11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು – Kannada News | Icc odi world cup 2027 format explained in kannada

2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಸ್ವರೂಪ ಬದಲಾಗಿದೆ. ಐಸಿಸಿ ಮುಂಬರುವ ವಿಶ್ವಕಪ್‌ಗಾಗಿ ಹೊಸ ಫಾರ್ಮ್ಯಾಟ್ ಪರಿಚಯಿಸಿದ್ದು, ಈ ಸ್ವರೂಪದ ಮೂಲಕ ಒಟ್ಟು ಮೂರು ಹಂತಗಳಲ್ಲಿ ಟೂರ್ನಿಯನ್ನು ಆಯೋಜಿಸಲು ರೂಪುರೇಷೆ ಸಿದ್ಧಪಡಿಸಿದೆ. ಹಾಗಾದರೆ ಈ ಬಾರಿ ಏನೆಲ್ಲಾ ಬದಲಾವಣೆಗಳಾಗಿವೆ? ಟೂರ್ನಿಯ ಮೂರು ಹಂತಗಳಾವುವು ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ.

ಹಂತ 1: ಸೂಪರ್ ಸೀರೀಸ್ 

  • ಯಾರ ನಡುವೆ?: ಅರ್ಹತೆ ಪಡೆದ ಒಟ್ಟು 14 ತಂಡಗಳಲ್ಲಿ, ಐಸಿಸಿ ಶ್ರೇಯಾಂಕದಲ್ಲಿ ಅತ್ಯಂತ ಕೆಳಗಿರುವ ಕೊನೆಯ 3 ತಂಡಗಳು ಈ ಹಂತದಲ್ಲಿ ಸ್ಪರ್ಧಿಸುತ್ತವೆ. ಅಂದರೆ 11 ತಂಡಗಳು ನೇರ ಅರ್ಹತೆ ಪಡೆದರೆ, 3 ತಂಡಗಳು ಟೂರ್ನಿ ಆರಂಭಕ್ಕೂ ಮುನ್ನ ಸೂಪರ್ ಸಿರೀಸ್ ಆಡಿ ಅರ್ಹತೆ ಪಡೆಯಬೇಕಿದೆ.
  • ಮಾದರಿ: ಈ ಮೂರು ತಂಡಗಳು ಪರಸ್ಪರ ತಲಾ ಒಂದು ಪಂದ್ಯವನ್ನು ಆಡಲಿವೆ (ಮಿನಿ ಲೀಗ್).
  • ಫಲಿತಾಂಶ: ಈ ಮೂರು ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕೇವಲ 1 ತಂಡ ಮಾತ್ರ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಉಳಿದ 2 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.

ಹಂತ 2: ಗುಂಪು ಹಂತ:

  • ಯಾರ ನಡುವೆ?: ಸೂಪರ್ ಸೀರೀಸ್‌ನಿಂದ ಗೆದ್ದು ಬಂದ 1 ತಂಡವು, ಉಳಿದ 11 ಉನ್ನತ ಶ್ರೇಯಾಂಕದ ತಂಡಗಳನ್ನು ಸೇರಿಕೊಳ್ಳುತ್ತದೆ. ಅದರಂತೆ ದ್ವಿತೀಯ ಹಂತದಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯಲಿವೆ.
  • ಮಾದರಿ: ಈ 12 ತಂಡಗಳನ್ನು ತಲಾ 6 ತಂಡಗಳಂತೆ ಎರಡು ಗುಂಪುಗಳಾಗಿ (ಗ್ರೂಪ್ A ಮತ್ತು ಗ್ರೂಪ್ B) ವಿಂಗಡಿಸಲಾಗುತ್ತದೆ. ಪ್ರತಿಯೊಂದು ತಂಡವು ತನ್ನ ಗುಂಪಿನಲ್ಲಿರುವ ಉಳಿದ ಐದು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು (ಒಟ್ಟು 5 ಪಂದ್ಯಗಳು) ಆಡಲಿವೆ.
  • ಫಲಿತಾಂಶ: ಪ್ರತಿ ಗುಂಪಿನಿಂದ ಅಗ್ರ 3 ತಂಡಗಳು ನೇರವಾಗಿ ಮುಂದಿನ ಹಂತಕ್ಕೆ ಹೋಗುತ್ತವೆ (ಒಟ್ಟು 6 ತಂಡಗಳು). ಇದರೊಂದಿಗೆ, ಎರಡೂ ಗುಂಪುಗಳಲ್ಲಿ ಉಳಿದ ತಂಡಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೊಂದು ಹೆಚ್ಚುವರಿ ತಂಡಕ್ಕೆ ಅವಕಾಶ ಸಿಗುತ್ತದೆ. ಹೀಗೆ ಒಟ್ಟು 7 ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಡುತ್ತವೆ.
  • 7ನೇ ತಂಡದ ಆಯ್ಕೆ ಹೇಗೆ?: ಗ್ರೂಪ್ ಹಂತದ 5 ಪಂದ್ಯಗಳ ಮುಕ್ತಾಯದ ನಂತರ, ಎರಡೂ ಗ್ರೂಪ್‌ಗಳ 4ನೇ ಸ್ಥಾನದಲ್ಲಿರುವ ತಂಡಗಳ ಪೈಕಿ ಯಾವ ತಂಡ ಅತಿ ಹೆಚ್ಚು ಅಂಕಗಳನ್ನು ಹೊಂದಿದೆಯೋ ಆ ತಂಡವು 7ನೇ ತಂಡವು ಮೂರನೇ ಹಂತಕ್ಕೆ ಪ್ರವೇಶಿಸುತ್ತದೆ.

ಹಂತ 3: ಸೂಪರ್ 7:

  • ಮಾದರಿ: ಅರ್ಹತೆ ಪಡೆದ 7 ತಂಡಗಳು ಸಿಂಗಲ್ ರೌಂಡ್-ರಾಬಿನ್ ಮಾದರಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತವೆ. ಅಂದರೆ ಇಲ್ಲಿ ಯಾವುದೇ ಗುಂಪುಗಳಿರುವುದಿಲ್ಲ, ಪ್ರತಿ ತಂಡವೂ ಉಳಿದ 6 ತಂಡಗಳ ವಿರುದ್ಧ ಆಡಲೇಬೇಕು (ಒಟ್ಟು 21 ಪಂದ್ಯಗಳು ನಡೆಯಲಿವೆ).
  • ನಾಕೌಟ್ ಹಂತ: ಸೂಪರ್ 7 ಹಂತದ ಅಂತ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ತದನಂತರ ಸೆಮಿಫೈನಲ್ ಪಂದ್ಯಗಳು ಮತ್ತು ಫೂನಲ್​ ಪಂದ್ಯ ನಡೆಯಲಿದೆ.

ಏಕದಿನ ವಿಶ್ವಕಪ್ ಯಾವಾಗ ಶುರು?

2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯು 2027ರ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ನಡೆಯಲಿದೆ. ಮುಂಬರುವ ಟೂರ್ನಿಗೆ ಆಫ್ರಿಕಾ ಖಂಡದ ಪ್ರಮುಖ ಮೂರು ದೇಶಗಳಾದ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸಲಿದೆ.

ಸ್ವರೂಪ ಬದಲಾವಣೆಗೆ ಕಾರಣವೇನು?

ಟೂರ್ನಿಯ ಆರಂಭಿಕ ಹಂತದಲ್ಲೇ ನೀರಸ ಪಂದ್ಯಗಳು ನಡೆಯುವುದನ್ನು ತಡೆಯಲು ಮತ್ತು ಬಲಿಷ್ಠ ತಂಡಗಳ ನಡುವೆ ಹೆಚ್ಚು ಹೈ-ವೋಲ್ಟೇಜ್ ಪಂದ್ಯಗಳು ಜರುಗುವಂತೆ ಮಾಡಲು ಐಸಿಸಿ ಈ ಕಠಿಣ ಸ್ವರೂಪವನ್ನು ಜಾರಿಗೆ ತಂದಿದೆ. ಇದಕ್ಕಾಗಿಯೇ ಈ ಹಿಂದೆ ಉದ್ದೇಶಿಸಲಾಗಿದ್ದ ಸಾಂಪ್ರದಾಯಿಕ ‘ಸೂಪರ್-6’ ಮಾದರಿಯನ್ನು ಸಂಪೂರ್ಣವಾಗಿ ಕೈಬಿಟ್ಟು, ಅದರ ಬದಲಿಗೆ ಕ್ರಾಂತಿಕಾರಕ ‘ಸೂಪರ್-7’ ಫಾರ್ಮ್ಯಾಟ್ ಪರಿಚಯಿಸಲಾಗಿದೆ.

ಈ ಹೊಸ ನಿಯಮದಿಂದಾಗಿ, ಬಲಿಷ್ಠ ತಂಡಗಳು ಕೇವಲ ಒಂದು ಪಂದ್ಯದ ಅದೃಷ್ಟದ ಆಧಾರದ ಮೇಲೆ ನಾಕೌಟ್ ತಲುಪಲು ಸಾಧ್ಯವಿಲ್ಲ. ಬದಲಿಗೆ, ಪ್ರತಿ ಪಂದ್ಯದಲ್ಲೂ ಉನ್ನತ ಮಟ್ಟದ ಸ್ಥಿರ ಪ್ರದರ್ಶನ ನೀಡುವ ಜಾಗತಿಕ ಕ್ರಿಕೆಟ್‌ನ ನೈಜ ಶಕ್ತಿಗಳು ಮಾತ್ರ ಸೆಮಿಫೈನಲ್ ತಲುಪಲು ಈ ಸ್ವರೂಪವು ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ಮೆಸ್ಸಿ ಪಡೆಯ ಮಿಂಚಿನಾಟ: ಫೈನಲ್​ಗೆ ಅರ್ಜೆಂಟೀನಾ

ಒಟ್ಟಾರೆಯಾಗಿ ಹೇಳುವುದಾದರೆ, 2027ರ ಏಕದಿನ ವಿಶ್ವಕಪ್‌ನ ಈ ಹೊಸ ಸ್ವರೂಪವು ಕ್ರಿಕೆಟ್ ಜಗತ್ತನ್ನು ಮತ್ತೊಂದು ರೋಮಾಂಚಕ ಹಂತಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ. ಐಸಿಸಿ ರೂಪಿಸಿರುವ ಈ ‘ಸೂಪರ್-7’ ಮಾಸ್ಟರ್ ಪ್ಲಾನ್ ಕೇವಲ ವಾಣಿಜ್ಯ ಲಾಭ ಮತ್ತು ಪ್ರಸಾರಕರ ಆದಾಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಕ್ರಿಕೆಟ್ ಅಭಿಮಾನಿಗಳಿಗೆ ಆರಂಭದಿಂದ ಕೊನೆಯವರೆಗೂ ಹೈ-ವೋಲ್ಟೇಜ್ ಪಂದ್ಯಗಳ ಮನರಂಜನೆಯ ರಸದೌತಣ ನೀಡಲಿದೆ.

Source link

ಶಂಕರ್​ ನಾಗ್ ಕನಸಿನ ಕೂಸು ‘ಮಾಲ್ಗುಡಿ ಡೇಸ್’ ಸರಣಿಗೆ 40 ವರ್ಷ – Kannada News | Celebrating 40 Years of Malgudi Days How Shankar Nag directorial magic brought RK Narayan world to life in Agumbe

ಆರ್‌ಕೆ ನಾರಾಯಣ್ ಅವರ ಕಲ್ಪನೆಯ ಕಥಾಲೋಕ, ಶಂಕರ್ ನಾಗ್ ಅವರ ಅದ್ಭುತ ದೃಶ್ಯಾವಳಿ ಹಾಗೂ ಎಲ್.ವೈದ್ಯನಾಥನ್ ಅವರ ಹಿನ್ನೆಲೆ ಸಂಗೀತದ ಮೂಲಕ ‘ಮಾಲ್ಗುಡಿ ಡೇಸ್’ ಸರಣಿ ಮೂಡಿ ಬಂದಿತ್ತು. ಕಥಾಸರಣಿ ಬಿಡುಗಡೆಯಾಗಿ ಈಗ ಭರ್ತಿ 40 ವರ್ಷಗಳು ತುಂಬುತ್ತಾ ಬಂದಿವೆ. 1986ರಲ್ಲಿ ದೂರದರ್ಶನದಲ್ಲಿ ಮೊದಲ ಬಾರಿಗೆ ಪ್ರಸಾರವಾಗಿದ್ದ ಈ ಸರಣಿ, ಇಂದಿಗೂ ಕೋಟ್ಯಂತರ ಭಾರತೀಯರ ಬಾಲ್ಯದ ಮಧುರ ನೆನಪಾಗಿದೆ.

ಶಂಕರ್ ನಾಗ್ ಅವರ ದೃಶ್ಯ ಮ್ಯಾಜಿಕ್

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ, ನಿರ್ದೇಶಕ ಶಂಕರ್ ನಾಗ್ ಅವರು ಅತ್ಯಂತ ಕಾಳಜಿ ಮತ್ತು ಶ್ರದ್ಧೆಯಿಂದ ಈ ಸರಣಿಯನ್ನು ನಿರ್ದೇಶಿಸಿದ್ದರು. ಆರ್.ಕೆ. ನಾರಾಯಣ್ ಅವರ ಸಣ್ಣ ಕಥೆಗಳನ್ನು ದೃಶ್ಯ ರೂಪಕ್ಕೆ ತರುವಾಗ ಅವರು ಅಳವಡಿಸಿಕೊಂಡ ತಂತ್ರಜ್ಞಾನ ಹಾಗೂ ಮೇಕಿಂಗ್ ಶೈಲಿ ಇಂದಿಗೂ ಮಾದರಿಯಾಗಿದೆ. ಶಂಕರ್ ನಾಗ್ ಅವರ ವಿಷನ್ ಎಷ್ಟು ಅದ್ಭುತವಾಗಿತ್ತೆಂದರೆ, ಇಡೀ ಭಾರತವೇ ಈ ಸರಣಿಗೆ ಮನಸೋತಿತ್ತು.

ಆಗುಂಬೆಯಲ್ಲೇ ಸೃಷ್ಟಿಯಾಗಿತ್ತು ‘ಮಾಲ್ಗುಡಿ’ ಲೋಕ

ಕಥೆಯಲ್ಲಿ ಬರುವ ಕಾಲ್ಪನಿಕ ತಾಣ ‘ಮಾಲ್ಗುಡಿ’ಯನ್ನು ಕಣ್ಣಿಗೆ ಕಟ್ಟುವಂತೆ ಮಾಡಲು ಶಂಕರ್ ನಾಗ್ ಆರಿಸಿಕೊಂಡಿದ್ದು ಶಿವಮೊಗ್ಗ ಜಿಲ್ಲೆಯ ಆಗುಂಬೆಯನ್ನು. ಅಲ್ಲಿನ ಹಳೆಯ ಮನೆಗಳು, ಮಲೆನಾಡಿನ ಹಸಿರು, ಮಳೆ ಹಾಗೂ ಪ್ರಕೃತಿ ಸೌಂದರ್ಯ ಇಡೀ ಸರಣಿಗೆ ಜೀವ ತುಂಬಿದ್ದವು. ಇಂದಿಗೂ ಆಗುಂಬೆಗೆ ಹೋದರೆ ‘ಮಾಲ್ಗುಡಿ ಡೇಸ್’ ಶೂಟಿಂಗ್ ನಡೆದ ಮನೆಗಳನ್ನು ಪ್ರವಾಸಿಗರು ಆಸಕ್ತಿಯಿಂದ ನೋಡುತ್ತಾರೆ.ಈ ಜಾಗವನ್ನು ಸೂಚಿಸಿದ್ದರು ಅವರೇ ಅನ್ನೋದು ವಿಶೇಷ.

ಸ್ವಾಮಿ ಮತ್ತು ಆತನ ಗೆಳೆಯರ ಬಳಗ

ಮಾಲ್ಗುಡಿ ಡೇಸ್ ಎಂದ ತಕ್ಷಣ ನೆನಪಿಗೆ ಬರುವುದು ಕಲಾವಿದರ ಬಳಗ. ಮಾಸ್ಟರ್ ಮಂಜುನಾಥ್, ಅನಂತ್ ನಾಗ್, ಗಿರೀಶ್ ಕಾರ್ನಾಡ್, ವೈಶಾಲಿ ಕಾಸರವಳ್ಳಿ ಸೇರಿದಂತೆ ಶ್ರೇಷ್ಠ ಕಲಾವಿದರ ದಂಡೇ ಈ ಸರಣಿಯಲ್ಲಿ ನಟಿಸಿತ್ತು.

‘ತಾನಾ ನಾನಾ ತಾನಾನಾನಾ’ ಸಾರ್ವಕಾಲಿಕ ರಾಗ

ಎಲ್.ವೈದ್ಯನಾಥನ್ ಸಂಯೋಜಿಸಿದ ಮಾಲ್ಗುಡಿ ಡೇಸ್ ಶೀರ್ಷಿಕೆ ಗೀತೆ ಕೇಳದ ಭಾರತೀಯನೇ ಇಲ್ಲ ಎನ್ನಬಹುದು. ಕೇವಲ ಒಂದು ಸರಳ ರಾಗ ಇಡೀ ಸರಣಿಯ ಆತ್ಮವಾಗಿ ಮೂಡಿಬಂದಿತ್ತು. ಇಂದಿಗೂ ಆ ಟ್ಯೂನ್ ಕೇಳಿದರೆ ಸಾಕು, ನಾವೆಲ್ಲರೂ ನಮ್ಮ ಬಾಲ್ಯದ ದಿನಗಳಿಗೆ ಜಾರಿಬಿಡುತ್ತೇವೆ.

ಇದನ್ನೂ ಓದಿ: ನಿಧನ ಹೊಂದುವ ಹಿಂದಿನ ದಿನ ಸಾಯುವ ದೃಶ್ಯವನ್ನೇ ಶೂಟ್ ಮಾಡಿದ್ದ ಶಂಕರ್ ನಾಗ್

ಸ್ಮರಣೀಯ ಮೈಲಿಗಲ್ಲು

ದೂರದರ್ಶನದ ಸುವರ್ಣ ಯುಗಕ್ಕೆ ಸಾಕ್ಷಿಯಾಗಿದ್ದ ‘ಮಾಲ್ಗುಡಿ ಡೇಸ್’ ಕೇವಲ ಒಂದು ಸರಣಿಯಾಗಿ ಉಳಿಯದೆ ಭಾರತೀಯ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. 40 ವರ್ಷಗಳು ಕಳೆದರೂ ಇದರ ಜನಪ್ರಿಯತೆ ಹಾಗೂ ಪ್ರಸ್ತುತತೆ ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನುವುದೇ ಶಂಕರ್ ನಾಗ್ ಹಾಗೂ ಅವರ ಇಡೀ ತಂಡದ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೈಬರ್ ಅಕ್ರಮ ತಡೆ, ಡಿಜಿಟಲ್ ಭದ್ರತೆ ಬಲಪಡಿಸಲು DRDO ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ ಪ್ರಯೋಗ ಯಶಸ್ವಿ: ಬೆಂಗಳೂರಿನ ಕಂಪನಿ ಸಾಥ್! – Kannada News | DRDO Quantum Key Distribution Success: Bengaluru Based Taqbit Labs Powers India’s Next Generation Cyber Security

ಬೆಂಗಳೂರು, ಜುಲೈ 16: ಭಾರತದ ಡಿಜಿಟಲ್ ಭದ್ರತೆ ಮತ್ತು ಕಾರ್ಯತಂತ್ರದ ಸಂವಹನ ಜಾಲಗಳನ್ನು ಮತ್ತಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮಹತ್ವದ ಸಾಧನೆ ಮಾಡಿದೆ. ಫೈಬರ್ ಆಧಾರಿತ ಕ್ವಾಂಟಂ ಕೀ ಡಿಸ್ಟ್ರಿಬ್ಯೂಷನ್ (Quantum Key Distribution – QKD) ವ್ಯವಸ್ಥೆಯ ಸೇನಾ ಕ್ಷೇತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಡಿಆರ್‌ಡಿಒ, ಈ ಯೋಜನೆಯಲ್ಲಿ ಬೆಂಗಳೂರು ಮೂಲದ ಟ್ಯಾಕ್‌ಬಿಟ್ ಲ್ಯಾಬ್ಸ್ (Taqbit Labs) ಸಂಸ್ಥೆಯ ಸಹಯೋಗವನ್ನು ಪಡೆದುಕೊಂಡಿದೆ. ದೇಶೀಯ ತಂತ್ರಜ್ಞಾನವನ್ನು ಆಧರಿಸಿ ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು ಭವಿಷ್ಯದ ಸೈಬರ್ ದಾಳಿಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಸುರಕ್ಷಿತ ಸಂವಹನ ವ್ಯವಸ್ಥೆಯಾಗಿ ಗುರುತಿಸಿಕೊಂಡಿದೆ.

ಪ್ರಯೋಗಾಲಯ ಮಟ್ಟದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲ್ಪಟ್ಟ ಪರಿಕಲ್ಪನೆಯನ್ನು ಆಧರಿಸಿ, ಡಿಆರ್‌ಡಿಒ ತನ್ನ ಕೈಗಾರಿಕಾ ಪಾಲುದಾರರಾದ ಬೆಂಗಳೂರು ಮೂಲದ ಟ್ಯಾಕ್‌ಬಿಟ್ ಲ್ಯಾಬ್ಸ್ ಜೊತೆಗೂಡಿ ಈ ಸುಧಾರಿತ ಕ್ವಾಂಟಂ ಕೀ ಡಿಸ್ಟ್ರಿಬ್ಯೂಷನ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿ ಕಾರ್ಯರೂಪಕ್ಕೆ ತಂದಿದೆ. ಸೇನಾ ಕ್ಷೇತ್ರದಲ್ಲಿ ನಡೆಸಿದ ಪರೀಕ್ಷೆಗಳು ಯಶಸ್ವಿಯಾಗಿದ್ದು, ದೇಶದ ಅತ್ಯಂತ ಪ್ರಮುಖ ಕಾರ್ಯತಂತ್ರದ ಸಂವಹನ ಜಾಲಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.

ರಕ್ಷಣಾ ಸಂವಹನ, ರಾಷ್ಟ್ರೀಯ ಭದ್ರತೆಗೆ ಹೆಚ್ಚುವರಿ ಸುರಕ್ಷತೆ

ಕ್ವಾಂಟಂ ಕಂಪ್ಯೂಟಿಂಗ್ ಯುಗದಲ್ಲಿ ಸೈಬರ್ ಬೆದರಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಎನ್‌ಕ್ರಿಪ್ಷನ್ ವ್ಯವಸ್ಥೆಗಳಿಗೆ ಪರ್ಯಾಯವಾಗಿ ಕ್ವಾಂಟಂ ಕೀ ಡಿಸ್ಟ್ರಿಬ್ಯೂಷನ್ ತಂತ್ರಜ್ಞಾನವನ್ನು ಅತ್ಯಂತ ಸುರಕ್ಷಿತ ಸಂವಹನ ವ್ಯವಸ್ಥೆಯಾಗಿ ಪರಿಗಣಿಸಲಾಗುತ್ತಿದೆ. ಈ ತಂತ್ರಜ್ಞಾನವು ಮಾಹಿತಿಯ ವಿನಿಮಯವನ್ನು ಹೆಚ್ಚಿನ ಭದ್ರತೆಯೊಂದಿಗೆ ನಡೆಸಲು ನೆರವಾಗಲಿದ್ದು, ರಕ್ಷಣಾ ಸಂವಹನ ಸೇರಿದಂತೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಜಾಲಗಳಿಗೆ ಹೆಚ್ಚುವರಿ ಸುರಕ್ಷತೆ ಒದಗಿಸಲಿದೆ.

ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಪೂರಕ

ಈ ಸಾಧನೆಯು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮಲ್ಟಿ-ಹಾಪ್ (Multi-hop) ಕ್ವಾಂಟಂ ಸಂವಹನ ಜಾಲಗಳ ನಿರ್ಮಾಣಕ್ಕೂ ಬಲವಾದ ಅಡಿಪಾಯ ಹಾಕಿದೆ. ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಅನುಗುಣವಾಗಿ ಭಾರತೀಯ ತಂತ್ರಜ್ಞಾನ ಮತ್ತು ಕೈಗಾರಿಕಾ ಸಹಭಾಗಿತ್ವದ ಮೂಲಕ ಈ ವ್ಯವಸ್ಥೆ ರೂಪುಗೊಂಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ದೇಶದ ಭದ್ರತೆಗೆ ಕ್ವಾಂಟಮ್ ಕವಚ; ಡಿಆರ್​ಡಿಒದಿಂದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್ ಸಿಸ್ಟಂನ ಪ್ರಯೋಗ ಯಶಸ್ವಿ; ಏನಿದು QKD?

ಒಟ್ಟಿನಲ್ಲಿ, ಡಿಆರ್‌ಡಿಒ ಮತ್ತು ಬೆಂಗಳೂರು ಮೂಲದ ಸಂಸ್ಥೆಯ ಸಹಯೋಗದಲ್ಲಿ ಸಾಧಿಸಲಾದ ಈ ಯಶಸ್ಸು, ಭಾರತದ ಡಿಜಿಟಲ್ ಭದ್ರತೆ, ಸೈಬರ್ ಸುರಕ್ಷತೆ ಹಾಗೂ ರಕ್ಷಣಾ ಸಂವಹನ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವ ನಿರೀಕ್ಷೆ ಮೂಡಿಸಿದೆ. ಜಾಗತಿಕ ಮಟ್ಟದಲ್ಲಿ ಕ್ವಾಂಟಂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ, ಎಲ್ಲೆಲ್ಲೂ ಭಕ್ತಸಾಗರ – Kannada News | Puri Jagannath Rath Yatra 2026: Grand Start, Dates and Festival Significance

ಪುರಿ, ಜುಲೈ 16: ಭಾರತದ ಅತ್ಯಂತ ಪವಿತ್ರ ಹಾಗೂ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ‘ಪುರಿ ಜಗನ್ನಾಥ ರಥಯಾತ್ರೆ’ಯು ಇಂದು(ಜುಲೈ 16) ಅತ್ಯಂತ ವೈಭವದಿಂದ ಆರಂಭವಾಗಿದೆ. ದೇಶ-ವಿದೇಶಗಳ ಲಕ್ಷಾಂತರ ಭಕ್ತರು ಪುರಿ(Puri) ನಗರಕ್ಕೆ ಹರಿದು ಬಂದಿದ್ದು, ಇಡೀ ನಗರವು ‘ಜಯ ಜಗನ್ನಾಥ’ ಎಂಬ ಜೈಕಾರದೊಂದಿಗೆ ಭಕ್ತಿಯ ಸಾಗರದಲ್ಲಿ ಮುಳುಗಿದೆ. ಶ್ರೀ ಜಗನ್ನಾಥ ದೇವಾಲಯ ಆಡಳಿತವು ಈ ಮಹಾ ಉತ್ಸವದ ಅಧಿಕೃತ ಧಾರ್ಮಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಬಿಗಿ ಭದ್ರತೆಯ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ.

ದೇವಸ್ಥಾನದಿಂದ ಹೊರಬಂದು ಆಶೀರ್ವದಿಸುವ ಜಗನ್ನಾಥ

ಸಾಮಾನ್ಯವಾಗಿ ಹಿಂದೂ ಧರ್ಮದ ಬಹುತೇಕ ಹಬ್ಬಗಳಲ್ಲಿ ಭಕ್ತರು ದೇವರ ದರ್ಶನ ಪಡೆಯಲು ದೇವಾಲಯಗಳ ಒಳಗೆ ಹೋಗಬೇಕಾಗುತ್ತದೆ. ಆದರೆ, ಪುರಿ ರಥಯಾತ್ರೆಯ ವೈಶಿಷ್ಟ್ಯವೇ ಬೇರೆ. ಇಲ್ಲಿ ಜಗನ್ನಾಥ ಸ್ವಾಮಿ, ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ದೇವಿಯೊಂದಿಗೆ ಸ್ವತಃ ತಾನೇ ದೇವಾಲಯದಿಂದ ಹೊರಬಂದು, ಜಾತಿ, ಮತ, ಧರ್ಮ ಅಥವಾ ಬಡವ-ಬಲ್ಲಿದ ಎಂಬ ಭೇದವಿಲ್ಲದೆ ರಸ್ತೆಯಲ್ಲಿ ನಿಂತಿರುವ ಪ್ರತಿಯೊಬ್ಬ ಭಕ್ತನಿಗೂ ದರ್ಶನ ನೀಡಿ ಆಶೀರ್ವದಿಸುತ್ತಾನೆ.

ಸನಾತನ ಸಂಪ್ರದಾಯದ ಪ್ರಕಾರ, ಜಗನ್ನಾಥ ಸ್ವಾಮಿಯು ತನ್ನ ಒಡಹುಟ್ಟಿದವರೊಂದಿಗೆ ಜಗನ್ನಾಥ ದೇವಸ್ಥಾನದಿಂದ ಹೊರಟು, ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ತನ್ನ ಸೋದರತ್ತೆಯ ಮನೆ ಎಂದು ನಂಬಲಾದ ‘ಗುಂಡಿಚಾ ದೇವಸ್ಥಾನ’ಕ್ಕೆ ವಾರ್ಷಿಕ ಪ್ರಯಾಣ ಬೆಳೆಸುತ್ತಾನೆ. ಈ ಒಂಬತ್ತು ದಿನಗಳ ಕಾಲ ದೇವತೆಗಳು ಗುಂಡಿಚಾ ಮಂದಿರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಪ್ರತಿ ವರ್ಷವೂ ಹೊಸ ರಥಗಳ ನಿರ್ಮಾಣದ ಅಚ್ಚರಿ

ಈ ಹಬ್ಬದ ಅತ್ಯಂತ ರೋಮಾಂಚನಕಾರಿ ಸಂಗತಿಯೆಂದರೆ, ಹಿಂದಿನ ವರ್ಷದ ರಥಗಳನ್ನು ಇಲ್ಲಿ ಎಂದಿಗೂ ಮರುಬಳಕೆ ಮಾಡುವುದಿಲ್ಲ. ಬದಲಿಗೆ, ಪ್ರತಿ ವರ್ಷವೂ ಕಾಡುಗಳಿಂದ ಅತ್ಯಂತ ಎಚ್ಚರಿಕೆಯಿಂದ ಆಯ್ದುಕೊಂಡ ವಿಶೇಷ ಮರಗಳನ್ನು ತಂದು, ಅಕ್ಷಯ ತೃತೀಯದ ದಿನದಿಂದ ಸಂಪೂರ್ಣ ಹೊಸದಾದ 3 ಬೃಹತ್ ಮರದ ರಥಗಳನ್ನು ನಿರ್ಮಿಸಲಾಗುತ್ತದೆ.

ಮತ್ತಷ್ಟು ಓದಿ: Puri Jagannath Temple: ಪುರಿ ಜಗನ್ನಾಥ ದೇವಸ್ಥಾನದಲ್ಲಿ ಪ್ರತಿದಿನ ಧ್ವಜ ಬದಲಾಯಿಸುವುದೇಕೆ?

ಭಗವಾನ್ ಜಗನ್ನಾಥನ ರಥವನ್ನು ‘ನಂದಿಘೋಷ’ ಎಂದು ಕರೆಯಲಾಗುತ್ತದೆ.

ಬಲಭದ್ರ ಸ್ವಾಮಿಯ ರಥವನ್ನು ‘ತಾಳಧ್ವಜ’ ಎನ್ನಲಾಗುತ್ತದೆ.

ದೇವಿ ಸುಭದ್ರೆಯ ರಥವನ್ನು ‘ದರ್ಪದಲನ’ ಎಂದು ಕರೆಯಲಾಗುತ್ತದೆ.

ಈ ದೈತ್ಯ ರಥಗಳ ಹಗ್ಗವನ್ನು ಕೇವಲ ಒಮ್ಮೆ ಮುಟ್ಟಿ ಎಳೆದರೆ ಸಾಕು, ಜನ್ಮಜನ್ಮಾಂತರದ ಪಾಪಗಳು ತೊಳೆದುಹೋಗುತ್ತವೆ ಎಂಬುದು ಕೋಟ್ಯಂತರ ಭಕ್ತರ ಗಾಢ ನಂಬಿಕೆಯಾಗಿದೆ.

ರಥಯಾತ್ರೆ 2026 ರ ಪ್ರಮುಖ ದಿನಾಂಕಗಳು ಮತ್ತು ವೇಳಾಪಟ್ಟಿ
ಜುಲೈ 16, 2026 (ಇಂದು – ಗುರುವಾರ): ರಥಯಾತ್ರೆಯ ಭವ್ಯ ಆರಂಭ. ಶ್ರೀವಿಗ್ರಹಗಳನ್ನು ಮಂದಿರದಿಂದ ರಥಕ್ಕೆ ತರುವ ‘ಪಹಂಡಿ’ ಆಚರಣೆ ಮತ್ತು ರಥ ಚಲನೆ.

ಜುಲೈ 17 ರಿಂದ ಜುಲೈ 23: ದೇವತೆಗಳ ಗುಂಡಿಚಾ ಜಗನ್ನಾಥ ಮಂದಿರದ ವಾಸ್ತವ್ಯ ಹಾಗೂ ವಿಶೇಷ ಪೂಜೆಗಳು.

ಜುಲೈ 24, 2026 (ಶುಕ್ರವಾರ): ಒಂಬತ್ತು ದಿನಗಳ ಸೋದರತ್ತೆಯ ಮನೆಯ ವಾಸ್ತವ್ಯ ಮುಗಿಸಿ ದೇವತೆಗಳು ಮರಳಿ ತಮ್ಮ ಮೂಲ ಜಗನ್ನಾಥ ಮಂದಿರಕ್ಕೆ ಹಿಂದಿರುಗುವ ‘ಬಹುಡಾ ಯಾತ್ರೆ’ (ಮರಳಿ ಪ್ರಯಾಣ).

‘ಛೇರಾ ಪಹರಾ’ ಎಂಬ ರಾಜಮನೆತನದ ಸೇವೆ
ಪುರಿ ರಥಯಾತ್ರೆಯ ಅತ್ಯಂತ ಸುಂದರ ಹಾಗೂ ಮಾನವೀಯ ಸಂದೇಶ ಸಾರುವ ಆಚರಣೆಯೆಂದರೆ ‘ಛೇರಾ ಪಹರಾ’.

ರಾಜನೇ ಇಲ್ಲಿ ಗುಡಿಸುವವನು: ರಥಗಳು ಹೊರಡುವ ಮುನ್ನ ಪುರಿಯ ರಾಜಮನೆತನದ ಇಂದಿನ ಗಜಪತಿ ಮಹಾರಾಜರು ರಥಗಳ ಬಳಿ ಬಂದು, ಚಿನ್ನದ ಹಿಡಿಕೆಯುಳ್ಳ ಕಸಪೊರಕೆಯಿಂದ ರಥದ ಸುತ್ತಲೂ ಕಸ ಗುಡಿಸಿ, ಶ್ರೀಗಂಧದ ನೀರನ್ನು ಪ್ರೋಕ್ಷಣೆ ಮಾಡುತ್ತಾರೆ.

ಸಮಾನತೆಯ ಸಂದೇಶ: ಜಗತ್ತಿನ ಸೃಷ್ಟಿಕರ್ತನಾದ ಜಗನ್ನಾಥನ ಮುಂದೆ ರಾಜನಾಗಲಿ ಅಥವಾ ಸಾಮಾನ್ಯ ಪ್ರಜೆಯಾಗಲಿ ಎಲ್ಲರೂ ಸಮಾನರು, ಭಗವಂತನಿಗೆ ಎಲ್ಲರೂ ಸೇವಕರು ಎಂಬ ಪರಮೋಚ್ಚ ಸಮಾನತೆಯ ಸಂದೇಶವನ್ನು ಈ ಆಚರಣೆ ಸಾರುತ್ತದೆ. ಒಡಿಶಾ ಸರ್ಕಾರ ಹಾಗೂ ಸ್ಥಳೀಯ ಪೊಲೀಸರು ಲಕ್ಷಾಂತರ ಭಕ್ತರ ಸೌಕರ್ಯಕ್ಕಾಗಿ ಇಡೀ ಪುರಿ ನಗರದಾದ್ಯಂತ ವಾಹನ ಸಂಚಾರ ವ್ಯವಸ್ಥೆ ಮತ್ತು ಪ್ರವಾಸೋದ್ಯಮ ಸೌಲಭ್ಯಗಳನ್ನು ಅತ್ಯಂತ ಸುಸಜ್ಜಿತವಾಗಿ ಸಿದ್ಧಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಮಾಯಣ’ ಸಿನಿಮಾ ಟ್ರೈಲರ್​ಗೆ ‘ಯೂ’ ಪ್ರಮಾಣ ಪತ್ರ, ಬಿಡುಗಡೆ ಯಾವಾಗ? – Kannada News | Ramayana movie trailer censored got U certificate

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಹಾಗೂ ಇನ್ನೂ ಕೆಲವು ಸ್ಟಾರ್ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ವರೆಗೆ ನಿರ್ಮಾಣ ಆಗಿರುವ ಭಾರತೀಯ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಬಜೆಟ್ನ ಸಿನಿಮಾ ಇದೆನ್ನಲಾಗುತ್ತಿದೆ. ದೊಡ್ಡ ನಟ-ನಟಿಯರು, ದೊಡ್ಡ ಬಜೆಟ್, ಹಾಲಿವುಡ್ ಸಿನಿಮಾಗಳ ನಿರ್ಮಾಪಕ, ತಂತ್ರಜ್ಞರು ಎಲ್ಲರ ಒಟ್ಟುಗೂಡುವಿಕೆಯಿಂದಾಗಿ ಸಿನಿಮಾದ ಗುಣಮಟ್ಟದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಈಗಾಗಲೇ ಸಿನಿಮಾದ ಸಣ್ಣ ಟೀಸರ್, ಕೆಲ ಪೋಸ್ಟರ್​​ಗಳು ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಇದಕ್ಕಾಗಿ ಟ್ರೈಲರ್​​ ಅನ್ನು ಸೆನ್ಸಾರ್ ಬೋರ್ಡ್​​ಗೆ ನೀಡಿ ಪ್ರಮಾಣ ಪತ್ರವನ್ನು ಸಹ ಪಡೆದು ಕೊಂಡಿದೆ.

ನಿನ್ನೆಯಷ್ಟೆ ‘ರಾಮಾಯಣ’ ಸಿನಿಮಾದ ಟ್ರೈಲರ್​​ಗೆ ಸೆನ್ಸಾರ್​​ನಲ್ಲಿ ಪ್ರಮಾಣ ಪತ್ರ ನೀಡಲಾಗಿದ್ದು, ಟ್ರೈಲರ್​​​ಗೆ ಯು ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಸಿನಿಮಾದ ಟ್ರೈಲರ್​​​ಗಳಿಗೆ ಹೆಚ್ಚಿನ ಚಿತ್ರತಂಡಗಳು ಸೆನ್ಸಾರ್ ಮಾಡಿಸುವುದಿಲ್ಲ. ಆದರೆ ಯಾವ ಸಿನಿಮಾದ ಟ್ರೈಲರ್​​ ಅನ್ನು ಜಾಹೀರಾತು ರೂಪದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆಯೋ ಅಂಥಹಾ ಟ್ರೈಲರ್​​ಗಳಿಗೆ ಮಾತ್ರವೇ ಸೆನ್ಸಾರ್ ಪ್ರಮಾಣ ಪತ್ರ ಅವಶ್ಯಕವಾಗಿರುತ್ತದೆ. ಈಗ ‘ರಾಮಾಯಣ’ ಸಿನಿಮಾದ ಟ್ರೈಲರ್​​ನ ಸೆನ್ಸಾರ್ ಮಾಡಿಸಿರುವುದು ಗಮನಿಸಿದರೆ, ಈ ಟ್ರೈಲರ್ ಅನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವುದು ಖಾತ್ರಿ ಆಗಿದೆ.

ನಿನ್ನೆ ಒಟ್ಟು ಎರಡು ಟ್ರೈಲರ್​ಗಳನ್ನು ಸೆನ್ಸಾರ್ ಮಾಡಿಸಲಾಗಿದೆ. ಎರಡೂ ಟ್ರೈಲರ್‌ನ ಅವಧಿಯು ಸರಿ ಸುಮಾರು 4 ನಿಮಿಷಗಳಾಗಿವೆ. CBFC ವೆಬ್‌ಸೈಟ್‌ನಲ್ಲಿ ‘ರಾಮಾಯಣ’ ಟ್ರೈಲರ್‌ಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಟ್ರೈಲರ್ – ರಾಮಾಯಣ 3D’ ಎಂದು ಹೆಸರಿಸಲ್ಪಟ್ಟಿದ್ದು, ಇದರ ಅವಧಿ 4 ನಿಮಿಷ 15 ಸೆಕೆಂಡುಗಳು. ಇನ್ನೊಂದು ‘ಥಿಯೇಟ್ರಿಕಲ್ ಟ್ರೈಲರ್ – ರಾಮಾಯಣ 3D’ ಎಂದು ಹೆಸರಿಸಲ್ಪಟ್ಟಿದ್ದು, ಇದರ ಅವಧಿ 4 ನಿಮಿಷಗಳು.

ಇದನ್ನೂ ಓದಿ:ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಸ್ಟಾರ್ ನಟ ರಣ್​​ಬೀರ್ ಕಪೂರ್: ಸಿನಿಮಾ ಯಾವುದು?

ಕಳೆದ ವರ್ಷ ಜುಲೈ 3 ರಂದು ಮೊದಲ ಸಣ್ಣ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಈ ವರ್ಷದ ಆರಂಭದಲ್ಲಿ, ಏಪ್ರಿಲ್ 2 ರಂದು ಹನುಮ ಜಯಂತಿಯಂದು, ರಣಬೀರ್ ಕಪೂರ್ ನಿರ್ವಹಿಸಿರುವ ಶ್ರೀರಾಮನ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ‘ರಾಮ’ ಎಂಬ ಟೀಸರನ್ನು ಬಿಡುಗಡೆ ಮಾಡಲಾಗಿತ್ತು. ಆ ಟೀಸರ್ 2 ನಿಮಿಷ 38 ಸೆಕೆಂಡುಗಳ ಅವಧಿಯನ್ನು ಹೊಂದಿದ್ದು, ಅದಕ್ಕೂ ‘U’ ಪ್ರಮಾಣಪತ್ರ ಸಿಕ್ಕಿತ್ತು.

‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶಿಸುತ್ತಿದ್ದು, ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಸಂಗೀತವನ್ನು ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಝೀಮರ್ ಸಂಯೋಜಿಸಿದ್ದಾರೆ. ಇದು ಎರಡು ಭಾಗಗಳ ಚಿತ್ರವಾಗಿದ್ದು, ಮೊದಲ ಭಾಗವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೆಸ್ಸಿ ಪಡೆಯ ಮಿಂಚಿನಾಟ: ಫೈನಲ್​ಗೆ ಅರ್ಜೆಂಟೀನಾ – Kannada News | Messi Magic: Argentina Into World Cup Final

ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಮತ್ತೊಮ್ಮೆ ತನ್ನ ಸಾಂಪ್ರದಾಯಿಕ ಹಾಗೂ ಕೊನೆಯ ಕ್ಷಣದ ಮಿಂಚಿನಾಟದ ಮೂಲಕ ಫಿಫಾ ವಿಶ್ವಕಪ್ 2026ರ ಫೈನಲ್ ಪ್ರವೇಶಿಸಿದೆ. ಅಮೆರಿಕದ ಅಟ್ಲಾಂಟಾ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಪಡೆ 2-1 ಗೋಲುಗಳ ಅಂತರದಿಂದ ಐತಿಹಾಸಿಕ ಜಯ ದಾಖಲಿಸಿ ಮಹಾ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಮುನ್ನಡೆ ಸಾಧಿಸಿದ್ದ ಇಂಗ್ಲೆಂಡ್:

ಈ ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಕಷ್ಟು ಹೆಣಗಾಡಿದವು. ಇಂಗ್ಲೆಂಡ್‌ನ ಬಲಿಷ್ಠ ರಕ್ಷಣಾತ್ಮಕ ಆಟದ ಮುಂದೆ ಅರ್ಜೆಂಟೀನಾ ಆರಂಭದಲ್ಲಿ ಮಂಕಾಗಿತ್ತು. ಪಂದ್ಯದ 55ನೇ ನಿಮಿಷದಲ್ಲಿ ಇಂಗ್ಲೆಂಡ್ ಪರ ಆಂಥೋನಿ ಗಾರ್ಡನ್ ಭರ್ಜರಿ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆ ಮೂಲಕ ಥಾಮಸ್ ಟುಚೆಲ್ ಮಾರ್ಗದರ್ಶನದ ಇಂಗ್ಲೆಂಡ್ ತಂಡ 1966ರ ನಂತರ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ತಲುಪುವ ಸನಿಹಕ್ಕೆ ಬಂದಿತ್ತು.

ಕೊನೆಯ ನಿಮಿಷಗಳಲ್ಲಿ ತಿರುಗಿಬಿದ್ದ ಮೆಸ್ಸಿ ಪಡೆ:

ಪಂದ್ಯ ಮುಗಿಯಲು ಕೇವಲ 5 ನಿಮಿಷಗಳು ಬಾಕಿ ಇರುವಾಗ 39 ವರ್ಷದ ಮ್ಯಾಜಿಷಿಯನ್ ಲಿಯೋನೆಲ್ ಮೆಸ್ಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

  • ಮೊದಲ ಗೋಲು (85ನೇ ನಿಮಿಷ): ಮೆಸ್ಸಿ ನೀಡಿದ ಅದ್ಭುತ ಕಾರ್ನರ್ ಕಿಕ್ ನೆರವಿನಿಂದ ಎಂಜೊ ಫೆರ್ನಾಂಡಿಸ್ ಚೆಂಡನ್ನು ನೆಟ್‌ಗೆ ತೂರಿಸಿ 1-1 ಗೋಲುಗಳ ಸಮಬಲ ತಂದರು.
  • ಗೆಲುವಿನ ಗೋಲು (92ನೇ ನಿಮಿಷ): ಪಂದ್ಯ ಮುಕ್ತಾಯದ ಇಂಜುರಿ ಸಮಯದಲ್ಲಿ (90+2ನೇ ನಿಮಿಷ) ಮೆಸ್ಸಿ ತಮ್ಮ ಬಲಗಾಲಿನಿಂದ ಮತ್ತೊಂದು ಅದ್ಭುತ ಕ್ರಾಸ್ ಪಾಸ್ ನೀಡಿದರು. ಇದನ್ನು ಚಾಣಾಕ್ಷತನದಿಂದ ಹೆಡರ್ ಮಾಡಿದ ಲೌಟಾರೊ ಮಾರ್ಟಿನೆಝ್ ವಿನ್ನಿಂಗ್ ಗೋಲು ಬಾರಿಸಿ ಅರ್ಜೆಂಟೀನಾಕ್ಕೆ 2-1 ಅದ್ಭುತ ಜಯ ತಂದುಕೊಟ್ಟರು.

ಫೈನಲ್‌ನಲ್ಲಿ ಯಾರು ಎದುರಾಳಿ?

ಈ ಗೆಲುವಿನೊಂದಿಗೆ ಅರ್ಜೆಂಟೀನಾ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದ ಸಾಧನೆ ಮಾಡಿದೆ. ಅಲ್ಲದೆ ಮುಂದಿನ ಭಾನುವಾರ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಮೆಗಾ ಫೈನಲ್ ಪಂದ್ಯದಲ್ಲಿ ಯೂರೋ ಚಾಂಪಿಯನ್ಸ್ ಆದ ಸ್ಪೇನ್ ವಿರುದ್ಧ ಅರ್ಜೆಂಟೀನಾ ಪ್ರಶಸ್ತಿಗಾಗಿ ಸೆಣಸಾಡಲಿದೆ.

ಇದನ್ನೂ ಓದಿ: ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ!

ಇದು ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯವಾಗಲಿದ್ದು, ಇಡೀ ವಿಶ್ವವೇ ಈ ರೋಚಕ ಪಂದ್ಯಕ್ಕಾಗಿ ಕಾಯುತ್ತಿದೆ. ಈ ಪಂದ್ಯದ ಮೂಲಕ ಮೆಸ್ಸಿ ಮತ್ತೊಮ್ಮೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Source link

ಇರಾನ್‌ನ ಸೇತುವೆ, ಪವರ್ ಪ್ಲಾಂಟ್‌ಗಳನ್ನು ಉಡಾಯಿಸುತ್ತೇವೆ, ದಾಳಿಗೆ ಗಡುವು ನೀಡಲು ನಿರಾಕರಿಸಿದ ಅಮೆರಿಕ – Kannada News | Trump to Bomb Iran’s Bridges, Power Plants; No Deadline for US Attacks as Tensions Rise

ವಾಷಿಂಗ್ಟನ್, ಜುಲೈ 16: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್(Iran) ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ಹಾಗೂ ಕ್ಷಿಪಣಿ ದಾಳಿಗಳು ಮುಂದುವರೆದಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದ್ದಾರೆ. ಇರಾನ್‌ನ ಪ್ರಮುಖ ಸೇತುವೆಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ನಡೆಸಲು ಮಿಲಿಟರಿಗೆ ಆದೇಶಿಸುವ ಮುನ್ನ ತಾವು ಯಾವುದೇ ಗಡುವು ನೀಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಪೆನ್ಸಿಲ್ವೇನಿಯಾ ರಕ್ಷಣಾ ಮತ್ತು ನಾವೀನ್ಯತೆ ಶೃಂಗಸಭೆಗೆ ಆಗಮಿಸಿದ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ನನಗೆ ಗಡುವುಗಳನ್ನು ನಿಗದಿಪಡಿಸುವುದು ಇಷ್ಟವಿಲ್ಲ. ಆದರೆ ಇರಾನ್‌ಗೆ ಮುಂದೆ ಏನಾಗಲಿದೆ ಎಂಬುದು ಚೆನ್ನಾಗಿ ತಿಳಿದಿದೆ. ಅವರು ಇನ್ಮುಂದೆಯಾದರೂ ಬುದ್ಧಿ ಕಲಿತು ಉತ್ತಮವಾಗಿ ವರ್ತಿಸಬೇಕು” ಎಂದು ಟೆಹ್ರಾನ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಮಾತುಕತೆಗೆ ಬರದಿದ್ದರೆ ಇರಾನ್‌ನಲ್ಲಿ ಯಾರೂ ಉಳಿಯುವುದಿಲ್ಲ

ಇದಕ್ಕೂ ಮುನ್ನ ಫಾಕ್ಸ್ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಧ್ಯಕ್ಷ ಟ್ರಂಪ್, ಇರಾನ್ ವಿರುದ್ಧ ತಾವೇ ಖುದ್ದಾಗಿ ಸಿದ್ಧಪಡಿಸಿರುವ ವಿನಾಶಕಾರಿ ಮಿಲಿಟರಿ ಸ್ಕೆಚ್ ಅನ್ನು ಬಿಚ್ಚಿಟ್ಟಿದ್ದರು.

ಸರಣಿ ಬಾಂಬ್ ದಾಳಿ: ಇರಾನ್ ತಕ್ಷಣವೇ ಅಮೆರಿಕದ ಷರತ್ತುಗಳಿಗೆ ಒಪ್ಪಿ ಮಾತುಕತೆಗೆ ಬರದಿದ್ದರೆ, ಅಮೆರಿಕದ ವಾಯುಪಡೆಗಳು ಇರಾನ್​​ನ ವಿದ್ಯುತ್ ಸ್ಥಾವರಗಳು ಹಾಗೂ ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಿವೆ ಎಂದು ಎಚ್ಚರಿಕೆ ನೀಡಿದೆ.

ನಾವು ಇಂದು ರಾತ್ರಿಯೂ ಇರಾನ್ ಮೇಲೆ ಕಠಿಣ ದಾಳಿ ನಡೆಸಲಿದ್ದೇವೆ, ನಾಳೆಯೂ ನಡೆಸಲಿದ್ದೇವೆ. ಮುಂದಿನ ವಾರ ಇರಾನ್ ಪರಿಸ್ಥಿತಿ ತೀರಾ ಕೆಟ್ಟದಾಗಲಿದೆ. ಅವರ ಎಲ್ಲಾ ಕನೆಕ್ಟಿವಿಟಿ ಸೇತುವೆಗಳನ್ನು ನಾವು ಧ್ವಂಸಗೊಳಿಸುತ್ತೇವೆ. ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಇರಾನ್‌ನಲ್ಲಿ ಯಾರೂ ಉಳಿಯುವುದಿಲ್ಲ” ಎಂದು ಟ್ರಂಪ್ ಘರ್ಜಿಸಿದ್ದಾರೆ. ಆದರೆ, ಈ ದಾಳಿಗಳ ನಡುವೆಯೂ ಅಮಾಯಕ ನಾಗರಿಕರ ಸಾವುನೋವುಗಳನ್ನು ಕಡಿಮೆ ಮಾಡಲು ಅಮೆರಿಕದ ಮಿಲಿಟರಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ ಎಂದೂ ಅವರು ಹೇಳಿದ್ದಾರೆ.

ಮತ್ತಷ್ಟು ಓದಿ: ಹಡಗುಗಳ ಮೇಲಿನ ಇರಾನ್ ದಾಳಿಯಿಂದ ಪಾರಾದ ಮಂಗಳೂರಿನ ಯುವಕ: ಜೀವ ಉಳಿಸಿಕೊಳ್ಳಲು ಮಾಡಿದ್ದೇನು ನೋಡಿ

ಕದನ ಕಣದಲ್ಲಿ ಏನಾಗುತ್ತಿದೆ?

ಹಾರ್ಮುಜ್ ಜಲಸಂಧಿಯ ನಿಯಂತ್ರಣದ ವಿಚಾರವಾಗಿ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಹಳೆಯ ಶಾಂತಿ ಒಪ್ಪಂದ (MoU) ಸಂಪೂರ್ಣವಾಗಿ ಮುರಿದುಬಿದ್ದ ಬೆನ್ನಲ್ಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿಎನ್‌ಎನ್ ವರದಿಗಳ ಪ್ರಕಾರ, ತೆರೆಮರೆಯಲ್ಲಿ ಉಭಯ ದೇಶಗಳ ಪ್ರತಿನಿಧಿಗಳು ಸಂಪರ್ಕದಲ್ಲಿದ್ದಾರೆ. ಆದರೆ, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಅಂತಾರಾಷ್ಟ್ರೀಯ ಹಡಗುಗಳ ಸಂಚಾರವನ್ನು ಇರಾನ್ ಬಲವಂತವಾಗಿ ನಿರ್ಬಂಧಿಸುತ್ತಿರುವವರೆಗೆ ಯಾವುದೇ ಅಧಿಕೃತ ಮಾತುಕತೆ ಸಾಧ್ಯವಿಲ್ಲ ಎಂದು ಟ್ರಂಪ್ ಆಡಳಿತ ಪಟ್ಟು ಹಿಡಿದಿದೆ.

ಇರಾನ್ ಒಳಗೆ ಅಮೆರಿಕದ ಗ್ರೌಂಡ್ ಟ್ರೂಪ್​ಗಳನ್ನು ನುಗ್ಗಿಸುವ ಸಾಧ್ಯತೆಯನ್ನು ಟ್ರಂಪ್ ತಳ್ಳಿಹಾಕಿಲ್ಲ. “ಕೆಲವೊಮ್ಮೆ ನೇರ ಮಿಲಿಟರಿ ಆಪರೇಷನ್‌ಗೆ ನೆಲದ ಪಡೆಗಳು ಬೇಕಾಗುತ್ತವೆ. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಮ್ಮ ಪರವಾಗಿ ನೆಲದ ಯುದ್ಧವನ್ನು ಮಾಡಲು ಸಿದ್ಧವಿರುವ ಬೇರೆ ಮಿತ್ರದೇಶಗಳ ಪಡೆಗಳು ನಮಗಿವೆ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಇಸ್ರೇಲ್ ಅಥವಾ ಗಲ್ಫ್ ಮಿತ್ರರಾಷ್ಟ್ರಗಳ ನೆರವನ್ನು ಬಳಸಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.

ಭಾರತದ ಮೇಲಾಗುವ ರಾಜತಾಂತ್ರಿಕ ಪರಿಣಾಮ

ಅಮೆರಿಕ ಮತ್ತು ಇರಾನ್ ನಡುವಿನ ಈ ಮುಕ್ತ ಯುದ್ಧದ ಜ್ವಾಲೆಯು ಕೇವಲ ಮಧ್ಯಪ್ರಾಚ್ಯಕ್ಕೆ ಸೀಮಿತವಾಗಿಲ್ಲ. ಇದು ಭಾರತದ ರಾಜತಾಂತ್ರಿಕತೆ ಮತ್ತು ಆರ್ಥಿಕತೆಯ ಮೇಲೂ ಭಾರಿ ಪರಿಣಾಮ ಬೀರಲಿದೆ.

ಓಮನ್ ಸಂಧಾನದ ವೈಫಲ್ಯ: 2026ರ ಆರಂಭದಿಂದಲೇ  ಓಮನ್ ದೇಶವು ಅಮೆರಿಕ ಮತ್ತು ಇರಾನ್ ನಡುವೆ ಗುಪ್ತವಾಗಿ ಪರೋಕ್ಷ ಸಂಧಾನ ಮಾತುಕತೆಗಳನ್ನು ಆಯೋಜಿಸುತ್ತಾ ಬಂದಿತ್ತು. ಆದರೆ ಇರಾನ್ ಒಮಾನ್‌ನ ಗಡಿಯೊಳಗಿನ ಕಡಲ ಜಲಮಾರ್ಗದ ಮೇಲೂ ತನ್ನ ಸಾರ್ವಭೌಮತ್ವ ಘೋಷಿಸಿ ಹಡಗುಗಳ ಮೇಲೆ ದಾಳಿ ಮಾಡಿರುವುದರಿಂದ ಒಮಾನ್ ನಡೆಸುತ್ತಿದ್ದ ಶಾಂತಿ ಪ್ರಯತ್ನಗಳು ಸಂಪೂರ್ಣ ಹಳಿತಪ್ಪಿವೆ.

ಚಬಹಾರ್ ಬಂದರಿನ ಆತಂಕ: ಭಾರತವು ಇರಾನ್‌ನಲ್ಲಿ ಬಿಲಿಯನ್ ಗಟ್ಟಲೆ ಹೂಡಿಕೆ ಮಾಡಿ ಅಭಿವೃದ್ಧಿಪಡಿಸುತ್ತಿರುವ ‘ಚಬಹಾರ್ ಬಂದರು’ ಯೋಜನೆಗೆ ಈ ಯುದ್ಧವು ದೊಡ್ಡ ಕಂಟಕ ತಂದಿದೆ. ಒಂದು ವೇಳೆ ಅಮೆರಿಕ ಇರಾನ್‌ನ ವಿದ್ಯುತ್ ಮತ್ತು ಸಾರಿಗೆ ಜಾಲವನ್ನು ಧ್ವಂಸಗೊಳಿಸಿದರೆ, ಮಧ್ಯ ಏಷ್ಯಾಕ್ಕೆ ಸಂಪರ್ಕ ಕಲ್ಪಿಸುವ ಭಾರತದ ಈ ಮಹತ್ವದ ವ್ಯಾಪಾರ ಮಾರ್ಗವು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ಭಾರತದ ಹೂಡಿಕೆಗೆ ಭಾರಿ ಹಿನ್ನಡೆಯಾಗುವ ಆತಂಕ ಎದುರಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Plant Vastu: ಮನೆಯಲ್ಲಿ ಶಂಖಪುಷ್ಪ ಗಿಡ ನೆಡುತ್ತಿದ್ದೀರಾ? ವಾಸ್ತುವಿನ ಈ ಪ್ರಮುಖ ನಿಯಮ ತಪ್ಪದೇ ತಿಳಿಯಿರಿ! – Kannada News | Aparajita Plant Vastu: Shankhapushpa for Prosperity and Positive Energy at Home

ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ಕೆಲವು ಸಸ್ಯಗಳನ್ನು ಅತ್ಯಂತ ಪವಿತ್ರ ಹಾಗೂ ಅದ್ಭುತ ಶಕ್ತಿಯುಳ್ಳದ್ದೆಂದು ಪೂಜಿಸಲಾಗುತ್ತದೆ. ಅಂತಹ ಸಸ್ಯಗಳಲ್ಲಿ ಅತ್ಯಂತ ಪ್ರಮುಖವಾದದ್ದು ‘ಅಪರಾಜಿತಾ’ (ಶಂಖಪುಷ್ಪ) ಗಿಡ. ನೀಲಿ ಮತ್ತು ಬಿಳಿ ಬಣ್ಣದ ಸುಂದರವಾದ ಹೂವುಗಳನ್ನು ಬಿಡುವ ಈ ಬಳ್ಳಿಯು ಕೇವಲ ನೋಡಲು ಸುಂದರವಾಗಿರುವುದಷ್ಟೇ ಅಲ್ಲದೆ, ತನ್ನದೇ ಆದ ಧಾರ್ಮಿಕ ಮತ್ತು ವಾಸ್ತು ಮಹತ್ವವನ್ನು ಹೊಂದಿದೆ. ಸರಿಯಾದ ನಿಯಮಗಳನ್ನು ಪಾಲಿಸಿ ಈ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ಈ ಸಸ್ಯದ ಮಹತ್ವ ಮತ್ತು ಅದನ್ನು ನೆಡಬೇಕಾದ ಸರಿಯಾದ ದಿಕ್ಕುಗಳ ವಿವರ ಇಲ್ಲಿದೆ:

ಧಾರ್ಮಿಕ ಹಿನ್ನೆಲೆ ಮತ್ತು ದೈವಿಕ ಕೃಪೆ:

ಹಿಂದೂ ಧರ್ಮದಲ್ಲಿ ಶಂಖಪುಷ್ಪ ಹೂವುಗಳಿಗೆ ವಿಶೇಷ ಸ್ಥಾನವಿದೆ. ಈ ಪವಿತ್ರ ಹೂವುಗಳನ್ನು ಪೂಜೆಯ ಸಮಯದಲ್ಲಿ ಅನೇಕ ದೇವತೆಗಳಿಗೆ ಅರ್ಪಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಗಿಡವನ್ನು ಮನೆಯ ಆವರಣದಲ್ಲಿ ಬೆಳೆಸುವುದರಿಂದ ಮನೆಯು ಸಕಾರಾತ್ಮಕತೆ ಮತ್ತು ಶುಭ ಶಕ್ತಿಯ ಕೇಂದ್ರವಾಗಿ ಬದಲಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಗಿಡವನ್ನು ನೆಡಲು ಅತ್ಯಂತ ಶುಭ ದಿಕ್ಕುಗಳು:

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಯಾವುದೇ ಸಸ್ಯವು ಅದರ ಸರಿಯಾದ ದಿಕ್ಕಿನಲ್ಲಿದ್ದಾಗ ಮಾತ್ರ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಶಂಖಪುಷ್ಪ ನೆಡಲು ಉತ್ತರ ದಿಕ್ಕು, ಈಶಾನ್ಯ ದಿಕ್ಕು (ದೇವ ಮೂಲೆ), ಪೂರ್ವ ದಿಕ್ಕುಗಳು ಅತ್ಯಂತ ಮಂಗಳಕರವಾಗಿವೆ. ಈ ದಿಕ್ಕುಗಳನ್ನು ಸಕಾರಾತ್ಮಕ ಶಕ್ತಿಯ ಆವಾಸಸ್ಥಾನಗಳೆಂದು ಪರಿಗಣಿಸಲಾಗಿದ್ದು, ಇಲ್ಲಿ ಈ ಸಸ್ಯವನ್ನು ಇಡುವುದರಿಂದ ಆರ್ಥಿಕ ಪ್ರಗತಿ, ಮಾನಸಿಕ ಶಾಂತಿ ಹಾಗೂ ಒಟ್ಟಾರೆ ಕುಟುಂಬದ ಸಮೃದ್ಧಿ ಹೆಚ್ಚುತ್ತದೆ. ಆದರೆ ಗಿಡದ ಸುತ್ತಮುತ್ತ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಮತ್ತು ಅದಕ್ಕೆ ದಿನವೂ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳುವುದು ಅತ್ಯಗತ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Air Quality: ಇಂದು ರಾಜ್ಯಾದ್ಯಂತ ಅತ್ಯುತ್ತಮ ವಾಯು ಗುಣಮಟ್ಟ: ಬೆಂಗಳೂರಿನ ಹಲವೆಡೆ ‘ಗ್ರೀನ್ ಜೋನ್’ – Kannada News | Monsoon Impact: Bengaluru and Karnataka Cities Enjoy Clean Air, Low Pollution Levels

ಬೆಂಗಳೂರು, ಜು.16 : ಜುಲೈ ತಿಂಗಳ ಮುಂಗಾರು ಮಳೆಯ ಪ್ರಭಾವದಿಂದಾಗಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇಂದು ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ‘ಉತ್ತಮ’ (Good) ಹಾಗೂ ‘ತೃಪ್ತಿದಾಯಕ’ (Satisfactory) ಶ್ರೇಣಿಯಲ್ಲಿದೆ ಎಂದು ವಾಯು ಗುಣಮಟ್ಟ ಸೂಚ್ಯಂಕ ನಿಯಂತ್ರಣ ಕೇಂದ್ರದ ಇಂದಿನ ಅಂಕಿ-ಅಂಶಗಳು ತಿಳಿಸಿವೆ.

ವಾಹನ ದಟ್ಟಣೆ ಹೆಚ್ಚಿರುವ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಧ್ಯಮ ಗಾಳಿಮಟ್ಟ ಇರಲಿದೆ. ಇಂದು ನಗರದ ಒಟ್ಟಾರೆ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 35 ರಿಂದ 55 ರ ಆಸುಪಾಸಿನಲ್ಲಿದೆ. ಜಯನಗರ, ಮಲ್ಲೇಶ್ವರಂ, ಹೆಬ್ಬಾಳ, ಬಿಟಿಎಂ ಲೇಔಟ್ ಮತ್ತು ಸಿಲ್ಕ್ ಬೋರ್ಡ್ ಸುತ್ತಮುತ್ತಲಿನ ವಲಯಗಳಲ್ಲಿ ಗಾಳಿಯ ಗುಣಮಟ್ಟ ‘ಉತ್ತಮ’ ಶ್ರೇಣಿಯಲ್ಲಿದೆ. ಮೆಜೆಸ್ಟಿಕ್ ಮತ್ತು ವೈಟ್‌ಫೀಲ್ಡ್‌ನ ಕೆಲವು ಕೈಗಾರಿಕಾ ಪ್ರದೇಶಗಳಲ್ಲಿ ಮಾತ್ರ ಸೂಚ್ಯಂಕ 60 ರ ಆಸುಪಾಸಿನಲ್ಲಿದ್ದು ‘ತೃಪ್ತಿದಾಯಕ’ ಮಟ್ಟದಲ್ಲಿದೆ.

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅಲ್ಲಿ ಅತ್ಯಂತ ಶುದ್ಧವಾದ ಗಾಳಿ ದಾಖಲಾಗಿದೆ. ಕರಾವಳಿ ತೀರದಲ್ಲಿ ತೇವಾಂಶ ಭರಿತ ಶುದ್ಧ ಗಾಳಿ ಇರುವುದರಿಂದ ಇಲ್ಲಿನ AQI 25 ರಿಂದ 35 ರ ನಡುವೆ ದಾಖಲಾಗಿದ್ದು, ಅತ್ಯಂತ ಸೂಕ್ತ ಪರಿಸರ ನಿರ್ಮಾಣವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ AQI 30 ರಷ್ಟಿದ್ದರೆ, ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 42 ರಷ್ಟು ದಾಖಲಾಗಿದೆ.

ಇದನ್ನೂ ಓದಿ: ಇನ್ನೆರಡು ದಿನ ಕೆಲವೇ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಅನೇಕ ಜಿಲ್ಲೆಗಳಲ್ಲಿ ಬಿರುಗಾಳಿ ಮುಂದುವರಿಕೆ

ಪ್ರಸ್ತುತ ವಾತಾವರಣದಲ್ಲಿ ಮಾಲಿನ್ಯಕಾರಕ ಕಣಗಳಾದ PM 2.5 ಮತ್ತು PM 10 ಪ್ರಮಾಣ ಅತ್ಯಂತ ಕನಿಷ್ಠ ಮಟ್ಟದಲ್ಲಿ ಇರುವುದರಿಂದ ಉಸಿರಾಟದ ತೊಂದರೆ, ಅಸ್ತಮಾ ಅಥವಾ ಅಲರ್ಜಿ ಇರುವವರಿಗೂ ಇಂದಿನ ಗಾಳಿ ಸಂಪೂರ್ಣ ಸುರಕ್ಷಿತವಾಗಿದೆ. ಮುಂಜಾನೆ ಮತ್ತು ಸಂಜೆ ವಾಕಿಂಗ್ ಹೋಗುವವರಿಗೆ ಇದು ಅತ್ಯಂತ ಸೂಕ್ತ ಸಮಯವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:17 am, Thu, 16 July 26

Source link

Karnataka weather forecast: ಇನ್ನೆರಡು ದಿನ ಕೆಲವೇ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಅನೇಕ ಜಿಲ್ಲೆಗಳಲ್ಲಿ ಬಿರುಗಾಳಿ ಮುಂದುವರಿಕೆ – Kannada News | Karnataka Weather Forecast 16 July 2026: IMD Predicts Light to Moderate Rain in Coastal, Malnad, Dry Spell Continues Across State

ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿ ಮುಂಗಾರು (Monsoon) ಚುರುಕುಗೊಳ್ಳುವ ಲಕ್ಷಣಗಳು ಇನ್ನೂ ಕಾಣಿಸುತ್ತಿಲ್ಲ. ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಮುಂದುವರಿದಿದ್ದು, ಇನ್ನೂ ಒಂದು ವಾರ ಮಳೆಯಾಗುವ ಸಾಧ್ಯತೆ ತೀರ ಕಡಿಮೆ ಇದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರ ಮುನ್ಸೂಚನೆ ಪ್ರಕಟಿಸಿದೆ. ಆದಾಗಗ್ಯೂ, ಜುಲೈ 16 ಮತ್ತು 17ರಂದು ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಬಹುತೇಕ ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಕನ್ನಡ, ಉಡುಪಿಯ ಹಲವೆಡೆ ಸಾಧಾರಣ ಮಳೆ

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಜುಲೈ 16 ಮತ್ತು 17ರಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ.

ಉತ್ತರ ಒಳನಾಡಿನಲ್ಲಿ ಮಳೆಯಾಗುತ್ತಾ?

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಹಾಗೂ (ಜುಲೈ 16ರಂದು) ಬೀದರ್ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಬಾಗಲಕೋಟೆ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಲವಾದ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಜುಲೈ 17ರಂದು ಬೀದರ್‌ನಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದರೂ, ಬಿರುಗಾಳಿ ಮುಂದುವರಿಯುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಹವಾಮಾನ ಮುನ್ಸೂಚನೆ

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಎರಡೂ ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕಡಿಮೆ ಇದ್ದರೂ, ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಮುಂಗಾರು ಇನ್ನೂ ಪೂರ್ಣ ಪ್ರಮಾಣದಲ್ಲಿ ಚುರುಕುಗೊಂಡಿಲ್ಲ. ಇನ್ನೂ ಕೆಲವು ದಿನಗಳ ಕಾಲ ಮಳೆಯ ಸಾಧ್ಯತೆ ಕಡಿಮೆ ಎಂದು ಎರಡು ದಿನಗಳ ಹಿಂದಷ್ಟೇ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ಆತುರಪಡದೆ ಸ್ಥಳೀಯ ಹವಾಮಾನ ಮುನ್ಸೂಚನೆಗಳನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಕೃಷಿ ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರೈತರೇ ಗಮನಸಿ: ಬಿತ್ತನೆ ಸಂಬಂಧ ಹವಾಮಾನ ತಜ್ಞರು ನೀಡಿರುವ ಸಲಹೆ ಇಲ್ಲಿದೆ

ಮಳೆ ಕೊರತೆ ಮುಂದುವರಿದರೆ ಜಲಾಶಯಗಳ ಒಳಹರಿವು, ಬೆಳೆಗಳ ಬೆಳವಣಿಗೆ ಹಾಗೂ ಕುಡಿಯುವ ನೀರಿನ ಪರಿಸ್ಥಿತಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕೆಲವು ದಿನಗಳ ಹವಾಮಾನ ಬೆಳವಣಿಗೆ ರಾಜ್ಯದ ಕೃಷಿ ಕ್ಷೇತ್ರಕ್ಕೆ ನಿರ್ಣಾಯಕವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version