ದೀರ್ಘಾಯುಷ್ಯ ನಿಮ್ಮದಾಗಬೇಕೇ? ಹಾಗಿದ್ರೆ ಪಾಲಿಸಿ ಈ ಸಲಹೆ

ದೀರ್ಘಾಯುಷ್ಯ ನಿಮ್ಮದಾಗಬೇಕೇ? ಹಾಗಿದ್ರೆ ಪಾಲಿಸಿ ಈ ಸಲಹೆ

ಹಿಂದೆಲ್ಲಾ ನಮ್ಮ ಹಿರಿಯರು ನೂರು ಕಾಲ ಆರೋಗ್ಯವಂತರಾಗಿ ಬದುಕು ಸಾಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರು ಸಣ್ಣ ವಯಸ್ಸಿನಲ್ಲಿಯೇ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣವೇ ಕಳಪೆ ಜೀವನಶೈಲಿ (Lifestyle) ಮತ್ತು ಅನಾರೋಗ್ಯಕರ ಆಹಾರ ಪದ್ಧತಿ. ಹೀಗಿರುವಾಗ ಆರೋಗ್ಯವಂತರಾಗಿ ನೂರು ಕಾಲ ಜೀವಿಸಬೇಕು ಎಂಬ ಬಯಕೆ ನಿಮಗಿದ್ದರೆ, ಜೀವನಶೈಲಿಯಲ್ಲಿ ಈ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಿ. ಇದರಿಂದ ಖಂಡಿತವಾಗಿಯೂ ದೀರ್ಘಾಯುಷ್ಯ ನಿಮ್ಮದಾಗುತ್ತದೆ.

ದೀರ್ಘಾಯುಷ್ಯ ನಿಮ್ಮದಾಗಲು ಈ ಸಲಹೆ ಪಾಲಿಸಿ:

ಸಮತೋಲಿತ ಆಹಾರ ಸೇವಿಸಿ: ನೀವು ಏನು ತಿನ್ನುತ್ತೀರೋ ಅದು ನಿಮ್ಮ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಹಾಗಾಗಿ ಅನಾರೋಗ್ಯಕರ ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸಿ, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರಗಳನ್ನು ಸೇವನೆ ಮಾಡಿ.

ನಿಯಮಿತವಾಗಿ ವ್ಯಾಯಾಮ ಮಾಡಿ:ನಿಯಮಿತ ವ್ಯಾಯಾಮವು ನಿಮ್ಮ ದೇಹವನ್ನು ಬಲಿಷ್ಠವಾಗಿ ಮತ್ತು ಸದೃಢವಾಗಿಡುವುದಲ್ಲದೆ, ನಿಮ್ಮ ಮೆದುಳಿಗೆ ಸಹ ಒಳ್ಳೆಯದು. ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಲು, ನಿದ್ರೆಯನ್ನು ಸುಧಾರಿಸಲು ಮತ್ತು ಹೃದಯ ಕಾಯಿಲೆ, ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಕೇವಲ 5 ನಿಮಿಷಗಳ ವ್ಯಾಯಾಮವು ನಿಮ್ಮ ಆಯುಷ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸಾಕಷ್ಟು ನಿದ್ರೆ ಪಡೆಯಿರಿ: ನಿದ್ರೆಯು ನಿಮ್ಮ ದೇಹವನ್ನು ಚೇತರಿಸಿಕೊಳ್ಳಲು ಮತ್ತು ಶಕ್ತಿಯನ್ನು ತುಂಬಲು ಸಮಯ ನೀಡುತ್ತದೆ. ಪ್ರತಿ ರಾತ್ರಿ 7-8 ಗಂಟೆಗಳ ನಿದ್ರೆ ಮಾಡಿ. ನಿದ್ರೆಯ ಕೊರತೆಯು ತೂಕ ಹೆಚ್ಚಾಗಲು ಮತ್ತು ಕೆಟ್ಟ ಮನಸ್ಥಿತಿಗೆ ಕಾರಣವಾಗಬಹುದು. ಆದ್ದರಿಂದ ಸಾಕಷ್ಟು ನಿದ್ರೆಯನ್ನು ಪಡೆಯಿರಿ

ಒತ್ತಡವನ್ನು ಕಡಿಮೆ ಮಾಡಿ: ಇತ್ತೀಚಿನ ದಿನಗಳಲ್ಲಿ ಒತ್ತಡವು ಸಾಮಾನ್ಯವಾಗಿಬಿಟ್ಟಿದೆ. ಈ ಒತ್ತಡ ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯವಂತರಾಗಿ ಹೆಚ್ಚು ಕಾಲ ಬಾಳಲು ಒತ್ತಡಮುಕ್ತರಾಗಿರಿ. ಈ ಒತ್ತಡವನ್ನು ಕಡಿಮೆ ಮಾಡಲು, ಯೋಗ, ಧ್ಯಾನ ಅಥವಾ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.

ಸಕಾರಾತ್ಮಕವಾಗಿ ಯೋಚಿಸಿ: ಸಕಾರಾತ್ಮಕವಾಗಿ ಯೋಚಿಸುವುದರಿಂದ ನೀವು ಹೆಚ್ಚು ಕಾಲ ಬದುಕಲು ಸಹಾಯವಾಗುತ್ತದೆ. ಹಲವಾರು ಅಧ್ಯಯನಗಳು ಸಕಾರಾತ್ಮಕವಾಗಿರುವುದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿವೆ. ನೀವು ಜೀವನದ ಬಗ್ಗೆ ಹೆಚ್ಚು ಸಕಾರಾತ್ಮಕ ಮತ್ತು ಆಶಾವಾದಿಗಳಾಗಿದ್ದಷ್ಟೂ, ನೀವು ಕಡಿಮೆ ಅನಾರೋಗ್ಯವನ್ನು ಅನುಭವಿಸುತ್ತೀರಿ ಮತ್ತು  ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕುತ್ತೀರಿ.

ಇದನ್ನೂ ಓದಿ: ಪ್ರತಿದಿನ ದಾಳಿಂಬೆ ಹಣ್ಣು ತಿನ್ನುವುದರಿಂದ ಲಭಿಸುವ ಪ್ರಯೋಜನಗಳೇನು ಗೊತ್ತಾ?

ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ: ಧೂಮಪಾನ ಮತ್ತು ಅತಿಯಾದ ಮದ್ಯಪಾನವು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಈ ಅಭ್ಯಾಸಗಳು ಹೃದ್ರೋಗ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಇತರ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಮತ್ತು ಆಯುಷ್ಯವನ್ನೂ ಕಡಿಮೆ ಮಾಡುತ್ತದೆ. ಆದ್ದರಿಂದ ಧೂಮಪಾನವನ್ನು ತ್ಯಜಿಸಿ.

ಸಾಮಾಜಿಕ ಸಂಪರ್ಕದಲ್ಲಿರಿ: ಸಾಮಾಜಿಕ ಸಂಪರ್ಕಗಳನ್ನು ಹೊಂದಿರುವುದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ. ಈ ಅಭ್ಯಾಸವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಸಾಧ್ಯವಾದಷ್ಟು ನಡೆಯಿರಿ: ಪ್ರತಿನಿತ್ಯ ವಾಕಿಂಗ್‌ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.  ನಡೆಯುವುದು ದೇಹವನ್ನು ಉತ್ತಮ ಸಮತೋಲನದಲ್ಲಿಡುತ್ತದೆ, ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ಮತ್ತು ಮನಸ್ಥಿತಿಯೂ ಉತ್ತಮವಾಗಿರುತ್ತದೆ.‌

ನಿಯಮಿತ ವೈದ್ಯಕೀಯ ತಪಾಸಣೆ: ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಕಾಯಿಲೆಗಳಿಗೆ ಸಕಾಲಿಕ ಚಿಕಿತ್ಸೆ ಪಡೆಯಲು ವೈದ್ಯರೊಂದಿಗೆ ನಿಯಮಿತ ಸಮಾಲೋಚನೆಗಳು ಮತ್ತು ತಪಾಸಣೆಗಳು ಅತ್ಯಗತ್ಯ. ಇದು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಪ ಆರೋಪ ಬೆನ್ನಲ್ಲೇ ಜಿಬಿಎ ಮತದಾರರ ಪಟ್ಟಿ ಆಕ್ಷೇಪಣೆಗೆ ನೀಡಿದ್ದ ಕಾಲಾವಕಾಶ ವಿಸ್ತರಣೆ

ಬೆಂಗಳೂರು, ಮಾರ್ಚ್​ 18: ಐದು ನಗರ ಪಾಲಿಕೆಗಳ ವಾರ್ಡ್‌ವಾರು ಮತದಾರರ ತಾತ್ಕಾಲಿಕ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆಯಲ್ಲಿ ನಾಗರಿಕರಿಗೆ ನೀಡಿದ್ದ ದೂರು ಹಾಗೂ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಇದೀಗ ಮುಂದೂಡಲಾಗಿದೆ. ಜನರು ತಮ್ಮ ಅಸಮ್ಮತಿ ಅಥವಾ ತಿದ್ದುಪಡಿ ಸಲಹೆಗಳನ್ನು ಮಾರ್ಚ್ 30ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಈ ಮೊದಲು ಮಾರ್ಚ್​ 20ರವರೆಗೆ ಮಾತ್ರ ಕಾಲಾವಕಾಶ ನಿಗದಿಯಾಗಿತ್ತು. ಆದರೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಡೆದ ಸಭೆಯಲ್ಲಿ ಇನ್ನಷ್ಟು ಸಮಯ ನೀಡುವಂತೆ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಸಂಬಂಧಿತ ಅಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಅವಧಿ ವಿಸ್ತರಣೆಗಾಗಿ ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಪರಿಶೀಲಿಸಿದ ಆಯೋಗವು ಜನಸಾಮಾನ್ಯರ ಅನುಕೂಲವನ್ನು ಗಮನದಲ್ಲಿಟ್ಟು ದೂರು ಮತ್ತು ಆಕ್ಷೇಪಣೆ ಸಲ್ಲಿಸಲು ನೀಡಿದ್ದ ಕಾಲಾವಕಾಶವನ್ನು ಮಾರ್ಚ್​ 30ರವರೆಗೆ ವಿಸ್ತರಣೆ ಮಾಡಿದೆ.

ಮಾಧ್ಯಮ ಪ್ರಕಟಣೆಯಲ್ಲೇನಿದೆ?

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ವಾರ್ಡುವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯು ಮಾರ್ಚ್​ 09 ರಂದು ಪ್ರಕಟಿಸಲಾಗಿತ್ತು. ಆದರೆ ಅದೇ ದಿನ ನಡೆದ ಸಭೆಯಲ್ಲಿ ರಾಜಕೀಯ ಪಕ್ಷಗಳು ಮತದಾರರ ಪಟ್ಟಿಯನ್ನು ಪರಿಶೀಲಿಸಲು ಹಾಗೂ ದೂರು ಆಕ್ಷೇಪಣೆಯನ್ನು ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಬೇಕೆಂದು ಕೋರಿದ್ದರು. ಹೀಗಾಗಿ ದೂರು ಮತ್ತು ಆಕ್ಷೇಪಣೆ ಸಲ್ಲಿಸಲು ಮಾರ್ಚ್​ 20 ರವರೆಗೆ ಕಾಲಾವಕಾಶ ನೀಡುವಂತೆ ಕೋರಲಾಗಿತ್ತು.

ಇದನ್ನೂ ಓದಿ: ಜಿಬಿಎ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ? ಹಂತ ಹಂತವಾದ ಮಾಹಿತಿ ಇಲ್ಲಿದೆ

Search by EPIC ಹಾಗೂ Search by Name ಮೂಲಕ ಮತದಾರರು ತಮ್ಮ ಹೆಸರು ಹಾಗೂ ಇನ್ನಿತರೆ ಮಾಹಿತಿಯನ್ನು ಪರಿಶೀಲಿಸಿಕೊಂಡು ದೂರು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಇನ್ನಷ್ಟು ಸಮಯಾವಕಾಶದ ಅಗತ್ಯವಿರುವುದಾಗಿ ಸಾರ್ವಜನಿಕರು, ರಾಜಕೀಯ ಪಕ್ಷಗಳಿಂದ ಹಾಗೂವಸತಿ ಕಲ್ಯಾಣ ಸಂಘದವರಿಂದ ದೂರವಾಣಿ ಮುಖಾಂತರ ಕೋರುತ್ತಿರುವುದರಿಂದ ದೂರು ಮತ್ತು ಆಕ್ಷೇಪಣೆಯನ್ನು ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಬೇಕೆಂದು ಕೋರಿರುವ ಹಿನ್ನಲೆ ದೂರು ಮತ್ತು ಆಕ್ಷೇಪಣೆ ಸಲ್ಲಿಸಲು ಮಾರ್ಚ್​​ 30ರವರೆಗೆ ಕಾಲಾವಕಾಶ ನೀಡುವಂತೆ ಕೋರಲಾಗಿತ್ತು. ಅದರಂತೆಯೇ ಇದೀಗ ರಾಜ್ಯ ಚುನಾವಣಾ ಆಯೋಗ ಅನುಮತಿ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಐಪಿಎಲ್ ಫೈನಲ್​ಗಳಲ್ಲಿ ಸೋಲಿಲ್ಲದ ಸರದಾರರು

Source link

‘ಧುರಂಧರ್ 2’ ಪ್ರೀಮಿಯರ್ ರದ್ದು, ‘ಉಸ್ತಾದ್ ಭಗತ್ ಸಿಂಗ್​​’ಗೆ ಭರ್ಜರಿ ಲಾಭ

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ನಾಳೆ (ಮಾರ್ಚ್ 19) ಬಿಡುಗಡೆ ಆಗುತ್ತಿದೆ. ಆದರೆ ಇಂದಿನಿಂದಲೇ ದೇಶದ ಹಲವು ನಗರಗಳಲ್ಲಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ದುಬಾರಿ ಬೆಲೆಯ ಈ ಪೇಯ್ಡ್ ಪ್ರೀಮಿಯರ್ ಶೋಗಳ ಟಿಕೆಟ್ ಬೆಲೆಯನ್ನು ನಾಲ್ಕೈದು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಸಹ ಮಾಡಲಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಸೆನ್ಸಾರ್​​ನಿಂದ ಸಮಸ್ಯೆ ಎದುರಾದ ಕಾರಣ ಇದೀಗ ಭಾರತದಲ್ಲಿ ಹಿಂದಿ ಪ್ರೀಮಿಯರ್ ಶೋ ಹೊರತಾಗಿ ಇತರೆ ಭಾಷೆಯ ಎಲ್ಲ ಪ್ರೀಮಿಯರ್ ಶೋ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಆದರೆ ಅಮೆರಿಕದಲ್ಲಿ ಸಿನಿಮಾದ ಎಲ್ಲ ಪೇಯ್ಡ್ ಪ್ರೀಮಿಯರ್ ಶೋ ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ. ಇದು ಪವನ್ ಕಲ್ಯಾಣ್​​ರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಭರ್ಜರಿ ಲಾಭ ಮಾಡಿಕೊಡಲಿದೆ.

ಭಾರತದಲ್ಲಿ ‘ಧುರಂಧರ್ 2’ ಸಿನಿಮಾದ ಕನ್ನಡ, ತೆಲಗು, ತಮಿಳು ಭಾಷೆಯ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಮಾತ್ರವೇ ಸದ್ಯಕ್ಕೆ ರದ್ದು ಮಾಡಲಾಗಿದೆ. ಸೆನ್ಸಾರ್ ಮಂಡಳಿಯು ಸುಮಾರು ಆರು ನಿಮಿಷದ ಕಟ್​​ಗಳನ್ನು ಸಿನಿಮಾಕ್ಕೆ ಸೂಚಿಸಿರುವ ಕಾರಣ ಕೊನೆಯ ಕ್ಷಣದಲ್ಲಿ ಸಿನಿಮಾವನ್ನು ಮತ್ತೆ ಟ್ರಿಮ್ ಮಾಡಲಾಗುತ್ತಿದೆ. ಈ ಟ್ರಿಮ್ಮಿಂಗ್ ಕಾರ್ಯವನ್ನು ಹಿಂದಿ ಆವೃತ್ತಿಗೆ ಮಾತ್ರವೇ ಮಾಡಲಾಗುತ್ತಿದ್ದು, ದೇಶದಾದ್ಯಂತ ಹಿಂದಿ ಆವೃತ್ತಿಯ ಪೇಯ್ಡ್ ಪ್ರೀಮಿಯರ್ ಅನ್ನು ಮಾತ್ರವೇ ಪ್ರದರ್ಶಿಸಲಾಗುತ್ತಿದೆ.

ಸಿನಿಮಾದ ಕಂಟೆಂಟ್ ನಲ್ಲಿ ಕೊನೆಯ ಕ್ಷಣದಲ್ಲಿ ಬಂದ ಈ ಸಮಸ್ಯೆಯಿಂದಾಗಿ ಅಮೆರಿಕದ ಎಲ್ಲ ಪೇಯ್ಡ್ ಪ್ರೀಮಿಯರ್ ಶೋ ರದ್ದಾಗಲಿದೆ ಎನ್ನಲಾಗುತ್ತಿದೆ. ಇದರಿಂದಾಗಿ ನಾಳೆ (ಮಾರ್ಚ್ 19) ಬಿಡುಗಡೆ ಆಗಲಿರುವ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರೀಮಿಯರ್ ಶೋಗೆ ಭಾರಿ ಸಹಕಾರಿ ಆಗಲಿದೆ.

ಇದನ್ನೂ ಓದಿ:‘ಧುರಂಧರ್ 2’ ಮೊದಲ ವಿಮರ್ಶೆ: ಹಾಲಿವುಡ್ ನಿರ್ದೇಶಕರು ನೋಡಬೇಕು ಎಂದ ಆರ್​ಜಿವಿ

‘ಧುರಂಧರ್ 2’ ಸಿನಿಮಾದ ಕಾರಣದಿಂದಾಗಿ ‘ಉಸ್ತಾದ್ ಭಗತ್ ಸಿಂಗ್’ ದೇಶದಲ್ಲಿ ಮಾತ್ರವಲ್ಲದೆ ಅಮೆರಿಕದಲ್ಲಿಯೂ ಸಹ ಸಾಕಷ್ಟು ಸಮಸ್ಯೆ ಎದುರಿಸಿತ್ತು. ಅಮೆರಿಕ ವಿಶೇಷವಾಗಿ ನಾರ್ತ್ ಅಮೆರಿಕದಲ್ಲಿ ಭರ್ಜರಿ ಕಲೆಕ್ಷನ್ ಅನ್ನು ‘ಉಸ್ತಾದ್ ಭಗತ್ ಸಿಂಗ್’ ನಿರೀಕ್ಷಿಸಿತ್ತು. ಆದರೆ ಅಲ್ಲಿಯೂ ಸಹ ‘ಧುರಂಧರ್ 2’ ಭಾರಿ ಸ್ಪರ್ಧೆ ಒಡ್ಡಿತ್ತು, ಇದರಿಂದಾಗಿ ಪ್ರೀಮಿಯರ್ ಶೋಗಳಿಗೆ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ ಈಗ ‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶೋ ರದ್ದಾಗಿದ್ದು, ಅದರ ಲಾಭ ‘ಉಸ್ತಾದ್ ಭಗತ್ ಸಿಂಗ್’ಗೆ ಸಿಗಲಿದೆ.

ಪವನ್ ಕಲ್ಯಾಣ್, ಶ್ರೀಲೀಲಾ, ರಾಶಿ ಖನ್ನಾ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಅಸಲಿಗೆ ಮುಂದಿನ ವಾರ ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದ ಕಾರಣಕ್ಕೆ, ‘ಉಸ್ತಾದ್ ಭತ್ ಸಿಂಗ್’ ಮಾರ್ಚ್ 19ರಂದೇ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತು. ಆದರೆ ಈಗ ‘ಧುರಂಧರ್ 2’ ಸಿನಿಮಾದಿಂದ ಭಾರಿ ಸ್ಪರ್ಧೆಯಲ್ಲಿ ಎದುರಿಸುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Ugadi 2026: ಯುಗಾದಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿ ಆರೋಗ್ಯಕರ, ರುಚಿಕರ ಕಾಯಿ ಹೋಳಿಗೆ

ನಾಡಿನೆಲ್ಲೆಡೆ ಯುಗಾದಿ (Ugadi) ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬ ಹಿಂದೂಗಳ ಪಾಲಿನ ವರ್ಷದ ಮೊದಲ ಹಬ್ಬ.  ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಮನೆಯನ್ನು ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿ, ಪ್ರತಿಯೊಬ್ಬರೂ ಬೇವು ಬೆಲ್ಲವನ್ನು ಹಂಚುತ್ತಾರೆ. ಬೇವು ಬೆಲ್ಲದ ಜೊತೆ ರುಚಿ ರುಚಿಯಾದ ಬಗೆಬಗೆ ಅಡುಗೆಗಳನ್ನೂ ಮಾಡಲಾಗುತ್ತದೆ. ಅದರಲ್ಲೂ ಯುಗಾದಿ ಹಬ್ಬಕ್ಕೆ ಒಬ್ಬಟ್ಟು ಇರಲೇಬೇಕು. ಸಾಮಾನ್ಯವಾಗಿ ಒಬ್ಬಟ್ಟನ್ನು ಮೈದಾ ಹಿಟ್ಟು ಬಳಸಿ ಮಾಡಲಾಗಿತ್ತದೆ.  ಹೀಗಿರುವಾಗ ಈ ಬಾರಿಯ ಹಬ್ಬಕ್ಕೆ ಆರೋಗ್ಯಕರ ರೀತಿಯಲ್ಲಿ ಒಬ್ಬಟ್ಟು ಮಾಡಬೇಕು ಅಂತಿದ್ರೆ,  ಕಾಯಿ ಒಬ್ಬಟ್ಟನ್ನು ತಯಾರಿಸಿ, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿ.

ಯುಗಾದಿ ಹಬ್ಬಕ್ಕೆ ಮಾಡಿ ಕಾಯಿ ಒಬ್ಬಟ್ಟು:

ಯುಗಾದಿ ಹಬ್ಬದಂದು ಬೇವು ಬೆಲ್ಲ ಎಷ್ಟು ಮುಖ್ಯವೋ ಒಬ್ಬಟ್ಟು ಕೂಡ ಅಷ್ಟೇ ಮುಖ್ಯ. ಈ ಬಾರಿಯ ಹಬ್ಬಕ್ಕೆ ಮೈದಾ ಹಿಟ್ಟನ್ನು ಬಳಸಿ ಹೋಳಿಗೆ ತಯಾರಿಸುವ ಬದಲು, ಗೋಧಿ ಹಿಟ್ಟಿನಿಂದ ಆರೋಗ್ಯಕರ ಕಾಯಿ ಒಬ್ಬಟ್ಟನ್ನು ತಯಾರಿಸಿ. ಈ ಹೆಲ್ತಿ ರೆಸಿಪಿಯನ್ನು poojaga_food ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಕಾಯಿ ಒಬ್ಬಟ್ಟು ಮಾಡಲು ಬೇಕಾಗಿರುವ ಸಾಮಾಗ್ರಿಗಳು:

1 ½ ಕಪ್‌ ಗೋಧಿ ಹಿಟ್ಟು, ಅರಶಿನ, ಉಪ್ಪು, ಎಣ್ಣೆ, 1 ½ ಕಪ್‌ ಬೆಲ್ಲ, 2 ½ ಕಪ್‌ ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ

ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ಯುಗಾದಿ ಹಬ್ಬದಂದು ಬೇವು-ಬೆಲ್ಲ ಹಂಚುವುದರ ಹಿಂದಿನ ಆಧ್ಯಾತ್ಮಿಕ, ವೈಜ್ಞಾನಿಕ ಮಹತ್ವವೇನು?

ಕಾಯಿ ಒಬ್ಬಟ್ಟು ಮಾಡುವ ವಿಧಾನ:

  • ಒಂದು ಪಾತ್ರೆಗೆ ಗೋಧಿ ಹಿಟ್ಟು, ಸ್ವಲ್ಪ ಅರಶಿನ ಪುಡಿ, ಉಪ್ಪು, ತುಪ್ಪ ಹಾಕಿ ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ ಮೃದುವಾದ ಕಣಕ ತಯಾರಿಸಿ. ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ 1 ರಿಂದ 2 ಗಂಟೆಗಳ ಕಾಲ ನೆನೆಸಿಡಿ.
  • ನಂತರ ಮಿಕ್ಸಿ ಜಾರ್‌ಗೆ ಬೆಲ್ಲ, ತೆಂಗಿನಕಾಯಿ ತುರಿಯನ್ನು ಹಾಕಿ ಈ ಮಿಶ್ರಣವನ್ನು ರುಬ್ಬಿಕೊಳ್ಳಿ.
  • ಬಳಿಕ ಒಲೆಯ ಮೇಲೆ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ತುಪ್ಪ ಸೇರಿಸಿ, ಪಾತ್ರ ಕಾದ ಬಳಿಕ ರುಬ್ಬಿಟ್ಟ ಬೆಲ್ಲ ತೆಂಗಿನಕಾಯಿ ಹೂರಣ ಮಿಶ್ರಣವನ್ನು ಸೇರಿಸಿ ಹುರಿಯಿರಿ, ಕೊನೆಯಲ್ಲಿ ಸ್ಪಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಎಲ್ಲವನ್ನು ಮಿಶ್ರಣ ಮಾಡಿ ಉಂಡೆ ಕಟ್ಟಿಕೊಳ್ಳಿ.
  • ಈಗ ಮೊದಲೇ ತಯಾರಿಸಿಟ್ಟ ಗೋಧಿ ಹಿಟ್ಟಿನ ಕಣಕವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ಹೂರಣವನ್ನು ತುಂಬಿಸಿ, ಹೋಳಿಗೆ ಮಿಶ್ರಣವನ್ನು ಚೆನ್ನಾಗಿ ತಟ್ಟಿಕೊಳ್ಳಿ.
  • ಕೊನೆಯಲ್ಲಿ ಒಂದು ತವಾಗೆ ತುಪ್ಪನ್ನು ಸೇರಿಸಿ ತಯಾರಾದ ಹೋಳಿಗೆಯನ್ನು ಬೇಯಿಸಿದರೆ, ರುಚಿಕರ, ಆರೋಗ್ಯಕರ ಒಬ್ಬಟ್ಟು ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಮನೂರು ಕುಟುಂಬಕ್ಕೆ ಟಿಕೆಟ್ ಕೊಟ್ರೆ…ಕಾಂಗ್ರೆಸ್​​​ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡರು

ದಾವಣಗೆರೆ, (ಮಾರ್ಚ್ 18): ರಾಜ್ಯ ರಾಜಕಾರಣದ ‘ಬೆಣ್ಣೆ ನಗರಿ’ ದಾವಣಗೆರೆಯಲ್ಲಿ ಉಪ ಚುನಾವಣಾ (Davanagere South By Election) ಕಾವು ಜೋರಾಗಿದೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಜಿಲ್ಲೆಯ ಕಾಂಗ್ರೆಸ್ ಮುಸ್ಲಿಂ ಮುಖಂಡು ಬದಲಾವಣೆ ಬಯಸುತ್ತಿದ್ದಾರೆ. ಶಾಮನೂರು ಕುಟುಂಬದ ಹೊರತಾಗಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಎಂಬುವುದು ಆಗ್ರಹವಾಗಿದೆ. ಒಂದು ವೇಳೆ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದರೆ ಸೋಲಿಸುವುದಾಗಿ ಮುಸ್ಲಿಂ ಮುಖಂಡರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಭಿನ್ನಮತ ಸವಾಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಪ್ರಿಲ್ 1ರಿಂದ ಹೊಸ ಪ್ಯಾನ್ ಅಪ್ಲಿಕೇಶನ್ ನಿಯಮಗಳು ಜಾರಿಗೆ; ಅರ್ಜಿ ಪ್ರಕ್ರಿಯೆ ಸುಲಭವಿರಲ್ಲ

ನವದೆಹಲಿ, ಮಾರ್ಚ್ 18: ಒಬ್ಬ ವ್ಯಕ್ತಿಯ ಹಣಕಾಸು ಕಾರ್ಯಗಳಿಗೆ ಪ್ಯಾನ್ (PAN- Permanent Account Number) ಈಗ ಬಹಳ ಮುಖ್ಯವಾಗಿರುವ ದಾಖಲೆ ಎನಿಸಿದೆ. ಆದಾಯ ತೆರಿಗೆ ಇಲಾಖೆಯು ಈ ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಒದಗಿಸುತ್ತದೆ. ವ್ಯಕ್ತಿಯ ಬಹುತೇಕ ಹಣಕಾಸು ಚಟುವಟಿಕೆಯನ್ನು ದಾಖಲಿಸಲು ಪ್ಯಾನ್ ಸಹಾಯವಾಗುತ್ತದೆ. ಹೀಗಾಗಿ, ಪ್ಯಾನ್ ನಿಯಮಗಳಲ್ಲಿ ಆಗುವ ಬದಲಾವಣೆ ಬಹಳ ಮಹತ್ವ ಎನಿಸುತ್ತದೆ. ಆದಾಯ ತೆರಿಗೆ ಇಲಾಖೆ ಏಪ್ರಿಲ್ 1ರಿಂದ ನಿಯಮ ಪರಿಷ್ಕರಣೆ ಮಾಡಿದೆ.

ಏಪ್ರಿಲ್ 1ರಿಂದ ಹೊಸ ಪ್ಯಾನ್ ಅಪ್ಲಿಕೇಶನ್ ನಿಯಮಗಳು ಜಾರಿಗೆ ಬರಲಿವೆ. ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ ನೀವು ಪ್ಯಾನ್ ಪಡೆಯಲು ಆಧಾರ್ ದಾಖಲೆ ನೀಡುವುದು ಮಾತ್ರ ಅಗತ್ಯವಾಗಿತ್ತು. ಬಹಳ ಸುಲಭವಾಗಿ ಅಪ್ಲಿಕೇಶನ್ ಸಲ್ಲಿಸಿ, ಪ್ಯಾನ್ ಪಡೆಯಬಹುದಿತ್ತು. ಮಾರ್ಚ್ 31ರ ನಂತರ ಇದರಲ್ಲಿ ಬದಲಾವಣೆ ಆಗಲಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್​ಪಿಜಿ ಟ್ಯಾಂಕರ್​ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?

ಹೊಸ ಪ್ಯಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಆಧಾರ್ ದಾಖಲೆ ನೀಡಿದರೆ ಸಾಲದು. ಹೆಚ್ಚಿನ ದಾಖಲೆಗಳು ಬೇಕಾಗುತ್ತದೆ. ವ್ಯಕ್ತಿಯ ಜನ್ಮ ದಿನಾಂಕದ ಋಜುವಾತಿಗೆ ಆಧಾರ್ ಸಾಕಾಗುವುದಿಲ್ಲ. ಹೆಚ್ಚುವರಿ ದಾಖಲೆ ಬೇಕಾಗುತ್ತದೆ.

ಜನನ ಪ್ರಮಾಣಪತ್ರ ಅಥವಾ ಬರ್ತ್ ಸರ್ಟಿಫಿಕೇಟ್, ವೋಟರ್ ಐಡಿ, ಪಾಸ್​ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಮತ್ತು ಎಸ್ಸೆಸ್ಸೆಲ್ಸಿ ಪ್ರಮಾಣಪತ್ರವನ್ನು ಕೇಳಲಾಗಬಹುದು. ಅಗತ್ಯಬಿದ್ದರೆ ಅಫಿಡವಿಟ್ ಹಾಗೂ ಇತರ ಸರ್ಕಾರಿ ದಾಖಲೆಗಳನ್ನೂ ಕೇಳಬಹುದು.

ಇದನ್ನೂ ಓದಿ: ಎಲ್​ಪಿಜಿ ಇಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; ಈ ಗ್ರಾಹಕರಿಗೆ ಮಾತ್ರ ಅನ್ವಯ, ಗಮನಿಸಿ

ಪ್ಯಾನ್ ಮತ್ತು ಆಧಾರ್​ನಲ್ಲಿ ವ್ಯಕ್ತಿಯ ಹೆಸರು ನಿಖರವಾಗಿ ಹೊಂದಿಕೆಯಾಗಬೇಕು

ಏಪ್ರಿಲ್ 1ರಿಂದ ಜಾರಿಯಾಗಲಿರುವ ಮತ್ತೊಂದು ಗಮನಾರ್ಹ ಪ್ಯಾನ್ ನಿಯಮವೆಂದರೆ ಹೆಸರಿನದ್ದು. ಆಧಾರ್​ನಲ್ಲಿರುವ ವ್ಯಕ್ತಿಯ ಹೆಸರು ಮತ್ತು ಅವರ ಪ್ಯಾನ್​ನಲ್ಲಿರುವ ಹೆಸರು ನಿಖರವಾಗಿ ಹೊಂದಿಕೆಯಾಗಬೇಕು. ಎಲ್ಲಾ ಇನಿಷಿಯಲ್​ಗಳೂ ಒಂದೇ ಇರಬೇಕು. ಉದಾಹರಣೆಗೆ, ಆಧಾರ್ ಕಾರ್ಡ್​ನಲ್ಲಿ ವ್ಯಕ್ತಿ ಹೆಸರು Subrahmanya K N ಎಂದಿದ್ದರೆ, ಪ್ಯಾನ್​ನಲ್ಲಿ Subramanya K N ಎಂದಿದ್ದರೆ ಆಗ ಅದು ಹೊಂದಿಕೆ ಆಗುವುದಿಲ್ಲ. ಪ್ಯಾನ್ ಅರ್ಜಿ ರಿಜೆಕ್ಟ್ ಆಗಬಹುದು. ಆಧಾರ್​ನಲ್ಲಿರುವಂತೆ ಹೆಸರನ್ನು ಹಾಗೆಯೇ ಬರೆಯಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್, ಗ್ಯಾಸ್ ಬಿಕ್ಕಟ್ಟಿಗೆ ನಲುಗಿದ ಪಾಕ್; ಪಾಕಿಸ್ತಾನದ ಗಣರಾಜ್ಯೋತ್ಸವ ಆಚರಣೆಯೇ ರದ್ದು

ಇಸ್ಲಮಾಬಾದ್, ಮಾರ್ಚ್ 18: ವಿಶ್ವಾದ್ಯಂತ ಉಂಟಾಗಿರುವ ಇಂಧನ ಮತ್ತು ಅನಿಲ ಬಿಕ್ಕಟ್ಟಿನಿಂದಾಗಿ ನೆರೆಯ ದೇಶ ಪಾಕಿಸ್ತಾನವೂ ಕಂಗೆಟ್ಟಿದೆ. ಇದೇ ಕಾರಣದಿಂದ ಈ ವರ್ಷ ಪಾಕಿಸ್ತಾನದಲ್ಲಿ ‘ಪಾಕಿಸ್ತಾನ ದಿನಾಚರಣೆ'(ಪಾಕಿಸ್ತಾನದ ರಿಪಬ್ಲಿಕ್ ಡೇ) ಆಚರಿಸದಿರಲು ನಿರ್ಧರಿಸಲಾಗಿದೆ. ಮಾರ್ಚ್ 23ರಂದು ಪಾಕಿಸ್ತಾನದ (Pakistan)  ಗಣರಾಜ್ಯೋತ್ಸವ ಆಚರಿಸಬೇಕಾಗಿತ್ತು. ಆದರೆ, ಹಣ ಹಾಗೂ ಇಂಧನದ ಬಿಕ್ಕಟ್ಟಿನಿಂದ ಈ ಸಂಭ್ರಮಾಚರಣೆಯನ್ನು ರದ್ದುಗೊಳಿಸಲಾಗಿದೆ.

“ಸಹೋದರರೇ, ಆಹಾರ ಮತ್ತು ಪಾನೀಯಗಳನ್ನು ಸೇವಿಸಿ ಸಂಭ್ರಮಾಚರಿಸಬೇಡಿ. ಕೇಕ್ ಕತ್ತರಿಸಿ ಮನೆಗೆ ಹೋಗಿ!” ಎಂದು ಸರ್ಕಾರದಿಂದ ಪಾಕಿಸ್ತಾನದ ಜನರಿಗೆ ಸೂಚನೆ ನೀಡಲಾಗಿದೆ.

ಇರಾನ್ ಜೊತೆ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಯುದ್ಧವು ಪಾಕಿಸ್ತಾನವನ್ನು ಎಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರೆ ಪಾಕಿಸ್ತಾನ ದಿನಾಚರಣೆಯ ಮೆರವಣಿಗೆಯನ್ನು ಕೂಡ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ದಿಟ್ಟ ಘೋಷಣೆ ಮಾಡಿದೆ. ಈ ವರ್ಷ ಯಾವುದೇ ಮಿಲಿಟರಿ ಮೆರವಣಿಗೆ ಇರುವುದಿಲ್ಲ, ಯಾವುದೇ ಅಲಂಕಾರಿಕ ಸಮಾರಂಭಗಳಿರುವುದಿಲ್ಲ ಮತ್ತು ಟ್ಯಾಂಕ್-ಕ್ಷಿಪಣಿ ಪ್ರದರ್ಶನಗಳಿರುವುದಿಲ್ಲ. ಗಲ್ಫ್ ರಾಷ್ಟ್ರಗಳ ತೈಲ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನ ದಿವಾಳಿಯಾಗಿದೆ.

ಇದನ್ನೂ ಓದಿ: ಬಹ್ರೇನ್ ಮೇಲಿನ ಇರಾನ್ ದಾಳಿಯ ವಿಡಿಯೋ ಶೇರ್ ಮಾಡಿದ್ದಕ್ಕೆ 5 ಪಾಕಿಸ್ತಾನಿ ಪ್ರಜೆಗಳ ಬಂಧನ

ಪಾಕಿಸ್ತಾನ ಈಗಾಗಲೇ IMFನಿಂದ ಸಾಲ ಪಡೆದಿದೆ. ಆ ಸಾಲದ ಭಾರದ ಜೊತೆಗೆ ಇದೀಗ ತೈಲ ಬಿಕ್ಕಟ್ಟು ಕೂಡ ಉಂಟಾಗಿದೆ. ಹೀಗಾಗಿ, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಜೆಟ್‌ಗಳನ್ನು ಹಾರಿಸಲು ಹಣ ಮತ್ತು ಇಂಧನವೆರಡೂ ಇಲ್ಲದೆ ಪಾಕ್ ಈ ನಿರ್ಧಾರ ಮಾಡಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರ ಕಚೇರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ನಲ್ಲಿ ಪಾಕಿಸ್ತಾನ ದಿನದಂದು ಮೆರವಣಿಗೆ ಇರುವುದಿಲ್ಲ ಎಂದು ಘೋಷಿಸಿದೆ.

ಇದನ್ನೂ ಓದಿ: ಪಾಕಿಸ್ತಾನದ ಮೇಲಿನ ದ್ವೇಷದಿಂದ ಭಾರತ, ಇರಾನ್, ಅಫ್ಘಾನ್ ಒಂದಾಗಿ ಸಂಚು; ಖವಾಜಾ ಆಸಿಫ್ ಆರೋಪ

ಮಾರ್ಚ್ 23ರಂದು ಪ್ರಧಾನಿಯವರು ಸರಳ ಧ್ವಜಾರೋಹಣ ಸಮಾರಂಭವನ್ನು ಘೋಷಿಸಿದ್ದಾರೆ. ಸಚಿವಾಲಯಗಳು ಮತ್ತು ಇಲಾಖೆಗಳು ಸರಳ ಧ್ವಜಾರೋಹಣ ಮಾಡುವಂತೆ ಸೂಚಿಸಲಾಗಿದೆ. ಆ ದಿನ ಪ್ರಧಾನಿ ಕಚೇರಿಯಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಯಾವುದೇ ಭಾಷಣ, ಮೆರವಣಿಗೆ, ಸಮಾರಂಭಗಳು ಇರುವುದಿಲ್ಲ. ಪಾಕಿಸ್ತಾನದಲ್ಲಿ ಈಗಾಗಲೇ ಸರ್ಕಾರಿ ವಾಹನಗಳಿಗೆ ಶೇ. 50ರಷ್ಟು ಕಡಿಮೆ ಇಂಧನ, ವಾರಕ್ಕೆ 4 ದಿನಗಳ ಕಚೇರಿ ಸಮಯ, ಅರ್ಧದಷ್ಟು ಸಿಬ್ಬಂದಿ ಮನೆಯಿಂದ ಕೆಲಸ ಮಾಡುವುದು ಮತ್ತು SOE ಉದ್ಯೋಗಿಗಳಿಗೆ ಶೇ. 5ರಿಂದ ಶೇ. 30ರವರೆಗೆ ವೇತನ ಕಡಿತದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ 

Source link

ಕಾಂಗ್ರೆಸ್​​ ಜೊತೆಗಿನ ಮದುವೆ ಹಿಂಸಾತ್ಮಕವಾಗಿದ್ದರಿಂದ ವಿಚ್ಚೇದನ: ಖರ್ಗೆ ಹೇಳಿಕೆಗೆ ದೇವೇಗೌಡರ ಕೌಂಟರ್​

ನವದೆಹಲಿ, ಮಾರ್ಚ್​ 18: ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ರಾಜ್ಯಸಭೆಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದ ವೇಳೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರನ್ನು ಉದ್ದೇಶಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಿದ್ದ ಹಾಸ್ಯಮಯ ಮಾತಿಗೆ ಅದೇ ಶೈಲಿಯಲ್ಲಿ ದೊಡ್ಡಗೌಡರೀಗ ಉತ್ತರ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಜೊತೆಗಿನ ದೇವೇಗೌಡರ ಸಂಬಂಧದ ಬಗ್ಗೆ ತಿಳಿಸಿ ಹಾಸ್ಯ ಮತ್ತು ವ್ಯಂಗ್ಯಭರಿತವಾಗಿ ಮಾತನಾಡಿದ್ದ ಖರ್ಗೆ, ನಾನು ಅವರನ್ನು 54 ವರ್ಷಗಳಿಂದ ಬಲ್ಲೆ ಮತ್ತು ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಆ ನಂತರ ಏನಾಯಿತು ಎಂಬುದು ನನಗೆ ತಿಳಿದಿಲ್ಲ. ಅವರು ನಮ್ಮನ್ನು ಪ್ರೀತಿಸಿದರು, ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿವಾಹವಾದರು ಎಂದಿದ್ದರು. ಇದಕ್ಕೆ ಈಗ ದೇವೇಗೌಡರು ಉತ್ತರಿಸಿದ್ದು, ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ. ಹೀಗಾಗಿ ವಿಚ್ಛೇದನ ಮಾಡಬೇಕಾಯಿತು ಎಂದಿದ್ದಾರೆ.

ದೇವೇಗೌಡರು ಹೇಳಿದ್ದೇನು?

ನಾನು ಕಾಂಗ್ರೆಸ್ ಜೊತೆ ಪ್ರೇಮದಲ್ಲಿದ್ದೆ. ಆದರೆ ಕೊನೆಯಲ್ಲಿ ಮೋದಿ (ಬಿಜೆಪಿ) ಅವರನ್ನು ಮದುವೆಯಾದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನಲ್ಲಿ ಹಾಸ್ಯಮಿಶ್ರಿತವಾಗಿ ಹೇಳಿದ್ದಾರೆ. ನಾನು ಏಕೆ ಹಾಗೆ ಮಾಡಿದೆ ಎಂಬುದು ಅವರಿಗೆ ಗೊತ್ತಿಲ್ಲ ಎಂದೂ ತಿಳಿಸಿದ್ದಾರೆ. ನಾಳೆಯ ಯುಗಾದಿ ಆಚರಣೆಗಾಗಿ ಬೆಂಗಳೂರಿಗೆ ಬರಬೇಕಾಗಿದ್ದರಿಂದ ಅವರು ಮಾತನಾಡಿದಾಗ ನಾನು ಸದನದಲ್ಲಿರಲಿಲ್ಲ. ನನ್ನ ಸ್ನೇಹಿತನ ಮಾತಿಗೆ ಅದೇ ಮದುವೆ ಭಾಷೆಯಲ್ಲಿ ಉತ್ತರಿಸಬೇಕೆಂದರೆ, ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ. ಆದರೆ ಅದು ಹಿಂಸಾತ್ಮಕ ಸಂಬಂಧವಾಗಿದ್ದರಿಂದ ನಾನು ಅವರನ್ನು ವಿಚ್ಛೇದನ ಮಾಡಬೇಕಾಯಿತು ಎಂದು ಹೇಳಲು ಇಷ್ಟಪಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ದೇವೇಗೌಡರು ನಮ್ಮನ್ನು ಪ್ರೇಮಿಸಿದರು, ಮೋದಿ ಜತೆ ಮದುವೆಯಾದರು! ಮಲ್ಲಿಕಾರ್ಜುನ ಖರ್ಗೆ ಹೀಗಂದಾಗ ಮೋದಿ ರಿಯಾಕ್ಷನ್ ಹೇಗಿತ್ತು ನೋಡಿ

2018ರಲ್ಲಿ ಕಾಂಗ್ರೆಸ್ ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಮುಂದಾಗಿದ್ದಿದ್ದು ಖರ್ಗೆ ಅವರಿಗೆ ನೆನಪಿರಬಹುದು. ನಾನು ಇದಕ್ಕೆ ಒಪ್ಪಿರಲಿಲ್ಲ. ಎಲ್ಲರ ಸಮ್ಮುಖದಲ್ಲೇ ಖರ್ಗೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ನಾನು ಹೇಳಿದ್ದೆ. ಸಿದ್ದರಾಮಯ್ಯ ಕೂಡ ಅಲ್ಲಿ ಇದ್ದರು. ಆದರೂ ಆಜಾದ್ ಅವರು ಕುಮಾರಸ್ವಾಮಿ ಅವರ ನೇತೃತ್ವವನ್ನೇ ಒತ್ತಾಯಿಸಿದರು. ಆದರೆ ಈ ಎಲ್ಲಾ ಹಾಡು-ನೃತ್ಯ ಮತ್ತು ಮದುವೆ ಬಳಿಕ 2019ರಲ್ಲಿ ಏನಾಯಿತು? ಅವರು ನಮ್ಮನ್ನು ಬಿಟ್ಟುಬಿಟ್ಟರು. ಕಾಂಗ್ರೆಸ್‌ನ ಎಷ್ಟು ಶಾಸಕರು ಬಿಜೆಪಿ ಕಡೆಗೆ ಹೋದರು? ಅವರನ್ನು ಯಾರು ಕಳುಹಿಸಿದರು ಎಂಬುದು ಈಗ ಎಲ್ಲರಿಗೂ ತಿಳಿದ ವಿಷಯ. ಆ ದಿನ ಪಕ್ಷತ್ಯಾಗಕ್ಕೆ ಪ್ರೇರೇಪಿಸಿದವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದ್ದರೆ, ಇಂದು ನನ್ನ ಸ್ನೇಹಿತ ಖರ್ಗೆ ಅವರು ಇನ್ನಷ್ಟು ಉತ್ತಮ ಸ್ಥಾನದಲ್ಲಿರುತ್ತಿದ್ದರು. ಹೀಗಾಗಿ ದಾಖಲೆಯನ್ನು ಸರಿಪಡಿಸಲು ಹೇಳುವುದಾದರೆ, ನಾನು ಕಾಂಗ್ರೆಸ್ ಮೈತ್ರಿಯನ್ನು ಬಿಟ್ಟದ್ದಲ್ಲ. ಅವರೇ ದೂರ ನಡೆದರು. ನನಗೆ ವಿಚ್ಛೇದನ ಮಾಡಿ, ಹೆಚ್ಚು ಸ್ಥಿರವಾದ ಮೈತ್ರಿ ಹುಡುಕುವುದನ್ನು ಹೊರತುಪಡಿಸಿ ಬೇರೆ ಆಯ್ಕೆ ಇರಲಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bangalore Rain: ಸಂಜೆಯಾಗುತ್ತಿದ್ದಂತೆ ಬೆಂಗಳೂರಿಗೆ ಎಂಟ್ರಿಕೊಟ್ಟ ಮಳೆ: ಆಲಿಕಲ್ಲು ಮಳೆ ಕಂಡು ಸಿಟಿ ಮಂದಿ ಖುಷ್

ಬೆಂಗಳೂರು, ಮಾರ್ಚ್​ 18: ಕರ್ನಾಟಕದಲ್ಲಿ ಬೇಸಿಗೆ ಮಳೆ (Rain) ಆರ್ಭಟ ಶುರುವಾಗಿದೆ. ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆ ಆಗುತ್ತಿದ್ದು, ಇಂದು ಕೂಡ ಮಳೆ ಸುರಿದಿದೆ. ಇತ್ತ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಸಂಜೆ ಆಗುತ್ತಿದ್ದಂತೆ ನಗರದ ಹಲವೆಡೆ ಆಲಿಕಲ್ಲು ಸಹಿತ ಮಳೆ ಆಗಿದೆ. ಆ ಮೂಲಕ ಸಿಲಿಕಾನ್ ಸಿಟಿ ಕೂಲ್​ ಕೂಲ್​ ಆಗಿದೆ. ಆಲಿಕಲ್ಲಿನ ಮಳೆ ಕಂಡು ಸಿಟಿ ಮಂದಿ ಫುಲ್ ಖುಷ್​​.

ಏಲೆಲ್ಲಿ ಮಳೆ

ರಣ ರಣ ಬಿಸಿಲಿನ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಆಲಿಕಲ್ಲು ಸಹಿತ ಭಾರಿ ಮಳೆ ಆಗಿದೆ. ಮೆಜೆಸ್ಟಿಕ್​, ಶಾಂತಿನಗರ, ಕಾಡುಗೋಡಿ, ಮಾರ್ಕೆಟ್, ಜಯನಗರ, ಬಸವೇಶ್ವರ ನಗರ, ಶಾಂತಿನಗರ, ವಿಲ್ಸನ್​ಗಾರ್ಡನ್, ರಿಚ್ಮಂಡ್​ಟೌನ್ ಸುತ್ತಮುತ್ತ ಮಳೆ ಆಗಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ; ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಸ್ಥಿತಿ ಏನು?

ದಾವಣಗೆರೆ ಜಿಲ್ಲೆಯಲ್ಲಿ ಇಂದು ಮತ್ತೆ ಮಳೆ ಆಗಿದೆ. ದಾವಣಗೆರೆ ತಾಲೂಕಿನ ಗುಮ್ಮನೂರ, ಗುಡಾಳ್, ಹೆಬ್ಬಾಳ್, ಆನಗೋಡ್ ಸೇರಿದಂತೆ ಬಹುತೇಕ ಕಡೆ ಮಳೆ ಆಗಿದೆ. ಗ್ರಾಮದ ರಸ್ತೆ ತುಂಬೆಲ್ಲಾ ರಾಶಿ ರಾಶಿ ಅಲಿಕಲ್ಲು ಬಿದ್ದಿದ್ದು, ರಸ್ತೆ ಜಮ್ಮು ಕಾಶ್ಮೀರದಂತಾಗಿದೆ.

ಚಾಮರಾಜನಗರದಲ್ಲಿ ಭಾರೀ ಬಿರುಗಾಳಿ ಸಮೇತ ವರುಣನ ರುದ್ರನರ್ತನ

ಚಾಮರಾಜನಗರ ಪಟ್ಟಣ ಹಾಗೂ ಚಾಮರಾಜನಗರ ತಾಲೂಕಿನಾದ್ಯಂತ ಭಾರೀ ಬಿರುಗಾಳಿ ಸಮೇತ ವರುಣ ಆರ್ಭಟಿಸಿದ್ದಾನೆ. ಮಳೆಯ ಆರ್ಭಟಕ್ಕೆ ರಸ್ತೆ ಕಾಣದೆ ವಾಹನ ಸವಾರರು ಪರದಾಡಿದ್ದಾರೆ. ಬಿರುಗಾಳಿಯ ರಭಸಕ್ಕೆ ತೆಂಗಿನ ಗರಿಗಳು ದರಶಾಹಿ ಆಗಿದೆ. ನಿನ್ನೆ ಆಲಿಕಲ್ಲು ಸಮೇತ ಮಳೆ ಸುರಿದು ರೈತರಿಗೆ ಸಂಕಷ್ಟ ತಂದೊಡ್ಡಿತ್ತು. ಇಂದು ಮತ್ತೆ ರಣ ಚಂಡಿ ಮಳೆ ಸುರಿದಿದೆ. ಈ ಅಕಾಲಿಕ ಮಳೆಗೆ ಚಾಮರಾಜನಗರ ಜನತೆ ಮತ್ತು ರೈತರು ತಬ್ಬಿಬ್ಬಾಗಿದ್ದಾರೆ.

ಇದನ್ನೂ ಓದಿ: ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!

ಇನ್ನು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನಾದ್ಯಂತ ಮಳೆ ಸುರಿದಿದೆ. ಕೊಂಬಾರು ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಆ ಮೂಲಕ ಬಿಸಿಲ ಧಗೆಗೆ ಮಳೆರಾಯ ತಂಪೆರೆದಿದ್ದಾನೆ. ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸುಮಾರು ಒಂದು ಗಂಟೆ ನಿರಂತರ ಮಳೆ ಆಗಿದೆ. ವರ್ಷದ ಮೊದಲ ಮಳೆಗೆ ಮೈಸೂರಿಗರ ಸಂತಸಗೊಂಡಿದ್ದಾರೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದವರಿಗೆ ವರುಣ ಸಿಂಚನವಾಗಿದೆ.

ವರದಿ: ನಟರಾಜ್ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version