ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ – Kannada News | Home loan rules, emi, monthly salary, foir calculation and other details

ಸ್ವಂತ ಮನೆ ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಇಂದಿನ ದಿನಗಳಲ್ಲಿ ಮನೆ ಮಾಡುವುದು ಅಷ್ಟು ಸುಲಭವಲ್ಲ. ನಿವೇಶನ ಖರೀದಿಸಿ, ಮನೆ ಕಟ್ಟಬೇಕೆಂದರೆ ಕೋಟಿ ಮೀರುತ್ತದೆ. ಫ್ಲಾಟ್ ತೆಗೆದುಕೊಂಡರೂ 35 ಲಕ್ಷ ರೂಗಿಂತ ಕಡಿಮೆ ಇರೋದಿಲ್ಲ. ಹೀಗಾಗಿ, ಸಾಲ ಮಾಡದೆ ಮನೆ ಮಾಡಿಕೊಳ್ಳಲು ಆಗದೇ ಇರುವಂತಹ ದುಬಾರಿ ದುನಿಯಾ ಇದು. ಮನೆ ಖರೀದಿಸಲು, ಕಟ್ಟಲು ಇರುವ ಸುಲಭ ಉಪಾಯ ಮತ್ತು ಮಾರ್ಗ ಗೃಹಸಾಲ ಅಥವಾ ಹೋಮ್ ಲೋನ್. ಆದರೆ, ನಿಮಗೆ ಜೀರ್ಣಿಸಿಕೊಳ್ಳಲು ಆಗುಷ್ಟೇ ಆಹಾರ ಸೇವಿಸುವುದು ನಿಸರ್ಗ ನಿಯಮ. ಅಂತೆಯೇ, ವಾಪಸ್ ತೀರಿಸಲು ಶಕ್ತಿ ಇರುವಷ್ಟು ಮಾತ್ರ ಸಾಲ ಮಾಡಬೇಕು. ಅದು ಹಣಕಾಸು ನಿಯಮ. ನೀವು ಗೃಹ ಸಾಲ (Home Loan) ಪಡೆಯುವಾಗ ಎಷ್ಟು ಇಎಂಐ ಕಟ್ಟಬೇಕು, ಎಷ್ಟು ಸಂಬಳ ಇರಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.

FOIR ನಿಯಮ: ಬ್ಯಾಂಕುಗಳು ಸಾಲ ನೀಡುವಾಗ ಸ್ಥಿರ ಆದಾಯದ ಅನುಪಾತವಾದ FOIR (Fixed Obligation-to-Income Ratio) ಅನ್ನು ಪರಿಗಣಿಸುತ್ತವೆ. ಇದರ ಪ್ರಕಾರ, ಒಬ್ಬ ವ್ಯಕ್ತಿಯ ಒಟ್ಟು ಮಾಸಿಕ ಆದಾಯದಲ್ಲಿ ಇಎಂಐ ಮೊತ್ತವು ಶೇ. 50 ಕ್ಕಿಂತ ಹೆಚ್ಚಿರಬಾರದು. ಅಂದರೆ ನಿಮ್ಮ ಸಂಬಳದ ಅರ್ಧದಷ್ಟು ಭಾಗ ನಿಮ್ಮ ಜೀವನೋಪಾಯಕ್ಕೆ ಉಳಿಯಬೇಕು.

ಇದನ್ನೂ ಓದಿ: ತಿಂಗಳಿಗೆ ಕೇವಲ 5,000 ರೂ ಹೂಡಿಕೆಯಿಂದ 21 ವರ್ಷದಲ್ಲಿ 1 ಕೋಟಿ ಸಂಪತ್ತು ಸೃಷ್ಟಿ ಸಾಧ್ಯ

30 ವರ್ಷಗಳ ಲೋನ್ ಅವಧಿಗೆ ಲೆಕ್ಕಾಚಾರ

  • ಶೇ. 9 ರ ಬಡ್ಡಿದರ ಇದ್ದರೆ: 50 ಲಕ್ಷ ರೂ. ಸಾಲಕ್ಕೆ ಮಾಸಿಕ ಇಎಂಐ ಅಂದಾಜು 40,231 ರೂ. ಆಗುತ್ತದೆ.
  • ಶೇ. 8 ರ ಬಡ್ಡಿದರ ಇದ್ದರೆ: ಮಾಸಿಕ ಇಎಂಐ ಅಂದಾಜು 36,688 ರೂ. ಆಗುತ್ತದೆ.

35 ವರ್ಷಗಳ ದೀರ್ಘಾವಧಿಗೆ ಇಎಂಐ ಲೆಕ್ಕಾಚಾರ

  • ಶೇ. 9 ರ ಬಡ್ಡಿದರ: ಮಾಸಿಕ ಇಎಂಐ ಅಂದಾಜು 39,200 ರೂ. ಇರಲಿದೆ.
  • ಶೇ. 8 ರ ಬಡ್ಡಿದರ: ಮಾಸಿಕ ಇಎಂಐ ಅಂದಾಜು 35,514 ರೂ. ಆಗುತ್ತದೆ.

ಇಷ್ಟು ಇಎಂಐ ಪಾವತಿಸಬೇಕೆಂದರೆ ನಿಮಗೆ ಎಷ್ಟು ಸಂಬಳ ಇರಬೇಕು?

ಹಣಕಾಸು ತಜ್ಞರ ಪ್ರಕಾರ, ನಿಮ್ಮ ಒಟ್ಟು ಆದಾಯದಲ್ಲಿ ಸಾಲ ಪಾವತಿ ಮೊತ್ತ ಶೇ. 50 ಮೀರುವಂತಿಲ್ಲ. ಅಂದರೆ, ನಿಮಗೆ ಸಂಬಳ 50,000 ರೂ ಬರುತ್ತಿದ್ದರೆ ಒಟ್ಟು ಇಎಂಐ ಮತ್ತು ಸಾಲ ಪಾವತಿ ಮೊತ್ತ 25,000 ರೂ ಮೀರುವಂತಿಲ್ಲ. ಇದರಲ್ಲಿ ಲೋನ್​ಗೆ ಕಟ್ಟುವ ಇಎಂಐ, ಕ್ರೆಡಿಟ್ ಕಾರ್ಡ್ ಬಿಲ್, ಇತರ ಸಾಲದ ಕೈಕಂತುಗಳು ಯಾವುದೇ ಇದ್ದರೂ ಒಳಗೊಳ್ಳುತ್ತದೆ.

ಈ ಲೆಕ್ಕಾಚಾರದಲ್ಲಿ ನೀವು ಶೇ. 8ರ ಬಡ್ಡಿದರದಲ್ಲಿ 35 ವರ್ಷದ ಮರುಪಾವತಿ ಅವಧಿಗೆ 50 ಲಕ್ಷ ರೂ ಸಾಲ ಪಡೆದರೆ ಮಾಸಿಕ ಇಎಂಐ 35,514 ರೂ ಇರುತ್ತದೆ. ಇದನ್ನು ಪಡೆಯಲು ನಿಮ್ಮ ಸಂಬಳ ಅಥವಾ ಮಾಸಿಕ ಆದಾಯ ಕನಿಷ್ಠ 70,000 ರೂ ಇರಬೇಕು.

ಶೇ. 9ರ ಬಡ್ಡಿದರದಲ್ಲಿ 30 ವರ್ಷ ಅವಧಿಗೆ ಸಾಲ ಪಡೆಯಬೇಕೆಂದರೆ ನಿಮಗೆ ಕನಿಷ್ಠ ಸಂಬಳ 81,000 ರೂ ಆದರೂ ಇರಬೇಕು.

ಇದನ್ನೂ ಓದಿ: ಮಲ್ಟಿ ಅಸೆಟ್ ಫಂಡ್​ಗಳಿಗೆ ಹೂಡಿಕೆ ಒಳಹರಿವು ಶೇ. 22 ಹೆಚ್ಚಳ; ಏನಿದು ಈ ರೀತಿಯ ಫಂಡ್?

ಸಾಲ ಪಡೆಯುವಾಗ ಗಮನಿಸಬೇಕಾದ ಇತರ ಅಂಶಗಳು

ಬ್ಯಾಂಕುಗಳು ಲೋನ್ ಬಗ್ಗೆ ಪ್ರಚಾರ ಮಾಡುವಾಗ ಬಡ್ಡಿದರ ಶೇ. 7, ಶೇ. 8ರಿಂದ ಆರಂಭವಾಗುತ್ತದೆ ಹೇಳಿಕೊಳ್ಳುತ್ತವೆ. ವಾಸ್ತವದಲ್ಲಿ ಅಷ್ಟು ಕಡಿಮೆ ಬಡ್ಡಿದರದಲ್ಲಿ ಎಲ್ಲರಿಗೂ ಸಾಲ ಸಿಕ್ಕೋದಿಲ್ಲ. ಕ್ರೆಡಿಟ್ ಸ್ಕೋರ್, ನಿಮ್ಮ ಮಾಸಿಕ ಆದಾಯ, ಇತರ ಸಾಲಗಳ ಹೊರೆ, ವಯಸ್ಸು, ಕೆಲಸದ ಸ್ಥಿರತೆ ಇತ್ಯಾದಿ ವಿವಿಧ ಅಂಶಗಳನ್ನು ಗಮನಿಸಲಾಗುತ್ತದೆ. ನೀವು ದೀರ್ಘಾವಧಿ ಸಾಲ ಮರುಪಾವತಿ ಸಾಮರ್ಥ್ಯ ಇರುವುದು ಖಚಿತವಾದಲ್ಲಿ ನಿಮಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಬ್ಯಾಂಕ್ ಕೊಡುತ್ತದೆ.

ಸಾಲ ಮರುಪಾವತಿ ಕಷ್ಟಸಾಧ್ಯವಿದೆ ಎನಿಸಿದಲ್ಲಿ ಹೆಚ್ಚು ಬಡ್ಡಿದರ ವಿಧಿಸಲಾಗುತ್ತದೆ. ಹೆಚ್ಚಿನ ಮೊತ್ತದ ಸಾಲ ಕೂಡ ಮಂಜೂರಾಗುವುದಿಲ್ಲ. ಹೀಗಾಗಿ, ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಆನ್‌ಲೈನ್‌ನಲ್ಲಿ ಲಭ್ಯವಿರುವ ‘EMI Calculator’ ಬಳಸಿ ನಿಮ್ಮ ಆದಾಯಕ್ಕೆ ಹೊಂದುವ ಇಎಂಐ ಅನ್ನು ಮೊದಲೇ ಯೋಜಿಸಿಕೊಳ್ಳುವುದು ಭವಿಷ್ಯದ ಆರ್ಥಿಕ ಸ್ಥಿರತೆಗೆ ಒಳ್ಳೆಯದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; ಎಫ್‌ಐಆರ್ ದಾಖಲು – Kannada News | Mysuru Dasara Kambala Row: FIR Filed for Alleged Tree Felling Without Permission

ಮೈಸೂರು, ಜುಲೈ 13: ಮೈಸೂರು ದಸರಾ ಕಂಬಳ ವಿವಾದ ನಡುವೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಂಬಳಕ್ಕಾಗಿ ಗುರುತಿಸಲಾದ ಸಾತಗಳ್ಳಿ ಪ್ರದೇಶದಲ್ಲಿ ಜಾಗ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಅನುಮತಿಯಿಲ್ಲದೆ ಮರಗಳನ್ನು ಕಡಿದ ಆರೋಪದ ಮೇಲೆ ಯುವಜನ ಸಬಲೀಕರಣ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ಮೂವರ ವಿರುದ್ಧ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಾಗಿದೆ. 20 ಜಾಲಿಮರಗಳು ಸೇರಿ ಒಟ್ಟು 25 ಮರಗಳನ್ನು ಕಡಿದಿರುವ ಆರೋಪ ಹಿನ್ನೆಲೆ ಅರಣ್ಯ ಕಾಯ್ದೆ 1963ರ ಸೆಕ್ಷನ್ 25, 33/2 ಮತ್ತು 33/3ರ ಅಡಿಯಲ್ಲಿ ಎಫ್​​ಐಆರ್​​ ದಾಖಲಾಗಿದೆ. ಇನ್ನು ಮರಗಳನ್ನ ಕಡಿದಿರುವುದಕ್ಕೆ  ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಈಗಾಗಲೇ ಇರುವ ಮರಗಿಡಗಳನ್ನು ನಾಶಪಡಿಸಿ ಕಂಬಳ ಆಚರಣೆ ಮಾಡುವ ಅಗತ್ಯವೇನಿದೆ?” ಎಂದು ಪ್ರಶ್ನಿಸಿದ್ದಾರೆ. ಮರಗಳನ್ನು ಕಡಿಯುವ ಬದಲು ಕಂಬಳವನ್ನು ಬೇರೆಡೆ ಆಯೋಜಿಸಬೇಕು ಅಥವಾ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮೆಸ್ಸಿ vs ಎಂಬಾಪೆ: ಫುಟ್​ಬಾಲ್ ಪ್ರೇಮಿಗಳ ಡ್ರೀಮ್ ಫೈನಲ್ ಲೆಕ್ಕಾಚಾರ! – Kannada News | Messi vs Mbappe: Will the Dream Final Happen in FIFA World Cup 2026?

ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ರೋಮಾಂಚಕ ಘಟ್ಟವೊಂದಕ್ಕೆ ಜಾಗತಿಕ ಕ್ರೀಡಾಂಗಣ ಸಾಕ್ಷಿಯಾಗುತ್ತಿದೆ. ವಿಶ್ವದ ಅತ್ಯಂತ ಬಲಿಷ್ಠ ಹಾಗೂ ಅಗ್ರ ಶ್ರೇಯಾಂಕದ ನಾಲ್ಕು ತಂಡಗಳಾದ ಫ್ರಾನ್ಸ್, ಸ್ಪೇನ್, ಇಂಗ್ಲೆಂಡ್ ಮತ್ತು ಅರ್ಜೆಂಟಿನಾ ಫಿಫಾ ವಿಶ್ವಕಪ್​ 2026ರ ಸೆಮಿಫೈನಲ್ ಮಹಾಸಮರದಲ್ಲಿ ಮುಖಾಮುಖಿಯಾಗಲು ಸಜ್ಜಾಗಿ ನಿಂತಿವೆ.

4 ತಂಡಗಳ ಸಜ್ಜಾಗುವಿಕೆಯ ಬೆನ್ನಲ್ಲೇ ಫುಟ್​ಬಾಲ್ ಪ್ರೇಮಿಗಳು ಡ್ರೀಮ್ ಫೈನಲ್ ಲೆಕ್ಕಾಚಾರದಲ್ಲಿದ್ದಾರೆ. ಅಂದರೆ ಬಹುತೇಕರು ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳ ನಡುವಣ ಫೈನಲ್ ಪಂದ್ಯವನ್ನು ಎದುರು ನೋಡುತ್ತಿದ್ದಾರೆ. ಆದರೆ ಅತ್ತ ಯುರೋಪಿಯನ್ ಪಡೆಗಳಾದ ಸ್ಪೇನ್ ಮತ್ತು ಇಂಗ್ಲೆಂಡ್ ಹೊಂದಿರುವ ರಣತಂತ್ರಗಳು, ‘ಎಂಬಾಪೆ vs ಮೆಸ್ಸಿ’ ಮುಖಾಮುಖಿಯ ಆ ಡ್ರೀಮ್ ಫೈನಲ್ ಕನಸನ್ನು ಭಂಗಗೊಳಿಸಲು ಸಜ್ಜಾಗಿವೆ.

ಮೆಸ್ಸಿ vs ಎಂಬಾಪೆ:

ಫುಟ್​ಬಾಲ್ ಪ್ರೇಮಿಗಳು ಫೈನಲ್​ ಮ್ಯಾಚ್​ನಲ್ಲಿ ಎಂಬಾಪೆ ಹಾಗೂ ಮೆಸ್ಸಿ ಮುಖಾಮುಖಿಯಾಗಬೇಕೆಂದು ಬಯಸಲು ಮುಖ್ಯ ಕಾರಣ ಗೋಲ್ಡನ್ ಬೂಟ್ ರೇಸ್. ಇದರ ಜೊತೆಗೆ ವಿಶ್ವ ದಾಖಲೆ. ಹಾಗೆಯೇ ಕಳೆದ ಬಾರಿಯ ಪ್ರತಿಕಾರ.

  • ಎಂಬಾಪೆ ಮತ್ತು ಮೆಸ್ಸಿ ಇಬ್ಬರೂ ತಲಾ 8 ಗೋಲು ಗಳಿಸಿ ಗೋಲ್ಡನ್ ಬೂಟ್ ರೇಸ್‌ನಲ್ಲಿ ಜಂಟಿಯಾಗಿ ಮುಂಚೂಣಿಯಲ್ಲಿದ್ದಾರೆ.
  • ವಿಶ್ವಕಪ್ ಇತಿಹಾಸದ ಒಟ್ಟು ಗೋಲುಗಳ ಪಟ್ಟಿಯಲ್ಲಿ ಮೆಸ್ಸಿ 21 ಗೋಲು ಗಳಿಸಿದ್ದರೆ, ಯುವ ತಾರೆ ಎಂಬಾಪೆ ಈಗಾಗಲೇ 20 ಗೋಲು ಗಳಿಸಿ ಮೆಸ್ಸಿಯ ಸನಿಹಕ್ಕೆ ಬಂದಿದ್ದಾರೆ.
  • 2022ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ತಂಡವು ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದಿಂದ ಜಯಗಳಿಸಿ ವಿಶ್ವಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ಅಂದರೆ ಈ ಇಬ್ಬರು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾದರೆ ಗೋಲ್ಡನ್ ಬೂಟ್ ಪೈಪೋಟಿ ಮುಂದುವರೆಯಲಿದೆ. ಹಾಗೆಯೇ ಮೆಸ್ಸಿಯ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶ ಎಂಬಾಪೆಗೆ ದೊರೆಯಲಿದೆ. ಇದರ ಜೊತೆ ಫ್ರಾನ್ಸ್ ತಂಡಕ್ಕೆ ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಅವಕಾಶ ಕೂಡ ದೊರೆಯಲಿದೆ.

ಈ ಮೂರು ಪ್ರಮುಖ ಕಾರಣಗಳಿಂದಾಗಿ ಈ ಬಾರಿಯ ಫೈನಲ್ ಪಂದ್ಯವು ಮತ್ತಷ್ಟು ರೋಚಕವಾಗಲಿದೆ ಎಂಬುದು ಅಭಿಮಾನಿಗಳ ಅಂಬೋಣ. ಇದೇ ಕಾರಣಕ್ಕಾಗಿ ಜಗತ್ತಿನಾದ್ಯಂತ ಇರುವ ಫುಟ್​ಬಾಲ್ ಪ್ರೇಮಿಗಳು ಈ ‘ಡ್ರೀಮ್ ಫೈನಲ್’ ಮಹಾಸಮರವನ್ನು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.”

ದೈತ್ಯರ ನಡುವಣ ಬಲಾಬಲ:

ಸೆಮಿಫೈನಲ್ 1: ಫ್ರಾನ್ಸ್ vs ಸ್ಪೇನ್:

  • ಫ್ರಾನ್ಸ್ ಆಟದ ಶೈಲಿ (ವೇಗ ಮತ್ತು ಕೌಂಟರ್ ಅಟ್ಯಾಕ್): ಈ ಬಾರಿಯ ವಿಶ್ವಕಪ್​ನಲ್ಲಿ ಫ್ರಾನ್ಸ್ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದೆ. ತಂಡದ ಶಕ್ತಿ ಇರುವುದು ಕೌಂಟರ್ ಅಟ್ಯಾಕ್‌ನಲ್ಲಿ. ಮಿಡ್ ಫೀಲ್ಡರ್​ಗಳಿಂದ ಚೆಂಡನ್ನು ಪಡೆದು ಏಕಾಏಕಿ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಎಂಬಾಪೆ, ಒಲಿಸೆ, ಡೆಂಬೆಲೆ ಫ್ರಾನ್ಸ್​ ತಂಡದ ಬಹುದೊಡ್ಡ ಶಕ್ತಿ.
  • ಸ್ಪೇನ್ ಆಟದ ಶೈಲಿ (ಟಿಕಿ-ಟಾಕಾ ತಂತ್ರ): ಸ್ಪೇನ್ ಸಾಂಪ್ರದಾಯಿಕ ‘ಟಿಕಿ-ಟಾಕಾ’ (ಕೇವಲ ಪಾಸ್‌ಗಳ ನಿಯಂತ್ರಣ) ತಂತ್ರದೊಂದಿಗೆ ಕಣಕ್ಕಿಳಿಯುತ್ತಿದೆ. ಇದರ ಜೊತೆಗೆ ನಾಕೌಟ್ ಹಂತದಲ್ಲಿ ಅತ್ಯಂತ ವೇಗದ ಮತ್ತು ಆಕ್ರಮಣಕಾರಿ ಶೈಲಿಯನ್ನು ಸಹ ಪ್ರದರ್ಶಿಸಿದೆ. ಹೀಗಾಗಿ ನಿರ್ಣಾಯಕ ಹಂತದಲ್ಲಿ ಟಿಕಿ-ಟಾಕಾ ಜೊತೆ ಸ್ಪೇನ್ ಪಡೆಯಿಂದ ಅದರಲ್ಲೂ ಯಮಾಲ್, ಟೊರೆಸ್ ಕಡೆಯಿಂದ ಕೌಂಟರ್ ಅಟ್ಯಾಕ್ ನಿರೀಕ್ಷಿಸಬಹುದು.

ಸೆಮಿಫೈನಲ್ 2: ಅರ್ಜೆಂಟಿನಾ vs ಇಂಗ್ಲೆಂಡ್:

  • ಅರ್ಜೆಂಟಿನಾ ಆಟದ ಶೈಲಿ (ಅಟ್ಯಾಕಿಂಗ್ ಮತ್ತು ಮೆಸ್ಸಿ ಮ್ಯಾಜಿಕ್): ಹಾಲಿ ಚಾಂಪಿಯನ್ ಅರ್ಜೆಂಟಿನಾ ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ಹೋರಾಟದ ಗುಣ ಪ್ರದರ್ಶಿಸಿದೆ. ಇಡೀ ತಂಡ ಲಿಯೋನೆಲ್ ಮೆಸ್ಸಿಯ ಇಚ್ಛಾಶಕ್ತಿಯ ಮೇಲೆ ಸಾಗುತ್ತದೆ. ಮೆಸ್ಸಿ ಕೇವಲ ಗೋಲು ಹೊಡೆಯುವುದಲ್ಲದೆ, ಇತರೆ ಆಟಗಾರರಿಗೆ ಅದ್ಭುತ ಅವಕಾಶಗಳನ್ನು  ಸೃಷ್ಟಿಸಿಕೊಡುತ್ತಾರೆ. ಇದು ಅರ್ಜೆಂಟೀನಾ ತಂಡದ ಶಕ್ತಿಯಾಗಿ ಕಾಣಿಸಿಕೊಂಡಿದೆ.
  • ಇಂಗ್ಲೆಂಡ್ ಆಟದ ಶೈಲಿ (ರಕ್ಷಣಾತ್ಮಕತೆ ಮತ್ತು ಅಟ್ಯಾಕಿಂಗ್): ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ನಲ್ಲಿ ನಾರ್ವೆಯನ್ನು ಹೆಚ್ಚುವರಿ ಸಮಯದಲ್ಲಿ ಮಣಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ. ಇಂಗ್ಲೆಂಡ್ ಈ ಬಾರಿ ಅತ್ಯಂತ ಶಿಸ್ತುಬದ್ಧ ರಕ್ಷಣಾ ಆಟವನ್ನು ಪ್ರದರ್ಶಿಸಿದೆ. ಇದರ ಜೊತೆ  ಜೂಡ್ ಬೆಲಿಂಗ್‌ಹ್ಯಾಮ್ ಮತ್ತು ಹ್ಯಾರಿ ಕೇನ್ ಅವರ ಕೌಂಟರ್ ಅಟ್ಯಾಕ್ ತಂಡದ ಶಕ್ತಿ ಎನ್ನಬಹುದು.

ಡ್ರೀಮ್ ಫೈನಲ್ ಲೆಕ್ಕಾಚಾರ!

ಫುಟ್​ಬಾಲ್ ಪ್ರೇಮಿಗಳ ಡ್ರೀಮ್ ಫೈನಲ್ ನಡೆಯಬೇಕಿದ್ದರೆ ಮುಂದಿನ ಪಂದ್ಯಗಳಲ್ಲಿ ಮೆಸ್ಸಿ ಪಡೆ ಮತ್ತು ಎಂಬಾಪೆ ಬಳಗ ಗೆಲ್ಲಬೇಕು. ಅಂದರೆ ಫ್ರಾನ್ಸ್ ತಂಡವು ಸ್ಪೇನ್‌ನ ಟಿಕಾ-ಟಾಕಾ ತಂತ್ರಕ್ಕೆ ಪತಿತಂತ್ರ ರೂಪಿಸಿ ಪಂದ್ಯ ಜಯ ಸಾಧಿಸಬೇಕು.  ಮತ್ತೊಂದೆಡೆ ಅರ್ಜೆಂಟಿನಾ ತಂಡವು ಇಂಗ್ಲೆಂಡ್‌ನ ಕಠಿಣ ರಕ್ಷಣಾ ಕೋಟೆಯನ್ನು ಭೇದಿಸಿ ಗೆಲುವು ದಾಖಲಿಸಿದೆ.

ಅಂದರೆ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ಹಾಗೂ ಸ್ಪೇನ್ ತಂಡಗಳು ಸೋತರೆ ಮಾತ್ರ ಎಂಬಾಪೆ vs ಮೆಸ್ಸಿ ನಡುವಣ  ಡ್ರೀಮ್ ಫೈನಲ್ ವೀಕ್ಷಿಸುವ ಅವಕಾಶ ಫುಟ್​ಬಾಲ್​ ಪ್ರೇಮಿಗಳಿಗೆ ದೊರೆಯಲಿದೆ.

ಇದನ್ನೂ ಓದಿ: ಬ್ರಿಟಿಷ್ ಪ್ರಜೆಯಾಗಿ ಕೆರಿಯರ್ ಆರಂಭಿಸಿದ ಅಮೀರ್

ಹೀಗಾದಲ್ಲಿ, ಕಳೆದ 2022ರ ಫಿಫಾ ವಿಶ್ವಕಪ್ ಫೈನಲ್‌ನಂತೆ ಮತ್ತೊಮ್ಮೆ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ನಡುವಿನ ‘ಮಹಾ ಕದನ’ಕ್ಕೆ ಕ್ರೀಡಾಲೋಕ ಸಾಕ್ಷಿಯಾಗಲಿದೆ.

ಸೆಮಿಫೈನಲ್ ಪಂದ್ಯಗಳ ವೇಳಾಪಟ್ಟಿ:

ಪಂದ್ಯ ದಿನಾಂಕ ಮುಖಾಮುಖಿ ಕ್ರೀಡಾಂಗಣ ಸಮಯ (IST)
ಸೆಮಿಫೈನಲ್ 1 15 ಜುಲೈ 2026 ಫ್ರಾನ್ಸ್ vs ಸ್ಪೇನ್ ಎಟಿ ಅ್ಯಂಡ್ ಟಿ ಸ್ಟೇಡಿಯಂ (ಡಲ್ಲಾಸ್) ಮಧ್ಯರಾತ್ರಿ 12:30 AM
ಸೆಮಿಫೈನಲ್ 2 16 ಜುಲೈ 2026 ಇಂಗ್ಲೆಂಡ್ vs ಅರ್ಜೆಂಟೀನಾ ಮರ್ಸಿಡಿಸ್-ಬೆಂಝ್ ಸ್ಟೇಡಿಯಂ (ಅಟ್ಲಾಂಟಾ) ಮಧ್ಯರಾತ್ರಿ 12:30 AM

ಫೈನಲ್ ಪಂದ್ಯ ಯಾವಾಗ?

ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಜಯಶಾಲಿಯಾಗುವ ತಂಡಗಳು ಜುಲೈ 19, 2026 ರಂದು ನ್ಯೂಜೆರ್ಸಿಯ ಪ್ರಸಿದ್ಧ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಭವ್ಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ.

Source link

Leopard In Bengaluru: 5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು

ಬೆಂಗಳೂರು, ಜುಲೈ 13: ನಗರದ ಯಶವಂತಪುರ ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿ ಮತ್ತು ಭಾರತ ನಗರದಲ್ಲಿ ಕಳೆದ ಐದು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಗುರುವಾರ ಮತ್ತು ಶುಕ್ರವಾರದಂದು ಒಂದು ಪಾರ್ಕ್​ನಲ್ಲಿ ಮತ್ತು ರಸ್ತೆಗೆ ಅಡ್ಡಲಾಗಿರುವ ಖಾಲಿ ಸೈಟ್‌ನಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಸ್ಥಳೀಯ ಶಾಸಕ ಎಸ್.ಟಿ. ಸೋಮಶೇಖರ್ ಅವರು ಸಾರ್ವಜನಿಕರ ಒತ್ತಾಯದ ಮೇರೆಗೆ ಪೊದೆಗಳನ್ನು ತೆರವುಗೊಳಿಸಿದ ನಂತರವೂ, ಚಿರತೆ ನಿನ್ನೆ ಮತ್ತೆ ಕಾಣಿಸಿಕೊಂಡಿದ್ದು, ಭಯ ಹೆಚ್ಚಿಸಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಒಂದು ಬೋನನ್ನು ಇರಿಸಿದ್ದಾರೆ. ಆದರೆ, ಒಂದು ಬೋನು ಸಾಕಾಗುವುದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಚಿರತೆಯನ್ನು ತ್ವರಿತವಾಗಿ ಹಿಡಿಯಲು ಎರಡು-ಮೂರು ಬೋನುಗಳನ್ನು ಇಡಬೇಕು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಹೆಚ್ಚಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಸಂಜೆ ಆಗುತ್ತಿದ್ದಂತೆ ಜನರು ಈ ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದು, ವಾಹನ ಸಂಚಾರವೂ ಕಡಿಮೆಯಾಗಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳುವಂತೆ ಜನರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ಚಾಮರಾಜನಗರದಲ್ಲಿ ಅರಣ್ಯಾಧಿಕಾರಿಗಳಿಗೆ ರೈತರ ಖಡಕ್ ಎಚ್ಚರಿಕೆ – Kannada News | If the tiger isn’t caught, we will put you in the cage: Farmers’ stern warning to forest officials in Chamarajanagar

ಚಾಮರಾಜನಗರ, ಜುಲೈ 13: ಚಾಮರಾಜನಗರದಲ್ಲಿ ಹುಲಿ ಮತ್ತು ಚಿರತೆಯ ಉಪಟಳ ಮಿತಿಮೀರಿದ್ದು, ಆಕ್ರೋಶಗೊಂಡ ರೈತರು ಡಿಸಿಎಫ್ ಕಚೇರಿ ಎದುರು ಸೋಮವಾರ ತೀವ್ರ ಪ್ರತಿಭಟನೆ ನಡೆಸಿದರು. ಕಾಡುಪ್ರಾಣಿಗಳನ್ನು ತಕ್ಷಣ ಸೆರೆ ಹಿಡಿಯಲು ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಕಾರ್ಯಾಚರಣೆ ಆರಂಭಿಸದಿದ್ದರೆ ಜಾಗ ಬಿಟ್ಟು ಕದಲಲ್ಲ ಎಂದು ಪಟ್ಟು ಹಿಡಿದ ರೈತರು, ಅರಣ್ಯ ಸಿಬ್ಬಂದಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಹುಲಿ ಹಿಡಿಯದಿದ್ದರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾ ನಿರತರು, ‘‘ಬೇಕೇ ಬೇಕು ನ್ಯಾಯ ಬೇಕು. ವಿಫಲವಾಗಿರೋ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಧಿಕ್ಕಾರ, ಧಿಕ್ಕಾರ. ಹುಲಿ, ಚಿರತೆ, ಕಾಡುಪ್ರಾಣಿಗಳ ಸೆರೆ ಹಿಡಿಯಲು ವಿಫಲವಾಗಿರೋ ಅರಣ್ಯ ಅಧಿಕಾರಿಗಳಿಗೆ ಧಿಕ್ಕಾರ ಧಿಕ್ಕಾರ. ರಕ್ಷಿಸಿ ರಕ್ಷಿಸಿ ನಮ್ಮ ರೈತರನ್ನು ರಕ್ಷಿಸಿ’’ ಎಂಬ ಘೋಷಣೆಗಳನ್ನು ಕೂಗಿದರು. ಕಾಡಿನ ಪ್ರಾಣಿಗಳು ಕಾಡಿನಲ್ಲೇ ಇರಬೇಕು. ಆದರೆ ಅರಣ್ಯ ಇಲಾಖೆ ವೈಜ್ಞಾನಿಕವಲ್ಲದ ನಿರ್ವಹಣೆಯಿಂದಾಗಿ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ರೈತರು ದೂರಿದರು.

ಸೆರೆ ಹಿಡಿದಂತಹ ಕಾಡುಪ್ರಾಣಿಗಳಾದ ಹುಲಿ, ಚಿರತೆ ಮತ್ತು ಇತರೆ ಪ್ರಾಣಿಗಳನ್ನು ಮಾದೇಶ್ವರನ ಬೆಟ್ಟ ಹಾಗೂ ಬಿಳಿಗಿರಂಗನ ಬೆಟ್ಟಕ್ಕೆ ಬಿಡುತ್ತಾ ಇರುವುದು ಕೂಡ ಈ ಹಾವಳಿಗೆ ಒಂದು ಕಾರಣ ಎಂದು ರೈತರು ಆರೋಪಿಸಿದರು. ಇದರಿಂದ ಆಹಾರ ಅರಸಿ, ವಯಸ್ಸಾಗಿರುವ ಪ್ರಾಣಿಗಳು ಹೊರಗಡೆ ಬರುತ್ತಿವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಂಡಿ ಹಣ ಎಣಿಕೆ ಹಗರಣ: ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ – Kannada News | Karnataka Issues 19 Point Guidelines for Temple Offerings Amid Ayodhya Donation Row

ಬೆಂಗಳೂರು, ಜುಲೈ 13: ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ದೇಣಿಗೆ ಹುಂಡಿ ಅಕ್ರಮದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕಾಯ್ದುಕೊಳ್ಳಲು 19 ಅಂಶಗಳ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಕೂಡ ಕಳ್ಳತನ ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲಿ ಲೋಪ ನಡೆದಿರೋದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಜಾರಿಗೊಳಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಮುಖ ಸಾಕ್ಷಿಗೆ ಧಮ್ಕಿ; ಪ್ರಭಾವಿಗಳ ಹೆಸರು ಹೇಳಿದ ಬಂಧಿತ ದರ್ಶನ್ ಫ್ಯಾನ್ಸ್ – Kannada News | Renukaswamy Murder: Witness Threatened Powerful Backers Exposed in Darshan Case

ಬೆಂಗಳೂರು ಜುಲೈ, 13: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆ ಆಗುತ್ತಲೇ ಇದೆ. ಪ್ರಕರಣದ 49ನೇ ಸಾಕ್ಷಿಯಾಗಿರುವ ಸಂದೀಪ್ ಎಂಬುವವರಿಗೆ ಕೋರ್ಟ್‌ನಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದರ್ಶನ್ (Darshan) ಅಭಿಮಾನಿ ಬಳಗದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಪ್ರಕರಣದ ಹಿಂದೆ ಇರುವ ಪ್ರಭಾವಿಗಳ ಹೆಸರು ಹೊರಬಿದ್ದಿದೆ.

ಪುನೀತ್, ಸುಹಾಸ್ ಮತ್ತು ವೇಣು ಬಂಧಿತ ದರ್ಶನ್ ಅಭಿಮಾನಿಗಳು. ಇವರ ಪೈಕಿ ಪುನೀತ್​ ಎಂಬಾತ, ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ಎಂಬುವವರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನುವುದು ವಿಚಾರಣೆ ವೇಳೆ ಬಯಲಾಗಿದೆ. ಪೊಲೀಸರ ಕಣ್ಣು ತಪ್ಪಿಸಲು ಇವರು ಸಾಮಾನ್ಯ ಕರೆಯ ಬದಲಾಗಿ ವಾಟ್ಸಾಪ್ ಕರೆ ಮೂಲಕ ಮಾತುಕತೆ ನಡೆಸಿ, ಬೆದರಿಕೆ ಹಾಕಲು ಪ್ಲ್ಯಾನ್ ಮಾಡಿದ್ದರು.

ಗೌರವ್ ಶೆಟ್ಟಿ ಎಂಬಾತ ಸಂಜಯನಗರದ ಪ್ರಮುಖ ಬಾರ್ ಮಾಲೀಕನೊಬ್ಬನ ಆಪ್ತ ಸ್ನೇಹಿತ. ಈ ಇಡೀ ಸಾಕ್ಷಿ ನಾಶ ಮತ್ತು ಬೆದರಿಕೆ ತಂತ್ರದಲ್ಲಿ ಆ ಬಾರ್ ಮಾಲೀಕ ಸಹ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪುನೀತ್ ಅರೆಸ್ಟ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ಸದ್ಯ ತಲೆಮರೆಸಿಕೊಂಡು ಪರಾರಿಯಾಗಿದ್ದಾರೆ.ಇವರಿಗಾಗಿ ಕಾಮಾಕ್ಷಿಪಾಳ್ಯ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ:  ಸಾಕ್ಷಿಗೆ ಬೆದರಿಕೆ ಹಾಕಿ ಅರೆಸ್ಟ್ ಆದ ದರ್ಶನ್ ಅಭಿಮಾನಿಗಳು; ಈ ಮೂವರ ಹಿನ್ನೆಲೆ ಏನು?

ನಾಟಕೀಯವಾಗಿ ನಡೆದಿತ್ತು ಕಿಡ್ನಾಪ್, ಪ್ರಾಣ ಬೆದರಿಕೆ

ಸಾಕ್ಷಿದಾರ ಸಂದೀಪ್ ಅವರೊಂದಿಗೆ ಮಾತುಕತೆ ನಡೆಸುವ ನೆಪದಲ್ಲಿ ಒಂದು ಜಾಗಕ್ಕೆ ಕರೆಸಿಕೊಂಡಿದ್ದ ಈ ಗ್ಯಾಂಗ್, ಆತನನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿಸಿದೆ. ಈ ವೇಳೆ ನ್ಯಾಯಾಲಯದಲ್ಲಿ ದರ್ಶನ್ ವಿರುದ್ಧ ಸಾಕ್ಷಿ ನುಡಿಯದಂತೆ ತೀವ್ರ ಒತ್ತಡ ಹೇರಲಾಗಿದೆ. ಸಂದೀಪ್ ಇದಕ್ಕೆ ಒಪ್ಪದಿದ್ದಾಗ, ಆರೋಪಿ ಸುಹಾಸ್ ಜೈಲಿನಲ್ಲಿರುವ ನಟ ದರ್ಶನ್ ಹೆಸರು ಹೇಳಿ ನೇರವಾಗಿ ಪ್ರಾಣ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ಸಾಕ್ಷಿದಾರ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಸಾಕ್ಷಿಗೆ ಬಿಗಿ ರಕ್ಷಣೆ ನೀಡಿ ಬೆದರಿಕೆ ಹಾಕಿದವರಿಗಾಗಿ ಜಾಲ ಬೀಸಿದ್ದರು.

ಸಿಕ್ಕಿಬಿದ್ದ ‘ಡಿ ಕಂಪನಿ’ ಫ್ಯಾನ್ ಪೇಜ್ ಅಡ್ಮಿನ್ ಮತ್ತು ಗ್ಯಾಂಗ್

ಕಾಮಾಕ್ಷಿಪಾಳ್ಯ ಪೊಲೀಸರು ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ ವೇಣು, ಸುಹಾಸ್ ಮತ್ತು ಪುನೀತ್ ಎಂಬ ಮೂವರು ಆರೋಪಿಗಳು ಅರೆಸ್ಟ್ ಆಗಿದ್ದರು. ಇವರ ಹಿಂದೆ ಇನ್ನೂ ಯಾರೆಲ್ಲಾ ಇದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

(ವರದಿ: ವಿಕಾಸ್)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:38 pm, Mon, 13 July 26

Source link

IND vs ENG: ಬಲಿಷ್ಠ ಪಡೆ… ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11 – Kannada News | India’s Playing 11 for 1st ODI Against England

ಭಾರತ ಮತ್ತು ಇಂಗ್ಲೆಂಡ್ ನಡುವಿನ ಬಹುನಿರೀಕ್ಷಿತ ಏಕದಿನ ಸರಣಿ ನಾಳೆಯಿಂದ  (ಜುಲೈ 14) ಶುರುವಾಗಲಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ. ಏಕೆಂದರೆ ಈ ಸರಣಿಯ ಮೂಲಕ ಟೀಮ್ ಇಂಡಿಯಾ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್​ಪ್ರೀತ್ ಬುಮ್ರಾ ಮರಳುತ್ತಿದ್ದಾರೆ.

ಅದರಂತೆ ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಂಡರೆ, ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ.

ಇನ್ನು ಆಲ್​ರೌಂಡರ್​ಗಳಾಗಿ ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಹಾಗೆಯೇ ಬೌಲರ್​ಗಳಾಗಿ ಜಸ್​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್ ಜೊತೆ ಗುರ್ನೂರ್ ಬ್ರಾರ್​ಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11 ಈ ಕೆಳಗಿನಂತಿರಲಿದೆ…

  1. ಶುಭ್​ಮನ್ ಗಿಲ್ (ನಾಯಕ)
  2. ರೋಹಿತ್ ಶರ್ಮಾ
  3. ವಿರಾಟ್ ಕೊಹ್ಲಿ
  4. ಶ್ರೇಯಸ್ ಅಯ್ಯರ್
  5. ಕೆಎಲ್ ರಾಹುಲ್ (ವಿಕೆಟ್ ಕೀಪರ್)
  6. ಅಕ್ಷರ್ ಪಟೇಲ್
  7. ಶಿವಂ ದುಬೆ
  8. ಕುಲ್ದೀಪ್ ಯಾದವ್
  9. ಜಸ್​ಪ್ರೀತ್ ಬುಮ್ರಾ
  10. ಅರ್ಷದೀಪ್ ಸಿಂಗ್
  11. ಗುರ್ನೂರ್ ಬ್ರಾರ್.

ಭಾರತ ಮತ್ತು ಇಂಗ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಸಮಯ ( IST) ಸ್ಥಳ 
1ನೇ ಏಕದಿನ ಪಂದ್ಯ ಜುಲೈ 14, 2026 (ಮಂಗಳವಾರ) ಮಧ್ಯಾಹ್ನ 3:30 ಕ್ಕೆ ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್
2ನೇ ಏಕದಿನ ಪಂದ್ಯ ಜುಲೈ 16, 2026 (ಗುರುವಾರ) ಸಂಜೆ 5:30 ಕ್ಕೆ ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
3ನೇ ಏಕದಿನ ಪಂದ್ಯ ಜುಲೈ 19, 2026 (ಭಾನುವಾರ) ಮಧ್ಯಾಹ್ನ 3:30 ಕ್ಕೆ ಲಾರ್ಡ್ಸ್, ಲಂಡನ್

ಇದನ್ನೂ ಓದಿ: ಅರ್ಹತೆ ಪಡೆದರೂ ಏಷ್ಯನ್ ಗೇಮ್ಸ್​ನಿಂದ ಭಾರತ ಫುಟ್‌ಬಾಲ್ ತಂಡ ಹೊರಕ್ಕೆ!

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್, ಶಿವಂ ದುಬೆ.

Source link

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ – Kannada News | Supreme Court Issues Notice to HD Revanna in Harassment Case, Questions Karnataka High Court Order

ಹೆಚ್​ಡಿ ರೇವಣ್ಣಗೆ ಸಂಕಷ್ಟImage Credit source: tv9

ನವದೆಹಲಿ, ಜುಲೈ 13: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ (JDS) ಶಾಸಕ ಹೆಚ್​ಡಿ ರೇವಣ್ಣಗೆ (HD Revanna) ಸುಪ್ರೀಂ ಕೋರ್ಟ್ ಮಹತ್ವದ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಹೈಕೋರ್ಟ್ ಈ ಹಿಂದೆ ರೇವಣ್ಣ ಅವರಿಗೆ ನೀಡಿದ್ದ ದೋಷಮುಕ್ತ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ. ನ್ಯಾಯಮೂರ್ತಿ ಪರ್ದಿವಾಲಾ, ಕೆ.ವಿನೋದ್ ಚಂದ್ರನ್ ಅವರ ದ್ವಿಸದಸ್ಯ ಪೀಠವು ಈ ನೋಟಿಸ್ ಹೊರಡಿಸಿದ್ದು, ಹೈಕೋರ್ಟ್‌ನ ನಡಾವಳಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಹೆಚ್​ಡಿ ರೇವಣ್ಣ ವಿರುದ್ಧದ ಪ್ರಕರಣದ ಹಿನ್ನೆಲೆ

ಈ ಪ್ರಕರಣವು ಹೊಳೆನರಸೀಪುರದ ಮನೆಗೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಹೆಚ್​ಡಿ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದು, ಆತನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆಗಳು ನಡೆಯುತ್ತಿವೆ. ಇದೇ ಪ್ರಕರಣದಲ್ಲಿ ಹೆಚ್​ಡಿ ರೇವಣ್ಣ ಅವರನ್ನೂ ಕೂಡ ಬಂಧಿಸಲಾಗಿತ್ತು. ಮನೆಗೆಲಸದಾಕೆಗೆ ತೀವ್ರ ಕಿರುಕುಳ ನೀಡಲಾಗಿತ್ತು ಮತ್ತು ಆಕೆಯ ಘನತೆಗೆ ಧಕ್ಕೆ ತರಲಾಗಿತ್ತು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ಹೈಕೋರ್ಟ್ ಮೊರೆ ಹೋಗಿದ್ದ ಹೆಚ್​​ಡಿ ರೇವಣ್ಣ


ನಂತರ ಹೆಚ್​​ಡಿ ರೇವಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡಲು ಕೋರಿದ್ದರು. ಅವರ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಮತ್ತು 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ, ಹೈಕೋರ್ಟ್ ಐಪಿಸಿ ಸೆಕ್ಷನ್ 354 ಅನ್ನು ರೇವಣ್ಣ ವಿರುದ್ಧದ ಪ್ರಕರಣದಿಂದ ಕೈಬಿಟ್ಟು, ಸೆಕ್ಷನ್ 354ಎ ಅಡಿ ಪ್ರಾಸಿಕ್ಯೂಷನ್ ಅನ್ನು ಮುಂದುವರಿಸಲು ಕೆಳ ನ್ಯಾಯಾಲಯಕ್ಕೆ ಆದೇಶ ನೀಡಿತ್ತು.

ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದ ಕರ್ನಾಟಕ ರಾಜ್ಯ ಸರ್ಕಾರ

ಹೈಕೋರ್ಟ್‌ನ ಆದೇಶವನ್ನು ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಿತ್ತು. ಒಂದು ಪ್ರಕರಣದಲ್ಲಿ ಆರೋಪದಿಂದ ಮುಕ್ತಗೊಳಿಸಿದ್ದಕ್ಕೆ ಮತ್ತು ಒಂದು ಸೆಕ್ಷನ್ ಅನ್ನು ಕೈಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರವು ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿತು. ‘ಹೈಕೋರ್ಟ್ ಆರೋಪವನ್ನು ಹೇಗೆ ಬದಲಾಯಿಸಲು ಸಾಧ್ಯ’ ಎಂದು ರಾಜ್ಯ ಸರ್ಕಾರ ತನ್ನ ಅರ್ಜಿಯಲ್ಲಿ ವಾದಿಸಿತ್ತು.

ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ವಿಚಾರಣೆಯ ಪ್ರಕ್ರಿಯೆ ಮತ್ತು ಕೊಟ್ಟಂತಹ ಆದೇಶದ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಿದೆ. ಈ ಪ್ರಕರಣದಲ್ಲಿ ಹೈಕೋರ್ಟ್‌ನ ನಡಾವಳಿ ಸರಿಯಾಗಿಲ್ಲ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ‘ಈ ಪ್ರಕರಣವನ್ನು ಹೈಕೋರ್ಟ್ ಹೇಗೆ ಕೈಬಿಡಲು ಸಾಧ್ಯವಾಯಿತು’ ಎಂದು ಪ್ರಶ್ನಿಸಿದೆ. ಇದರ ಜೊತೆಗೆ, ಸುಪ್ರೀಂ ಕೋರ್ಟ್ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಹೆಚ್​ಡಿ ರೇವಣ್ಣ ಮುಂದಿನ ನಡೆ ಏನಿರಲಿದೆ?

ಹೆಚ್​ಡಿ ರೇವಣ್ಣ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್​​ನಲ್ಲಿ ಪ್ರತಿವಾದವನ್ನು ಮಂಡಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಪ್ರಶ್ನಿಸಿರುವ ಅಂಶಗಳಿಗೆ ಸಂಬಂಧಿಸಿ ವಾದ-ಪ್ರತಿವಾದಗಳು ನಡೆಯಲಿವೆ. ವಿಚಾರಣೆಯನ್ನು ಸದ್ಯ ಸುಪ್ರೀಂ ಕೋರ್ಟ್ ಮುಂದೂಡಿದ್ದು, ಈ ಪ್ರಕರಣದಲ್ಲಿ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ. ಈ ಬೆಳವಣಿಗೆಯು ರೇವಣ್ಣಗೆ ಮತ್ತಷ್ಟು ಕಾನೂನು ಸಂಕಷ್ಟವನ್ನು ತಂದೊಡ್ಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:08 pm, Mon, 13 July 26

Source link

ಪೈಪ್ ಲೈನ್ ಕಾಮಗಾರಿ: ರಸ್ತೆ ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ – Kannada News | BMTC Bus Gets Stuck in Road pothole In on KR Road After Pipeline Work in Bengaluru, Passengers Stranded

ಬೆಂಗಳೂರು, ಜುಲೈ 13: ಬೆಂಗಳೂರಿನ ಬಸವನಗುಡಿ ಕೆಆರ್ ರಸ್ತೆಯಲ್ಲಿ ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿಯಿಂದಾಗಿ ರಸ್ತೆ ಮಧ್ಯೆ ಸೃಷ್ಟಿಯಾದ ಗುಂಡಿಯಲ್ಲಿ ಬಿಎಂಟಿಸಿ ಬಸ್ ಸಿಲುಕಿ ಪ್ರಯಾಣಿಕರಿಗೆ ಸಮಸ್ಯೆ ಉಂಟಯಿತು. ಪದ್ಮನಾಭನಗರದಿಂದ ಮಾರ್ಕೆಟ್‌ ಕಡೆಗೆ ಪ್ರಯಾಣಿಸುತ್ತಿದ್ದ ಬಿಎಂಟಿಸಿ ಬಸ್, ರಸ್ತೆ ಗುಂಡಿಗೆ ಸಿಲುಕಿ ಒಂದು ಬದಿಗೆ ವಾಲಿ ನಿಂತಿತು. ಪೈಪ್‌ಲೈನ್ ಕಾಮಗಾರಿ ಕೈಗೊಂಡಿದ್ದ ಸಿಬ್ಬಂದಿ, ಕೆಲಸ ಮುಗಿದ ನಂತರ ಗುಂಡಿಗಳನ್ನು ಸರಿಯಾಗಿ ಮುಚ್ಚದೆ, ಕೇವಲ ಮಣ್ಣು ಮತ್ತು ಜಲ್ಲಿ ಹಾಕಿ ಹಾಗೆಯೇ ಹೋಗಿದ್ದರು. ಇದರಿಂದಾಗಿ ರಸ್ತೆಯು ವಾಹನ ಸಂಚಾರಕ್ಕೆ ಅಸುರಕ್ಷಿತವಾಗಿ ಪರಿಣಮಿಸಿತ್ತು. ಬಸ್ ಚಾಲಕರು ಮತ್ತು ಸಾರ್ವಜನಿಕರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಬೇಜವಾಬ್ದಾರಿಯನ್ನು ಪ್ರಶ್ನಿಸಿದ್ದಾರೆ.

ಈ ಘಟನೆಯಿಂದಾಗಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಯಿತು. ಪ್ರಯಾಣಿಕರು ಪರದಾಡಬೇಕಾಯಿತು. ನಗರದಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಈ ಘಟನೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸಂಬಂಧಪಟ್ಟ ಇಲಾಖೆಗಳು ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version