ಟಿ20 ವಿಶ್ವಕಪ್​ನಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್..! – Kannada News | Shreyanka Patil Out of T20 World Cup: India Women’s Big Setback

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿ ಭೀಗುತ್ತಿದ್ದ ಭಾರತದ ವನಿತಾ ಪಡೆಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕ ಪಾಟೀಲ್ ಗಾಯದಿಂದಾಗಿ ಇಡೀ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್ ಗಾಯಕ್ಕೆ ಒಳಗಾಗಿದ್ದರು. ಇದರಿಂದಾಗಿ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸಿ ಮೈದಾನ ತೊರೆದಿದ್ದರು. ಇದಾದ ಬಳಿಕ ಶ್ರೇಯಾಂಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೇಯಾಂಕ ಅವರ ಗಾಯ ಗಂಭೀರವಾಗಿರುವುದರಿಂದ ಅವರನ್ನು ಪಂದ್ಯಾವಳಿಯಿಂದ ಹೊರಗಿಡಲಾಗಿದೆ. ಶ್ರೇಯಾಂಕ ಅವರ ಅಲಭ್ಯತೆ ತಂಡದ ಸಂಯೋಜನೆಗೆ ದೊಡ್ಡ ಹೊಡೆತ ನೀಡಿದೆ. ಏಕೆಂದರೆ ಶ್ರೇಯಾಂಕ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದು, ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ ಕೂಡ ಮಾಡುತ್ತಿದ್ದರು.

Published On – 7:35 am, Fri, 19 June 26

Source link

‘ಮಾ ಇಂಟಿ ಬಂಗಾರಂ’ ಬಿಡುಗಡೆ ಮುನ್ನ ತಿರುಪತಿಗೆ ಸಮಂತಾ ಭೇಟಿ; ಸಂಪ್ರದಾಯ ಮರೆಯದ ನಟಿ – Kannada News | Samantha Visits Tirupati Before ‘Maa Inti Bangaram’ Release

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅಭಿನಯದ, ಬಹುನಿರೀಕ್ಷಿತ ಆ್ಯಕ್ಷನ್-ಕಾಮಿಡಿ ತೆಲುಗು ಚಿತ್ರ ‘ಮಾ ಇಂಟಿ ಬಂಗಾರಂ’ ಇಂದು (ಜೂನ್ 19) ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆಗುವ ಮುನ್ನ ಸಮಂತಾ ಅವರು ಚಿತ್ರದ ನಿರ್ದೇಶಕಿ ಬಿ.ವಿ. ನಂದಿನಿ ರೆಡ್ಡಿ ಮತ್ತು ಪತಿ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ತಿರುಪತಿಯ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.

‘ಮಾ ಇಂಟಿ ಬಂಗಾರಂ’ ತಂಡದವರು ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡ ಈ ಜೋಡಿಯ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಪ್ರತಿ ಸಿನಿಮಾ ಸಂದರ್ಭದಲ್ಲಿ ಅಥವಾ ಯಾವುದೇ ಒಳ್ಳೆಯ ಕೆಲಸ ಆಗುವಾಗ ಸಮಂತಾ ತಿರುಪತಿಗೆ ಭೇಟಿ ನೀಡುತ್ತಾರೆ. ಅವರು ಇತ್ತೀಚೆಗೆ ಆಧ್ಯಾತ್ಮದ ಕಡೆ ಹೆಚ್ಚು ಒಲಿದಿದ್ದಾರೆ. ರಾಜ್ ನಿಡಿಮೋರು ಜೊತೆ ಅವರು ಮದುವೆ ಆಗುವಾಗ ಆಯ್ಕೆ ಮಾಡಿಕೊಂಡಿದ್ದು ಸದ್ಗುರು ಆಶ್ರಮ ಅನ್ನೋದು ವಿಶೇಷ. ಈಗ ಅವರು ತಮ್ಮ ಸಿನಿಮಾ ರಿಲೀಸ್​​ಗೂ ಮೊದಲು ಸಂಪ್ರದಾಯವನ್ನು ಪೂರ್ಣಗೊಳಿಸಿದ್ದಾರೆ.

‘ಮಾ ಇಂಟಿ ಬಂಗಾರಂ’ ಚಿತ್ರದ ಕುರಿತು ಮಾತನಾಡುತ್ತಾ ಸಮಂತಾ ಮತ್ತೊಂದು ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದರು. ಈ ಚಿತ್ರದ ಕಥೆಯನ್ನು ನಿರ್ದೇಶಕಿ ನಂದಿನಿ ರೆಡ್ಡಿ ಮೊದಲು ಬರೆದಿದ್ದು ನಟಿ ಸಾಯಿ ಪಲ್ಲವಿ ಅವರಿಗಾಗಿ ಅಂತೆ. ಆದರೆ ಡೇಟ್ಸ್ ಕೊರತೆಯಿಂದಾಗಿ ಸಾಯಿ ಪಲ್ಲವಿ ಈ ಚಿತ್ರದಿಂದ ಹೊರಗುಳಿಯಬೇಕಾಯಿತು. ಆ ಬಳಿಕ ಕಥೆಯಲ್ಲಿ ಬದಲಾವಣೆ ಮಾಡಿ ಸಮಂತಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ವೇದಿಕೆ ಮೇಲೆ ಸಮಂತಾಗೆ ‘ಐ ಲವ್ ಯೂ’ ಹೇಳಲು ನಿರಾಕರಿಸಿದ ಪತಿ ರಾಜ್ ನಿಡಿಮೋರು

ಬಿಡುಗಡೆಗೂ ಮುನ್ನವೇ ಲಾಭದಲ್ಲಿ ಸಿನಿಮಾ

ಥಿಯೇಟ್ರಿಕಲ್ ಹಾಗೂ ನಾನ್-ಥಿಯೇಟ್ರಿಕಲ್ ಹಕ್ಕುಗಳಿಗಾಗಿ ಭಾರಿ ಪೈಪೋಟಿ ನಡೆದ ಪರಿಣಾಮ, ‘ಮಾ ಇಂಟಿ ಬಂಗಾರಂ’ ಸಿನಿಮಾ ಬಿಡುಗಡೆಗೂ ಮುನ್ನವೇ ತನ್ನ ಸಂಪೂರ್ಣ ನಿರ್ಮಾಣ ವೆಚ್ಚವನ್ನು ಮರಳಿ ಪಡೆದಿದೆ. ಸದ್ಯ ಚಿತ್ರಮಂದಿರಗಳಲ್ಲಿ ಉತ್ತಮ ಓಪನಿಂಗ್ ಪಡೆದುಕೊಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾಸ್ತವವನ್ನು ಅರ್ಥಮಾಡಿಕೊಳ್ಳಿ: ಇರಾನ್ ಒಪ್ಪಂದ ಟೀಕಿಸಿದ ಇಸ್ರೇಲ್​ಗೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ ಎಚ್ಚರಿಕೆ – Kannada News | JD Vance Warns Israel: Understand Reality Amidst Iran Deal Criticism and Isolation

ವಾಷಿಂಗ್ಟನ್, ಜೂನ್ 19: ಇರಾನ್ ಜತೆಗಿನ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ(America) ಮಾಡಿಕೊಂಡಿರುವ ಒಪ್ಪಂದವನ್ನು ಇಸ್ರೇಲ್​ನ ಕೆಲವರು ಸಚಿವರು ಟೀಕಿಸಿರುವುದಕ್ಕೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಸ್ರೇಲ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಸ್ರೇಲ್ ಜಾಗತಿಕವಾಗಿ ಒಂಟಿಯಾಗಿದೆ, ಮೊದಲು ಅಲ್ಲಿನ ನಾಯಕರು ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಚಾಟಿ ಬೀಸಿದ್ದಾರೆ.

ಅಮೆರಿಕ ಏಕೈಕ ಮಿತ್ರ: ಪ್ರಸ್ತುತ ಇಡೀ ಜಗತ್ತಿನಲ್ಲಿ ಇಸ್ರೇಲ್ ದೇಶದ ಬಗ್ಗೆ ಸಹಾನುಭೂತಿ ಹೊಂದಿರುವ ಏಕೈಕ ರಾಷ್ಟ್ರ ಮುಖ್ಯಸ್ಥ ಎಂದರೆ ಅದು ಡೊನಾಲ್ಡ್ ಟ್ರಂಪ್ ಮಾತ್ರ. ನಾನು ಇಸ್ರೇಲ್ ಸರ್ಕಾರದ ಸಂಪುಟದಲ್ಲಿದ್ದರೆ, ಜಗತ್ತಿನಲ್ಲಿ ನನಗೆ ಉಳಿದಿರುವ ಏಕೈಕ ಪ್ರಬಲ ಮಿತ್ರನ ಮೇಲೆಯೇ ದಾಳಿ ಮಾಡುತ್ತಿರಲಿಲ್ಲ ಎಂದು ವ್ಯಾನ್ಸ್ ಹೇಳಿದ್ದಾರೆ.

ಕಳೆದ ಮೂರು ತಿಂಗಳುಗಳಲ್ಲಿ ಇಸ್ರೇಲ್ ತನ್ನ ರಕ್ಷಣೆಗಾಗಿ ಬಳಸಿದ ಒಟ್ಟು ಶಸ್ತ್ರಾಸ್ತ್ರಗಳಲ್ಲಿ ಮೂರನೇ ಎರಡರಷ್ಟು ಭಾಗ ಅಮೆರಿಕನ್ನರ ಕೈಯಿಂದ ತಯಾರಾಗಿದ್ದು ಮತ್ತು ಅಮೆರಿಕದ ತೆರಿಗೆದಾರರ ಹಣದಿಂದ ಪಾವತಿಸಲ್ಪಟ್ಟಿದ್ದಾಗಿದೆ ಎಂಬುದನ್ನು ವ್ಯಾನ್ಸ್ ನೆನಪಿಸಿದ್ದಾರೆ.

ಮತ್ತಷ್ಟು ಓದಿ: ಇರಾನ್-ಅಮೆರಿಕ ಐತಿಹಾಸಿಕ ಒಪ್ಪಂದ: ಜಾಗತಿಕ ತೈಲ ಬೆಲೆ ಕುಸಿತ

ಬಿಕ್ಕಟ್ಟಿಗೆ ಅಸಲಿ ಕಾರಣವೇನು?
ಫೆಬ್ರವರಿ 28 ರಂದು ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ವಿರುದ್ಧ ಯುದ್ಧ ಆರಂಭಿಸಿದ್ದವು. ಆದರೆ, ಈ ಯುದ್ಧದಿಂದ ಜಾಗತಿಕ ಆರ್ಥಿಕತೆ ಅಲುಗಾಡಿದ್ದರಿಂದ ಮತ್ತು ಅಮೆರಿಕದಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ, ಅಧ್ಯಕ್ಷ ಟ್ರಂಪ್ ಕದನ ವಿರಾಮ ಒಪ್ಪಂದದ ಮೂಲಕ ಯುದ್ಧ ಕೊನೆಗೊಳಿಸಲು ಮುಂದಾಗಿದ್ದಾರೆ.

ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಯುದ್ಧ ಮುಂದುವರೆಸುವ ಇಚ್ಛೆಯಿದೆ. ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್-ಗ್ವಿರ್ ಒಂದು ಹೆಜ್ಜೆ ಮುಂದೆ ಹೋಗಿ, ಇಸ್ರೇಲ್ ಟ್ರಂಪ್ ಒಪ್ಪಂದಕ್ಕೆ ಬದ್ಧವಾಗಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದು ಅಮೆರಿಕದ ಕೋಪಕ್ಕೆ ಕಾರಣವಾಗಿದೆ.

ಟ್ರಂಪ್ ಹತಾಶೆ: ಇತ್ತೀಚಿನ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಅವರು ನೆತನ್ಯಾಹು ವಿರುದ್ಧ ಹತಾಶೆ ವ್ಯಕ್ತಪಡಿಸಿದ್ದು, ಇಸ್ರೇಲ್ ನಾಯಕನನ್ನು ಹುಚ್ಚ ಎಂದು ಕರೆದಿದ್ದಾರೆ ಎನ್ನಲಾಗಿದೆ.

ಜೆಡಿ ವ್ಯಾನ್ಸ್ ಅವರ ಖಡಕ್ ಹೇಳಿಕೆಗೆ ನೇರ ಪ್ರತಿಕ್ರಿಯೆ ನೀಡಲು ನೆತನ್ಯಾಹು ಕಚೇರಿ ನಿರಾಕರಿಸಿದೆ. ಆದರೆ, “ನಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ ಅಮೆರಿಕದ ಗೆಳತನ ನಮಗೆ ಮುಖ್ಯ ಮತ್ತು ಅದನ್ನು ನಾವು ಗೌರವಿಸುತ್ತೇವೆ” ಎಂದು ನೆತನ್ಯಾಹು ಹೇಳಿದ್ದಾರೆ. ಆದರೂ, ಇಸ್ರೇಲ್ ಸೇನೆ ದಕ್ಷಿಣ ಲೆಬನಾನ್‌ನಿಂದ ಸದ್ಯಕ್ಕೆ ಹಿಂದೆ ಸರಿಯುವುದಿಲ್ಲ ಎಂದು ಹೇಳುವ ಮೂಲಕ ಕದನ ವಿರಾಮ ಒಪ್ಪಂದವನ್ನು ದುರ್ಬಲಗೊಳಿಸುವ ಸೂಚನೆಯನ್ನೂ ಅವರು ನೀಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ – Kannada News | Bengaluru STP Mishap: Two Laborers from Bihar and Tamil Nadu Missing After Falling into 40 Foot Sewage Tank in Varthur

ಬೆಂಗಳೂರು, ಜೂನ್ 19: ಬೆಂಗಳೂರಿನ ವರ್ತೂರಿನ ಬೆಳಗೆರೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಆತಂಕಕಾರಿ ಘಟನೆ ನಡೆದಿದ್ದು, ಇಬ್ಬರು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಸುಮಾರು 40 ಅಡಿ ಆಳದ ಟ್ಯಾಂಕ್‌ಗೆ ಇಳಿದಿದ್ದಾಗ ಮೂವರು ಕಾರ್ಮಿಕರು ಆಯತಪ್ಪಿ ಬಿದ್ದಿದ್ದಾರೆ. ಬಿಹಾರದ ಬ್ರಿಜೇಶ್ ಮತ್ತು ತಮಿಳುನಾಡಿನ ಅಖಿಲೇಶ್ ನಾಪತ್ತೆಯಾಗಿದ್ದು, ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದೆ. ಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ, ಟ್ಯೂಬ್ ಅಥವಾ ಆಮ್ಲಜನಕ ಕಿಟ್‌ಗಳನ್ನು ಬಳಸದೆ ಟ್ಯಾಂಕ್‌ಗೆ ಇಳಿದಿದ್ದರು, ಇದರಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಸದ್ಯ ನಾಪತ್ತೆಯಾಗಿರುವ ಇಬ್ಬರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳಿಂದ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಬಿಡಬ್ಲ್ಯೂಎಸ್ಎಸ್‌ಪಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಟ್ಯಾಂಕ್‌ನಲ್ಲಿ ಲಕ್ಷಾಂತರ ಲೀಟರ್ ಸೀವೇಜ್ ನೀರು ಸಂಗ್ರಹವಾಗುತ್ತದೆ. ಕಾರ್ಮಿಕರು ಡ್ರೈನೇಜ್ ಪ್ಲ್ಯಾಂಟ್‌ನ ಒಳಗೆ ಏಣಿ ಮೂಲಕ ಇಳಿದು ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಟ್ಯಾಂಕ್ ಒಳಭಾಗದಲ್ಲಿ ಆಮ್ಲಜನಕದ ಕೊರತೆ ಇರುವ ಸಾಧ್ಯತೆ ಹೆಚ್ಚಿರುವುದರಿಂದ ಕೆಲಸಗಾರರಿಗೆ ಸುರಕ್ಷತಾ ಕಿಟ್, ಆಮ್ಲಜನಕ ಉಪಕರಣ ಹಾಗೂ ಇತರ ರಕ್ಷಣಾ ಸಾಧನಗಳನ್ನು ಒದಗಿಸುವುದು ಕಡ್ಡಾಯ. ಆದರೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಮಿಕರನ್ನು ಒಳಗೆ ಇಳಿಸಲಾಗಿತ್ತು ಎಂಬ ಆರೋಪಗಳೂ ಈಗ ಕೇಳಿಬಂದಿವೆ. ಕೋರಮಂಗಲದಿಂದ ವರ್ತೂರು ಭಾಗದವರೆಗೆ ಹರಿದು ಬರುವ ಡ್ರೈನೇಜ್ ನೀರು ಈ ಘಟಕಕ್ಕೆ ಬರುತ್ತದೆ. ಟ್ಯಾಂಕ್‌ನಲ್ಲಿ ಸುಮಾರು ಹತ್ತು ಅಡಿ ಎತ್ತರದವರೆಗೆ ಕೊಳಚೆ ನೀರು ಸಂಗ್ರಹವಾಗಿದ್ದು, ಅಲ್ಲಿಂದ ದೊಡ್ಡ ಪೈಪ್‌ಗಳ ಮೂಲಕ ನೀರನ್ನು ಫಿಲ್ಟರ್ ಮಾಡುವ ಪ್ರಕ್ರಿಯೆ ನಡೆಯುತ್ತದೆ.

ವರದಿ: ನಟರಾಜ್, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಟಿ ಕೋಟಿ ಆಸ್ತಿ ಇದ್ದರೂ ಗಂಗಾ ತೀರದಲ್ಲಿ ಮಲಗಿದ ಸುನೀಲ್ ಗ್ರೋವರ್; ಕಾಮಿಡಿಯನ್ ಸರಳತೆಗೆ ಫ್ಯಾನ್ಸ್ ಫಿದಾ – Kannada News | Comedian Sunil Grover Slept on the Bank Of Ganga River

ಸುನಿಲ್ ಗ್ರೋವರ್ Image Credit source: Sunil Grover Instagram

ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯ ಮೂಲಕ ಕೋಟ್ಯಂತರ ವೀಕ್ಷಕರನ್ನು ನಗಿಸುವ ಜನಪ್ರಿಯ ನಟ ಮತ್ತು ಕಾಮೆಡಿಯನ್ ಸುನೀಲ್ ಗ್ರೋವರ್ (Sunil Grover) ಇತ್ತೀಚೆಗೆ ತಮ್ಮ ಆಧ್ಯಾತ್ಮಿಕ ಮತ್ತು ಸರಳ ಜೀವನದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸುನೀಲ್ ಗ್ರೋವರ್ ಇತ್ತೀಚೆಗೆ ಗಂಗಾ ಆರತಿಯನ್ನು ವೀಕ್ಷಿಸಿದ್ದಾರೆ. ಆ ಬಳಿಕ ಭಕ್ತಿ ಮತ್ತು ಪ್ರಶಾಂತತೆಯ ಕ್ಷಣಗಳನ್ನು ಆನಂದಿಸಿದ್ದಾರೆ. ನದಿ ತೀರದಲ್ಲೇ ಅವರು ನಿದ್ರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ದೀಪಗಳ ಬೆಳಕು, ಮಂತ್ರಘೋಷಗಳ ನಡುವೆ ಮುಳುಗಿದ್ದ ಅವರು, ಯಾವುದೇ ಸ್ಟಾರ್ ಗಿಮಿಕ್ ಇಲ್ಲದೆ ಗಂಗಾ ನದಿಯ ತಟದ ಮೇಲೆ ಸಾಮಾನ್ಯರಂತೆ ಮಲಗಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ಅವರು ‘ತಾರೆ ಜಮೀನ್ ಪರ್’ (ನೆಲದ ಮೇಲಿನ ನಕ್ಷತ್ರಗಳು) ಎಂದು ಬರೆದುಕೊಂಡಿದ್ದಾರೆ.

25 ಕೋಟಿ ಒಡೆಯನ ಅಪರೂಪದ ಸರಳತೆ!

ಮಾಧ್ಯಮಗಳ ವರದಿಗಳ ಪ್ರಕಾರ, ಸುನೀಲ್ ಗ್ರೋವರ್ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 25 ಕೋಟಿ ರೂಪಾಯಿ. ಒಂದು ಕಾಲದಲ್ಲಿ ದಿನಕ್ಕೆ ಕೇವಲ 500 ರೂಪಾಯಿ ದುಡಿಯುತ್ತಿದ್ದ ಸುನೀಲ್, ಇಂದು ಭಾರತದ ಅತ್ಯಂತ ಶ್ರೀಮಂತ ಮತ್ತು ಹೆಚ್ಚು ಸಂಭಾವನೆ ಪಡೆಯುವ ಕಾಮೆಡಿಯನ್‌ಗಳಲ್ಲಿ ಒಬ್ಬರಾಗಿದ್ದಾರೆ. ಇಷ್ಟೊಂದು ಯಶಸ್ಸು ಮತ್ತು ಹಣವಿದ್ದರೂ, ಅವರು ಯಾವುದೇ ಐಷಾರಾಮಿ ಹಮ್ಮು-ಬಿಮ್ಮುಗಳಿಲ್ಲದೆ ನದಿಯ ಘಾಟ್‌ನಲ್ಲಿ ಸಾಧು-ಸಂತರೊಂದಿಗೆ ನೆಲದ ಮೇಲೆ ಮಲಗಿರುವುದು ಅಭಿಮಾನಿಗಳ ಹೃದಯ ಗೆದ್ದಿದೆ.

ಅಭಿಮಾನಿಗಳ ಮೆಚ್ಚುಗೆ: ಸುನೀಲ್ ಅವರ ಈ ಅಪರೂಪದ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ‘ಒಂದೇ ಹೃದಯವನ್ನು ಎಷ್ಟು ಬಾರಿ ಗೆಲ್ಲುತ್ತೀರಿ ಸರ್?’, ‘ನಿಮ್ಮ ಈ ಸರಳತೆಯೇ ನಿಮ್ಮನ್ನು ಅಪ್ರತಿಮ ಕಲಾವಿದನನ್ನಾಗಿ ಮಾಡಿದೆ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಚಾರ್ಮ್ ಕಳೆದುಕೊಳ್ಳುತ್ತಿದೆ ಕಪಿಲ್ ಶೋ; ಸುನೀಲ್ ಗ್ರೋವರ್ ಇಲ್ಲವಾದರೆ ಝೀರೋ?

ಕೆಲಸದ ವಿಷಯಕ್ಕೆ ಬರೋದಾದರೆ ಸುನೀಲ್ ಗ್ರೋವರ್ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಬ್ಯುಸಿ ಇದ್ದಾರೆ. ಹಲವು ವರ್ಷಗಳ ಬಳಿಕ ಅವರು ಕಪಿಲ್ ಶರ್ಮಾ ಜೊತೆ ಒಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ, ಮತ್ತೊಂದು ಹೆಜ್ಜೆ ಮುಂದಿಟ್ಟ ವಿಜಯ್: ಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ – Kannada News | Mekedatu Dam Row: Tamil Nadu CM Joseph Vijay Opposes Project; Karnataka CM DK Shivakumar Hits Back Over Bengaluru Water Needs

ಡಿಕೆ ಶಿವಕುಮಾರ್ ಹಾಗೂ ವಿಜಯ್Image Credit source: PTI

ಬೆಂಗಳೂರು, ಜೂನ್ 19: ಕಾವೇರಿ ನದಿ ನೀರಿನ ಹಂಚಿಕೆ ಹಾಗೂ ಮೇಕೆದಾಟು ಜಲಾಶಯ ನಿರ್ಮಾಣದ ವಿಚಾರದಲ್ಲಿ ಕರ್ನಾಟಕ (Karnataka) ಮತ್ತು ತಮಿಳುನಾಡು (Tamil Nadu) ನಡುವಿನ ಕಾನೂನು ಮತ್ತು ರಾಜಕೀಯ ಸಂಘರ್ಷ ಮತ್ತೆ ಬಿಗುವಿನ ರೂಪ ಪಡೆದುಕೊಳ್ಳುವ ಲಕ್ಷಣ ಕಾಣಿಸಿದೆ. ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ ತಮಿಳುನಾಡು ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ ಕರ್ನಾಟಕಕ್ಕೆ ನಿರಾಳತೆ ನೀಡಿತ್ತು. ಆದಾಗ್ಯೂ, ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಲು ಮುಂದಾಗಿದೆ. ತಮಿಳುನಾಡು ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಭಾಷಣದ ಮೂಲಕ, ಯಾವುದೇ ಕಾರಣಕ್ಕೂ ಮೇಕೆದಾಟು ಡ್ಯಾಂ ನಿರ್ಮಿಸಲು ಬಿಡುವುದಿಲ್ಲ ಎಂದು ತಮಿಳುನಾಡು ಪ್ರತಿಜ್ಞೆ ಮಾಡಿದೆ.

ಮುಖ್ಯಾಂಶಗಳು

  • ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡು ಅರ್ಜಿ ವಜಾ.
  • ಮೇಕೆದಾಟು ಯೋಜನೆಗೆ ಕರ್ನಾಟಕ ಸಜ್ಜು.
  • ತಳ ತಲುಪಿದ ಕೆಆರ್​ಎಸ್ ಡ್ಯಾಂ: ಕೃಷಿಗೆ ನೀರಿಲ್ಲ ಎಂದ ಮಂಡ್ಯ ಡಿಸಿ.

ಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ

ತಮಿಳುನಾಡು ಸರ್ಕಾರದ ಈ ರಾಜಕೀಯ ಗಿಮಿಕ್‌ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ‘ಮೇಕೆದಾಟು ಕೇವಲ ನನ್ನ ಹೃದಯಕ್ಕೆ ಹತ್ತಿರವಾದ ಯೋಜನೆಯಲ್ಲ, ಇದು ಇಡೀ ದಕ್ಷಿಣ ಭಾರತದ ಹಿತಾಸಕ್ತಿ ಒಳಗೊಂಡಿರುವ ಪ್ರಾಜೆಕ್ಟ್. ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿನ ರೈತರಿಗೇ ಹೆಚ್ಚಿನ ಅನುಕೂಲವಾಗಲಿದೆ. ಕೋರ್ಟ್ ಆದೇಶದಂತೆ ಅವರ ಪಾಲಿನ 177 ಟಿಎಂಸಿ ನೀರನ್ನು ಬಿಡಲು ನಾವು ಎಂದಿಗೂ ಬದ್ಧರಾಗಿದ್ದೇವೆ. ಈ ಯೋಜನೆಯಿಂದ ನಾವು ಒಂದು ಬಕೆಟ್ ನೀರನ್ನೂ ಕೃಷಿಗೆ ಬಳಸುವುದಿಲ್ಲ. ಇದು ಕೇವಲ ಬೆಂಗಳೂರಿನ ಕುಡಿಯುವ ನೀರು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗಿದೆ. ತಮಿಳುನಾಡು ಸರ್ಕಾರದ ಜೊತೆ ಈ ಕುರಿತು ಯಾವುದೇ ಸಮಯದಲ್ಲಿ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ’ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಬರಿದಾದ ಕಾವೇರಿ, ಕುಡಿಯುವ ನೀರಿಗಷ್ಟೇ ಆದ್ಯತೆ

ಇತ್ತೀಚೆಗೆ ಮುಂಗಾರು ಮಳೆ ಕ್ಷೀಣಿಸಿರುವುದರಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ತಳ ತಲುಪಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದರಿಂದ ಕಾವೇರಿ ನದಿ ಸಂಪೂರ್ಣ ಬರಿದಾಗಿದ್ದು, ಕಳೆದ ವರ್ಷ 15 ಅಡಿಯಷ್ಟಿದ್ದ ನೀರಿನ ಮಟ್ಟ ಈ ಬಾರಿ ಕೇವಲ ಒಂದು ಅಡಿಗೆ ಕುಸಿದಿದೆ. ಕೆಆರ್‌ಎಸ್ (KRS) ಜಲಾಶಯದಲ್ಲಿ ಸದ್ಯ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಸಾಧ್ಯವಿದ್ದು, ಕೃಷಿಗೆ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ನೂತನ ಸಿಎಂಗೆ ಆರಂಭದಲ್ಲೇ ಸಾಲು ಸಾಲು ಸವಾಲುಗಳು: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಡಿಕೆ ಶಿವಕುಮಾರ್ ಮಹತ್ವದ ಸಭೆ

ಈ ನಡುವೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಉನ್ನತ ಮಟ್ಟದ ಸಭೆ ನಡೆಸಿ, ರಾಜ್ಯದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಅಭಾವವನ್ನು ಎದುರಿಸಲು ತುರ್ತು ಯೋಜನೆಗಳನ್ನು ರೂಪಿಸಿದ್ದಾರೆ. ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಯ ಪರಿಷ್ಕೃತ ವಿವರವಾದ ಯೋಜನಾ ವರದಿಯನ್ನು (DPR) ಕೇಂದ್ರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಪರಿಸರ ಇಲಾಖೆಯ ಅನುಮತಿ ಸಿಕ್ಕ ತಕ್ಷಣ ಭೂಮಿ ಪೂಜೆ ನೆರವೇರಿಸಲು ತೀರ್ಮಾನಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಡಗು, ಮಂಡ್ಯ, ಮೈಸೂರಿಗೆ ‘ಯೆಲ್ಲೋ ಅಲರ್ಟ್: ಇಂದು ಈ ಜಿಲ್ಲೆಗಳಲ್ಲಿ ಸುರಿಯಲಿದೆ ಗುಡುಗು ಸಹಿತ ಭಾರಿ ಮಳೆ – Kannada News | Karnataka Weather Forecast: Monsoon Weakens, But Heavy Rain Soon; Yellow Alert in South

ಬೆಂಗಳೂರು, ಜೂ.19: ಕರ್ನಾಟಕದಲ್ಲಿ ಸದ್ಯ ಮುಂಗಾರು ಮಳೆ ಕೊಂಚ ಕ್ಷೀಣಿಸಿದ್ದು, ದುರ್ಬಲಗೊಂಡಿದೆ. ಆದಾಗ್ಯೂ ಹವಾಮಾನ ಇಲಾಖೆಯ (IMD) ಇತ್ತೀಚಿನ ವರದಿಯ ಪ್ರಕಾರ ಇಂದು ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಪ್ರಮುಖವಾಗಿ ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಈ ಭಾಗಗಳಿಗೆ ಹವಾಮಾನ ಇಲಾಖೆಯು ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ.

ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಸಾಧಾರಣ ಅಥವಾ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಆದರೆ ಬರುವ ವಾರ ಅಂದರೆ ಜೂನ್ 22 ರಿಂದ ಮುಂಗಾರು ಮಳೆ ಮತ್ತೆ ಚುರುಕುಗೊಳ್ಳಲಿದ್ದು, ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಇಂದು ರಾಜ್ಯದಲ್ಲಿ ಗರಿಷ್ಠ ತಾಪಮಾನ 33°C ಹಾಗೂ ಕನಿಷ್ಠ ತಾಪಮಾನ 23°C ಆಸುಪಾಸಿನಲ್ಲಿ ಇರಲಿದೆ.

ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿದಂತೆ ಇಡೀ ಮಲೆನಾಡು ಭಾಗದಲ್ಲಿ ಇಂದು ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಮುಂಜಾಗ್ರತಾ ಕ್ರಮವಾಗಿ ಹವಾಮಾನ ಇಲಾಖೆಯು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಘಾಟ್ ಪ್ರದೇಶಗಳಲ್ಲಿ ಸಂಚರಿಸುವ ಚಾಲಕರು ಜಾಗರೂಕರಾಗಿರಲು ಸೂಚಿಸಲಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಕರಾವಳಿಯ ಕೆಲವು ಭಾಗಗಳಲ್ಲಿ ಸಾಧಾರಣ ಹಾಗೂ ಒಳನಾಡಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಇರಲಿದ್ದು, ಮೀನುಗಾರರು ಎಚ್ಚರಿಕೆ ವಹಿಸಬೇಕು. ಜೂನ್ 22ರ ನಂತರ ಇಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳಲಿದೆ.

ಇದನ್ನೂ ಓದಿ; ರಾಜ್ಯದಲ್ಲಿ ಭೀಕರ ಬರಗಾಲದ ವದಂತಿ ಸುಳ್ಳು: ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದ ಹವಾಮಾನ ತಜ್ಞರು

ಮಲೆನಾಡಿಗೆ ಹೋಲಿಸಿದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂಗಾರು ಮಳೆ ಸದ್ಯಕ್ಕೆ ಕ್ಷೀಣಿಸಿದೆ. ಕಲಬುರಗಿ, ಬೆಳಗಾವಿ, ಬೀದರ್, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಇಂದು ಪ್ರಧಾನವಾಗಿ ಒಣ ಹವಾಮಾನ ಇರಲಿದೆ. ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 33°C ನಿಂದ 35°C ವರೆಗೆ ದಾಖಲಾಗುವ ಸಾಧ್ಯತೆಯಿದ್ದು, ಸೆಖೆಯ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆಯನ್ನು ಹೊರತುಪಡಿಸಿದರೆ ಭಾರಿ ಮಳೆಯ ಮುನ್ಸೂಚನೆ ಇಲ್ಲ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಮೂಗಿನ ಆಕಾರ ಮತ್ತು ವ್ಯಕ್ತಿತ್ವದ ಬಗ್ಗೆ ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ – Kannada News | Nose Shape Personality Test: Dr Basavaraja Guruji Explains What Your Nose Says About Your Nature as Per Samudrika Shastra

ಮುಖವು ಮನಸ್ಸಿನ ಕನ್ನಡಿ ಎಂಬಂತೆ, ಮುಖದ ಪ್ರತಿಯೊಂದು ಅಂಗವೂ ವ್ಯಕ್ತಿಯ ಸ್ವಭಾವ, ಗುಣ ಮತ್ತು ಭವಿಷ್ಯದ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಮೂಗು, ಮುಖದ ಕೇಂದ್ರಬಿಂದುವಾಗಿ ನಮ್ಮ ವ್ಯಕ್ತಿತ್ವವನ್ನು ಎತ್ತಿ ತೋರಿಸುವ ಪ್ರಮುಖ ಅಂಗವಾಗಿದೆ. ಪ್ರಾಚೀನ ವೈದಿಕ ಜ್ಯೋತಿಷ್ಯ ಮತ್ತು ಸಾಮುದ್ರಿಕ ಶಾಸ್ತ್ರದ ಪ್ರಕಾರ, ಮೂಗಿನ ಆಕಾರವನ್ನು ಗಮನಿಸಿ ವ್ಯಕ್ತಿಯ ಗುಣಲಕ್ಷಣಗಳನ್ನು ವಿಶ್ಲೇಷಿಸಬಹುದು ಎಂಬುದನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ, ಅಂದರೆ, ‘ಟಿವಿ9’ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ವಿವಿಧ ಆಕಾರಗಳ ಮೂಗು ವಿಭಿನ್ನ ಅರ್ಥಗಳನ್ನು ಹೊಂದಿದೆ. ಉದಾಹರಣೆಗೆ, ನೇರ ಮತ್ತು ಚೂಪಾದ ಮೂಗು ಹೊಂದಿರುವವರು ತೀಕ್ಷ್ಣ ಬುದ್ಧಿವಂತರು, ಶಿಸ್ತುಬದ್ಧರು ಹಾಗೂ ಕಠಿಣ ಪರಿಶ್ರಮಿಗಳಾಗಿರುತ್ತಾರೆ. ಗಿಳಿಯ ಮೂಗಿನಂತೆ ಬಾಗಿದ ಮೂಗು ಇರುವವರು ಪ್ರಾಮಾಣಿಕರು, ನಿಷ್ಠಾವಂತರು ಮತ್ತು ಸ್ವಪ್ರಯತ್ನದಿಂದ ಯಶಸ್ಸು ಸಾಧಿಸುವವರು. ಅಗಲವಾದ ಮೂಗು ಹೊಂದಿರುವವರು ನಾಯಕತ್ವ ಗುಣ, ಸಾಮಾಜಿಕ ಕಳಕಳಿ ಹಾಗೂ ಆಡಳಿತಾತ್ಮಕ ಸಾಮರ್ಥ್ಯ ಹೊಂದಿರುತ್ತಾರೆ. ಚಿಕ್ಕ ಅಥವಾ ಚಪ್ಪಟೆಯಾದ ಮೂಗು ಇರುವವರು ಭಾವಜೀವಿಗಳು, ಬಾಂಧವ್ಯಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವವರು ಹಾಗೂ ಕೌಶಲ್ಯವಂತರಾಗಿರುತ್ತಾರೆ ಎಂದು ಅವರು ವಿವರಿಸಿದ್ದಾರೆ. ಕೈರೇಖೆಗಳಂತೆ ಮೂಗಿನ ಆಕಾರವೂ ನಮ್ಮ ಅದೃಷ್ಟ ಮತ್ತು ಭವಿಷ್ಯದ ರಹಸ್ಯಗಳನ್ನು ಒಳಗೊಂಡಿರುತ್ತದೆ. ಇದು ಕೇವಲ ದೈಹಿಕ ಲಕ್ಷಣವಾಗಿರದೆ, ವ್ಯಕ್ತಿಯ ಅಸಲಿ ಸ್ವಭಾವ ಮತ್ತು ಜೀವನದ ಹಾದಿಯ ಮೇಲೆ ಪ್ರಭಾವ ಬೀರುವ ಒಂದು ಪ್ರಮುಖ ಜ್ಯೋತಿಷ್ಯ ಸೂಚಕವಾಗಿದೆ ಎಂದು ಅವರು ಹೇಳಿದ್ದಾರೆ.

Source link

ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ!; ರಾಹುಕಾಲದ ಎಚ್ಚರಿಕೆ ಯಾರಿಗೆ? – Kannada News | TV9 Kannada Horoscope Today: Effects on All 12 Zodiac Signs by Basavaraj Guruji

ಬೆಂಗಳೂರು, ಜೂ.19: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 19-06-2026, ಶುಕ್ರವಾರದ ದಿನ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಪಂಚಮಿ ಮತ್ತು ಆಶ್ಲೇಷ ನಕ್ಷತ್ರವಿರುವ ಈ ದಿನದ ಮಹತ್ವವನ್ನು ವಿವರಿಸಿದ್ದಾರೆ. ರಾಹುಕಾಲವು ಬೆಳಗ್ಗೆ 10:43 ರಿಂದ 12:19 ರ ವರೆಗೆ ಇರುತ್ತದೆ. ಸಂಕಲ್ಪ ಕಾಲ, ಸರ್ವ ಸಿದ್ಧಿ ಮತ್ತು ಶುಭ ಕಾಲವು ಮಧ್ಯಾಹ್ನ 12:20 ರಿಂದ 1:57 ರ ವರೆಗೆ ಇರುತ್ತದೆ. ಇಂದಿನ ದಿನ ಶುಕ್ರವಾರ ಮತ್ತು ಶ್ರುತ ಪಂಚಮಿ ಆಗಿದ್ದು, ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಶುಭಕರವಾಗಿದೆ. ಆಶ್ಲೇಷ ನಕ್ಷತ್ರವು ಕರ್ಕಾಟಕ ರಾಶಿಯಲ್ಲಿ ಚಂದ್ರನ ಸಂಚಾರದೊಂದಿಗೆ ಗಜಕೇಸರಿ ಯೋಗವನ್ನು ಸೃಷ್ಟಿಸಿದೆ. ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳಿಗೆ ಗ್ರಹಗಳ ಶುಭ ಫಲಗಳು, ಆರೋಗ್ಯ, ಉದ್ಯೋಗ, ಆರ್ಥಿಕ ಸ್ಥಿತಿ, ಮತ್ತು ಸಂಬಂಧಗಳ ಕುರಿತು ವಿವರವಾದ ಭವಿಷ್ಯವನ್ನು ನೀಡಿದ್ದಾರೆ. ಪ್ರತಿಯೊಂದು ರಾಶಿಗೆ ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರವನ್ನೂ ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರ ವ್ಯವಹಾರ ಹಲವು ತಿರುವುಗಳಿಂದ ಇರಲಿದೆ.. – Kannada News | Dina Rashi Bhavishya June 19, 2026: Daily Horoscope Predictions for Friday

ಮೇಷ ರಾಶಿ :

ಇಂದು ಆರ್ಥಿಕ ಸಹಾಯಕ್ಕಾಗಿ ನಿಮ್ಮನ್ನು ಯಾರಾದರೂ ಕೇಳಬಹುದು. ಹಗಲು ಪ್ರಯಾಣದಿಂದ ನಿಮ್ಮ ಮಾನಸಿಕ ಶಕ್ತಿ ಹೆಚ್ಚಾಗುವುದು. ಮುಂದಿನ ಹಾದಿಗೆ ದಾರಿ ತೋರುವುದು. ಆದರೆ ಕೆಲವೊಮ್ಮೆ ಒತ್ತಡದ ಸಂದರ್ಭಗಳು ಎದುರಾಗಬಹುದು. ಆದರೆ, ನಿಮ್ಮ ಆಂತರಿಕ ಶಕ್ತಿ ಅದನ್ನು ನಿಭಾಯಿಸಬಲ್ಲದು. ಹಣದ ವ್ಯವಹಾರಗಳಲ್ಲಿ ದೃಢವಾಗಿರಿ. ಕೊಡುಕೊಳ್ಳುವ ವ್ಯವಹಾರದಲ್ಲಿ ಸಣ್ಣ ಬೇಸರವಾಗಬಹುದು. ವಿವಾಹದ ಮಾತುಕತೆ ನಡೆಯಬಹುದು. ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಿರಿ.

ವೃಷಭ ರಾಶಿ :

ಹಣದ ಉಳಿತಾಯದಿಂದ ಅನಿವಾರ್ಯವಾದ ಆಭರಣಗಳನ್ನು ಖರೀದಿಸುವಿರಿ. ನಿಮ್ಮನ್ನು ಬೇರೆಯರಿಗಿಂತ ವಿಭಿನ್ನವನ್ನಾಗಿ ತೋರಿಸಬಹುದು. ಆದರೆ, ಪ್ರತಿಯೊಂದು ಮಾತು ಎಣಿಕೆಯಿಂದ ಮಾತಾಡಿ. ಬೇರೆವರಿಗಿಂತ ಭಿನ್ನವಾಗಿರಲು ಇಷ್ಟಪಡುವಿರಿ. ಹಣಕಾಸಿನಲ್ಲಿ ಹೊಸ ದಿಕ್ಕು ಕಂಡುಬರುವ ಸಾಧ್ಯತೆ ಇದೆ. ಸ್ವಾಭಿಮಾನಕ್ಕೆ ಧಕ್ಕೆಯಾಗಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು.

ಮಿಥುನ ರಾಶಿ :

ನಿಮ್ಮ ನಷ್ಟವನ್ನು ಮರೆಮಾಚಲು ತಂತ್ರವನ್ನು ಹೂಡುವಿರಿ. ಕೆಲಸದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗಬಹುದು. ನಿಮ್ಮೊಳಗಿನ ಪ್ರಪಂಚ ನಿಮ್ಮನ್ನು ದೂಡಿ ಹೊರಹಾಕಬಹುದು. ಮನಸ್ಸಿನಲ್ಲಿ ಗಾಬರಿಯ ಸ್ಥಿತಿಯನ್ನು ನಿವಾರಿಸಿಕೊಳ್ಳಿ. ಮನೆಯಲ್ಲಿನ ಪರಿಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ಅಳುಕುವ ಅವಶ್ಯಕತೆ ಇಲ್ಲ.‌ ಎಲ್ಲವೂ ನಿಮಗೆ ತಿಳಿದೇ ಆಗಬೇಕು ಎನ್ನುವ ಹಠವಿರುವುದು. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ.

ಕರ್ಕಾಟಕ ರಾಶಿ :

ಹೊಸದಾಗಿ ನಿಮ್ಮ ಸಹವಾಸಕ್ಕೆ ಸೇರಿದವರ ಮೇಲೆ ಹದ್ದಿನ ಕಣ್ಣಿಡಿ. ನಿಮ್ಮ ಉತ್ಸಾಹ ಇತರರನ್ನೂ ಪ್ರೇರೇಪಿಸಬಹುದು. ಕೆಲಸಗಳಲ್ಲಿ ಹೆಚ್ಚಿನ ಗಮನ ಬೇಕಾಗಿರುತ್ತದೆ. ಆದರೆ, ಸಮಯ ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ. ಹಣದ ವಿಚಾರದಲ್ಲಿ ನಿರ್ಧಾರ ಸರಿಯಾಗಿ ತೆಗೆದುಕೊಳ್ಳಿ. ಆತುರದ ನಿರ್ಧಾರಕ್ಕೆ ನಷ್ಟವೊಂದೇ ಫಲ. ದ್ವಿಚಕ್ರ ವಾಹನದಲ್ಲಿ ಆಯ ತಪ್ಪಬಹುದು. ಅದನ್ನು ಯೋಜನೆ ಗೊಳಿಸಿ. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ.

ಸಿಂಹ ರಾಶಿ :

ನಿಮ್ಮ ಇಷ್ಟದ‌ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ನಿಮ್ಮ ಶ್ರಮಕ್ಕೆ ಕೂಡಲೇ ಫಲ ಸಿಗುತ್ತದೆ ಎನ್ನುವ ಧಾವಂತ‌ ಬೇಡ. ತಾಳ್ಮೆಯ ಅವಶ್ಯಕತೆ ಇದೆ. ನಿಮ್ಮ ಉತ್ಸಾಹವನ್ನು ಉಳಿಸಿಕೊಂಡು ಮುಂದೆ ಸಾಗಬೇಕು. ಹಣಕಾಸಿನ ಚಿಂತೆ ಇತ್ತು ಸಹ ಪರಿಹಾರ ದೊರೆಯಬಹುದು. ಸಲಹೆಯನ್ನು ಸ್ವೀಕರಿಸಿ ಕ್ರಮಬದ್ಧವಾಗಿ ಆಚರಿಸಿ.‌ ಪ್ರಯಾಣದಲ್ಲಿ ಪ್ರೇಮವಾಗುವ ಸಂಭವವಿದೆ. ಸಜ್ಜನರ ಸಹವಾಸ ಸಿಗುವುದು. ಅವರನ್ನು ಆಡಿಕೊಳ್ಳಬೇಡಿ. ಮಕ್ಕಳು ನಿಮ್ಮನ್ನು ಕಂಡು ಹಾಸ್ಯ ಮಾಡಿಯಾರು.‌

ಕನ್ಯಾ ರಾಶಿ :

ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ಸ್ಪಷ್ಟತೆಯ ಜೊತೆ ಮುಂದೆ ಸಾಗಿರಿ. ನೀವು ಕುಟುಂಬದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿ ಗೊತ್ತಾಗುವುದು. ಹಲವು ರೀತಿಯ ವಿರೋಧವನ್ನು ನೀವು ತೆಗೆದುಕೊಳ್ಳುವ ತೀರ್ಮಾನದಿಂದ ಬರಲಿದೆ. ಭೂ ವ್ಯವಹಾರವು ಇತ್ಯರ್ಥ ಆಗುವುದು ಕಷ್ಟ. ಚೆನ್ನಾಗಿ ಮಾತನಾಡುತ್ತೇನೆಂದು ಬೇರೆಯವರಿಗೆ ನೋವನ್ನು ಕೊಡಬೇಡಿ. ನಗುಮುಖದಿಂದ ಇಂದು ಇದ್ದರು ನಿಮ್ಮ ಬಳಿ ಅನೇಕರು ಮಾತನಾಡಲು ಬರಬಹುದು.

ತುಲಾ ರಾಶಿ :

ನಿಮ್ಮ ಮಾನಸಿಕ ಹಿತಕ್ಕಾಗಿ ಕೆಲಸ ಕೆಲಸ ಮಾಡುವಿರಿ. ಕೆಲಸಗಳಲ್ಲಿ ವಿಶಿಷ್ಟ ಯಶಸ್ಸುಗಳು ಸಂಭವಿಸಬಹುದು. ಆದರೆ, ಕೆಲಸದ ಒತ್ತಡ ಜಾಸ್ತಿಯಾಗಬಹುದು. ಹಣದ ವ್ಯವಹಾರಗಳಲ್ಲಿ ನಿರ್ಣಯ ದೃಢವಾಗಿರಲಿ. ಸ್ವಭಾವವನ್ನು ತಿದ್ದಿಕೊಳ್ಳಲಾಗದೇ ಎಲ್ಲರಿಂದ ನಿಂದನೆಗೆ ಒಳಗಾಗುವಿರಿ. ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ.

ವೃಶ್ಚಿಕ ರಾಶಿ :

ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ‌. ಸೌಂದರ್ಯದ ಸಾಧನಗಳನ್ನು ಸ್ತ್ರೀಯರು ಹೆಚ್ಚು ಬಳಸುವರು. ಮಕ್ಕಳ ಕಡೆ ಗಮನ ಹೆಚ್ಚು ಬೇಕಾಗುವುದು. ನಿರುತ್ಸಾಹದ ಮಾತಿಗೆ ಕಿವಿಯಾಗದೇ ಇದ್ದರೆ ಒಳ್ಳೆಯದು. ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ದಂಪತಿಗಳ ನಡುವೆ ಸಾಮರಸ್ಯವಿರುವುದು. ಬೇಸರವಾಗಿ ಎಲ್ಲವೂ ಅಶಾಶ್ವತ ಎಂದೆನಿಸಬಹುದು. ಗೆಳೆತನಕ್ಕೆ ಹೊಸ ವ್ಯಕ್ತಿಗಳು ಸಿಗುವರು.‌

ಧನು ರಾಶಿ :

ಇಂದು ನಿಮ್ಮ ಪರೀಕ್ಷೆಗೆಂದು ಕೆಲವು ಘಟನೆಗಳು ನಡೆಯಬಹುದು. ಇಂದಿನ‌ ಯೋಜನೆಗಳು ಕೊನೆಯ ಕ್ಷಣದಲ್ಲಿ ಬದಲಾಗಬಹುದು.‌ ನಿಮ್ಮ ಕಾರ್ಯಕ್ಷಮತೆ ಇತರರನ್ನು ಪ್ರಭಾವಿತ ಮಾಡುತ್ತದೆ. ಹಿರಿಯರಿಂದ ಮೆಚ್ಚುಗೆ ಸಿಗಬಹುದು. ಹಣಕಾಸಿನ ಪರಿಸ್ಥಿತಿ ಸಮೃದ್ಧವಾಗಬಹುದು. ವಾಹನ ಚಾಲನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು ಉತ್ತಮ. ಮನಸ್ಸು ಹೇಳಿದಂತೆ ಕೇಳಬೇಡಿ, ಸಮಾಧಾನದಿಂದ ಇರಿ. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ.

ಮಕರ ರಾಶಿ :

ನೀವಾಡುವ ಮಾತುಗಳು ನಿಮಗೆ ಮಾತ್ರ ಖುಷಿ ಕೊಡಬಹುದು. ಇಂದು ನಿಮಗೆ ಸಿಗುವ ಬೆಂಬಲ ಇಲ್ಲವಾಗುವುದು. ಕೆಲಸದಲ್ಲಿ ಬದಲಾವಣೆ ಅಥವಾ ಹೊಸ ಅವಕಾಶ ಸಿಗಬಹುದು. ಹಣಕಾಸಿನ ವಿಷಯಗಳಲ್ಲಿ ತಾಳ್ಮೆಯಿಂದ ನಡೆದುಕೊಳ್ಳಿ. ಮನಸ್ಸನ್ನು ಕಡಿಮಾಣ ಹಾಕಿ ನಿಲ್ಲಿಸುವುದು ಉತ್ತಮ. ಮಕ್ಕಳು ಉತ್ಸಾಹದಿಂದ ದಿನವನ್ನು ಪ್ರಾರಂಭಿಸಲಿದ್ದು ಅವರಿಗೆ ಕೊಡಬೇಕಾದ ತಿಳಿವಳಿಕೆಯನ್ನು ಆಗಲೇ ಕೊಡುವುದು ಉತ್ತಮ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ.

ಕುಂಭ ರಾಶಿ :

ಹಿರಿಯರ ಆದೇಶದಂತೆ ಮನೆಯಲ್ಲಿ ಮಂಗಲ ಕಾರ್ಯವನ್ನು ಮಾಡುವಿರಿ. ಸ್ನೇಹಿತರಿಂದ ನೆರವು ಸಿಗಬಹುದು. ಏನೇ ಮಾಡಿದರೂ ವಿರೋಧಿಗಳ ಮೀರಿಸುವ ಸಾಮರ್ಥ್ಯ ಬರದು. ಭವಿಷ್ಯದ ಬಗ್ಗೆ ಚಿಂತೆ ಮಾಡದಿರಿ, ಕಾಲ ಸರಿದಂತೆ ಪರಿಹಾರ ಸಿಗುತ್ತದೆ. ಕೆಲವು ಸಮಯದಲ್ಲಿ ಮನಸ್ಸಿಗೆ ನೆಮ್ಮದಿ ಸಿಗಬಹುದು. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಆಯಾಸವಾದರೆ ವಿಶ್ರಾಂತಿಯ ಜೊತೆ ಕೆಲಸವನ್ನು ಮಾಡಿ. ಗುರಿಯೆಡಗೆ ಪ್ರಯತ್ನವು ನಿರಂತರವಾಗಿರಲಿ.

ಮೀನ ರಾಶಿ :

ಇಂದು ಅನ್ಯರಿಗೆ ಕೊಡಬೇಕಾದ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ. ಉದ್ಯೋಗಸ್ಥರಿಗೆ ಬಡ್ತಿಯ ಸಾಧ್ಯತೆ ಇದೆ. ಕೆಲವರು ನಿಮ್ಮ ಪ್ರತಿಭೆಯನ್ನು ಗುರುತಿಸುತ್ತಾರೆ. ಇನ್ನೊಬ್ಬರ ಬಗ್ಗೆ ಅಂದುಕೊಂಡಿದ್ದು ಸತ್ಯವಾಗಲಿದೆ. ಆತ್ಮವಿಶ್ವಾಸದಿಂದ ಮುಂದೆ ಸಾಗಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಇಂದು ನಿಮ್ಮ ಮಹತ್ತ್ವದ ಕಾರ್ಯವು ಕೈಗೂಡಬಹುದು. ಹಳೆಯ ಸಮಾಚಾರವನ್ನು ಪುನಃ ನೆನಪಿಸಿಕೊಳ್ಳುವಿರಿ. ಮಾತನ್ನು ಕಡಿಮೆ‌ ಮಾಡಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಮೃಗಶಿರಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಆಶ್ಲೇಷ, ಯೋಗ : ವೃದ್ಧಿ, ಕರಣ : ತೈತಿಲ, ಸೂರ್ಯೋದಯ – 05 – 55 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:45 – 12:21, ಯಮಗಂಡ ಕಾಲ 15:34 – 17:10, ಗುಳಿಕ ಕಾಲ 07:32 – 09:08

– ಲೋಹಿತ್ ಹೆಬ್ಬಾರ್ – 8762924271 (what’s app only)

Source link

Exit mobile version