ಎಸ್​ಐಆರ್ ಒತ್ತಡದಿಂದ ಬಂಗಾಳದಲ್ಲಿ 150 ಜನ ಸಾವು; ಸುಪ್ರೀಂ ಕೋರ್ಟ್​ನಲ್ಲಿ ಮಮತಾ ಬ್ಯಾನರ್ಜಿ ವಾದ – Kannada News | 150 people dead in West Bengal due to SIR pressure CM Mamata Banerjee Tells in Supreme Court

ನವದೆಹಲಿ, ಫೆಬ್ರವರಿ 4: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಇಂದು ಸುಪ್ರೀಂ ಕೋರ್ಟ್​ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಾದ ಮಂಡಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ರಾಜ್ಯವನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಎಸ್​ಐಆರ್ ನೆಪದಲ್ಲಿ ಒತ್ತಡ ಹೇರಲಾಗುತ್ತಿದೆ ದೀದಿ ಹೇಳಿದ್ದಾರೆ. ಹೀಗೆ ಹಾಲಿ ಮುಖ್ಯಮಂತ್ರಿಯೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ವಾದ ಮಂಡನೆ ಮಾಡಿದ ಅಪರೂಪದ ಘಟನೆ ಇಂದು ನಡೆಯಿತು. ಎಸ್​ಐಆರ್ ಪ್ರಕ್ರಿಯೆಯ ಒತ್ತಡದಿಂದಾಗಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

“ನ್ಯಾಯವು ಮುಚ್ಚಿದ ಬಾಗಿಲುಗಳ ಹಿಂದೆ ಅಳುತ್ತಿದೆ” ಎಂದು ಸುಪ್ರೀಂ ಕೋರ್ಟ್‌ನಲ್ಲಿ ಬೇಸರ ಹೊರಹಾಕಿದ ಮಮತಾ ಬ್ಯಾನರ್ಜಿ ಸಿಜೆಐ ಸೂರ್ಯ ಕಾಂತ್ ಅವರ ಮುಂದೆ ತಮ್ಮ ಪ್ರಕರಣವನ್ನು ಮಂಡಿಸಲು 5 ನಿಮಿಷಗಳ ಸಮಯವನ್ನು ಕೋರಿದರು. ಅದಕ್ಕೆ ಸಿಜೆಐ ಒಪ್ಪಿಕೊಂಡು, ಪೀಠದ ಮುಂದೆ ಮಾತನಾಡಲು ಅವರಿಗೆ 15 ನಿಮಿಷಗಳ ಅವಕಾಶ ನೀಡಿದರು.

ಇದನ್ನೂ ಓದಿ: I-PAC ದಾಳಿ ಪ್ರಕರಣದಲ್ಲಿ ಸಿಎಂ ಮಮತಾ ಬ್ಯಾನರ್ಜಿಗೆ ಮುಖಭಂಗ; ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಭಾರತದ ಚುನಾವಣಾ ಆಯೋಗದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ ಮಮತಾ ಬ್ಯಾನರ್ಜಿ, “ನಮಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ನಾನು ಚುನಾವಣಾ ಆಯೋಗಕ್ಕೆ 6 ಬಾರಿ ಪತ್ರ ಬರೆದಿದ್ದರೂ ಇನ್ನೂ ಯಾವುದೇ ಉತ್ತರ ಸಿಕ್ಕಿಲ್ಲ” ಎಂದು ವಾದಿಸಿದರು.

ಈಗಾಗಲೇ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, ಎಸ್‌ಐಆರ್ ನೋಟಿಸ್‌ಗಳನ್ನು ಕಳುಹಿಸುವಾಗ ಜಾಗರೂಕರಾಗಿರಲು ಸೂಚಿಸಿದೆ. “ನಿಮ್ಮ ಅಧಿಕಾರಿಗಳಿಗೆ ಸ್ವಲ್ಪ ಬುದ್ಧಿವಂತರಾಗಿರಲು ಹೇಳಿ” ಎಂದು ಮಮತಾ ಬ್ಯಾನರ್ಜಿ ಬರೆದ ಲಿಖಿತ ಅರ್ಜಿಯ ಮೇರೆಗೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್, ಪ್ರಸಿದ್ಧ ಬಂಗಾಳಿ ಕವಿ ಜಾಯ್ ಗೋಸ್ವಾಮಿ ಮತ್ತು ಟಿಎಂಸಿ ಸಂಸದ ದೀಪಕ್ ಅಧಿಕಾರಿ ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಎಸ್‌ಐಆರ್ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಇದನ್ನೂ ಓದಿ: Video:ಸುಪ್ರೀಂನಲ್ಲಿ ಎಸ್​ಐಆರ್ ವಿರುದ್ಧ ತಾವೇ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ ಬ್ಯಾನರ್ಜಿ

ಭಾರತೀಯ ಚುನಾವಣಾ ಆಯೋಗದೊಂದಿಗಿನ ಪಶ್ಚಿಮ ಬಂಗಾಳದ ಸರ್ಕಾರದ ಬಿಕ್ಕಟ್ಟಿನ ನಡುವೆ 3 ದಿನಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಬಹು ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠದ ಮುಂದೆ ತಮ್ಮ ಪ್ರಕರಣವನ್ನು ವಾದಿಸಿದರು.

ಈ ವಿಷಯದ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್, ಸಿಎಂ ಮಮತಾ ಬ್ಯಾನರ್ಜಿ ಅವರ ಮನವಿಗೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ಫೆಬ್ರವರಿ 10ರೊಳಗೆ ಉತ್ತರ ಸಲ್ಲಿಸುವಂತೆ ನಿರ್ದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:11 pm, Wed, 4 February 26

Source link

ಮಧ್ಯ, ಉತ್ತರ ಕರ್ನಾಟಕ ಜಿಲ್ಲೆಯ ಜನತೆಗೆ ಮತ್ತೊಂದು ಗುಡ್​​​ನ್ಯೂಸ್ ಕೊಟ್ಟ ಕೇಂದ್ರ – Kannada News | Ashwini Vaishnaw positive response To pralhad joshi Request about Bengaluru pune high speed rail corridor

ನವದೆಹಲಿ, (ಫೆಬ್ರವರಿ 04): ಕರ್ನಾಟಕಕ್ಕೆ (Karnataka) ಮತ್ತೊಂದು ಹೈ ಸ್ಪೀಡ್ ರೈಲು ಕಾರಿಡಾರ್ (high speed rail corridor) ಕೊಡುಗೆಯ ಶುಭ ಸೂಚನೆ ಸಿಕ್ಕಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರ ಒತ್ತಾಸೆ ಮೇರೆಗೆ ಕರ್ನಾಟಕದಲ್ಲಿ “ಬೆಂಗಳೂರು ಮತ್ತು ಪುಣೆ” ನಡುವೆ ಮತ್ತೊಂದು ಹೈ ಸ್ಪೀಡ್ ರೈಲು ಕಾರಿಡಾರ್ ಗೆ ಚಿಂತನೆ ನಡೆದಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಒಂದು ವೇಳೆ ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೆ,  ಈ ರೈಲು ಕಾರಿಡಾರ್ ನಿರ್ಮಾಣದಿಂದ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಯೋಜನ ಆಗಲಿದೆ.

ರೈಲ್ವೆ ಸಚಿವರನ್ನ ಭೇಟಿ ಮಾಡಿದ ಜೋಶಿ

ಬೆಂಗಳೂರು ಮತ್ತು ಪುಣೆ ನಡುವೆ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬುಧವಾರ ಬೆಳಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಇದಕ್ಕೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸ್ವತಃ ಪ್ರಲ್ಹಾದ ಜೋಶಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ರೈಲ್ವೆಗೆ ಭರಪೂರ ಕೊಡುಗೆ: ಬಜೆಟ್​ನಲ್ಲಿ ಏನೂ ಸಿಕ್ಕಿಲ್ಲ ಎಂದವರಿಗೆ ಅಂಕಿಅಂಶ ಸಮೇತ ಅಶ್ವಿನಿ ವೈಷ್ಣವ್ ತಿರುಗೇಟು

ಬೆಂಗಳೂರು-ಪುಣೆ ಮಧ್ಯೆ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣವಾದಲ್ಲಿ ಕರ್ನಾಟಕದ ಬಹುತೇಕ ಪ್ರದೇಶದ ಒಟ್ಟಾರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕರ್ನಾಟಕದ ಯಾವೆಲ್ಲಾ ಭಾಗಕ್ಕೆ ಅನುಕೂಲ

ಈ ರೈಲು ಕಾರಿಡಾರ್ ನಿರ್ಮಾಣದಿಂದ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಯೋಜನ ಆಗಲಿದೆ. ರಾಜ್ಯದ ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅಲ್ಲದೇ ಪುಣೆಯಿಂದ ಕರ್ನಾಟಕದ ಆರೇಳು ಜಿಲ್ಲೆಗಳಿಗೆ ತ್ವರಿತ ಪ್ರಯಾಣ, ಸಂಪರ್ಕ ಸಾಧ್ಯವಾಗಲಿದೆ.

ಹಾಗಾಗಿ ಇದೊಂದು ಹೊಸ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ. ಜೋಶಿ ಅವರ ಮನವಿಗೆ ರೈಲ್ವೆ ಸಚಿವರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:02 pm, Wed, 4 February 26

Source link

ಅಕ್ರಮ ವಲಸಿಗರನ್ನ ತೋರಿಸಿದ್ರೂ ಕೇಸ್ ಹಾಕ್ತೀರಿ: ಪೊಲೀಸರಿಗೆ ಕೋರ್ಟ್ ಕ್ಲಾಸ್, ಪುನೀತ್ ಕೆರೆಹಳ್ಳಿಗೆ ರಿಲೀಫ್ – Kannada News | High Court Questions government on Illegal Immigrants, Stays Case Against Puneeth Kerehalli

ಬೆಂಗಳೂರು, ಫೆಬ್ರವರಿ 04: ಅಕ್ರಮ ಬಾಂಗ್ಲಾ ವಲಸಿಗರ ವಿಚಾರವಾಗಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ವಿರುದ್ಧ ಎರಡೆರಡು ಕೇಸ್​ಗಳು ದಾಖಲಾಗಿದ್ದವು. ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ಪುನೀತ್ ಕೆರೆಹಳ್ಳಿ ವಿರುದ್ಧದ ಒಂದು ಪ್ರಕರಣಕ್ಕೆ ತಡೆ ನೀಡಿದ್ದು, ಮತ್ತೊಂದು ಪ್ರಕರಣದಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ಆದೇಶ ಹೊರಡಿಸಿದೆ. ಆ ಮೂಲಕ ಹಿಂದೂ ಕಾರ್ಯಕರ್ತನಿಗೆ ಕೊಂಚ್​​ ರಿಲೀಫ್ ಸಿಕ್ಕಂತಾಗಿದೆ.

ಹೈಕೋರ್ಟ್ ಏಕಸದಸ್ಯ ಪೀಠ ಇಂದು ಪ್ರಕರಣದ ವಿಚಾರಣೆ ಮಾಡಿದ್ದು, ಎಲ್ಲೆಡೆ ಅಕ್ರಮ ವಲಸಿಗರು ಬಂದು ಸೇರಿದ್ದಾರೆ. ಅಕ್ರಮ ವಲಸಿಗರಿದ್ದಾರೆಂದು ತೋರಿಸಿದರೂ ಕೇಸ್ ಹಾಕುತ್ತೀರಿ ಎಂದು ಪೊಲೀಸರನ್ನ ತರಾಟೆ ತೆಗೆದುಕೊಂಡ ಪೀಠ ವಲಸಿಗರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಾ ತಿಳಿಸಿ ಎಂದು ಸರ್ಕಾರವನ್ನ ಪ್ರಶ್ನಿಸಿದೆ. ಸರ್ಕಾರದ ಪ್ರತಿಕ್ರಿಯೆಗಾಗಿ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಲಾಗಿದೆ.

ಇದನ್ನೂ ಓದಿ: ವಲಸಿಗರ ಶೆಡ್​ಗೆ ನುಗ್ಗಿ ಬೆದರಿಕೆ: ಪುನೀತ್​ ಕೆರೆಹಳ್ಳಿಗೆ ಜಾಮೀನು; ಹೋರಾಟ ಆರಂಭವೆಂದ ಹಿಂದೂ ಕಾರ್ಯಕರ್ತ

ಕಳೆದ ಕೆಲ ದಿನಗಳ ಹಿಂದೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಬಿಂಗೀಪುರ ಗ್ರಾಮದಲ್ಲಿ ಶಂಕಿತ ಬಾಂಗ್ಲಾ ವಲಸಿಗರು ಇರುವ ಜಾಗಕ್ಕೆ ಪುನೀತ್ ಕೆರೆಹಳ್ಳಿ ತಂಡ ತೆರಳಿದ್ದರು. ಅಲ್ಲಿದ್ದ ವಲಸೆ ಕಾರ್ಮಿಕರ ದಾಖಲೆಗಳನ್ನ ಪರಿಶೀಲನೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದರು. ಇದಾದ ಬಳಿಕ ಜಾಗದ ಮಾಲೀಕ ಸಿದ್ದೇಶ್ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ, ಡಾ.ನಾಗೇಂದ್ರಪ್ಪ ಸೇತಿದಂತೆ ಇತರರ ವಿರುದ್ಧ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.

ಪ್ರಕರಣ ದಾಖಲು ಮಾಡಿಕೊಂಡಿದ್ದ ಬನ್ನೇರುಘಟ್ಟ ಪೊಲೀಸರು ತಡರಾತ್ರಿ ಪುನೀತ್ ಕೆರೆಹಳ್ಳಿಯನ್ನ ಬಂಧಿಸಿದ್ದರು. ಬಳಿಕ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಆ ಬೆನ್ನಲ್ಲೇ ಷರತ್ತುಬದ್ಧ ಜಾಮೀನು ಪಡೆದಿದ್ದರು. ಸದ್ಯ ಇದೇ ಪ್ರಕರಣಕ್ಕೆ ತಡೆ ನೀಡಲಾಗಿದೆ.

ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ

ಇನ್ನು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದಾಗ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದರು. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಏಕಸದಸ್ಯ ಪೀಠ ಸೂಚನೆ ನೀಡಿ ಆದೇಶ ಹೊರಡಿಸಿದೆ.

ಪುನರ್ವಸತಿ ಬಗ್ಗೆ ವರದಿ ನೀಡಲು ಸೂಚನೆ

ಇನ್ನು ಕೋಗಿಲು ಬಡಾವಣೆಯಲ್ಲಿ ಅಕ್ರಮ ವಸತಿಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುನರ್ವಸತಿ ಮತ್ತು ಪರಿಹಾರ ಕೋರಿ ಇತ್ತೀಚೆಗೆ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ವಿಚಾರಣೆ ನಡೆದಿದೆ.

ಇದನ್ನೂ ಓದಿ: ಕೋಗಿಲು ಅಕ್ರಮ ವಸತಿ ತೆರವು ಪ್ರಕರಣ: ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಕೆ; ಬೇಡಿಕೆಗಳೇನು?

ಈ ವೇಳೆ 7 ಜನರಿಗೆ ನಿವೇಶನ ಮಂಜೂರಾದ ಬಗ್ಗೆ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಅವರಲ್ಲಿ ನಾಲ್ವರಿಗೆ ನಿವೇಶನ ಮಂಜೂರಾದ ದಾಖಲೆ ಇಲ್ಲ. ಮೂವರಿಗೆ ವಿವಾದಿತ ಜಾಗದಲ್ಲಿ ನಿವೇಶನ ಮಂಜೂರಾಗಿಲ್ಲ ಹಾಗೂ ಪುನರ್ವಸತಿ ಕೇಂದ್ರಗಳಿಗೆ ಜನರು ಬರುತ್ತಿಲ್ಲವೆಂದು ಹೈಕೋರ್ಟ್​ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಸದ್ಯ ಪ್ರಕರಣದಲ್ಲಿ ಅಮೈಕಸ್ ಕ್ಯೂರಿಯಾಗಿ ಬಿ.ವಿ.ವಿದ್ಯುಲ್ಲತಾರನ್ನು ನೇಮಿಸಿದ ಹೈಕೋರ್ಟ್, ಪುನರ್ವಸತಿ ಬಗ್ಗೆ ವರದಿ ನೀಡಲು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:32 pm, Wed, 4 February 26

Source link

ಮೊದಲ ಸಿನಿಮಾ ಶೂಟಿಂಗ್ ಮುಗಿಸಿದ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ – Kannada News | Mahakumbh viral girl Monalisa Bhosle completes first film The Diary of Manipur shooting

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವರೆಲ್ಲ ಯಶಸ್ಸು ಕಾಣಲ್ಲ. ಆದರೆ ತಮಗೆ ಸಿಕ್ಕ ಜನಪ್ರಿಯತೆಯನ್ನು ಸರಿಯಾಗಿ ಬಳಸಿಕೊಂಡರೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ. ಮಹಾಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿನಾ ಭೋಸ್ಲೆ (Monalisa Bhosle) ನಿಮಗೆ ನೆನಪಿರಬಹುದು. ಈಗ ಅವರೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕೂಡ ಹಲವರಿಗೆ ಇರಬಹುದು. ಅದಕ್ಕೆ ಉತ್ತರ ಸಿಕ್ಕಿದೆ. ಮೊನಾಲಿಸಾ ಭೋಸ್ಲೆ ಅವರು ತಮ್ಮ ಮೊದಲ ಹಿಂದಿ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ! ಆ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.

ಕಳೆದ ವರ್ಷ ಮಹಾಕುಂಭಮೇಳದಲ್ಲಿ ಮೊನಾಲಿಸಾ ಭೋಸ್ಲೆ ಅವರು ಮಣಿ ಸರಗಳನ್ನು ಮಾರುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರು ರಾತ್ರೋರಾತ್ರಿ ಜನಪ್ರಿಯತೆ ಪಡೆದುಕೊಂಡರು. ಅದಾದ ಬಳಿಕ ಕೆಲವೇ ದಿನಗಳಲ್ಲಿ ಅವರಿಗೆ ಹಿಂದಿ ಚಿತ್ರರಂಗದಿಂದ ಆಫರ್ ಕೂಡ ಬಂದಿತ್ತು. ನೋಡನೋಡುತ್ತಿದ್ದಂತೆಯೇ ಅವರು ಹೀರೋಯಿನ್ ಆಗಿಬಿಟ್ಟರು. ಈಗ ಶೂಟಿಂಗ್ ಮುಗಿಸಿದ್ದಾರೆ.

ಮೊನಾಲಿಸಾ ನಟಿಸುತ್ತಿರುವ ಮೊದಲ ಸಿನಿಮಾದ ಹೆಸರು ‘ದಿ ಡೈರಿ ಆಫ್ ಮಣಿಪುರ್’. ಈ ಚಿತ್ರಕ್ಕೆ ಸನೋಜ್ ಮಿಶ್ರಾ ಅವರು ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ಚಿತ್ರಂಗದ ಖ್ಯಾತ ನಟ ರಾಜ್​​ಕುಮಾರ್ ರಾವ್ ಅವರ ಸಹೋದರ ಅಮಿತ್ ರಾವ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡದವರು ಗಾಂಗಾ ಮಾತೆಯ ಆಶೀರ್ವಾದ ಪಡೆಯಲು ಬರುತ್ತಿದ್ದಾರೆ.

ನಾಲ್ಕು ಹಂತಗಳಲ್ಲಿ ‘ದಿ ಡೈರಿ ಆಫ್ ಮಣಿಪುರ್’ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ. ಉತ್ತರ ಪ್ರದೇಶ, ಮಣಿಪುರ, ನೇಪಾಳ ಮತ್ತು ಡೆಹರಾಡೂನ್​​ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಸಿನಿಮಾದ ಕೆಲಸಗಳು ಶುರುವಾದಾಗ ಅನೇಕರು ಅಡ್ಡಿಪಡಿಸಿದ್ದರು. ನಿರ್ದೇಶಕರ ಮೇಲೆ ಸಾಕಷ್ಟು ಆರೋಪ ಹೊರಿಸಲಾಗಿತ್ತು. ಎಲ್ಲವನ್ನೂ ಎದುರಿಸಿಕೊಂಡು ಸನೋಜ್ ಮಿಶ್ರಾ ಅವರು ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಮಹಾಕುಂಭದ ಸುಂದರಿ ಮೊನಾಲಿಸಾ ತಿಂಗಳ ಆದಾಯ ಇಷ್ಟೊಂದಾ?

ಮೊದಲಿಗೆ ಮೊನಾಲಿಸಾ ಅವರು ಸಿನಿಮಾ ಒಪ್ಪಿಕೊಂಡಾಗ ಅವರಿಗೆ ಹೆಚ್ಚೇನೂ ತಿಳಿದಿರಲಿಲ್ಲ. ಬಳಿಕ ಅವರು ನಟನೆಯ ತರಬೇತಿ ಪಡೆದರು. ಜೊತೆ ಜೊತೆಯಲ್ಲಿ ವಿದ್ಯಾಭ್ಯಾಸ ಕೂಡ ಮಾಡುತ್ತಿದ್ದಾರೆ. ದಕ್ಷಿಣ ಭಾರತದಿಂದಲೂ ಅವರಿಗೆ ಅವಕಾಶಗಳು ಸಿಗುತ್ತವೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 4:51 pm, Wed, 4 February 26

Source link

ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು – Kannada News | Permission to open bar within distance of government schools: Excise department fraud exposed

ಬೆಂಗಳೂರು, ಫೆಬ್ರವರಿ 04: ಯಲಹಂಕ ವಿಧಾನಸಭಾ ಕ್ಷೇತ್ರದ ದೊಂಬರಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ 50 ಮೀಟರ್ ದೂರದಲ್ಲೇ ಸಿಂಹಾದ್ರಿ ಬೋರ್ಡಿಂಗ್, ಲಾಡ್ಜಿಂಗ್, ಬಾರ್ ಆ್ಯಂಡ್​ ರೆಸ್ಟೋರೆಂಟ್​​ಗೆ ಅನುವತಿ ನೀಡಲಾಗಿದೆ. ಈ ಬಗ್ಗೆ ಟಿವಿ9 ಗ್ರೌಂಡ್ ರಿಪೋರ್ಟ್​ ಮೂಲಕ ಸಾಕ್ಷಿ ಸಮೇತ ಅಬಕಾರಿ ಇಲಾಖೆಯ ಕಳ್ಳಾಟ ಬಯಲು ಮಾಡಿದೆ. ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಮದ್ಯದಂಗಡಿಗಳಿಗೆ ಪರವಾನಗಿ ನೀಡುವಂತಿಲ್ಲ ಎಂಬ ನಿಯಮವಿದ್ದರೂ, ಅಬಕಾರಿ ಉಪ ಆಯುಕ್ತ ಮುರಳಿ ನಿಯಮವನ್ನು ಉಲ್ಲಂಘಿಸಿ ಲೈಸೆನ್ಸ್ ನೀಡಿರುವ ಆರೋಪ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಿಯಾಂಕಾ ಚೋಪ್ರಾ ಮನವಿಯನ್ನು ಪುರಸ್ಕರಿಸಿದ ರಾಜಮೌಳಿ, ಆದರೆ… – Kannada News | Priyanka Chopra talks about Rajamouli accepted her request

ರಾಜಮೌಳಿ (Rajamouli) ನಿರ್ದೇಶಿಸುತ್ತಿರುವ ‘ವಾರಣಾಸಿ’ ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವರ್ಷ ಇರುವಾಗಲೇ ಸಿನಿಮಾದ ಪ್ರಚಾರ ಆರಂಭವಾದಂತಿದೆ. ಕೆಲ ವಾರಗಳ ಹಿಂದಷ್ಟೆ ಬಲು ಅದ್ಧೂರಿಯಾಗಿ ಸಿನಿಮಾದ ಸಣ್ಣ ಟೀಸರ್ ಬಿಡುಗಡೆ ಮಾಡಲಾಯ್ತು. ಸಿನಿಮಾದ ಹೆಸರು ಹಾಗೂ ಮಹೇಶ್ ಬಾಬು ಅವರ ಒಂದು ಲುಕ್ ಹೊರತಾಗಿ ಹೊಸತೇನನ್ನೂ ಸಹ ಟೀಸರ್​​ನಲ್ಲಿ ರಿವೀಲ್ ಮಾಡಲಾಗಿರಲಿಲ್ಲ. ಇದೀಗ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರುಗಳು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಸಿನಿಮಾದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಹಲವು ವಿಷಯ ಮಾತನಾಡಿರುವ ನಟಿ ಪ್ರಿಯಾಂಕಾ ಚೋಪ್ರಾ, ತಾವು ರಾಜಮೌಳಿ ಅವರಿಗೆ ಮಾಡಿದ ಮನವಿ ಹಾಗೂ ಅದನ್ನು ಅವರು ಪುರಸ್ಕರಿಸಿದ್ದು, ಬಳಿಕ ತಮ್ಮ ಮನವಿಯಿಂದ ತಮಗೇ ಸಮಸ್ಯೆ ಆಗಿದ್ದರ ಬಗ್ಗೆ ಮಾತನಾಡಿದ್ದಾರೆ. ರಾಜಮೌಳಿ ಅವರು ‘ವಾರಣಾಸಿ’ ಸಿನಿಮಾಕ್ಕಾಗಿ ಪ್ರಿಯಾಂಕಾ ಅವರನ್ನು ಕೇಳಿದಾಗ ಪ್ರಿಯಾಂಕಾ ಕೂಡಲೇ ಒಪ್ಪಿಕೊಂಡರಂತೆ. ಆದರೆ ರಾಜಮೌಳಿ ಬಳಿ ಒಂದು ವಿಶೇಷ ಮನವಿ ಒಂದನ್ನು ಮಾಡಿದ್ದರಂತೆ.

‘ನಾನು ಭಾರತೀಯ ಸಿನಿಮಾದ ಹಾಡುಗಳಲ್ಲಿ ಡ್ಯಾನ್ಸ್ ಮಾಡಿ ಬಹಳ ವರ್ಷಗಳಾಗಿಬಿಟ್ಟಿವೆ. ನನಗಾಗಿ ಒಂದು ಡ್ಯಾನ್ಸ್ ನಂಬರ್ ಅನ್ನು ಸಿನಿಮಾನಲ್ಲಿ ಇಡಲು ಸಾಧ್ಯವಾ?’ ಎಂದು ಪ್ರಿಯಾಂಕಾ ಚೋಪ್ರಾ ಮನವಿ ಮಾಡಿದ್ದರಂತೆ. ಅದರಂತೆ ರಾಜಮೌಳಿ ಸಹ ಸರಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಆ ಡ್ಯಾನ್ಸ್ ಹಾಡಿನ ಚಿತ್ರೀಕರಣ ಮಾತ್ರ ಬಹಳ ಶ್ರಮದಾಯಕವಾಗಿತ್ತು. ಬಹಳ ವೇಗ ಮತ್ತು ಕೋಆರ್ಡಿನೇಷನ್ ಇರುವ ಹಾಡು ಅದು’ ಎಂದಿದ್ದಾರೆ ಪ್ರಿಯಾಂಕಾ.

ಇದನ್ನೂ ಓದಿ:ತಾವೇ ಆರಂಭಿಸಿದ ಟ್ರೆಂಡ್ ಬಗ್ಗೆ ರಾಜಮೌಳಿಗೆ ರೇಜಿಗೆ; ದೊಡ್ಡ ನಿರ್ಧಾರಕ್ಕೆ ಬಂದ ನಿರ್ದೇಶಕ

ರಾಜಮೌಳಿಯ ಈ ಹಿಂದಿನ ಸಿನಿಮಾ ‘ಆರ್​​ಆರ್​​ಆರ್’ನಲ್ಲಿನ ‘ನಾಟು ನಾಟು’ ಹಾಡು ಸಹ ಅದ್ಭುತ ಡ್ಯಾನ್ಸ್​​​ನಿಂದ ಇಡೀ ವಿಶ್ವದಲ್ಲೇ ಜನಪ್ರಿಯವಾಗಿತ್ತು. ಆ ಸಿನಿಮಾದ ಡ್ಯಾನ್ಸ್​ ಸಹ ಬಹಳ ಇಂಟೆನ್ಸ್ ಆಗಿತ್ತು ಎಂದು ಈಗಲೂ ಸಹ ರಾಮ್ ಚರಣ್ ಮತ್ತು ಜೂ ಎನ್​​ಟಿಆರ್ ನೆನಪು ಮಾಡಿಕೊಳ್ಳುತ್ತಾರೆ. ರಾಜಮೌಳಿ ಹೇಗೆ, ಡ್ಯಾನ್ಸ್ನ ಪ್ರತಿ ಮೂಮೆಂಟ್ ಅನ್ನು ನೋಡಿ ಫೈನಲ್ ಮಾಡುತ್ತಿದ್ದರು ಎಂದು ರಾಮ್ ಚರಣ್ ಮತ್ತು ಜೂ ಎನ್​​ಟಿಆರ್ ಹೇಳಿದ್ದಾರೆ.

ಇದೀಗ ‘ವಾರಣಾಸಿ’ ಸಿನಿಮಾನಲ್ಲಿಯೂ ಸಹ ಅಂಥಹುದೇ ಒಂದು ಡ್ಯಾನ್ಸ್ ನಂಬರ್ ರಾಜಮೌಳಿ ಇಟ್ಟಿದ್ದಾರೆ ಅನಿಸುತ್ತದೆ. ಅದೇ ವಿಷಯವನ್ನು ಪ್ರಿಯಾಂಕಾ ಚೋಪ್ರಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಿನಿಮಾ ಏಪ್ರಿಲ್ 7, 2027ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಖ್ಖರನ್ನು ಕೊಂದ ಗಾಂಧಿ ಕುಟುಂಬದ ಕುಡಿಯೊಂದಿಗೆ ನಾನು ಕೈಕುಲುಕುವುದಿಲ್ಲ; ರವನೀತ್ ಬಿಟ್ಟು ಪ್ರತಿಕ್ರಿಯೆ – Kannada News | Gandhi family is the murder of Sikhs I wont shake hands with Rahul Gandhi Ravneet Singh Bittu says

ನವದೆಹಲಿ, ಫೆಬ್ರವರಿ 4: ಇಂದು ಬೆಳಗ್ಗೆ ಸಂಸತ್ ಹೊರಗೆ ಪ್ರತಿಭಟನೆ ನಡೆಸುವಾಗ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು (Ravneet Singh Bittu) ಅವರನ್ನು ರಾಹುಲ್ ಗಾಂಧಿ “ದೇಶದ್ರೋಹಿ” ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಚಿವ ರವನೀತ್ ಸಿಂಗ್ ಬಿಟ್ಟು, “ತನ್ನ ತಂದೆ ದೇಶಕ್ಕಾಗಿ ತನ್ನನ್ನು ತ್ಯಾಗ ಮಾಡಿದ್ದಕ್ಕಾಗಿ ತಾನು ಅತ್ಯಂತ ದೊಡ್ಡ ದೇಶಭಕ್ತನೆಂದು ರಾಹುಲ್ ಗಾಂಧಿ (Rahul Gandhi) ಭಾವಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬ ಪಂಜಾಬ್‌ಗೆ ಬೆಂಕಿ ಹಚ್ಚಿತ್ತು. ಗೋಲ್ಡನ್ ಟೆಂಪಲ್‌ನಲ್ಲಿರುವ ನಮ್ಮ ಅತಿದೊಡ್ಡ ಗುರುದ್ವಾರದ ಮೇಲೆ ಗುಂಡು ಹಾರಿಸಲಾಯಿತು. ಅವರು ಸಾವಿರಾರು ಸಿಖ್ಖರು, ಪಂಜಾಬಿಗಳನ್ನು ಗುರಿಯಾಗಿಸಿಕೊಂಡು ಕೊಂದರು. ನಾನು ಕೂಡ ಆ ರೀತಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ಕುಟುಂಬದಿಂದ ಬಂದಿದ್ದೇನೆ, ಇದು ನನ್ನ ನೋವು. ಒಬ್ಬ ಹುತಾತ್ಮನ ಮೊಮ್ಮಗ ನಾನು. ಕಾಂಗ್ರೆಸ್ ಪಕ್ಷದಲ್ಲಿ ನಾನು ಇರುವವರೆಗೂ ಅವರಿಗೆ ಎಲ್ಲ ಚೆನ್ನಾಗಿತ್ತು. ಈಗ ನಾನು ಬಿಜೆಪಿಯಲ್ಲಿದ್ದೇನೆ, ಹೀಗಾಗಿ ಅವರು ನನಗೆ ದೇಶದ್ರೋಹಿ ಎಂಬ ಪದಗಳನ್ನು ಬಳಸುತ್ತಿದ್ದಾರೆ. ಅವನು ತನ್ನ ಬಗ್ಗೆ ಏನು ಅಂದುಕೊಂಡಿದ್ದಾರೆ? ರಾಹುಲ್ ಗಾಂಧಿ ಚಕ್ರವರ್ತಿಯಂತೆ ನನ್ನ ಕಡೆಗೆ ಕೈ ಚಾಚಿದರು. ಅವರು ತನ್ನನ್ನು ಈ ದೇಶದ, ಈ ಪ್ರಪಂಚದ ಮಾಲೀಕ ಎಂದುಕೊಂಡಿದ್ದಾರೆ. ನಾನು ಗಾಂಧಿ ಕುಟುಂಬಕ್ಕೆ ಸೇರಿದವನಲ್ಲದಿರಬಹುದು, ಆದರೆ ನನ್ನ ತಲೆಯ ಮೇಲೆ ಪೇಟವಿದೆ. ಹಾಗಾಗಿ, ಅವರು ನನ್ನೊಂದಿಗೆ ಕೈಕುಲುಕಲು ಮುಂದಾದಾಗ, ನಾನು ‘ಆಪ್ ಲೋಗ್ ತೋ ದೇಶ್ ಕೆ ಗದ್ದರ್ ಹೋ, ದೇಶ್ ಕೆ ದುಷ್ಮನ್ ಹೋ (ನೀವು ದೇಶದ ಶತ್ರುಗಳು)’ ಎಂದು ಹೇಳಿದೆ. ಗಾಂಧಿ ಕುಟುಂಬದಿಂದ ಸಿಖ್ಖರ ಕೊಲೆಯಾಗಿದೆ. ನಾನು ಆ ಕುಟುಂಬದ ಮಗನೊಂದಿಗೆ ಕೈಕುಲುಕುವುದಿಲ್ಲ” ಎಂದು ರವನೀತ್ ಬಿಟ್ಟು ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಗಾಂಧಿಯವರಿಗೆ ಹ್ಯಾಂಡ್‌ಶೇಕ್ ಏಕೆ ನೀಡಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, 1984ರಲ್ಲಿ ಗೋಲ್ಡನ್ ಟೆಂಪಲ್ ಸಂಕೀರ್ಣದಿಂದ ಉಗ್ರರನ್ನು ಹೊರಹಾಕಲು ನಡೆಸಿದ ಮಿಲಿಟರಿ ದಾಳಿ ಆಪರೇಷನ್ ಬ್ಲೂ ಸ್ಟಾರ್ ಮತ್ತು ಸಿಖ್ ವಿರೋಧಿ ಗಲಭೆಗಳ ಬಗ್ಗೆ ಗಾಂಧಿ ಕುಟುಂಬವನ್ನು ಟೀಕಿಸಿದರು. ಸಿಖ್ಖರ ಕೊಲೆಗಾರ ಗಾಂಧಿ ಕುಟುಂಬದ ಕುಡಿಯೊಂದಿಗೆ ಸರ್ದಾರ್ ಎಂದಿಗೂ ಕೈಕುಲುಕುವುದಿಲ್ಲ ಎಂದು ರವನೀತ್ ಬಿಟ್ಟು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರಾವಳಿಯಲ್ಲಿ ಮೊದಲ ಬೋಟ್ ಆಂಬ್ಯುಲೆನ್ಸ್, ತಮ್ಮ‌ ರಕ್ಷಣೆಗೆ ತಾವೇ ನಿರ್ಮಿಸಿಕೊಂಡ ಮೀನುಗಾರರು – Kannada News | Ullal fishermen build a First Boat Ambulance In Karavali, here Is How To Work

ಮಂಗಳೂರು, (ಫೆಬ್ರವರಿ 04): ಕರಾವಳಿಯಲ್ಲಿ ಮೊದಲ ಬೋಟ್ ಆಂಬ್ಯುಲೆನ್ಸ್  (Boat Ambulance) ನಿರ್ಮಾಣವಾಗಿದೆ. ಈ ಹಿಂದೆ ಬೋಟ್ ಆಂಬ್ಯುಲೆನ್ಸ್ ಆರಂಭಿಸುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಆದ್ರೆ, ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಇದೀಗ ಸರ್ಕಾರಕ್ಕೆ ಸೆಡ್ಡು ಹೊಡೆದ ಮೀನುಗಾರರು, ತಮ್ಮ‌ ರಕ್ಷಣೆಗೆ ತಾವೇ ಬೋಟ್ ಆಂಬ್ಯುಲೆನ್ಸ್ ನಿರ್ಮಿಸಿಕೊಂಡಿದ್ದಾರೆ. ಸರ್ಕಾರದ ಯೋಜನೆಗೆ ಕಾಯದೇ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರ ಸಂಘದವರು ಮೊದಲ ಬೋಟ್ ಆಂಬುಲೆನ್ಸ್ ನಿರ್ಮಿಸಿದ್ದಾರೆ. ಮಂಗಳೂರಿನ ಉಳ್ಳಾಲ ವಲಯದ ಮೀನುಗಾರರ ಮಾದರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಬೋಟ್ ಆಂಬ್ಯುಲೆನ್ಸ್ ಮೂಲಕ ಮೀನುಗಾರರ ಜೀವ ರಕ್ಷಣೆ ಕಾರ್ಯ ನಡೆಯಲಿದೆ. ನದಿ, ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭ ಅವಘಡ ಸಂಭವಿಸಿದ್ರೆ ತುರ್ತು ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ಬಳಕೆ ಮಾಡಲಾಗುತ್ತೆ. ಇನ್ನು ಸಮುದ್ರದ ಮಧ್ಯೆ ಆರೋಗ್ಯ ಸಮಸ್ಯೆ ಎದುರಾದರೂ ಸಹ ಈ ಬೋಟ್ ಆಂಬ್ಯುಲೆನ್ಸ್‌ ನೆರವಿಗೆ ಬರಲಿದೆ. ಇನ್ನು ಈ ಬೋಟ್ ಆಂಬ್ಯುಲೆನ್ಸ್ ಏನೆಲ್ಲಾ ಇದೆ ಎನ್ನುವ ಮಾಹಿತಿ ವಿಡಿಯೋನಲ್ಲಿ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಸಿನಿಮಾದಲ್ಲಿ ಸಲ್ಮಾನ್ ಖಾನ್? ವೈರಲ್ ಆಗಿದೆ ಫೋಟೋ – Kannada News | Is Salman Khan acting in Dhurandhar 2 movie Photo goes viral

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಧುರಂಧರ್ 2’ (Dhurandhar 2) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಅರ್ಜುನ್ ರಾಮ್​​ಪಾಲ್ ಮುಂತಾದವರು ನಟಿಸಿದ್ದಾರೆ. ಮಾರ್ಚ್ 19ರಂದು ಈ ಚಿತ್ರ ರಿಲೀಸ್ ಆಗಲಿದೆ. ಸಿನಿಮಾದ ಪಾತ್ರವರ್ಗದ ಬಗ್ಗೆ ಹಲವು ಗಾಸಿಪ್ ಕೇಳಿಬರುತ್ತಿದೆ. ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಕೂಡ ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಹೇಳಲಾಗುತ್ತಿದೆ. ಆದರೆ ಈ ಸುದ್ದಿಯನ್ನು ಚಿತ್ರತಂಡ ಖಚಿತಪಡಿಸಿಲ್ಲ.

‘ಧುರಂಧರ್ 2’ ಸಿನಿಮಾಗೆ ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ಅವರು ಈ ಹಿಂದೆ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದರು. ‘ಉರಿ’ ಸಿನಿಮಾದಲ್ಲಿ ನಟಿಸಿದ್ದ ಯಾಮಿ ಗೌತಮ್ ಮತ್ತು ವಿಕ್ಕಿ ಕೌಶಲ್ ಅವರು ‘ಧುರಂಧರ್ 2’ ಚಿತ್ರದಲ್ಲಿ ಇರಲಿದ್ದಾರೆ ಎಂಬ ಗಾಸಿಪ್ ಈಗಾಗಲೇ ಹಬ್ಬಿದೆ. ಅದರ ಜೊತೆಗೆ ಸಲ್ಮಾನ್ ಖಾನ್ ಹೆಸರು ಕೂಡ ಕೇಳಿಬರುತ್ತಿದೆ.

ಕಳೆದ ವರ್ಷ ಬಿಡುಗಡೆ ಆಗಿ ಬ್ಲಾಕ್​ ಬಸ್ಟರ್ ಹಿಟ್ ಆದ ‘ಧುರಂಧರ್’ ಸಿನಿಮಾದಲ್ಲಿ ಬಡೇ ಸಾಬ್ ಎಂಬ ಪಾತ್ರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಆ ಪಾತ್ರವು ‘ಧುರಂಧರ್ 2’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ. ಅಭಿಮಾನಿಗಳಿಗೆ ಬಡೇ ಸಾಬ್ ಬಗ್ಗೆ ಬಾರಿ ಕೌತುಕ ಇದೆ. ಸಲ್ಮಾನ್ ಖಾನ್ ಅವರು ಬಡೇ ಸಾಬ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಗಾಸಿಪ್ ಮಂದಿಯ ವಾದ.

ಸಲ್ಮಾನ್ ಖಾನ್ ಅವರ ಒಂದು ಫೋಟೋ ವೈರಲ್ ಆಗುತ್ತಿದೆ. ಇದು ‘ಧುರಂಧರ್ 2’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ತೆಗೆದ ಫೋಟೋ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಹಲವರು ನಂಬಿಲ್ಲ. ಇದು ಎಐ ಫೋಟೋ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ‘ಸಲ್ಮಾನ್ ಖಾನ್ ಅವರ ಅಭಿಮಾನಿಗಳು ಏನು ಬೇಕಾದರೂ ಮಾಡುತ್ತಾರೆ’ ಎಂಬ ಕಮೆಂಟ್ ಕೂಡ ಬಂದಿದೆ.

ಇದನ್ನೂ ಓದಿ: ಒಟಿಟಿಯಲ್ಲಿ ‘ಧುರಂಧರ್’ ನೋಡಿ ಮೆಚ್ಚಿಕೊಂಡ ಪಾಕಿಸ್ತಾನಿ ಪ್ರೇಕ್ಷಕರು

ಒಂದು ವೇಳೆ ಸಲ್ಮಾನ್ ಖಾನ್ ಅವರು ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದೇ ಹೌದಾದರೆ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ದಾಖಲೆ ಸೃಷ್ಟಿ ಆಗಲಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಪಾತ್ರವರ್ಗದಲ್ಲಿ ಸಲ್ಮಾನ್ ಖಾನ್ ಇದ್ದಾರೋ ಅಥವಾ ಇಲ್ಲವೋ ಎಂಬುದನ್ನು ಚಿತ್ರತಂಡದವರೇ ಸ್ಪಷ್ಟಪಡಿಸಬೇಕಿದೆ. ಇತ್ತೀಚೆಗೆ ‘ಧುರಂಧರ್ 2’ ಸಿನಿಮಾದ ಟೀಸರ್ ಮತ್ತು ಫಸ್ಟ್ ಲುಕ್ ಬಿಡುಗಡೆ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:34 pm, Wed, 4 February 26

Source link

ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ – Kannada News | Belagavi: Pan Shop Owner Murdered Over Cigarette Payment; Four Arrested

ಬೆಳಗಾವಿ, ಫೆಬ್ರವರಿ 04: ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ ಸಿಗರೇಟ್ ಹಣ ಕೇಳಿದ್ದಕ್ಕಾಗಿ ಪಾನ್ ಶಾಪ್ ಮಾಲೀಕ ಯಲ್ಲಪ್ಪ ನಾಯಕ್​​​ನನ್ನು ನಾಲ್ವರು ಯುವಕರು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮಂಗಳವಾರ ರಾತ್ರಿ ಘಟನೆ ನಡೆದಿದೆ. ಯುವಕರು ಎರಡು ಸಿಗರೇಟ್ ಮತ್ತು ನೀರಿನ ಬಾಟಲಿಯನ್ನು ತೆಗೆದುಕೊಂಡು ಹಣ ಕೊಡದೇ ಹೋಗುತ್ತಿದ್ದರು. ಈ ವೇಳೆ ಯಲ್ಲಪ್ಪ ನಾಯಕ್ ಪ್ರಶ್ನಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version