ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ; ಕ್ಲೋರೈಡ್ ಸೋರಿಕೆಯಿಂದ ಆತಂಕ, ಭಾರೀ ಟ್ರಾಫಿಕ್ ಜಾಮ್ – Kannada News | Chemical Laden Lorry Overturns Near Nelamangala, Chloride Leak Triggers Traffic Jam on Tumakuru Bengaluru Highway

ಬೆಂಗಳೂರು ಗ್ರಾಮಾಂತರ, ಜುಲೈ 22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಗ್ರಾಮದ ಬಳಿ ಕ್ಲೋರೈಡ್ ಕೆಮಿಕಲ್ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಕೆಮಿಕಲ್ ಸೋರಿಕೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಅಪಘಾತದಿಂದ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಕಿಲೋಮೀಟರ್‌ವರೆಗೆ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

ವರದಿ: ಮಂಜುನಾಥ್, ಟಿವಿ9, ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

National Mango Day 2026: ರಾಷ್ಟ್ರೀಯ ಮಾವು ದಿನದ ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳಿ – Kannada News | National Mango Day 2026: Why is National Mango Day celebrated? Here’s the information

ರಾಷ್ಟ್ರೀಯ ಮಾವು ದಿನImage Credit source: Getty Images

ಭಾರತದಲ್ಲಿ ಮಾವು (Mango) ಕೇವಲ ಹಣ್ಣಲ್ಲ, ಬದಲಾಗಿ ಅದು ಹಣ್ಣುಗಳ ರಾಜ. ಅಷ್ಟೇ ಅಲ್ಲದೆ ಇದು ರಾಷ್ಟ್ರೀಯ ಹಣ್ಣು ಕೂಡ ಹೌದು. ಬೇಸಿಗೆಯ ಆಗಮನದೊಂದಿಗೆ ವಿವಿಧ ಪ್ರಭೇದದ ಮಾವಿನ ಹಣ್ಣುಗಳು ಕಾಣಿಸಿಕೊಳ್ಳುತ್ತವೆ. ಭಾರತದಲ್ಲಿನ ಈ ವಿವಿಧ ಪ್ರಭೇದ ಮಾವುಗಳಿಗೆ ವಿಶ್ವಾದ್ಯಂತ ಬೇಡಿಕೆಯಿದ್ದು, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಮತ್ತು ರಫ್ತು ಮಾಡುವ ರಾಷ್ಟ್ರವಾಗಿದೆ. ಈ ಹಣ್ಣಿನ ಜನಪ್ರಿಯತೆ, ಅವುಗಳ ಪ್ರಬೇಧ, ಸಾಂಸ್ಕೃತಿಕ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಹಾಗೂ ಮಾವಿನ ಹಣ್ಣಿನ ಗೌರವಾರ್ಥವಾಗಿ ಪ್ರತಿವರ್ಷ ಜುಲೈ 22 ರಂದು ರಾಷ್ಟ್ರೀಯ ಮಾವು ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ರಾಷ್ಟ್ರೀಯ ಮಾವು ದಿನದ ಇತಿಹಾಸವೇನು?

ಮಾವು ಭಾರತೀಯ ಸಾಂಸ್ಕೃತಿಕ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಪ್ರಕೃತಿಯೊಂದಿಗೆ ಸಂಬಂಧ ಹೊಂದಿದೆ. ರಾಷ್ಟ್ರೀಯ ಮಾವಿನ ದಿನವನ್ನು ಮೊದಲ ಬಾರಿಗೆ ಜುಲೈ 22, 2005 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಭಾರತದಲ್ಲಿ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ದಿನದ ಉದ್ದೇಶ ಮಾವಿನ ಹಣ್ಣಿನ ಮಹತ್ವ ಮತ್ತು ಅದರ ಇತರ ಪ್ರಯೋಜನಕಾರಿ ಗುಣಗಳು, ಈ ಹಣ್ಣಿನ ಜನಪ್ರಿಯತೆ, ಅವುಗಳ ಪ್ರಬೇಧ, ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸುವುದಾಗಿದೆ.

ಮಾವಿನ ದಿನದ ಮಹತ್ವವೇನು?

  • ಮಾವಿನಹಣ್ಣಿನ ಮೇಲಿನ ಜನರ ಪ್ರೀತಿ ಮತ್ತು ಅವುಗಳ ಸಾಂಸ್ಕೃತಿಕ ಮಹತ್ವವನ್ನು ಆಚರಿಸುವುದು ಈ ದಿನದ ಉದ್ದೇಶವಾಗಿದೆ.
  • ಈ ದಿನವು ಮಾವಿನ ವೈವಿಧ್ಯತೆ ಮತ್ತು ಅದಕ್ಕೆ ಸಂಬಂಧಿಸಿದ ರುಚಿಯ ಆಚರಣೆಯನ್ನು ಸೂಚಿಸುತ್ತದೆ.
  • ಮಾವಿನ ವಿವಿಧ ಪ್ರಭೇದಗಳು, ಅದರ ಪೌಷ್ಟಿಕಾಂಶದ ಮೌಲ್ಯ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ರಾಷ್ಟ್ರೀಯ ಮಾವಿನ ದಿನದ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: ತ್ರಿವರ್ಣ ಧ್ವಜ ಭಾರತದ ಹೆಮ್ಮೆಯ ಸಂಕೇತ

ಮಾವಿನ ಹಣ್ಣಿನ ಆರೋಗ್ಯ ಪ್ರಯೋಜನಗಳೇನು?

  • ಮಾವು ಹಣ್ಣುಗಳ ರಾಜ ಮಾತ್ರವಲ್ಲ, ಪೋಷಕಾಂಶಗಳ ನಿಧಿಯೂ ಆಗಿದೆ. ಮಾವಿನಹಣ್ಣು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಪ್ರೋಟೀನ್, ವಿಟಮಿನ್‌ಗಳು ಮತ್ತು ಫೋಲೇಟ್ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಹೊಂದಿವೆ.
  • ಮಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
  • ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  • ಮಾವಿನಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
  • ಮಾವು ಹೃದಯದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಹಣ್ಣು ಏಕೆಂದರೆ ಇದು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ.
  • ಮಾವಿನಹಣ್ಣಿನಲ್ಲಿ ಲುಟೀನ್, ಜಿಯಾಕ್ಸಾಂಥಿನ್ ಮತ್ತು ವಿಟಮಿನ್ ಎ ಇದ್ದು, ಇವೆಲ್ಲವೂ ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ.
  • ಮಾವಿನಹಣ್ಣು ನಿಮ್ಮ ದೇಹದ ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
  • ಮಾವಿನಹಣ್ಣಿನಲ್ಲಿರುವ ಪಾಲಿಫಿನಾಲ್‌ಗಳು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ ‘ಮಾಲ್ವಾಣ್’ ಯುದ್ಧನೌಕೆ: ಸ್ವದೇಶಿ ನಿರ್ಮಿತ ಹಡಗಿನ ವಿಶೇಷಗಳೇನು? ಇಲ್ಲಿದೆ ನೋಡಿ – Kannada News | INS Malvan to Join Indian Navy Today at Karwar: Indigenous Warship with Advanced Anti Submarine Capabilities

ಕಾರವಾರ, ಜುಲೈ 22: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಏಷ್ಯಾದ ಅತಿದೊಡ್ಡ ನೌಕಾನೆಲೆ ಐಎನ್‌ಎಸ್ ಕದಂಬದಲ್ಲಿ ಇಂದು ಭಾರತೀಯ ನೌಕಾಪಡೆಗೆ ಮತ್ತೊಂದು ಸ್ವದೇಶಿ ನಿರ್ಮಿತ ಯುದ್ಧನೌಕೆ ‘ಐಎನ್‌ಎಸ್ ಮಾಲ್ವಾಣ್’ ಸೇರ್ಪಡೆಯಾಗಲಿದೆ. ಕೇರಳದ ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ಸುಮಾರು ಶೇ 80ರಷ್ಟು ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಈ ನೌಕೆ, ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲಿದೆ.

78 ಮೀಟರ್ ಉದ್ದ, 11.26 ಮೀಟರ್ ಅಗಲ ಹಾಗೂ 2.7 ಮೀಟರ್ ಆಳ ಹೊಂದಿರುವ ಈ ಯುದ್ಧನೌಕೆ ಗಂಟೆಗೆ 25 ನಾಟಿಕಲ್ ಮೈಲುಗಳ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ನೌಕೆಯಲ್ಲಿ 7 ಅಧಿಕಾರಿಗಳು ಸೇರಿದಂತೆ 57 ಮಂದಿ ನಾವಿಕರು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

ಈ ನೌಕೆಯ ಪ್ರಮುಖ ವಿಶೇಷತೆ ಎಂದರೆ ಸಮುದ್ರದ ಆಳದಲ್ಲಿರುವ ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ ದಾಳಿ ನಡೆಸುವ ಸಾಮರ್ಥ್ಯ. ಹಡಗಿನ ತಳಭಾಗದಲ್ಲಿ ಅಳವಡಿಸಿರುವ ‘ಅಭಯ್ ಸೋನಾರ್’ ವ್ಯವಸ್ಥೆಯು ಧ್ವನಿ ತರಂಗಗಳ ಮೂಲಕ ಜಲಾಂತರ್ಗಾಮಿಗಳ ಇರುವಿಕೆಯನ್ನು ಗುರುತಿಸಲಿದೆ. ಜೊತೆಗೆ ಜಲಾಂತರ್ಗಾಮಿ ನಿರೋಧಕ ಶಸ್ತ್ರಾಸ್ತ್ರಗಳು ಹಾಗೂ ಆಧುನಿಕ ರಕ್ಷಣಾ ವ್ಯವಸ್ಥೆಯನ್ನೂ ನೌಕೆ ಹೊಂದಿದೆ. ಅಲ್ಲದೆ, ಸಮುದ್ರ ಮೇಲ್ಮೈಯಲ್ಲಿ ಶತ್ರುಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಮತ್ತು ಆತ್ಮರಕ್ಷಣೆಗಾಗಿ 30 ಮಿ.ಮೀ. ನೇವಲ್ ಸರ್ಫೇಸ್ ಗನ್ ಅಳವಡಿಸಲಾಗಿದೆ. ಸ್ವದೇಶಿ ರಕ್ಷಣಾ ಉತ್ಪಾದನೆಗೆ ಮತ್ತೊಂದು ಮೈಲುಗಲ್ಲಾಗಿರುವ ಈ ಯುದ್ಧನೌಕೆ ಭಾರತೀಯ ನೌಕಾಪಡೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ವೃದ್ಧಿಸುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಶ್ನೆಪತ್ರಿಕೆ ಸೋರಿಕೆ ಇಡೀ ದೇಶದ ಸಮಸ್ಯೆ, ತಡೆಯಲು ಗೆಹ್ಲೋಟ್ ಯತ್ನಿಸಿದರೂ ಸಾಧ್ಯವಾಗಲಿಲ್ಲ, ಪ್ರಿಯಾಂಕಾ ಗಾಂಧಿ ಮುಕ್ತ ಮಾತು – Kannada News | Exam Paper Leaks: India’s Crisis and Priyanka Gandhi’s Candid Admission

ನವದೆಹಲಿ, ಜುಲೈ 22: ದೇಶದಲ್ಲಿ ಸಾಲು ಸಾಲು ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ(Question Paper Leak) ಪ್ರಕರಣಗಳು ಯುವಕರನ್ನು ತೀವ್ರ ನಿರಾಶೆಗೆ ತಳ್ಳಿವೆ. ಸರ್ಕಾರಗಳು ಬದಲಾದರೂ, ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಒಂದಲ್ಲ ಒಂದು ರೀತಿಯಲ್ಲಿ ಈ ‘ಸಾಂಸ್ಥಿಕ ಅಕ್ರಮ’ಗಳನ್ನು ತಡೆಯಲು ವಿಫಲವಾಗುತ್ತಿವೆ. ಅಧಿಕಾರದಲ್ಲಿದ್ದಾಗ ತಡೆಯಲಾಗದ ವಿಷಯಗಳನ್ನು, ವಿರೋಧ ಪಕ್ಷದಲ್ಲಿದ್ದಾಗ ಅದೇ ವಿಷಯವನ್ನು ಎತ್ತಿ ಹಿಡಿಯುವ ರಾಜಕೀಯ ಚಕ್ರ ನಿರಂತರವಾಗಿ ನಡೆಯುತ್ತಿದೆ. ಈ ಸತ್ಯವನ್ನು ಸ್ವತಃ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರೇ ಮುಕ್ತವಾಗಿ ಒಪ್ಪಿಕೊಂಡಿದ್ದು, ರಾಜಸ್ಥಾನದ ಪರೀಕ್ಷಾ ಸೋರಿಕೆ ಘಟನೆಗಳನ್ನು ಉಲ್ಲೇಖಿಸಿ ನೀಡಿರುವ ಹೇಳಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ರಾಜಸ್ಥಾನದಲ್ಲಿ ನಾವು ಪ್ರಯತ್ನಿಸಿದೆವು, ಆದರೆ ಆಗಲಿಲ್ಲ

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ನಡೆದ ಪರೀಕ್ಷಾ ಅಕ್ರಮಗಳ ಬಗ್ಗೆ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ, ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಕೇವಲ ಒಂದು ರಾಜ್ಯದ ಸಮಸ್ಯೆಯಲ್ಲ, ಅದು ಇಡೀ ದೇಶವನ್ನು ಬಾಧಿಸುತ್ತಿರುವ ಬೃಹತ್ ಜ್ವಲಂತ ಸಮಸ್ಯೆ. ರಾಜಸ್ಥಾನದಲ್ಲಿ ನಮ್ಮ ಸರ್ಕಾರವಿದ್ದಾಗ ಇದನ್ನು ತಡೆಯಲು ನಾವು ಶಕ್ತಿಮೀರಿ ಪ್ರಯತ್ನಿಸಿದೆವು, ಅಂದಿನ ಸಿಎಂ ಅಶೋಕ್ ಗೆಹ್ಲೋಟ್ ಜೀ ಕೂಡ ಸಾಕಷ್ಟು ಶ್ರಮಿಸಿದರು. ಆದರೆ, ನಮಗೂ ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಮತ್ತಷ್ಟು ಓದಿ: ನೀಟ್ ಪರೀಕ್ಷಾ ಅಕ್ರಮದ ತೀವ್ರ ಪ್ರತಿಭಟನೆ ನಡುವೆ ವೈರಲ್ ಆಯ್ತು ಅರವಿಂದ್ ಅವರ ಎರಡು ವರ್ಷಗಳ ಹಳೆಯ ಭವಿಷ್ಯವಾಣಿ

ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳು ಕೇವಲ ಒಬ್ಬಿಬ್ಬರು ಮಾಡುವ ತಪ್ಪುಗಳಲ್ಲ, ಪರೀಕ್ಷಾ ಮಂಡಳಿ, ಉಸ್ತುವಾರಿ ವಹಿಸುವವರು, ಕೆಲವು ಪೋಷಕರು ಮತ್ತು ಮಧ್ಯವರ್ತಿಗಳು ಸೇರಿ ಇಡೀ ವ್ಯವಸ್ಥೆಯೊಳಗಿನ ಲೋಪದೋಷಗಳನ್ನು ಬಳಸಿಕೊಂಡು ಪರೀಕ್ಷೆಗೂ ಮುನ್ನವೇ ಕುತಂತ್ರ ನಡೆಸಿ ಶಾರ್ಟ್‌ಕಟ್‌ಗಳನ್ನು ಕಂಡುಕೊಳ್ಳುತ್ತಾರೆ.

ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು ಅಥವಾ ಎಲ್ಲೆಂದರಲ್ಲಿ ಕಸ ಚೆಲ್ಲುವುದನ್ನು ಜನರು ತಮ್ಮ ‘ಹಕ್ಕು’ ಅಥವಾ ಸಾಹಸ ಎಂಬಂತೆ ಬಿಂಬಿಸಿಕೊಳ್ಳುವಂತೆಯೇ, ಶಾರ್ಟ್‌ಕಟ್‌ನಲ್ಲಿ ಯಶಸ್ಸು ಗಳಿಸಲು ಅಕ್ರಮ ಎಸಗುವುದು ಕೂಡ ಸಮಾಜದಲ್ಲಿ ಸಹಜವೆಂಬಂತಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಪೋಸ್ಟ್​ ಮಾಡಿದ್ದಾರೆ.

ವಿಡಿಯೋ

ರಾಜಕೀಯ ಪಕ್ಷಗಳ ಇಬ್ಬಂದಿ ತನ

ಪರೀಕ್ಷಾ ಪಾರದರ್ಶಕತೆ ತರುವುದು ತೀವ್ರ ಕಷ್ಟಕರವೆನಿಸಿ, ಅಕ್ರಮಗಳನ್ನು ತಡೆಯಲು ಸರ್ಕಾರಗಳು ಹೆಣಗಾಡುತ್ತವೆ. ಅದೇ ವಿಪಕ್ಷದಲ್ಲಿದ್ದಾಗ ಪರೀಕ್ಷಾ ಸೋರಿಕೆಯನ್ನೇ ಅಸ್ತ್ರವಾಗಿಸಿಕೊಂಡು ಆಡಳಿತ ಪಕ್ಷದ ವಿರುದ್ಧ ಬೃಹತ್ ಹೋರಾಟಗಳನ್ನು ರೂಪಿಸುತ್ತವೆ. ಪ್ರಿಯಾಂಕಾ ಗಾಂಧಿ ಅವರ ಈ ಪ್ರಾಮಾಣಿಕ ಒಪ್ಪಿಗೆಯು, ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಕೇವಲ ರಾಜಕೀಯ ಕೆಸರೆರಚಾಟದ ವಿಷಯವಾಗದೆ, ಪಕ್ಷಾತೀತವಾಗಿ ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಆಳವಾಗಿ ಸ್ವಚ್ಛಗೊಳಿಸಬೇಕಾದ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:01 am, Wed, 22 July 26

Source link

ದುಲೀಪ್ ಟ್ರೋಫಿಗೆ ಪಶ್ಚಿಮ ವಲಯ ತಂಡ ಪ್ರಕಟ – Kannada News | Ruturaj Gaikwad to lead West Zone in Duleep Trophy

ದೇಶೀಯ ಟೆಸ್ಟ್ ಟೂರ್ನಿ ದುಲೀಪ್ ಟ್ರೋಫಿಗಾಗಿ ವೆಸ್ಟ್ ಝೋನ್ (ಪಶ್ಚಿಮ ವಲಯ) ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದು, ಉಪನಾಯಕನಾಗಿ ಮುಂಬೈನ ಎಡಗೈ ಸ್ಪಿನ್ ಆಲ್-ರೌಂಡರ್ ಶಮ್ಸ್ ಮುಲಾನಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ತಂಡದಲ್ಲಿ ಸರ್ಫರಾಝ್, ಪೃಥ್ವಿ ಶಾ, ಶಾರ್ದೂಲ್ ಠಾಕೂರ್ ಸೇರಿದಂತೆ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಂಡಿದೆ.

ಪೃಥ್ವಿ ಶಾ ಕಂಬ್ಯಾಕ್, ಆಯುಷ್ ಔಟ್:

ಕಳೆದ ಸೀಸನ್‌ನಲ್ಲಿ ತಂಡದಿಂದ ಹೊರಗುಳಿದಿದ್ದ ಮುಂಬೈನ ಡ್ಯಾಶಿಂಗ್ ಓಪನರ್ ಪೃಥ್ವಿ ಶಾ, ರಣಜಿ ಟ್ರೋಫಿಯಲ್ಲಿ 537 ರನ್ ಗಳಿಸಿದ ಬಲದೊಂದಿಗೆ ವೆಸ್ಟ್ ಝೋನ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಭರ್ಜರಿ ಫಾರ್ಮ್‌ನಲ್ಲಿದ್ದ 19 ವರ್ಷದ ಯುವ ಪ್ರತಿಭೆ ಆಯುಷ್ ಮ್ಹಾತ್ರೆ ಅವರು ಮಣಿಕಟ್ಟಿನ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ.

ಗಾಯಕ್ವಾಡ್ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ?

ಮೂಲಗಳ ಪ್ರಕಾರ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವ ದೀರ್ಘಕಾಲೀನ ಗುರಿ ಹೊಂದಿರುವ ನಾಯಕ ರುತುರಾಜ್ ಗಾಯಕ್ವಾಡ್, ಈ ಬಾರಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಬದಲು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಭಾರತ ಟೆಸ್ಟ್ ತಂಡಕ್ಕೆ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಆಯ್ಕೆಯಾಗಲು ಪ್ಲ್ಯಾನ್ ರೂಪಿಸಿದ್ದಾರೆ.

ಬೆಂಗಳೂರಿನಲ್ಲಿ ಪಂದ್ಯಗಳು:

ಈ ಬಾರಿಯ ದುಲೀಪ್ ಟ್ರೋಫಿ ಟೂರ್ನಿಯು ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ಬೆಂಗಳೂರಿನ ಆಲೂರು ಹತ್ತಿರವಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಕ್ರೀಡಾಂಗಣದಲ್ಲಿ ನಡೆಯಲಿದೆ. ಆಗಸ್ಟ್ 23 ರಿಂದ 26 ರವರೆಗೆ ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಝೋನ್ ತಂಡವು ನಾರ್ತ್ ಝೋನ್ (ಉತ್ತರ ವಲಯ) ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ: ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್​: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ

ಪಶ್ಚಿಮ ವಲಯ ತಂಡ : ರುತುರಾಜ್ ಗಾಯಕ್‌ವಾಡ್ (ನಾಯಕ), ಶಮ್ಸ್ ಮುಲಾನಿ (ಉಪನಾಯಕ), ಶಾರ್ದೂಲ್ ಠಾಕೂರ್, ಸರ್ಫರಾಝ್ ಖಾನ್, ಮುಶೀರ್ ಖಾನ್, ತುಷಾರ್ ದೇಶಪಾಂಡೆ, ತನುಷ್ ಕೋಟ್ಯಾನ್, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್, ಜಯಮೀತ್ ಪಟೇಲ್, ಉರ್ವಿಲ್ ಪಟೇಲ್, ಸಿದ್ಧಾರ್ಥ್ ದೇಸಾಯಿ, ಅತಿತ್ ಶೇಠ್, ಪೃಥ್ವಿ ಶಾ, ಶಿವಾಲಿಕ್ ಶರ್ಮಾ, ಮುಖೇಶ್ ಚೌಧರಿ.

Source link

Kalasha Sthapana: ಯಾವುದೇ ಶುಭ ಕಾರ್ಯಗಳಲ್ಲಿ ಕಲಶ ಸ್ಥಾಪನೆ ಯಾಕೆ ಮುಖ್ಯ ಗೊತ್ತಾ? ಆಧ್ಯಾತ್ಮಿಕ ಮಹತ್ವ ಇಲ್ಲಿದೆ – Kannada News | Kalasha Sthapana: Significance and Rituals in Sanatana Dharma for Auspicious Events

ಸನಾತನ ಧರ್ಮದಲ್ಲಿ ಯಾವುದೇ ಪೂಜೆ, ಗೃಹಪ್ರವೇಶ, ಮದುವೆ, ಸತ್ಯನಾರಾಯಣ ವ್ರತ ಅಥವಾ ನವರಾತ್ರಿಯಂತಹ ಶುಭ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಕಲಶ ಸ್ಥಾಪನೆ ಮಾಡುವುದು ಅತ್ಯಂತ ಮುಖ್ಯವಾದ ಪದ್ಧತಿಯಾಗಿದೆ. ಕಲಶವಿಲ್ಲದೆ ಯಾವುದೇ ದೈವಿಕ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆಯಿದೆ. ಕಲಶವನ್ನು ಶುದ್ಧತೆ, ಮಂಗಳಕರತೆ, ಸಮೃದ್ಧಿ, ಸೃಷ್ಟಿ ಮತ್ತು ದೈವಿಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಯಾವುದೇ ಪೂಜಾ ಸಮಾರಂಭಗಳಲ್ಲಿ ಪ್ರಥಮ ಆದ್ಯತೆಯನ್ನು ಕಲಶಕ್ಕೆ ನೀಡಲಾಗುತ್ತದೆ.

ಹಿಂದೂ ಧರ್ಮದ ಪುರಾಣಗಳಲ್ಲಿ ಕಲಶಗಳ ಮಹತ್ವ:

ಹಿಂದೂ ಧರ್ಮದ ಪುರಾಣಗಳ ಪ್ರಕಾರ, ಕಲಶವನ್ನು ತ್ರಿಮೂರ್ತಿಗಳ ಸಾಕಾರ ರೂಪ ಹಾಗೂ ಅವರ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಕಲಶದ ಮುಂಭಾಗ ಅಥವಾ ಮುಖದ ಭಾಗದಲ್ಲಿ ಶ್ರೀಮನ್ನಾರಾಯಣ (ವಿಷ್ಣು), ಮಧ್ಯ ಭಾಗದಲ್ಲಿ ಪರಮಶಿವ ಹಾಗೂ ಕೆಳಭಾಗದಲ್ಲಿ ಬ್ರಹ್ಮದೇವ ನೆಲೆಸಿದ್ದಾರೆ ಎಂಬ ಭಾವನೆಯಿದೆ. ಹೀಗಾಗಿ, ಕಲಶವು ಸೃಷ್ಟಿ, ಸ್ಥಿತಿ ಮತ್ತು ಲಯಗಳ ಸಾರ್ವತ್ರಿಕ ಚಕ್ರವನ್ನು ಪ್ರತಿನಿಧಿಸುತ್ತದೆ. ಅಲ್ಲದೆ, ಕಲಶದಲ್ಲಿ ತುಂಬುವ ನೀರನ್ನು ಗಂಗಾ, ಯಮುನಾ, ಗೋದಾವರಿ, ಕೃಷ್ಣ ಹಾಗೂ ಕಾವೇರಿಯಂತಹ ಪವಿತ್ರ ನದಿಗಳ ಸಾಕಾರ ರೂಪವೆಂದು ಭಾವಿಸಿ ಪೂಜಿಸಲಾಗುತ್ತದೆ.

ಶಾಸ್ತ್ರಗಳು ಹೇಳುವುದೇನು ಗೊತ್ತಾ?

ಶಾಸ್ತ್ರಗಳ ಪ್ರಕಾರ, ಪೂಜಾ ಸ್ಥಳದಲ್ಲಿ ಕಲಶವನ್ನು ಸ್ಥಾಪಿಸುವುದರಿಂದ ಆ ಪರಿಸರವು ಸಂಪೂರ್ಣವಾಗಿ ಶುದ್ಧಗೊಂಡು ಧನಾತ್ಮಕ ಶಕ್ತಿಯು ಹರಡುತ್ತದೆ. ಕಲಶ ಪ್ರತಿಷ್ಠಾಪನೆಯ ನಂತರವೇ ಆಯಾ ದೇವತೆಗಳನ್ನು ಆಹ್ವಾನಿಸಿ ಮೂಲ ಪೂಜೆಯನ್ನು ಪ್ರಾರಂಭಿಸುವುದು ಸಂಪ್ರದಾಯ. ಈ ಪದ್ಧತಿಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಹೊರಹಾಕಿ, ದೈವಿಕ ಕೃಪೆಯನ್ನು ಆಕರ್ಷಿಸುತ್ತದೆ. ಆದ್ದರಿಂದ ಗೃಹಪ್ರವೇಶ, ಯಜ್ಞ-ಹೋಮಗಳು ಮತ್ತು ವ್ರತಗಳಂತಹ ಪ್ರತಿಯೊಂದು ಶುಭ ಕಾರ್ಯದಲ್ಲೂ ಕಲಶ ಸ್ಥಾಪನೆಯೇ ಮೊದಲ ಹೆಜ್ಜೆಯಾಗಿದೆ.

ಕಲಶವು ಕೇವಲ ಒಂದು ಪಾತ್ರೆಯಲ್ಲ, ಬದಲಿಗೆ ಅದರಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೂ ವಿಶೇಷ ಆಧ್ಯಾತ್ಮಿಕ ಅರ್ಥವಿದೆ. ಕಲಶದ ದುಂಡಗಿನ ಆಕಾರವು ಬ್ರಹ್ಮಾಂಡ, ಭೂಮಿ ಮತ್ತು ಪರಿಪೂರ್ಣತೆಯನ್ನು ಸಂಕೇತಿಸುತ್ತದೆ. ಅದರಲ್ಲಿರುವ ನೀರು ಜೀವ, ಸೃಷ್ಟಿ ಮತ್ತು ಶುದ್ಧತೆಯನ್ನು ಪ್ರತಿನಿಧಿಸಿದರೆ, ಮಾವಿನ ಎಲೆಗಳು ಪ್ರಗತಿ, ನೈಸರ್ಗಿಕ ಆರೋಗ್ಯ ಮತ್ತು ಫಲವತ್ತತೆಯ ಸಂಕೇತವಾಗಿವೆ. ಕೊನೆಯಲ್ಲಿ ಇಡುವ ತೆಂಗಿನಕಾಯಿಯನ್ನು ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಯ ಕೃಪೆ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಕಲಶ ಪ್ರತಿಷ್ಠಾಪಿಸುವ ಪ್ರಮುಖ ವಿಧಿವಿಧಾನ:

ಕಲಶವನ್ನು ಪ್ರತಿಷ್ಠಾಪಿಸುವಾಗ ಕೆಲವು ಪ್ರಮುಖ ವಿಧಿವಿಧಾನಗಳನ್ನು ಪಾಲಿಸಬೇಕಾಗುತ್ತದೆ. ಮೊದಲಿಗೆ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ಪವಿತ್ರಗೊಳಿಸಬೇಕು. ನಂತರ ಕಲಶದ ಪಾತ್ರೆಗೆ ಶುದ್ಧ ನೀರನ್ನು ತುಂಬಿ, ಸಾಧ್ಯವಿದ್ದಲ್ಲಿ ಗಂಗಾಜಲವನ್ನು ಸೇರಿಸಬೇಕು. ಅದರ ಮೇಲೆ ಐದು ಅಥವಾ ಅದಕ್ಕಿಂತ ಹೆಚ್ಚು ಮಾವಿನ ಎಲೆಗಳನ್ನು ಜೋಡಿಸಿ, ಶುದ್ಧವಾದ ತೆಂಗಿನಕಾಯಿಯನ್ನು ಇಡಬೇಕು. ತದನಂತರ ಸೂಕ್ತ ಮಂತ್ರಗಳ ಪಠಣೆಯೊಂದಿಗೆ ದೇವತೆಗಳನ್ನು ಆವಾಹನೆ ಮಾಡಿ ಪೂಜೆಯನ್ನು ನೆರವೇರಿಸಬೇಕು.

ಧಾರ್ಮಿಕ ನಂಬಿಕೆಗಳ ಪ್ರಕಾರ, ಕಲಶವನ್ನು ಶಾಸ್ತ್ರೋಕ್ತವಾಗಿ ಸ್ಥಾಪಿಸುವುದರಿಂದ ಮನೆಗೆ ಶಾಂತಿ, ಸಂತೋಷ ಮತ್ತು ಕಾರ್ಯಸಿದ್ದಿ ಲಭಿಸುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಹಾಗೂ ಐಕ್ಯತೆ ಹೆಚ್ಚಾಗುತ್ತದೆ ಮತ್ತು ಕಾರ್ಯಗಳಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಒಟ್ಟಾರೆಯಾಗಿ, ಕಲಶ ಸ್ಥಾಪನೆಯೊಂದಿಗೆ ಪ್ರಾರಂಭವಾಗುವ ಪ್ರತಿಯೊಂದು ಶುಭ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಂಡು ದೈವಿಕ ಆಶೀರ್ವಾದ ದೊರೆಯುತ್ತದೆ ಎಂಬುದು ಯುಗಯುಗಗಳಿಂದ ಮುಂದುವರಿದುಕೊಂಡು ಬಂದಿರುವ ಪವಿತ್ರ ನಂಬಿಕೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಪರೀಕ್ಷಾ ಅಕ್ರಮದ ತೀವ್ರ ಪ್ರತಿಭಟನೆ ನಡುವೆ ವೈರಲ್ ಆಯ್ತು ಅರವಿಂದ್ ಅವರ ಎರಡು ವರ್ಷಗಳ ಹಳೆಯ ಭವಿಷ್ಯವಾಣಿ – Kannada News | NEET Protests: Aravind’s Viral Prediction for Modi 3.0 Scams Comes True

ನವದೆಹಲಿ, ಜುಲೈ 22: ದೇಶಾದ್ಯಂತ ಈಗ ನೀಟ್ ಪರೀಕ್ಷೆ(NEET Exam) ಸೋರಿಕೆ, ವಿದ್ಯಾರ್ಥಿಗಳ ಆಕ್ರೋಶ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಬರೋಬ್ಬರಿ ಎರಡು ವರ್ಷಗಳ ಹಿಂದೆ ಮಾಡಲಾಗಿದ್ದ ಪೋಸ್ಟ್​ ಈಗ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

2024ರ ಜೂನ್ 8ರಂದು, ಅಂದರೆ ನರೇಂದ್ರ ಮೋದಿ ಅವರ 3.0 ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅರವಿಂದ್ ಎಂಬ ಎಕ್ಸ್​ ಬಳಕೆದಾರರು ಮೋದಿ ಆಡಳಿತಾವಧಿಯಲ್ಲಿ ದೇಶಾದ್ಯಂತ ನಡೆಯಬಹುದಾದ ಸರಣಿ ಪ್ರತಿಭಟನೆಗಳ ಬಗ್ಗೆ ಮುನ್ಸೂಚನೆ ನೀಡಿ ಪೋಸ್ಟ್​ ಒಂದನ್ನು ಮಾಡಿದ್ದರು.

ಅರವಿಂದ್ ಮಾಡಿದ್ದ ಎರಡು ವರ್ಷಗಳ ಹಳೆಯ ಪೋಸ್ಟ್​ನಲ್ಲೇನಿತ್ತು?

ಮೋದಿ 3.0 ಸರ್ಕಾರದ ಅವಧಿಯಲ್ಲಿ ನಡೆಯಲಿವೆ ಸಾಲು ಸಾಲು ಪ್ರತಿಭಟನೆಗಳು

ನೀಟ್ (NEET) ಪರೀಕ್ಷೆಗೆ ಸಂಬಂಧಿಸಿದ ಪ್ರತಿಭಟನೆಗಳು

ಐಎಂಎ (IMA) ವೈದ್ಯರ ಪ್ರತಿಭಟನೆಗಳು

ರೈತರ ಭಾರಿ ಆಂದೋಲನ

ಮುಸ್ಲಿಂ ಸಮುದಾಯದ ನೇತೃತ್ವದ ಪ್ರತಿಭಟನೆಗಳು

ವಿದೇಶಗಳಲ್ಲಿ ಖಾಲಿಸ್ತಾನಿ ಬೆಂಬಲಿಗರ ಪ್ರತಿಭಟನೆಗಳು

ಮತ್ತಷ್ಟು ಓದಿ:

ಸೋನಮ್ ವಾಂಗ್ಚುಕ್ 3 ವಾರಗಳ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಷರತ್ತು ವಿಧಿಸಿದ ಪತ್ನಿ

ಪೋಸ್ಟ್ ವೈರಲ್ ಆಗಲು ಪ್ರಸ್ತುತ ಕಾರಣವೇನು?

ಮೇ 3 ರಂದು ನಡೆದಿದ್ದ 2026 ರ ನೀಟ್ (NEET-UG) ಪರೀಕ್ಷೆಗೆ ಸುಮಾರು 22.7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಆದರೆ, ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅದಕ್ಕೆ ಹುಸಿ ಪ್ರಶ್ನೆಪತ್ರಿಕೆಗಳ ದಂಧೆ ಸಾಕ್ಷಿಯಾದ ಹಿನ್ನೆಲೆಯಲ್ಲಿ ಇಡೀ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಪ್ರಸ್ತುತ ಸಿಬಿಐ ತನಿಖೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ಮತ್ತು ಯುವಜನರು ಬೀದಿಗಿಳಿದು ನಡೆಸುತ್ತಿರುವ ಪ್ರತಿಭಟನೆಗಳು ಪೋಲಿಸ್ ಘರ್ಷಣೆಗೂ ಕಾರಣವಾಗಿವೆ.

ಪೋಸ್ಟ್​

ಅರವಿಂದ್ ಅವರು 2024 ರಲ್ಲೇ ಉಲ್ಲೇಖಿಸಿದಂತೆ ನೀಟ್ ವಿವಾದ, ರೈತರ ಭಾರಿ ‘ದೆಹಲಿ ಚಲೋ’ ಆಂದೋಲನ ಹಾಗೂ ವೈದ್ಯರ ಪ್ರತಿಭಟನೆಗಳು ಒಂದೊಂದಾಗಿ ನಿಜವಾಗುತ್ತಿರುವುದನ್ನು ಕಂಡು ಅನೇಕ ನೆಟ್ಟಿಗರು ಇವರ ಮುನ್ಸೂಚನೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಇಬ್ಬಗೆಯ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಪ್ರಸ್ತುತ ದೇಶದಲ್ಲಿ ಯುವಜನರ ಆಕ್ರೋಶ, ಪರೀಕ್ಷಾ ಪಾರದರ್ಶಕತೆ ಕೊರತೆ ಮತ್ತು ವೈದ್ಯರ ಮೇಲಿನ ಹಿಂಸಾಚಾರದ ವಿರುದ್ಧ ಧ್ವನಿ ಎತ್ತುತ್ತಿರುವ ಜನರು, ಈ ಭವಿಷ್ಯವಾಣಿಯು ರಾಜಕೀಯ ಹಾಗೂ ಸಾಂಸ್ಥಿಕ ವೈಫಲ್ಯಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದೆ ಎಂದು ಶ್ಲಾಘಿಸುತ್ತಿದ್ದಾರೆ.

ವಿಮರ್ಶಕರ ವಾದ: ಮತ್ತೊಂದೆಡೆ, ಈ ಭವಿಷ್ಯವಾಣಿಯನ್ನು ಸಾಮಾನ್ಯ ಪ್ರವೃತ್ತಿ ಎಂದಿರುವ ವಿಮರ್ಶಕರು, 2024 ರ ಕಾಲಘಟ್ಟದಲ್ಲೂ ನೀಟ್ ಅಕ್ರಮಗಳು, ರೈತರ ಸಮಸ್ಯೆಗಳು ಹಾಗೂ ವೈದ್ಯರ ಪ್ರತಿಭಟನೆಗಳು ಸಾಮಾನ್ಯವಾಗಿದ್ದವು. ಹೀಗಾಗಿ ಇದು ಯಾವುದೇ ದೈವಿಕ ಭವಿಷ್ಯವಲ್ಲ, ಬದಲಿಗೆ ಸನ್ನಿವೇಶದ ಸಹಜ ಊಹೆ ಅಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೂರನ್-ಕರನ್ ಸಿಡಿಲಬ್ಬರ: MI ಲಂಡನ್ ಶುಭಾರಂಭ – Kannada News | MI London vs Sunrisers Leeds, 1st Match Highlights

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ ಕ್ರಿಕೆಟ್ ಟೂರ್ನಿ ಶುರುವಾಗಿದೆ. ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಎಂಐ ಲಂಡನ್ ತಂಡವು ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದೆ. ಸನ್​ರೈಸರ್ಸ್ ಲೀಡ್ಸ್​ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಲಂಡನ್ ತಂಡದ ನಾಯಕ ಸ್ಯಾಮ್ ಕರನ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಲೀಡ್ಸ್ ತಂಡಕ್ಕೆ ಆರಂಭಿಕ ದಾಂಡಿಗ ಮಿಚೆಲ್ ಮಾರ್ಷ್ (41 ರನ್, 27 ಎಸೆತ) ಉತ್ತಮ ಆರಂಭ ಒದಗಿಸಿದ್ದರು. ಇನ್ನು ರಯಾನ್ ರಿಕೆಲ್ಟನ್ 25 ರನ್​ಗಳ ಕೊಡುಗೆ ನೀಡಿದರು. ಆದರೆ ಬಳಿಕ ಬಂದ ಸನ್​ರೈಸರ್ಸ್ ಲೀಡ್ಸ್ ತಂಡದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಲೀಡ್ಸ್ ತಂಡವು 99 ಎಸೆತಗಳಲ್ಲಿ 143 ರನ್​ಗಳಿಸಿ ಆಲೌಟ್ ಆಯಿತು.

ಎಂಐ ಲಂಡನ್ ಪರ ಅತ್ಯುತ್ತಮ ದಾಳಿ ಸಂಘಟಿಸಿದ ರಿಚರ್ಡ್ ಗ್ಲೀಸನ್ 19 ಎಸೆತಗಳಲ್ಲಿ ಕೇವಲ 25 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಇನ್ನು ಸ್ಯಾಮ್ ಕರನ್ 15 ಎಸೆತಗಳಲ್ಲಿ 27 ರನ್ ನೀಡಿ 2 ವಿಕೆಟ್ ಕಬಳಿಸಿದರು.

144 ರನ್​ಗಳ ಗುರಿ:

100 ಎಸೆತಗಳಲ್ಲಿ 144 ರನ್​ಗಳ ಗುರಿ ಪಡೆದ ಎಂಐ ಲಂಡನ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ವಿಲ್ ಜ್ಯಾಕ್ಸ್​ ಕೇವಲ 2 ರನ್​ಗಳಿಸಿ ಔಟಾದರೆ, ಜೇಮ್ಸ್ ವಿನ್ಸ್ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಜೇಸನ್ ರಾಯ್ (0) ಸೊನ್ನೆ ಸುತ್ತಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

ಈ ಹಂತದಲ್ಲಿ ಕಣಕ್ಕಿಳಿದ ಸ್ಯಾಮ್ ಕರನ್ ಹಾಗೂ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿದ ಈ ಜೋಡಿಯು ಸನ್​ರೈಸರ್ಸ್ ಲೀಡ್ಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು.

ಪರಿಣಾಮ ಸ್ಯಾಮ್ ಕರನ್ ಬ್ಯಾಟ್​ನಿಂದ 39 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 60 ರನ್ ಮೂಡಿಬಂತು. ಮತ್ತೊಂದೆಡೆ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ನಿಕೋಲಸ್ ಪೂರನ್ 22 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 58 ರನ್ ಚಚ್ಚಿದರು. ಈ ಮೂಲಕ ಎಂಐ ಲಂಡನ್ ತಂಡವು 84 ಎಸೆತಗಳಲ್ಲಿ 144 ರನ್​ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಎಂಐ ಲಂಡನ್ ಪ್ಲೇಯಿಂಗ್ 11: ಜೇಮ್ಸ್ ವಿನ್ಸ್ , ವಿಲ್ ಜ್ಯಾಕ್ಸ್ , ಜೇಸನ್ ರಾಯ್ , ಸ್ಯಾಮ್ ಕರನ್ (ನಾಯಕ) , ನಿಕೋಲಸ್ ಪೂರನ್ (ವಿಕೆಟ್ ಕೀಪರ್) ಜೋಶ್ ಫಿಲಿಪ್ , ಟಾಮ್ ಕರನ್ , ರಶೀದ್ ಖಾನ್ , ಟ್ರೆಂಟ್ ಬೌಲ್ಟ್ , ರಿಚರ್ಡ್ ಗ್ಲೀಸನ್ , ನಾಥನ್ ಸೌಟರ್.

ಇದನ್ನೂ ಓದಿ: ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್​: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ

ಸನ್​ರೈಸರ್ಸ್​ ಲೀಡ್ಸ್​ ಪ್ಲೇಯಿಂಗ್ 11: ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್ , ಝಾಕ್ ಕ್ರಾಲಿ (ನಾಯಕ) ,
ಹ್ಯಾರಿ ಬ್ರೂಕ್ , ಡಾನ್ ಲಾರೆನ್ಸ್ , ಟಾಮ್ ಅಲ್ಸೋಪ್ , ಬೆನ್ನಿ ಹೋವೆಲ್ , ಬ್ರೈಡನ್ ಕಾರ್ಸ್ , ಮ್ಯಾಥ್ಯೂ ಪಾಟ್ಸ್ , ನಾಥನ್ ಎಲ್ಲಿಸ್ , ಅಬ್ರಾರ್ ಅಹ್ಮದ್.

Source link

145 ವರ್ಷ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕೆಗೆ ನೆರವಾಗ್ತಿದೆ ಶಿಕ್ಷಕರೇ ಅಭಿವೃದ್ಧಿಪಡಿಸಿದ ಎಐ ವೆಬ್​ಸೈಟ್! – Kannada News | Karnataka’s 145 Year Old Government School Uses AI Website for Smart Learning, Teachers Develop Digital Education Platform

ಶಿಕ್ಷಕರೇ ರೂಪಿಸಿರುವ ಎಐ ವೆಬ್​ಸೈಟ್​ನ ಮುಖಪುಟ

ಬೆಂಗಳೂರು, ಜುಲೈ 22: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯದಲ್ಲಿರುವ 145 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಕೇವಲ 30ಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಬೋಧನೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಶಿಕ್ಷಕರೇ ಎಐ ಆಧಾರಿತ ಶಿಕ್ಷಣ ವೆಬ್‌ಸೈಟ್ ಅಭಿವೃದ್ಧಿಪಡಿಸಿದ್ದಾರೆ. ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಈ ರೀತಿಯ ಎಐ ಆಧಾರಿತ ಕಲಿಕಾ ವೇದಿಕೆ ರೂಪುಗೊಂಡಿರುವುದು ಇದೇ ಮೊದಲು ಎನ್ನಲಾಗಿದೆ.

ಶಾಲೆಯ ಶಿಕ್ಷಕರಾದ ಚಂದ್ರಕಾಂತ್ ಗೌಡ ಹಾಗೂ ಜೋಸೆಫಿನ್ ಜಿ. ಲಿಮಾ ಅವರು ಸುಮಾರು ಒಂದೂವರೆ ವರ್ಷದ ಪರಿಶ್ರಮದಿಂದ ಈ ವೆಬ್‌ಸೈಟ್ ರೂಪಿಸಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳಿಗೂ ಉಪಯುಕ್ತವಾಗುವಂತೆ ಈ ವೇದಿಕೆಯಲ್ಲಿ ಪಠ್ಯಾಧಾರಿತ ವಿಡಿಯೊಗಳು, ಧ್ವನಿ-ದೃಶ್ಯ (ಆಡಿಯೋ-ವಿಜುವಲ್) ವಿಷಯಗಳು ಹಾಗೂ ಸಂವಾದಾತ್ಮಕ ಕಲಿಕಾ ಸಂಪನ್ಮೂಲಗಳನ್ನು ಅಳವಡಿಸಲಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ

ಪೋಷಕರಿಗೂ ನೆರವಾಗುತ್ತಿದೆ ಎಐ ವೆಬ್​ಸೈಟ್

ಈ ವೆಬ್‌ಸೈಟ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪೋಷಕರಿಗೂ ಸಹಾಯಕವಾಗಿದೆ. ಮಕ್ಕಳು ಏನು ಕಲಿಯುತ್ತಿದ್ದಾರೆ ಎಂಬುದನ್ನು ಪೋಷಕರು ತಿಳಿದುಕೊಳ್ಳುವುದರ ಜೊತೆಗೆ ಅವರ ಕಲಿಕೆಯ ಮಟ್ಟವನ್ನು ಪರೀಕ್ಷಿಸುವ ಅವಕಾಶವೂ ಇದರಿಂದ ಸಿಗುತ್ತದೆ ಎಂದು ಶಾಲೆಯ ಮುಖ್ಯಶಿಕ್ಷಕಿ ಜ್ಯೋತಿ ಬಿ. ಗುಣಗಿ ಹೇಳಿರುವುದಾಗಿಯೂ ವರದಿ ಉಲ್ಲೇಖಿಸಿದೆ. ಈ ಲಿಂಕ್​​ನಲ್ಲಿ (https://chandugokarna-bit.github.io/gpt-teachers-resources/) ನೀವೂ ವೆಬ್​ಸೈಟ್ ನೋಡಬಹುದು.

120ಕ್ಕೂ ಹೆಚ್ಚು ಶೈಕ್ಷಣಿಕ ವಿಡಿಯೋ ಲಭ್ಯ

ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ನಾಯಕ್ ಈ ವೆಬ್‌ಸೈಟ್‌ಗೆ ಚಾಲನೆ ನೀಡಿದ್ದು, ಇದರಲ್ಲಿ 6ರಿಂದ 8ನೇ ತರಗತಿ ಪಠ್ಯಕ್ರಮಕ್ಕೆ ಸಂಬಂಧಿಸಿದ 120ಕ್ಕೂ ಹೆಚ್ಚು ಶೈಕ್ಷಣಿಕ ವಿಡಿಯೊಗಳು ಲಭ್ಯವಿವೆ.

ಪುರಾತತ್ವ ತಾಣಗಳ ವರ್ಚುವಲ್ ಪ್ರವಾಸವೂ ಇದೆ!

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET) ವತಿಯಿಂದ ಇ-ಸಂಪನ್ಮೂಲ ತರಬೇತಿ ಪಡೆದಿದ್ದ ಶಿಕ್ಷಕರು, ಸಮಾಜ ವಿಜ್ಞಾನ, ಗಣಿತ, ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಸಂವಾದಾತ್ಮಕ ಚಟುವಟಿಕೆಗಳು ಹಾಗೂ ವಿಜ್ಞಾನ ವಿಷಯಗಳನ್ನು ಈ ವೆಬ್‌ಸೈಟ್‌ನಲ್ಲಿ ಸೇರಿಸಿದ್ದಾರೆ. ವಿಜಯನಗರ ಹಾಗೂ ಕದಂಬರಂತಹ ಐತಿಹಾಸಿಕ ಸಾಮ್ರಾಜ್ಯಗಳ ಕುರಿತ ವಿವರಣೆಗಳು, ಹಂಪಿ, ಹಳೇಬೀಡು ಸೇರಿದಂತೆ ಪುರಾತತ್ವ ತಾಣಗಳ ವರ್ಚುವಲ್ ಪ್ರವಾಸವೂ ಇದರ ವಿಶೇಷತೆಯಾಗಿದೆ.

ಐತಿಹಾಸಿಕ ವ್ಯಕ್ತಿಗಳೇ ತಮ್ಮ ಬಗ್ಗೆ ಪರಿಚಯಿಸಿಕೊಳ್ಳುತ್ತಾರೆ!

ಎಐ ತಂತ್ರಜ್ಞಾನದ ನೆರವಿನಿಂದ ಐತಿಹಾಸಿಕ ವ್ಯಕ್ತಿಗಳೇ ತಮ್ಮ ಬಗ್ಗೆ ಪರಿಚಯಿಸಿಕೊಳ್ಳುವ ಮಾದರಿಯ ವಿಡಿಯೊಗಳನ್ನು ಸಿದ್ಧಪಡಿಸಲಾಗಿದೆ. ಭಾರತದ ಪ್ರಧಾನಿಗಳ 3D ಮಾಹಿತಿ, ಭಾರತೀಯ ಹಬ್ಬಗಳು, ಗ್ರಾಮೀಣ ಜೀವನ, ‘ಸಂಭ್ರಮ ಶನಿವಾರ’, ‘ನೋ ಬ್ಯಾಗ್ ಡೇ’ ಚಟುವಟಿಕೆಗಳು ಹಾಗೂ ಮಕ್ಕಳಿಗಾಗಿ ‘ಪುಟ್ಟಜ್ಜಿ-ಪುಟ್ಟಜ್ಜಿ ಕಥೆ’ಗಳಂತಹ ವಿಶೇಷ ಅಂಶಗಳನ್ನೂ ವೆಬ್‌ಸೈಟ್ ಒಳಗೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಒಡೆಸ್ಸಿ’ ಅಬ್ಬರ; ಈ ಐಕಾನಿಕ್ ಥಿಯೇಟರ್‌ನಲ್ಲಿ ಎರಡು ತಿಂಗಳ ಶೋಗಳು ಹೌಸ್​​ಫುಲ್ – Kannada News | Christopher Nolan The Odyssey Sparks Global Frenzy: BFI IMAX Sold Out Until September

ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಸಿನಿಮಾಗಳು ವಿಶ್ವಾದ್ಯಂತ ಗಮನ ಸೆಳೆಯುತ್ತವೆ. ಅವರ ಸಿನಿಮಾಗೆ ಕಾಯುವಿಕೆ ದೊಡ್ಡದಾಗಿಯೇ ಇರುತ್ತದೆ. ಈಗ ಅವರ ನಿರ್ದೇಶನದ ‘ದಿ ಒಡೆಸ್ಸಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಬೇಟೆ ಮುಂದುವರಿಸಿದೆ. ಈ ಸಿನಿಮಾ ಭಾರತದಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈಗ ಸಿನಿಮಾ ಒಂದು ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದೆ.

ಲಂಡನ್ ಥಿಯೇಟರ್

ಲಂಡನ್‌ನ ಪ್ರತಿಷ್ಠಿತ ಬಿಎಫ್‌ಐ ಐಮ್ಯಾಕ್ಸ್ (BFI IMAX – 70mm) ಚಿತ್ರಮಂದಿರದಲ್ಲಿ ‘ದಿ ಒಡೆಸ್ಸಿ’ ಸಿನಿಮಾದ ಕ್ರೇಜ್ ಹೊಸ ಇತಿಹಾಸ ಸೃಷ್ಟಿಸಿದೆ. ಈ ಐಕಾನಿಕ್ ಥಿಯೇಟರ್‌ನಲ್ಲಿ ಮುಂಬರುವ ಸೆಪ್ಟೆಂಬರ್ 10ರವರೆಗಿನ ಎಲ್ಲಾ ಶೋಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ. ಅಂದರೆ ಮುಂದಿನ ಸುಮಾರು ಎರಡು ತಿಂಗಳ ಕಾಲ ಈ ಚಿತ್ರಮಂದಿರದಲ್ಲಿ ಒಂದು ಸೀಟು ಕೂಡ ಖಾಲಿ ಇಲ್ಲದಂತೆ ಪ್ರೇಕ್ಷಕರು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದಾರೆ. ಇದು ನೋಲನ್ ಅವರ ಸಿನಿಮಾಗೆ ಇರುವ ಜಾಗತಿಕ ಮಟ್ಟದ ಅಭೂತಪೂರ್ವ ಕ್ರೇಜ್‌ಗೆ ಸಾಕ್ಷಿಯಾಗಿದೆ.

ಕ್ರಿಸ್ಟೋಫರ್ ನೋಲನ್ ಅವರು ಯಾವ ರೀತಿ ಪ್ರೇಕ್ಷಕರಿಗೆ ಸಿನಿಮಾ ತೋರಿಸಬೇಕು ಎಂದು ಬಯಸಿದ್ದರೋ, ಅದೇ ಗುಣಮಟ್ಟದಲ್ಲಿ ಪ್ರದರ್ಶಿಸುವ ವಿಶ್ವದ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಈ ಬಿಎಫ್‌ಐ ಐಮ್ಯಾಕ್ಸ್ ಕೂಡ ಒಂದು. ಹೀಗಾಗಿಯೇ ಬೇರೆ ಬೇರೆ ದೇಶಗಳಿಂದಲೂ ಪ್ರೇಕ್ಷಕರು ಲಂಡನ್‌ಗೆ ಬಂದು ಈ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಈ ಥಿಯೇಟರ್ ಇತಿಹಾಸದಲ್ಲೇ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂಬ ಹೆಗ್ಗಳಿಕೆಯನ್ನೂ ‘ದಿ ಒಡೆಸ್ಸಿ’ ಪಡೆದುಕೊಂಡಿದ್ದು, ಈ ಹಿಂದೆ ಇದ್ದ ‘ಸ್ಟಾರ್ ವಾರ್ಸ್: ದಿ ಲಾಸ್ಟ್ ಜೆಡಿ’ ಚಿತ್ರದ ದಾಖಲೆಯನ್ನು ಮುರಿದಿದೆ.

‘ದಿ ಒಡೆಸ್ಸಿ’ ಸಿನಿಮಾ ನೋಲನ್ ವೃತ್ತಿಜೀವನದಲ್ಲೇ ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಓಪನಿಂಗ್ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ವಾರಾಂತ್ಯದಲ್ಲೇ ಬರೋಬ್ಬರಿ 264 ಮಿಲಿಯನ್ ಡಾಲರ್ ಗಳಿಕೆ ಮಾಡುವ ಮೂಲಕ ಈ ಸಿನಿಮಾ ನೋಲನ್ ಅವರದ್ದೇ ಆದ ‘ದಿ ಡಾರ್ಕ್ ನೈಟ್ ರೈಸಸ್’ ಚಿತ್ರದ ದಾಖಲೆಯನ್ನು ಬದಿಗೆ ತಳ್ಳಿದೆ.

ಇದನ್ನೂ ಓದಿ: ‘ದಿ ಒಡೆಸ್ಸಿ’ ಪ್ರೀಮಿಯರ್ ಶೋಗಾಗಿ ಭಾರತಕ್ಕೆ ಬರ್ತಾರೆ ಕ್ರಿಸ್ಟೋಫರ್ ನೋಲನ್

ಭಾರತದಲ್ಲಿ ‘ದಿ ಒಡೆಸ್ಸಿ’ ಕಲೆಕ್ಷನ್ ವಿವರ

ಭಾರತದಲ್ಲೂ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಒಟ್ಟು 597 ಶೋಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ 5ನೇ ದಿನವಾದ (ಮೊದಲ ಮಂಗಳವಾರ) ₹8.35 ಕೋಟಿ ಗಳಿಕೆ ಮಾಡಿದ್ದು, ಚಿತ್ರಮಂದಿರಗಳಲ್ಲಿ ಶೇಕಡಾ 40.8 ರಷ್ಟು ಆಕ್ಯುಪೆನ್ಸಿ ಇತ್ತು. ಈ ಮೂಲಕ 5 ದಿನಗಳ ಅಂತ್ಯಕ್ಕೆ ಭಾರತದಲ್ಲಿ ಒಟ್ಟು 93.02 ಕೋಟಿ ಗ್ರಾಸ್ ಕಲೆಕ್ಷನ್ ಹಾಗೂ 77.98 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಭಾರತದ ಅಂತಿಮ ಕಲೆಕ್ಷನ್ ವರದಿ ಇನ್ನಷ್ಟೇ ಬರಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version