ಇಂಗ್ಲೆಂಡ್ ಸರಣಿಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಲಭ್ಯ..! – Kannada News | Hardik Pandya ruled out of the England ODI series

ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯು ಜುಲೈ 1 ರಿಂದ ಶುರುವಾಗಲಿದೆ. ಈ ಸರಣಿಯಿಂದ ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಹೊರಗುಳಿಯಲಿದ್ದಾರೆ. ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಳ್ಳಲು ಪಾಂಡ್ಯ ಮತ್ತಷ್ಟು ಸಮಯ ತೆಗೆದುಕೊಳ್ಳಲಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡದಿರಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಯಾಗಿದೆ.

2026ರ ಐಪಿಎಲ್ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬೆನ್ನುನೋವಿನ ಸಮಸ್ಯೆಗೆ ಒಳಗಾಗಿದ್ದರು. ಈ ಸಮಸ್ಯೆಯ ಕಾರಣ ಅವರು ಮುಂಬೈ ಇಂಡಿಯನ್ಸ್ ತಂಡದ ಕೆಲ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಇದಾಗ್ಯೂ ಅವರನ್ನು ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತು.

ಆದರೆ ಸಂಪೂರ್ಣ ಫಿಟ್​ನೆಸ್ ಸಾಧಿಸದ ಕಾರಣ ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಯಿಂದ ಅವರನ್ನು ಕೈ ಬಿಡಲಾಗಿತ್ತು. ಆದಾಗ್ಯೂ ಅವರು ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಅದರಂತೆ ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರದಲ್ಲಿ ತರಬೇತಿ ಮತ್ತು ರಿಹ್ಯಾಬ್ ಪ್ರಕ್ರಿಯೆಗೆ ಒಳಗಾಗಿದ್ದರು.

ಆದರೀಗ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ನಡೆಸಲಾದ ಫಿಟ್​ನೆಸ್ ಟೆಸ್ಟ್​ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತೆ ವಿಫಲರಾಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಅವರನ್ನು ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

10 ಓವರ್​ ಟಾರ್ಗೆಟ್:

ಮುಂಬರುವ ಏಕದಿನ ವಿಶ್ವಕಪ್​ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾರ್ದಿಕ್ ಪಾಂಡ್ಯ ಅವರ ಫಿಟ್​ನೆಸ್ ಟೆಸ್ಟ್​ ನಡೆಯುತ್ತಿದೆ. ಇಲ್ಲಿ ಮುಖ್ಯವಾಗಿ ಪಾಂಡ್ಯ ಅವರಿಗೆ 10 ಓವರ್​ಗಳ ಟಾರ್ಗೆಟ್ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಅಂದರೆ ಬೆನ್ನು ನೋವಿನ ಸಮಸ್ಯೆಯ ಕಾರಣ ಹಾರ್ದಿಕ್ ಪಾಂಡ್ಯಗೆ ದೀರ್ಘಾವಧಿಯವರೆಗೆ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ತರಬೇತಿ ಅವಧಿಗಳಲ್ಲಿ ಅವರು ಪೂರ್ಣ 10 ಓವರ್‌ಗಳ ಬೌಲಿಂಗ್ ಕೋಟಾವನ್ನು ಪೂರೈಸಲು ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ಕಾರಣದಿಂದಾಗಿ ಸಂಪೂರ್ಣ ಫಿಟ್​ನೆಸ್ ಸಾಧಿಸಿದ ಬಳಿಕ ಅವರನ್ನು ಆಲ್​ರೌಂಡರ್ ಆಗಿ ಏಕದಿನ ತಂಡಕ್ಕೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಅಂದರೆ ಮುಂಬರುವ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಫಿಟ್​ನೆಸ್ ಸಾಧಿಸಿದರೆ 2027ರ ಏಕದಿನ ವಿಶ್ವಕಪ್ ಆಡುವುದು ಖಚಿತ.

ಇದರ ನಡುವೆ ನಡೆಯುವ ಟಿ20 ಸರಣಿಗಳ ವೇಳೆ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲು ಬಿಸಿಸಿಐ ಆಯ್ಕೆ ಸಮಿತಿ ಪ್ಲ್ಯಾನ್ ರೂಪಿಸಿದೆ. ಇದೇ ಕಾರಣದಿಂದಾಗಿ ಅವರನ್ನು ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಿಗೆ ಆಯ್ಕೆ ಮಾಡಲಾಗಿಲ್ಲ.  ಇನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಶೀಘ್ರದಲ್ಲೇ ಭಾರತ ತಂಡವನ್ನು ಪ್ರಕಟಿಸಲಾಗುವುದು ಬಿಸಿಸಿಐ ತಿಳಿಸಿದೆ. ಈ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿ ಕಂಬ್ಯಾಕ್ ಯಾವಾಗ?

ಇಂಗ್ಲೆಂಡ್ ಟಿ20 ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ,  ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ.

Source link

ಶಾಸಕರ ಮತದಾನದಲ್ಲಿ ಎರಡು ನಿಯಮ ಯಾಕೆ? ಚುನಾವಣಾ ಆಯೋಗದ ದ್ವಂದ್ವ ನೀತಿ ಪ್ರಶ್ನಿಸಿ ಶಾಸಕ ಎಸ್. ಸುರೇಶ್ ಕುಮಾರ್ ಪತ್ರ – Kannada News | BJP MLA S Suresh Kumar Writes To Karnataka CEO Questioning Duality in Rajya Sabha and MLC Election Voting Rules

ಶಾಸಕ ಎಸ್. ಸುರೇಶ್ ಕುಮಾರ್ ಹಾಗೂ ಅವರು ಚುನಾವಣಾ ಅಧಿಕಾರಿಗೆ ಬರೆದ ಪತ್ರದ ಪ್ರತಿ (ಕೃಪೆ: ಶಾಸಕರ ಫೇಸ್​ಬುಕ್ ಹಾಗೂ ಎಕ್ಸ್ ಪೋಸ್ಟ್)Image Credit source: Facebook

ಬೆಂಗಳೂರು, ಜೂನ್ 20: ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ, ಶಾಸಕರು (ಮತದಾರರ ನೆಲೆಯಲ್ಲಿ) ವರ್ತಿಸಬೇಕಾದ ನಿಯಮಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ರಾಜಾಜಿನಗರ ಕ್ಷೇತ್ರದ ಬಿಜೆಪಿ (BJP) ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ (S Suresh Kumar) ಪ್ರಶ್ನೆ ಮಾಡಿದ್ದಾರೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಈ ನಿಯಮಾವಳಿಗಳ ಹಿಂದಿರುವ ಅಸಲಿ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.

ಮುಖ್ಯಾಂಶಗಳು

ಶಾಸಕರ ಮತದಾನದ ದ್ವಂದ್ವ ನೀತಿ ಬಗ್ಗೆ ಪ್ರಶ್ನೆ.
ರಾಜ್ಯಸಭೆಯಲ್ಲಿ ಬಹಿರಂಗ, ಪರಿಷತ್ತಿನಲ್ಲಿ ಗೌಪ್ಯ ಮತದಾನ.
ಗೊಂದಲಕ್ಕೆ ಸ್ಪಷ್ಟೀಕರಣ ಕೋರಿ ಸಿಇಒಗೆ ಪತ್ರ.

ಪತ್ರದಲ್ಲಿರುವ ಪ್ರಮುಖ ಅಂಶಗಳೇನು?

ಇತ್ತೀಚೆಗೆ ನಮ್ಮ ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಹಾಗೂ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಚುನಾವಣೆಗಳು ನಡೆದಿದ್ದವು. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಎರಡೂ ಚುನಾವಣೆಗಳಿಗೂ ವಿಧಾನಸಭಾ ಸದಸ್ಯರೇ (ಶಾಸಕರು) ಮತದಾರರಾಗಿದ್ದಾರೆ. ಆದರೆ, ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ಮತ ಚಲಾಯಿಸುವಾಗ ತಾವು ಗುರುತು ಮಾಡಿದ ಮತಪತ್ರವನ್ನು ಅಲ್ಲಿ ಕುಳಿತಿರುವ ತಮ್ಮ ಪಕ್ಷದ ಏಜೆಂಟರಿಗೆ ಕಡ್ಡಾಯವಾಗಿ ತೋರಿಸಿ ಹಾಕಬೇಕಿರುತ್ತದೆ. ಆದರೆ, ಅದೇ ವಿಧಾನ ಪರಿಷತ್ ಚುನಾವಣೆಯಲ್ಲಿ ಇದೇ ಶಾಸಕರಿಗೆ ಗೌಪ್ಯ ಮತದಾನದ ಸೌಲಭ್ಯವನ್ನು ನೀಡಲಾಗಿರುತ್ತದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ರದ ಪ್ರತಿಯನ್ನು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಸುರೇಶ್ ಕುಮಾರ್

ನಿಯಮಾವಳಿಗಳ ಉದ್ದೇಶವೇನು? ಸುರೇಶ್ ಕುಮಾರ್ ಪ್ರಶ್ನೆ

ಒಂದೊಮ್ಮೆ ರಾಜ್ಯಸಭೆಯ ಚುನಾವಣೆಗಳು ಅವಿರೋಧವಾಗಿ ಆಯ್ಕೆಯಾಗದೇ ಹೋಗಿದ್ದರೆ, ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಎರಡೂ ಚುನಾವಣೆಗಳು ಒಂದೇ ದಿನ ನಡೆಯುತ್ತಿದ್ದವು. ಅಂತಹ ಸಂದರ್ಭದಲ್ಲಿ ಅದೇ ವಿಧಾನಸಭಾ ಸದಸ್ಯರು ರಾಜ್ಯಸಭೆಗೆ ಮತ ಹಾಕುವಾಗ ತಮ್ಮ ಏಜೆಂಟರಿಗೆ ಬ್ಯಾಲೆಟ್ ಪೇಪರ್ ತೋರಿಸಬೇಕಾಗುತ್ತದೆ ಮತ್ತು ಅದೇ ದಿನ ವಿಧಾನ ಪರಿಷತ್ತಿಗೆ ಮತ ಚಲಾಯಿಸುವಾಗ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಒಂದೇ ದಿನ, ಒಂದೇ ಮತದಾರರಾಗಿ ವರ್ತಿಸುವಾಗ ಶಾಸಕರಿಗೆ ಈ ದ್ವಂದ್ವ ನೀತಿ ಏಕೆ? ಈ ರೀತಿಯ ವಿಭಿನ್ನ ನಿಯಮಾವಳಿಗಳ ಹಿಂದೆ ಇರುವ ಉದ್ದೇಶವಾದರೂ ಏನು? ಎಂದು ಸುರೇಶ್ ಕುಮಾರ್ ಅವರು ಪತ್ರದ ಮೂಲಕ ಚುನಾವಣಾ ಆಯೋಗವನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್​ಗೆ ಸೋಲು: ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ

ಸಾರ್ವಜನಿಕವಾಗಿ ಮತ್ತು ರಾಜಕೀಯ ವಲಯದಲ್ಲಿ ಉದ್ಭವಿಸಿರುವ ಈ ಗೊಂದಲಕ್ಕೆ ಶೀಘ್ರವೇ ಸ್ಪಷ್ಟೀಕರಣ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ; 50 ಲಕ್ಷ ಅನಿವಾಸಿ ಭಾರತೀಯರ ನೆರವಿಗೆ ನಿಂತ ರಾಜ್ಯ ಸರ್ಕಾರ – Kannada News | CM D.K. Shivakumar Announces New NRI Department for Welfare and Investment Growth

ಬೆಂಗಳೂರು, ಜೂ.20: ರಾಜ್ಯದಲ್ಲಿ ಅನಿವಾಸಿ ಭಾರತೀಯ (ಎನ್‌ಆರ್‌ಐ) ಇಲಾಖೆ ಸ್ಥಾಪಿಸಲು ಕರ್ನಾಟಕ ಸರ್ಕಾರ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ 10ಕ್ಕೂ ಹೆಚ್ಚು ಅನಿವಾಸಿ ಭಾರತೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಿದರು. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು, ಬಂಡವಾಳ ಕ್ರೂಢೀಕರಣ, ಕೌಶಲ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ವ್ಯಾಪಾರ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಈ ಇಲಾಖೆಯ ಪ್ರಮುಖ ಉದ್ದೇಶಗಳಾಗಿವೆ. ತಮಿಳುನಾಡು, ಕೇರಳ ಮತ್ತು ಪಂಜಾಬ್ ರಾಜ್ಯಗಳ ಮಾದರಿಯಲ್ಲಿ ಈ ಇಲಾಖೆಯನ್ನು ರೂಪಿಸಲಾಗುತ್ತಿದೆ. ವಿದೇಶದಲ್ಲಿ ಕಾನೂನು ಸಮಸ್ಯೆಗಳು, ಪಾಸ್‌ಪೋರ್ಟ್ ತೊಂದರೆಗಳು, ಮರಣದಂತಹ ಸಂದರ್ಭಗಳಲ್ಲಿ ನೆರವು ನೀಡಲು ಇಲಾಖೆ ಕಾರ್ಯನಿರ್ವಹಿಸಲಿದೆ. ಅನಿವಾಸಿ ಕನ್ನಡಿಗರ ದೂರುಗಳನ್ನು ಪರಿಹರಿಸಲು ಪ್ರತ್ಯೇಕ ವಿಚಾರಣಾ ಡೆಸ್ಕ್ ರಚಿಸುವ ಸಾಧ್ಯತೆಗಳೂ ಇವೆ. ಸುಮಾರು 50 ಲಕ್ಷ ಅನಿವಾಸಿ ಭಾರತೀಯರಿಗೆ ನೆರವು ನೀಡುವ ಗುರಿಯನ್ನು ಇಲಾಖೆ ಹೊಂದಿದೆ. ಈ ನಿರ್ಧಾರದಿಂದ ರಾಜ್ಯಕ್ಕೆ ವಿದೇಶಿ ವಿನಿಮಯ ಹೆಚ್ಚಳವಾಗುವ ನಿರೀಕ್ಷೆಯಿದೆ. ಅನಿವಾಸಿ ಕನ್ನಡಿಗರ ಬಹು ವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಇದು ಮುಖ್ಯಮಂತ್ರಿಗಳ ಆರನೇ ಗ್ಯಾರಂಟಿಗಳಲ್ಲಿ ಒಂದಾಗಿದೆ ಎಂದು ಅನಿವಾಸಿ ಭಾರತೀಯ ಸಂಘಟನೆಗಳು ಸಂತಸ ವ್ಯಕ್ತಪಡಿಸಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Mercury Transit: ಬುಧ ಕರ್ಕಾಟಕ ರಾಶಿಗೆ ಪ್ರವೇಶ;ಈ 5 ರಾಶಿಯವರ ವೃತ್ತಿ ಮತ್ತು ಆರ್ಥಿಕ ಜೀವನದಲ್ಲಿ ಯಶಸ್ಸು! – Kannada News | Mercury Transit June 22: Budha Gochara in Cancer and Its Astrological Impact on 5 Zodiacs!

ಜ್ಯೋತಿಷ್ಯ ಶಾಸ್ತ್ರImage Credit source: jpl.nasa.gov

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹಕ್ಕೆ ವಿಶೇಷ ಸ್ಥಾನವಿದೆ. ನಮ್ಮ ಬುದ್ಧಿಶಕ್ತಿ, ಮಾತು, ಸಂವಹನ ಕಲೆ ಮತ್ತು ವ್ಯಾಪಾರ-ವ್ಯವಹಾರಗಳನ್ನು ನಿಯಂತ್ರಿಸುವ ಗ್ರಹವೇ ಬುಧ. ಇಂತಹ ಬುದ್ಧಿಕಾರಕ ಬುಧನು ಜೂನ್ 22 ರಂದು ತನ್ನ ಪಥವನ್ನು ಬದಲಾಯಿಸಿ, ಅತ್ಯಂತ ಭಾವನಾತ್ಮಕ ರಾಶಿಯಾದ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ.

ಬುಧನ ಈ ರಾಶಿ ಬದಲಾವಣೆಯಿಂದಾಗಿ ಇಡೀ ಜಗತ್ತಿನ ಆಲೋಚನಾ ಶೈಲಿಯಲ್ಲಿ ಮಹತ್ವದ ಬದಲಾವಣೆ ಕಂಡುಬರಲಿದೆ. ಇಲ್ಲಿಯವರೆಗೆ ಕೇವಲ ಲಾಭ-ನಷ್ಟ ಅಥವಾ ಸಾಧಕ-ಬಾಧಕಗಳನ್ನು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಜನರು, ಇನ್ನು ಮುಂದೆ ಸ್ವಲ್ಪ ಭಾವನಾತ್ಮಕವಾಗಿ ಮತ್ತು ಮೃದುವಾಗಿ ಯೋಚಿಸಲು ಆರಂಭಿಸುತ್ತಾರೆ. ಬುಧನ ಈ ಸಾಗಣೆಯು ಕೆಲವು ರಾಶಿಚಕ್ರದ ಚಿಹ್ನೆಗಳಿಗೆ, ವಿಶೇಷವಾಗಿ ಕರ್ಕಾಟಕ, ಕನ್ಯಾ, ತುಲಾ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ವೃತ್ತಿಜೀವನದಿಂದ ಆರ್ಥಿಕತೆಯವರೆಗೆ ಎಲ್ಲದರಲ್ಲೂ ಅದ್ಭುತ ಅವಕಾಶಗಳನ್ನು ತರಲಿದೆ. ಆ ರಾಶಿಗಳ ವಿವರ ಇಲ್ಲಿದೆ:

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರೇ, ಬುಧನು ನಿಮ್ಮದೇ ರಾಶಿಗೆ ಆಗಮಿಸುತ್ತಿರುವುದರಿಂದ ಈ ಸಮಯವು ನಿಮಗೆ ಸಂಪೂರ್ಣವಾಗಿ ಮಾಂತ್ರಿಕವಾಗಿರಲಿದೆ. ನಿಮ್ಮಲ್ಲಿ ಅಡಗಿದ್ದ ಆತ್ಮವಿಶ್ವಾಸವು ದುಪ್ಪಟ್ಟಾಗಲಿದೆ. ಇದುವರೆಗೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಹಿಂಜರಿಯುತ್ತಿದ್ದ ನೀವು, ಇನ್ನು ಮುಂದೆ ಧೈರ್ಯವಾಗಿ ಮಾತನಾಡಲಿದ್ದೀರಿ. ಸಮಾಜದಲ್ಲಿ ಹೊಸ ಜನರೊಂದಿಗೆ ಸಂಪರ್ಕ ಸಾಧಿಸುವಿರಿ. ನಿಮ್ಮ ಈ ಹೊಸ ನೆಟ್‌ವರ್ಕಿಂಗ್ ನೀವು ಎಂದಿಗೂ ಊಹಿಸದಂತಹ ದೊಡ್ಡ ಅವಕಾಶಗಳ ಬಾಗಿಲನ್ನು ತೆರೆಯುತ್ತದೆ. ನೀವು ಕೆಲವೊಮ್ಮೆ ಸಣ್ಣ ವಿಷಯಗಳನ್ನೂ ಅತಿಯಾಗಿ ಯೋಚಿಸುತ್ತೀರಿ (Overthinking). ಈ ಸಮಯದಲ್ಲಿ ಆ ಅಭ್ಯಾಸವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಬುಧನೇ ಅಧಿಪತಿ (ಆಡಳಿತ ಗ್ರಹ). ಈಗ ಆತ ನಿಮ್ಮ ಲಾಭದ ಮನೆಯಾದ 11ನೇ ಮನೆಗೆ ಪ್ರವೇಶಿಸುತ್ತಿದ್ದಾನೆ. ನಿಮ್ಮ ಯಶಸ್ಸಿನ ಹಾದಿಯ ಕೀಲಿ ಕೈ ಈಗ ನಿಮ್ಮ ಕೈಯಲ್ಲಿದೆ ಎಂದೇ ಅರ್ಥ. ನಿಮ್ಮ ಹಳೆಯ ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮ್ಮ ಪ್ರಗತಿಗೆ ದೊಡ್ಡ ಶಕ್ತಿಯಾಗಿ ನಿಲ್ಲಲಿದ್ದಾರೆ. ಆರ್ಥಿಕವಾಗಿ ಇದು ನಿಮಗೆ ಅತ್ಯಂತ ಸುಸಮಯ. ನೀವು ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲೂ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಯಶಸ್ಸಿನ ಸಮಯದಲ್ಲಿ ಇತರರಿಗೆ ಸಹಾಯ ಮಾಡಲು ಮರೆಯಬೇಡಿ. ನೀವು ನೀಡುವ ಸಕಾರಾತ್ಮಕತೆಯು ನಿಮಗೇ ಒಳ್ಳೆಯ ರೂಪದಲ್ಲಿ ಹಿಂತಿರುಗುತ್ತದೆ.

ತುಲಾ ರಾಶಿ:

ತುಲಾ ರಾಶಿಯವರ ಹತ್ತನೇ ಮನೆಯಲ್ಲಿ (ಕರ್ಮ ಸ್ಥಾನ) ಬುಧನ ಸಂಚಾರವಾಗುತ್ತಿರುವುದರಿಂದ, ನಿಮ್ಮ ವೃತ್ತಿಜೀವನವು ಹೊಸ ಎತ್ತರಕ್ಕೆ ತಲುಪಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಿನ ವಿಶ್ವಾಸಾರ್ಹತೆ ಮತ್ತು ಗೌರವ ಸಿಕ್ಕಾಪಟ್ಟೆ ಬೆಳೆಯಲಿದೆ. ಉದ್ಯೋಗದಲ್ಲಿ ಪ್ರಗತಿಯ ಲಕ್ಷಣಗಳಿವೆ. ನೀವು ಯಾವುದೇ ಪ್ರಮುಖ ಸಭೆಗಳಲ್ಲಿ ಭಾಗವಹಿಸಬೇಕಿದ್ದರೆ ಅಥವಾ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಬೇಕಿದ್ದರೆ ನಿಮ್ಮ ಮಾತು ಸಿಹಿಯಾಗಿ ಮತ್ತು ಪರಿಣಾಮಕಾರಿಯಾಗಿರಲಿ. ನಿಮ್ಮ ಸಂವಹನ ಶೈಲಿಯು ಜನರನ್ನು ಸುಲಭವಾಗಿ ಆಕರ್ಷಿಸುತ್ತದೆ. ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಂಭೀರವಾಗಿ ಮತ್ತು ಶಿಸ್ತಿನಿಂದ ಇರಿ, ಇದು ನಿಮ್ಮನ್ನು ಎಲ್ಲರಿಗಿಂತ ಭಿನ್ನವಾಗಿ ಗುರುತಿಸುವಂತೆ ಮಾಡುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರೇ, ಸದ್ಯಕ್ಕೆ ಅದೃಷ್ಟ ದೇವತೆ ನಿಮ್ಮ ಕಡೆ ಇದ್ದಾಳೆ! ಬುಧ ಗ್ರಹವು ನಿಮ್ಮ ಭಾಗ್ಯ ಸ್ಥಾನದಲ್ಲಿ (ಒಂಬತ್ತನೇ ಮನೆ) ಸಂಚರಿಸುತ್ತಿದ್ದಾನೆ. ಹೊಸ ವಿಷಯಗಳನ್ನು ಕಲಿಯಲು ನೀವು ತುಂಬಾ ಉತ್ಸುಕರಾಗುತ್ತೀರಿ. ನಿಮ್ಮ ಜ್ಞಾನದ ಹಸಿವು ಎಷ್ಟು ವೇಗವಾಗಿ ಹೆಚ್ಚಾಗುತ್ತದೆಯೋ, ಅಷ್ಟೇ ವೇಗವಾಗಿ ನಿಮ್ಮ ಪ್ರಗತಿಯೂ ಆಗುತ್ತದೆ. ದೀರ್ಘಾವಧಿಯ ಪ್ರಯಾಣಗಳು ನಿಮಗೆ ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಬಹಳ ಫಲಪ್ರದವಾಗುತ್ತವೆ. ಹೊಸ ಕೋರ್ಸ್ ಅಥವಾ ಹೊಸ ಉದ್ಯೋಗ ಕಲಿಯಲು ಇದು ಅತ್ಯುತ್ತಮ ಸಮಯ. ನಿಮ್ಮ ಮಾರ್ಗದರ್ಶಕರು ಮತ್ತು ಹಿರಿಯರು ನೀಡುವ ಸಲಹೆಗಳನ್ನು ಅಲಕ್ಷಿಸಬೇಡಿ, ಅದು ನಿಮ್ಮ ಇಡೀ ಭವಿಷ್ಯವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ.

ಮೀನ ರಾಶಿ:

ಮೀನ ರಾಶಿಯವರು ಸ್ವಭಾವತಃ ಸೃಜನಶೀಲರು (Creative). ಈಗ ಬುಧನು ನಿಮ್ಮ ಐದನೇ ಮನೆಗೆ ಪ್ರವೇಶಿಸುತ್ತಿರುವುದರಿಂದ ನಿಮ್ಮ ಈ ಕಲೆ ಮತ್ತಷ್ಟು ಮಿನುಗಲಿದೆ. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಒಂದು ಹೊಸ ಉತ್ಸಾಹ ಮತ್ತು ಕಾಳಜಿ ಎದ್ದು ಕಾಣುತ್ತದೆ. ನಿಮ್ಮ ಕೆಲಸದಲ್ಲಿ ನಿಮ್ಮ ಭಾವನೆಗಳನ್ನು ತುಂಬಿ ಮಾಡಿದಾಗ, ಜನರು ಅದನ್ನು ಆಳವಾಗಿ ಮೆಚ್ಚಿಕೊಳ್ಳುತ್ತಾರೆ. ನೀವು ವಿದ್ಯಾರ್ಥಿಯಾಗಿದ್ದರೆ, ಅಧ್ಯಯನದಲ್ಲಿ ನಿಮ್ಮ ಏಕಾಗ್ರತೆ ಮತ್ತು ಆಸಕ್ತಿ ಹೆಚ್ಚಾಗಲಿದೆ. ಕಲಾತ್ಮಕ ಕ್ಷೇತ್ರ, ಬರವಣಿಗೆ ಅಥವಾ ವಿನ್ಯಾಸ ರಂಗದಲ್ಲಿರುವವರಿಗೆ ಇಂದು ಅವರು ಮಾಡುವ ಸೃಷ್ಟಿಗೆ ಸಮಾಜದಿಂದ ಅಪಾರ ಪ್ರಶಂಸೆ ಸಿಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಆಧಾರಿತ ಡಾಕ್ಯುಮೆಂಟರಿ ಮಾಡಲು ಮುಂದಾದ ಆಮಿರ್ ಖಾನ್ – Kannada News | Aamir Khan Productions’ Documentary on President Droupadi Murmu: Inspiring Journey Revealed

ದ್ರೌಪದಿ ಮುರ್ಮು-ಆಮಿರ್ Image Credit source: Droupadi Murmu

ಬಾಲಿವುಡ್ ನಟ ಆಮಿರ್ ಖಾನ್ ಅವರು (Aamir Khan) ಇತ್ತೀಚೆಗೆ ನಟನೆಗಿಂತ, ಸಿನಿಮಾ ನಿರ್ಮಾಣದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಮೂಲಕ ವಿಭಿನ್ನ ಹಾಗೂ ಅರ್ಥಪೂರ್ಣ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗ ಈ ನಿರ್ಮಾಣ ಸಂಸ್ಥೆಯಿಂದ ಡಾಕ್ಯುಮೆಂಟರಿ ಒಂದು ಬರಲಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ರೋಚಕ ಹಾಗೂ ಸ್ಪೂರ್ತಿದಾಯಕ ಜೀವನದ ಕುರಿತು ವಿಶೇಷ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ಒಂದನ್ನು ಸಿದ್ಧಪಡಿಸಲು ಆಮಿರ್ ಖಾನ್ ನಿರ್ಮಾಣ ಸಂಸ್ಥೆ ಮುಂದಾಗಿದೆ ಎಂದು ವರದಿಯಾಗಿದೆ.

ಖ್ಯಾತ ಬರಹಗಾರ್ತಿ ಹಾಗೂ ನಿರ್ದೇಶಕಿ ಸ್ವಾತಿ ಚಕ್ರವರ್ತಿ ಈ ಡಾಕ್ಯುಮೆಂಟರಿಯನ್ನು ನಿರ್ದೇಶಿಸುತ್ತಿದ್ದಾರೆ. ಒಡಿಶಾದ ಸಣ್ಣ ಹಳ್ಳಿಯೊಂದರಿಂದ ಆರಂಭವಾಗಿ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಪೀಠದವರೆಗೆ ದ್ರೌಪದಿ ಮುರ್ಮು ಅವರು ನಡೆದುಬಂದ ಹಾದಿಯನ್ನು ಈ ಸಾಕ್ಷ್ಯಚಿತ್ರದಲ್ಲಿ ಅನಾವರಣಗೊಳಿಸಲಾಗುತ್ತದೆ.

ಕಷ್ಟದ ದಿನಗಳು ಹಾಗೂ ಹಳ್ಳಿಯ ಜೀವನದ ಮರುಸೃಷ್ಟಿ:

ವರದಿಗಳ ಪ್ರಕಾರ, ಈ ಡಾಕ್ಯುಮೆಂಟರಿಯಲ್ಲಿ ದ್ರೌಪದಿ ಮುರ್ಮು ಅವರ ಜೀವನದ ಪ್ರಮುಖ ಘಟ್ಟಗಳನ್ನು ತೋರಿಸಲಾಗುತ್ತದೆ. ಒಡಿಶಾದ ಹಳ್ಳಿಯ ದಿನಗಳು, ಅವರ ಸಾರ್ವಜನಿಕ ಜೀವನದ ಪ್ರವೇಶ ಹಾಗೂ ಭಾರತದ ಮೊದಲ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾದ ಸುಂದರ ಕ್ಷಣಗಳು ಇದರಲ್ಲಿ ಇರಲಿವೆ. ಅಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ಜೀವನದಲ್ಲಿ ಅವರು ಎದುರಿಸಿದ ಕಷ್ಟಗಳು, ಅವರು ಕಂಡ ಸಾವು-ನೋವುಗಳು ಮತ್ತು ಅವುಗಳನ್ನು ಮೆಟ್ಟಿ ನಿಂತ ಅವರ ಧೈರ್ಯದ ಕಥೆಯೂ ಇದರಲ್ಲಿ ಇರಲಿವೆ.

ದ್ರೌಪದಿ ಮುರ್ಮು ಅವರು ಹುಟ್ಟಿ ಬೆಳೆದ ಒಡಿಶಾದ ಹಳ್ಳಿಯಲ್ಲಿ ಸಾಕ್ಷ್ಯಚಿತ್ರದ ಕೆಲವು ಪ್ರಮುಖ ಭಾಗಗಳ ಶೂಟಿಂಗ್ ಮುಗಿದಿದೆ ಎಂದು ಹೇಳಲಾಗುತ್ತಿದೆ. ಅವರ ಬಾಲ್ಯದ ದಿನಗಳನ್ನು ಮರುಸೃಷ್ಟಿಸಲು ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಚಿತ್ರೀಕರಣ ಮಾಡಲಾಗಿದೆ. 2022ರಲ್ಲಿ ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಮುರ್ಮು ಅವರು, ಈ ಹುದ್ದೆಗೇರಿದ ದೇಶದ ಎರಡನೇ ಮಹಿಳೆಯಾಗಿದ್ದಾರೆ.

ಹಳೆಯ ಜೋಡಿ ಮತ್ತೆ ಒಂದಾಗಿ ಮುನ್ನಡೆ:

ಈ ಹಿಂದೆ ಆಮಿರ್ ಖಾನ್ ಹಾಗೂ ಕಿರಣ್ ರಾವ್ ನಿರ್ಮಾಣದಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ ‘ರುಬಾರು ರೋಶ್ನಿ’ (2019) ಸಾಕ್ಷ್ಯಚಿತ್ರವನ್ನು ಕೂಡ ಸ್ವಾತಿ ಚಕ್ರವರ್ತಿ ಅವರೇ ನಿರ್ದೇಶಿಸಿದ್ದರು. ಈಗ ಈ ಯಶಸ್ವಿ ಜೋಡಿ ದ್ರೌಪದಿ ಮುರ್ಮು ಅವರ ಬಯೋಪಿಕ್ ಮಾದರಿಯ ಡಾಕ್ಯುಮೆಂಟರಿಗಾಗಿ ಮತ್ತೊಮ್ಮೆ ಕೈಜೋಡಿಸಿದೆ.

ಇದನ್ನೂ ಓದಿ: ಒಂದೇ ಕಾರಿನಲ್ಲಿ ಇಬ್ಬರು ಮಾಜಿ ಪತ್ನಿಯರು, ಭಾವಿ ಪತ್ನಿ; ಆಮಿರ್ ಖಾನ್ ಜರ್ನಿ ಕಂಡು ನೆಟ್ಟಿಗರು ಶಾಕ್

ಸದ್ಯ ಆಮಿರ್ ಖಾನ್ ಪ್ರೊಡಕ್ಷನ್ಸ್ ಸಖತ್ ಬ್ಯುಸಿಯಾಗಿದೆ. ಆಮಿರ್ ಖಾನ್ ಅವರು ಸನ್ನಿ ಡಿಯೋಲ್ ನಟನೆಯ ಮತ್ತು ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ‘ಬಟ್ವಾರಾ 1947’ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಈ ಬಿಗ್ ಬಜೆಟ್ ಸಿನಿಮಾ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೆಎಲ್ ರಾಹುಲ್ ಔಟ್: ಟೀಮ್ ಇಂಡಿಯಾದಲ್ಲಿ 3 ಬದಲಾವಣೆ – Kannada News | India vs Afghanistan, 3rd ODI Toss And Playing XI

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ 3ನೇ ಏಕದಿನ ಪಂದ್ಯ ಶುರುವಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಘಾನಿಸ್ತಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದೆ.

ಇನ್ನು ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ 3 ಬದಲಾವಣೆ ಮಾಡಿಕೊಂಡಿದೆ. ಕಳೆದ ಮ್ಯಾಚ್​ನಲ್ಲಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಅವರನ್ನು ಈ ಪಂದ್ಯದಿಂದ ಕೈ ಬಿಡಲಾಗಿದ್ದು, ಅವರ ಬದಲಿಗೆ ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಕಲ್ಪಿಸಲಾಗಿದೆ.

ಹಾಗೆಯೇ ಕಳೆದ ಮ್ಯಾಚ್​ನಲ್ಲಿ ಬೆಂಚ್ ಕಾದಿದ್ದ ಹರ್ಷ್ ದುಬೆ ಹಾಗೂ ಪ್ರಸಿದ್ಧ್ ಕೃಷ್ಣ ಈ ಪಂದ್ಯದ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಕುಲ್ದೀಪ್ ಯಾದವ್ ಹಾಗೂ ಅರ್ಷದೀಪ್ ಸಿಂಗ್ ಹೊರುಗಳಿಯಬೇಕಾಗಿ ಬಂದಿದೆ.

ಭಾರತ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಶುಭ್​ಮನ್ ಗಿಲ್ (ನಾಯಕ), ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷ್ ದುಬೆ, ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್.

ಅಫ್ಘಾನಿಸ್ತಾನ್ ಪ್ಲೇಯಿಂಗ್ XI: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ದರ್ವಿಶ್ ರಸೂಲಿ, ಮೊಹಮ್ಮದ್ ನಬಿ, ಅಝ್ಮತ್​ ಒಮರ್​ಝಾಹಿ, ರಶೀದ್ ಖಾನ್, ಅಲ್ಲಾ ಗಝನ್​ಫರ್, ಜಿಯಾ ಉರ್ ರಹಮಾನ್ ಷರೀಫಿ, ಫರೀದ್ ಅಹ್ಮದ್.

ಸರಣಿ ಗೆದ್ದಿರುವ ಟೀಮ್ ಇಂಡಿಯಾ:

ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯವು ಮಳೆಯ ಕಾರಣ 25 ಓವರ್​ಗಳಿಗೆ ಸೀಮಿತವಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 24.2 ಓವರ್​ಗಳಲ್ಲಿ 194 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 22.5 ಓವರ್​ಗಳಲ್ಲಿ 195 ರನ್​ಗಳಿಸಿ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಇನ್ನು ಲಕ್ನೋನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.5 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 402 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ 232 ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ ತಂಡವು 170 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು. ಇದೀಗ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ) , ಕೆಎಲ್ ರಾಹುಲ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಹರ್ಷ್ ದುಬೆ , ಕುಲ್ದೀಪ್ ಯಾದವ್ , ಅರ್ಷದೀಪ್ ಸಿಂಗ್ , ಗುರ್ನೂರ್ ಬ್ರಾರ್ , ಪ್ರಸಿದ್ಧ್ ಕೃಷ್ಣ , ಪ್ರಿನ್ಸ್ ಯಾದವ್.

ಇದನ್ನೂ ಓದಿ: ಗಂಭೀರ್ ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದರು: ಶ್ರೀಶಾಂತ್ ಗಂಭೀರ ಆರೋಪ 

ಅಫ್ಘಾನಿಸ್ತಾನ್ ಏಕದಿನ ತಂಡ: ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಅಝ್ಮತ್​ ಒಮರ್​ಝಾಹಿ, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗೆಯಾಲಿಯಾ ಖರೋಟಿ, ಅಲ್ಲಾ ಗಝನ್​ಫರ್, ಬಿಲಾಲ್ ಸಮಿ, ದರ್ವೀಶ್ ರಸೂಲಿ, ಫರೀದ್ ಮಲಿಕ್, ಝಿಯಾ ಉರ್ ರೆಹಮಾನ್ ಶರೀಫಿ.

Source link

ಹುಟ್ಟುಹಬ್ಬದ ದಿನವೇ ನಿವೃತ್ತ ಸೈನಿಕನಿಗೆ ಸೈಬರ್ ಶಾಕ್: ‘ಗಿಫ್ಟ್’ ಆಸೆಗೆ ಬಿದ್ದ ಯೋಧನಿಗೆ 2.82 ಲಕ್ಷ ರೂ. ವಂಚನೆ – Kannada News | Tumakuru Cybercrime: Fake Birthday Gift Offer Dupes Retired Soldier of 2.82 Lakh

ತುಮಕೂರು, ಜೂ.20: ನಿವೃತ್ತರಾಗಿದ್ದ ಯೋಧರೊಬ್ಬರಿಗೆ ಅವರ ಹುಟ್ಟುಹಬ್ಬದ ದಿನದಂದೇ ಸೈಬರ್ ಖದೀಮರು ಬರೋಬ್ಬರಿ ಲಕ್ಷಾಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹ್ಯಾಪಿ ಬರ್ತ್‌ಡೇ ಎಂದು ಶುಭಕೋರಿ, ಗಿಫ್ಟ್ ಕಳುಹಿಸುವ ನೆಪದಲ್ಲಿ ನಿವೃತ್ತ ಯೋಧನಿಗೆ ಬರೋಬ್ಬರಿ 2.82 ಲಕ್ಷ ರೂಪಾಯಿ ನಾಮ ಹಾಕಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದ ನಿವಾಸಿ, ನಿವೃತ್ತ ಯೋಧ ಶಿವಕುಮಾರ್ ವಂಚನೆಗೊಳಗಾದವರು.

ಜೂನ್ 20ರಂದು ನಿವೃತ್ತ ಯೋಧ ಶಿವಕುಮಾರ್ ಅವರ ಹುಟ್ಟುಹಬ್ಬವಿತ್ತು. ಇದೇ ದಿನ ಮುಂಜಾನೆ ಅಪರಿಚಿತ ವ್ಯಕ್ತಿಗಳು ಶಿವಕುಮಾರ್ ಅವರಿಗೆ ಕರೆ ಮಾಡಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಮಾತುಕತೆಯ ನಡುವೆ, “ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಕಡೆಯಿಂದ ಒಂದು ಅಮೂಲ್ಯವಾದ ಗಿಫ್ಟ್ ನೀಡುತ್ತಿದ್ದೇವೆ” ಎಂದು ನಂಬಿಸಿ, ಗಿಫ್ಟ್ ಪಾರ್ಸೆಲ್ ಕಳುಹಿಸಲು ಅವರ ಮನೆಯ ವಿಳಾಸವನ್ನು ಪಡೆದುಕೊಂಡಿದ್ದಾರೆ.

ವಿಳಾಸ ಪಡೆದ ಕೆಲವೇ ಹೊತ್ತಿನಲ್ಲಿ ಮತ್ತೆ ಕರೆ ಮಾಡಿದ ಸೈಬರ್ ವಂಚಕರು, “ನಿಮ್ಮ ಗಿಫ್ಟ್ ರೆಡಿಯಾಗಿದೆ. ಆದರೆ ಕೊರಿಯರ್ ಹಾಗೂ ಕಸ್ಟಮ್ಸ್ ಡ್ಯೂಟಿ ಚಾರ್ಜ್ ಅನ್ನು ಮುಂಗಡವಾಗಿ ಪಾವತಿಸಬೇಕು. ಆ ಹಣವನ್ನು ಗಿಫ್ಟ್ ಸಿಕ್ಕ ತಕ್ಷಣ ರಿಫಂಡ್ ಮಾಡಲಾಗುವುದು” ಎಂದು ನಂಬಿಸಿ ಆನ್‌ಲೈನ್ ಲಿಂಕ್ ಕಳುಹಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಶಿವಕುಮಾರ್ ಅವರು ವಿವಿಧ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಬರೋಬ್ಬರಿ 2.82 ಲಕ್ಷ ರೂಪಾಯಿ ಹಣವನ್ನು ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣ: ಸಿಕ್ಕಿಬಿದ್ದ ಹೈಟೆಕ್ ಕಿಲಾಡಿಗಳ ಹಿನ್ನೆಲೆ ನೋಡಿ ಪೊಲೀಸರೇ ಶಾಕ್!

ಯಾವಾಗ ಖಾತೆಯಿಂದ ಅಷ್ಟೂ ಹಣ ವರ್ಗಾವಣೆಯಾಯಿತೋ, ತಕ್ಷಣವೇ ವಂಚಕರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ತಾನು ಸೈಬರ್ ಜಾಲದ ಬಲೆಗೆ ಬಿದ್ದು ವಂಚನೆಗೊಳಗಾಗಿರುವುದು ಶಿವಕುಮಾರ್ ಅವರಿಗೆ ತಡವಾಗಿ ಅರಿವಾಗಿದೆ. ಸದ್ಯ ನಿವೃತ್ತ ಯೋಧ ಶಿವಕುಮಾರ್ ಅವರು ತುಮಕೂರು ಸಿಇಎನ್ (CEN) ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ವಂಚಕರ ಪತ್ತೆಗಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:46 pm, Sat, 20 June 26

Source link

ಖಗೋಳ ವಿಸ್ಮಯ: ವಿಜಯಪುರದಲ್ಲಿ ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣದ ಉಂಗುರ! – Kannada News | Rare Sun Halo Spotted in Vijayapura: Tikota Gonasagi School Students Witness Beautiful Sun Ring

ವಿಜಯಪುರ, ಜೂನ್ 20: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ಆಕಾಶದಲ್ಲಿ ಶನಿವಾರ ಬೆಳಿಗ್ಗೆ ಒಂದು ಅಪರೂಪದ ವಿಸ್ಮಯ ಕಾಣಿಸಿಕೊಂಡು ಜನರ ಗಮನ ಸೆಳೆದಿದೆ. ಬೆಳಿಗ್ಗೆ ಸುಮಾರು 10:30ರ ಸುಮಾರಿಗೆ ಸೂರ್ಯನ ಸುತ್ತಲೂ ಪ್ರಕಾಶಮಾನವಾದ ಸ್ವರ್ಣ ವರ್ಣದ ವೃತ್ತಾಕಾರದ ಉಂಗುರ ಮೂಡಿದೆ. ಈ ಆಕರ್ಷಕ ದೃಶ್ಯವನ್ನು ಕಂಡು ಜನಸಾಮಾನ್ಯರು ಕೌತುಕದಿಂದ ಆಕಾಶದತ್ತ ಮುಖ ಮಾಡಿದ್ದಾರೆ. ಘೋಣಸಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈ ಅಪರೂಪದ ಉಂಗುರಾಕೃತಿಯನ್ನು ಕಂಡು ಅತ್ಯಂತ ಖುಷಿ ಪಟ್ಟರು. ಶಾಲೆಯ ಶಿಕ್ಷಕರಾದ ಪರಮೇಶ್ವರ ಗದ್ಯಾಳ ಅವರು ವಿದ್ಯಾರ್ಥಿಗಳಿಗೆ ಈ ಪ್ರಕೃತಿ ವಿಸ್ಮಯವನ್ನು ತೋರಿಸಿ, ಇದು ಹೇಗೆ ಸಂಭವಿಸುತ್ತದೆ ಎಂಬ ಕುರಿತ ವೈಜ್ಞಾನಿಕ ಮಾಹಿತಿ ನೀಡಿದರು. ವಾತಾವರಣದ ಮೇಲ್ಭಾಗದಲ್ಲಿರುವ ಹನಿಗಳು ಮತ್ತು ಮಂಜಿನ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ ವಕ್ರೀಭವನಗೊಂಡು (Refraction) ಈ ರೀತಿಯ ‘ಸನ್ ಹ್ಯಾಲೋ (Sun Halo)’ ಅಥವಾ ಸೂರ್ಯನ ಉಂಗುರ ಸೃಷ್ಟಿಯಾಗುತ್ತದೆ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀರಜ್ ಚೋಪ್ರಾ ಕಂಬ್ಯಾಕ್: ಕಾಮನ್‌ವೆಲ್ತ್ ಗೇಮ್ಸ್​ಗೆ ಎಂಟ್ರಿ! – Kannada News | Doha Diamond League 2026: Neeraj qualifies for Commonwealth Games

ಭಾರತದ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಖತಾರ್​ನ ದೋಹಾದಲ್ಲಿ ನಡೆದ ಡೈಮಂಡ್ ಲೀಗ್​ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಬೆನ್ನು ನೋವಿನ ಸಮಸ್ಯೆಯ ಕಾರಣ ಕಳೆದ ಕೆಲ ತಿಂಗಳುಗಳಿಂದ ಮೈದಾನಕ್ಕಿಳಿಯದ ನೀರಜ್  ಈ ಬಾರಿ 85.69 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ಗಮನ ಸೆಳೆದಿದ್ದಾರೆ.

4ನೇ ಸ್ಥಾನ ಪಡೆದ ನೀರಜ್:

ಬೆನ್ನು ನೋವಿನ ಸಮಸ್ಯೆಯ ಕಾರಣ ಸುಮಾರು 9 ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರೀಡೆಯಿಂದ ದೂರವಿದ್ದ ನೀರಜ್ ಚೋಪ್ರಾ ದೋಹಾ ಡೈಮಂಡ್ ಲೀಗ್​ನಲ್ಲಿ ಉತ್ತಮ ಆರಂಭ ಪಡೆದಿದ್ದರು. ಇದಾಗ್ಯೂ ಅವರು ಮುಟ್ಟಿದ ಗರಿಷ್ಠ ದೂರ 85.69 ಮೀಟರ್.

85.69 ಮೀಟರ್ ದೂರದೊಂದಿಗೆ ಈ ಲೀಗ್​ನಲ್ಲಿ ನೀರಜ್ ಚೋಪ್ರಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದರೆ ಈ ಭರ್ಜರಿ ಪ್ರದರ್ಶನದ ಫಲವಾಗಿ ಅವರು 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಎಂಟ್ರಿ:

ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಮುಂಬರುವ ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲು 82.61 ಮೀಟರ್ ಅರ್ಹತಾ ಮಾನದಂಡವನ್ನು ನಿಗದಿಪಡಿಸಿತ್ತು. ಈ ಗುರಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ನೀರಜ್ 2ನೇ ಎಸೆತದಲ್ಲೇ ಯಶಸ್ಸು ಸಾಧಿಸಿದ್ದರು.

ನೀರಜ್ ಚೋಪ್ರಾ ಎಸೆದ 2ನೇ ಎಸೆವು ಬರೋಬ್ಬರಿ 82.77 ಮೀಟರ್ ದೂರಕ್ಕೆ ಸಾಗಿತ್ತು. ಇನ್ನು ಮೂರನೇ ಯತ್ನದಲ್ಲಿ 85.69 ಮೀಟರ್ ದೂರ ಎಸೆಯುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಎಂಟ್ರಿಯನ್ನು ಖಚಿತಪಡಿಸಿಕೊಂಡರು.

6 ಎಸೆತಗಳು ಹೇಗಿದ್ದವು?

  • ಮೊದಲ ಎಸೆತ: ನೀರಜ್ ಚೋಪ್ರಾ ಲೈನ್ ದಾಟಿದ್ದರಿಂದ ಮೊದಲ ಎಸೆತವು ಫೌಲ್ ಆಗಿತ್ತು.
  • ಎರಡನೇ ಎಸೆತ: ದ್ವಿತೀಯ ಪ್ರಯತ್ನದಲ್ಲಿ ನೀರಜ್ 82.77 ಮೀಟರ್ ದೂರಕ್ಕೆ ಭರ್ಜಿ ತಲುಪಿಸಿದ್ದರು.
  • ಮೂರನೇ ಎಸೆತ: ಮೂರನೇ ಎಸೆತವನ್ನು 85.69 ಮೀಟರ್ ದೂರಕ್ಕೆ ಎಸೆಯುವ ಮೂಲಕ ತನ್ನ ಕಂಬ್ಯಾಕ್ ಅನ್ನು ಖಚಿತಪಡಿಸಿದರು.
  • ನಾಲ್ಕನೇ ಎಸೆತ: ಈ ಬಾರಿ ಉತ್ತಮ ಲಯ ಕಾಯ್ದುಕೊಂಡರೂ ಮೂರನೇ ಎಸೆತದ ದೂರವನ್ನು ಕ್ರಮಿಸಲು ಸಾಧ್ಯವಾಗಿರಲಿಲ್ಲ. ಈ ಮೂಲಕ 83.45 ಮೀಟರ್ ದೂರದೊಂದಿಗೆ ತೃಪ್ತಿಪಟ್ಟಕೊಂಡರು.
  • ಐದನೇ ಎಸೆತ: ಮೊದಲ ಎಸೆತದಂತೆ ಐದನೇ ಎಸೆತದಲ್ಲೂ ಲೈನ್ ದಾಟುವ ಮೂಲಕ ಫೌಲ್ ಮಾಡಿದರು.
  • ಆರನೇ ಎಸೆತ: ಅರ್ಹತೆ ಪಡೆಯಲಿಲ್ಲ.

ಅರ್ಹತೆ ಯಾಕೆ ಸಿಕ್ಕಿಲ್ಲ?

ಡೈಮಂಡ್ ಲೀಗ್​ ನಿಯಮದ ಪ್ರಕಾರ, ಮೊದಲ 5 ಸುತ್ತುಗಳ ಮುಕ್ತಾಯದ ನಂತರ ಅಂಕ ಪಟ್ಟಿಯಲ್ಲಿ ಮೊದಲ 3 ಸ್ಥಾನಗಳಲ್ಲಿರುವ ಕ್ರೀಡಾಪಟುಗಳು ಮಾತ್ರ 6ನೇ ಸುತ್ತಿನಲ್ಲಿ ಮುಖಾಮುಖಿಯಾಗುತ್ತಾರೆ. ಅಂದರೆ ಮೊದಲ ಐದು ಸುತ್ತುಗಳಲ್ಲಿ ಟಾಪ್-3 ನಲ್ಲಿ ಕಾಣಿಸಿಕೊಂಡರೆ ಮಾತ್ರ 6ನೇ ಎಸೆತ ಎಸೆಯಲು ಅವಕಾಶ ನೀಡಲಾಗುತ್ತದೆ. ಆದರೆ ನೀರಜ್ ಚೋಪ್ರಾ ತಮ್ಮ 5 ಸುತ್ತುಗಳ ಮುಕ್ತಾಯದ ವೇಳೆಗೆ 4ನೇ ಸ್ಥಾನ ಪಡೆದಿದ್ದರು. ಹೀಗಾಗಿ ಆರನೇ ಎಸೆತ ಎಸೆಯಲು ಅವಕಾಶ ನೀಡಲಾಗಿಲ್ಲ.

ದೋಹಾ ಡೈಮಂಡ್ ಲೀಗ್​ ಟಾಪ್-4:

  • ರುಮೇಶ್ ಪತಿರಾಗೆ – 88.68 ಮೀಟರ್ (ಶ್ರೀಲಂಕಾ) – ಚಿನ್ನದ ಪದಕ
  • ಆಂಡರ್ಸನ್ ಪೀಟರ್ಸ್ – 86.38 ಮೀಟರ್ (ಗ್ರೆನಡಾ) – ಬೆಳ್ಳಿ ಪದಕ
  • ಕರ್ಟಿಸ್ ಥಾಂಪ್ಸನ್ – 85.99 ಮೀಟರ್ (ಅಮೆರಿಕ) – ಕಂಚಿನ ಪದಕ
  • ನೀರಜ್ ಚೋಪ್ರಾ-  85.69 ಮೀಟರ್ (ಭಾರತ)

Source link

Spiritual Meaning Lotus: ದೇವತೆಗಳ ಆಸನವಾಗಿ ಕಮಲವನ್ನೇ ಏಕೆ ಆಯ್ಕೆ ಮಾಡಲಾಗಿದೆ? ಆಧ್ಯಾತ್ಮಿಕ ರಹಸ್ಯ ಇಲ್ಲಿ ತಿಳಿಯಿರಿ – Kannada News | Why Hindu Gods Embrace Lotus: Spiritual Meaning and Symbolism Explained

ದೇವತೆಗಳು ಕಮಲದ ಮೇಲೆ ಏಕೆ ಕುಳಿತುಕೊಳ್ಳುತ್ತಾರೆ?Image Credit source: Getty Images

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆ, ಸಂಕೇತ ಮತ್ತು ದೇವತೆಗಳ ರೂಪದ ಹಿಂದೆ ಆಳವಾದ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನೀವು ಯಾವುದೇ ಪ್ರಮುಖ ಹಿಂದೂ ದೇವತೆಗಳ, ವಿಶೇಷವಾಗಿ ಲಕ್ಷ್ಮಿ ದೇವಿ, ಸರಸ್ವತಿ ದೇವಿ ಮತ್ತು ಬ್ರಹ್ಮದೇವರ ಚಿತ್ರ ಅಥವಾ ಮೂರ್ತಿಯನ್ನು ಗಮನಿಸಿದರೆ, ಅವರು ಕಮಲದ ಹೂವಿನ ಮೇಲೆ ಆಸೀನರಾಗಿರುತ್ತಾರೆ ಅಥವಾ ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾರೆ. ಸನಾತನ ಸಂಪ್ರದಾಯದಲ್ಲಿ ಕಮಲದ ಹೂವು ಅತ್ಯಂತ ಪವಿತ್ರ ಮತ್ತು ಶಾಶ್ವತವಾದ ಸ್ಥಾನವನ್ನು ಹೊಂದಿದೆ. ಪ್ರಕೃತಿಯಲ್ಲಿ ನೂರಾರು ಸುಂದರವಾದ ಹೂವುಗಳಿದ್ದರೂ, ದೇವತೆಗಳ ಆಸನವಾಗಿ ಕಮಲವನ್ನೇ ಏಕೆ ಆಯ್ಕೆ ಮಾಡಲಾಗಿದೆ ಎಂಬುದರ ಹಿಂದೆ ಅತ್ಯುನ್ನತ ಆಧ್ಯಾತ್ಮಿಕ ಸಂದೇಶಗಳು ಮತ್ತು ಜೀವನ ಪಾಠಗಳು ಅಡಗಿವೆ.

ಬ್ರಹ್ಮದೇವ ಮತ್ತು ವಿಷ್ಣುವಿನ ನಾಭಿ ಕಮಲದ ದಂತಕಥೆ:

ಕಮಲದ ಮೂಲದ ಬಗ್ಗೆ ಪುರಾಣಗಳಲ್ಲಿ ಒಂದು ಜನಪ್ರಿಯ ದಂತಕಥೆಯಿದೆ. ಬ್ರಹ್ಮಾಂಡದ ಸೃಷ್ಟಿಕರ್ತ ಎಂದೂ ಕರೆಯಲ್ಪಡುವ ಭಗವಾನ್ ಬ್ರಹ್ಮನು, ಮಹಾವಿಷ್ಣುವಿನ ನಾಭಿಯಿಂದ ಅಂದರೆ ಹೊಕ್ಕುಳಿನಿಂದ ಹೊರಹೊಮ್ಮಿದ ದಿವ್ಯ ಕಮಲದ ಮೇಲೆ ಆಸೀನನಾಗಿದ್ದನು. ಇದು ಸೃಷ್ಟಿಯ ಆರಂಭ ಮತ್ತು ಬ್ರಹ್ಮಾಂಡದ ವಿಕಾಸವನ್ನು ತೋರಿಸುತ್ತದೆ. ಕಮಲವು ಹೇಗೆ ಇಡೀ ಬ್ರಹ್ಮಾಂಡದ ಉಗಮಕ್ಕೆ ಮತ್ತು ಸೃಷ್ಟಿಕರ್ತನ ಉದಯಕ್ಕೆ ಕಾರಣವಾಯಿತೋ, ಹಾಗೆಯೇ ಪ್ರತಿಯೊಬ್ಬ ಮನುಷ್ಯನಲ್ಲೂ ಹೊಸ ಸೃಜನಶೀಲ ಆಲೋಚನೆಗಳು ಮೂಡಲು ಆಧ್ಯಾತ್ಮಿಕ ಸ್ಥಿರತೆ ಮುಖ್ಯ ಎಂಬುದನ್ನು ಇದು ಬೋಧಿಸುತ್ತದೆ.

ಅಲಿಪ್ತತೆಯ ಸಂಕೇತ ಮತ್ತು ಲೌಕಿಕ ಪ್ರಪಂಚದ ಪಾಠ:

ಕಮಲದ ಹೂವು ಹುಟ್ಟುವುದು ಕೊಳಕು ಕೆಸರಿನಲ್ಲಿ ಆದರೂ, ಅದು ಕೆಸರಿನಿಂದ ಮೇಲಕ್ಕೆದ್ದು ಅತ್ಯಂತ ಸುಂದರವಾಗಿ, ಪವಿತ್ರವಾಗಿ ಅರಳುತ್ತದೆ. ಅದಕ್ಕಿಂತಲೂ ಮಿಗಿಲಾಗಿ, ತಾವರೆ ಎಲೆಯ ಮೇಲೆ ನೀರು ಬಿದ್ದರೂ ಅದು ಒಂದು ಹನಿಯನ್ನೂ ತನಗೆ ಅಂಟಿಸಿಕೊಳ್ಳುವುದಿಲ್ಲ. ನಾವು ಕೂಡ ಈ ಸಂಸಾರವೆಂಬ ಕೆಸರಿನಲ್ಲಿ ಅಂದರೆ ಮೋಹ, ಮಾಯೆ, ಆಸೆ ಹಾಗೂ ನಕಾರಾತ್ಮಕತೆಗಳ ನಡುವೆ ಬದುಕುತ್ತಿದ್ದರೂ, ಯಾವುದಕ್ಕೂ ಅಂಟಿಕೊಳ್ಳದೆ ಅಲಿಪ್ತರಾಗಿರಬೇಕು ಮತ್ತು ಲೌಕಿಕ ಪ್ರಪಂಚದ ದುರ್ಗುಣಗಳು ನಮ್ಮನ್ನು ಬಾಧಿಸಬಾರದು ಎಂಬುದನ್ನು ಇದು ನೆನಪಿಸುತ್ತದೆ.

ಜ್ಞಾನದ ವಿಕಾಸ ಮತ್ತು ಆಧ್ಯಾತ್ಮಿಕ ಜಾಗೃತಿ:

ಕಮಲದ ಮೊಗ್ಗು ಸೂರ್ಯನ ಬೆಳಕು ಬಿದ್ದ ತಕ್ಷಣ ನಿಧಾನವಾಗಿ ತನ್ನ ದಳಗಳನ್ನು ಬಿಡಿಸಿ, ಸುಂದರವಾದ ಹೂವಾಗಿ ಅರಳುತ್ತದೆ. ಮಾನವನ ಮನಸ್ಸು ಕೂಡ ಅಜ್ಞಾನದ ಕತ್ತಲಿನಲ್ಲಿ ಮುಚ್ಚಿದ ಮೊಗ್ಗಿನಂತಿರುತ್ತದೆ. ಯಾವಾಗ ಭಗವಂತನ ಕೃಪೆ ಮತ್ತು ಜ್ಞಾನವೆಂಬ ಬೆಳಕು ಮೂಡುತ್ತದೆಯೋ, ಆಗ ಮಾನವನ ಆಂತರ್ಯವು ಕಮಲದಂತೆ ಅರಳುತ್ತದೆ. ದೇವತೆಗಳು ಕಮಲದ ಮೇಲೆ ಕುಳಿತುಕೊಳ್ಳುವ ಮೂಲಕ, ಯಾರು ತಮ್ಮ ಆಂತರಿಕ ಜ್ಞಾನವನ್ನು ಜಾಗೃತಗೊಳಿಸಿಕೊಳ್ಳುತ್ತಾರೋ, ಅವರ ಪರಿಶುದ್ಧ ಮನಸ್ಸಿನಲ್ಲಿ ನಾನು ನೆಲೆಸುತ್ತೇನೆ ಎಂಬ ದಿವ್ಯ ಸಂದೇಶವನ್ನು ನೀಡುತ್ತಾರೆ. ಇದೇ ಕಾರಣಕ್ಕಾಗಿ ಭಗವಾನ್ ವಿಷ್ಣು, ಲಕ್ಷ್ಮಿ ದೇವತೆ, ಬ್ರಹ್ಮ, ಸರಸ್ವತಿ ದೇವತೆ ಮತ್ತು ಶ್ರೀಕೃಷ್ಣನನ್ನು ಹೆಚ್ಚಾಗಿ ಕಮಲದ ಹೂವಿನೊಂದಿಗೆ ಚಿತ್ರಿಸಲಾಗುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಲಕ್ಷ್ಮಿ ದೇವಿಯ ದಿವ್ಯ ಕಮಲ ಆಸನ:

ಮಹಾಲಕ್ಷ್ಮಿ ದೇವಿಯು ಸದಾ ಗುಲಾಬಿ ಬಣ್ಣದ ಕಮಲದ ಮೇಲೆ ಆಸೀನಳಾಗಿರುತ್ತಾಳೆ. ಇದು ಭಕ್ತರಿಗೆ ಆರ್ಥಿಕ ಸಂಪತ್ತು ಮತ್ತು ಐಶ್ವರ್ಯದ ನಡುವೆಯೂ ಧರ್ಮ ಮತ್ತು ಪವಿತ್ರತೆಯನ್ನು ಕಾಯ್ದುಕೊಳ್ಳಬೇಕು ಎಂಬುದನ್ನು ನೆನಪಿಸುತ್ತದೆ. ಸಂಪತ್ತು ನಮ್ಮನ್ನು ಅಹಂಕಾರದ ಕಡೆಗೆ ಕೊಂಡೊಯ್ಯದೆ, ಕಮಲದಂತೆ ಇತರರಿಗೆ ಸುಗಂಧ ಮತ್ತು ಸುಂದರತೆಯನ್ನು ನೀಡುವಂತಿರಬೇಕು ಎಂಬುದು ಇದರ ಹಿಂದಿರುವ ಆಶಯವಾಗಿದೆ.

ಸರಸ್ವತಿ ದೇವಿಯ ಪರಿಶುದ್ಧ ಶ್ವೇತ ಕಮಲ:

ವಿದ್ಯಾದೇವಿಯಾದ ಸರಸ್ವತಿಯು ಬಿಳಿ ಬಣ್ಣದ ಕಮಲದ ಮೇಲೆ ಆಸೀನಳಾಗಿದ್ದಾಳೆ. ಬಿಳಿ ಬಣ್ಣವು ಪರಿಶುದ್ಧ ಜ್ಞಾನ, ಅಹಂಕಾರವಿಲ್ಲದ ಬುದ್ಧಿಶಕ್ತಿ, ಶಾಂತಿ ಮತ್ತು ಸಾತ್ವಿಕತೆಯನ್ನು ಪ್ರತಿನಿಧಿಸುತ್ತದೆ. ಕೇವಲ ಲೌಕಿಕ ಶಿಕ್ಷಣ ಮಾತ್ರವಲ್ಲದೆ, ಮನಸ್ಸನ್ನು ನಿರ್ಮಲವಾಗಿಟ್ಟುಕೊಂಡು ಆಧ್ಯಾತ್ಮಿಕ ಜ್ಞಾನವನ್ನು ಪಡೆದಾಗ ಮಾತ್ರ ಬುದ್ಧಿಶಕ್ತಿಗೆ ನಿಜವಾದ ಬೆಲೆ ಸಿಗುತ್ತದೆ ಎಂಬುದನ್ನು ಶ್ವೇತ ಕಮಲವು ಸಾರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version