Bengaluru Air Quality: ಬೆಂಗಳೂರು ಸೇರಿ ಕರಾವಳಿ, ಮಲೆನಾಡಿನ ವಾಯು ಗುಣಮಟ್ಟ ಉತ್ತಮ – Kannada News | Karnataka Air Quality Today: Bengaluru AQI and City Wise AQI Report July 21

ಬೆಂಗಳೂರು ಸೇರಿ ಕರಾವಳಿ, ಮಲೆನಾಡಿನ ವಾಯು ಗುಣಮಟ್ಟ ಉತ್ತಮ

ಬೆಂಗಳೂರು, ಜುಲೈ 21: ಕರ್ನಾಟಕದಲ್ಲಿ ಮುಂಗಾರು ಮಳೆಯ ಆರ್ಭಟದ ನಡುವೆ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸುಧಾರಣೆಯಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಇಂದು ಉತ್ತಮ ಹಂತದಲ್ಲಿದೆ. ನಿರಂತರ ಮಳೆ ಮತ್ತು ತಂಪಾದ ಗಾಳಿಯ ಕಾರಣದಿಂದ ವಾಯು ಮಾಲಿನ್ಯದ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ.

ರಾಜಧಾನಿ ಬೆಂಗಳೂರಿನ ಇಂದಿನ AQI ಸ್ಥಿತಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಸರಾಸರಿ AQI 45 ರಿಂದ 55ರ ವ್ಯಾಪ್ತಿಯಲ್ಲಿ ದಾಖಲಾಗಿದೆ. ಗಾಳಿಯಲ್ಲಿ ಸೂಕ್ಷ್ಮ ಧೂಳಿನ ಕಣಗಳಾದ PM2.5 ಮಟ್ಟವು ಪ್ರತಿ ಕ್ಯೂಬಿಕ್ ಮೀಟರ್‌ಗೆ 6 ರಿಂದ 14 ಮೈಕ್ರೋಗ್ರಾಂಗಳಷ್ಟು ಮಾತ್ರ ಇದೆ. PM10 ಹಾಗೂ ಸಲ್ಫರ್ ಡೈಆಕ್ಸೈಡ್ ಮಟ್ಟಗಳು ಸುರಕ್ಷಿತ ಮಿತಿಯಲ್ಲೇ ಇವೆ.

ಜಯನಗರ, ಹೆಬ್ಬಾಳ, ಮತ್ತು ಬಿಟಿಎಂ ಲೇಔಟ್ ಪ್ರದೇಶಗಳಲ್ಲಿ ಗಾಳಿಯ ಶುದ್ಧತೆ ಉತ್ತಮವಾಗಿದ್ದರೆ, ಸಿಟಿ ರೈಲ್ವೆ ಸ್ಟೇಷನ್ ಮತ್ತು ಸಿಲ್ಕ್ ಬೋರ್ಡ್ ಸುತ್ತಮುತ್ತಲಿನ ವಾಹನ ದಟ್ಟಣೆ ಪ್ರದೇಶಗಳಲ್ಲಿ AQI ಸಲ್ಪ ಹೆಚ್ಚಿದ್ದು ಸಾಧಾರಣ ಮಟ್ಟದಲ್ಲಿದೆ. ಮಳೆಯಿಂದಾಗಿ ಧೂಳಿನ ಕಣಗಳು ಭೂಮಿಗೆ ಸೇರುತ್ತಿರುವುದರಿಂದ ಬೆಂಗಳೂರಿಗರು ಪ್ರಸ್ತುತ ಸ್ವಚ್ಛ ಹಾಗೂ ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ.

ರಾಜ್ಯದ ಇತರೆ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ

ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ವಾಯು ಮಾಲಿನ್ಯ ಅತ್ಯಂತ ಕಡಿಮೆಯಿದ್ದು, ‘ಅತ್ಯುತ್ತಮ’ ವಾಯು ಗುಣಮಟ್ಟ ದಾಖಲಾಗಿದೆ.

  • ಚಿಕ್ಕಮಗಳೂರು: 38 (ಉತ್ತಮ)
  • ಬೆಳಗಾವಿ: 43 (ಉತ್ತಮ)
  • ಉಡುಪಿ ಮತ್ತು ಮಂಗಳೂರು: 46 – 48 (ಉತ್ತಮ)
  • ಗದಗ ಮತ್ತು ಕೊಪ್ಪಳ: 44 (ಉತ್ತಮ)
  • ಬಳ್ಳಾರಿ ಮತ್ತು ಬಾಗಲಕೋಟೆ: 50 – 65 (ಸಾಧಾರಣ)

ಇಂದಿನ ವಾಯು ಗುಣಮಟ್ಟವು ಬಹುತೇಕ ಸುರಕ್ಷಿತವಾಗಿದ್ದು, ಸಾರ್ವಜನಿಕರು ಹಾಗೂ ವೃದ್ಧರು ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಆದಾಗ್ಯೂ, ಮಳೆಯ ವಾತಾವರಣ ಮತ್ತು ತಂಪಾದ ಗಾಳಿಯಿರುವುದರಿಂದ ಉಸಿರಾಟದ ತೊಂದರೆ ಅಥವಾ ಆಸ್ತಮಾ ಇರುವವರು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಒಳಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರ್ನಾಟಕ ಕರಾವಳಿ, ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ, ಗಾಳಿಯ ಮುನ್ಸೂಚನೆ – Kannada News | Karnataka Weather Forecast July 21 and 22: Rain to Continue Across Coastal and Interior Districts

ಶಿವಮೊಗ್ಗದಲ್ಲಿ ಮಳೆ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜುಲೈ 21: ಕರ್ನಾಟಕದ ಅನೇಕ ಕಡೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯ ವಾತಾವರಣ ಮುಂದುವರಿಯಲಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು (Bengaluru) ಕೇಂದ್ರ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಬಹುತೇಕ ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಅಲ್ಲಲ್ಲಿ ಮಳೆಯಾಗಲಿದೆ.

ಬೆಂಗಳೂರಿಗೂ ಮಳೆ ಮುನ್ಸೂಚನೆ

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲೂ ಸಾಧಾರಣ ಮಳೆಯೊಂದಿಗೆ 30-40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯಿದೆ.

ಜುಲೈ 22ರಂದೂ ಇದೇ ರೀತಿಯ ಹವಾಮಾನ ಮುಂದುವರಿಯಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಅನೇಕ ಕಡೆ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಎಲ್ಲೆಲ್ಲಿ ಭಾರಿ ಮಳೆಯಾಗಿದೆ? ಎಷ್ಟು?

ಜುಲೈ 20 ರ ಸಂಜೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿಯಲ್ಲಿ ಅತಿ ಹೆಚ್ಚು 11 ಸೆಂ.ಮೀ. ಮಳೆಯಾಗಿದೆ. ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ 10 ಸೆಂ.ಮೀ. ಮಳೆ ದಾಖಲಾಗಿದೆ.

  • ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) – 8 ಸೆಂ.ಮೀ.
  • ಬೆಳ್ತಂಗಡಿ (ದಕ್ಷಿಣ ಕನ್ನಡ) – 7 ಸೆಂ.ಮೀ.
  • ಜಗಲ್‌ಬೆಟ್ (ಉತ್ತರ ಕನ್ನಡ) – 7 ಸೆಂ.ಮೀ.
  • ಕೆಂಭಾವಿ (ಯಾದಗಿರಿ) – 7 ಸೆಂ.ಮೀ.
  • ಮಂಗಳೂರು ವೀಕ್ಷಣಾಲಯ – 7 ಸೆಂ.ಮೀ.
  • ಮೂಡುಬಿದಿರೆ (ದಕ್ಷಿಣ ಕನ್ನಡ) – 7 ಸೆಂ.ಮೀ.
  • ಸುಳ್ಯ (ದಕ್ಷಿಣ ಕನ್ನಡ) – 7 ಸೆಂ.ಮೀ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗಲು ಇದು ಸುದಿನ! 12 ರಾಶಿಗಳ ದಿನ ಭವಿಷ್ಯ ವಿವರಣೆ ಇಲ್ಲಿದೆ – Kannada News | Subrahmanya Blessings on July 21, 2026: Daily Horoscope for All 12 Zodiac Signs by Dr Basavaraj Guruji

ಇಂದು 2026ರ ಜುಲೈ 21, ಮಂಗಳವಾರ, ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷದ ಅಷ್ಟಮಿ, ಚಿತ್ತಾ ನಕ್ಷತ್ರ, ಸಿದ್ಧ ಯೋಗ ಮತ್ತು ವಣಿಕ ಕರಣ ಇರಲಿದೆ. ಈ ದಿನದ ರಾಹುಕಾಲವು ಮಧ್ಯಾಹ್ನ 3 ಗಂಟೆ 26 ನಿಮಿಷದಿಂದ ಸಂಜೆ 5 ಗಂಟೆ 11 ನಿಮಿಷದ ತನಕ ಇರುತ್ತದೆ. ಇನ್ನು ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲವು ಬೆಳಗ್ಗೆ 10 ಗಂಟೆ 50 ನಿಮಿಷದಿಂದ ಮಧ್ಯಾಹ್ನ 12 ಗಂಟೆ 25 ನಿಮಿಷದ ತನಕ ವ್ಯಾಪಿಸಿದೆ. ಇದು ಒಂದು ಮಹಾ ಪರ್ವ ದಿನವಾಗಿದೆ ಎಂದು ‘ಟಿವಿ9’ ಕನ್ನಡ ಡಿಜಿಟಲ್ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಅಲ್ಲದೆ, ಮೇಷಾದಿ 12 ರಾಶಿಗಳ ದಿನ ಭವಿಷ್ಯವನ್ನೂ ವಿವರಿಸಿದ್ದಾರೆ.

Source link

ನಿತ್ಯ ಭವಿಷ್ಯ: ಇಂದು ಈ ರಾಶಿಯವರಿಂದ ವಿವಾಹದ ವಸ್ತುಸ್ಥಿತಿಯ ಅರಿವು, ಅತಿಯಾದ ದುಃಖ – Kannada News | Horoscope Today July 21: What Your Zodiac Sign Reveals for Financial and Family Life

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಶುಕ್ಲ ಪಕ್ಷದ ಸಪ್ತಮೀ ತಿಥಿಯ ಮಂಗಳವಾರದಂದು ಕೇಳಿಕೊಂಡಿದ್ದು ಸಿಹದು, ಮುಖ್ಯವಾದುದರ ನಷ್ಟ, ಸಮಯ ಪಾಲನೆ ಅಸ್ತವ್ಯಸ್ತ, ಒಳ್ಳೆಯ ಅಭ್ಯಾಸಗಳ ಆರಂಭ, ಆಹಾರದಿಂದ ತೊಂದರೆ, ಅನಿರೀಕ್ಷಿತ ಒತ್ತಡ, ವೈವಾಹಿಕ ಜೀವನದ ಚಿಂತೆ ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುನರ್ವಸು, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಸಪ್ತಮೀ ನಿತ್ಯನಕ್ಷತ್ರ : ಚಿತ್ರಾ, ಯೋಗ : ಶುಭ, ಕರಣ : ಗರಜ, ಸೂರ್ಯೋದಯ – 06 – 03 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:37 – 17:13, ಯಮಗಂಡ ಕಾಲ 09:15 – 10:50 ಗುಳಿಕ ಕಾಲ 12:26 – 14:02

ಮೇಷ ರಾಶಿ :

ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಉತ್ತಮ ಮನೋಭಾವವನ್ನು ಹೊಂದಿರುವ ಸಾಧ್ಯತೆ ಇದೆ.‌ ವಾಹನ ಖರೀಗೆ ಉತ್ಸಾಹ ಹೆಚ್ಚಿರುವುದು. ದೀರ್ಘ ಸಮಯದಿಂದ ಅನಾರೋಗ್ಯವು ಕಾಡುತ್ತಿದ್ದರೆ, ಇಂದು ಮುಕ್ತಿಪಡೆಯಬಹುದಾಗಿದೆ. ಮನೆಯ ಉತ್ಸವದಲ್ಲಿ ಪಾಲ್ಗೊಳ್ಳಲಾಗದು. ನಿಮಗೆ ಎದುರಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಿರಿ. ಇಂದು ಸಂಗಾತಿಯು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ.

ವೃಷಭ ರಾಶಿ :

ನೂತನ ಗೃಹದ ಹುಡುಕಾಟ ಮಾಡಲಿದ್ದೀರಿ. ನಿಮ್ಮ ಸೌದರ್ಯದ ಬಗ್ಗೆ ನಿಮಗೆ ಹಮ್ಮು ಇರಬಹುದು. ಸಾಲ ಕೊಟ್ಟವರ ಕಾಟದಿಂದ ಹತಾಶರಾಗುವಿರಿ. ಹಳೆಯ ಪರಿಚಿತರ ಭೇಟಿಯಾಗಲಿದೆ. ಇದು ಆತ್ಮೀಯವಾಗುವ ಸಾಧ್ಯತೆ ಇದೆ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಬಂದೀತು. ಅತಿಯಾದ ಬಂಧನವೂ ನಿಮಗೆ ಕಿರಿಕಿರಿ ಎನಿಸಬಹುದು. ಇಂದು ನಿಮ್ಮ ಸ್ನೇಹಿತರು ಮನೆಗೆ ಬರಬಹುದು.

ಮಿಥುನ ರಾಶಿ :

ನಿಮ್ಮನ್ನು ತಾತ್ಸಾರ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡುವ ಸಾಧ್ಯತೆ ಇದೆ. ಮನಸ್ಸಿನ ನಿಗ್ರಹವನ್ನು ಮಾಡಲು ನೀವು ಬಹಳ ಪ್ರಯತ್ನಿಸುವಿರಿ. ಸಾಲಬಾಧೆಯ ಚಿಂತೆ ಕಾಡಲಿದೆ. ಪ್ರವಾಸದಲ್ಲಿ ಭೀತಿಯಾಗಲಿದೆ. ಅಸಮತೋಲನ ಆಹಾರದಿಂದ ನಿಮಗೆ ಕಷ್ಟವಾದೀತು. ನಿಮ್ಮ ಮಾತುಗಳು ಸರಿಯಾಗಿ ಸಂವಹವಾಗದೇ ಇದ್ದೀತು. ಮನೆಯವರ ಜೊತೆ ಪ್ರಯಾಣವನ್ನು ಮಾಡುವಿರಿ. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು.

ಕರ್ಕಾಟಕ ರಾಶಿ :

ಮಾಡಲು ಕೆಲಸಗಳಿದ್ದರೂ ಮಾಡದೇ ಸಮಯವನ್ನು ಹಾಳುಮಾಡುವಿರಿ. ದೂರದ ಊರಿಗೆ ಪ್ರಯಾಣವು ಅನಿರೀಕ್ಷಿತ ವಾಗಲಿದೆ. ಕೆಲಸದಿಂದ ನಿಮಗೆ ಅತಿಯಾದ ಮಾನಸಿಕ ಹಾಗೂ ದೈಹಿಕ ಆಯಾಸವಾಗಬಹುದು.‌ ಸ್ವಲ್ಪ ವಿಶ್ರಾಂತಿ ಪಡೆಯುವುದು ಉತ್ತಮ. ಹಲವು ದಿನಗಳ ಅನಂತರ ಓದುವ ಅಭ್ಯಾಸ ಆರಂಭವಾಗುವುದು. ಉನ್ನತ ಹುದ್ದೆಗೆ ಏರುವ ಅವಕಾಶ ಬರಲಿದ್ದು ಅದರಲ್ಲಿ ನಿಮಗೆ ಆಸಕ್ತಿ ಕಡಿಮೆಯಾಗುವುದು.

ಸಿಂಹ ರಾಶಿ :

ಉಲ್ಲಾಸ ಮತ್ತು ಸಂತೋಷಗಳು ಎಂದಿಗಿಂತ ಇಂದು ಹೆಚ್ಚು ಇರಲಿದೆ. ಅಪರೂಪದ ಆಹಾರವನ್ನು ಅತಿಯಾಗಿ ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಸಂಶೋಧನೆಯನ್ನು ಮಾಡುತ್ತಿದ್ದರೆ ನಿಮಗೆ ಹೆಚ್ಚಿನ ಬೆಂಬಲ, ಪ್ರೋತ್ಸಾಹಗಳು ಸಿಗಬಹುದು. ಸೊಂಟ ಭಾಗದಲ್ಲಿ ನೋವುಗಳು ಕಾಣಿಕೊಂಡೀತು. ನಿಮ್ಮ ವಿವೇಕವನ್ನು ಬಳಸಿ. ದೂರದ ಬಂಧುಗಳ ಆಗಮನವು ಆಗಲಿದೆ. ದೌರ್ಬಲ್ಯವನ್ನು ಮೆಟ್ಟಿ ಸಾಧಿಸಬೇಕಾದುದು ಇದೆ.

ಕನ್ಯಾ ರಾಶಿ :

ಇತರರಿಗೆ ಹೆಚ್ಚು ಮಾತನಾಡಿ ಕಿರಿಕಿರಿ ಹುಟ್ಟಿಸಬೇಡಿ. ಸಹನೆಯನ್ನೇ ನಿಮ್ಮ ಆಯುಧವನ್ನಾಗಿ ಮಾಡಿಕೊಳ್ಳಿ. ಅವಿವಾಹಿತರಿಗೆ ಕೊರಗು ದೂರಾಗುವುದು. ದ್ವೇಷವನ್ನು ಇಟ್ಟುಕೊಂಡು ನಿಮ್ಮ ಮನಸ್ಸನ್ನು ಪ್ರಕ್ಷುಬ್ಧಗೊಳಿಸಿಕೊಳ್ಳುವುದು ಬೇಡ. ನಿಮ್ಮ ಅಸೂಯೆ ಕೆಟ್ಟ ಕೆಲಸವನ್ನು ಮಾಡಿಸುವುದು. ವೃತ್ತಿಯನ್ನು ಆನಂದಿಸಿ, ಖುಷಿಯಿಂದ ಕೆಲಸಮಾಡಿ. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ಒಂದೇ ರೀತಿಯಲ್ಲಿ ಜೀವನವನ್ನು ಸಾಗಿಸಲು ಕಷ್ಟವಾದೀತು.

ತುಲಾ ರಾಶಿ :

ನಿಮಗೆ ಅಪಮಾನ ಮಾಡಲು ಪಿತೂರಿಗಳೂ ಆಗಬಹುದು. ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿಡಿ. ನಿಮ್ಮ ಉತ್ತಮ‌ವಾದ ಹವ್ಯಾಸಕ್ಕೆ ಗೌರವ ಸಿಗಬಹುದು. ಅನವರತ ಕೆಲಸದಿಂದ ನಿಮಗೆ ಸ್ವಲ್ಪ ವಿಶ್ರಾಂತಿಯು ಇಂದು ಸಿಗಲಿದೆ. ಹೊಸ ಉದ್ಯೋಗದ ಸುದ್ದಿ ನಿಮಗೆ ನೆಮ್ಮದಿ ಕೊಡುವುದು. ನೂತನ ಗೃಹ ನಿರ್ಮಾಣದ ಬಗ್ಗೆ ಯೋಜನೆಯನ್ನು ಕುಟುಂಬದ ಜೊತೆ ಕುಳಿತು ರೂಪಿಸುವಿರಿ. ಯಾರನ್ನೋ ಹೆದರಿಸಿ ಕೆಲಸ ಮಾಡಿಸಿಕೊಳ್ಳುವ ವಿಚಾರಕ್ಕೆ ಹೋಗುವುದು ಬೇಡ.

ವೃಶ್ಚಿಕ ರಾಶಿ :

ಕೆಲಸ ಇಲ್ಲದೇ ಇದ್ದರೂ ಸುಮ್ಮನೇ ಕುಳಿತುಕೊಳ್ಳುವುದು ಬೇಡ. ಅಸಾಧ್ಯವನ್ನು ಸಾಧಿಸುವ ಛಲವನ್ನು ಬಿಟ್ಟು ಸರಿಯಾದುದರ ಕಡೆಗೆ ಹೋಗುವುದು ಒಳ್ಳೆಯದು. ಮಕ್ಕಳು ನಿಮ್ಮ ಜೊತೆ ಸುತ್ತಾಡಲು ಬರುವರು. ಹೂಡಿಕೆಯ ನೆಪದಲ್ಲಿ ಒಂದಿಷ್ಟು ನಷ್ಟವು ನಿಮಗೆ ಗೊತ್ತಾಗದಂತೆ ಖಾಲಿಯಾಗುವುದು. ಸಮಯ ಹಾಗೂ ಹಣ ಎರಡನ್ನೂ ಜೋಪಾನ‌ ಮಾಡಿಕೊಳ್ಳಿ. ನಿಮ್ಮ ಭೂಮಿಯು ನಿಮಗೆ ಸಿಗಲಿದೆ. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ.

ಧನು ರಾಶಿ :

ನಿಮಗೆ ಮನೆಯವರ ಸಹಕಾರದಿಂದ ಎಲ್ಲ ಕಾರ್ಯವನ್ನು ಮಾಡುವಿರಿ. ನಿದ್ರಾಹೀನತೆಯಿಂದ ಸ್ವಲ್ಪ ಆಲಸ್ಯವೂ ಇರಲಿದೆ. ಇಷ್ಟವಾದರ ಮಾತುಗಳು ನಿಮಗೆ ಬೇರೆ ರೀತಿಯಲ್ಲಿ ಅನ್ನಿಸಬಹುದು. ಮಕ್ಕಳ ವರ್ತನೆಯು ಊಹಿಸಲಾಗಸಷ್ಟು ಬದಲಾವಣೆಯಾಗಲಿದ್ದು, ಬೇಸರವಾಗಲಿದೆ. ಯಾರದೋ ಕಾರಣಕ್ಕೆ ನೀವು ಓಡಾಟ ಮಾಡಬೇಕಾಗುವುದು. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು.

ಮಕರ ರಾಶಿ :

ಇಂದು ನೀವು ಯಾವುದೇ ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಆರಾಮಾಗಿ ಮಾತನಾಡಿ ದಿನವನ್ನು ಕಳೆಯುವಿರಿ. ಸ್ನೇಹಿತರ ಜೊತೆ ದಿನವನ್ನು ಕಳೆಯಲು ಹೊರಗೆ ಸುತ್ತಾಡಲು ಹೋಗುವಿರಿ. ಅಪರಿಚಿತರು ನಿಮಗೆ ಸಹಾಯವನ್ನು ಮಾಡುವರು. ಪಾಲುದಾರಿಕೆಯಲ್ಲಿ ಬರುವ ಮನಸ್ತಾಪವನ್ನು ಮುಂದುವರಿಸದೇ ಅಲ್ಲಿಯೇ ಮೊಟಕುಗೊಳಿಸಿ. ಇಂದು ನಿಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಾರಿರಿ. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ

ಕುಂಭ ರಾಶಿ :

ಇಂದು ಕೆಟ್ಟ ಕನಸುಗಳು ಬೀಳಬಹುದು. ಬೆಳಗ್ಗೆ ದೇವರಿಗೆ ದೀಪ ಬೆಳಗಿ. ಮೇಲಧಿಕಾರಿಗಳ ಮಾತು ನಿಮ್ಮ ಉತ್ಸಾಹವನ್ನು ತಗ್ಗಿಸೀತು. ಮಕ್ಕಳಿಗಾಗಿ ನೀವು ಸಂಪತ್ತನ್ನು ಕೂಡಿಡುವಿರಿ. ಇಬ್ಬರ ಮಧ್ಯದಲ್ಲಿ ನೀವು ಸಿಕ್ಕಿಬೀಳಬಹುದು. ದಾಂಪತ್ಯದಲ್ಲಿ ಒಡಕು ಬರುವ ಸಾಧ್ಯತೆ ಇದೆ. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ದಿನದ ಕೊನೆಗೆ ಯಾರಿಂದಲಾದರೂ ಶುಭ ವಾರ್ತೆ ಬರಲಿದೆ.

ಮೀನ ರಾಶಿ :

ಇಂದು ನಡೆಯುವ ನಕಾರಾತ್ಮಕ ವಾರ್ತೆಯನ್ನು ಲೆಕ್ಕಿಸದೇ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಮಾಡುವ ಕೆಲಸದಲ್ಲಿ ಉತ್ಸಾಹವು ಅಧಿಕವಾಗಿರಲಿದೆ. ಭೂಮಿಯ ವ್ಯವಹಾರದಲ್ಲಿ ಪಾಲುದಾರಿಕೆ ಇರಲಿದೆ. ಇರುವ ಗೌರವವನ್ನು ಉಳಿಸಿಕೊಳ್ಳಿ. ಅಪೂರ್ಣವಾದ ವ್ಯವಹಾರಗಳನ್ನು ಶೀಘ್ರವಾಗಿ ಮುಗಿಸಿಕೊಳ್ಳುವಿರಿ. ನಿಮ್ಮ ಜೊತೆ ಬಂದವರು ನಿಮಗೆ ಶ್ರೇಯಸ್ಸನ್ನು ಹಾರೈಸುವರು. ಇಂದು ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಬಹುದು.

– ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:59 am, Tue, 21 July 26

Source link

ಇವರಿಬ್ಬರು ತಂಡದಿಂದ ಹೊರಬಿದ್ದರೆ ಟೀಂ ಇಂಡಿಯಾ ಸರ್ವನಾಶ; ಗಂಗೂಲಿ ಆಕ್ರೋಶ – Kannada News | Sourav Ganguly Slams India’s Youngsters: Stop Relying on Rohit Kohli, Take Responsibility!

ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭಾರತ ತಂಡ 27 ರನ್‌ಗಳಿಂದ ಸೋತಿತು. ಈ ಸೋಲಿನೊಂದಿಗೆ ತಂಡ ಸರಣಿ ಕೂಡ ಕಳೆದುಕೊಂಡಿತು. ಇಂಗ್ಲೆಂಡ್‌ ನೀಡಿದ 388 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕ ಶುಭ್​ಮನ್ ಗಿಲ್ ಹಾಗೂ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಗೆಲುವಿಗಾಗಿ ಹೋರಾಟ ನೀಡಿದರೂ, ಯುವ ಆಟಗಾರರ ಕಳಪೆ ಬ್ಯಾಟಿಂಗ್​ನಿಂದಾಗಿ ತಂಡ ಸೋಲಿಗೆ ಕೊರಳೊಡ್ಡಬೇಕಾಯಿತು. ಇದೀಗ ತಂಡದ ಯುವ ಆಟಗಾರರ ಬೇಜವಾಬ್ದಾರಿಯುತ ಬ್ಯಾಟಿಂಗ್​ಗೆ ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸೋಲಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾದ ಗತಿ ಏನಾಗಬಹುದು?

ತಂಡದ ಸೋಲಿಗೆ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಯುವ ಆಟಗಾರರು ಯಾವಾಗಲೂ ಹಿರಿಯರ ಮೇಲೆ ಅವಲಂಬಿತರಾಗುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ. ‘ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರತಿ ಬಾರಿಯೂ ಪಂದ್ಯಗಳನ್ನು ಗೆಲ್ಲಿಸುತ್ತಾರೆಂದು ನಿರೀಕ್ಷಿಸುವುದು ಸರಿಯಲ್ಲ. ಈ ಇಬ್ಬರು ನಾಳೆ ತಂಡದಿಂದ ಹೊರಬಿದ್ದರೆ ಟೀಂ ಇಂಡಿಯಾದ ಗತಿ ಏನಾಗಬಹುದು? ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರು ಬೇಜವಾಬ್ದಾರಿಯಿಂದ ಆಡುತ್ತಿರುವುದು ನಿರಾಶಾದಾಯಕವಾಗಿದೆ. ನಮ್ಮ ಹುಡುಗರಲ್ಲಿ ಒಬ್ಬರು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರಂತೆ ಮಿಂಚಿನ ಇನ್ನಿಂಗ್ಸ್ ಆಡಿದ್ದರೆ, ಗೆಲುವು ನಮ್ಮದಾಗುತ್ತಿತ್ತು. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಯುವ ಆಟಗಾರರು ಜವಾಬ್ದಾರಿಯುತವಾಗಿ ಆಡಲು ಕಲಿಯಬೇಕು’ ಎಂದು ಗಂಗೂಲಿ ಹೇಳಿದ್ದಾರೆ.

ಕೊನೆಯ 2 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ

ಸೌರವ್ ಗಂಗೂಲಿ ನೀಡಿದ ಹೇಳಿಕೆ ಅಕ್ಷರಶಃ ಸತ್ಯವಾಗಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಕ್ರೀಸ್​ನಲ್ಲಿ ಇರುವವರೆಗೂ ಟೀಂ ಇಂಡಿಯಾ ದೊಡ್ಡ ಮೊತ್ತವನ್ನು ಕಲೆಹಾಕುವಂತೆ ತೋರುತ್ತಿತ್ತು. ಆದರೆ ಕೊಹ್ಲಿ ವಿಕೆಟ್ ಪತನದೊಂದಿಗೆ ತಂಡದ ಪೆವಿಲಿಯನ್ ಪರೇಡ್ ಶುರುವಾಯಿತು. ಹೀಗಾಗಿ ಒಂದು ಹಂತದಲ್ಲಿ 300 ರನ್​ಗಳನ್ನು ಕಲೆಹಾಕುವ ಸೂಚನೆ ನೀಡಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್ ಕೇವಲ 233 ರನ್​​ಗಳಿಗೆ ಅಂತ್ಯವಾಯಿತು.

ರೋಹಿತ್- ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ? ಇಲ್ಲಿದೆ ಏಕದಿನ ಸರಣಿಗಳ ವೇಳಾಪಟ್ಟಿ

ಮೂರನೇ ಏಕದಿನ ಪಂದ್ಯದಲ್ಲೂ ರೋಹಿತ್, ಕೊಹ್ಲಿ ಆಡುತ್ತಿರುವಾಗ ತಂಡ ಸುಲಭವಾಗಿ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ರೋಹಿತ್ ವಿಕೆಟ್ ಪತನದ ಬಳಿಕ ಕೊಹ್ಲಿಗೆ ಯಾರು ಸಾಥ್ ನೀಡಲಿಲ್ಲ. ಇತ್ತ ಕೊಹ್ಲಿ ಏಕಾಂಗಿ ಹೋರಾಟ ನೀಡಲು ಹೋಗಿ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್ ಪತನದ ಬಳಿಕ ಇಂಗ್ಲೆಂಡ್‌ ಗೆಲುವು ಖಚಿತವಾಯಿತು. ಹೀಗಾಗಿ ಗಂಗೂಲಿ ಹೇಳಿಕೆಯಂತೆ ತಂಡದ ಇತರ ಬ್ಯಾಟರ್​ಗಳು ಅದರಲ್ಲೂ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಬರುವವರು ಹೋರಾಟದ ಮನೋಭಾವದೊಂದಿಗೆ ಕಣಕ್ಕಿಳಿಯಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗೂ ಲಗ್ಗೆ ಇಟ್ಟ ಚಿರತೆ: ಬೀದಿ ನಾಯಿ ಮೇಲೆ ಅಟ್ಯಾಕ್, ಬೆಚ್ಚಿಬಿದ್ದ ಸ್ಥಳೀಯರು – Kannada News | Leopard enters in Bengaluru, 4 Time spotted around Yashwanthpur Assembly constituency, scares People

ಬೆಂಗಳೂರು, (ಜುಲೈ 20): ಯಶವಂತಪುರ (Yashwanthpur) ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿಯ ಒಂಟಿ ಚಿರತೆ (Leopard) ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿಯಲು ಮುಂದಾಗ್ತಿಲ್ಲ ಅನ್ಸುತ್ತೆ. ಕಳೆದ ವಾರ ಮೂರು ಬಾರಿ ಚಿರತೆ ಕಾಣಿಸಿಕೊಂಡಿತ್ತು, ನಂತರ ಗಿಡಮರಗಳನ್ನೆಲ್ಲ ತೆರವು ಮಾಡಿದ್ರು, ನಿವಾಸಿಗಳು ಇನ್ಮುಂದೆ ಚಿರತೆ ಬರೋದಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ರು. ಆದರೆ ಇದೀಗ ಮತ್ತೆ ಪಕ್ಕದ ರೋಡ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ.

ಜುಲೈ 9ರಿಂದ ಈತನಕ 4 ಸಲ ಚಿರತೆ ಪ್ರತ್ಯಕ್ಷ

ಹೌದು.. ಜುಲೈ 9ರಿಂದ ಈತನಕ 4 ಸಲ ಭಾರತ್​​ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಅರಣ್ಯ ಇಲಾಖೆ ಇಟ್ಟಿರುವ ಬೋನ್​​ಗೆ ಬಿದ್ದಿಲ್ಲ. ನಿನ್ನೆ ಬೆಳಗ್ಗೆ ಮತ್ತೆ 13ನೇ ಮಖ್ಯರಸ್ತೆಯಲ್ಲಿ ಶ್ವಾನದ ಮೇಲೆ ಚಿರತೆ ದಾಳಿ ಮಾಡಲು ಯತ್ನಿಸಿ ಪರಾರಿ ಆಗಿದೆ. ಅಟ್ಯಾಕ್ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಚಿರತೆಯನ್ನ ಸೆರೆ ಹಿಡಿಯದ ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇನ್ನೂ ಮೂರು ಬಾರಿ ಚಿರತೆ ಕಾಣಿಸಿಕೊಂಡಿದ್ದ ಖಾಲಿ ಸೈಟ್ ಬಳಿ ಅರಣ್ಯ ಇಲಾಖೆ ಒಂದು ಬೋನ್ ಇಟ್ಟು,ಅದರಲ್ಲಿ ಬಾಯ್ಲರ್ ಕೋಳಿಯನ್ನು ಇಡಲಾಗಿದೆ. ಆದರೆ ಆ ಕಿಲಾಡಿ ಚಿರತೆ ಕೋಳಿ ವಾಸನೆಗೆ ಬೋನ್ ಬಳಿ ಬರುತ್ತಿದೆ. ಆದರೆ, ಚಿರತೆ ಬೋನ್ ಒಳಗೆ ಮಾತ್ರ ಹೋಗ್ತಿಲ್ಲ. ಇತ್ತ ಭಾರತ ನಗರದ 13ನೇ ಮುಖ್ಯ ರಸ್ತೆಯಲ್ಲಿ ನಿನ್ನೆ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದ್ದ ಖಾಲಿ ಸೈಟ್ ಬಳಿ,ಇಂದು ಭಾರತ ನಗರದ ನೂರಾರು ನಿವಾಸಿಗಳು ಜಮಾಯಿಸಿದ್ದರು, ನಂತರ ಸ್ಥಳಕ್ಕೆ ಬಂದ ಜೆಸಿಬಿ ಎಲ್ಲಾ ಗಿಡಗಂಟಿಗಳನ್ನು ಕ್ಲೀನ್ ಮಾಡಿದರು.

ಇನ್ನು ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿಗಳು, ಈ ಚಿರತೆಯಿಂದ ನಮಗೆ ತುಂಬಾ ಭಯ ಆಗ್ತಿದೆ. ಮನೆಯಿಂದ ಹೊರಗೆ ಬರಲು ಆಗ್ತಿಲ್ಲ, ಇಲ್ಲಿನ ನಿವಾಸಿಗಳು ವಾಕಿಂಗ್ ಮಾಡುವುದನ್ನೇ ಬಿಟ್ಟಿದ್ದೇವೆ. ಮಕ್ಕಳನ್ನು ಹೊರಗೆ ಆಟವಾಡಲು ಕಳಿಸಲು ಆಗ್ತಿಲ್ಲ, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ನಾಲ್ಕೈದು ಬೋನ್ ಇಟ್ಟು ಅದನ್ನು ಸೆರೆ ಹಿಡಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಟ್ನಲ್ಲಿ ಭಾರತ್ ನಗರದಲ್ಲಿ ಕಳೆದ ಎರಡು ವಾರದಲ್ಲಿ ನಾಲ್ಕು ಬಾರಿ ಚಿರತೆ ಕಾಣಿಸಿಕೊಂಡಿದೆ, ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಒಂದು ಬೋನ್ ಇಟ್ಟು ಕೈ ತೊಳೆದುಕೊಂಡಿದ್ದಾರೆ. ಯಾರನ್ನಾದರೂ ಚಿರತೆ ಬಲಿ ಪಡೆಯುವ ಮುನ್ನ ಸೆರೆ ಹಿಡಿದು ಕಾಡಿಗೆ ಬಿಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ? – Kannada News | Hyderabad Mother and child trapped inside lift how police rescued them

ಹೈದರಾಬಾದ್, ಜುಲೈ 20: ತೆಲಂಗಾಣದ (Telangana) ಮೇಡ್ಚಲ್-ಮಲ್ಕಜ್‌ಗಿರಿ ಜಿಲ್ಲೆಯ ಕುಕತ್‌ಪಲ್ಲಿ ಪ್ರದೇಶದ ಕೆಪಿಎಚ್‌ಬಿ ಕಾಲೋನಿಯಲ್ಲಿ ತಾಯಿ ಮತ್ತು ಮಗು ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು. ಕೆಪಿಎಚ್‌ಬಿ ಹಂತ 9ರಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಕಟ್ಟಡದ ಲಿಫ್ಟ್‌ನೊಳಗೆ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಹೋದಾಗ ತಾಂತ್ರಿಕ ದೋಷದಿಂದಾಗಿ ಲಿಫ್ಟ್ ಮಧ್ಯದಲ್ಲಿ ನಿಂತುಹೋಯಿತು. ಇದರಿಂದಾಗಿ ತಾಯಿ ಮತ್ತು ಮಗು ಸ್ವಲ್ಪ ಸಮಯದವರೆಗೆ ಲಿಫ್ಟ್‌ನಲ್ಲಿ ಸಿಲುಕಿಕೊಂಡರು. ಅವರ ಕಿರುಚಾಟ ಕೇಳಿ ಸ್ಥಳೀಯರು ಭಯಭೀತರಾದರು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಮಾಹಿತಿ ಪಡೆದ ಕೆಪಿಎಚ್‌ಬಿ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ, ಕಟ್ಟಡ ಸಿಬ್ಬಂದಿಯ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಪೊಲೀಸರು ಜಾಗರೂಕರಾಗಿ ಲಿಫ್ಟ್ ಬಾಗಿಲುಗಳನ್ನು ತೆರೆದು ತಾಯಿ ಮತ್ತು ಮಗುವನ್ನು ಯಾವುದೇ ಸುರಕ್ಷಿತವಾಗಿ ಹೊರಗೆ ಕರೆತಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಿಷಬ್ ಶೆಟ್ಟಿ ನಟನೆಯ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕೆ ‘ಗೇಮ್ ಆಫ್ ಥ್ರೋನ್ಸ್’ ಸಾಹಸ ನಿರ್ದೇಶಕ – Kannada News | Rishab Shetty Chhatrapati Shivaji Maharaj Game of Thrones Action Director Mark Henson

‘ಕಾಂತಾರ’ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ (Rishab Shetty) ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಬೃಹತ್ ಬಜೆಟ್‌ನ ಐತಿಹಾಸಿಕ ಸಿನಿಮಾ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ (The Pride of Bharat: Chhatrapati Shivaji Maharaj) ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಈ ಚಿತ್ರದ ಯುದ್ಧ ಮತ್ತು ಆ್ಯಕ್ಷನ್ ದೃಶ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಸಲು ಹಾಲಿವುಡ್‌ನ ಘಟಾನುಘಟಿ ಆ್ಯಕ್ಷನ್ ಡೈರೆಕ್ಟರ್‌ಗಳ ತಂಡ ಭಾರತಕ್ಕೆ ಆಗಮಿಸಿದೆ.

ಖ್ಯಾತ ಚಲನಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ನಿರ್ದೇಶನದ ಮಹತ್ವಾಕಾಂಕ್ಷಿ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕಾಗಿ ಜಗತ್ತಿನ ಅತಿ ದೊಡ್ಡ ವೆಬ್ ಸರಣಿ ಹಾಗೂ ಸಿನಿಮಾಗಳಿಗೆ ಕೆಲಸ ಮಾಡಿದ ತಂತ್ರಜ್ಞರನ್ನು ಕರೆತರಲಾಗಿದೆ. ಹಾಲಿವುಡ್‌ ಸಾಹಸ ನಿರ್ದೇಶಕರ ದಂಡು ಈ ಚಿತ್ರಕ್ಕಾಗಿ ಕೆಲಸ ಮಾಡಲಿದೆ. ಚಿತ್ರದ ಆ್ಯಕ್ಷನ್ ವಿಭಾಗವನ್ನು ಜಗತ್ತಿನ ಹೆಸರಾಂತ ಆ್ಯಕ್ಷನ್ ಡೈರೆಕ್ಟರ್‌ಗಳು ಮುನ್ನಡೆಸಲಿದ್ದಾರೆ.

ಘಟಾನುಘಟಿ ಸಾಹಸ ನಿರ್ದೇಶಕರು:

ಜಗತ್ಪ್ರಸಿದ್ಧ ವೆಬ್ ಸರಣಿಗಳಾದ ‘ಗೇಮ್ ಆಫ್ ಥ್ರೋನ್ಸ್’, ‘ವೈಕಿಂಗ್ಸ್’, ‘ದಿ ವಿಚರ್’ ಹಾಗೂ ಆಸ್ಕರ್ ವಿಜೇತ ‘ಗ್ರಾವಿಟಿ’ ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ ಮಾರ್ಕ್ ಹೆನ್ಸನ್ ಈ ತಂಡದ ನೇತೃತ್ವ ವಹಿಸಿದ್ದಾರೆ. ‘ದಿ ಫೇಟ್ ಆಫ್ ದಿ ಫ್ಯೂರಿಯಸ್’, ‘ಬ್ಲಡ್‌ಶಾಟ್’ ಮತ್ತು ‘ಲೂಸಿಫರ್’ ಖ್ಯಾತಿಯ ವ್ಲಾಡ್ ರಿಂಬರ್ಗ್ ಕೂಡ ತಂಡದಲ್ಲಿದ್ದಾರೆ. ‘ಟ್ರಾಯ್: ಫಾಲ್ ಆಫ್ ಎ ಸಿಟಿ’ ಚಿತ್ರಕ್ಕೆ ಕೆಲಸ ಮಾಡಿದ ಕ್ರೇಗ್ ಮ್ಯಾಕ್ರೇ ಕೂಡ ರಿಷಬ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಲಿದ್ದಾರೆ.

500 ಕೋಟಿ ಬಜೆಟ್, ಎರಡು ಭಾಗಗಳಲ್ಲಿ ಸಿನಿಮಾ:

ಬರೋಬ್ಬರಿ 500 ಕೋಟಿ ರೂಪಾಯಿ ಭಾರಿ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಕಥೆಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಇದನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಬಾಲಿವುಡ್ ನಟರಾದ ಅರ್ಜುನ್ ರಾಂಪಾಲ್, ವಿವೇಕ್ ಒಬೆರಾಯ್ ಮತ್ತು ಶೆಫಾಲಿ ಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜ್: ರಿಷಬ್ ಶೆಟ್ಟಿ ನಟನೆಯ 2 ಪಾರ್ಟ್ ಸಿನಿಮಾಗೆ 500 ಕೋಟಿ ಬಜೆಟ್

ಜಾಗತಿಕ ಮಟ್ಟದಲ್ಲಿ ರಿಲೀಸ್:

17ನೇ ಶತಮಾನದಲ್ಲಿ ಮರಾಠಾ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜೀವನ ಇಂದಿಗೂ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ. 1923ರ ಮೂಕಿ ಚಿತ್ರ ‘ಸಿಂಹಗಡ’ದಿಂದ ಹಿಡಿದು ಇಂದಿನವರೆಗೆ ಅವರ ಜೀವನದ ಆಧಾರಿತ ಸುಮಾರು 60ಕ್ಕೂ ಹೆಚ್ಚು ಚಲನಚಿತ್ರ ಮತ್ತು ಧಾರಾವಾಹಿಗಳು ಬಂದಿವೆ. ಆದರೆ, ‘ದಿ ಪ್ರೈಡ್ ಆಫ್ ಭಾರತ್’ ಸಂಪೂರ್ಣ ಹೊಸ ದೃಷ್ಟಿಕೋನದಲ್ಲಿ ಜಾಗತಿಕ ವೀಕ್ಷಕರನ್ನು ಸೆಳೆಯಲು ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಚಾರ್ ಧಾಮ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತ – Kannada News | Char Dham Yatra Suspended Temporarily amid Heavy Rainfall and Landslides In Uttarakhand

ಡೆಹ್ರಾಡೂನ್, ಜುಲೈ 20: ಉತ್ತರಾಖಂಡ (Uttarakhand Rains) ರಾಜ್ಯಾದ್ಯಂತ ಮುಂದುವರಿದಿರುವ ನಿರಂತರ ಮಳೆ, ಭೀಕರ ಭೂಕುಸಿತ ಮತ್ತು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇಂದಿನಿಂದ (ಸೋಮವಾರ) ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ‘ಚಾರ್ ಧಾಮ್ ಯಾತ್ರೆ’ಯನ್ನು(Char Dham Yatra) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ ಹಲವು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದ ಬೆನ್ನಲ್ಲೇ, ಯಾತ್ರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವ ಉತ್ತರಾಖಂಡ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಪ್ರಯಾಣ ಬೆಳೆಸಿರುವ ಯಾತ್ರಿಕರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಹಾನಿಗೊಳಗಾದ ರಸ್ತೆಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡಿ, ಅವು ಸಂಚಾರಕ್ಕೆ ಸುರಕ್ಷಿತ ಎಂದು ಪ್ರಮಾಣೀಕರಿಸುವವರೆಗೆ ಭಕ್ತರನ್ನು ಮುಂದೆ ಸಾಗಲು ಬಿಡಬಾರದು ಎಂದು ಆದೇಶಿಸಲಾಗಿದೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಟ್ರೆಕಿಂಗ್ ಹೋಗಿದ್ದ ಎಂಬಿಎ ವಿದ್ಯಾರ್ಥಿನಿ ನಾಪತ್ತೆ; ಆಗಿದ್ದೇನು?

ಚಾರ್ ಧಾಮ ಯಾತ್ರಾ ಮಾರ್ಗಗಳಲ್ಲಿ ಸರಣಿ ಭೂಕುಸಿತ ಸಂಭವಿಸುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಆಡಳಿತ ತಿಳಿಸಿದೆ. ಪರಿಸ್ಥಿತಿ ಮತ್ತು ರಸ್ತೆಗಳು ಸಂಪೂರ್ಣವಾಗಿ ಯಥಾಸ್ಥಿತಿಗೆ ಮರಳಿದೆ ಎಂದು ಅಧಿಕಾರಿಗಳು ಖಚಿತಪಡಿಸಿಕೊಂಡ ನಂತರವಷ್ಟೇ ಚಾರ್ ಧಾಮ್ ಯಾತ್ರೆಯನ್ನು ಪುನರಾರಂಭಿಸಲಾಗುವುದು.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಅಲಕನಂದಾ, ಮಂದಾಕಿನಿ:

ರುದ್ರಪ್ರಯಾಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ನೀರಿನ ಮಟ್ಟ ಅಪಾಯದ ಮುನ್ಸೂಚನೆಯ ಮಟ್ಟಕ್ಕೆ ಬಂದು ತಲುಪಿದೆ. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನಮಾಮಿ ಗಂಗೆ ಯೋಜನೆಯಡಿ ನಿರ್ಮಿಸಲಾಗಿದ್ದ ಪ್ರಸಿದ್ಧ ನದಿ ತೀರದ ಘಾಟ್‌ಗಳು ನೀರಿನಲ್ಲಿ ಮುಳುಗಿವೆ. ಪ್ರಸ್ತುತ ಅಲಕನಂದಾ ನದಿಯು 625 ಮೀಟರ್ ಮತ್ತು ಮಂದಾಕಿನಿ ನದಿಯು 624 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ಗಂಗಾನಗರ ಮತ್ತು ಗೌರಿಕುಂಡ್ ಭಾಗಗಳಲ್ಲೂ ನೀರಿನ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೀಳ್ಯದೆಲೆಯ ಆರೋಗ್ಯ ರಹಸ್ಯ: ತಲೆನೋವು, ಗ್ಯಾಸ್, ಬಾಯಿ ದುರ್ವಾಸನೆಗೆ ನೈಸರ್ಗಿಕ ಪರಿಹಾರ – Kannada News | Betel Leaves for Headache Relief: Natural Home Remedy Explained

ಭಾರತೀಯ ಸಂಪ್ರದಾಯದಲ್ಲಿ ತಾಂಬೂಲ ಎಲೆ (Betel Leaf) ಕೇವಲ ಪೂಜೆ ಅಥವಾ ಆತಿಥ್ಯಕ್ಕೆ ಮಾತ್ರ ಸೀಮಿತವಲ್ಲ. ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ಔಷಧೀಯ ಸಸ್ಯವಾಗಿ ಬಳಕೆಯಲ್ಲಿರುವ ತಂಬೂಲ ಎಲೆ ಜೀರ್ಣಕ್ರಿಯೆ ಸುಧಾರಿಸುವುದು, ಬಾಯಿಯ ಆರೋಗ್ಯ ಕಾಪಾಡುವುದು, ತಲೆನೋವಿಗೆ ತಾತ್ಕಾಲಿಕ ನೆಮ್ಮದಿ ನೀಡುವುದು ಸೇರಿದಂತೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಇದೇ ಎಲೆಯನ್ನು ತಂಬಾಕು, ಜರ್ದಾ, ಸುಣ್ಣದ ಅಧಿಕ ಬಳಕೆಯೊಂದಿಗೆ ಸೇವಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನೂ ವೈದ್ಯರು ನೀಡುತ್ತಾರೆ.

ಇತ್ತೀಚಿನ ಅಧ್ಯಯನಗಳ ಪ್ರಕಾರ ತಂಬೂಲ ಎಲೆಯಲ್ಲಿ ಚಾವಿಕೋಲ್ (Chavicol), ಯೂಜಿನಾಲ್ (Eugenol), ಪಾಲಿಫಿನಾಲ್ಸ್ ಹಾಗೂ ಆಂಟಿಆಕ್ಸಿಡೆಂಟ್ ಸಂಯುಕ್ತಗಳು ಇದ್ದು, ಇವು ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಇದನ್ನು ಔಷಧಿಯ ಪರ್ಯಾಯವೆಂದು ಪರಿಗಣಿಸಬಾರದು.

ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ: ಊಟದ ನಂತರ ಎಲೆ ಜಗಿದು ತಿನ್ನುವ ಪದ್ಧತಿಯ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ತಂಬೂಲ ಎಲೆ ಜಗಿದಾಗ ಲಾಲಾರಸದ ಉತ್ಪಾದನೆ ಹೆಚ್ಚುತ್ತದೆ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗಲು ನೆರವಾಗುತ್ತದೆ. ಜೊತೆಗೆ ಹೊಟ್ಟೆ ಉಬ್ಬರ, ಗ್ಯಾಸ್ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಕೆಲವರಿಗೆ ಕಡಿಮೆಯಾಗಬಹುದು.

ತಲೆನೋವಿಗೆ ತಾತ್ಕಾಲಿಕ ನೆಮ್ಮದಿ: ಕೆಲವು ಸಂಶೋಧನೆಗಳು ವೀಳ್ಯದೆಲೆಯಲ್ಲಿರುವ ನೈಸರ್ಗಿಕ ಉರಿಯೂತ ನಿವಾರಕ ಅಂಶಗಳು ತಲೆನೋವಿನ ತೀವ್ರತೆಯನ್ನು ಕಡಿಮೆ ಮಾಡಲು ನೆರವಾಗಬಹುದು ಎಂದು ಸೂಚಿಸುತ್ತವೆ. ತಾಜಾ ಎಲೆಯನ್ನು ಸ್ವಲ್ಪ ನುರಿದು ಹಣೆಯ ಮೇಲೆ ಇಡುವುದು ಅಥವಾ ಅದರ ರಸವನ್ನು ಹೊರಗೆ ಲೇಪಿಸುವುದು ಕೆಲವು ಮಂದಿಗೆ ತಾತ್ಕಾಲಿಕ ತಂಪಿನ ಅನುಭವ ನೀಡಬಹುದು. ಆದರೆ ತೀವ್ರ ಮೈಗ್ರೇನ್ ಅಥವಾ ನಿರಂತರ ತಲೆನೋವಿಗೆ ಇದು ಚಿಕಿತ್ಸೆ ಅಲ್ಲ.

ಬಾಯಿಯ ಆರೋಗ್ಯ ಕಾಪಾಡುತ್ತದೆ: ವೀಳ್ಯದೆಲೆಯಲ್ಲಿ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗಲು ಸಹಾಯವಾಗಬಹುದು. ಕೆಲವು ಅಧ್ಯಯನಗಳ ಪ್ರಕಾರ ಇದು ಬಾಯಿಯಲ್ಲಿರುವ ಕೆಲವು ಹಾನಿಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಕಾರಿ. ಆದರೆ ತಂಬಾಕು ಅಥವಾ ಜರ್ದಾ ಸೇರಿಸಿ ಸೇವಿಸುವುದು ಬಾಯಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಕೆಮ್ಮು ಮತ್ತು ಗಂಟಲು ನೋವನ್ನು ನಿವಾರಿಸುತ್ತದೆ: ಆಯುರ್ವೇದದಲ್ಲಿ ವೀಳ್ಯದೆಲೆಗಳನ್ನು ಬಿಸಿ ಮಾಡಿ ಎದೆ ಮೇಲೆ ಇಡುವ ಪದ್ಧತಿ ಇದೆ. ಇದರಿಂದ ಶೀತದ ಸಮಯದಲ್ಲಿ ಎದೆ ಭಾರವಾದ ಅನುಭವ ಕಡಿಮೆಯಾಗಬಹುದು ಎಂದು ನಂಬಲಾಗಿದೆ. ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದು ಗಂಟಲು ಕಿರಿಕಿರಿ ಕಡಿಮೆ ಮಾಡಲು ಸಹಾಯಕವಾಗಬಹುದು. ಆದರೆ ಮಕ್ಕಳಿಗೆ ಒಂದು ವರ್ಷದೊಳಗೆ ಜೇನುತುಪ್ಪವನ್ನು ಕೊಡಬಾರದು.

ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ: ವೀಳ್ಯದೆಲೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಕೋಶಗಳನ್ನು ಫ್ರೀ ರಾಡಿಕಲ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡಬಹುದು. ಇದರಿಂದ ದೇಹದ ರೋಗನಿರೋಧಕ ವ್ಯವಸ್ಥೆಗೆ ಬೆಂಬಲ ಸಿಗಬಹುದು.

ಮಾನಸಿಕ ಒತ್ತಡ ಕಡಿಮೆ ಮಾಡಲು ನೆರವಾಗಬಹುದೇ?

ವೀಳ್ಯದೆಲೆ ಸುವಾಸನೆ ಮತ್ತು ಅದರಲ್ಲಿರುವ ಕೆಲವು ಸಸ್ಯ ಸಂಯುಕ್ತಗಳು ಮನಸ್ಸಿಗೆ ವಿಶ್ರಾಂತಿ ನೀಡುವ ಅನುಭವವನ್ನು ಉಂಟುಮಾಡಬಹುದು. ಕೆಲವು ಸಣ್ಣ ಅಧ್ಯಯನಗಳು ಇದರ ಆರೋಮ್ಯಾಟಿಕ್ ಅಂಶಗಳು ಒತ್ತಡವನ್ನು ಕಡಿಮೆ ಮಾಡಲು ನೆರವಾಗಬಹುದು ಎಂದು ಸೂಚಿಸಿವೆ. ಆದರೆ ಆತಂಕ ಅಥವಾ ಖಿನ್ನತೆಗೆ ಇದು ವೈದ್ಯಕೀಯ ಚಿಕಿತ್ಸೆ ಅಲ್ಲ.

ಇದನ್ನೂ ಓದಿ: ಬಿರಿಯಾನಿ ಎಲೆ ನೇರವಾಗಿ ತಿನ್ನುವುದು ಸುರಕ್ಷಿತವೇ? ಈ ಸಣ್ಣ ತಪ್ಪು ಗಂಟಲು, ಜೀರ್ಣಾಂಗಕ್ಕೆ ಅಪಾಯ ತರಬಹುದು ಎಚ್ಚರ

ತಂಬೂಲ ಎಲೆ ಬಳಸುವ ಸರಿಯಾದ ವಿಧಾನ

  • ಊಟದ ಬಳಿಕ 1 ತಾಜಾ ವೀಳ್ಯದೆಲೆಯನ್ನು ಮಾತ್ರ ಜಗಿಯಬಹುದು.
  • ತಂಬಾಕು, ಜರ್ದಾ ಅಥವಾ ಗುಟ್ಕಾ ಸೇರಿಸಿ ಸೇವಿಸಬೇಡಿ.
  • ಬೇಕಿದ್ದರೆ ಸೋಂಪು ಅಥವಾ ಏಲಕ್ಕಿಯೊಂದಿಗೆ ಸೇವಿಸಬಹುದು.
  • ತಂಬೂಲ ಎಲೆಯನ್ನು ಚೆನ್ನಾಗಿ ತೊಳೆದು ಬಳಸುವುದು ಉತ್ತಮ.

ಯಾರು ಹೆಚ್ಚಿನ ಎಚ್ಚರಿಕೆ ವಹಿಸಬೇಕು?

ಈ ಕೆಳಗಿನವರು ವೈದ್ಯರ ಸಲಹೆಯೊಂದಿಗೆ ಮಾತ್ರ ಬಳಸುವುದು ಒಳಿತು:

  • ಬಾಯಿಯಲ್ಲಿ ಪದೇಪದೇ ಗಾಯವಾಗುವವರು
  • ಬಾಯಿಯ ಕ್ಯಾನ್ಸರ್ ಅಥವಾ ಪೂರ್ವ ಕ್ಯಾನ್ಸರ್ ಸಮಸ್ಯೆ ಇರುವವರು
  • ಗರ್ಭಿಣಿಯರು
  • ಹೊಟ್ಟೆ ಹುಣ್ಣು ಇರುವವರು
  • ಅಲರ್ಜಿ ಇರುವವರು

ತಜ್ಞರ ಪ್ರಕಾರ, ಸಾಮಾನ್ಯ ವೀಳ್ಯದೆಲೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಆದರೆ ತಂಬಾಕು, ಜರ್ದಾ, ಸುಣ್ಣದ ಅಧಿಕ ಬಳಕೆಯೊಂದಿಗೆ ಸೇವಿಸುವ ಅಭ್ಯಾಸವೇ ದೊಡ್ಡ ಅಪಾಯ. ಆರೋಗ್ಯಕ್ಕಾಗಿ ವೀಳ್ಯದೆಲೆ ಬಳಸಬೇಕಾದರೆ ನೈಸರ್ಗಿಕ ರೂಪದಲ್ಲೇ, ಮಿತ ಪ್ರಮಾಣದಲ್ಲಿ ಬಳಸುವುದು ಉತ್ತಮ.

ಗಮನಿಸಿ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ತಂಬೂಲ ಎಲೆಯನ್ನು ಯಾವುದೇ ರೋಗಕ್ಕೆ ಚಿಕಿತ್ಸೆಯಾಗಿ ಪರಿಗಣಿಸಬಾರದು. ನಿರಂತರ ತಲೆನೋವು, ಜೀರ್ಣ ಸಮಸ್ಯೆ, ಕೆಮ್ಮು ಅಥವಾ ಇತರ ಆರೋಗ್ಯ ತೊಂದರೆಗಳಿದ್ದರೆ ಸ್ವಯಂ ಚಿಕಿತ್ಸೆ ಮಾಡದೆ ಅರ್ಹ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version