ರಾತ್ರಿ ಮಲಗುವ 3 ಗಂಟೆ ಮುಂಚಿತವಾಗಿ ಊಟ ಮಾಡಿ; ಈ ರೋಗ ಬೇಕು ಅಂದ್ರು ಬರುವುದಿಲ್ಲ!

ರಾತ್ರಿ ಮಲಗುವ 3 ಗಂಟೆ ಮುಂಚಿತವಾಗಿ ಊಟ ಮಾಡಿ; ಈ ರೋಗ ಬೇಕು ಅಂದ್ರು ಬರುವುದಿಲ್ಲ!

ನೀವು ರಾತ್ರಿ ಮಲಗುವ ಮೊದಲು ಸೇವನೆ ಮಾಡುವ ಆಹಾರ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಮುಖ್ಯವಾಗುತ್ತದೆ. ಅದರಲ್ಲಿಯೂ ಆಹಾರವನ್ನು 3 ಗಂಟೆಗಳ ಮೊದಲು ಸೇವನೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಒಂದು ಅಭ್ಯಾಸ ಅನೇಕ ರೀತಿಯ ರೋಗಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಷ್ಟು ಮಾತ್ರವಲ್ಲ, ಇದಕ್ಕೆ ಪೂರಕವಾಗಿ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು, ವ್ಯಕ್ತಿ ಮಲಗುವ 3 ಗಂಟೆಗಳ ಮೊದಲು ಆಹಾರ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡದಿಂದ (Hypertension) ಹೃದಯ ಸಂಬಂಧಿ ಕಾಯಿಲೆಯ ವರೆಗೆ ಎಲ್ಲದರ ಅಪಾಯ ಕಡಿಮೆಯಾಗುತ್ತದೆ ಎಂದು ಹೇಳಿದೆ.

ಸಂಶೋಧನೆಯ ಪ್ರಕಾರ, ರಾತ್ರಿ ಮಲಗುವ ಮುನ್ನ ಹಲವಾರು ಗಂಟೆಗಳ ಮೊದಲು ಆಹಾರವನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ ಮತ್ತು ನಿದ್ರೆ ಸರಿಯಾಗಿ ಆಗಲು ಸಹಾಯವಾಗುತ್ತದೆ. ಅಷ್ಟು ಮಾತ್ರವಲ್ಲ, ಇದು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹವು ಸಿರ್ಕಾಡಿಯನ್ ಲಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಆದರೆ ತಡವಾಗಿ ಊಟ ಮಾಡಿದಲ್ಲಿ, ದೇಹದ ಸಿರ್ಕಾಡಿಯನ್ ಲಯ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಜೊತೆಗೆ ಸಮಯವಲ್ಲದ ಸಮಯಕ್ಕೆ ಊಟ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ರಾತ್ರಿಯಿಡೀ ಸಕ್ರಿಯವಾಗಿದ್ದು ಕೆಲಸ ಮಾಡುತ್ತದೆ. ಆಗ ಚಯಾಪಚಯ ಕ್ರಿಯೆಗೆ ಅಡ್ಡಿಯಾಗುತ್ತದೆ. ಪರಿಣಾಮವಾಗಿ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗದಂತಹ ಅಪಾಯ ಕೂಡ ಹೆಚ್ಚಾಗುತ್ತದೆ.

ಇದನ್ನೂ ಓದಿ: ಒತ್ತಡ, ಸ್ಕ್ರೀನ್‌ ಸಮಯದ ಹೆಚ್ಚಳದಿಂದ ಉಂಟಾಗುತ್ತಿದೆ ನಿದ್ರೆ ಸಮಸ್ಯೆ: ನಗರದ ಜನರಿಗೆ ವೈದ್ಯರ ಎಚ್ಚರಿಕೆ

ಅಧ್ಯಯನ ಹೇಗೆ ನಡೆದಿದೆ?

ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 36 ರಿಂದ 75 ವರ್ಷದ 139 ಓವರ್‌ವೆಟ್ ವ್ಯಕ್ತಿಗಳನ್ನು ಅಧ್ಯಯನದಲ್ಲಿ ಸೇರಿಸಿಕೊಂಡಿದ್ದು, ಅವರಲ್ಲಿ ಡಯಾಬಿಟಿಸ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿದ್ದು ಅವರನ್ನು ಎರಡು ಗುಂಪುಗಳಲ್ಲಿ ವಿಂಗಡನೆ ಮಾಡಿದ್ದಾರೆ. ಅದರಲ್ಲಿ ಒಂದು ಗುಂಪು 16 ಗಂಟೆಗಳ ಉಪವಾಸ, ಮತ್ತೊಂದು ಗುಂಪು 13 ಗಂಟೆಗಳ ಉಪವಾಸವಿದ್ದು, ಎರಡೂ ಗುಂಪುಗಳಿಗೂ ಮಲಗುವ 3 ಗಂಟೆಗಳ ಮೊದಲು ಊಟ ಕೊಟ್ಟು ಬೆಳಕು ಕಡಿಮೆ ಇರುವಂತಹ ಜಾಗದಲ್ಲಿರಲು ಸಲಹೆ ನೀಡಲಾಗಿತ್ತು. ಹೆಚ್ಚು ಉಪವಾಸ ಮಾಡಿದ ಗುಂಪಿನಲ್ಲಿ ರಕ್ತದ ಒತ್ತಡ ಕಡಿಮೆಯಾಯಿತು, ಶುಗರ್ ನಿಯಂತ್ರಣಕ್ಕೆ ಬಂದಿತು ಮತ್ತು ಇನ್ಸುಲಿನ್ ಸಂವೇದನಾಶೀಲತೆ ಹಾಗೂ ಗ್ಲೂಕೋಸ್ ಟಾಲರೆನ್ಸ್ ಕೂಡ ಉತ್ತಮವಾಯಿತು.

ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು:

ರಾತ್ರಿ ಊಟವನ್ನು ಸಂಜೆ 8 ಗಂಟೆಗೂ ಮುಂಚೆ ಮುಗಿಸಿಕೊಳ್ಳಿ, ರಾತ್ರಿ 11 ಗಂಟೆಗೂ ಮುಂಚೆ ಮಲಗಲು ಪ್ರಯತ್ನಿಸಿ, ಈ ನಿಯಮವನ್ನು ಪಾಲಿಸುವ ಮೊದಲು ಡಾಕ್ಟರ್ ಸಲಹೆ ಪಡೆಯುವುದು ಅತ್ಯಗತ್ಯ. ಈ ಸರಳ ಕ್ರಮದಿಂದ ಉತ್ತಮ ನಿದ್ರೆ, ಹೈ ಬ್ಲಡ್ ಪ್ರೆಶರ್ ನಿಯಂತ್ರಣ ಮತ್ತು ಪಚನ ವ್ಯವಸ್ಥೆಯನ್ನು ಸುಧಾರಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Explainer: ಬೆಂಗಳೂರಿಗೆ ಮಳೆ ತಂದಿದ್ದೇ ಬಿಲ್ ಗೇಟ್ಸ್ ಅಂತೆ; ಈ ವೈರಲ್ ಸುದ್ದಿ ಎಷ್ಟು ನಿಜ?

ನವದೆಹಲಿ, ಮಾರ್ಚ್ 19: ಅಮೆರಿಕದ ಅತಿ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ (Bill Gates) ಮಳೆಯ ಸುದ್ದಿ ಭಾರೀ ವೈರಲ್ ಆಗಿದೆ. ಕರ್ನಾಟಕದ ಹಲವೆಡೆ ಸುರಿಯುತ್ತಿರುವ ದಿಢೀರ್ ಮಳೆಗೆ ಹಾಗೂ ಹವಾಮಾನ ಬದಲಾವಣೆಯ ಹಿಂದೆ ಅವರದೇ ಕೈವಾಡವಿದೆಯೇ? ಎಂಬ ಚರ್ಚೆಗಳು ಶುರುವಾಗಿವೆ. ಮೋಡ ಬಿತ್ತನೆಯ ಬಗ್ಗೆ ನಿಮಗೆಷ್ಟು ಗೊತ್ತು? ಬಿಲ್ ಗೇಟ್ಸ್ ಬಗ್ಗೆ ಭಾರೀ ಸುದ್ದಿಗಳು ಹರಿದಾಡುತ್ತಿವೆ. ಸುದ್ದಿಗಳು ಮತ್ತು ರೀಲ್ಸ್​ಗಳಲ್ಲಿ ಮೋಡ ಬಿತ್ತನೆ, ಬಿಲ್ ಗೇಟ್ಸ್ ಮಳೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

“ಕಳೆದ ವಾರ ಕರ್ನಾಟಕದಲ್ಲಿ ಇದ್ದಕ್ಕಿದ್ದಂತೆ ಮಳೆ ಸುರಿಯಲು ಇದೇ ಕಾರಣವೇ?” ಎಂಬ ಚರ್ಚೆಗಳೂ ನಡೆಯುತ್ತಿವೆ. 2007ರಿಂದ ಬಿಲ್ ಗೇಟ್ಸ್ ತಮ್ಮ ಸ್ವಂತ ಹಣವನ್ನು ವಿಜ್ಞಾನದ ಅಸಾಂಪ್ರದಾಯಿಕ ಬ್ರಾಂಚ್​ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ವಾತಾವರಣಕ್ಕೆ ರಾಸಾಯನಿಕವನ್ನು ಚುಚ್ಚುವ ಮೂಲಕ ಮನುಷ್ಯರು ಉದ್ದೇಶಪೂರ್ವಕವಾಗಿ ಭೂಮಿಯನ್ನು ತಂಪಾಗಿಸಬಹುದೇ ಎಂಬ ಬಗ್ಗೆ ಅನ್ವೇಷಿಸುವ ಸಂಶೋಧನೆಯನ್ನು ಅವರು ಬೆಂಬಲಿಸುತ್ತಿದ್ದಾರೆ. ಹೀಗಾಗಿ, ಈ ಬಿಲ್ ಗೇಟ್ಸ್ ಮಳೆಯ ಕಾರಣದಿಂದಲೇ ಕರ್ನಾಟಕದಲ್ಲಿ ಈ ರೀತಿ ಆಲಿಕಲ್ಲು ಮಳೆಯಾಗುತ್ತಿದೆಯೇ? ಎಂಬ ಚರ್ಚೆಗಳೂ ಶುರುವಾಗಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅಬ್ಬರ: ಕಾಶ್ಮೀರದಂತಾದ ಮಲೆನಾಡು; ರೈತರಿಗೆ ತಪ್ಪದ ಬೆಳೆ ಹಾನಿ ಸಂಕಷ್ಟ!

ವಾತಾವರಣಕ್ಕೆ ರಾಸಾಯನಿಕವನ್ನು ಚುಚ್ಚುವ ಈ ಸಂಶೋಧನೆಗೆ ಬಳಸಲಾದ ವೈಜ್ಞಾನಿಕ ಪದವನ್ನು ಸ್ಟ್ರಾಟೋಸ್ಫಿಯರಿಕ್ ಏರೋಸಾಲ್ ಇಂಜೆಕ್ಷನ್ (SAI) ಎಂದು ಕರೆಯಲಾಗುತ್ತದೆ. ಇದು ಮೂಲಭೂತವಾಗಿ ಸೂರ್ಯನ ಬೆಳಕು ನಮ್ಮ ಗ್ರಹವನ್ನು ತಲುಪುವ ಪ್ರಯತ್ನವಾಗಿದೆ. ಬಿಲ್ ಗೇಟ್ಸ್ ಅವರ ರಾಸಾಯನಿಕ ಸಿಂಪಡಣೆಯಿಂದಾಗಿಯೇ ಇತ್ತೀಚಿನ ಭಾರೀ ಮಳೆ ಉಂಟಾಗಿದೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ವೀಡಿಯೊಗಳನ್ನು ಪ್ರಸಾರ ಮಾಡಲಾಗುತ್ತಿದೆ. “ಸನ್-ಡಿಮ್ಮಿಂಗ್” ತಂತ್ರಜ್ಞಾನ ಎಂಬ ವಿದ್ಯಮಾನಕ್ಕೆ ವ್ಯತಿರಿಕ್ತವಾಗಿ ಬಿಲ್ ಗೇಟ್ಸ್​ ಈ ರಾಸಾಯನಿಕ ಸಿಂಪಡಣೆ ಅಥವಾ ರಾಸಾಯನಿಕವನ್ನು ಇಂಜೆಕ್ಟ್ ಮಾಡುತ್ತಿದ್ದಾರೆ ಎಂಬ ಚರ್ಚೆಗಳು ಕೂಡ ನಡೆದಿವೆ.

ಈ ವದಂತಿ ಎಷ್ಟು ನಿಜ?:

ಬಿಲ್ ಗೇಟ್ಸ್ ಹವಾಮಾನ ಬದಲಾವಣೆ ಪರಿಹಾರಗಳನ್ನು ಅಧ್ಯಯನ ಮಾಡಲು SCoPExನಂತಹ ಕೆಲವು ಯೋಜನೆಗಳ ಮೂಲಕ ಸೌರ ಭೂ ಎಂಜಿನಿಯರಿಂಗ್ ಸಂಶೋಧನೆಗೆ ಹಣಕಾಸು ಒದಗಿಸಿದ್ದರೂ ಈ ಯಾವುದೇ ಪ್ರಯೋಗಗಳು ಭಾರತದಲ್ಲಿ ನಡೆದಿಲ್ಲ. ಹೀಗಾಗಿ, ಕರ್ನಾಟಕದಲ್ಲಿ ಬರುತ್ತಿರುವ ಮಳೆಗೂ ಬಿಲ್ ಗೇಟ್ಸ್​ಗೂ ಸಂಬಂಧವಿಲ್ಲ. ಅಷ್ಟಕ್ಕೂ ಈಗಾಗಲೇ ಈ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಬಿಲ್ ಗೇಟ್ಸ್ ಕೃಷಿ ಉಪಕ್ರಮಗಳಿಗಾಗಿ ಭಾರತದ ಹವಾಮಾನ-ಸ್ಥಿತಿಸ್ಥಾಪಕ ಸಂಶೋಧನೆಯನ್ನು ಬೆಂಬಲಿಸಿದರು ಮತ್ತು ಕೃಷಿಗೆ ಬಳಸುವ ಸಾಧನಗಳ ಕುರಿತು ಸಂಶೋಧನೆಗೆ ಹಣಕಾಸು ಒದಗಿಸಿದರು. ಆದರೆ, ಕೆಲವು ಸಾಮಾಜಿಕ ಮಾಧ್ಯಮಗಳು ಈ ಕೃಷಿ ಸಂಶೋಧನಾ ನಿಧಿಯನ್ನು ಬಿಲ್ ಗೇಟ್ಸ್ ಮಾನ್ಸೂನ್ ಅನ್ನು ನಿಯಂತ್ರಿಸುತ್ತಿದ್ದಾರೆ ಎಂದು ಸುದ್ದಿಗಳನ್ನು ಹರಡುತ್ತಿದ್ದಾರೆ. ಇದೆಲ್ಲ ಸಂಪೂರ್ಣವಾಗಿ ಕಟ್ಟುಕಥೆ.

ಇದನ್ನೂ ಓದಿ: ಭಾರತವನ್ನು ಪ್ರಯೋಗಶಾಲೆ ಎಂದ ಬಿಲ್ ಗೇಟ್ಸ್; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ

ವಾಸ್ತವದ ಸಂಗತಿಯೆಂದರೆ, ಬಿಲ್ ಗೇಟ್ಸ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಥಮಿಕ ಸಂಶೋಧನೆಗೆ ಹಣಕಾಸು ಒದಗಿಸಿದರು, ಇದು ಸೂರ್ಯನ ಬೆಳಕನ್ನು ಪ್ರತಿಬಿಂಬಿಸಲು ವಾತಾವರಣಕ್ಕೆ ಕ್ಯಾಲ್ಸಿಯಂ ಕಾರ್ಬೋನೇಟ್ ಕಣಗಳನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಅಧ್ಯಯನ ಮಾಡಿತು, ಇದನ್ನು ‘ಸನ್-ಡಿಮ್ಮಿಂಗ್’ ಎಂದು ಕರೆಯಲಾಗುತ್ತಿತ್ತು. ಈ ಯೋಜನೆಯು ಭಾರೀ ಟೀಕೆಗಳನ್ನು ಎದುರಿಸಿತು. ಹೀಗಾಗಿ, ಇದನ್ನು ಸದ್ಯಕ್ಕೆ ರದ್ದುಗೊಳಿಸಲಾಗಿದೆ.ಈ ಸಂಶೋಧನೆಗಳನ್ನು ಎಂದಿಗೂ ದೊಡ್ಡ ಪ್ರಮಾಣದ ಪ್ರಯೋಗಗಳನ್ನು ನಡೆಸಲಿಲ್ಲ. ಹೀಗಾಗಿ ಖಂಡಿತವಾಗಿಯೂ ಭಾರತದಲ್ಲಿ ಮಳೆಯ ಮೇಲೆ ಬಿಲ್ ಗೇಟ್ಸ್ ಯಾವುದೇ ಪರಿಣಾಮ ಬೀರುವುದಿಲ್ಲ.

ಆದರೆ, ಭಾರತ ಸರ್ಕಾರ ಮತ್ತು ಐಐಟಿ ಕಾನ್ಪುರದಂತಹ ಸಂಸ್ಥೆಗಳು ದೆಹಲಿಯಂತಹ ನಗರಗಳಲ್ಲಿನ ಮಾಲಿನ್ಯ ಬಿಕ್ಕಟ್ಟನ್ನು ನಿಭಾಯಿಸಲು ಕೃತಕ ಮಳೆಯನ್ನು ಉಂಟುಮಾಡಲು ಮೋಡ ಬಿತ್ತನೆಯನ್ನು ಮಾಡುತ್ತಿವೆ. ಇದು ಬಿಲ್ ಗೇಟ್ಸ್ ಯೋಜನೆಗಿಂತ ಸಂಪೂರ್ಣವಾಗಿ ಭಿನ್ನವಾದುದು. ಹೀಗಾಗಿ, ಬಿಲ್ ಗೇಟ್ಸ್ ಬೆಂಗಳೂರಿನಲ್ಲಿ ಮಳೆ ತರಿಸುತ್ತಿದ್ದಾರೆ, ಕರ್ನಾಟಕದಾದ್ಯಂತ ಆಲಿಕಲ್ಲು ಮಳೆ ಬರುತ್ತಿರುವುದಕ್ಕೆ ಬಿಲ್ ಗೇಟ್ಸ್ ಕಾರಣ, ಬಿಲ್ ಗೇಟ್ಸ್ ಅಮೆರಿಕದಲ್ಲಿ ಕುಳಿತುಕೊಂಡು ಭಾರತದ ಹವಾಮಾನವನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಸುದ್ದಿಗಳನ್ನೆಲ್ಲ ಯಾರೂ ನಂಬಬೇಡಿ. ಇದು ಸಂಪೂರ್ಣವಾಗಿ ಸುಳ್ಳು ಸುದ್ದಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ: ಆಡಿ ಕಾರು-ಬೈಕ್ ಸ್ಟಂಟ್ ರೀಲ್ಸ್ ಹುಚ್ಚಾಟಕ್ಕೆ ಬಿಜೆಪಿ ಮುಖಂಡನ ಪತ್ರ ಬಲಿ

ಹುಬ್ಬಳ್ಳಿ, (ಮಾರ್ಚ್ 19): ರೀಲ್ಸ್  (Reels) ಹುಚ್ಚಾಟಕ್ಕೆ ಬಿದ್ದು ಬಿಜೆಪಿ ಮುಖಂಡನ ಪುತ್ರ ಸಾವನ್ನಪ್ಪಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ  (Hubballi) ನಡೆದಿದೆ. ಸ್ಟಂಟ್ ಮತ್ತು ಕ್ರ್ಯಾಶ್ ರೀಲ್ಸ್ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಬಿಜೆಪಿ ಮುಖಂಡನ ಪುತ್ರ ನಮೀಷ ಸಂಗಳದ(15) ಮೃತಟ್ಟಿದ್ದಾನೆ. ಹುಬ್ಬಳ್ಳಿಯ ಲಕ್ಷ್ಮಿ ನಗರದ ನಿವಾಸಿಯಾಗಿರುವ ನಮೀಷ ಸಂಗಳದ, ಮೈಸೂರಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ. ಆದ್ರೆ, ಯುಗಾದಿ ಹಬ್ಬಕ್ಕೆಂದು ಹುಬ್ಬಳ್ಳಿಗೆ ಬಂದಿದ್ದು, ಈ ವೇಳೆ ಅಪಯಕಾರಿ ರೀಲ್ಸ್ ಮಾಡಲು ಹೋಗಿ ದುರಂತ ಸಾವು ಕಂಡಿದ್ದಾನೆ. ಇದರಿಂದ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ.

ಯುಗಾದಿ ಹಬ್ಬಕ್ಕೆಂದು ಊರಿಗೆ ಬಂದಿದ್ದ ನಮೀಷ ಸಂಗಳದ ರೀಲ್ಸ್ ಮಾಡಲೆಂದು ಗೆಳೆಯರೊಂದಿಗೆ ಸೇಜವಾಡಕ್ಕರ್ ಪ್ಲಾಟ್‌‌ಗೆ ತೆರಳಿದ್ದರು. ವೇಗವಾಗಿ ವಾಹನ ಚಲಾಯಿಸುವ ರೀಲ್ಸ್ ಮಾಡಲು ಪ್ಲ್ಯಾನ್ ಮಾಡಿದ್ದರು. ಅದರಂತೆ ಓರ್ವ ಅಪ್ರಾಪ್ತ ಬಾಲಕ ಆಡಿ ಕಾರು ಓಡಿಸುತ್ತಿದ್ದರೆ, ಇನ್ನೊಂದೆಡೆ ಮೃತ ನಮೀಷ ಸಂಗಳದ ಬೈಕ್​ ನಲ್ಲಿದ್ದು, ಸ್ಟಂಟ್ ಮತ್ತು ಕ್ರ್ಯಾಶ್ ರೀಲ್ಸ್ ಮಾಡುತ್ತಿದ್ದಾಗ ಕಾರು ವೇಗವಾಗಿ ಬಂದು ನಿಯಂತ್ರಣ ತಪ್ಪಿ ನಮೀಷ ಸಂಗಳದ ಇದ್ದ ಬೈಕ್​​​ಗೆ ಗುದ್ದಿದೆ ಪರಿಣಾಮ ಬಿಜೆಪಿ ಮುಖಂಡನ ಪುತ್ರ ನಮೀಷ ಸಂಗಳದ ಸಾವನ್ನಪ್ಪಿದ್ದಾನೆ.

ಇದನ್ನೂ ನೋಡಿ: ರೀಲ್ಸ್​​​​ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್: ಭಯಾನಕ ದೃಶ್ಯ ವೈರಲ್

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿರುವ ಅಪ್ತಾಪ್ತ‌ ಬಾಲಕನನ್ನು‌ ವಿಚಾರಣೆಗೊಳಪಡಿಸಿದ್ದಾರೆ.

ಯುಗಾದಿ ಹಬ್ಬಕ್ಕೆಂದು ಮೈಸೂರಿನಿಂದ ಹುಬ್ಬಳ್ಳಿಗೆ ಬಂದು ದುರಂತ ಸಾವು ಕಂಡಿದ್ದು, ಎಲ್ಲರನ್ನೂ ದೃತಿಗೆಡಿಸಿದೆ. ಮಗನ ಅಕಾಲಿಕ ಮರಣದ ಸುದ್ದಿ ಕೇಳಿ ತಂದೆ ವೀರೇಶ ಸಂಗಳದ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾಜಕೀಯ ವಲಯದ ಗಣ್ಯರು ಹಾಗೂ ನಮೀಷ ಅವರ ಸ್ನೇಹಿತರು ತೀವ್ರ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL: ಐಪಿಎಲ್ ಇತಿಹಾಸದಲ್ಲಿ ಪರ್ಪಲ್ ಕ್ಯಾಪ್ ಗೆಲ್ಲದ ಐವರು ಲೆಜೆಂಡರಿ ಬೌಲರ್​ಗಳಿವರು

Source link

ಯುಗಾದಿ ದಿನವೇ ಧಾರವಾಡದಲ್ಲಿ ರಕ್ತಪಾತ: ಆಸ್ತಿಗಾಗಿ ಒಡ ಹುಟ್ಟಿದ ತಂಗಿಯನ್ನೇ ಕೊಚ್ಚಿ ಕೊಂದ ಅಣ್ಣ!

ಧಾರವಾಡ, ಮಾರ್ಚ್​ 19: ಇಂದು ರಾಜ್ಯದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ. ನಾಡಿನ ಜನ ಬೇವು-ಬೆಲ್ಲ ಸವಿದು ಖುಷಿಪಟ್ಟರೆ, ಇತ್ತ ಧಾರವಾಡದಲ್ಲಿ ಯುಗಾದಿ ದಿನವೇ ರಕ್ತಪಾತವಾಗಿದೆ. ಆಸ್ತಿ ವಿಚಾರಕ್ಕೆ ಅಣ್ಣನಿಂದ ತಂಗಿಯ ಬರ್ಬರ ಕೊಲೆ (kill) ನಡೆದಿರುವಂತಹ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ ನಡೆದಿದೆ. ಶಿವಕ್ಕ(45) ಮೃತ ತಂಗಿ. ಹನುಮಂತ ಯಲಿವಾಳ ಹತ್ಯೆಗೈದ ಅಣ್ಣ. ಸದ್ಯ ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಹನುಮಂತ ಯಲಿವಾಳ ಮತ್ತು ಶಿವಕ್ಕ ಅಣ್ಣ-ತಂಗಿ. ತಂದೆಯ ಆಸ್ತಿಯಲ್ಲಿ ನನಗೂ ಪಾಲಿದೆ, ಆಸ್ತಿ ಬೇಕು ಎಂದು ಶಿವಕ್ಕ ಪಟ್ಟು ಹಿಡಿದಿದ್ದರು. ಇದೇ ವಿಚಾರವಾಗಿ ಅಣ್ಣ ತಂಗಿ ಮಧ್ಯೆ ಗಲಾಟೆ ಕೂಡ ನಡೆದಿದೆ. ಆದರೆ ಇಂದು ಯುಗಾದಿ ಹಬ್ಬದಂದು ಭೂಮಿ ಪೂಜೆಗೆ ಹೋದಾಗ ಮರ್ಡರ್ ಮಾಡಲಾಗಿದೆ.​

ಬೀದರ್​​ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಸಾವು

ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಬಸ್ ನಿಲ್ದಾಣದ ಸಮೀಪದ ಮುಚಳಂಬ ಕ್ರಾಸ್ ಬಳಿ ನಿನ್ನೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ನಡೆದ ಡಿಕ್ಕಿಯಲ್ಲಿ ದಂಪತಿಗಳು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸಯ್ಯದ್ ದಸ್ತಗೀರ್ (35) ಮತ್ತು ಯಾಸ್ಮೀನ್ ದಸ್ತಗೀರ್ (33) ಮೃತರು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಐವರ ಮೇಲೆ ಆ್ಯಸಿಡ್ ದಾಳಿ; ಮಚ್ಚಿನಿಂದ ಹಲ್ಲೆ ಮಾಡಿ ವ್ಯಕ್ತಿ ಪರಾರಿ

ಮೃತರು ಬಸವಕಲ್ಯಾಣದ ಖಾದಿಜಂಡಾ ಕಾಲೋನಿಯಲ್ಲಿ ವಾಸವಾಗಿದ್ದರು. ದಂಪತಿಗಳು ಬಸ್ ನಿಲ್ದಾಣದ ಕಡೆಯಿಂದ ತಮ್ಮ ಮನೆ ಕಡೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಅತೀವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಅಲಿಸಾಬ್ ಹಾಗೂ ಪಿಎಸ್ಐ ಸಿದ್ದೇಶ್ವರ್ ಮತ್ತು ಚಂದ್ರಶೇಖರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಆಲಿಕಲ್ಲು ಮಳೆಗೆ 25ಕ್ಕೂ ಹೆಚ್ಚು ಕುರಿಗಳು ಸಾವು

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ 25ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವಂತಹ ದಾರುಣ ಘಟನೆಯೊಂದು ನಡೆದಿದೆ. ಹುಸೇನಸಾಬ್ ಬಾಂಗದ ಎಂಬುವರಿಗೆ ಕುರಿಗಳು ಮೃತಪಟ್ಟಿವೆ. ಸೂಕ್ತ ಪರಿಹಾರ ನೀಡುವಂತೆ ಕುರಿಗಾಹಿ ಹುಸೇನಸಾಬ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಅಧ್ಯಾಯ ಎರಡು’: ‘ಕಾಂತಾರ: ಚಾಪ್ಟರ್ 2’ ಆರಂಭಿಸಿದರೇ ರಿಷಬ್ ಶೆಟ್ಟಿ?

ರಿಷಬ್ ಶೆಟ್ಟಿ (Rishab Shetty) ನಟಿಸಲಿರುವ, ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ನ ಮುಹೂರ್ತ ಹಂಪಿಯಲ್ಲಿ ನೆರವೇರಿತು. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಪೌರಾಣಿಕ ಸಿನಿಮಾನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಸದ್ಯಕ್ಕೆ ನನ್ನ ಕೈಯಲ್ಲಿ ‘ಜೈ ಹನುಮಾನ್’ ಸಿನಿಮಾ ಮಾತ್ರವೇ ಇದೆ ಎಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಸಮಯದಲ್ಲಿ ಹೇಳಿದ್ದರು. ಆದರೆ ಇದೀಗ ಯುಗಾದಿಯಂದು ರಿಷಬ್ ಶೆಟ್ಟಿ ಹೊಸ ಸಿನಿಮಾ ಪ್ರಾರಂಭ ಮಾಡಿದಂತಿದ್ದಾರೆ.

ಇಂದು ಯುಗಾದಿ ಹಬ್ಬದ ಪ್ರಯುಕ್ತ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಅವರು ಕಮಲಶಿಲೆಯ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ವಿಶೇಷ ಪೂಜೆ ಮಾಡಿಸಿದ್ದಾರೆ. ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಮತ್ತೊಂದು ಪೋಸ್ಟ್​​ನಲ್ಲಿ ‘ಅಧ್ಯಾಯ ಎರಡು, ಇಲ್ಲಿಂದ ಶುರು’ ಎಂದು ಬರೆದಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಹೊಸ ವರ್ಷ, ಹೊಸ ಚಾಪ್ಟರ್’ ಎಂದು ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರ ಈ ಪೋಸ್ಟ್ ಅಮಾನಿಗಳಲ್ಲಿ ಕುತೂಹಲದ ಜೊತೆಗೆ ನಿರೀಕ್ಷೆಯನ್ನು ಸಹ ಮೂಡಿಸಿದೆ. ‘ಕಾಂತಾರ ಚಾಪ್ಟರ್ 2’ ಸಿನಿಮಾದ ಬಗ್ಗೆ ರಿಷಬ್ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅಂತ್ಯದಲ್ಲಿ, ‘ಚಾಪ್ಟರ್ 2’ನ ಸುಳಿವನ್ನು ರಿಷಬ್ ಶೆಟ್ಟಿ ನೀಡಿದ್ದರು. ‘ಕಾಂತಾರ: ಚಾಪ್ಟರ್ 1’ ಬಿಡುಗಡೆ ಬಳಿಕ ಮಾತನಾಡಿದ್ದ ರಿಷಬ್, ‘ಚಾಪ್ಟರ್ 2’ ಸಹ ಬರಲಿದೆ ಎಂದಿದ್ದರು. ಅಂತೆಯೇ ಇದೀಗ ‘ಅಧ್ಯಾಯ ಎರಡು’ ಎನ್ನುವ ಮೂಲಕ ‘ಚಾಪ್ಟರ್ 2’ ಆರಂಭದ ಸುಳಿವನ್ನು ನೀಡಿದ್ದಾರೆ.

ಇದನ್ನೂ ಓದಿ:ವಿಡಿಯೋ: ರಶ್ಮಿಕಾ ಮದುವೆ ಕುರಿತ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಹೀಗಿತ್ತು ನೋಡಿ

ಆದರೆ ರಿಷಬ್ ಶೆಟ್ಟಿ ಈಗ ಹಂಚಿಕೊಂಡಿರುವ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯ ಲೋಗೊ ಇದೆ, ‘ಕಾಂತಾರ’ ಸಿನಿಮಾ ಸರಣಿಯ ನಿರ್ಮಾಣ ಮಾಡಿರುವ ಹೊಂಬಾಳೆಯ ಲೋಗೊ ಇಲ್ಲ. ಇದು ಸಹ ಸಣ್ಣ ಅನುಮಾನ ಮೂಡಿಸಿದ್ದು, ‘ಕಾಂತಾರ’ ಸರಣಿಯ ಹೊರತಾದ ಸಿನಿಮಾ ಇದಾಗಿರಬಹುದೆ ಎಂಬ ಅನುಮಾನವೂ ಇದೆ. ಒಟ್ಟಾರೆ ಸ್ವತಃ ರಿಷಬ್ ಅವರೇ ಇದಕ್ಕೆಲ್ಲ ಉತ್ತರ ನೀಡಬೇಕಿದೆ.

ರಿಷಬ್ ಅವರು ಪ್ರಸ್ತುತ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ ಸಿನಿಮಾನಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಿನಿಮಾದ ಬಳಿಕ ಹಿಂದಿಯ ‘ಛತ್ರಪತಿ ಶಿವಾಜಿ’ ಸಿನಿಮಾನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ‘ಲಗಾನ್’ ಸಿನಿಮಾ ನಿರ್ದೇಶಕ ಅಶುತೋಶ್ ಗೋವರಿಕರ್ ನಿರ್ದೇಶನದ ಸಿನಿಮಾನಲ್ಲಿಯೂ ರಿಷಬ್ ಶೆಟ್ಟಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆ ಸಿನಿಮಾ ಸಹ ಇದೇ ವರ್ಷ ಪ್ರಾರಂಭ ಆಗುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ, ಮೆರಗು ನೀಡಿದ ಮಂಗಳವಾದ್ಯಗಳು

ಹಾಸನ, (ಮಾರ್ಚ್ 19): ಭಾರತೀಯರಿಗೆ ಹೊಸ ವರ್ಷದ ಸಂಕೇತ ಮತ್ತು ಚೈತ್ರಮಾಸದ ಆರಂಭದ ದಿನವಾದ ಯುಗಾದಿ ಹಬ್ಬದ (Ugadi Festival) ಸಂಭ್ರಮ ಮನೆ ಮಾಡಿದೆ. ಕಳೆದ ಸಿಹಿ ಕನಸುಗಳ ನಿರೀಕ್ಷೆಯಲ್ಲಿ ಜನರು ಎಲ್ಲೆಡೆ ಯುಗಾದಿ ಆಚರಣೆ ಮಾಡಲಾಗುತ್ತದೆ. ಇನ್ನು ಅನ್ನದಾತರು ಹೊಸ ವರ್ಷದ ಮೊದಲ‌ ದಿನ ಹೊನ್ನಾರು ಕಟ್ಟಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಹಾಸನ (Hassan) ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕಡುವಿನಹೊಸಹಳ್ಳಿ ಗ್ರಾಮದಲ್ಲಿ ರೈತರ, ಹಸುಗಳಿಗೆ ಅಲಂಕಾರ ಮಾಡಿ ನೇಗಿಲು ಹೂಡಿ ಉಳುಮೆ ಮಾಡಿ ಸಂಭ್ರಮಿಸಿದರು. ಅಲ್ಲದೇ ಸಾಂಕೇತಿಕವಾಗಿ ಸಾಮೂಹಿಕವಾಗಿ ಮಂಗಳವಾದ್ಯಗಳೊಂದಿಗೆ ಹೊನ್ನಾರು ಕಟ್ಟಿ ಕೃಷಿ ಚಟುವಟಿಕೆ ಶುರು ಮಾಡಿದ್ದಾರೆ.

Source link

IPL 2026: ಕಿಂಗ್ ಕೊಹ್ಲಿ 2.0.. ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌; ವಿಡಿಯೋ ನೋಡಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ನೇ ಸೀಸನ್‌ ಮಾರ್ಚ್​ 28 ರಿಂದ ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್‌ ಆರ್​ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಡುವೆ ನಡೆಯಲಿದೆ. ಈ ಪಂದ್ಯಕ್ಕೆ ಇನ್ನ 9 ದಿನಗಳು ಮಾತ್ರ ಉಳಿದಿವೆ. ಹೀಗಾಗಿ ಉಭಯ ತಂಡಗಳು ಮೈದಾನದಲ್ಲಿ ಬೆವರು ಹರಿಸುತ್ತಿವೆ. ಇತ್ತ ಆರ್​ಸಿಬಿ ಕೂಡ ತಯಾರಿಯನ್ನು ಚುರುಕುಗೊಳಿಸಿದ್ದು, ತಂಡದ ಬ್ಯಾಟಿಂಗ್‌ ಜೀವಾಳ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ತಂಡವನ್ನು ಕೂಡಿಕೊಂಡ ಬಳಿಕ ಮೊದಲ ಬಾರಿಗೆ ನೆಟ್ಸ್​ನಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಿದ್ದಾರೆ.

ವಾಸ್ತವವಾಗಿ ಮೊನ್ನೆಯಷ್ಟೆ ಆರ್​ಸಿಬಿ ತಂಡವನ್ನು ಸೇರಿಕೊಂಡಿರುವ ವಿರಾಟ್ ಕೊಹ್ಲಿ ಇಂದು ನಡೆದ ಅಭ್ಯಾಸದ ಶಿಬಿರದಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದಿದ್ದಾರೆ. ಅಂತರರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಕೊಹ್ಲಿ ಈಗ ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. ಅದರ ಪರಿಣಾಮವಾಗಿ ಕಳೆದ ಆವೃತ್ತಿಯಿಂದ ತಮ್ಮ ಬ್ಯಾಟಿಂಗ್​ನಲ್ಲಿ ಬದಲಾವಣೆ ಮಾಡಿಕೊಂಡಿರುವ ಕೊಹ್ಲಿ ಸ್ಟ್ರೈಕ್​ ರೇಟ್​ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹೀಗಾಗಿ ಕೊಹ್ಲಿ ಬ್ಯಾಟ್​​ನಿಂದ ಬೌಂಡರಿ, ಸಿಕ್ಸರ್​ಗಳ ಮಳೆಯಾಗುತ್ತಿದೆ.

Source link

ಯುಗಾದಿ ಹೊಸತೊಡಕು: ನಾಟಿ ಕೋಳಿಗೆ ಭಾರೀ ಡಿಮ್ಯಾಂಡ್, ರೇಟ್ ಎಷ್ಟು ಗೊತ್ತಾ?

ಚಿಕ್ಕಬಳ್ಳಾಫುರ, ಮಾರ್ಚ್ 19: ಇಂದು ಯುಗಾದಿ (Ugadi) ಹೊಸತೊಡಕು, ನಾನ್ ವೆಜ್ ಪ್ರಿಯರು ಚಿಕನ್, ಮಟನ್ ತಿನ್ನದಿದ್ದರೇ ಸಮಾಧಾನವಾಗಲ್ಲ. ಆದರೆ ಫಾರಂ ಕೋಳಿ ಬದಲು ಈಗ ನಾಟಿ ಕೋಳಿ (Nati Koli) ಹಾಗೂ ನಾಟಿ ಕೋಳಿ ಮೊಟ್ಟೆ ಮೊರೆ ಹೋಗಿದ್ದಾರೆ. ಹೀಗಾಗಿ ನಾಟಿ ಕೋಳಿಗೆ ಸಖತ್​​ ಡಿಮ್ಯಾಂಡ್​​ ಬಂದಿದ್ದು, ಜನರು ಹುಡುಕಾಡಿ ಕೇಳಿದಷ್ಟು ಹಣ ನೀಡಿ ಖರೀದಿ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಾಟಿ ಕೋಳಿ ಸಾಕಾಣಿಕೆ

ಆರೋಗ್ಯ ಕಾಳಜಿ ವಹಿಸುತ್ತಿರುವ ಕೆಲವರು, ಹೈಬ್ರಿಡ್ ಆಹಾರದ ಬದಲು ನಾಟಿ, ಜವಾರಿ ಆಹಾರದ ಮೊರೆ ಹೊಗ್ತಿದ್ದಾರೆ. ಇಂದು ಯುಗಾದಿ ಹೊಸತೊಡಕು, ಹೀಗಾಗಿ ನಾನ್ ವೆಜ್ ಪ್ರಿಯರು ನಾಟಿ ಕೋಳಿ ಮೊರೆ ಹೋಗುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ವಾಪಸಂದ್ರದ ಬಳಿ ನಾಟಿ ಕೋಳಿ ಸಾಕಾಣಿಕೆ ಮಾಡಲಾಗಿದ್ದು, ಯುಗಾದಿ ಹೊಸತೊಡಕು ಪ್ರಯುಕ್ತ ಜನ ಕೋಳಿ ಖರೀದಿಗೆ ಮುಗಿಬಿದ್ದಿದ್ದಾರೆ. ಮನೆಯೊಂದರಲ್ಲಿ ಸಾಕಿರುವ ನಾಟಿ ಕೋಳಿ ಖರೀದಿ ಮಾಡಲು ಮನೆ ಬಳಿ ಆಗಮಿಸಿ ಕೇಳಿದಷ್ಟು ಹಣ ನೀಡಿ ಕೋಳಿ ಖರೀದಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ; ಲಕ್ಷಾಂತರ ರೂ. ಮೌಲ್ಯದ ಮೊಟ್ಟೆಗಳು ಮಣ್ಣುಪಾಲು!

ಇನ್ನು ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಡಾವಣೆಯಲ್ಲಿ, ಸಾಫ್ಟ್ವೇರ್ ಇಂಜಿನಿಯರ್ ದಂಪತಿ ಅಶ್ವಿನ್ ಹಾಗೂ ನಿಧಿ ದಂಪತಿ, ಮನೆ ಪಕ್ಕದಲ್ಲೇ ಆರು ನೂರು ನಾಟಿ ಕೋಳಿ ಸಾಕಾಣಿಕೆ ಮಾಡಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಕೆಜಿ ನಾಟಿ ಕೋಳಿ ಬೆಲೆ ಏಳು ನೂರು ರೂಪಾಯಿ ಆಗಿದೆ. ಆದರೆ ಇವರ ಮನೆ ಬಳಿ ಬಂದ ಗ್ರಾಹಕರಿಗೆ ಕೆ.ಜಿ ಕೋಳಿಗೆ 450 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು? ಹೊರ ದೇಶಕ್ಕೆ ಎಷ್ಟು ರಫ್ತು ಆಗ್ತಿತ್ತು?

ಜೊತೆಗೆ ತಲಾ ಮೊಟ್ಟೆಗೆ 12 ರೂಪಾಯಿ ಮಾರಾಟ ಮಾಡುತ್ತಿದ್ದಾರೆ. ನಾಟಿ ಕೋಳಿ ಹಾಗೂ ಮೊಟ್ಡೆ ರುಚಿ ನೋಡಿರುವ ಗ್ರಾಹಕರು ಮನೆಯ ಬಳಿ ಆಗಮಿಸಿ ಕೋಳಿ ಹಾಗೂ ಮೊಟ್ಟೆ ಖರೀದಿಸುತ್ತಿದ್ದಾರೆ. ಫಾರಂ ಕೋಳಿ ತಿಂದು ತಿಂದು ಸಾಕಾಕಿದ್ದರೆ, ನಾಟಿ ಕೋಳಿ ರುಚಿ ನೋಡಬೇಕು ಎನ್ನುವವರು ಚಿಕ್ಕಬಳ್ಳಾಪುರದಲ್ಲಿ ಸಿಗುವ ನಾಟಿ ಕೋಳಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ: ಸಿಎಂಗೆ ಹೈಕೋರ್ಟ್ ತರಾಟೆ

ಬೆಂಗಳೂರು, (ಮಾರ್ಚ್ 19): ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ (government employees transfer) ಸಿಎಂ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಆಕ್ಷೇಪ ವ್ಯಕ್ತಪಡಿಸಿದೆ. ಬೆಸ್ಕಾಂ ಎಇ ಎಸ್.ಚೇತನ್ ಎಂಬುವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್, ಹಾಗೂ ಟಿ.ಎಂ.ನದಾಫ್ ಅವರಿದ್ದ ಹೈಕೋರ್ಟ್ ಪೀಠ, ಸಿಎಂ ಸಿದ್ದರಾಮಯ್ಯಗೆ (siddaramaiah )ಚಾಟಿ ಬೀಸಿದೆ. ಸಿಎಂಗೆ ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ. ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಆಯಾ ಇಲಾಖೆಗೇ ಬಿಡಬೇಕು. ಮುಖ್ಯಮಂತ್ರಿಗಳ ಕಚೇರಿ ವರ್ಗಾವಣೆಯ ಮನವಿ ಸ್ವೀಕರಿಸಬಾರದು ಎಂದು ತರಾಟೆಗೆ ತೆಗೆದುಕೊಂಡಿದೆ.

ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಆಯಾ ಇಲಾಖೆಗೇ ಬಿಡಬೇಕು. ಮುಖ್ಯಮಂತ್ರಿಗಳ ಕಚೇರಿ ವರ್ಗಾವಣೆಯ ಮನವಿ ಸ್ವೀಕರಿಸಬಾರದು. ಇಂತಹ ವಿಚಾರಗಳಿಗೆ ಮುಖ್ಯಮಂತ್ರಿ ತಮ್ಮ ಸಮಯ ವಿನಿಯೋಗಿಸಬಾರದು ಎಂದು ಅಭಿಪ್ರಾಯಪಟ್ಟಿದ್ದು, ಹೈಕೋರ್ಟ್​ನ ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ಸೂಚನೆ ನೀಡಿದೆ.

ಇದನ್ನೂ ಓದಿ: ಇಂಧನ ಇಲಾಖೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪಕ್ಕೆ ಬೇಸತ್ತು ರಾಜೀನಾಮೆಗೆ ಮುಂದಾಗಿದ್ದ ಕೆಜೆ ಜಾರ್ಜ್: ಆಮೇಲಾಗಿದ್ದೇ ಬೇರೆ!

ಸಿಎಂ ನೀಡುವ ವರ್ಗಾವಣೆ ಪತ್ರಗಳ ಬಗ್ಗೆ ಹೈಕೋರ್ಟ್, ಸರ್ಕಾರದ ಮುಖ್ಯಕಾರ್ಯದರ್ಶಿ( ಸಿಎಸ್) ನಿಲುವು ಕೇಳಿತ್ತು. ಇದಕ್ಕೆ ಮುಖ್ಯ ಕಾರ್ಯದರ್ಶಿ ಸಹ ಉತ್ತರಿಸಿ, ಸಿಎಂ ಕಚೇರಿಯಿಂದ ನೀಡುವ ಟಿಪ್ಪಣಿಗಳು ಕೇವಲ ಶಿಫಾರಸುಗಳಷ್ಟೇ. ಸಂಬಂಧಪಟ್ಟ ಇಲಾಖೆ ವರ್ಗಾವಣೆ ಆದೇಶ ನೀಡುತ್ತದೆಂದು ಎಂದು ಹೇಳಿದ್ದರು.

ಇಂಧನ ಇಲಾಖೆಯ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸಿಎಂ ಕಚೇರಿ ಮುಂದಾಗಿತ್ತು. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಇಂಧನ ಇಲಾಖೆ ಆಡಳಿತದಲ್ಲಿ ತೀವ್ರ ಹಸ್ತಕ್ಷೇಪ ಮಾಡುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಕೆಜೆ ಜಾರ್ಜ್ ಸಿಎಂ ನಿವಾಸಕ್ಕೆ ತೆರಳಿ ಪ್ರಶ್ನಿಸಿದ್ದರು, ಅಲ್ಲದೇ ರಾಜೀನಾಮೆ ಬಗ್ಗೆ ಸಹ ಪ್ರಸ್ತಾಪಿಸಿದ್ದರು. ಆದ್ರೆ,  ಸಿಎಂ ಸಿದ್ದರಾಮಯ್ಯ ಜಾರ್ಚ್ ಅವರನ್ನು ಸಮಾಧಾನಪಡಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಹೀಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಎಲ್ಲಾ ಇಲಾಖೆಗಳಲ್ಲೂ ಮೂಗು ತೂರಿಸುತ್ತಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಹೈಕೋರ್ಟ್, ಸಿಎಂಗೆ ತರಾಟೆಗೆ ತೆಗೆದಯಕೊಂಡಿದ್ದು, ಮಾಡಬೇಕಾದ ಉತ್ತಮ ಕೆಲಸಗಳಿವೆ. ಅವುಗಳನ್ನು ಮಾಡಿ ಎಂದು ಟಾಂಗ್ ಕೊಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version