ದಾವಣಗೆರೆ, ಮಾರ್ಚ್ 27: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ಸಿಗದೇ ಇರುವುದು ಆ ಸಮಾಜದ ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಕಣಕ್ಕೆ ಇಳಿಯೋದಾಗಿ ಈ ಹಿಂದೆ ಸಾದಿಕ್ ಪೈಲ್ವಾನ್ ಘೋಷಿಸಿದ್ದ ಕಾರಣ ಅವರಿಗೆ ಸಮುದಾಯದ ಬೆಂಬಲ ವ್ಯಕ್ತವಾಗಿತ್ತು. ಆದರೀಗ ಅವರು ಆ ನಿರ್ಧಾರದಿಂದ ಹಿಂದೆ ಸರಿಯುತ್ತಿರುವ ಕಾರಣ, ಅವರಿಗೆ ಬೆಂಬಲ ಘೋಷಿಸಿದ್ದ ನಾಯಕರು ಯಾವುದೇ ಕಾರಣಕ್ಕೂ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲ್ಲ ಎಂದು ಹೇಳುತ್ತಿರೋದು ಕಾಂಗ್ರೆಸ್ಗೆ ಹೊಸ ತಲೆನೋವಾಗುವ ಸಾಧ್ಯತೆ ಇದೆ.
ಹಿಂದೂ ಸಂಪ್ರದಾಯದಲ್ಲಿ ಮನೆಯ ಪೂಜಾ ಕೋಣೆಯನ್ನು ಅತ್ಯಂತ ಪವಿತ್ರ ಮತ್ತು ಆಧ್ಯಾತ್ಮಿಕ ಶಕ್ತಿಯ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಪ್ರಾರ್ಥನೆ ಮಾಡುವ ಸ್ಥಳವಲ್ಲ, ಬದಲಾಗಿ ಮನೆಯ ಸಕಾರಾತ್ಮಕ ಶಕ್ತಿಯ ಮೂಲವಾಗಿದೆ. ಈ ಕಾರಣಕ್ಕಾಗಿಯೇ ಅನೇಕರು ಪೂಜಾ ಕೋಣೆಯ ವಿನ್ಯಾಸ ಮತ್ತು ಅಲ್ಲಿನ ವಸ್ತುಗಳ ಜೋಡಣೆಯಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ, ನಾವು ದೈನಂದಿನ ಪೂಜೆಯಲ್ಲಿ ಮಾಡುವ ಒಂದು ಸಣ್ಣ ತಪ್ಪು ಮನೆಯ ವಾಸ್ತು ಸಮತೋಲನವನ್ನೇ ಏರುಪೇರು ಮಾಡಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.
ಬೆಂಕಿಕಡ್ಡಿ ಪೆಟ್ಟಿಗೆ ಮತ್ತು ವಾಸ್ತು ದೋಷ:
ದೀಪ ಮತ್ತು ಧೂಪದ್ರವ್ಯಗಳನ್ನು ಹಚ್ಚಲು ಬೆಂಕಿಕಡ್ಡಿಗಳು ಅತ್ಯಗತ್ಯ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಕೋಣೆಯಲ್ಲಿ ಬೆಂಕಿಕಡ್ಡಿ ಪೆಟ್ಟಿಗೆಯನ್ನು ಇಡುವುದು ಶುಭವಲ್ಲ. ಬೆಂಕಿಕಡ್ಡಿಗಳು ‘ದಹನ’ ಅಥವಾ ಸುಡುವಿಕೆಯನ್ನು ಸಂಕೇತಿಸುತ್ತವೆ, ಆದರೆ ಪೂಜಾ ಕೋಣೆಯು ಶಾಂತಿ ಮತ್ತು ಶುದ್ಧತೆಯ ಸಂಕೇತವಾಗಿದೆ. ಇಂತಹ ಪವಿತ್ರ ಸ್ಥಳದಲ್ಲಿ ಸುಡುವ ವಸ್ತುಗಳನ್ನು ಇಡುವುದರಿಂದ ‘ವಾಸ್ತು ದೋಷ’ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಇದು ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಕುಂದಿಸಿ, ಪೂಜೆಯ ಪೂರ್ಣ ಫಲ ಸಿಗದಂತೆ ಮಾಡಬಹುದು ಎಂದು ಜ್ಯೋತಿಷ್ಯ ಶಾಸ್ತ್ರದ ತಜ್ಞರು ಎಚ್ಚರಿಸುತ್ತಾರೆ.
ಆಧ್ಯಾತ್ಮಿಕ ಸಮತೋಲನ ಮತ್ತು ಅದರ ಪರಿಣಾಮಗಳು:
ಪೂಜಾ ಕೋಣೆಯಲ್ಲಿ ಅಗ್ನಿ ಅಂಶ (ಬೆಂಕಿಕಡ್ಡಿ) ಮತ್ತು ದೈವಿಕ ಅಂಶಗಳು ಮುಖಾಮುಖಿಯಾದಾಗ ಆಧ್ಯಾತ್ಮಿಕ ಸಮತೋಲನಕ್ಕೆ ಧಕ್ಕೆಯುಂಟಾಗುತ್ತದೆ. ಈ ಎರಡು ವಿರುದ್ಧ ಶಕ್ತಿಗಳ ಸಂಘರ್ಷದಿಂದ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು, ಮಾನಸಿಕ ಅಶಾಂತಿ ಅಥವಾ ಅನಗತ್ಯ ಆತಂಕಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಪೂಜಾ ಕೋಣೆಯಷ್ಟೇ ಅಲ್ಲದೆ, ಮಲಗುವ ಕೋಣೆಯಲ್ಲಿಯೂ ಉರಿಯುವ ವಸ್ತುಗಳನ್ನು ಇಡುವುದು ವಾಸ್ತು ಪ್ರಕಾರ ನಿಷಿದ್ಧ. ಇದು ದಂಪತಿಗಳ ನಡುವೆ ಘರ್ಷಣೆಗೆ ಕಾರಣವಾಗಬಹುದು ಮತ್ತು ಮನೆಯಲ್ಲಿ ನಕಾರಾತ್ಮಕ ಕಂಪನಗಳನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.
ಇಂತಹ ವಾಸ್ತು ದೋಷಗಳನ್ನು ತಡೆಯಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬಹುದು. ಬೆಂಕಿಕಡ್ಡಿಗಳನ್ನು ಪೂಜಾ ಕೋಣೆಯ ಹೊರಗೆ ಅಥವಾ ಕಣ್ಣಿಗೆ ಕಾಣದಂತೆ ಮುಚ್ಚಿದ ಡ್ರಾಯರ್ ಅಥವಾ ಕಪಾಟಿನಲ್ಲಿ ಇಡುವುದು ಸೂಕ್ತ. ಒಂದು ವೇಳೆ ಪೂಜಾ ಕೋಣೆಯಲ್ಲೇ ಇಡುವುದು ಅನಿವಾರ್ಯವಾದರೆ, ಅದನ್ನು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಇಡುವುದರಿಂದ ಅದರ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಸೂಚಿಸಲಾಗಿದೆ. ಪೂಜಾ ಸ್ಥಳವನ್ನು ಯಾವಾಗಲೂ ಅಚ್ಚುಕಟ್ಟಾಗಿ ಮತ್ತು ಶಿಸ್ತಿನಿಂದ ಇಟ್ಟುಕೊಳ್ಳುವುದು ಮನೆಯ ಅಭಿವೃದ್ಧಿಗೆ ಪೂರಕವಾಗಿರುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಏಪ್ರಿಲ್ 2026 ರಲ್ಲಿ ಮೇಷ ರಾಶಿಯಲ್ಲಿ ಉಚ್ಚನಾದ ಸೂರ್ಯ, ಬುಧ, ಸ್ವಸ್ಥಾನವಾದ ವೃಷಭದಲ್ಲಿ ಶುಕ್ರ, ಮಿತ್ರನ ಸ್ಥಾನವಾದ ಮೀನದಲ್ಲಿ ಕುಜ ಈ ಮೂರೂ ಗ್ರಹರೂ ಉತ್ತಮಸ್ಥಾನದಲ್ಲಿಯೇ ಇರುವರು. ಹಾಗಾಗಿ ಶುಭ ಫಲವನ್ನು ಪಡೆಯುವ ಅವಕಾಶ ಈ ತಿಂಗಳು ಅಧಿಕವಾಗಿದೆ. ಅವಕಾಶಗಳನ್ನು ವಂಚಿಸಿಕೊಂಡು ದುಃಖಿಸುವ ಕಾರ್ಯ ಬೇಡ.
ಮೇಷ:
ಈ ತಿಂಗಳು ನಿಮಗೆ ಮಿಶ್ರಫಲ ನೀಡಲಿದೆ. ರಾಶಿಯಲ್ಲಿ ರವಿಯ ಸಂಚಾರವಿರುವುದರಿಂದ ಕಾರ್ಯಕ್ಷೇತ್ರದಲ್ಲಿ ಅಧಿಕಾರ ಮತ್ತು ಗೌರವ ಹೆಚ್ಚಾಗಲಿದೆ. ಆದರೆ, ಕುಜನ ಪ್ರಭಾವದಿಂದ ಕೋಪದ ಮೇಲೆ ನಿಯಂತ್ರಣವಿರಲಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕುಟುಂಬದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳಿ.
ವೃಷಭ:
ಆರ್ಥಿಕವಾಗಿ ಈ ತಿಂಗಳು ಉತ್ತಮ ಪ್ರಗತಿ ಕಾಣುವಿರಿ. ಸ್ಥಿರ ಆಸ್ತಿಯಲ್ಲಿ ಹೂಡಿಕೆ ಮಾಡಲು ಸಕಾಲ. ಶುಕ್ರನ ಶುಭ ದೃಷ್ಟಿಯಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ದೂರದ ಪ್ರಯಾಣದ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಹೊಸ ಉದ್ಯೋಗದ ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆಯಿದೆ.
ಮಿಥುನ:
ಬುಧನ ಸಂಚಾರವು ನಿಮ್ಮ ಸಂವಹನ ಕಲೆಗೆ ಬಲ ನೀಡಲಿದೆ. ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ಪ್ರೇಮ ಜೀವನದಲ್ಲಿ ಕೆಲವು ಗೊಂದಲಗಳು ಉಂಟಾಗಬಹುದು, ತಾಳ್ಮೆಯಿಂದ ವರ್ತಿಸಿ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂಭವವಿದೆ.
ಕರ್ಕಟಕ:
ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಮಾನಸಿಕವಾಗಿ ಸ್ವಲ್ಪ ಒತ್ತಡ ಅನುಭವಿಸಿದರೂ, ಕಾರ್ಯಜಯ ಲಭಿಸಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಶಿವನ ಆರಾಧನೆಯು ನಿಮಗೆ ಹೆಚ್ಚಿನ ಶಾಂತಿ ನೀಡಲಿದೆ. ಮಕ್ಕಳ ಪ್ರಗತಿಯು ಮನಸ್ಸಿಗೆ ಸಂತೋಷ ತರಲಿದೆ.
ಸಿಂಹ:
ಭಾಗ್ಯಸ್ಥಾನದಲ್ಲಿ ರವಿಯ ಸಂಚಾರವಿರುವುದರಿಂದ ಅದೃಷ್ಟ ನಿಮ್ಮ ಕಡೆ ಇರಲಿದೆ. ಸ್ಥಗಿತಗೊಂಡ ಕೆಲಸಗಳು ಪುನರಾರಂಭಗೊಳ್ಳಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ತಂದೆಯ ಕಡೆಯಿಂದ ಆಸ್ತಿ ಅಥವಾ ಸಹಾಯ ದೊರೆಯಬಹುದು. ಉದ್ಯೋಗದಲ್ಲಿ ಬಡ್ತಿಯ ಯೋಗವಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಕನ್ಯಾ:
ಈ ತಿಂಗಳು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಸಮಯ. ಆರೋಗ್ಯದಲ್ಲಿ ಏರುಪೇರಾಗಬಹುದು, ಆಹಾರ ಕ್ರಮದ ಬಗ್ಗೆ ಗಮನವಿರಲಿ. ಕೆಲಸದಲ್ಲಿ ಅಡೆತಡೆಗಳು ಎದುರಾಗಬಹುದು, ಆದರೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸಾಲ ನೀಡುವ ಮುನ್ನ ಯೋಚಿಸಿ. ಸಂಗಾತಿಯ ಬೆಂಬಲ ನಿಮಗೆ ದೊಡ್ಡ ಶಕ್ತಿಯಾಗಲಿದೆ.
ತುಲಾ:
ವೈವಾಹಿಕ ಜೀವನದಲ್ಲಿ ಮತ್ತು ಪಾಲುದಾರಿಕೆ ವ್ಯವಹಾರದಲ್ಲಿ ಸುಧಾರಣೆ ಕಂಡುಬರಲಿದೆ. ಶುಕ್ರನ ಅನುಗ್ರಹದಿಂದ ಭೋಗ ಜೀವನದತ್ತ ಆಸಕ್ತಿ ಹೆಚ್ಚಾಗಲಿದೆ. ಹೊಸ ಪರಿಚಯಗಳು ವ್ಯವಹಾರದಲ್ಲಿ ಲಾಭ ತರಲಿವೆ. ಹಣಕಾಸಿನ ಹರಿವು ಸಾಧಾರಣವಾಗಿರಲಿದೆ. ಕಾನೂನು ವಿಚಾರಗಳಲ್ಲಿ ಜಯ ಸಿಗುವ ಸಾಧ್ಯತೆಯಿದೆ.
ವೃಶ್ಚಿಕ:
ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಆರೋಗ್ಯದ ಸಮಸ್ಯೆಗಳು ಹತೋಟಿಗೆ ಬರಲಿವೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ಸಾಲದ ಹೊರೆ ಇಳಿಸಲು ಇದು ಸೂಕ್ತ ಸಮಯ. ಮಾತು ಮಿತವಾಗಿರಲಿ.
ಧನು:
ಸಂತಾನ ಭಾಗ್ಯದ ನಿರೀಕ್ಷೆಯಲ್ಲಿರುವವರಿಗೆ ಶುಭ ವಾರ್ತೆ ಸಿಗಲಿದೆ. ಸೃಜನಾತ್ಮಕ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹಳೆಯ ಹೂಡಿಕೆಗಳಿಂದ ಲಾಭ ಸಿಗುವ ಸಾಧ್ಯತೆಯಿದೆ. ಧಾರ್ಮಿಕ ಪ್ರವಾಸ ಮಾಡುವ ಯೋಗವಿದೆ. ಗುರು ಬಲವಿರುವುದರಿಂದ ಕಠಿಣ ಕೆಲಸಗಳೂ ಸುಲಭವಾಗಿ ಪೂರ್ಣಗೊಳ್ಳಲಿವೆ.
ಮಕರ:
ಶನಿ ಮತ್ತು ಕುಜನ ಪ್ರಭಾವದಿಂದ ಸ್ವಲ್ಪ ಅಸ್ಥಿರತೆ ಇರಬಹುದು. ಮನೆಯಲ್ಲಿ ಸಣ್ಣಪುಟ್ಟ ಕಲಹಗಳು ಉಂಟಾಗಬಹುದು, ಶಾಂತಿಯಿಂದಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಾಹನ ಚಾಲನೆಯಲ್ಲಿ ಜಾಗರೂಕತೆ ಇರಲಿ. ಜಮೀನು ಅಥವಾ ಮನೆ ಖರೀದಿಯ ವಿಚಾರದಲ್ಲಿ ಪ್ರಗತಿ ಕಂಡುಬರಲಿದೆ.
ಕುಂಭ:
ನಿಮ್ಮ ಪರಾಕ್ರಮ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಹೋದರ ಸಹೋದರಿಯರಿಂದ ಬೆಂಬಲ ದೊರೆಯಲಿದೆ. ಚಿಕ್ಕ ಪ್ರವಾಸಗಳು ಲಾಭದಾಯಕವಾಗಿರಲಿವೆ. ಉದ್ಯೋಗದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹತ್ತಿರದ ಸಂಬಂಧಿಗಳೊಂದಿಗೆ ಸಂಬಂಧ ವೃದ್ಧಿಯಾಗಲಿದೆ.
ಮೀನ:
ಧನ ದಾಯದಲ್ಲಿ ಹೆಚ್ಚಳ ಕಂಡುಬರಲಿದೆ. ಕುಟುಂಬದವರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಲಿದೆ. ಮಾತಿನ ಪ್ರಭಾವದಿಂದ ಕಠಿಣ ಕೆಲಸಗಳನ್ನು ಸಾಧಿಸುವಿರಿ. ಉಳಿತಾಯದ ಕಡೆ ಗಮನ ನೀಡುವುದು ಉತ್ತಮ. ಕಣ್ಣಿನ ಅಥವಾ ಹಲ್ಲಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಾತ್ವಿಕ ಆಹಾರ ಸೇವನೆಗೆ ಒತ್ತು ನೀಡಿ.
ಬೆಂಗಳೂರು, ಮಾರ್ಚ್ 27: ಕರ್ನಾಟಕದಲ್ಲಿ ಮಾರ್ಚ್ 30ರಂದು ನಡೆಯಬೇಕಿದ್ದ ಎಸ್ಎಸ್ಎಲ್ಸಿ (SSLC)ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿದೆ. ಮಹಾವೀರ ಜಯಂತಿ ಹಿನ್ನೆಲೆ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ನಿನ್ನೆ ಆದೇಶಿಸಿದೆ. ಇನ್ನೊಂದೆಡೆ ಹಿಂದಿ ಪರೀಕ್ಷಾ ವಿಚಾರವಾಗಿ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ವಿದ್ಯಾರ್ಥಿಗಳು ಹಿಂದಿ ಪರೀಕ್ಷೆ ಬರೆಯದೇ ಇದ್ದರೂ ಪಾಸ್ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿವೆ. ಒಂದು ವೇಳೆ ಹಿಂದಿ ಪರೀಕ್ಷೆ ನಡೆಸಿದರೆ ಕೇಂದ್ರಗಳಿಗೆ ಮುತ್ತಿಗೆ ಹಾಕುವುದಾಗಿದೆ ಎಚ್ಚರಿಕೆ ನೀಡಲಾಗಿದೆ.
ಮಹಾವೀರ ಜಯಂತಿಯ ಪ್ರಯುಕ್ತ, ಮಾರ್ಚ್ 30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿದೆ. ಆದರೆ ಈ ಮಧ್ಯೆ ತ್ರಿಭಾಷಾ ಸೂತ್ರವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದು, ಜೊತೆಗೆ ಹಿಂದಿ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇನ್ನು ಈ ವಿಚಾರವಾಗಿ ಸಾರಾ ಗೋವಿಂದು, ಶಿವರಾಮೇಗೌಡ, ಮಂಜು ಸೇರಿ ಕನ್ನಡ ಸಂಘಟನೆಗಳ ಒಕ್ಕೂಟದಿಂದ ಸಚಿವ ಮಧು ಬಂಗಾರಪ್ಪರನ್ನು ಭೇಟಿ ಮಾಡಲಾಗಿದ್ದು, ಹಿಂದಿ ಪರೀಕ್ಷೆ ಬರೆಯದಿದ್ದರೂ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಪಾಸ್ ವಿತೌಟ್ ಹಿಂದಿ ಎಂಬ ನಿಯಮ ಜಾರಿ ಮಾಡಿ. ಹಿಂದಿ ಪರೀಕ್ಷೆ ರದ್ದು ಮಾಡಿ, ಹಿಂದಿ ಹೇರಿಕೆ ಮಾಡಬೇಡಿ. ಹಿಂದಿ ಪರೀಕ್ಷೆ ನಡೆಸಿದರೆ ಕೇಂದ್ರಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಸಂಘಟನೆಗಳ ಎಚ್ಚರಿಕೆ ಬೆನ್ನಲ್ಲೇ ಶಿಕ್ಷಣ ಇಲಾಖೆ ಅಲರ್ಟ್
ಕನ್ನಡ ಸಂಘಟನೆಗಳ ಎಚ್ಚರಿಕೆ ಹಿನ್ನೆಲೆ ಶಿಕ್ಷಣ ಇಲಾಖೆ ಅಲರ್ಟ್ ಆಗಿದ್ದು, ಪರೀಕ್ಷೆ ದಿನ ಪೊಲೀಸ್ ಭದ್ರತೆ ಪಡೆಯಲು ಮುಂದಾಗಿದೆ. ಪರೀಕ್ಷೆ ಸಮಯದಲ್ಲಿ ತೊಂದರೆಯಾಗದಂತೆ ಭದ್ರತೆ ಒದಗಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪೊಲೀಸ್ ಭದ್ರತೆಗೆ ಮನವಿ ಮಾಡಲಾಗಿದೆ.
ಸಾರಾ ಗೋವಿಂದು ಹೇಳಿದ್ದಿಷ್ಟು
ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಮಾತನಾಡಿದ್ದು, ಸಿಎಂ, ಡಿಸಿಎಂ ಮತ್ತು ಶಿಕ್ಷಣ ಸಚಿವರಿಗೆ ಮೊದಲು ಧನ್ಯವಾದಗಳನ್ನು ತಿಳಿಸುತ್ತೇವೆ. ಹಲವು ವರ್ಷದಿಂದ ನಾವು ಹಿಂದಿ ಹೇರಿಕೆ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ. ಕಳೆದ ವರ್ಷ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್ ಆಗಿದ್ದಾರೆ. ಅದಕ್ಕೂ ಮುಂಚೆಯೇ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್ ಆಗಿದ್ದರು. ಇದೇ ವಿಚಾರವನ್ನಿಟ್ಟು ಸಿಎಂಗೂ ಮನವಿ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಸಹ ದ್ವಿಭಾಷಾ ನೀತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂದು ಅದು ನೆರವೇರಿದೆ ಎಂದರು.
ಅಲಹಾಬಾದ್, ಮಾರ್ಚ್ 27: ವಿವಾಹಿತ ಪುರುಷ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿರುವುದು ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court) ಹೇಳಿದೆ. ಆತನಿಗೆ ಮದುವೆಯಾಗಿದೆ ಎಂಬ ವಿಷಯ ತಿಳಿದಿದ್ದರೂ ಮಹಿಳೆ ಆತನೊಂದಿಗೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದರೆ ಅದು ತಪ್ಪಲ್ಲ ಎಂದು ಕೋರ್ಟ್ ಹೇಳಿದೆ. ಆ ಮಹಿಳೆಯ ಕುಟುಂಬದಿಂದಲೇ ಬೆದರಿಕೆ ಎದುರಿಸುತ್ತಿರುವ ಲಿವ್-ಇನ್ ದಂಪತಿಗೆ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಪ್ರಕರಣವನ್ನು ಆಲಿಸಿದ ನ್ಯಾಯಾಲಯ ವಿವಾಹಿತ ಪುರುಷನು ಪರಸ್ಪರ ಒಪ್ಪಿಗೆಯ ಮೂಲಕ ವಯಸ್ಕ ಮಹಿಳೆಯ ಜೊತೆ ಒಟ್ಟಿಗೆ ವಾಸಿಸುವುದು ಯಾವುದೇ ಅಪರಾಧವಲ್ಲ ಎಂದು ಹೇಳಿದೆ.
“ವಿವಾಹಿತ ಪುರುಷನು ಮಹಿಳೆಯ ಒಪ್ಪಿಗೆಯ ಮೂಲಕ ಲಿವ್-ಇನ್ ಸಂಬಂಧದಲ್ಲಿ ವಾಸಿಸುವುದು ಮೊಕದ್ದಮೆ ಹೂಡಬಹುದಾದ ಯಾವುದೇ ಅಪರಾಧವಲ್ಲ. ನೈತಿಕತೆ ಮತ್ತು ಕಾನೂನನ್ನು ದೂರವಿಡಬೇಕು. ಹಾಗಂತ ಕಾನೂನಿನಡಿ ಅದು ಅಪರಾಧವಲ್ಲ ಎಂಬ ಮಾತ್ರಕ್ಕೆ ಸಾಮಾಜಿಕವಾಗಿಯೂ ಅದು ಸರಿ ಎಂದು ಹೇಳಲಾಗದು” ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಾಲಯವು ‘ನೈತಿಕತೆ’ ಮತ್ತು ಕಾನೂನನ್ನು ಬೇರ್ಪಡಿಸಿ ನೋಡಬೇಕೆಂದು ಹೇಳಿದೆ. ಲಿವ್-ಇನ್ ರಿಲೇಷನ್ಶಿಪ್ನಲ್ಲಿರುವ ವಿವಾಹಿತ ವ್ಯಕ್ತಿ ಯಾವುದೇ ಅಪರಾಧವನ್ನು ಮಾಡಿಲ್ಲ. ವಯಸ್ಕ ಮಹಿಳೆಯೊಂದಿಗಿನ ಅವರ ಲಿವ್-ಇನ್ ಸಂಬಂಧವು ಸಮ್ಮತಿಯಂತೆ ಕಾಣುತ್ತದೆ ಎಂದು ಕೋರ್ಟ್ ಹೇಳಿದೆ.
ಹಾಗೇ, ನ್ಯಾಯಾಲಯವು ಪೊಲೀಸರಿಗೆ ಅರ್ಜಿದಾರ ದಂಪತಿಯನ್ನು ಬಂಧಿಸದಂತೆ ನಿರ್ದೇಶಿಸಿತು. ಮಹಿಳಾ ಅರ್ಜಿದಾರರ ಕುಟುಂಬದ ಎಲ್ಲಾ ಸದಸ್ಯರು ದಂಪತಿಗೆ ಯಾವುದೇ ಹಾನಿ ಮಾಡದಂತೆ ಸೂಚಿಸಿತು. ಹಾಗೇ, ಅವರಿಬ್ಬರ ಕುಟುಂಬದ ಸದಸ್ಯರು ಅವರಿಬ್ಬರೂ ವಾಸಿಸುವ ಮನೆಗೆ ಪ್ರವೇಶಿಸುವಂತಿಲ್ಲ ಅಥವಾ ಅವರನ್ನು ನೇರವಾಗಿ, ಮೊಬೈಲ್ ಮೂಲಕ ಅಥವಾ ಮೂರನೇ ವ್ಯಕ್ತಿಯ ಮೂಲಕ ಸಂಪರ್ಕಿಸಲು ಪ್ರಯತ್ನಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರ ಸುರಕ್ಷತೆ ಮತ್ತು ಭದ್ರತೆಗೆ ಸ್ಥಳೀಯ ಪೊಲೀಸ್ ಮುಖ್ಯಸ್ಥರು ವೈಯಕ್ತಿಕವಾಗಿ ಜವಾಬ್ದಾರರಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.
ಈಗಾಗಲೇ ಮದುವೆಯಾಗಿರುವ ನೇತ್ರಪಾಲ್ ಎಂಬ ವ್ಯಕ್ತಿ ಅನಾಮಿಕಾ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದರು. ಜನವರಿ 8ರಂದು ಅನಾಮಿಕಾ ಅವರ ತಾಯಿ ಕಾಂತಿ ಶಹಜಹಾನ್ಪುರದ ಜೈತಿಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದರು. ನೇತ್ರಪಾಲ್ ನಮಗೆ ನಮ್ಮ ಮಗಳನ್ನು ಬಿಡುತ್ತಿಲ್ಲ. ಮದುವೆಯಾಗಿದ್ದರೂ ಆಕೆಯನ್ನು ಮರುಳು ಮಾಡಿ ಆಕೆಯೊಂದಿಗೆ ವಾಸವಾಗಿದ್ದಾನೆ ಎಂದು ಅವರು ಆರೋಪಿಸಿದ್ದರು. ಅನಾಮಿಕಾ ಕೇವಲ 18 ವರ್ಷದವಳಾಗಿದ್ದು, ಆಕೆ ವಿವಾಹಿತನೊಂದಿಗೆ ಸಂಬಂಧದಲ್ಲಿರುವುದು ತಮಗೆ ಇಷ್ಟವಿಲ್ಲ ಎಂದು ಆಕೆಯ ತಾಯಿ ದೂರಿನಲ್ಲಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಅನಾಮಿಕಾ ಮತ್ತು ನೇತ್ರಪಾಲ್ ಅಲಹಾಬಾದ್ ಹೈಕೋರ್ಟ್ನಲ್ಲಿ ಆ ಪ್ರಕರಣವನ್ನು ಪ್ರಶ್ನಿಸಿ, ಅದನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದಿಂದ ರಕ್ಷಣೆ ಕೋರಿದ್ದರು. ನನಗೆ 18ಕ್ಕಿಂತ ಜಾಸ್ತಿ ವಯಸ್ಸಾಗಿದೆ. ನಮ್ಮ ಕುಟುಂಬದಿಂದ ಮರ್ಯಾದಾ ಹತ್ಯೆಯ ಭಯ ಎದುರಾಗಿದೆ. ಅವರಿಂದ ನಮಗೆ ರಕ್ಷಣೆ ಬೇಕೆಂದು ಅನಾಮಿಕಾ ಕೋರಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 27: ಆರ್ಬಿಐ ಕ್ಯಾಲೆಂಡರ್ ಪ್ರಕಾರ 2026ರ ಏಪ್ರಿಲ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 11 ದಿನ ರಜೆ (Bank Holidays) ಇದೆ. ಕೆಲ ರಜೆಗಳು ಪ್ರಾದೇಶಿಕವಾಗಿದ್ದು, ಆಯಾ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್ನಲ್ಲಿ ಹಬ್ಬ ಹರಿದಿನಗಳು ಕಡಿಮೆ. ಕ್ರೈಸ್ತರ ಗುಡ್ ಫ್ರೈಡೆ, ಈಸ್ಟರ್ ಹಬ್ಬಗಳು ಎಪ್ರಿಲ್ನಲ್ಲಿ ಇವೆ. ಈಸ್ಟರ್ ಹಬ್ಬ ಭಾನುವಾರ ಬಂದಿರುವುದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಹೆಚ್ಚುವರಿ ರಜೆ ಸಿಗುವುದಿಲ್ಲ. ಅಂಬೇಡ್ಕರ್ ಜಯಂತಿ, ಬಸವ ಜಯಂತಿ ಕೂಡ ಏಪ್ರಿಲ್ನಲ್ಲೇ ಇವೆ. ನಾಲ್ಕು ಭಾನುವಾರ ಮತ್ತು ಎರಡು ಶನಿವಾರಗಳ ರಜೆಗಳೂ ಏಪ್ರಿಲ್ ತಿಂಗಳಲ್ಲಿವೆ.
ಏಪ್ರಿಲ್ 2026 ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು
ಏಪ್ರಿಲ್ 1, ಬುಧವಾರ: ಆ್ಯನುಯಲ್ ಅಕೌಂಟ್ ಕ್ಲೋಸಿಂಗ್ ಪ್ರಯುಕ್ತ ರಜೆ
ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ ಪ್ರಯುಕ್ತ ಹೆಚ್ಚಿನ ಕಡೆ ರಜೆ
ಏಪ್ರಿಲ್ 5: ಭಾನುವಾರದ ರಜೆ
ಏಪ್ರಿಲ್ 11: ಎರಡನೇ ಶನಿವಾರದ ರಜೆ
ಏಪ್ರಿಲ್ 12: ಭಾನುವಾರದ ರಜೆ
ಏಪ್ರಿಲ್ 14, ಮಂಗಳವಾರ: ವೈಶಾಖಿ / ಬೋಹಾಗ್ ಬಿಹು / ವಿಶು / ತಮಿಳು ಹೊಸ ವರ್ಷ / ಅಂಬೇಡ್ಕರ್ ಜಯಂತಿ (ಹಲವು ರಾಜ್ಯಗಳಲ್ಲಿ ರಜೆ)
ಏಪ್ರಿಲ್ 15, ಬುಧವಾರ: ಬೋಹಗ್ ಬಿಹು / ಹಿಮಾಚಲ ದಿನ / ಬಂಗಾಳ ದಿನ (ಅರುಣಾಚಲ, ಹಿಮಾಚಲ, ಬಂಗಾಳ ಮುಂತಾದೆಡೆ ರಜೆ)
ಕರ್ನಾಟಕದಲ್ಲಿ ಗುಡ್ ಫ್ರೈಡೆಗೆ ರಜೆ ಇರುತ್ತದೆ. ಅಂಬೇಡ್ಕರ್ ಜಯಂತಿ ಮತ್ತು ಬಸವ ಜಯಂತಿಗೂ ರಾಜ್ಯದಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ. ಶನಿವಾರ ಮತ್ತು ಭಾನುವಾರದ ರಜೆಗಳನ್ನು ಒಳಗೊಂಡರೆ ಏಪ್ರಿಲ್ನಲ್ಲಿ ಒಟ್ಟು 10 ದಿನ ಬ್ಯಾಂಕುಗಳು ರಾಜ್ಯದಲ್ಲಿ ಬಾಗಿಲು ಮುಚ್ಚಿರುತ್ತವೆ.
ಬ್ಯಾಂಕ್ ಕಚೇರಿಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್ಲೈನ್ನಲ್ಲಿ ಅವಿಘ್ನವಾಗಿ ನಡೆಯುತ್ತಿರುತ್ತವೆ. ಎಟಿಎಂಗಳು ದಿನದ 24 ಗಂಟೆಯೂ ತೆರೆದಿರುತ್ತವೆ. ಆನ್ಲೈನ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಚಾಲನೆಯಲ್ಲಿರುತ್ತವೆ.
ಬೀದರ್, ಮಾರ್ಚ್ 27: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶ ಸೇರಿದಂತೆ ರಾಜ್ಯದ ಹಲವು ಉದ್ಯಮಗಳು ಈಗಾಗಲೇ ತತ್ತರಿಸಿ ಹೋಗಿವೆ. ಈ ನಡುವೆ ವಾರ್ ಎಫೆಕ್ಟ್ ಅನ್ನದಾತರ ಕೈಸುಡಲೂ ಆರಂಭಿಸಿದ್ದು, ಬೀದರ್ನಲ್ಲಿ ರೈತರು ಬೆಳೆದಿದ್ದ ಈರುಳ್ಳಿ ಬೆಳೆ ಅವರ ಕಣ್ಣಲ್ಲೇ ಈಗ ನೀರು ತರಿಸುತ್ತಿದೆ. ಯುದ್ಧದ ಹಿನ್ನೆಲೆ ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಈರುಳ್ಳಿ ರಫ್ತು ನಿಂತಿರುವ ಕಾರಣ ಬೆಲೆ ಪಾತಾಳಕ್ಕೆ ಕುಸಿದಿದೆ. ಪ್ರತಿ ಕೆ.ಜಿ. ಈರುಳ್ಳಿ 4ರಿಂದ 6 ರೂಪಾಯಿವರೆಗೆ ಮಾರಾಟವಾಗುತ್ತಿರುವ ಕಾರಣ ಬೆಳೆಗಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ಭಾಲ್ಕಿ ತಾಲೂಕಿನ ಹಾಲಹಿಪ್ಪಾರ್ಗಾ ಗ್ರಾಮದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರೈತರಿದ್ದು, ಒಂದೇ ಗ್ರಾಮದಲ್ಲಿ 300 ಎಕರೆಗೂ ಅಧಿಕ ಜಾಗದಲ್ಲಿ ಬೆಳೆ ಬೆಳೆಯಲಾಗುತ್ತೆ. ಪ್ರತಿವರ್ಷ 3 ಸಾವಿರಕ್ಕೂ ಅಧಿಕ ಕ್ವಿಂಟಾಲ್ ಈರುಳ್ಳಿ ಹೈದ್ರಾಬಾದ್ ಮೂಲಕ ವಿದೇಶಗಳಿಗೆ ರಫ್ತಾಗುತ್ತಿತ್ತು. ಆದರೆ ಈಗ ಯುದ್ಧ ಇದರ ಮೇಲೆ ಪರಿಣಾಮ ಬೀರಿದ್ದು, ಲಾಭ ಹಾಗಿರಲಿ ಕಟಾವು ಮಾಡಿದ ಕರ್ಚೂ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರು ಕೂಡ ಸಿಕ್ಕಾಪಟ್ಟೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈರುಳ್ಳಿ ಕೀಳೋದಕ್ಕೆ ಹಾಗೂ ಇನ್ನಿತರ ಕೆಲಸಗಳಿಗೆ ಬರಬೇಕೆಂದರೆ ಅವರಿಗೆ ಕೈ ತುಂಬ ಹಣ ನೀಡಲೇ ಬೇಕು. ಆದರೆ ಬೆಲೆ ಇಲ್ಲದ ಕಾರಣ ಕೆಲ ರೈತರು ಬೆಳೆಯನ್ನು ಮಾರುಕಟ್ಟೆಗೂ ಕೊಂಡೊಯ್ಯದೆ ಹಳ್ಳಿಗಳಲ್ಲಿ ವಿತರಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಚುನಾವಣೆಯ ಸಮಯದಲ್ಲಿ ಮನೆ ಮನೆಗೆ ಮತ ಕೇಳಲು ಬರುವ ರಾಜಕಾರಣಿಗಳಿಗೆ ರೈತರ ಸಂಕಷ್ಟ ಕೇಳಿಸುತ್ತಿಲ್ಲ. ನಮ್ಮ ಗ್ರಾಮದಲ್ಲಿ ಬಹುತೇಕ ರೈತರು ಈರುಳ್ಳಿ ಬೆಳೇಯನ್ನೇ ನಂಬಿ ಬದುಕಿದ್ದೇವೆ. ಬೆಲೆ ಏರಬಹುದೆಂಬ ನಿರೀಕ್ಷೆಯಲ್ಲಿ ಹಲವು ರೈತರು ಬೆಳೆಯನ್ನು ಹಾಗೆಯೇ ಇಟ್ಟುಕೊಂಡಿದ್ದು, ಮುಂದೇನು ಎಂಬುದು ತಿಳಿಯದಂತಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಬೇಕಾದರೆ 50 ರಿಂದ 55 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ 400-600 ರೂಪಾಯಿಗೆ ಈರುಳ್ಳಿಯನ್ನು ಖರೀದಿಸುತ್ತಿದ್ದಾರೆ. ಮೂರುವರೆ ತಿಂಗಳುಗಳ ಕಾಲ ಹಗಲು-ರಾತ್ರಿ ಎನ್ನದೆ ದುಡಿದು ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ ಎಂಬುದು ರೈತರ ಅಳಲು.
ಕನ್ನಡದ ನಟ ಪ್ರಜ್ವಲ್ ದೇವರಾಜ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದವರು. ಅವರು ಈಗ ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಸಿನಿಮಾದ ಭಾಗ ಆಗುತ್ತಿದ್ದಾರೆ. ಸಾಕಷ್ಟು ಭಿನ್ನ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪ್ರಜ್ವಲ್ ಅವರು ಗುರುಸಿದ್ಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಗಮನ ಸೆಳೆದಿದೆ.
ರಾಮನವಮಿ ಪ್ರಯುಕ್ತ ‘ರಾಮರಸ’ ಚಿತ್ರದಲ್ಲಿನ ಪ್ರಜ್ವಲ್ ದೇವರಾಜ್ ಲುಕ್ ಅನಾವರಣಗೊಂಡಿದೆ. ವಿನಯ್ ಗುರೂಜಿ ಅವರು ಈ ಲುಕ್ ಅನಾವರಣ ಮಾಡಿದರು. ಪೋಸ್ಟರ್ ಅಲ್ಲಿ ಉದ್ದನೆಯ ಕೂದಲು ಬಿಟ್ಟು, ಕತ್ತಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ದಾರೆ ಪ್ರಜ್ವಲ್. ಮುಖದಲ್ಲಿ ಕೋಪ ಮನೆ ಮಾಡಿದೆ. ಹಿಂಭಾಗದಲ್ಲಿ ನಾನಾ ರೀತಿಯ ಕಟ್ಟಡಗಳನ್ನು ಕಾಣಬಹುದು. ಅವರ ಪಾತ್ರದ ಪೋಸ್ಟರ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಸಿನಿಮಾದಲ್ಲಿ ಈ ಪಾತ್ರ ತುಂಬಾನೇ ಪ್ರಾಮುಖ್ಯತೆ ಪಡೆಯಲಿದೆಯಂತೆ.
‘ದೈವಿಕ ಕಥೆಗೆ ಅದ್ಭುತ ಸೇರ್ಪಡೆ. ಸಿನಿಪಯಣದ ಈ ಅದ್ಧೂರಿ ಪಥದಲ್ಲಿ, ಈಗ ಪ್ರಜ್ವಲ್ ದೇವರಾಜ್ ಅವರ ಸಾಟಿಯಿಲ್ಲದ ಪ್ರತಿಭೆ ನಮಗೆ ಜೊತೆಯಾಗಿದೆ. ರಾಮರಸದ ಈ ಮಹಾನ್ ಕಥಾ ಲೋಕಕ್ಕೆ ಗುರು ಸಿದ್ಧರಿಗೆ ಆತ್ಮೀಯ ಸ್ವಾಗತ. ಇದು ಬರೀ ಸಿನಿಮಾ ಅಲ್ಲ, ಒಂದು ಅದ್ಭುತ ಅನುಭವ’ ಎಂದು ಪೋಸ್ಟರ್ ಕ್ಯಾಪ್ಶನ್ ಅಲ್ಲಿ ಬರೆಯಲಾಗಿದೆ.
‘ರಾಮರಸ’ ಸಿನಿಮಾದಲ್ಲಿ ಮಾಟ ಮಂತ್ರದ ವಿಷಯಗಳು ಹೈಲೈಟ್ ಆಗಿವೆ. ಕಾರ್ತಿಕ್ ಮಹೇಶ್, ಪ್ರಜ್ವಲ್ ದೇವರಾಜ್ ಜೊತೆಗೆ ಶರಣ್ ಕೂಡ ನಟಿಸಿದ್ದಾರೆ. ಇನ್ನೂ ಅನೇಕ ಕಲಾವಿದರು ಸಿನಿಮಾದ ಭಾಗ ಆಗಲಿದ್ದು, ಅದನ್ನು ಗುಟ್ಟಾಗಿಯೇ ಇಡಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ರಿವೀಲ್ ಮಾಡುವ ಸಾಧ್ಯತೆ ಇದೆ.
ಎಂಬಿ ಗಿರಿರಾಜ್ ಅವರು ‘ರಾಮರಸ’ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ಅವರು ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಗುರು ದೇಶಪಾಂಡೆ ಹಾಗೂ ವಿಕ್ರಂ ಆರ್ಯ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುಗುಣ ಜಯಪಾಲ್ ಚಿತ್ರದ ಸಹ ನಿರ್ಮಾಪಕರು. ಈ ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ ಪಾತ್ರ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 19 ನೇ ಸೀಸನ್ನ (IPL 2026) ಮೊದಲ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs SRH) ನಡುವೆ ನಡೆಯಲಿದೆ. ಒಂದೆಡೆ ಆರ್ಸಿಬಿ ಹಾಲಿ ಚಾಂಪಿಯನ್ ಆಗಿದ್ದರೆ, ಮತ್ತೊಂದೆಡೆ ಸನ್ರೈಸರ್ಸ್ ಹೈದರಾಬಾದ್ ಕಳೆದ ಆವೃತ್ತಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿತ್ತು. ಆದಾಗ್ಯೂ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಎಸ್ಆರ್ಎಚ್ ತಂಡವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. ಇತ್ತ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿ ಸಮತೋಲನದಿಂದ ಕೂಡಿರುವ ಆರ್ಸಿಬಿ ಮೈಮರೆಯುವಂತಿಲ್ಲ. ಇನ್ನು ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳ ಮುಖಾಮುಖಿ ದಾಖಲೆಯನ್ನು ನೋಡುವುದಾದರೆ..
ಹೆಡ್ ಟು ಹೆಡ್ ದಾಖಲೆ
ಅಂಕಿಅಂಶಗಳ ಪ್ರಕಾರ ಸನ್ರೈಸರ್ಸ್ ಹೈದರಾಬಾದ್, ಆರ್ಸಿಬಿ ವಿರುದ್ಧ ಮೇಲುಗೈ ಸಾಧಿಸಿರುವುದನ್ನು ಗಮಿನಸಬಹುದು. ಐಪಿಎಲ್ ಇತಿಹಾಸದಲ್ಲಿ ಈ ಎರಡೂ ತಂಡಗಳ ನಡುವೆ ಒಟ್ಟು 26 ಪಂದ್ಯಗಳು ನಡೆದಿವೆ. ಇದರಲ್ಲಿ ಸನ್ರೈಸರ್ಸ್ ಹೈದರಾಬಾದ್ 13 ಪಂದ್ಯಗಳನ್ನು ಗೆದ್ದಿದ್ದರೆ, ಆರ್ಸಿಬಿ 11 ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇನ್ನು ಕಳೆದ ಆವೃತ್ತಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದಲ್ಲಿ, ಆರ್ಸಿಬಿ ಅದ್ಭುತ ಪ್ರದರ್ಶನ ನೀಡಿತ್ತಾದರೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತ್ತು. ಇದರ ಹೊರತಾಗಿಯೂ, ಆರ್ಸಿಬಿ ಐಪಿಎಲ್ 2025 ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕಳೆದ 5 ಪಂದ್ಯಗಳ ಫಲಿತಾಂಶ
ಇನ್ನು ಆರ್ಸಿಬಿ ಹಾಗೂ ಎಸ್ಆರ್ಹೆಚ್ ನಡುವಿನ ಕಳೆದ ಐದು ಪಂದ್ಯಗಳ ಮುಖಾಮುಖಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರರಲ್ಲಿ ಗೆದ್ದಿದೆ . ಇತ್ತೀಚಿನ ದಿನಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ಸಿಬಿ ಉತ್ತಮ ದಾಖಲೆಯನ್ನು ಹೊಂದಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಆದಾಗ್ಯೂ, ಹೊಸ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ.
ಮುಂಬೈ, ಮಾರ್ಚ್ 27: ಈಗಿನ ಕಾಲದಲ್ಲಿ ಓದಿಕೊಂಡವರು ಕಾರ್ಪೊರೇಟ್ ಉದ್ಯೋಗಗಳತ್ತ (Corporate job) ಆಸಕ್ತಿ ತೋರಿಸುತ್ತಾರೆ. ಸ್ವ ಉದ್ಯೋಗಕ್ಕೆ ಕೈ ಹಾಕುವುದು ಕಡಿಮೆಯೇ. ಆದರೆ, ಸ್ವಂತ ದುಡಿಮೆಯಿಂದಲೂ ಲಕ್ಷಾನುಗಟ್ಟಲೆ ದುಡಿಯಬಹುದು ಅನೇಕರಿಗೆ ತಿಳಿದೇ ಇಲ್ಲ. ಆದರೆ ಮುಂಬೈ (Mumbai) ಆಟೋಚಾಲಕರೊಬ್ಬರ ದಿನದ ಸಂಪಾದನೆ ಕೇಳಿದ್ರೆ ನೀವು ಶಾಕ್ ಆಗ್ತೀರಾ. ದಿನಕ್ಕೆ 2500 ರೂ ಸಂಪಾದಿಸುವ ಈ ಆಟೋಚಾಲಕ ತಿಂಗಳಿಗೆ 75,000 ರೂ ಸಂಪಾದನೆ ಮಾಡ್ತಾರಂತೆ. ಈ ವಿಡಿಯೋ ಕಾರ್ಪೊರೇಟ್ ಸಂಬಳದ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.
@uvichar_ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮುಂಬೈ ಹೇಗೆ ದುಬಾರಿ ನಗರ ಎಂಬುದರ ಬಗ್ಗೆ ಚಾಲಕನೊಂದಿಗೆ ಮಾತನಾಡುತ್ತಿದ್ದೇನೆ ಎಂದು ವರ್ಮಾ ಹೇಳುವುದರೊಂದಿಗೆ ಈ ವೀಡಿಯೊ ಪ್ರಾರಂಭವಾಗುತ್ತದೆ. ಮಾತಿಗಿಳಿದ ಈ ಆಟೋ ಚಾಲಕ, ಸಾಕಷ್ಟು ಹಣವನ್ನು ಗಳಿಸಬೇಕು. ಆದರೆ ಸರಿಯಾದ ಅವಕಾಶವನ್ನು ಕಂಡುಹಿಡಿಯುವುದು ಒಂದೇ ಸವಾಲು. ದೈನಂದಿನ ಗಳಿಕೆಯು ಖರ್ಚು ವೆಚ್ಚಗಳನ್ನು ಕಳೆದು ಸುಮಾರು 2,500 ರೂ ಆಗುತ್ತದೆ ಎಂದು ಹೇಳುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ವರ್ಮಾರವರು ದಿನದ ಗಳಿಕೆಯ ಆಧಾರದ ಮೇಲೆ ಮಾಸಿಕ ಆದಾಯವು ಸರಿಸುಮಾರು 75,000 ರೂ ಆಗುತ್ತದೆ ಎನ್ನುವುದನ್ನು ಗಮನಿಸಿದ್ದಾರೆ. ಈ ಮುಂಬೈನಲ್ಲಿ ಆಟೋ ಓಡಿಸುವುದರಿಂದ ದೈನಂದಿನ ಸಂವಹನ ಮತ್ತು ನೆಟ್ವರ್ಕಿಂಗ್ ಅವಕಾಶಗಳ ಜೊತೆಗೆ ಉತ್ತಮ ಆದಾಯದ ಗಳಿಸಬಹುದು ಎಂದು ಸೂಚಿಸುತ್ತಾರೆ. ತಿಂಗಳಿಗೆ ಸರಾಸರಿ 75,000. ನೀವು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಿದರೆ, ನೀವು ಸುಮಾರು 1 ಲಕ್ಷ ರೂ ಗಳಿಸಬಹುದು. ಕನಿಷ್ಠ 60,000 ರೂ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ಈ ವಿಡಿಯೋ ಅಧಿಕ ವೀಕ್ಷಣೆಗಳೊಂದಿಗೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ ಯಾವುದೇ ದುಡಿಮೆ ಹೇಳುವಷ್ಟು ಸುಲಭವಲ್ಲ, ಕಷ್ಟ ಪಟ್ಟು ದುಡಿದರೆ ಮಾತ್ರ ಹಣ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಸಂಬಳದೊಂದಿಗೆ ನೀವು ಹೊಸಬರ ಸಂಬಳವನ್ನು ಹೇಗೆ ಹೋಲಿಸಬಹುದು?. ನೀವು ಆರಂಭಿಕ ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದರೆ 2 ವರ್ಷಗಳ ನಂತರ ನಿಮಗೆ ಸುಲಭವಾಗಿ ಹೆಚ್ಚಳ ಸಿಗುತ್ತದೆ. ನೀವು ಗಳಿಸುವ ಈಗಿನಕ್ಕಿಂತ ಕನಿಷ್ಠ ಎರಡು ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಆಟೋ ತಿಂಗಳಿಗೆ ಹೆಚ್ಚು ಸಂಬಳ ಗಳಿಸಬಹುದು. ದಿನವಿಡೀ ಬಿಸಿಲಿನಲ್ಲಿ ಸಂಚಾರ, ಅನಿಶ್ಚಿತತೆ, ನಿಗದಿತ ಸಮಯವಿಲ್ಲದೆ ಇರುತ್ತಾನೆ. 20–30 ಸಾವಿರ ಸಂಬಳದ ಕೆಲಸವು ಸಾಮಾನ್ಯವಾಗಿ ಸ್ಥಿರತೆ, ದಿನಚರಿ ಮತ್ತು ಸ್ವಲ್ಪ ಹೆಚ್ಚು ಸೌಕರ್ಯದೊಂದಿಗೆ ಬರುತ್ತದೆ. ವಿಭಿನ್ನ ಜೀವನ, ವಿಭಿನ್ನ ವಿನಿಮಯಗಳು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ