‘ಆ ಸಿನಿಮಾ ಕಥೆ ನನ್ನದು’; ಕನ್ನಡದಲ್ಲಿ ಇತ್ತೀಚೆಗೆ ರಿಲೀಸ್ ಆದ ಹಿಟ್ ಚಿತ್ರದ ಬಗ್ಗೆ ಕೃತಿಚೌರ್ಯ ಆರೋಪ

‘ಆ ಸಿನಿಮಾ ಕಥೆ ನನ್ನದು’; ಕನ್ನಡದಲ್ಲಿ ಇತ್ತೀಚೆಗೆ ರಿಲೀಸ್ ಆದ ಹಿಟ್ ಚಿತ್ರದ ಬಗ್ಗೆ ಕೃತಿಚೌರ್ಯ ಆರೋಪ

ಒಂದು ಸಿನಿಮಾ ರಿಲೀಸ್ ಆಗಿ ಹಿಟ್ ಆದ ಬಳಿಕ ಕೆಲವರು ನಿರ್ದೇಶಕರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿದ ಉದಾಹರಣೆ ಇದೆ. ಕೆಲವು ನಿಜವಾದರೆ, ಕೆಲವು ಸುಳ್ಳಾಗಿದೆ. ಈಗ ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ಸಿನಿಮಾ ಮೇಲೆ ‘ಮಾರಿಗೋಲ್ಡ್’ ಸಿನಿಮಾ ನಿರ್ದೇಶಕ ರಾಘವೇಂದ್ರ ನಾಯಕ್ ದೀರ್ಘ ಪೋಸ್ಟ್ ಬರೆದಿದ್ದಾರೆ. ಅವರು ಆರೋಪ ಮಾಡಿರೋದು ‘ಲವ್ ಮಾಕ್ಟೇಲ್ 3’ ಚಿತ್ರದ ಮೇಲೆ ಇರಬಹುದು ಎಂಬ ಚರ್ಚೆ ಕೂಡ ನಡೆದಿದೆ.

‘ಸಿನಿಮಾ ಬರಹಗಾರರೇ ಮತ್ತು ಭವಿಷ್ಯದ ನಿರ್ದೇಶಕರೇ, ನನ್ನದೊಂದು ಸಣ್ಣ ಕಿವಿಮಾತು: ನೀವು ಯಾವುದೇ ಕಥೆ ಸಿದ್ಧಪಡಿಸಿದಾಗ, ಮೊದಲು ಅದನ್ನು SWA (Screenwriters Association) ನಲ್ಲಿ ನೋಂದಾಯಿಸಿಕೊಳ್ಳಿ. ಕಥೆ ಮತ್ತು ಚಿತ್ರಕಥೆ ಸಿದ್ಧವಾಗುವ ಪ್ರತಿ ಹಂತದ ಕಡತವನ್ನೂ (File) ನಿಮ್ಮ ಸ್ವಂತ ಇಮೇಲ್ ವಿಳಾಸಕ್ಕೆ ಕಳುಹಿಸಿ ಸುರಕ್ಷಿತವಾಗಿಟ್ಟುಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಯಾರಿಗಾದರೂ ಕಥೆ ವಿವರಿಸುವ (Narration) ಮೊದಲು ಅದರ ಆಡಿಯೋ ರೆಕಾರ್ಡ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಕಥೆ ಹೇಳುವ ಮುನ್ನ ನಡೆಸುವ ಸಂಭಾಷಣೆ ಹಾಗೂ ಕಥೆ ಮುಗಿದ ನಂತರದ ಚರ್ಚೆಗಳೂ ಅದರಲ್ಲಿ ದಾಖಲಾಗಿರಲಿ. ಮೀಟಿಂಗ್ ಮುಗಿದ ಕೂಡಲೇ ಆ ಆಡಿಯೋ ಫೈಲ್ ಅನ್ನು ನಿಮಗೆ ನೀವೇ ಇಮೇಲ್ ಮಾಡಿಕೊಳ್ಳಿ. ಆಗ ನೀವು ನಾಯಕನಿಗಾಗಲಿ, ನಿರ್ಮಾಪಕರಿಗಾಗಲಿ ಅಥವಾ ನಿರ್ದೇಶಕರಿಗಾಗಲಿ ಕಥೆ ವಿವರಿಸಿದ್ದೀರಿ ಎಂಬುದಕ್ಕೆ ಭದ್ರವಾದ ದಾಖಲೆ ಇರುತ್ತದೆ’ ಎಂದು ರಾಘವೇಂದ್ರ ನಾಯಕ್ ಬರಹ ಆರಂಭಿಸಿದ್ದಾರೆ.

‘ಇಂತಹ ಮುನ್ನೆಚ್ಚರಿಕೆ ವಹಿಸದ ಕಾರಣ ಇಂದು ನನಗೆ ದೊಡ್ಡ ದ್ರೋಹವಾಗಿದೆ. ನನ್ನ ಕಥೆಯ ಇಡೀ ದ್ವಿತೀಯಾರ್ಧವನ್ನು (Second Half) ಬಳಸಿಕೊಂಡು ಸಿನಿಮಾ ಮಾಡಿ ಬಿಡುಗಡೆಗೊಳಿಸಿದ್ದಾರೆ; ಆ ಸಿನಿಮಾ ಈಗ ಯಶಸ್ವಿಯಾಗಿ ಪ್ರದರ್ಶನವನ್ನೂ ಕಾಣುತ್ತಿದೆ. ಈ ಕಥೆ ನನ್ನದು ಎಂಬುದು ನನ್ನ ಆಪ್ತ ವಲಯದ ಬಹಳಷ್ಟು ನಿರ್ಮಾಪಕರಿಗೆ, ತಂತ್ರಜ್ಞರಿಗೆ ಹಾಗೂ ಸ್ನೇಹಿತರಿಗೆ ತಿಳಿದಿದೆ. ಕನ್ನಡದ ಖ್ಯಾತ ನಿರ್ದೇಶಕರು ಮತ್ತು ನಿರ್ಮಾಪಕರು ಈ ಕಥೆಯನ್ನು ಸಿನಿಮಾ ಮಾಡಲು ನಿರ್ಧರಿಸಿ, ನನಗೆ ಮುಂಗಡ ಸಂಭಾವನೆಯನ್ನೂ ನೀಡಿದ್ದರು. ಇದೇ ನಿರ್ಮಾಪಕ-ನಿರ್ದೇಶಕರ ಜೊತೆಗೂಡಿ ಎರಡು ವರ್ಷಗಳ ಹಿಂದೆಯೇ ನಾನು ಆ ‘ನಿರ್ದೇಶಕ, ನಿರ್ಮಾಪಕ ಕಮ್ ನಟ’ನಿಗೆ ಕಥೆ ಹೇಳಿದ್ದೆ’ ಎಂದು ಆರೋಪಿಸಿದ್ದಾರೆ ಅವರು.

‘ನನ್ನ ಬಳಿ ಆ ಕಥೆ ನನ್ನದೇ ಎನ್ನುವುದಕ್ಕೆ ಸೂಕ್ತ ದಾಖಲೆಗಳಿವೆಯಾದರೂ, “ನಾನು ಅವರಿಗೆ ಈ ಕಥೆಯನ್ನೇ ಹೇಳಿದ್ದೆ” ಎನ್ನುವುದಕ್ಕೆ ಪೂರಕ ದಾಖಲೆಗಳಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ನಾನು ಅಸಹಾಯಕನಾಗಿ ಸುಮ್ಮನಿರಬೇಕಾಗಿದೆ. ಭವಿಷ್ಯದಲ್ಲಿ ಬೇರೆ ಯಾವ ಬರಹಗಾರರಿಗೂ ಇಂತಹ ಮೋಸ ಆಗಬಾರದು ಎಂಬ ಸದಾಶಯದಿಂದ ಮತ್ತು ಅವರು ಮುನ್ನೆಚ್ಚರಿಕೆ ವಹಿಸಲಿ ಎಂಬ ಕಾರಣಕ್ಕೆ ಈ ಪೋಸ್ಟ್ ಹಾಕುತ್ತಿದ್ದೇನೆ. ದಯವಿಟ್ಟು ಬರಹಗಾರರೇ, ನಿಮ್ಮ ಕಲ್ಪನೆಗೆ ಕನ್ನ ಬೀಳದಂತೆ ಜಾಗ್ರತೆ ವಹಿಸಿ. ನಿಮಗೆ ಶುಭವಾಗಲಿ’ ಎಂದು ಅವರು ಬರಹ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?

ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ಕನ್ನಡದ ಸಿನಿಮಾ ಎಂದರೆ ಅದು ‘ಲವ್ ಮಾಕ್ಟೇಲ್ 3’. ಅಲ್ಲದೆ, ನಿರ್ದೇಶಕ, ನಿರ್ಮಾಪಕ ಕಮ್ ನಟ ಎಂದರೆ ಅದು ಡಾರ್ಲಿಂಗ್ ಕೃಷ್ಣ ಇರಬಹುದು ಎಂದು ಅನೇಕರು ಊಹಿಸಿದ್ದಾರೆ. ಇದಕ್ಕೆ ಕೃಷ್ಣ ಅವರ ಕಡೆಯಿಂದ ಯಾವ ರೀತಿಯ ಸ್ಪಷ್ಟನೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ದಾವಣಗೆರೆಗೆ ಆ ಸಚಿವರು ಗೋಣಿಚೀಲದಲ್ಲಿ ಹಣ ತರುತ್ತಾರೆ! ಬಿವೈ ವಿಜಯೇಂದ್ರ ಗಂಭೀರ ಆರೋಪ

ಬಾಗಲಕೋಟೆ, ಮಾರ್ಚ್ 23: ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಗಳ ಹಿನ್ನೆಲೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಈ ಮಧ್ಯೆ, ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ವಿಜಯೇಂದ್ರ, ದಾವಣಗೆರೆಯಲ್ಲಿ ಸೂಟ್‌ಕೇಸ್‌ನಲ್ಲಿ ಹಣ ತರುವುದಿಲ್ಲ, ಸಚಿವರೊಬ್ಬರು ಗೋಣಿಚೀಲದಲ್ಲಿ ಹಣ ತಂದು ಕೂರುತ್ತಾರೆ ಎಂದು ಆರೋಪಿಸಿದರು. ಅಲ್ಲಿನ ರಾಜಕೀಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ನನಗೆ ತಿಳಿದಿದೆ ಎಂದು ಹೇಳಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

‘ರಾಜ್ಯದ ಜನ ಕಾಂಗ್ರೆಸ್ ಸರ್ಕಾರದಿಂದ ಬೇಸತ್ತಿದ್ದಾರೆ. ಇದು ಬಡವರು ಮತ್ತು ದೀನದಲಿತರ ವಿರೋಧಿ ಸರ್ಕಾರ’ ಎಂದು ಅವರು ಆರೋಪಿಸಿದರು. ಸದ್ಯದ ರಾಜಕೀಯ ವಾತಾವರಣ ನೋಡಿದರೆ ಬಿಜೆಪಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವೇ ಗುರಿ: ವಿಜಯೇಂದ್ರ

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಕಮಲದ ಹೂವು ಅರಳುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಈ ಹಿಂದೆ ಸಿರಾ ಮತ್ತು ಕೆಆರ್ ಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕುತಂತ್ರ ಮಾಡಿತ್ತು ಎಂದು ಆರೋಪಿಸಿದ ಅವರು, ಮತದಾನ ಕೊನೆಯ ದಿನದವರೆಗೆ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

ವಿಜಯೇಂದ್ರ ಮಾತಿನ ವಿಡಿಯೋ


ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಆಶೀರ್ವಾದ ಪಡೆದು ಬಂದಿದ್ದಾಗಿ ತಿಳಿಸಿದ ವಿಜಯೇಂದ್ರ, ಅವರೆಂದೂ ಇಟ್ಟ ಹಿಜ್ಜೆಯಿಂದ ಹಿಂದೆ ಸರಿದವರಲ್ಲ. ಪಕ್ಷದ ಗುರಿ ಸಾಧನೆಗೆ ದಿಟ್ಟ ಹೆಜ್ಜೆ ಇಡಲಾಗುತ್ತಿದೆ ಎಂದರು.

ಇದನ್ನೂ ಓದಿ: ಶಾಮನೂರು ಮೊಮ್ಮಗನಿಗೆ ಕಾಂಗ್ರೆಸ್ ಟಿಕೆಟ್​ಗೆ ಅಸಮಾಧಾನ: ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಮುಸ್ಲಿಮರು!

ಬಾಗಲಕೋಟೆ ಕ್ಷೇತ್ರದಲ್ಲಿ ಇದ್ದ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಲಾಗುವುದು. ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿ ಚರಂತಿಮಠರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು. ಒಟ್ಟಿನಲ್ಲಿ, ಉಪಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ-ಪ್ರತ್ಯಾರೋಪಗಳ ನಡುವೆ ರಾಜ್ಯ ರಾಜಕೀಯ ಕಾವು ಹೆಚ್ಚಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಲಕ್ಷಣಗಳು ದೇಹದಲ್ಲಿ ಕಂಡುಬಂದ್ರೆ ನಿಮಗೆ ಹೃದಯದಲ್ಲಿ ಬ್ಲಾಕೇಜ್ ಇರಬಹುದು ಎಚ್ಚರ!

ಇತ್ತೀಚೆಗೆ ಹೃದಯ ಸಂಬಂಧ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅದರಲ್ಲೂ ಹೃದಯಾಘಾತ ಕೇಸ್ಗಳು ಯುವಕರಲ್ಲೂ ಗಣನೀಯವಾಗಿ ಹೆಚ್ಚುತ್ತಿವೆ. ಈ ಹಾರ್ಟ್ ಅಟ್ಯಾಕ್ಗೆ ಹೃದಯದ ನರಗಳಲ್ಲಿ ಉಂಟಾಗುವ ಬ್ಲಾಕೇಜ್ ಕೂಡ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅಷ್ಟಕ್ಕೂ ಹೃದಯದಲ್ಲಿ ಬ್ಲಾಕೇಜ್ ಏಕೆ ಉಂಟಾಗುತ್ತದೆ? ಅದರ ಆರಂಭಿಕ ಲಕ್ಷಣಗಳು ಯಾವುವು ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು? ಎಂಬುದನ್ನು ತಿಳಿದುಕೊಳ್ಳುವ ಅಗತ್ಯ ಇಂದಿಗಿದೆ.

ಹೃದಯದ ನರಗಳಲ್ಲಿ ಕೊಬ್ಬು (ಫ್ಯಾಟ್) ಅಥವಾ ಕೊಲೆಸ್ಟ್ರಾಲ್ ಶೇಖರೆಯಾಗುವುದರಿಂದ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ. ಇದರಿಂದ ಹೃದಯಕ್ಕೆ ಬೇಕಾದಷ್ಟು ರಕ್ತ ಮತ್ತು ಆಮ್ಲಜನಕ ಸಿಗದೆ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಕೋರೊನರಿ ಆರ್ಟರಿ ಡಿಸೀಸ್ ಎಂದು ಕರೆಯಲಾಗುತ್ತದೆ. ಇಲ್ಲಿ ತಿಳಿಯಬೇಕಾದ ಪ್ರಮುಖ ವಿಚಾರವೆಂದರೆ ಹೃದಯದಲ್ಲಿ ಬ್ಲಾಕೇಜ್ ಅಚಾನಕ್ ಆಗಿ ಉಂಟಾಗುವುದಿಲ್ಲ. ಬದಲಾಗಿ ದೀರ್ಘಕಾಲದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಇದು ಆಗುವಂತಹದ್ದು. ಈ ಸಮಸ್ಯೆಯ ಲಕ್ಷಣಗಳು ಬಹಳ ಹಿಂದಿನಿಂದಲೇ ಕಾಣಿಸಿಕೊಳ್ಳುತ್ತವೆಯಾದರೂ ಅವನ್ನು ನಿರ್ಲಕ್ಷ್ಯ ಮಾಡುವವರ ಸಂಖ್ಯೆಯೇ ದೊಡ್ಡದಿದೆ ಎಂಬುದು ವಿಪರ್ಯಾಸ.

ಇದನ್ನೂ ಓದಿ: ತಂದೆ ಧೂಮಪಾನ ಮಾಡುತ್ತಿದ್ದರೆ ಮಕ್ಕಳಿಗೆ ಬರುತ್ತೆ ಈ ಗಂಭೀರ ರೋಗಗಳು; ಅಧ್ಯಯನದಿಂದ ಬಹಿರಂಗ

ಕೋರೊನರಿ ಆರ್ಟರಿ ಡಿಸೀಸ್ ಲಕ್ಷಣಗಳೇನು?

  • ಹೃದಯದಲ್ಲಿ ಬ್ಲಾಕೇಜ್‌ನ ಅತ್ಯಂತ ಸಾಮಾನ್ಯ ಲಕ್ಷಣವೆಂದರೆ ಎದೆನೋವು. ವಿಶೇಷವಾಗಿ, ಎದೆಯ ಮೇಲೆ ಒತ್ತಡ ಇಟ್ಟಂತಾಗುವ ನೋವು ಕಾಣಿಸಬಹುದು. ಈ ನೋವು ಕೆಲವೊಮ್ಮೆ ಎಡಗೈ, ಭುಜ, ಕುತ್ತಿಗೆ ಅಥವಾ ದವಡೆವರೆಗೆ ಹರಡಬಹುದು.
  • ಕೆಲವರಲ್ಲಿ ಸಾಮಾನ್ಯವಾಗಿ ನಡೆಯುವಾಗಲೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಹೃದಯಕ್ಕೆ ಸರಿಯಾದ ಪ್ರಮಾಣದಲ್ಲಿ ರಕ್ತ ತಲುಪದ ಕಾರಣ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇದರಿಂದ ಸ್ವಲ್ಪ ಶಾರೀರಿಕ ಚಟುವಟಿಕೆ ಮಾಡಿದರೂ ಉಸಿರಾಟ ವೇಗವಾಗಬಹುದು.
  • ಇದರ ಜೊತೆಗೆ ಅಚಾನಕ್ ತಲೆಸುತ್ತು, ಕಾರಣವಿಲ್ಲದೆ ಬೆವರುವುದು ಕೂಡ ಹೃದಯ ಸಂಬಂಧಿತ ಸಮಸ್ಯೆಗಳ ಸೂಚನೆಗಳಾಗಿರಬಹುದು.

ಯಾರಿಗೆ ಹೆಚ್ಚು ಅಪಾಯ?

ವೈದ್ಯರ ಪ್ರಕಾರ ಕುಟುಂಬದಲ್ಲಿ ಹೃದಯ ರೋಗದ ಇತಿಹಾಸ ಇರುವವರು, ಹೈ ಬಿಪಿ (ರಕ್ತದೊತ್ತಡ) ಇರುವವರು ಮತ್ತು ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಇರುವವರಿಗೆ ಅಪಾಯ ಹೆಚ್ಚು ಎನ್ನಲಾಗಿದೆ.

ಇನ್ನು ಇವೆಲ್ಲವೂ ಕೋರೊನರಿ ಆರ್ಟರಿ ಡಿಸೀಸ್ ಲಕ್ಷಣ ಮತ್ತು ಯಾರಿಗೆ ಅಪಾಯ ಹೆಚ್ಚೆಂಬ ಮಾಹಿತಿಯಾದರೆ ಹೃದಯ ಸಂಬಂಧಿ ರೋಗಗಳಿಂದಲೇ ದೂರ ಉಳಿಯಲು ನಾವೇನು ಮಾಡಬಹುದು ಎಂಬೂದನ್ನೂ ತಿಳಿದುಕೊಳ್ಳಬೇಕಿದೆ. ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವ ಜೊತೆಗೆ ಪ್ರತಿದಿನ ವ್ಯಾಯಾಮ ಮಾಡುವುದು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಅಗತ್ಯವಿದೆ ಎಂಬುದು ವೈದ್ಯರ ಮಾತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ರಸ್ತೆ ದಾಟಲು ಸಹಾಯ ಮಾಡಿದ ವ್ಯಕ್ತಿಗೆ ಸೊಂಡಿಲೆತ್ತಿ ಧನ್ಯವಾದ ತಿಳಿಸಿದ ಆನೆಗಳ ಹಿಂಡು

ಆನೆಗಳ (elephants) ಆಟ ತುಂಟಾಟಗಳ ಮನಸ್ಸಿಗೆ ಹೇಗೆ ಖುಷಿ ಕೊಡುತ್ತದೆ. ಕೆಲವೊಮ್ಮೆ ಮನುಷ್ಯರೊಂದಿಗೆ ಈ ಆನೆಗಳು ಮುದ್ದಾಗಿ ವರ್ತಿಸುತ್ತವೆ. ಗಜರಾಜ ಹಾಗೂ ಮನುಷ್ಯನ ನಡುವಿನ ಮುದ್ದಾದ ವಿಡಿಯೋ ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು, ರಸ್ತೆ ದಾಟಲು ಅನುವು ಮಾಡಿಕೊಟ್ಟ ವ್ಯಕ್ತಿಯೊಬ್ಬನಿಗೆ ತಾಯಿ ಆನೆಗಳು ಸೊಂಡಿಲೆತ್ತಿ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ನೋಡಿ ನೆಟ್ಟಿಗರು ಕಳೆದೇ ಹೋಗಿದ್ದಾರೆ.

ನಿವೃತ್ತ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು ತಮ್ಮ @susantananda3  ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ರಸ್ತೆಯಲ್ಲಿ ವಾಹನಗಳನ್ನು ತಡೆದು ಆನೆಗಳ ಹಿಂಡು ಹೋಗಲು ಅನುವು ಮಾಡಿಕೊಡುತ್ತಿರುವುದನ್ನು ಕಾಣಬಹುದು. ಅದೇ ವ್ಯಕ್ತಿಯೂ ಆನೆಗಳ ಹಿಂಡು ರಸ್ತೆಯನ್ನು ದಾಟುವವರೆಗೂ ಕಾದು ನಿಂತಿದ್ದು, ಈ ಹಿಂಡಿನಲ್ಲಿದ್ದ ತಾಯಿ ಆನೆಗಳು ವ್ಯಕ್ತಿಯ ಸಹಾಯಕ್ಕೆ ಸೊಂಡಿಲೆತ್ತಿ ನಮಸ್ಕರಿಸಿ ಧನ್ಯವಾದ ತಿಳಿಸಿ ಮುಂದಕ್ಕೆ ಸಾಗಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟ್ಟ ಹುಡುಗಿ ಐಸ್ ಕ್ರೀಮ್ ಕೊಟ್ಟಿದ್ದಕ್ಕೆ ಮುತ್ತು ಕೊಟ್ಟು ಥ್ಯಾಂಕ್ಸ್ ಹೇಳಿದ ಗಜರಾಜ

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ ಸಹಾಯ ಮಾಡಿದ್ದಕ್ಕೆ ಎಷ್ಟು ಮುದ್ದಾಗಿ ಕೃತಜ್ಞತೆ ಸಲ್ಲಿಸಿವೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ದೃಶ್ಯ ಮುದ್ದಾಗಿವೆ ಎಂದು ಹೇಳಿದರೆ, ಮತ್ತೊಬ್ಬರು, ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನಗರದಲ್ಲಿ ಹೆಚ್ಚಿದ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್; ನಿವೃತ್ತ ಸಂಶೋಧಕನಿಗೆ 5 ಕೋಟಿ ರೂ. ವಂಚನೆ!

ಬೆಂಗಳೂರು, ಮಾರ್ಚ್​ 23: ನಗರದಲ್ಲಿ ಡಿಜಿಟಲ್ ಅರೆಸ್ಟ್   (Digital Arrest) ಹೆಸರಿನ ವಂಚನೆ ಜಾಲ ಬೆಳೆಯುತ್ತಲೇ ಇದೆ. ಕೆಲ ದಿನಗಳ ಹಿಂದೆಯಷ್ಟೇ ವೃದ್ಧ ಉದ್ಯಮಿಗೆ ಇದೇ ರೀತಿ 15 ಕೋಟಿ ರೂ. ವಂಚಿಸಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಸೈಬರ್ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ನಗರದ ನಿವೃತ್ತ ಸಂಶೋಧಕರೊಬ್ಬರಿಗೆ ಬರೋಬ್ಬರಿ 5 ಕೋಟಿ ರೂ. ಸೈಬರ್ ವಂಚನೆ ಮಾಡಿದ್ದು, ವೃದ್ಧನನ್ನು ಬೆದರಿಸಿ ಹಣ ವರ್ಗಾಯಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಮಾನವ ಕಳ್ಳಸಾಗಾಣಿಗೆ ಮಾಡಿದ್ದೀರೆಂದು ನಕಲಿ ಎಫ್​ಐಆರ್​ ಕಳಿಸಿದ ವಂಚಕರು

94 ವರ್ಷದ ನಿವೃತ್ತ ಸಂಶೋಧಕರಿಗೆ ಅಪರಿಚಿತ ವ್ಯಕ್ತಿಯೊಬ್ಬ ಲ್ಯಾಂಡ್ ಲೈನ್‌ಗೆ ಕರೆ ಮಾಡಿ, ನಿಮ್ಮ ವಿರುದ್ಧ ಬಳ್ಳಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ಪ್ರಕರಣ ದಾಖಲಾಗಿದೆ ಎಂದು ಹೇಳಿ ಬೆದರಿಕೆ ಹಾಕಿದ್ದಾನೆ. ನಂತರ ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡ ಮತ್ತೊಬ್ಬ ವ್ಯಕ್ತಿ ‘ಸಂದೀಪ್ ರಾವ್’ ಎಂಬ ಹೆಸರಿನಲ್ಲಿ ಕರೆ ಮಾಡಿ, ಆಧಾರ್ ಕಾರ್ಡ್ ವಿವರಗಳನ್ನು ವಾಟ್ಸಪ್ ಮೂಲಕ ಪಡೆದಿದ್ದಾನೆ. ಬಳಿಕ ನಕಲಿ ಎಫ್‌ಐಆರ್ ಕಳುಹಿಸಿ, ಸಿಬಿಐ ಅಧಿಕಾರಿಗಳಂತೆ ವೇಷ ಹಾಕಿಕೊಂಡು ವಿಡಿಯೋ ಕಾಲ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ವೃದ್ಧ ಆರೋಪಿಸಿದ್ದಾರೆ.

ಇದನ್ನೂ ಓದಿ ಡಿಜಿಟಲ್ ಅರೆಸ್ಟ್ ಎಂದು ಯಾಮಾರಿಸಿ ವೃದ್ಧ ಉದ್ಯಮಿಯ 15 ಕೋಟಿ ರೂ. ಎಗರಿಸಿದ್ರು!

ಕೇಸ್ ಕೈ ಬಿಡಲು ಹಣ ನೀಡಬೇಕು ಎಂದು ಒತ್ತಾಯಿಸಿದ ಆರೋಪಿಗಳು, ಜನವರಿ 17ರಿಂದ ಫೆಬ್ರವರಿ 23ರವರೆಗೆ ಹಂತ ಹಂತವಾಗಿ ಒಟ್ಟು 4.91 ಕೋಟಿ ರೂಪಾಯಿಯನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಇನ್ನಷ್ಟು ಹಣ ಕೇಳಿದಾಗ ಅನುಮಾನಗೊಂಡ ವೃದ್ಧ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ಸಂಬಂಧ ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮನೆಯಲ್ಲಿ ಶಿಶುವನ್ನು ಬಿಟ್ಟು ಭಿಕ್ಷೆ ಬೇಡಲು ಹೋದ ಪೋಷಕರು, ಹಸಿವಿನಿಂದ ಒಂದು ತಿಂಗಳ ಮಗು ಸಾವು

ಬರೇಲಿ, ಮಾರ್ಚ್​ 23: ನವಜಾತ ಶಿಶುವನ್ನು ಮನೆಯಲ್ಲಿ ಬಿಟ್ಟು ಪೋಷಕರು ಭಿಕ್ಷೆ ಬೇಡಲೆಂದು ಹೋಗಿದ್ದು, ಹಿಂದಿರುಗುವಷ್ಟರಲ್ಲಿ ಮಗು(Baby) ಹಸಿವಿನಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಕಂಟೋನ್ಮೆಂಟ್ ಪ್ರದೇಶದಲ್ಲಿ ಮನೆಯೊಳಗೆ ಒಂದು ತಿಂಗಳ ಮಗುವೊಂದು ಶವವಾಗಿ ಪತ್ತೆಯಾಗಿದ್ದು, ಶಿಶು ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಕಿಲಾ ಪ್ರದೇಶದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುಭಾಷ್ ಯಾದವ್ ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಶಿಶು ಅನಾರೋಗ್ಯ ಮತ್ತು ದೌರ್ಬಲ್ಯದಿಂದ ಸಾವನ್ನಪ್ಪಿದೆ ಎಂದು ದೃಢಪಡಿಸಲಾಗಿದೆ ಎಂದು ಅಧಿಕಾರಿ ದೃಢಪಡಿಸಿದ್ದಾರೆ. ಮಗುವಿನ ಪೋಷಕರಾದ ಶಾದಾಬ್ ಮತ್ತು ಆತನ ಪತ್ನಿ ಹಿನಾ ಅಲಿಯಾಸ್ ಸೈನಾ ಮತ್ತು ಇತರ ಕುಟುಂಬ ಸದಸ್ಯರು ಭಿಕ್ಷೆ ಬೇಡುವ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದರು.

ಕಳೆದ ನಾಲ್ಕು ತಿಂಗಳಿನಿಂದ ಕುಟುಂಬವು ಆ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು ಎಂದು ಅವರು ಹೇಳಿದರು. ದಂಪತಿಗೆ ನಾಲ್ಕು ಅಪ್ರಾಪ್ತ ಮಕ್ಕಳಿದ್ದು, ಒಬ್ಬ ಮಗ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು ಒಂದೂವರೆ ತಿಂಗಳ ಹಿಂದೆ  ಜನಿಸಿದ ಶಿಶು ಹುಟ್ಟಿನಿಂದಲೇ ದುರ್ಬಲವಾಗಿತ್ತು.

ಮತ್ತಷ್ಟು ಓದಿ: ವಿಜಯನಗರ: ತಂದೆ ಕಣ್ಣೆದುರೇ ಜಲ ಸಮಾಧಿಯಾದ ಇಬ್ಬರು ಪುತ್ರರು; ಮತ್ತೊಬ್ಬ ಮಗ ಬಚಾವ್​

ಶುಕ್ರವಾರ ಬೆಳಗ್ಗೆ, ಪೋಷಕರು ತಮ್ಮ ಮಕ್ಕಳನ್ನು ಮನೆಯೊಳಗೆ ಇರಿಸಿ ಬೀಗ ಹಾಕಿ ಭಿಕ್ಷೆ ಬೇಡಲು ಹೊರಗೆ ಹೋಗಿದ್ದರು. ರಾತ್ರಿ ಹಿಂತಿರುಗಿದಾಗ, ಒಳಗೆ ಶಿಶು ಮೃತಪಟ್ಟಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಟುಂಬವು ಯಾರ ವಿರುದ್ಧವೂ ಯಾವುದೇ ಆರೋಪಗಳನ್ನು ಹೊರಿಸಿಲ್ಲ ಮತ್ತು ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯನ್

ನಟ ಶಿವಕಾರ್ತಿಕೇಯನ್ ಅವರು ‘ಸಿಎಸ್​​ಕೆ’ ಅನ್  ಬಾಕ್ಸಿಂಗ್ ಈವೆಂಟ್​​ಗೆ ತೆರಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಧೋನಿ ಹಾಗೂ ಸಿಎಸ್​​ಕೆ ಚಾರ್ಮ್​ ಅನ್ನು ಅವರು ಹಾಡಿ ಹೊಗಳಿದ್ದಾರೆ. ಚೆನ್ನೈ ಸ್ಟೇಡಿಯಂನಿಂದ ತಮ್ಮ ಮನೆ 25 ಕಿ.ಮೀ ದೂರ ಇದೆ ಎಂದು ಅವರು ಹೇಳಿದ್ದಾರೆ. ಅಷ್ಟೆಲ್ಲ ದೂರ ಇದ್ದರೂ ಸ್ಟೇಡಿಯಂನಲ್ಲಿ ನಡೆಯುವ ಸೆಲೆಬ್ರೇಷನ್ ಶಬ್ದ ತಮ್ಮ ಮನೆಯವರಿಗೂ ಕೇಳುತ್ತದೆ ಎಂದು ಹೇಳಿದರು ಶಿವಕಾರ್ತಿಕೇಯನ್.  ಧೋನಿ ಲೀಡರ್​​ಶಿಪ್​ನ ಹೊಗಳಿದರು ಶಿವಕಾರ್ತಿಕೇಯನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ: ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ

ತೆಲಂಗಾಣ, ಮಾ.23: ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾದ ಭೀಕರ ರಸ್ತೆ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಒಬ್ಬ ಬಾಲಕ ಓಡುತ್ತಾ ರಸ್ತೆ ದಾಟಲು ಯತ್ನಿಸುವಾಗ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು, ಅವನು ಸ್ಪಲ್ಪ ದೂಎಕ್ಕೆ ಹೋಗಿ ಬಿದ್ದಿರುವ ದೃಶ್ಯ ಸೆರೆಯಾಗಿದೆ. ಇನ್ನು ಈ ವಿಡಿಯೋವನ್ನು @KarnatakaPortfolio ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ವರದಿಗಳ ಪ್ರಕಾರ, ಈ ಬಾಲಕ 11 ವರ್ಷದ ಅನಿರುದ್ಧ ಎಂದು ಹೇಳಲಾಗುತ್ತಿದ್ದು, ಘಟನೆ ತೆಲಂಗಾಣ ರಾಜ್ಯದ ಯಾದಾದ್ರಿ ಭುವನಗಿರಿ ಜಿಲ್ಲೆಯ ಪಾಲಾಡುಗು ಗ್ರಾಮದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಇನ್ನು ಈ ಬಾಲಕನ್ನು ಯಾವ ಊರಿನವರು ಹಾಗೂ ಆತನ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇನ್ನು ಆ ಬಾಲಕನ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಕೆಲವರು ಬಾಲಕನ ನಿರ್ಲಕ್ಷ್ಯವನ್ನು ಹೊಣೆಮಾಡಿದರೆ, ಇನ್ನೂ ಕೆಲವರು ಕಾರಿನ ಅತಿವೇಗ (ಸುಮಾರು 109 ಕಿಮೀ/ಗಂ)ವೇ ಪ್ರಮುಖ ಕಾರಣ ಎಂದು ವಾದಿಸುತ್ತಿದ್ದಾರೆ. ಈ ದುರ್ಘಟನೆ ರಸ್ತೆ ಸುರಕ್ಷತೆ ಎಲ್ಲರ ಜವಾಬ್ದಾರಿಯಾಗಿದೆ ಎಂಬುದನ್ನು ಮತ್ತೆ ನೆನಪಿಸುತ್ತದೆ. ಚಾಲಕರು ವೇಗ ನಿಯಂತ್ರಿಸಿಕೊಂಡು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಪಾದಚಾರಿಗಳು, ವಿಶೇಷವಾಗಿ ಮಕ್ಕಳು, ರಸ್ತೆ ದಾಟುವಾಗ ಜಾಗ್ರತೆ ವಹಿಸುವುದು ಅತ್ಯಂತ ಅಗತ್ಯ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯೂಯಾರ್ಕ್​​ ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ

ನ್ಯೂಯಾರ್ಕ್​, ಮಾರ್ಚ್​ 23:ನ್ಯೂಯಾರ್ಕ್​ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ವಿಮಾನ ಟ್ರಕ್​ಗೆ ಡಿಕ್ಕಿ ಹೊಡೆದಿರುವ ಘಟನೆ ವರದಿಯಾಗಿದೆ. ವಿಮಾನ ನಿಲ್ದಾಣದ ರನ್‌ವೇ 4 ರಲ್ಲಿ ಏರ್ ಕೆನಡಾ ಎಕ್ಸ್‌ಪ್ರೆಸ್ ಮತ್ತು ಅಗ್ನಿಶಾಮಕ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.ವಿಮಾನ ನಿಲ್ದಾಣದಲ್ಲಿ ಸ್ಥಳಾಂತರಿಸುವಿಕೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದನ್ನು ತೋರಿಸುವ ಡಿಕ್ಕಿಯ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Martyrs Day 2026: ಮಾರ್ಚ್‌ 23 ರಂದು ಆಚರಿಸಲಾಗುವ ಹುತಾತ್ಮರ ದಿನದ ಮಹತ್ವವೇನು ಗೊತ್ತಾ?

ಮಾರ್ಚ್‌ 23 ರಂದು ಆಚರಿಸಲಾಗುವ ಹುತಾತ್ಮರ ದಿನವು (Martyrs’ Day) ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದೆ. ಮಾರ್ಚ್ 23, 1931 ರಂದು, ಬ್ರಿಟಿಷ್ ಸರ್ಕಾರವು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಿತು. ಸಣ್ಣ ವಯಸ್ಸಿನಲ್ಲಿಯೇ  ಈ ಮೂವರು ಕ್ರಾಂತಿಕಾರಿಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ತಮ್ಮ ಧೈರ್ಯ ಮತ್ತು ದೇಶಭಕ್ತಿಯ ಮೂಲಕ, ಈ ಮೂವರು ಕ್ರಾಂತಿಕಾರಿಗಳು ದೇಶಾದ್ಯಂತ ಸ್ವಾತಂತ್ರ್ಯ ಹೋರಾಟದ ಹೊಸ ಚೈತನ್ಯವನ್ನು ಜಾಗೃತಗೊಳಿಸಿದರು. ಇವರ ಈ ತ್ಯಾಗ ಮತ್ತು ಬಲಿದಾನವನ್ನು ಹಾಗೂ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಪುತ್ರರು, ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸಲು ಮಾರ್ಚ್‌ 23 ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವೇನು ಎಂಬುದನ್ನು ತಿಳಿಯೋಣ ಬನ್ನಿ.

ಹುತಾತ್ಮರ ದಿನದ ಇತಿಹಾಸವೇನು?

ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕ್ರಾಂತಿಕಾರಿಗಳಾಗಿದ್ದಾರೆ.  ಅವರು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ನಡೆಸಿದ್ದಲ್ಲದೆ, ತಮ್ಮ ಆಲೋಚನೆಗಳ ಮೂಲಕ ದೇಶದ ಯುವಕರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವಂತೆ ಪ್ರೇರೇಪಿಸಿದರು. ಭಗತ್ ಸಿಂಗ್ ಸ್ವಾತಂತ್ರ್ಯವನ್ನು ತನ್ನ ಜೀವನದ ಗುರಿಯಾಗಿಸಿಕೊಂಡರು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಬ್ರಿಟಿಷರ ವಿರುದ್ಧ ಹಲವಾರು ಕ್ರಮಗಳನ್ನು ಕೈಗೊಂಡರು, ಅದು ಬ್ರಿಟಿಷ್ ಆಳ್ವಿಕೆಯ ಅಡಿಪಾಯವನ್ನು ಅಲುಗಾಡಿಸಿತು. ನಂತರ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ 1929 ರಲ್ಲಿ ಸೆಂಟ್ರಲ್‌ ಜೆಜಿಸ್ಲೇಟಿವ್‌ ಅಸೆಂಬ್ಲಿಯ ಮೇಲೆ ಬಾಂಬ್‌ ದಾಳಿ ಮಾಡಿದ ನಂತರ ಇವರನ್ನು ಜೈಲಿಗೆ ಕಳುಹಿಸಲಾಯಿತು. ಬಳಿಕ ಈ ಮೂವರು ಭಾರತ ಮಾತೆಯ ವೀರ ಪುತ್ರರಿಗೆ ಮರಣ ದಂಡಣೆಯನ್ನು ವಿಧಿಸಲಾಯಿತು ಮತ್ತು ಮಾರ್ಚ್‌ 23, 1931 ರಂದು ಈ ಮೂವರು ವೀರ ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು. ಗಲ್ಲಿಗೇರಿಸಿದಾಗ ಭಗತ್ ಸಿಂಗ್ ಮತ್ತು ಸುಖದೇವ್ ಕೇವಲ 23 ವರ್ಷ ವಯಸ್ಸಿನವರಾಗಿದ್ದರು,ರಾಜಗುರು ಅವರು ಕೇವಲ 22 ವರ್ಷದವರಾಗಿದ್ದರು. ಸಣ್ಣ ವಯಸ್ಸಿನಲ್ಲಿಯೇ ಇವರು ದೇಶಕ್ಕಾಗಿ ಮಾಡಿದ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಪ್ರತಿವರ್ಷ ಮಾರ್ಚ್‌ 23 ರಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ನೀರನ್ನು ಮಿತವಾಗಿ ಬಳಸುವ ಮೂಲಕ ಜೀವಜಲವನ್ನು ಸಂರಕ್ಷಿಸೋಣ

ಹುತಾತ್ಮರ ದಿನದ ಮಹತ್ವವೇನು?

  • ಹುತಾತ್ಮರ ದಿನದ ಮಹತ್ವ ಕೇವಲ ಭಾರತ ಮಾತೆಯ ವೀರ ಪುತ್ರರನ್ನು ನೆನಪಿಸಿಕೊಳ್ಳುವುದಲ್ಲ, ಬದಲಾಗಿ ಅವರ ಆದರ್ಶಗಳು ಮತ್ತು ಕನಸುಗಳನ್ನು ನನಸಾಗಿಸಲು ನಮ್ಮನ್ನು ಪ್ರೇರೇಪಿಸುವುದೂ ಆಗಿದೆ.
  • ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ತಮ್ಮ ದೇಶಕ್ಕಾಗಿ ಮಾಡಿದ ತ್ಯಾಗಗಳು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯ ಮೂಲವಾಗಿದೆ. ಈ ದಿನವು ಸ್ವಾತಂತ್ರ್ಯವು ಎಷ್ಟು ದುಬಾರಿ ಬೆಲೆಗೆ ಸಿಕ್ಕಿತು ಎಂಬುದನ್ನು ನೆನಪಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version