ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ವನ್ಯಜೀವಿ ಬೇಟೆ: ಗೋವಾ ಸರ್ಕಾರಿ ನೌಕರನ ಬಂಧನ, ನಾಲ್ವರು ಪರಾರಿ – Kannada News | Kali Tiger Reserve Poaching: Goa Government Employee Arrested for Wildlife Hunting in Karnataka; 4 Absconding

ಬಂಧಿತ ಆರೋಪಿ ದಿಗಂಬರ್ ಗಾವ್ಡೆImage Credit source: The New Indian Express

ಬೆಂಗಳೂರು, ಜೂನ್ 16: ಕರ್ನಾಟಕ-ಗೋವಾ ಗಡಿಭಾಗದ ಕಾಳಿ ಹುಲಿ ಸಂರಕ್ಷಿತಾರಣ್ಯದ (Kali Tiger Reserve) ವ್ಯಾಪ್ತಿಯಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಜಾಲವನ್ನು ಭೇದಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಗೋವಾ ಸರ್ಕಾರದ ಸಾರಿಗೆ ಸಂಸ್ಥೆಯ ನೌಕರನೊಬ್ಬನನ್ನು ಬಂಧಿಸಿದ್ದಾರೆ. ಜೊಯಿಡಾ ತಾಲೂಕಿನ ಡಿಗ್ಗಿ ಸಮೀಪದ ಬೊಂಡೇಲಿ ಗ್ರಾಮದಲ್ಲಿ ಭಾನುವಾರ ಈ ಕಾರ್ಯಾಚರಣೆ ನಡೆದಿದೆ. ಬೇಟೆಗೆ ಸಹಕರಿಸಿದ ಸ್ಥಳೀಯ ಶೂಟರ್ ಹಾಗೂ ಗೋವಾದ ಮತ್ತಿಬ್ಬರು ಭದ್ರತಾ ಏಜೆನ್ಸಿ ಸಿಬ್ಬಂದಿ ಸೇರಿದಂತೆ ನಾಲ್ವರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಕಾಳಿ ಅರಣ್ಯದಲ್ಲಿ ವನ್ಯಜೀವಿ ಬೇಟೆಯಾಡುತ್ತಿದ್ದ ಜಾಲ ಭೇದಿಸಿದ ಅರಣ್ಯ ಇಲಾಖೆ.
  • ಗೋವಾ ಸಾರಿಗೆ ಸಂಸ್ಥೆಯ ಮೆಕ್ಯಾನಿಕ್ ಬಂಧನ.
  • ಮರಬೆಕ್ಕು ಹಾಗೂ ಇತರ ಮಾಂಸ ವಶ.

ಬಂಧಿತ ಆರೋಪಿಯನ್ನು ಗೋವಾ ಸರ್ಕಾರಿ ಸ್ವಾಮ್ಯದ ಕದಂಬ ಸಾರಿಗೆ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಜಯೇಂದ್ರ ದಿಗಂಬರ್ ಗಾವ್ಡೆ (45) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ ಈತನ ಹೆಡೆಮುರಿ ಕಟ್ಟಿದ್ದಾರೆ. ಇದೇ ವೇಳೆ ಕುಂಬಾರವಾಡ ವಲಯದ ಅರಣ್ಯ ಸಿಬ್ಬಂದಿ, ಬೇಟೆಗೆ ಬಳಸಲಾದ ಬಂದೂಕಿನ ಮಾಲೀಕ ಎನ್ನಲಾದ ಸುಭಾಷ್ ಮಿರಾಶಿ ಎಂಬಾತನ ಮನೆ ಮೇಲೆ ದಾಳಿ ನಡೆಸಿದ್ದು, ಆತನೂ ಸೇರಿದಂತೆ ಉಳಿದ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

ನಿಷೇಧಿತ ವನ್ಯಜೀವಿಗಳ ಮಾಂಸ, ಬಂದೂಕು ವಶ

ದಾಳಿಯ ವೇಳೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಶೆಡ್ಯೂಲ್-II ರ ಅಡಿಯಲ್ಲಿ ಸಂರಕ್ಷಿತ ಪ್ರಭೇದವಾಗಿರುವ ಮರಬೆಕ್ಕಿನ (Palm Civet) ಕಳೇಬರವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಬಂದೂಕಿನಿಂದ ಶೂಟ್ ಮಾಡಿ ಕೊಲ್ಲಲಾಗಿತ್ತು. ಇದರೊಂದಿಗೆ ಉಡ ಹಾಗೂ ಕಸ್ತೂರಿ ಜಿಂಕೆ ಎಂದು ಶಂಕಿಸಲಾದ ಮತ್ತೊಂದು ಪ್ರಾಣಿಯ ಮಾಂಸವನ್ನು ವಶಕ್ಕೆ ಪಡೆಯಲಾಗಿದ್ದು, ನಿಖರ ಮಾಹಿತಿ ಪತ್ತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬೇಟೆಗೆ ಬಳಸಿದ್ದ ಬಂದೂಕನ್ನು ಸಹ ಜಪ್ತಿ ಮಾಡಲಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಗೋವಾ ಗಡಿಗೆ ತೀರಾ ಹತ್ತಿರದಲ್ಲಿರುವ ಕೇವಲ 60 ಮನೆಗಳಿರುವ ಬೊಂಡೇಲಿ ಗ್ರಾಮವು ಅಕ್ರಮ ಬೇಟೆಗಾರರ ತಾಣವಾಗುತ್ತಿದೆ ಎಂದು ವನ್ಯಜೀವಿ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಮತ್ತೊಬ್ಬ ಗೋವಾ ಸರ್ಕಾರಿ ನೌಕರನೂ ಸೇರಿದ್ದಾನೆ ಎನ್ನಲಾಗಿದೆ. ಗೋವಾದ ಪ್ರಭಾವಿ ವ್ಯಕ್ತಿಗಳಿಂದ ಈ ಪ್ರಕರಣವನ್ನು ಹಳ್ಳ ಹಿಡಿಸಲು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದು, ಗಡಿ ದಾಟಿ ಬಂದು ಸ್ಥಳೀಯರ ಸಹಾಯದಿಂದ ಜಿಂಕೆ, ಉಡಗಳನ್ನು ಬೇಟೆಯಾಡುವ ಅಂತರರಾಜ್ಯ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Telegram Ban: ಭಾರತದಲ್ಲಿ ಟೆಲಿಗ್ರಾಮ್​ಗೆ ತಾತ್ಕಾಲಿಕ ನಿಷೇಧ: ನೀಟ್ ಮರು ಪರೀಕ್ಷೆಗೂ ಮುನ್ನ ಕೇಂದ್ರದ ಕ್ರಮ – Kannada News | Government Suspends Telegram Access Ahead of NEET Re Exam to Curb Malpractice

ನವದೆಹಲಿ, ಜೂನ್ 16: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ (NEET-UG 2026) ಮರು ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ ಹಾಗೂ ಸುರಕ್ಷಿತವಾಗಿ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶಾದ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ ಆದ ‘ಟೆಲಿಗ್ರಾಮ್’ (Telegram) ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ನಿರ್ಧರಿಸಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ನೀಡಿರುವ ಅಧಿಕೃತ ನಿರ್ದೇಶನದ ಪ್ರಕಾರ, ಭಾರತದಲ್ಲಿ ಜೂನ್ 22, 2026 ರವರೆಗೆ ಟೆಲಿಗ್ರಾಮ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ. ಜೂನ್ 21 ರಂದು ದೇಶಾದ್ಯಂತ ಬಿಗಿಯಾದ ಭದ್ರತೆಯೊಂದಿಗೆ ನೀಟ್ (UG) ಮರು ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗದಂತೆ ತಡೆಯಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ನೀಟ್ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಕೇಂದ್ರ ಸರ್ಕಾರದ ಈ ತ್ವರಿತ ಮತ್ತು ಕಠಿಣ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದೆ. ಈ ತಾತ್ಕಾಲಿಕ ನಿಷೇಧವು ಪರೀಕ್ಷೆಯ ನ್ಯಾಯಸಮ್ಮತತೆಯನ್ನು ಕಾಪಾಡಲು ಮತ್ತು ದೇಶದ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ತಡೆಯಲು ನೆರವಾಗಲಿದೆ ಎಂದು ಎನ್‌ಟಿಎ ತಿಳಿಸಿದೆ.

ಮತ್ತಷ್ಟು ಓದಿ: ‘ಎರಡು ವರ್ಷದ ಶ್ರಮ ವ್ಯರ್ಥವಾಯಿತು’: ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ

ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ವದಂತಿಗಳು ಹರಡದಂತೆ ತಡೆಯಲು ಕೇಂದ್ರ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಜೂನ್ 22 ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಆಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.

ಭಾರತದಲ್ಲಿ ಟೆಲಿಗ್ರಾಂ ಬಳಸುತ್ತಿರುವವರು ಎಷ್ಟು ಮಂದಿ?

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸರಿಸುಮಾರು 10 ಕೋಟಿಗೂ ಹೆಚ್ಚು ಮಂದಿ ಟೆಲಿಗ್ರಾಂ ಸಕ್ರಿಯ ಬಳಕೆದಾರರಿದ್ದಾರೆ. ಜಾಗತಿಕವಾಗಿ ಟೆಲಿಗ್ರಾಮ್ ಆಪ್ ಡೌನ್‌ಲೋಡ್ ಆಗುವ ಒಟ್ಟು ಪ್ರಮಾಣದಲ್ಲಿ ಸುಮಾರು ಶೇ. 22 ರಷ್ಟು ಪಾಲು ಭಾರತದ್ದೇ ಆಗಿದೆ. ಭಾರತದ ಇಂಟರ್ನೆಟ್ ಬಳಕೆದಾರರಲ್ಲಿ ಶೇ. 39 ರಷ್ಟು ಜನರು ವಿವಿಧ ಅಗತ್ಯಗಳಿಗಾಗಿ ಟೆಲಿಗ್ರಾಮ್ ಅನ್ನು ಬಳಸುತ್ತಾರೆ.

ಈ ತಾತ್ಕಾಲಿಕ ನಿಷೇಧದಿಂದಾಗಿ ಸಾಮಾನ್ಯ ಬಳಕೆದಾರರಿಗೆ ಕೆಲವು ದಿನಗಳ ಕಾಲ ತೊಂದರೆಯಾಗಲಿದ್ದರೂ, ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪರೀಕ್ಷೆಯ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ.

ಎಡಿಟಿಂಗ್ ವೈಶಿಷ್ಟ್ಯದ ಮೇಲೂ ನಿರ್ಬಂಧ: ಟೆಲಿಗ್ರಾಮ್ ಆಪ್ ಮೇಲಿನ ನಿಷೇಧ ಜೂನ್ 22ಕ್ಕೆ ಮುಗಿದರೂ, ಜೂನ್ 30ರವರೆಗೆ ಭಾರತದಲ್ಲಿ ಈ ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವಂತೆ (Disable) ಟೆಲಿಗ್ರಾಮ್ ಸಂಸ್ಥೆಗೆ ಸರ್ಕಾರ ಆದೇಶಿಸಿದೆ.

ಟೆಲಿಗ್ರಾಮ್‌ನಲ್ಲಿ ಹಳೆಯ ಸಂದೇಶಗಳ ಸಮಯವನ್ನು (Timestamp) ಬದಲಾಯಿಸದೆ, ಅವುಗಳ ಒಳಗಿನ ಪಠ್ಯವನ್ನು ಎಡಿಟ್ ಮಾಡಬಹುದು. ಪರೀಕ್ಷೆ ಮುಗಿದ ನಂತರ ಹಳೆಯ ಮೆಸೇಜ್‌ಗಳನ್ನು ಎಡಿಟ್ ಮಾಡಿ, ತಮಗೆ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸಿಕ್ಕಿತ್ತು ಎಂದು ಸುಳ್ಳು ಪುರಾವೆಗಳನ್ನು ಸೃಷ್ಟಿಸಿ ಪ್ರಶ್ನೆಪತ್ರಿಕೆ ಸೋರಿಕೆ (Paper Leak) ವದಂತಿಗಳನ್ನು ಹರಡಲು ಈ ವೈಶಿಷ್ಟ್ಯವನ್ನು ಬಳಸಲಾಗುತ್ತಿತ್ತು. ಇದನ್ನು ತಡೆಯಲು ಸರ್ಕಾರ ಈ ನಿರ್ಧಾರ ಮಾಡಿದೆ.

ನೀಟ್ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ತಾವೇ ಮೊದಲು ನೀಡುವುದಾಗಿ ಹೇಳಿ ಕೆಲವು ವಂಚಕರ ಜಾಲಗಳು ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಅಭ್ಯರ್ಥಿಗಳು ಹಾಗೂ ಅವರ ಪೋಷಕರಿಂದ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದವು. ಇಂತಹ ವಂಚನೆಗಳನ್ನು ತಡೆಯಲು ಸರ್ಕಾರ ಮುಂದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:06 am, Tue, 16 June 26

Source link

ಪಾಕಿಸ್ತಾನ್ ತಂಡದ ‘ಆಯ್ಕೆ ಮತ್ತು ವೇತನ’ ವ್ಯವಸ್ಥೆಯೇ ಬದಲು..! – Kannada News | PCB’s New Format Based Contract System

ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತನ್ನ ಆಟಗಾರರ ಆಯ್ಕೆ ಮತ್ತು ಸೆಂಟ್ರಲ್ ಕಾಂಟ್ರಾಕ್ಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಇದುವರೆಗೆ ಚಾಲ್ತಿಯಲ್ಲಿದ್ದ ಸಾಂಪ್ರದಾಯಿಕ ‘A ಇಂದ D ಗ್ರೇಡ್’ ಶ್ರೇಣೀಕೃತ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಅದರ ಜಾಗದಲ್ಲಿ ಆಟಗಾರರು ಆಡುವ ಕ್ರಿಕೆಟ್ ಸ್ವರೂಪಗಳನ್ನು ಆಧರಿಸಿದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕ್ರಿಕೆಟ್‌ನಲ್ಲಿ ಹೆಚ್ಚುತ್ತಿರುವ ಟಿ20 ಫ್ರಾಂಚೈಸಿ ಲೀಗ್‌ಗಳ ಹಾವಳಿ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಉಂಟಾಗುತ್ತಿರುವ ಹಿನ್ನಡೆಯನ್ನು ತಡೆಯಲು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

 ನಾಲ್ಕು ‘ಒಪ್ಪಂದ’:

ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಹೊಸ ನಿಯಮದ ಪ್ರಕಾರ, ಆಟಗಾರರನ್ನು ಯಾವುದೇ ಸಾಮಾನ್ಯ ಗ್ರೇಡ್‌ಗಳಲ್ಲಿ ಗುರುತಿಸದೆ, ಅವರು ಆಡುವ ಕ್ರಿಕೆಟ್ ಮಾದರಿಯ ಆಧಾರದ ಮೇಲೆ ನಾಲ್ಕು ಪ್ರತ್ಯೇಕ ಟ್ರ್ಯಾಕ್‌ಗಳಾಗಿ ವಿಂಗಡಿಸಲಾಗಿದೆ.

  • ಟ್ರ್ಯಾಕ್ A (ಟೆಸ್ಟ್): ಇದು ಕೇವಲ ಟೆಸ್ಟ್ ಕ್ರಿಕೆಟ್ ಆಡುವ ಆಟಗಾರರಿಗಾಗಿ ಮೀಸಲಾದ ಟ್ರ್ಯಾಕ್. ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಲು ಈ ಆಟಗಾರರಿಗೆ ಗರಿಷ್ಠ ಆರ್ಥಿಕ ಪ್ರೋತ್ಸಾಹ ಧನ ನೀಡಲಾಗುತ್ತದೆ. ಆದರೆ, ಇವರು ಜಾಗತಿಕ ಟಿ20 ಫ್ರಾಂಚೈಸಿ ಲೀಗ್‌ಗಳಲ್ಲಿ ಆಡಲು ಕಠಿಣ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ.
  • ಟ್ರ್ಯಾಕ್ AB (ದ್ವಿ ಸ್ವರೂಪ): ಟೆಸ್ಟ್ ಮತ್ತು ಏಕದಿನ ಎರಡೂ ಮಾದರಿಯ ಕ್ರಿಕೆಟ್ ಆಡುವ ಆಟಗಾರರು ಈ ಟ್ರ್ಯಾಕ್‌ಗೆ ಒಳಪಡುತ್ತಾರೆ.
  • ಟ್ರ್ಯಾಕ್ BC (ಸೀಮಿತ ಓವರ್‌ಗಳ ಸ್ವರೂಪ): ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳ ಮೇಲೆ ಮಾತ್ರ ಗಮನ ಹರಿಸುವ ಆಟಗಾರರನ್ನು ಈ ಗುಂಪಿಗೆ ಸೇರಿಸಲಾಗುತ್ತದೆ.
  • ಟ್ರ್ಯಾಕ್ D (ಟಿ20): ಕೇವಲ ಟಿ20 ಸ್ವರೂಪಗಳಲ್ಲಿ ಆಡುವ ಆಟಗಾರರು ಈ ಒಪ್ಪಂದದಲ್ಲಿ ಒಳಪಡಲಿದ್ದಾರೆ.  ಇವರಿಗೆ ಮಂಡಳಿಯಿಂದ ಸಿಗುವ ವಾರ್ಷಿಕ ಸಂಭಾವನೆ ಕಡಿಮೆಯಿದ್ದರೂ, ವಿಶ್ವದಾದ್ಯಂತ ನಡೆಯುವ ಟಿ20 ಲೀಗ್‌ಗಳಲ್ಲಿ ಆಡಲು ಇವರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗುತ್ತದೆ.

ಆಯ್ಕೆ ವ್ಯವಸ್ಥೆಯಲ್ಲೂ ಬದಲಾವಣೆ:

ಈ ಹೊಸ ಒಪ್ಪಂದ ವ್ಯವಸ್ಥೆಯು ಕೇವಲ ಹಣಕಾಸಿನ ಬದಲಾವಣೆಯಷ್ಟೇ ಅಲ್ಲದೆ, ಪಾಕಿಸ್ತಾನ ಕ್ರಿಕೆಟ್‌ನ ಆಡಳಿತ ಶೈಲಿಯನ್ನೇ ಬದಲಿಸುವ ನಿಟ್ಟಿನಲ್ಲಿ ಕೆಲವು ಕಠಿಣ ನಿಯಮಗಳನ್ನು ಒಳಗೊಂಡಿದೆ.

  • ಶೇ. 85 ರಷ್ಟು ಡೇಟಾ ಆಧಾರಿತ ಆಯ್ಕೆ: ಆಟಗಾರರ ಆಯ್ಕೆ ಮತ್ತು ಒಪ್ಪಂದ ಪ್ರಕ್ರಿಯೆಯಲ್ಲಿ ಪಕ್ಷಪಾತವನ್ನು ತಪ್ಪಿಸಲು ಶೇ. 85 ರಷ್ಟು ನಿರ್ಧಾರಗಳನ್ನು ಸಂಪೂರ್ಣವಾಗಿ ಕಂಪ್ಯೂಟರೈಸ್ಡ್ ತಂತ್ರಜ್ಞಾನ ಮತ್ತು ಆಟಗಾರರ ಅಂಕಿ-ಅಂಶಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ. ಉಳಿದ ಶೇ. 15 ರಷ್ಟು ಮಾತ್ರ ರಾಷ್ಟ್ರೀಯ ಆಯ್ಕೆಗಾರರ ಶಿಫಾರಸಿಗೆ ಬಿಡಲಾಗುತ್ತದೆ.
  • ದೇಶಿ ಕ್ರಿಕೆಟ್ ಕಡ್ಡಾಯ: ಕೇಂದ್ರ ಒಪ್ಪಂದವನ್ನು ಪಡೆಯಲು ಆಟಗಾರರು ಪಾಕಿಸ್ತಾನದ ಸ್ಥಳೀಯ ದೇಶಿ ಕ್ರಿಕೆಟ್ ಪಂದ್ಯಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ದೇಶಿ ಪಂದ್ಯಗಳಿಂದ ದೂರ ಉಳಿಯುವ ಆಟಗಾರರ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ.
  •  ಸಂಪೂರ್ಣ ಗೌಪ್ಯತೆ: ಯಾವ ಆಟಗಾರ ಯಾವ ಟ್ರ್ಯಾಕ್‌ನಲ್ಲಿದ್ದಾರೆ ಮತ್ತು ಅವರಿಗೆ ಸಿಗುವ ಒಟ್ಟು ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸದೆ ಗೌಪ್ಯವಾಗಿಡಲು ಪಿಸಿಬಿ ತೀರ್ಮಾನಿಸಿದೆ. ಇದರಿಂದ ಆಟಗಾರರ ಮೇಲಿನ ಅನಗತ್ಯ ಸಾಮಾಜಿಕ ಮಾಧ್ಯಮಗಳ ಒತ್ತಡ ಕಡಿಮೆಯಾಗಲಿದೆ ಎಂಬುದು ಮಂಡಳಿಯ ಆಶಯ.
  •  ಮಂಡಳಿಯದ್ದೇ ಅಂತಿಮ ನಿರ್ಧಾರ: ಆಟಗಾರರು ತಮಗೆ ಇಷ್ಟ ಬಂದ ಟ್ರ್ಯಾಕ್ ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿಲ್ಲ. ತಂಡದ ಅಗತ್ಯಕ್ಕೆ ತಕ್ಕಂತೆ ಮಂಡಳಿಯೇ ಆಟಗಾರರನ್ನು ಆಯಾ ಟ್ರ್ಯಾಕ್‌ಗಳಿಗೆ ನಿಯೋಜಿಸುತ್ತದೆ.

ಇದನ್ನೂ ಓದಿ: ಕೊಡಗಿನಲ್ಲಿ ಫುಟ್​ಬಾಲ್ ಕ್ರೇಝ್: ತಲೆ ಎತ್ತಿ ನಿಂತ ಕ್ರಿಸ್ಟಿಯಾನೊ ರೊನಾಲ್ಡೊ!

ಒಟ್ಟಿನಲ್ಲಿ ಟಿ20 ಲೀಗ್‌ಗಳ ಆಕರ್ಷಣೆಯಿಂದಾಗಿ ಆಟಗಾರರು ದೇಶಿ ಕ್ರಿಕೆಟ್ ಮತ್ತು ಟೆಸ್ಟ್ ಮಾದರಿಯನ್ನು ನಿರ್ಲಕ್ಷಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೊಸ ಹೆಜ್ಜೆಯನ್ನಿಟ್ಟಿದೆ. ಈ ಮೂಲಕ ಹಣಕಾಸಿನ ಭದ್ರತೆಯೊಂದಿಗೆ ಪ್ರತಿಭೆ ಮತ್ತು ಯೋಗ್ಯತೆಗೆ ತಕ್ಕಂತೆ ಆಟಗಾರರನ್ನು ಗೌರವಿಸುವ ಈ ‘ಮಾದರಿ ಆಧಾರಿತ ವ್ಯವಸ್ಥೆ’ ಪರಿಚಯಿಸಲು ಮುಂದಾಗಿದೆ.

Source link

RSS ನೋಂದಣಿ ಬಗ್ಗೆ ಪ್ರಶ್ನಿಸಿದ್ದ ಪ್ರಿಯಾಂಕ್​​ ಖರ್ಗೆಗೆ ಬಹಿರಂಗ ಪತ್ರ ಬರೆದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ – Kannada News | RSS Registration Row: BJP MP Narayansa Bhandage Pens Open Letter To Priyank Kharge, Slams Appeasement Politics

ಪ್ರಿಯಾಂಕ್ ಖರ್ಗೆಗೆ ನಾರಾಯಣಸಾ ಭಾಂಡಗೆ ಬಹಿರಂಗ ಪತ್ರImage Credit source: PTI and Narayanasa Bhandage X Account

ಬೆಂಗಳೂರು, ಜೂನ್​​ 16: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೋಂದಣಿಯ ಬಗ್ಗೆ ಪ್ರಶ್ನೆ ಮಾಡುತ್ತಲೇ ಬಂದಿರುವ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಈ ಸಂಬಂಧ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿರೋದು ಚರ್ಚೆಗೆ ಗ್ರಾಸವಾಗಿತ್ತು. ಸಂಘಟನೆಯ ಕಾನೂನುಬದ್ಧ ಸ್ಥಾನಮಾನ ಮತ್ತು ಪಾರದರ್ಶಕತೆಯ ಬಗ್ಗೆ ಅವರು ಕೇಳಿದ್ದ ಪ್ರಶ್ನೆಗಳಿಗೆ ತಿರುಗೇಟು ನೀಡಿದ್ದ ಭಾಗವತ್​​, ಹಿಂದೂ ಧರ್ಮ ರಿಜಿಸ್ಟರ್ ಆಗಿದೆಯೇ? ಎಂದು ಪ್ರಶ್ನಿಸಿದ್ದರು. ಸರ್ಕಾರಿ ಅನುದಾನ ಪಡೆಯುವವರಿಗೆ ಮಾತ್ರ ನೋಂದಣಿ ಅಗತ್ಯವಿದೆ ಎಂದಿದ್ದರು. ಆ ಬೆನ್ನಲ್ಲೇ ಈಗ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಕೂಡ ಬಹಿರಂಗ ಪತ್ರ ಬರೆಯುವ ಮೂಲಕ ಪ್ರಿಯಾಂಕ್​​ಗೆ ತಿರುಗೇಟು ನೀಡಿದ್ದಾರೆ.

ನಾರಾಯಣಸಾ ಭಾಂಡಗೆ ಪತ್ರದಲ್ಲೇನಿದೆ?

ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಆಧಾರದ ಮೇಲೆ ಒಂದು ಸಂಸ್ಥೆಯ ಅಸ್ತಿತ್ವವನ್ನೇ ಪ್ರಶ್ನಿಸುವುದು ಸೂಕ್ತವಲ್ಲ. ಕಾಂಗ್ರೆಸ್ ಪಕ್ಷವು ಏಕೆ ನಿರಂತರವಾಗಿ ಹಿಂದೂ ಸಂಘಟನೆಗಳನ್ನೇ ಗುರಿಯಾಗಿಸಿಕೊಂಡು ಪ್ರಶ್ನಿಸುತ್ತದೆ ಎಂಬ ಅನುಮಾನ ಮೂಡಿದೆ. ಕರ್ನಾಟಕದಲ್ಲಿ ನಡೆದ ಹುಬ್ಬಳ್ಳಿ ಪೊಲೀಸ್ ಠಾಣೆ ಹಿಂಸಾಚಾರ, ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆಗಳು, ಹಿಂಸಾತ್ಮಕ ಗುಂಪುಗಳಿಂದ ಸಾರ್ವಜನಿಕ ಆಸ್ತಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ನಡೆದ ದಾಳಿಗಳು ರಾಜ್ಯದ ಜನತೆಯ ನೆನಪಿನಲ್ಲಿ ಇನ್ನೂ ಜೀವಂತವಾಗಿವೆ. ಹಿಂಸೆಗೆ ಒಳಗಾದವರಲ್ಲಿ OBC ಕಾಂಗ್ರೆಸ್ ಶಾಸಕರ ಮನೆಯೂ ಸೇರಿದೆ. ಇಂತಹ ಘಟನೆಗಳ ಕುರಿತು ಇದೇ ರೀತಿಯ ಬಹಿರಂಗ ಪತ್ರಗಳು, ಇದೇ ಮಟ್ಟದ ಆಕ್ರೋಶ ಮತ್ತು ಇದೇ ರೀತಿಯ ನೈತಿಕ ಪ್ರಶ್ನೆಗಳು ಏಕೆ ಉದ್ಭವಿಸಲಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ ಎಂದು ನಾರಾಯಣಸಾ ಭಾಂಡಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: RSS ವಿಚಾರವಾಗಿ ಮೋಹನ್ ಭಾಗವತ್​ಗೆ ಪ್ರಿಯಾಂಕ್ ಖರ್ಗೆ ಪತ್ರ, ಈ 8 ಅಂಶಗಳಿಗೆ ವಿವರ ನೀಡುವಂತೆ ಆಗ್ರಹ

‘ಕಾಂಗ್ರೆಸ್​​ಗೆ ಆತ್ಮಾವಲೋಕನದ ಸಮಯ’

ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಬಗ್ಗೆ ನಿಮ್ಮ ಕಾಳಜಿ ನಿಜವಾಗಿಯೂ ಪ್ರಾಮಾಣಿಕವಾಗಿದ್ದರೆ ಅದೇ ಮಾನದಂಡವನ್ನು ಧಾರ್ಮಿಕ, ಸಾಮಾಜಿಕ, ರಾಜಕೀಯ, ಸೈದ್ಧಾಂತಿಕ ಹಿನ್ನೆಲೆಯ ಎಲ್ಲ ಸಂಘಟನೆಗಳಿಗೂ ಅನ್ವಯಿಸಬೇಕು. ರಾಜಕೀಯ ಪ್ರತೀಕಾರದ ಭಾವನೆಯಿಂದ ಒಂದು ನಿರ್ದಿಷ್ಟ ಸಂಘಟನೆಯನ್ನು ಮಾತ್ರ ಗುರಿಯಾಗಿಸಿ ಸಾರ್ವಜನಿಕವಾಗಿ ಅನುಮಾನ ವ್ಯಕ್ತಪಡಿಸುವುದು ಸಂವಿಧಾನಾತ್ಮಕ ಮೌಲ್ಯಗಳಿಗೆ ಅನುಗುಣವಾಗುವುದಿಲ್ಲ. ಕಾಂಗ್ರೆಸ್​​ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಹಿಂದೂ ಸಂಘಟನೆಗಳನ್ನು ಗುರಿಯಾಗಿಸುವುದು ಮತ್ತು ಬಹುಸಂಖ್ಯಾತ ಸಮಾಜದ ಭಾವನೆಗಳನ್ನು ಪದೇಪದೇ ನೋಯಿಸುವ ರಾಜಕೀಯ ತಂತ್ರವು ಸಮಾಜದಲ್ಲಿ ವಿಭಜನೆಗೆ ಕಾರಣವಾಗಬಹುದು. ಭಾರತದ ಸಂವಿಧಾನವು ಓಲೈಕೆ ರಾಜಕಾರಣವನ್ನೂ ಬಯಸುವುದಿಲ್ಲ . ಪೂರ್ವಾಗ್ರಹವನ್ನೂ ಒಪ್ಪುವುದಿಲ್ಲ. ರಾಷ್ಟ್ರ ನಿರ್ಮಾಣಕ್ಕೆ ಸೇವೆ ಸಲ್ಲಿಸಿದ ಸಂಸ್ಥೆಗಳ ಕೊಡುಗೆಯನ್ನು ಗೌರವಿಸುತ್ತಾ, ಯಾವುದೇ ರೀತಿಯ ಅತಿರೇಕ, ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಪಕ್ಷಪಾತವಿಲ್ಲದೆ ಕ್ರಮ ಕೈಗೊಳ್ಳುವುದೇ ನಿಜವಾದ ಸಂವಿಧಾನಾತ್ಮಕ ಕರ್ತವ್ಯ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ರಫ್ತು ಸುಂಕ ಹೆಚ್ಚಳ; ಪೆಟ್ರೋಲ್ ರೀಟೇಲ್ ಬೆಲೆ ಮೇಲೆ ಪರಿಣಾಮ ಬೀರುತ್ತಾ? – Kannada News | India Hikes Diesel, ATF Export Duty: No Impact on Domestic Fuel Prices

ನವದೆಹಲಿ, ಜೂನ್ 16: ಕೇಂದ್ರ ಸರ್ಕಾರವು ಡೀಸೆಲ್ ಮತ್ತು ವಿಮಾನ ಇಂಧನ (ATF) ರಫ್ತುಗಳ ಮೇಲಿನ ಸುಂಕವನ್ನು (Export Duty) ಹೆಚ್ಚಿಸಿದೆ. ಆದರೆ ಪೆಟ್ರೋಲ್ ಮೇಲಿನ ರಫ್ತು ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಡೀಸೆಲ್ ರಫ್ತು ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) 50 ಪೈಸೆ ಏರಿಸಲಾಗಿದೆ. ಪ್ರತಿ ಲೀಟರ್‌ಗೆ 13.5 ರೂನಿಂದ 14 ರೂಗೆ ಹೆಚ್ಚಿಸಲಾಗಿದೆ . ವಿಮಾನ ಇಂಧನದ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 3 ರೂ ಹೆಚ್ಚಿಸಲಾಗಿದೆ. 9.5 ರೂನಿಂ 12.5 ರೂಗೆ ಗಣನೀಯವಾಗಿ ಏರಿಸಲಾಗಿದೆ. ಆದರೆ, ಪೆಟ್ರೋಲ್ ರಫ್ತು ಮೇಲಿನ ಸುಂಕದಲ್ಲಿ ಬದಲಾವಣೆ ಮಾಡಲಾಗಿಲ್ಲ. ಅದರ ಪ್ರತಿ ಲೀಟರ್‌ಗೆ ಅದರ ಸುಂಕ 1.5 ರೂನಲ್ಲೇ ಮುಂದುವರಿಯಲಿದೆ.

ಸಾಮಾನ್ಯ ಗ್ರಾಹಕರ ಮೇಲೆ ಏನು ಪರಿಣಾಮ?

ಈ ತೆರಿಗೆ ಬದಲಾವಣೆಗಳು ಕೇವಲ ವಿದೇಶಗಳಿಗೆ ರಫ್ತು ಮಾಡುವ ಇಂಧನಕ್ಕೆ ಮಾತ್ರ ಅನ್ವಯಿಸುತ್ತವೆ. ದೇಶೀಯ ಮಾರುಕಟ್ಟೆಯಲ್ಲಿ (ಭಾರತದ ಒಳಗಡೆ) ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ ದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ದರ ಈ ಕಾರಣಕ್ಕೆ ಏರಿಕೆಯಾಗುವುದಿಲ್ಲ, ಇಳಿಕೆಯೂ ಆಗುವುದಿಲ್ಲ.

ಇದನ್ನೂ ಓದಿ: ಇರಾನ್-ಅಮೆರಿಕ ಶಾಂತಿ ಒಪ್ಪಂದವು ಭಾರತಕ್ಕೆ ಖುಷಿ ವಿಚಾರವಲ್ಲ: ಮಾಜಿ ಇಸ್ರೇಲ್ ವಕ್ತಾರರ ಎಚ್ಚರಿಕೆ

ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು?

ಪಶ್ಚಿಮ ಏಷ್ಯಾ (West Asia) ಭಾಗದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಏರಿಳಿತ ಕಾಣುತ್ತಿವೆ. ಭಾರತದ ತೈಲ ಸಂಸ್ಕರಣಾ ಕಂಪನಿಗಳು (ಉದಾಹರಣೆಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಂತಾದವು) ದೇಶದ ಒಳಗಡೆ ಇಂಧನ ಮಾರಾಟ ಮಾಡುವ ಬದಲು, ವಿದೇಶಗಳಲ್ಲಿ ಹೆಚ್ಚಿನ ಬೆಲೆಗೆ ರಫ್ತು ಮಾಡಿ ಅತಿಯಾದ ಲಾಭ ಗಳಿಸುವುದನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ದೇಶದ ಒಳಗಡೆ ಇಂಧನದ ಕೊರತೆಯಾಗದಂತೆ ನೋಡಿಕೊಳ್ಳುವುದು ಮತ್ತು ದೇಶೀಯ ಮಾರುಕಟ್ಟೆಗೆ ಮೊದಲ ಆದ್ಯತೆ ನೀಡುವಂತೆ ಕಂಪನಿಗಳನ್ನು ಪ್ರೇರೇಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಈ ಪರಿಷ್ಕೃತ ದರಗಳು ಇವತ್ತು (ಜೂನ್ 16) ಮಂಗಳವಾರದಿದಲೇ ಜಾರಿಗೆ ಬಂದಿದ್ದು, ಸರ್ಕಾರವು ಪ್ರತಿ 15 ದಿನಗಳಿಗೊಮ್ಮೆ ಜಾಗತಿಕ ತೈಲ ಬೆಲೆಗಳನ್ನು ಪರಿಶೀಲಿಸಿ ಈ ತೆರಿಗೆಯನ್ನು ಬದಲಾಯಿಸುತ್ತಿರುತ್ತದೆ. ಸದ್ಯ ಜಾಗತಿಕ ತೈಲ ಬೆಲೆಗಳು ಒಂದು ಬ್ಯಾರಲ್​ಗೆ 80 ಡಾಲರ್​ಗೆ ಇಳಿದಿವೆ. ಈ ದರ ಇನ್ನೂ ಇಳಿಕೆಯಾದಲ್ಲಿ ಪೆಟ್ರೋಲ್ ಮತ್ತು ಡೀಸಲ್ ದರಗಳೂ ಇಳಿಕೆಯಾಗಬಹುದು. ಅಥವಾ ಸರ್ಕಾರವು ಅಬಕಾರಿ ಸುಂಕ ಏರಿಸಿ, ಪೆಟ್ರೋಲ್, ಡೀಸಲ್ ದರ ಯಥಾಸ್ಥಿತಿಯಲ್ಲಿ ಮುಂದುವರಿಯುವಂತೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಮರು-ಪರೀಕ್ಷೆಗೂ ಮುನ್ನವೇ ಆಘಾತ; ರಾಜಸ್ಥಾನದ ಸೀಕರ್‌ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಸಾವು! – Kannada News | NEET Aspirant Suicide in Sikar: Second Student Death in Coaching Hub, Exam Pressure

ನೀಟ್ ಮರು-ಪರೀಕ್ಷೆಗೂ ಮುನ್ನ ಮತ್ತೊಬ್ಬ ವಿದ್ಯಾರ್ಥಿ ಸಾವುImage Credit source: Pinterest

ರಾಜಸ್ಥಾನದ ಪ್ರಮುಖ ಕೋಚಿಂಗ್ ಹಬ್ ಆಗಿರುವ ಸೀಕರ್ (Sikar) ಜಿಲ್ಲೆಯಲ್ಲಿ ಮಂಗಳವಾರದಂದು ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. ಜೂನ್ 21 ರಂದು ದೇಶಾದ್ಯಂತ ನೀಟ್ ಮರು-ಪರೀಕ್ಷೆ ನಡೆಯಲಿದ್ದು, ಅದಕ್ಕೆ ಸಜ್ಜಾಗುತ್ತಿದ್ದ 22 ವರ್ಷದ ನೀಟ್ ಅಭ್ಯರ್ಥಿ ಉಮೇಶ್ ಮಾಲಿ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಯುವಕನನ್ನು ಜುಂಜುನು ಜಿಲ್ಲೆಯ ನವಲಗಢ ಪ್ರದೇಶದ ಕಾರಿ ಗ್ರಾಮದ ನಿವಾಸಿ ಉಮೇಶ್ ಮಾಲಿ ಎಂದು ಗುರುತಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರವೇಶ ಪಡೆಯುವ ಕನಸಿನಿಂದ ಅವರು ಸಿಕಾರ್‌ನ ಪಿಪ್ರಾಲಿ ರಸ್ತೆಯಲ್ಲಿರುವ ವಸತಿ ನಿಲಯದಲ್ಲಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ, ಉಮೇಶ್ ಅವರಿಗೆ ಇದು ಮೂರನೇ ಪ್ರಯತ್ನವಾಗಿತ್ತು ಎನ್ನಲಾಗಿದೆ. ಘಟನಾ ಸ್ಥಳದಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನು (Suicide Note) ವಶಪಡಿಸಿಕೊಂಡಿದ್ದು, ಅದರಲ್ಲೇನಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ:

ಪೊಲೀಸ್ ಮಾಹಿತಿಯ ಪ್ರಕಾರ, ಉಮೇಶ್ ತನ್ನ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕುಟುಂಬ ಸದಸ್ಯರು ಮೊದಲು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉದ್ಯೋಗ್ ನಗರ ಪೊಲೀಸ್ ಠಾಣೆಯ ಪ್ರಭಾರಿ ರಾಜೇಶ್ ಬುಡಾನಿಯಾ ಮತ್ತು ತಂಡವು ಪರಿಶೀಲನೆ ನಡೆಸಿದೆ. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀ ಕಲ್ಯಾಣ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕ್ರಿಯೆ ಮುಗಿದ ನಂತರ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ದುರಂತಕ್ಕೂ ಮುನ್ನ ನಡೆದಿದ್ದೇನು?

ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಘಟನೆ ನಡೆದ ದಿನದ ಬೆಳಿಗ್ಗೆ ಉಮೇಶ್ ತನ್ನ ತಾಯಿಯನ್ನು ಊರಿಗೆ ಬಿಡಲು ಹೋಗಿದ್ದನು. ತಾಯಿಯನ್ನು ಬಿಟ್ಟು ವಾಪಸ್ ಸೀಕರ್‌ನ ಫ್ಲಾಟ್‌ಗೆ ಮರಳಿದ್ದನು. ಆನಂತರ ಆತನ ಅಕ್ಕ ಮತ್ತು ತಮ್ಮ ಫ್ಲಾಟ್‌ಗೆ ಬಂದಾಗ ಉಮೇಶ್ ಕೋಣೆಯೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ತಕ್ಷಣವೇ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ‘ಎರಡು ವರ್ಷದ ಶ್ರಮ ವ್ಯರ್ಥವಾಯಿತು’: ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ

ಒಂದೇ ತಿಂಗಳಲ್ಲಿ ಸೀಕರ್‌ನಲ್ಲಿ ನಡೆದ ಎರಡನೇ ದುರಂತ:

ನೀಟ್ ಪರೀಕ್ಷೆಯ ಗೊಂದಲಗಳ ನಡುವೆ ಸೀಕರ್‌ನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ವಿದ್ಯಾರ್ಥಿ ಸಾವು ಇದಾಗಿದೆ. ಇದಕ್ಕೂ ಮುನ್ನ, ಮೇ 3 ರಂದು ನಡೆದಿದ್ದ ನೀಟ್-ಯುಜಿ 2026 ರ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರದ್ದುಗೊಳಿಸಿತ್ತು. ಪರೀಕ್ಷೆ ರದ್ದಾದ ದಿನವೇ ಪ್ರದೀಪ್ ಮೇಘವಾಲ್ ಎಂಬ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದನು.

ಪರೀಕ್ಷೆಯ ಅನಿಶ್ಚಿತತೆಯೇ ಕಾರಣವೇ?

ಹಿಂದಿನ ಪ್ರಕರಣದಲ್ಲಿ ಮೃತಪಟ್ಟಿದ್ದ ಪ್ರದೀಪ್ ಮೇಘವಾಲ್ ತಂದೆ ರಾಜೇಶ್ ಕುಮಾರ್ ನೀಡಿದ ಹೇಳಿಕೆಯಂತೆ, ಪ್ರದೀಪ್ ಮೇ 3ರ ಪರೀಕ್ಷೆಯನ್ನು ತುಂಬಾ ಚೆನ್ನಾಗಿ ಬರೆದಿದ್ದನು ಮತ್ತು ಆತನಿಗೆ 720 ಕ್ಕೆ 650 ಅಂಕಗಳು ಬರುವ ನಿರೀಕ್ಷೆಯಿತ್ತು. ಆದರೆ ಪರೀಕ್ಷೆ ರದ್ದಾದ ಸುದ್ದಿ ಕೇಳಿ ಆತ ತೀವ್ರ ಬೇಸರಗೊಂಡಿದ್ದನು ಎನ್ನಲಾಗಿದೆ.

ಸದ್ಯ ಪೊಲೀಸರು ಈ ಎರಡೂ ಪ್ರಕರಣಗಳಿಗೆ ನೇರ ಸಂಬಂಧ ಕಲ್ಪಿಸದಿದ್ದರೂ, ಕೋಚಿಂಗ್ ಹಬ್ ಆಗಿರುವ ಸೀಕರ್‌ನಲ್ಲಿ ಸತತವಾಗಿ ನಡೆಯುತ್ತಿರುವ ವಿದ್ಯಾರ್ಥಿಗಳ ಸಾವು ಪರೀಕ್ಷಾರ್ಥಿಗಳ ಮೇಲಿರುವ ತೀವ್ರ ಮಾನಸಿಕ ಒತ್ತಡವನ್ನು ಎತ್ತಿ ತೋರಿಸುತ್ತಿದೆ. ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Optical Illusion: ನಿಮಗೊಂದು ಚಾಲೆಂಜ್; ಈ ಚಿತ್ರದಲ್ಲಿರುವ ಸಂಖ್ಯೆಯನ್ನು ಹುಡುಕಿ ನೋಡೋಣ – Kannada News | Optical Illusion: Can you find the hidden in number this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: twitter.com

ಕೆಲವರಿಗೆ ಒಗಟುಗಳನ್ನು ಬಿಡಿಸುವುದೆಂದರೆ ಅದೇನೋ ಕ್ರೇಜ್. ಹೀಗಾಗಿ ಬಿಡುವು ಸಿಕ್ಕಾಗಲ್ಲೆಲ್ಲಾ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಹಾಗೂ ಬ್ರೈನ್ ಟೀಸರ್ ನಂತಹ (brain teaser) ಒಗಟಿನ ಆಟಗಳನ್ನು ಬಿಡಿಸುತ್ತಾರೆ. ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಒಗಟುಗಳು ಸಹಕಾರಿಯಾಗಿದ್ದು, ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ಉತ್ತರ ಕಂಡುಕೊಳ್ಳೋದು ಅಷ್ಟೇ ಕಷ್ಟಕರ. ಇದೀಗ ಇಂತಹದ್ದೇ ಕಠಿಣ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿರುವ ಸಂಖ್ಯೆಯನ್ನು ಹೇಳಬೇಕು. ಈ ಒಗಟು ಬಿಡಿಸಲು ಇರುವ ಸಮಯವಕಾಶ ಹತ್ತು ಸೆಕೆಂಡುಗಳು ಮಾತ್ರ. ನೀವು ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.

ಈ ಚಿತ್ರದಲ್ಲಿರುವ ಸಂಖ್ಯೆಯೆಷ್ಟು?

ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಸಂಖ್ಯೆಯೊಂದಿದೆ. ಈ ಸಂಖ್ಯೆಯನ್ನು 10 ಸೆಕೆಂಡುಗಳಲ್ಲಿ ಹುಡುಕಿ ಹೇಳುವುದೇ ನಿಮ್ಮ ಕೆಲಸ. ನೀವು ಈ ಸವಾಲಿಗೆ ರೆಡಿ ಇದ್ದರೆ, ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ. ನೀವು ಈ ಸವಾಲನ್ನು ಸ್ವೀಕರಿಸಲು ರೆಡಿ ಇದ್ದೀರಾ ಎಂದು ನಾವು ಭಾವಿಸುತ್ತೇವೆ.

ಇದನ್ನೂ ಓದಿ: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಗುರುತಿಸಬಲ್ಲಿರಾ

ಈ ಚಿತ್ರದಲ್ಲಿರುವ ಸಂಖ್ಯೆ ನಿಮ್ಮ ಕಣ್ಣಿಗೆ ಬಿದ್ದಿತೇ?

ಎಷ್ಟೇ ಗಮನ ಹರಿಸಿದರೂ ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಹುಡುಕಲು ಆಗಲಿಲ್ಲವೆಂದು ಚಿಂತಿಸುತ್ತಿದ್ದೀರಾ. ಹೆಚ್ಚು ಚಿಂತಿಸಬೇಡಿ. ಒಂದು ವೇಳೆ ಈ ಸಂಖ್ಯೆ ಗುರುತಿಸಲು ಸಾಧ್ಯವಾದರೆ ನಿಮ್ಮ ಕಣ್ಣುಗಳು ಚುರುಕಾಗಿ ಕೆಲಸ ಮಾಡುತ್ತಿವೆ ಎಂದರ್ಥ. ಈ ಕೆಳಗಿನ ಚಿತ್ರದಲ್ಲಿ ಉತ್ತರವನ್ನು ನಾವು ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ. ಈ ಚಿತ್ರದಲ್ಲಿರುವ ಸಂಖ್ಯೆ 3246.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:07 am, Tue, 16 June 26

Source link

ಸೌಂದರ್ಯ ಜೊತೆ ನಟಿಸಿದ್ದ ಆ ಸ್ಟಾರ್ ಹೀರೋ ಕೂಡ ಅಪಘಾತದಲ್ಲೇ ಮೃತಪಟ್ಟರು – Kannada News | Soundarya: Mahanati’s ‘Seethayya’ Tragedy, Harikrishna’s Fate

ಕನ್ನಡ ನೆಲದಲ್ಲಿ ಹುಟ್ಟಿ, ತೆಲುಗು, ತಮಿಳು, ಮೊದಲಾದ ಚಿತ್ರರಂಗದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತದ ‘ಮಹಾನಟಿ’ ಎನಿಸಿಕೊಂಡವರು ನಟಿ ಸೌಂದರ್ಯ. ತಮ್ಮ ಸಹಜ ನಟನೆ, ಸೌಂದರ್ಯ ಮತ್ತು ಸಾಂಪ್ರದಾಯಿಕ ಪಾತ್ರಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಈ ಸುಂದರ ತಾರೆ, ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಇಹಲೋಕ ತ್ಯಜಿಸಿದ್ದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದುರಂತ. ಸೌಂದರ್ಯ ಅವರ ಸಿನಿ ಪಯಣದ ಕೊನೆಯ ದಿನಗಳನ್ನು ತಿರುವಿ ಹಾಕಿದಾಗ, ಅವರು ನಟಿಸಿದ ಒಂದು ಬ್ಲಾಕ್‌ಬಸ್ಟರ್ ಸಿನಿಮಾ ಮತ್ತು ಅದರ ಮುಖ್ಯ ಕಲಾವಿದರ ಸಾವು ಇಂದಿಗೂ ಚಿತ್ರರಂಗವನ್ನು ನಡುಗಿಸುವಂತಿದೆ.

ಕನ್ನಡದ ಕುವರಿಯ ಕೊನೆಯ ಸೂಪರ್ ಹಿಟ್ ‘ಸೀತಯ್ಯ’

ಸೌಂದರ್ಯ ಹಾಗೂ ಮೋಹನ್ ಬಾಬು ನಟನೆಯ‘ಸೀತಯ್ಯ’ 2003ರಲ್ಲಿ ರಿಲೀಸ್ ಆಯಿತು . ವೈ.ವಿ.ಎಸ್. ಚೌಧರಿ ನಿರ್ದೇಶನದ ಈ ಹೈ-ವೋಲ್ಟೇಜ್ ಫ್ಯಾಕ್ಷನ್ ಆ್ಯಕ್ಷನ್ ಸಿನಿಮಾದಲ್ಲಿ ಸೌಂದರ್ಯ ಅವರು ನಂದಮೂರಿ ಹರಿಕೃಷ್ಣ ಅವರಿಗೆ ಜೋಡಿಯಾಗಿ ನಟಿಸಿದ್ದರು. ಸಿಮ್ರಾನ್ ಕೂಡ ಮತ್ತೊಬ್ಬ ನಾಯಕಿಯಾಗಿದ್ದರು. 2003 ರಲ್ಲಿ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.

ಚಿತ್ರರಂಗವನ್ನು ಕಾಡಿದ ಆ ಘೋರ ಕಾಕತಾಳೀಯ!

‘ಸೀತಯ್ಯ’ ಸಿನಿಮಾ ಬಿಡುಗಡೆಯಾಗಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ವಿಧಿಯ ಆಟ ಬೇರೆಯದೇ ಆಗಿತ್ತು. ಸಿನಿಮಾ ಬಂದ ಕೇವಲ ಒಂದು ವರ್ಷದೊಳಗೆ, ಅಂದರೆ 2004 ರಲ್ಲಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಅಂತ್ಯ ಕಂಡರು.

ಸೌಂದರ್ಯ ಜೊತೆ ನಟಿಸಿದ ನಂದಮೂರಿ ಹರಿಕೃಷ್ಣ ಅವರಿಗೂ ವಿಧಿ ರಸ್ತೆ ಅಪಘಾತದ ರೂಪದಲ್ಲಿ ಕಂಟಕ ತಂದಿಟ್ಟಿತು. ಡಿಸೆಂಬರ್ 7, 2018 ರಂದು ಹೈದರಾಬಾದ್‌ನಿಂದ ನೆಲ್ಲೂರು ಜಿಲ್ಲೆಯ ಕವಲಿಯಲ್ಲಿ ನಡೆಯುತ್ತಿದ್ದ ಅಭಿಮಾನಿಯೊಬ್ಬರ ಮದುವೆಗೆ ಹೋಗುತ್ತಿದ್ದಾಗ ನಲ್ಗೊಂಡ ಜಿಲ್ಲೆಯಲ್ಲಿ ಹರಿಕೃಷ್ಣ ಅವರ ಕಾರು ಭೀಕರ ಅಪಘಾತಕ್ಕೆ ಒಳಗಾಯಿತು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಒಂದೇ ಸೂಪರ್ ಹಿಟ್ ಸಿನಿಮಾದ ನಾಯಕ ಮತ್ತು ನಾಯಕಿ ಇಬ್ಬರೂ ವಿಭಿನ್ನ ಭೀಕರ ಅಪಘಾತಗಳಲ್ಲಿ ಸಾವನ್ನಪ್ಪಿದ್ದು ಇಂದಿಗೂ ಚಿತ್ರರಂಗವನ್ನು ನಡುಗಿಸುವ ಕಾಕತಾಳೀಯವಾಗಿದೆ.

ಸೌಂದರ್ಯ ಸಾವಿನ ಬೆನ್ನಲ್ಲೇ ತೆರೆಕಂಡಿದ್ದ ಕನ್ನಡದ ‘ಆಪ್ತಮಿತ್ರ’

ಕನ್ನಡದ ಹೆಣ್ಣುಮಗಳಾದ ಸೌಂದರ್ಯ ಅವರಿಗೆ ಸ್ಯಾಂಡಲ್‌ವುಡ್‌ನೊಂದಿಗಿನ ನಂಟು ಕೊನೆಯವರೆಗೂ ಹಸಿರಾಗಿತ್ತು. ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗುವ ಮುನ್ನ ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ‘ಆಪ್ತಮಿತ್ರ’ ಚಿತ್ರದಲ್ಲಿ ನಟಿಸಿದ್ದರು. ದುರಂತವೆಂದರೆ, ಸೌಂದರ್ಯ ಅವರು ಬದುಕಿದ್ದಾಗ ‘ಆಪ್ತಮಿತ್ರ’ ಸಿನಿಮಾ ತೆರೆಕಂಡಿರಲಿಲ್ಲ. ಅವರ ಸಾವಿನ ನಂತರ ಬಿಡುಗಡೆಯಾದ ಈ ಸಿನಿಮಾ ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ದಾಖಲೆಯ ಯಶಸ್ಸು ಸಾಧಿಸಿತು. ಚಿತ್ರದಲ್ಲಿನ ಸೌಂದರ್ಯ ಅವರ ‘ನಾಗವಲ್ಲಿ’ ಪಾತ್ರ ಇಂದಿಗೂ ಕನ್ನಡಿಗರ ಮನಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಆ ಚಿತ್ರಕ್ಕೆ ಅವರಿಗೆ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿಯೂ ಒಲಿದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಕಲ್ಕಿ 2898 ಎಡಿ’ಯಲ್ಲಿ ದೀಪಿಕಾ ಪಡುಕೋಣೆ ಬದಲಿಗೆ ಆಲಿಯಾ? – Kannada News | Alia Bhatt joined Kalki 2898 AD Part 2 movie

ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ 2024 ರಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಕಳೆದ ತಿಂಗಳು ಈ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಆರಂಭವಾಗಿದೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಇನ್ನೂ ಕೆಲವರು ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಆದರೆ ಚಿತ್ರತಂಡಕ್ಕೆ ಸಮಸ್ಯೆ ಒಂದು ಎದುರಾಗಿದೆ. ಮೊದಲ ಭಾಗದಲ್ಲಿ ಬಹಳ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದೀಪಿಕಾ ಪಡುಕೋಣೆ, ಎರಡನೇ ಭಾಗದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಅವರ ಪಾತ್ರಕ್ಕೆ ಪ್ರತ್ಯೇಕ ನಟಿಯ ಹುಡುಕಾಟದಲ್ಲಿ ಚಿತ್ರತಂಡ ಇದೆ. ಸುದ್ದಿಗಳ ಪ್ರಕಾರ ಈಗಾಗಲೇ ದೀಪಿಕಾರ ಪಾತ್ರಕ್ಕೆ ಬದಲಿ ವ್ಯವಸ್ಥೆಯನ್ನು ಚಿತ್ರತಂಡ ಮಾಡಿಕೊಂಡಿದೆ.

ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಅವರು ಇದೀಗ ‘ಕಲ್ಕಿ 2898 ಎಡಿ’ ಸಿನಿಮಾ ತಂಡ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರು ದೀಪಿಕಾ ಪಡುಕೋಣೆ ನಟಿಸಿದ್ದ ಪಾತ್ರದಲ್ಲಿ ನಟಿಸಲಿದ್ದಾರೆಯೇ ಅಥವಾ ಬೇರೆ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಬಗ್ಗೆ ಖಾತ್ರಿ ಇಲ್ಲ. ಆದರೆ ಆಲಿಯಾ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲಿ ಇರುವುದು ಖಾತ್ರಿ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೆಲ ದಿನಗಳ ಹಿಂದೆ ಹರಿದಾಡಿದ್ದ ಸುದ್ದಿಯ ಪ್ರಕಾರ, ದೀಪಿಕಾ ಪಡುಕೋಣೆ, ಮೊದಲ ಭಾಗದಲ್ಲಿ ನಿರ್ವಹಿಸಿದ್ದ ಪಾತ್ರವನ್ನು ಎರಡನೇ ಭಾಗದಲ್ಲಿ ಸಾಯಿ ಪಲ್ಲವಿ ನಿರ್ವಹಿಸಲಿದ್ದಾರೆ ಎನ್ನಲಾಗಿತ್ತು. ಚಿತ್ರತಂಡ ಈಗಾಗಲೇ ಸಾಯಿ ಪಲ್ಲವಿ ಜೊತೆಗೆ ಮಾತುಕತೆ ಆಡಿದ್ದು, ಸಾಯಿ ಪಲ್ಲವಿ ಸಹ ಒಪ್ಪಿಗೆ ಸೂಚಿಸಿ ಡೇಟ್ಸ್ ನೀಡಿದ್ದಾರೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಆಲಿಯಾ ಭಟ್ ಸಹ ಚಿತ್ರತಂಡ ಸೇರಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ಹಾಲಿವುಡ್ ಖ್ಯಾತ ನಟಿಗೆ ಪ್ರಭಾಸ್ ಸಿನಿಮಾ ಬಲು ಇಷ್ಟವಂತೆ

ಅಂದಹಾಗೆ ದೀಪಿಕಾ ಅವರ ಎಂಟು ಗಂಟೆ ಮಾತ್ರ ಕೆಲಸ ಮಾಡುವ ಕಟ್ಟುನಿಟ್ಟಿನ ನಿಯಮದಿಂದಾಗಿ ದೀಪಿಕಾರನ್ನು ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಿಂದ ಕೈಬಿಡಲಾಗಿದೆ. ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಿಂದಲೂ ಇದೇ ಕಾರಣಕ್ಕೆ ಅವರು ಹೊರ ನಡೆದಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದು, ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಹಲವಾರು ತಾರೆಯರಿದ್ದಾರೆ. ಕಮಲ್ ಹಾಸನ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಸಹ ಇದ್ದಾರೆ. ಸಿನಿಮಾನಲ್ಲಿ ದಿಶಾ ಪಟಾನಿ ನಾಯಕಿ. ಈಗ ಆಲಿಯಾ ಮತ್ತು ಸಾಯಿ ಪಲ್ಲವಿ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕೀರ್ತಿ ಸುರೇಶ್ ಅವರು ಪಾತ್ರವೊಂದಕ್ಕೆ ಧ್ವನಿ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Astrological Beliefs: ರಾತ್ರಿ ಕೂದಲನ್ನು ಕೆದರಿಕೊಂಡು ಮಲಗಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು? – Kannada News | Hair Care in Sanatana Dharma: Astrological Beliefs and Scientific Reasons Explored

ರಾತ್ರಿ ಕೂದಲನ್ನು ಬಿಚ್ಚಿ ಮಲಗಬಾರದು ಏಕೆImage Credit source: Pinterest

ಸನಾತನ ಸಂಪ್ರದಾಯ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ, ಕೂದಲು ಕೇವಲ ಬಾಹ್ಯ ಸೌಂದರ್ಯದ ಸಂಕೇತವಲ್ಲ. ಅದು ವ್ಯಕ್ತಿಯ ಆಂತರಿಕ ಶಕ್ತಿ ಮತ್ತು ಶಕ್ತಿಯುತ ವ್ಯಕ್ತಿತ್ವದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಹಿರಿಯರು ಕೂದಲಿನ ಆರೈಕೆ, ಕತ್ತರಿಸುವುದು ಮತ್ತು ತೊಳೆಯುವುದಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದಿಷ್ಟ ನಿಯಮಗಳನ್ನು ರೂಪಿಸಿದ್ದಾರೆ. ಈ ನಂಬಿಕೆಗಳಿಗೆ ಸಾರ್ವತ್ರಿಕ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಇಂದಿಗೂ ಅನೇಕ ಜನರು ಇವುಗಳನ್ನು ಶ್ರದ್ಧೆ ಮತ್ತು ನಂಬಿಕೆಯಿಂದ ಪಾಲಿಸುತ್ತಿದ್ದಾರೆ. ಇದರ ಹಿಂದಿರುವ ಧಾರ್ಮಿಕ ಕಾರಣಗಳು ಮತ್ತು ಪ್ರಾಯೋಗಿಕ ವೈಜ್ಞಾನಿಕ ದೃಷ್ಟಿಕೋನವನ್ನು ಇಲ್ಲಿ ತಿಳಿಯೋಣ.

ರಾತ್ರಿ ಕೂದಲನ್ನು ಬಿಚ್ಚಿ ಮಲಗಬಾರದು ಏಕೆ?

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಪುರುಷರು ಅಥವಾ ಮಹಿಳೆಯರು ರಾತ್ರಿಯ ಸಮಯದಲ್ಲಿ ಕೂದಲನ್ನು ಸಂಪೂರ್ಣವಾಗಿ ಕೆದರಿಕೊಂಡು ಅಥವಾ ಬಿಚ್ಚಿಟ್ಟುಕೊಂಡು ಮಲಗಬಾರದು. ಬಿಚ್ಚಿದ ಕೂದಲು ನಕಾರಾತ್ಮಕ ಶಕ್ತಿಯನ್ನು ಸುಲಭವಾಗಿ ಆಕರ್ಷಿಸುತ್ತದೆ ಮತ್ತು ಇದರಿಂದ ಮನೆಯಲ್ಲಿ ಚಡಪಡಿಕೆ ಹಾಗೂ ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಕೆಲವು ಕೌಟುಂಬಿಕ ಸಂಪ್ರದಾಯಗಳ ಪ್ರಕಾರ, ರಾತ್ರಿ ಕೂದಲು ಅಸ್ತವ್ಯಸ್ತವಾಗಿದ್ದರೆ ಮನೆಯ ವಾತಾವರಣದಲ್ಲಿ ಅಸ್ಥಿರತೆ ಉಂಟಾಗಿ, ಅನಗತ್ಯ ಕಲಹಗಳು ಸೃಷ್ಟಿಯಾಗುತ್ತವೆ ಎನ್ನಲಾಗುತ್ತದೆ. ಅದಕ್ಕಾಗಿಯೇ, ಮಲಗುವ ಮುನ್ನ ಕೂದಲನ್ನು ಹಗುರವಾದ ಗಂಟು ಅಥವಾ ಜಡೆಯಲ್ಲಿ ಕಟ್ಟಿಕೊಳ್ಳಲು ಹಿರಿಯರು ಸಲಹೆ ನೀಡುತ್ತಾರೆ.

ವೈಜ್ಞಾನಿಕ ಆಯಾಮ:

ಇದರ ಪ್ರಾಯೋಗಿಕ ಅಥವಾ ವೈಜ್ಞಾನಿಕ ಆಯಾಮವನ್ನು ನೋಡುವುದಾದರೆ, ರಾತ್ರಿ ಕೂದಲನ್ನು ಬಿಟ್ಟು ಮಲಗುವುದರಿಂದ ಹಾಸಿಗೆಗೆ ಕೂದಲು ಸಿಕ್ಕಿಹಾಕಿಕೊಂಡು ಹೆಚ್ಚು ತುಂಡಾಗುತ್ತದೆ (hair breakage). ಅಲ್ಲದೆ, ಕೂದಲಿಗೆ ಹಚ್ಚಿದ ಎಣ್ಣೆ ಅಥವಾ ನೈಸರ್ಗಿಕ ಜಿಡ್ಡು ಮುಖದ ಚರ್ಮಕ್ಕೆ ತಗುಲಿ ಮೊಡವೆಗಳು (acne) ಉಂಟಾಗುವ ಸಾಧ್ಯತೆಯೂ ಇರುತ್ತದೆ. ಹಗುರವಾಗಿ ಕಟ್ಟಿ ಮಲಗುವುದರಿಂದ ಕೂದಲಿನ ಆರೋಗ್ಯವೂ ವೃದ್ಧಿಸುತ್ತದೆ.

ವಾರದ ಕೆಲವು ದಿನಗಳಲ್ಲಿ ತಲೆ ತೊಳೆಯಬಾರದೇ?

ಜ್ಯೋತಿಷ್ಯ ಸಂಪ್ರದಾಯದ ಪ್ರಕಾರ, ವಾರದ ದಿನಗಳು ನಿರ್ದಿಷ್ಟ ಗ್ರಹಗಳ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಉದಾಹರಣೆಗೆ, ಗುರುವಾರವನ್ನು ದೇವಗುರು ಬೃಹಸ್ಪತಿಗೆ ಮೀಸಲಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ತಲೆ ತೊಳೆಯುವುದರಿಂದ ಗುರುವಿನ ಬಲ ದುರ್ಬಲಗೊಂಡು, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳು ಎದುರಾಗುತ್ತವೆ ಎಂಬ ನಂಬಿಕೆಯಿದೆ. ಅದೇ ರೀತಿ ಮಂಗಳ ಮತ್ತು ಶನಿವಾರಗಳು ಕ್ರಮವಾಗಿ ಮಂಗಳ ಹಾಗೂ ಶನಿ ಗ್ರಹಗಳಿಗೆ ಸಂಬಂಧಿಸಿದ್ದಾಗಿದ್ದು, ಈ ದಿನಗಳಲ್ಲಿ ಕೂದಲು-ಉಗುರು ಕತ್ತರಿಸುವುದು ಅಥವಾ ತಲೆ ತೊಳೆಯುವುದನ್ನು ನಿಷೇಧಿಸಲಾಗಿದೆ. ಶುಕ್ರವಾರದ ವಿಷಯಕ್ಕೆ ಬಂದರೆ, ಕೆಲವು ಭಾಗಗಳಲ್ಲಿ ಲಕ್ಷ್ಮಿ ದೇವಿಯ ದಿನವೆಂದು ತಲೆ ತೊಳೆದರೆ, ಇನ್ನು ಕೆಲವೆಡೆ ತೊಳೆಯಬಾರದು ಎಂಬ ವಿಭಿನ್ನ ನಂಬಿಕೆಗಳಿವೆ.

ಆದರೆ, ಇದರ ಹಿಂದೆ ನೈರ್ಮಲ್ಯದ ಇತಿಹಾಸವೂ ಅಡಗಿದೆ. ಹಳೆಯ ಕಾಲದಲ್ಲಿ ಪ್ರತಿದಿನ ಇಡೀ ತಲೆಯನ್ನು ತೊಳೆಯಲು ಸಾಕಷ್ಟು ನೀರು ಮತ್ತು ಸಮಯ ಲಭ್ಯವಿರುತ್ತಿರಲಿಲ್ಲ. ಹಾಗಾಗಿ, ವಾರದಲ್ಲಿ ಎರಡು ಅಥವಾ ಮೂರು ದಿನಗಳನ್ನಷ್ಟೇ ತಲೆ ತೊಳೆಯಲು ನಿಗದಿಪಡಿಸಿ, ಅದಕ್ಕೆ ಧಾರ್ಮಿಕ ನಿಯಮಗಳ ಚೌಕಟ್ಟು ನೀಡಲಾಯಿತು. ವೈಜ್ಞಾನಿಕವಾಗಿಯೂ ಪ್ರತಿದಿನ ತಲೆ ತೊಳೆಯುವುದರಿಂದ ಕೂದಲಿನಲ್ಲಿರುವ ನೈಸರ್ಗಿಕ ತೈಲಾಂಶ (sebum) ನಾಶವಾಗಿ ಕೂದಲು ಒಣಗುತ್ತದೆ (dry hair). ಆದ್ದರಿಂದ ವಾರಕ್ಕೆ 2-3 ಬಾರಿ ತಲೆ ತೊಳೆಯುವುದು ಕೂದಲಿನ ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಉದುರಿದ ಕೂದಲನ್ನು ಎಲ್ಲೆಂದರಲ್ಲಿ ಎಸೆಯುವುದರ ಅಪಾಯ:

ಮನೆ ಸ್ವಚ್ಛಗೊಳಿಸುವಾಗ ಅಥವಾ ತಲೆ ಬಾಚುವಾಗ ಉದುರುವ ಕೂದಲಿನ ವಿಲೇವಾರಿಗೆ ಜ್ಯೋತಿಷ್ಯದಲ್ಲಿ ಕಠಿಣ ನಿಯಮಗಳಿವೆ. ಉದುರಿದ ಕೂದಲನ್ನು ಮನೆಯ ಸುತ್ತಮುತ್ತ ಅಥವಾ ತೆರೆದ ಕಸದ ಬುಟ್ಟಿಯಲ್ಲಿ ಹಾಗೇ ಬಿಡುವುದರಿಂದ ‘ರಾಹು ದೋಷ’ ಉಂಟಾಗುತ್ತದೆ ಎಂಬ ಭಯವಿದೆ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸಿ, ಅನಗತ್ಯ ವಿವಾದಗಳಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಉದುರಿದ ಕೂದಲನ್ನು ಒಂದೆಡೆ ಸಂಗ್ರಹಿಸಿ, ಸುರಕ್ಷಿತವಾಗಿ ಹೊರಗೆ ಹಾಕಲು ಸೂಚಿಸಲಾಗುತ್ತದೆ.

ವೈಜ್ಞಾನಿಕ ದೃಷ್ಟಿಕೋನ:

ವೈಜ್ಞಾನಿಕವಾಗಿ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ನೋಡುವುದಾದರೆ, ಕೂದಲು ಹಗುರವಾಗಿರುವುದರಿಂದ ಗಾಳಿಗೆ ಹಾರಿ ಅಡುಗೆ ಮನೆ ಸೇರಿದರೆ ಆಹಾರ ಪದಾರ್ಥಗಳು ಕಲುಷಿತಗೊಳ್ಳುತ್ತವೆ. ಇದು ನೈರ್ಮಲ್ಯಕ್ಕೆ ದೊಡ್ಡ ಧಕ್ಕೆ ತರುತ್ತದೆ. ಅಷ್ಟೇ ಅಲ್ಲದೆ, ಕೂದಲು ಎಲ್ಲೆಂದರಲ್ಲಿ ಬಿದ್ದಾಗ ಸಿಂಕ್ ಅಥವಾ ಬಾತ್‌ರೂಮ್‌ಗಳ ಪೈಪ್‌ಲೈನ್‌ಗಳಲ್ಲಿ ಸಿಲುಕಿಕೊಂಡು ನೀರು ಬ್ಲಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಪ್ರಾಯೋಗಿಕ ತೊಂದರೆಗಳನ್ನು ತಪ್ಪಿಸಲು ಹಿರಿಯರು ಈ ನಿಯಮವನ್ನು ತಂದಿದ್ದಾರೆ.

ಕೂದಲಿಗೆ ಸಂಬಂಧಿಸಿದ ಈ ಎಲ್ಲಾ ನಿಯಮಗಳು ಸಾಂಪ್ರದಾಯಿಕ ನಂಬಿಕೆಗಳನ್ನು ಆಧರಿಸಿದ್ದರೂ, ಅವುಗಳ ಹಿಂದೆ ಆರೋಗ್ಯ ಮತ್ತು ಶಿಸ್ತಿನ ರಹಸ್ಯಗಳಿವೆ. ನೀವು ಈ ನಿಯಮಗಳನ್ನು ಪಾಲಿಸುವುದಾದರೆ ಸಕಾರಾತ್ಮಕ ಯೋಚನೆಯೊಂದಿಗೆ ಅಳವಡಿಸಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version