ಬೆಂಗಳೂರು, (ಏಪ್ರಿಲ್ 08): ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Kannada Activist Vatal Nagaraj ) ಅವರನ್ನು ಬೆಂಗಳೂರಿನ ಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. 42ನೇ ಎಸಿಎಂಎಂ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಇಂದು (ಏಪ್ರಿಲ್ 08) ವಾಟಾಳ್ ನಾಗರಾಜ್ ಅವರನ್ನ ಬಂಧಿಸಿ ಆಟೋದಲ್ಲಿ ಕೋರ್ಟ್ಗೆ ಕರೆದುಕೊಂಡು ಹೋಗಿದ್ದಾರೆ. 2021ರಲ್ಲಿ ಕೊರೊನಾ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕೆಂದು ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿವಾಸದ ಮುಂದೆ ವಾಟಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದರು, ಈ ಸಂಬಂಧ ದೂರು ದಾಖಲಾಗಿತ್ತು. ಆದ್ರೆ,ಈ ಪ್ರಕರಣದಲ್ಲಿ ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇರುವುದರಿಂದ ಅರೆಸ್ಟ್ ವಾರಂಟ್ ಜಾರಿ ಮಾಡಿದ್ದು, ಅದರಂತೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಬಂಧಿಸಿದ್ದಾರೆ.
ರಾಮ್ ಗೋಪಾಲ್ ವರ್ಮಾ (Ram Gopal Varma) ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತಲೂ ತಮ್ಮ ವಿವಾದಾತ್ಮಕ ಹೇಳಿಕೆಗಳು, ಟ್ವೀಟುಗಳಿಂದಲೇ ಹೆಚ್ಚು ಜನಪ್ರಿಯರು. ಇತ್ತೀಚೆಗಷ್ಟೆ ತಾವು ಇನ್ನು ಮುಂದೆ ತೆಲುಗು ಸಿನಿಮಾ ಮಾಡುವುದಿಲ್ಲ, ಹಿಂದಿ ಸಿನಿಮಾ ಮಾಡುವುದಾಗಿ ಘೋಷಿಸಿ, ವಾಸ್ತವ್ಯವನ್ನು ಮುಂಬೈಗೆ ಶಿಫ್ಟ್ ಸಹ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಇದೀಗ ರಾಮ್ ಗೋಪಾಲ್ ವರ್ಮಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋನಲ್ಲಿ ವರ್ಮಾ ಸಖತ್ ಆಗಿ ಫೈಟ್ ಮಾಡುತ್ತಿದ್ದಾರೆ. ಅವರ ಆಕ್ಷನ್ ನೆಟ್ಟಿಗರನ್ನು ಅವಾಕ್ಕಾಗಿಸಿದೆ. ವಿಡಿಯೋ ನೋಡಿ…
ಬೆಂಗಳೂರು, ಏಪ್ರಿಲ್ 08: ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದಿಂದ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳಸಿರುವ ಪ್ರಕರಣ ಸಂಬಂಧ ಪತಿಯ ವಿರುದ್ಧದ ಕೇಸ್ ರದ್ದುಪಡಿಸಲು ಸಾಧ್ಯವಿಲ್ಲ ಎಂದಯ ಕರ್ನಾಟಕ ಹೈಕೋರ್ಟ್ ತಿಳಿಸಿದೆ. ಅದಾಗಲೇ ದಂಪತಿ ಬೇರೆಯಾಗಿದ್ದರೂ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಕಾರಣ ಪತಿಯ ವಿರುದ್ಧ ಐಪಿಸಿ ಸೆ. 376(ಬಿ) ಅಡಿ ಕೇಸ್ ದಾಖಲಾಗಿತ್ತು. ಪತ್ನಿ ದಾಖಲಿಸಿದ್ದ ಕೇಸ್ ರದ್ದು ಕೋರಿ ಹೈಕೋರ್ಟ್ಗೆ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.
ಪತಿ ಪರ ವಕೀಲರ ವಾದವೇನು?
ಸಾಂಸಾರಿಕ ವೈಮನಸ್ಸಿನಿಂದ 2019ರಿಂದಲೇ ಪತ್ನಿಯಿಂದ ಪತಿ ಪ್ರತ್ಯೇಕವಾಗಿದ್ದರು. ಹೀಗಿದ್ದರೂ 2021ರಲ್ಲಿ ಪತ್ನಿ ಮನೆಗೆ ಬಂದು ಒತ್ತಾಯದ ದೈಹಿಕ ಸಂಪರ್ಕ ನಡೆಸಿದ್ದು, ರಾಜಿ ಸಂಧಾನಕ್ಕೆಂದು ಮನೆಗೆ ಆಹ್ವಾನಿಸಿ ದೈಹಿಕ ಸಂಪರ್ಕ ನಡೆಸಿರೋದಾಗಿ ದೂರಲಾಗಿತ್ತು. ಆದರೆ ಆರೋಪ ನಿರಾಕರಿಸಿದ್ದ ಪತಿ ಪರ ವಕೀಲರು, ಆರೋಪಿಸಿರುವಂತೆ ಯಾವುದೇ ದೈಹಿಕ ಸಂಪರ್ಕ ನಡೆದಿರಲಿಲ್ಲ ಎಂದು ವಾದಿಸಿದ್ದರು.
ಇನ್ನು ಪತಿ ವಿರುದ್ಧ ದೂರು ದಾಖಲಿಸಿದ್ದ ಪತ್ನಿಯೇ ಸ್ವತಃ ಹೈಕೋರ್ಟ್ನಲ್ಲಿ ತನ್ನ ಪರವಾಗಿ ವಾದಿಸಿಕೊಂಡಿದ್ದು, ತನ್ನ ಮೇಲೆ ನಡೆದಿರುವ ದೌರ್ಜನ್ಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅಲ್ಲದೆ ಪತಿಯ ಅರ್ಜಿ ತಿರಸ್ಕರಿಸುವಂತೆ ಕೋರ್ಟ್ನ ಮನವಿ ಮಾಡಿದ್ದರು. ಎರಡೂ ಕಡೆಯವರ ಪರ ಮತ್ತು ವಿರೋಧ ವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಅಂತಿಮವಾಗಿ ಪತಿಯ ಅರ್ಜಿಯನ್ನು ತಿರಸ್ಕೃತಗೊಳಿಸಿದೆ. ಆ ಮೂಲಕ ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದಿಂದ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳಸಿರುವ ಈ ಪ್ರಕರಣದ ವಿಚಾರಣೆ ಅಗತ್ಯವಿದೆ ಎಂಬ ಸಂದೇಶ ನೀಡಿದೆ.
ತಮಿಳುನಾಡು ಚುನಾವಣೆಯ (Tamil Nadu Elections) ಕಾವು ಏರುತ್ತಿರುವ ಬೆನ್ನಲ್ಲೇ, ನಟ ಮತ್ತು ರಾಜಕಾರಣಿ ದಳಪತಿ ವಿಜಯ್ ಅವರು ಬುಧವಾರ (ಏಪ್ರಿಲ್ 8) ತಿರುನಲ್ವೇಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ವೈಯಕ್ತಿಕ ಜೀವನದ ಏರಿಳಿತಗಳು ಮತ್ತು ತಮ್ಮ ಕೊನೆಯ ಸಿನಿಮಾ ‘ಜನ ನಾಯಕನ್’ ಎದುರಿಸುತ್ತಿರುವ ಸೆನ್ಸಾರ್ ಸಮಸ್ಯೆಗಳ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಅವರು ಆರೋಪಿಸಿದ್ದಾರೆ. ವಿಚ್ಛೇದನದ ಸುದ್ದಿ ಹೊರಬಂದಿದ್ದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ದಳಪತಿ ವಿಜಯ್ (Thalapathy Vijay) ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ. ಈ ಬಗ್ಗೆ ಮಾತನಾಡಿದ ಅವರು, ‘ನನ್ನನ್ನು ಜನರಿಂದ ದೂರವಿಡಲು ವಿರೋಧಿಗಳು ಒಂದಲ್ಲ ಒಂದು ದಾರಿ ಹುಡುಕುತ್ತಿದ್ದಾರೆ. ಮೊದಲು ಕರೂರ್ ಘಟನೆಯನ್ನು ನನ್ನ ಮೇಲೆ ಹಾಕಲು ನೋಡಿದರು. ಈಗ ನನ್ನ ಸಿನಿಮಾದ ಬಿಡುಗಡೆಯನ್ನು ತಡೆಯುತ್ತಿದ್ದಾರೆ. ನಾನು ಜನರನ್ನು ಭೇಟಿ ಮಾಡಬಾರದು ಎಂದು ಹೊಸ ನಿಯಮಗಳನ್ನು ರೂಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ್ದವು. ಅಷ್ಟೇ ಅಲ್ಲದೇ, ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ವಿಜಯ್ ಹೆಸರು ಕೇಳಿಬಂದಿತ್ತು. ಈ ಬಗ್ಗೆ ಮೌನ ಮುರಿದ ವಿಜಯ್, ‘ಚುನಾವಣೆಗೆ 30 ದಿನ ಬಾಕಿ ಇರುವಾಗ ನನ್ನ ಆಪ್ತರ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಏನೇ ಆದರೂ ನೀವು ನನ್ನನ್ನು ಜನರಿಂದ ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
— Vijay Fans Trends (@VijayFansTrends) April 8, 2026
‘ನನ್ನ ಮೇಲೆ ಎಷ್ಟೇ ಆರೋಪಗಳನ್ನು ಹೊರಿಸಿದರೂ ಜನರು ನನ್ನ ಜೊತೆಗಿದ್ದಾರೆ. ಈ ಪವಾಡವನ್ನು ನೋಡಿ ವಿರೋಧಿಗಳಿಗೆ ತಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ವಿಜಯ್ ತಮ್ಮ ಭಾಷಣದಲ್ಲಿ ಗುಡುಗಿದ್ದಾರೆ. ವಿಜಯ್ ಅವರು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಅವರ ಅಭಿಮಾನಿಗಳಲ್ಲಿ ಕುತೂಹಲ ತೀವ್ರವಾಗಿದೆ.
ಈ ವರ್ಷ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು. ಮಾರ್ಚ್ನಲ್ಲಿ ನಟಿ ತ್ರಿಶಾ ಅವರೊಂದಿಗೆ ವಿಜಯ್ ಮದುವೆಯೊಂದರಲ್ಲಿ ಕಾಣಿಸಿಕೊಂಡಿದ್ದರಿಂದ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಿತ್ತು. ಅವರ ವೈಯಕ್ತಿಕ ಜೀವನದ ವಿಚಾರವನ್ನು ರಾಜಕೀಯದಲ್ಲಿ ಎಳೆದುತಂದಿದ್ದಕ್ಕೆ ವಿಜಯ್ ಗರಂ ಆಗಿದ್ದಾರೆ.
ಸೌರಮಾನ ಯುಗಾದಿಯು ಏಪ್ರಿಲ್ 14ರಂದು ಆಗಲಿದ್ದು ಸಂದರ್ಭದಲ್ಲಿ ಗ್ರಹಗಳ ಸ್ಥಿತಿಗತಿಗಳು ಕೇವಲ ವೈಯಕ್ತಿಕ ಜೀವನದ ಮೇಲಲ್ಲದೆ, ಇಡೀ ಸಮಾಜದ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮಗ್ಗಲುಗಳ ಮೇಲೆ ಗಾಢವಾದ ಪರಿಣಾಮ ಬೀರಲಿವೆ. ಈ ಸಂಧಿಕಾಲದ ಕುರಿತು ಅವಲೋಕನ ಅಗತ್ಯ.
ಸೌರಮಾನ ಯುಗಾದಿಯ ದಿನದಂದು ಗ್ರಹಗಳ ಸಂಯೋಜನೆಯು ಸಾಮಾಜಿಕವಾದ ಅನೇಕ ಬದಲಾವಣೆಗೆ ಕಾರಣವೂ ಆಗಲಿದೆ. ಈ ಬಾರಿಯ ಯುಗಾದಿಯು ಪರಿವರ್ತನೆಯ ಕಾಲ ಎಂದು ಕರೆಯಲ್ಪಡಲು ಪ್ರಮುಖ ಕಾರಣವೆಂದರೆ ಬೃಹತ್ ಗ್ರಹಗಳಾದ ಶನಿ, ರಾಹು ಮತ್ತು ಗುರುವಿನ ವಿಶಿಷ್ಟ ನಡೆ.
ಶನಿ-ರಾಹಗಳ ಬದಲಾವಣೆ: ಸಾಮಾಜಿಕ ಮಥನ:
ಕುಂಭದಲ್ಲಿ ರಾಹುವಿನ ಸ್ಥಿತಿಯು ಸಮಾಜದಲ್ಲಿ ಒಂದು ಬಗೆಯ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಲೋಕದಲ್ಲಿ ಅಭೂತಪೂರ್ವ ಬದಲಾವಣೆಗಳು ಕಂಡುಬರುತ್ತವೆ. ಇದು ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಸವಾಲುಗಳನ್ನು ತಂದರೂ, ದೀರ್ಘಕಾಲಿಕವಾಗಿ ಸಮಾಜವನ್ನು ಆಧುನೀಕರಣದತ್ತ ಕೊಂಡೊಯ್ಯುತ್ತದೆ. ಕೆಳವರ್ಗಗಳ ಧ್ವನಿಯು ಬಲವಾಗುವ ಸಾಧ್ಯತೆ ಇದೆ. ಹಳೆಯ ಕಾನೂನುಗಳಲ್ಲಿ ತಿದ್ದುಪಡಿ ಅಥವಾ ಹೊಸ ಸಾಮಾಜಿಕ ನಿಯಮಗಳ ಜಾರಿಗೆ ಈ ಕಾಲ ಪೂರಕವಾಗಿದೆ.
ಜ್ಞಾನಾರ್ಜನೆ:
ಬೃಹಸ್ಪತಿಯು ಮಿಥುನ ರಾಶಿಯಲ್ಲಿ ಇರುವುದು ಸಮಾಜದ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲಿದೆ. ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿದೆ. ವಿಶೇಷವಾಗಿ ವೇದ-ಪುರಾಣಗಳಂತಹ ಪ್ರಾಚೀನ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಮೀಕರಿಸುವ ಪ್ರಯತ್ನಗಳು ಸಮಾಜದಲ್ಲಿ ಮನ್ನಣೆ ಪಡೆಯುತ್ತವೆ. ಮಾಧ್ಯಮ ಕ್ಷೇತ್ರದಲ್ಲಿ ಸತ್ಯಾಸತ್ಯತೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದ್ದು, ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಒತ್ತು ಸಿಗಲಿದೆ.
ಆರ್ಥಿಕ ಮತ್ತು ಕೃಷಿ ಸ್ಥಿತಿಗತಿ:
ಸೌರಮಾನ ಯುಗಾದಿಯಂದು ಸೂರ್ಯನು ಮೇಷ ರಾಶಿಯಲ್ಲಿ ಉಚ್ಚನಾಗಿರುವುದರಿಂದ ಆಡಳಿತ ಮಂಡಳಿಗಳು ಕಠಿಣ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಶನಿಯ ಪ್ರಭಾವದಿಂದ ಸಾಂಪ್ರದಾಯಿಕ ಕೃಷಿಗಿಂತ ತಾಂತ್ರಿಕ ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಅಡಿಕೆ, ತೆಂಗಿನಂತಹ ವಾಣಿಜ್ಯ ಬೆಳೆಗಳ ಮಾರುಕಟ್ಟೆಯಲ್ಲಿ ಏರಿಳಿತಗಳು ಕಂಡುಬಂದರೂ, ವರ್ಷದ ದ್ವಿತೀಯಾರ್ಧದಲ್ಲಿ ಸ್ಥಿರತೆ ಬರಲಿದೆ. ಆರಂಭಿಕ ಹಂತದಲ್ಲಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಬಹುದು, ಆದರೆ ಜೂನ್ ಅನಂತರ ಆರ್ಥಿಕ ಸ್ಥಿತಿ ಸುಧಾರಿಸುವ ಲಕ್ಷಣಗಳಿವೆ.
ರಾಜಕೀಯಯ ಹಳೆಯ ಮೈತ್ರಿಗಳು ಮುರಿದು ಹೊಸ ರಾಜಕೀಯ ಸಮೀಕರಣಗಳು ಸೃಷ್ಟಿಯಾಗುತ್ತವೆ. ಆರೋಗ್ಯದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮತ್ತು ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿ. ಧರ್ಮ, ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳ; ಸಂಪ್ರದಾಯದ ಪುನರುತ್ಥಾನ. ಪರಿಸರದ ಭೂಮಿಯ ಉಷ್ಣಾಂಶ ಏರಿಕೆಯಿಂದಾಗಿ ಜಲ ಸಂರಕ್ಷಣೆಯ ಬಗ್ಗೆ ಜನರಲ್ಲಿ ಗಂಭೀರ ಚಿಂತನೆ.
ಈ ಕಾಲಘಟ್ಟವು ಕ್ಷೋಭೆ ಮತ್ತು ಸೃಷ್ಟಿ ಎರಡನ್ನೂ ಒಳಗೊಂಡಿದೆ. ಸಮಾಜವು ಹಳೆಯ ಜಡತ್ವವನ್ನು ಬಿಟ್ಟು ಹೊಸ ಆಲೋಚನೆಗಳನ್ನು ಅಪ್ಪಿಕೊಳ್ಳುವ ಪ್ರಕ್ರಿಯೆಯೇ ಈ ಯುಗಾದಿಯ ಫಲ.
ಈ ಗ್ರಹಗತಿಗಳು ಸಮಾಜದಲ್ಲಿ ಸತ್ಯ ಮತ್ತು ಪಾರದರ್ಶಕತೆಯನ್ನು ಬಯಸುತ್ತವೆ. ಯಾರೂ ಎಣಿಸದಂತಹ ಆಕಸ್ಮಿಕ ಬದಲಾವಣೆಗಳು ಈ ಸಂವತ್ಸರದಲ್ಲಿ ಸಂಭವಿಸುವ ಸಾಧ್ಯತೆಗಳಿವೆ.
ಹಾವೇರಿ, ಏಪ್ರಿಲ್ 08: ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತಸಂಭವಿಸಿದೆ. ಟಾಟಾ ಏಸ್ ವಾಹನ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅರೇಮಲ್ಲಾಪುರ ಗ್ರಾಮದಿಂದ ಹಾನಗಲ್ ಕಡೆಗೆ ಮದುವೆ ಸಮಾರಂಭದ ಅಡುಗೆ ಮಾಡಲು ತೆರಳುತ್ತಿದ್ದ ಟಾಟಾ ಏಸ್ ವಾಹನಕ್ಕೆ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಚಾಮರಾಜನಗರ, ಏ.8: ಜಿಲ್ಲೆಯಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ಸೈಕೋಪಾತ್ ಒಬ್ಬನ ಉಪಟಳದಿಂದ ಸ್ಥಳೀಯ ನಿವಾಸಿಗಳು, ವಿಶೇಷವಾಗಿ ಗೃಹಿಣಿಯರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಹೌಸಿಂಗ್ ಬೋರ್ಡ್ ಕಾಲೋನಿ, ಇಂದಿರಾನಗರ ಮತ್ತು ಕರಿನಂಜಿಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಈ ವಿಚಿತ್ರ ಕೃತ್ಯಗಳು ವರದಿಯಾಗುತ್ತಿವೆ. ರಾತ್ರಿ 12 ರಿಂದ ಬೆಳಗಿನ ಜಾವ 3 ಗಂಟೆಯ ನಡುವೆ, ಒಬ್ಬ ಅಪರಿಚಿತ ವ್ಯಕ್ತಿ ಮಹಿಳೆಯರ ವೇಷಧರಿಸಿ ಮನೆಗಳ ಮುಂದೆ ಒಣಗಲು ಹಾಕಿರುವ ಮಹಿಳೆಯರ ಒಳ ಉಡುಪುಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದಾನೆ. ಈ ಸೈಕೋಪಾತ್ ಕದ್ದ ಒಳ ಉಡುಪುಗಳನ್ನು ತಾನೇ ಧರಿಸಿ ಒಂದು ವಿಕೃತಿಯನ್ನು ಮೆರೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಈತನ ಕೃತ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಇವು ಬೆಳಕಿಗೆ ಬಂದ ನಂತರ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ. ಈ ಪ್ರದೇಶದ ಮಹಿಳೆಯರು ಮತ್ತು ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಗೃಹಿಣಿ ಈ ಬಗ್ಗೆ ಮಾತನಾಡಿದ್ದು, ಸಾಮಾನ್ಯವಾಗಿ ಚಾಮರಾಜನಗರವನ್ನು ಸುರಕ್ಷಿತ ಪ್ರದೇಶವೆಂದು ಪರಿಗಣಿಸಲಾಗುತ್ತಿತ್ತು, ಆದರೆ ಇಂತಹ ಘಟನೆಗಳಿಂದ ಪ್ರಸ್ತುತ ನಿರ್ಜನ ಪ್ರದೇಶವೆನ್ನಿಸುವ ವಾಸಸ್ಥಳದಲ್ಲಿ ಒಂಟಿಯಾಗಿರುವ ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ವ್ಯಕ್ತಿಯ ಮನಸ್ಥಿತಿ ಯಾವ ರೀತಿ ಇದೆ ಎಂಬುದು ತಿಳಿದಿಲ್ಲ. ಮುಂದೆ ಈತನಿಂದ ಬೇರೆ ಯಾವುದೇ ಅನಾಹುತಗಳಾಗುವ ಸಾಧ್ಯತೆಗಳಿರುವುದರಿಂದ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೇಸಿಗೆ ರಜೆ ಇರುವುದರಿಂದ ಮಕ್ಕಳು ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಈ ಸೈಕೋಪಾತ್ ಮಕ್ಕಳ ಮೇಲೆ ದುಷ್ಕೃತ್ಯ ಎಸಗುವ ಸಾಧ್ಯತೆಗಳ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಚಿನ್ನಾಭರಣ ಕಳ್ಳತನದಂತಹ ಪ್ರಕರಣಗಳನ್ನು ಕಂಡಿದ್ದೇವೆ, ಆದರೆ ಒಳ ಉಡುಪುಗಳನ್ನು ಕದ್ದು ಧರಿಸುವ ಇಂತಹ ವಿಕೃತಕಾಮಿಯ ಕೃತ್ಯವು ತೀರಾ ವಿಚಿತ್ರವಾಗಿದೆ. ಈತನಿಂದ ಯಾವುದೇ ಆಪತ್ತು ಸಂಭವಿಸುವ ಮುನ್ನವೇ ಪೊಲೀಸರು ಎಚ್ಚೆತ್ತುಕೊಂಡು, ಬಂಧನ ಮಾಡುವ ಕಾರ್ಯಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಕರ್ನಾಟಕ ಸರ್ಕಾರವು ಜನಸ್ನೇಹಿ ಪೊಲೀಸ್, ಒಬವ್ವ ಪಡೆ ಮತ್ತು ಅಕ್ಕಪಡೆಗಳಂತಹ ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಚಾಮರಾಜನಗರ ಜಿಲ್ಲಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೈಕೋಪಾತ್ನನ್ನು ಶೀಘ್ರವಾಗಿ ಬಂಧಿಸಿ ಮಹಿಳೆಯರಲ್ಲಿ ಸುರಕ್ಷತಾ ಭಾವನೆಯನ್ನು ಮೂಡಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮುಂಬೈ, ಏಪ್ರಿಲ್ 8: ಆಕೆ ಎಷ್ಟು ಸುಂದರಿಯೋ ಅಷ್ಟೇ ಜಾಣೆ. ಹೀಗಾಗಿಯೇ ತನ್ನ 35ನೇ ವಯಸ್ಸಿನಲ್ಲೂ ಹೊಸತೇನಾದರೂ ಕಲಿಯಬೇಕೆಂಬ ಬಯಕೆಯಿಂದ ಅವರು ಅಮೆರಿಕಕ್ಕೆ ಹಾರಿದ್ದರು. ಆದರೆ, ಅದೊಂದು ಅಪಘಾತ ಆಕೆಯ ಕನಸನ್ನು ನುಚ್ಚುನೂರು ಮಾಡಿಬಿಟ್ಟಿತ್ತು. ಮಗಳು ವಿದೇಶದಲ್ಲಿ ಓದಿ ಜೀವನದಲ್ಲಿ ಹೆಚ್ಚೆಚ್ಚು ಸಾಧನೆ ಮಾಡುತ್ತಾಳೆ ಎಂಬ ಕನಸು ಕಂಡಿದ್ದ ಆಕೆಯ ತಂದೆ ತಮ್ಮ ಮಗಳ ಸ್ಥಿತಿಯನ್ನು ನೋಡಿ ಮಮ್ಮಲ ಮರುಗಿದ್ದರು. ಭೀಕರ ಕಾರು ಅಪಘಾತದಲ್ಲಿ (Car Accident) ಗಾಯಗೊಂಡಿದ್ದ ನೀಲಂ ಶಿಂಧೆ (Neelam Tanaji Shinde) ಎಂಬ ಮಹಾರಾಷ್ಟ್ರದ ಮಹಿಳೆ ಕೋಮಾಗೆ ಜಾರಿದ್ದರು.
ಒಂದಲ್ಲ, ಎರಡಲ್ಲ… ಬರೋಬ್ಬರಿ 14 ತಿಂಗಳು ಕೋಮಾದಲ್ಲಿದ್ದ ಆಕೆಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಆಕೆಯ ಕುಟುಂಬ ಮಾಡಿದ ಪ್ರಯತ್ನ ಒಂದೆರಡಲ್ಲ. ಆದರೆ, ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋದ ಆ ಮಹಿಳೆ ಮತ್ತೆ ಭಾರತಕ್ಕೆ ಬರಲೇ ಇಲ್ಲ. ಕೋಮಾದಲ್ಲಿರುವಾಗಲೇ ಆಕೆ ದುರಂತ ಅಂತ್ಯ ಕಂಡಿದ್ದಾರೆ. ನೀಲಂ ಶಿಂಧೆಯ ಕೊನೆಯ ಆಸೆಯಂತೆ ಆಕೆಯ ಅಂಗಾಂಗಗಳನ್ನು ಅವರ ಕುಟುಂಬಸ್ಥರು ದಾನ ಮಾಡಿದ್ದಾರೆ. ಈ ಮೂಲಕ ನೀಲಂ ಸಾವಿನಲ್ಲೂ ಸಾರ್ಥಕತೆ ಮೆರೆದಿದಿದ್ದಾರೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಡ್ಗಾಂವ್ನ 35 ವರ್ಷದ ನೀಲಂ ತಾನಾಜಿ ಶಿಂಧೆ ಅಮೆರಿಕದಲ್ಲಿ ವಿದ್ಯಾರ್ಥಿನಿಯಾಗಿದ್ದರು. ಕ್ಯಾಲಿಫೋರ್ನಿಯಾದಲ್ಲಿ ನಡೆದ ಭೀಕರ ಅಪಘಾತದ ನಂತರ 14 ತಿಂಗಳಿಂದ ಕೋಮಾ ಸ್ಥಿತಿಯಲ್ಲಿದ್ದ ನೀಲಂ ಅಮೆರಿಕದಲ್ಲಿ ನಿಧನರಾಗಿದ್ದಾರೆ. 2025ರ ಫೆಬ್ರವರಿ 14ರಂದು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ ನಡೆದ ಹಿಟ್ ಆ್ಯಂಡ್ ರನ್ ಘಟನೆಯಲ್ಲಿ ಆಕೆಗೆ ಗಂಭೀರ ಗಾಯಗಳಾಗಿದ್ದವು. ಶಸ್ತ್ರಚಿಕಿತ್ಸೆಗೆ ಒಳಗಾಗಿ ದೀರ್ಘಕಾಲದ ವೈದ್ಯಕೀಯ ಆರೈಕೆಯನ್ನು ಪಡೆದಿದರೂ ಆಕೆಗೆ ಪ್ರಜ್ಞೆ ಮರಳಿ ಬರಲಿಲ್ಲ. ನೀಲಂ ಅಪಘಾತಕ್ಕೀಡಾಡಗುವ ಸ್ವಲ್ಪ ಮುಂಚೆ ಅವರ ತಾಯಿ ಕೂಡ ನಿಧನರಾಗಿದ್ದರು. ಹೀಗಾಗಿ, ಅವರ ಕುಟುಂಬದಲ್ಲಿ ಎರಡೆರಡು ಸಾವಿನ ಸಂಕಟ ಮಡುಗಟ್ಟಿದೆ.
ನೀಲಂ ಅವರಿಗೆ ತಮ್ಮ ಅಂಗಾಂಗಗಳನ್ನು ದಾನ ಮಾಡಬೇಕೆನ್ನುವ ಆಸೆಯಿತ್ತು. ಅವರ ಕೊನೆಯಾಸೆಯಂತೆ ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ. ಆಕೆಯ ಸಾವು ಆಕೆಯ ಕುಟುಂಬ ಮತ್ತು ಸಮುದಾಯವನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ. ಅಪಘಾತದಿಂದ ಗಂಭೀರ ಗಾಯಗಳಾಗಿ ನೀಲಂ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಜೊತೆಗೆ ಅವರ ಕೈಗಳು, ಕಾಲುಗಳು ಮತ್ತು ಎದೆಗೂ ಗಾಯಗಳಾಗಿದ್ದವು.
ತಲೆಯ ಗಾಯವನ್ನು ಸರಿಪಡಿಸಲು ವೈದ್ಯರು ತಕ್ಷಣದ ಶಸ್ತ್ರಚಿಕಿತ್ಸೆ ನಡೆಸಿದರು. ಆದರೂ ಅವರ ಸ್ಥಿತಿ ಗಂಭೀರವಾಗಿಯೇ ಇತ್ತು. ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಅಲ್ಲಿ ಅವರು ಹಲವು ತಿಂಗಳುಗಳ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಅವರಲ್ಲಿ ಚೇತರಿಕೆ ಕಂಡುಬರಲಿಲ್ಲ. ಅವರ ಚಿಕಿತ್ಸೆಯ ಸಮಯದಲ್ಲಿ, ಫೀಡಿಂಗ್ ಟ್ಯೂಬ್ಗೆ ಸಂಬಂಧಿಸಿದ ಸೋಂಕು ಸೇರಿದಂತೆ ತೊಡಕುಗಳು ಉಂಟಾದವು.
ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಹೀಗಾಗಿ, ಮಾರ್ಚ್ 28ರಂದು ಜೀವರಕ್ಷಕ ಬೆಂಬಲವನ್ನು ತೆಗೆದುಹಾಕಲು ವೈದ್ಯರು ನಿರ್ಧರಿಸಿದರು. ನಂತರ ಅವರ ಸ್ಥಿತಿ ವೇಗವಾಗಿ ಹದಗೆಟ್ಟಿತು. ಬಳಿಕ ಅವರು ಸಾವನ್ನಪ್ಪಿದರು.ಅವರ ತಂದೆ ಆನಂದ್ ಶಿಂಧೆ ಅಮೆರಿಕಕ್ಕೆ ಪ್ರಯಾಣಿಸಲು ತುರ್ತು ವೀಸಾ ಪಡೆಯುವಲ್ಲಿ ಭಾರೀ ತೊಂದರೆ ಎದುರಿಸಿದರು. ಮುಂಬೈ ವೀಸಾ ಕಚೇರಿಯಲ್ಲಿ ಪದೇ ಪದೇ ಮನವಿಗಳು ಮತ್ತು ಪ್ರಯತ್ನಗಳ ಹೊರತಾಗಿಯೂ ವಿಳಂಬ ಮುಂದುವರೆಯಿತು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಮಾಡಿದ ನಂತರ ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಕೊನೆಗೂ ನೀಲಂ ಅವರ ತಂದೆ ಮತ್ತು ಸಹೋದರನಿಗೆ ವೀಸಾ ದೊರಕಿತು. ಆದರೂ ಇರಾನ್ ಯುದ್ಧದ ಕಾರಣದಿಂದ ಅವರು ಅಮೆರಿಕಕ್ಕೆ ಪ್ರಯಾಣಿಸಲು ತೊಂದರೆಯಾಯಿತು. ಕೊನೆಗೂ ಬಹಳ ವಿಳಂಬವಾಗಿಯಾದರೂ ಅವರು ಅಮೆರಿಕಕ್ಕೆ ಹೋಗಲು ಸಾಧ್ಯವಾಯಿತು. ಆದರೆ, ಆಕೆಯ ಕೊನೆಯ ದಿನಗಳಲ್ಲಿ ನೀಲಂಳನ್ನು ನೋಡಲು ಅವರಿಗೆ ಸಾಧ್ಯವಾಗಲಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಏಪ್ರಿಲ್ 08): ದ್ವಿತೀಯ ಪಿಯುಸಿ ಫಲಿತಾಂಶದ (2nd PUC Results) ದಿನಾಂಕದ ಗೊಂದಲಕ್ಕೆ ತೆರೆ ಬಿದ್ದಿದ್ದು, ನಾಳೆ ಅಂದರೆ ಏಪ್ರಿಲ್ 9 ರಂದು ಫಲಿತಾಂಶ ಪ್ರಕಟಣೆಯಾಗಲಿದೆ ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ನಂತರ ಮಧ್ಯಾಹ್ನ 3ಗಂಟೆಗೆ ಅಧಿಕೃತ ವೆಬ್ಸೈಟ್ನಲ್ಲಿ ರಿಸಲ್ಟ್ ನೋಡಬಹುದಾಗಿದೆ. ಇನ್ನು ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ ಮೂಲಕ ಲಭ್ಯವಾಗಲಿದೆ. ಒಂದು ವೇಳೆ ವೆಬ್ಸೈಟ್ನಲ್ಲಿ ರಿಸಲ್ಟ್ ನೋಡುವಾಗ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ (DigiLocker) ಮೂಲಕವೇ ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳಬಹುದು. ಹಾಗಾದ್ರೆ, ಡಿಜಿಲಾಕರ್ನಿಂದ ಅಂಕಪಟ್ಟಿಯನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳಬೇಕು ಎನ್ನುವುದು ಈ ಕೆಳಗಿನಂತಿರುವ ಪ್ರಕ್ರಿಯೆಯನ್ನು ಅನುಸರಿಸಬೇಕು.
ಫಲಿತಾಂಶ ಡಿಜಿ ಲಾಕರ್ನಲ್ಲೂ ಲಭ್ಯ
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಕೇಂದ್ರ ಸರ್ಕಾರದ ಅಧಿಕೃತ ಅಪ್ಲಿಕೇಶನ್ ಆದ ಡಿಜಿಲಾಕರ್ನಲ್ಲಿ ಲಭ್ಯವಾಗಲಿದೆ. ಫಲಿತಾಂಶ ಚೆಕ್ ಮಾಡಿಕೊಳ್ಳಲು ಸೈಬರ್ ಸೆಂಟರ್ನಲ್ಲಿ ಸಾಲುಗಟ್ಟಿ ನಿಲ್ಲುವ ಅಗತ್ಯವಿಲ್ಲ, ಯಾವುದೇ ಕಾಗದಪತ್ರಗಳ ಜಂಜಾಟವಿಲ್ಲ. ಸರ್ವರ್ ಸಮಸ್ಯೆ ಇಲ್ಲದೇ ನಿಮ್ಮ ಫಲಿತಾಂಶ ಅತ್ಯಂತ ಸುರಕ್ಷಿತವಾಗಿ ಪಡೆದುಕೊಳ್ಳಬಹುದು.
ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ಮಂದಿ ಒಮ್ಮೆಗೆ ಅಧಿಕೃತ ವೆಬ್ಸೈಟ್ಗಳ ಮೇಲೆ ಮುಗಿಬೀಳುತ್ತಾರೆ. ಇದರಿಂದ ಸರ್ವರ್ ಕ್ರ್ಯಾಶ್ ಆಗುವುದು ಅಥವಾ ಪೇಜ್ ಲೋಡ್ ಆಗಲು ಬಹಳ ಸಮಯ ತೆಗೆದುಕೊಳ್ಳುವುದು ಮಾಮೂಲಿ. ಆದರೆ ಈ ಬಾರಿ ನೀವು ವೆಬ್ಸೈಟ್ ಓಪನ್ ಆಗುವವರೆಗೆ ಕಾಯಬೇಕಾದ ಅಗತ್ಯವಿಲ್ಲ. ಡಿಜಿಲಾಕರ್ ಮೂಲಕವೇ ನೇರವಾಗಿ ಅಂಕಪಟ್ಟಿ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಫಲಿತಾಂಶ ನೋಡಿಕೊಳ್ಳಬಹುದು.
ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯುವುದ್ಹೇಗೆ?
ಹಂತ 1: ವೆಬ್ಸೈಟ್ಗಿಂತಲೂ ವೇಗವಾಗಿ ಮತ್ತು ಸುಲಭವಾಗಿ ನಿಮ್ಮ ಅಂಕಪಟ್ಟಿ ಪಡೆಯಲು ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು ಅಷ್ಟೇ. ಮೊದಲಿಗೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ನಿಂದ ‘DigiLocker’ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ಅಪ್ಲಿಕೇಶನ್ ಇಲ್ಲದಿದ್ದರೆ ನೇರವಾಗಿ digilocker.gov.in ವೆಬ್ಸೈಟ್ಗೂ ಭೇಟಿ ನೀಡಬಹುದು.
ಹಂತ 2: ಅಪ್ಲಿಕೇಶನ್ ತೆರೆದ ನಂತರ ಮುಖಪುಟದಲ್ಲಿ ಕಾಣುವ ‘ಡಾಕ್ಯುಮೆಂಟ್ ವರ್ಗಗಳ’ (Document Categories) ಅಡಿಯಲ್ಲಿ ‘ಶಿಕ್ಷಣ ಮತ್ತು ಕಲಿಕೆ’ (Education and Learning) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಹಲವಾರು ಶಿಕ್ಷಣ ಮಂಡಳಿಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಮ್ಮ ರಾಜ್ಯದ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ (KSEAB) ಅನ್ನು ಹುಡುಕಿ ಆಯ್ಕೆ ಮಾಡಿ.
ಹಂತ 3: ನಂತರದ ಸ್ಕ್ರೀನ್ನಲ್ಲಿ ನಿಮಗೆ ‘Class XII Marksheet’ ಅಥವಾ ‘2nd PUC Marksheet’ ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಪಿಯುಸಿ ನೋಂದಣಿ ಸಂಖ್ಯೆ (Roll Number/Registration Number) ಮತ್ತು ಪರೀಕ್ಷೆ ಬರೆದ ವರ್ಷವನ್ನು (2026) ನಮೂದಿಸಿ. ಆಧಾರ್ ಕಾರ್ಡ್ನಲ್ಲಿರುವಂತೆ ನಿಮ್ಮ ವಿವರಗಳನ್ನು ಗಮನಿಸಿ ನೋಡಿ ಸಬ್ಮಿಟ್ ಮಾಡಿ.
ಹಂತ 4: ಬಳಿಕ ಕರ್ನಾಟಕ ಪಿಯುಸಿ 2 ಫಲಿತಾಂಶ ಪರದೆಯ ಮೇಲೆ ಮೂಡುತ್ತದೆ. ಇದರಲ್ಲಿ ನಿಮ್ಮ ವಿಷಯವಾರು ಅಂಕಗಳು ಲಭ್ಯವಿರುತ್ತವೆ. ಅಲ್ಲಿರುವ ಡೌನ್ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ (PDF) ರೂಪದಲ್ಲಿ ನಿಮ್ಮ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದಾಗಿದೆ.
ಅಂಕಪಟ್ಟಿ ಕೈಸೇರುವವರೆಗೂ ಕಾಯುವ ಅಗತ್ಯವಿಲ್ಲ
ಇಂಟರ್ನೆಟ್ ಕೆಫೆಗಳಿಗೆ ಅಲೆಯುವ ಅಥವಾ ಸ್ಲೋ ಇರುವ ವೆಬ್ಸೈಟ್ಗಳನ್ನು ಪದೇ ಪದೇ ರಿಫ್ರೆಶ್ ಮಾಡುವ ಕಿರಿಕಿರಿ ಇಲ್ಲದೆಯೇ ನಿಮ್ಮ ಅಂಕಪಟ್ಟಿಯನ್ನು ನೇರವಾಗಿ ನಿಮ್ಮ ಮೊಬೈಲ್ನಲ್ಲೇ ಪಡೆಯಬಹುದು. ಕೇಂದ್ರ ಸರ್ಕಾರದ ‘ಡಿಜಿಲಾಕರ್’ ಸೌಲಭ್ಯದ ಮೂಲಕ ಫಲಿತಾಂಶ ಘೋಷಣೆಯಾದ ಕೆಲವೇ ಕ್ಷಣಗಳಲ್ಲಿ ನಿಮ್ಮ ಅಂಕಪಟ್ಟಿ ಡಿಜಿಟಲ್ ರೂಪದಲ್ಲಿ ನಿಮ್ಮ ಕೈ ಸೇರಲಿದೆ. ಇದು ಕೇವಲ ಫಲಿತಾಂಶ ನೋಡುವುದಕ್ಕೆ ಮಾತ್ರವಲ್ಲದೆ, ಅಧಿಕೃತ ಅಂಕಪಟ್ಟಿಯಾಗಿ ಕೂಡ ಎಲ್ಲೆಡೆ ಮಾನ್ಯತೆ ಪಡೆಯುತ್ತದೆ ಎಂಬುದು ವಿಶೇಷ.
ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ಅಧಿಕೃತ ವೆಬ್ಸೈಟ್ಗಳಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ವಿದ್ಯಾರ್ಥಿಗಳು ಪರದಾಡುವುದು ಸಾಮಾನ್ಯ. ಆದರೆ ಡಿಜಿಲಾಕರ್ ಮೂಲಕ ವಿದ್ಯಾರ್ಥಿಗಳು ಯಾವುದೇ ಅಡೆತಡೆಯಿಲ್ಲದೆ, ಸುಲಭವಾಗಿ ತಮ ಅಂಕಪಟ್ಟಿಯನ್ನು ವೀಕ್ಷಿಸಬಹುದು ಮತ್ತು ಅದರ ಡಿಜಿಟಲ್ ಪ್ರತಿಯನ್ನು ತಕ್ಷಣವೇ ಡೌನ್ಲೋಡ್ ಮಾಡಿಕೊಳ್ಳಬಹುದು. ಇನ್ನು ಮುಂದಿನ ವ್ಯಾಸಂಗಕ್ಕೆ ಪ್ರವೇಶಾತಿ ಪಡೆಯಲು ಅಥವಾ ಇತರ ಯಾವುದೇ ಅಧಿಕೃತ ಕೆಲಸಗಳಿಗೆ ಈ ಡಿಜಿಟಲ್ ಅಂಕಪಟ್ಟಿಯನ್ನು ನೇರವಾಗಿ ಬಳಸಿಕೊಳ್ಳಬಹುದು. ಶಾಲೆಯಿಂದ ಅಥವಾ ಕಾಲೇಜಿನಿಂದ ಮೂಲ ಅಂಕಪಟ್ಟಿ ಕೈಸೇರುವವರೆಗೂ ಕಾಯುವ ಅಗತ್ಯ ಇರುವುದಿಲ್ಲ. ತಂತ್ರಜ್ಞಾನದ ಬಳಕೆಯೊಂದಿಗೆ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಫಲಿತಾಂಶದ ಲಭ್ಯತೆಯನ್ನು ಮತ್ತಷ್ಟು ಸುಗಮ ಹಾಗೂ ಪಾರದರ್ಶಕಗೊಳಿಸಿದೆ. ವಿದ್ಯಾರ್ಥಿಗಳು ಈಗಲೇ ತಮ್ಮ ಡಿಜಿಲಾಕರ್ ಖಾತೆಯನ್ನು ಸಕ್ರಿಯಗೊಳಿಸಿಕೊಂಡು, ಫಲಿತಾಂಶ ಪ್ರಕಟವಾದ ತಕ್ಷಣ ಸುಲಭವಾಗಿ ಅಂಕಪಟ್ಟಿ ಪಡೆಯಬಹುದು.
ನವದೆಹಲಿ, ಏಪ್ರಿಲ್ 8: ಭಾರತದ ಷೇರು ಮಾರುಕಟ್ಟೆಯ (Stock market) ಪ್ರಮುಖ ಸೂಚ್ಯಂಕಗಳು ಇಂದು ಬುಧವಾರ ಸಿಕ್ಕಾಪಟ್ಟೆ ಹಿಗ್ಗಿವೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಹತ್ತಿರ ಹತ್ತಿರ ಶೇ. 4ರಷ್ಟು ಹೆಚ್ಚಿವೆ. ಬಿಎಸ್ಇ ಸೆನ್ಸೆಕ್ಸ್ 2,946.32 ಅಂಕಗಳಷ್ಟು (ಶೇ. 3.95) ಅಧಿಕಗೊಂಡು 77,562.90 ಮಟ್ಟ ಮುಟ್ಟಿದೆ. ಎನ್ಎಸ್ಇ ನಿಫ್ಟಿ ಸೂಚ್ಯಂಕವು 873.70 ಅಂಕಗಳಷ್ಟು (ಶೇ 3.78) ಏರಿಕೆ ಕಂಡು 23,997.35 ಮಟ್ಟ ಮುಟ್ಟಿದೆ. ಮಾರುಕಟ್ಟೆಯಲ್ಲಿ ಇವತ್ತು ಹಿನ್ನಡೆ ಕಂಡ ಷೇರುಗಳ ಸಂಖ್ಯೆ 498 ಮಾತ್ರ. ಬರೋಬ್ಬರಿ 3,705 ಷೇರುಗಳು ಪಾಸಿಟಿವ್ ಆಗಿವೆ. ಐಟಿ ಮತ್ತು ಫಾರ್ಮಾ ಬಿಟ್ಟರೆ ಬೇರೆ 16 ಪ್ರಮುಖ ಸೆಕ್ಟರ್ಗಳ ಸೂಚ್ಯಂಕಗಳು ಪಾಸಿಟಿವ್ ಇವೆ. ಇವತ್ತು ಭಾರತದ ಈಕ್ವಿಟಿ ಮಾರುಕಟ್ಟೆ ಗರಿಗೆದರಲು ಕೆಲ ಮುಖ್ಯಕಾರಣಗಳು ಇಂತಿವೆ:
ಅಮೆರಿಕ ಇರಾನ್ ಕದನ ವಿರಾಮ
ಅಮೆರಿಕ ಮತ್ತು ಇರಾನ್ ನಡುವೆ ಅತಿರೇಕಕ್ಕೆ ಹೋಗುವಂತಿದ್ದ ಯುದ್ಧಕ್ಕೆ ಅಲ್ಪ ವಿರಾಮ ಬಂದಿದೆ. ಎರಡೂ ದೇಶಗಳು ಎರಡು ವಾರಗಳಿಗೆ ಕದನ ವಿರಾಮ ಘೋಷಿಸಿವೆ. ಈ ಬೆಳವಣಿಗೆ ಜಾಗತಿಕವಾಗಿ ಒಟ್ಟಾರೆ ಪಾಸಿಟಿವ್ ವಾತಾವರಣ ನಿರ್ಮಿಸಿಕೊಟ್ಟಿದೆ.
ಕಚ್ಚಾ ತೈಲ ಬೆಲೆ ಇಳಿಕೆ
ಬ್ಯಾರಲ್ಗೆ 110 ಡಾಲರ್ ದಾಟಿ ಹೋಗಿದ್ದ ಕಚ್ಛಾ ತೈಲ ಬೆಲೆ ಎರಡಂಕಿ ಡಾಲರ್ ಮೊತ್ತಕ್ಕೆ ಇಳಿದಿದೆ. ಕದನ ವಿರಾಮದ ಪರಿಣಾಮಗಳಲ್ಲಿ ಇದೂ ಒಂದು.
ವಿಶ್ವದ ಇತರ ಷೇರು ಮಾರುಕಟ್ಟೆಯಲ್ಲಾಗುವ ಬದಲಾವಣೆಗಳ ಪರಿಣಾಮ ಭಾರತದ ಈಕ್ವಿಟಿ ಕ್ಷೇತ್ರದ ಮೇಲೂ ಆಗುತ್ತದೆ. ಏಷ್ಯನ್ ಮಾರುಕಟ್ಟೆಗಳಾದ ಜಪಾನ್, ಚೀನಾ, ಸೌತ್ ಕೊರಿಯಾ, ಹಾಂಕಾಂಗ್ನ ಈಕ್ವಿಟಿ ಸೂಚ್ಯಂಕಗಳು ಇಂದು ಉತ್ತಮ ಫಲ ಕೊಟ್ಟಿವೆ. ಈ ಪಾಸಿಟಿವ್ ವಾತಾವರಣವು ಭಾರತದ ಮಾರುಕಟ್ಟೆಯನ್ನೂ ಸವರಿಕೊಂಡು ಹೋಗಿದೆ.
ರುಪಾಯಿ ಮೌಲ್ಯ ಹೆಚ್ಚಳ
ಅಮೆರಿಕನ್ ಡಾಲರ್ ಎದುರು ಭಾರತೀಯ ರುಪಾಯಿ ಮೌಲ್ಯ 50 ಪೈಸೆಗಳಷ್ಟು ಹೆಚ್ಚಿದೆ. ಇದರಿಂದಲೂ ಈಕ್ವಿಟಿ ಮಾರುಕಟ್ಟೆಗೆ ಅನುಕೂಲವಾಗಿದೆ.
ಆರ್ಬಿಐ ರಿಪೋ ದರ
ಆರ್ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಈ ಹಣಕಾಸು ವರ್ಷಕ್ಕೆ ಭಾರತ ಉತ್ತಮ ಎನಿಸುವ ಹಣದುಬ್ಬರ ಮತ್ತು ಜಿಡಿಪಿ ಸ್ಥಿತಿ ಹೊಂದಿರಬಹುದು ಎಂದು ಆರ್ಬಿಐ ಅಂದಾಜಿಸಿದೆ. ಇದು ಮಾರುಕಟ್ಟೆಗೆ ಸಕಾರಾತ್ಮಕ ಎನಿಸಿರಬಹುದು.
ಇವತ್ತು ಬ್ಯಾಂಕಿಂಗ್ ಕ್ಷೇತ್ರದ ಷೇರುಗಳಿಗೆ ಬಹಳ ಬೇಡಿಕೆ ಇತ್ತು. ಅದರಲ್ಲೂ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳ ಬೆಲೆ ಶೇ. 9ರಷ್ಟು ಏರಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ. 6ರಷ್ಟು ಹೆಚ್ಚಿದೆ.
ವಿಐಎಕ್ಸ್ ಇಳಿಕೆ
ಮಾರುಕಟ್ಟೆಯ ಪ್ರಕ್ಷುಬ್ದತೆಯ ಏರಿಳಿತವನ್ನು ಸೂಚಿಸುವ ಇಂಡಿಯಾ ವಿಐಎಕ್ಸ್ ಶೇ. 5ರಷ್ಟು ಕಡಿಮೆ ಆಗಿ 19.85ಕ್ಕೆ ಬಂದಿದೆ.