Saturn Retrograde 2026: ಜುಲೈ 26 ರಿಂದ ಶನಿ ವಕ್ರಿ ಚಲನೆ; ಈ ರಾಶಿಯವರು ಜಾಗರೂಕರಾಗಿರಿ! – Kannada News | Saturn Retrograde 2026: Shani Vakri’s Impact on Your Zodiac and Life

ಜುಲೈ 26 ರಿಂದ ಶನಿ ವಕ್ರಿ ಚಲನೆImage Credit source: Getty Images

ಜ್ಯೋತಿಷ್ಯ ಶಾಸ್ತ್ರದಲ್ಲಿ ‘ಕರ್ಮಫಲ ದಾತ’ ಹಾಗೂ ಶಿಸ್ತಿನ ದೇವರೆಂದೇ ಕರೆಯಲ್ಪಡುವ ಶನಿ ಗ್ರಹವು 2026ರ ಜುಲೈ 26 ರಿಂದ ವಕ್ರಿ ಚಲನೆಯನ್ನು (Saturn Retrograde) ಆರಂಭಿಸಲಿದೆ. ಈ ವಕ್ರಿ ಸ್ಥಿತಿಯು ಡಿಸೆಂಬರ್ 10, 2026 ರವರೆಗೆ ಮುಂದುವರಿಯಲಿದ್ದು, ಎಲ್ಲಾ ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. ಶನಿಯು ವಕ್ರಿಯಾದಾಗ ಹೊಸ ಕೆಲಸಗಳನ್ನು ಆರಂಭಿಸುವ ಬದಲು, ಹಳೆಯ ತಪ್ಪುಗಳನ್ನು ಸರಿಪಡಿಸಿ ಮತ್ತು ಆತ್ಮಾವಲೋಕನ ಮಾಡಿಕೊಳ್ಳಲು ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ.

ಶನಿ ವಕ್ರಿಯಾದಾಗ ಜಗತ್ತಿನ ಮೇಲೆ ಆಗುವ ಪ್ರಭಾವಗಳು:

ಶನಿ ಗ್ರಹವು ಪ್ರತಿ ವರ್ಷ ಕೆಲವು ತಿಂಗಳುಗಳ ಕಾಲ ವಕ್ರಿ ಸ್ಥಿತಿಗೆ ತಲುಪುತ್ತದೆ. ಶನಿಯು ಜವಾಬ್ದಾರಿ, ಶಿಸ್ತು, ಕಾನೂನು ಮತ್ತು ಜೀವನದ ರಚನೆಯನ್ನು ನಿಯಂತ್ರಿಸುವುದರಿಂದ, ಈ ಅವಧಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದು. ನಿಮ್ಮ ಹಳೆಯ ಅಭ್ಯಾಸಗಳು, ನಿರ್ಬಂಧಗಳು ಮತ್ತು ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವನ್ನು ಮರುಪರಿಶೀಲಿಸಲು ಇದು ಸೂಕ್ತ ಸಮಯವಾಗಿದೆ. ಶನಿಯು ಸರ್ಕಾರ ಮತ್ತು ಕಾನೂನನ್ನು ಪ್ರತಿನಿಧಿಸುವುದರಿಂದ, ದೇಶ-ವಿದೇಶಗಳಲ್ಲಿ ದೊಡ್ಡ ನೀತಿ ಬದಲಾವಣೆಗಳು ಅಥವಾ ಹಳೆಯ ಕಾನೂನುಗಳು ರದ್ದಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಶುಕ್ರ-ಕೇತು ಸಂಯೋಗ; ಈ 4 ರಾಶಿಯವರು ಜುಲೈನಲ್ಲಿ ಅತ್ಯಂತ ಜಾಗರೂಕರಾಗಿರಿ

2026ರ ಶನಿ ವಕ್ರಿ ಚಲನೆಯ ಪ್ರಮುಖ ದಿನಾಂಕಗಳು:

ಈ ವರ್ಷ ಶನಿಯ ವಕ್ರಿ ಚಲನೆಯು ಜುಲೈ 26 ರಿಂದ ಆರಂಭವಾಗಿ ಡಿಸೆಂಬರ್ 10 ರವರೆಗೆ ಮುಂದುವರಿಯಲಿದೆ. ಈ ಪ್ರಯಾಣವು ಮೇಷ ರಾಶಿಯಿಂದ (Aries) ಆರಂಭವಾಗಿ, ವಕ್ರಿ ಚಲನೆಯಲ್ಲೇ ಮೀನ ರಾಶಿಗೆ (Pisces) ಮರಳಲಿದೆ. ಮೇಷ ರಾಶಿಯು ಆತ್ಮಗೌರವ ಮತ್ತು ಹೊಣೆಗಾರಿಕೆಯನ್ನು ಸೂಚಿಸುವುದರಿಂದ, “ನಿಮ್ಮ ಪ್ರಸ್ತುತ ಪರಿಸ್ಥಿತಿಗೆ ನೀವೇ ಜವಾಬ್ದಾರರೇ ಅಥವಾ ಇತರರನ್ನು ದೂಷಿಸುತ್ತಿದ್ದೀರಾ?” ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಂತೆ ಶನಿ ಪ್ರೇರೇಪಿಸುತ್ತಾನೆ.

ರಾಶಿಗಳ ಮೇಲೆ ಉಂಟಾಗುವ ವೈವಿಧ್ಯಮಯ ಪ್ರಭಾವ:

ಶನಿಯು ಸುಮಾರು ಎರಡೂವರೆ ವರ್ಷಗಳ ಕಾಲ ಒಂದೊಂದು ರಾಶಿಯಲ್ಲಿ ನೆಲೆಸುತ್ತಾನೆ. ಈ ಬಾರಿಯ ವಕ್ರಿ ಚಲನೆಯು ವೈಯಕ್ತಿಕ ಜವಾಬ್ದಾರಿ ಮತ್ತು ಗಡಿಗಳನ್ನು (Boundaries) ನಿರ್ಧರಿಸಲು ನಮಗೆ ಕಲಿಸುತ್ತದೆ. ಶನಿ ದೇವನ ಸ್ವಂತ ರಾಶಿಗಳಾದ ಮಕರ (Capricorn) ಮತ್ತು ಕುಂಭ (Aquarius) ರಾಶಿಯವರು ಈ ಬದಲಾವಣೆಯನ್ನು ಅತ್ಯಂತ ತೀವ್ರವಾಗಿ ಅನುಭವಿಸುತ್ತಾರೆ. ಉಳಿದ ರಾಶಿಯವರು ಸಹ ತಮ್ಮ ಜೀವನದ ಶಿಸ್ತು ಮತ್ತು ನೇರ ನಡೆ-ನುಡಿಯ ಮೂಲಕ ಇತರರಿಂದ ಗೌರವವನ್ನು ಪಡೆಯಲಿದ್ದಾರೆ. ನೀವು ಎಷ್ಟು ಪ್ರಾಮಾಣಿಕವಾಗಿರುತ್ತೀರೋ, ಶನಿಯ ಅನುಗ್ರಹ ಅಷ್ಟು ಹೆಚ್ಚಾಗಿರುತ್ತದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂತ್ರಾಲಯದ ರಾಯರ ಮಠಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ! – Kannada News | Mantralayam Raghavendra Swamy Mutt Hundi Collection Reaches Rs 3.7 Crore in Just 21 Days

ರಾಯಚೂರು, ಜೂನ್ 26: ಪ್ರಸಿದ್ಧ ಪುಣ್ಯಕ್ಷೇತ್ರ ರಾಯಚೂರು ಜಿಲ್ಲೆಯ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕಳೆದೊಂದು ತಿಂಗಳಲ್ಲಿ ಲಕ್ಷಾಂತರ ಭಕ್ತರು ಹರಿದು ಬಂದಿದ್ದಾರೆ. ಈ ಭಕ್ತರ ಮಹಾಪೂರದ ನಡುವೆಯೇ ರಾಯರ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ. ಕೇವಲ 21 ದಿನಗಳ ಅವಧಿಯಲ್ಲಿ ಭಕ್ತರು ಹುಂಡಿಗೆ ಬರೋಬ್ಬರಿ 3,72,40,530 ರೂಪಾಯಿ ನಗದು ಹಣವನ್ನು ಕಾಣಿಕೆಯ ರೂಪದಲ್ಲಿ ಸಮರ್ಪಿಸಿದ್ದಾರೆ. ನಗದಿನ ಜೊತೆಗೆ 67 ಗ್ರಾಂ ಚಿನ್ನ ಹಾಗೂ 511 ಗ್ರಾಂ ಬೆಳ್ಳಿ ಕೂಡ ಹುಂಡಿಯಲ್ಲಿ ಸಂಗ್ರಹವಾಗಿದೆ. ಮಠದ ವ್ಯವಸ್ಥಾಪಕ ಸಪ್ತಗಿರಿ ಆಚಾರ್ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳು, ಮಠದ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಸಮ್ಮುಖದಲ್ಲಿ ಈ ಬೃಹತ್ ಕಾಣಿಕೆಯ ಎಣಿಕೆ ಕಾರ್ಯ ಶಾಸ್ತ್ರೋಕ್ತವಾಗಿ ನೆರವೇರಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವ ಮಟ್ಟದಲ್ಲಿ ಮಿನುಗಿದ ಹುಬ್ಬಳ್ಳಿ ಹುಡುಗಿ: ಜರ್ಮನಿಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಐಶ್ವರ್ಯಾ ಬಾಲೇಹೊಸೂರ್ – Kannada News | Aishwarya Balehosur Secures Silver for India in 50m Pistol at ISSF Junior Worlds

ಐಶ್ವರ್ಯಾ ಬಾಲೇಹೊಸೂರ್Image Credit source: Tv9 kannada

ಹುಬ್ಬಳ್ಳಿ, ಜೂ.26: ಜರ್ಮನಿಯ ಸುಲ್ ನಗರದಲ್ಲಿ ನಡೆದ ಐಎಸ್‌ಎಸ್‌ಎಫ್ (ISSF) ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್‌ಶಿಪ್‌ನ 50 ಮೀಟರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಹುಬ್ಬಳ್ಳಿಯ ಶೂಟರ್ ಐಶ್ವರ್ಯಾ ರವಿಚಂದ್ರ ಬಾಲೇಹೊಸೂರ್ (Aishwarya Balehosur) ಭರ್ಜರಿ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಅತ್ಯಂತ ರೋಮಾಂಚನಕಾರಿಯಾಗಿದ್ದ ಫೈನಲ್ ಪಂದ್ಯದಲ್ಲಿ ಕೂದಲೆಳೆ ಅಂತರದಲ್ಲಿ ಅವರಿಗೆ ಚಿನ್ನದ ಪದಕ ಕೈತಪ್ಪಿದೆ.  ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿಯನ್ನು ಮಾಡಿದೆ.

6ನೇ ಹಾಗೂ ಅಂತಿಮ ಸುತ್ತಿನ ಮುಕ್ತಾಯದ ವೇಳೆಗೆ ಐಶ್ವರ್ಯಾ ಮತ್ತು ರಷ್ಯಾದ ತಟಸ್ಥ ಅಥ್ಲೀಟ್ ಸೋಫಿಯಾ ಸ್ಮೆಟಾಂಕಿನಾ ಇಬ್ಬರೂ 540 ಅಂಕಗಳ ಸಮಾನ ಸ್ಕೋರ್ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದರು. ಆದರೆ, ನಿಖರವಾಗಿ ಗುರಿ ಇಟ್ಟ ಹೊಡೆದಿರುವ ಲೆಕ್ಕಾಚಾರದಲ್ಲಿ ರಷ್ಯಾದ ಶೂಟರ್ 12 ಬಾರಿ ಗುರಿ ತಲುಪಿದ್ದರೆ, ಐಶ್ವರ್ಯಾ 11 ಬಾರಿ ಮಾತ್ರ ಯಶಸ್ವಿಯಾಗಿದ್ದರು. ಕೇವಲ ಒಂದು ಇನ್ನರ್-10 ಶಾಟ್ ಕೊರತೆಯಿಂದಾಗಿ ಐಶ್ವರ್ಯಾ ಅವರಿಗೆ ಬೆಳ್ಳಿ ಪದಕ ಒಲಿದರೆ, ರಷ್ಯಾದ ಸೋಫಿಯಾ ಚಿನ್ನದ ಪದಕ ಗೆದ್ದುಕೊಂಡರು. ಇದೇ ಸ್ಪರ್ಧೆಯಲ್ಲಿ ಮಂಗೋಲಿಯಾದ ಅರಿಯುಂಜಯ ಅಮರಬಯಾಸ್ಗಲನ್ ಕಂಚಿನ ಪದಕ ಪಡೆದಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವುದು ನನ್ನ ಗುರಿ; ಟಿವಿ9 ಜೊತೆ ಯುವ ಟೆನಿಸ್ ಆಟಗಾರ್ತಿ ಸೃಷ್ಟಿ ಕಿರಣ್ ಮಾತು

ಸ್ಪರ್ಧೆಯ ಆರಂಭದಿಂದಲೂ ಅತ್ಯಂತ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಐಶ್ವರ್ಯಾ, ಮೊದಲ ಸುತ್ತಿನಲ್ಲಿಯೇ 90 ಅಂಕ ಗಳಿಸಿ ಭರ್ಜರಿ ಆರಂಭ ಪಡೆದಿದ್ದರು. ನಂತರದ ಸುತ್ತುಗಳಲ್ಲೂ ಸತತವಾಗಿ 90ಕ್ಕೂ ಹೆಚ್ಚು ಸ್ಕೋರ್ ಕಾಯ್ದುಕೊಳ್ಳುವ ಮೂಲಕ 5ನೇ ಸುತ್ತಿನವರೆಗೂ ಅಗ್ರಸ್ಥಾನದಲ್ಲಿದ್ದರು. ಭಾರತದ ಇತರ ಶೂಟರ್‌ಗಳಾದ ಪಾರ್ಶಿನಾ ಗುಪ್ತಾ 4ನೇ, ಸಂಸ್ಕೃತಿ ಬಾನಾ 8ನೇ ಮತ್ತು ಸೇಜಲ್ ಕಾಂಬ್ಳೆ 13ನೇ ಸ್ಥಾನ ಪಡೆದರು. ಇನ್ನು ಈ ಜಾಗತಿಕ ಟೂರ್ನಿಯಲ್ಲಿ ಭಾರತ ತಂಡವು ಒಟ್ಟು 7 ಚಿನ್ನ, 8 ಬೆಳ್ಳಿ ಮತ್ತು 10 ಕಂಚು ಸೇರಿ ಒಟ್ಟು 25 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಜಾಗತಿಕವಾಗಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಕಳೆದ ಫೆಬ್ರವರಿಯಷ್ಟೇ 18ನೇ ವಸಂತಕ್ಕೆ ಕಾಲಿಟ್ಟ ಐಶ್ವರ್ಯಾ ಅವರಿಗೆ ಶೂಟಿಂಗ್ ಕಲೆ ಹುಟ್ಟಿನಿಂದಲ್ಲೇ ಬಂದಿದೆ. ಅವರ ತಂದೆ ರವಿಚಂದ್ರ ಬಾಲೇಹೊಸೂರ್ ಅವರು ರಾಷ್ಟ್ರೀಯ ಮಟ್ಟದಲ್ಲಿ ‘ಸರ್ವಿಸಸ್’ ತಂಡವನ್ನು ಪ್ರತಿನಿಧಿಸಿದ್ದ ಖ್ಯಾತ ಶೂಟರ್ ಆಗಿದ್ದಾರೆ. ರವಿಚಂದ್ರ ಮತ್ತು ಅವರ ಸಹೋದರ ಶಿವಾನಂದ ಅವರು ಹುಬ್ಬಳ್ಳಿಯಲ್ಲಿ ನಡೆಸುತ್ತಿರುವ ಶೂಟಿಂಗ್ ಅಕಾಡೆಮಿಯಲ್ಲೇ ಐಶ್ವರ್ಯಾ ಕಠಿಣ ತರಬೇತಿ ಪಡೆದಿದ್ದಾರೆ.

ಈ ಹಿಂದೆ 2023ರಲ್ಲಿ ಕೇವಲ 15 ವರ್ಷದ ಪ್ರಾಯದಲ್ಲೇ ಭೋಪಾಲ್‌ನಲ್ಲಿ ನಡೆದ ಸೀನಿಯರ್ ನ್ಯಾಷನಲ್ಸ್‌ನ 50 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದು ದೇಶದ ಗಮನ ಸೆಳೆದಿದ್ದ ಐಶ್ವರ್ಯಾ, ಈ ವರ್ಷ ದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಶೂಟಿಂಗ್‌ನಲ್ಲಿ ಕಂಚು ಗೆದ್ದು ಅಂತರರಾಷ್ಟ್ರೀಯ ಕ್ವಾಲಿಫಿಕೇಶನ್ ಪಡೆದಿದ್ದರು. ಹುಬ್ಬಳ್ಳಿಯ ಈ ಯುವತಿಯ ಜಾಗತಿಕ ಸಾಧನೆಗೆ ಇಡೀ ಕರ್ನಾಟಕದಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆನೆಗಳ ವಾಸಸ್ಥಳಕ್ಕೆ ಧಕ್ಕೆ ಆತಂಕ: ಶಿವನಸಮುದ್ರದ ಮೇಲ್ಭಾಗದಲ್ಲಿ ಮಿನಿ ಜಲವಿದ್ಯುತ್ ಯೋಜನೆಗೆ ವಿರೋಧ – Kannada News | Forest Department Strongly Opposes Mini Hydroelectric Project Near Shivanasamudra Falls

ಶಿವನಸಮುದ್ರದ ಮೇಲ್ಭಾಗದಲ್ಲಿ ಮಿನಿ ಜಲವಿದ್ಯುತ್ ಯೋಜನೆಗೆ ವಿರೋಧImage Credit source: Tv9 Kannada

ಮಂಡ್ಯ, ಜೂನ್​​ 26: ಶಿವನಸಮುದ್ರ ಜಲಪಾತದ ಮೇಲ್ಭಾಗದ ಜಾಗದಲ್ಲಿ 24.75 ಮೆಗಾವಾಟ್ ಸಾಮರ್ಥ್ಯದ ಮಿನಿ ಜಲವಿದ್ಯುತ್ ಯೋಜನೆ ಸ್ಥಾಪಿಸುವ ಕುರಿತ ಖಾಸಗಿ ಕಂಪನಿಯ ಪ್ರಸ್ತಾವನೆಗೆ ಅರಣ್ಯ ಇಲಾಖೆಯ ಮೂರನೇ ಹಂತದ ಪರಿಶೀಲನೆ ವೇಳೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಯೋಜನೆ ಜಾರಿಗೆ ಬಂದರೆ ವನ್ಯಜೀವಿ, ವಿಶೇಷವಾಗಿ ಆನೆಗಳ ಸಂಚಾರಕ್ಕೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.

2005ರಲ್ಲಿ 20 ವರ್ಷಗಳ ಅವಧಿಗೆ ಪಯೋನಿಯರ್ ಪವರ್ ಕಾರ್ಪೊರೇಷನ್ ಲಿಮಿಟೆಡ್ಗೆ ಗುತ್ತಿಗೆ ನೀಡಲಾಗಿದ್ದ ಭೂಮಿಯ ಒಂದು ಭಾಗವನ್ನು ಮರುಹಂಚಿಕೆ ಮಾಡುವಂತೆ 2023ರಲ್ಲಿ ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಪ್ರಸ್ತಾವನೆ ಸಲ್ಲಿಸಿತ್ತು. ಈ ಭೂಮಿ ಎಂ.ಎಂ. ಹಿಲ್ಸ್ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಸತ್ತೇಗಾಲ ಪ್ರದೇಶದಲ್ಲಿನ ಶಿವನಸಮುದ್ರ ಜಲಪಾತದ ಮೇಲ್ಭಾಗದಲ್ಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಮುತ್ತತ್ತಿ ಕಾವೇರಿ ನದಿಯಲ್ಲಿ ಐವರು ಜಲಸಮಾಧಿ; ಕೊನೇ ಕ್ಷಣದ ವಿಡಿಯೋ ವೈರಲ್

ಮಾನವ-ಆನೆ ಸಂಘರ್ಷ ಹೆಚ್ಚುವ ಸಾಧ್ಯತೆ

ಇದೇ ವಿಚಾರ ಸಂಬಂಧ 2024ರ ಅಕ್ಟೋಬರ್ 16ರಂದು ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಬಿ. ಸಂತೋಷ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಆ ಪ್ರದೇಶದಲ್ಲಿ ಆನೆಗಳು ಮುಕ್ತವಾಗಿ ಸಂಚರಿಸುತ್ತಿವೆ ಎಂಬುದನ್ನು ಅವರು ವರದಿಯಲ್ಲಿ ಉಲ್ಲೇಖಿಸಿದ್ದರು. ಯೋಜನೆಗೆ ಅನುಮತಿ ನೀಡಿದರೆ ಮಾನವ-ಆನೆ ಸಂಘರ್ಷ ಹೆಚ್ಚುವ ಸಾಧ್ಯತೆ ಇದೆ. ಈಗಾಗಲೇ ವನ್ಯಜೀವಿ ಸಂಘರ್ಷ ಪ್ರಕರಣಗಳಲ್ಲಿ ಶೇ.65ರಷ್ಟು ಆನೆಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಅವರು ಎಚ್ಚರಿಸಿದ್ದರು. ಆದರೆ ವರದಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ನಂತರ ಹಿರಿಯ ಅಧಿಕಾರಿಯೊಬ್ಬರು ಮೊದಲ ವರದಿಯನ್ನು ಕಡೆಗಣಿಸಿ ಯೋಜನೆಯನ್ನು ಮರುಪರಿಶೀಲಿಸಲು ಸೂಚಿಸಿದ್ದರು. 2025ರ ಮಾರ್ಚ್‌ನಲ್ಲಿ ಸಂತೋಷ್ ಕುಮಾರ್ ಅವರ ಸ್ಥಾನಕ್ಕೆ ಬಂದ ವೈ. ಚಕ್ರಪಾಣಿ ಸಲ್ಲಿಸಿದ ಎರಡನೇ ವರದಿಯಲ್ಲಿ ಮೊದಲ ವರದಿಯಲ್ಲಿದ್ದ ಆಕ್ಷೇಪಗಳನ್ನು ಕೈಬಿಡಲಾಗಿತ್ತು. ಈ ಬೆಳವಣಿಗೆ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಬಳಿಕ ಇಲಾಖೆಯು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಸೂಚಿಸಿತ್ತು. 2025ರ ಜುಲೈನಲ್ಲಿ ಡಿಸಿಎಫ್ ಆಗಿ ಅಧಿಕಾರ ವಹಿಸಿಕೊಂಡ ಭಾಸ್ಕರ್ ಬಿ. ಅವರು 2026ರ ಮಾರ್ಚ್‌ನಲ್ಲಿ ಸಲ್ಲಿಸಿದ ಮೂರನೇ ವರದಿಯಲ್ಲಿ ಯೋಜನೆಯನ್ನು ತಿರಸ್ಕರಿಸುವಂತೆ ಶಿಫಾರಸು ಮಾಡಿದ್ದಾರೆ.

ವರದಿ ಪ್ರಕಾರ, ಯೋಜನೆ ಪ್ರಸ್ತಾಪಿಸಿರುವ ಪ್ರದೇಶವು ಪರಿಸರ ಸೂಕ್ಷ್ಮ ವಲಯ (Ecologically Sensitive Zone) ಹಾಗೂ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಸೇರಿದೆ. ಈ ಪ್ರದೇಶದಲ್ಲಿ ಆನೆ, ಜಿಂಕೆ (Spotted Deer), ಕಾಡುಹಂದಿ, ಮುಂಗುಸಿ ಸೇರಿದಂತೆ ಹಲವು ವನ್ಯಜೀವಿಗಳು ವಾಸಿಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯೋಜನೆಯ ಸ್ಥಳವು ಅಧಿಕೃತವಾಗಿ ಘೋಷಿತ ಆನೆ ಕಾರಿಡಾರ್ ವ್ಯಾಪ್ತಿಗೆ ಸೇರದಿದ್ದರೂ, ಆನೆಗಳಿಗೆ ಇದು ಅತ್ಯಂತ ಪ್ರಮುಖ ವಾಸಸ್ಥಳವಾಗಿದೆ. ಇಲ್ಲಿ ಯಾವುದೇ ಹೊಸ ನಿರ್ಮಾಣ ಚಟುವಟಿಕೆ ಕೈಗೊಂಡರೆ ಈಗಾಗಲೇ ಸೂಕ್ಷ್ಮವಾಗಿರುವ ಮಾನವ-ವನ್ಯಜೀವಿ ಸಂಘರ್ಷ ಪರಿಸ್ಥಿತಿಗೆ ಮತ್ತಷ್ಟು ಹಾನಿಯಾಗಲಿದೆ ಎಂದು ಮೂರನೇ ವರದಿಯಲ್ಲಿ ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:27 am, Fri, 26 June 26

Source link

‘ಮೋಡ ಕವಿದ ವಾತಾವರಣ’ದಲ್ಲಿ ಬೆಚ್ಚಗಾಗಿಸೋ ಸಿಂಪಲ್ ಸುನಿ – Kannada News | Mooda Kavida Vaathavarana Movie Review: Simple Suni Delivers a Romantic Thriller

‘ಸಿಂಪಲ್ ಆಗ್ ಒಂದ್ ಲವ್​ ಸ್ಟೋರಿ’ ಸಿನಿಮಾ 2013ರಲ್ಲಿ ರಿಲೀಸ್ ಆಯಿತು. ಸುನಿ ನಿರ್ದೇಶನದ ಈ ಚಿತ್ರ ಓಪನ್ ಆಗೋದ ಮಳೆಯ ದೃಶ್ಯದಿಂದ. ಈಗ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾ ಬಂದಿದೆ. ಈ ಚಿತ್ರದ ಓಪನ್ ದೃಶ್ಯದಲ್ಲೂ ಮಳೆ ಇದೆ. ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ರೀತಿಯ ಕವನದ ಸಾಲುಗಳು ಇಲ್ಲಿಯೂ ಬಂದು ಹೋಗುತ್ತವೆ. ಆ ಸಿನಿಮಾ ರೀತಿಯೇ ಇಲ್ಲಿಯೂ ಕಥೆ ಸಿಂಪಲ್. ಆದರೆ, ಒಂದಷ್ಟು ಥ್ರಿಲ್ ಹಾಗೂ ಕಥೆಯ ಮೂಲಕ ಸುನಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಅಲ್ಲಲ್ಲಿ ಥ್ರಿಲ್ ಕೊಡುತ್ತಾ, ಪ್ರೀತಿಯ ಮಳೆ ಸುರಿಸುತ್ತಾ, ಶೃಂಗಾರದ ಹೊಳೆ ಹರಿಸುತ್ತಾ, ಸಾಗುತ್ತದೆ ‘ಮೋಡ ಕವಿದ ವಾತಾವರಣ’. ಹಾಗಾದರೆ ಚಿತ್ರ ಹೇಗಿದೆ? ಇಲ್ಲಿದೆ ವಿಮರ್ಶೆ.

ಚೆರಿಶ್ (ಶೀಲಮ್) ಸಿಂಪಲ್ ಹುಡುಗ. ಆತನಿಗೆ ಜೀವನ ಹಾಗೂ ಪ್ರೀತಿ ಎರಡರಲ್ಲೂ ಗಂಭೀರತೆ ಇಲ್ಲ. ಪ್ರೀತಿಸಿದ ಹುಡುಗಿ ಸಾತ್ವಿಕಾ (ಸಾತ್ವಿಕಾ) ಜೊತೆ ಪದೇ ಪದೇ ಬ್ರೇಕಪ್ ಆಗುತ್ತಲೇ ಇರುತ್ತದೆ. ಇದೆಲ್ಲವನ್ನೂ ಸಾರ್ಟ್​​​ಔಟ್ ಮಾಡಬೇಕು, ಭವಿಷ್ಯದ ಬಗ್ಗೆ ಮಾತನಾಡಬೇಕು ಎಂದು ಆಕೆಯ ಜೊತೆ ಒಂದು ರೆಸಾರ್ಟ್​​ಗೆ ತೆರಳುತ್ತಾನೆ. ಅಲ್ಲಿ ಸೌಪರ್ಣಿಕಾ (ಮೋಕ್ಷಾ ಕುಶಾಲ್) ಭೇಟಿ ಆಗುತ್ತದೆ. ಆಕೆಗೆ ಎಂಗೇಜ್​​ಮೆಂಟ್ ಕೂಡ ಆಗಿರುತ್ತದೆ. ಅಲ್ಲಿಂದ ಕಥೆ ಬೇರೆಯದೇ ರೀತಿ ಸಾಗುತ್ತದೆ. ಹಾಗಾದರೆ ಇದು ಟ್ರಯಾಂಗಲ್ ಲವ್​ ಸ್ಟೋರಿನಾ? ಸೌಪರ್ಣಿಕಾ ಭೇಟಿ ಬಳಿಕ ಏನೆಲ್ಲ ಆಗುತ್ತದೆ ಎಂಬುದನ್ನು ಥಿಯೇಟರ್​​ನಲ್ಲಿಯೇ ನೋಡಬೇಕು.

ಸಿಂಪಲ್ ಸುನಿಯ ಸ್ಟ್ರೆಂತ್ ಎಂದರೆ ಹಾಸ್ಯ ಹಾಗೂ ಪಂಚಿಂಗ್​ ಡೈಲಾಗ್​​ಗಳು. ‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ಅವರು ಹಾಸ್ಯದ ಬಗ್ಗೆ ಅಷ್ಟಾಗಿ ಗಮನ ಕೊಟ್ಟಿಲ್ಲ. ಬದಲಿಗೆ ಥ್ರಿಲ್ಲರ್ ಅಂಶ, ಶೃಂಗಾರದ ಮೂಲಕ ಪ್ರೇಕ್ಷಕರನ್ನು ಬೆಚ್ಚಗಾಗಿಸುತ್ತಾರೆ. ಇಂಟರ್​​ವಲ್ ವೇಳೆ ಸೀಟಿನ ತುದಿಯಲ್ಲಿ ತಂದು ಕೂರಿಸುತ್ತಾರೆ. ದ್ವಿತೀಯಾರ್ಧದಲ್ಲಿ ಪುಟಗಳು ತಿರುವಿ ಹಾಕಿದಂತೆಲ್ಲ ಹೊಸ ಹೊಸ ವಿಷಯಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅಸಲಿಗೆ ಏನಾಗುತ್ತಿದೆ ಎಂಬುದನ್ನು ತಿಳಿಯಲು ಕ್ಲೈಮ್ಯಾಕ್ಸ್​​ವರೆಗೆ ಕಾಯಲೇಬೇಕು. ಆ ರೀತಿಯಲ್ಲಿ ಸುನಿ ಸಿನಿಮಾ ಮಾಡಿದ್ದಾರೆ.

ಸುನಿ ಸಿನಿಮಾದ ಮತ್ತೊಂದು ಹೈಲೈಟ್ ಎಂದರೆ ಪ್ರೀತಿ-ಪ್ರೇಮ-ಪ್ರಣಯ. ಈ ಚಿತ್ರದಲ್ಲಿ ಈ ಮೂರು ಅಂಶಗಳನ್ನು ಬೆರೆಸಿದ್ದಾರೆ. ಆದರೆ, ಪ್ರೀತಿ ಎಂಬ ವಿಷಯವನ್ನು ಆಳವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಅವರು ಆಯ್ದುಕೊಂಡ ಕಥೆ ಉತ್ತಮವಾಗಿ ಹೊಂದಿಕೆ ಆಗಿದೆ. ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು, ಸಣ್ಣ ಬಜೆಟ್​ನಲ್ಲಿ ಹೇಗೆ ಮಾಡಬೇಕು ಎಂಬುದಕ್ಕೆ ಸುನಿ ಮಾದರಿ ಆಗುತ್ತಾರೆ. ಜುಡಾ ಸ್ಯಾಂಡಿ ಸಂಗೀತ ಚಿತ್ರದ ಮೆರುಗನ್ನು ಹೆಚ್ಚಿಸಿದೆ.
ಪಾತ್ರವರ್ಗದ ವಿಷಯಕ್ಕೆ ಬರೋದಾದರೆ ಶೀಲಮ್ ಅವರು ಚಾಕೋಲೇಟ್ ಬಾಯ್ ಆಗಿ ಇಷ್ಟ ಆಗುತ್ತಾರೆ. ಅವರು ಭರವಸೆ ಮೂಡಿಸುತ್ತಾರೆ. ಮೋಕ್ಷಾ ಕುಶಾಲ್ ಹಾಗೂ ಸಾತ್ವಿಕಾ ಅವರು ತಮ್ಮ ನಟನೆ ಮೂಲಕ ಗಮನ ಸೆಳೆದಿದ್ದಾರೆ. ರಿಷಿ ಅವರ ಅತಿಥಿ ಪಾತ್ರ ಸಿನಿಮಾಗೆ ದೊಡ್ಡ ತಿರುವು ನೀಡುತ್ತದೆ.

ಇದನ್ನೂ ಓದಿ: ‘ಮೋಡ ಕವಿದ ವಾತಾವರಣ’: ಹೊಸ ಹೀರೋ ಪರಿಚಯಕ್ಕೆ ಟೀಸರ್ ತೋರಿಸಿದ ಸಿಂಪಲ್ ಸುನಿ

ಹಾಗಾದರೆ ಸಿನಿಮಾ ಪರ್ಫೆಕ್ಟಾ?

ಇಲ್ಲ, ‘ಮೋಡ ಕವಿದ ವಾತಾವರಣ’ ಪರ್ಫೆಕ್ಟ್ ಅಲ್ಲ. ಇದರಲ್ಲೂ ಕೆಲವು ನೆಗೆಟಿವ್ ವಿಷಯಗಳು ಇವೆ. ಸಿನಿಮಾದಲ್ಲಿ ಲವ್ ವಿಷಯವನ್ನು ಆಳವಾಗಿ ಹೇಳಲಾಗಿದೆ. ಇದು ಕೆಲವರಿಗೆ ಬೌನ್ಸರ್ ರೀತಿಯಲ್ಲಿ ಫೀಲ್ ಆಗಬಹುದು. ಇನ್ನು ಕ್ಲೈಮ್ಯಾಕ್ಸ್ ವೇಳೆಗೆ ಸಿನಿಮಾ ತುಂಬಾನೇ ವೇಗ ಪಡೆದುಕೊಳ್ಳುವುದರಿಂದ ಸ್ವಲ್ಪ ಗೊಂದಲಗಳು ಸೃಷ್ಟಿ ಆಗಬಹುದು. ಸಣ್ಣ-ಪುಟ್ಟ ತಪ್ಪುಗಳನ್ನು ಮನ್ನಿಸಿ ನೀವು ಸಿನಿಮಾ ವೀಕ್ಷಿಸುತ್ತೀರಿ ಎಂದಾದರೆ, ಮಳೆಗಾಲದಲ್ಲಿ ‘ಮೋಡ ಕವಿದ ವಾತಾವರಣ’ ಉತ್ತಮ ಆಯ್ಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಮ್ಮ ಮೆಟ್ರೋ ರೈಲು ಮತ್ತೆ ಕೈಕೊಟ್ಟಿದ್ದೇಕೆ? ಬಾಗಿಲು ಲಾಕ್ ಆಗದೇ ಇದ್ದುದರ ಅಸಲಿ ಕಾರಣ ಬಯಲು – Kannada News | BMRCL Clarifies: Passenger’s Metal Chain Caused Cubbon Park Metro Door Malfunction and Service Delay

ಪರ್ಪಲ್ ಲೈನ್ ಮೆಟ್ರೋ ರೈಲು (ಸಂಗ್ರಹ ಚಿತ್ರ) ಹಾಗೂ ರೈಲಿನ ಬಾಗಿಲಿನ ಡೋರ್ ಗೈಡ್‌ವೇ ಯಲ್ಲಿ ಸಿಲುಕಿಕೊಂಡಿದ್ದ ಲೋಹದ ಸರImage Credit source: tv9

ಬೆಂಗಳೂರು, ಜೂನ್ 26: ನಮ್ಮ ಮೆಟ್ರೋದ ನೇರಳೆ ಮಾರ್ಗದ (Purple Line) ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಗುರುವಾರ ಸಂಜೆ ರೈಲಿನ ಬಾಗಿಲು ಮುಚ್ಚದೆ ಪ್ರಯಾಣಿಕರು ಆತಂಕಗೊಂಡಿದ್ದ ಮತ್ತು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರೈಲಿನಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಎಂಆರ್‌ಸಿಎಲ್, ಘಟನೆಗೆ ಕಾರಣವಾದ ಅಸಲಿ ಸತ್ಯವನ್ನು ಬಿಚ್ಚಿಟ್ಟಿದೆ.

ಡೋರ್ ಗೈಡ್‌ವೇನಲ್ಲಿ ಸಿಲುಕಿದ್ದ ಮೆಟಲ್ ಚೈನ್

ಗುರುವಾರ ಸಂಜೆ 7:36 ರ ಸುಮಾರಿಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಸರಿಯಾಗಿ ಮುಚ್ಚದ ಕಾರಣ ಮುಂಜಾಗ್ರತಾ ಕ್ರಮವಾಗಿ ಸಂಜೆ 7:54 ರವರೆಗೆ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿತ್ತು.

ಕಾರಣ ಪತ್ತೆ ಹಚ್ಚಿದ ಬಿಎಂಆರ್​ಸಿಎಲ್ ನಿರ್ವಹಣಾ ತಂಡ

ಈ ಘಟನೆಯ ಬೆನ್ನಲ್ಲೇ ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಜಂಟಿಯಾಗಿ ಸಮಗ್ರ ಪ್ರಾಥಮಿಕ ತನಿಖೆ ನಡೆಸಿದ್ದು, ಪ್ರಯಾಣಿಕರೊಬ್ಬರ ಲೋಹದ ಸರ ರೈಲಿನ ಬಾಗಿಲಿನ ಡೋರ್ ಗೈಡ್‌ವೇ ಯಲ್ಲಿ ಸಿಲುಕಿಕೊಂಡಿದ್ದನ್ನು ಪತ್ತೆ ಹಚ್ಚಿವೆ. ಇದರಿಂದಾಗಿಯೇ ಬಾಗಿಲುಗಳು ಸ್ವಯಂಚಾಲಿತವಾಗಿ ಲಾಕ್ ಆಗಲು ಸಾಧ್ಯವಾಗಿರಲಿಲ್ಲ ಎಂದು ವರದಿ ತಿಳಿಸಿದೆ.

ಪ್ರಯಾಣಿಕರ ಸುರಕ್ಷತೆಯೇ ನಮ್ಮ ಆದ್ಯತೆ: ಬಿಎಂಆರ್‌ಸಿಎಲ್

ರೈಲು ಹಾಗೂ ಅದರ ಬಾಗಿಲಿನ ವ್ಯವಸ್ಥೆಯನ್ನು ಸಮಗ್ರವಾಗಿ ತಾಂತ್ರಿಕ ಪರಿಶೀಲನೆಗೆ ಒಳಪಡಿಸಿದ ನಂತರ, ರೈಲಿನ ಉಪಕರಣಗಳಲ್ಲಿ ಯಾವುದೇ ರೀತಿಯ ದೋಷ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ‘ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಯೇ ಬಿಎಂಆರ್‌ಸಿಎಲ್‌ಗೆ ಅತ್ಯುನ್ನತ ಆದ್ಯತೆಯಾಗಿದೆ. ಸಾರ್ವಜನಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ನಿರಂತರ ಮೆಟ್ರೋ ಸೇವೆಗಳನ್ನು ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರು ಮೆಟ್ರೋ ಹತ್ತುವಾಗ ಮತ್ತು ಇಳಿಯುವಾಗ ತಮ್ಮ ಬ್ಯಾಗ್ ಹಾಗೂ ಸರಗಳಂತಹ ವಸ್ತುಗಳ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕವಾಗಿದೆ.

ಇದನ್ನೂ ಓದಿ: ಮತ್ತೆ ಕೈಕೊಟ್ಟ ನಮ್ಮ ಮೆಟ್ರೋ: ಬಾಗಿಲು ಲಾಕ್ ಆಗದೇ ನಿಂತಲ್ಲೇ ನಿಂತ ರೈಲು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಸತತ ಇಳಿಕೆ ಬಳಿಕ ಚಿನ್ನ, ಬೆಳ್ಳಿ ಬೆಲೆಯಲ್ಲಿ ಹೆಚ್ಚಳ – Kannada News | Gold Price Today on 26th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 26: ಸತತ ಇಳಿಕೆಯಾಗುತ್ತಿದ್ದ ಚಿನ್ನದ ಬೆಲೆ (Gold Rates) ಇಂದು ಶುಕ್ರವಾರ ತುಸು ಹೆಚ್ಚಿದೆ. ಆಭರಣ ಚಿನ್ನದ ಬೆಲೆ 13,000 ರೂಗಳ ಸಮೀಪಕ್ಕೆ ಹೋಗಿದೆ. ವಿದೇಶಗಳಲ್ಲಿ ಇವತ್ತು ಬಂಗಾರದ ದರದಲ್ಲಿ ಬದಲಾವಣೆ ಆಗಿಲ್ಲ. ಬೆಳ್ಳಿ ಬೆಲೆ ಭಾರತದಲ್ಲಿ ಚಿನ್ನದಂತೆ ಸ್ವಲ್ಪ ಹೆಚ್ಚಳ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,29,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,41,600 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,29,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 23,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,160 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,980 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,620 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,160 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,980 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,980 ರೂ
  • ಚೆನ್ನೈ: 13,220 ರೂ
  • ಮುಂಬೈ: 12,980 ರೂ
  • ದೆಹಲಿ: 12,995 ರೂ
  • ಕೋಲ್ಕತಾ: 12,980 ರೂ
  • ಕೇರಳ: 12,980 ರೂ
  • ಅಹ್ಮದಾಬಾದ್: 12,985 ರೂ
  • ಜೈಪುರ್: 12,995 ರೂ
  • ಲಕ್ನೋ: 12,995 ರೂ
  • ಭುವನೇಶ್ವರ್: 12,980 ರೂ

ಇದನ್ನೂ ಓದಿ: ಕೈಗಾರಿಕೆ, ಹೋಟೆಲ್‌ಗಳಿಗೆ ಬಿಗ್ ರಿಲೀಫ್; ಕಮರ್ಷಿಯಲ್ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಸರ್ಕಾರ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 541 ರಿಂಗಿಟ್ (12,494 ರುಪಾಯಿ)
  • ದುಬೈ: 483.25 ಡಿರಾಮ್ (12,461 ರುಪಾಯಿ)
  • ಅಮೆರಿಕ: 132 ಡಾಲರ್ (12,501 ರುಪಾಯಿ)
  • ಸಿಂಗಾಪುರ: 177 ಸಿಂಗಾಪುರ್ ಡಾಲರ್ (12,930 ರುಪಾಯಿ)
  • ಕತಾರ್: 486.50 ಕತಾರಿ ರಿಯಾಲ್ (12,641 ರೂ)
  • ಸೌದಿ ಅರೇಬಿಯಾ: 497 ಸೌದಿ ರಿಯಾಲ್ (12,535 ರುಪಾಯಿ)
  • ಓಮನ್: 50.70 ಒಮಾನಿ ರಿಯಾಲ್ (12,471 ರುಪಾಯಿ)
  • ಕುವೇತ್: 40.66 ಕುವೇತಿ ದಿನಾರ್ (12,507 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 235 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 235 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 235 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು! – Kannada News | Bengaluru: Five School Children Fall from Moving Omni Van, Sparking Safety Concerns

ಬೆಂಗಳೂರು, ಜೂನ್ 26: ನಗರದ ಗಾಯತ್ರಿ ಲೇಔಟ್‌ನಲ್ಲಿ ನಿನ್ನೆ (ಜೂ.25) ನಡೆದ ಘಟನೆಯಲ್ಲಿ, ಚಲಿಸುತ್ತಿದ್ದ ಓಮಿನಿ ವಾಹನದಿಂದ ಐವರು ಶಾಲಾ ಮಕ್ಕಳು ರಸ್ತೆಗೆ ಬಿದ್ದಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಅತಿಯಾಗಿ ತುಂಬಿದ್ದ ವಾಹನವು ರಸ್ತೆಯ ಗುಂಡಿಗೆ ಇಳಿದಾಗ ಹಿಂಭಾಗದ ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಂಡಿದೆ. ಮಕ್ಕಳು ವಾಹನದಲ್ಲಿ ಒತ್ತೊತ್ತಾಗಿ ಕುಳಿತಿದ್ದು, ಬಾಗಿಲು ತೆರೆದ ಕೂಡಲೇ ಮೂಟೆಗಳಂತೆ ರಸ್ತೆಗೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್, ಹಿಂಭಾಗದಲ್ಲಿ ಯಾವುದೇ ವಾಹನ ಬರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ವರದಿಯಾಗಿದೆ. ಮಕ್ಕಳನ್ನು ಕುರಿಮಂದೆಗಳಂತೆ ತುಂಬಿ ಅಜಾಗರೂಕತೆಯಿಂದ ವಾಹನ ಚಲಾಯಿಸುವ ಚಾಲಕರ ನಿರ್ಲಕ್ಷ್ಯ ಈ ಘಟನೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನಗೂ, ಡಿಕೆ ಶಿವಕುಮಾರ್​ಗೂ ರಾಜಕೀಯ, ವ್ಯವಾಹಾರಿಕ ಸಂಬಂಧ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ – Kannada News | BY Vijayendra Clarifies: No Political or Business Ties with DK Shivakumar, Denies Cross Voting Charges

ಮಂಗಳೂರು, ಜೂನ್ 26: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಮತ್ತು ಸಿಎಂ ಡಿಕೆ ಶಿವಕುಮಾರ್ (DK Shivakumar) ನಡುವೆ ರಾಜಕೀಯ ಮತ್ತು ವ್ಯಾವಹಾರಿಕ ಸಂಬಂಧವಿದೆ, ಅವರಿಬ್ಬರೂ ಬ್ಯುಸಿನೆಸ್ ಪಾರ್ಟ್ನರ್ಸ್ ಎಂಬ ಸುದ್ದಿ ಹಿಂದಿನಿಂದಲೂ ಚರ್ಚೆಯಲ್ಲಿತ್ತು. ಹೀಗಾಗಿಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರ ಅವರೇ ಅಡ್ಡ ಮತದಾನ ಮಾಡಿಸಿದ್ದಾರೆ ಎಂಬ ಆರೋಪವೂ ಈಗ ಮುನ್ನೆಲೆಗೆ ಬಂದಿದೆ. ಇದನ್ನು ತಳ್ಳಿಹಾಕಿರುವ ಬಿವೈವಿ, ಧರ್ಮಸ್ಥಳದಲ್ಲಿ ಸ್ಪಷ್ಟನೆ ನೀಡಿದ್ದಾರೆ.ಈ ವೇಳೆ ಅವರೊಂದಿಗೆ ಓರ್ವ ಸಂಸದ, 8 ಶಾಸಕರು ಹಾಗೂ ಇಬ್ಬರು ಎಂಎಲ್‌ಸಿಗಳು ಉಪಸ್ಥಿತರಿದ್ದರು.

ಕೇವಲ ದರ್ಶನಕ್ಕೆ ಬಂದಿದ್ದೇನೆ : ಬಿವೈವಿ

ಧರ್ಮಸ್ಥಳದ ಸನ್ನಿಧಿ ಗೆಸ್ಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೇಲಿನ ಎಲ್ಲಾ ಅಪಪ್ರಚಾರಗಳಿಗೂ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಿಂತು ಪೂರ್ಣವಿರಾಮ ಇಟ್ಟಿದ್ದಾರೆ. ಡ್ಡ ಮತದಾನದ ಪ್ರಸಂಗ ನನಗೆ ಹಾಗೂ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ಆಘಾತ ಮತ್ತು ನೋವು ತಂದಿತ್ತು. ನಾನು ಭಾವನಾತ್ಮಕ ವ್ಯಕ್ತಿಯಾಗಿದ್ದರಿಂದಲೇ ಸತ್ಯಾಸತ್ಯತೆ ಹೊರಬರಲಿ ಎಂದು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣದ ಮಾತುಗಳನ್ನಾಡಿದ್ದೆ. ಆದರೆ, ಪಕ್ಷದ ಹಿರಿಯರು ನಮ್ಮ ನಮ್ಮಲ್ಲೇ ಬಗೆಹರಿಸಿಕೊಳ್ಳೋಣ ಎಂದಿದ್ದರಿಂದ ಆ ನಿರ್ಧಾರದಿಂದ ಹಿಂದೆ ಸರಿದು, ಕೇವಲ ದರ್ಶನಕ್ಕೆ ಬಂದಿದ್ದೇನೆ ಎಂದು ವಿಜಯೇಂದ್ರ ವಿವರಿಸಿದ್ದಾರೆ.

ಇದನ್ನೂ ಓದಿ BY Vijayendra visit Dharmasthala: ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ

ಸ್ವಾಮಿಯ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ, ಇವೆಲ್ಲವೂ ಸುಳ್ಳು!

ಇದೇ ವೇಳೆ ತಮ್ಮದೇ ಪಕ್ಷದ ಕೆಲವರು ಮಾಡುತ್ತಿರುವ ಗಂಭೀರ ಆರೋಪಗಳಿಗೆ ಉತ್ತರಿಸಿದ ಅವರು, ನನಗೂ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಯಾವುದೇ ರಾಜಕೀಯ ಅಥವಾ ವ್ಯಾವಹಾರಿಕ ಸಂಬಂಧವಿಲ್ಲ. ಸಿಎಂ ಪರವಾಗಿ ನಾನೇ ಅಡ್ಡ ಮತದಾನಕ್ಕೆ ಸಹಕಾರ ನೀಡಿದ್ದೇನೆ ಎಂದು ನನ್ನ ವಿರುದ್ಧವೇ ಅಪಪ್ರಚಾರ ಮಾಡಲಾಗಿದೆ. ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ, ಇವೆಲ್ಲವೂ ಸುಳ್ಳು. ಕೆಪಿಸಿಸಿ ಅಧ್ಯಕ್ಷರಾಗಿದ್ದವರಿಗೆ ಹಾಗೂ ಸಿಎಂ ಸ್ಥಾನಕ್ಕೆ ನೀಡಬೇಕಾದ ಗೌರವವನ್ನಷ್ಟೇ ನಾನು ನೀಡುತ್ತಿದ್ದೇನೆ. ನನ್ನ ವಿರುದ್ಧ ಅಪಪ್ರಚಾರ ಮಾಡಿದವರಿಗೂ ಆ ದೇವರು ಒಳ್ಳೆಯದು ಮಾಡಲಿ ಎಂದು ಮಾರ್ಮಿಕವಾಗಿ ನುಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿ ಗಂಟೆಗೆ ಕೇವಲ 5 ನಿಮಿಷಗಳ ನಡಿಗೆ ನಿಮ್ಮ ಇಡೀ ದಿನದ ಮೂಡ್ ಬದಲಾಯಿಸುತ್ತೆ; ಇಲ್ಲಿದೆ ಸಂಶೋಧನೆಯ ವರದಿ – Kannada News | Desk Job Health Secret: Combat Sedentary Lifestyle with Hourly 5 Minute Walks

ಬೆಂಗಳೂರು,ಜೂ.26: ಇಂದಿನ ಆಧುನಿಕ ಜೀವನಶೈಲಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಿಂದ ಹಿಡಿದು ಕಚೇರಿಗಳಲ್ಲಿ ಕೆಲಸ ಮಾಡುವ ಬಹುತೇಕರು ದಿನದ 8 ರಿಂದ 10 ಗಂಟೆಗಳ ಕಾಲ ಕುಳಿತಲ್ಲೇ ಕಳೆಯುತ್ತಾರೆ. ಆದರೆ, ಹೀಗೆ ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು ಧೂಮಪಾನದಷ್ಟೇ ಅಪಾಯಕಾರಿ ಹಾಗೂ ಇದು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಖಿನ್ನತೆಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

ಇದಕ್ಕೆ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಪರಿಹಾರವೊಂದನ್ನು ಇತ್ತೀಚಿನ ಜಾಗತಿಕ ಸಂಶೋಧನೆಯೊಂದು ಕಂಡು ಹಿಡಿದೆ. ಖ್ಯಾತ ವೈದ್ಯಕೀಯ ನಿಯತಕಾಲಿಕೆ ಬ್ರಿಟಿಷ್ ಜರ್ನಲ್ ಆಫ್‌ ಸ್ಪೋರ್ಟ್ಸ್ ಮೆಡಿಸಿನ್ (BJSM) ಪ್ರಕಟಿಸಿರುವ ಹೊಸ ಅಧ್ಯಯನದ ಪ್ರಕಾರ, ಪ್ರತಿ ಗಂಟೆಗೆ ಕೇವಲ 5 ನಿಮಿಷಗಳ ಕಾಲ ನಡೆಯುವುದು ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದ ಮೇಲಾಗುವ ನಕಾರಾತ್ಮಕ ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಈ ಬಗ್ಗೆ ಬೆಂಗಳೂರು ಪೋಸ್ಟ್​​​​ ಎಂಬ ಎಕ್ಸ್​​​​​ ಖಾತೆ ಪೋಸ್ಟ್​ ಮಾಡಿದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಯೋಗ, ಸ್ಟ್ರೆಚಿಂಗ್ ಸುರಕ್ಷಿತವೇ? ತಜ್ಞರು ನೀಡಿರುವ ಮಾಹಿತಿ ನಿಮಗಾಗಿ

ಅಮೆರಿಕದ ಕೊಲಂಬಿಯಾ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಸೇರಿದಂತೆ ಹಲವು ತಜ್ಞರು ಸುಮಾರು 11,000ಕ್ಕೂ ಹೆಚ್ಚು ಜನರ ಮೇಲೆ ನಡೆಸಿರುವ ಈ ಸಂಶೋಧನೆಯಲ್ಲಿ ಕುತೂಹಲಕಾರಿ ಆರೋಗ್ಯ ರಹಸ್ಯಗಳು ಕಂಡು ಬಂದಿದೆ. ಕೆಲಸದ ಮಧ್ಯೆ ಗಂಟೆಗೊಮ್ಮೆ ಐದು ನಿಮಿಷಗಳ ಕಾಲ ಎದ್ದು ಲಘುವಾಗಿ ನಡೆಯುವುದರಿಂದ ಮನುಷ್ಯನ ಮನಸ್ಥಿತಿಸುಧಾರಿಸುತ್ತದೆ ಮತ್ತು ತೀವ್ರ ಮಾನಸಿಕ ದಣಿವು ನಿವಾರಣೆಯಾಗುತ್ತದೆ. ಜತೆಗೆ ಒಂದೇ ಸಮನೆ ಕುಳಿತುಕೊಳ್ಳುವುದರಿಂದ ಕಾಲುಗಳ ರಕ್ತನಾಳಗಳಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಕೇವಲ 5 ನಿಮಿಷಗಳ ವಾಕಿಂಗ್ ದೇಹದಲ್ಲಿ ಗ್ಲೂಕೋಸ್ ಮತ್ತು ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ಮತ್ತೆ ಚುರುಕುಗೊಳಿಸಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್​:

ಸಂಶೋಧನೆಯ ಪ್ರಕಾರ, ಗಂಟೆಗೊಮ್ಮೆ ಇಂತಹ ಚಿಕ್ಕ ಬ್ರೇಕ್ ತೆಗೆದುಕೊಳ್ಳುವುದರಿಂದ ಉದ್ಯೋಗಿಗಳ ಕೆಲಸದ ಜವಾಬ್ದಾರಿ ಅಥವಾ ಉತ್ಪಾದಕತೆಗೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ. ಬದಲಿಗೆ ಇದು ಮೆದುಳಿಗೆ ಆಮ್ಲಜನಕದ ಸರಬರಾಜನ್ನು ಹೆಚ್ಚಿಸಿ ಕೆಲಸದಲ್ಲಿ ಮತ್ತಷ್ಟು ಉತ್ಸಾಹ ಮೂಡಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version