ಮೈದಾನದಲ್ಲೇ ಹೊಡೆದಾಡಿಕೊಂಡ್ರಾ ಭಾರತ- ಪಾಕ್ ಆಟಗಾರ್ತಿಯರು? ವೈರಲ್ ವಿಡಿಯೋದ ಅಸಲಿಯತ್ತೇನು? – Kannada News | Fake AI Video Debunked: India Women Thrash Pakistan in T20 WC 2026 Clash

ಜೂನ್ 14 ರಂದು 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ( Women’s T20 World Cup) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ಮಹಿಳಾ ತಂಡಗಳ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯವನ್ನು ಭಾರತ ಮಹಿಳಾ ತಂಡ ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಆದಾಗ್ಯೂ ಪಂದ್ಯ ಆರಂಭಕ್ಕೂ ಮುನ್ನ ಅಂದರೆ ಟಾಸ್ ಸಮಯದಲ್ಲಿ ಹಾಗೂ ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರ್ತಿಯರು ಶೇಕ್​ಹ್ಯಾಂಡ್ ಮಾಡದಿರುವುದು ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಹೊರತುಪಡಿಸಿದರೆ ಬೇರೆ ಯಾವ ದುರ್ಘಟನೆಯೂ ಪಂದ್ಯದ ವೇಳೆ ನಡೆದಿರಲಿಲ್ಲ. ಆದರೆ ಪಂದ್ಯ ಮುಗಿದ ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಉಭಯ ತಂಡಗಳ ಆಟಗಾರ್ತಿಯರು ಪರಸ್ಪರ ಕೈಕೈ ಮಿಲಾಯಿಸುತ್ತಿರುವಂತೆ ಚಿತ್ರಿತವಾಗಿತ್ತು.

ಭಾರತ- ಪಾಕ್ ಆಟಗಾರ್ತಿಯರ ನಡುವೆ ಜಗಳ?

ವಿಡಿಯೋದಲ್ಲಿ ಇರುವುದೇನು ಎಂಬುದನ್ನು ನೋಡುವುದಾದರೆ… ಭಾರತ ತಂಡ ಬ್ಯಾಟಿಂಗ್‌ ಮಾಡುವ ವೇಳೆ ಸ್ಟ್ರೈಕ್​ನಲ್ಲಿದ್ದ ಬ್ಯಾಟರ್ ಬಳಿ ಬಂದ ಪಾಕಿಸ್ತಾನ ತಂಡದ ಬೌಲರ್ ಆಕ್ರಮಣಕಾರಿಯಾಗಿ ಏನನ್ನೋ ಹೇಳಿದ್ದು ಮಾತ್ರವಲ್ಲದೆ ಅವರನ್ನು ತಳ್ಳುತ್ತಾರೆ. ಇದರಿಂದ ಕೋಪಗೊಂಡ ಭಾರತ ಬ್ಯಾಟರ್, ಪಾಕ್ ಬೌಲರ್​ನ ಕುತ್ತಿಗೆ ಕೈಹಾಕಿ ದೂರಕ್ಕೆ ತಳ್ಳುತ್ತಾರೆ. ಇದ್ದಕ್ಕಿದ್ದಂತೆ ಉಭಯ ತಂಡಗಳ ಆಟಗಾರ್ತಿಯರ ನಡುವೆ ಜಗಳ ಶುರುವಾಗುತ್ತದೆ. ಇದನ್ನು ಗಮನಿಸಿದ ಅಂಪೈರ್‌ಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುತ್ತಾರೆ.

AI ವಿಡಿಯೋ ವೈರಲ್

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮುಗಿದ ಬೆನ್ನಲ್ಲೇ ಈ ಹೊಡೆದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಪಂದ್ಯದಲ್ಲಿ ನಿಜವಾಗಿಯೂ ಇಂತಹ ಭಯಾನಕ ಘಟನೆ ನಡೆದಿದೆಯೇ ಎಂದು ಹಲವರು ಆಶ್ಚರ್ಯಪಟ್ಟರು. ಏಕೆಂದರೆ ಇಡೀ ಪಂದ್ಯದಲ್ಲಿ ಆ ರೀತಿಯ ಘಟನೆ ನಡೆದಿರಲಿಲ್ಲ. ಇದಾದ ಬಳಿಕ ಈ ವಿಡಿಯೋ ಹಿಂದಿರುವ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕ ಈ ವಿಡಿಯೋ ನಕಲಿಯಾಗಿದ್ದು, ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಿದ ಕ್ಲಿಪ್ ಎಂಬುದು ದೃಢಪಟ್ಟಿದೆ.

ಪಂದ್ಯ ಹೀಗಿತ್ತು

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಬರ್ಮಿಂಗ್ಹ್ಯಾಮ್​ನಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 170 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಆ ಬಳಿಕ 171 ರನ್‌ಗಳ ಬೃಹತ್ ಗುರಿ ಬೆನ್ನಟ್ಟಲು ಮೈದಾನಕ್ಕೆ ಇಳಿದ ಪಾಕಿಸ್ತಾನ, ಭಾರತದ ಸ್ಟಾರ್ ಸ್ಪಿನ್ನರ್ ದೀಪ್ತಿ ಶರ್ಮಾ ದಾಳಿಗೆ ನಲುಗಿ ಕೇವಲ 106 ರನ್‌ಗಳಿಸಲಷ್ಟೇ ಶಕ್ತವಾಗಿ 64 ರನ್‌ಗಳ ಅಂತರದಿಂದ ಭಾರಿ ಸೋಲನ್ನು ಅನುಭವಿಸಿತು. ಈ ಪಂದ್ಯದಲ್ಲಿ ದೀಪ್ತಿ 5 ವಿಕೆಟ್​ಗಳ ಗೊಂಚಲು ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಎಎಫ್ ಅಧಿಕಾರಿಯ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ, ಬಲವಂತದ ಮತಾಂತರ – Kannada News | IAF officer;s wife drugged, raped, forced to convert religion in Nagpur

ನಾಗ್ಪುರ, ಜೂನ್ 16: ಮಹಾರಾಷ್ಟ್ರದ ನಾಗ್ಪುರದಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಅಧಿಕಾರಿಯ ಪತ್ನಿ ಅತ್ಯಾಚಾರ, ಬ್ಲ್ಯಾಕ್‌ಮೇಲ್ ಮತ್ತು ಬಲವಂತದ ಮತಾಂತರದ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಿದ್ದಾರೆ. ನನ್ನನ್ನು ಬಿಟ್ಟುಬಿಡಿ ಎಂದು 24 ವರ್ಷದ ಯುವತಿಯೊಬ್ಬಳು ಅಳುತ್ತಾ ಕೈಬಿಡಿಸಿಕೊಳ್ಳಲು ಹೆಣಗಾಡುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ಈ ಆಘಾತಕಾರಿ ವೀಡಿಯೊ ಭಾರತೀಯ ವಾಯುಪಡೆ (IAF) ಅಧಿಕಾರಿಯೊಬ್ಬರ ಪತ್ನಿಯ ಮೇಲೆ ನಡೆದಿರುವ ಭೀಕರ ದೌರ್ಜನ್ಯದ ಪ್ರಮುಖ ಸಾಕ್ಷಿಯಾಗಿದೆ. ನಾಗ್ಪುರದಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಲಾಗಿದ್ದು, ಆ ದೃಶ್ಯಗಳನ್ನು ವೀಡಿಯೊ ಮಾಡಿ ಬ್ಲ್ಯಾಕ್‌ಮೇಲ್ ಮೂಲಕ ಲಕ್ಷಾಂತರ ರೂ. ಸುಲಿಗೆ ಮಾಡಲಾಗಿದೆ. ಜೊತೆಗೆ ಆಕೆಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾನವೀಯತೆಯನ್ನೇ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ವಾಯುಪಡೆ ಅಧಿಕಾರಿಯ ಪತ್ನಿಯಾಗಿರುವ 24 ವರ್ಷದ ಯುವತಿಯನ್ನು ಆಕೆಯ ಹಳೆಯ ಸಹಪಾಠಿಯೇ ಅತ್ಯಾಚಾರ ನಡೆಸಿ, ಬ್ಲ್ಯಾಕ್‌ಮೇಲ್ ಮಾಡಿ, ಬಲವಂತವಾಗಿ ಮತಾಂತರಗೊಳಿಸಲು ಯತ್ನಿಸಿರುವ ಘಟನೆ ವರದಿಯಾಗಿದೆ. ಈ ಘಟನೆ ನಡೆದು ಒಂದು ವರ್ಷ ಕಳೆದಿದ್ದರೂ, ಇತ್ತೀಚೆಗೆ ಮಹಿಳೆ ಧೈರ್ಯ ಮಾಡಿ ತನ್ನ ಪತಿಗೆ ವಿಷಯ ತಿಳಿಸಿದ ನಂತರ ಜೂನ್ 13 ರಂದು ನಾಗ್ಪುರದ ಸೋನೆಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಮುಖ ಆರೋಪಿ ಅಯಾಜ್ ಮದಾರೆ ಮತ್ತು ಅವರ ಸಹಚರ ಅಮೀನ್ ಶೇಖ್ ಎಂಬುವವರನ್ನು ಬಂಧಿಸಿದ್ದಾರೆ. ಮತಾಂತರದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಮೌಲಾನಾ ಅವರನ್ನು ವಿಶೇಷ ತಂಡಗಳು ಹುಡುಕುತ್ತಿವೆ. ಎಫ್‌ಐಆರ್ ಪ್ರಕಾರ, 2025ರ ಫೆಬ್ರವರಿ 8ರಂದು ಅಯಾಜ್ ಮದಾರೆ ಹೋಟೆಲ್‌ನಲ್ಲಿ ಐಎಎಫ್ ಅಧಿಕಾರಿಯ ಪತ್ನಿಗೆ ಪಾನೀಯವನ್ನು ಕುಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ವೃದ್ಧೆಗೂ ಇಲ್ಲ ಭದ್ರತೆ; ಕಣ್ಣು ಕಾಣದ 70 ವರ್ಷದ ದೆಹಲಿಯ ಮಹಿಳೆ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯಕ್ಕೆ ಯತ್ನ

ಆಕೆ ಪ್ರಜ್ಞಾಹೀನಳಾಗಿದ್ದಾಗ ಆಕ್ಷೇಪಾರ್ಹ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಂಡು, ಆಕೆಯ ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ, ಸಾಮಾಜಿಕ ಮಾಧ್ಯಮದಲ್ಲಿ ಹರಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬೆದರಿಕೆಗಳ ಮೂಲಕ ಆತ ತನ್ನ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಸುಮಾರು 4 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಸಂತ್ರಸ್ತೆ ಅಳುತ್ತಾ ಬೇಡಿಕೊಳ್ಳುತ್ತಿರುವುದು ಕಂಡುಬರುತ್ತದೆ. ನಂತರ ಆತ ತನ್ನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.

ಸಂತ್ರಸ್ತೆ ಪೊಲೀಸರಿಗೆ ನೀಡಿರುವ ಸಾಕ್ಷ್ಯಚಿತ್ರದಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲಿ ಆರೋಪಿ ಅಯಾಜ್ ಮದಾರೆ ಯುವತಿಯ ಕೈಗಳನ್ನು ಬಲವಂತವಾಗಿ ಹಿಡಿದುಕೊಂಡು ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಾ ಆಕೆಯ ಮುಖದ ಮೇಲೆ ನಿರಂತರವಾಗಿ ಊದುತ್ತಿರುವುದು ಕಂಡುಬಂದಿದೆ. ಈ ವೇಳೆ ಯುವತಿ “ನನ್ನನ್ನು ಬಿಟ್ಟುಬಿಡಿ” ಎಂದು ಚೀರಾಡುತ್ತಾ ಆತನ ಹಿಡಿತದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾಳೆ. ಈ ಕೃತ್ಯದ ನಂತರ ಆಕೆ ಮತಾಂತರಗೊಂಡಿದ್ದಾಳೆ ಎಂದು ಆರೋಪಿಗಳು ಘೋಷಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮಾಜಿ ಸೈನಿಕನ ಮರ್ಡರ್ ಮಿಸ್ಟ್ರಿ: FSL​​ ವರದಿಯನ್ನೇ ತಿರುಚಿದ್ರು, ಸುಪನಾತಿ ಸುಮಾಳ ಅಸಲಿಯತ್ತು ಬಯಲು

ಆರೋಪಿ ಅಯಾಜ್ ಪ್ಲಾಟ್ ಖರೀದಿಸುವ ನೆಪದಲ್ಲಿ ಯುವತಿಯನ್ನು ವರ್ಧಾ ರಸ್ತೆಯಲ್ಲಿರುವ ಹೋಟೆಲ್‌ಗೆ ಕರೆಸಿದ್ದನು. ಅಲ್ಲಿ ಆಕೆಗೆ ನೀಡಿದ ಜ್ಯೂಸ್‌ನಲ್ಲಿ ಮಾದಕ ದ್ರವ್ಯ ಬೆರೆಸಿ, ಆಕೆ ಪ್ರಜ್ಞೆ ತಪ್ಪಿದಾಗ ಅತ್ಯಾಚಾರ ಎಸಗಿದ್ದನು. ಅಲ್ಲದೆ ಆ ಕೃತ್ಯದ ಅಶ್ಲೀಲ ವೀಡಿಯೊ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದನು. ಆ ವೀಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪಿ, ಯುವತಿಯಿಂದ ಸುಮಾರು 3.09 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿದ್ದಲ್ಲದೆ ನಿರಂತರವಾಗಿ ಲೈಂಗಿಕ ಶೋಷಣೆ ನಡೆಸಿದ್ದನು.

ಕಳೆದ ಮೇ ತಿಂಗಳಲ್ಲಿ ಆರೋಪಿ ಅಯಾಜ್ ಆ ಸಂತ್ರಸ್ತೆಯನ್ನು ನಾಗ್ಪುರದ ಕಲ್ಮೇಶ್ವರ್ ಎಂಬ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದನು. ಅಲ್ಲಿ ಆಕೆಯನ್ನು ಅಮೀನ್ ಶೇಖ್ ಮತ್ತು ಮಧ್ಯಪ್ರದೇಶದ ಮೌಲಾನಾಗೆ ಪರಿಚಯಿಸಲಾಗಿತ್ತು. ಮೂವರೂ ಸೇರಿ ಯುವತಿಯ ಇಷ್ಟಕ್ಕೆ ವಿರುದ್ಧವಾಗಿ ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಆಕೆಯ ಮತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಆಕೆಗೆ ಅಯಾಜ್ ಜೊತೆ ಮದುವೆಯಾಗಿದೆ ಎಂದು ಘೋಷಿಸಿದ್ದರು. ಅದರ ನಂತರವೂ ಆಕೆಯ ಮೇಲೆ ಮತ್ತೊಮ್ಮೆ ಅತ್ಯಾಚಾರಕ್ಕೆ ಯತ್ನಿಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರು ಅತ್ಯಾಚಾರ, ಲೈಂಗಿಕ ಕಿರುಕುಳ, ಬ್ಲ್ಯಾಕ್‌ಮೇಲ್, ದರೋಡೆ, ಬಲವಂತದ ಮತಾಂತರ ತಡೆ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗಳಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದ್ದು, ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಭರತನಾಟ್ಯ ಮಾಡಿದ ಪುಟ್ಟ ಕಂದಮ್ಮ – Kannada News | A little girl performed Bharatanatyam with tiny steps, video goes viral

ಪುಟಾಣಿಗಳೇ (little kids) ಹಾಗೆ, ಹಾಡು ಕೇಳಿದ ಕೂಡಲೇ ಯಾವುದೇ ಹಿಂಜರಿಕೆಯಿಲ್ಲದೆ ಸ್ಟೆಪ್ ಹಾಕಲು ಶುರು ಮಾಡ್ತಾರೆ. ಇನ್ನು ಸ್ಟೇಜ್ ಮೇಲೆ ಯಾರಾದ್ರೂ ಡ್ಯಾನ್ಸ್ ಮಾಡುತ್ತಿದ್ದರೆ ವೇದಿಕೆಯ ಮುಂಭಾಗದಲ್ಲಿ ಪುಟ್ಟ ಮಕ್ಕಳು ಡ್ಯಾನ್ಸ್ ಮಾಡ್ತಾರೆ. ಇಂತಹ ಸಾಕಷ್ಟು ವಿಡಿಯೋ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಪುಟಾಣಿಯೊಂದು ತನ್ನ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಭರತನಾಟ್ಯ ಮಾಡುತ್ತಿದೆ. ಈ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.

ನ್ಯಾಹ ಗೌರಂಗಿ (Nyha Gaurangi) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟಾಣಿಯೊಂದು ತನ್ನ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಭರತನಾಟ್ಯ ಸ್ಟೆಪ್ ಹಾಕುತ್ತಿರುವುದನ್ನು ಕಾಣಬಹುದು. ಈ ಪುಟಾಣಿಯ ತಾಯಿ ತನ್ನ ಮಗಳನ್ನು ಡ್ಯಾನ್ಸ್ ಮಾಡಲು ಹುರಿದುಂಬಿಸಿದ್ದಾಳೆ. ಆ ಬಳಿಕ ಮೆಲ್ಲನೆ ಡ್ಯಾನ್ಸ್ ಮಾಡುತ್ತಾ ಬೀಳುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಫ್ರಿಡ್ಜ್‌ನಲ್ಲಿದ್ದ ಮೊಸರನ್ನು ಕದ್ದು ತಿಂದ ಪುಟಾಣಿ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪ್ರೊಫೆಷನಲ್ ಡ್ಯಾನ್ಸರ್ ಎಂದರೆ, ಮತ್ತೊಬ್ಬರು ಮತ್ತೆ ಮತ್ತೆ ನೋಡಬೇಕೆನಿಸುವ ವಿಡಿಯೋ ಎಂದು ಹೇಳಿದ್ದಾರೆ. ಇನ್ನೊಬ್ಬರು, ತಾಯಿ ಮೊದಲ ಶಿಕ್ಷಕಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:08 pm, Tue, 16 June 26

Source link

ಗುಂಡಿ ಇಲ್ಲದ ರಸ್ತೆ ನಿರ್ಮಾಣ ರಾಕೆಟ್ ಸೈನ್ಸಾ? ಮೊದಲ ಸಭೆಯಲ್ಲೇ ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಕ್ಲಾಸ್ – Kannada News | Minister krishna byre gowda Class to Officers first Meeting W about Pothole In bengaluru

ಬೆಂಗಳೂರು, (ಜೂನ್ 16): ಖಾತೆ ಹಂಚಿಕೆಯಾಗಿ ಹಲವು ದಿನಗಳ ಬಳಿಕ ಕೊನೆಗೂ ಸಚಿವ ಕೃಷ್ಣ ಬೈರೇಗೌಡ (krishna byre gowda) ಅವರು ಬೆಂಗಳೂರು (Bengaluru) ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಂಡಿದ್ದಾರೆ. ಪೂರ್ಣ ಪ್ರಮಾಣದ ಅಧಿಕಾರ ನೀಡದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರ ಸ್ವೀಕಾರದಿಂದ ದೂರ ಉಳಿದಿದ್ದ ಅವರು, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ನಡೆದ ಸಂಧಾನದ ಬಳಿಕ ಇಂದು (ಜೂನ್ 16) ಜಿಬಿಎ ಅಧಿಕಾರಿಗಳ ಸಭೆ ನಡೆಸಿಸುವ ಮೂಲಕ ಅಧಿಕಾರ ವಹಿಸಿಕೊಂಡರು. ಇನ್ನು ಮೊದಲ ಸಭೆಯಲ್ಲೇ ಪ್ರಮುಖವಾಗಿ ಬೆಂಗಳೂರಿನ ರಸ್ತೆ ಗುಂಡಿ ಹಾಗೂ ಕಸದ ವಿಚಾರವನ್ನು ಪ್ರಸ್ತಾಪಿಸಿ ಅಧಿಕಾರಿಗಳ ಚಳಿ ಬಿಡಿಸಿದರು. ಬೆಂಗಳೂರಿನ ರಸ್ತೆ ಮಾಡೋದು ಏನು ರಾಕೆಟ್ ಸೈನ್ಸಾ? ನೆರೆ ರಾಜ್ಯಗಳಲ್ಲಿ ರಸ್ತೆ ಗುಂಡಿಗಳು ಇಲ್ಲದ ರಸ್ತೆಗಳನ್ನು ನೋಡಿ ಎಂದು ತರಾಟೆಗೆ ತೆಗೆದುಕೊಂಡರು.

ಮುಖ್ಯಾಂಶಗಳು

  • ಖಾತೆ ಗೊಂದಲ ನಡುವೆಯೂ ಜಿಬಿಎ ಅಧಿಕಾರಿಗಳ ಸಭೆ ನಡೆಸಿದ ಸಚಿವ ಕೃಷ್ಣಬೈರೇಗೌಡ
  • ಜಿಬಿಎ ಐದು ಪಾಲಿಕೆಯ ಮುಖ್ಯ ಆಯುಕ್ತರ ಸಭೆ ಮಾಡಿದ ಸಚಿವ
  • ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಕಚೇರಿಯಲ್ಲಿ ನಡೆದ ಮೊದಲ ಸಭೆ
  • ಮೊದಲ ಸಭೆಯಲ್ಲೇ ರಸ್ತೆ ಗುಂಡಿಗಳ ಬಗ್ಗೆ ಅಧಿಕಾರಿಗಳಿಗೆ ತರಾಟೆ

ರಸ್ತೆ ಗುಂಡಿಗಳು ಇಲ್ಲದೇ ರಸ್ತೆ ಮಾಡೋದಕ್ಕೆ‌ ಆಗೋದಿಲ್ವಾ?

ರಸ್ತೆ ಗುಂಡಿಗಳು ಇಲ್ಲದೇ ರಸ್ತೆ ಮಾಡೋದಕ್ಕೆ‌ ಆಗೋದಿಲ್ವಾ? ಬೆಂಗಳೂರಿನ ರಸ್ತೆ ಮಾಡೋದು ಏನು ರಾಕೆಟ್ ಸೈನ್ಸಾ. ನೆರೆ ರಾಜ್ಯಗಳಲ್ಲಿ ಪಾತ್ ಹೋಲ್ ಇಲ್ಲದ ರಸ್ತೆಗಳನ್ನು ನೋಡಿ. ಸದಾ ಮಳೆ ಬೀಳುವಂತ ರಾಜ್ಯಗಳಲ್ಲೂ ರಸ್ತೆಗಳು ಚೆನ್ನಾಗಿ ಇವೆ. ನಿಮಗೆ ಯಾಕೆ ಉತ್ತಮ ರಸ್ತೆ ಮಾಡೋದಕ್ಕೆ ಆಗುತ್ತಿಲ್ಲ. ನಿಮಗೆ ಏನಾದರೂ ಕಡಿಮೆ ಬಜೆಟ್ ಕೊಟ್ಟಿದ್ದೇವಾ ಎಂದು ಜಿಬಿಎ ಇಂಜಿನಿಯರ್​​ಗಳನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ನೋಡಿ: ಸುರ್ಜೇವಾಲ ಸಂಧಾನ ಸಕ್ಸಸ್​​: 13 ದಿನಗಳ ನಂತರ ಖಾತೆ ವಹಿಸಿಕೊಂಡ ಕೃಷ್ಣ ಭೈರೇಗೌಡ

ಸಭೆ ಬಳಿಕ ಕೃಷ್ಣಬೈರೇಗೌಡ ಹೇಳಿದ್ದೇನು?

ಮೊದಲ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೃಷ್ಣಬೈರೇಗೌಡ, ಇವತ್ತು ನಾನು ಬೆಂಗಳೂರಿನ ಅಧಿಕಾರಿಗಳೊಂದಿಗೆ ಐದು ನಗರ ಪಾಲಿಕೆ ಆಯುಕ್ತರೊಂದಿಗೆ ಸಭೆ ನಡೆಸಿದ್ದೇನೆ.ಇಲ್ಲೇ ಶಾಸಕನಾಗಿರುವುದರಿಂದ ನನಗೆ ಗೊತ್ತಿರೋದು ಇರುತ್ತೆ. ಕೆಲವೊಂದು ಆಡಳಿತಾತ್ಮಕ ವಿಚಾರಗಳು ನಾನು‌ ತಿಳಿಯೋದು ಇರುತ್ತೆ . ಹಾಗಾಗಿ ಇವತ್ತಿನಿಂದ ಸಭೆ ಮೂಲಕ‌ ಕೆಲಸ ಆರಂಭ ಮಾಡಿದ್ದೇನೆ. ಬೆಂಗಳೂರಿನ ಸಮಸ್ಯೆ ನಮಗೆಲ್ಲ ಗೊತ್ತಿರೋ ವಿಚಾರ. ಬೆಂಗಳೂರು ನಮ್ಮ ಇಡೀ‌ ದೇಶ ಹಾಗೂ ಪ್ರಪಂಚಕ್ಕೆ ಬೇಕಾಗಿರೋ ಆಸ್ತಿ‌. ಬೆಂಗಳೂರಿನಲ್ಲಿ ವಾಸ ಮಾಡುವ ಒಂದೂವರೆ ಕೋಟಿ ಜನರಿಗೆ ಇದು ಆಶ್ರಯ ಆಗಿದೆ. ಇಲ್ಲಿ ವಾಸ ಮಾಡುವ ಒಂದೂವರೆ ಕೋಟಿ‌ ಜನ ನಮಗೆ ಮುಖ್ಯ . ಇಲ್ಲಿ ವಾಸ ಮಾಡುವ ಜನರ ದೈನಂದಿನ ಜೀವನ ಸುಧಾರಣೆ ಆಗಬೇಕು. ರಸ್ತೆ,ಟ್ರಾಫಿಕ್, ಗಾರ್ಬೆಜ್, ಬೆಂಗಳೂರಿನ ಸೌಂದರ್ಯ, ಸ್ವಚ್ಚತ್ತೆ ಹೀಗೆ ಹಲವು ಸಮಸ್ಯೆಗಳಿವೆ . ಒಂದೇ ಬಿಬಿಎಂಪಿ ಇದ್ರೆ ಇವನೆಲ್ಲ ಸುಧಾರಣೆ ತರೋದು ಕಷ್ಟ ಅಂತ ಇದ್ದೀಗಾ ಐದು ನಗರ ಪಾಲಿಕೆ ಮಾಡಿ ಆಡಳಿತ ವಿಕೇಂದ್ರೀಕರಣ ಮಾಡಲಾಗಿದೆ. ಕಳೆದ ಮೂರು ವರ್ಷಗಳ ಸತತ ಪ್ರಯತ್ನದಿಂದ ಡಿಕೆ ಶಿವಕುಮಾರ್ ಲಾಂಗ್ ಟರ್ಮ್ ಯೋಜನೆಗಳಿಗೆ ರೂಪುರೇಷೆ ತಂದಿದ್ದಾರೆ. ಇಲ್ಲಿ ಬಹಳ ನುರಿತ ಅಧಿಕಾರಿಗಳು ಇದ್ದಾರೆ, ಎಕ್ಸ್ ಪರ್ಟ್ ಇಂಜಿನಿಯರ್ಸ್ ಇದ್ದಾರೆ ಎಂದರು.

ಕಸದ ಬಗ್ಗೆ ಕೃಷ್ಣ ಬೈರೇಗೌಡ್ರು ಹೇಳಿದ್ದಿಷ್ಟು

ಕಸದ ವಿಚಾರದಲ್ಲಿ ಜನರು ಸಹಕಾರ ಕೊಡಬೇಕು. ವ್ಯವಸ್ಥೆಯಲ್ಲಿಯೂ ಲೋಪದೋಷ ಇದೆ. ಆದರೆ ಜನರ ಸಹಕಾರವೂ ಅಗತ್ಯ. ಎಲ್ಲವನ್ನ ಒಂದೇ ದಿನ ಮಾಡ್ತೇನೆಂದು ನಾನು ಹೇಳಿಲ್ಲ. ಕಸದ ಟೆಂಡರ್ ವಿಚಾರವಾಗಿ ಈಗಾಗಲೇ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಆ ಸಮಿತಿ ಎಲ್ಲವನ್ನೂ ಗಮನಿಸುತ್ತೆ‌. ಸಮಿತಿ‌ ಏನಾದರೂ ಸಲಹೆ ಸೂಚನೆ ಕೊಟ್ಟರೆ ಪಾಲಿಸುತ್ತೇವೆ. ಸಮಿತಿ ಎಲ್ಲವನ್ನು ಪರಿಶೀಲನೆ ಮಾಡುತ್ತೆ ಎಂದು ಸ್ಪಷ್ಟಪಡಿಸಿದರು.

ಕೈಲಾದ ಮಟ್ಟಿಗೆ ಬೆಂಗಳೂರಿಗೆ ಅಳಿಲು ಸೇವೆ ಮಾಡುತ್ತೇವೆ

ನಮ್ಮ ಕೈಲಾದ ಮಟ್ಟಿಗೆ ಬೆಂಗಳೂರಿಗೆ ಅಳಿಲು ಸೇವೆ ಮಾಡುತ್ತೇವೆ. ರಸ್ತೆ ಗುಂಡಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಜನರ ಭಾವನೆ ನನಗೂ ಗೊತ್ತಿದೆ. ಸರಿಯಾಗಿ ರಸ್ತೆ ಗುಂಡಿಯನ್ನ ಮುಚ್ಚಬೇಕು. ರಸ್ತೆ ಗುಂಡಿ ಇಲ್ಲದ ಹಾಗೆ ರಸ್ತೆ ನಿರ್ಮಾಣ ಮಾಡಲು‌ ಆಗಲ್ವಾ ಎಂದು ನಾನು ಅಧಿಕಾರಿಗಳಿಗೆ ಪ್ರಶ್ನೆ ಕೇಳಿದ್ದೇನೆ. ರಸ್ತೆಯನ್ನ ಸರಿಯಾಗಿ‌ ನಿರ್ಮಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಹೇಳಿದರು.

ಖಾತೆ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು

ಇನ್ನು ಖಾತೆ ಬಗ್ಗೆ ಸ್ಪಷ್ಟನೆ ನೀಡಿರುವ ಕೃಷ್ಣಬೈರೇಗೌಡ, ನನ್ನ ಅಭಿಪ್ರಾಯವನ್ನ ನಾನು ಸಿಎಂ‌ ಹಾಗೂ ವರಿಷ್ಠರಿಗೆ ತಿಳಿಸಿದ್ದೇನೆ. ಇಲ್ಲಿ ಸಮರ್ಪಕವಾಗಿ ಕೆಲಸ ಆಡಳಿತ ನಡೆಸಲು ಪೂರ್ಣ ಖಾತೆ ಅವಶ್ಯವಿದೆ ಎಂದು ಸಿಎಂ ಹಾಗೂ ವರಿಷ್ಠರಿಗೆ ಹೇಳಿದ್ದೇನೆ. ಕ್ಲಾರಿಟಿ ಸಿಕ್ಕ ಬಳಿಕವೇ ಅಧಿಕಾರ ಸ್ವೀಕಾರ ಮಾಡಬೇಕು ಅಂದುಕೊಂಡಿದ್ದೆ. ಆದ್ರೆ, ಸಿಎಂ ವಿವೇಚನೆ ಬಳಸಿ ತೀರ್ಮಾನ ಮಾಡಿದ್ದಾರೆ. ನಮ್ಮ ಅರ್ಹತೆಗೆ ತಕ್ಕ ಖಾತೆ ಸಿಗಲಿದೆ ಅಂದುಕೊಳ್ಳುತ್ತೇನೆ. ಎಲ್ಲವೂ ಎಲ್ಲಾ ಸಮಯದಲ್ಲೂ ಸಿಗುವುದಿಲ್ಲ. ಈಗ ವರಿಷ್ಠರ ಸೂಚನೆ ಮೇರೆಗೆ ಇಲಾಖೆಯ ಜವಾಬ್ದಾರಿ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.

Source link

ಸತತ 2 ಸೋಲುಗಳ ನಂತರ ಭಾರತ ಎ ತಂಡದಲ್ಲಿ ಮಹತ್ವದ ಬದಲಾವಣೆ – Kannada News | India A Team Suffers Setbacks in Sri Lanka; IPL Star Ashok Sharma Replaces Injured Yudhvir Singh

ತ್ರಿಕೋನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿರುವ ಭಾರತ ಎ ತಂಡಕ್ಕೆ (India A team ) ಸತತ ಎರಡು ಸೋಲುಗಳ ಆಘಾತ ಎದುರಾಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿದ್ದ ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿತ್ತು. ಆದರೆ ಆ ಬಳಿಕ ನಡೆದ ಎರಡು ಪಂದ್ಯಗಳಲ್ಲಿ ಭಾರತ ಎ ತಂಡಕ್ಕೆ ಸೋಲಿನ ಆಘಾತ ಎದುರಾಗಿದೆ. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ತಂಡವನ್ನು ಎದುರಿಸಿದ್ದ ಭಾರತ ಎ ತಂಡ ಬೃಹತ್ ಮೊತ್ತವನ್ನ ಕಲೆಹಾಕಿತ್ತಾದರೂ ಕಳಪೆ ಬೌಲಿಂಗ್ ಹಾಗೂ ಮಳೆಯಿಂದಾಗಿ 5 ರನ್​ಗಳ ಸೋಲು ಕಂಡಿತ್ತು. ಅದಾದ ಬಳಿಕ ನಡೆದ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೂಪರ್ ಓವರ್​ನಲ್ಲಿ ಲಂಕಾ ವಿರುದ್ಧ ಸೋಲು ಕಂಡಿದೆ. ಈ ಸತತ ಸೋಲುಗಳ ನಡುವೆ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಲಾಗಿದೆ.

ಅಶೋಕ್ ಶರ್ಮಾಗೆ ಅವಕಾಶ

ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುವ ಅಶೋಕ್ ಶರ್ಮಾ ತಮ್ಮ ವೇಗದ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಶೋಕ್ ಎರಡು ಬಾರಿ 150 ಕಿಮೀ ವೇಗವನ್ನು ದಾಟಿ ಬೌಲ್ ಮಾಡಿದ್ದರು. ಈ ಮೂಲಕ 2026 ರ ಐಪಿಎಲ್​ನಲ್ಲಿ ಅತಿ ವೇಗದ ಚೆಂಡನ್ನು ಬೌಲ್ ಮಾಡಿದ ವೇಗಿ ಎಂಬ ದಾಖಲೆಯನ್ನು ನಿರ್ಮಿಸಿದ್ದರು. ಈಗ ಆ ಪ್ರದರ್ಶನದ ಆಧಾರದ ಮೇಲೆ, ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಗಾಗಿ ಅಶೋಕ್ ಶರ್ಮಾ ಅವರನ್ನು ಭಾರತ ಎ ತಂಡದಲ್ಲಿ ಸೇರಿಸಲಾಗಿದೆ.

ಯುಧ್ವೀರ್ ಸಿಂಗ್​ಗೆ ಗಾಯ

ಇನ್ನು ಯುಧ್ವೀರ್ ಸಿಂಗ್ ಅವರನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಜೂನ್ 13 ರಂದು ಬೌಲಿಂಗ್ ಮಾಡುವಾಗ ಯುಧ್ವೀರ್ ಸಿಂಗ್ ಅವರ ಬಲ ಭುಜದಲ್ಲಿ ನೋವು ಕಾಣಿಸಿಕೊಂಡಿತು. ಇದಕ್ಕೂ ಮೊದಲು, ಜೂನ್ 11 ರಂದು ನಡೆದ ಫೀಲ್ಡಿಂಗ್ ಅವಧಿಯಲ್ಲಿಯೂ ಅವರು ಇದೇ ರೀತಿಯ ನೋವನ್ನು ಅನುಭವಿಸಿದ್ದರು. ಹೀಗಾಗಿ ಯುಧ್ವೀರ್ ಅವರಿಗೆ ಗಾಯದಿಂದ ಚೇತರಿಸಿಕೊಳ್ಳಲು ಸಮಯಬೇಕಾಗಿರುವುದರಿಂದ ಬಿಸಿಸಿಐ ವೈದ್ಯಕೀಯ ತಂಡವು ಅವರಿಗೆ ವಿಶ್ರಾಂತಿ ನೀಡಲು ಸೂಚಿಸಿದೆ ಎಂದಿದೆ.

ತ್ರಿಕೋನ ಸರಣಿಗೆ ಭಾರತ ಎ ತಂಡ ಪ್ರಕಟ; ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ

ನವೀಕೃತ ಭಾರತ ಎ ತಂಡ: ತಿಲಕ್ ವರ್ಮಾ (ನಾಯಕ), ರುತುರಾಜ್ ಗಾಯಕ್‌ವಾಡ್ (ಉಪನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ಆಯುಷ್ ಬಡೋನಿ, ನಿಶಾಂತ್ ಸಿಂಧು, ಸೂರ್ಯಾಂಶ್ ಶೆಡ್ಜ್, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್‌ಕೀಪರ್), ಕುಮಾರ್ ಕುಶಾಗ್ರಾ (ವಿಕೆಟ್‌ಕೀಪರ್), ವಿಪ್ರಾಜ್ ನಿಗಂ, ಯಶ್ ಠಾಕೂರ್, ಅನ್ಶುಲ್ ಕಾಂಬೋಜ್, ಅರ್ಷದ್ ಖಾನ್, ಅನುಕೂಲ್ ರಾಯ್ ಮತ್ತು ಅಶೋಕ್ ಶರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KPCL Recruitment 2026: ಕರ್ನಾಟಕ ವಿದ್ಯುತ್ ನಿಗಮದಲ್ಲಿ ನೇಮಕಾತಿ; 65,000 ರೂ. ಮಾಸಿಕ ಗೌರವಧನ! – Kannada News | KPCL Assistant Law Officer Recruitment 2026: 2 Posts, Apply by June 22

ಕರ್ನಾಟಕ ವಿದ್ಯುತ್ ನಿಗಮದಲ್ಲಿ ನೇಮಕಾತಿ

ಬೆಂಗಳೂರು: ಕಾನೂನು ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಕರ್ನಾಟಕ ಸರ್ಕಾರದ ಸ್ವಾಮ್ಯದ ಪ್ರಮುಖ ಉದ್ಯಮವಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ನಿಗಮದ ಕಾನೂನು ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸಲು ಒಟ್ಟು 02 ಸಹಾಯಕ ಕಾನೂನು ಅಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ ಜೂನ್​ 22 ರ ಸಂಜೆ 5:30 ರೊಳಗಾಗಿ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರಗಳು (Vacancy Details):

  • ನೇಮಕಾತಿ ಸಂಸ್ಥೆ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL)
  • ಹುದ್ದೆಯ ಹೆಸರು: ಸಹಾಯಕ ಕಾನೂನು ಅಧಿಕಾರಿ (Assistant Law Officer)
  • ಒಟ್ಟು ಹುದ್ದೆಗಳು: 02
  • ಉದ್ಯೋಗ ಸ್ಥಳ: ಪ್ರಧಾನ ಕಚೇರಿ, ಬೆಂಗಳೂರು
  • ನೇಮಕಾತಿ ವಿಧಾನ: ಗುತ್ತಿಗೆ ಆಧಾರ (Contract Basis)

ಶೈಕ್ಷಣಿಕ ಅರ್ಹತೆ ಮತ್ತು ಅನುಭವ (Eligibility Criteria):

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ನಿಗದಿತ ಅರ್ಹತೆಗಳನ್ನು ಹೊಂದಿರಬೇಕು:

  • ಅಂಗೀಕೃತ ವಿಶ್ವವಿದ್ಯಾಲಯದಿಂದ (ಮೂರು ಅಥವಾ ಐದು ವರ್ಷಗಳ) ಕಾನೂನು ಪದವಿ (Degree in Law) ಪಡೆದಿರಬೇಕು.
  • ಕಾನೂನು ಪದವಿಯಲ್ಲಿ (ಒಟ್ಟು ಸರಾಸರಿ) ಕನಿಷ್ಠ ಶೇಕಡಾ 40 ರಷ್ಟು ಅಂಕಗಳನ್ನು ಗಳಿಸಿರಬೇಕು.
  • ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ಕಡ್ಡಾಯವಾಗಿ ನೊಂದಣಿ ಪ್ರಮಾಣ ಪತ್ರ ಹಾಗೂ ಮೂಲ ಗುರುತಿನ ಕಾರ್ಡ್ ಹೊಂದಿರಬೇಕು.
  • ಆದ್ಯತೆ: ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣ (KSAT) ಹಾಗೂ ಉನ್ನತ ನ್ಯಾಯಾಲಯದಲ್ಲಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳ ವೃತ್ತಿಯಲ್ಲಿ ಅನುಭವವಿರುವವರಿಗೆ ಮತ್ತು ಆಂಗ್ಲ ಭಾಷೆಯ ಕಂಪ್ಯೂಟರ್ ಹಾಗೂ ಬೆರಳಚ್ಚು ಅನುಭವವುಳ್ಳವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ವಯೋಮಿತಿ (Age Limit)

  • ಕನಿಷ್ಠ ವಯಸ್ಸು: 28 ವರ್ಷಗಳು
  • ಗರಿಷ್ಠ ವಯಸ್ಸು: 56 ವರ್ಷಗಳು

ವೇತನ ಮತ್ತು ಇತರ ಸೌಲಭ್ಯಗಳು (Salary Details):

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 65,000 ರೂ. ಗಳ ಸ್ಥಿರ ಮಾಸಿಕ ಸಂಭಾವನೆ ನೀಡಲಾಗುವುದು (ನಿಯಮಾವಳಿಗಳ ಪ್ರಕಾರ ಆದಾಯ ತೆರಿಗೆ ಕಡಿತಕ್ಕೆ ಒಳಪಟ್ಟಿರುತ್ತದೆ). ಇದಕ್ಕದೇ ಕರ್ತವ್ಯ ನಿರ್ವಹಣೆಗೆ ಅಗತ್ಯವಿರುವ ಪ್ರಯಾಣಗಳಿಗೆ ನಿಯಮಾನುಸಾರ TA/DA ಸೌಲಭ್ಯ ಒದಗಿಸಲಾಗುವುದು.

ಆಯ್ಕೆ ವಿಧಾನ ಮತ್ತು ಗುತ್ತಿಗೆ ಅವಧಿ:

ಅಭ್ಯರ್ಥಿಗಳನ್ನು ನೇರ ಸಂದರ್ಶನ (Interview) ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು. ಈ ಗುತ್ತಿಗೆ ನೇಮಕಾತಿಯು ಗರಿಷ್ಠ 02 ವರ್ಷಗಳ ಅವಧಿಯಾಗಿದ್ದರೂ, ಪ್ರಸ್ತುತ ಆರಂಭದಲ್ಲಿ 06 ತಿಂಗಳ ಅವಧಿಗೆ ಸೀಮಿತವಾಗಿರುತ್ತದೆ. ಅಭ್ಯರ್ಥಿಯ ಕಾರ್ಯಕ್ಷಮತೆ ತೃಪ್ತಿಕರವಾಗಿದ್ದಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಅವಧಿಯನ್ನು ವಿಸ್ತರಿಸಲಾಗುವುದು.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ಮೊದಲು ಕೆಪಿಸಿಎಲ್ ಅಧಿಕೃತ ವೆಬ್‌ಸೈಟ್ kpcl.karnataka.gov.in ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ವಿದ್ಯಾರ್ಹತೆ, ವಯಸ್ಸು ಮತ್ತು ಅನುಭವಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇ-ಮೇಲ್ ಐಡಿ kpclcontractappt@gmail.com ಗೆ ಕಳುಹಿಸಬೇಕು.

ನಿಗದಿತ ದಿನಾಂಕ ಮತ್ತು ಸಮಯದ ನಂತರ ಬರುವ ಇ-ಮೇಲ್ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಸಂದರ್ಶನಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳು ಹಾಗೂ ಸ್ವಯಂ ದೃಢೀಕೃತ (Self-attested) ಜೆರಾಕ್ಸ್ ಪ್ರತಿಗಳನ್ನು ತರಬೇಕಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಟೈಗರ್ ಅಂತಿಮ ಹಂತಕ್ಕೆ; ಶಿಂಧೆ ಬಣ ಸೇರಲಿದ್ದಾರಾ ಉದ್ಧವ್ ಠಾಕ್ರೆ ಬಣದ 7 ಸಂಸದರು? – Kannada News | Operation Tiger; 7 MPs from Uddhav Thackeray’s Shiv Sena camp may switch to Eknath Shinde faction

ಮುಂಬೈ, ಜೂನ್ 16: ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಎದುರಿಸುತ್ತಿರುವ ಬಂಡಾಯದ ಬೆನ್ನಲ್ಲೇ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಬಣಕ್ಕೂ ದೊಡ್ಡ ಆಘಾತ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ‘ಆಪರೇಷನ್ ಟೈಗರ್’ (Operation Tiger) ಬಗ್ಗೆ ಚರ್ಚೆ ನಡೆಯುತ್ತಿತ್ತು. ಶಿವಸೇನೆ ಏಕನಾಥ್ ಶಿಂಧೆ ಬಣವು ಆಕ್ರಮಣ ಮುಂದುವರಿಸಿದ್ದರೂ ಉದ್ಧವ್ ಠಾಕ್ರೆ ಬಣದ ಕೆಲವು ಸಂಸದರು ಮತ್ತು ಶಾಸಕರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ, ಆಪರೇಷನ್ ಟೈಗರ್ ಬಗ್ಗೆ ಚರ್ಚೆ ತೀವ್ರಗೊಂಡಿದೆ.

ಉದ್ಧವ್ ಠಾಕ್ರೆ ಬಣ ಶೀಘ್ರದಲ್ಲೇ ಮತ್ತೊಂದು ದೊಡ್ಡ ಹಿನ್ನಡೆಯನ್ನು ಎದುರಿಸಬಹುದು ಎಂದು ಊಹಿಸಲಾಗುತ್ತಿದೆ. ಆಪರೇಷನ್ ಟೈಗರ್ ಯಾವಾಗ ನಡೆಯುತ್ತದೆ ಎಂಬುದರ ಕುರಿತು ಯಾವುದೇ ನಿರ್ದಿಷ್ಟ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ. ಇದರ ನಡುವೆ ಇದೀಗ ನಡೆಯುತ್ತಿರುವ ಚರ್ಚೆಗಳು ಠಾಕ್ರೆ ಬಣದ ಭಯವನ್ನು ಹೆಚ್ಚಿಸಿವೆ. ಇದಲ್ಲದೆ, ಭಾನುವಾರ ಮಾತೋಶ್ರೀಯಲ್ಲಿ ಉದ್ಧವ್ ಠಾಕ್ರೆ ಕರೆದಿದ್ದ ಸಭೆಯಲ್ಲಿ ಠಾಕ್ರೆ ಬಣದ 9 ಸಂಸದರಲ್ಲಿ ಕೇವಲ 4 ಮಂದಿ ಮಾತ್ರ ಭಾಗವಹಿಸಿದ್ದರು, 5 ಮಂದಿ ಗೈರುಹಾಜರಾಗಿದ್ದರು.

ಏನಿದು ಆಪರೇಷನ್ ಟೈಗರ್?:

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಾಯಕರು ‘ಆಪರೇಷನ್ ಟೈಗರ್’ ಕುರಿತು ಸಂಚಲನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಏಕನಾಥ್ ಶಿಂಧೆ ಬಣದ ವಿಧಾನಪರಿಷತ್ ಸದಸ್ಯ ಕೃಪಾಲ್ ತುಮಾನೆ ನೀಡಿರುವ ಹೇಳಿಕೆ ಉದ್ಧವ್ ಠಾಕ್ರೆ ಕ್ಯಾಂಪ್‌ನಲ್ಲಿ ನಡುಕ ಹುಟ್ಟಿಸಿದೆ. “ಆಸ್ಪತ್ರೆಯಲ್ಲಿ ಆಪರೇಷನ್‌ ಮಾಡುವ ಮುನ್ನ ರೋಗಿಗೆ ಎಲ್ಲ ರೀತಿಯ ತಪಾಸಣೆ ನಡೆಸಿ ವರದಿ ಸಿದ್ಧಪಡಿಸಿಕೊಳ್ಳುವಂತೆ, ನಮ್ಮ ‘ಆಪರೇಷನ್ ಟೈಗರ್’ ಪ್ರಕ್ರಿಯೆಯೂ ಸಂಪೂರ್ಣ ಮುಕ್ತಾಯವಾಗಿದೆ. ಕೇವಲ ವೈದ್ಯರೊಂದಿಗೆ ಶಸ್ತ್ರಚಿಕಿತ್ಸೆಯ ದಿನಾಂಕ ನಿಗದಿಪಡಿಸುವುದಷ್ಟೇ ಬಾಕಿ ಇದೆ. ಉದ್ಧವ್ ಬಣದ 7 ಸಂಸದರು ಮತ್ತು 16 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನವೇ ಈ ಆಪರೇಷನ್ ನಡೆಯಲಿದೆ” ಎಂದು ಶಿಂಧೆ ಬಣದ ನಾಯಕ ಕೃಪಾಲ್ ತುಮಾನೆ ಹೇಳಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಬಳಿಕ ಮಹಾರಾಷ್ಟ್ರದಲ್ಲೂ ರಾಜಕೀಯ ಹೈಡ್ರಾಮ, ಏಕನಾಥ್ ಶಿಂಧೆ ಬಣದ ಸಂಪರ್ಕದಲ್ಲಿದ್ದಾರಾ ಶಿವಸೇನೆಯ 7 ಸಂಸದರು

ಕೇಂದ್ರ ಸಚಿವ ಪ್ರತಾಪ್ ರಾವ್ ಜಾಧವ್ ಕೂಡ ಉದ್ಧವ್ ಬಣದ ಹಲವು ಸಂಸದರು ತಮ್ಮ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದು, ನಮ್ಮೊಂದಿಗೆ ಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಉದ್ಧವ್ ಠಾಕ್ರೆ ಬಣದ 9 ಸಂಸದರಿದ್ದಾರೆ. ಪಕ್ಷಾಂತರ ನಿರೋಧಕ ಕಾಯ್ದೆಯಡಿ ಅನರ್ಹತೆಯಿಂದ ಬಚಾವಾಗಬೇಕಾದರೆ ಕನಿಷ್ಠ 7 ಸಂಸದರು ಒಟ್ಟಿಗೆ ಪಕ್ಷ ತೊರೆದು ಹೋಗಬೇಕಾಗುತ್ತದೆ. ಈ 7 ಸಂಸದರು ಈಗಾಗಲೇ ದೆಹಲಿಯಲ್ಲಿ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಭೀತಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉದ್ಧವ್ ಠಾಕ್ರೆ, ಭಾನುವಾರ ತಮ್ಮ ಮುಂಬೈನ ನಿವಾಸ ‘ಮಾತೋಶ್ರೀ’ಯಲ್ಲಿ ಸಂಸದರ ತುರ್ತು ಸಭೆ ಕರೆದಿದ್ದರು. ಆದರೆ, ಒಟ್ಟು 9 ಸಂಸದರಲ್ಲಿ ಕೇವಲ 4 ಸಂಸದರು ಮಾತ್ರ ಖುದ್ದಾಗಿ ಹಾಜರಾಗಿದ್ದು, ಉಳಿದ 5 ಸಂಸದರು ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಉದ್ಧವ್ ಠಾಕ್ರೆ ಜೂನ್ 22ರಂದು ಶಾಸಕರ ಮತ್ತೊಂದು ಸಭೆಯನ್ನು ಕರೆದಿದ್ದಾರೆ. ಠಾಕ್ರೆ ಬಣದ ಶಿವಸೇನೆ (UBT) ನಾಯಕ ಸಂಜಯ್ ರಾವತ್ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಹಾಗೂ ಶಿಂಧೆ ಬಣದ ದಾವೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ನಮ್ಮ ಎಲ್ಲಾ 9 ಸಂಸದರು ಒಗ್ಗಟ್ಟಾಗಿದ್ದಾರೆ ಮತ್ತು ಉದ್ಧವ್ ಅವರ ಬೆನ್ನಿಗೆ ನಿಂತಿದ್ದಾರೆ. ಅವರು ನಮ್ಮ ಮೇಲೆ ‘ಆಪರೇಷನ್ ಟೈಗರ್’ ಮಾಡಲು ಬಂದರೆ, ನಾವು ಅವರ ವಿರುದ್ಧ ‘ಆಪರೇಷನ್ ವುಲ್ಫ್’ ಆರಂಭಿಸುತ್ತೇವೆ. ತೃಣಮೂಲ ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆಯನ್ನು ಒಡೆಯುವುದೇ ಬಿಜೆಪಿಯ ಏಕೈಕ ಕೆಲಸವಾಗಿದೆ,” ಎಂದು ಸಂಜಯ್ ರಾವತ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹಾ ಭೂಕಂಪ: ಟಿಎಂಸಿ ಬಂಡಾಯ ಸಂಸದರಿಂದ ಹೊಸ ಪಕ್ಷ ಸ್ಥಾಪನೆ, ಎನ್‌ಡಿಎ ಜೊತೆ ವಿಲೀನ ಸಾಧ್ಯತೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಂತರ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನಲ್ಲಿ 50ಕ್ಕೂ ಹೆಚ್ಚು ಶಾಸಕರು ಮತ್ತು 20ಕ್ಕೂ ಹೆಚ್ಚು ಸಂಸದರು ದೀದಿ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದಾರೆ. ಈ ಬಿಕ್ಕಟ್ಟಿನ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ ಉದ್ಧವ್ ಬಣಕ್ಕೆ ಕೈಕೊಟ್ಟು ಸಂಸದರು ಎನ್‌ಡಿಎ (NDA) ಒಕ್ಕೂಟದತ್ತ ಮುಖ ಮಾಡಿದರೆ, ಅದು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ಇಂಡಿಯ ಒಕ್ಕೂಟಕ್ಕೆ ದೊಡ್ಡ ಪೆಟ್ಟು ನೀಡಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ರಿಲೀಸ್​​ಗೂ ಮೊದಲೇ ಸೇಫ್ ಆದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ – Kannada News | Samantha’s ‘Maa Inti Bangaram’ is a Pre Release Hit! Producers Already in Profit

ಸಮಂತಾ ರುತ್ ಪ್ರಭು (Samantha) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಜೂನ್ 19ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ಸಿನಿಮಾ ಬಗ್ಗೆ ಈಗ ಒಂದು ಅಚ್ಚರಿಯ ಮಾಹಿತಿ ರಿವೀಲ್ ಆಗಿದೆ. ಈ ಸಿನಿಮಾ ರಿಲೀಸ್​​ಗೂ ಮೊದಲೇ ಸೇಫ್ ಆಗಿದೆಯಂತೆ. ಈ ಮೂಲಕ ಮುಂದೆ ಬರೋದೆಲ್ಲವೂ ಲಾಭದ ರೂಪದಲ್ಲಿ ನಿರ್ಮಾಪಕರ ಜೇಬಿಗೆ ಇಳಿಯಲಿದೆ. ಸಿನಿಮಾದ ನಿರ್ಮಾಪಕರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಮಾ ಇಂಟಿ ಬಂಗಾರಂ’ ಆ್ಯಕ್ಷನ್ ಕಾಮಿಡಿ ಸಿನಿಮಾ. ಈ ಸಿನಿಮಾದಲ್ಲಿ ಸಮಂತಾಗೆ ಎರಡು ಶೇಡ್​​ನ ಪಾತ್ರ ಇದೆ. ಮನೆಯ ಒಳಗೆ ಸಾಮಾನ್ಯ ಸಂಪ್ರದಾಯಸ್ಥ ಕುಟುಂಬದವರಂತೆ ಕಂಡರೂ ವಿಲನ್​​ಗಳಿಗೆ ವಿಲನ್ ಇವರು. ಕನ್ನಡದ ದಿಗಂತ್ ಮಂಚಾಲೆ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಥಿಯೇಟರಿಕಲ್ ಹಕ್ಕುಗಳು ಒಳ್ಳೆಯ ಬೆಲೆಗೆ ಮಾರಾಟ ಆಗಿವೆ ಎಂದು ವರದಿ ಆಗಿದೆ.

‘ಮಾ ಇಂಟಿ ಬಂಗಾರಂ’ ಸಿನಿಮಾ ಟ್ರೇಲರ್ ಮೂಲಕವೇ ಭರವಸೆ ಮೂಡಿಸಿದೆ. ಹೀಗಾಗಿ, ಇದರ ಹಕ್ಕನ್ನು ಪಡೆಯಲು ಸಾಕಷ್ಟು ಮಂದಿ ಸರತಿಸಾಲಿನಲ್ಲಿ ನಿಂತಿದ್ದರು. ಈ ಕಾರಣದಿಂದ ಚಿತ್ರದ ಹಕ್ಕು ಒಳ್ಳೆಯ ಬೆಲೆಗೆ ಮಾರಾಟ ಆಗಿವೆ. ಒಟಿಟಿ, ಸ್ಯಾಟಲೈಟ್​​ ಹಕ್ಕು ಮಾರಾಟದಿಂದಲೂ ಸಿನಿಮಾಗೆ ಭಾರೀ ಹಣ ಹರಿದು ಬಂದಿದೆ. ಹೀಗಾಗಿ, ಸಿನಿಮಾ ನಿರ್ಮಾಪಕರು ಈಗಲೇ ಲಾಭ ಕಾಣುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?

‘ಸಿನಿಮಾ ರಿಲೀಸ್ ಆಗುವ ಮುನ್ನವೇ ನಾವು ಹೂಡಿಕೆ ಮಾಡಿದ ಸಂಪೂರ್ಣ ಬಂಡವಾಳ ಮರಳಿ ಪಡೆದಿದ್ದೇವೆ. ನಮ್ಮ ಚಿತ್ರದ ಮೇಲೆ ಇಡೀ ಮಾರುಕಟ್ಟೆ ಇಟ್ಟಿರುವ ನಂಬಿಕೆಗೆ ಇದು ಸಾಕ್ಷಿ. ಮಹಿಳಾ ಪ್ರಧಾನ ತೆಲುಗು ಸಿನಿಮಾಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹಾಗೂ ವಿವಿಧ ಪ್ರಾಂತ್ಯಗಳ ವಿತರಕರಿಂದ ಇಷ್ಟೊಂದು ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವುದು ನಿಜಕ್ಕೂ ಹೆಮ್ಮೆ ತಂದಿದೆ’ ಎಂದಿದ್ದಾರೆ ಹಿಮಾಂಕ್ ದುವ್ವುರು.
‘ಪ್ರಸ್ತುತ ಮಾರುಕಟ್ಟೆಯಲ್ಲಿ ಮಹಿಳಾ ಪ್ರಧಾನ ಚಿತ್ರವೊಂದಕ್ಕೆ ಈ ಮಟ್ಟದ ಬೆಂಬಲ ಸಿಕ್ಕಿರುವುದು ಒಂದು ದೊಡ್ಡ ಕಮರ್ಷಿಯಲ್ ಸಿಗ್ನಲ್. ಚಿತ್ರದ ಹಕ್ಕುಗಳನ್ನು ಮಾರಲು ಆರಂಭದಲ್ಲೇ ಪ್ಯಾಕೇಜ್ ಮಾಡಲಾಗಿತ್ತು, ಖರೀದಿದಾರರನ್ನು ಮುಂಚಿತವಾಗಿಯೇ ಸಂಪರ್ಕಿಸಲಾಗಿತ್ತು’ ಎಂದಿದ್ದಾರೆ ಅವರು. ಸದ್ಯ ಈ ವಿಷಯ ಸಮಂತಾ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಸರ್ವಂ ಎಐ ಈಗ ಯುನಿಕಾರ್ನ್ ಕಂಪನಿಗಳ ಸಾಲಿನಲ್ಲಿ; ಹೂಡಿಕೆ ಮಾಡಿದ ಎಚ್​ಸಿಎಲ್​ಗೂ ಷೇರುಪೇಟೆಯಲ್ಲಿ ಸುಗ್ಗಿ – Kannada News | Sarvam AI of Bengaluru becomes unicorn company after series B funding round led by HCLTech

ಬೆಂಗಳೂರು, ಜೂನ್ 16: ಸಿಲಿಕಾನ್ ಸಿಟಿ ಮೂಲದ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್‌ಅಪ್ ಕಂಪನಿಯಾದ ‘ಸರ್ವಮ್ ಐಐ’ (Sarvam AI) ಈಗ ಯೂನಿಕಾರ್ನ್ ಕಂಪನಿಗಳ ಸಾಲಿಗೆ ಸೇರ್ಪಡೆಯಾಗಿದೆ. ಐಟಿ ಕ್ಷೇತ್ರದ ಹೆಚ್‌ಸಿಎಲ್‌ಟೆಕ್ (HCLTech) ನೇತೃತ್ವದ ಸೀರೀಸ್-ಬಿ (Series B) ಫಂಡಿಂಗ್ ರೌಂಡ್‌ನಲ್ಲಿ ಬರೋಬ್ಬರಿ 234 ಮಿಲಿಯನ್ ಡಾಲರ್ (ಸುಮಾರು ₹1,950 ಕೋಟಿ) ಹೂಡಿಕೆಯನ್ನು ಗಳಿಸಿದೆ. ಈ ಭರ್ಜರಿ ಹೂಡಿಕೆಯೊಂದಿಗೆ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು 1.5 ಬಿಲಿಯನ್ ಡಾಲರ್ (ಸುಮಾರು ₹12,500 ಕೋಟಿ) ದಾಟಿದ್ದು, ಭಾರತದ ಹೊಚ್ಚಹೊಸ ‘ಯೂನಿಕಾರ್ನ್’ (Unicorn) ಸ್ಟಾರ್ಟ್‌ಅಪ್ ಆಗಿ ಹೊರಹೊಮ್ಮಿದೆ.

ಈ ಹೂಡಿಕೆ ಸುತ್ತಿನಲ್ಲಿ ಜಾಗತಿಕ ಐಟಿ ದೈತ್ಯ ಕಂಪನಿಯಾದ ಹೆಚ್‌ಸಿಎಲ್‌ಟೆಕ್​ನೊಂದೇ (HCLTech) 150 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಈ ಮೂಲಕ ಸರ್ವಮ್ AI ಕಂಪನಿಯಲ್ಲಿ ಶೇ. 10.46 ರಷ್ಟು ಪಾಲನ್ನು (Stake) ಪಡೆದುಕೊಂಡಿದೆ. ಈ ಸುತ್ತಿನಲ್ಲಿ ಬೆಸ್ಸೆಮರ್ ವೆಂಚರ್ ಪಾರ್ಟ್‌ನರ್ಸ್, ಖೋಸ್ಲಾ ವೆಂಚರ್ಸ್ ಮತ್ತು ಪೀಕ್ ಎಕ್ಸ್‌ವಿ ಪಾರ್ಟ್‌ನರ್ಸ್ (ಹಳೆಯ ಸಿಕ್ವೊಯಾ ಕ್ಯಾಪಿಟಲ್) ಕಂಪನಿಗಳು ಸಹ ಭಾಗವಹಿಸಿವೆ.

ಸರ್ವಂ ಕಂಪನಿಯ ಆದಾಯವು 2024-25ರ ಹಣಕಾಸು ವರ್ಷದಲ್ಲಿ ₹1.5 ಕೋಟಿಯಷ್ಟಿತ್ತು. ಒಂದು ವರ್ಷದಲ್ಲಿ (2025-26) ಭಾರಿ ಜಿಗಿತ ಕಂಡು ₹45.1 ಕೋಟಿಗೆ ತಲುಪಿದೆ. ಹೀಗಾಗಿ, ಈ ಕಂಪನಿ ಸುಸ್ಥಿರ ಬೆಳವಣಿಗೆ ಸಾಧಿಸುವ ವಿಶ್ವಾಸವು ಹೂಡಿಕೆದಾರರಲ್ಲಿ ಮೂಡಿಸಿದಂತಿದೆ. ಪರಿಣಾಮವಾಗಿ, ಬಹಳ ಕ್ಷಿಪ್ರ ವೇಗದಲ್ಲಿ ಸರ್ವಂ ಎಐ ಯೂನಿಕಾರ್ನ್ ಕಂಪನಿ ಮಟ್ಟಕ್ಕೆ ಬೆಳೆದಿದೆ.

ಇದನ್ನೂ ಓದಿ: ಎನ್​ಆರ್​ಐಗಳ ಡೆಪಾಸಿಟ್​ಗಳನ್ನು ಕೈಬೀಸಿ ಕರೆಯುತ್ತಿವೆ ಭಾರತದ ಹೊಸ FCNR(B) ದರಗಳು; ಅನಿವಾಸಿ ಭಾರತೀಯರಿಗೆ ಹೇಗೆ ಲಾಭ?

ಯೂನಿಕಾರ್ನ್ ಕಂಪನಿ ಎಂದರೆ ಏನು?

ಷೇರು ಮಾರುಕಟ್ಟೆಯಲ್ಲಿ ಇನ್ನೂ ಲಿಸ್ಟ್ ಆಗದ ಸ್ಟಾರ್ಟಪ್​ವೊಂದು ಮೌಲ್ಯದಲ್ಲಿ ಒಂದು ಬಿಲಿಯನ್ ಡಾಲರ್ ಮಟ್ಟ ದಾಟಿದಾಗ ಅದು ಯೂನಿಕಾರ್ನ್ ಎನಿಸುತ್ತದೆ. ಭಾರತದಲ್ಲಿ 130ಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳಿವೆ. ಅಮೆರಿಕ, ಚೀನಾ ಬಿಟ್ಟರೆ ಭಾರತವೇ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳನ್ನು ಹೊಂದಿರುವುದು.

‘ಸರ್ವಮ್ ಐಐ’ ವಿಶೇಷತೆ ಮತ್ತು ಸಾಧನೆ ಏನು?

ವಿವೇಕ್ ರಾಘವನ್ ಮತ್ತು ಪ್ರತ್ಯುಷ್ ಕುಮಾರ್ ಜಂಟಿಯಾಗಿ ಸ್ಥಾಪಿಸಿದ ಈ ಬೆಂಗಳೂರು ಮೂಲದ ಕಂಪನಿಯು ಕೇವಲ ಆ್ಯಪ್‌ಗಳನ್ನು ತಯಾರಿಸುವುದಿಲ್ಲ. ಬದಲಿಗೆ, ಭಾರತೀಯ ಭಾಷೆಗಳು ಮತ್ತು ಸ್ಥಳೀಯ ಸಂಸ್ಕೃತಿಗೆ ಹೊಂದಿಕೆಯಾಗುವಂತೆ ಮೊದಲಿನಿಂದಲೇ (From Scratch) AI ಮಾದರಿಗಳನ್ನು (Foundational Models) ಅಭಿವೃದ್ಧಿಪಡಿಸುತ್ತಿದೆ.

ಸದ್ಯ ಈ ಕಂಪನಿಯ AI ಪ್ಲಾಟ್‌ಫಾರ್ಮ್ ಪ್ರತಿದಿನ 20 ಲಕ್ಷಕ್ಕೂ ಹೆಚ್ಚು ಸಂಭಾಷಣೆಗಳನ್ನು (Interactions) ನಿಭಾಯಿಸುತ್ತಿದೆ ಮತ್ತು ದಿನಕ್ಕೆ 1 ಕೋಟಿಗೂ ಹೆಚ್ಚು ಎಪಿಐ (API) ಕರೆಗಳನ್ನು ಪ್ರೊಸೆಸ್ ಮಾಡುತ್ತಿದೆ.

ಕೇಂದ್ರ ಕೃಷಿ ಸಚಿವಾಲಯದ ಸಹಯೋಗದೊಂದಿಗೆ, ಈ ಕಂಪನಿಯ ಬಹುಭಾಷಾ ಧ್ವನಿ ತಂತ್ರಜ್ಞಾನವು (Multilingual Voice Agents) ದೇಶದ 1.7 ಕೋಟಿ ರೈತರಿಂದ ಯಶಸ್ವಿಯಾಗಿ ಮಾಹಿತಿ ಸಂಗ್ರಹಿಸಿದೆ.

ದೇಶದ ಪ್ರಮುಖ ವಿಮಾ ಕಂಪನಿಯೊಂದರ ಪಾಲಿಸಿ ನವೀಕರಣಕ್ಕಾಗಿ (Policy Renewal) ಈ AI ತಂತ್ರಜ್ಞಾನವು ದೇಶಾದ್ಯಂತ 4.5 ಕೋಟಿ ಗ್ರಾಹಕರನ್ನು ತಲುಪಿದೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಧೂಳೆಬ್ಬಿಸುತ್ತಿರುವ ಸ್ಪೇಸ್​ಎಕ್ಸ್; ಇಲಾನ್ ಮಸ್ಕ್ ಒಂದು ದಿನದಲ್ಲಿ ಗಳಿಸಿದ ಸಂಪತ್ತು ವಾರನ್ ಬಫೆಟ್​ನ ಒಟ್ಟೂ ಸಂಪತ್ತಿಗೆ ಸಮ

ಈ ಹೊಸ ಹಣವನ್ನು ಕಂಪನಿ ಎಲ್ಲಿ ಬಳಸಲಿದೆ?

ಕಂಪನಿಯ ಸಹ-ಸ್ಥಾಪಕ ಪ್ರತ್ಯುಷ್ ಕುಮಾರ್ ಅವರ ಪ್ರಕಾರ, ಸೀರೀಸ್-ಬಿ ರೌಂಡ್​ನಲ್ಲಿ ಬಂದ ಈ ಹೊಸ ಬಂಡವಾಳವನ್ನು ಭಾರತಕ್ಕೆಂದೇ ಪ್ರತ್ಯೇಕವಾದ ಸಾರ್ವಭೌಮ AI (Sovereign AI) ವ್ಯವಸ್ಥೆಯನ್ನು ಬಲಪಡಿಸಲು ಬಳಸಲಾಗುತ್ತದೆ.

  • ಮುಂದಿನ ಪೀಳಿಗೆಯ AI ಮಾದರಿಗಳು: ಕೋಡಿಂಗ್ (AI-assisted coding), ಸೈಬರ್ ಸೆಕ್ಯೂರಿಟಿ (Cybersecurity) ಮತ್ತು ಏಜೆಂಟಿಕ್ ಐಐ (Agentic AI – ಸ್ವತಂತ್ರವಾಗಿ ಕೆಲಸ ನಿರ್ವಹಿಸುವ ಎಐ) ಕ್ಷೇತ್ರಗಳಲ್ಲಿ ಹೊಸ ಸಂಶೋಧನೆ ನಡೆಸುವುದು.
  • ಜಾಗತಿಕ ತಂತ್ರಜ್ಞಾನಗಳಿಗೆ ಪೈಪೋಟಿ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಕ್ಲೋಡ್ (Claude) ಮತ್ತು ಕೋಡೆಕ್ಸ್ (Codex) ನಂತಹ ಸಾಫ್ಟ್‌ವೇರ್ ಇಂಜಿನಿಯರಿಂಗ್ ಸಹಾಯಕ ತಂತ್ರಜ್ಞಾನಗಳಿಗೆ ಭಾರತದಲ್ಲೇ ಪರ್ಯಾಯವನ್ನು ಸೃಷ್ಟಿಸುವುದು.
  • ಕಂಪ್ಯೂಟಿಂಗ್ ಮೂಲಸೌಕರ್ಯ: ಭಾರತದ ಒಳಗಡೆಯೇ ಸೂಪರ್ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ವಿಸ್ತರಿಸಲು ಎನ್‌ವಿಡಿಯಾದ ಅತ್ಯಾಧುನಿಕ ‘ಬ್ಲ್ಯಾಕ್‌ವೆಲ್’ (Blackwell-based AI compute clusters) ತಂತ್ರಜ್ಞಾನದ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ.

“ನಮ್ಮ ಧ್ವನಿಯನ್ನು ಅರ್ಥಮಾಡಿಕೊಳ್ಳುವ, ನಮ್ಮ ದಾಖಲೆಗಳನ್ನು ಓದುವ ಮತ್ತು ಪ್ರತಿಯೊಂದು ಉದ್ಯಮ ಹಾಗೂ ಸರ್ಕಾರಕ್ಕೂ ಕೈಗೆಟುಕುವ ವೆಚ್ಚದಲ್ಲಿ ಬುದ್ಧಿವಂತಿಕೆ ಸೇವೆಯನ್ನು ನೀಡುವ AI ಮಾದರಿಗಳನ್ನು ಭಾರತೀಯ ಮಟ್ಟದಲ್ಲಿ ರೂಪಿಸುವುದೇ ನಮ್ಮ ಗುರಿ” ಎಂದು ಸರ್ವಂ ಎಐ ಕಂಪನಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪೋಕ್ಸೋ ಕೇಸ್​: ವಚನಾನಂದ ಶ್ರೀಗೆ ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿ ಎಂದ ಹೈಕೋರ್ಟ್ – Kannada News | Vachanananda Swamiji pocso case: Karnataka High Court Unhappy on Davanagere Court Bail

ಬೆಂಗಳೂರು, (ಜೂನ್ 16): ಮಕ್ಕಳ ದುರ್ಬಳಕೆ ಹಾಗೂ ದೌರ್ಜನ್ಯ ಎಸಗಿದ ಆರೋಪದಡಿ ದಾವಣಗೆರೆ (Davanagere) ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ (Vachanananda Swamiji) ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಆದ್ರೆ, ದೂರು ದಾಖಲಾಗುವ ಮುನ್ನವೇ ದಾವಣಗೆರೆ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದ್ದು, ಇದಕ್ಕೆ ಕರ್ನಾಟಕ ಹೈಕೋರ್ಟ್ (karnataka High Court) ಅಸಮಾಧನ ವ್ಯಕ್ತಪಡಿಸಿದೆ. ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಬಾಲಕನ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ದೂರು ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಕೊಟ್ಟಿದ್ದಾರೆ. ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿಯಾಗಿದೆ. ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಮುಖ್ಯಾಂಶಗಳು

  • ಪೋಕ್ಸೋ ಕೇಸ್​ನಲ್ಲಿ ವಚನಾನಂದ ಶ್ರೀಗೆ ನಿರೀಕ್ಷಣಾ ಜಾಮೀನು ಹಿನ್ನೆಲೆ
  • ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಹೈಕೋರ್ಟ್​ಗೆ ಬಾಲಕನ ತಾಯಿ ಅರ್ಜಿ
  • ಸ್ವಾಮೀಜಿ ವಿರುದ್ಧ ಗಂಭೀರ ಸೆಕ್ಷನ್​​​ಗಳುಳ್ಳ ಪೋಕ್ಸೋ ಕೇಸ್ ದಾಖಲಾಗಿದೆ
  • ದೂರು ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಕೊಟ್ಟಿದ್ದಾರೆ
  • ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿ ಎಂದ ಹೈಕೋರ್ಟ್
  • ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ
  • ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ
  • ಅರ್ಜಿ ಸಂಬಂಧ ವಚನಾನಂದ ಸ್ವಾಮೀಜಿಗೆ ಹೈಕೋರ್ಟ್ ನೋಟಿಸ್

ಸ್ವಾಮೀಜಿ ವಿರುದ್ಧ ಗಂಭೀರ ಸೆಕ್ಷನ್​​​ಗಳುಳ್ಳ ಪೋಕ್ಸೋ ಕೇಸ್ ದಾಖಲಾಗಿದೆ. ಆದರೂ ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವಚನಾನಂದ ಸ್ವಾಮೀಜಿಗೆ ನೋಟಿಸ್ ನೀಡಿ ಮುಂದಿನ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿದೆ.

ಇದನ್ನೂ ಓದಿ: ವಚನಾನಂದಶ್ರೀ ವಿರುದ್ಧದ ಪೋಕ್ಸೋ ಪ್ರಕರಣದ ತನಿಖಾಧಿಕಾರಿ ವರ್ಗಾವಣೆ, ಕಾರಣವೇನು?

ಇನ್ನು ದಾವಣಗೆರೆ ಜಿಲ್ಲಾ ಕೋರ್ಟ್ ನೀಡಿರುವ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್​ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಹೈಕೋರ್ಟ್, ಸ್ವಾಮೀಜಿಯ ಜಾಮೀನು ರದ್ದುಗೊಳಿಸುತ್ತಾ ಅಥವಾ ಏನು ತೀರ್ಪು ನೀಡುತ್ತೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಈ ಪ್ರಕರಣದ ಬೆಳವಣಿಗೆಗಳು ಹೀಗಿವೆ

ಪಂಚಮಸಾಲಿ ಪೀಠದಿಂದ ಸ್ವಾಮೀಜಿ ಉಚ್ಛಾಟನೆ: ಏಪ್ರಿಲ್​ ಆರಂಭದಲ್ಲಿ ಹರಿಹರದ ಹನಗವಾಡಿ ಬಳಿಯ ಪಂಚಮಸಾಲಿ ಪೀಠದಲ್ಲಿ ನಡೆದ ಸಭೆಯಲ್ಲಿ 15 ಟ್ರಸ್ಟಿಗಳ ಪೈಕಿ 13 ಟ್ರಸ್ಟಿಗಳು ಭಾಗವಹಿಸಿ ನಿರ್ಣಯ ತೆಗೆದುಕೊಂಡು ಸ್ವಾಮೀಜಿಗಳನ್ನು ಮಠದ ಪೀಠದಿಂದ ಉಚ್ಛಾಟನೆ ಮಾಡಿದ್ದರು. ಇದಕ್ಕೆ ಕಾರಣವಾಗಿದ್ದು 2 ಪೀಠಗಳ ನಿರ್ವಹಣೆಯ ವಿಚಾರ. 2018ರಲ್ಲಿ ಶ್ರೀ ಅವರನ್ನು ಇಲ್ಲಿನ ಟ್ರಸ್ಟಿಗಳು ಜಗದ್ಗುರು ಮಾಡಿದ್ದರು. ಬಳಿಕ ಹಲವಾರು ಬಾರಿ ಎರಡು ಪೀಠಗಳ ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದರು. ಆದರೆ ಇದನ್ನು ವಚನಾನಂದ ಸ್ವಾಮೀಜಿ ಪಾಲಿಸದ ಆರೋಪದಲ್ಲಿ ಟ್ರಸ್ಟಿಗಳು ಸರ್ವಾನುಮತವಾಗಿ ಪದಚ್ಯುತಗೊಳಿಸಿದ್ದರು.

ವಚನಾನಂದ ಶ್ರೀಗಳ ವಿರುದ್ಧ ಮಠದ ಮಕ್ಕಳಿಂದ ದೂರು: ವಚನಾನಂದ ಸ್ವಾಮೀಜಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಹಿಂಸೆ ನೀಡುತ್ತಾರೆ ಎಂದು ಸ್ವತಃ ಮಕ್ಕಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯ ವಿಚಾರಣೆ ನಡೆಸಿದ್ದರು. ಅಲ್ಲದೇ ವಚನಾನಂದ ಸ್ವಾಮೀಜಿ ವಿರುದ್ಧ ಮಠದ ಬಾಲಕನೋರ್ವನ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಈಗಾಗಲೇ ಇದೇ ಪ್ರಕರಣದಲ್ಲಿ ಸ್ವಾಮೀಜಿಯ ವಿಚಾರಣೆ ನಡೆದು, ಮೆಡಿಕಲ್ ಟೆಸ್ಟ್ ಕೂಡ ನಡೆಸಲಾಗಿದೆ.

ನಿರೀಕ್ಷಣಾ ಜಾಮೀನು ಮಂಜೂರು: ಸ್ವಾಮೀಜಿ ವಿರುದ್ಧ ಮಕ್ಕಳ ದುರ್ಬಳಕೆ ಹಾಗೂ ದೌರ್ಜನ್ಯ ಎಸಗಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಸ್ವಾಮೀಜಿ, ಏಪ್ರಿಲ್ 21ರಂದು ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಜಿಲ್ಲಾ ನ್ಯಾಯಾಲಯ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version