ಗಿಲ್ಲಿ ನಟ, ಇಂದು (ಜನವರಿ 22) ವಿಧಾನಸೌಧಕ್ಕೆ ತೆರಳಿ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದಾರೆ. ಬಿಗ್ಬಾಸ್ ಗೆದ್ದಿದ್ದಕ್ಕೆ ಗಿಲ್ಲಿಯನ್ನು ಸಿಎಂ ಅಭಿನಂಧಿಸಿದ್ದಾರೆ.
ಗಿಲ್ಲಿ ನಟ, ಇಂದು (ಜನವರಿ 22) ವಿಧಾನಸೌಧಕ್ಕೆ ತೆರಳಿ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದಾರೆ. ಬಿಗ್ಬಾಸ್ ಗೆದ್ದಿದ್ದಕ್ಕೆ ಗಿಲ್ಲಿಯನ್ನು ಸಿಎಂ ಅಭಿನಂಧಿಸಿದ್ದಾರೆ.
ಬಿಸಿಸಿಐ ವಿರುದ್ಧ ತನ್ನ ಪಟ್ಟು ಸಡಿಲಿಸದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ತಂಡದ ಹೆಸರನ್ನು ಟಿ20 ವಿಶ್ವಕಪ್ನಿಂದ ಹಿಂಪಡೆದಿದೆ. ಇದರರ್ಥ ಬಾಂಗ್ಲಾದೇಶ ತಂಡವು ಮುಂಬರುವ ಟಿ20 ವಿಶ್ವಕಪ್ನಿಂದ ಹೊರಬಿದ್ದಿದೆ. ವಾಸ್ತವವಾಗಿ ಐಸಿಸಿ, ಬಾಂಗ್ಲಾದೇಶಕ್ಕೆ ತನ್ನ ನಿರ್ಧಾರ ತಿಳಿಸಲು 24 ಗಂಟೆಗಳ ಕಾಲಾವಕಾಶ ನೀಡಿತ್ತು. ಆ ಪ್ರಕಾರ ಗುರುವಾರ ಢಾಕಾದಲ್ಲಿ ಬಿಸಿಬಿ ಮತ್ತು ಬಾಂಗ್ಲಾದೇಶ ಸರ್ಕಾರದ ನಡುವೆ ಸಭೆ ನಡೆದಿದ್ದು, ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಲಾಗಿದೆ. ಇದೀಗ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್ನಿಂದ ಹೊರಬಿದ್ದಿರುವ ಕಾರಣ ಅದರ ಸ್ಥಾನದಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್ನಲ್ಲಿ ಆಡುವ ಅವಕಾಶ ಸಿಗಲಿದೆ.
ತಾಲೂಕು ಕಚೇರಿ ಮುಂಭಾಗವೇ ಆತ್ಮಹತ್ಯೆಗೆ ಯತ್ನ
ಹಾಸನ/ ದಕ್ಷಿಣ ಕನ್ನಡ, ಜನವರಿ 22: ತಹಶೀಲ್ದಾರ್ ವಿರುದ್ಧ ಕಿರುಕುಳ ಆರೋಪ ಮಾಡಿ ಮಾತ್ರೆ ಸೇವಿಸಿ ಶಿರಸ್ತೇದಾರ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಬೇಲೂರು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ತನ್ವೀರ್ ಅಹ್ಮದ್ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿಯಾಗಿದ್ದಾರೆ. ತನ್ವೀರ್ನ್ನು ಬೇಲೂರು ಆಸ್ಪತ್ರೆಗೆ ಸಿಬ್ಬಂದಿ ದಾಖಲಿಸಿದ್ದು, ತಮ್ಮ ಮೇಲಿನ ಆರೋಪವನ್ನು ಶ್ರೀಧರ್ ನಿರಾಕರಿಸಿದ್ದಾರೆ.
ತಹಶೀಲ್ದಾರ್ ಅವರು ಬೇಕಂತಲೇ ಕೆಲಸದ ಒತ್ತಡ ಹೇರುತ್ತಿರುವ ಜೊತೆಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ಕಚೇರಿ ಮುಂಭಾದಲ್ಲೇ ಮಾತ್ರೆಗಳನ್ನು ಸೇವಿಸಿ ತನ್ವೀರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಅವರು, ತನ್ವೀರ್ ಅಹಮದ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಜೊತೆಗೆ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ವಿರುದ್ಧವೇ ದೂರು ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ಮೇಲ್, ಲಕ್ಷಾಂತರ ರೂ. ವಸೂಲಿ; ಚಿಕ್ಕಮಗಳೂರಿನ ಮಹಿಳೆಯ ಬಂಧನ
ನ್ಯಾಯಾಲಯದಲ್ಲೇ ವಿಷ ಕುಡಿದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ 5ನೇ ಹೆಚ್ಚುವರಿ ಕೋರ್ಟ್ನಲ್ಲಿ ನಡೆದಿದೆ. ವಿಷ ಕುಡಿದು ಕಾವು ಮಣಿಯಡ್ಕ ನಿವಾಸಿ ರವಿ(35) ಆತ್ಮಹತ್ಯೆಗೆ ಯತ್ನಿಸಿದ್ದು,ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ರವಿ ಹಾಗೂ ಪತ್ನಿ ವಿದ್ಯಾಶ್ರೀ ನಡುವೆ ಕೌಟುಂಬಿಕ ಕಲಹ ಇತ್ತು. 2 ದಿನದ ಹಿಂದೆ ವಿದ್ಯಾಶ್ರೀ ಕತ್ತು ಹಿಸುಕಿ ಕೊಲೆಗೆ ರವಿ ಯತ್ನಿಸಿದ್ದ ಎನ್ನಲಾಗಿದ್ದು, ಗಂಡ ಮತ್ತು ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ, ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆದಿತ್ತು. ಪೊಲೀಸರು ಮಹಿಳಾ ಠಾಣೆಗೆ ಹಾಜರಾಗಲು ರವಿಗೆ ಸೂಚಿಸಿದ್ದು, ಈ ನಡುವೆ ಪುತ್ತೂರು ಕೋರ್ಟ್ ಆವರಣಕ್ಕೆ ಬಂದ ರವಿ ಜಡ್ಜ್ ಮುಂದೆಯೇ ವಿಷ ಸೇವಿಸಿದ್ದಾರೆ. ವಿಷ ಸೇವನೆ ಬಳಿಕ ನ್ಯಾಯಾಲಯದಲ್ಲೇ ವಾಂತಿ ಮಾಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡನ ವಿರುದ್ಧ ದೂರು ನೀಡಿದ್ದ ಪತ್ನಿಯೇ ಆತನನ್ನು ಆ್ಯಂಬುಲೆನ್ಸ್ ಮೂಲಕ ಮಂಗಳೂರಿಗೆ ಕರೆದೊಯ್ದಿದ್ದಾಳೆ.
ಕುಡಿದ ಮತ್ತಿನಲ್ಲಿ ಪತ್ನಿ ಜೊತೆ ಕಿರಿಕ್ ಮಾಡಿಕೊಂಡು ವ್ಯಕ್ತಿಯೋರ್ವ ಬ್ಲೇಡ್ನಿಂದ ಕತ್ತು ಕೊಯ್ದುಕೊಂಡ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ನಡೆದಿದೆ. ಪತ್ನಿ ರಂಜಿತಾ ಜತೆ ಜಗಳವಾಡಿ ಕತ್ತು ಕೊಯ್ದುಕೊಂಡ ಪತಿ ಲೋಕೇಶ್ ರಕ್ತಸ್ರಾವವಾಗಿ ಒದ್ದಾಡುತ್ತಿದ್ದರು. ಗಾಯಾಳುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಸದ್ಯ ಚಿಕಿತ್ಸೆ ಪಡೆದು ಗಾಯಾಳು ಲೋಕೇಶ್ ಮನೆಗೆ ವಾಪಾಸಾಗಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 4:34 pm, Thu, 22 January 26
ಶಿವಮೊಗ್ಗ, ಜನವರಿ 22: ಒಂದೇ ಕುಟುಂಬದ ನಾಲ್ವರು ನೀರುಪಾಲು (death) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ಕನೇ ದಿನದ ಕಾರ್ಯಾಚರಣೆ ವೇಳೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ನೀರಿನ ರಭಸದಿಂದಾಗಿ ಶೋಧ ಕಾರ್ಯಚರಣೆಗೆ ಅಡ್ಡಿ ಉಂಟಾಗಿತ್ತು. ಆದರೆ ಅದರ ನಡುವೆಯೂ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೃತದೇಹಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಮೃತದೇಹಗಳನ್ನು ಹುಡುಕಿ ಕೊಡುತ್ತೇನೆ ಎಂಬ ತಮ್ಮ ಮಾತನ್ನು ಈಶ್ವರ್ ಮಲ್ಪೆ ಉಳಿಸಿಕೊಂಡಿದ್ದಾರೆ. ಸದ್ಯ ಅವರ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ನ ಭದ್ರಾ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿದ್ದರು. ಕಳೆದ ನಾಲ್ಕು ದಿನಗಳಿಂದ ಈಶ್ವರ್ ಮಲ್ಪೆ ಮೃತದೇಹ ಶೋಧ ಕಾರ್ಯಾಚರಣೆ ನಡೆಸಿದ್ದರು. ಭದ್ರಾ ನಾಲೆಯಲ್ಲಿ ನೀರು ಹರಿವು ಜಾಸ್ತಿ ಹಿನ್ನೆಲೆ ಕಾರ್ಯಾಚರಣೆಗೆ ಸಾಕಷ್ಟು ತೊಡಕು ಉಂಟಾಗಿತ್ತು. ಈ ಹಿನ್ನಲೆ ಶವ ಶೋಧ ಕಾರ್ಯಾಚರಣೆ ವಿಳಂಬವಾಗಿತ್ತು. ಕಳೆದ ಮೂರು ದಿನದಲ್ಲಿ ತಾಯಿ ನೀಲಾಬಾಯಿ ಮತ್ತು ರವಿ ಶವ ಪತ್ತೆ ಆಗಿತ್ತು. ಇಂದು ನಾಲ್ಕನೇ ದಿನದ ಕಾರ್ಯಾಚರಣೆ ವೇಳೆ ಮಗಳು ಶ್ವೇತಾ ಮತ್ತು ಅಳಿಯ ಪರಶುರಾಮ ಮೃತದೇಹಗಳು ಪತ್ತೆ ಆಗಿವೆ.
ಕಾರ್ಯಾಚರಣೆ ಬಳಿಕ ಮಾತನಾಡಿದ ಮುಳುಗು ತಜ್ಞ ಈಶ್ವರ್ ಮಲ್ಪೆ, ನಾನು ಮೊದಲ ದಿನವೇ ಮಾತು ಕೊಟ್ಟಿದ್ದೆ. ನಾಲ್ಕು ಶವ ಪತ್ತೆ ಮಾಡಿ ಇಲ್ಲಿಂದ ಹೋಗುತ್ತೇನೆ ಅಂತ. ಅದೇ ರೀತಿ ಇಂದು ಮತ್ತೆ ಎರಡು ಶವ ಪತ್ತೆ ಮಾಡಿದೆ. ಈಗ ನಾಲ್ಕು ಶವ ಪತ್ತೆ ಮಾಡಿರುವ ಸಮಾಧಾನ ನನಗಿದೆ. ಆದರೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಶ್ವೇತಾ ಮತ್ತು ಪರಶುರಾಮ ತಂದೆ-ತಾಯಿ ಮೃತಪಟ್ಟಿದ್ದಾರೆ. ಅವರ ಮಕ್ಕಳು ತಂದೆ-ತಾಯಿ ಇಲ್ಲದೇ ತಬ್ಬಲಿ ಆಗಿದ್ದಾರೆ. ನಿಜಕ್ಕೂ ಈ ದುರ್ಘಟನೆಯಿಂದ ನನಗೆ ಬೇಸರ ಆಗಿದೆ. ಕಾರ್ಯಾಚರಣೆಗೆ ಗ್ರಾಮಸ್ಥರು, ಪೋಲೀಸರು ಮತ್ತು ಎಸ್ಡಿಆರ್ಎಫ್ ತಂಡ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
ಉಡುಪಿಯ ಈಶ್ವರ್ ಮಲ್ಪೆ ಅನುಭವಿ ಮತ್ತು ಪರಿಣತ ಮುಳುಗು ತಜ್ಞರು. ಈವರೆಗೆ ವಿವಿಧ ಸ್ಥಳಗಳಲ್ಲಿ ನೀರಿನಲ್ಲಿ ಮುಳುಗಿದ ನೂರಾರು ಮೊಬೈಲ್ಗಳು ಹಾಗೂ ವಾಹನಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಹೊರತೆಗೆಯುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ವಸ್ತುಗಳು ಮತ್ತು ವಾಹನಗಳ ಶೋಧನೆಯಷ್ಟೇ ಅಲ್ಲದೆ, ನೀರಿಗೆ ಬಿದ್ದ ಅನೇಕ ಜೀವಗಳನ್ನು ರಕ್ಷಿಸಿ ಪುನರ್ಜನ್ಮ ನೀಡಿದ ಗೌರವವೂ ಅವರಿಗೆ ಸಲ್ಲುತ್ತದೆ. ಅಂಕೋಲಾ ಗುಡ್ಡ ಕುಸಿತದ ವೇಳೆ 72 ದಿನ ಅತೀ ದೊಡ್ಡ ಕಾರ್ಯಾಚರಣೆ ಮಾಡಿದ್ದರು. ಗಂಗಾವಳಿ ನದಿಯಲ್ಲಿ ಮುಳುಗಿ ಹೋಗಿದ್ದ ಲಾರಿಯನ್ನು ಪತ್ತೆ ಮಾಡಿದ್ದರು. ಇದೀಹ ಭದ್ರಾ ನಾಲೆಯ ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಆರಂಭವಾಗಿ ಇವತ್ತಿಗೆ ಸರಿಯಾಗಿ 11 ವರ್ಷ ಗತಿಸಿವೆ. 2015ರ ಜನವರಿ 22ರಂದು ಬೇಟಿ ಬಚಾವೊ ಬೇಟಿ ಪಡಾವೊ ಅಭಿಯಾನದ ಭಾಗವಾಗಿ ಆರಂಭವಾದ ಎಸ್ಎಸ್ವೈ ಯೋಜನೆ ಲಕ್ಷಾಂತರ ಹೆಣ್ಮಕ್ಕಳ ಬದುಕಿಗೆ ಭರವಸೆಯ ಹೂಡಿಕೆಯಾಗಿದೆ. ಈ ಹನ್ನೊಂದು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 4.53 ಕೋಟಿಗೂ ಅಧಿಕ ಅಕೌಂಟ್ಗಳನ್ನು ತೆರೆಯಲಾಗಿದೆ.
ಸರ್ಕಾರವು ಹಲವು ಸಣ್ಣ ಉಳಿತಾಯ ಯೋಜನೆಗಳನ್ನು ನಡೆಸುತ್ತದೆ. ಈ ಪೈಕಿ ಅತಿಹೆಚ್ಚು ಬಡ್ಡಿ ನೀಡಲಾಗುವ ಎರಡು ಸ್ಕೀಮ್ಗಳಲ್ಲಿ ಸುಕನ್ಯಾ ಸಮೃದ್ಧಿ ಅಕೌಂಟ್ ಒಂದು. ಇದಕ್ಕೆ ಸದ್ಯ ವಾರ್ಷಿಕ ಶೇ. 8.2 ಬಡ್ಡಿ ನಿಗದಿ ಮಾಡಲಾಗಿದೆ. ನಾಲ್ಕೂವರೆ ಕೋಟಿಗೂ ಅಧಿಕ ಖಾತೆಗಳ ರಚನೆಯಾಗಿದ್ದು, ಇವುಗಳಲ್ಲಿ 2025ರ ಡಿಸೆಂಬರ್ವರೆಗೂ ಜಮೆಯಾಗಿರುವ ಠೇವಣಿಗಳ ಮೊತ್ತ 3.33 ಲಕ್ಷ ಕೋಟಿ ರೂ.
ಇದನ್ನೂ ಓದಿ: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್ಗಳ ನಡುವೆ ಏನು ವ್ಯತ್ಯಾಸ?
ಇದು ಹೆಣ್ಮಕ್ಕಳ ಭವಿಷ್ಯ ಭದ್ರತೆಗೆಂದೇ ರೂಪಿಸಲಾಗಿರುವ ಯೋಜನೆ. ಹುಟ್ಟಿದ ಮಗುವಿನಿಂದ ಹಿಡಿದು 10 ವರ್ಷದವರೆಗೂ ಯಾವುದೇ ವಯಸ್ಸಿನ ಹೆಣ್ಮಗುವಿನ ಹೆಸರಿನಲ್ಲಿ ಎಸ್ಎಸ್ವೈ ಅಕೌಂಟ್ ತೆರೆಯಬಹುದು. ಒಂದು ಮಗುವಿನ ಹೆಸರಿನಲ್ಲಿ ಒಂದೇ ಖಾತೆ ತೆರೆಯಬಹುದು. ಒಂದು ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಅಕೌಂಟ್ ತೆರೆಯಲು ಅವಕಾಶ ಇಲ್ಲ. ಅಕಸ್ಮಾತ್ ಕುಟುಂಬದಲ್ಲಿ ಅವಳಿ ಅಥವಾ ತ್ರಿವಳಿ ಹೆಣ್ಮಕ್ಕಳು ಜನಿಸಿದರೆ ಆಗ ಅವರಿಗೆ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಲು ಅವಕಾಶ ಇರುತ್ತದೆ.
ಹೆಣ್ಮಗುವಿನ ವಯಸ್ಸು 18 ವರ್ಷ ತುಂಬುವವರೆಗೂ ಪಾಲಕರೇ ಎಸ್ಎಸ್ವೈ ಖಾತೆಯನ್ನು ನಿರ್ವಹಿಸುತ್ತಾರೆ. ಪ್ರಾಯಕ್ಕೆ ಬಂದ ಬಳಿಕ ಹುಡುಗಿಯೇ ತನ್ನ ಖಾತೆಯನ್ನು ನಿರ್ವಹಿಸಬಹುದು.
ಇದನ್ನೂ ಓದಿ: Gratuity Calculator: ಗ್ರಾಚ್ಯುಟಿ ಎಂದರೇನು? ಕೆಲಸ ಬಿಟ್ಟರೆ ಎಷ್ಟು ಹಣ ಸಿಗಬಹುದು? ಇಲ್ಲಿದೆ ಲೆಕ್ಕಾಚಾರ
ಈ ಸ್ಕೀಮ್ನಲ್ಲಿ 15 ವರ್ಷದವರೆಗೆ ಹೂಡಿಕೆ ಮಾಡಬಹುದು. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಮಿತಿ ಇರುತ್ತದೆ. ಕನಿಷ್ಠ ವಾರ್ಷಿಕ ಹೂಡಿಕೆ 250 ರೂ ಇದೆ. ಈ ಅಕೌಂಟ್ 21 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ.
ಅವಧಿಗೆ ಮುನ್ನ ಸ್ವಲ್ಪ ಭಾಗದ ಹಣವನ್ನು ವಿತ್ಡ್ರಾ ಮಾಡಿಕೊಳ್ಳಬಹುದು. ಹುಡುಗಿಯ ವಯಸ್ಸು 18 ದಾಟಿದರೆ ಅಥವಾ 10ನೇ ತರಗತಿ ಪಾಸಾದಾಗ ಶೇ. 50ರಷ್ಟು ಹಣವನ್ನು ಹಿಂಪಡೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಮತ್ತು ಹಲವಾರು ಸ್ಮರಣೀಯ ಗೆಲುವುಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ಗೌರವ ಡಾಕ್ಟರೇಟ್ ಸಂದಿದೆ. ಪುಣೆಯ ಅಜಿಂಕ್ಯ ಡಿವೈ ಪಾಟೀಲ್ ವಿಶ್ವವಿದ್ಯಾಲಯ (ADYPU) ರೋಹಿತ್ ಶರ್ಮಾ ಅವರಿಗೆ ಗೌರವ ಡಾಕ್ಟರೇಟ್ (D.Litt.) ಪ್ರದಾನ ಮಾಡಲಿದೆ. ಜನವರಿ 24 ರಂದು ನಡೆಯುವ ವಿಶ್ವವಿದ್ಯಾಲಯದ 10 ನೇ ಘಟಿಕೋತ್ಸವ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಗುವುದು.
ಕ್ರಿಕೆಟ್ಗೆ ರೋಹಿತ್ ಶರ್ಮಾ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಅವರನ್ನು ಗೌರವಿಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯವೇ ಘೋಷಿಸಿದೆ. ಕ್ರಿಕೆಟ್ ಲೋಕದಲ್ಲಿ “ಹಿಟ್ಮ್ಯಾನ್” ಎಂದೇ ಪ್ರಸಿದ್ಧರಾಗಿರುವ ರೋಹಿತ್ ಶರ್ಮಾ ಇನ್ನು ಮುಂದೆ ಡಾ. ರೋಹಿತ್ ಶರ್ಮಾ ಎನಿಸಿಕೊಳ್ಳಲಿದ್ದಾರೆ.
ರೋಹಿತ್ ಶರ್ಮಾ ಭಾರತದ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರು. ಭಾರತದ ಪರ ಮೂರು ಮಾದರಿಯ ಕ್ರಿಕೆಟ್ನಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಈಗಾಗಲೇ ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಆದರೆ ಏಕದಿನ ಮಾದರಿಯಲ್ಲಿ ಅವರ ಪರಾಕ್ರಮ ಮುಂದುವರೆದಿದೆ.
ಮೇಲೆ ಹೇಳಿದಂತೆ ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ರೋಹಿತ್ ತಮ್ಮ ನಾಯಕತ್ವದಲ್ಲಿ ಭಾರತ ತಂಡವನ್ನು ಎರಡೆರಡು ಐಸಿಸಿ ಟ್ರೋಫಿ ಗೆಲುವಿನತ್ತ ಮುನ್ನಡೆಸಿದ್ದರು. 2024 ರ ಟಿ20 ವಿಶ್ವಕಪ್ನಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ್ದ ರೋಹಿತ್, ಆ ಬಳಿಕ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಸಹ ಭಾರತಕ್ಕೆ ಗೆದ್ದುಕೊಟ್ಟರು.
ರೋಹಿತ್ ಶರ್ಮಾ ಇದುವರೆಗೆ ಟೀಂ ಇಂಡಿಯಾ ಪರ 508 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ, ಅವರು 20,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 111 ಅರ್ಧಶತಕಗಳು ಮತ್ತು 50 ಶತಕಗಳು ಸೇರಿವೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆ ಕೂಡ ರೋಹಿತ್ ಹೆಸರಿನಲ್ಲಿದೆ.
ಗದಗ, (ಜನವರಿ 22): ಲಕ್ಕುಂಡಿ (Lakkundi) ಗ್ರಾಮದಲ್ಲಿ ಮನೆ ಪಾಯಾ ಅಗೆಯುವ ವೇಳೆ ಸಿಕ್ಕ ಚಿನ್ನದ ನಿಧಿಯನ್ನು (Gold Treasure) ಹಸ್ತಾಂತರಿಸಿದ್ದ ರಿತ್ತಿ ಕುಟುಂಬಕ್ಕೆ (Ritti family) ಕೊನೆಗೂ ಜಿಲ್ಲಾಡಳಿತ ಸಹಾಯಹಸ್ತ ಚಾಚಿದೆ. ಹೌದು..ರಿತ್ತಿ ಕುಟುಂಬ 30*40 ಸೈಟ್ ನೀಡುವುದಾಗಿ ಲಕ್ಕುಂಡಿ ಗ್ರಾಮ ಪಂಚಾಯತ್ ಘೋಷಣೆ ಮಾಡಿದೆ. ಇಂದು (ಜನವರಿ 22) ಲಕ್ಕುಂಡಿ ಗ್ರಾಮ ಪಂಚಾಯತಿಯ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಇದೇ ವೇಳೆ ನಿಧಿಯನ್ನು ಹಸ್ತಾಂತರ ಮಾಡಿದ ರಿತ್ತಿ ಕುಟುಂಬದ ಸದಸ್ಯರನ್ನು ಸನ್ಮಾನ ಮಾಡಲಾಯಿತು. ಇನ್ನು ಜನವರಿ 26ರಂದು ಗಣರಾಜ್ಯೋತ್ಸವದಂದು ಜಾಗದ ಪ್ರಮಾಣ ಪತ್ರವನ್ನು ಕುಟುಂಬಕ್ಕೆ ಹಸ್ತಾಂತರವಾಗಲಿದೆ. ಇನ್ನು ನಿವೇಶನ ಜೊತೆ ಎಲ್ಲ ಶಾಲೆಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ.
ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಅಧಿಕಾರಿಗಳು, ಸರ್ವ ಸದಸ್ಯರ ಸಮ್ಮುಖದಲ್ಲಿ ಲಕ್ಕುಂಡಿ ಮಾರುತಿ ನಗರದಲ್ಲಿ ರಿತ್ತಿ ಕುಟುಂಬಕ್ಕೆ 30*40 ಸೈಟ್ ನೀಡುವ ನಿರ್ಣಯವನ್ನು ಪಾಸ್ ಮಾಡಲಾಯಿತು. ಮಾನವೀಯ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ಗ್ರಾಮ ಪಂಚಾಯತ್ ಸೈಟ್ ನೀಡುವ ನಿರ್ಧಾರ ತೆಗೆದಕೊಂಡಿದೆ. ಮುಂದೆ ಸಚಿವರು, ಶಾಸಕರ ಅನುದಾನದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಲಾಗಿದೆ. ಅಲ್ಲದೇ ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ, ಪ್ರಜ್ವಲ್ ತಾಯಿ ಗಂಗಮ್ಮಗೆ ಕೆಲಸ ಕೊಡುವುದಾಗಿ ಪಂಚಾಯತ್ ಭರವಸೆ ನೀಡಿದೆ.
ಕುಟುಂಬಕ್ಕೆ ನಿವೇಶನ ಮಾತ್ರವಲ್ಲದೇ ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆಂಚಪ್ಪ ಪೂಜಾರ್ ಪ್ರತಿಕ್ರಿಯಿಸಿದ್ದು, ಜನವರಿ 10 ರಂದು ಪ್ರಜ್ವಲ್ ರಿತ್ತಿ ಮನೆ ಪಾಯ ಅಗೆಯುವಾಗ 466 ಗ್ರಾಮ ಚಿನ್ನ ಪತ್ತೆಯಾಗಿತ್ತು. ಬಳಿಕ ಪ್ರಜ್ವಲ್ ರಿತ್ತಿ, ತಾಯಿ ಕಸ್ತೂರೆವ್ವ ರಿತ್ತಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಕುಟುಂಬದ ಪ್ರಾಮಾಣಿಕತೆಗೆ ಲಕ್ಕುಂಡಿ ಗ್ರಾಮ ಪಂಚಾಯತಿಯಿಂದ 30×40 ವಿಸ್ತೀರ್ಣ ನಿವೇಶನ ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಲಕ್ಕುಂಡಿ ಗ್ರಾಮದ ಎಲ್ಲ ಶಾಲೆ, ಕಾಲೇಜುಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ ಹಾಕಲು ತೀರ್ಮಾನಿಸಲಾಗಿದೆ. ಯಾಕಂದರೆ ಚಿಕ್ಕ ವಯಸ್ಸಿನಲ್ಲೇ ಪ್ರಜ್ವಲ್ ಪ್ರಯಾಣಿಕ ಮೆರೆದಿರುವುದು ಎಲ್ಲಾ ಮಕ್ಕಳಿಗೆ ಮಾದರಿಯಾಗಿದ್ದಾನೆ. ಹೀಗಾಗಿ ಪ್ರಜ್ವಲ್ ನೋಡಿ ಮಕ್ಕಳಲ್ಲೂ ಪ್ರಮಾಣಿಕತೆ ಹೆಚ್ಚಲಿ ಅನ್ನೋ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನು ಸಿಕ್ಕ ನಿಧಿಯನ್ನ ಪ್ರಮಾಣಿಕವಾಗಿ ಸರ್ಕಾರಕ್ಕೆ ನೀದಿ ಔದರ್ಯ ಮೆರೆದಿದ್ದ ಬಡ ಕುಟುಂಬ ನಿವೇಶನ, ಮನೆ ನೀಡಬೇಕೆಂದು ಟಿವಿ9 ನಿರಂತರ ವರದಿ ಮಾಡಿತ್ತು. ಇದರ ಫಲವಾಗಿ ಕುಟುಂಬಕ್ಕೊಂದು ಸೂರು ಸಿಕ್ಕಿದೆ. ಇದರಿಂದ ಪ್ರಜ್ವಲ್ ಹಾಗೂ ತಾಯಿ ಕಸ್ತೂರೆವ್ವ ರಿತ್ತಿ ಸಂತಸಗೊಂಡಿದ್ದು, ಟಿವಿ9ಗೆ ಧನ್ಯವಾದ ತಿಳಿಸಿದರು.
ನಿಧಿ ಸಿಕ್ಕಿದ್ದೇ ಸಿಕ್ಕಿದ್ದು ಗ್ರಾಮದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸಕ್ರಿಯ ಸಹಯೋಗದೊಂದಿಗೆ ಉತ್ಖನನ ನಡೆಯುತ್ತಿದೆ. ನುರಿತ ತಜ್ಞರು ಮತ್ತು ಸಿಬ್ಬಂದಿ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಸಮ್ಮುಖದಲ್ಲಿ ಕಳೆದ ಆರು ದಿನಗಳಿಂದ ಉತ್ಖನನ ಕಾರ್ಯ ಮುಂದುವರೆದಿದ್ದು, ಪ್ರತಿ ದಿನ ಒಂದಲ್ಲ ಒಂದು ವಸ್ತುಗಳು ಪತ್ತೆಯಾಗುತ್ತಲೇ ಇವೆ. ಭೂಮಿ ಅಗೆದಾಗೆಲ್ಲ ಹಳೇ ಕಾಲದ ವಸ್ತುಗಳು ಸಿಗುತ್ತಿವೆ. ಇದರಿಂದ ಇನ್ನಷ್ಟು ಅಗೆದರೆ ಏನೇನು ಸಿಗಬಹುದು ಎನ್ನುವ ಕೌತುಕ ಮೂಡಿದೆ.
ಧಾರವಾಡ, (ಜನವರಿ 22): ಕೆಲಸ ಹುಡುಕಲೆಂದು ಮನೆಯಿಂದ ಹೊರಹೋಗಿದ್ದ 19 ವರ್ಷದ ಯುವತಿ ಝಕಿಯಾ ಮುಲ್ಲಾ (Zakia Mulla Murder Case) ಶವ ಧಾರವಾಡ (Dharwad) ನಗರದ ಹೊರಹೊಲಯದ ಮನಸೂರು ರಸ್ತೆಯ ಡೈರಿ ಬಳಿ ಪತ್ತೆಯಾಗಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಸುತ್ತಿದ್ದ ಪ್ರಿಯಕರ ಸಾಬೀರ್ ಮುಲ್ಲಾನೇ ಝಕಿಯಾಳನ್ನು ಕೊಲೆ ಮಾಡಿದ್ದಾನೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದರಿಂದ ಮನೆಯವರು ಸಹ ಮದುವೆಗೆ ಒಪ್ಪಿದ್ದು, ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಲು ತೀರ್ಮಾನಿಸಿದ್ದರು. ಆದ್ರೆ, ಇದೀಗ ಯುವತಿಯನ್ನು ಮದುವೆಯಾಗಬೇಕಿದ್ದ ಸಾಬೀರ್ ಮುಲ್ಲಾ ಎನ್ನುವವನೇ ವೇಲ್ನಿಂದ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಝಕಿಯಾ ಮತ್ತು ಸಾಬೀರ್ ಮುಲ್ಲಾ ಸಂಬಂಧಿಕರಾಗಿದ್ದು, ಇವರಿಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ಮಾತುಕತೆ ನಡೆಸಿದ್ದರು. ಜನವರಿ 20ರ ಸಂಜೆ ಇಬ್ಬರೂ ಹೊರಗಡೆ ಸುತ್ತಾಡಲು ಹೋಗಿದ್ದರು. ಈ ವೇಳೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜೋರು ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಸಾಬೀರ್, ವೇಲ್ನಿಂದಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಆಘಾತಕಾರಿ ವಿಚಾರವೆಂದರೆ, ಹತ್ಯೆ ನಡೆದ ಸ್ಥಳದಲ್ಲಿದ್ದ ಆರೋಪಿ ಸಾಬೀರ್ ಮುಲ್ಲಾ ತಾನೇ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದ. ಆ ನಂತರ ಸ್ಥಳಕ್ಕೆ ಪೊಲೀಸರು ಬಂದಾಗಲೂ ಅಲ್ಲೇ ಇದ್ದು ಏನೂ ಅರಿಯದವನಂತೆ ನಟಿಸಿದ್ದ. ಆದರೆ, ಆತನ ನಡವಳಿಕೆಯ ಮೇಲೆ ಅನುಮಾನಗೊಂಡ ಪೊಲೀಸರು ,ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ.
ಸದ್ಯ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು, ಸಾಬೀರ್ ಮುಲ್ಲಾನನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
Published On – 3:03 pm, Thu, 22 January 26
ಅನ್ನ ಬೇಯಿಸುವುದರಿಂದ ಹಿಡಿದು ಸಾಂಬಾರ್ ಮಾಡುವವರೆಗೆ ಹೆಚ್ಚಿನ ಅಡುಗೆಗಳನ್ನು ಪ್ರೆಶರ್ ಕುಕ್ಕರ್ನಲ್ಲಿಯೇ (pressure cooker) ಮಾಡಲಾಗುತ್ತದೆ. ಹೀಗೆ ಅಡುಗೆಗೆ ಕುಕ್ಕರ್ ಬಳಸುವುದರಿಂದ ಅಡುಗೆ ಬೇಗ ತಯಾರಾಗುವುದು ಮಾತ್ರವಲ್ಲದೆ ನಮ್ಮ ಸಮಯ ಮತ್ತು ಗ್ಯಾಸ್ ಕೂಡ ಉಳಿತಾಯವಾಗುತ್ತದೆ. ಈ ಕುಕ್ಕರ್ನಿಂದ ಎಷ್ಟು ಉಪಯೋಗವಿದೆಯೋ ಅದೇ ರೀತಿ ಅದನ್ನು ಸರಿಯಾದ ರೀತಿ ಬಳಸದಿದ್ದರೇ, ಅಪಾಯವೂ ಕೂಡ ಎದುರಾಗುತ್ತದೆ. ಹೌದು ಕೆಲವೊಂದು ಬಾರಿ ಅಡುಗೆ ಮಾಡುವ ವೇಳೆ ಇದ್ದಕ್ಕಿದ್ದಂತೆ ಕುಕ್ಕರ್ ಸ್ಫೋಟಗೊಳ್ಳುತ್ತದೆ. ಜೊತೆಗೆ ಕುಕ್ಕರ್ ಸ್ಫೋಟಗೊಳ್ಳುವ ಮೊದಲು ಕೆಲವು ಸೂಚನೆಗಳನ್ನು ನೀಡುತ್ತದೆ. ಈ ಸೂಚನೆಗಳನ್ನು ಅರಿತು ಸಮಯಕ್ಕೆ ಸರಿಯಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಾಗ ಪ್ರೆಶರ್ ಕುಕ್ಕರ್ ಸ್ಫೋಟಗೊಳ್ಳುವುದನ್ನು ತಡೆಯಬಹುದು. ಹಾಗಾದ್ರೆ ಆ ಸೂಚನೆಗಳು ಯಾವುವು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ವಿಚಿತ್ರ ಶಬ್ದ ಅಥವಾ ಸುಡುವ ವಾಸನೆ: ಕುಕ್ಕರ್ ಸ್ಫೋಟಗೊಳ್ಳುವ ಮೊದಲು ವಿಚಿತ್ರ ಶಬ್ದ ಅಥವಾ ಸುಡುವ, ತಳ ಹಿಡಿದ ವಾಸನೆ ಬರಬಹುದು. ಇದು ಎಚ್ಚರಿಕೆಯ ಸಂಕೇತವಾಗಿದೆ. ಈ ಲಕ್ಷಣಗಳು ಕಾಣಿಸಿದರೆ ತಕ್ಷಣ ಗ್ಯಾಸ್ ಆಫ್ ಮಾಡಿ.
ಅತಿಯಾದ ಶಿಳ್ಳೆ : ನೀವು ಕುಕ್ಕರ್ನಲ್ಲಿ ಅಡುಗೆ ಮಾಡಲು ಪ್ರಾರಂಭಿಸಿದಾಗ ಅದು ತುಂಬಾ ಜೋರಾಗಿ ಮತ್ತು ನಿರಂತರವಾಗಿ ವಿಶಿಲ್ ಹೊಡೆಯುವಾಗಲೆಲ್ಲಾ, ಗ್ಯಾಸ್ ಅನ್ನು ಆಫ್ ಮಾಡಿ. ಕುಕ್ಕರ್ನೊಳಗಿನ ಒತ್ತಡವು ತುಂಬಾ ಹೆಚ್ಚಾದಾಗ ಈ ರೀತಿ ವಿಶಿಲ್ ಕೇಳಿಸುತ್ತದೆ ಮತ್ತು ಈ ಒತ್ತಡದ ಕಾರಣದಿಂದ ಗ್ಯಾಸ್ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.
ಕುಕ್ಕರ್ ಮುಚ್ಚಳ ಅಲುಗಾಡುವುದು: ಪ್ರೆಶರ್ ಕುಕ್ಕರ್ನ ಮುಚ್ಚಳವು ಪದೇ ಪದೇ ಅಥವಾ ನಿರಂತರವಾಗಿ ಅಲುಗಾಡುತ್ತಿದ್ದರೆ, ಅದು ಅಪಾಯದ ಸೂಚನೆಯೂ ಆಗಿರಬಹುದು. ಈ ರೀತಿಯ ಸೂಚನೆ ಕಾಣಿಸಿಕೊಂಡರೆ ತಕ್ಷಣ ಗ್ಯಾಸ್ ಆಫ್ ಮಾಡಿ, ಒತ್ತಡವನ್ನು ಬಿಡುಗಡೆ ಮಾಡಿ, ತದನಂತರ ಕುಕ್ಕರ್ ತೆರೆದು ಪರಿಶೀಲಿಸಿ.
ರಬ್ಬರ್ ಗ್ಯಾಸ್ಕೆಟ್ ಹೊರಬರುವುದು: ಪ್ರೆಶರ್ ಕುಕ್ಕರ್ ಮೇಲಿನ ರಬ್ಬರ್ ರಿಂಗ್ ಮೇಲೇರಲು ಪ್ರಾರಂಭಿಸಿದರೆ ಅಥವಾ ಕರಗಿದಂತೆ ಕಂಡುಬಂದರೆ, ತಕ್ಷಣ ಗ್ಯಾಸ್ ಆಫ್ ಮಾಡಿ. ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ಕುಕ್ಕರ್ ಸ್ಫೋಟಗೊಳ್ಳುವುದರಿಂದ ಅಡುಗೆಮನೆಯಲ್ಲಿ ಸಂಭವಿಸುವ ಅಪಘಾತಗಳನ್ನು ನೀವು ತಡೆಯಬಹುದು.
ವೆಂಟ್ ಪೈಪ್ ಮುಚ್ಚಿಹೋಗಲು ಬಿಡಬೇಡಿ: ಕೆಲವೊಮ್ಮೆ, ಕುಕ್ಕರ್ನಲ್ಲಿ ಅಡುಗೆ ಮಾಡಿದ ನಂತರ ಸರಿಯಾಗಿ ಸ್ವಚ್ಛಗೊಳಿಸದ ಕಾರಣ, ವೆಂಟ್ ಪೈಪ್ ಮುಚ್ಚಿಹೋಗುತ್ತದೆ. ಇದರಿಂದಾಗಿ, ಕುಕ್ಕರ್ ಒಳಗಿನ ಉಗಿ ಹೊರಬರಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ಕುಕ್ಕರ್ ಮೇಲಿನ ಒತ್ತಡ ಹೆಚ್ಚಾಗುತ್ತದೆ ಮತ್ತು ಅದು ಸ್ಫೋಟಗೊಳ್ಳಬಹುದು. ಆದ್ದರಿಂದ ಯಾವಾಗಲೂ ಇದರ ಬಗ್ಗೆ ಗಮನ ಕೊಡಿ.
ರಬ್ಬರ್ ಬದಲಾಯಿಸುತ್ತಿರಿ: ಕುಕ್ಕರ್ನ ಮುಚ್ಚಳವು ರಬ್ಬರ್ ಸೀಲ್ ಅನ್ನು ಹೊಂದಿದ್ದು, ಇದು ಉಗಿ ಮತ್ತು ನೀರು ಹೊರಹೋಗುವುದನ್ನು ತಡೆಯುತ್ತದೆ. ಜೊತೆಗೆ ಇದು ಶಿಳ್ಳೆ ಸಂಪೂರ್ಣ ಮತ್ತು ಸಮಯಕ್ಕೆ ಸರಿಯಾಗಿ ಬರುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಅಡುಗೆ ಮಾಡುವಾಗ ರಬ್ಬರ್ ಸವೆದು ಹೋಗುವ, ಹರಿದು ಹೋಗುವ ಕಾರಣ ಇದನ್ನು ನೀವು ಮೂರು ತಿಂಗಳಿಗೊಮ್ಮೆ ಬದಲಾಯಿಸುತ್ತಿರಬೇಕು.
ಇದನ್ನೂ ಓದಿ: ಈ ಆಹಾರ ಪದಾರ್ಥಗಳನ್ನು ಪ್ರೆಶರ್ ಕುಕ್ಕರ್ನಲ್ಲಿ ಬೇಯಿಸುವ ತಪ್ಪನ್ನು ಎಂದಿಗೂ ಮಾಡಬೇಡಿ
ಕುಕ್ಕರ್ ಹೆಚ್ಚಿನ ಪ್ರಯಾಣದ ಆಹಾರ ತುಂಬಿಸಿ ಬೇಯಿಸಬೇಡಿ: ಕುಕ್ಕರ್ ಸಂಪೂರ್ಣ ತುಂಬುವವರೆಗೆ ಅದರಲ್ಲಿ ತರಕಾರಿ, ಆಹಾರ ಹಾಕಿ ಬೇಯಿಸಬಾರದು. ಹೀಗೆ ಸಂಪೂರ್ಣವಾಗಿ ತುಂಬಿಸುವುದರಿಂದ ಒಳಗೆ ಉತ್ಪತ್ತಿಯಾಗುವ ಉಗಿ ಹೋಗಲು ಯಾವುದೇ ಮಾರ್ಗವಿರುವುದಿಲ್ಲ. ಇದು ಒತ್ತಡದ ಮಟ್ಟವು ವೇಗವಾಗಿ ಏರಲು ಕಾರಣವಾಗುತ್ತದೆ ಮತ್ತು ಇದರಿಂದ ಕುಕ್ಕರ್ ಸ್ಫೋಟಗೊಳ್ಳಬಹುದು. ಆದ್ದರಿಂದ, ಯಾವಾಗಲೂ ಕುಕ್ಕರನ್ನು ಅದರ ಸಾಮರ್ಥ್ಯದ 2/3 ರಷ್ಟು ಮಾತ್ರ ತುಂಬಿಸಿ. ಜೊತೆಗೆ ಸರಿಯಾದ ಪ್ರಮಾಣದಲ್ಲಿ ನೀರು ಸೇರಿಸುವುದು ಸಹ ಮುಖ್ಯವಾಗಿರುತ್ತದೆ.
ಉತ್ತಮ ಗುಣಮಟ್ಟದ ಕುಕ್ಕರ್ಗಳ ಬಳಕೆ: ಯಾವಾಗಲೂ ಐಎಸ್ಐ ಗುರುತು ಹೊಂದಿರುವ ಉತ್ತಮ ಗುಣಮಟ್ಟದ ಕುಕ್ಕರ್ಗಳನ್ನೇ ಬಳಸಿ. ಏಕೆಂದರೆ ಇವುಗಳಲ್ಲಿ ಬಳಸಲಾಗುವ ವಸ್ತುಗಳು ಮತ್ತು ಸುರಕ್ಷತಾ ಕವಾಟಗಳು ಬಲಿಷ್ಟವಾಗಿರುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಡಬಲ್ ಡೆಕ್ಕರ್ ಬಸ್ ಸಂಚಾರಕ್ಕೆ ಚಾಲನೆ
ಬೆಂಗಳೂರು, ಜನವರಿ 22: ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಬಳಿಕ ಬೆಂಗಳೂರಲ್ಲೂ ಪ್ರವಾಸಿಗರಿಗೆ ಲಂಡನ್ ಮಾದರಿಯ ಬಸ್ ಸೇವೆ ನೀಡಲು ಕೆಎಸ್ಟಿಡಿಸಿ ಮುಂದಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಗರದ ಪ್ರಮುಖ ಸ್ಥಳಗಳನ್ನು ವೀಕ್ಷಿಸಲು 3 ಬಸ್ಗಳನ್ನು ಪರಿಚಯಿಸಿದ್ದು, ಅದಾಗಲೇ ಅವುಗಳಿಗೆ ಚಾಲನೆಯೂ ಸಿಕ್ಕಿದೆ. ಬೆಂಗಳೂರಿನ ಪ್ರವಾಸೋದ್ಯಮವನ್ನು ಹೆಚ್ಚಿಸುವ ಉದ್ದೇಶದಿಂದ ಈ ಬಸ್ಗಳ ಓಡಾಟ ಆರಂಭಿಸಲಾಗಿದ್ದು, ಐಷಾರಾಮಿ ಬಸ್ನಲ್ಲಿ ಕೂತು ನಗರದ ಅಂದ ಆಸ್ವಾಧಿಸುವ ಅವಕಾಶವನ್ನು ಪ್ರಯಾಣಿಕರಿಗೆ ಒದಗಿಸಲಾಗಿದೆ.
ಡಬಲ್ ಡೆಕ್ಕರ್ ಹೊಂದಿರುವ ಈ ಬಸ್ನಲ್ಲಿ ಐಷಾರಾಮಿ ಆಸನಗಳು, ಮೈಕ್ ಸಿಸ್ಟಂ ವ್ಯವಸ್ಥೆಗಳಿವೆ. ಹವಾನಿಯಂತ್ರಣ ಸೌಲಭ್ಯ ಹೊಂದಿರುವ ಬಸ್ನ ಲೋವರ್ ಡೆಕ್ನಲ್ಲಿ 24 ಐಷಾರಾಮಿ ಆಸನಗಳಿದ್ದು, ಓಪನ್ ಅಪ್ಪರ್ ಡೆಕ್ನಲ್ಲಿ20 ಆಸನಗಳಿವೆ. ಜೊತೆಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕುರಿತು ಪ್ರವಾಸಿಗರಿಗೆ ಪರಿಚಯಿಸಲು ಮೈಕ್ ಸಿಸ್ಟಂ ಕೂಡ ಅಳವಡಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್ ನ್ಯೂಸ್; KSTDC ವಿಶೇಷ ಪ್ಯಾಕೇಜ್
ರವೀಂದ್ರ ಕಲಾಕ್ಷೇತ್ರದಿಂದ ಬಸ್ ಸಂಚಾರ ಆರಂಭವಾಗಲಿದ್ದು ಕಾರ್ಪೊರೆಷನ್ ಸರ್ಕಲ್, ಹಡ್ಸನ್ ಸರ್ಕಲ್, ಕಸ್ತೂರಬಾ ರಸ್ತೆ, ವಿಶ್ವೇಶ್ವರಯ್ಯ ಮ್ಯೂಸಿಯಂ, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆ, ಅಂಚೆ ಕಚೇರಿ, ಹೈಕೋರ್ಟ್ / ವಿಧಾನಸೌಧ, ಕೆ.ಆರ್. ಸರ್ಕಲ್, ಹಡ್ಸನ್ ಸರ್ಕಲ್, ಕಾರ್ಪೊರೇಷನ್ ಸರ್ಕಲ್ ಮಾರ್ಗವಾಗಿ ಮರಳಿ ರವೀಂದ್ರ ಕಲಾಕ್ಷೇತ್ರಕ್ಕೆ ಬರಲಿದೆ.
ಡಬ್ಬಲ್ ಡೆಕ್ಕರ್ ಬಸ್ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತಲಾ 180 ರೂ. ಟಿಕೆಟ್ ದರ ಇರಲಿದೆ. ಒಮ್ಮೆ ಹಣ ಪಾವತಿಸಿ ಬ್ಯಾಂಡ್ ಪಡೆದರೆ ದಿನವಿಡೀ ಎಷ್ಟು ಬಾರಿಯಾದರೂ ಯಾವುದೇ ಡಬಲ್ ಡೆಕ್ಕರ್ ಬಸ್ನಲ್ಲಿ ಸಂಚರಿಸಬಹುದು. ಆದರೆ ಬ್ಯಾಂಡ್ನ ಇತರರಿಗೆ ವರ್ಗಾಯಿಸುವಂತಿಲ್ಲ. ಒಂದು ವೇಳೆ ಬ್ಯಾಂಡ್ ಹರಿದು ಹೋದರೆ ಮತ್ತೆ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಬಸ್ಗಳು ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಸಂಚಾರ ನಡೆಸಲಿವೆ.
ಕೆಎಸ್ಟಿಡಿಸಿ ವೆಬ್ಸೈಟ್ ವಿಳಾಸ: www.kstdc.co ಅಥವಾ ದೂರವಾಣಿ ಸಂಖ್ಯೆ 080 4334 4334/35 ಅಥವಾ ಮೊಬೈಲ್ ಸಂಖ್ಯೆ 8970650070/8970650075 ಮೂಲಕ ಡಬಲ್ ಡೆಕ್ಕರ್ ಬಸ್ ಬುಕ್ಕಿಂಗ್ ಮಾಡಬಹುದಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.