‘ನನಗೆ 3BHK ಮನೆ ಹುಡುಕಿ ಕೊಡಿ, ಅರ್ಧ ತಿಂಗಳ ಬಾಡಿಗೆ ಕೊಡುತ್ತೇನೆ’: ಬೆಂಗಳೂರಿನಲ್ಲಿ ಮನೆ ಹುಡುಕಾಟದಿಂದ ಬೇಸತ್ತ ಯುವಕ

‘ನನಗೆ 3BHK ಮನೆ ಹುಡುಕಿ ಕೊಡಿ, ಅರ್ಧ ತಿಂಗಳ ಬಾಡಿಗೆ ಕೊಡುತ್ತೇನೆ’: ಬೆಂಗಳೂರಿನಲ್ಲಿ ಮನೆ ಹುಡುಕಾಟದಿಂದ ಬೇಸತ್ತ ಯುವಕ

ಬೆಂಗಳೂರು, ಮಾ.20: ಬೆಂಗಳೂರಿನಲ್ಲಿ ಮನೆ ಹುಡುಕುವುದು ಒಂದು ದೊಡ್ಡ ತಲೆ ನೋವು. ಪ್ರತಿದಿನ ಈ ಬಗ್ಗೆ ಒಂದಾದರೂ ಪೋಸ್ಟ್​​ ವೈರಲ್​​ ಆಗುತ್ತ ಇರುತ್ತದೆ. ಇದೀಗ ಮತ್ತೊಂದು ನಿರಾಸೆ ಪೋಸ್ಟ್ವೊಂದು​​​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಈ ಬಗ್ಗೆ ರೆಡ್ಡಿಟ್​​ನಲ್ಲಿ ಯುವಕನೊಬ್ಬ ಹಂಚಿಕೊಂಡಿದ್ದಾನೆ. ಕೋರಮಂಗಲ ಅಥವಾ HSR ಲೇಔಟ್‌ನಂತಹ ಪ್ರದೇಶಗಳಲ್ಲಿ 3BHK ಫ್ಲಾಟ್ ಪಡೆಯಲು ಸಹಾಯ ಮಾಡುವವರಿಗೆ ಅರ್ಧ ತಿಂಗಳ ಬಾಡಿಗೆಯನ್ನು ನೀಡುತ್ತೇನೆ ಎಂದು ಪೋಸ್ಟ್​​​ವೊಂದನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್​​ನಲ್ಲಿ “ನನಗೆ 3bhk ಮನೆ ಹುಡುಕಿ, ನಾನು ನಿಮಗೆ ಅರ್ಧ ತಿಂಗಳ ಬಾಡಿಗೆ ಕೊಡುತ್ತೇನೆ! ನೀವು ಯಾರೇ ಆಗಿರಲಿ, ಬಾಡಿಗೆಗೆ 2.5/3bhk ಒಳ್ಳೆಯ ಮನೆಯನ್ನು ಹೊಂದಿರುವ ಯಾರಾದರೂ ನಿಮಗೆ ತಿಳಿದಿದ್ದರೆ ಮತ್ತು ನಾನು ಆ ಆಸ್ತಿಯನ್ನು ತೆಗೆದುಕೊಂಡರೆ, ನಾನು ನಿಮಗೆ ಅರ್ಧ ತಿಂಗಳ ಬಾಡಿಗೆಯನ್ನು ಕೊಡುತ್ತೇನೆ. ಒಳ್ಳೆಯ ಮನೆಗಳನ್ನು ಹುಡುಕುತ್ತಾ ನಾನು ತುಂಬಾ ನಿರಾಶೆಗೊಂಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವೈರಲ್​ ಪೋಸ್ಟ್​:

Bengaluru 3bhk Rent Crisis (1)

ಕೋರಮಂಗಲ, ಎಚ್‌ಎಸ್‌ಆರ್, ಕೂಡ್ಲು ಗೇಟ್ ಅಥವಾ ಹಲಸೂರಿನಲ್ಲಿ 45,000 ರೂ. ಗರಿಷ್ಠ ಬಜೆಟ್‌ನೊಂದಿಗೆ ಮನೆಗಳನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಏಪ್ರಿಲ್ 1 ರೊಳಗೆ ಈ ಹೊಸ ಮನೆಗೆ ಒಳ್ಳೆಯದು ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಲು ಮುಖಾಮುಖಿಯಾಗಿ ಸಿಗಬಹುದು ಅಥವಾ ಈ ಮನೆಯನ್ನು ನೋಡಲು ನನ್ನ ಜತೆಗೆ ಬರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೆಟಾ ಉದ್ಯೋಗಿ ಇಂದು ಆಟೋ ಚಾಲಕ?: ವೈರಲ್​​ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ

ಇನ್ನು ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿದೆ. ಒಬ್ಬರು 50 ಸಾವಿರ ರೂ.ಗೆ 2BHK ಮನೆ ಸಿಗಬಹುದು. ನನ್ನ ಸ್ವಂತ ಕಟ್ಟಡದಲ್ಲಿ 35 ಸಾವಿರ ರೂ.ಗೆ 2BHK ನೀಡುತ್ತಿದ್ದೇನೆ. ದೊಡ್ಡ ಅಪಾರ್ಟ್ಮೆಂಟ್ ಸಮುದಾಯದ ಬದಲು ಸ್ವತಂತ್ರ ಮನೆಯಲ್ಲಿ ವಾಸಿಸಲು ಪ್ರಯತ್ನಿಸಿ ಎಂದು ಹೇಳಿದ್ದಾರೆ. ನೀವು ಹೇಳಿದ ಪ್ರದೇಶಗಳಲ್ಲಿ ತಿಂಗಳಿಗೆ 50k ಗಿಂತ ಕಡಿಮೆ ಬೆಲೆಗೆ 3bhk?! ಒಂದು ವೇಳೆ ಸಿಕ್ಕರೇ ನನಗೆ ಹೇಳಿ. ನಾನು ಅದೇ ಪ್ರದೇಶಗಳಲ್ಲಿ 3bhk ಗೆ ಬರಲು ನೋಡುತ್ತಿದ್ದೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಕುಡ್ಲು ಗೇಟ್‌ ಬಳಿ ಇಷ್ಟು ಕಡಿಮೆ, 3 ಬಿಹೆಚ್​​​ಕೆ ಮನೆ ಸಿಗುವುದು ಕಷ್ಟ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

Rupee value: ರೂಪಾಯಿಗೆ ಬಿಗ್ ಶಾಕ್, ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು 93ರ ಗಡಿ ದಾಟಿದ ಭಾರತೀಯ ಕರೆನ್ಸಿ ಮೌಲ್ಯ!

ನವದೆಹಲಿ, ಮಾರ್ಚ್ 20: ಇರಾನ್-ಇಸ್ರೇಲ್ ಯುದ್ಧದ ನಡುವೆ ಭಾರತೀಯ ರೂಪಾಯಿ ಮೌಲ್ಯವು ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಸದ್ಯಕ್ಕೆ ರೂಪಾಯಿ ಮೌಲ್ಯ 93.19 ಕ್ಕೆ ಕುಸಿದಿದೆ. ಕಚ್ಚಾತೈಲ ಬೆಲೆ ಏರಿಕೆ ಮತ್ತು ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧ ಪರಿಸ್ಥಿತಿ ಈ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ದಾಟಿದ್ದು, ಭಾರತ ತನ್ನ ತೈಲದ ಶೇ 80ರಷ್ಟನ್ನು ಆಮದು ಮಾಡಿಕೊಳ್ಳುವುದರಿಂದ ಹೆಚ್ಚು ಡಾಲರ್‌ಗಳನ್ನು ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಯುದ್ಧದ ಭೀತಿಯಿಂದ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ಹಣ ಹಿಂಪಡೆದು ಡಾಲರ್‌ಗಳಲ್ಲಿ ಹೂಡಿಕೆ ಮಾಡುತ್ತಿರುವುದೂ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.

ಈ ಕುಸಿತದಿಂದಾಗಿ ಪೆಟ್ರೋಲ್, ಡೀಸೆಲ್, ಮೊಬೈಲ್, ಲ್ಯಾಪ್‌ಟಾಪ್ ಮತ್ತು ಖಾದ್ಯ ತೈಲಗಳಂತಹ ಆಮದು ವಸ್ತುಗಳ ಬೆಲೆ ಏರಿಕೆಯಾಗಲಿದೆ. ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ವೆಚ್ಚ ಹೆಚ್ಚಾಗಲಿದೆ. ಹಣದುಬ್ಬರ ಮತ್ತು ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರಲಿದೆ. ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವುದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯಿಂದ ಡಾಲರ್‌ಗಳನ್ನು ಮಾರಾಟ ಮಾಡುವ ಸಾಧ್ಯತೆಯೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿ ನೀರಾನೆ ದಾಳಿಗೆ ಪಶುವೈದ್ಯೆ ಬಲಿ: ತನಿಖೆಗೆ ಸಚಿವ ಆದೇಶ

ಶಿವಮೊಗ್ಗ, ಮಾರ್ಚ್​​ 20: ನೀರಾನೆ ದಾಳಿಗೆ ಪಶುವೈದ್ಯೆ ದಾರುಣವಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನಡೆದಿದೆ. ಬೆಂಗಳೂರು ಮೂಲದ ಡಾ.ಸಮೀಕ್ಷಾ ರೆಡ್ಡಿ(27) ಮೃತ ದುರ್ದೈವಿಯಾಗಿದ್ದು, ಪಶುವೈದ್ಯೆಯಾಗಿ ಆಯ್ಕೆಯಾಗಿದ್ದ ಇವರು ತಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ. ಗುರುವಾರ ರಾತ್ರಿ 10.30ಕ್ಕೆ ಮೃಗಾಲಯದ ಆಸ್ಪತ್ರೆಗೆ ಸನ್ ಕಾನರ್ ಹಕ್ಕಿಯ ಚಿಕಿತ್ಸೆಗೆಂದು ತೆರಳಿದ್ದ ಡಾ.ಸಮೀಕ್ಷಾ, ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಅದರ ಆವರಣದ ಒಳಗೆ ಹೋಗಿದ್ದರು. ಈ ವೇಳೆ ನೀರಾನೆ ಏಕಾ ಏಕಿ ದಾಳಿ ನಡೆಸಿತ್ತು.

ರಾತ್ರಿ 11.45ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಡಾ.ಸಮೀಕ್ಷಾ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತುರ್ತಾಗಿ ಶಸ್ತ್ರಚಿಕಿತ್ಸೆಯನ್ನೂ ವೈದ್ಯರು ನಡೆಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸಿದ ಪಶುವೈದ್ಯೆ ಇಂದು ಬೆಳಿಗ್ಗೆ 6:30ರ ಸುಮಾರಿಗೆ ಕೊನೆಯುಸಿರು ಎಳೆದಿದ್ದಾರೆ. ಡಾ.ಸಮೀಕ್ಷಾ ಇತ್ತೀಚೆಗಷ್ಟೇ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಶಿಕಾರಿಪುರದಲ್ಲಿ ರಂಜಾನ್ ದೇಣಿಗೆ ವಿಚಾರದಲ್ಲಿ ಗಲಾಟೆ-ಕಲ್ಲು ತೂರಾಟ, 10 ಜನರ ಬಂಧನ

ಈಶ್ವರ ಖಂಡ್ರೆ ಸಂತಾಪ

ನೀರಾನೆ ದಾಳಿಯಿಂದ ಪಶು ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಎಂದು ಶೋಕ ವ್ಯಕ್ತಪಡಿಸಿರುವ ಅವರು, ಈ ದುಃಖದ ಸಂದರ್ಭದಲ್ಲಿ ಮೃತ ವೈದ್ಯರ ಕುಟುಂಬದೊಂದಿಗೆ ಸರ್ಕಾರ ನಿಲ್ಲುತ್ತದೆ. ಪ್ರತಿಯೊಂದು ಜೀವವೂ ಅಮೂಲ್ಯ. ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಮೃತ ಯುವ ವೈದ್ಯೆಯ ಕುಟುಂಬದವರಿಗೆ ನಿಯಮಾನುಸಾರ ಕೂಡಲೇ ಪರಿಹಾರ ನೀಡುವಂತೆ ಸೂಚಿಸಿರುವ ಅವರು, ರಾಜ್ಯದ ಎಲ್ಲ ಮೃಗಾಲಯಗಳಲ್ಲಿರುವ ಪಶುವೈದ್ಯರು ಯಾವುದೇ ವನ್ಯಜೀವಿಗೆ ಚಿಕಿತ್ಸೆ ನೀಡುವಾಗ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ಪಾಲಿಸಬೇಕು ಎಂದೂ ಸೂಚನೆ ನೀಡಿದ್ದಾರೆ.

ತನಿಖೆಗೆ ಆದೇಶ

ಈ ದುರಂತದ ಬಗ್ಗೆ ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡದಿಂದ ತನಿಖೆ ಮಾಡಿಸಿ, 7 ದಿನಗಳ ಒಳಗಾಗಿ ವರದಿ ನೀಡುವಂತೆಯೂ ಸಚಿವರು ಆದೇಶಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ಅಜ್ಜ

ಭದೋಹಿ, ಮಾರ್ಚ್​ 20: ಆರು ವರ್ಷದ ಮೊಮ್ಮಗಳ ಮೇಲೆ ಅಜ್ಜ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ನಡೆದಿದೆ. ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 58 ವರ್ಷದ ವ್ಯಕ್ತಿಯನ್ನು ಭದೋಹಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಆರೋಪಿಯನ್ನು ಆತನ ಕುಟುಂಬ ಸದಸ್ಯರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಆದರೆ ಕುಟುಂಬವು ಬಾಲಕಿಯನ್ನು ಆಸ್ಪತ್ರೆ(Hospital)ಗೆ ಕರೆದೊಯ್ದಾಗ ಆತ ಓಡಿಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 17 ರಂದು ಬಾಲಕಿಯ ತಾಯಿ ಮನೆಯಲ್ಲಿ ಇರಲಿಲ್ಲ ಮತ್ತು ಇತರ ಕುಟುಂಬ ಸದಸ್ಯರು ಮನೆಯ ನೆಲ ಮಹಡಿಯಲ್ಲಿದ್ದರು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಸಚ್ಚಿದಾನಂದ್ ಪಾಂಡೆ ಹೇಳಿದ್ದಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಬಾಲಕಿಯ ಕಿರುಚಾಟ ಕೇಳಿ ಅವರು ಮೇಲಿನ ಮಹಡಿಗೆ ಬಂದು ನೋಡಿದಾಗ ಬಾಲಕಿಯ ಅಜ್ಜ ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸುತ್ತಿರುವುದನ್ನು ನೋಡಿದ್ದಾರೆ.

ಬಾಲಕಿಯ ಕುಟುಂಬದವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು ಮತ್ತು ಈ ಸಮಯದಲ್ಲಿ ಆರೋಪಿಗಳು ಪರಿಸ್ಥಿತಿಯ ಲಾಭ ಪಡೆದು ಪರಾರಿಯಾಗಿದ್ದಾರೆ ಎಂದು ಪಾಂಡೆ ಹೇಳಿದರು.
ಬಾಲಕಿಯ ಸ್ಥಿತಿ ಸುಧಾರಿಸಿದ ನಂತರ, ಗುರುವಾರ ತಡರಾತ್ರಿ ಆಕೆಯ ತಂದೆ ತನ್ನ ತಂದೆಯ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 65 (2) (12 ವರ್ಷದೊಳಗಿನ ಬಾಲಕಿಯ ಮೇಲಿನ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ತನ್ನ ಸಂಬಂಧಿಕರೊಬ್ಬರ ಮನೆಯಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ಗುರುವಾರ ಸುಳಿವು ದೊರೆತ ಆಧಾರದ ಮೇಲೆ ಬಂಧಿಸಲಾಯಿತು ಎಂದು ಪಾಂಡೆ ಹೇಳಿದರು. ಈ ವಿಷಯದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಮೆಟಾ ಉದ್ಯೋಗಿ ಇಂದು ಆಟೋ ಚಾಲಕ?: ವೈರಲ್​​ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ

ಬೆಂಗಳೂರು, ಮಾರ್ಚ್​​ 20: ಇತ್ತೀಚಿನ ದಿನಗಳಲ್ಲಿ ಯಾರ ಉದ್ಯೋಗಕ್ಕೂ ಖಾತರಿ ಇಲ್ಲ. ಯಾವುದೇ ಸಂದರ್ಭವೂ ಲೇ ಆಫ್​​ ಆಗಬಹುದೆಂಬ ಸ್ಥಿತಿ ಇದೆ. ಹೀಗಿರುವಾಗ ಬೆಂಗಳೂರಿನ ಆಟೋವೊಂದರ ಮುಂಭಾಗ ತೂಗಿಹಾಕಲಾಗಿರುವ ಮೆಟಾ ಐಡಿ ಕಾರ್ಡ್​​ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಚರ್ಚೆಗೆ ಕಾರಣವಾಗಿದೆ. ಪ್ರಯಾಣದ ವೇಳೆ ಆಟೋದಲ್ಲಿರುವ ಈ ಗುರುತಿನ ಚೀಟಿಯನ್ನು ಗಮನಿಸಿದ ವ್ಯಕ್ತಿಯೋರ್ವರು ಅದರ ದೃಶ್ಯವನ್ನು ಸೆರೆ ಹಿಡಿದು, ಇದು ಟೆಕ್ ಉದ್ಯಮದ ಉದ್ಯೋಗ ಕಡಿತದ ಕಠಿಣ ವಾಸ್ತವತೆಯನ್ನು ತೋರಿಸುತ್ತದೆ ಎಂಬ ಶೀರ್ಷಿಕೆಯ ಜೊತೆ ಪೋಸ್ಟ್​​ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ನಾನಾ ಅಭಿಪ್ರಾಯಗಳು ವ್ಯಕ್ತವಾಗತೊಡಗಿವೆ.

ವೈರಲ್​​ ವಿಡಿಯೋದಲ್ಲಿ ಏನಿದೆ?

ಸಿದ್ಧಾಂತ್​​ ಸಿಂಗ್​​ ರಜಪೂತ್​​ ಎಂಬ ವ್ಯಕ್ತಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಪ್ರಯಾಣಿಕರ ಸೀಟಿನಿಂದ ತೆಗೆದ ಈ ವಿಡಿಯೋದಲ್ಲಿ ಆಟೋ ಚಾಲಕ ವಾಹನ ಓಡಿಸುತ್ತಿರುವುದು ಕಾಣುತ್ತದೆ. ಆದರೆ ಗಮನ ಸೆಳೆಯುವುದು, ಆಟೋ ಮೇಲ್ಭಾಗದಲ್ಲಿ ತೂಗುತ್ತಿರುವ ಮೆಟಾ ಕಂಪನಿಯ ಐಡಿ ಕಾರ್ಡ್. ಮೊದಲಿಗೆ ಆ ಐಡಿ ಚಾಲಕದ್ದೇ ಎಂದು ರಜಪೂತ್​​ ಹೇಳಿದ್ದರೂ, ಬಳಿಕ ಆ ಬಗ್ಗೆ ಖಚಿತತೆ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಮಳೆಯ ನಡುವೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಮಿನಿ ವಾಟರ್ ಫಾಲ್ಸ್’? ಚರ್ಚೆಗೆ ಗ್ರಾಸವಾದ ವೈರಲ್ ವಿಡಿಯೋ

ಈ ವೈರಲ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ಕೆಲವರು, ಈ ಚಾಲಕ ಹಿಂದೆ ಮೆಟಾ ಉದ್ಯೋಗಿಯಾಗಿದ್ದು, ಉದ್ಯೋಗ ಕಳೆದುಕೊಂಡು ಈಗ ಆಟೋ ಓಡಿಸುತ್ತಿರಬಹುದು ಎಂದು ಅಂದಾಜಿಸಿದ್ದಾರೆ. ಇನ್ನೂ ಕೆಲವರು ಆ ಐಡಿ ಕಾರ್ಡ್ ಅನ್ನು ಯಾವುದೋ ಪ್ರಯಾಣಿಕರು ಮರೆತುಹೋದ ಬಳಿಕ ಚಾಲಕ ಅದನ್ನು ಕೇವಲ ತೆಗೆದುಕೊಂಡು ಹಾಕಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು ಇನ್ಫಿನಿಟಿ ಸ್ಟೋನ್ಸ್​​ಗಳ ರೀತಿ ಆಟೋ ಚಾಲಕ ಬ್ಯಾಂಡ್​​ಗಳನ್ನು ಸಂಗ್ರಹಿಸುತ್ತಿರಬಹುದು ಎಂದು ಕಾಮೆಂಟ್​​ ಮಾಡಿದ್ದಾರೆ. ಟೆಕ್ ಉದ್ಯಮದಲ್ಲಿ ಇತ್ತೀಚೆಗೆ ನಡೆದ ದೊಡ್ಡ ಮಟ್ಟದ ಉದ್ಯೋಗ ಕಡಿತಗಳ ಹಿನ್ನೆಲೆಯಲ್ಲಿ, ಈ ಘಟನೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಉದ್ಯೋಗ ಕಳೆದುಕೊಂಡ ನಂತರ ಬದುಕಿಗಾಗಿ ಆತ ಆಟೋ ಚಾಲನೆಗೆ ಬಂದಿರಬಹುದು ಎಂಬ ಚರ್ಚೆಯೇ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದರೂ, ಸತ್ಯ ಏನು ಎಂಬ ಬಗ್ಗೆ ಸ್ಪಷ್ಟತೆ ಮಾತ್ರ ಸಿಕ್ಕಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

“ನಿಮ್ಮ ಕಾಲಿಗೆ ಬೀಳ್ತೀವಿ, ನಮ್ಮೂರಲ್ಲಿ ಸಾರಾಯಿ ಬಂದ್ ಮಾಡಿಸಿ”: ಶಾಸಕರ ಮುಂದೆ ಕಣ್ಣೀರು ಹಾಕಿದ ಮಹಿಳೆಯರು

ಬೀದರ್, ಮಾ.20: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನೀಲಕಂಠವಾಡಿ ಗ್ರಾಮದಲ್ಲಿ ಮದ್ಯದ ಹಾವಳಿ ಮಿತಿಮೀರಿದೆ. ಗ್ರಾಮಕ್ಕೆ ಭೇಟಿ ನೀಡಿದ್ದ ಬಸವಕಲ್ಯಾಣ ಶಾಸಕ ಶರಣು ಸಲಗರ್ ಅವರ ಮುಂದೆ ನೂರಾರು ಮಹಿಳೆಯರು ಕಣ್ಣೀರಿಡುತ್ತಾ, ಗ್ರಾಮದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಅಂಗಲಾಚಿದ್ದಾರೆ. ಗ್ರಾಮದಲ್ಲಿ ಮದ್ಯಪಾನದ ಚಟಕ್ಕೆ ಬಿದ್ದು ಕಾಲೇಜು ಯುವಕರು ಸೇರಿದಂತೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. “ನಮ್ಮೂರಿನಲ್ಲಿ ಅನೇಕ ಮಹಿಳೆಯರು ಈಗಾಗಲೇ ವಿಧವೆಯರಾಗಿದ್ದಾರೆ, ಇನ್ನು ಮುಂದಾದರೂ ಯುವಕರ ಭವಿಷ್ಯ ಕಾಪಾಡಿ” ಎಂದು ಮಹಿಳೆಯರು ಶಾಸಕರ ಮುಂದೆ ಅತ್ತಿದ್ದಾರೆ. ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ಹಾಗೂ ಹಾದಿಬೀದಿಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದೆ. ದೂರು ನೀಡಿದರೂ ಪೊಲೀಸರು ಬಂದು ಸುಮ್ಮನೆ ನೋಡಿ ಹೋಗುತ್ತಾರೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ನಿಮ್ಮ ಕಾಲಿಗೆ ಬೀಳ್ತೀವಿ, ಹೇಗಾದರೂ ಮಾಡಿ ನಮ್ಮೂರಲ್ಲಿ ಸಾರಾಯಿ ಬಂದ್ ಮಾಡಿಸಿ” ಎಂದು ಮಹಿಳೆಯರು ಶಾಸಕರ ಹತ್ತಿರ ಪಟ್ಟು ಹಿಡಿದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಚಿತ್ರಕ್ಕೆ ಆ ಒಂದು ದಾಖಲೆಯನ್ನು ಟಚ್ ಮಾಡೋಕೂ ಆಗಿಲ್ಲ

‘ಧುರಂಧರ್ 2’ ಸಿನಿಮಾ (Dhurandhar 2 Movie) ಮೊದಲ ದಿನದ ಓಪನಿಂಗ್ ಕಲೆಕ್ಷನ್ ಲೆಕ್ಕ ಸಿಕ್ಕಿದೆ. ಈ ಚಿತ್ರ ಬರೋಬ್ಬರಿ 236 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದಾಗ್ಯೂ ಒಂದು ದೊಡ್ಡ ದಾಖಲೆಯನ್ನು ಬ್ರೇಕ್ ಮಾಡಲು ಸಿನಿಮಾ ವಿಫಲವಾಗಿದೆ. ‘ಧುರಂಧರ್ 2’ ಚಿತ್ರದ ಮೊದಲ ದಿನದ ಕಲೆಕ್ಷನ್ 300 ಕೋಟಿ ರೂಪಾಯಿ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇದಕ್ಕೆ ಸಿನಿಮಾ ತಂಡ ಮಾಡಿದ ತಪ್ಪೇ ಕಾರಣ.

‘ಧುರಂಧರ್ 2’ ಸಿನಿಮಾ ಮೊದಲ ದಿನ ಅಬ್ಬರದ ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಸುಳ್ಳಾಗಿದೆ. ಸಿನಿಮಾ 236 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ ಮಾಡಿದೆ. ಇದು ಚಿತ್ರಕ್ಕೆ ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡಿದೆ. ಈ ಮೂಲಕ ‘ಪುಷ್ಪ 2’ ಚಿತ್ರ ಸೃಷ್ಟಿ ಮಾದಿದ್ದ ದಾಖಲೆಯನ್ನು ಮುರಿಯಲು ‘ಧುರಂಧರ್ 2’ ವಿಫಲವಾಗಿದೆ.

‘ಪುಷ್ಪ 2’ ಸಿನಿಮಾ ಮೊದಲ ದಿನ 294 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ದಾಖಲೆಯನ್ನು ‘ಧುರಂಧರ್ 2’ ಸಿನಿಮಾ ಮುರಿದು ಹಾಕುತ್ತದೆ ಎಂಬುದು ಎಲ್ಲರ ಊಹೆ ಆಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇದು ಚಿತ್ರಕ್ಕೆ ಸಾಕಷ್ಟು ಹಿನ್ನಡೆ ತಂದಿದೆ. ಶೋ ಕ್ಯಾನ್ಸಲ್ ಆಗಿರೋದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಆಂಧ್ರ ಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ‘ಧುರಂಧರ್ 2’ ಸಿನಿಮಾದ ಶೋಗಳು ಕ್ಯಾನ್ಸಲ್ ಆದವು. ತೆಲುಗು, ಕನ್ನಡ ಕಾಪಿ ಅಪ್​​ಲೋಡ್ ಆಗಿರಲಿಲ್ಲ. ಇದು ರದ್ದಾಗಲು ಮೂಲ ಕಾರಣ. ಇದು ಚಿತ್ರಕ್ಕೆ ದೊಡ್ಡ ಹಿನ್ನಡೆಯನ್ನು ತಂದಿದೆ.

ಇದನ್ನೂ ಓದಿ: ‘ಧುರಂಧರ್ 2’ ನೋಡಲು ದುಬೈನಿಂದ ಭಾರತಕ್ಕೆ ಬಂದ ಖ್ಯಾತ ಇನ್​​ಫ್ಲುಯೆನ್ಸರ್

‘ಧುರಂಧರ್ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಲು ಚಿತ್ರದ ಕಥೆ ಕಾರಣ ಎಂದು ಅನೇಕರು ಹೇಳುತ್ತಿದ್ದಾರೆ. ‘ಧುರಂಧರ್ 2’ ಸಿನಿಮಾ ಮುಂದಿನ ದಿನಗಳಲ್ಲಿ ಮತ್ತಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ ಆಗಲಿದೆ ಎಂಬ ಊಹೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೈಲಾದೇವಿ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ವಾಹನ ಅಪಘಾತ, ಐವರು ಸಾವು, ಮೂವರಿಗೆ ಗಾಯ

ಆಗ್ರಾ, ಮಾರ್ಚ್​ 20: ಆಗ್ರಾದಲ್ಲಿ ಭಕ್ತರಿಂದ ತುಂಬಿದ್ದ ಬೊಲೆರೊ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಮೃತರಲ್ಲಿ ಪತಿ, ಮಗ, ಸೊಸೆ ಮತ್ತು ಮೊಮ್ಮಗಳು ಸೇರಿದ್ದಾರೆ. ಈ ಮಧ್ಯೆ, ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅಪಘಾತದ ನಂತರ, ಗ್ರಾಮಸ್ಥರು ಕಾರಿನ ಗಾಜುಗಳನ್ನು ಒಡೆದು ಎಲ್ಲರನ್ನೂ ಹೊರಗೆಳೆದರು. ಇಟಾವಾದ ಕುಟುಂಬವು ರಾಜಸ್ಥಾನದ ಕೈಲಾ ದೇವಿ ದೇವಸ್ಥಾನಕ್ಕೆ ಹೋಗಿತ್ತು. ತಡರಾತ್ರಿ ಹಿಂತಿರುಗುತ್ತಿದ್ದಾಗ ಚಿತ್ರಹಾತ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ವೈದ್ಯರು 70 ವರ್ಷದ ಕಾಂತ ಪ್ರಸಾದ್, ಅವರ ಮಗ ದೇವೇಂದ್ರ (35), ಅವರ 3 ವರ್ಷದ ಮೊಮ್ಮಗಳು ಆರಾಧ್ಯ, ಅವರ ಸೊಸೆ ಸೀಮಾ (30) ಮತ್ತು 20 ವರ್ಷದ ಚಾಲಕ ರಿಷಿ ಮೃತಪಟ್ಟಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಂಡ್ಯದಲ್ಲಿ ಜನರ ನಿದ್ದೆಗೆಡಿಸಿದ ಚಿರತೆ ಕೊನೆಗೂ ಸೆರೆ: ಬೋನಿಗೆ ಬಿದ್ದ ಚಿರತೆ ನೋಡಲು ಮುಗಿಬಿದ್ದ ಜನ

ಮಂಡ್ಯ, ಮಾರ್ಚ್ 20: ಮಂಡ್ಯ ಜಿಲ್ಲೆಯಾದ್ಯಂತ ಚಿರತೆ ಹಾವಳಿ ಹೆಚ್ಚಾಗಿದ್ದು, ಅದರಲ್ಲೂ ಮಂಡ್ಯ ಹೊರವಲಯದ ಭೂತನ ಹೊಸೂರು ಗ್ರಾಮದಲ್ಲಿ ಜನರಲ್ಲಿ ಆತಂಕ ಮನೆ ಮಾಡಿತ್ತು. ಕಬ್ಬಿನ ಗದ್ದೆಯಲ್ಲಿ ಇತ್ತೀಚೆಗೆ ಮೂರು ಚಿರತೆ ಮರಿಗಳು ಕಾಣಿಸಿದ ನಂತರ, ತಾಯಿ ಚಿರತೆಯ ಹಾವಳಿ ಹೆಚ್ಚಾಗಿತ್ತು. ಇದರಿಂದ ಗ್ರಾಮಸ್ಥರಿಗೆ ಜಮೀನುಗಳಿಗೆ ಹೋಗಲು ಭಯ ಕಾಡುತ್ತಿತ್ತು, ಅಲ್ಲದೆ ಸಾಕುಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸುತ್ತಿತ್ತು.

ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಬೋನು ಇರಿಸಿದ್ದರು. ಈಗ ಮರಿಗಳನ್ನು ಹುಡುಕಿಕೊಂಡು ಬಂದ ತಾಯಿ ಚಿರತೆ ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಿಂದ ಭೂತನ ಹೊಸೂರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಮತ್ತು ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಬೋನಿಗೆ ಬಿದ್ದ ಚಿರತೆ ನೋಡಲು ನೂರಾರು ಸಂಖ್ಯೆಯಲ್ಲಿ ಜನ ಆಗಿಸಿದ್ದು ಕಂಡುಬಂತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀದೇವಿಯ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ ಪತಿ ಮತ್ತು ಮಕ್ಕಳು

ದಿವಂಗತ ನಟಿ ಶ್ರೀದೇವಿ (Sridevi) ಅವರಿಗೆ ಸೇರಿದ ಚೆನ್ನೈನ ಇಸ್ಟ್ ಕೋಸ್ಟ್ ರೋಡ್‌ನಲ್ಲಿರುವ ಸುಮಾರು 4.7 ಎಕರೆ ಜಮೀನು ಈಗ ವಿವಾದದ ವಿಷಯವಾಗಿದೆ. ಜಮೀನಿನ ಮಾಲೀಕತ್ವಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದ್ದು, ಇದೀಗ ಶ್ರೀದೇವಿಯ ಪತಿ ನಿರ್ಮಾಪಕ ಬೋನಿ ಕಪೂರ್ ಮತ್ತು ಮಕ್ಕಳಾದ ಜಾನ್ಹವಿ ಕಪೂರ್, ಖುಷಿ ಕಪೂರ್ ಅವರುಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಆಸ್ತಿಯ ಮಾಲೀಕತ್ವಕ್ಕಾಗಿ ಮತ್ತೊಬ್ಬರಿಂದ ಸಲ್ಲಿಸಲಾಗಿರುವ ಅರ್ಜಿಗಳನ್ನು ರದ್ದು ಮಾಡಬೇಕು ಎಂದು ಅಪ್ಪ-ಮಕ್ಕಳು ಮನವಿ ಮಾಡಿದ್ದು, ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಎಂಸಿ ಶಿವಕಾಮಿ ಮತ್ತು ಅವರ ಸಹೋದರ ಎಂಸಿ ನಟರಾಜನ್ ಮತ್ತು ಅವರ ತಾಯಿ ಚಂದ್ರಭಾನು ಎಂಬುವವರು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಇಸ್ಟ್ ಕೋಸ್ಟ್ ರೋಡ್‌ನಲ್ಲಿರುವ ಸುಮಾರು 4.7 ಎಕರೆ ಜಮೀನು ಕುರಿತಾಗಿ ಮೊಕದ್ದಮೆ ಹೂಡಿದ್ದರು. ಈ ಆಸ್ತಿ ತಮ್ಮ ತಾತನಿಗೆ ಸೇರಿದ್ದಾಗಿದ್ದು, ತಮಗೂ ಇದರಲ್ಲಿ ಪಾಲಿದೆ ಎಂಬುದು ಅವರ ವಾದವಾಗಿದೆ. ನಟಿ ಶ್ರೀದೇವಿ ಅವರು ಈ ಆಸ್ತಿಯನ್ನು 1988 ರಲ್ಲಿಯೇ ಖರೀದಿ ಮಾಡಿದ್ದರು. ಕಳೆದ 38 ವರ್ಷಗಳಿಂದ ಈ ಆಸ್ತಿ ಅವರ ಕುಟುಂಬದ ವಶದಲ್ಲಿಯೇ ಇದೆ.

ಈ ಹಿಂದೆಯೂ ಬೋನಿ ಕಪೂರ್ ಅವರು ಈ ಕುರಿತು ಅರ್ಜಿ ಹಾಕಿದ್ದರು. ದೂರುದಾರರಾದ ಚಂದ್ರಭಾನು ಅವರ ವಿವಾಹವು ಕಾನೂನುಬದ್ಧವಾಗಿಲ್ಲ (ಅವರ ಪತಿ ಎಂಸಿ ಚಂದ್ರಶೇಖರನ್ ಅವರ ಮೊದಲ ಪತ್ನಿ ಬದುಕಿರುವಾಗಲೇ ನಡೆದ ವಿವಾಹ) ಎಂದು ಬೋನಿ ಕಪೂರ್ ವಾದಿಸಿದ್ದಾರೆ. ಈ ಹಿಂದೆ ಚೆಂಗಲ್ಪಟ್ಟು ನ್ಯಾಯಾಲಯವು ಬೋನಿ ಕಪೂರ್ ಅವರ ಅರ್ಜಿಯನ್ನು ತಿರಸ್ಕರಿಸಿ, ಪೂರ್ಣ ಪ್ರಮಾಣದ ವಿಚಾರಣೆಯ ಅಗತ್ಯವಿದೆ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಕಪೂರ್ ಕುಟುಂಬ ಈಗ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.

ಇದನ್ನೂ ಓದಿ:ಹುಟ್ಟುಹಬ್ಬದಂದು ತಿರುಪತಿ ಬೆಟ್ಟ ಹತ್ತಿ ದರ್ಶನ ಪಡೆದ ನಟಿ ಜಾನ್ಹವಿ ಕಪೂರ್

1988 ರಲ್ಲಿ ನಡೆದ ಆಸ್ತಿ ಮಾರಾಟದ ಬಗ್ಗೆ 2025 ರಲ್ಲಿ ದೂರು ನೀಡಿರುವುದನ್ನು ಬೋನಿ ಕಪೂರ್ ಪ್ರಶ್ನಿಸಿದ್ದಾರೆ. ಸುಮಾರು 37 ವರ್ಷಗಳ ನಂತರ ಇಂತಹ ದೂರು ನೀಡುವುದು ಕಾನೂನುಬಾಹಿರ ಎಂದು ಅವರು ವಾದಿಸಿದ್ದಾರೆ. ಕಪೂರ್ ಕುಟುಂಬದ ಪ್ರಕಾರ, ದೂರುದಾರರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಮತ್ತು ಚಂದ್ರಭಾನು ಅವರ ವಿವಾಹದ ಸತ್ಯಾಂಶವನ್ನು ಮರೆಮಾಚಿದ್ದಾರೆ. ಇದು ನ್ಯಾಯಾಲಯಕ್ಕೆ ಮಾಡಿದ ವಂಚನೆ ಎಂದು ಅವರು ಆರೋಪಿಸಿದ್ದಾರೆ. ಇನ್ನೊಂದೆಡೆ, ದೂರುದಾರರು ತಾವು 2023 ರಲ್ಲಿ ಮಾತ್ರ ಈ ಆಸ್ತಿಯ ‘ಅಕ್ರಮ ವ್ಯವಹಾರ’ಗಳ ಬಗ್ಗೆ ತಿಳಿದುಕೊಂಡೆವು ಎಂದು ಹೇಳುತ್ತಿದ್ದಾರೆ. ಕಪೂರ್ ಕುಟುಂಬವು 2023 ರಲ್ಲಿ ನಕಲಿ ದಾಖಲೆಗಳ ಮೂಲಕ ‘ಪಟ್ಟಾ’ ಪಡೆದಿದೆ ಎಂದು ಅವರು ಆರೋಪಿಸಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಕಪೂರ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಲಾಗಿತ್ತು. ಈ ಪರಿಹಾರದ ಹಣದ ಮೇಲೆಯೂ ದೂರುದಾರರು ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಟಿ.ವಿ. ತಮಿಳ್ಸೆಲ್ವಿ ಅವರು ಪ್ರಕರಣದ ವಿಚಾರಣೆ ನಡೆಸಿ, ಕೆಳಹಂತದ ನ್ಯಾಯಾಲಯದ ನಡಾವಳಿಗಳಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಮಾರ್ಚ್ 26, 2026 ಕ್ಕೆ ನಿಗದಿಪಡಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version