ಚಿಕ್ಕಮಗಳೂರು, ಏಪ್ರಿಲ್ 08: ಕೊಡಗಿನಲ್ಲಿ ಚಾರಣಕ್ಕೆಂದು ತೆರಳಿದ್ದ ಶರಣ್ಯ (Sharanya Missing) ನಾಪತ್ತೆಯಾಗಿ ವಾಪಸಾದ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿ ಶ್ರೀ ನಂದಾ ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ ಕಾಣೆಯಾಗಿದ್ದಾಳೆ.
ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ
ಕೇರಳ ರಾಜ್ಯದ ಪಾಲಕ್ಕಾಡ್ ಮೂಲದ 14 ವರ್ಷದ ಈ ಬಾಲಕಿ ಪೋಷಕರೊಂದಿಗೆ ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಈ ವೇಳೆ ಚಂದ್ರದ್ರೋಣ ಪರ್ವತ ಸರಣಿಯ ಮಾಣಿಕ್ಯಧಾರಾ ಸಮೀಪದಲ್ಲಿ ಕಾಣೆಯಾಗಿರುವುದು ತಿಳಿದುಬಂದಿದೆ. ಬಾಲಕಿ ಕಾಣೆಯಾಗುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪ್ರವಾಸಿಗರು ಹುಡುಕಾಟ ಆರಂಭಿಸಿದರೂ ಯಾವುದೇ ಸುಳಿವು ಸಿಗಲಿಲ್ಲ.
ರಾತ್ರಿ ಪೂರ್ತಿ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸಂಯುಕ್ತವಾಗಿ ಶೋಧ ಕಾರ್ಯ ನಡೆಸಿದರು. ಇಂದೂ ಡ್ರೋನ್ ಸಹಾಯದಿಂದ ಹುಡುಕಾಟ ಮುಂದುವರಿದಿದ್ದು, ಸಂಪೂರ್ಣ ಹುಲ್ಲುಗಾವಲು ಹಾಗೂ ಇಳಿಜಾರು ಪ್ರದೇಶಗಳಿಂದ ಕೂಡಿರುವ ಈ ಪ್ರದೇಶದಲ್ಲಿ ಕಾರ್ಯಾಚರಣೆ ಸವಾಲಿನದ್ದಾಗಿದೆ. ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ನಾಪತ್ತೆಯಾಗಿರುವ ಹಿನ್ನೆಲೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಟೊವಿನೋ ಥಾಮಸ್ ಅವರು ‘ಪಳ್ಳಿ ಚಟ್ಟಂಬಿ’ ಹೆಸರಿನ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ತಂಡ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಟಿವಿ9 ಕನ್ನಡದ ಜೊತೆ ಮಾತನಾಡಿದರು. ಆ ಸಂದರ್ಭದಲ್ಲಿ ಅವರು ಹಲವು ವಿಷಯಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಟಾಕ್ಸಿಕ್’ ಹಾಗೂ ‘ಡ್ರ್ಯಾಗನ್’ ಸಿನಿಮಾದ ಭಾಗವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಯಶ್ ಮಾಡಿದ ಸಹಾಯ ನೆನೆದಿದ್ದಾರೆ. ‘ಮಿನ್ನಲ್ ಮುರಳಿ’ ಸಿನಿಮಾದ ಟೀಸರ್ನ ಯಶ್ ರಿಲೀಸ್ ಮಾಡಿದ್ದರು. ಕೋರಿಕೆ ಇಟ್ಟ ತಕ್ಷಣ ಅವರು ಒಪ್ಪಿಕೊಂಡಿದ್ದರು ಎಂದಿದ್ದರು ಟೊವಿನೋ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೊನೆಗೂ ಜಸ್ಪ್ರೀತ್ ಬುಮ್ರಾ ಹಾಗೂ ವೈಭವ್ ಸೂರ್ಯವಂಶಿಯ ಮುಖಾಮುಖಿಯಾಗಿದೆ. ಈ ಮುಖಾಮುಖಿಯಲ್ಲಿ ಬುಮ್ರಾರನ್ನು ಬೆಂಡೆತ್ತುವಲ್ಲಿ ಯುವ ದಾಂಡಿಗ ಯಶಸ್ವಿಯಾಗಿದ್ದಾನೆ. ಅದು ಸಹ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸುವ ಮೂಲಕ ಎಂಬುದು ವಿಶೇಷ.
ಅಂದರೆ ಇದೇ ಮೊದಲ ಬಾರಿ ಯಾರ್ಕರ್ ಸ್ಪೆಷಲಿಸ್ಟ್ ಖ್ಯಾತಿಯ ಜಸ್ಪ್ರೀತ್ ಬುಮ್ರಾರನ್ನು ಎದುರಿಸಿದ್ದ ವೈಭವ್ ಸೂರ್ಯವಂಶಿ ತಾನೆದುರಿಸಿದ ಮೊದಲ ಬಾಲ್ನಲ್ಲೇ ಸಿಕ್ಸ್ ಸಿಡಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಗುವಾಹಟಿಯಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್ನ ದ್ವಿತೀಯ ಓವರ್ನಲ್ಲಿ ಬುಮ್ರಾ ದಾಳಿಗಿಳಿದಿದ್ದರು. ಬುಮ್ರಾ ಎಸೆದ ಮೊದಲ ಎಸೆತವನ್ನೇ ಯಾವುದೇ ಭಯವಿಲ್ಲದೆ ಎದುರಿಸಿದ ವೈಭವ್, ಲಾಂಗ್-ಆನ್ ಮೇಲಿಂದ ಭರ್ಜರಿ ಸಿಕ್ಸರ್ ಸಿಡಿಸಿದರು.
ಇದಾದ ಬಳಿಕ ಅದೇ ಓವರ್ನಲ್ಲಿ ಬುಮ್ರಾ ಎಸೆದ ಶಾರ್ಟ್ ಪಿಚ್ ಎಸೆತವನ್ನು ಚಾಣಾಕ್ಷತನದಿಂದ ಪುಲ್ ಮಾಡಿದ ವೈಭವ್, ಚೆಂಡನ್ನು ಡೀಪ್ ಬ್ಯಾಕ್ ವರ್ಡ್ ಸ್ಕ್ವೇರ್ ಲೆಗ್ ಸ್ಟ್ಯಾಂಡ್ಸ್ ಗೆ ಅಟ್ಟಿದರು.
ಈ ಮೂಲಕ ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್ನಲ್ಲಿ 14 ರನ್ ಕಬಳಿಸುವ ಮೂಲಕ ವೈಭವ್ ಸೂರ್ಯವಂಶಿ ತಮ್ಮ ಅಪ್ರತಿಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಈ ದೃಶ್ಯ ಕಂಡು ಬುಮ್ರಾ ಕೂಡ ಒಂದು ಕ್ಷಣ ದಂಗಾಗಿ, ನಂತರ ಮುಗುಳ್ನಗುತ್ತಾ ಆ ಹುಡುಗನ ಧೈರ್ಯವನ್ನು ಮೆಚ್ಚಿಕೊಂಡರು.
ವೈಭವ್ ಸೂರ್ಯವಂಶಿಯ ಈ ಭರ್ಜರಿ ಸಿಕ್ಸರ್ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯುವ ದಾಂಡಿಗನ ಆರ್ಭಟಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಮಳೆಯ ಕಾರಣ 11 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ವೈಭವ್ ಕೇವಲ 14 ಎಸೆತಗಳಲ್ಲಿ 39 ರನ್ ಚಚ್ಚಿದರು. ಇದರಲ್ಲಿ ಒಟ್ಟು 5 ಸಿಕ್ಸರ್ ಹಾಗೂ 1 ಬೌಂಡರಿ ಸೇರಿತ್ತು. ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 11 ಓವರ್ಗಳಲ್ಲಿ 150 ರನ್ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 11 ಓವರ್ಗಳಲ್ಲಿ 123 ರನ್ಗಳಿಸಿ 27 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ವಿಜಯವಾಡ, ಏಪ್ರಿಲ್ 08: ಮಹಿಳೆಯೊಬ್ಬರು ಆಂಧ್ರಪ್ರದೇಶದ ರೈಲಿನಲ್ಲಿ ಮಗು(Baby)ವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ರೈಲ್ವೆ ಸಿಬ್ಬಂದಿ ಸಹಾಯಕ್ಕೆ ಬಂದ ಪರಿಣಾಮ ಹೆರಿಗೆ ಸುಸೂತ್ರವಾಗಿ ಆಗಿದ್ದು, ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಎಂಟು ತಿಂಗಳ ಗರ್ಭಿಣಿಯೊಬ್ಬರು ರೈಲು ಹತ್ತಿದರು. ಹೆರಿಗೆಗೆ ಇನ್ನೂ ಒಂದು ತಿಂಗಳು ಬಾಕಿ ಇದೆ ಎಂಬ ವಿಶ್ವಾಸ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಪಕ್ಕದಲ್ಲಿದ್ದಾರೆ ಎಂಬ ಧೈರ್ಯದೊಂದಿಗೆ, ಅವರು ರೈಲು ಪ್ರಯಾಣಕ್ಕೆ ಒಪ್ಪಿಕೊಂಡಿದ್ದರು. ಆದರೆ ಅಂದುಕೊಂಡಂತೆ ಎಲ್ಲವೂ ನಡೆಯದು ಎಂಬುದಕ್ಕೆ ಇದೂ ಒಂದು ನಿದರ್ಶನ.
ನಿಧಾನವಾಗಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬದವರಿಗೂ ಭಯ ಶುರುವಾಗಿತ್ತು. ಬಳಿಕ ರೈಲಿನ ಟಿಟಿಗೆ ಕರೆ ಮಾಡಲಾಯಿತು.ಇಶಾದ್ ಮತ್ತು ತರನ್ನಮ್ ಖಾತುನ್ ಜಾರ್ಖಂಡ್ ಮೂಲದವರು. ಏಪ್ರಿಲ್ 5 ರಂದು, ಧನಬಾದ್ ಮೂಲದ ಗರ್ಭಿಣಿ, ಅವರ ಕುಟುಂಬವು ರೈಲು ಸಂಖ್ಯೆ 13352 (ಆಲಪ್ಪುಳ-ಧನಬಾದ್ ಎಕ್ಸ್ಪ್ರೆಸ್) ನ ಬಿ 1 ಕೋಚ್ನಲ್ಲಿ ಚೆನ್ನೈನಿಂದ ಧನಬಾದ್ಗೆ ಪ್ರಯಾಣಿಸುತ್ತಿದ್ದಾಗ ರೈಲು ಅನ್ನಾವರಂ ನಿಲ್ದಾಣವನ್ನು ದಾಟಿದ ಸ್ವಲ್ಪ ಸಮಯದ ನಂತರ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ಅವರ ಕುಟುಂಬ ಸದಸ್ಯರು ತಕ್ಷಣ ಕರ್ತವ್ಯದಲ್ಲಿದ್ದ ಟಿಕೆಟ್ ಪರಿಶೀಲನಾ ಸಿಬ್ಬಂದಿಯನ್ನು ಸಹಾಯಕ್ಕಾಗಿ ಸಂಪರ್ಕಿಸಿದರು. ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸಿದ ಜಿ. ಜ್ಯೋತಿ ಗರ್ಭಿಣಿಯ ಸಹಾಯಕ್ಕೆ ಬಂದರು. ಪರಿಸ್ಥಿತಿಯ ತುರ್ತುಸ್ಥಿತಿಯನ್ನು ಅರ್ಥಮಾಡಿಕೊಂಡು, ರೈಲಿಗೆ ಎಲಮಂಚಿಲಿ ನಿಲ್ದಾಣದಲ್ಲಿ ವಿಶೇಷ ನಿಲುಗಡೆ ಕಲ್ಪಿಸಲಾಯಿತು. ಆಂಬ್ಯುಲೆನ್ಸ್ಗೆ ಕೂಡ ಕರೆ ಮಾಡಿದ್ದರು.
ತಾಯಿ ಮತ್ತು ನವಜಾತ ಶಿಶುವನ್ನು 108 ಆಂಬ್ಯುಲೆನ್ಸ್ ಮೂಲಕ ಎಲಮಂಚಿಲಿಯ ಸರ್ಕಾರಿ ಆಸ್ಪತ್ರೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಲಾಯಿತು. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ಬೊಕಾರೊ ಎಕ್ಸ್ಪ್ರೆಸ್ ಅನ್ನು ಸುಮಾರು 40 ನಿಮಿಷಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.
ಟಿಟಿಇ ಜೊತೆಗೆ, ರೈಲ್ವೆ ಸಿಬ್ಬಂದಿ ಮತ್ತು ರೈಲಿನೊಳಗಿನ ಪುರುಷ ಪ್ರಯಾಣಿಕರನ್ನು ರೈಲು ಕೋಚ್ನಿಂದ ಹೊರಗೆ ಕಳುಹಿಸಲಾಯಿತು, ಇದರಿಂದ ಬಿ1 ಕೋಚ್ನಲ್ಲಿರುವ ಮಹಿಳೆಗೆ ಸಾಮಾನ್ಯ ಹೆರಿಗೆಯಾಗುವಂತೆ ನೋಡಿಕೊಳ್ಳಲಾಯಿತು. ರೈಲಿನಲ್ಲಿರುವ ಸೌಕರ್ಯ, ಸುರಕ್ಷತೆ ಮತ್ತು ಕಡಿಮೆ ವೆಚ್ಚ ಎನ್ನುವ ಕಾರಣಕ್ಕೆ ಗರ್ಭಿಣಿಯರಿಂದ ಹಿಡಿದು ವೃದ್ಧರವೆಗೂ ಎಲ್ಲರೂ ರೈಲು ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಈ ರೈಲು ಪ್ರಯಾಣ ಎಷ್ಟು ಸುರಕ್ಷಿತವೆಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾದಂತಾಗಿದೆ. ರೈಲಿನಲ್ಲಿ ಪ್ರಯಾಣಿಸುವಾಗ, ನಾವು ಅನೇಕ ವಿಚಿತ್ರ ಘಟನೆಗಳನ್ನು ನೋಡುತ್ತೇವೆ. ಆದರೆ ಮಾನವೀಯತೆ ತೋರುವ ಘಟನೆಗಳು ಬಹಳ ಅಪರೂಪ.
ನಟ ಅಲ್ಲು ಅರ್ಜುನ್ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ‘ಪುಷ್ಪ 2’ ಬಂದ ಬಳಿಕ ಅವರು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಜಪಾನ್ ಅಲ್ಲ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ. ಅಲ್ಲು ಅರ್ಜುನ್ ಅವರು ಈ ಹಂತಕ್ಕೆ ಬರಲು ಕಾರಣ ಅನೇಕರಿದ್ದಾರೆ. ಈ ಮೊದಲು ಅವರು ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.
ಅಲ್ಲು ಅರ್ಜುನ್ ಅವರಿಗೆ ಸಿನಿಮಾ ಹಿನ್ನೆಲೆ ಇದೆ. ಅವರ ತಂದೆ ಅಲ್ಲು ಅರವಿಂದ್ ಖ್ಯಾತ ನಿರ್ಮಾಪಕರು. ಅವರ ತಾತ ಅಲ್ಲು ರಾಮಲಿಂಗಯ್ಯ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದರು. ಅವರು 1000ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದ ಎಂಬ ಖ್ಯಾತಿ ಅವರಿಗೆ ಇದೆ. ಸಿನಿಮಾ ಬಗ್ಗೆ ಆಸಕ್ತಿ ಮೂಡಲು ಅವರು ಕೂಡ ಕಾರಣ.
Happy to share the @AlluCinemas ad film with you all.
Director @gowtam19 garu has crafted it with great vision and elegance.
A project made with immense passion and love. Grateful to everyone who contributed to bringing this film to life.
ಇಷ್ಟೆಲ್ಲ ಸ್ಟಾರ್ಗಳು ಇರುವ ಮನೆ ಅವರನ್ನು ವಿನಮ್ರವಾಗಿ ನಡೆದುಕೊಳ್ಳುವಂತೆ ಮಾಡಿತಂತೆ. ‘ನಾನು ಈ ಮಟ್ಟಕ್ಕೆ ಬೆಳೆಯಲು ಕುಟುಂಬಕ್ಕೆ ಇದರ ಕ್ರೆಡಿಟ್ ಕೊಡುತ್ತೇನೆ’ ಎಂದು ಅವರು ಹೇಿದ್ದರು. ‘ನಾನೇ ಬೆಳೆದು ನಿಂತವನಲ್ಲ. ನಾನು ಎಲ್ಲರಿಂದ ಆದವನು. ನನ್ನ ನಿರ್ದೇಶಕರು, ತಂತ್ರಜ್ಞರು, ಕುಟುಂಬದವರು, ಅಭಿಮಾನಿಗಳು ಹಾಗೂ ಎಲ್ಲರೂ ನನ್ನ ಬೆಳವಣಿಗೆಗ ಕಾರಣ. ನಾನು ಬೆಳೆಯಲು ಎಷ್ಟು ಸಹಾಯಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದರು.
ಅಲ್ಲು ಅರ್ಜುನ್ ಹಾಗೂ ಅಟ್ಲಿ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಇಂದು ಅನೌನ್ಸ್ ಆಗುವ ಸಾಧ್ಯತೆ ಇದೆ. ಈ ಸಿನಿಮಾದ ಟೈಟಲ್ ಏನು ಎಂಬುದು ಇಂದು ಗೊತ್ತಾಗಲಿದೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ.
ಬೆಂಗಳೂರು, ಏಪ್ರಿಲ್ 8: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಬಲ್ಲ ಬಹುನಿರೀಕ್ಷಿತ ನಮ್ಮ ಮೆಟ್ರೋದ (Namma Metro) ಪಿಂಕ್ ಲೈನ್ (Pink Line) ಲೋಕಾರ್ಪಣೆ ಮತ್ತೆ ಮುಂದಕ್ಕೆ ಹೋಗುವ ಲಕ್ಷಣಗಳು ಕಾಣಿಸುತ್ತಿವೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಈ ಮಾರ್ಗದ ಪೈಕಿ, ಮೊದಲ ಹಂತದಲ್ಲಿ 6 ನಿಲ್ದಾಣಗಳನ್ನು ಮೇ ತಿಂಗಳಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್ಸಿಎಲ್ ಮತ್ತು ರಾಜ್ಯ ಸರ್ಕಾರ ಯೋಜಿಸಿದ್ದವು. ಆದರೆ, ತಾಂತ್ರಿಕ ಪರೀಕ್ಷೆಗಳು (Testing) ಬಾಕಿ ಇರುವುದರಿಂದ ಜೂನ್ ಅಥವಾ ಜುಲೈನಲ್ಲಿ ಉದ್ಘಾಟನೆಯಾಗುವ ಸಾಧ್ಯತೆಯಿದೆ.
ರೈಲುಗಳಿದ್ದರೂ ವಿಳಂಬ ಏಕೆ?
ಸಾಮಾನ್ಯವಾಗಿ ಹೊಸ ಮೆಟ್ರೋ ಮಾರ್ಗ ಉದ್ಘಾಟನೆಗೆ ರೈಲುಗಳ ಕೊರತೆ ಅಡ್ಡಿಯಾಗುತ್ತಿತ್ತು. ಆದರೆ ಪಿಂಕ್ ಲೈನ್ಗಾಗಿ ಈಗಾಗಲೇ ಬಿಇಎಂಎಲ್ (BEML) ನಿಂದ ಐದು ರೈಲುಗಳು ಬಂದಿವೆ. ಒಟ್ಟು 23 ರೈಲುಗಳಿಗೆ ಆರ್ಡರ್ ನೀಡಲಾಗಿದ್ದು, ಹಂತಹಂತವಾಗಿ ಪೂರೈಕೆಯಾಗುತ್ತಿದೆ. ಆದರೆ ಸುರಕ್ಷತಾ ಪರೀಕ್ಷೆ ಮತ್ತು ಸಿಗ್ನಲಿಂಗ್ ಟೆಸ್ಟಿಂಗ್ ಕೆಲಸಗಳು ಪೂರ್ಣಗೊಳ್ಳದ ಕಾರಣ ಪ್ರಯಾಣಿಕರು ಮತ್ತಷ್ಟು ಕಾಲ ಕಾಯುವುದು ಅನಿವಾರ್ಯವಾಗಿದೆ.
ಪಿಂಕ್ ಲೈನ್ ಮೆಟ್ರೋ ವಿಶೇಷತೆ ಏನು?
ಒಟ್ಟು ಉದ್ದ: 21.25 ಕಿ.ಮೀ
ನಿಲ್ದಾಣಗಳು: ಒಟ್ಟು 18 (12 ಅಂಡರ್ ಗ್ರೌಂಡ್, 6 ಎಲಿವೇಟೆಡ್)
ಮೊದಲ ಹಂತ: ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 6 ಮೇಲ್ಸೇತುವೆ ನಿಲ್ದಾಣಗಳು.
ಅಂಡರ್ ಗ್ರೌಂಡ್ ಕಾಮಗಾರಿ: 13.76 ಕಿ.ಮೀ ವ್ಯಾಪ್ತಿಯ ಸುರಂಗ ಮಾರ್ಗದ ಕೆಲಸ ನಡೆಯುತ್ತಿದ್ದು, ಈ ವರ್ಷದ ಅಂತ್ಯಕ್ಕೆ ಪೂರ್ಣ ಮಾರ್ಗ ಲಭ್ಯವಾಗುವ ನಿರೀಕ್ಷೆಯಿದೆ.
ಟೆಹ್ರಾನ್, ಏಪ್ರಿಲ್ 08: ಅಮೆರಿಕದೊಂದಿಗೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ(Mojtaba Khamenei) ತನ್ನ ಎಲ್ಲಾ ಮಿಲಿಟರಿ ಘಟಕಗಳಿಗೆ ದಾಳಿ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಯುದ್ಧ ಅಂತ್ಯವಾಗಿಲ್ಲ, ಕದನ ವಿರಾಮವಷ್ಟೇ ಎಂದಿದ್ದಾರೆ. ಕದನ ವಿರಾಮವು ಯುದ್ಧದ ಅಂತ್ಯವನ್ನು ಸೂಚಿಸುವುದಿಲ್ಲ ಮತ್ತು ಶತ್ರುಗಳಾದ ಅಮೆರಿಕ ಅಥವಾ ಇಸ್ರೇಲ್ ಯಾವುದೇ ರೀತಿಯಲ್ಲಿ ತಪ್ಪಾಗಿ ವರ್ತಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಜಂಟಿ ದಾಳಿ ನಡೆಸಿ, ಯುದ್ಧದ ಮೊದಲ ದಿನದಂದು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕೊಂದಿದ್ದವು. ಕಳೆದ 39 ದಿನಗಳಲ್ಲಿ, ದೇಶಾದ್ಯಂತ ಹಲವಾರು ಜನರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ.
ಅಮೆರಿಕವು ಕದನ ವಿರಾಮ ಕೋರಿ ಇರಾನ್ಗೆ 15 ಅಂಶಗಳ ಪ್ರಸ್ತಾವನೆಯನ್ನು ಕಳುಹಿಸಿತ್ತು ಮತ್ತು ಮಾತುಕತೆಗೆ ಆಧಾರವಾಗಿ ಪರಿಷ್ಕೃತ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಿತ್ತು. ಇರಾನ್ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ಮಾಡುವ ಗಡುವು ಪೂರ್ಣಗೊಳ್ಳುವ ಕೆಲವೇ ಗಂಟೆಗಳ ಮೊದಲು, ಟ್ರಂಪ್ ಪಾಕಿಸ್ತಾನದ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಾಗಿ ಹೇಳಿ ಕದನ ವಿರಾಮವನ್ನು ಘೋಷಿಸಿದ್ದಾರೆ.
ಟ್ರಂಪ್ ತಮ್ಮ ಟ್ವಿಟರ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಎರಡು ವಾರಗಳ ಕದನ ವಿರಾಮ ಒಪ್ಪಂದವನ್ನು ಘೋಷಿಸಿದರು, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯಲು ಇರಾನ್ ಒಪ್ಪಿಕೊಳ್ಳುವುದರ ಮೇಲೆ ಒಪ್ಪಂದವು ಷರತ್ತುಬದ್ಧವಾಗಿದೆ ಎಂದು ಟ್ರಂಪ್ ಹೇಳಿದ್ದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಎರಡು ವಾರಗಳ ಕದನ ವಿರಾಮದಲ್ಲಿ ಇಸ್ರೇಲ್ ಕೂಡ ಒಂದು ಭಾಗವಾಗಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಸಿಎನ್ಎನ್ಗೆ ತಿಳಿಸಿದ್ದಾರೆ. ಮಾತುಕತೆಗಳು ಮುಂದುವರಿಯುತ್ತಿರುವಾಗ ಬಾಂಬ್ ದಾಳಿಯನ್ನು ನಿಲ್ಲಿಸಲು ಇಸ್ರೇಲ್ ಸಹ ಒಪ್ಪಿಕೊಂಡಿದೆ ಎಂದು ಅಧಿಕಾರಿ ಹೇಳಿದರು.
ಇಸ್ರೇಲ್ ಕೂಡ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ವರದಿಗಳು ಸೂಚಿಸುತ್ತವೆ. ಯುದ್ಧವನ್ನು ಕೊನೆಗೊಳಿಸಲು ಇರಾನ್ನ ಷರತ್ತುಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ಎರಡು ವಾರಗಳ ಕದನ ವಿರಾಮ ಪ್ರಸ್ತಾವನೆಯನ್ನು ಇರಾನ್ ಒಪ್ಪಿಕೊಂಡಿದೆ, ಇದನ್ನು ಅದರ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಕೂಡ ಅನುಮೋದಿಸಿದ್ದಾರೆ.
ಇದಲ್ಲದೆ, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದದ ಕುರಿತು ಮೊದಲ ಮಾತುಕತೆ ಶುಕ್ರವಾರ ಇಸ್ಲಾಮಾಬಾದ್ನಲ್ಲಿ ನಡೆಯಲಿದೆ. ಪಾಕಿಸ್ತಾನಿ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಕೋರಿಕೆಯ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ.
ಪಾಕಿಸ್ತಾನದ ಒತ್ತಾಯ ಸ್ಪಷ್ಟವಾಗಿತ್ತು. ದೇಶದ ಶೇ. 90 ತೈಲವು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಮುಚ್ಚುವಿಕೆಯು ಇಂಧನ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು, ಬೆಲೆಗಳನ್ನು ಹೆಚ್ಚಿಸುತ್ತಿತ್ತು ಮತ್ತು ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತಿತ್ತು. ಸೌದಿ ರಕ್ಷಣಾ ಒಪ್ಪಂದ, ಅಫ್ಘಾನಿಸ್ತಾನದಲ್ಲಿನ ಉದ್ವಿಗ್ನತೆ ಮತ್ತು ಭಾರತದೊಂದಿಗಿನ ವಿವಾದದ ನಡುವೆ, ಪಾಕಿಸ್ತಾನವು ಯುದ್ಧವು ಉಲ್ಬಣಗೊಳ್ಳುವುದು ಇಷ್ಟವಿರಲಿಲ್ಲ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲನುಭವಿಸಿದೆ. ಗುವಾಹಟಿಯ ಬರ್ಸಪರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 11 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 150 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 11 ಓವರ್ಗಳಲ್ಲಿ 123 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮುಂಬೈ ಪಡೆ 27 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ತಮ್ಮ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪವರ್ಪ್ಲೇನಲ್ಲಿ ನಾವು ಅಂದುಕೊಂಡಂತೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ನಮ್ಮ ಬೌಲರ್ಗಳು ಈ ಸೋಲಿನ ಜವಾಬ್ದಾರಿಯನ್ನು ಹೊರಬೇಕಾಗಿದೆ. ಒಂದು ಬೌಲಿಂಗ್ ಘಟಕವಾಗಿ ನಾವು ನಿರೀಕ್ಷಿತ ಮಟ್ಟಕ್ಕೆ ತಲುಪಲಿಲ್ಲ. ನಮ್ಮ ಬೌಲರ್ಗಳ ವಿರುದ್ಧ ಎದುರಾಳಿ ತಂಡದವರು ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು. ಹೀಗಾಗಿ ನಮ್ಮ ಸೋಲಿಗೆ ನಮ್ಮ ಬೌಲರ್ಗಳೇ ನೇರ ಕಾರಣ ಎಂದರು.
ಅಷ್ಟೇ ಅಲ್ಲದೆ “ನಾನು ಈ ಸೋಲನ್ನು ಬ್ಯಾಟರ್ಗಳ ಮೇಲೆ ಹಾಕುವುದಿಲ್ಲ. ಖಂಡಿತವಾಗಿಯೂ ಇದು ಬೌಲಿಂಗ್ ಘಟಕದ ವೈಫಲ್ಯ. ಟಿ20 ಕ್ರಿಕೆಟ್ನಲ್ಲಿ ಒಂದೆರಡು ಸರಿಯಾದ ಎಸೆತಗಳನ್ನು ಹಾಕುವುದು ಮುಖ್ಯವಾಗುತ್ತದೆ. ನಾವು ಕೇವಲ 27 ರನ್ಗಳಿಂದ ಸೋತಿದ್ದೇವೆ ಎಂದರೆ, ಅದರರ್ಥ ನಾವು ಐದು ಎಸೆತಗಳನ್ನು ಸರಿಯಾಗಿ ಹಾಕಿದ್ದರೆ ಅಥವಾ ಐದು ಸಿಕ್ಸರ್ಗಳನ್ನು ತಡೆದಿದ್ದರೆ ಪಂದ್ಯ ನಮ್ಮದಾಗುತ್ತಿತ್ತು. ಆದರೆ ನಮ್ಮ ಬೌಲರ್ಗಳು ಅಂತಹ ಎಸೆತಗಳನ್ನು ಸಹ ಎಸೆಯಲು ಕೂಡ ವಿಫಲರಾಗಿದ್ದಾರೆ ” ಎಂದು ಹಾರ್ದಿಕ್ ಪಾಂಡ್ಯ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಕಿರಿಯ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಆರ್ಭಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಹಾರ್ದಿಕ್ ಪಾಂಡ್ಯ. “15-16 ವರ್ಷದ ಹುಡುಗ ಅಷ್ಟು ಧೈರ್ಯದಿಂದ ಆಡುವುದನ್ನು ನೋಡುವುದು ಆಶ್ಚರ್ಯಕರವಾಗಿದೆ. ಪಂದ್ಯಕ್ಕೂ ಮುನ್ನವೇ ನಾವು ಅವರ ಬಗ್ಗೆ ಸಾಕಷ್ಟು ಚರ್ಚಿಸಿದ್ದೆವು. ಅವರಲ್ಲಿರುವ ಭಯವಿಲ್ಲದ ಆಟ ಮತ್ತು ಶಾಟ್ಗಳು ಅದ್ಭುತವಾಗಿವೆ. ಅವರಿಗೆ ಮುಂದಿನ ದಿನಗಳಲ್ಲಿ ಶುಭವಾಗಲಿ,” ಎಂದರು.
ಮುಂದಿನ ಸವಾಲು:
ಮುಂದಿನ ಪಂದ್ಯದಲ್ಲಿ ಮುಂಬೈ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲಿದೆ. ಈ ಬಗ್ಗೆ ಮಾತನಾಡಿದ ಪಾಂಡ್ಯ, “ನಡೆದ ತಪ್ಪುಗಳಿಂದ ಪಾಠ ಕಲಿಯುವುದು ಮುಖ್ಯ. ನಾಳೆ ಹೊಸ ಸೂರ್ಯೋದಯವಾಗಲಿದೆ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯಕ್ಕೆ ಸಿದ್ಧರಾಗುತ್ತೇವೆ,” ಎಂದು ಭರವಸೆ ನೀಡಿದರು.
ಏಪ್ರಿಲ್ 12 ರಂದು ನಡೆಯಲಿರುವ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಅದಕ್ಕೂ ಮುನ್ನ ಆರ್ಸಿಬಿ ತಂಡವು ಏಪ್ರಿಲ್ 10 ರಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವಗೆ ಇಂದು (ಏಪ್ರಿಲ್ 08) ಜನ್ಮದಿನ. ಭಾರತದ ಶ್ರೀಮಂತ ಹೀರೋಗಳಲ್ಲಿ ಅವರೂ ಒಬ್ಬರು., ಅಲ್ಲು ಅರ್ಜುನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಮಾಸ್ ಛಾಯೆಯುಳ್ಳ ಭಿನ್ನ ಪಾತ್ರಗಳನ್ನು ಪ್ರಯತ್ನಿಸುತ್ತಾರೆ, ಅವರ ಬಳಿ ಸಾಕಷ್ಟು ಹಣ ಇದೆ. ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.
ಅಲ್ಲು ಅರ್ಜುನ್ ಆಸ್ತಿ 600 ಕೋಟಿ ರೂಪಾಯಿ ಅಷ್ಟಿದೆ ಎನ್ನಲಾಗಿದೆ. ಹೈದರಾಬಾದ್ನ ಜೂಬ್ಲಿ ಹಿಲ್ಸ್ನ ಐಶಾರಾಮಿ ಬಂಗಲೆಯನ್ನು ಅಲ್ಲು ಅರ್ಜುನ್ ಹೊಂದಿದ್ದಾರೆ. ಈ ಮನೆಯಲ್ಲಿ ಅಲ್ಲು ಅರ್ಜುನ್, ಪತ್ನಿ ಸ್ನೇಹಾ ರೆಡ್ಡಿ, ಮಕ್ಕಳಾದ ಅಯಾನ್ ಹಾಗೂ ಅರ್ಹಾ ಜೊತೆಗೆ ವಾಸಿಸುತ್ತಾರೆ. ಈ ಬಂಗಲೆ ತುಂಬಾ ದೊಡ್ಡದಿದೆ. ಈ ಮನೆಯ ಮೌಲ್ಯ ಸುಮಾರು 100 ಕೋಟಿ ಎನ್ನಲಾಗುತ್ತದೆ.
ಅಲ್ಲು ಅರ್ಜುನ್ ಅವರು ಸಾಕಷ್ಟು ಕಾರನ್ನು ಹೊಂದಿದ್ದಾರೆ. ಅವರ ಬಳಿ ಇರುವ ಅತ್ಯಂತ ದುಬಾರಿ ಕಾರು ರೇಂಜ್ ರೋವರ್ ವೋಗ್. ಈ ಕಾರಿನ ಬೆಲೆ ಎರಡು ಕೋಟಿಗೂ ಹೆಚ್ಚು. ಇದನ್ನು 2019ರಲ್ಲಿ ಅಲ್ಲು ಅರ್ಜುನ್ ಖರೀದಿಸಿದ್ದರು. ಇದಕ್ಕೆ ಬೀಸ್ಟ್ ಎಂದು ಹೆಸರಿಟ್ಟಿದ್ದಾರೆ. ವೋಲ್ವೊ ಎಕ್ಸ್ಸಿ 90 ಟಿ8 ಎಕ್ಸಲೆಂಟ್ ಇದ್ದು, ಇದರ ಬೆಲೆ 1.30 ಕೋಟಿ ರುಪಾಯಿ. ಈ ಕಾರನ್ನು ಅಲ್ಲು ಅರ್ಜುನ್ ಹೆಚ್ಚು ಬಳಸುತ್ತಾರೆ. ಇದು ಅವರ ಮೆಚ್ಚಿನ ಕಾರು.
ಅಲ್ಲು ಅರ್ಜುನ್ ಬಳಿ ಶ್ವೇತ ವರ್ಣದ ಜಾಗ್ವಾರ್ ಎಕ್ಸ್ಜೆ ಎಲ್ ಇದೆ. ಇನ್ನು ಅಲ್ಲು ಅರ್ಜುನ್ ಬಳಿ ಇರುವ ಅತ್ಯಂತ ಹೆಚ್ಚು ಬೆಲೆಯ ವಾಹನವೆಂದರೆ ಅವರ 7 ಕೋಟಿ ಮೌಲ್ಯದ ಕ್ಯಾರಾವ್ಯಾನ್. ಇದನ್ನು ವಿಶೇಷವಾಗಿ ಆರ್ಡರ್ ನೀಡಿ ಅಲ್ಲು ಅರ್ಜುನ್ ನಿರ್ಮಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಉದ್ಯಮಿಯೂ ಹೌದು. ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಆಹಾ ಒಟಿಟಿಯಲ್ಲಿಯೂ ಪಾಲುದಾರರು. ಅವರು ಮಲ್ಟಿಪ್ಲೆಕ್ಸ್ ಆರಂಭಿಸಿದ್ದಾರೆ. ಫಾರ್ಮ್ಹೌಸ್ಗಳೂ ಅವರ ಬಳಿ ಇವೆ. ಅಲ್ಲು ಅರ್ಜುನ್ ಅವರ ಹೊಸ ಸಿನಿಮಾಗೆ ಇಂದು ಟೈಟಲ್ ಘೋಷಣೆ ಆಗಲಿದೆ. ಇದಕ್ಕೆ ಅಲ್ಲು ಅರ್ಜುನ್ ದೊಡ್ಡ ಮೊತ್ತದ ಸಂಭಾವನೆ ಪಡೆಯಲಿದ್ದಾರೆ.
ಬೆಂಗಳೂರು, ಏಪ್ರಿಲ್ 08: ಕಳೆದ ಹಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆರಾಯನ (Weather Forecast) ಆರ್ಭಟ ಕಾಣಿಸಿತ್ತು. ಆದರೆ ಇಂದು ಕೇವಲ ಬೆರಳೆಣಿಕೆಯಷ್ಟು ಪ್ರದೇಶಗಳಲ್ಲಿ ಮಳೆಯಾಗಲಿದ್ದು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಮೂರು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಒಣ ಹವೆ?
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿಯೂ ಶುಷ್ಕ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.