ನವದೆಹಲಿ, ಜುಲೈ 22: ದೆಹಲಿಯ ಜಂತರ್ ಮಂತರ್ನಲ್ಲಿ ತಡರಾತ್ರಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆ ನಡೆದಿದೆ. ಮಧ್ಯರಾತ್ರಿಯವರೆಗೂ ಮುಂದುವರೆದ ಈ ಜಟಾಪಟಿಯಲ್ಲಿ, ಪ್ರತಿಭಟನಾ ನಿರತ ಯುವಕರು ಆರ್ಎಎಫ್ ಸಿಬ್ಬಂದಿಯನ್ನೇ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ.. ಕೆಲವರು ಆರ್ಎಎಫ್ ಸಿಬ್ಬಂದಿಯನ್ನು ನೆಲಕ್ಕೆ ಕೆಡವಿ ಕಾಲಿನಲ್ಲಿ ಒದ್ದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ಜಂತರ್ ಮಂತರ್ನಲ್ಲಿ ರಾತ್ರಿಯಿಡೀ ಕೋಲಾಹಲಕ್ಕೆ ಕಾರಣವಾಯಿತು.
ಸಂಸದ್ ಚಲೋ ಪ್ರತಿಭಟನೆಯ ಭಾಗವಾಗಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಸೋನಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ ಮತ್ತು ನೀಟ್ ಪರೀಕ್ಷಾ ಪೇಪರ್ ಸೋರಿಕೆ ಹಗರಣದಂತಹ ವಿಷಯಗಳ ಕುರಿತು ಪ್ರತಿಭಟನಾಕಾರರು ಧ್ವನಿ ಎತ್ತುತ್ತಿದ್ದರು. ಘರ್ಷಣೆ ವಿಕೋಪಕ್ಕೆ ತಿರುಗುತ್ತಿದ್ದಂತೆ, ಭದ್ರತಾ ಪಡೆ ಕೂಡಾ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದನ್ನು ತಡೆಯಲು ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಸ್ಥಳಕ್ಕೆ ನಿಯೋಜಿಸಲಾಯಿತು. ಈ ಘಟನೆ ಜಂತರ್ ಮಂತರ್ನಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿತು.
ಬಾಲಿವುಡ್ (Bollywood) ಮತ್ತು ದಕ್ಷಿಣ ಭಾರತದ ಚಿತ್ರರಂಗದ ನಡುವೆ ಹೋಲಿಕೆ ಇಂದಿನದೇನಲ್ಲ. ಸೌತ್ ಸಿನಿಮಾಗಳ ಮೇಕಿಂಗ್, ಕಥೆ ಮತ್ತು ನಿರ್ದೇಶನದ ಶಿಸ್ತನ್ನು ನೋಡಿ ಬಾಲಿವುಡ್ನವರು ಕಲಿಯಬೇಕಾದದ್ದು ತುಂಬಾನೇ ಇದೆ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿರುತ್ತಾರೆ. ಇದೀಗ ಇದೇ ವಿಷಯವಾಗಿ ಸೌತ್ ಹಾಗೂ ನಾರ್ತ್ ಎರಡೂ ಕಡೆ ನಟಿಸಿ ಸೈ ಎನಿಸಿಕೊಂಡಿರುವ ಸ್ಟಾರ್ ನಟಿ ಕಾಜಲ್ ಅಗರ್ವಾಲ್ ಮುಕ್ತವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅವರ ಕೆಟ್ಟ ಅಭ್ಯಾಸವೊಂದನ್ನು ರಿವೀಲ್ ಮಾಡಿದ್ದಾರೆ.
ಬಾಲಿವುಡ್ಗಿಂತ ಸೌತ್ ಇಂಡಸ್ಟ್ರಿನೇ ಬೆಸ್ಟ್ ಅಂದಿದ್ದೇಕೆ ಕಾಜಲ್?
ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾಜಲ್ ಅಗರ್ವಾಲ್, ಹಿಂದಿ ಚಿತ್ರರಂಗದಲ್ಲಿ ಎಲ್ಲಿ ಎಡವುತ್ತಿದ್ದಾರೆ ಎಂಬುದನ್ನು ವಿವರವಾಗಿ ಹಂಚಿಕೊಂಡಿದ್ದಾರೆ.
‘ಮೊದಲನೆಯದಾಗಿ ಬಾಲಿವುಡ್ನವರು ದಕ್ಷಿಣ ಭಾರತದ ಚಿತ್ರರಂಗದಿಂದ ಸಮಯಪಾಲನೆ ಕಲಿಯಬೇಕು. ಹಿಂದಿ ಚಿತ್ರರಂಗದಲ್ಲಿ ಸರಿಯಾದ ಸಮಯ ಪ್ರಜ್ಞೆಯೇ ಇರುವುದಿಲ್ಲ. ಆದರೆ ಸೌತ್ನಲ್ಲಿ ಪ್ರತಿಯೊಂದೂ ಸಮಯಕ್ಕೆ ಸರಿಯಾಗಿ ನಡೆಯುತ್ತದೆ. ನಾನು ಕೆಲಸದ ವಿಷಯದಲ್ಲಿ ಶಿಸ್ತು ಮತ್ತು ಸಮಯಪಾಲನೆಯನ್ನು ಇಷ್ಟಪಡುತ್ತೇನೆ. ಆದರೆ ಬಾಲಿವುಡ್ನಲ್ಲಿ ಇದು ಕಾಣಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖಾನ್ಗಾಗಿ ಸೆಟ್ನಲ್ಲೇ ಜಿಮ್ ಮಾಡ್ತಿದ್ದೆ
ಯಾವುದಾದರೂ ನಟನಿಗಾಗಿ ನೀವು ಶೂಟಿಂಗ್ ಸೆಟ್ನಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿ ಬಂದಿತ್ತೇ? ಎಂಬ ಪ್ರಶ್ನೆಗೆ ಕಾಜಲ್ ನೇರವಾಗಿ ಸಲ್ಮಾನ್ ಖಾನ್ ಹೆಸರನ್ನು ಹೇಳಿದ್ದಾರೆ.
‘ಸಲ್ಮಾನ್ ಖಾನ್ ಶೂಟಿಂಗ್ಗೆ ಬರುವುದು ತಡವಾಗುತ್ತಿತ್ತು. ಅವರು ಮಧ್ಯಾಹ್ನ ಅಥವಾ ಸಂಜೆ ಸೆಟ್ಗೆ ಬರುತ್ತಿದ್ದರು. ಸೌತ್ನ ಶಿಸ್ತು ಮತ್ತು ಸಮಯಪಾಲನೆಗೆ ಒಗ್ಗಿಕೊಂಡಿದ್ದ ನನಗೆ ಇದು ತುಂಬಾ ಆಶ್ಚರ್ಯ ತಂದಿತ್ತು. ಅವರು ಬರುವವರೆಗೂ ಕಾಯಬೇಕಿದ್ದರಿಂದ, ನಾನು ಶೂಟಿಂಗ್ ಸೆಟ್ನಲ್ಲೇ ಜಿಮ್ ಮಾಡಿಕೊಂಡು ಸಮಯ ಕಳೆಯುತ್ತಿದ್ದೆ’ ಎಂದು ಕಾಜಲ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇದೇ ವೇಳೆ, ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ನಾಯಕಿಯರಿಗೂ ಪ್ರಾಮುಖ್ಯತೆ ಇರುವ ಮತ್ತು ನಟಿಸಲು ಹೆಚ್ಚಿನ ಅವಕಾಶವಿರುವ ಗಟ್ಟಿ ಪಾತ್ರಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಗಂಟೆಗಟ್ಟಲೆ ಓದಿದರೂ ಪರೀಕ್ಷೆಯಲ್ಲಿ ನೆನಪಾಗದಿರುವುದು, ಆಫೀಸ್ ಕೆಲಸದಲ್ಲಿ ಪ್ರಮುಖ ಮಾಹಿತಿ ಮರೆಯುವುದು ಹಾಗೂ ಏಕಾಗ್ರತೆಯ ಕೊರತೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆಧುನಿಕ ಜೀವನಶೈಲಿ ಮತ್ತು ಒತ್ತಡವೇ ಇದಕ್ಕೆ ಪ್ರಮುಖ ಕಾರಣ. ಇಂತಹ ಸಮಯದಲ್ಲಿ ಸನಾತನ ಸಂಪ್ರದಾಯದಲ್ಲಿ ಜ್ಞಾನ, ಸ್ಮರಣಶಕ್ತಿ ಮತ್ತು ಬುದ್ಧಿವಂತಿಕೆಯ ಸಂಕೇತವಾದ ‘ಶ್ರೀ ಲಕ್ಷ್ಮಿ ಹಯಗ್ರೀವ ಸ್ವಾಮಿ’ ಆರಾಧನೆಗೆ ವಿಶೇಷ ಮಹತ್ವವಿದೆ.
ಹಯಗ್ರೀವ ಅವತಾರದ ಹಿನ್ನೆಲೆ:
ಪುರಾಣಗಳ ಪ್ರಕಾರ, ರಾಕ್ಷಸರು ವೇದಗಳನ್ನು ಕದ್ದು ಜಗತ್ತನ್ನು ಅಜ್ಞಾನಕ್ಕೆ ತಳ್ಳಿದಾಗ, ಶ್ರೀಮನ್ನಾರಾಯಣನು ಕುದುರೆಯ ಮುಖ ಮತ್ತು ಮಾನವ ದೇಹದ ‘ಹಯಗ್ರೀವ’ ರೂಪ ತಾಳಿ ರಾಕ್ಷಸರನ್ನು ಸಂಹರಿಸಿ ವೇದಗಳನ್ನು ಮರಳಿ ತಂದನು. ನಂತರ ಲಕ್ಷ್ಮಿ ದೇವಿಯು ಅವನನ್ನು ಸಮಾಧಾನಪಡಿಸಿದಳು. ಅಂದಿನಿಂದ ಜ್ಞಾನ ಮತ್ತು ಐಶ್ವರ್ಯವನ್ನು ಕರುಣಿಸುವ ‘ಶ್ರೀ ಲಕ್ಷ್ಮಿ ಹಯಗ್ರೀವ’ನನ್ನು ಪೂಜಿಸಲಾಗುತ್ತದೆ.
ಗುರುವಾರದ ಪೂಜಾ ವಿಧಾನ:
ಹಯಗ್ರೀವ ದೇವರ ಆರಾಧನೆಗೆ ಗುರುವಾರ ಅತ್ಯಂತ ಶುಭ ದಿನ. ಬೆಳಿಗ್ಗೆ ಸ್ನಾನ ಮಾಡಿ, ದೀಪ ಹಚ್ಚಿ, ಹಳದಿ ಅಥವಾ ಬಿಳಿ ಹೂವುಗಳಿಂದ ಪೂಜಿಸಬೇಕು. ಪುಸ್ತಕಗಳನ್ನು ಸ್ವಾಮಿಯ ಮುಂದಿಟ್ಟು ಆಶೀರ್ವಾದ ಪಡೆಯುವುದು ಶುಭ. ಏಲಕ್ಕಿ ಹಾರ ಅರ್ಪಿಸುವುದು ಹಾಗೂ ಸಿಹಿ ನೈವೇದ್ಯ ನೀಡುವುದು ವಿಶೇಷ ಫಲ ನೀಡುತ್ತದೆ.
ಬೆಂಗಳೂರು, ಜುಲೈ 22: ಮೆಟ್ರೋ ಸಿಟಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ರೂಪ ನೀಡಲು ಮತ್ತು ಟ್ರಾಫಿಕ್ ಸಮಸ್ಯೆಯಿಂದ ಜನರನ್ನು ಮುಕ್ತರನ್ನಾಗಿಸಲು ರೈಲ್ವೆ ಇಲಾಖೆ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ವರೆಗೆ ಈಗಾಗಲೇ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಫ್ಲೈ ಓವರ್ ಮಾದರಿಯಲ್ಲೇ, ಇದೀಗ ಬೆಂಗಳೂರು ಉಪನಗರ ರೈಲು ಯೋಜನೆಯಿಂದಲೂ (BSRP) ಡಬಲ್ ಡೆಕ್ಕರ್ ಕಾಮಗಾರಿ ಆರಂಭಿಸಲು ಯೋಜನೆ ರೂಪಿಸಲಾಗಿದೆ.
199 ಕೋಟಿ ರೂ. ವೆಚ್ಚದಲ್ಲಿ 1.2 ಕಿ.ಮೀ ಉದ್ದದ ಕಾರಿಡಾರ್
ಸಬ್ ಅರ್ಬನ್ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ‘ಕೆ-ರೈಡ್’ (K-RIDE) ಸಂಸ್ಥೆಯು ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ಸಂಪರ್ಕಿಸುವ ‘ಮಲ್ಲಿಗೆ’ (ಕಾರಿಡಾರ್-2) ಮಾರ್ಗದಲ್ಲಿ ಈ ವಿಶಿಷ್ಟ ಯೋಜನೆಯನ್ನು ಜಾರಿಗೆ ತರುತ್ತಿದೆ. ನಗರದ ಮತ್ತಿಕೆರೆಯ ಶ್ಯಾಮ್ ಪ್ರಸಾದ್ ಮುಖರ್ಜಿ ಮೇಲ್ಸೇತುವೆ ರಸ್ತೆ ಭಾಗದಲ್ಲಿ ಸುಮಾರು 1.2 ಕಿಲೋಮೀಟರ್ ವಿಸ್ತೀರ್ಣದಲ್ಲಿ ₹199 ಕೋಟಿ ವೆಚ್ಚದಲ್ಲಿ ಈ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣವಾಗಲಿದೆ.
ಕೆಳಭಾಗದಲ್ಲಿ ಸಾಮಾನ್ಯ ರಸ್ತೆ ಸಂಚಾರ, ಮೊದಲ ಹಂತದಲ್ಲಿ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಮತ್ತು ಎರಡನೇ ಹಂದಲ್ಲಿ ಸಬ್ ಅರ್ಬನ್ ರೈಲುಗಳ ಸಂಚಾರಕ್ಕಾಗಿ ಎಲಿವೇಟೆಡ್ ಕಾರಿಡಾರ್ ಸೇರಿ ತಂತ್ರಜ್ಞಾನ ಆಧಾರಿತ ಫ್ಲೈ ಓವರ್ನಲ್ಲಿ 3 ಹಂತದ ಸಂಚಾರ ವ್ಯವಸ್ಥೆ ಇರಲಿದೆ.
ಪ್ರಮುಖ ನಿಲ್ದಾಣಗಳು
ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗಿನ ಈ ‘ಮಲ್ಲಿಗೆ’ ಮಾರ್ಗವು ಒಟ್ಟು 24.86 ಕಿಲೋಮೀಟರ್ ಉದ್ದವಿದ್ದು, ಮಾರ್ಗದುದ್ದಕ್ಕೂ ಚಿಕ್ಕಬಾಣಾವರ, ಮ್ಯಾದರಹಳ್ಳಿ, ಶೆಟ್ಟಿಹಳ್ಳಿ, ಜಾಲಹಳ್ಳಿ, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ಕನಕ ನಗರ, ನಾಗವಾರ, ಕಾವೇರಿ ನಗರ, ಬಾಣಸವಾಡಿ, ಸೇವಾ ನಗರ, ಕಸ್ತೂರಿ ನಗರ ಹಾಗೂ ಬೈಯಪ್ಪನಹಳ್ಳಿ ಸೇರಿದಂತೆ 14 ಪ್ರಮುಖ ನಿಲ್ದಾಣಗಳನ್ನು ಹೊಂದಿರಲಿದೆ.
ಸಾರ್ವಜನಿಕರು ಹೇಳುವುದೇನು?
ಪ್ರತಿದಿನ ಬೆಂಗಳೂರು ನಗರಕ್ಕೆ ಸುಮಾರು 3,000ಕ್ಕೂ ಹೆಚ್ಚು ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ. ಇದರಿಂದಾಗಿ ನಗರದಲ್ಲಿ ಎಷ್ಟೇ ಮೇಲ್ಸೇತುವೆಗಳನ್ನು ನಿರ್ಮಿಸಿದರೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಮತ್ತು ವಾಹನ ಸವಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಯಶವಂತಪುರ ಹಾಗೂ ಮತ್ತಿಕೆರೆ ಭಾಗದಲ್ಲಿ ಪ್ರತಿದಿನ ಉಂಟಾಗುವ ತೀವ್ರ ಟ್ರಾಫಿಕ್ ಸಮಸ್ಯೆಗೆ ಈ ಡಬಲ್ ಡೆಕ್ಕರ್ ಫ್ಲೈ ಓವರ್ ಮುಕ್ತಿ ನೀಡಲಿದೆಯೇ ಹಾಗೂ ಸಾರ್ವಜನಿಕ ಸಾರಿಗೆಗೆ ಹೊಸ ವೇಗ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಂಗ್ಲೆಂಡ್ ತಂಡದ ಉದಯೋನ್ಮುಖ ಆಲ್ರೌಂಡರ್ ಜೇಕಬ್ ಬೆಥೆಲ್ ಬಲ ಮೊಣಕಾಲಿನ ಗಾಯದ ಕಾರಣದಿಂದಾಗಿ 2026ರ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಈ ವರ್ಷದ ಟೂರ್ನಿಯಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡವನ್ನು ಮುನ್ನಡೆಸಬೇಕಾಗಿದ್ದ ಬೆಥೆಲ್ ಅವರ ಅನುಪಸ್ಥಿತಿ, ಟೂರ್ನಿ ಆರಂಭಕ್ಕೂ ಮುನ್ನವೇ ಫ್ರಾಂಚೈಸಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.
ಗಾಯದ ಹಿನ್ನಲೆ:
ಭಾರತದ ವಿರುದ್ಧ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ಸರಣಿಯ ವೇಳೆ ಜೇಕಬ್ ಬೆಥೆಲ್ ಗಾಯಗೊಂಡಿದ್ದರು. ಸರಣಿಯ ಅಂತಿಮ ಪಂದ್ಯದಲ್ಲಿ 91 ರನ್ ಬಾರಿಸಿ ಹಾಗೂ 1 ವಿಕೆಟ್ ಪಡೆದು ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಗೆದ್ದಿದ್ದ ಬೆಥೆಲ್, ಆ ಪಂದ್ಯದ ಬಳಿಕ ತೀವ್ರ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರು ಎಂಆರ್ಐ ಸ್ಕ್ಯಾನಿಂಗ್ಗೆ ಒಳಗಾಗಿದ್ದರು. ಎಂಆರ್ಐ ಸ್ಕ್ಯಾನಿಂಗ್ ವರದಿಯಲ್ಲಿ ಗಾಯದ ತೀವ್ರತೆ ಹೆಚ್ಚಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಿದೆ.
ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡಕ್ಕೆ ಹಿನ್ನಡೆ:
ಭಾರಿ ಮೊತ್ತದ ಒಪ್ಪಂದ: ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಫ್ರಾಂಚೈಸಿಯು ಜೇಕಬ್ ಬೆಥೆಲ್ ಅವರನ್ನು ಬರೋಬ್ಬರಿ £340,000 (ಸುಮಾರು 3.6 ಕೋಟಿ ರೂ.) ಭಾರಿ ಮೊತ್ತಕ್ಕೆ ತಂಡದಲ್ಲೇ ಉಳಿಸಿಕೊಂಡಿತ್ತು.
ನಾಯಕತ್ವದ ಜವಾಬ್ದಾರಿ: ಕೇವಲ 22 ವರ್ಷದ ಬೆಥೆಲ್ ಅವರನ್ನು ಈ ಸೀಸನ್ನ ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ ಪಂದ್ಯಾವಳಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಅವರು ಹೊರಬಿದ್ದಿರುವುದು ತಂಡದ ಯೋಜನೆಗಳನ್ನು ತಲೆಕೆಳಗಾಗಿಸಿದೆ.
ಹೊಸ ನಾಯಕ ಯಾರು?
ಜೇಕಬ್ ಬೆಥೆಲ್ ಅಲಭ್ಯತೆಯಿಂದಾಗಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಮ್ಯಾನೇಜ್ಮೆಂಟ್, ಸೌತ್ ಆಫ್ರಿಕಾದ ಅನುಭವಿ ಆಲ್ರೌಂಡರ್ ಡೊನೊವನ್ ಫೆರೇರಾ ಅವರನ್ನು ನೂತನ ನಾಯಕನನ್ನಾಗಿ ಘೋಷಿಸಿದೆ. ಫೆರೇರಾ ಈ ಹಿಂದೆ ಓವಲ್ ಇನ್ವಿಸಿಬಲ್ಸ್ ತಂಡದ ಪರ ಆಡಿ ಎರಡು ಬಾರಿ ‘ದಿ ಹಂಡ್ರೆಡ್’ ಪ್ರಶಸ್ತಿ ಗೆದ್ದ ಅನುಭವ ಹೊಂದಿದ್ದಾರೆ. ಇದೀಗ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಪರ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
ವಾಷಿಂಗ್ಟನ್, ಜುಲೈ 22: ಅಮೆರಿಕ ಹಾಗೂ ಇರಾನ್(Iran) ನಡುವಿನ ಸಂಘರ್ಷವು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಇರಾನ್ನ ಅಧಿಕಾರಿಗಳು ಅಮೆರಿಕದೊಂದಿಗೆ ತೆರೆಮರೆಯ ಮಾತುಕತೆ ನಡೆಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪ್ರತಿಪಾದಿಸಿರುವ ಟ್ರಂಪ್ ಅರ್ಥಪೂರ್ಣ ಚರ್ಚೆಗೆ ಇರಾನ್ ಸಿದ್ಧವಾಗುವವರೆಗೆ ನಮಗೆ ಅವರೊಂದಿಗೆ ಮಾತುಕತೆ ನಡೆಸಲು ಯಾವುದೇ ಆಸಕ್ತಿ ಇಲ್ಲ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಶ್ವೇತಭವನದಲ್ಲಿ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಇರಾನ್ ಮಾತುಕತೆ ನಡೆಸಲು ಉತ್ಸುಕವಾಗಿದೆ ಆದರೆ ಅಮೆರಿಕ ಯಾವುದೇ ತರಾತುರಿಯ ಭೇಟಿಗೆ ಸಿದ್ಧವಿಲ್ಲ ಎಂದು ಹೇಳಿದ್ದಾರೆ. ರಾಜತಾಂತ್ರಿಕ ಮಾತುಕತೆಗಳ ಮಾತು ಒಂದೆಡೆಯಿದ್ದರೆ, ಮತ್ತೊಂದೆಡೆ ಅಮೆರಿಕ ಸೇನೆಯು ಇರಾನ್ ಮೇಲಿನ ಸೈನಿಕ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಹಾರ್ಮುಜ್ ಜಲಸಂಧಿ ಭದ್ರತೆ: ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಮಾಹಿತಿಯಂತೆ, ಅಮೆರಿಕನ್ ಪಡೆಗಳು ಸತತ 11 ನೇ ರಾತ್ರಿಯೂ ಇರಾನ್ನ ಮಿಲಿಟರಿ ನೆಲೆಗಳ ಮೇಲೆ ಭಾರಿ ದಾಳಿ ನಡೆಸಿದೆ. ಜಾಗತಿಕ ಇಂಧನ ಮತ್ತು ತೈಲ ಸಾಗಣೆಯ ಪ್ರಮುಖ ಜಲಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ ವಾಣಿಜ್ಯ ಹಡಗುಗಳಿಗೆ ಇರಾನ್ನಿಂದ ಎದುರಾಗುತ್ತಿರುವ ಬೆದರಿಕೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಈ ದಾಳಿಗಳನ್ನು ನಡೆಸಲಾಗುತ್ತಿದೆ.
ಅಮೆರಿಕದ ನಿರಂತರ ದಾಳಿ ಮತ್ತು ಬೆದರಿಕೆಗಳ ನಡುವೆಯೂ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ತಮ್ಮ ದೇಶದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ರಾಷ್ಟ್ರೀಯ ಕೈಗಾರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, “ನಮ್ಮ ದೇಶದ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರೊಂದಿಗೆ ನಮ್ಮ ಸಂವಹನ ಪ್ರತಿದಿನ ಹೆಚ್ಚುತ್ತಿದೆ. ಅವರ ಮಾರ್ಗದರ್ಶನ ಮತ್ತು ದೇಶದ ಯುವಜನರ ಬಲದೊಂದಿಗೆ ನಾವು ಅಮೆರಿಕದ ವಿರುದ್ಧದ ಈ ಹೋರಾಟವನ್ನು ಬಲವಾಗಿ ಮುಂದುವರಿಸುತ್ತೇವೆ” ಎಂದು ಘೋಷಿಸಿದ್ದಾರೆ.
ಯುದ್ಧಕ್ಕೆ ಕಳೆದೆರಡು ತಿಂಗಳಲ್ಲಿ 37.5 ಬಿಲಿಯನ್ ಡಾಲರ್ ವೆಚ್ಚ
ಯುದ್ಧದ ಅಂಗಳದಲ್ಲಿ ಕೇವಲ ಜೀವಹಾನಿ ಮಾತ್ರವಲ್ಲದೆ, ಆರ್ಥಿಕತೆಯ ಮೇಲೆಯೂ ಭಾರಿ ಪ್ರಭಾವ ಬೀರುತ್ತಿದೆ. ಈ ಯುದ್ಧಕ್ಕಾಗಿ ಅಮೆರಿಕ ಸರ್ಕಾರಕ್ಕೆ ಇದುವರೆಗೆ ಬೃಹತ್ ಪ್ರಮಾಣದ 37.5 ಶತಕೋಟಿ ಯುಎಸ್ ಡಾಲರ್ ವೆಚ್ಚವಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಕಾಂಗ್ರೆಸ್ಗೆ ತಿಳಿಸಿದ್ದಾರೆ. ಮೇ ತಿಂಗಳ ಮಧ್ಯಭಾಗದಲ್ಲಿದ್ದ ಅಂದಾಜಿಗಿಂತ ಇದು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ಮಿಲಿಟರಿ ಕೊರತೆಗಳನ್ನು ನೀಗಿಸಲು ಪೆಂಟಗನ್ ತಕ್ಷಣವೇ 67 ಶತಕೋಟಿ ಡಾಲರ್ ತುರ್ತು ಅನುದಾನಕ್ಕೆ ಮನವಿ ಮಾಡಿದೆ. ವಿಶ್ವದ ಅತಿ ದೊಡ್ಡ ಜಲಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಸಮರ ಕಾದಿರುವುದರಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದ್ದು, ಶೀಘ್ರವೇ ಯುದ್ಧ ಕೊನೆಗೊಳ್ಳದಿದ್ದರೆ ಇಡೀ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಸಿಲುಕುವ ಭೀತಿ ಎದುರಾಗಿದೆ.
ಬೆಂಗಳೂರು, ಜುಲೈ 22: ಕರ್ನಾಟಕದ ಬಹುತೇಕ ಭಾಗಗಳಲ್ಲಿ ಇನ್ನೆರಡು ದಿನ ಮಳೆಯ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರ ಮುನ್ಸೂಚನೆ (Weather Forecast) ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದ್ದರೆ, ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ 40ರಿಂದ 50 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲೂ ಕೆಲವೆಡೆ ಸಾಧಾರಣ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ. ವೇಗದ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ
ಇಂದು (ಜುಲೈ 22) ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅನೇಕ ಕಡೆ ಮಳೆಯೊಂದಿಗೆ ಬಲವಾದ ಗಾಳಿ ಬೀಸಲಿದೆ.
ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೂ ಮಳೆ ಅಲರ್ಟ್
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ.
ಜುಲೈ 23ರಂದು ಕೂಡ ಕರಾವಳಿ ಜಿಲ್ಲೆಗಳಲ್ಲಿ ಅನೇಕ ಕಡೆ ಮಳೆ ಮುಂದುವರಿಯಲಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಮಂಗಳವಾರಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಉತ್ತರ ಒಳನಾಡಿನಲ್ಲಿ ಮುಂಗಾರು ಚುರುಕಾಗಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಸಾಮಾನ್ಯವಾಗಿತ್ತು. ಉತ್ತರ ಕನ್ನಡದ ಗೇರುಸೊಪ್ಪದಲ್ಲಿ ಭಾರಿ ಮಳೆ (16 ಸೆಂ.ಮೀ.) ಆಗಿದೆ. ಜಗಲ್ಬೆಟ್ನಲ್ಲೂ 14 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಅಗುಂಬೆಯಲ್ಲಿ (ಶಿವಮೊಗ್ಗ) 8 ಸೆಂ.ಮೀ., ಕೊಲ್ಲೂರು (ಉಡುಪಿ) 8 ಸೆಂ.ಮೀ., ಬೆಳ್ತಂಗಡಿ (ದಕ್ಷಿಣ ಕನ್ನಡ) 7 ಸೆಂ.ಮೀ., ಮೂಡುಬಿದಿರೆ (ದಕ್ಷಿಣ ಕನ್ನಡ) 7 ಸೆಂ.ಮೀ., ಉಡುಪಿಯಲ್ಲಿ 7 ಸೆಂ.ಮೀ. ಮಳೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ (Amitabh Bachchan) ಈಗ 83 ವರ್ಷ ವಯಸ್ಸು. ಅವರಿಗೆ ನಾನಾ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಅವನ್ನು ಮೆಟ್ಟಿ ನಿಂತು ಸಿನಿಮಾ ಕೃಷಿ ಮಾಡುತ್ತಿದ್ದಾರೆ. ಅಮಿತಾಭ್ ಮಾಡಿರುವ ಹೊಸ ಬ್ಲಾಗ್ ಪೋಸ್ಟ್ ಈಗ ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಅವರು ಆಸ್ಪತ್ರೆ ಸೇರಿರುವ ಬಗ್ಗೆ ಮತ್ತು ಸರ್ಜರಿ ಆಗಿರುವ ಬಗ್ಗೆ ಬರೆದುಕೊಂಡಿದ್ದಾರೆ. ಆದರೆ ಇದು ಅವರದ್ದೇ ಆರೋಗ್ಯದ ಬಗ್ಗೆಯೋ ಅಥವಾ ಸಾಮಾನ್ಯವಾಗಿ ಬ್ಲಾಗ್ ಬರೆದಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.
ಬಿಗ್ ಬಿ ಬ್ಲಾಗ್ನಲ್ಲೇನಿದೆ?
ಚಿಕಿತ್ಸೆಗಿಂತ ಮನೆಗೆ ಮರಳಿದ ನಂತರದ ದಿನಗಳು ಎಷ್ಟು ಕಷ್ಟ ಎಂಬ ಬಗ್ಗೆ ಅಮಿತಾಭ್ ಬಚ್ಚನ್ ಬರೆದಿದ್ದಾರೆ. ಚೇತರಿಸಿಕೊಳ್ಳುವ ಸಮಯದಲ್ಲಿ ಪಡುವ ದೈಹಿಕ ಮತ್ತು ಮಾನಸಿಕ ನೋವಿನ ಬಗ್ಗೆ ಅವರು ಹಂಚಿಕೊಂಡಿದ್ದಾರೆ. ಇದು ಆತಂಕ ಮೂಡಲು ಪ್ರಮುಖ ಕಾರಣ.
‘ಆಸ್ಪತ್ರೆಯಲ್ಲಿ ಸರ್ಜರಿ ಮುಗಿಸಿ, ಐಸಿಯುನಲ್ಲಿದ್ದು ಮನೆಗೆ ಮರಳುವುದು ದೊಡ್ಡ ಸವಾಲು. ಈ ಸಮಯವು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಕಷ್ಟದ ಹಂತವಾಗಿರುತ್ತದೆ. ನೀವು ಚಾಂಪಿಯನ್ ಆಗಿದ್ದರೂ ಒಂದು ದಿನ ಸೋಲನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಇದು ಜೀವನದ ಅತ್ಯಂತ ಕಷ್ಟದ ಸಮಯ’ ಎಂದು ಅಮಿತಾಭ್ ಬರಹ ಆರಂಭಿಸಿದ್ದಾರೆ.
‘ಕೆಲವರು ಧೈರ್ಯವಾಗಿ ಎದುರಿಸುತ್ತಾರೆ. ಇನ್ನು ಕೆಲವರು ಶರಣಾಗುತ್ತಾರೆ. ಧೈರ್ಯದಿಂದ ಹೋರಾಡುವವರು ಯಾವಾಗಲೂ ಚಾಂಪಿಯನ್ ಆಗಿ ಉಳಿಯುತ್ತಾರೆ. ಉಳಿದವರು ಹಳೆಯ ನೆನಪುಗಳಲ್ಲೇ ಬದುಕುತ್ತಾರೆ. ಇವೆರಡೂ ಅವರವರ ವೈಯಕ್ತಿಕ ಆಯ್ಕೆಗಳಷ್ಟೇ’ ಎಂದು ಅವರು ನೇರವಾಗಿ ಪೋಸ್ಟ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ಮತ್ತೊಂದು ನಿಗೂಢ ಪೋಸ್ಟ್
ಬ್ಲಾಗ್ ಬರೆದ ಮರುದಿನವೇ ಅಮಿತಾಭ್ ಬಚ್ಚನ್ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ‘ಆಟ ಮುಗಿದಿದೆ, ಆದರೆ ಕೆಲಸ ಇನ್ನೂ ನಡೆಯುತ್ತಿದೆ’ ಎಂದು ಬರೆದಿದ್ದಾರೆ.
ಈ ನಿಗೂಢ ಪೋಸ್ಟ್ ಅಭಿಮಾನಿಗಳಲ್ಲಿ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ. ಅವರ ಆರೋಗ್ಯದ ಬಗ್ಗೆ ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲೂ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳು ಕೇಳಿ ಬಂದಿದ್ದವು. ಆದರೆ ಅವರು ಕೇವಲ ರೆಗ್ಯುಲರ್ ಹೆಲ್ತ್ ಚೆಕಪ್ಗಾಗಿ ನಾನಾವತಿ ಆಸ್ಪತ್ರೆಗೆ ಹೋಗಿದ್ದರು ಎಂದು ನಂತರ ತಿಳಿದುಬಂದಿತ್ತು.
ಇತ್ತೀಚೆಗಷ್ಟೇ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಿಂಚಿದ್ದ ಬಿಗ್ ಬಿ, ಸದ್ಯ ‘ಕೌನ್ ಬನೇಗಾ ಕರೋಡ್ಪತಿ’ ಹೊಸ ಸೀಸನ್ಗಾಗಿ ರೆಡಿಯಾಗುತ್ತಿದ್ದಾರೆ. ಇದಲ್ಲದೆ, ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ನಲ್ಲೂ ನಟಿಸುತ್ತಿದ್ದಾರೆ.
ಪ್ರಶ್ನೆ: ಅಮಿತಾಭ್ ಬಚ್ಚನ್ಗೆ ವಯಸ್ಸೆಷ್ಟು? ಉತ್ತರ: 83
ಪ್ರಶ್ನೆ: ಅಮಿತಾಭ್ ಬಚ್ಚನ್ ಮುಂದಿನ ಸಿನಿಮಾ ಯಾವುದು? ಉತ್ತರ: ಕಲ್ಕಿ 2898 ಎಡಿ ಸೀಕ್ವೆಲ್
ಪ್ರಶ್ನೆ: ಅಮಿತಾಭ್ ಬಚ್ಚನ್ ನಡೆಸಿಕೊಡೋ ಶೋ ಹೆಸರೇನು? ಉತ್ತರ: ಕೌನ್ ಬನೇಗಾ ಕರೋಡ್ಪತಿ
ರಾಜ್ಯದ ವಿವಿಧೆಡೆ ವಾಯು ಗುಣಮಟ್ಟದಲ್ಲಿ ಭಾರಿ ಸುಧಾರಣೆ Image Credit source: The economic times
ಬೆಂಗಳೂರು, ಜುಲೈ 22: ಮುಂಗಾರು ಮಳೆ ಶುರುವಾಗುವ ಮೊದಲು ಅತ್ಯಂತ ಕಳಪೆ ವಾಯು ಗುಣಮಟ್ಟ (AQI) ನೋಡಿದ್ದ ರಾಜ್ಯ ಇದೀಗ ಕ್ರಮೇಣವಾಗಿ ಸುಧಾರಿಸುತ್ತಿದೆ. ಮಳೆಯ ಕಾರಣದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಕ್ಯೂಐ ಉತ್ತಮವಾಗಿದೆ. ತಾವರಣದಲ್ಲಿದ್ದ ಧೂಳಿನ ಕಣಗಳ ಪ್ರಮಾಣ ಕಡಿಮೆಯಾಗಿದ್ದು, ಜನಸಾಮಾನ್ಯರಿಗೆ ನಿಟ್ಟುಸಿರು ಬಿಡುವಂತಹ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಹೇಗಿದೆ?
ಇಂದು ಬೆಂಗಳೂರು ನಗರದ ಸರಾಸರಿ AQI ಮಟ್ಟವು 50 ರಿಂದ 59 ರ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಇದನ್ನು ವಾಯು ಗುಣಮಟ್ಟದ ಮಾನದಂಡಗಳ ಪ್ರಕಾರ ಸಾಧಾರಣ ವಿಭಾಗದಲ್ಲಿ ವರ್ಗೀಕರಿಸಲಾಗಿದೆ. ನಗರದಲ್ಲಿ ಸೂಕ್ಷ್ಮ ಧೂಳಿನ ಕಣಗಳಾದ PM2.5 ಮತ್ತು PM10 ಮಟ್ಟವು ಹತೋಟಿಯಲ್ಲಿದ್ದು, ಗಾಳಿಯಲ್ಲಿನ ಆಮ್ಲಜನಕದ ಸಾಂದ್ರತೆ ಉತ್ತಮವಾಗಿದೆ. ಜಯನಗರ, ಬಸವನಗುಡಿ, ಹಾಗೂ ಬಿಟಿಎಂ ಲೇಔಟ್ ಪ್ರದೇಶಗಳಲ್ಲಿ ಗಾಳಿಯ ಶುದ್ಧತೆ ‘ಉತ್ತಮ’ (Good) ಹಂತದಲ್ಲಿದ್ದರೆ, ಬೊಮ್ಮನಹಳ್ಳಿ ಮತ್ತು ಔಟರ್ ರಿಂಗ್ ರೋಡ್ ಭಾಗಗಳಲ್ಲಿ ವಾಹನ ಸಂಚಾರ ದಟ್ಟಣೆಯಿಂದಾಗಿ AQI ಪ್ರಮಾಣ ತುಸು ಹೆಚ್ಚಾಗಿ ದಾಖಲಾಗಿದೆ.
ರಾಜ್ಯದ ಇತರ ನಗರಗಳ ವಾಯು ಪರಿಸ್ಥಿತಿ
ಕರ್ನಾಟಕದ ಇತರ ಜಿಲ್ಲೆಗಳು ಮತ್ತು ಪ್ರಮುಖ ನಗರಗಳಲ್ಲೂ ವಾಯು ಮಾಲಿನ್ಯದ ಮಟ್ಟ ನಿಯಂತ್ರಣದಲ್ಲಿದೆ.
ಚಿಕ್ಕಮಗಳೂರು ಮತ್ತು ಬೆಳಗಾವಿ: 35 – 43 (Good)
ಮೈಸೂರು: 40 – 48: (Good)
ಹುಬ್ಬಳ್ಳಿ – ಧಾರವಾಡ: 50 – 58 (Moderate)
ಮಂಗಳೂರು ಮತ್ತು ಬಳ್ಳಾರಿ: 52 – 62 (Moderate)
ನಗರದಲ್ಲಿ ಗಾಳಿಯ ಗುಣಮಟ್ಟ ಒಟ್ಟಾರೆಯಾಗಿ ತೃಪ್ತಿಕರವಾಗಿದ್ದರೂ, ಆಸ್ತಮಾ ಹಾಗೂ ಉಸಿರಾಟದ ತೊಂದರೆ ಇರುವ ಸೂಕ್ಷ್ಮ ಆರೋಗ್ಯದ ವ್ಯಕ್ತಿಗಳು ಮುಂಜಾನೆ ಮತ್ತು ಸಂಜೆ ವಾಹನ ದಟ್ಟಣೆ ಹೆಚ್ಚಿರುವ ವೇಳೆಯಲ್ಲಿ ಮುನ್ನೆಚ್ಚರಿಕೆ ವಹಿಸುವುದು ಒಳಿತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಂದು 2026 ರ ಜುಲೈ 22 ರ ಬುಧವಾರ, ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷದ ನವಮಿ, ಸ್ವಾತಿ ನಕ್ಷತ್ರ, ಸಾಧ್ಯ ಯೋಗ, ಭವಕರಣ ಇರುವ ಈ ದಿನ ವೆಂಕಟೇಶ್ವರ, ಕಾಲಭೈರವ ಮತ್ತು ವಿನಾಯಕನ ಆರಾಧನೆಗೆ ಶುಭದಾಯಕವಾಗಿದೆ. ಕರ್ಕಾಟಕ ರಾಶಿಯಲ್ಲಿ ರವಿ ಮತ್ತು ತುಲಾ ರಾಶಿಯಲ್ಲಿ ಚಂದ್ರ ಸಂಚಾರ ಮಾಡುತ್ತಿದ್ದಾರೆ. ಈ ದಿನದ ರಾಹುಕಾಲ ಮಧ್ಯಾಹ್ನ 12:25 ರಿಂದ 01:55 ರ ತನಕ ಇರಲಿದೆ. ಸಂಕಲ್ಪ ಕಾಲವು ಬೆಳಗ್ಗೆ 10:50 ರಿಂದ 12:25 ರ ತನಕ ಇರಲಿದೆ. ಮೇಷ ಸಹಿತ 12 ರಾಶಿಗಳ ಇಂದಿನ ದಿನಭವಿಷ್ಯದ ಬಗ್ಗೆ ಪ್ರಸಿದ್ಧ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.