಿಜಯಪುರ, ಡಿಸೆಂಬರ್​​ 22: ರಾಜ್ಯದಲ್ಲಿ ಚಳಿ (cold) ಹೆಚ್ಚಳವಾಗಿದೆ. ಅದರಲ್ಲೂ ಬಿಸಿಲು ನಾಡು ವಿಜಯಪುರ ಜಿಲ್ಲೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಚಳಿ ಅಧಿಕ ಪ್ರಮಾಣವಿದೆ. ದಾಖಲೆ ಪ್ರಮಾಣದಲ್ಲಿ ತಾಪಮಾನ ದಾಖಲಾಗಿದೆ. ಈ ಹಿನ್ನಲೆ ಜಿಲ್ಲಾಡಳಿತ ಡಿಸೆಂಬರ್ 31ರವರೆಗೆ ಎಲ್ಲಾ ಶಾಲೆಗಳ (schools) ಆರಂಭ ಸಮಯ ಬದಲಾವಣೆ ಮಾಡಿ ಆದೇಶ ಜಾರಿ ಮಾಡಿದೆ. ಆದರೆ ಈ ಆದೇಶ ಪಾಲನೆಯಾಗಿಲ್ಲ ಎಂದು ಪೋಷಕರು ಅಸಮಾಧಾನ ಹೊರ ಹಾಕಿದ್ಧಾರೆ.

ಶಾಲೆಗಳ ಸಮಯ ಬದಲಾವಣೆಗೆ ಆದೇಶ

ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಕನಿಷ್ಠ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. 20ವರ್ಷಗಳಲ್ಲಿ 3ನೇ ಕನಿಷ್ಠ ತಾಪಮಾನ ಹಾಗೂ 10 ವರ್ಷಗಳಲ್ಲಿ 4ನೇ ಬಾರಿ ಅತೀ ಕಡಿಮೆ ಉಷ್ಣಾಂಶ ದಾಖಲಾಗಿದೆ. ಚಳಿಯ ತೀವ್ರತೆ ಶಾಲಾ ಮಕ್ಕಳು, ವೃದ್ಧರು ಹಾಗೂ ವಿವಿಧ ಖಾಯಿಲೆಗಳಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಕಾರಣ ಎಲ್ಲಾ ಶಾಲೆಗಳ ಆರಂಭಿಕ ಸಮಯ ಬದಲಾವಣೆಯ ಕೂಗು ಕೇಳಿಬಂದಿತ್ತು. ಜೊತೆಗೆ ರಾಜ್ಯ ವಿಪತ್ತು ನಿರ್ವಹಣಾ ಹಾಗೂ ಐಎಂಡಿ ಬೆಂಗಳೂರು ಪ್ರಕಾರ ರಾಜ್ಯದಲ್ಲಿ ಇನ್ನೂ ಶೀತಗಾಳಿ ಬೀಸುತ್ತಿರುವ ಹಿನ್ನಲೆ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದ್ದರು. ಈ ಹಿನ್ನಲೆ ವಿಜಯಪುರ ಜಿಲ್ಲಾಧಿಕಾರಿ ಕೆ. ಆನಂದ ಎಲ್ಲಾ ಶಾಲೆಗಳ ಸಮಯ ಬದಲಾವಣೆ ಮಾಡಿ ಡಿಸೆಂಬರ್ 20ರಂದು ಆದೇಶ ಜಾರಿ ಹೊರಡಿಸಿದ್ದರು.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ವಿಜಯಪುರದಲ್ಲಿ ದಾಖಲಾಯ್ತು 7 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಜಿಲ್ಲೆಯ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಖಾಸಗಿ ಶಾಲೆಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಆದೇಶ ಜಾರಿಯಾಗಿ ಎರಡು ದಿನವಾದರೂ ಹಲವು ಶಾಲೆಗಳು ಈ ಮುಂಚೆ ಇದ್ದ ಸಮಯದಂತೆ ಬೆಳಿಗ್ಗೆ ಬೇಗ ಶಾಲೆಗಳನ್ನು ಆರಂಭಿಸಿವೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಯಾರು ಹೊಣೆ?

ಡಿಸಿ ಆದೇಶಕ್ಕೆ ಬೆಲೆ ಇಲ್ಲವೇ. ತೀವ್ರ ಚಳಿಯ ಕಾರಣ ಸಮಯ ಬದಲಾವಣೆ ಮಾಡಿದರೂ ಅದನ್ನು ಏಕೆ ಪಾಲನೆ ಮಾಡುತ್ತಿಲ್ಲ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಯಾರು ಹೊಣೆ ಎಂದು ಕಳ್ಳಿಮನಿ, ನಗರದ ನಿವಾಸಿ ಸೋಮನಾಥ್​​ ಎಂಬುವವರು ಕಿಡಿ ಕಾರಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ 1,939 ಸರ್ಕಾರಿ ಶಾಲೆಗಳಿದ್ದ, 2,26,260 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸರ್ಕಾರಿ ಶಾಲೆಗಳು ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ. 347 ಅನುದಾನಿತ ಶಾಲೆಗಳಿದ್ದು, 72,457 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಜೊತೆಗೆ ಖಾಸಗಿಯಾಗಿ 1,158 ಶಾಲೆಗಳಿದ್ದು 1,89,308 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಆದೇಶ ಪಾಲನೆ ಮಾಡದ ಶಾಲೆಗಳು 

ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲೆಗಳ ಆರಂಭಿಕ ಸಮಯ ಬೇರೆ ಬೇರೆಯಾಗಿದೆ. ಒಂದೊಂದು ಸಂಸ್ಥೆಯ ಸಮಯ ಬೇರೆ ಬೇರೆಯೇ ಆಗಿರುತ್ತದೆ. ಆದರೆ ಸದ್ಯ ಚಳಿ ಇರುವುದರಿಂದ ಎಲ್ಲಾ ಶಾಲೆಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕೆಂದು ಡಿಸಿ ಆದೇಶ ಹೊರಡಿಸಿದರು ಪಾಲನೆಯಾಗುತ್ತಿಲ್ಲ. ಇದು ಮುಂದೆ ಸಮಸ್ಯೆಗೆ ಕಾರಣವಾಗಬಹುದು. ಬಹುತೇಕ ಅನುದಾನಿತ ಹಾಗೂ ಖಾಸಗಿ ಶಾಲೆಗಳು ಆದೇಶ ಪಾಲನೆ ಮಾಡುತ್ತಿಲ್ಲ. ಎಲ್ಲಾ ಶಾಲೆಗಳಿಗೆ ಡಿಸಿ ಆದೇಶ ನಿನ್ನೆಯೇ ತಲುಪಿಸಲಾಗಿದೆ ಎಂದು ಡಿಡಿಪಿಐ ವೀರಯ್ಯ ಸಾಲೀಮಠ ಮಾಹಿತಿ ನೀಡಿದ್ದಾರೆ. ಆದರೆ ಡಿಡಿಪಿಐ ಕಚೇರಿಯಿಂದ ಯಾವುದೇ ಆದೇಶ ಬಂದಿಲ್ಲ, ಆದೇಶ ಬಂದ ಕೂಡಲೇ ಪಾಲನೆ ಮಾಡುತ್ತೇವೆಂದು ಅನುದಾನಿತ ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಈ ವಿಚಾರಕ್ಕೂ ಪೋಷಕರು ಅಸಮಾಧಾನ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ ಏನ್​ ಚಳಿ ಗುರು: ಥಂಡಾ ಹೊಡೆದ ಉತ್ತರ ಕರ್ನಾಟಕ; ವಾಕಿಂಗ್​​​​ ತೆರಳದಂತೆ ಮನವಿ

ನಾಳೆಯಿಂದಾದರೂ ಎಲ್ಲಾ ಶಾಲೆಗಳು ಡಿಸಿ ಆದೇಶದಂತೆ ಆರಂಭಿಕ ಸಮಯವನ್ನು ಬದಲಾವಣೆ ಮಾಡಬೇಕಿದೆ. ಇಲ್ಲವಾದರೆ ತಮ್ಮ ಮನಸ್ಸಿಗೆ ಬಂದಂತೆ ಸಮಯ ನಿಗದಿಯಿಂದ ಚಳಿಯಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕನಿಷ್ಟ ಪ್ರಮಾಣದ ಚಳಿ ದಾಖಲಾಗುವ ಸಾಧ್ಯತೆ ಹೆಚ್ಚಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:03 pm, Mon, 22 December 25

Source link

ಆರನೇ ಸ್ಥಾನಕ್ಕೆ ಕುಸಿದಿರುವ ಭಾರತ WTC ಫೈನಲ್ ತಲುಪುವುದು ಹೇಗೆ? – Kannada News | WTC 2025 27 Final: India’s Qualification Path and Challenges

2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ (WTC Final 2025-27) ಹಾದಿ ಟೀಂ ಇಂಡಿಯಾಗೆ (Team India) ಹೆಚ್ಚು ಕಷ್ಟಕರವಾಗುತ್ತಿದೆ. ನ್ಯೂಜಿಲೆಂಡ್ ಇತ್ತೀಚೆಗೆ ಎರಡು ಟೆಸ್ಟ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ಅಗ್ರ-ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಏತನ್ಮಧ್ಯೆ, ಆಸ್ಟ್ರೇಲಿಯಾ ಆರು ಪಂದ್ಯಗಳಿಂದ ಆರು ಗೆಲುವುಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಕೂಡ ಮೂರನೇ ಸ್ಥಾನದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಆದಾಗ್ಯೂ, ಈ ಬಾರಿ ಟೀಂ ಇಂಡಿಯಾದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ.

2025ರಲ್ಲಿ ಟೀಂ ಇಂಡಿಯಾದ ಪ್ರದರ್ಶನ

2025 ರ ವರ್ಷ ಭಾರತ ತಂಡಕ್ಕೆ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ವರ್ಷವಾಗಿರಲಿಲ್ಲ. ಈ ವರ್ಷ, 2025-27 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಪಾಯಿಂಟ್‌ ಪಟ್ಟಿಯಲ್ಲಿಯೂ ಭಾರತ ತಂಡ 6ನೇ ಸ್ಥಾನಕ್ಕೆ ಕುಸಿದಿದೆ. ಭಾರತ ತಂಡವು ಒಟ್ಟು ಒಂಬತ್ತು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕೇವಲ ನಾಲ್ಕರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ಇದಲ್ಲದೆ, ಒಂದು ಪಂದ್ಯ ಡ್ರಾ ಆಗಿದೆ. ಪರಿಣಾಮವಾಗಿ ಪಾಯಿಂಟ್‌ಗಳ ಪಟ್ಟಿಯಲ್ಲಿ 57 ಅಂಕಗಳನ್ನು ಮತ್ತು 48.15 ರ ಗೆಲುವಿನ ಶೇಕಡಾವಾರು ಹೊಂದಿದೆ. ಆದ್ದರಿಂದ, ಫೈನಲ್ ತಲುಪುವುದು ಟೀಂ ಇಂಡಿಯಾಕ್ಕೆ ಸುಲಭದ ಕೆಲಸವಲ್ಲ.

ಭಾರತ WTC ಫೈನಲ್ ತಲುಪುವುದು ಹೇಗೆ?

WTC ಸೈಕಲ್‌ನಲ್ಲಿ, ಪ್ರತಿ ತಂಡವು ಗೆಲುವಿಗೆ 12 ಅಂಕಗಳನ್ನು, ಡ್ರಾಗೆ 6 ಅಂಕಗಳನ್ನು ಮತ್ತು ಸೋಲಿಗೆ ಯಾವುದೇ ಅಂಕಗಳನ್ನು ಪಡೆಯುವುದಿಲ್ಲ. ಹಿಂದಿನ ಆವೃತ್ತಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆಯಲು 64-68% PCT ಸಾಕಾಗಿತ್ತು.
ಆದ್ದರಿಂದ, ಭಾರತವು ಟಾಪ್-2 ಸ್ಥಾನವನ್ನು ಪಡೆಯಲು ಈ ಗೆಲುವಿನ ಶೇಕಡಾವಾರು ಪ್ರಮಾಣವನ್ನು ತಲುಪಬೇಕಾಗುತ್ತದೆ. ಫೈನಲ್ ತಲುಪಲು, ಟೀಂ ಇಂಡಿಯಾ ಉಳಿದ 9 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಇದು ಟೀಂ ಇಂಡಿಯಾಕ್ಕೆ 136 ಅಂಕಗಳನ್ನು ಮತ್ತು 62 ಕ್ಕಿಂತ ಹೆಚ್ಚಿನ ಗೆಲುವಿನ ಶೇಕಡಾವಾರು ನೀಡುತ್ತದೆ. ಇದಲ್ಲದೆ, 7 ಗೆಲುವುಗಳು ಮತ್ತು ಒಂದು ಡ್ರಾದೊಂದಿಗೆ, ತಂಡವು ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಳ್ಳುತ್ತದೆ. ಇದಲ್ಲದೆ, 8 ಗೆಲುವುಗಳು ಫೈನಲ್‌ನಲ್ಲಿ ಟೀಂ ಇಂಡಿಯಾದ ಸ್ಥಾನವನ್ನು ಖಚಿತಪಡಿಸುತ್ತದೆ.

ಭಾರತದ ಮುಂದಿನ ಎದುರಾಳಿ ತಂಡಗಳು ಯಾವುವು?

2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಟೀಂ ಇಂಡಿಯಾ ತನ್ನ ಉಳಿದ ಒಂಬತ್ತು ಪಂದ್ಯಗಳನ್ನು ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳ ವಿರುದ್ಧ ಆಡಲಿದೆ. ಮೊದಲನೆಯದಾಗಿ, ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧ ತವರಿನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮುಂದೆ, ನ್ಯೂಜಿಲೆಂಡ್ ಪ್ರವಾಸದಲ್ಲಿ ಎರಡು ಪಂದ್ಯಗಳನ್ನು ಆಡಲಾಗುವುದು. ಇದರ ನಂತರ, ಟೀಂ ಇಂಡಿಯಾ ತನ್ನ ಅಂತಿಮ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಆಡಲಿದೆ. ಇದರಲ್ಲಿ ಎರಡೂ ತಂಡಗಳ ನಡುವೆ ಐದು ಟೆಸ್ಟ್ ಪಂದ್ಯಗಳಿವೆ.

IND vs SA: ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

ಹೀಗಿರುವಾಗ ಫೈನಲ್ ತಲುಪಲು ಟೀಂ ಇಂಡಿಯಾ, ಶ್ರೀಲಂಕಾವನ್ನು ತವರಿನಲ್ಲಿ 2-0 ಅಂತರದಿಂದ ಸೋಲಿಸಬೇಕಾಗುತ್ತದೆ. ನಂತರ ನ್ಯೂಜಿಲೆಂಡ್ ವಿರುದ್ಧ 1-1 ಅಂತರದಿಂದ ಡ್ರಾ ಮಾಡಿಕೊಳ್ಳಬೇಕಾಗುತ್ತದೆ. ಇದರರ್ಥ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆಲ್ಲುವ ಮೂಲಕ, ಟೀಂ ಇಂಡಿಯಾ ಕನಿಷ್ಠ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಬಹುದು. ಟೀಂ ಇಂಡಿಯಾ ಇದರಲ್ಲಿ ಯಶಸ್ವಿಯಾದರೆ ಮತ್ತೊಮ್ಮೆ ಫೈನಲ್‌ಗೆ ತಲುಪಬಹುದು. ಭಾರತೀಯ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಎರಡು ಬಾರಿ ಆಡಿದೆ, ಆದರೆ ಇನ್ನೂ ಪ್ರಶಸ್ತಿಯನ್ನು ಗೆದ್ದಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಡೆಲ್ಲಿ ತಂಡದ ನಾಯಕತ್ವದಿಂದ ಅಕ್ಷರ್​ ಪಟೇಲ್​ ಔಟ್; ಕನ್ನಡಿಗನಿಗೆ ನಾಯಕತ್ವ ಪಟ್ಟ – Kannada News | Delhi Capitals IPL 2026: KL Rahul to Replace Axar Patel as Captain?

ಮಾಧ್ಯಮ ವರದಿಗಳ ಪ್ರಕಾರ ಡೆಲ್ಲಿ ಫ್ರಾಂಚೈಸಿ, ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದೆ. 2025 ರ ಐಪಿಎಲ್ ಆವೃತ್ತಿಯಲ್ಲಿ ಅಕ್ಷರ್ ತಂಡದ ನಾಯಕರಾಗಿದ್ದರು, ಆದರೆ ಈ ಆವೃತ್ತಿಯಲ್ಲಿ ಅವರು ಆಟಗಾರನಾಗಿ ಮಾತ್ರ ಆಡಲಿದ್ದಾರೆ. ಇದರ ಜೊತೆಗೆ ಅಕ್ಷರ್ ಬದಲಿಗೆ ಯಾರು ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ ಎಂಬುದರ ಕುರಿತು ಪ್ರಮುಖ ಮಾಹಿತಿ ಹೊರಬಿದ್ದಿದೆ.

Source link

ಪೇಪರ ಪಾರಿವಾಳ ತಂದ ಅವಾಂತರ: ಮೊದಲ ಮಹಡಿಯಿಂದ ಬಿದ್ರೂ ಬದುಕುಳಿದ 5ರ ಬಾಲಕ – Kannada News | Koppal: 5 Year Old Child Falls from First Floor, Suffers Head Injury

ಕೊಪ್ಪಳ, ಡಿಸೆಂಬರ್​ 22: ಐದು ವರ್ಷ ಬಾಲಕ (Child) ಮನೆಯ ಮೊದಲನೇ ಮಹಡಿಯಿಂದ ಕೆಳಗೆ ಬಿದ್ದು (Fall) ಗಂಭೀರ ಗಾಯಗೊಂಡಿರುವಂತಹ ಘಟನೆ ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ನಡೆದಿದೆ. ಪವಾಡಸದೃಶವೆಂಬಂತೆ ಬಾಲಕ ಪಾರಾಗಿದ್ದಾನೆ. ಮಹಮ್ಮದ್ ಹ್ಯಾರಿಸ್​ ಸಾವು ಗೆದ್ದುಬಂದ ಬಾಲಕ. ಕೂಡಲೇ ಕೊಪ್ಪಳ ಖಾಸಗಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಆದರೆ ವೈದ್ಯರ ಪರೀಕ್ಷೆ ವೇಳೆ ಮಹಮ್ಮದ್ ಹ್ಯಾರಿಸ್ ತಲೆಯಲ್ಲಿ ಬಿರುಕು ಕಂಡುಬಂದಿದೆ. ಬಾಲಕ ಮೊದಲನೇ ಮಹಡಿಯಿಂದ ಕೆಳೆಗ ಬಿಳ್ಳುವ ದೃಶ್ಯ ಸೆರೆಯಾಗಿದ್ದು, ಎದೆ ಝಲ್ ಅನ್ನಿಸುತ್ತದೆ.

ನಡೆದದ್ದೇನು?

ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ಐದು ವರ್ಷದ ಬಾಲಕ ಮಹಮ್ಮದ್ ಹ್ಯಾರಿಸ್ ನಿನ್ನೆ ಮಧ್ಯಾಹ್ನ ಮೊದಲನೇ ಮಹಡಿಯಲ್ಲಿ ಪೇಪರ್​ನಿಂದ ಪಾರಿವಾಳ ಮಾಡಿ ಆಟವಾಡುತ್ತಿದ್ದ. ಅದನ್ನು ಗಾಳಿ ತೂರಿ ಹಿಡಿಯಲು ಹೋದಾಗ ಮೊದಲನೇ ಮಹಡಿಯಿಂದ ಕೆಳಗಡೆ ಬಿದ್ದಿದ್ದಾನೆ. ಮಹಮ್ಮದ್ ಕೆಳಗಡೆ ಬಿಳ್ಳುವ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: ಆಟವಾಡುತ್ತಿದ್ದ ಬಾಲಕನ ಮೇಲೆ ಇದೆಂತಾ ವಿಕೃತಿ?: ವಿಡಿಯೋ ನೋಡಿದ್ರೆ ರಕ್ತ ಕುದಿಯುತ್ತೆ

ಮನೆಯ ಕೆಳಗಡೆ ಮಹಮ್ಮದ್ ಹ್ಯಾರಿಸ್ ಸಹೋದರಿ ಕೂಡ ಆಟವಾಡುತ್ತಿದ್ದು, ಮಹಮ್ಮದ್ ಬಿದ್ದ ತಕ್ಷಣ ಮೇಲೆ ಎತ್ತಿದ್ದಾಳೆ. ಒಳಗಡೆಯಿಂದ ಪೋಷಕರು ಕಿರುಚುತ್ತಾ ಓಡೋಡಿ ಬಂದಿದ್ದಾರೆ. ಕೆಳಗಡೆ ಬಿದ್ದ ಮಗುವನ್ನ ಕೂಡಲೇ ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಹಮ್ಮದ್​​ಗೆ 2 ಗಂಟೆಯೊಳಗೆ ಆಪರೇಷನ್ ಮಾಡಿದ್ದಾರೆ. ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿಯಿಂದ ಹಲ್ಲೆ: ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯ

ಒಟ್ಟಾರೆ ಮೊದಲನೇ ಮಹಡಿಯಿಂದ ಬಾಲಕ ಬಿದ್ದರೂ ಪವಾಡಸದೃಶವಾಗಿ ಬದುಕುಳಿದ್ದಾನೆ. ಆತನ ಹಣೆ ಬರಹ ಗಟ್ಟಿಯಿರುವ ಕಾರಣ ಬದುಕಿಳಿದಿದ್ದಾನೆ. ಸದ್ಯ ಮಹಮ್ಮದ್​ಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಿಲಿಯನ್ ದಾಟಿ ಮುನ್ನುಗ್ಗುತ್ತಿರುವ ‘ಲ್ಯಾಂಡ್ ಲಾರ್ಡ್’ ಹಾಡು ‘ನಿಂಗವ್ವ ನಿಂಗವ್ವ’ – Kannada News | Duniya Vijay and Rachita Ram starrer Landlord movie song Ningavva Ningavva released

ನಟಿ ರಚಿತಾ ರಾಮ್ ಹಾಗೂ ನಟ ದುನಿಯಾ ವಿಜಯ್ (Duniya Vijay) ಅವರು ಜೋಡಿಯಾಗಿ ‘ಲ್ಯಾಂಡ್​ ಲಾರ್ಡ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ಸಾರಥಿ ಫಿಲ್ಮ್ಸ್’ ಮೂಲಕ ಕೆ.ವಿ. ಸತ್ಯಪ್ರಕಾಶ್ ಮತ್ತು ಹೇಮಂತ್ ಗೌಡ ಕೆ.ಎಸ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಜಡೇಶ್ ಕೆ. ಹಂಪಿ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ‘ನಿಂಗವ್ವ ನಿಂಗವ್ವ’ (Ningavva Ningavva) ಹಾಡು ಬಿಡುಗಡೆ ಆಯಿತು. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡಿಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಮತ್ತು ಅನನ್ಯಾ ಭಟ್ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.

‘ನಿಂಗವ್ವ ನಿಂಗವ್ವ’ ಹಾಡಿನಿಂದ ‘ಲ್ಯಾಂಡ್​ ಲಾರ್ಡ್’ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಈ ಹಾಡಿಗೆ ಭೂಷಣ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ‌. ‘ಆನಂದ್ ಆಡಿಯೋ’ ಮೂಲಕ ಈ ಹಾಡು ಬಿಡುಗಡೆ ಆಗಿದೆ. ಮೂರೇ ದಿನದಲ್ಲಿ 1.5 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಕಾಣುವ ಮೂಲಕ ಈ ಹಾಡು ಮೆಚ್ಚುಗೆ ಪಡೆಯುತ್ತಿದೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು.

‘ನೆನಪಿರಲಿ’ ಪ್ರೇಮ್-ಜ್ಯೋತಿ, ತರುಣ್ ಸುಧೀರ್-ಸೋನಾಲ್, ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿ ಬಂದು ‘ನಿಂಗವ್ವ ನಿಂಗವ್ವ’ ಹಾಡನ್ನು ಬಿಡುಗಡೆ ಮಾಡಿದರು. ಹಾಡು ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ನೀನಾಸಂ ಸತೀಶ್ ಮತ್ತು ಗುರು ದೇಶಪಾಂಡೆ ಅವರು ಅತಿಥಿಗಳಾಗಿದ್ದರು. ‘ಲ್ಯಾಂಡ್​ ಲಾರ್ಡ್’ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಹಣ ಮಾಡಿದ್ದಾರೆ.

ನಿಂಗವ್ವ ನಿಂಗವ್ವ ಹಾಡು:

ಸಿನಿಮಾದ ಬಗ್ಗೆ ದುನಿಯಾ ವಿಜಯ್ ಅವರು ಮಾತನಾಡಿದರು. ‘ಸಾಮಾನ್ಯವಾಗಿ ಹೀರೋಯಿನ್​ಗಳು ಈ ವಯಸ್ಸಿನ ಪಾತ್ರ ಒಪ್ಪಿಕೊಳ್ಳುವುದು ಕಡಿಮೆ. ರಚಿತಾ ರಾಮ್ ಅವರು ಒಪ್ಪಿಕೊಂಡು ಈ ಪಾತ್ರ ಮಾಡಿದ್ದಾರೆ. ನನಗೂ ಕೂಡ ಈ ಸಾಂಗ್ ಬಿಡುಗಡೆ ಆಗುವವರೆಗೂ ನನ್ನ ಪಾತ್ರದ ಬಗ್ಗೆ ಎಲ್ಲರೂ ಏನು ಹೇಳಬಹುದು ಎಂಬ ಕುತೂಹಲವಿತ್ತು. ಈಗ ಎಲ್ಲರೂ ಮೆಚ್ಚುಗೆ ನೀಡುತ್ತಿದ್ದಾರೆ’ ಎಂದು ದುನಿಯಾ ವಿಜಯ್ ಹೇಳಿದರು.

ಇದನ್ನೂ ಓದಿ: ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು

ರಚಿತಾ ರಾಮ್ ಮಾತನಾಡಿ, ‘ಈ ಸಾಂಗ್ ಉತ್ತಮವಾಗಿ ಮೂಡಿಬಂದಿದೆ‌. ಈ ಹಾಡಿನ ಶೂಟಿಂಗ್ ಸಮಯದಿಂದಲೂ ಯಾವಾಗ ಬಿಡುಗಡೆ ಆಗಬಹುದೆಂದು ಕಾಯುತ್ತಿದೆ’ ಎಂದರು. ‘ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಎಲ್ಲಾ ಹಾಡುಗಳು ಬಹಳ ಚೆನ್ನಾಗಿ ಮೂಡಿಬಂದಿವೆ’ ಎಂದಿದ್ದಾರೆ ನಿರ್ದೇಶಕ ಜಡೇಶ್ ಕೆ. ಹಂಪಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಲಬುರಗಿ: ಕಿದ್ವಾಯಿ ಆಸ್ಪತ್ರೆಯಲ್ಲಿನ ಎಸಿ ಕಳ್ಳತನ: ವೈದ್ಯರ ವಿರುದ್ದವೇ ಗಂಭೀರ ಆರೋಪ – Kannada News | Kalaburagi: AC Theft at Kidwai Hospital; Serious Allegations Against Doctors

ಕಲಬುರಗಿ, ಡಿಸೆಂಬರ್​​ 22: ಕಿದ್ವಾಯಿ (Kidwai) ಈ ಭಾಗದ ಬಡ ಜನರ ಉಪಯೋಗಕ್ಕಿರುವ ಕ್ಯಾನ್ಸರ್ ಆಸ್ಪತ್ರೆ. ಆದರೆ ಆಸ್ಪತ್ರೆಯಲ್ಲಿನ ಕೆಲ ಬೆಲೆ ಬಾಳುವ ವಸ್ತುಗಳನ್ನು ಅಲ್ಲಿನ ಕೆಲ ವೈದ್ಯರೇ ಕಳ್ಳತನ (theft) ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಲಕ್ಷಾಂತರ ಮೌಲ್ಯದ ಎಸಿಗಳನ್ನ ತಮ್ಮ ನಿವಾಸಕ್ಕೆ ಬಳಿಸಿಕೊಂಡಿದ್ದಾರಂತೆ. ವೈದ್ಯಕೀಯ ಶಿಕ್ಷಣ ಸಚಿವರ ತವರಲ್ಲೇ ಗೋಲ್ಮಾಲ್ ನಡೆದಿರುವುದು ಕೇಸರಿ ಪಡೆ ತನಿಖೆಗೆ ಆಗ್ರಹಿಸಿದೆ‌.

ಕಲಬುರಗಿಯ ಕಿದ್ವಾಯಿ ಆಸ್ಪತ್ರೆಯ ಮುಖ್ಯಸ್ಥರ ವಿರುದ್ದವೇ ಗಂಭೀರ ಆರೋಪ ಕೇಳಿಬಂದಿದೆ. ಏಕೆಂದರೆ ಆಸ್ಪತ್ರೆಯಲ್ಲಿ ಲಕ್ಷಾಂತರ ಮೌಲ್ಯದ ಎ.ಸಿಗಳನ್ನು ತಮ್ಮ ಸ್ವಂತ ಮನೆಗೆ ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಳೆದ ತಿಂಗಳು ಆಸ್ಪತ್ರೆಯಲ್ಲಿನ 24 ಎ.ಸಿ ಯೂನಿಟ್​ಗಳನ್ನ ಬೇರೆಡೆಗೆ ಸಾಗಿಸಲಾಗಿತ್ತಂತೆ. ಈ ಬಗ್ಗೆ ಅಲ್ಲಿನ ಸಿಬ್ಬಂದಿಗೆ ಗೊತ್ತಾದ್ರು ಬೇರೆಯದ್ದೆ ಕಥೆ ಹೇಳಿದ್ದರಂತೆ. ಯಾವಾಗ ಈ ವಿಚಾರ ಹೊರಗಡೆ ಲೀಕ್ ಆಯಿತೋ ಆವಾಗ ಬೆಂಗಳೂರಿನ ಮುಖ್ಯ ಕಚೇರಿಯವರೆಗೂ ವಿಷಯ ತಲುಪಿದೆ. ಅಲ್ಲಿಂದ ತಕ್ಷಣವೇ ಎಸಿ ಕಳ್ಳತನವಾದ ಬಗ್ಗೆ ದೂರು ದಾಖಲಿಸುವುದಕ್ಕೆ ಸೂಚಿಸಲಾಗಿದೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಮಷಿನ್ ಕದ್ದೊಯ್ದು ಮನೆಯಲ್ಲಿಟ್ಟ ಸಿಬ್ಬಂದಿ: ಭ್ರೂಣ ಲಿಂಗ ಪತ್ತೆ ಶಂಕೆ!

ಕಳೆದ ವಾರ ಅಂದರೆ ಡಿಸೆಂಬರ್ 12ರಂದು ಕಲಬುರಗಿಯ ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ ಅಲ್ಲಿಯೂ ಆಸ್ಪತ್ರೆ ಪ್ರಭಾರ ವೈದ್ಯಾಧಿಕಾರಿ ಡಾ.ಗುರುರಾಜ ದೇಶಪಾಂಡೆ ಕೇವಲ ಎರಡು ಎಸಿಗಳ ಬಿಡಿ ಭಾಗಗಳಷ್ಟೇ ಕಳುವಾಗಿದೆ ಎಂದು ದೂರು ನೀಡಿದ್ದಾರೆ. ಅದೇ ವಿಷಯ ಸದ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಏಕೆಂದರೆ ಯಾವಾಗ ಎಸಿ ಕಳ್ಳತನದ ಬಗ್ಗೆ ಒತ್ತಡ ಹೆಚ್ಚಾಯಿತೋ ಆಗ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ದ ಎಸಿಗಳನ್ನ ವಾಪಸ್ ತಂದಿಟ್ಟಿದ್ದಾರಂತೆ. ಹೀಗಾಗಿ ಲಕ್ಷಾಂತರ ರೂ ಎಸಿ ಯೂನಿಟ್​​ಗಳನ್ನ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದು ಯಾರು, ಇದಕ್ಕೆ ಆಸ್ಪತ್ರೆಯ ಮುಖ್ಯಸ್ಥರೇ ಸಹಕರಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್​ ಆಗ್ರಹಿಸಿದ್ದಾರೆ.

ಎಸಿ ಕಳ್ಳತನ ವಿಚಾರದಲ್ಲಿ ದೊಡ್ಡ ಗೋಲ್ಮಾಲ್ ನಡೆದಿದೆ. ಆಸ್ಪತ್ರೆಯ ಸಿಸಿಟಿವಿಯಲ್ಲಿ ಕಳ್ಳ ಸೆರೆಸಿಕ್ಕರೂ ಪೊಲೀಸರು ಆತನ ವಿಚಾರಣೆ ಮಾಡಿಲ್ಲ. ಎಲ್ಲರೂ ಶಾಮೀಲಾಗಿ ವ್ಯವಸ್ಥಿತವಾಗಿ ಪ್ರಕರಣವನ್ನ ಮುಚ್ಚಿಹಾಕುವುದಕ್ಕೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಇದಿಷ್ಟೇ ಅಲ್ಲದೆ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತವಾಗಿ ಸಿಗುವ ಔಷಧಿಗಳನ್ನ ಕೂಡ ಕಳ್ಳತನ ಮಾಡಿಕೊಂಡು ತಮ್ಮ ಖಾಸಗಿ ಕ್ಲಿನಿಕ್ ತೆಗೆದುಕೊಂಡು ಹೋಗುತ್ತಿದ್ದಾರಂತೆ. ಪ್ರತಿ ತಿಂಗಳು ಬಡ ರೋಗಿಗಳಿಗೆ ಅಂತ ಲಕ್ಷಾಂತರ ರೂ. ಸರ್ಕಾರ ಖರ್ಚು ಮಾಡುತ್ತಿದ್ದರೆ, ಇಲ್ಲಿನ ಆಸ್ಪತ್ರೆಯ ಮುಖ್ಯಸ್ಥರೇ ಕಳ್ಳತನಕ್ಕಿಳಿದರಾ ಎನ್ನುವ ಅನುಮಾನ ಶುರುವಾಗಿದೆ.

ಡಾ.ಗುರುರಾಜ್ ದೇಶಪಾಂಡೆ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಕ್ವಿದ್ವಾಯಿ ಪ್ರಭಾರ ವೈದ್ಯಾಧಿಕಾರಿ ಡಾ.ಗುರುರಾಜ್ ದೇಶಪಾಂಡೆ ಅವರನ್ನು ಕೇಳಿದರೆ, ಆಸ್ಪತ್ರೆಯ ಎಸಿಗಳು ಕೆಟ್ಟು ಹೋಗಿದ್ದವು, ಅವುಗಳನ್ನ ತೆಗೆದು ಹೊಸ ಎಸಿಗಳನ್ನ ಹಾಕಿದ್ದೇವೆ. ಹಳೇ ಎಸಿಗಳನ್ನ ಮರುಖರೀದಿ ಅಡಿ ಕೊಟ್ಟಿದ್ದೇವೆ. ಆದರೆ ಟೆಂಡರ್​ನಲ್ಲಿ ಮರುಖರೀದಿ ಇರದ ಕಾರಣ ವಾಪಸ್ ತರಿಸಿಕೊಂಡಿದ್ದೇವೆ ಎನ್ನುತ್ತಾರೆ. ಮರುಖರೀದಿಗೆ ಟೆಂಡರ್ ಕರೆಯದೆ ಹೇಗೆ ಎಸಿಗಳನ್ನ ಆಸ್ಪತ್ರೆಯಿಂದ ಹೊರಗಡೆ ತೆಗೆದುಕೊಂಡು ಹೋದರು, ಯಾರು ತೆಗೆದುಕೊಂಡು ಹೋದರು ಎಂದು ಕೇಳಿದರೆ ಅದಕ್ಕೆ ಉತ್ತರವಿಲ್ಲ.

ಇದನ್ನೂ ಓದಿ: ಸೈಬರ್ ಅಪರಾಧ ಲೋಕದ ಅತಿದೊಡ್ಡ ವಂಚನೆ ಬಯಲಿಗೆಳೆದ ದಾವಣಗೆರೆ ಪೊಲೀಸ್! ವಂಚಕನ ಖಾತೆಯಲ್ಲಿ 1000 ಕೋಟಿ ರೂ.ಗೂ ಹೆಚ್ಚು ವಹಿವಾಟು

ಕಲಬುರಗಿ ಕಿದ್ವಾಯಿ ಆಸ್ಪತ್ರೆಯ ಮುಖ್ಯಸ್ಥರ ವಿರುದ್ದವೇ ಬಿಜೆಪಿ ತನಿಖೆಗೆ ಆಗ್ರಹಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆಯಿಂದ ಅಸಲಿ ಕಹಾನಿ ಹೊರಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕುಡಿದು ಮಠದಲ್ಲಿ ಸ್ವಾಮೀಜಿ ರಂಪಾಟ: ಮತ್ತಿನಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶ್ರೀ – Kannada News | Kalaburgi Shanthalinga Swamiji Gun Fire On Air video Goes viral

ಕಲಬುರಗಿ, (ಡಿಸೆಂಬರ್ 22): ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಕುಡಿದು ರಂಪಾಟ ಮಾಡಿದ್ದಾರೆ. ಕೆಲ ತಿಂಗಳಿನಿಂದ ನಾಪತ್ತೆಯಾಗಿದ್ದ ಕಲಬುರಗಿ (Kalaburgi) ಜಿಲ್ಲೆ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಮಠದ ಶಾಂತಲಿಂಗ ಶಿವಾಚಾರ್ಯ, ಇದೀಗ ದಿಢೀರ್ ಮಠದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮಠಕ್ಕೆ ಹೊಸ ಪೀಠಾಧಿಪತಿ ನೇಮಕದ ಬಗ್ಗೆ ಚರ್ಚೆ ನಡೆಯುತ್ತಿರುವ ಸುದ್ದಿ ತಿಳಿದು ಸ್ವಾಮೀಜಿ ಮಠಕ್ಕೆ ವಾಪಸ್ ಆಗಿದ್ದಾರೆ. ಆದ್ರೆ, ಕುಡಿದು ಮಠದ ಆವರಣದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಮೂಲಕ ತಮ್ಮ ವಿರೋಧಿಗಳನ್ನ ಹೆದರಿಸಲು ಗುಂಡು ಹಾರಿಸಿದ್ರಾ ಎನ್ನುವ ಚರ್ಚೆಗಳು ನಡೆದಿದ್ದು, ಸದ್ಯ ಗುಂಡು ಹಾರಿಸಿರುವ ವಿಡಿಯೋ ವೈರಲ್ ಆಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version