ಬೆಂಗಳೂರಿನ ಲಾಡ್ಜ್​ನಲ್ಲಿ ಸಿಕ್ತು ಜೀವಂತ ಗುಂಡುಗಳಿದ್ದ ಮ್ಯಾಗಜೀನ್! ಅಮೇರಿಕ ನಿರ್ಮಿತ ಬುಲೆಟ್ಸ್ ತಂದಿದ್ದ ಯುವಕ ಅಂದರ್ – Kannada News | Live Bullets Found in Bengaluru’s Hotel, Man Arrested for Leaving US Made Magazine in Room

ಲಾಡ್ಜ್ ನಲ್ಲಿ ಜೀವಂತ ಗುಂಡುಗಳಿದ್ದ ಮ್ಯಾಗಜೀನ್ ಪತ್ತೆImage Credit source: google Gemini

ಬೆಂಗಳೂರು, ಮೇ 19: ನಗರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ಅಮೆರಿಕ ನಿರ್ಮಿತ ಜೀವಂತ ಗುಂಡುಗಳಿದ್ದ ಪಿಸ್ತೂಲ್ ಮ್ಯಾಗಜೀನ್ (Live bullet) ಪತ್ತೆಯಾಗಿದ್ದು, ಈ ಸಂಬಂಧ ಜೆ.ಸಿ. ನಗರ ಪೊಲೀಸರು ಆರೋಪಿ ಅರ್ಮಾನ್ ಮುತಾಹರ್ ಎಂಬಾತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. ಯುವತಿಯೊಬ್ಬಳೊಂದಿಗೆ ಲಾಡ್ಜ್​ಗೆ ಬಂದಿದ್ದ ಆರೋಪಿ, ಪಿಸ್ತೂಲ್ ಮ್ಯಾಗಜೀನ್ ಅನ್ನು ರೂಮ್​ನಲ್ಲಿಯೇ ಬಿಟ್ಟು ಹೋಗಿದ್ದ. ಅದನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಪದೇ ಪದೇ ಕೇಳಿದರೂ ಸರಿಯಾಗಿ ಸ್ಪಂದಿಸದ ಕಾರಣ ಹೋಟೆಲ್ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಕೊಠಡಿಯಲ್ಲಿ ಜೀವಂತ ಗುಂಡುಗಳಿದ್ದ ಮ್ಯಾಗಜೀನ್ ಪತ್ತೆ.
  • ಮ್ಯಾಗಜೀನ್ ಬಿಟ್ಟು ಹೋಗಿದ್ದ ಆರೋಪಿ ಅರ್ಮಾನ್‌ನನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.
  • ಪತ್ತೆಯಾದ ಬುಲೆಟ್‌ಗಳು ಅಮೆರಿಕ ದೇಶದಲ್ಲಿ ತಯಾರಾಗಿದ್ದು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ನಡೆದಿದ್ದೇನು?

ಕಳೆದ ಏಪ್ರಿಲ್ 27ರಂದು ರಾತ್ರಿ ಆರೋಪಿ ಅರ್ಮಾನ್ ಮುತಾಹರ್ ಯುವತಿಯೊಬ್ಬಳ ಜೊತೆ ಬಂದು ಜಯಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ರೂಂ ಒಂದನ್ನು ಬುಕ್ ಮಾಡಿದ್ದ. ಆತನೊಂದಿಗೆ ಓರ್ವ ಯುವತಿಯೂ ಅದೇ ರೂಮ್​ನಲ್ಲಿ ತಂಗಿದ್ದಳು ಎಂದು ಲಾಡ್ಜ್​ನ ಮ್ಯಾನೇಜರ್ ತಿಳಿಸಿದ್ದಾರೆ. ಗುರುತಿನ ಚೀಟಿಗಾಗಿ ತನ್ನ ಪಾಸ್‌ಪೋರ್ಟ್ ನೀಡಿದ್ದ ಆತ, ಮರುದಿನ (ಏಪ್ರಿಲ್ 28) ಬೆಳಗ್ಗೆ ಕೊಠಡಿಯಿಂದ ಚೆಕ್-ಔಟ್ ಆಗಿದ್ದ.

“ಬುಲೆಟ್ ಇಟ್ಟಿದ್ದೀನಿ, ಎತ್ತಿಡಿ” ಎಂದು ಕರೆ ಮಾಡಿದ ಆರೋಪಿ

ಹೋಟೆಲ್‌ನಿಂದ ಹೋದ ಸ್ವಲ್ಪ ಹೊತ್ತಿನ ಬಳಿಕ ರಿಸೆಪ್ಷನ್‌ಗೆ ಕರೆ ಮಾಡಿದ ಅರ್ಮಾನ್, ಜೀವಂತ ಗುಂಡುಗಳಿರುವ ನನ್ನ ಪಿಸ್ತೂಲಿನ ಮ್ಯಾಗಜೀನ್ ಅನ್ನು ರೂಮ್‌ನಲ್ಲೇ ಮರೆತು ಬಿಟ್ಟು ಬಂದಿದ್ದೇನೆ. ಅದನ್ನು ಎತ್ತಿಡಿ ಎಂದು ತಿಳಿಸಿದ್ದ. ಅದಾದ ನಂತರ ಆತ ತಂಗಿದ್ದ ಕೊಠಡಿಯನ್ನು ಹೌಸ್ ಕೀಪಿಂಗ್ ಸಿಬ್ಬಂದಿ ಪರಿಶೀಲಿಸಿದಾಗ ಜೀವಂತ ಗುಂಡುಗಳಿದ್ದ ಮ್ಯಾಗಜೀನ್ ಪತ್ತೆಯಾಗಿದೆ. ಒಂದೆರಡು ದಿನಗಳಲ್ಲಿ ಬಂದು ಪಡೆದುಕೊಳ್ಳುತ್ತೇನೆ ಎಂದಿದ್ದ ಆರೋಪಿ, ಹೋಟೆಲ್ ಸಿಬ್ಬಂದಿ ಹಲವು ಬಾರಿ ಕರೆ ಮಾಡಿದರೂ ವಾಪಸ್ ಬಂದಿರಲಿಲ್ಲ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಮ್ಯಾನೇಜರ್

ಕೊನೆಗೆ ಮೇ 4ರಂದು ಹೋಟೆಲ್ ಮ್ಯಾನೇಜರ್ ಕರೆ ಮಾಡಿ, ನಿಮ್ಮ ಮ್ಯಾಗಜೀನ್ ಅನ್ನು ಪೊಲೀಸರಿಗೆ ಒಪ್ಪಿಸುತ್ತಿದ್ದೇವೆ ಎಂದಾಗ, ಸರಿ, ನಾನು ಪೊಲೀಸ್ ಠಾಣೆಯಿಂದಲೇ ಪಡೆದುಕೊಳ್ಳುತ್ತೇನೆ ಎಂದು ಅರ್ಮಾನ್ ಉತ್ತರ ನೀಡಿದ್ದ. ಅದಾದ ಬಳಿಕ ಹೋಟೆಲ್ ಮ್ಯಾನೇಜರ್ ಜೆ.ಸಿ. ನಗರ ಪೊಲೀಸ್ ಠಾಣೆಗೆ ದೂರು ನೀಡಿ ಮ್ಯಾಗಜೀನ್ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ ಕೋಲಾರ ಗಡಿಯಲ್ಲಿ ಭಾರಿ ಪ್ರಮಾಣದ ಲೈವ್ ಬುಲೆಟ್ ಪತ್ತೆ: 1969ರ ಬ್ಯಾಚ್‌ನ ಗುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು

ಅವರ ದೂರಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಅದು ಅಮೇರಿಕಾದಲ್ಲಿ ತಯಾರಿಸಲಾದ ಬುಲೆಟ್‌ಗಳು ಎಂಬುದು ಪತ್ತೆಯಾಗಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಈತ ದೇಶದೊಳಗೆ ಹಾಗೂ ಹೋಟೆಲ್‌ಗೆ ಇವುಗಳನ್ನು ಹೇಗೆ ತಂದಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:36 pm, Tue, 19 May 26

Source link

ದುಬಾರೆ ಆನೆ ಶಿಬಿರ 2 ದಿನ ಬಂದ್: ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ – Kannada News | Dubare Elephant Camp Closed for 2 Days: Tourist Entry Banned After Chennai Woman Dies in Elephant Fight Incident

ಮಡಿಕೇರಿ, ಮೇ 19: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ನಡುವೆ ನಡೆದ ಕಾಳಗದ ಘಟನೆಯಿಂದಾಗಿ ಚೆನ್ನೈ ಮೂಲದ ಮಹಿಳೆ ತುಳಸಿ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಸದ್ಯಬ ಆನೆ ಶಿಬಿರವನ್ನು ಎರಡು ದಿನಗಳ ಕಾಲ ಬಂದ್ ಮಾಡಲಾಗಿದೆ. ಪ್ರವಾಸಿಗರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಘಟನೆಯಲ್ಲಿ ದಾಳಿಗೊಳಗಾದ ಮಾರ್ತಾಂಡ ಆನೆ ಚೇತರಿಸಿಕೊಳ್ಳುತ್ತಿದೆ. ಮಾರ್ತಾಂಡ ಮತ್ತು ಕಂಜನ್ ಆನೆಗಳ ನಡುವೆ ನಡೆದ ಕಾಳಗದ ವೇಳೆ ಮಹಿಳೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು. ದುಬಾರೆ ಆನೆ ಶಿಬಿರದಲ್ಲಿ ಆನೆಗಳೊಂದಿಗೆ ಹತ್ತಿರದಿಂದ ಒಡನಾಡಲು ಅವಕಾಶವಿದ್ದು, ಇದೇ ಕಾರಣದಿಂದ ಮಹಿಳೆಯ ಪ್ರಾಣಕ್ಕೆ ಅಪಾಯ ಎದುರಾಗಿತ್ತು. ಪ್ರಸ್ತುತ ಶಿಬಿರವು ನಿರ್ಜನವಾಗಿದ್ದು, ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳು ಸಹ ಬಂದ್ ಆಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾದಾಟದ ವೇಳೆ ಗಂಭೀರ ಗಾಯಗೊಂಡಿದ್ದ ಆನೆ ಮಾರ್ತಾಂಡ ಚಿಕಿತ್ಸೆ ಫಲಿಸದೆ ಸಾವು – Kannada News | Dubare Elephant Camp Tragedy: Marthanda Elephant Dies After Fatal Fight

ಮಡಿಕೇರಿ, ಮೇ 19: ಆನೆಗಳ ನಡುವಿನ ಕಾದಾಟದಿಂದಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ನಿನ್ನೆ (ಮೇ 18) ಕುಶಾಲನಗರದ ದುಬಾರೆ ಕ್ಯಾಂಪ್​​ನಲ್ಲಿ ನಡೆದಿತ್ತು. ಆನೆಗಳ ನಡುವೆ ಸಿಲುಕಿ ಪ್ರವಾಸಕ್ಕೆ ಬಂದಿದ್ದ ಚೆನ್ನೈ ಮೂಲದ ಮಹಿಳೆ ದಾರುಣವಾಗಿ ಉಸಿರು ಚೆಲ್ಲಿದ್ದರು. ಅವರ ಮಗು ಮತ್ತು ಪತಿ ಕೂದಲೆಳೆ ಅಂತರದಲ್ಲಿ ಬಚಾವ್​​ ಆಗಿದ್ದರು. ಆ ಬೆನ್ನಲ್ಲೇ ಕಾದಾಟದ ವೇಳೆ ಗಂಭಿರವಾಗಿ ಗಾಯಗೊಂಡಿದ್ದ ಆನೆ ಮಾರ್ತಾಂಡ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು (ಮೇ 19) ಮೃತಪಟ್ಟಿದೆ.

ಮುಖ್ಯಾಂಶಗಳು

  • ದುಬಾರೆ ಕ್ಯಾಂಪ್​​ನಲ್ಲಿ ಚಿಕಿತ್ಸೆ ಫಲಿಸದೆ ಮಾರ್ತಾಂಡ ಆನೆ ಸಾವು
  • ಕಾದಾಟದ ವೇಳೆ ನಿನ್ನೆ ಗಂಭೀರ ಗಾಯಗೊಂಡಿದ್ದ ಮಾರ್ತಾಂಡ
  • ಸ್ನಾನಕ್ಕೆ ಕರೆದೊಯ್ದದ್ದ ವೇಳೆ ಅಟ್ಯಾಕ್​​ ನಡೆಸಿದ್ದ ಕಂಜನ್​​ ಆನೆ

ನಿನ್ನೆ ಸ್ನಾನಕ್ಕೆಂದು ಕಾವೇರಿ ನದಿಗೆ ಮಾವುತರು ಕಂಜನ್​​ ಮತ್ತು ಮಾರ್ತಾಂಡ ಆನೆಗಳನ್ನು ಕರೆತಂದಿದ್ದರು. ಈ ವೇಳೆ ಅವುಗಳ ನಡುವೆ ಕಾದಾಟ ಆರಂಭವಾಗಿದ್ದು, ದಂತದಿಂದ ತಿವಿದು ಕಂಜನ್​​ ಆನೆ ಮಾರ್ತಾಂಡ ಆನೆಯನ್ನು ನೆಲಕ್ಕೆ ಉರುಳಿಸಿತ್ತು. ಆ ಬಳಿಕ ಕೆಲ ಸಮಯದವರೆಗೂ ಆನೆಗಳು ಕಾದಾಡಿದ್ದವು. ಮಾವುತರು ಎಷ್ಟೇ ಪ್ರಯತ್ನ ಪಟ್ಟರೂ ಮದವೇರಿದಂತೆ ವರ್ತಿಸುತ್ತಿದ್ದ ಕಂಜನ್​​ ಆನೆಯನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ಮಾರ್ತಾಂಡ ಆನೆ ಗಂಭೀರವಾಗಿ ಗಾಯಗೊಂಡಿತ್ತು. ಗಾಯಗೊಂಡಿದ್ದ ಮಾರ್ತಾಂಡಗೆ ಶಿಬಿರದಲ್ಲೇ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಅದು ಇಂದು ಮೃತಪಟ್ಟಿದೆ ಎಂದು ಡಿಎಫ್ಒ ಅಭಿಶೇಕ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು

ವೈರಲ್​​ ಆಗಿದ್ದ ಆನೆಗಳ ಕಾದಾಟದ ವಿಡಿಯೋ

ಕಾವೇರಿ ನದಿಯಲ್ಲಿಯೇ ಆನೆಗಳ ನಡುವೆ ಕಾದಾಟ ನಡೆದು ಅವುಗಳ ನಡುವೆ ಸಿಲುಕಿ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​​ ಆಗಿತ್ತು. ಆ ಬೆನ್ನಲ್ಲೇ ಅರಣ್ಯ ಸಚಿವರು ಇಂತಹ ಘಟನೆಗಳ ತಡೆಗೆ ಕ್ರಮಕ್ಕೆ ಆದೇಶಿಸಿದ್ದರು. ರಾಜ್ಯದಲ್ಲಿರುವ ಎಲ್ಲ ಸಾಕಾನೆ ಶಿಬಿರದಲ್ಲಿ ಮೇ 19ರಿಂದಲೇ ಪ್ರವಾಸಿಗರು ಆನೆಯ ಬಳಿ ಹೋಗದಂತೆ, ಕನಿಷ್ಠ 100 ಅಡಿ ದೂರದಲ್ಲಿ ನಿಂತು ಆನೆ ಮೈತೊಳೆಯುವುದನ್ನು ವೀಕ್ಷಿಸುವಂತೆ ಮತ್ತು ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳಲು, ಮೈತೊಳೆಯಲು ಅವಕಾಶ ನೀಡಬಾರದು. ಬಾಳೆಹಣ್ಣು, ಬೆಲ್ಲ, ಕಬ್ಬು ಇತ್ಯಾದಿ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ಆನೆಗಳಿಗೆ ತಿನ್ನಸಬಾರದು ಎಂದು ಆದೇಶಿಸಿಲು ಸೂಚಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Shani Transit in Pisces 2026: ಕರ್ಮಕಾರಕ ಶನಿಯಿಂದ ಕಷ್ಟ ಮಾತ್ರವಲ್ಲ, ಸುಖವೂ ಇದೆ; ಈ ರಾಶಿಗೆ ಅದೃಷ್ಟ – Kannada News | Shani Transit in Pisces 2026: Astrological Impact on Your Zodiac Sign

ಕರ್ಮಕಾರಕ ಶನಿಯಿಂದ ಕಷ್ಟ ಮಾತ್ರವಲ್ಲImage Credit source: Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನು‌ ಕರ್ಮ ಫಲವನ್ನು ನೀಡುವವನು ಎಂದು ಪ್ರಸಿದ್ಧ. ಕುಂಡಲಿಯಲ್ಲಿ ಶನಿಯ ಸ್ಥಾನದ ಮೇಲೆ ಉದ್ಯೋಗ, ಉದ್ಯಮಗಳು ತೀರ್ಮಾನವಾಗುತ್ತವೆ. ಅಧಿಕಾರವನ್ನೂ ನೀಡುವನು, ನ್ಯಾಯ ಮಾರ್ಗದಲ್ಲಿ ಹೋಗುವಂತೆ ಮಾಡಿ ನ್ಯಾಯವನ್ನೂ ಕೊಡಿಸುತ್ತಾನೆ. ​​ಮೀನ ಶನಿಗೆ ಸಮ ಕ್ಷೇತ್ರ, ಚಂದ್ರ ದ್ರೇಕ್ಕಾಣ ಶನಿಗೆ ಶತ್ರು ಕ್ಷೇತ್ರ, ರವಿಯ ಹೋರೆ ಶನಿಗೆ ಪರಮ ಶತ್ರುಕ್ಷೇತ್ರ, ಗುರುವಿನ ನವಾಂಶ ಮತ್ತು ತ್ರಿಂಶಾಂಶ ಸಮ/ಮಿತ್ರ ಕ್ಷೇತ್ರ, ಶುಕ್ರನ ದ್ವಾದಶಾಂಶ ಶನಿಗೆ ಮಿತ್ರ ಕ್ಷೇತ್ರ. ವರ್ತಮಾನದಲ್ಲಿ ಶನಿಯ ಸ್ಥಿತಿ ಇದಾಗಿದೆ.

​ಇಂತಹ ಶನಿ ಸ್ಥಿತಿಯಿಂದ ಯಾವ ರಾಶಿಗೆ ಎಂತಹ ಫಲ?

​ಶನಿಯು ಮೀನ ರಾಶಿಯಲ್ಲಿದ್ದಾಗ ಪ್ರಮುಖವಾಗಿ ದ್ವಾದಶ ರಾಶಿಗಳಿಗೆ ಸಾಮಾನ್ಯ ಮತ್ತು ಈ ವರ್ಗ ಬಲದ ಆಧಾರದ ಮೇಲೆ ವಿಶೇಷ ಫಲಗಳಿವು.

​ಮೇಷ, ಕರ್ಕಾಟಕ, ಸಿಂಹ ರಾಶಿ:

ಶನಿಯು ರವಿಯ ಹೋರೆ ಮತ್ತು ಚಂದ್ರನ ದ್ರೇಕ್ಕಾಣದಲ್ಲಿರುವುದರಿಂದ ಈ ರಾಶಿಯವರಿಗೆ ಮಾನಸಿಕ ಆತಂಕ, ಅನಗತ್ಯ ಖರ್ಚುಗಳು ಮತ್ತು ಕೌಟುಂಬಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಆರೋಗ್ಯದ ಕಡೆ ಗಮನ ಹರಿಸುವುದು ಮುಖ್ಯ. ಆದರೆ ಗುರುವಿನ ನವಾಂಶವಿರುವುದರಿಂದ ಅಂತಿಮವಾಗಿ ಧಾರ್ಮಿಕ ಚಿಂತನೆಗಳಿಂದ ನೆಮ್ಮದಿ ಸಿಗುತ್ತದೆ.

​ವೃಷಭ, ತುಲಾ ರಾಶಿ :

ಶನಿಯು ಶುಕ್ರನ ದ್ವಾದಶಾಂಶದಲ್ಲಿರುವುದರಿಂದ ಈ ರಾಶಿಯವರಿಗೆ ಈ ಅವಧಿಯು ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮ ಫಲಗಳನ್ನು ನೀಡುತ್ತದೆ. ಭೂಮಿ, ವಾಹನ ಅಥವಾ ಆಸ್ತಿ ಖರೀದಿಗೆ ಯೋಗವಿದೆ. ಕಷ್ಟಪಟ್ಟ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.

​ಮಿಥುನ, ಕನ್ಯಾ, ಧನು, ಮೀನ ರಾಶಿ :

ಶನಿಯು ಗುರುವಿನ ರಾಶಿ, ನವಾಂಶ ಮತ್ತು ತ್ರಿಂಶಾಂಶಗಳಲ್ಲಿರುವುದರಿಂದ ಈ ರಾಶಿಯವರಿಗೆ ಜ್ಞಾನಾರ್ಜನೆ, ಅಧ್ಯಾತ್ಮ, ಶಿಕ್ಷಣ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುವ ಸಾಧ್ಯತೆ ಇದೆ. ತೀರ್ಥಯಾತ್ರೆ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಮೀನ ರಾಶಿಯವರಿಗೆ ಜನ್ಮ ಶನಿಯ ಪ್ರಭಾವವಿದ್ದರೂ, ಗುರುವಿನ ಬಲದಿಂದಾಗಿ ಬುದ್ಧಿಶಕ್ತಿ ಮತ್ತು ತಾಳ್ಮೆ ಹೆಚ್ಚುತ್ತದೆ.

​ವೃಶ್ಚಿಕ, ಮಕರ, ಕುಂಭ ರಾಶಿ:

ಮಕರ ಮತ್ತು ಕುಂಭ ಶನಿಯ ಸ್ವಂತ ರಾಶಿಗಳಾಗಿದ್ದರೂ, ಮೀನದಲ್ಲಿನ ಶನಿ ಸ್ಥಿತಿಯು ಮಿಶ್ರಫಲವನ್ನು ನೀಡುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕಂತೆ ಧನಲಾಭವಾಗುತ್ತದೆ. ಆದರೆ ಶತ್ರುಗಳ ಕಾಟ ಅಥವಾ ಗುಪ್ತ ಆತಂಕಗಳು ಎದುರಾಗಬಹುದು.

​ಶನಿಯ ದಶೆ ಶುಭ :

ಈ ನಿರ್ದಿಷ್ಟ ವರ್ಗ ಕುಂಡಲಿಯ ಬಲದ ಪ್ರಕಾರ, ಈ ಕೆಳಗಿನ ಪರಿಸ್ಥಿತಿಯಲ್ಲಿರುವವರಿಗೆ ಶನಿ ದಶೆಯು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ:

​ವೃಷಭ ಮತ್ತು ತುಲಾ:

ಶನಿಗೆ ಶುಕ್ರನು ಪರಮ ಮಿತ್ರ. ಇಲ್ಲಿ ಶನಿಯು ಶುಕ್ರನ ದ್ವಾದಶಾಂಶದಲ್ಲಿರುವುದರಿಂದ, ವೃಷಭ ಮತ್ತು ತುಲಾ ಲಗ್ನ ಅಥವಾ ರಾಶಿಯವರಿಗೆ ಶನಿ ದಶೆಯು ಭಾಗ್ಯೋದಯವನ್ನು ತರುತ್ತದೆ. ಆಸ್ತಿ ವೃದ್ಧಿ, ಉದ್ಯೋಗದಲ್ಲಿ ಪ್ರಗತಿ ಮತ್ತು ರಾಜಯೋಗದಂತಹ ಫಲಗಳು ಸಿಗುತ್ತವೆ.

​ಧನು ಮತ್ತು ಮೀನ :

ಶನಿಯು ಗುರುವಿನ ನವಾಂಶ ಮತ್ತು ತ್ರಿಂಶಾಂಶದಲ್ಲಿರುವುದರಿಂದ, ಗುರು ಪ್ರಧಾನ ರಾಶಿಯವರಿಗೆ ಶನಿ ದಶೆಯು ಆಧ್ಯಾತ್ಮಿಕ ಉನ್ನತಿ, ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ, ಮತ್ತು ಸಮಾಜದಲ್ಲಿ ಉನ್ನತ ಪದವಿಯನ್ನು ತಂದುಕೊಡುತ್ತದೆ.

ಬಲಿಷ್ಠ ಶನಿ :

ಯಾರ ಜಾತಕದಲ್ಲಿ ಶನಿಯು ತುಲಾ ರಾಶಿಯಲ್ಲಿ ಅಥವಾ ಮಕರ ಅಥವಾ ಕುಂಭದಲ್ಲಿದ್ದು, ಪ್ರಸ್ತುತ ಗೋಚಾರದಲ್ಲಿ ಈ ಮೀನ ರಾಶಿಯ ಸ್ಥಿತಿಯಿದ್ದಾಗ ಶನಿ ದಶೆ ಆರಂಭವಾದರೆ ಅವರಿಗೆ ಸಕಲ ಸುಖ-ಭೋಗಗಳು ದೊರೆಯುತ್ತವೆ.

ಶನಿಯ ದಶೆ ಅಶುಭ:

ಮೇಷ ಮತ್ತು ವೃಶ್ಚಿಕ ಮಂಗಳನ ರಾಶಿ.ಇವರಿಗೆ ಶನಿಯು ನೈಸರ್ಗಿಕ ಶತ್ರು. ಜಾತಕದಲ್ಲಿ ಮಂಗಳ-ಶನಿ ದೋಷವಿದ್ದವರಿಗೆ ಈ ದಶೆಯು ಕಠಿಣ ಪರಿಶ್ರಮ ಪಟ್ಟರೂ ನಿರೀಕ್ಷಿತ ಫಲ ನೀಡದೆ ನಿರಾಸೆ ಮೂಡಿಸಬಹುದು.

​ಸಿಂಹ ಮತ್ತು ಕರ್ಕಾಟಕ :

ಶನಿಯು ಇಲ್ಲಿ ರವಿಯ ಹೋರೆಯಲ್ಲಿಯೂ ಚಂದ್ರನ ದ್ರೇಕ್ಕಾಣದಲ್ಲಿಯೂ ಇದ್ದಾನೆ. ರವಿ ಮತ್ತು ಚಂದ್ರರು ಶನಿಗೆ ವೈರಿಗಳು. ಆದ್ದರಿಂದ ಸಿಂಹ ಮತ್ತು ಕರ್ಕಾಟಕ ರಾಶಿಯವರಿಗೆ ಶನಿ ದಶೆಯು ತಾಯಿಯ ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಶಾಂತಿ, ಅಪವಾದ, ಮತ್ತು ಉದ್ಯೋಗದಲ್ಲಿ ಸ್ಥಾನಪಲ್ಲಟದಂತಹ ಕಷ್ಟಗಳನ್ನು ನೀಡಬಹುದು.

​ಸಾಡೇ ಸಾಥ್ :

ಸದ್ಯ ಮೀನ ರಾಶಿಯಲ್ಲಿ ಶನಿ ಇರುವುದರಿಂದ ಕುಂಭ, ಮೀನ ಮತ್ತು ಮೇಷ ರಾಶಿಯವರಿಗೆ ಏಳೂವರೆ ವರ್ಷದ ಶನಿಯ ಪ್ರಭಾವವಿರುತ್ತದೆ. ಈ ರಾಶಿಯವರ ಜಾತಕದಲ್ಲಿ ಶನಿ ದಶೆಯೂ ಒಟ್ಟಿಗೆ ಬಂದರೆ ಕೌಟುಂಬಿಕ ಮತ್ತು ಆರ್ಥಿಕ ಒತ್ತಡಗಳು ಹೆಚ್ಚಾಗುತ್ತವೆ.

ಗ್ರಹವು ರವಿ ಮತ್ತು ಚಂದ್ರನ ವರ್ಗಗಳಲ್ಲಿ ಅಶುಭ ಸ್ಥಾನದಲ್ಲಿದ್ದರೂ, ಗುರು ಮತ್ತು ಶುಕ್ರನ ವರ್ಗಗಳಲ್ಲಿ ಶುಭ ಸ್ಥಾನವನ್ನು ಪಡೆದಿರುವುದರಿಂದ, ಶನಿಯು ಸಂಪೂರ್ಣವಾಗಿ ಕೆಟ್ಟ ಫಲವನ್ನು ನೀಡುವುದಿಲ್ಲ. ಆರಂಭದಲ್ಲಿ ಕಷ್ಟಗಳನ್ನು ನೀಡಿದರೂ, ಅಂತಿಮವಾಗಿ ಜ್ಞಾನ, ತಾಳ್ಮೆ ಮತ್ತು ಅನುಭವದ ಮೂಲಕ ಯಶಸ್ಸನ್ನು ಕರುಣಿಸುತ್ತಾನೆ.

– ಲೋಹಿತ ಹೆಬ್ಬಾರ್

Source link

ಭಾರೀ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಹಾಕಲು ಟಿಸಿಎಸ್​ನಿಂದ ಬ್ಯಾಂಡ್ ಡಿ ಪ್ಲಾನ್? 29,000ಕ್ಕೂ ಹೆಚ್ಚು ಮಂದಿಗೆ ಲೇ ಆಫ್ ಭೀತಿ? – Kannada News | TCS Job Cuts: Up to 29,000 Employees at Risk as ‘Band D’ Signals Mass Layoffs

ನವದೆಹಲಿ, ಮೇ 19: ಇತ್ತೀಚೆಗಷ್ಟೇ ಶೇ 2ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದ ಟಾಟಾ ಕನ್ಸಲ್ಪೆನ್ಸಿ ಸರ್ವಿಸಸ್ ಸಂಸ್ಥೆ (TCS- Tata Consultancy Services) ಈಗ ಇನ್ನೂ ಉಗ್ರ ಹೆಜ್ಜೆ ಇಡುವ ಯೋಜನೆ ಹಾಕಿದೆ. ಮಿಂಟ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಟಿಸಿಎಸ್​ನ ಶೇ. 5ರಷ್ಟು ಉದ್ಯೋಗಿಗಳನ್ನು ‘ಬ್ಯಾಂಡ್ ಡಿ’ಗೆ (Band D) ವರ್ಗೀಕರಿಸಲು ಹೊರಟಿದೆ. ಟಿಸಿಎಸ್​ನ ಮ್ಯಾನೇಜರ್​ಗಳಿಗೆ ಈ ನಿಟ್ಟಿನಲ್ಲಿ ಸೂಚನೆ ಕೊಡಲಾಗಿದೆ. ವರದಿ ಪ್ರಕಾರ ಈಗಾಗಲೇ ಮ್ಯಾನೇಜರ್​ಗಳು 17,500 ಉದ್ಯೋಗಿಗಳನ್ನು ಡಿ ಬ್ಯಾಂಡ್​ಗೆ ವರ್ಗೀಕರಿಸಿದ್ದಾರೆ. ಕಳಪೆ ಸಾಧನೆ ತೋರಿರುವವರನ್ನು ಈ ಬ್ಯಾಂಡ್​ಗೆ ಸೇರಿಸಲಾಗುತ್ತದೆ. ಈ ಬೆಳವಣಿಗೆಯು ಟಿಸಿಎಸ್​ನಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಲೇ ಆಫ್ ಆಗುವ ಸಾಧ್ಯತೆಯನ್ನು ಎತ್ತಿತೋರಿಸುತ್ತಿರುವಂತಿದೆ.

ಈ ಸುದ್ದಿಯ ಮುಖ್ಯಾಂಶಗಳು

  • ಭಾರತದಲ್ಲಿ ಅತಿಹೆಚ್ಚು ಉದ್ಯೋಗಿಗಳ ಬಳಗ ಹೊಂದಿರುವ ಸಂಸ್ಥೆಗಳಲ್ಲಿ ಒಂದೆನಿಸಿದ ಟಿಸಿಎಸ್ ಈಗ ಲೇ ಆಫ್ ಮೂಡ್​ನಲ್ಲಿದೆ.
  • ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಶೇ. 5ರಷ್ಟು ಉದ್ಯೋಗಿಗಳನ್ನು ಬ್ಯಾಂಡ್ ಡಿಗೆ ವರ್ಗೀಕರಿಸುವಂತೆ ಮ್ಯಾನೇಜರ್​ಗಳಿಗೆ ತಿಳಿಸಿದೆ ಎಂದು ಮಿಂಟ್ ವರದಿ ಹೇಳಿದೆ.
  • ಅತ್ಯಂತ ಕಳಪೆ ಸಾಧನೆ ಮಾಡಿರುವ ಉದ್ಯೋಗಿಗಳನ್ನು ಬ್ಯಾಂಡ್ ಡಿಗೆ ಹಾಕಲಾಗುತ್ತದೆ. ಇದು ಲೇ ಆಫ್​ನ ಮೊದಲ ಹೆಜ್ಜೆಯಾಗಿರಬಹುದು.

ಇದನ್ನೂ ಓದಿ: ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್​ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ?

ಎಚ್​ಆರ್ ಪತ್ರ ಬರೆದು ತಿಳಿಸಿದ್ದಾರಾ?

ಐಟಿ ಸರ್ವಿಸ್ ಕಂಪನಿಯಾದ ಟಿಸಿಎಸ್​ನ ಎಚ್ಆರ್ ಎಕ್ಸಿಕ್ಯೂಟಿವ್​ವೊಬ್ಬರು ಒಬ್ಬ ಬ್ಯುಸಿನೆಸ್ ಯುನಿಟ್ ಮುಖ್ಯಸ್ಥರಿಗೆ ಏಪ್ರಿಲ್​ನಲ್ಲಿ ಬ್ಯಾಂಡ್ ಡಿ ಕುರಿತು ಇಮೇಲ್ ಕಳುಹಿಸಿದ್ದಾರೆ ಎಂದು ಮಿಂಟ್ ವರದಿ ಹೇಳುತ್ತದೆ. ‘ಶೇ. 5 ಮಂದಿಯನ್ನು ಬ್ಯಾಂಡ್ ಡಿಗೆ ವರ್ಗೀಕರಿಸಲು ಒಪ್ಪಲಾಗಿದೆ. ಉದ್ಯೋಗಿಗಳ ಸಾಧನೆಯನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ, ಡಿ ಬ್ಯಾಂಡ್​ಗೆ ವರ್ಗೀಕರಿಸಬಹುದಾದವರ ಪಟ್ಟಿಯನ್ನು ನೀಡಿ’ ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯಲ್ಲಿ ಸದ್ಯ 5,84,519 ಉದ್ಯೋಗಿಗಳ ಬಳಗ ಇದೆ. ಒಂದು ಸಂದರ್ಭದಲ್ಲಿ ಇಲ್ಲಿ 6.5 ಲಕ್ಷಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದರು. ಅತಿಹೆಚ್ಚು ಮಂದಿಗೆ ಕೆಲಸ ಕೊಟ್ಟಿರುವ ಭಾರತೀಯ ಸಂಸ್ಥೆಗಳಲ್ಲಿ ಟಿಸಿಎಸ್ ಕೂಡ ಒಂದು. ಭಾರತೀಯ ಐಟಿ ಕಂಪನಿಗಳಲ್ಲಿ ಅತಿಹೆಚ್ಚು ಉದ್ಯೋಗಿಗಳು ಇರುವುದು ಟಿಸಿಎಸ್​ನಲ್ಲಿ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

ಇಲ್ಲಿ ಶೇ. 5ರಷ್ಟು ಉದ್ಯೋಗಿಗಳು ಎಂದರೆ ಸುಮಾರು 29,000 ಮಂದಿಯಾಗುತ್ತಾರೆ. ಅಂದರೆ, ಇಷ್ಟೂ ಮಂದಿಯನ್ನು ಅಂಡರ್ ಪರ್ಫಾರ್ಮರ್ಸ್ ಎಂದು ವರ್ಗೀಕರಿಸಿ ಅವರನ್ನು ಕೆಲಸದಿಂದ ತೆಗೆಯುವ ಪ್ಲಾನ್ ಹಾಕಿರಬಹುದಾ ಟಿಸಿಎಸ್ ಎಂದು ಮಿಂಟ್ ವರದಿಯಲ್ಲಿ ಅನುಮಾನ ಪಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಮಾನಸಿಕ ಒತ್ತಡವೇ ಕೆಲಸ ಬಿಡಲು ಕಾರಣ; 20 ಲಕ್ಷ ರೂ ಸಂಬಳದ ಉದ್ಯೋಗ ತೊರೆದ ಯುವಕ – Kannada News | A young man quits a job that pays Rs 20 lakh

ಕೈಯಲ್ಲಿ ಒಂದು ಉದ್ಯೋಗವಿದ್ರೆ (Job) ಮರ್ಯಾದೆ. ಆದರೆ ಕೆಲಸ ಮಾಡುವ ಸ್ಥಳದಲ್ಲಿಯೇ ನೆಮ್ಮದಿ ಅನ್ನೋದೇ ಇಲ್ಲವಾದರೆ ಏನು ಮಾಡೋದು. ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಸಾಹಸ ಆದ್ರೆ, ಇಂತಹ ಸ್ಥಳದಲ್ಲಿ ಎಷ್ಟು ದುಡಿದ್ರು ಬೆಲೆಯೇ ಇಲ್ಲ. ಆದರೆ ಇಲ್ಲೊಬ್ಬ 25 ವರ್ಷದ ಯುವಕನಿಗೂ ಅದೇ ರೀತಿಯ ಅನುಭವ ಆಗಿದೆ. ಇಂಜಿನಿಯರ್ ಆಗಿರುವ ಸೌರಭ್ ಮಿತ್ತಲ್ (Sourabh Mittal) 22ನೇ ವಯಸ್ಸಿನಲ್ಲಿ ವರ್ಷಕ್ಕೆ 20 ಲಕ್ಷ ರೂ ಸಂಬಳದೊಂದಿಗೆ ಬಿಪಿಸಿಎಲ್‌ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಕೈ ತುಂಬಾ ಸಂಬಳಯಿದ್ರೂ ಒತ್ತಡ ತಾಳಲಾರದೇ ಕೆಲಸಕ್ಕೆ ಗುಡ್ ಬೈ ಹೇಳಿದ್ದಾನೆ. ತನ್ನ ಕೆಲಸ ತೊರೆಯುವ ನಿರ್ಧಾರದ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೌರಭ್ ಮಿತ್ತಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಕೆಲಸದ ಜಾಗದಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಶೌಚಾಲಯ ಇಲ್ಲ, ಕುಡಿಯಲು ನೀರಿಲ್ಲ. ಅಲ್ಲದೆ ಹಿರಿಯ ಉದ್ಯೋಗಿಗಳ ಮಾನಸಿಕ ಒತ್ತಡವೇ ಕೆಲಸ ತ್ಯಜಿಸಲು ಕಾರಣ ಎಂದು ಬರೆದುಕೊಂಡಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಶೌಚಾಲಯ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಏನಾದ್ರೂ ತುರ್ತು ಅಗತ್ಯವಿದ್ದಾಗ ಗೋದಾಮಿನಿಂದ ಮನೆಗೆ ಹೋಗಬೇಕಾಗಿತ್ತು. ಬಹುತೇಕ ಉದ್ಯೋಗಿಗಳಿಗೆ ರಜೆಯೇ ಇರಲಿಲ್ಲ. ರಜೆಯಿಲ್ಲದೇ ಕಷ್ಟಪಟ್ಟು ಕೆಲಸ ಮಾಡಿದ್ರು ಸಂಬಳ ಹೆಚ್ಚಳ ಹಾಗೂ ಪ್ರಮೋಷನ್ ದೂರದ ಮಾತಾಗಿತ್ತು. ಸಂಬಳ ಹೆಚ್ಚಳ ಮಾಡಿದ್ರೂ ಹೆಚ್ಚೇನು ಇರಲಿಲ್ಲ. ಮೇಲಿನ ಅಧಿಕಾರಿಗಳು ಹೆಚ್ಚು ಒತ್ತಡ ಹಾಕುತ್ತಿದ್ದರು. ಅವರ ವೈಯುಕ್ತಿಕ ಕೆಲಸಗಳನ್ನು ನಮ್ಮ ಕೈಯಲ್ಲಿ ಮಾಡಿಸಿಕೊಳ್ಳುತ್ತಿದ್ದರು ಎಂದು ಕೆಲಸದ ಸ್ಥಳದಲ್ಲಿನ ವಾಸ್ತವ ಸ್ಥಿತಿಯಲ್ಲಿ ವಿವರಿಸಿದ್ದಾನೆ. ಹೆತ್ತವರ ಸಲಹೆ ಮೇರೆಗೆ ಕೆಲಸ ತೊರೆದ ಯುವಕ ಪ್ರಸ್ತುತ ಗುರಗಾಂವ್‌ನಲ್ಲಿ ಎಂಬಿಎ ಓಡುತ್ತಿದ್ದಾರೆ. ಯುವ ವೃತ್ತಿಪರರಿಗೆ ಮಾರ್ಗದರ್ಶನ ನೀಡಲು ಕಂಟೆಂಟ್ ಕ್ರಿಯೇಟರ್ ಆಗಿದ್ದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 38 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಸಂಪಾದನೆಗಿಂತ ನೆಮ್ಮದಿ ಮುಖ್ಯ ಎಂದಿದ್ದಾರೆ. ಮತ್ತೊಬ್ಬರು, ನಾನು ನಿಮ್ಮ ಪರಿಸ್ಥಿತಿಯನ್ನೇ ಎದುರಿಸಿ ಹೊರ ಬಂದಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಿಮ್ಮ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಬಂತು ಹೈಟೆಕ್ ‘ಮೂವಿಂಗ್ ಆಫೀಸ್’: ನೆಟ್‌ವರ್ಕ್ ಇಲ್ಲದಿದ್ದರೂ ಕೆಲಸ ಮಾಡುತ್ತೆ ಈ ಸ್ಯಾಟಲೈಟ್ ವಾಹನ! – Kannada News | Hubballi Airport Gets Karnataka’s First Mobile Command Post Vehicle For Emergency And Hijack Crisis Management

‘ಮೊಬೈಲ್ ಕಮಾಂಡ್ ಪೋಸ್ಟ್’ ವಾಹನImage Credit source: Times of India

ಹುಬ್ಬಳ್ಳಿ, ಮೇ 19: ವಿಮಾನ ನಿಲ್ದಾಣಗಳಲ್ಲಿ ಸಂಭವಿಸಬಹುದಾದ ತುರ್ತು ಪರಿಸ್ಥಿತಿಗಳು ಹಾಗೂ ಬಿಕ್ಕಟ್ಟುಗಳನ್ನು ಕ್ಷಿಪ್ರವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ (Hubballi) ವಿಮಾನ ನಿಲ್ದಾಣವು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ತುರ್ತು ರಕ್ಷಣಾ ಕಾರ್ಯಾಚರಣೆ ಹಾಗೂ ಭದ್ರತಾ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುವ ಅತ್ಯಾಧುನಿಕ ‘ಮೊಬೈಲ್ ಕಮಾಂಡ್ ಪೋಸ್ಟ್’ (MCP) ಅಥವಾ ಮೊಬೈಲ್ ಕ್ರಿಸಿಸ್ ಕಮಾಂಡ್ ವಾಹನವನ್ನು ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ನಿಯೋಜಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ವ್ಯಾಪ್ತಿಗೆ ಒಳಪಡುವ ಕರ್ನಾಟಕದ ವಿಮಾನ ನಿಲ್ದಾಣಗಳ ಪೈಕಿ ಈ ಅತ್ಯಾಧುನಿಕ ಸೌಲಭ್ಯ ಪಡೆದ ಮೊದಲ ಏರ್​ಪೋರ್ಟ್ ಎಂಬ ಹೆಗ್ಗಳಿಕೆಗೆ ಹುಬ್ಬಳ್ಳಿ ಪಾತ್ರವಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲೇ AAI ನಿರ್ವಹಿಸುವ ವಿಮಾನ ನಿಲ್ದಾಣಗಳಲ್ಲಿ ಇದೇ ಮೊದಲು.
  • ₹87 ಲಕ್ಷ ವೆಚ್ಚದ ಹೈಟೆಕ್ ವಾಹನ.
  • ಅಡ್ವಾನ್ಸ್ಡ್ ಕಮ್ಯುನಿಕೇಶನ್ ಸಿಸ್ಟಮ್.

ಮೊಬೈಲ್ ಕಮಾಂಡ್ ಪೋಸ್ಟ್ ವೆಹಿಕಲ್ ಎಂದರೇನು?

ಇದು ವಿಮಾನ ನಿಲ್ದಾಣದ ರನ್‌ವೇ ಅಥವಾ ಸುತ್ತಮುತ್ತಲಿನ ಪರಿಸರದಲ್ಲಿ ವಿಮಾನ ಅಪಘಾತ, ವಿಮಾನ ಹೈಜಾಕ್ (ಅಪಹರಣ) ನಂತಹ ತುರ್ತು ಪರಿಸ್ಥಿತಿಗಳು ಎದುರಾದಾಗ ಬಳಸಲಾಗುವ ಒಂದು ಸಂಚಾರಿ ನಿಯಂತ್ರಣ ಕೊಠಡಿಯಾಗಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ನಿರ್ಧಾರ ಕೈಗೊಳ್ಳುವುದು ಕಷ್ಟವಾಗುತ್ತದೆ. ಈ ವಾಹನವು ಘಟನಾ ಸ್ಥಳಕ್ಕೇ ಧಾವಿಸಿ, ಅಲ್ಲಿಯೇ ಹಿರಿಯ ಅಧಿಕಾರಿಗಳು ತುರ್ತು ಸಭೆ ನಡೆಸಿ ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ಅತ್ಯಾಧುನಿಕ ಮೀಟಿಂಗ್ ಕೊಠಡಿಯಾಗಿ ಮತ್ತು ತಾತ್ಕಾಲಿಕ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ವಿವಿಧ ರಕ್ಷಣಾ ಏಜೆನ್ಸಿಗಳ ನಡುವೆ ಸಮನ್ವಯ ಸಾಧಿಸಲು ಸಹಾಯ ಮಾಡುತ್ತದೆ.

ಮೊಬೈಲ್ ಕ್ರಿಸಿಸ್ ಕಮಾಂಡ್ ವೆಹಿಕಲ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ವಾಹನವು ಒಳಗಿನಿಂದ ಸಂಪೂರ್ಣ ಡಿಜಿಟಲ್ ತಂತ್ರಜ್ಞಾನವನ್ನು ಹೊಂದಿದೆ. ವಿಮಾನ ನಿಲ್ದಾಣದ ಒಳಗೆ ಮತ್ತು ಸುತ್ತಮುತ್ತಲಿನ ಪರಿಸರದ ಮೇಲೆ ಹದ್ದಿನ ಕಣ್ಣಿಡಲು ಇದರಲ್ಲಿ 360-ಡಿಗ್ರಿ ವ್ಯೂವ್ (ವೀಕ್ಷಣೆ) ವ್ಯವಸ್ಥೆ ಇದೆ. ವಾಹನದ ಒಳಗಡೆ ದೊಡ್ಡ ವೀಡಿಯೊ ವಾಲ್‌ಗಳು (Screen) ಮತ್ತು ಮಲ್ಟಿಪಲ್ ಮಾನಿಟರ್‌ಗಳನ್ನು ಅಳವಡಿಸಲಾಗಿದ್ದು, ಇವುಗಳ ಮೂಲಕ ವಿಮಾನ ನಿಲ್ದಾಣದ ಸಿಸಿಟಿವಿ ಫೀಡ್‌ಗಳು ಮತ್ತು ಡ್ರೋನ್‌ಗಳು ಸೆರೆಹಿಡಿಯುವ ದೃಶ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಗೆ ಬಾಂಗ್ಲಾ ನುಸುಳುಕೋರರ ಲಗ್ಗೆ? ರೈಲ್ವೆ ಪೊಲೀಸರ ವಿರುದ್ಧ ಭುಗಿಲೆದ್ದ ಆಕ್ರೋಶ

ಅಲ್ಲದೆ, ಯಾವುದೇ ನೆಟ್‌ವರ್ಕ್ ಸಮಸ್ಯೆ ಎದುರಾಗದಂತೆ ತಡೆಯಲು ಈ ವಾಹನದಲ್ಲಿ ವೆರಿ ಹೈ ಫ್ರೀಕ್ವೆನ್ಸಿ (VHF) ಮತ್ತು ಅಲ್ಟ್ರಾ ಹೈ ಫ್ರೀಕ್ವೆನ್ಸಿ (UHF) ಕಮ್ಯುನಿಕೇಶನ್ ಸಿಸ್ಟಂ ಅಳವಡಿಸಲಾಗಿದೆ. ಇದು ಏರ್ ಟ್ರಾಫಿಕ್ ಕಂಟ್ರೋಲ್ (ATC), ಅಗ್ನಿಶಾಮಕ ದಳ ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯೊಂದಿಗೆ ನಿರಂತರ ಮತ್ತು ತಡೆರಹಿತ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:42 am, Tue, 19 May 26

Source link

ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಹತ್ಯೆಗೆ ಸುಪಾರಿ ಕೊಟ್ಟಿತೇ ಇರಾನ್?

ಟೆಹ್ರಾನ್, ಮೇ 19: ಅಮೆರಿಕ, ಇಸ್ರೇಲ್ ಮತ್ತು ಇರಾನ್(Iran) ನಡುವಿನ ಶೀತಲ ಸಮರ ಈಗ ನೇರ ಕೊಲೆ ಬೆದರಿಕೆಯಾಗಿ ಮಾರ್ಪಟ್ಟಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಸರ್ಕಾರ ಮುಂದಾಗಿದ್ದು, ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹತ್ಯೆಗೆ ಮುಂದಾಗಿದೆ. ಇವರಿಬ್ಬರನ್ನು ಕೊಲ್ಲುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ 50 ಮಿಲಿಯನ್ ಯುರೋ ($58.23 ಮಿಲಿಯನ್) ಬಹುಮಾನ ನೀಡುವ ಅಧಿಕೃತ ಮಸೂದೆಯೊಂದನ್ನು ಇರಾನ್ ಸಂಸತ್ತು ಸಿದ್ಧಪಡಿಸುತ್ತಿದೆ ಎಂದು ‘ದಿ ಟೆಲಿಗ್ರಾಫ್ ಯುಕೆ’ ಮತ್ತು ‘ಇರಾನ್ ವೈರ್’ ವರದಿ ಮಾಡಿವೆ.

ಕಳೆದ ಫೆಬ್ರವರಿ 28 ರಂದು ಟೆಹ್ರಾನ್ ಮೇಲೆ ನಡೆದ ಭೀಕರ ದಾಳಿಯಲ್ಲಿ ಇರಾನ್‌ನ ಅಂದಿನ ಸರ್ವೋಚ್ಚ ನಾಯಕ ಅಲಿ ಖಮೇನಿ ಸಾವನ್ನಪ್ಪಿದ್ದರು. ಈ ಹತ್ಯೆಯ ಹಿಂದೆ ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಮತ್ತು ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ (CENTCOM) ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ಅವರ ನೇರ ಪಾತ್ರವಿದೆ ಎಂದು ಇರಾನ್ ಗಂಭೀರವಾಗಿ ಆರೋಪಿಸಿದೆ.

ಇರಾನ್ ಸಂಸತ್ತು ಈ ಕಾನೂನು ತರುವ ಮೊದಲೇ, ಸರ್ಕಾರದ ಪರ ಮಾಧ್ಯಮ ಸಂಸ್ಥೆ ‘ಮಸಾಫ್’ ಇಸ್ಲಾಮಿಕ್ ಆಡಳಿತವು ಕಿಲ್ ಟ್ರಂಪ್ ಅಭಿಯಾನಕ್ಕಾಗಿ ಈಗಾಗಲೇ 50 ಮಿಲಿಯನ್ ಡಾಲರ್ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿದೆ ಎಂದು ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ ಇರಾನ್ ಪ್ರಾಯೋಜಿತ ಸೈಬರ್ ಗ್ರೂಪ್ ಹಂಡಾಲಾ ಕೂಡ ಹೇಳಿಕೆ ಬಿಡುಗಡೆ ಮಾಡಿ, ದಬ್ಬಾಳಿಕೆ ಮತ್ತು ಭ್ರಷ್ಟಾಚಾರದ ಸೃಷ್ಟಿಕರ್ತರಾದ ಟ್ರಂಪ್ ಮತ್ತು ನೆತನ್ಯಾಹು ಅವರನ್ನು ನಿರ್ಮೂಲನೆ ಮಾಡಲು ಕೋಟ್ಯಂತರ ರೂಪಾಯಿ ಮೀಸಲಿಟ್ಟಿರುವುದಾಗಿ ತಿಳಿಸಿದೆ.

ಮತ್ತಷ್ಟು ಓದಿ: ಪಶ್ಚಿಮ ಏಷ್ಯಾ ಉದ್ವಿಗ್ನತೆಯ ನಡುವೆ ಸೌದಿ ಅರೇಬಿಯಾಕ್ಕೆ 16 ಜೆಟ್, 8,000 ಸೈನಿಕರನ್ನು ಕಳುಹಿಸಿದ ಪಾಕಿಸ್ತಾನ

ಶಾಂತಿ ಮಾತುಕತೆ ವಿಫಲ?
ಅಚ್ಚರಿಯ ವಿಷಯವೆಂದರೆ, ಒಂದು ಕಡೆ ಈ ಹತ್ಯೆಯ ಬೆದರಿಕೆಗಳು ಬರುತ್ತಿರುವಾಗಲೇ, ಮತ್ತೊಂದು ಕಡೆ ಇರಾನ್ ಅಮೆರಿಕಕ್ಕೆ ಹೊಸ ಶಾಂತಿ ಪ್ರಸ್ತಾವನೆಯೊಂದನ್ನು ಕಳುಹಿಸಿದೆ. ಆದರೆ, ಈ ಪ್ರಸ್ತಾವನೆಯಲ್ಲಿ ಯಾವುದೇ ಗಂಭೀರತೆ ಇಲ್ಲ ಎಂದು ಅಮೆರಿಕ ತಳ್ಳಿಹಾಕಿದೆ. ನಾವು ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ನಾವು ಇಂದು ಅತ್ಯಂತ ಗಂಭೀರ ಹಾಗೂ ಆತಂಕಕಾರಿ ಪರಿಸ್ಥಿತಿಯಲ್ಲಿದ್ದೇವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ‘ಆಕ್ಸಿಯಾಸ್’ ಮಾಧ್ಯಮಕ್ಕೆ ತಿಳಿಸಿದ್ದಾರೆ. ಒಟ್ಟಾರೆಯಾಗಿ, ಇರಾನ್ ಸಂಸತ್ತಿನ ಈ ಸುಪಾರಿ ಕಾನೂನು ಇಡೀ ಜಗತ್ತನ್ನು ಮತ್ತೊಂದು ಮಹಾ ಯುದ್ಧದ ಜ್ವಾಲೆಗೆ ತಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆಪಿಸಿಸಿ ಕಚೇರಿಯಲ್ಲೇ ಯೂತ್​​ ಕಾಂಗ್ರೆಸ್​​ ಕಾರ್ಯಕರ್ತರ ಮಾರಾಮಾರಿ: ದೀಪಿಕಾ ರೆಡ್ಡಿ ಸೇರಿ ಹಲವರಿಗೆ ಶೋಕಾಸ್​​ ನೋಟಿಸ್​​ – Kannada News | KPCC Office Clash: Indian Youth Congress Issues Show Cause Notice to Deepika Reddy and Others

ದೀಪಿಕಾ ರೆಡ್ಡಿ ಬಣದ ಪದಾಧಿಕಾರಿಗಳಿಗೆ ಶೋಕಾಸ್ ನೋಟಿಸ್Image Credit source: Tv9 Kannada

ಬೆಂಗಳೂರು, ಮೇ 19: ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ 15 ಪದಾಧಿಕಾರಿಗಳನ್ನ ವಜಾ ಮಾಡಿರುವ ವಿಚಾರ ಸಂಬಂಧ ಯೂತ್​ ಕಾಂಗ್ರೆಸ್​​ ಕಾರ್ಯಕರ್ತರ ನಡುವೆ ನಿನ್ನೆ (ಮೇ 18) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಯೇ ಮಾರಾಮಾರಿ ನಡೆದಿತ್ತು. ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಹಾಗೂ ಅಮಾನತುಗೊಂಡಿರುವ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರು ಕೈ ಕೈ ಮಿಲಾಯಿಸಿದ್ದರು. ಈ ಬೆನ್ನಲ್ಲೇ ಭಾರತೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ   ನಿಗಮ್, ದೀಪಿಕಾ ರೆಡ್ಡಿ ಬಣದ ಪದಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವಾರದೊಳಗೆ ಉತ್ತರ ನೀಡುವಂತೆ ದೀಪಿಕಾ ರೆಡ್ಡಿ, ಸಂದೀಪ್, ಮಂಜುನಾಥ್ ಶೆಟ್ಟಿ, ನಿಖಿಲ್ ಕೊಂಡಜ್ಜಿ ಸೇರಿ ಹಲವರಿಗೆ ನೋಟಿಸ್ ನೀಡಲಾಗಿದೆ.

ಮುಖ್ಯಾಂಶಗಳು

  • ಕೆಪಿಸಿಸಿ ಕಚೇರಿಯಲ್ಲೇ ಯೂತ್​​ ಕಾಂಗ್ರೆಸ್​​ ಕಾರ್ಯಕರ್ತರ ಜಗಳ
  • ಮಂಜುನಾಥ್​​ ಗೌಡ, ದೀಪಿಕಾ ರೆಡ್ಢಿ ಬೆಂಬಲಿಗರ ನಡುವೆ ವಾರ್​
  • ಕ್ರಮಕ್ಕೆ ಮುಂದಾದ AICC ಯೂತ್ ಕಾಂಗ್ರೆಸ್​​ನಿಂದ ಶೋಕಾಸ್​​ ನೋಟಿಸ್​​

ಇನ್ನು ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ಗಲಾಟೆ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆ ಸಂಬಂಧ ಸತ್ಯಾಸತ್ಯತೆ ಪರಾಮರ್ಶೆ ನಡೆಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್​ಗೆ ಅವರು ಸೂಚನೆ ನೀಡಿದ್ದಾರೆ. ಅಧ್ಯಕ್ಷರ ಸೂಚನೆ ಹಿನ್ನೆಲೆ ಪದಾಧಿಕಾರಿಗಳಿಗೆ ಚಂದ್ರಶೇಖರ್ ಬುಲಾವ್ ನೀಡಿದ್ದು, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮೀಟಿಂಗ್ ನಡೆಯಲಿದೆ. ಘಟನೆ ಬಗ್ಗೆ ಜಿ.ಸಿ.ಚಂದ್ರಶೇಖರ್ ಈ ವೇಳೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಕರ್ನಾಟಕ ಯೂತ್ ಕಾಂಗ್ರೆಸ್​ ಗಲಾಟೆ; ಅಧ್ಯಕ್ಷ ವಿರುದ್ಧ ಗಂಭೀರ ಆರೋಪ

ಕರ್ನಾಟಕ ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ 15 ಪದಾಧಿಕಾರಿಗಳನ್ನ ವಜಾ ಮಾಡಿರುವುದು ಕಾರ್ಯಕರ್ತರ ನಡುವೆಯೇ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ನೀಟ್​​​ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರತಿಭಟನೆ ನಡೆಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಹಾಗೂ ಅಮಾನತುಗೊಂಡಿರುವ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರು ಪರಸ್ಪರ ಬಡಿದಾಡಿಕೊಂಡಿದ್ದರು. ಆ ಬಳಿಕ ಪ್ರತಿಕ್ರಿಯಿಸಿದ್ದ
ದೀಪಿಕಾ ರೆಡ್ಡಿ ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು ಎಂದು ಅಧ್ಯಕ್ಷ ಮಂಜುನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಯುವ ಕಾಂಗ್ರೆಸ್ ಚುನಾವಣೆಯಲ್ಲಿ 2.95 ಲಕ್ಷ ಮತಗಳ ಪಡೆದಿದ್ದೇನೆ. ದೇಶದಲ್ಲೇ ಅತಿ ಹೆಚ್ಚು ಮತ ಪಡೆದ ಮಹಿಳಾ ಅಭ್ಯರ್ಥಿಗಳಲ್ಲಿ ನಾನೂ ಒಬ್ಬಳು. ಪುರುಷ ಪ್ರಾಬಲ್ಯದ ರಾಜಕೀಯದಲ್ಲಿ ಅವರ ವಿರುದ್ಧ ಹೋರಾಟ ನಡೆಸಿದ್ದೇನೆ. ಚುನಾವಣೆಯ ಬಳಿಕವೂ ಪಕ್ಷ ಸಂಘಟನೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಮಂಜುನಾಥ್ ಅಭದ್ರತೆ ಮತ್ತು ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಣ ಬಂದರೂ ಸಿನಿಮಾ ನಿರ್ಮಾಣ ಕೈಬಿಟ್ಟಿದ್ದೇಕೆ ಸೈಫ್ ಅಲಿ ಖಾನ್? – Kannada News | Saif Ali Khan Reveals Why He Closed His Production House Illuminati Films

ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan), ಕೇವಲ ನಟನೆಯಷ್ಟೇ ಅಲ್ಲದೆ ಸಿನಿಮಾ ನಿರ್ಮಾಣದಲ್ಲೂ ಕೈಹಾಕಿ ಯಶಸ್ಸು ಕಂಡವರು. 2009ರಲ್ಲಿ ‘ಇಲ್ಯುಮಿನಾಟಿ ಫಿಲ್ಮ್ಸ್’ ಬ್ಯಾನರ್ ಆರಂಭಿಸಿ ‘ಲವ್ ಆಜ್ ಕಲ್’, ‘ಕಾಕ್‌ಟೇಲ್’, ‘ಗೋ ಗೋವಾ ಗಾನ್’ ನಂತಹ ಚಿತ್ರಗಳನ್ನು ನೀಡಿದ್ದರು. ಆದರೆ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅವರು ತಮ್ಮ ಪ್ರೊಡಕ್ಷನ್ ಹೌಸ್ ಅನ್ನು ದಿಢೀರ್ ಮುಚ್ಚಿ ಎಲ್ಲರಿಗೂ ಶಾಕ್ ನೀಡಿದ್ದರು. ಇದೀಗ ವರ್ಷಗಳ ಬಳಿಕ ತಾವು ಸಿನಿಮಾ ನಿರ್ಮಾಣದಿಂದ ದೂರ ಸರಿದಿದ್ದಕ್ಕೆ ಅಸಲಿ ಕಾರಣವನ್ನು ಸೈಫ್ ಅಲಿ ಖಾನ್ ಬಹಿರಂಗಪಡಿಸಿದ್ದಾರೆ.

ಸಿನಿಮಾ ನಿರ್ಮಾಣ ಅತಿ ದೊಡ್ಡ ತಲೆನೋವು!

ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೈಫ್, ‘ಸಿನಿಮಾ ನಿರ್ಮಾಣ ಎನ್ನುವುದು ಕೃತಜ್ಞತೆ ಇಲ್ಲದ ಕೆಲಸ. ಇದೊಂದು ಕ್ರಿಯೇಟಿವ್ ಕೆಲಸ ಹೌದು. ಸಿನಿಮಾ ಕಥೆ ಬಗ್ಗೆ, ಮ್ಯೂಸಿಕ್ ಬಗ್ಗೆ ಚರ್ಚಿಸುವುದು ನನಗೂ ಇಷ್ಟವಿತ್ತು. ಆದರೆ ಸಿನಿಮಾ ನಿರ್ಮಾಣ ಮಾಡುವುದು ಅತಿ ದೊಡ್ಡ ತಲೆನೋವು. ಹಾಗಾಗಿ ನಾನು ಅದರಿಂದ ದೂರ ಉಳಿದೆ’ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ತಮ್ಮ ನಿರ್ಮಾಣ ಸಂಸ್ಥೆಯ ಯಶಸ್ಸಿಗೆ ವಿತರಕರಾದ ‘ಇರೋಸ್ ಇಂಟರ್ನ್ಯಾಷನಲ್’ ಹಾಗೂ ತಮ್ಮ ಅಂದಿನ ಸಹ-ನಿರ್ಮಾಪಕ ದಿನೇಶ್ ವಿಜನ್ ಅವರ ‘ಮ್ಯಾಡಾಕ್ ಫಿಲ್ಮ್ಸ್’ ಕಾರಣ ಎಂದು ಸೈಫ್ ನೆನೆದಿದ್ದಾರೆ. ಸದ್ಯ ದಿನೇಶ್ ವಿಜನ್ ಬಾಲಿವುಡ್‌ನ ಅತ್ಯಂತ ಯಶಸ್ವಿ ನಿರ್ಮಾಪಕರಾಗಿ ಹೊರಹೊಮ್ಮಿದ್ದು, ‘ಸ್ತ್ರೀ’ ಫ್ರಾಂಚೈಸಿ, ‘ಭೇಡಿಯಾ’, ‘ಮುಂಜ್ಯಾ’ ನಂತಹ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸೈಫ್, ‘ಕೆಲವು ವಿಷಯಗಳು ಎಷ್ಟು ದಿನ ಇರಬೇಕೋ ಅಷ್ಟು ದಿನ ಮಾತ್ರ ಇರುತ್ತವೆ’ ಎಂದಿದ್ದಾರೆ.

ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಕ್ರೈಮ್ ಡ್ರಾಮಾ ‘ಕರ್ತವ್ಯ’ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದರು. ಈ ಚಿತ್ರವನ್ನು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ‘ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆ ನಿರ್ಮಿಸಿದೆ.

ಇದನ್ನೂ ಓದಿ: ‘ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ಹೋದ್ರೆ ಅದು ಜೀವನವೇ ಅಲ್ಲ’: ಸೈಫ್ ಅಲಿ ಖಾನ್

ತಮ್ಮ ‘ಕಲ್ ಹೋ ನಾ ಹೋ’ ಚಿತ್ರದ ಸಹನಟ ಶಾರುಖ್ ಅವರ ನಿರ್ಮಾಣ ಶೈಲಿಯನ್ನು ಸೈಫ್ ಅಲಿ ಖಾನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಒಳ್ಳೆಯ ನಿರ್ಮಾಪಕರು, ನಿರ್ದೇಶಕರಿಗೆ ಮತ್ತು ಚಿತ್ರತಂಡಕ್ಕೆ ಮುಕ್ತವಾಗಿ ಕೆಲಸ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ. ಶಾರುಖ್ ಖಾನ್ ಕೂಡ ಅದನ್ನೇ ಮಾಡಿದ್ದಾರೆ. ಶಾರುಖ್ ಅವರಿಗೆ ಸಿನಿಮಾಗಳ ಮೇಲೆ ಅಪಾರ ಪ್ರೀತಿ ಇದೆ. ಅದು ಅವರ ನಿರ್ಮಾಣದ ಚಿತ್ರಗಳ ಕಥೆಯ ಆಯ್ಕೆಯಲ್ಲೇ ಎದ್ದು ಕಾಣುತ್ತದೆ’ ಎಂದು ಸೈಫ್ ಅಲಿ ಖಾನ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version