ಇತ್ತೀಚೆಗಷ್ಟೆ ಕನ್ನಡದ ಮೂರು ಸಿನಿಮಾಗಳ (Cinema) ಮುಹೂರ್ತ ಒಟ್ಟಿಗೆ ನಡೆದಿದೆ. ‘ದರ್ಶನ’, ‘ಸೀತಾರಾಮ ರಾಜು’ ಮತ್ತು ‘ಕಾಡ’ ಸಿನಿಮಾದ ಮುಹೂರ್ತಗಳು ಒಟ್ಟಿಗೆ ನಡೆದಿದ್ದು, ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಮುಖ ನಟ, ನಟಿಯರು ಮುಹೂರ್ತದಲ್ಲಿ ಹಾಜರಾಗಿದ್ದರು. ಮಾಧ್ಯಮಗಳೊಟ್ಟಿಗೆ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪೃಥ್ವಿ ಅಂಬರ್ ನಟಿಸುತ್ತಿರುವ ‘ದರ್ಶನ’ ಸಿನಿಮಾನಲ್ಲಿ ನಟಿಸಲಿರುವ ಪೋಷಕ ನಟ ತಬಲಾ ನಾಣಿ ಮುಹೂರ್ತದ ವೇಳೆ ಮಾತನಾಡಿದ್ದು, ಅವರ ತಮಾಷೆ ಮಾತುಗಳು ಕೇಳಿ ಸಭಿಕರು ನಕ್ಕು ಹಗುರಾದರು. ವಿಡಿಯೋ ನೋಡಿ…
ಭಾರತದ 12 ಚಿತ್ರರಂಗಗಳನ್ನು (Movie Industry) ಪ್ರತಿನಿಧಿಸುವ ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ ತಮ್ಮ 2026ರ ಐಎನ್ಸಿಎ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಭಾಷಾವಾರು ಈ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕನ್ನಡದಲ್ಲಿ ಎಲ್ಲ ಪ್ರಶಸ್ತಿಗಳನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ನೀಡಲಾಗಿದೆ. ‘ಕಾಂತಾರ: ಚಾಪ್ಟರ್ 1’ ಹೊರತಾಗಿ ಇನ್ಯಾವ ಕನ್ನಡ ಸಿನಿಮಾಕ್ಕೂ ಐಎನ್ಸಿಎ ಪ್ರಶಸ್ತಿ ಲಭಿಸಿಲ್ಲ.
ಅತ್ಯುತ್ತಮ ನಟ, ನಟಿ, ನಿರ್ದೇಶಕ ಮತ್ತು ಸಿನಿಮಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಐಎನ್ಸಿಎ ಘೋಷಿಸಿದೆ. ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ‘ಕಾಂತಾರ: ಚಾಪ್ಟರ್ 1’, ಅತ್ಯುತ್ತಮ ನಟ ರಿಷಬ್ ಶೆಟ್ಟಿ, ಅತ್ಯುತ್ತಮ ನಿರ್ದೇಶಕ ರಿಷಬ್ ಶೆಟ್ಟಿ, ಅತ್ಯುತ್ತಮ ನಟಿ ರುಕ್ಮಿಣಿ ವಸಂತ್ ಅವರಿಗೆ ನೀಡಲಾಗಿದೆ. ತೆಲುಗಿನಲ್ಲಿ ಅತ್ಯುತ್ತಮ ನಟಿ ರಶ್ಮಿಕಾ ಮಂದಣ್ಣ (ಗರ್ಲ್ಫ್ರೆಂಡ್), ಅತ್ಯುತ್ತಮ ನಟ ಅಕ್ಕಿನೇನಿ ನಾಗಾರ್ಜುನ (ತಂಡೇಲ್), ಅತ್ಯುತ್ತಮ ನಿರ್ದೇಶಕ ಅನಿಲ್ ರವಿಪುಡಿ (ಸಂಕ್ರಾಂತಿಕಿ ವಸ್ತುನ್ನಾಮ್) ಅತ್ಯುತ್ತಮ ಸಿನಿಮಾ ‘ಮಿರಾಯ್’ಗೆ ನೀಡಲಾಗಿದೆ.
ತಮಿಳಿನಲ್ಲಿ ಅತ್ಯುತ್ತಮ ನಟ ದುಲ್ಕರ್ ಸಲ್ಮಾನ್ (ಕಾಂತಾ), ಅತ್ಯುತ್ತಮ ನಟಿ ಸಿಮ್ರನ್ (ಟೂರಿಸ್ಟ್ ಫ್ಯಾಮಿಲಿ), ಅತ್ಯುತ್ತಮ ನಿರ್ದೇಶಕ ಮಾರಿ ಸೆಲ್ವರಾಜ್ (ಬೈಸನ್), ಅತ್ಯುತ್ತಮ ಸಿನಿಮಾ ‘ಟೂರಿಸ್ಟ್ ಫ್ಯಾಮಿಲಿ’ಗೆ ನೀಡಲಾಗಿದೆ. ಮಲಯಾಳಂನಲ್ಲಿ ಅತ್ಯುತ್ತಮ ನಟ ನಿವಿನ್ ಪೌಲಿ (ಸರ್ವಂ ಮಾಯ), ಅತ್ಯುತ್ತಮ ನಟಿ ಕಲ್ಯಾಣಿ ಪ್ರಿಯದರ್ಶಿನಿ (ಲೋಕಃ), ಅತ್ಯುತ್ತಮ ನಿರ್ದೇಶಕ ಡಾಮಿನಿಕ್ ಅರುಣ್ (ಲೋಕಃ), ಅತ್ಯುತ್ತಮ ಸಿನಿಮಾ ‘ಲೋಕಃ’.
ಹಿಂದಿಯ ಅತ್ಯುತ್ತಮ ಸಿನಿಮಾ ‘ಛಾವಾ’, ಅತ್ಯುತ್ತಮ ನಟ ರಣ್ವೀರ್ ಸಿಂಗ್ (ಧುರಂಧರ್), ಅತ್ಯುತ್ತಮ ನಿರ್ದೇಶಕ ಆದಿತ್ಯ ಧರ್ (ಧುರಂಧರ್), ಅತ್ಯುತ್ತಮ ನಟಿ ಯಾಮಿ ಗೌತಮ್ (ಹಖ್). ಇವುಗಳು ಮಾತ್ರವೇ ಅಲ್ಲದೆ, ಬೆಂಗಾಲಿ, ಅಸ್ಸಾಮಿ, ಮರಾಠಿ, ಪಂಜಾಬಿ, ಗುಜರಾತಿ ಇನ್ನೂ ಕೆಲ ಭಾಷೆಗಳ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ಐಎನ್ಸಿಎ ಘೋಷಿಸಿದೆ. ಪ್ರಶಸ್ತಿ ವಿತರಣೆ ಸಮಾರಂಭ ಶೀಘ್ರವೇ ನಡೆಯಲಿದ್ದು, ಕರಣ್ ಜೋಹರ್ ಮತ್ತು ರಾನಾ ದಗ್ಗುಬಾಟಿ ಅವರುಗಳು ಸಮಾರಂಭದ ನಿರೂಪಣೆ ಮಾಡಲಿದ್ದಾರೆ.
ಹುಬ್ಬಳ್ಳಿ, ಏಪ್ರಿಲ್ 9: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ (Hubballi-Dharawad) ಇತ್ತೀಚೆಗೆ ಪುಡಿ ರೌಡಿಗಳ ಉಪಟಳ ಮತ್ತು ಚಾಕು ಇರಿತದಂತಹ ಕೃತ್ಯಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದ ಹಳೆ ಸಿಎಆರ್ (CAR) ಮೈದಾನದಲ್ಲಿ ಇಂದು ನಡೆದ ಬೃಹತ್ ರೌಡಿ ಪರೇಡ್ನಲ್ಲಿ 450ಕ್ಕೂ ಹೆಚ್ಚು ರೌಡಿ ಶೀಟರ್ಗಳು ಭಾಗಿಯಾಗಿದ್ದರು.
ಬಾಲ ಬಿಚ್ಚಿದರೆ ಗುಂಡಾ ಕಾಯ್ದೆ
ನೆತ್ತಿ ಸುಡುವ ಬಿಸಿಲಿನಲ್ಲಿ ನಡೆದ ಈ ಪರೇಡ್ನಲ್ಲಿ ಒಬ್ಬೊಬ್ಬರ ಹಳೆಯ ಇತಿಹಾಸ (Criminal Records) ಕೆದಕಿದ ಕಮಿಷನರ್, ಸಾರ್ವಜನಿಕರ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಕೆಲಸ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಯಾರಾದರೂ ಬಾಲ ಬಿಚ್ಚಿದರೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಗರದಿಂದ ಗಡಿಪಾರು ಮಾಡಲಾಗುವುದು ಎಂದು ಅವರು ಗುಡುಗಿದರು. ಈಗಾಗಲೇ ಈ ವರ್ಷ 30ಕ್ಕೂ ಹೆಚ್ಚು ರೌಡಿಗಳನ್ನು ಗಡಿಪಾರು ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
816 ಜನರಿಗೆ ರೌಡಿ ಪಟ್ಟಿಯಿಂದ ಮುಕ್ತಿ
ಇದೇ ವೇಳೆ, ಅಪರಾಧ ಲೋಕವನ್ನು ಬಿಟ್ಟು ಸನ್ನಡತೆಯಿಂದ ಬದುಕುತ್ತಿರುವವರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. 2026ರ ಆರಂಭದಲ್ಲಿ ಅವಳಿ ನಗರದಲ್ಲಿ 1,320 ರೌಡಿ ಶೀಟರ್ಗಳಿದ್ದರು. ಅವರಲ್ಲಿ ಸನ್ನಡತೆ ತೋರಿದ 816 ಜನರನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗಿದೆ. ಪ್ರಸ್ತುತ ನಗರದಲ್ಲಿ 510 ಸಕ್ರಿಯ ರೌಡಿ ಶೀಟರ್ಗಳಿದ್ದು, ಈ ವರ್ಷ ಹೊಸದಾಗಿ 100ಕ್ಕೂ ಹೆಚ್ಚು ಜನರ ಮೇಲೆ ನಿಗಾ ಇರಿಸಿ ರೌಡಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಒಟ್ಟಾರೆಯಾಗಿ, ಹುಬ್ಬಳ್ಳಿ-ಧಾರವಾಡದಲ್ಲಿ ಶಾಂತಿ ಕಾಪಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅಪರಾಧ ಕೃತ್ಯಗಳಲ್ಲಿ ತೊಡಗುವವರಿಗೆ ಜೈಲೇ ಗತಿ ಎಂಬ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 09: ತಡ ರಾತ್ರಿಯೂ ಕೆಲಸ ಮಾಡುವ ಡೆಲಿವರಿ ಬಾಯ್ಗಳನ್ನೇ ಟಾರ್ಗೆಟ್ ಮಾಡಿ ದೋಚುವ ಪ್ರಕರಣಗಳು ಬೆಂಗಳೂರಲ್ಲಿ (Bengaluru) ಮೇಲಿಂದ ಮೇಲೆ ನಡೆಯುತ್ತಿದ್ದು, ಇವುಗಳ ಸಾಲಿಗೆ ಮತ್ತೊಂದು ಕೇಸ್ ಸೇರ್ಪಡೆಯಾಗಿದೆ. ನಗರದ ನೆಕ್ಸಸ್ ಮಾಲ್ ಬಳಿ ನಿಂತಿದ್ದ 19 ವರ್ಷದ ಡೆಲಿವರಿ ಬಾಯ್ನ ಬೆದರಿಸಿರುವ ಮೂರು ಮಂದಿಯ ಗುಂಪು, ಆನ್ಲೈನ್ ಮೂಲಕ 49 ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿರುವ ಬಗ್ಗೆಯೂ ಆರೋಪಿಸಲಾಗಿದೆ.
ಮಾರ್ಚ್ 31ರ ರಾತ್ರಿ ಸುಮಾರು 1:30ರ ವೇಳೆಗೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ ಹಾಲಿ ಸುದ್ದಗುಂಟೆಪಾಳ್ಯದ ತಾವರೆಕೆರೆಯಲ್ಲಿ ವಾಸವಾಗಿರುವ ಗೋಪಿಕಿಶನ್ ಎಂಬ ಯುವಕನಿಂದ ಆರೋಪಿಗಳು ಹಣ ಪೀಕಿದ್ದು, ವಿದ್ಯಾರ್ಥಿಯಾಗಿರುವ ಈತ ಶಿಕ್ಷಣ ಸಂಬಂಧ ಹಣಕ್ಕಾಗಿ ಪಾರ್ಟ್ ಟೈಂ ಡೆಲಿವರಿ ಬಾಯ್ ಆಗಿ ಕೆಲಸಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಗೋಪಿಕಿಶನ್ ಹಾಗೂ ಅವನ ಸ್ನೇಹಿತ ಓಂಕಾರ್ ನೆಕ್ಸಸ್ ಮಾಲ್ ಹೊರಗೆ ಆರ್ಡರ್ಗಾಗಿ ಕಾಯುತ್ತಿದ್ದಾಗ ಬಂದ ಮೂವರು ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿರುವ ದುರುಳರು ಮುಖ ಹಾಗೂ ಕೈಗಳ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ನಗದು ಸಿಗದಿದ್ದಾಗ, ಗೋಪಿಕಿಶನ್ನ ಮೊಬೈಲ್ ಕಸಿದುಕೊಂಡು ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಪಾಸ್ವರ್ಡ್ ಕೇಳಿ, ಬಲವಂತವಾಗಿ 49 ಸಾವಿರ ರೂಪಾಯಿ ಹಣವನ್ನು ತಮ್ಮ ಖಾತೆಗೆ ಆರೋಪಿಗಳು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
ಡೆಲಿವರಿ ಬಾಯ್ನಿಂದ ಹಣ ಪೀಕಿದ ಬಳಿಕ ಈ ಸಂಬಂಧ ದೂರು ಕೊಡಬಾರದು ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು. ಆದರೂ ಕುಟುಂಬದವರು ಹಾಗೂ ಸ್ನೇಹಿತರ ಸಲಹೆಯ ಮೇರೆಗೆ ಅಂತಿಮವಾಗಿ ಗೋಪಿಕಿಶನ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
IPL 2026: ಐಪಿಎಲ್ 2026ರ 16ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಬಲಿಷ್ಠ ರಾಜಸ್ಥಾನ್ ರಾಯಲ್ಸ್ (RR) ತಂಡವನ್ನು ಎದುರಿಸಲಿದೆ. ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸತತ ಗೆಲುವಿನ ಓಟವನ್ನು ಮುಂದುವರಿಸುವ ಗುರಿಯನ್ನು ಆರ್ಸಿಬಿ ಹೊಂದಿದೆ. ಇದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ.
RCB ತಂಡದ ಬಲ:
ಬ್ಯಾಟರ್ಗಳೇ ಆರ್ಸಿಬಿ ತಂಡದ ಬಲಿಷ್ಠ ಶಕ್ತಿ. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರ ಸ್ಫೋಟಕ ಆರಂಭವು ತಂಡಕ್ಕೆ ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ದೇವದತ್ ಪಡಿಕ್ಕಲ್ ಕಳೆದ ಎರಡು ಮ್ಯಾಚ್ಗಳಲ್ಲೂ ಅರ್ಧಶತಕ ಸಿಡಿಸಿದ್ದಾರೆ.
ಇನ್ನು ನಾಯಕ ರಜತ್ ಪಾಟಿದಾರ್, ಟಿಮ್ ಡೇವಿಡ್ ಅವರ ಅಬ್ಬರವನ್ನು ತಡೆಯುವುದೇ ಬೌಲರ್ಗಳ ಮುಂದಿರುವ ಅತೀ ದೊಡ್ಡ ಸವಾಲು. ಇದಾದ ಬಳಿಕ ಅಬ್ಬರಿಸಲು ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ ಹಾಗೂ ರೊಮಾರಿಯೋ ಶೆಫರ್ಡ್ ಇದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ತಂಡದ ಬ್ಯಾಟಿಂಗ್ ಲೈನಪ್ನಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ.
ಒಂದು ಬದಲಾವಣೆ:
ಕಳೆದ ಎರಡು ಮ್ಯಾಚ್ಗಳಿಂದ ಹೊರಗುಳಿದಿದ್ದ ಜೋಶ್ ಹೇಝಲ್ವುಡ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೇಝಲ್ವುಡ್ ಆಡುವ ಬಳಗದಲ್ಲಿ ಕಾಣಿಸಿಕೊಂಡರೆ, ಜೇಕಪ್ ಡಫಿ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಆರ್ಆರ್ ವಿರುದ್ಧ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ಕಂಡು ಬರುವ ಸಾಧ್ಯತೆ ಹೆಚ್ಚಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…
ಫಿಲ್ ಸಾಲ್ಟ್ (ವಿಕೆಟ್ ಕೀಪರ್)
ವಿರಾಟ್ ಕೊಹ್ಲಿ
ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್ (ನಾಯಕ)
ಜಿತೇಶ್ ಶರ್ಮಾ
ಟಿಮ್ ಡೇವಿಡ್
ರೊಮಾರಿಯೋ ಶೆಫರ್ಡ್
ಕೃನಾಲ್ ಪಾಂಡ್ಯ
ಭುವನೇಶ್ವರ್ ಕುಮಾರ್
ಅಭಿನಂದನ್ ಸಿಂಗ್
ಜೋಶ್ ಹೇಝಲ್ವುಡ್.
ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).
ಉಭಯ ತಂಡಗಳ ಮುಖಾಮುಖಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ 34 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಆರ್ಸಿಬಿ ಗೆದ್ದಿರುವುದು 17 ಪಂದ್ಯಗಳಲ್ಲಿ. ಹಾಗೆಯೇ 14 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಜಯ ಸಾಧಿಸಿದೆ. ಇನ್ನುಳಿದ 3 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿದ್ದವು.
ಇನ್ನು ಕಳೆದ ಕಳೆದ ಐದು ಮುಖಾಮುಖಿಯಲ್ಲಿ ಆರ್ಸಿಬಿ 3 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ್ ರಾಯಲ್ಸ್ 2 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇದೀಗ ಉಭಯ ತಂಡಗಳು 35ನೇ ಬಾರಿ ಮುಖಾಮುಖಿಯಾಗಲು ಸಜ್ಜಾಗಿದೆ.
ಅಜ್ಮೇರ್, ಏಪ್ರಿಲ್ 9: ಬಟ್ಟೆ ಒಗೆಯುವ ಕಾಯದ ಧೋಬಿಗೆ ಆದಾಯ ತೆರಿಗೆ ಇಲಾಖೆಯಿಂದ (Income Tax) ಬರೋಬ್ಬರಿ 598 ಕೋಟಿ ರೂಗಳ ಟ್ಯಾಕ್ಸ್ ನೋಟೀಸ್ ಬಂದಿದೆ. ಧೋಬಿ ಹೆಸರಲ್ಲಿ ದೊಡ್ಡ ಪ್ರಮಾಣದ ಡೈಮಂಡ್ ವ್ಯಾಪಾರ ನಡೆದಿದ್ದ ಹಿನ್ನೆಲೆಯಲ್ಲಿ ಇನ್ಕಮ್ ಟ್ಯಾಕ್ಸ್ ಇಲಾಖೆಯು ಆತನ ಬೆನ್ನು ಬಿದ್ದಿದೆ. ರಾಜಸ್ಥಾನದ ಅಜ್ಮೇರ್ ನಗರದ ರಾಮಗಂಜ್ ಎಂಬಲ್ಲಿನ ರಸ್ತೆಬದಿಯಲ್ಲಿ ಬಟ್ಟೆ ಒಗೆಯುವ ಮತ್ತು ಇಸ್ತ್ರಿ ಮಾಡುವ ಅಂಗಡಿ ಇಟ್ಟುಕೊಂಡಿರುವ ಜಿತೇಂದ್ರ ಕುಮಾರ್ ಎನ್ನುವ ಈ ಅಮಾಯಕ ವ್ಯಕ್ತಿ ಈಗ ನೂರಾರು ಕೋಟಿ ರೂ ಮಾತುಗಳನ್ನು ಕೇಳಿ ದಿಕ್ಕು ತೋಚದಂತಾಗಿದ್ದಾನೆ.
ಬ್ಯಾಂಕ್ ಅಕೌಂಟ್ ಇವನದ್ದಲ್ಲ… ಆದರೆ, ನೋಟೀಸ್ ಯಾಕೆ?
ಜಿತೇಂದ್ರ ಕುಮಾರ್ ಅವರ ಹೆಸರಿನಲ್ಲಿ ಇರುವ ಬ್ಯಾಂಕ್ ಅಕೌಂಟ್ನಿಂದ ನೂರಾರು ಕೋಟಿ ರೂ ಮೊತ್ತದ ವಹಿವಾಟು ನಡೆದಿದೆ. ಆದರೆ, ಇವರನ್ನು ಕೇಳಿದಾಗ, ಆ ಬ್ಯಾಂಕ್ ಅಕೌಂಟ್ ತನ್ನದಲ್ಲ. ತನಗೇನೂ ಗೊತ್ತಿಲ್ಲ ಎಂದಿದ್ದಾನೆ. ಆದರೆ, ಎರಡು ವರ್ಷದ ಹಿಂದೆ ಪಾಲಿಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದಾಗಿ ಒಂದು ಮಾಹಿತಿ ನೀಡುತ್ತಾನೆ.
ಜಿತೇಂದ್ರ ಕುಮಾರ್ ಅವರು ವಕೀಲರೊಬ್ಬರ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ವಕೀಲ ರಾಕೇಶ್ ತಾಡ ಅವರು ಪಾಲಿಯಲ್ಲಿರುವ ಯಾರೂ ವ್ಯಾಪಾರಿಯು ಜಿತೇಂದ್ರನ ಅಕೌಂಟ್ ಅನ್ನು ನಿಭಾಯಿಸುತ್ತಿರಬಹುದು ಎಂದು ಅನುಮಾನಿಸಿದ್ದಾರೆ. ಬ್ಯಾಂಕ್ ಹಾಗೂ ಅಕೌಂಟ್ ನಿಭಾಯಿಸುತ್ತಿರುವ ವ್ಯಕ್ತಿಯ ವಿರುದ್ಧ ಎಫ್ಐಆರ್ ಸಲ್ಲಿಸಿದ್ದೇವೆ ಎಂದು ವಕೀಲರು ತಿಳಿಸಿದ್ದಾರೆ.
‘598 ಕೋಟಿ ರೂ ವಹಿವಾಟು ನಡೆಸಲಾಗಿರುವುದರ ವಿವರ ಕೇಳಿ ಐಟಿ ಇಲಾಖೆ ಶೋಕಾಸ್ ನೋಟೀಸ್ ಕೊಟ್ಟಿದೆ. ನಾವು ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ’ ಎಂದು ರಾಕೇಸ್ ತಾಡ ಮಾಹಿತಿ ನೀಡಿದ್ದಾರೆ.
ಪ್ಯಾನ್ ಕಾರ್ಡ್ ಕಳುವಾದರೆ ಏನು ಮಾಡಬೇಕು?
ಪ್ಯಾನ್ ಮತ್ತು ಆಧಾರ್ ದಾಖಲೆಗಳು ದುಷ್ಕರ್ಮಿಗಳ ಕೈಗೆ ಸಿಕ್ಕರೆ ದುರುಪಯೋಗವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಗುರುತಿನ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆದು, ಅದಕ್ಕೆ ನಿಮ್ಮ ಪ್ಯಾನ್ ಅನ್ನು ನೀಡಲಾಗುತ್ತದೆ. ಆ ಅಕೌಂಟ್ನಲ್ಲಿ ಏನೇ ವಹಿವಾಟು ಆದರೂ ಪ್ಯಾನ್ನಲ್ಲಿ ದಾಖಲಾಗುತ್ತದೆ. ಇದರಿಂದ ವಂಚಕರು ಸಿಕ್ಕಿಬೀಳುವ ಸಾಧ್ಯತೆ ಕಡಿಮೆ.
ಇಂಥ ದುರ್ಬಳಕೆ ಬಗ್ಗೆ ಎಚ್ಚರದಿಂದಿರಬೇಕು. ಅಪರಿಚಿತರಿಗೆ ಮೊಬೈಲ್ ಒಟಿಪಿ ನೀಡಬಾರದು. ಆಗಾಗ್ಗೆ ಕ್ರೆಡಿಟ್ ಸ್ಕೋರ್ ಪರಿಶೀಲಿಸಬೇಕು. ಕ್ರೆಡಿಟ್ ರಿಪೋರ್ಟ್ ಕೂಡ ತೆಗೆಸುತ್ತಿರಬೇಕು. ಅದರಲ್ಲಿ ಪ್ಯಾನ್ ಅಡಿಯಲ್ಲಿ ಏನೇನು ವಹಿವಾಟು ನಡೆದಿದೆ ಎಲ್ಲವೂ ದಾಖಲಾಗಿರುತ್ತದೆ. ನಿಮ್ಮ ಸಮ್ಮತಿ ಇಲ್ಲದೆ ಯಾವುದಾದರೂ ವಹಿವಾಟು ನಡೆದಿದ್ದರೆ ದೂರು ಕೊಡಬಹುದು.
ಪುದುಚೇರಿ, ಏಪ್ರಿಲ್ 9: ಪುದುಚೇರಿ ಮುಖ್ಯಮಂತ್ರಿ ಹಾಗೂ ಎಐಎನ್ಆರ್ಸಿ (AINRC) ಮುಖ್ಯಸ್ಥ ಎನ್. ರಂಗಸ್ವಾಮಿ ವಿಧಾನಸಭೆ ಚುನಾವಣೆ ವೇಳೆ ಸರಳತೆ ಮೆರೆದಿದ್ದಾರೆ. ಮಂಗಲಂ, ತಟ್ಟಂಚವಾಡಿ ಕ್ಷೇತ್ರಗಳ ಅಭ್ಯರ್ಥಿಯಾಗಿರುವ ಅವರು, ಯಾವುದೇ ಹಮ್ಮುಬಿಮ್ಮಿಲ್ಲದೆ ಸಾಮಾನ್ಯರಂತೆ ಬೈಕ್ ಚಲಾಯಿಸಿಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಮತದಾನದ ಬಳಿಕ ಅದೇ ಬೈಕ್ನಲ್ಲಿ ಮರಳಿದ ಸಿಎಂ ಅವರ ವಿಡಿಯೋ ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ವಿಡಿಯೋ ಕೃಪೆ: ಎಎನ್ಐ
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಶುಕ್ರವಾರ (ಏ.10) ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಪರ ಕಣಕ್ಕಿಳಿಯುವ ವಿದೇಶಿ ವೇಗಿ ಯಾರು ಎಂಬುದೇ ಈಗ ಕುತೂಹಲ. ಏಕೆಂದರೆ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಜೋಶ್ ಹೇಝಲ್ವುಡ್ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಹೀಗಾಗಿ ಅವರು ಆರ್ಆರ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ. ಇದರಿಂದ ಜೇಕಬ್ ಡಫಿ ಆಡುವ ಬಳಗದಿಂದ ಹೊರಗುಳಿಯಬೇಕಾಗಬಹುದು.
ಆದರೆ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಈ ಒಂದು ತಂತ್ರ ಅನುಸರಿಸಿದರೆ, ಇಬ್ಬರು ವಿದೇಶಿ ವೇಗಿಗಳನ್ನು ಜೊತೆಯಾಗಿ ಕಣಕ್ಕಿಳಿಸಬಹುದು. ಇದಕ್ಕಾಗಿ ಆರ್ಸಿಬಿ ಮುಂದಿರುವ ಆಯ್ಕೆಗಳು ಈ ಕೆಳಗಿನಂತಿವೆ…
ಐಪಿಎಲ್ ನಿಯಮದ ಪ್ರಕಾರ ಒಂದು ಪಂದ್ಯದಲ್ಲಿ ಗರಿಷ್ಠ ನಾಲ್ವರು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿರುತ್ತದೆ. ಪ್ರಸ್ತುತ ಆರ್ಸಿಬಿ ತಂಡದಲ್ಲಿ ಫಿಲ್ ಸಾಲ್ಟ್, ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ಪ್ರಮುಖ ವಿದೇಶಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇವರ ನಡುವೆ ಇಬ್ಬರು ವಿದೇಶಿ ವೇಗಿಗಳನ್ನು ಸೇರಿಸುವುದು ಸವಾಲಿನ ಕೆಲಸ.
ಇಬ್ಬರನ್ನೂ ಆಡಿಸಲು ಇರುವ ಆಯ್ಕೆಗಳು:
ಒಬ್ಬ ವಿದೇಶಿ ಬ್ಯಾಟರ್ ಅನ್ನು ಕೈಬಿಡುವುದು: ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಆರ್ಸಿಬಿ ಒಬ್ಬ ವಿದೇಶಿ ಪವರ್-ಹಿಟ್ಟರ್ ಅನ್ನು ಕೈಬಿಡಬೇಕಾಗುತ್ತದೆ. ಅಂದರೆ ಫಿಲ್ ಸಾಲ್ಟ್ ಅಥವಾ ಟಿಮ್ ಡೇವಿಡ್ ಅಥವಾ ರೊಮಾರಿಯೋ ಶೆರ್ಫಡ್… ಇವರಲ್ಲಿ ಇಬ್ಬರನ್ನು ಕೈ ಬಿಡುವುದು ಅನಿವಾರ್ಯ.
ಫಿಲ್ ಸಾಲ್ಟ್ಗೆ ಕೊಕ್: ಆರ್ಸಿಬಿ ಮ್ಯಾನೇಜ್ಮೆಂಟ್ ಫಿಲ್ ಸಾಲ್ಟ್ ಬದಲಿಗೆ ಜೋಶ್ ಹೇಝಲ್ವುಡ್ ಅಥವಾ ಜೇಕಬ್ ಡಫಿ ಅವರನ್ನು ಆಡಿಸಿದರೆ, ದೇವದತ್ ಪಡಿಕ್ಕಲ್ ವಿರಾಟ್ ಕೊಹ್ಲಿ ಜೊತೆ ಆರಂಭಿಕರಾಗಿ ಕಣಕ್ಕಿಳಿಯಬಹುದು.
ಫಿನಿಶರ್ ಬದಲಿಗೆ: ಸ್ಪೋಟಕ ದಾಂಡಿಗ ಟಿಮ್ ಡೇವಿಡ್ ಅಥವಾ ರೊಮಾರಿಯೋ ಶೆರ್ಫಡ್ ಬದಲಿಗೆ ಹೆಚ್ಚುವರಿ ವಿದೇಶಿ ಬೌಲರ್ ಅನ್ನು ಆಯ್ಕೆ ಮಾಡಿದರೆ, ಕೆಳ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ ಅವರು ಫಿನಿಶಿಂಗ್ ಜವಾಬ್ದಾರಿ ಹೊರಬೇಕಾಗುತ್ತದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಳಕೆ:
ಐಪಿಎಲ್ನ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಚಾಣಾಕ್ಷತನದಿಂದ ಬಳಸಿಕೊಂಡರೆ ಆರ್ಸಿಬಿ ಜೋಶ್ ಹೇಝಲ್ವುಡ್ ಹಾಗೂ ಜೇಕಬ್ ಡಫಿಯನ್ನು ಜೊತೆಯಾಗಿ ಕಣಕ್ಕಿಳಿಸಬಹುದು. ಇದಕ್ಕಾಗಿ ಆರ್ಸಿಬಿ ಮಾಡಬೇಕಿರುವುದು…
3 ವಿದೇಶಿ ಆಟಗಾರರು: ಪಂದ್ಯದ ಆರಂಭದಲ್ಲಿ ಆರ್ಸಿಬಿ ಕೇವಲ ಮೂವರು ವಿದೇಶಿ ಆಟಗಾರರನ್ನು ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಹೆಸರಿಸಬೇಕು.
ಇಂಪ್ಯಾಕ್ಟ್ ಸಬ್: ಮೊದಲು ಬ್ಯಾಟಿಂಗ್ ಮಾಡುವಾಗ ಮೂವರು ವಿದೇಶಿ ಆಟಗಾರರೊಂದಿಗೆ ಆಡಿ, ನಂತರ ಬೌಲಿಂಗ್ ಮಾಡುವಾಗ ಒಬ್ಬ ಭಾರತೀಯ ಬ್ಯಾಟರ್ ಬದಲಿಗೆ ಜೇಕಬ್ ಡಫಿ ಅಥವಾ ಜೋಶ್ ಹೇಝಲ್ವುಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತರಬಹುದು.
ಏನು ಮಾಡಬೇಕು: ಇದಕ್ಕಾಗಿ ಆರ್ಸಿಬಿ ಫಿಲ್ ಸಾಲ್ಟ್, ಟಿಮ್ ಡೇವಿಡ್ ಹಾಗೂ ಜೋಶ್ ಹೇಝಲ್ವುಡ್ ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರಿಸಬೇಕು. ಅಲ್ಲದೆ ರೊಮಾರಿಯೊ ಶೆಫರ್ಡ್ ಹಾಗೂ ಜೇಕಬ್ ಡಫಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿರಿಸಬೇಕು.
ಮಾಸ್ಟರ್ ಪ್ಲ್ಯಾನ್: ಮೂವರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಮತ್ತೋರ್ವ ವಿದೇಶಿ ಆಟಗಾರನನ್ನು ಕಣಕ್ಕಿಳಿಸಬಹುದು. ಅದರಂತೆ ಬ್ಯಾಟಿಂಗ್ಗೆ ಅನಿವಾರ್ಯತೆ ಇದ್ದರೆ ಮಾತ್ರ ರೊಮಾರಿಯೋ ಶೆರ್ಫಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬೇಕು. ಒಂದು ವೇಳೆ ಆರ್ಸಿಬಿ ತಂಡಕ್ಕೆ ರೊಮಾರಿಯೊ ಶೆಫರ್ಡ್ ಅವರ ಬ್ಯಾಟಿಂಗ್ನ ಅನಿವಾರ್ಯತೆ ಬರದಿದ್ದರೆ, ಬೌಲಿಂಗ್ ವೇಳೆ ಜೇಕಬ್ ಡಫಿಯನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಬಹುದು.
ಈ ಮೂಲಕ ಜೇಕಬ್ ಡಫಿ ಹಾಗೂ ಜೋಶ್ ಹೇಝಲ್ವುಡ್ ಅವರನ್ನು ಆರ್ಸಿಬಿ ಜೊತೆಯಾಗಿ ಕಣಕ್ಕಿಳಿಸಬಹುದು. ಅಂದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಜೇಕಬ್ ಡಫಿಯನ್ನು ಆಡಿಸಲು ಬಯಸಿದರೆ, ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುವಾಗ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಮೂವರು ವಿದೇಶಿ ಆಟಗಾರರನ್ನು ಮಾತ್ರ ಆಯ್ಕೆ ಮಾಡುವುದು ಅನಿವಾರ್ಯ.
ಅಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿ ರೊಮಾರಿಯೋ ಶೆಫರ್ಡ್ ಹಾಗೂ ಜೇಕಬ್ ಡಫಿ ಅವರನ್ನು ಸೇರ್ಪಡೆಗೊಳಿಸಬೇಕು. ಇಲ್ಲಿ ಆರ್ಸಿಬಿ ಬೇಗನೆ ಹೆಚ್ಚಿನ ವಿಕೆಟ್ ಕಳೆದುಕೊಂಡರೆ ಮಾತ್ರ ಶೆಫರ್ಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬಹುದು. ಒಂದು ವೇಳೆ ಆರ್ಸಿಬಿ 3 ಅಥವಾ 4 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ಪೇರಿಸಿದರೆ ಶೆಫರ್ಡ್ ಅವಶ್ಯಕತೆ ಎದುರಾಗುವುದಿಲ್ಲ.
ಹೀಗಾಗಿ ಬ್ಯಾಟಿಂಗ್ ವೇಳೆ ಇಂಪ್ಯಾಕ್ಟ್ ಪ್ಲೇಯರ್ನನ್ನು ಬಳಸಿಕೊಳ್ಳದಿರುವುದು ಉತ್ತಮ. ಅಲ್ಲದೆ ಬೌಲಿಂಗ್ ವೇಳೆ ಓರ್ವ ಬ್ಯಾಟರ್ನನ್ನು ಕೈ ಬಿಟ್ಟು ಜೇಕಬ್ ಡಫಿ ಅನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೋಶ್ ಹೇಝಲ್ವುಡ್ ಹಾಗೂ ಜೇಕಬ್ ಡಫಿ ಎಂಬ ವೇಗಾಸ್ತ್ರದೊಂದಿಗೆ ಕಣಕ್ಕಿಳಿಯಬಹುದು.
ಬಾಗಲಕೋಟೆ, ಏಪ್ರಿಲ್ 09: ಉಪ ಚುನಾವಣೆ ಗೆಲ್ಲಲು ಕಾಂಗ್ರೆಸಿಗರು ಕೋಟ್ಯಾಂತರ ರೂಪಾಯಿ ಹಣವನ್ನು ಹಂಚಿಕೆ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ದೂರಿದ್ದ ಬೆನ್ನಲ್ಲೇ ಮತದಾರರಿಗೆ ಕಾಂಗ್ರೆಸಿಗರು 500 ರೂಪಾಯಿ ಹಂಚಿರುವ ಆರೋಪ ಕೇಳಿಬಂದಿದೆ. ನವನಗರದ ವಾಂಬೆ ಕಾಲೋನಿಯಲ್ಲಿ ಕಾರಲ್ಲಿ ಬಂದವರು ಮತದಾರರಿಗೆ ಹಣ ನೀಡಿ ಆಮಿಷವೊಡ್ಡಿದ್ದು, ಕಾಂಗ್ರೆಸಿಗರು ಕೇವಲ ಐದುನೂರು ಕೊಟ್ಟರು ಎಂದು ಮಹಿಳೆಯೋರ್ವರು ಅಲವತ್ತುಕೊಂಡ ಪ್ರಸಂಗ ನಡೆದಿದೆ.
ಬೆಂಗಳೂರು, ಏಪ್ರಿಲ್ 09: ಹೆಣ್ಣಿನ ಅಂದ ಚಂದವನ್ನು ಹೆಚ್ಚಿಸುವುದೇ ಈ ಸೀರೆ . ಎಷ್ಟೇ ಫ್ಯಾಶನ್, ಟ್ರೆಂಡಿ ಉಡುಗೆಗಳು ಬಂದರೂ ಸೀರೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲೂ ಮೈಸೂರು ಸಿಲ್ಕ್ ಸೀರೆಗೆ ಎಲ್ಲಿಲ್ಲದ ಬೇಡಿಕೆಯಿದೆ. ಹೀಗಾಗಿ ಎಷ್ಟೇ ದುಬಾರಿಯಾದ್ರು ಈ ಸೀರೆಯನ್ನು ಖರೀದಿಸದೇ ಇರಲಾರರು. ಬೆಂಗಳೂರಿನಲ್ಲಿ (Bengaluru) ಕೆಎಸ್ಐಸಿ (KSIC) ಮೈಸೂರು ಸಿಲ್ಕ್ ಸೀರೆಗಾಗಿ ಯುವತಿಯೂ ಬೆಳಗಿನ ಜಾವ 4 ಗಂಟೆಗೆ ಬಂದು 6 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಸೀರೆ ಖರೀದಿಸಿದ ಘಟನೆ ವೈರಲ್ ಆಗಿದೆ. ಈ ವೇಳೆ ತಮಗಾದ ಅನುಭವವನ್ನು ಯುವತಿ ಹಂಚಿಕೊಂಡು ಈ ಸೀರೆಗೆ ಎಷ್ಟು ಕ್ರೇಜ್ ಇದೆ ಎಂದು ವಿವರಿಸಿದ್ದಾರೆ. ಈ ವಿಡಿಯೋ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
sona_sebin ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಯುವತಿಯೂ, ಜಯನಗರದಲ್ಲಿರುವ ಕೆಎಸ್ಐಸಿ ಮೈಸೂರು ಸಿಲ್ಕ್ಸ್ ಮಳಿಗೆಗೆ ಬೆಳಗಿನ ಜಾವ ಭೇಟಿ ನೀಡಿದ್ದನ್ನು ದಾಖಲಿಸಿದ್ದಾರೆ. ಮೈಸೂರು ಸಿಲ್ಕ್ ಸೀರೆಗಾಗಿ ಬೆಳಗ್ಗೆ 4 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಂತಿರುವ ಬಗ್ಗೆ ಹೇಳಿದ್ದಾರೆ. ಅದಲ್ಲದೇ, ಸೀರೆ ಖರೀದಿಸಲು ಮಹಿಳೆಯರು ಬೆಳಗಿನ ಜಾವ 3-4 ಗಂಟೆಗೆ ಬಂದು ಟೋಕನ್ ಪಡೆಯಲು ಗಂಟೆಗಟ್ಟಲೆ ಕಾಯುತ್ತಿರುವುದನ್ನು ತೋರಿಸಿದ್ದಾರೆ. ಆ ಬಳಿಕ ಕಾಫಿ ಕುಡಿಯಲು ಸ್ವಲ್ಪ ಹೊತ್ತು ಹೊರಗೆ ಹೋದ ನಂತರ, ಹಿಂತಿರುಗಿ ಬಂದಾಗ ಈ ಲಿಸ್ಟ್ ಗೆ 53 ಹೆಸರುಗಳು ಸೇರ್ಪಡೆಯಾಗಿವೆ ಎಂದು ಹೇಳುತ್ತಿರುವುದನ್ನು ಕಾಣಬಹುದು. ಶೋರೂಮ್ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ಜನರನ್ನು ಮಾತನಾಡಿಸಿದ್ದು, ಒಬ್ಬ ಮಹಿಳೆ ಬೆಳಗಿನ ಜಾವ 3 ಗಂಟೆಗೆ ಬಂದಿದ್ದೇನೆ ಎಂದು ಹೇಳಿದರೆ, ವ್ಯಕ್ತಿಯೊಬ್ಬ ಹಿಂದಿನ ರಾತ್ರಿ 9 ಗಂಟೆಗೆ ಬಂದಿದ್ದಾಗಿ ಹೇಳಿಕೊಂಡಿರುವುದನ್ನು ಕಾಣಬಹುದು.
ಆ ಬಳಿಕ ಈ ಯುವತಿಯೂ, ಅಂಗಡಿ ಬೆಳಿಗ್ಗೆ 10-10:30 ರ ಸುಮಾರಿಗೆ ಮಾತ್ರ ತೆರೆಯುತ್ತದೆ. ಒಮ್ಮೆ 10 ಜನರಿಗೆ ಮಾತ್ರ ಪ್ರವೇಶವಿದ್ದು, ಕೇವಲ 10 ನಿಮಿಷಗಳಲ್ಲಿ ಸೀರೆ ಆರಿಸಬೇಕು. ಒಂದು ಟೋಕನ್ಗೆ ಒಂದು ಸೀರೆ ಮಾತ್ರ ಸಿಗುತ್ತದೆ. ಮೈಸೂರು ಸಿಲ್ಕ್ ಸೀರೆಗಳ ಬೆಲೆ 23,000 ರೂನಿಂದ 2.5 ಲಕ್ಷ ರೂವರೆಗೆ ಇರುತ್ತದೆ ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.
ಈ ವಿಡಿಯೋ ನಾಲ್ಕೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹೆಣ್ಮಕ್ಕಳಿಗೆ ಸೀರೆ ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದರೆ, ಮತ್ತೊಬ್ಬರು, ಒಂದು ಸೀರೆ ಖರೀದಿಸಲು ಇಷ್ಟು ಕಷ್ಟ ಪಡಬೇಕಾ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಎಲ್ಲಾ ಸೀರೆ ಮಹಿಮೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ