ಪೇಪರ್ ರೋಲ್ ತಯಾರಿಸುವ ಕಾರ್ಖಾನೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರ್ಮಿಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಘಟಕದ ಒಳಗಿದ್ದ ಚಲಿಸುವ ಕನ್ವೇಯರ್ ಬೆಲ್ಟ್ ಒಂದಕ್ಕೆ ಕಾರ್ಮಿಕ ಸಿಲುಕಿಕೊಂಡು ಈ ಅವಘಡ ಸಂಭವಿಸಿದೆ. ಅವರ ಬಟ್ಟೆ ಕನ್ವೇಯರ್ನ ರೋಲರ್ಗಳ ನಡುವೆ ಸಿಲುಕಿಕೊಂಡಿದ್ದರಿಂದ,ಆ ಹಾಳೆಗಳ ಜತೆ ಅವರನ್ನು ಕೂಡ ಯಂತ್ರ ಎಳೆದಿದೆ. ಪರಿಣಾಮವಾಗಿ, ಕಾಗದದ ಹಾಳೆಗಳನ್ನು ಸಂಸ್ಕರಿಸುವ ಭಾರೀ ಯಂತ್ರೋಪಕರಣಗಳ ನಡುವೆ ಸಿಲುಕಿ ಅವರು ನಜ್ಜುಗುಜ್ಜಾಗಿದ್ದಾರೆ. ಸ್ಥಳದಲ್ಲಿದ್ದ ಇತರ ಸಿಬ್ಬಂದಿ ತಕ್ಷಣವೇ ಧಾವಿಸಿ ಬಂದರಾದರೂ, ಯಂತ್ರದ ತೀವ್ರ ಒತ್ತಡಕ್ಕೆ ಸಿಲುಕಿದ್ದ ಕಾರ್ಮಿಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೈಗಾರಿಕಾ ವಲಯದಲ್ಲಿ ಸುರಕ್ಷತಾ ನಿಯಮಗಳ ಕೊರತೆಯೇ ಈ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದ್ದು, ಸದ್ಯ ತನಿಖೆ ಪ್ರಗತಿಯಲ್ಲಿದೆ.
ತಿರುವನಂತಪುರ, ಮೇ 27: ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ನಿವಾಸ ಸೇರಿ 10 ಕಡೆಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲದಲ್ಲಿ ಶೋಧ ನಡೆಸಿದ್ದಾರೆ. ಕೊಚ್ಚಿ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಭಾರಿ ಆ್ಯಕ್ಷನ್ಗೆ ಇಳಿದಿದೆ. ಈ ಪ್ರಕರಣದ ಇಡಿ ತನಿಖೆಯನ್ನು ರದ್ದುಗೊಳಿಸಲು ಕೇರಳ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಈ ದಾಳಿಗಳು ನಡೆದಿರುವುದು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ.
ದಾಳಿಗೆ ಪ್ರಮುಖ ಕಾರಣವೇನು?
ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಒಡೆತನದ ‘ಎಕ್ಸಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು, ಸಿಎಂಆರ್ಎಲ್ ಕಂಪನಿಗೆ ಯಾವುದೇ ರೀತಿಯ ಸೇವೆಗಳನ್ನು ನೀಡದಿದ್ದರೂ ಸಹ ಅವರಿಂದ ದೊಡ್ಡ ಮೊತ್ತದ ಹಣವನ್ನು ಪಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಆರ್ಥಿಕ ಅಕ್ರಮಗಳ ಕುರಿತಾಗಿಯೇ ಇಡಿ ಈಗ ತನಿಖೆ ನಡೆಸುತ್ತಿದೆ.
ಇದರ ಭಾಗವಾಗಿ, ಕೋಳಿಕ್ಕೋಡ್ನಲ್ಲಿರುವ ಮಾಜಿ ಸಚಿವ ಹಾಗೂ ಪ್ರಸ್ತುತ ಶಾಸಕರಾಗಿರುವ ಪಿ.ಎ. ಮುಹಮ್ಮದ್ ರಿಯಾಸ್ ಅವರ ಮನೆ ಮೇಲೆಯೂ ಇಡಿ ದಾಳಿ ನಡೆಸಿದೆ. ಇವರು ಟಿ. ವೀಣಾ ಅವರ ಪತಿಯಾಗಿದ್ದಾರೆ.
ಕೈಗಾರಿಕಾ ರಾಸಾಯನಿಕಗಳನ್ನು ತಯಾರಿಸುವ ಕೇರಳ ಮೂಲದ CMRL ಕಂಪನಿಯು ಲಂಚ ಮತ್ತು ಮನಿ ಲಾಂಡರಿಂಗ್ ಆರೋಪದಡಿಯಲ್ಲಿ ಸಿಲುಕಿದೆ. 2017 ಮತ್ತು 2020 ರ ನಡುವೆ ವೀಣಾ ಅವರ ಎಕ್ಸಾಲಾಜಿಕ್ ಸಂಸ್ಥೆಯು ಈ ಕಂಪನಿಯಿಂದ ಯಾವುದೇ ಕೆಲಸ ಮಾಡಿಕೊಡದಿದ್ದರೂ 1.72 ಕೋಟಿ ರೂ. ಪಡೆದಿದೆ ಎಂದು 2023 ರ ಆಗಸ್ಟ್ನಲ್ಲಿ ಮೊದಲ ಬಾರಿಗೆ ಬಹಿರಂಗವಾಗಿತ್ತು.
ನಂತರ ಕೇಂದ್ರ ಸರ್ಕಾರದ ಗಂಭೀರ ವಂಚನೆ ತನಿಖಾ ಕಚೇರಿ (SFIO) ನಡೆಸಿದ ವಿವರವಾದ ತನಿಖೆಯಲ್ಲಿ, ವೀಣಾ ಅವರ ಸಂಸ್ಥೆಯು ಒಟ್ಟಾರೆಯಾಗಿ 2.70 ಕೋಟಿ ರೂ.ಗಳನ್ನು ಪಡೆದಿರುವುದು ಪತ್ತೆಯಾಗಿದೆ. SFIO ತನ್ನ 160 ಪುಟಗಳ ದೂರಿನಲ್ಲಿ ಟಿ. ವೀಣಾ, ಸಿಎಂಆರ್ಎಲ್ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತಾ ಸೇರಿದಂತೆ 25 ಜನರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಿದೆ.
ಕಳೆದ ಏಪ್ರಿಲ್ 2025 ರಲ್ಲಿ, ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಅಕ್ರಮ ಪಾವತಿಗಳಿಗೆ ಸಂಬಂಧಿಸಿದಂತೆ ಟಿ. ವೀಣಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮೋದನೆ ನೀಡಿತ್ತು. ಪ್ರಸ್ತುತ ವೀಣಾ ಅವರ ಮೇಲೆ ಕಾರ್ಪೊರೇಟ್ ವಂಚನೆಗೆ ಸಂಬಂಧಿಸಿದ ಕಂಪನಿ ಕಾಯ್ದೆ 2013 ರ ಸೆಕ್ಷನ್ 447 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಈ ಅಪರಾಧ ಸಾಬೀತಾದರೆ ಕನಿಷ್ಠ ಆರು ತಿಂಗಳಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ವಂಚನೆಯ ಮೊತ್ತದ ಮೂರು ಪಟ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಈ ಹಗರಣದಲ್ಲಿ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ಹೆಸರನ್ನು ನೇರವಾಗಿ ಆರೋಪಿ ಎಂದು ಉಲ್ಲೇಖಿಸದಿದ್ದರೂ, ಅವರ ಮಗಳು ಮತ್ತು ಅಳಿಯ ಇಡಿ ತನಿಖೆಯ ವ್ಯಾಪ್ತಿಗೆ ಬಂದಿರುವುದು ಕೇರಳ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು, ಮೇ.27 : ರೋಗಿಗಳ ಪ್ರಾಣ ರಕ್ಷಿಸಬೇಕಾದ ಆಸ್ಪತ್ರೆಯಲ್ಲೇ ಮಹಿಳೆಯರ ಸುರಕ್ಷತೆಗೆ ಧಕ್ಕೆ ಬಂದಿರುವ ಅತ್ಯಂತ ಆಘಾತಕಾರಿ ಘಟನೆಯೊಂದು ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಸರ್ಜಾಪುರ ರಸ್ತೆಯಲ್ಲಿರುವ ಪ್ರಮುಖ ಖಾಸಗಿ ಆಸ್ಪತ್ರೆಯೊಂದರ ಶೌಚಾಲಯದಲ್ಲಿ (Restroom) ಗರ್ಭಿಣಿಯೊಬ್ಬರ ವಿಡಿಯೋ ಚಿತ್ರೀಕರಿಸಲು ಆಸ್ಪತ್ರೆ ಸಿಬ್ಬಂದಿಯೊಬ್ಬ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರು ನೀಡಿರುವ 36 ವರ್ಷದ ಮಹಿಳೆಯ ಹೇಳಿರುವ ಪ್ರಕಾರ, ಮೇ 21ರಂದು ಅವರು ಸರ್ಜಾಪುರ ರಸ್ತೆಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಅಲ್ಲಿನ ಶೌಚಾಲಯವನ್ನು ಬಳಸುತ್ತಿದ್ದಾಗ, ಆಸ್ಪತ್ರೆಯ ಸಿಬ್ಬಂದಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಾ ತನ್ನ ಮೊಬೈಲ್ ಫೋನ್ ಬಳಸಿ ಶೌಚಾಲಯದ ಒಳಗಿನ ದೃಶ್ಯಗಳನ್ನು ರಹಸ್ಯವಾಗಿ ವಿಡಿಯೋ ಮಾಡಲು ಯತ್ನಿಸುತ್ತಿರುವುದನ್ನು ಮಹಿಳೆ ಗಮನಿಸಿದ್ದಾರೆ.
ತಮ್ಮ ಖಾಸಗಿ ದೃಶ್ಯಗಳನ್ನು ಆತ ಕ್ಯಾಪ್ಚರ್ ಮಾಡಿರಬಹುದು ಎಂಬ ಅನುಮಾನದಿಂದ ಮಹಿಳೆ ಶೌಚಾಲಯದಿಂದ ಹೊರಬಂದು ಆತನನ್ನು ತಕ್ಷಣವೇ ಪ್ರಶ್ನಿಸಿದ್ದಾರೆ. ತಾನು ಸಿಕ್ಕಿಬಿದ್ದಿರುವುದನ್ನು ಅರಿತ ಆಸ್ಪತ್ರೆಯ ಸಿಬ್ಬಂದಿ ಸ್ಥಳದಿಂದ ತಕ್ಷಣವೇ ಕಾಲ್ಕಿತ್ತಿದ್ದಾನೆ ಎಂದು ಹೇಳಲಾಗಿದೆ. ದೂರಿನಲ್ಲಿ ಮಹಿಳೆ ತಾನು ಗರ್ಭಿಣಿಯಾಗಿದ್ದು, ಈ ಘಟನೆಯಿಂದ ತಮಗೆ ತೀವ್ರ ಮಾನಸಿಕ ಒತ್ತಡ, ಭಯ ಹಾಗೂ ಅಪಮಾನ ಉಂಟಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಕೃತ್ಯ ಎಸಗಿದ ಆರೋಪಿ ಹಾಗೂ ಈ ಬಗ್ಗೆ ಸೂಕ್ತ ಸುರಕ್ಷತೆ ವಹಿಸದ ಆಸ್ಪತ್ರೆಯ ಮ್ಯಾನೇಜ್ಮೆಂಟ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮಹಿಳೆಯ ದೂರಿನ ಅನ್ವಯ ವರ್ತೂರು ಪೊಲೀಸರು ಆರೋಪಿ ಸಿಬ್ಬಂದಿ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 77 (Voyeurism – ರಹಸ್ಯವಾಗಿ ವೀಕ್ಷಿಸುವುದು/ಚಿತ್ರೀಕರಿಸುವುದು), ಸೆಕ್ಷನ್ 79 (ಮಹಿಳೆಯ ಘನತೆಗೆ ಧಕ್ಕೆ ತರುವುದು), ಸೆಕ್ಷನ್ 62 (ಅಪರಾಧಕ್ಕೆ ಯತ್ನ) ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪ್ರಾಥಮಿಕ ತನಿಖೆಯ ವೇಳೆ ಆರೋಪಿಯ ಮೊಬೈಲ್ನಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋ ಪತ್ತೆಯಾಗಿಲ್ಲ. ಆದರೆ, ಆತ ದೃಶ್ಯಗಳನ್ನು ಡಿಲೀಟ್ ಮಾಡಿರುವ ಸಾಧ್ಯತೆ ಇರುವುದರಿಂದ ಮೊಬೈಲ್ ಅನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಆರೋಪಿ ಹಾಗೂ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವರ್ಷದ ಫೆಬ್ರವರಿ ತಿಂಗಳಲ್ಲೂ ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನ ಶೌಚಾಲಯದಲ್ಲಿ ಕ್ರಿಕೆಟ್ ಪಂದ್ಯಾವಳಿ ವೇಳೆ ಯಲಹಂಕ ಮೂಲದ ಮಹಿಳೆಯೊಬ್ಬರನ್ನು ರಹಸ್ಯವಾಗಿ ವಿಡಿಯೋ ಮಾಡಲಾಗಿತ್ತು. ನಂತರ ಅಪರಿಚಿತನೊಬ್ಬ ಇನ್ಸ್ಟಾಗ್ರಾಮ್ ಮೂಲಕ ಆ ವಿಡಿಯೋಗಳನ್ನು ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಘಟನೆ ನಡೆದಿತ್ತು. ಈ ಪ್ರಕರಣ ಕೂಡ ಸೈಬರ್ ಕ್ರೈಮ್ ಪೊಲೀಸರ ತನಿಖೆಯಲ್ಲಿದೆ. ಆಸ್ಪತ್ರೆ ಹಾಗೂ ಕ್ರೀಡಾಂಗಣಗಳಂತಹ ಸಾರ್ವಜನಿಕ ಸ್ಥಳಗಳಲ್ಲೇ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಮದುವೆ ಆಮಂತ್ರಣದಲ್ಲಿ ವಧು-ವರರ ಫೋಟೋ ಇರಬಹುದಾ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ವಧು-ವರರ ಫೋಟೋಗಳನ್ನು ಮುದ್ರಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಪ್ರವೃತ್ತಿಯಾಗಿದೆ. ಆದರೆ, ಇದು ಶುಭವೋ ಅಶುಭವೋ ಎಂಬ ಪ್ರಶ್ನೆಯ ಕುರಿತು ಒಂದು ವಿಡಿಯೋದಲ್ಲಿ ಚರ್ಚಿಸಲಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ, ಲಗ್ನ ಪತ್ರಿಕೆಗೆ ವಿಶೇಷ ಸ್ಥಾನವಿದೆ. ಇದನ್ನು ಪೂಜಿಸಿ ದೇವರಿಗೆ ಅರ್ಪಿಸಿದ ನಂತರವೇ ವಿತರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ವಧು-ವರರ ಫೋಟೋಗಳನ್ನು ಆಮಂತ್ರಣ ಪತ್ರಿಕೆಗಳಲ್ಲಿ ಅಳವಡಿಸುವುದು ಸಮಂಜಸವಲ್ಲ ಎಂದು ಹೇಳಲಾಗುತ್ತದೆ.
ಸಾಂಪ್ರದಾಯಿಕವಾಗಿ, ಆಮಂತ್ರಣ ಪತ್ರಿಕೆಗಳಲ್ಲಿ ಕುಲದೇವರು, ಇಷ್ಟದೇವರು ಅಥವಾ ಗಣಪತಿಯ ಫೋಟೋಗಳನ್ನು ಹಾಕುವ ಪದ್ಧತಿ ಇದೆ. ಆದರೆ ಜೀವಂತ ವ್ಯಕ್ತಿಗಳಾದ ವಧು-ವರರ ಫೋಟೋಗಳನ್ನು ಹಾಕುವುದರಿಂದ ದೃಷ್ಟಿ ದೋಷ, ಆರೋಗ್ಯ ಸಮಸ್ಯೆಗಳು, ಹಾಗೂ ವೈವಾಹಿಕ ಜೀವನದಲ್ಲಿ ಮನಸ್ತಾಪಗಳು ಉಂಟಾಗಬಹುದು ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ. ಅಲ್ಲದೆ, ಡಿಜಿಟಲ್ ಯುಗದ ಪ್ರಚಾರದ ಗೀಳಿಗೆ ಒಳಗಾಗಿ ಇಂತಹ ಬದಲಾವಣೆಗಳನ್ನು ಮಾಡುವುದರಿಂದ ಭವಿಷ್ಯದಲ್ಲಿ ತೊಂದರೆಗಳು ಎದುರಾಗಬಹುದು ಎಂದು ಎಚ್ಚರಿಸಲಾಗಿದೆ. ಮದುವೆಯ ನಂತರ ಆಮಂತ್ರಣ ಪತ್ರಿಕೆಗಳನ್ನು ಸಾಮಾನ್ಯವಾಗಿ ಕಸಕ್ಕೆ ಹಾಕುವ ಅಥವಾ ಸುಡುವ ಸಾಧ್ಯತೆ ಇರುವುದರಿಂದ, ವಧು-ವರರ ಫೋಟೋಗಳನ್ನು ಹಾಕುವುದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದಂತೆ ಎಂದು ಗುರೂಜಿ ತಿಳಿಸಿದ್ದಾರೆ.
ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಸರಣಿ ಎನಿಸಿಕೊಂಡಿರುವ ‘ದೃಶ್ಯಂ’ ಚಿತ್ರದ ಮೂರನೇ ಭಾಗ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಮಾಲಿವುಡ್ ಸೂಪರ್ಸ್ಟಾರ್ ಮೋಹನ್ಲಾಲ್ ನಟನೆಯ ‘ದೃಶ್ಯಂ 3’ (Drishyam 3) ಬಿಡುಗಡೆಯಾದ ಆರನೇ ದಿನವೂ ತನ್ನ ಪಾರುಪತ್ಯವನ್ನು ಮುಂದುವರಿಸಿದೆ. ವಾರದ ದಿನಗಳಲ್ಲಿ ಸಹಜವಾಗಿ ಕಲೆಕ್ಷನ್ನಲ್ಲಿ ಸ್ವಲ್ಪ ಕುಸಿತ ಕಂಡುಬಂದಿದ್ದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭದ್ರವಾದ ಹಿಡಿತ ಸಾಧಿಸಿದೆ.
ಆರನೇ ದಿನವಾದ ಮಂಗಳವಾರ (ಮೇ 26) ಈ ಚಿತ್ರ ಭಾರತದಾದ್ಯಂತ ಒಟ್ಟು 4,668 ಪ್ರದರ್ಶನಗಳನ್ನು ಕಂಡಿದ್ದು, ಬರೋಬ್ಬರಿ 6.45 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರೊಂದಿಗೆ ಆರು ದಿನಗಳಲ್ಲಿ ಚಿತ್ರದ ಒಟ್ಟು ಭಾರತದ ನೆಟ್ ಕಲೆಕ್ಷನ್ 68.60 ಕೋಟಿ ರೂಪಾಯಿ, ಗ್ರಾಸ್ ಕಲೆಕ್ಷನ್ 79.62 ಕೋಟಿ ರೂಪಾಯಿ ಆಗಿದೆ. ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾ ವೀಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಜಾಗತಿಕ ಮಟ್ಟದಲ್ಲಿ 170 ಕೋಟಿ ಕ್ಲಬ್ಗೆ ಲಗ್ಗೆ
ಕೇವಲ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಜಾರ್ಜ್ಕುಟ್ಟಿ ಮ್ಯಾಜಿಕ್ ಜೋರಾಗಿಯೇ ನಡೆದಿದೆ. 6ನೇ ದಿನ ವಿದೇಶಿ ಮಾರುಕಟ್ಟೆಯಿಂದಲೇ ಚಿತ್ರಕ್ಕೆ 6.00 ಕೋಟಿ ರೂಪಾಯಿ ಹರಿದುಬಂದಿದೆ. ಇದರೊಂದಿಗೆ ಸಿನಿಮಾ ಬಿಡುಗಡೆಯಾದ ಕೇವಲ ಆರೇ ದಿನಕ್ಕೆ ವಿದೇಶಿ ಮಾರುಕಟ್ಟೆಯ ಒಟ್ಟು ಗ್ರಾಸ್ ಗಳಿಕೆ 90.70 ಕೋಟಿ ರೂಪಾಯಿಗೆ ತಲುಪಿದೆ. ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ಕಲೆಕ್ಷನ್ ಆಗಿದೆ ಅನ್ನೋದು ವಿಶೇಷ.
ಭಾರತ ಹಾಗೂ ವಿದೇಶಿ ಕಲೆಕ್ಷನ್ ಎಲ್ಲವನ್ನೂ ಒಟ್ಟುಗೂಡಿಸಿದರೆ, ‘ದೃಶ್ಯಂ 3’ ಚಿತ್ರದ ವಿಶ್ವಾದ್ಯಂತ ಒಟ್ಟು ಜಾಗತಿಕ ಗ್ರಾಸ್ ಕಲೆಕ್ಷನ್ ಸದ್ಯ 170.32 ಕೋಟಿ ರೂಪಾಯಿ ತಲುಪಿದೆ. ಸಿನಿಮಾ ವಾರದ ದಿನಗಳಲ್ಲೂ ಇಷ್ಟೊಂದು ಭರ್ಜರಿ ಕಲೆಕ್ಷನ್ ಮಾಡುತ್ತಿರುವುದನ್ನು ನೋಡಿದರೆ, ಅತಿ ಶೀಘ್ರದಲ್ಲೇ 200 ಕೋಟಿ ರೂಪಾಯಿ ಕ್ಲಬ್ ಸೇರುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು. ಜಾರ್ಜ್ಕುಟ್ಟಿ ಈ ಬಾರಿ ಪೊಲೀಸರಿಂದ ಹೇಗೆ ಪಾರಾಗುತ್ತಾನೆ ಎಂಬ ಕುತೂಹಲವೇ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಲು ಪ್ರಮುಖ ಕಾರಣವಾಗಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ 19 ವರ್ಷಗಳಾಗಿವೆ. ಈ ಹತ್ತೊಂಬತ್ತು ವರ್ಷಗಳಲ್ಲಿ 19 ಬಾರಿ ಪ್ಲೇಆಫ್ ಪಂದ್ಯಗಳು ನಡೆದಿವೆ. ಈ ವೇಳೆ ಯಾವುದೇ ತಂಡಕ್ಕೂ ಸಾಧ್ಯವಾಗದಿರುವುದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಧಿಸಿ ತೋರಿಸಿದ್ದಾರೆ. ಅದು ಕೂಡ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ..! (PC: IPL)
ಧರ್ಮಶಾಲಾದ ಹೆಚ್ಪಿಸಿಎ ಮೈದಾನದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸಿಡಿಲಬ್ಬರದೊಂದಿಗೆ ಆರ್ಸಿಬಿ ಪಡೆ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 254 ರನ್ಗಳು. (PC: IPL)
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಪ್ಲೇಆಫ್ ಸುತ್ತಿನಲ್ಲಿ 250+ ರನ್ ಕಲೆಹಾಕಿದ ಮೊದಲ ತಂಡವೆಂಬ ಭರ್ಜರಿ ದಾಖಲೆಯನ್ನು ಆರ್ಸಿಬಿ ತಂಡ ತನ್ನದಾಗಿಸಿಕೊಂಡಿತು. ಅಂದರೆ ಐಪಿಎಲ್ ಪ್ಲೇಆಫ್ ಚರಿತ್ರೆಯಲ್ಲಿ ಯಾವುದೇ ತಂಡ 235 ಕ್ಕಿಂತ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. (PC: IPL)
ಈ ಹಿಂದೆ, ಅಂದರೆ 2023ರ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 233 ರನ್ ಬಾರಿಸಿದ್ದು ಈವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಇದೀಗ ಅದೇ ಗುಜರಾತ್ ಟೈಟಾನ್ಸ್ ವಿರುದ್ಧ ಅಬ್ಬರಿಸಿ ಆರ್ಸಿಬಿ ಹೊಸ ಇತಿಹಾಸ ನಿರ್ಮಿಸಿದೆ. (PC: IPL)
ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಪ್ಲೇಆಫ್ ಸುತ್ತಿನಲ್ಲಿ 250+ ಸ್ಕೋರ್ಗಳಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಹಾಗೆಯೇ ಈ ಪಂದ್ಯದಲ್ಲಿ 92 ರನ್ಗಳ ಭರ್ಜರಿ ಜಯ ಸಾಧಿಸಿ ಪ್ಲೇಆಫ್ನಲ್ಲಿ (ನಾಕೌಟ್ ಅಲ್ಲದೇ) ಅತೀ ಹೆಚ್ಚು ರನ್ಗಳ ಅಂತರದಿಂದ ಗೆದ್ದ ಟೀಮ್ ಎಂಬ ಅಮೋಘ ದಾಖಲೆಯನ್ನು ಕೂಡ ಆರ್ಸಿಬಿ ನಿರ್ಮಿಸಿದೆ. ಈ ಮೂಲಕ ಗರಿಷ್ಠ ಸ್ಕೋರ್ ಹಾಗೂ ಗರಿಷ್ಠ ರನ್ಗಳ ವಿಜಯದೊಂದಿಗೆ ಆರ್ಸಿಬಿ ಪ್ಲೇಆಫ್ನಲ್ಲಿ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ. (PC: IPL)
ಸ್ತ್ರೀ ಜಾತಕದಲ್ಲಿನ ಗ್ರಹಗಳ ಪ್ರಭಾವ, ಮಹಿಳೆಯರ ವ್ಯಕ್ತಿತ್ವ ಹಾಗೂ ಅದೃಷ್ಟದ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗೃಹಿಣಿಯು ಒಂದು ಕುಟುಂಬದ ಕಣ್ಣಾಗಿರುತ್ತಾಳೆ. ಆಕೆಯ ಬಲವು ಇಡೀ ಕುಟುಂಬದ ಭವಿಷ್ಯವನ್ನು ರೂಪಿಸುತ್ತದೆ. ನಮ್ಮ ಪೂರ್ವಿಕರು ಮಹಿಳೆಯರು ಹೊಂದಿರಬೇಕಾದ ಆರು ಪ್ರಮುಖ ಗುಣಗಳನ್ನು ಈ ಶ್ಲೋಕದ ಮೂಲಕ ವಿವರಿಸಿದ್ದಾರೆ: “ಕಾರ್ಯೇಶು ದಾಸಿ ಕರುಣೇಶು ಮಂತ್ರಿ ಪೂಜ್ಯೇಶು ಮಾತ ರೂಪೇಶು ಲಕ್ಷ್ಮಿ ಕ್ಷಮಯ ದರಿತ್ರಿ ಶಯನೇಶು ರಂಬ.” ಈ ಪ್ರತಿಯೊಂದು ಗುಣಕ್ಕೂ ಜಾತಕದಲ್ಲಿನ ಒಂದು ನಿರ್ದಿಷ್ಟ ಗ್ರಹದ ಬಲ ಪ್ರಮುಖ ಕಾರಣವಾಗುತ್ತದೆ.
ಗುರೂಜಿಯವರು ಹೇಳಯವಂತೆ,ಕಾರ್ಯೇಶು ದಾಸಿ ಎಂಬುದು ಕೆಲಸಗಳಲ್ಲಿ ಶ್ರದ್ಧೆ ಮತ್ತು ತಾಳ್ಮೆಯನ್ನು ಸೂಚಿಸುತ್ತದೆ. ಶನಿ ಗ್ರಹದ ಅನುಗ್ರಹ ಚೆನ್ನಾಗಿದ್ದಾಗ ಮಹಿಳೆಯು ತಾಳ್ಮೆಯಿಂದ, ನಿಧಾನವಾಗಿ ಮತ್ತು ವ್ಯವಸ್ಥಿತವಾಗಿ ಎಲ್ಲ ಕಾರ್ಯಗಳನ್ನು ನಿಭಾಯಿಸುವ ಶಕ್ತಿಯನ್ನು ಪಡೆಯುತ್ತಾಳೆ. ಇದು ಕುಟುಂಬದ ನಿರ್ವಹಣೆಗೆ ಅವಶ್ಯಕವಾದ ಗುಣ.
ಕರುಣೇಶು ಮಂತ್ರಿ ಎಂದರೆ ದಯೆ ಮತ್ತು ಮಂತ್ರಿಯಂತಹ ಬುದ್ಧಿವಂತಿಕೆ. ಗುರು ಗ್ರಹದ ಬಲವಿರುವ ಮಹಿಳೆಯು ಕರುಣಾಮಯಿಯಾಗಿರುತ್ತಾಳೆ, ಅತಿಥಿ ಸತ್ಕಾರದಲ್ಲಿ ನಿಪುಣಳಾಗಿರುತ್ತಾಳೆ ಮತ್ತು ಯಾವುದೇ ದರ್ಪವಿಲ್ಲದೆ ಎಲ್ಲರೊಂದಿಗೂ ಬೆರೆಯುತ್ತಾಳೆ. ಗುರುಗಳ ಆಶೀರ್ವಾದವಿರುವವರಿಗೆ ಈ ಗುಣ ಸಹಜವಾಗಿ ಬರುತ್ತದೆ.
ಪೂಜ್ಯೇಶು ಮಾತ ಎಂಬುದು ತಾಯಿಯಂತಹ ಪೋಷಣೆ ಮತ್ತು ಪಾಲನೆಯ ಗುಣ. ಚಂದ್ರನ ಬಲ ಚೆನ್ನಾಗಿದ್ದಾಗ ಮಹಿಳೆಯು ಕೋಪತಾಪಗಳಿಲ್ಲದೆ ಮಕ್ಕಳನ್ನು ಪೋಷಿಸುತ್ತಾಳೆ, ಮನೆಗೆ ಸಂಬಂಧಿಸಿದ ವಿಷಯಗಳಲ್ಲಿ ತಾಳ್ಮೆಯಿಂದ ವರ್ತಿಸುತ್ತಾಳೆ. ಚಂದ್ರನ ಅನುಗ್ರಹದಿಂದ ಮನೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುತ್ತದೆ.
ರೂಪೇಶು ಲಕ್ಷ್ಮಿ ಎಂದರೆ ಮಹಾಲಕ್ಷ್ಮಿಯಂತೆ ಕಾಣಿಸುವುದು. ಶುಕ್ರನ ಬಲ ಹೆಚ್ಚಾಗಿದ್ದಾಗ ಮಹಿಳೆಯು ಸೌಂದರ್ಯ, ಅಲಂಕಾರ, ನಗುಮೊಗ ಮತ್ತು ಪೂಜ್ಯಭಾವನೆಗಳನ್ನು ಹೊಂದುತ್ತಾಳೆ. ನಿಜವಾದ ಕುಂಕುಮ ಧರಿಸಿ, ಸಾಕ್ಷಾತ್ ದೇವಿಯ ಸ್ವರೂಪಿಣಿಯಂತೆ ಕಾಣಿಸುತ್ತಾಳೆ. ಶುಕ್ರನ ಅನುಗ್ರಹವು ಆಕರ್ಷಕ ವ್ಯಕ್ತಿತ್ವವನ್ನು ನೀಡುತ್ತದೆ.
ಕ್ಷಮಯ ದರಿತ್ರಿ ಎಂದರೆ ಭೂಮಿಯಂತಹ ಕ್ಷಮಾಗುಣ. ಕುಜನ ಬಲ ಚೆನ್ನಾಗಿದ್ದಾಗ ಮಹಿಳೆಯು ಯಾವುದೇ ಪರಿಸ್ಥಿತಿಯಲ್ಲೂ ತಾಳ್ಮೆ ಮತ್ತು ಕ್ಷಮೆಯಿಂದ ವರ್ತಿಸುತ್ತಾಳೆ. ವಿಶೇಷವಾಗಿ ಒಟ್ಟು ಕುಟುಂಬದಲ್ಲಿ ಎಲ್ಲವನ್ನು ನಿಭಾಯಿಸಲು ಈ ಗುಣ ಅತ್ಯಂತ ಅವಶ್ಯಕ.
ಶಯನೇಶು ರಂಬ ಎಂಬುದು ಗಂಡನ ಆರೈಕೆ ಮತ್ತು ಗೌರವವನ್ನು ಸೂಚಿಸುತ್ತದೆ. ರವಿ ಗ್ರಹದ ಬಲವಿರುವ ಮಹಿಳೆಯು ತನ್ನ ಪತಿಯ ಬಗ್ಗೆ ಪೂಜ್ಯಭಾವನೆ, ವಿನಯ ಮತ್ತು ವಿಧೇಯತೆಯನ್ನು ಪ್ರದರ್ಶಿಸುತ್ತಾಳೆ. ರವಿ ಬಲವಿರುವವರು ಅಧಿಕಾರಿಗಳಾಗುವ, ರಾಜಕೀಯದಲ್ಲಿ ಯಶಸ್ವಿಯಾಗುವ ಸಾಧ್ಯತೆಗಳನ್ನೂ ಹೊಂದಿರುತ್ತಾರೆ.
ಇದಲ್ಲದೆ, ಬುಧ ಗ್ರಹದ ಅನುಗ್ರಹ ಚೆನ್ನಾಗಿದ್ದಾಗ ಮಹಿಳೆಯು ಶಿಕ್ಷಕಿಯಾಗಿ, ಉಪನ್ಯಾಸಕಿಯಾಗಿ ಅಥವಾ ಯಾವುದೇ ವೃತ್ತಿಯಲ್ಲಿಯೂ ಯಶಸ್ಸು ಸಾಧಿಸುತ್ತಾಳೆ. ಬುದ್ಧಿವಂತಿಕೆಯಿಂದ ಕುಟುಂಬವನ್ನು ನಿರ್ವಹಿಸುವ, ಸಂಸಾರದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಇದು ನೀಡುತ್ತದೆ.
ಒಟ್ಟಾರೆಯಾಗಿ, ಮನೆಯಲ್ಲಿ ಯಜಮಾನನಿಗಿಂತ ಮಡದಿಗೆ ನವಗ್ರಹಗಳ ಅಂಶ ಚೆನ್ನಾಗಿದ್ದರೆ ಆ ಮನೆ ಸುಭಿಕ್ಷವಾಗಿರುತ್ತದೆ ಮತ್ತು ಕ್ಷೇಮವಾಗಿರುತ್ತದೆ. ಮಹಿಳೆಯು ಗಂಡನ ಬೆಂಬಲವಿಲ್ಲದೆಯೂ ಮಕ್ಕಳನ್ನು ಸಾಕಿ ಸಲಹುವಲ್ಲಿ ಸಫಲಳಾಗುತ್ತಾಳೆ ಎಂಬುದು ಈ ಗ್ರಹಬಲಗಳ ಪ್ರಭಾವದಿಂದಲೇ. ಈ ಗುಣಗಳನ್ನು ಯಾರಿಗೆ ಬೇಕು, ಅವರು ಆಯಾ ಗ್ರಹಗಳನ್ನು ಪೂಜಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಂದು ‘ಅಧಿಕ ಮಾಸ’ದ ಪದ್ಮಿನಿ ಏಕಾದಶಿImage Credit source: Pinterest
ಪದ್ಮಿನಿ ಏಕಾದಶಿಯು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ವಿಶೇಷವಾದ ಏಕಾದಶಿಗಳಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ‘ಅಧಿಕ ಮಾಸ‘ದ ಶುಕ್ಲ ಪಕ್ಷದ ಸಮಯದಲ್ಲಿ ಬರುತ್ತದೆ. ಈ ಅಪರೂಪದ ಏಕಾದಶಿಯನ್ನು ಕಮಲ ಏಕಾದಶಿ ಮತ್ತು ಪುರುಷೋತ್ತಮ ಏಕಾದಶಿ ಎಂದೂ ಭಕ್ತಿಯಿಂದ ಕರೆಯಲಾಗುತ್ತದೆ. ಶ್ರೀಮನ್ನಾರಾಯಣನಿಗೆ ಅತ್ಯಂತ ಪ್ರಿಯವಾದ ಈ ದಿನದಂದು ಉಪವಾಸ ಮತ್ತು ವಿಶೇಷ ಪೂಜೆ ಮಾಡುವುದರಿಂದ ಜೀವನದಲ್ಲಿ ಹಲವು ಪಟ್ಟು ಸತ್ಫಲಗಳು ಸಿಗುತ್ತವೆ ಎಂದು ಪುರಾಣಗಳು ಹೇಳುತ್ತವೆ. ಈ ಬಾರಿ, ಅಧಿಕ ಜ್ಯೇಷ್ಠ ಮಾಸದ ಮೇ 27 ರಂದು ಪದ್ಮಿನಿ ಏಕಾದಶಿ ಬಂದಿದ್ದು, ಭಕ್ತರು ಈ ದಿನವನ್ನು ಅಪಾರ ಭಕ್ತಿ-ಶ್ರದ್ಧೆಗಳಿಂದ ಆಚರಿಸುತ್ತಾರೆ.
ಪದ್ಮಿನಿ ಏಕಾದಶಿಯ ವಿಶೇಷತೆ ಮತ್ತು ಮಹತ್ವ:
ಪ್ರತಿ ತಿಂಗಳು ಎರಡು ಏಕಾದಶಿಗಳು ಬರುವುದು ಸಾಮಾನ್ಯ. ಆದರೆ ಅಧಿಕ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿಗೆ ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕವಾಗಿ ವಿಶಿಷ್ಟ ಸ್ಥಾನವಿದೆ. ಈ ಇಡೀ ಮಾಸವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದ್ದು, ಇದನ್ನು ‘ಪುರುಷೋತ್ತಮ ಮಾಸ’ ಎಂದು ಕರೆಯಲಾಗುತ್ತದೆ. ಆದ್ದರಿಂದಲೇ ಈ ದಿನಕ್ಕೆ ಪುರುಷೋತ್ತಮ ಏಕಾದಶಿ ಎಂಬ ಹೆಸರು ಬಂದಿದೆ.
ವ್ರತದ ಫಲ:
ಪದ್ಮಿನಿ ಏಕಾದಶಿಯ ದಿನದಂದು ಉಪವಾಸ ಹಾಗೂ ಆರಾಧನೆ ಮಾಡುವುದರಿಂದ ಹಿಂದಿನ ಜನ್ಮಗಳ ಪಾಪಗಳು ಪರಿಹಾರವಾಗುತ್ತವೆ. ಮನಸ್ಸಿಗೆ ಆಧ್ಯಾತ್ಮಿಕ ಶಾಂತಿ ಸಿಗುವುದರ ಜೊತೆಗೆ ಉತ್ತಮ ಸಂತಾನ, ಸಂಪತ್ತು ಮತ್ತು ಯಶಸ್ಸು ಲಭಿಸುತ್ತದೆ ಎಂಬುದು ಭಕ್ತರ ದೃಢ ನಂಬಿಕೆ.
ಪದ್ಮಿನಿ ಏಕಾದಶಿ ಪೂಜಾ ವಿಧಾನ:
ಈ ಪವಿತ್ರ ದಿನದಂದು ವಿಷ್ಣುವನ್ನು ಆರಾಧಿಸಲು ಶಾಸ್ತ್ರೋಕ್ತವಾದ ಕೆಲವು ನಿಯಮಗಳಿವೆ. ಭಕ್ತರು ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ ಮಾಡಬೇಕು. ಸಾಧ್ಯವಾದರೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಅತ್ಯಂತ ಶುಭ ತರುತ್ತದೆ. ಸ್ನಾನದ ನಂತರ, ಇಡೀ ದಿನ ಯಾವುದೇ ಆಹಾರವನ್ನು ಸೇವಿಸದೆ ಭಕ್ತಿಯಿಂದ ಉಪವಾಸ (ವ್ರತ) ಮಾಡಲು ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿಕೊಳ್ಳಬೇಕು. ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ, ಮಾವಿನ ಎಲೆಗಳ ತೋರಣಗಳಿಂದ ಅಲಂಕರಿಸಬೇಕು. ಒಂದು ಮರದ ಪೀಠದ ಮೇಲೆ ಅರಿಶಿನ ಮತ್ತು ಕುಂಕುಮದಿಂದ ಮಂಡಲ ಬರೆದು, ಅದರ ಮೇಲೆ ವಿಷ್ಣುವಿನ ಚಿತ್ರ ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ತಾಮ್ರ ಅಥವಾ ಬೆಳ್ಳಿಯ ಪಾತ್ರೆಯಲ್ಲಿ ಶುದ್ಧವಾದ ನೀರನ್ನು ತುಂಬಿಸಿ ಕಲಶವನ್ನು ಸಿದ್ಧಪಡಿಸಬೇಕು. ನಂತರ ತೆಂಗಿನಕಾಯಿಗೆ ಹೊಸ ಬಟ್ಟೆಯನ್ನು ಸುತ್ತಿ ಆ ಕಲಶದ ಮೇಲಿಡಬೇಕು.
ಶ್ರೀಹರಿಯ ಅಲಂಕಾರ ಮತ್ತು ಮಂತ್ರ ಪಠಣ:
ಶ್ರೀಮನ್ನಾರಾಯಣನನ್ನು ಅಲಂಕಾರ ಪ್ರಿಯನೆಂದು ಕರೆಯಲಾಗುತ್ತದೆ. ಆದ್ದರಿಂದ ದೇವರಿಗೆ ತುಳಸಿ ದಳಗಳು, ಹಳದಿ ಹೂವುಗಳು ಮತ್ತು ಕಮಲದ ಹೂವುಗಳಿಂದ ಆಕರ್ಷಕವಾಗಿ ಅಲಂಕಾರ ಮಾಡಬೇಕು.
ಹಸುವಿನ ಶುದ್ಧ ತುಪ್ಪದಿಂದ ದೀಪವನ್ನು ಹಚ್ಚಿ ಪೂಜಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
ಪೂಜೆಯ ಸಮಯದಲ್ಲಿ ವಿಷ್ಣು ಸಹಸ್ರನಾಮ, ಅಷ್ಟೋತ್ತರ ಶತನಾಮಾವಳಿ ಮತ್ತು ವಿಷ್ಣು ಸ್ತೋತ್ರಗಳನ್ನು ಭಕ್ತಿಯಿಂದ ಪಠಿಸುವುದು ಶ್ರೇಷ್ಠ.
ದೇವರಿಗೆ ಬಾಳೆಹಣ್ಣು ಮತ್ತು ತೆಂಗಿನಕಾಯಿ ಸೇರಿದಂತೆ ವಿವಿಧ ನೈವೇದ್ಯಗಳನ್ನು ಅರ್ಪಿಸಿ ಮಹಾಮಂಗಳಾರತಿ ಮಾಡಬೇಕು.
ಸಂಜೆ ಜೀವರಾಶಿಗಳು ವಿಶ್ರಮಿಸುವ ಸಮಯದಲ್ಲಿ ಹತ್ತಿರದ ವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ತುಳಸಿ ಮಾಲೆಗಳನ್ನು ಅರ್ಪಿಸುವುದು ಶುಭ ತರುತ್ತದೆ.
ರಾತ್ರಿಯಿಡೀ ಭಗವಂತನ ನಾಮಸ್ಮರಣೆ, ಭಜನೆ ಮತ್ತು ಕೀರ್ತನೆಗಳೊಂದಿಗೆ ಜಾಗರಣೆ ಮಾಡುವುದರಿಂದ ಉಪವಾಸ ವ್ರತಕ್ಕೆ ಪರಿಪೂರ್ಣ ಪುಣ್ಯ ಸಿಗುತ್ತದೆ.
ಏಕಾದಶಿಯ ಮರುದಿನ ಅಂದರೆ ಹನ್ನೆರಡನೇ ದಿನ (ದ್ವಾದಶಿ) ಬೆಳಿಗ್ಗೆ ವ್ರತವನ್ನು ಮುಗಿಸಬೇಕು. ಈ ದಿನವೂ ಮುಂಜಾನೆ ಎದ್ದು ವಿಷ್ಣುವಿಗೆ ವಿಶೇಷ ನೈವೇದ್ಯವನ್ನು ಅರ್ಪಿಸಬೇಕು. ನಂತರ ಸತ್ಪಾತ್ರರಾದ ಬ್ರಾಹ್ಮಣರಿಗೆ ಅಥವಾ ದೀನದಲಿತರಿಗೆ ಭೋಜನ ಮಾಡಿಸಿ, ದಕ್ಷಿಣೆ-ದಾನಗಳನ್ನು ನೀಡಬೇಕು. ಈ ಧರ್ಮಕಾರ್ಯಗಳ ನಂತರ ಭಕ್ತರು ತಾವೂ ಪ್ರಸಾದವನ್ನು ಸ್ವೀಕರಿಸಿ ಉಪವಾಸವನ್ನು ಕೊನೆಗೊಳಿಸಬೇಕು (ಪಾರಣೆ ಮಾಡಬೇಕು).
ಪದ್ಮಿನಿ ಏಕಾದಶಿ ವ್ರತದ ಪೌರಾಣಿಕ ಕಥೆ:
ಪುರಾಣಗಳ ಪ್ರಕಾರ, ತ್ರೇತಾಯುಗದಲ್ಲಿ ಒಬ್ಬ ಪ್ರತಾಪಶಾಲಿ ರಾಜನಿದ್ದನು. ಆದರೆ ಅವನಿಗೆ ಮಕ್ಕಳಿಲ್ಲದ ಕಾರಣ ಆತ ಮತ್ತು ಆತನ ರಾಣಿ ತೀವ್ರ ದುಃಖಿತರಾಗಿದ್ದರು. ಆಗ ಅನಸೂಯಾ ದೇವಿಯು ರಾಣಿಗೆ ಈ ಪದ್ಮಿನಿ ಏಕಾದಶಿ ವ್ರತದ ಮಹಿಮೆಯನ್ನು ತಿಳಿಸಿ, ಅದನ್ನು ಆಚರಿಸಲು ಸಲಹೆ ನೀಡಿದಳು. ರಾಣಿ ಪದ್ಮಿನಿಯು ದೇವಿಯ ಮಾರ್ಗದರ್ಶನದಂತೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ಈ ಏಕಾದಶಿ ಉಪವಾಸವನ್ನು ಆಚರಿಸಿದಳು. ಅವಳ ನಿಷ್ಕಲ್ಮಶ ಭಕ್ತಿಗೆ ಮೆಚ್ಚಿದ ಭಗವಾನ್ ವಿಷ್ಣುವು ಅವಳ ಸನ್ಮುಖದಲ್ಲಿ ಪ್ರತ್ಯಕ್ಷನಾಗಿ ವರವನ್ನು ನೀಡಿದನು. ಆ ವರದ ಪ್ರಸಾದವಾಗಿ ರಾಣಿಗೆ ಒಬ್ಬ ಮಹಾನ್ ಪರಾಕ್ರಮಿ ಮಗ ಜನಿಸಿದನು. ಆತನೇ ಮುಂದೆ ಜಗತ್ಪ್ರಸಿದ್ಧ ಯೋಧ ಕಾರ್ತವೀರ್ಯ ಅರ್ಜುನ ಎಂದು ಖ್ಯಾತನಾದನು ಎಂದು ಪುರಾಣಗಳು ವಿವರಿಸುತ್ತವೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶನಿ ರೇವತಿ ನಕ್ಷತ್ರ ಪ್ರವೇಶImage Credit source: Pinterest
ಕರ್ಮಕಾರಕ ಹಾಗೂ ನ್ಯಾಯಾಧೀಶರೆನಿಸಿರುವ ಶನಿ ಭಗವಾನರ ಸಂಚಾರದ ಕುರಿತು ಇಡೀ ಬ್ರಹ್ಮಾಂಡವೇ ಗಮನ ಹರಿಸುತ್ತದೆ. ಅಷ್ಟಮ ಶನಿ, ಅರ್ಧಾಷ್ಟಮ ಶನಿ, ಸಾಡೆಸಾತಿ ಅಥವಾ ಪಂಚಮ ಶನಿ ಯಾವುದೇ ಇರಲಿ, ಶನಿಯ ದೃಷ್ಟಿ ಮತ್ತು ಸ್ಥಾನ ಪ್ರತಿಯೊಬ್ಬರ ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಪ್ರಸ್ತುತ ಸ್ಥಿತಿಯಲ್ಲಿ ಶನಿ ಭಗವಾನರು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಮೇಷ ರಾಶಿಯವರಿಗೆ ಸಾಡೆಸಾತಿ, ಮೀನ ರಾಶಿಯವರಿಗೆ ಗರ್ಭ ಸಾಡೆಸಾತಿ ಹಾಗೂ ಕುಂಭ ರಾಶಿಯವರಿಗೆ ಕಟ್ಟಕಡೆಯ ಸಾಡೆಸಾತಿ ನಡೆಯುತ್ತಿದೆ.
ಶನಿ ಭಗವಾನರು 2026ರ ಮೇ 17ರಂದು ಮಧ್ಯಾಹ್ನ 3 ಗಂಟೆ 49 ನಿಮಿಷಕ್ಕೆ ರೇವತಿ ನಕ್ಷತ್ರ ಪ್ರವೇಶ ಮಾಡಿದ್ದಾರೆ. ರೇವತಿ ನಕ್ಷತ್ರವು ಬುಧನ ನಕ್ಷತ್ರವಾಗಿದೆ. ಆಶ್ಲೇಷ, ರೇವತಿ, ಜೇಷ್ಠ ನಕ್ಷತ್ರಗಳು ಬುಧನ ನಕ್ಷತ್ರಗಳಾಗಿವೆ. ಈ ರೇವತಿ ನಕ್ಷತ್ರದಲ್ಲಿ ಶನಿಯ ಸಂಚಾರವು ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಶನಿ ಭಗವಾನರು 2026ರ ಜುಲೈ 27ರಂದು ವಕ್ರಿ ಆಗುತ್ತಾರೆ. ನಂತರ ಅಕ್ಟೋಬರ್ 9 ರಂದು ಉತ್ತರಾಭಾದ್ರಕ್ಕೆ ಬರುತ್ತಾರೆ. ಬಳಿಕ ಫೆಬ್ರವರಿ 8ರಂದು ಮತ್ತೆ ರೇವತಿಗೆ ಹಿಂತಿರುಗಿ, ಜೂನ್ 3ರಂದು ಮೀನಾ ರಾಶಿಯನ್ನು ಸಂಪೂರ್ಣವಾಗಿ ಬಿಟ್ಟು ಮೇಷ ರಾಶಿಗೆ ಪ್ರವೇಶಿಸುತ್ತಾರೆ.
ದ್ವಾದಶ ರಾಶಿಗಳ ಮೇಲೆ ರೇವತಿ ನಕ್ಷತ್ರದಲ್ಲಿ ಶನಿಯ ಪ್ರಭಾವ:
ಮೇಷ ರಾಶಿ: ಇದು 12ನೇ ಮನೆಯಾಗಿದ್ದು, ಕಾರ್ಯಗಳಲ್ಲಿ ನಿಧಾನ ಗತಿ ಇರುತ್ತದೆ. ಅತಿ ಬುದ್ಧಿಯನ್ನು ಉಪಯೋಗಿಸಬೇಕಾಗುತ್ತದೆ. ಮನೆಯಲ್ಲಿ ಕುಳಿತುಕೊಂಡರೆ ನಷ್ಟವಾಗಬಹುದು. ಪ್ರಯತ್ನಕ್ಕೆ ತಕ್ಕ ಫಲ ನಿರೀಕ್ಷಿಸಬಹುದು. ದಶಾಭುಕ್ತಿಗಳಿಗೆ ಅನುಗುಣವಾಗಿ ಸಾಡೆಸಾತಿಯ ಮೊದಲ ಭಾಗದಲ್ಲಿ ಲಾಭ, ನಷ್ಟ ಅಥವಾ ಮಧ್ಯಮ ಫಲ ಇರುತ್ತದೆ.
ವೃಷಭ ರಾಶಿ: ರೇವತಿ ನಕ್ಷತ್ರದಿಂದ ಅದೃಷ್ಟವೇ ಅದೃಷ್ಟ. ಎಲ್ಲವೂ ಶುಭಕರವಾಗಿರುತ್ತದೆ.
ಮಿಥುನ ರಾಶಿ: ವೃತ್ತಿಯಲ್ಲಿ ಬಡ್ತಿ ದೊರೆಯುತ್ತದೆ. ಕೆಲಸ ಕಾರ್ಯಗಳನ್ನು ಬದಲಾಯಿಸಿಕೊಳ್ಳುವ ಸಾಧ್ಯತೆ ಇದೆ. ಶುಭ ಫಲಗಳನ್ನು ಕಾಣುವಿರಿ.
ಕರ್ಕಾಟಕ ರಾಶಿ: ಆಸ್ತಿ ಕಲಹ ನಿವಾರಣೆಯಾಗಿ ತಂದೆ-ತಾಯಿ ಅಥವಾ ಪೂರ್ವಿಕರ ಆಸ್ತಿಯ ವಿಚಾರದಲ್ಲಿ ಶುಭವಾಗುತ್ತದೆ. ಉನ್ನತ ಶಿಕ್ಷಣಕ್ಕೆ ಉತ್ತಮ ಸಮಯ. ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ ಮತ್ತು ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವಿರಿ.
ಸಿಂಹ ರಾಶಿ: ಅಷ್ಟಮ ಶನಿಯಿಂದ ಚೇತರಿಸಿಕೊಳ್ಳುವ ಕಾಲವಿದು. ಗುರು ದೃಷ್ಟಿ ಇರುವುದರಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ಶುಭ. ಕೀರ್ತಿ ಪ್ರತಿಷ್ಠೆಗಳು ಹೆಚ್ಚುತ್ತವೆ. ಧರ್ಮ ಕಾರ್ಯಗಳಲ್ಲಿ ಭಾಗವಹಿಸುವಿರಿ. ನಂಬಿಕೆ ಗಟ್ಟಿಯಾಗಿಟ್ಟುಕೊಳ್ಳಿ.
ಕನ್ಯಾ ರಾಶಿ: ಸಪ್ತಮ ಸ್ಥಾನದಲ್ಲಿ ರೇವತಿ ನಕ್ಷತ್ರದಲ್ಲಿ ಶನಿ ಸಂಚಾರದಿಂದ ವಿವಾಹ ವಿಷಯಗಳಲ್ಲಿ ಶುಭವಾಗುತ್ತದೆ. ಒಳ್ಳೆಯ ಸ್ನೇಹಿತರು ಸಿಗುತ್ತಾರೆ. ಅತಿಯಾದ ಹೂಡಿಕೆ ಶುಭಕರವಲ್ಲ.
ತುಲಾ ರಾಶಿ: ಶಷ್ಟ ಸ್ಥಾನ, ರೋಗ ಸ್ಥಾನ, ಋಣ ಸ್ಥಾನದಲ್ಲಿ ಶನಿ ಸಂಚಾರ ಮಾಡುತ್ತಿದ್ದರೂ, ರೇವತಿ ನಕ್ಷತ್ರಕ್ಕೆ ಬಂದಾಗ ಅತ್ಯಂತ ಶುಭ ಕಾಲ. ಋಣಮುಕ್ತರಾಗುತ್ತೀರಿ. ಕಾನೂನು ವಿಷಯಗಳಲ್ಲಿ ಮತ್ತು ಭೂಮಿಯಿಂದ ಲಾಭ.
ವೃಶ್ಚಿಕ ರಾಶಿ: ಪಂಚಮ ಸ್ಥಾನದಲ್ಲಿರುವುದರಿಂದ ಮಕ್ಕಳಿಂದ ಶುಭವಾಗುತ್ತದೆ. ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಅವರೊಂದಿಗೆ ಅನ್ಯೋನ್ಯತೆ ಇರುತ್ತದೆ. ಆರೋಗ್ಯದಲ್ಲಿ ಚೇತರಿಕೆ.
ಧನು ರಾಶಿ: ಚತುರ್ಥ ಸ್ಥಾನದಲ್ಲಿ ಮನೆ ಯೋಗವಿರುತ್ತದೆ. ತಂದೆ-ತಾಯಿ ಅಥವಾ ತಾಯಿಯ ಆಶೀರ್ವಾದ ಪರಿಪೂರ್ಣವಾಗಿ ದೊರೆಯುತ್ತದೆ. ವಾಹನ ಖರೀದಿ, ವಿದ್ಯೆಯಲ್ಲಿ ಯಶಸ್ಸು, ಜವಾಬ್ದಾರಿ ಹೆಚ್ಚಳ ಮತ್ತು ಹಿರಿಯರ ಆಶೀರ್ವಾದ ಸಿಗುತ್ತದೆ.
ಮಕರ ರಾಶಿ: ಡಬಲ್ ಧಮಾಕ. ಬಹಳಷ್ಟು ಅದೃಷ್ಟವಿರುತ್ತದೆ. ಸಂಬಂಧಗಳು ಸುಧಾರಿಸುತ್ತವೆ. ವಿವಾಹ ವಿಷಯಗಳಲ್ಲಿ ಶುಭ. ಧೈರ್ಯ ಹೆಚ್ಚುತ್ತದೆ. ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವಿರಿ. ಅಧಿಕಾರ ಪ್ರಾಪ್ತಿ ಸಾಧ್ಯತೆ ಇದೆ.
ಕುಂಭ ರಾಶಿ: ದ್ವಿತೀಯ ಸ್ಥಾನದಲ್ಲಿ ಮಾರ್ಕೆಟಿಂಗ್ ಮತ್ತು ವ್ಯಾಪಾರದಲ್ಲಿ ಉತ್ತಮ. ಒಳ್ಳೆಯ ಅವಕಾಶಗಳು ಸಿಗುತ್ತವೆ. ವಿದೇಶ ಪ್ರಯಾಣ ಸಾಧ್ಯತೆ. ಗಂಡ-ಹೆಂಡತಿಯರ ಅನ್ಯೋನ್ಯತೆ ಹೆಚ್ಚುತ್ತದೆ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
ಮೀನ ರಾಶಿ: ಜನ್ಮ ರಾಶಿಯಲ್ಲೇ ರೇವತಿ ನಕ್ಷತ್ರ. ಶನಿ, ಬುಧ ಮತ್ತು ಗುರು ಕಾಂಬಿನೇಶನ್ನಿಂದ ಭಾವನಾತ್ಮಕ ಸನ್ನಿವೇಶಗಳು, ಒಳ್ಳೆಯ ವಾತಾವರಣ, ಮಾನಸಿಕ ತೃಪ್ತಿ ಮತ್ತು ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಒಳ್ಳೆಯದು. ಹಣಕಾಸು ಹರಿವು ಇರುತ್ತದೆ. ಮಾನಸಿಕ ಚಿಂತನೆಗಳನ್ನು ಧನಾತ್ಮಕವಾಗಿ ಮಾಡಿಕೊಳ್ಳಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಆರ್ಸಿಬಿ ತಂಡ ಫೈನಲ್ಗೇರಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಕಲೆಹಾಕಿದ್ದು ಬರೋಬ್ಬರಿ 254 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್ಗಳಲ್ಲಿ 162 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆರ್ಸಿಬಿ 92 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಇದು ನಮಗೆ ಸೂಪರ್ ಪಂದ್ಯವಾಗಿತ್ತು. ವಿಶೇಷವಾಗಿ ಈ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ಪ್ರಾಬಲ್ಯ ಸಾಧಿಸಿದ ರೀತಿ, ಎಲ್ಲರೂ ಉದ್ದೇಶಪೂರ್ವಕವಾಗಿ ಆಡಿದ ರೀತಿ, ನಮಗೆ ಪ್ಲಸ್ ಪಾಯಿಂಟ್ ಆಯಿತು.
ಆಕ್ರಮಣಕಾರಿ ಮನಸ್ಥಿತಿ:
ನಾವು ಗುಜರಾತ್ ಟೈಟಾನ್ಸ್ ಬೌಲರ್ಗಳ ವಿರುದ್ಧ ಆರ್ಭಟಿಸಲೇಬೇಕು ಎಂಬ ಯಾವುದೇ ಯೋಜನೆ ಇರಲಿಲ್ಲ. ಆದರೆ ನಾವು ಅವರ ವಿರುದ್ಧ ಅಬ್ಬರಿಸುತ್ತೇವೆ ಎಂಬ ಬಾಂಡಿ ಲಾಂಗ್ವೇಜ್ ತೋರಿಸಬೇಕು ಎಂಬುದನ್ನು ಮೀಟಿಂಗ್ನಲ್ಲಿ ಚರ್ಚಿಸಿದ್ದವು. ಈ ಮೂಲಕ ಆಕ್ರಮಣಕಾರಿ ಮನಸ್ಥಿತಿಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದೆವು. ಅದರಂತೆ ಇದೀಗ ಆಕ್ರಮಣಕಾರಿ ಆಟ ಆಡಿದ್ದೇವೆ ಎಂದು ರಜತ್ ಪಾಟಿದಾರ್ ತಿಳಿಸಿದ್ದಾರೆ.
ಮೈದಾನದ ಬಗ್ಗೆ ಯೋಚಿಸುವುದಿಲ್ಲ!
ಇದೇ ವೇಳೆ ತಮ್ಮ ಆರ್ಭಟದ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, ಆರಂಭದಲ್ಲಿ, ಪಿಚ್ ಹೇಗೆ ವರ್ತಿಸುತ್ತಿದೆ ಮತ್ತು ಚೆಂಡು ಹೇಗೆ ಬರುತ್ತಿದೆ ಎಂಬುದನ್ನು ನೋಡಲು ನಾನು ಕೆಲವು ಎಸೆತಗಳು, ಅಂದರೆ 8-10 ಎಸೆತಗಳನ್ನು ಆಡುತ್ತೇನೆ. ಅದರ ನಂತರ, ನಾ ಹೇಗೆ ಆಡಬೇಕು ಎಂಬುದರ ಬಗ್ಗೆ ಯೋಜಿಸುತ್ತೇನೆ. ಅಂದರೆ ನಾನು ಯಾವ ಮೈದಾನ ಎಂಬುದರ ಬಗ್ಗೆ ಜಾಸ್ತಿ ಯೋಚಿಸುವುದಿಲ್ಲ. ನಾನು ಆಡುವಾಗ ಪಿಚ್ ಹೇಗಿದೆ ಎಂಬುದನ್ನು ಆಧರಿಸಿ ಬ್ಯಾಟ್ ಬೀಸುತ್ತೇನೆ. ಈ ಮೂಲಕ ಬೌಲರ್ಗಳನ್ನು ಒತ್ತಡಕ್ಕೆ ಒಳಪಡಿಸುವುದನ್ನು ಇಷ್ಟಪಡುಸತ್ತೇನೆ ಎಂದು ಪಾಟಿದಾರ್ ತಿಳಿಸಿದ್ದಾರೆ.
ನಿಜ ಹೇಳಬೇಕೆಂದರೆ, ಧರ್ಮಶಾಲಾದ ಪಿಚ್ನಲ್ಲಿ ಸಿಕ್ಸ್ ಬಾರಿಸುವುದು ಅಂದುಕೊಂಡಂತೆ ಸುಲಭವಾಗಿಲ್ಲ. ಬೌನ್ಸಿ ಪಿಚ್ ಆಗಿದ್ದರಿಂದ ಎಚ್ಚರಿಕೆ ವಹಿಸಬೇಕಿತ್ತು. ಉತ್ತಮ ಬೌನ್ಸ್ ಇತ್ತು ಮತ್ತು ಬೌಲರ್ಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದ ರೀತಿ, ಸ್ಟಂಪ್ಗಳ ಮೇಲೆ ಹೆಚ್ಚಿನ ಚೆಂಡುಗಳನ್ನು ಎಸೆದ ರೀತಿಯಿಂದಾಗಿ ಸಿಕ್ಸ್ ಬಾರಿಸುವುದು ಕಷ್ಟವಾಗಿತ್ತು ಎಂದಿದ್ದಾರೆ.
ಟಾಪ್-3 ಪ್ಲ್ಯಾನ್:
ಇನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಬೇಕಿದ್ದರೆ ಟಾಪ್-3 ಬ್ಯಾಟರ್ಗಳನ್ನು ಬೇಗನೆ ಔಟ್ ಮಾಡುವುದು, ಅಂದರೆ ಪವರ್ಪ್ಲೇನಲ್ಲೇ ಶುಭ್ಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಅವರ ವಿಕೆಟ್ ಪಡೆಯುವುದು ನಮ್ಮ ಯೋಜನೆಯಾಗಿತ್ತು. ಅದು ವರ್ಕ್ ಆಯಿತು. ಈ ಮೂವರ ವಿಕೆಟ್ ಸಿಗುತ್ತಿದ್ದಂತೆ ನಮ್ಮ ಗೆಲುವು ಖಚಿತವಾಯಿತು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಇಂಪ್ಯಾಕ್ಟ್ ಟೆಸ್ಟ್:
ಇದೇ ವೇಳೆ ರೊಮಾರಿಯೊ ಶೆಫರ್ಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿದ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, ನಾವು ಫೈನಲ್ಗೆ ಹೋದರೆ, ರೊಮಾರಿಯೊ ಶೆಫರ್ಡ್ ಮಧ್ಯದ ಓವರ್ಗಳಲ್ಲಿ ಹೇಗೆ ಬೌಲ್ ಮಾಡುತ್ತಾರೆ ಎಂಬುದನ್ನು ಪರೀಕ್ಷಿಸಬೇಕಿತ್ತು. ಹೀಗಾಗಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿ ಓವರ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ ರೂಪಿಸಿದ ಎಲ್ಲಾ ಪ್ಲ್ಯಾನ್ಗಳು ವರ್ಕ್ ಆಗಿದೆ. ಈ ಯಶಸ್ವಿ ಯೋಜನೆಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೇ 31 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ ಎದುರಾಳಿಯಾಗಲಿರುವವರು ಯಾರು ಎಂಬುದೇ ಈಗ ಕುತೂಹಲ.