ದೇವನಹಳ್ಳಿ, ಮಾರ್ಚ್ 29: ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮದಲ್ಲಿ ಶ್ರೀರಾಮನವಮಿ ಅಂಗವಾಗಿ ವಿತರಿಸಿದ ಅನ್ನಪ್ರಸಾದ ಸೇವಿಸಿದ ಭಕ್ತರಲ್ಲಿ ಫುಡ್ ಪಾಯಿಸನ್ ಆಗಿರುವುದು ಕಂಡುಬಂದಿದೆ. ನಿನ್ನೆ (ಮಾರ್ಚ್ 28) ದೇವಸ್ಥಾನದಲ್ಲಿ ನೀಡಿದ ಪ್ರಸಾದ ಸೇವಿಸಿದ ಬಳಿಕ ಹಲವರಿಗೆ ವಾಂತಿ, ಬೇಧಿ ಸಮಸ್ಯೆ ಕಾಣಿಸಿಕೊಂಡು ಬಹುತೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿವರ್ಷ ನಡೆಯುವಂತೆ ಈ ವರ್ಷವೂ ಅನ್ನಪ್ರಸಾದ ವಿತರಣೆ ಮಾಡಲಾಗಿತ್ತು. ಆದರೆ ಈ ಬಾರಿ ಪ್ರಸಾದ ಸೇವಿಸಿದ ಅನೇಕ ಭಕ್ತರು ಅಸ್ವಸ್ಥಗೊಂಡಿರುವುದು ಆತಂಕ ಮೂಡಿಸಿದೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ಗ್ರಾಮದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ತೀವ್ರ ಅಸ್ವಸ್ಥರಾದವರನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಲಾಗಿದೆ. ಉಳಿದವರಿಗೆ ಬೆಟ್ಟೇನಹಳ್ಳಿಯಲ್ಲೇ ವೈದ್ಯಕೀಯ ಸೇವೆ ಒದಗಿಸಲಾಗಿದೆ.
ಚಿಕ್ಕಮಗಳೂರು, ಮಾರ್ಚ್ 29: ಜಗತ್ತಿನಲ್ಲಿ ಮೋಸ ಹೋಗುವವರು ಇರುವವರೆಗೆ ಮೋಸ (Fraud) ಮಾಡುವವರು ಇರುತ್ತಾರೆ ಎಂಬ ಮಾತಿಗೆ ಈ ಸ್ಟೋರಿ ಒಂದು ಉದಾಹರಣೆ ಎನ್ನಬಹುದು. ಫೇಸ್ಬುಕ್ ಜಾಹೀರಾತು ನಂಬಿ ಓರ್ವ ವ್ಯಕ್ತಿ ಬರೋಬ್ಬರಿ 1.28 ಕೋಟಿ ರೂ ಕಳೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಚಿಕ್ಕಮಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶಿವಪುರ ಗ್ರಾಮದ ನಿವಾಸಿ ಕಲ್ಲೇಗೌಡ ಎಂಬುವರಿಗೆ ಖದೀಮರು ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಹೆಸರಲ್ಲಿ ಕೋಟ್ಯಂತರ ರೂ ಹಣ ವಂಚಿಸಿದ್ದಾರೆ. ‘FYERS’ ಎಂಬ ಟ್ರೇಡಿಂಗ್ ಜಾಹೀರಾತನ್ನು ಫೇಸ್ಬುಕ್ನಲ್ಲಿ ನೋಡಿದ ಕಲ್ಲೇಗೌಡರು F8-FYERS ಸೆಕ್ಯೂರಿಟೀಸ್ ವಾಟ್ಸಾಪ್ ಗ್ರೂಪ್ ಸೇರಿದ್ದಾರೆ.
ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಹೆಸರಲ್ಲಿ ಕಲ್ಲೇಗೌಡಗೆ ವಂಚಕರು ಹೆಚ್ಚಿನ ಲಾಭ ಗಳಿಸುವ ಆಸೆ ತೋರಿಸಿದ್ದಾರೆ. ಹಂತ ಹಂತವಾಗಿ 1 ಕೋಟಿ 28 ಲಕ್ಷದ 10 ಸಾವಿರ ರೂ. ಪಡೆದುಕೊಂಡಿದ್ದಾರೆ. ಆದರೆ ಯಾವುದೇ ರೀತಿಯ ಲಾಭಾಂಶ ನೀಡಿಲ್ಲ. ಹೀಗಾಗಿ ಕಲ್ಲೇಗೌಡರು ಹಣ ವಿತ್ಡ್ರಾ ಮಾಡಲು ಹೋದಾಗ ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಕಲ್ಲೇಗೌಡರಿಂದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಎರಡೆರಡು ಮನೆಗಳಿಗೆ ಕನ್ನಾ ಹಾಕಿದ ಖದೀಮರು
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ತಡರಾತ್ರಿ ಎರಡು ಕಡೆ ಮನೆಗಳ್ಳತನ ನಡೆದಿದ್ದು, ಖದೀಮರು ಬೆಳ್ಳಿ, ಚಿನ್ನಾಭರಣ ಮತ್ತು ಹಣವನ್ನು ಕಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದಲ್ಲಿ ವೃತ್ತಿಯಲ್ಲಿ ವಕೀಲರಾಗಿರುವ ಪ್ರವೀಣ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, 240 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಮತ್ತು 20 ಲಕ್ಷ ರೂ ಹಣ ಎಗರಿಸಿದ್ದಾರೆ. ಬೈಕ್ನಲ್ಲಿ ಬಂದಿದ್ದ ಇಬ್ಬರು ಕಿರಾತಕರಿಂದ ಕೃತ್ಯವೆಸಗಲಾಗಿದೆ.
ಮೊದಲಿಗೆ ರಾಮನಗರದ ಭುನೇಶ್ವರಿನಗರದಲ್ಲಿ ನಂಜುಂಡಯ್ಯ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. 68 ಗ್ರಾಂ ಚಿನ್ನಾಭರಣ ದೋಚಿ ಪರಾರಿ ಆಗಿದ್ದಾರೆ. ನಂತರ ಮುಖಕ್ಕೆ ಮಾಸ್ಕ್, ಕೈಗೆ ಗ್ಲೋಸ್ ಹಾಕಿಕೊಂಡು ಬಂದು ಚನ್ನಪಟ್ಟಣದಲ್ಲಿ ಕಳ್ಳತನ ಮಾಡಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಹಾಗೂ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ರಾಘವೇಂದ್ರ ಸ್ವಾಮಿಗಳ ಕುರಿತಾದ ಭಕ್ತಿ ಪ್ರಧಾನ ಕಥೆ ಹೊಂದಿರುವ ‘ಅಮಲಾಮೃತ’ (Amalamrutha) ಸಿನಿಮಾದ ಎಲ್ಲ ಕೆಲಸಗಳು ಮುಗಿದಿವೆ. ‘ಸಿರಿ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ಸಿದ್ಧವಾಗಿದೆ. ಮೈಸೂರು ಮೂಲದ ಗುರುರಾಜ ರಾವ್ ಎಂ.ಎಸ್. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೇ ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಯತಿಗಳು, ಸರ್ಕಾರಿ ಅಧಿಕಾರಿಗಳಿಗೆ ಈ ಸಿನಿಮಾ ವೀಕ್ಷಿಸಿದರು. ಸಿನಿಮಾ ನೋಡಿದ ಜನರ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ಖುಷಿ ಆಗಿದೆ.
ಕೆ.ಎಸ್. ಗೋವಿಂದರಾಮ ರಾವ್ ಅವರು ‘ಅಮಲಾಮೃತ’ ಸಿನಿಮಾದಲ್ಲಿ ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಬಾಹ್ಲೀಕರಾಜ, ವ್ಯಾಸರಾಜ ಹಾಗೂ ರಾಘವೇಂದ್ರ ಸ್ವಾಮಿಗಳಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ವೀರೇಂದ್ರ ಆಚಾರ್ಯ, ಸುಬ್ಬರಾವ್, ಚೈತ್ರಾ ಭಾರದ್ವಾಜ್, ಮಾಸ್ಟರ್ ಸುಚೇಂದ್ರ, ಯಶಸ್, ಸುಮನ್, ಶ್ರೀಕಾಂತ್, ದೀಪಕ್ ಮುಂತಾದವರು ನಟಿಸಿದ್ದಾರೆ.
‘ಅಮಲಾಮೃತ’ ಚಿತ್ರಕ್ಕಾಗಿ ಹರಿದಾಸರ 8 ಸಾಹಿತ್ಯಕ್ಕೆ ವಿದೂಷಿ ರತ್ನಪ್ರಸಾದ್ ಅವರು ಸಂಗೀತ ಸಂಯೋಜಿಸಿದ್ದಾರೆ. ಪ್ರದೀಪ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸ್ವಾಮಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಮೊದಲು ಪುರಂದರದಾಸರು ಮತ್ತು ಶ್ರೀ ಪಾದರಾಜರ ಸಾಕ್ಷಚಿತ್ರ ಸಿದ್ದಪಡಿಸಿದ್ದ ಅನುಭವದ ಮೇಲೆ ನಿರ್ದೇಶಕರು ಈ ಸಿನಿಮಾ ಮಾಡಿದ್ದಾರೆ.
‘ಆ ಅನುಭವದಿಂದಲೇ ನಿರ್ದೇಶನ ಹಾಗೂ ಬಂಡವಾಳ ಹೂಡಿದ್ದೇನೆ. ಅಮಲಾ ಮತ್ತು ಅಮೃತ ಇವರೆಡು ಅ ಅಕ್ಷರದಿಂದ ಕೂಡಿದೆ. ನವ ಭಕುತಿಯ ಜ್ಙಾನಯಘ್ನದ ಫಲಕ್ಕೆ ಅಮಲ ಅಂತಲೂ, ಸಾರಕ್ಕೆ ಅಮೃತ ಎಂದು ಕರೆಯುತ್ತಾರೆ. ನವಭಕುತಿ ಅಂದರೆ ಸಾಕ್ಷಾತ್ ಭಗವಂತನು ವೈಷ್ಣವ ತತ್ವದಲ್ಲಿ ನೀಡಿದ ಆದೇಶ. ಭಕ್ತಿಯಿಂದ 64 ವಿದ್ಯೆಗಳನ್ನು ಕಲಿತವರು ಶ್ರೀ ರಾಘವೇಂದ್ರ ಸ್ವಾಮಿಗಳು. ಅವರು ಪೂರ್ವಪರದಲ್ಲಿ ಐದು ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ಕರ್ಮಜದೇವತೆ, ಭಕ್ತ ಪ್ರಹ್ಲಾದ, ಬಾಹ್ಲೀಕರಾಜ, ವ್ಯಾಸರಾಜ ಕೊನೆಯದಾಗಿ ಗುರುಸಾರ್ವಭೌಮ’ ಎಂದು ಗುರುರಾಜ ರಾವ್ ಎಂ.ಎಸ್. ಹೇಳಿದರು.
‘ಇವೆಲ್ಲವು ಹುಟ್ಟಿಕೊಂಡ ಬಗೆ ಹೇಗೆ ಎಂಬುದರ ವಿವರವನ್ನು ತೋರಿಸಲಾಗಿದೆ. ರಾಯರಲ್ಲಿ ಇರುವ ನಿಷ್ಠೆ ಬೇರೆ ಯಾರಲ್ಲೂ ಕಾಣುವುದಿಲ್ಲ. ಸ್ವಾಮಿಗಳ ತಪಸ್ಸಿನ ಫಲ ಎಲ್ಲ ಜನಾಂಗಕ್ಕೂ ಪುಣ್ಯದ ಫಲ ಸಿಕ್ಕಿದೆ. ಯಾವುದೇ ರೀತಿಯಲ್ಲಿ ಶ್ರದ್ದೆಯಿಂದ ಬೃಂದಾವನಕ್ಕೆ ನಮಸ್ಕಾರ ಮಾಡಿದಾಗ ಮಾತ್ರ ಒಳ್ಳೆಯದಾಗುತ್ತದೆ ಎಂಬ ಸಂದೇಶ ಇರಲಿದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.
ಬುಲಂದ್ಶಹರ್, ಮಾರ್ಚ್ 29: ಮಗಳು ಚಾಕೊಲೇಟರ್ ಕದ್ದಿರಬಹುದು ಎನ್ನುವ ಸಂಶಯದಲ್ಲಿ ತಂದೆಯೊಬ್ಬ ಆಕೆಗೆ ದೊಣ್ಣೆಯಿಂದ ಹೊಡೆದು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ. ನರೋರಾದ ರತನ್ಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಪೂಜಾ ತನ್ನ ಹಣ ನೀಡದೆ ಚಾಕೊಲೇಟ್ ಪ್ಯಾಕೆಟ್ ತೆಗೆದುಕೊಂಡಿದ್ದಾಳೆ ಎಂದು ಅಂಗಡಿಯವ ಹೇಳಿದ ನಂತರ ಆಕೆಯ ಮೇಲೆ ತಂದೆ ಪುಷ್ಪೇಂದ್ರಗೆ ಕೋಪ ಬಂದಿತ್ತು.
ಆರೋಪದಿಂದ ಕೋಪಗೊಂಡ ಆರೋಪಿಗೆ ಮದ್ಯದ ಚಟ ಕೂಡ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ ಮನೆಗೆ ಹಿಂತಿರುಗಿದ ಬಳಿಕ ತನ್ನ ಮಗಳಿಗೆ ಮರದ ಕೋಲಿನಿಂದ ಹೊಡೆಯಲು ಶುರು ಮಾಡಿದ್ದ. ಹುಡುಗಿಯ ತಾಯಿ ಆರತಿ ನೀಡಿದ ದೂರಿನ ಪ್ರಕಾರ, ತಾನು ಪದೇ ಪದೇ ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ಆಕೆಗೆ ಹೊಡೆಯುವುದನ್ನು ಬಿಡಲೇ ಇಲ್ಲ.
ತಂದೆ ಕ್ರೂರವಾಗಿ ಆಕೆಗೆ ಥಳಿಸಿದಾಗ ಪೂಜಾಳ ತಲೆಗೆ ಗಂಭೀರವಾದ ಗಾಯವಾಗಿದ್ದು, ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಸಹಾಯ ಮಾಡುವ ಬದಲು, ತಂದೆ ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಮನೆಯೊಳಗೆ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದ, ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಕೂಗಾಟದ ನಂತರ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ದೇಹದ ಮೇಲೆ ತಲೆ ಮುರಿದಿರುವುದು ಸೇರಿದಂತೆ ಸುಮಾರು 10 ರಿಂದ 12 ಗಾಯಗಳ ಗುರುತುಗಳು ಕಂಡುಬಂದಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದು, ಪ್ರಸ್ತುತ ಆತ ಪರಾರಿಯಾಗಿದ್ದಾನೆ. ಕೆಲವು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇಂಥದ್ದೇ ಘಟನೆ ನಡೆದಿತ್ತು.
ಕಳ್ಳತನದ ಅನುಮಾನದ ಮೇಲೆ ತಂದೆಯೊಬ್ಬರು ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಹಿಂಸಿಸಿದ್ದರು , ಘಟನೆಯಲ್ಲಿ ಒಬ್ಬಳು ಮಗಳು ಪ್ರಾಣ ಕಳೆದುಕೊಂಡಿದ್ದಾರೆ.ದಾದು ಹೈಬತ್ ಯಮ್ಗರ್ ಎಂದು ಗುರುತಿಸಲಾದ ಆರೋಪಿ, 10 ವರ್ಷದ ಸಾನಿಕಾ ಮತ್ತು 11 ವರ್ಷದ ಅನುಜಾ ಅವರನ್ನು ಕಟ್ಟಿಹಾಕಿ ಅವರ ಮನೆಯೊಳಗೆ ತಲೆಕೆಳಗಾಗಿ ನೇತುಹಾಕಿದ್ದ ಎಂದು ತಿಳಿದುಬಂದಿದೆ.
ನಟರಿಗಾಗಿ ಪ್ರಾಣ ಕೊಡಲು ತಯಾರು ಎನ್ನುವ ಅಭಿಮಾನಿಗಳು ಇರುತ್ತಾರೆ. ಇಲ್ಲೊಬ್ಬ ಯುವಕ, ನಟನಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಡೆದಿರುವುದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ, ಪೂತಲಪಟ್ಟು ಎಂಬಂಲ್ಲಿ. ಪೂತಲಪಟ್ಟು ಬಳಿಯ ಶೇಷಾಪುರಂನ ಲೋಕೇಶ್ ಎಂಬ ಯುವಕ ಆತ್ಮಹತ್ಯೆಗೆ ಯತ್ನಿದ್ದು ‘ಜೆಟ್ಟಿ’ ಸಿನಿಮಾ ಖ್ಯಾತಿಯ ನಟ ಮಾನ್ಯಂ ಮುರಳಿ ಕೃಷ್ಣ ತನ್ನ ಈ ಸ್ಥಿತಿಗೆ ಕಾರಣ ಎಂದು ಲೋಕೇಶ್ ಬರೆದಿರುವ ಡೆತ್ ನೋಟ್ ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಚಿತ್ತೂರು ಜಿಲ್ಲೆಯ ಶೇಷಾಪುರಂ ಗ್ರಾಮದ ಲೋಕೇಶ್ ಎಂಬ ಯುವಕ, ನಟ ಮಾನ್ಯಂ ಮುರಳಿ ಕೃಷ್ಣ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ರೈಲ್ವೇ ಕಾಂಟ್ರಾಕ್ಟ್ ಕೊಡಿಸುವುದಾಗಿ ನಂಬಿಸಿ ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಮೂಲಕ ಸುಮಾರು 3.15 ಕೋಟಿ ರೂಪಾಯಿಗಳನ್ನು ನಟನಿಗೆ ಕೊಡಿಸಿದ್ದಾಗಿ ಲೋಕೇಶ್ ತಿಳಿಸಿದ್ದಾರೆ. ಈಗ ಆ ಹಣವನ್ನು ವಾಪಸ್ ಕೇಳಿದರೆ ನಟ ಕಿರುಕುಳ ನೀಡುತ್ತಿದ್ದಾರೆ ಎಂದು ಮನನೊಂದು ಲೋಕೇಶ್ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅಪ್ರಜ್ಞಾವಸ್ಥೆಯಲ್ಲಿದ್ದ ಲೋಕೇಶ್ ಅವರನ್ನು ಚಿತ್ತೂರಿನ ಬಂಗಾರುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಲೋಕೇಶ್ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯ ಇಲ್ಲವೆಂದು ಹೇಳಲಾಗುತ್ತಿದೆ.
ಲೋಕೇಶ್ ಬರೆದಿರುವ ಆತ್ಮಹತ್ಯೆ ಪತ್ರ ಇದೀಗ ವೈರಲ್ ಆಗುತ್ತಿದೆ, ‘ನನಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನನ್ನ ಪೋಷಕರು ಮತ್ತು ಹೆಂಡತಿ ಮಕ್ಕಳನ್ನು ಬೀದಿಗೆ ತಂದಿದ್ದೇನೆ. ಸಾಲಗಾರನಾಗಿ ತಲೆ ಎತ್ತಿ ಬದುಕಲು ಸಾಧ್ಯವಾಗುತ್ತಿಲ್ಲ. ನನ್ನ ಸಾವಿಗೆ ನಟ ಮಾನ್ಯಂ ಮುರಳಿ ಕೃಷ್ಣನೇ ಕಾರಣ. ರೈಲ್ವೇ ಕಾಂಟ್ರಾಕ್ಟ್ ಕೊಡಿಸುತ್ತೇನೆ ಎಂದು ಹೇಳಿ 3.15 ಕೋಟಿ ರೂಪಾಯಿ ಹಣ ಪಡೆದು ಮೋಸ ಮಾಡಿದ್ದಾನೆ. ಇದರಲ್ಲಿ ನನ್ನ ಅಣ್ಣ-ತಮ್ಮಂದಿರ ಮತ್ತು ಸಂಬಂಧಿಕರ ಹಣವೂ ಇದೆ. ಮುರಳಿ ಕೃಷ್ಣ ಮತ್ತು ಆತನ ತಮ್ಮ ಸೇರಿ ನಮ್ಮನ್ನು ವಂಚಿಸಿದ್ದಾರೆ. ಹಣ ಕೇಳಿದರೆ ಕೊಡುತ್ತಿಲ್ಲ. ಅಸಹಾಯಕನಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಬರೆದಿದ್ದಾರೆ.
ಸದ್ಯ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ನಟ ಮಾನ್ಯ ಮುರಳಿ ಕೃಷ್ಣಗೂ ನೊಟೀಸ್ ನೀಡುವ ಸಾಧ್ಯತೆ ಇದೆ. ಮಾನ್ಯ ಮುರಳಿ ಕೃಷ್ಣ ‘ಜೆಟ್ಟಿ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ, ಎಡಿಟರ್, ಸಹಾಯಕ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಇದೀಗ ವಂಚನೆ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ.
ಸಹಾಯವಾಣಿ
ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನಿಮಗೆ ಅಥವಾ ನಿಮ್ಮ ಪರಿಚಯದವರಿಗೆ ಮಾನಸಿಕ ಒತ್ತಡ, ಖಿನ್ನತೆ ಅಥವಾ ಆತ್ಮಹತ್ಯೆಯ ಆಲೋಚನೆಗಳಿದ್ದರೆ, ದಯವಿಟ್ಟು ತಕ್ಷಣವೇ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ. ಪರಿಣಿತರು ನಿಮಗೆ ಉಚಿತವಾಗಿ ಮತ್ತು ಗೌಪ್ಯವಾಗಿ ಸಮಾಲೋಚನೆ ನೀಡುತ್ತಾರೆ.
Tele MANAS (ಸರ್ಕಾರಿ ಸಹಾಯವಾಣಿ): 14416 ಅಥವಾ 1800-891-4416 (24×7 ಲಭ್ಯ)
ಮಂಡ್ಯ, (ಮಾರ್ಚ್ 29): ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಅದ್ದೂರಿಯಾಗಿ ಜರುಗಿತು. ಈ ಭವ್ಯ ಉತ್ಸವವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ನೆರೆದಿದ್ದರು. ವೈರಮುಡಿ ಬ್ರಹ್ಮೋತ್ಸವದ ಪ್ರಮುಖ ಆಕರ್ಷಣೆಯೆಂದರೆ ಶ್ರೀದೇವಿ ಮತ್ತು ಭೂದೇವಿ ಸಮೇತ ಚಲುವನಾರಾಯಣಸ್ವಾಮಿಯು ರತ್ನಖಚಿತ ವೈರಮುಡಿ ಕಿರೀಟವನ್ನು ಧರಿಸಿ ಭಕ್ತರಿಗೆ ದರ್ಶನ ನೀಡುವುದು. ಈ ವೈರಮುಡಿ ಕಿರೀಟವನ್ನು ದೇವರಿಗೆ ಧಾರಣೆ ಮಾಡುವ ಆ ಕ್ಷಣವು ಅತಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ವಿಶಿಷ್ಟ ಸಂದರ್ಭವನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಭಕ್ತರು ಮೇಲುಕೋಟೆಗೆ ಆಗಮಿಸಿದ್ದರು. ಇನ್ನು ಅತ್ಯಾಚಾರ ಪ್ರಕಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರವಾಗಿ ತಂದೆ ಎಚ್ಡಿ ರೇವಣ್ಣ ವಿಶೇಷ ಪೂಜೆ ಸಲ್ಲಿಸಿದರು. ರೇವಣ್ಣ ಹಾಗೂ ಪುತ್ರ ಸೂರಜ್ ವೈರಮುಡಿ ಬ್ರಹ್ಮೋತ್ಸವದಲ್ಲಿ ಪ್ರಜ್ವಲ್ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿದರು. ಈ ಮೂಲಕ ಆದಷ್ಟು ಬೇಗ ಜೈಲಿನಿಂದ ಆಚೆ ಬರಲಿ ಎಂದು ಬೇಡಿಕೊಂಡರು.
ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ (R. Ashwin) ವಿದೇಶಿ ಲೀಗ್ನತ್ತ ಮುಖ ಮಾಡಿದ್ದಾರೆ. ಈಗಾಗಲೇ ಐಪಿಎಲ್ನಿಂದ ನಿವೃತ್ತಿ ಘೋಷಿಸಿರುವ ಅವರು ಮುಂಬರುವ ಮೇಜರ್ ಲೀಗ್ ಕ್ರಿಕೆಟ್ (MLC) ಟೂರ್ನಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ಅಮೆರಿಕ ಕ್ರಿಕೆಟ್ ಬೋರ್ಡ್ ಆಯೋಜಿಸುವ ಟಿ20 ಲೀಗ್. ಈಗಾಗಲೇ ಮೂರು ಸೀಸನ್ ಮುಗಿಸಿರುವ ಎಂಎಲ್ಸಿಯ ನಾಲ್ಕನೇ ಆವೃತ್ತಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಕಣಕ್ಕಿಳಿಯಲು ಅಶ್ವಿನ್ ಒಪ್ಪಂದ ಮಾಡಿಕೊಂಡಿದ್ದಾರೆ.
ಇದರೊಂದಿಗೆ ಟೀಮ್ ಇಂಡಿಯಾ ಪರ ಆಡಿದ ಆಟಗಾರರ ಪೈಕಿ, ಅಮೆರಿಕದ ಈ ಟಿ20 ಲೀಗ್ನಲ್ಲಿ ಆಡುತ್ತಿರುವ ಮೊದಲ ಭಾರತೀಯ ಕ್ಯಾಪ್ಡ್ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಲಿದ್ದಾರೆ. ಈ ಮೂಲಕ ವಿದೇಶಿ ಲೀಗ್ನಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಅಶ್ವಿನ್ ಸಜ್ಜಾಗಿದ್ದಾರೆ.
ಇನ್ನು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದಲ್ಲಿ ಅಶ್ವಿನ್ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್, ನ್ಯೂಝಿಲೆಂಡ್ನ ಫಿನ್ ಅಲೆನ್, ವೆಸ್ಟ್ ಇಂಡೀಸ್ನ ರೊಮಾರಿಯೊ ಶೆಫರ್ಡ್ ಮತ್ತು ಪಾಕಿಸ್ತಾನದ ಹಾರಿಸ್ ರೌಫ್ ಅವರಂತಹ ಘಟಾನುಘಟಿ ಆಟಗಾರರೊಂದಿಗೆ ಕಣಕ್ಕಿಳಿಯಲಿದ್ದಾರೆ.
ನವದೆಹಲಿ, ಮಾರ್ಚ್ 29: ಭಾರತದ ಈಕ್ವಿಟಿಗಳಿಂದ ಮಾರ್ಚ್ ತಿಂಗಳಲ್ಲಿ 12.3 ಬಿಲಿಯನ್ ಡಾಲರ್ನಷ್ಟು ಎಫ್ಪಿಐಗಳ ಹೂಡಿಕೆಗಳು ಹೊರಹೋಗಿವೆ. ಅಂದರೆ, ಮಾರ್ಚ್ನಲ್ಲಿ ಈವರೆಗೂ (27, ಶುಕ್ರವಾರ) 1.14 ಲಕ್ಷ ಕೋಟಿ ರೂ ಈಕ್ವಿಟಿಗಳನ್ನು ವಿದೇಶೀ ಹೂಡಿಕೆದಾರರು ಮಾರಿದ್ದಾರೆ. ಇನ್ನೂ ಎರಡು ಟ್ರೇಡಿಂಗ್ ಸೆಷನ್ಗಳು ಉಳಿದಿದ್ದು, ಮತ್ತಷ್ಟು ಸಾವಿರಾರು ಕೋಟಿ ರೂ ಎಫ್ಪಿಐಗಳ (FPI- Foreign Portfolio Investors) ಹೊರಹರಿವು ಆಗುವ ನಿರೀಕ್ಷೆ ಇದೆ.
ಯಾವುದೇ ಒಂದು ತಿಂಗಳಲ್ಲಿ ಇಷ್ಟು ಮೊತ್ತದ ವಿದೇಶೀ ಹೂಡಿಕೆಗಳ ಹೊರಹರಿವು ಕಂಡಿದ್ದು ಇದೇ ಮೊದಲು. 2024ರ ಅಕ್ಟೋಬರ್ ತಿಂಗಳಲ್ಲಿ 94,017 ಕೋಟಿ ರೂ ಮೊತ್ತದಷ್ಟು ವಿದೇಶೀ ಹೂಡಿಕೆಗಳು ಹೊರಹೋಗಿದ್ದವು. ಅದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ ಹೊರಹರಿವಿನ ಮೈಲಿಗಲ್ಲು ಸೃಷ್ಟಿಯಾಗಿದೆ.
ಮಾರ್ಚ್ ತಿಂಗಳಲ್ಲಿ ಎಫ್ಪಿಐಗಳು ಸತತವಾಗಿ ಹೂಡಿಕೆಗಳನ್ನು ಹಿಂಪಡೆಯುತ್ತಿದ್ದ ಟ್ರೆಂಡ್ ಇತ್ತು. ಈಕ್ವಿಟಿ ಕ್ಯಾಷ್ ಮಾರ್ಕೆಟ್ನಲ್ಲಿ ಮಾರ್ಚ್ 27ರವರೆಗೆ ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಮಾರಿದ ಈಕ್ವಿಟಿಗಳ ಮೌಲ್ಯ 1,13,380 ಕೋಟಿ ರೂ ಎನ್ನಲಾಗಿದೆ.
2026ರಲ್ಲಿ, ಅಂದರೆ ಜನವರಿಯಿಂದ ಈಚೆಗೆ ಎಫ್ಪಿಐಗಳಿಂದ ಆಗಿರುವ ಹೂಡಿಕೆ ನಿರ್ಗಮನ ಒಟ್ಟು 1.27 ಲಕ್ಷ ಕೋಟಿ ರೂ. ಇದರಲ್ಲಿ ಮಾರ್ಚ್ ತಿಂಗಳದ್ದೇ ಸಿಂಹಪಾಲು. ಫೆಬ್ರುವರಿ ತಿಂಗಳಲ್ಲಿ ವಿಭಿನ್ನ ಟ್ರೆಂಡ್ ಇತ್ತು. ಎಫ್ಪಿಐಗಳು 22,615 ಕೋಟಿ ರೂನಷ್ಟು ಮೊತ್ತದ ಭಾರತೀಯ ಈಕ್ವಿಟಿಗಳನ್ನು ಖರೀದಿ ಮಾಡಿದ್ದವು. ಕಳೆದ 17 ತಿಂಗಳಲ್ಲೇ ಅತಿಹೆಚ್ಚು ಮಾಸಿಕ ಒಳಹರಿವು ಅದಾಗಿತ್ತು.
ಇರಾನ್ ಯುದ್ಧದ ಪರಿಣಾಮವು ಮಾರ್ಚ್ ತಿಂಗಳಲ್ಲಿ ಈಕ್ವಿಟಿ ಮಾರುಕಟ್ಟೆ ಮೇಲೆ ತೀವ್ರವಾಗಿ ಬಿದ್ದಿದೆ. ಹಾಗೆಯೇ, ಕಳೆದ 18 ತಿಂಗಳಲ್ಲಿ ಭಾರತದ ಈಕ್ವಿಟಿ ಮಾರುಕಟ್ಟೆಯ ಸಾಧನೆಯು ಇತರ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ದುರ್ಬಲ ಸಾಧನೆ ತೋರಿದೆ. ಹೀಗಾಗಿ, ಎಫ್ಪಿಐಗಳು ಭಾರತದ ಈಕ್ವಿಟಿಗಳಲ್ಲಿ ಹೂಡಿಕೆ ಕಡಿಮೆ ಮಾಡಿರಬಹುದು. ಇದರ ಜೊತೆಗೆ, ಅಮೆರಿಕದ ಬಾಂಡ್ ಯೀಲ್ಡ್ ಹೆಚ್ಚಿರುವುದು ಮತ್ತು ಜಾಗತಿಕವಾಗಿ ಹಣಕಾಸು ಸ್ಥಿತಿ ಸಂಕುಚಿತಗೊಂಡಿರುವುದು ಕೂಡ ಎಫ್ಪಿಐಗಳ ಹೊರಹರಿವಿಗೆ ಕಾರಣವಾಗಿರಬಹುದು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನಿರುದ್ಯೋಗಿ ಯುವಕ-ಯುವತಿಯರಿಗೆ ಕರ್ನಾಟಕ ಸರ್ಕಾರ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ಒಂದು ಮಹತ್ವದ ಉದ್ಯೋಗಾವಕಾಶ ಲಭಿಸಿದೆ. ಖ್ಯಾತ ಸಂಸ್ಥೆಯಾದ “ಸ್ವಿಗ್ಗಿ ಇನ್ಸ್ಟಾ ಮಾರ್ಟ್” (Swiggy Insta Mart) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಪಿಕರ್, ಪ್ಯಾಕರ್ ಮತ್ತು ಲೋಡಿಂಗ್ ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಕನಿಷ್ಠ ಎಸ್ಎಸ್ಎಲ್ಸಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳ ವಯಸ್ಸು 18 ರಿಂದ 35 ವರ್ಷದೊಳಗಿರಬೇಕು. ವಿಶೇಷವೆಂದರೆ, ಅಭ್ಯರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಕೆಲಸದ ಆಯ್ಕೆಯನ್ನು ಮಾಡಿಕೊಳ್ಳಬಹುದು.
ನೇರ ಸಂದರ್ಶನವು ಏಪ್ರಿಲ್ 02 ರಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿದೆ. ಆಸಕ್ತರು ಮಂಗಳೂರಿನ ಪಾಂಡೇಶ್ವರದಲ್ಲಿರುವ ಪಿಜ್ಜಾ ಮಾಲ್ ಎದುರಿನ, ಅಲ್ಬುಕರ್ಕ್ ಹೌಸ್ನ ಆದಾಯ ತೆರಿಗೆ ಕಚೇರಿ ಕಟ್ಟಡದಲ್ಲಿರುವ “ಸ್ವಿಗ್ಗಿ ಇನ್ಸ್ಟಾ ಮಾರ್ಟ್” ಕಚೇರಿಗೆ ನೇರವಾಗಿ ಭೇಟಿ ನೀಡಬಹುದು. ಈ ಸಂದರ್ಶನ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ 83107 71171 ಸಂಖ್ಯೆಯನ್ನು ಸಂಪರ್ಕಿಸಿ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮೊದಲ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪಿನ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ವಿರುದ್ಧ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಪರ ಹೆನ್ರಿಕ್ ಕ್ಲಾಸೆನ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಕ್ಲಾಸೆನ್ ಪಂದ್ಯದ 14ನೇ ಓವರ್ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದರು.
ರೊಮೊರಿಯೊ ಶೆಫರ್ಡ್ ಎಸೆದ 14ನೇ ಓವರ್ನ ಮೊದಲ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಹೊಡೆತ ಬಾರಿಸಿದ್ದರು. ಚೆಂಡು ಇನ್ನೇನು ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ಫಿಲ್ ಸಾಲ್ಟ್ ಅದ್ಭುತವಾಗಿ ಚೆಂಡನ್ನು ಹಿಡಿದರು. ಆದರೆ, ಚೆಂಡನ್ನು ಹಿಡಿಯುವಾಗ ಸಾಲ್ಟ್ನ ಕಾಲು ಅಥವಾ ಶರೀರ ಬೌಂಡರಿ ಕುಶನ್ (Rope) ಗೆ ತಗುಲಿರಬಹುದು ಎಂಬ ಸಂಶಯವಿತ್ತು.
ಮೂರನೇ ಅಂಪೈರ್ ತೀರ್ಪು:
ಕ್ಯಾಚ್ ಮೇಲೆ ಡೌಟ್ ಇದ್ದ ಕಾರಣ ಆನ್-ಫೀಲ್ಡ್ ಅಂಪೈರ್ ಈ ನಿರ್ಧಾರವನ್ನು ಮೂರನೇ ಅಂಪೈರ್ ರೋಹನ್ ಪಂಡಿತ್ ಅವರಿಗೆ ವಹಿಸಿದರು. ಮರುಪರಿಶೀಲನೆಯ ನಂತರ ಟಿವಿ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಇತ್ತ ಕ್ಯಾಚ್ ಮೇಲೆ ಸಂಶಯಗಳಿದ್ದರೂ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಲು ಇದುವೇ ಮುಖ್ಯ ಕಾರಣ. ಆ ಕಾರಣಗಳೆಂದರೆ…
ಸ್ಪಷ್ಟ ಪುರಾವೆಯ ಕೊರತೆ: ಫಿಲ್ ಸಾಲ್ಟ್ ಬೌಂಡರಿ ಲೈನ್ ಮುಟ್ಟುತ್ತಿರುವುದು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಕಂಡುಬರಲಿಲ್ಲ.
ಕುಶನ್ ಚಲನೆ: ಕುಶನ್ ಸ್ವಲ್ಪ ಅಲುಗಾಡಿದಂತೆ ಕಂಡರೂ, ಅದು ಸಾಲ್ಟ್ ಅವರ ಸಂಪರ್ಕದಿಂದಲೇ ಆಯಿತು ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.
ಲಭ್ಯವಿದ್ದ ಆ್ಯಂಗಲ್ಗಳು: ಆ ಸಮಯದಲ್ಲಿ ಕೇವಲ ಎರಡು ಕ್ಯಾಮೆರಾ ಆಂಗಲ್ಗಳು ಲಭ್ಯವಿದ್ದವು. ಅದರಲ್ಲಿ ಸಾಲ್ಟ್ ಅವರ ಶೂ ಬೌಂಡರಿ ಲೈನ್ಗೆ ತಗುಲಿರುವುದು ಖಚಿತವಾಗಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಮೂರನೇ ಅಂಪೈರ್ನ ತೀರ್ಪು ನಿರ್ಣಾಯಕವಾಗಿರುತ್ತದೆ.
ನಿರ್ಣಾಯಕ ಪುರಾವೆ: ಮೂರನೇ ಅಂಪೈರ್ ತೀರ್ಪು ನೀಡುವಾಗ, ಫೀಲ್ಡರ್ ಬೌಂಡರಿ ಗೆರೆಯನ್ನು ಮುಟ್ಟಿದ್ದಾರೆ ಎಂಬುದು ರಿಪ್ಲೇನಲ್ಲಿ ನೂರಕ್ಕೆ ನೂರರಷ್ಟು ಸ್ಪಷ್ಟವಾಗಿ ಕಾಣಿಸಬೇಕು. ಒಂದು ವೇಳೆ ಕ್ಯಾಮೆರಾ ಆ್ಯಂಗಲ್ಗಳಲ್ಲಿ ಗೊಂದಲವಿದ್ದರೆ ಅಥವಾ ಸ್ಪಷ್ಟವಾಗಿ ಕಾಣಿಸದಿದ್ದರೆ, ಸಾಫ್ಟ್ ಸಿಗ್ನಲ್ ಅಥವಾ ಲಭ್ಯವಿರುವ ದೃಶ್ಯದ ಆಧಾರದ ಮೇಲೆ ಔಟ್ ನೀಡಲಾಗುತ್ತದೆ. ಅದರಂತೆ ಮೂರನೇ ಅಂಪೈರ್ ಹೆನ್ರಿಕ್ ಕ್ಲಾಸೆನ್ ಅವರನ್ನು ಔಟ್ ಎಂದು ತೀರ್ಪು ನೀಡಿದ್ದಾರೆ.
ಇತ್ತ ಮೂರನೇ ಅಂಪೈರ್ನ ಈ ತೀರ್ಪಿನಿಂದ ಕ್ಲಾಸೆನ್ ತುಂಬಾ ಅಸಮಾಧಾನಗೊಂಡರು. ಅಲ್ಲದೆ ಮೈದಾನದಿಂದ ಹೊರಹೋಗುವಾಗ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದರು.
ಆದರೆ ಇಂತಹ ಸಂಶಯಾಸ್ಪದ ಕ್ಯಾಚ್ಗಳ ವೇಳೆ ಮೂರನೇ ಅಂಪೈರ್ ತೀರ್ಮಾಣವೇ ಅಂತಿಮ ನಿರ್ಮಾಣವಾಗಿರುತ್ತದೆ. ಅಂದರೆ ಬೌಂಡರಿ ಲೈನ್ಗೆ ಫೀಲ್ಡರ್ನ ದೇಹದ ಭಾಗದ ತಾಗಿದೆ ಎಂದು ಸಾಬೀತುಪಡಿಸಲು ಸಾಧ್ಯವಾಗದೇ ಇದ್ದರೆ, ಅದನ್ನು ಕ್ಯಾಚ್ ಔಟ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಹೆನ್ರಿಕ್ ಕ್ಲಾಸೆನ್ ಔಟ್ ಎಂದು ಮೂರನೇ ಅಂಪೈರ್ ತೀರ್ಪು ನೀಡಿದ್ದಾರೆ.