ಬೆಂಗಳೂರು, ಡಿಸೆಂಬರ್ 22: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ಕುರಿತ ಬಿಕ್ಕಟ್ಟು ಮುಂದುವರಿದಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಲು ಅಣಿಯಾಗಿದ್ದಾರೆ. ಡಿಸೆಂಬರ್ 26 ಮತ್ತು 27 ರಂದು ನಡೆಯಲಿರುವ ಎಐಸಿಸಿ ಕಾರ್ಯಕಾರಿಣಿ ಸಭೆಯ ನೆಪದಲ್ಲಿ, ಅದಕ್ಕೂ ಮುನ್ನ ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಯತ್ನಿಸುತ್ತಿದ್ದಾರೆ. ಮುಖ್ಯವಾಗಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯದ ನಾಯಕತ್ವ ವಿಚಾರವನ್ನು ಬಗೆಹರಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.
ಆದರೆ, ದೆಹಲಿಯಿಂದ ಬುಲಾವ್ ಬಂದರೆ ಮಾತ್ರ ದೆಹಲಿಗೆ ಪ್ರಯಾಣ ಬೆಳೆಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಕಾರ್ಯಕಾರಣಿ ಸಭೆಯಲ್ಲಿ ಸಿಎಂ ಭಾಗಿಯಾಗುವ ಸಾಧ್ಯತೆ ಇದೆ. ಈ ನಡುವೆ ಗೃಹ ಸಚಿವ ಪರಮೇಶ್ವರ್, ಹೈಕಮಾಂಡ್ನ ಒಂದು ಮಾತಿನಿಂದ ಎಲ್ಲ ಗೊಂದಲ ನಿಲ್ಲುತ್ತದೆ ಎಂದು ಹೇಳಿದ್ದಾರೆ. ಮಾಜಿ ಸಚಿವ ಕೆ.ಎನ್. ರಾಜಣ್ಣ ಕೂಡ, ವರಿಷ್ಠರ ಕಡೆ ಮುಖ ಮಾಡಿದ್ದಾರೆ.
ಏತನ್ಮಧ್ಯೆ, ಡಿಕೆ ಶಿವಕುಮಾರ್ ದೆಹಲಿಗೆ ಬರುತ್ತಿರುವ ವಿಚಾರ ಗೊತ್ತಿಲ್ಲ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರೇ ಗೊಂದಲ ಮಾಡಿಕೊಂಡಿದ್ದಾರೆ. ಅವರೇ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ಪಡೆಯನ್ನು ರೂಪಿಸಿದೆ. ಹರಾಜಿಗೂ ಮುನ್ನ 17 ಆಟಗಾರರನ್ನು ಉಳಿಸಿಕೊಂಡಿದ್ದ ಡೆಲ್ಲಿ ಫ್ರಾಂಚೈಸಿ, ಆಕ್ಷನ್ ಮೂಲಕ 8 ಆಟಗಾರರನ್ನು ಖರೀದಿಸಿದ್ದಾರೆ. ಈ ಎಂಟು ಆಟಗಾರರಲ್ಲಿ ಐವರು ವಿದೇಶಿ ಪ್ಲೇಯರ್ಸ್ ಎಂಬುದು ವಿಶೇಷ.
ಈ ಐವರು ವಿದೇಶಿ ಆಟಗಾರರಲ್ಲಿ ಬೆನ್ ಡಕೆಟ್ ಕೂಡ ಒಬ್ಬರು. ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಬೆನ್ ಡಕೆಟ್ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ ಕಳೆದ 18 ಸೀಸನ್ಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನತ್ತ ಮುಖ ಮಾಡದ ಡಕೆಟ್ನನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ.
ವಿಶೇಷ ಎಂದರೆ ಬೆನ್ ಡಕೆಟ್ನ ಖರೀದಿಸಿರುವುದು ಕೆಎಲ್ ರಾಹುಲ್ಗಾಗಿ. ಐಪಿಎಲ್ ಹರಾಜಿಗೂ ಮುನ್ನ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾಲೀಕ ಪಾರ್ಥ್ ಜಿಂದಾಲ್ ಜೊತೆ ತಂಡಕ್ಕೆ ಡಕೆಟ್ ಅವರ ಅವಶ್ಯಕತೆಯಿದೆ ಎಂದಿದ್ದರು. ಹೀಗಾಗಿಯೇ ಬೆನ್ ಡಕೆಟ್ ಅವರಿಗಾಗಿ ನಾವು ಬಿಡ್ ಮಾಡಿದ್ದೇವೆ ಎಂದು ಜಿಂದಾಲ್ ತಿಳಿಸಿದ್ದಾರೆ.
ಇತ್ತ ಕೆಎಲ್ ರಾಹುಲ್ ಸೂಚನೆ ಮೇರೆಗೆ ಡಿಸಿ ಫ್ರಾಂಚೈಸಿ ಇಂಗ್ಲೆಂಡ್ ದಾಂಡಿಗನ ಖರೀದಿಸಿರುವ ಕಾರಣ ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಬೆನ್ ಡಕೆಟ್ ಆರಂಭಿಕನಾಗಿ ಆರಂಭಿಕನಾಗಿ ಕಣಕ್ಕಿಳಿಯಬಹುದು. ಅಂದರೆ ರಾಹುಲ್ ಹಾಗೂ ಡಕೆಟ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.
ವಾಷಿಂಗ್ಟನ್, ಡಿಸೆಂಬರ್ 22: ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಇಸ್ಲಾಮಿಸ್ಟ್ ಸಿದ್ಧಾಂತಗಳ ಬಗ್ಗೆ ಕಟುವಾದ ಟೀಕೆಗಳನ್ನು ಮಾಡಿದ್ದಾರೆ. ಇಸ್ಲಾಮಿಕ್ ಮೂಲಭೂತವಾದವನ್ನ ಬುಡಸಮೇತ ಕಿತ್ತೆಸೆಯುವಂತೆ, ಜಾಗತಿಕ ಸರ್ಕಾರಗಳನ್ನು ಜನರು ಒತ್ತಾಯಿಸುತ್ತಿದ್ದಾರೆ. ಅವರು ಇಸ್ಲಾಂ ಅನ್ನು ಅಮೆರಿಕದ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಪ್ರಮುಖ ಬೆದರಿಕೆ ಎಂದು ಕರೆದಿದ್ದಾರೆ. ಅಮೆರಿಕದಲ್ಲಿ ಇಸ್ಲಾಮಿಕ್ ಸಿದ್ಧಾಂತವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ತುಳಸಿ ಗಬ್ಬಾರ್ಡ್ ಎಚ್ಚರಿಸಿದ್ದಾರೆ.
ಈ ಬೆದರಿಕೆ ಇನ್ನು ಮುಂದೆ ವಿದೇಶಗಳಿಗೆ ಸೀಮಿತವಾಗಿಲ್ಲ, ಬದಲಾಗಿ ಅಮೆರಿಕಕ್ಕೂ ಅಪಾಯನ್ನುಂಟುಮಾಡುತ್ತದೆ. ಇದು ಜಾಗತಿಕ ಕ್ಯಾಲಿಫೇಟ್ ಮತ್ತು ಷರಿಯಾ ಆಧಾರಿತ ಆಡಳಿತವನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ರಾಜಕೀಯ ಕಾರ್ಯಸೂಚಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಇಸ್ಲಾಮಿಕ್ ಭಯೋತ್ಪಾದಕರ ಗುಂಡಿನ ದಾಳಿಗೆ ಯಾರೂ ಆಶ್ಚರ್ಯಪಡಬೇಕಾಗಿಲ್ಲ. ಹೆಚ್ಚಿನ ಸಂಖ್ಯೆಯ ಇಸ್ಲಾಮಿಸ್ಟ್ಗಳ ಒಳನುಸುಳುವಿಕೆಯೇ ಆಸ್ಟ್ರೇಲಿಯಾದ ಈ ಪರಿಸ್ಥಿತಿಗೆ ಕಾರಣ. ಆಸ್ಟ್ರೇಲಿಯಾ ಮಾತ್ರವಲ್ಲದೇ ಅಮೆರಿಕ ಸೇರಿದಂತೆ ಇಡೀ ಜಗತ್ತನ್ನ ಇಸ್ಲಾಮಿಕರಣಗೊಳಿಸುವುದು ಅವರ ಗುರಿಯಾಗಿದೆ. ಇಸ್ಲಾಮಿಸ್ಟ್ಗಳು ಮತ್ತು ಇಸ್ಲಾಮಿಸಂ ಅಮೆರಿಕಕ್ಕೆ ಮಾತ್ರವಲ್ಲದೇ ಇಡೀ ವಿಶ್ವದ ಸ್ವಾತಂತ್ರ್ಯ, ಭದ್ರತೆ, ಸಮೃದ್ಧಿಗೆ ದೊಡ್ಡ ಬೆದರಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಈ ಸಿದ್ಧಾಂತವನ್ನು ಗುರುತಿಸಿ ಸಕಾಲಿಕವಾಗಿ ಅದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಯುರೋಪ್ ಮತ್ತು ಆಸ್ಟ್ರೇಲಿಯಾದಂತಹ ಪರಿಸ್ಥಿತಿಯನ್ನು ದೇಶ ಎದುರಿಸಬೇಕಾಗುತ್ತದೆ ಎಂದು ತುಳಸಿ ಗಬ್ಬಾರ್ಡ್ ಎಚ್ಚರಿಸಿದ್ದಾರೆ. ಅಮೆರಿಕದ ಅನೇಕ ನಗರಗಳಲ್ಲಿ, ಮೂಲಭೂತವಾದಿ ಇಸ್ಲಾಮಿಕ್ ಧರ್ಮಗುರುಗಳು ಯುವಕರನ್ನು ಬಹಿರಂಗವಾಗಿ ಉಗ್ರವಾದದತ್ತ ಪ್ರಚೋದಿಸುತ್ತಿದ್ದಾರೆ .
ಅದೃಷ್ಟವಶಾತ್ ಟ್ರಂಪ್ ಅವರು ನಮ್ಮ ಗಡಿಗಳ ಭದ್ರತೆಗೆ ಆದ್ಯತೆ ನೀಡಿದ್ದಾರೆ. ಇದರೊಂದಿಗೆ ಶಂಕಿತ ಭಯೋತ್ಪಾದಕರನ್ನ ಗಡೀಪಾರು ಮಾಡುವುದು ಮತ್ತು ಅಮೆರಿಕನ್ನರನ್ನ ಅಪಾಯಕ್ಕೆ ತಳ್ಳುವ ಸಾಮೂಹಿಕ ವಲಸೆಯನ್ನ ತಪ್ಪಿಸುವುದು ಅಗತ್ಯವಾಗಿದೆ ಎಂದಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಟೀಮ್ ಇಂಡಿಯಾದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ವಿಶೇಷ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಅಲ್ಲದೆ ಈ ವಿಶ್ವ ದಾಖಲೆ ಬರೆದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!
ಬೆಂಗಳೂರು, ಡಿಸೆಂಬರ್ 22: ಕಳೆದ ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಶೀತದಲೆ (Weather Forecast) ಅಬ್ಬರಿಸುತ್ತಿದ್ದು, ವಿಶೇಷವಾಗಿ ಉತ್ತರ ಕರ್ನಾಟಕ ಹೆಚ್ಚಿನ ಪ್ರಮಾಣದಲ್ಲಿ ಚಳಿ ಕಂಡಿದೆ. ನಿನ್ನೆ ವಿಜಯಪುರದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಇಂದು ಕಲಬುರಗಿ, ಬೀದರ್ ಸರಿದಂತೆ 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರಿನಲ್ಲೂ ಮೈಕೊರೆಯುವ ಚಳಿ ಜನರನ್ನು ಬೆಂಬಿಡದೆ ಕಾಡುತ್ತಿದ್ದು, ಮೋಡ ಮುಸುಕಿದ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.
ಯಾವ ಜಿಲ್ಲೆಗಳಿಗೆ ಅಲರ್ಟ್?
ವಿಜಯಪುರದಲ್ಲಿ ನಿನ್ನೆ(ಡಿ.21) 6.9 ಡಿಗ್ರಿ ಸೆಲ್ಸಿಯಲ್ಸ್ ಉಷ್ಣಾಂಶ ದಾಖಲಾಗಿತ್ತು.ಕಳೆದ 20 ವರ್ಷಗಳ ಅಂಕಿ ಅಂಶಗಳ ಪ್ರಕಾರ ಮೂರನೇ ಬಾರಿಗೆ ದಾಖಲಾದ ಅತಿ ಕಡಿಮೆ ಉಷ್ಣಾಂಶ ಇದಾಗಿದೆ. ಅಂತೆಯೇ ಇಂದೂ ಉತ್ತರ ಕರ್ನಾಟಕದೆಲ್ಲೆಡೆ ಶೀತದಲೆಯ ಪ್ರಮಾಣ ಹೆಚ್ಚಿದ್ದು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.
ಎಲ್ಲೆಲ್ಲಿ ಒಣ ಹವೆ
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮುಂದುವರೆದ ಚಳಿ
ಕಳೆದ ಕೆಲ ದಿನಗಳಿಂದ ರಾಜಧಾನಿಯ ವಾತಾವರಣದಲ್ಲಿ ಸಾಕಷ್ಟು ಏರು ಪೇರಾಗುತ್ತಿದ್ದು, ಚಳಿಯ ಪ್ರಮಾಣ ಹೆಚ್ಚುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಈ ಮಧ್ಯೆ ಬೆಂಗಳೂರಿನ ತಾಪಮಾನ ಕನಿಷ್ಠ 14°C ಇದ್ದು, ಗರಿಷ್ಠ 27°C ಇರಲಿದೆ ಎಂದು ಇಲಾಖೆ ತಿಳಿಸಿದೆ.
ಹುಬ್ಬಳ್ಳಿ, ಡಿಸೆಂಬರ್ 22: ಧಾರವಾಡ (Dharawad) ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಹೆತ್ತ ತಂದೆಯೇ ಮಗಳನ್ನು ಭೀಕರವಾಗಿ ಕೊಲೆ ಮಾಡಿ ಪೈಶಾಚಿಕ ಕೃತ್ಯ ಮೆರೆದಿದ್ದಾನೆ. ಇನಾಂ ವೀರಾಪುರ ಗ್ರಾಮದ ವಿವೇಕಾನಂದ ಮತ್ತು ಅದೇ ಗ್ರಾಮದ ಮಾನ್ಯಾ ಅನೇಕ ವರ್ಷಗಳ ಕಾಲ ಪ್ರೀತಿಸಿದ್ದರು. ಮಾನ್ಯ ವರೂರು ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ಸಮಯದಲ್ಲಿ ವಿವೇಕಾನಂದ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ. ಇಬ್ಬರಿಗೂ ಮೊದಲು ಪರಿಚಯವಿತ್ತು. ಆದರೆ, ಡಿಗ್ರಿ ಓದುವಾಗ ಇನ್ಸ್ಟಾಗ್ರಾಂನಲ್ಲಿ ಮೆಸೆಜ್ ಮಾಡುತ್ತಾ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಇಬ್ಬರು ಪ್ರೀತಿಸುತ್ತಿದ್ದ ವಿಚಾರ ಎರಡು ಮನೆಯವರಿಗೆ ಗೊತ್ತಾಗಿತ್ತು. ಯುವತಿ ಲಿಂಗಾಯತ ಸಮಾಜದವಳಾಗಿದ್ದರೆ ವಿವೇಕಾನಂದ ದಲಿತ ಸಮುದಾಯಕ್ಕೆ ಸೇರಿದ್ದ. ಹೀಗಾಗಿ ಯುವತಿ ಮನೆಯವರು ಮದುವೆಗೆ ವಿರೋಧ ಮಾಡಿದ್ದರು. ಆದರೆ, ಯುವತಿ ಯಾವುದೇ ಕಾರಣಕ್ಕೂ ವಿವೇಕಾನಂದ ಬಿಟ್ಟು ಬದಕೋದಿಲ್ಲಾ ಎಂದು ಹಠ ಹಿಡಿದಿದ್ದಳು.
ಧಾರವಾಡದಲ್ಲಿ ಕೋಚಿಂಗ್ಗೆ ಹೋಗಿದ್ದ ವಿವೇಕಾನಂದ ಬಳಿ ಹೋಗಿ, ಮದುವೆಯಾಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಹೀಗಾಗಿ ವಿವೇಕಾನಂದ ಆಕೆ ಜೊತೆ ಕಳೆದ ಜೂನ್ 19 ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದ.
ಎರಡು ಕುಟುಂಬಗಳ ನಡುವೆ ರಾಜಿ ಸಂಧಾನ ಮಾಡಿದ್ದ ಪೊಲೀಸರು
ರಿಜಿಸ್ಟರ್ ವಿವಾಹದ ನಂತರ ಪೊಲೀಸರು ಎರಡೂ ಕುಟುಂಬಗಳನ್ನು ಕರೆದು ರಾಜಿ ಪಂಚಾಯತಿ ಮಾಡಿದ್ದರು. ಆ ಬಳಿಕ ಮಾನ್ಯಾ ಮತ್ತು ವಿವೇಕಾನಂದ ಊರು ಬಿಟ್ಟು ಹೋಗಿ ಹಾವೇರಿಯಲ್ಲಿ ವಾಸವಾಗಿದ್ದರು. ಈ ನಡುವೆ ಮಾನ್ಯಾ ಗರ್ಭಿಣಿಯಾಗಿದ್ದಾಳೆ. 7 ತಿಂಗಳ ಬಳಿಕ ಎಲ್ಲ ಸರಿಹೋಗಿರಬಹುದು ಎಂದುಕೊಂಡು ಡಿಸೆಂಬರ್ 8 ರಂದು ಇಬ್ಬರೂ ಸ್ವಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಆದರೆ, ಮತ್ತೆ ಕಿರಿಕ್ ಶುರುವಾಗಿ ಗ್ರಾಮೀಣ ಠಾಣೆ ಪೊಲೀಸರು ಎರಡು ಕಡೆಯವರನ್ನೂ ಕರೆಸಿ, ರಾಜಿ ಸಂದಾನ ಮಾಡಿಸಿದ್ದಾರೆ. ಆದರೆ ಇದಾದ ಎರಡೇ ವಾರಕ್ಕೆ ನಡೆಯಬಾರದ್ದು ನಡೆದುಹೋಗಿದೆ.
ಮನೆಗೆ ನುಗ್ಗಿ ಹಲ್ಲೆ ಮಾಡಿದ ತಂದೆ, ಕುಟುಂಬದವರು
ಭಾನುವಾರ ಸಂಜೆ ಮತ್ತೆ ವಿವೇಕಾನಂದ ಮನೆ ಮೇಲೆ ದಾಳಿ ಮಾಡಿದ ಮಾನ್ಯ ತಂದೆ ಪ್ರಕಾಶಗೌಡ ಪಾಟೀಲ್ ಮತ್ತು ಸಂಬಂಧಿಗಳು ಮಾನ್ಯಾ ಮತ್ತು ಮನೆಯಲ್ಲಿದ್ದ ಆಕೆಯ ಅತ್ತೆ ಸೇರಿದಂತೆ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಮಾನ್ಯಳಿಗೆ ಪೈಪ್ ಮತ್ತು ಗುದ್ದಲಿಯಿಂದ ಪ್ರಕಾಶಗೌಡ ಹಲ್ಲೆ ಮಾಡಿದ್ದಾನೆ. ನಂತರ ಮಾನ್ಯಾಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾನ್ಯಾ ಇಹಲೋಕ ತ್ಯಜಿಸಿದ್ದಾಳೆ. ಇತ್ತ ಮಾನ್ಯಾಳ ಅತ್ತೆ, ಮಾವ ಸೇರಿ ಮೂವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡ ಎಸ್ಪಿ ಗುಂಜನ್ ಆರ್ಯ, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಮಾನ್ಯಾಳ ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಆದರೆ ಪ್ರೀತಿಸಿ ಮದುವೆಯಾಗಿ ತನ್ನ ಪಾಡಿಗೆ ತಾನು ಜೀವನ ಕಟ್ಟಿಕೊಂಡಿದ್ದ ಮಗಳನ್ನು ಸ್ವತ ತಂದೆಯೇ ಮರ್ಯಾದಾ ಹತ್ಯೆ ಮಾಡಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.
ಬೆಂಗಳೂರು, ಡಿಸೆಂಬರ್ 22: ಪ್ರತಿಯೊಬ್ಬ ವ್ಯಕ್ತಿಗೂ ಸ್ವಂತ ಮನೆ ಹೊಂದುವ ಕನಸು ಸಹಜ. ಅನೇಕರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಸ್ವಂತ ಮನೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಕೆಲವರಿಗೆ ಪೂರ್ವಿಕರ ಆಸ್ತಿ, ಭೂಮಿ ಇದ್ದರೂ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಹಣ ಕೂಡಿಟ್ಟರೂ ಅದನ್ನು ಮನೆ ನಿರ್ಮಾಣಕ್ಕೆ ಬಳಸಲು ಆಗುವುದಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ.
ಮನೆ ಯೋಗವನ್ನು ಪ್ರೋತ್ಸಾಹಿಸುವ ಪ್ರಮುಖ ಗ್ರಹಗಳೆಂದರೆ ಕುಜ, ಶುಕ್ರ ಮತ್ತು ಬುಧ. ವಿಶೇಷವಾಗಿ ಕುಜ (ಮಂಗಳ) ಗ್ರಹವು ಪ್ರಮುಖ ಪಾತ್ರ ವಹಿಸುತ್ತದೆ, ಇದು ನಾಲ್ಕನೇ ಮನೆಯ ಅಧಿಪತಿಯಾಗಿದೆ. ಕುಜನ ಅಧಿಪತಿ ಸುಬ್ರಹ್ಮಣ್ಯ ಸ್ವಾಮಿ. ಸ್ವಂತ ಮನೆ ಕನಸು ನನಸಾಗಲು ಮಂಗಳ ಗ್ರಹವನ್ನು ಸತತವಾಗಿ ಪೂಜಿಸಬೇಕು. ಪ್ರತಿ ಮಂಗಳವಾರದಂದು ಸುಬ್ರಹ್ಮಣ್ಯ ಸ್ವಾಮಿ ಮತ್ತು ನಾಗರಕಲ್ಲು ಪೂಜಿಸುವುದು ಉತ್ತಮ. ಕೃಷ್ಣ ಪಕ್ಷದ ಚತುರ್ಥಿಯಂದು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವುದರಿಂದ ಮನೆ ಯೋಗ ಪ್ರಾಪ್ತವಾಗುತ್ತದೆ. ಪ್ರತಿದಿನ “ಓಂ ಅಂಗಾರಕಾಯ ನಮಃ” ಮಂತ್ರವನ್ನು ಜಪಿಸುವುದರಿಂದ ಕುಜ ಗ್ರಹದ ಅನುಗ್ರಹ ದೊರೆಯುತ್ತದೆ. ಸಾಧ್ಯವಾದರೆ ಮಂಗಳವಾರ ಉಪವಾಸ ಆಚರಿಸುವುದು ಕೂಡ ಒಳ್ಳೆಯದು ಎಂದು ಗುರೂಜಿ ಹೇಳಿದ್ದಾರೆ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 22 ಡಿಸೆಂಬರ್ 2025 ರ ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಈ ದಿನವು ಸೋಮವಾರವಾಗಿದ್ದು, ವಿಶ್ವಾವಸು ನಾಮ ಸಂವತ್ಸರ, ಪುಷ್ಯ ಮಾಸ, ಶುಕ್ಲ ಪಕ್ಷ, ಬಿದಿಗೆ ತಿಥಿಯನ್ನು ಹೊಂದಿದೆ. ಉತ್ತರಾಷಾಢ ನಕ್ಷತ್ರದಲ್ಲಿ ಚಂದ್ರನ ಸಂಚಾರವು ಎಲ್ಲ ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಲಿದೆ ಎಂದು ಗುರೂಜಿ ತಿಳಿಸಿದ್ದಾರೆ.
ಮೇಷ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ವೃಷಭ ರಾಶಿಯವರಿಗೆ ಆಲಸ್ಯ ತ್ಯಜಿಸಲು ಸೂಚಿಸಲಾಗಿದೆ. ಮಿಥುನ ರಾಶಿಯವರು ಸಮಯಕ್ಕೆ ತಕ್ಕಂತೆ ಕೆಲಸಗಳನ್ನು ಪೂರೈಸಬೇಕು. ಕರ್ಕಾಟಕ ರಾಶಿಯವರಿಗೆ ಪ್ರಯಾಣ ಯೋಗವಿದ್ದರೆ, ಸಿಂಹ ರಾಶಿಯವರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಕನ್ಯಾ ರಾಶಿಯವರಿಗೆ ಆಕಸ್ಮಿಕ ಧನಯೋಗವಿದ್ದು, ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ವೃಶ್ಚಿಕ ರಾಶಿಯವರು ಮಾತಿನಲ್ಲಿ ಜಾಗ್ರತೆ ವಹಿಸಬೇಕು. ಧನು ರಾಶಿಯವರಿಗೆ ಅದೃಷ್ಟದ ದಿನವಾಗಿದ್ದು, ಮಕರ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅಗತ್ಯ. ಕುಂಭ ರಾಶಿಯವರು ಕಾನೂನು ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಮೀನ ರಾಶಿಯವರು ವೃಥಾ ತಿರುಗಾಟ, ಕೋಪವನ್ನು ನಿಯಂತ್ರಿಸಬೇಕು. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರವನ್ನು ಸೂಚಿಸಲಾಗಿದೆ.
ಯಾವುದೇ ವಿಚಾರದಲ್ಲಿ ಉಲ್ಲಾಸ- ಉತ್ಸಾಹದಿಂದ ತೊಡಗಿಕೊಳ್ಳಲು ಮನಸ್ಸು ಇರುವುದಿಲ್ಲ. ಆದಾಯದಲ್ಲಿ ಇಳಿಕೆ ಆಗುತ್ತಿದೆ ಎಂಬುದು ಒಂದು ಕಡೆಯ ಚಿಂತೆಯಾದರೆ, ಅದನ್ನು ಹೆಚ್ಚಿಸಲು ಮಾಡುತ್ತಿರುವ ಪ್ರಯತ್ನಗಳು ಫಲ ನೀಡುತ್ತಿಲ್ಲ ಎಂಬುದು ಇನ್ನೊಂದು ಕಡೆಯ ಬೇಸರಕ್ಕೆ ಕಾರಣ ಆಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮನ್ನು ದೂರ ಇಟ್ಟು, ಕೆಲವು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸಂಗತಿ ಗಮನಕ್ಕೆ ಬರಲಿದ್ದು, ಸಂಬಂಧಪಟ್ಟವರಲ್ಲಿ ಇದನ್ನು ಕೇಳಿಯೂ ಕೇಳಲಿದ್ದೀರಿ. ಪ್ರಾಣಿಗಳಿಂದ ಕಡಿತಕ್ಕೆ ಒಳಗಾಗುವ ಯೋಗ ಇದೆ, ಆದ್ದರಿಂದ ನೀವು ಅಂಥ ಪರಿಸರದಲ್ಲಿ ಓಡಾಡುವಾಗಲೋ ಅಥವಾ ಕಾರ್ಯ ನಿರ್ವಹಣೆ ಮಾಡುವಾಗಲೋ ಸಾಮಾನ್ಯ ದಿನಗಳಿಗಿಂತ ಎಚ್ಚರಿಕೆಯನ್ನು ವಹಿಸಿ. ಎಲೆಕ್ಟ್ರಿಕಲ್ ಸಾಧನಗಳ ಮಾರಾಟ ಮಳಿಗೆ ಇಟ್ಟಿರುವವರಿಗೆ ಆದಾಯ ಮೂಲ ಹೆಚ್ಚಿಕೊಳ್ಳುವುದಕ್ಕೆ ಮಾರ್ಗೋಪಾಯ ಗೋಚರ ಆಗಲಿದೆ. ಆದರೆ ಇದರ ಬಗ್ಗೆ ನಿಮ್ಮ ಆಸಕ್ತಿ ಕುದುರುವುದಿಲ್ಲ.
ಮನಸ್ಸಿಗೆ ಸಮಾಧಾನ ತರುವಂಥ ಬೆಳವಣಿಗೆಗಳು ಆಗಲಿವೆ. ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಪ್ರತಿಷ್ಠಿತ ಸಂಸ್ಥೆಯಿಂದ ಇಂಟರ್ ವ್ಯೂ ಕರೆ ಬರಬಹುದು. ಇನ್ನು ವೃತ್ತಿಪರರು ನೀವಾಗಿಯೇ ಕೆಲವು ಕ್ಲೈಂಟ್ ಗಳಿಗೆ ಇನ್ನು ಕೆಲಸ ಮಾಡಿಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಿದ್ದೀರಿ. ಊಟ- ತಿಂಡಿಗಾಗಿ ದೂರದ ಸ್ಥಳಗಳಿಗೆ ಹುಡುಕಿಕೊಂಡು ಹೋಗಲಿದ್ದೀರಿ. ಇದಕ್ಕೆ ನಿಮ್ಮ ಸ್ನೇಹಿತರು ಸಹ ಜೊತೆಯಾಗುತ್ತಾರೆ. ಕೋರ್ಟ್- ಕಚೇರಿ ಅಲೆದಾಟ ಮಾಡುತ್ತಿರುವವರಿಗೆ ರಾಜೀ- ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂಬ ಪ್ರಸ್ತಾವವನ್ನು ನಿಮ್ಮ ಎದುರಿನ ಪಾರ್ಟಿಯವರಿಂದ ಬರುವ ಸಾಧ್ಯತೆ ಇದೆ. ಮುಕ್ತ ಮನಸ್ಸಿನಿಂದ ಆಲೋಚನೆ ಮಾಡುವುದು ಒಳ್ಳೆಯದು. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನಿರೀಕ್ಷಿತವಾಗಿ ಆತಂಕ ಎದುರಾಗಲಿದೆ. ಯಾವುದೋ ಮುಖ್ಯವಾದ ಸಂಗತಿಯನ್ನು ಮರೆತಿದ್ದೀರಿ ಎಂಬುದು ಈ ಆತಂಕದ ಮೂಲ ಆಗಲಿದೆ.
ಯಾಕೆ- ಏನು ಎಂಬ ಪ್ರಶ್ನೆ ಮಾಡದೆ ತಮಗೆ ಬೇಕಾದ ಕೆಲಸವನ್ನು ಮಾಡಿಕೊಡಬೇಕು ಎಂಬುದು ನಿಮ್ಮ ಸ್ನೇಹಿತರ ನಿರೀಕ್ಷೆ ಆಗಿರಲಿದೆ. ಇದಕ್ಕಾಗಿ ನಡೆಯುವ ಮಾತುಕತೆ ವೇಳೆ ನಿಮ್ಮ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರು ಆಗಲಿದೆ. ಮನೆ- ಮಳಿಗೆ ನಿರ್ಮಾಣದಲ್ಲಿ ತೊಡಗಿಕೊಂಡವರು ನಿಯಮಾನುಸಾರ ಕೆಲಸ- ಕಾರ್ಯಗಳು ನಡೆಯುತ್ತಾ ಇವೆಯೇ ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವುದು ಒಳ್ಳೆಯದು. ಆಸಕ್ತಿಯಿಂದ ಸೇರಿಕೊಂಡಿದ್ದ ಕೋರ್ಸ್ ವೊಂದರಲ್ಲಿ ಮುಂದುವರಿಯುವುದು ಸಾಧ್ಯ ಇಲ್ಲ ಎಂಬುದು ಖಚಿತವಾಗಿ, ಬೇಸರ ಮಾಡಿಕೊಳ್ಳುವಂತೆ ಆಗಲಿದೆ. ಯೂಟ್ಯೂಬರ್ ಗಳಿಗೆ ಖರ್ಚಿನ ಪ್ರಮಾಣ ಹೆಚ್ಚಲಿದ್ದು, ಅದನ್ನು ಹೇಗೆ ಹೊಂದಾಣಿಕೆ ಮಾಡುವುದು ಎಂಬುದೇ ತಿಳಿಯದೆ ಕಂಗಾಲಾಗುತ್ತೀರಿ. ಮನೆಯಲ್ಲಿ ಹಿರಿಯರು ಹೇಳುವಂಥ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ.
ಎಲ್ಲ ವಿಚಾರಕ್ಕೂ ಪ್ಲಾನ್ ಬಿ ಮಾಡಿಕೊಳ್ಳುವ ನಿಮ್ಮ ವಿಧಾನದಿಂದ ದೊಡ್ಡ ಅನುಕೂಲ ಆಗಲಿದೆ. ಕಠಿಣವಾದ ವಿಷಯಗಳನ್ನು ಸಹ ಸಲೀಸಾಗಿ ಅರ್ಥ ಮಾಡಿಕೊಳ್ಳುವ ರೀತಿಯಿಂದಾಗಿಯೇ ಇತರರು ನಿಮ್ಮ ಕಡೆಗೆ ಬೆರಗಿನಿಂದ ನೋಡುತ್ತಾರೆ. ದೊಡ್ಡ ಮಟ್ಟದ ಖರ್ಚು ಬರಬಹುದು ಎಂದು ಅಂದಾಜು ಮಾಡಿಕೊಂಡಿದ್ದು, ತುಂಬ ಕಡಿಮೆ ಮೊತ್ತದಲ್ಲಿ ಅಂದುಕೊಂಡ ರೀತಿಯಲ್ಲಿಯೇ ಕೆಲಸ ಮುಗಿಯುತ್ತದೆ. ಉದ್ಯೋಗ ಬಿಟ್ಟು ಹೊಸ ವ್ಯವಹಾರ- ವ್ಯಾಪಾರ ಆರಂಭಿಸುವ ನಿರ್ಧಾರದ ಬಗ್ಗೆ ನಿಮ್ಮಲ್ಲಿ ಕೆಲವರು ಸ್ನೇಹಿತರ ಜೊತೆಗೆ ಚರ್ಚೆ ಮಾಡಲಿದ್ದೀರಿ. ಇನ್ನೂ ಕೆಲವರು ಆಹಾರದ ವ್ಯವಹಾರ ಶುರು ಮಾಡುವುದಕ್ಕೆ ಎಲ್ಲ ಸಿದ್ಧತೆ ಮುಗಿಸಿರುವ ಸಾಧ್ಯತೆ ಇದೆ. ಉನ್ನತ ವ್ಯಾಸಂಗ ಮಾಡುತ್ತಾ ಇರುವವರಿಗೆ ಉದ್ಯೋಗದ ಆಫರ್ ಬರಬಹುದು. ಇಂಟರ್ನ್ ಷಿಪ್ ಮಾಡುವಂತೆ ಸಹ ಪ್ರಸ್ತಾವವನ್ನು ನಿಮ್ಮ ಮುಂದೆ ಇಡಲಿದ್ದಾರೆ. ಒಟ್ಟಾರೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ದಿನ ಇದಾಗಿರುತ್ತದೆ.
ಕೆಲವು ಬದಲಾವಣೆಗೆ ಸಂಬಂಧಿಸಿದಂತೆ ನಿಮ್ಮನ್ನು ಒಪ್ಪಿಸುವುದಕ್ಕೆ ಸಹೋದ್ಯೋಗಿಗಳು ಪ್ರಯತ್ನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿಯ ತನಕ ಎಲ್ಲಿಯೂ ಹೇಳಿಕೊಳ್ಳದ ಸಂಗತಿಗಳನ್ನು ಬಾಯಿ ಬಿಟ್ಟು ಹೇಳಿಕೊಳ್ಳುವಂತೆ ಆಗಲಿದೆ. ನಿಮ್ಮ ಸಾಮರ್ಥ್ಯ, ಬದ್ಧತೆ, ಅದರಿಂದ ಆಗಿರುವ ಅನುಕೂಲಗಳ ಬಗ್ಗೆ ಮಾತನಾಡುತ್ತೀರಿ. ಇದರ ಆಚೆಗೆ ಆಗುವ ಯಾವುದೇ ಬದಲಾವಣೆಗೆ ಒಪ್ಪಿಕೊಳ್ಳುವುದಕ್ಕೆ ಸಿದ್ಧರಿಲ್ಲ ಎಂಬುದನ್ನು ಸಹ ಹೇಳಲಿದ್ದೀರಿ. ಯಾವುದಾದರೂ ನಿರ್ದಿಷ್ಟ ಕಾಯಿಲೆ ಆಗಿದೆಯಾ ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ಏನಾದರೂ ಸೂಚಿಸಿದ್ದಲ್ಲಿ ಗಂಭೀರ ಸಮಸ್ಯೆ ಇಲ್ಲ ಎಂಬುದು ತಿಳಿದುಬರಲಿದೆ. ಸಮಾರಂಭಗಳಿಗೆ ತೆರಳುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೀರಿ. ಆಪತ್ಕಾಲಕ್ಕೆ ಇರಲಿ ಎಂಬ ಉದ್ದೇಶದಿಂದ ಕೂಡಿಟ್ಟುಕೊಂಡಿದ್ದ ಹಣವನ್ನು ಬೇರೆ ಉದ್ದೇಶಕ್ಕೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉದ್ಭವ ಆಗಲಿದೆ.
ನಿಮ್ಮ ಹತ್ತಿರ ಏನಿದೆಯೋ ಅದು ಮಾತ್ರ ನಿಮ್ಮದು. ನೀವು ಬೇರೆಯವರಿಗೆ ಕೊಟ್ಟಂಥ ಸಾಲ, ಈಗಾಗಲೇ ಕೆಲಸ ಮಾಡಿಯಾಗಿದೆ ಅದರ ಹಣ ಬರಬೇಕಿದೆ, ಸ್ನೇಹಿತರು- ಸಂಬಂಧಿಕರು ಸಹಾಯ ಮಾಡುವುದಾಗಿ ಕೊಟ್ಟಂಥ ಮಾತು ಇದ್ಯಾವುದನ್ನೂ ನೆಚ್ಚಿಕೊಂಡು ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದಕ್ಕೆ ಹೋಗಬೇಡಿ. ಹೋಟೆಲ್ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಪ್ರೀತಿಯಲ್ಲಿ ಇರುವವರು ಜೊತೆಯಾಗಿ ಸಮಯವನ್ನು ಕಳೆಯುವಂಥ ಯೋಗ ಇದೆ. ಭವಿಷ್ಯದ ಬಗ್ಗೆ ಗಂಭೀರವಾದ ಚರ್ಚೆ ಸಹ ಮಾಡಲಿದ್ದೀರಿ. ಇಷ್ಟು ಸಮಯ ಮಾತನಾಡದೆ ಉಳಿದು ಹೋಗಿದ್ದ ಕೆಲವು ಸಂಗತಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಯಾರ ಜತೆಗೂ ಅತಿಯಾದ ಸಲುಗೆ ಬೇಡ. ಇದನ್ನು ಮೀರಿಯೂ ನಡೆದುಕೊಂಡಲ್ಲಿ ಎಚ್ಚರಿಕೆ ಮಾತುಗಳನ್ನು ಕೇಳಿಸಿಕೊಳ್ಳುವಂತೆ, ಮುಜುಗರದ ಸನ್ನಿವೇಶ ಎದುರಿಸುವಂತೆ ಆಗುತ್ತದೆ.
ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಯೋಗ ಇದೆ. ಬಹಳ ಸಮಯದಿಂದ ನೀವು ಹೇಳಬೇಕು ಅಂದುಕೊಳ್ಳುತ್ತಾ ಇದ್ದ ಕೆಲವು ವಿಚಾರಗಳನ್ನು ಸಂಬಂಧ ಪಟ್ಟವರಿಗೆ ಹೇಳಲಿದ್ದೀರಿ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಿರುತ್ತದೆ. ನೀವು ಕೈಯಿಂದ ಹಣ ಹಾಕಿ, ಮಾಡಿಕೊಟ್ಟ ಕೆಲಸದ ಬಾಕಿ ವಸೂಲಿ ಮಾಡುವುದು ಈ ದಿನ ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕುದುರುವುದು ಕಷ್ಟ ಆಗಲಿದೆ. ಸ್ನೇಹಿತರ ಜೊತೆಗೆ ದೂರ ಪ್ರಯಾಣ ಮಾಡುವಂಥ ಯೋಗ ಇದೆ. ಅದು ಕೂಡ ಯಾವುದೇ ಯೋಜನೆ ಇಲ್ಲದೆ ದಿಢೀರ್ ಹೊರಟುಬಿಡುವಂತೆ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರು ಯಾವುದೇ ಸನ್ನಿವೇಶವನ್ನು ಭಾವನಾತ್ಮಕ ಹಿನ್ನೆಲೆಯಲ್ಲಿ ನೋಡುವುದಕ್ಕೆ ಹೋಗಬೇಡಿ. ಲಾಭಕ್ಕೆ ಬರಲಾರದು ಎಂದೆನಿಸಿದ್ದನ್ನು ನಿಲ್ಲಿಸಿಬಿಡುವುದು ಒಳ್ಳೆಯದು. ಆಯುರ್ವೇದ ಔಷಧಗಳ ವಿತರಣೆ ಮಾಡುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ.
ಮನೆಯ ಖರ್ಚು ವೆಚ್ಚಗಳು ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿಗೆ ಆಗಲಿದೆ. ಆದಾಯ ಹಾಗೂ ಅದನ್ನು ಬಳಸುವುದಕ್ಕೂ ತಾಳೆ ಆಗುತ್ತಿಲ್ಲ ಎಂಬುದು ಚಿಂತೆಗೆ ಕಾರಣ ಆಗಲಿದೆ. ಆದಾಯದ ಮೂಲ ಜಾಸ್ತಿ ಮಾಡಿಕೊಳ್ಳಲು ಹಾಕುವಂಥ ಶ್ರಮ ಫಲ ನೀಡುತ್ತದೆ. ಸಂಗಾತಿ ಜತೆಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಅವರ ಬೇಕು- ಬೇಡಗಳನ್ನು ಕೇಳಿಕೊಂಡು, ಅದನ್ನು ಒದಗಿಸಿಕೊಡಲು ಆದ್ಯತೆ ನೀಡಲಿದ್ದೀರಿ. ನಿಮ್ಮ ನಿಲವು- ಉದ್ದೇಶದ ಬಗ್ಗೆ ಸಂಬಂಧಿಕರು ಆಕ್ಷೇಪದ ಮಾತುಗಳನ್ನು ಹೇಳಲಿದ್ದಾರೆ. ನೀವು ಸಹ ಇಂಥ ಮಾತುಗಳಿಗೆ ಅಲ್ಲಿಂದ ಅಲ್ಲಿಗೆ ಎಂಬಂತೆ ಉತ್ತರವನ್ನು ಸಹ ನೀಡುತ್ತೀರಿ. ದೊಡ್ಡ ಅಳತೆಯ ಸೈಟು ಇರುವವರು ಅದನ್ನು ಮಾರಾಟ ಮಾಡಿ, ಕಟ್ಟಿರುವ ಮನೆ ಖರೀದಿ ಮಾಡುವ ಬಗ್ಗೆ ಆಲೋಚಿಸುತ್ತೀರಿ. ಅದರಲ್ಲೂ ತಿಂಗಳಾ ತಿಂಗಳು ಬಾಡಿಗೆ ರೂಪದಲ್ಲಿ ನಿಗದಿತ ಆದಾಯ ಮಾಡಿಕೊಳ್ಳುವ ಕಡೆಗೆ ಗಮನ ಇರಲಿದೆ.
ನಿರ್ಭಾವುಕ ನಿರ್ಧಾರ ತೆಗೆದುಕೊಳ್ಳಬೇಕು, ಯಾರನ್ನೂ ಹಚ್ಚಿಕೊಳ್ಳಬಾರದು ಎಂದುಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮಿಂದ ನಿರೀಕ್ಷೆ ಮಾಡುತ್ತಿರುವುದು ತಲುಪಲು ಸಾಧ್ಯ ಇಲ್ಲದಷ್ಟು ಎತ್ತರದಲ್ಲಿದೆ ಎಂದೆನಿಸುವುದಕ್ಕೆ ಶುರು ಆಗಲಿದೆ. ನೀವು ಒಪ್ಪಿಸಿದ ಕೆಲಸ- ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುವುದಾಗಿ ಮಾತು ನೀಡಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಾಗುತ್ತಿಲ್ಲ ಎನ್ನುವುದರಿಂದ ನೀವು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತೀರಿ. ಪ್ರಯಾಣಕ್ಕೆ ಹೆಚ್ಚು ಖರ್ಚು ಮಾಡುವ ಯೋಗ ಇದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂಬ ನಿಮ್ಮ ಬದ್ಧತೆಗೆ ಸ್ನೇಹಿತರು- ಸಂಬಂಧಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಇತರರು ತಮ್ಮಿಂದ ಆಗದು ಎಂದು ಅರ್ಧಕ್ಕೇ ನಿಲ್ಲಿಸಿದಂಥ ಪ್ರಾಜೆಕ್ಟ್ ಅನ್ನು ನೀವು ಕೈಗೆತ್ತಿಕೊಂಡು, ಸಮಾಧಾನ ಆಗುವ ಮಟ್ಟಕ್ಕೆ ಪೂರ್ಣ ಮಾಡಲಿದ್ದೀರಿ. ಹಣಕಾಸಿನ ವಿಚಾರವನ್ನು ಆರಂಭದಲ್ಲಿಯೇ ಮಾತನಾಡಿಕೊಳ್ಳುವುದಕ್ಕೆ ದಾಕ್ಷಿಣ್ಯ ಮಾಡಿಕೊಳ್ಳಬೇಡಿ.
ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಧ್ರುವ, ಕರಣ : ಕೌಲವ, ಸೂರ್ಯೋದಯ – 06 – 45 am, ಸೂರ್ಯಾಸ್ತ – 06 – 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08:10 – 09:34, ಯಮಗಂಡ ಕಾಲ 10:59 – 12:23, ಗುಳಿಕ ಕಾಲ 13:47 – 15:12
ಮೇಷ ರಾಶಿ :ಇಂದು ಆತ್ಮವಿಶ್ವಾಸ ಹೆಚ್ಚಾಗಿ ಕಾಣಿಸುತ್ತದೆ. ಹೊಸ ಕಾರ್ಯಗಳನ್ನು ಆರಂಭಿಸಲು ಸೂಕ್ತ ದಿನ. ಆದರೆ ತ್ವರಿತ ನಿರ್ಧಾರಗಳು ಕೆಲವೊಮ್ಮೆ ಅಸಮಾಧಾನ ಉಂಟುಮಾಡಬಹುದು. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ. ಸಹೋದರರ ಪಾಲಿಗೆ ಬಂದ ಆಸ್ತಿಯು ನಿಮಗೆ ಸಿಗುವ ಸಾಧ್ಯತೆ ಇದೆ. ನಿಮಗೆ ಇಂದು ಧಾರ್ಮಿಕ ಕಾರ್ಯದಲ್ಲಿ ತೃಪ್ತಿಯು ಸಿಗಲಿದೆ. ಸಂಗಾತಿಯ ಪ್ರೀತಿಯಿಂದ ನಿಮಗೆ ಅಚ್ವರಿಯಾಗಬಹುದು. ನೌಕರರಿಗೆ ಇಂದು ನಿಮ್ಮಿಂದ ಅನಿರೀಕ್ಷಿತ ಸಂತಸ ಸಿಗಲಿದೆ. ಸಂತೋಷದ ನಡುವೆ ಯಾರನ್ನೂ ಬೇಸರಿಸುವುದು ಬೇಡ. ನಿಮ್ಮ ಅಧ್ಯಾತ್ಮ ಜೀವನದಿಂದ ಪ್ರಭಾವಿತರಾಗುವರು. ಅತಿಯಾದ ಭೋಜನದಿಂದ ಕಷ್ಟವಾದೀತು. ಕುಟುಂಬದವರ ಮಾತಿಗೆ ಮೌಲ್ಯ ನೀಡಿದರೆ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ. ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸುವುದು ಒಳಿತು. ಮನೆಯ ಗಂಭೀರ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳುವುದು ಬೇಡ. ವಿದ್ಯಾರ್ಥಿಗಳಿಗೆ ಸಾಲಬಾಧೆ ತಟ್ಟುವ ಸಾಧ್ಯತೆ ಇದೆ.
ವೃಷಭ ರಾಶಿ :ಹಣಕಾಸಿನ ವಿಷಯಗಳಲ್ಲಿ ಸ್ಥಿರತೆ ಕಂಡುಬರುತ್ತದೆ. ಹಳೆಯ ಪ್ರಯತ್ನಗಳಿಗೆ ಇಂದು ಫಲ ದೊರಕುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಹನಶೀಲತೆ ಮೆಚ್ಚುಗೆ ಪಡೆಯುತ್ತದೆ. ಸ್ವಯಂ ಕೃತ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾಗುವುದು. ನಿಮ್ಮ ಏಳ್ಗೆಯನ್ನು ಇತರರು ಸಹಿಸಿಕೊಳ್ಳುವುದು ಕಷ್ಟವಾಗುವುದು. ಯಾರ ಬಗ್ಗೆಯೂ ಸಲ್ಲದ ಮಾತನಾಡಿ ಸಿಕ್ಕಿಕೊಳ್ಳುವಿರಿ. ಸ್ವಯಂ ಕೃತ ಅಪರಾಧದಿಂದ ಪಶ್ಚಾತ್ತಾಪವಾಗುವುದು. ಸಂಗಾತಿಯ ವಿಷಯದಲ್ಲಿ ನಿಮಗೆ ಸಮಾಧಾನ ಇರದು. ನಿಮ್ಮ ಬಾಲಿಶ ಮಾತುಗಳಿಂದ ಇತರರು ನಕ್ಕಾರು. ಕ್ರೀಡೆಯಲ್ಲಿ ಉತ್ಸಾಹವು ತೋರಿ, ಗೆಲ್ಲುವಿರಿ. ಮನೆಯಲ್ಲಿ ಇಂದು ಸ್ನೇಹ ಕೂಟವು ಏರ್ಪಡುವುದು. ಅನಗತ್ಯ ಖರ್ಚು ತಪ್ಪಿಸಿದರೆ ಭವಿಷ್ಯದಲ್ಲಿ ಲಾಭ. ದೈಹಿಕ ಶ್ರಮದ ಅನಂತರ ವಿಶ್ರಾಂತಿ ಅಗತ್ಯ. ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವಿರಿ. ಕಛೇರಿಯ ವ್ಯವಹಾರವನ್ನು ಮನೆಯಲ್ಲಿ ಚರ್ಚಿಸುವುದು ಬೇಡ. ಸನ್ನಿವೇಶವನ್ನು ಎದುರಿಸುವುದು ಕಷ್ಟವಾಗಲಾರದು. ನಿಮ್ಮ ಸ್ವೇಚ್ಛೆಗೆ ಭಂಗವಾಗುವುದನ್ನು ನೀವು ಸಹಿಸಲಾರಿರಿ.
ಮಿಥುನ ರಾಶಿ :ಸಂಭಾಷಣೆ ಮತ್ತು ಸಂಪರ್ಕಗಳು ಇಂದು ನಿಮ್ಮ ಕಾರ್ಯಕ್ಕೆ ಶಕ್ತಿಯಾಗುತ್ತವೆ. ಹೊಸ ಪರಿಚಯಗಳಿಂದ ಉಪಯುಕ್ತ ಮಾಹಿತಿ ಸಿಗುತ್ತದೆ. ಆದರೆ ಅತಿಯಾಗಿ ಮಾತನಾಡುವುದರಿಂದ ತಪ್ಪು ಅರ್ಥಗಳಾಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಯಾರನ್ನೋ ಮೆಚ್ಚಿಸಿ ಪ್ರಯೋಜನವಾಗದು. ಸಂಶೋಧನೆಯ ಮನಸ್ಸಿನಲ್ಲಿ ಇದ್ದರೆ ಹೊಸ ವಿಷಯವು ನಿಮ್ಮ ಮನಸ್ಸಿಗೆ ಬರಬಹುದು. ಆರ್ಥಿಕತೆಯು ದುರ್ಬಲವಾದ ಕಾರಣ ಆತಂಕವು ಉಂಟಾಗಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ಕಾರ್ಯಗಳಲ್ಲಿ ಏಕಾಗ್ರತೆ ಕಾಪಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ ಸೂಚನೆ. ಆಪತ್ಕಾಲಕ್ಕಾಗಿ ಕೂಡಿಟ್ಟ ಹಣವು ಇಂದು ಖರ್ಚು ಮಾಡಬೇಕಾಗುವುದು. ಭವಿಷ್ಯದ ಬಗ್ಗೆ ಅಸ್ಪಷ್ಟತೆ ಇರುವ ಕಾರಣ ಮನಸ್ಸಿಗೆ ಕಿರಿಕಿರಿ ಇರುವುದು.
ಕರ್ಕಾಟಕ ರಾಶಿ :ಇಂದು ಮನಸ್ಸು ಸ್ವಲ್ಪ ಭಾವನಾತ್ಮಕವಾಗಿರುತ್ತದೆ. ಕುಟುಂಬ ಸಂಬಂಧಗಳು ಹೆಚ್ಚು ಮಹತ್ವ ಪಡೆಯುತ್ತವೆ. ಮನೆಯ ವಿಷಯಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣಬಹುದು. ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು. ಅಧ್ಯಾತ್ಮದಿಂದ ಸುಖ ಸಿಗಲಿದೆ. ದುರಭ್ಯಾಸದ ಕಾರಣ ಮರ್ಯಾದಿಯನ್ನು ಕಳೆದುಕೊಳ್ಳಬೇಕಾದೀತು. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದಕ್ಕೆ ಸಿಕ್ಕುವಿರಿ. ನಿಮ್ಮ ನಿರುದ್ಯೋಗಕ್ಕೆ ಸೂಕ್ತ ಪರಿಹಾರ ಸಿಗಲಿದೆ. ವಿನೋದದ ಮಾತುಗಳು ಇತರರಿಗೆ ಅಚ್ಚರಿ ತರಬಹುದು. ಅನಿರೀಕ್ಷಿತವಾಗಿ ಇಂದು ಮನೆಯಲ್ಲಿಯೇ ಕಛೇರಿಯ ಕಾರ್ಯವನ್ನು ಮಾಡಬೇಕಾಗುವುದು. ನಿಮ್ಮ ವ್ಯಕ್ತಿತ್ವವು ಗೌರವವನ್ನು ಹೆಚ್ಚಿಸುವುದು. ಹಳೆಯ ನೆನಪುಗಳು ಮನಸ್ಸನ್ನು ಕಾಡಬಹುದು. ಧ್ಯಾನದಿಂದ ಮನಶ್ಶಾಂತಿ ಲಭ್ಯ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ಸ್ವತಂತ್ರ ಆಲೋಚನೆಯು ನಿಮಗೆ ಉಪಯುಕ್ತವಾಗಲಿದೆ.
ಸಿಂಹ ರಾಶಿ :ನಿಮ್ಮ ನಾಯಕತ್ವ ಗುಣಗಳು ಇಂದು ಬೆಳಕಿಗೆ ಬರುತ್ತವೆ. ಕೆಲಸದ ಸ್ಥಳದಲ್ಲಿ ಗೌರವ ಹಾಗೂ ಪ್ರಶಂಸೆ ದೊರೆಯುವ ಸಾಧ್ಯತೆ ಇದೆ. ಆದರೆ ಹಠದಿಂದ ಸಂಬಂಧಗಳಲ್ಲಿ ದೂರವುಂಟಾಗಬಹುದು. ವಾಹನವನ್ನು ಚಲಿಸುವಾಗ ಯಾವದೇ ಒತ್ತಡವನ್ನು ಇಟ್ಟುಕೊಳ್ಳುವುದು ಬೇಡ. ನೆರ ಮನೆಯವರ ವರ್ತನೆಯಿಂದ ನೀವು ಸಿಟ್ಟಾಗುವಿರಿ. ಅಧ್ಯಾತ್ಮ ಸಾಧನೆಯ ಕಡೆ ನಿಮ್ಮ ಮನಸ್ಸು ಇರಲಿದೆ. ವಾಹನವನ್ನು ಚಲಿಸುವಾಗ ಒತ್ತಡವನ್ನು ಇಟ್ಟುಕೊಳ್ಳುವುದು ಬೇಡ. ಬಂಧುಗಳ ಜೊತೆಗಿನ ಕಹಿ ಅನುಭವವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಬೇಡ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳಬೇಕಾಗುವುದು. ನಿಮಗೆ ಯಾರಾದರೂ ದಾನಕ್ಕೆ ಯೋಗ್ಯರಾದವರು ಅನ್ನಿಸಿದವರಿಗೆ ದಾನವನ್ನು ಮಾಡಿ. ಸಾಲವಾಗಿ ನೀಡಿದ ಹಣವನ್ನು ಮತ್ತೆ ಬರುವುದು ಕಷ್ಟವಾದೀತು. ಸಂಗಾತಿಯನ್ನು ನಿರ್ಲಕ್ಷಿಸಿದಂತೆ ತೋರುವುದು. ಸಹೋದ್ಯೋಗಿಗಳ ಸಹಕಾರ ಸ್ವೀಕರಿಸಿ. ನಿರೀಕ್ಷಿತ ವೇಳೆಗೆ ಸಂತೋಷದ ಸುದ್ದಿ ಕೇಳುವ ಸೂಚನೆ.
ಕನ್ಯಾ ರಾಶಿ :ಪೂರ್ವನಿಯೋಜಿತವಾಗಿ ಕೆಲಸ ಮಾಡಿದರೆ ಉತ್ತಮ ಫಲ ಸಿಗುತ್ತದೆ. ಸಣ್ಣ ಅಡೆತಡೆಗಳು ಬಂದರೂ ನಿಮ್ಮ ವಿವೇಕದಿಂದ ಅವನ್ನು ಜಯಿಸುತ್ತೀರಿ. ಆರೋಗ್ಯ ಸಂಬಂಧಿತ ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಇಂದು ಬಿಡಲಾಗದ ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಬಹುದು. ವಾಹನ ಖರೀದಿಯ ಬಗ್ಗೆ ಮನೆಯಲ್ಲಿ ಪೂರ್ಣ ಬೆಂಬಲ ಇರುವುದು. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಕಳ್ಳರ ಭೀತಿಯು ಇರಲಿದೆ. ದೇಹವು ವಾತದಿಂದ ತೊಂದರೆಗೆ ಸಿಲುಕಬಹುದು. ಧಾರ್ಮಿಕ ಆಚರಣೆಗೆ ಇನ್ನೊಬ್ಬರಿಂದ ಪ್ರೇರಣೆ ಪಡೆಯುವಿರಿ. ಸ್ತ್ರೀಯರು ನಿಮ್ಮನ್ನು ಮೆಚ್ಚಿಕೊಳ್ಳುವರು. ನಿಮ್ಮ ಲಾಭದ ಉದ್ಯಮದ ಮೇಲೆ ಕೆಟ್ಟ ದೃಷ್ಟಿ ಬೀಳಬಹುದು. ಯಾರಿಗಾದರೂ ನಿಮ್ಮಿಂದ ನೆರವಾಗಬಹುದು. ಆರೋಗ್ಯವು ಚೆನ್ನಾಗಿ ಇರಲಿದ್ದು ಮಾನಸಿಕವಾದ ನೆಮ್ಮದಿಯು ಇರುವುದು. ಹಣಕಾಸಿನಲ್ಲಿ ಲೆಕ್ಕಾಚಾರ ಅಗತ್ಯ. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ.
ತುಲಾ ರಾಶಿ :ಉದ್ಯೋಗಿಗಳನ್ನು ಸಮತೋಲನದಿಂದ ಕೊಂಡೊಯ್ಯುವುದು ಇಂದು ಮುಖ್ಯವಾಗಿರುತ್ತದೆ. ಸಂಬಂಧಗಳಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಹೆಚ್ಚಾಗುತ್ತದೆ. ಹಣಕಾಸಿನ ವಿಚಾರದಲ್ಲಿ ತೀರ್ಮಾನ ಮಾಡುವ ಮೊದಲು ಯೋಚನೆ ಅಗತ್ಯ. ನಿಮ್ಮ ಮಕ್ಕಳ ಬಾಂಧವ್ಯದಿಂದೆ ನಿಮಗೆ ಅಗಲಿಕೆ ಕಷ್ಟವಾದೀತು. ಸಹೋದ್ಯೋಗಿಗಳನ್ನು ಅನೌಪಚಾರಿಕವಾಗಿ ಭೇಟಿಯಾಗುವಿರಿ. ಭೂಮಿಯ ವ್ಯವಹಾರವು ನಿಮಗೆ ಹಿನ್ನಡೆಯಾಗಬಹುದು. ಓಡಾಟದಿಂದ ಸಮಯ ವ್ಯರ್ಥ ಮಾಡುವಿರಿ. ಸ್ಥಾನಮಾನವನ್ನು ಕಳೆದುಕೊಳ್ಳುವ ಸನ್ನಿವೇಶವು ಬರಬಹುದು. ನಿಮ್ಮ ತ್ಯಾಗವು ಬಹಳ ದೊಡ್ಡದೆನಿಸಬಹುದು. ಉದ್ಯೋಗವೇ ಸಾಕು ಎಂದು ಅನ್ನಿಸುವಷ್ಟು ಹಿಂಸೆಯನ್ನು ಮನಸ್ಸಿನಲ್ಲಿ ಅನುಭವಿಸುವಿರಿ. ಹೊಸ ಮನೆಗೆ ಸ್ಥಳಾಂತರ ಮಾಡಿಕೊಳ್ಳುವಿರಿ. ಕಲೆ ಅಥವಾ ಸೌಂದರ್ಯ ಸಂಬಂಧಿತ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಸಂಗಾತಿಯು ನಿಮ್ಮಿಂದ ಏನನ್ನೋ ಮುಚ್ಚಿಡುತ್ತಾನೆ ಎಂದು ಅನ್ನಿಸಬಹುದು.
ವೃಶ್ಚಿಕ ರಾಶಿ :ಕೆಲವರ ಮಾತಿನಿಂದ ಆಂತರಿಕ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ರಹಸ್ಯ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಅತಿಯಾಗಿ ಸಂಶಯ ಪಡುವುದು ಸಂಬಂಧಗಳಿಗೆ ಹಾನಿ ಮಾಡಬಹುದು. ಬೇರೆಯವರ ಮುಖಾಂತರ ಪುಣ್ಯಸ್ಥಳಗಳಿಗೆ ಹೋಗಿಬರುವಿರಿ. ನೀವು ನೋಡಲಷ್ಟೇ ಸುಂದರವಗಿದ್ದರೆ ಸಾಲದು. ಎಲ್ಲ ಕಡೆಯಿಂದ ನಿಮಗೆ ಅನುಕೂಲವಾಗಬೇಕು ಎಂದುಕೊಳ್ಳುವುದು ಬೇಡ. ಅನಿಶ್ಚಿತತೆಯು ನಿಮ್ಮ ಮೇಲೆ ದಟ್ಟವಾದ ಪ್ರಭಾವವನ್ನು ಬೀರಬಹುದು. ಅಮೂಲ್ಯವಾದ ಸಂಪತ್ತು ಅಥವಾ ಸಂಬಂಧವನ್ನು ಕಳೆದುಕೊಳ್ಳಬೇಕಸದೀತು. ಕುಟುಂಬದಲ್ಲಿ ಪರಸ್ಪರ ಪ್ರೀತಿಯು ತೋರುವುದು. ಪ್ರಯಾಣದಿಂದ ಪ್ರಯಾಸವಾಗಲಿದೆ. ಹೊಸ ವ್ಯವಹಾರದ ಬಗ್ಗೆ ನಿಮಗೆ ಆಪ್ತರ ಸಲಹೆಯು ಸಿಗಲಿದೆ. ಧಾರ್ಮಿಕ ಅಥವಾ ಆಧ್ಯಾತ್ಮಿಕ ಚಿಂತನೆ ಮನಸ್ಸಿಗೆ ಶಾಂತಿ ನೀಡುತ್ತದೆ. ಆರೋಗ್ಯ ಸ್ಥಿರವಾಗಿರುತ್ತದೆ. ಹಣಕಾಸಿನ ಕಾರಣಕ್ಕೆ ನೀವು ಮೋಸ ಹೋಗಬಹುದು. ಹೊಸ ವಸ್ತ್ರವನ್ನು ಖರೀದಿಸಿ ಧರಿಸುವಿರಿ. ವಿದ್ಯಾರ್ಥಿಗಳಿಂದ ಸಿಗುವ ಯಶಸ್ಸನ್ನು ಹೃದಯದಲ್ಲಿ ಧರಿಸಿ.
ಧನು ರಾಶಿ :ನಿಮ್ಮ ಧೈರ್ಯ ಮತ್ತು ಉತ್ಸಾಹಕ್ಕೆ ಯಶಸ್ಸಿನ ದಾರಿಗೆ ಕರೆದೊಯ್ಯುವ ಸಾಮರ್ಥ್ಯ ಇರಲಿದೆ. ಆದರೆ ಮಾತಿನಲ್ಲಿ ಮಿತಿಯಿರಲಿ. ಸ್ನೇಹಿತರ ಸಹಕಾರದಿಂದ ಕೆಲಸಗಳು ಸುಗಮವಾಗುತ್ತವೆ. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವಿರಲಿದೆ. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ವಾಹನದಲ್ಲಿ ಸಣ್ಣ ಅಪಘಾತವಾಗಲಿದೆ. ಆಕಸ್ಮಿಕವಾಗಿ ವಿವಾಹ ಮಾತುಕತೆಗೆ ತಯಾರಿಯಾಗಬಹುದು. ಇನ್ನೊಬ್ಬರ ಬಗ್ಗೆ ದೋಷವನ್ನೇ ಹುಡುಕುತ್ತ ಕುಳಿತುಕೊಳ್ಳುವ ಬದಲು ಗುಣಗಳನ್ನು ಸ್ವೀಕರಿಸಿ ಸಖ್ಯ ಮಾಡಿಕೊಳ್ಳುವುದು ಉತ್ತಮ. ಉಪಕಾರದ ಸ್ಮರಣೆಯನ್ನು ನೀವು ಮಾಡಿಕೊಳ್ಳುವುದಿಲ್ಲ. ಮುಂಗೋಪವು ಸಂಬಂಧವನ್ನು ಹಾಳು ಮಾಡುವುದು. ಹೊಸ ಅವಕಾಶಗಳು ನಿಮ್ಮ ದಿಕ್ಕುಗಳು ನಿಮ್ಮ ದಿಕ್ಕನ್ನು ಬದಲಿಸಬಹುದು. ಹೊಸ ಕಲಿಕೆಯ ಸಾಧ್ಯತೆ ಇದೆ. ಸಂಗಾತಿಯ ಒರಟಾದ ಮಾತಿಗೆ ಉತ್ತರಕೊಡಲು ಹೋಗುವುದು ಬೇಡ. ನೀವು ವಹಿಸಿಕೊಂಡ ಕಾಮಗಾರಿಯ ಬಗ್ಗೆ ಪೂರ್ಣ ವಿಶ್ವಾಸ ಬರದು.
ಮಕರ ರಾಶಿ :ಹೊಣೆಗಾರಿಕೆಗಳು ಹೆಚ್ಚಾಗುವ ದಿನ. ಶ್ರಮ ಹೆಚ್ಚು ಇದ್ದರೂ ಅದರ ಫಲ ಖಂಡಿತ ಸಿಗುತ್ತದೆ. ಹಿರಿಯರ ಸಲಹೆ ಅನುಕೂಲಕರವಾಗಿರುತ್ತದೆ. ಬೇಕೆಂದೇ ಶಸ್ತ್ರಗಳಿಂದ ಘಾಸಿ ಮಾಡಿಕೊಳ್ಳುವಿರಿ. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವಿರು. ಸರಳವಾದ ನಿಮ್ಮ ವ್ಯಕ್ತಿತ್ವಕ್ಕೆ ಯಾರೂ ಮನಸೋಲುವರು. ಕರ್ತವ್ಯವನ್ನು ನಿಷ್ಠೆಯಿಂದ ಮಾಡುವಿರಿ. ಪ್ರೀತಿಗೆ ಮಿತ್ರರಿಂದ ಸಹಕಾರವು ಇರುವುದು. ಸ್ನೇಹ ಸಂಬಂಧವನ್ನು ಹೆಚ್ಚು ಆಪ್ತ ಎನಿಸುವುದು. ಮೋಹದಿಂದ ಸತ್ಯವನ್ನು ಅರಿತುಕೊಳ್ಳಲಾಗದು. ಅಪೇಕ್ಷಿಸದಿದ್ದರೂ ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗುವುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ದುರಭ್ಯಾಸವು ನಿಮಗೆ ಬೇಡವೆನಿಸುವುದು. ಸಂಗಾತಿಯ ಮೇಲೇ ಪ್ರೀತಿಯು ಹೆಚ್ಚಾಗಿ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ನಿಮಗೆ ಏಕಾಂಗಿಯಂತೆ ಅನ್ನಿಸಬಹುದು. ಹಣಕಾಸಿನ ವಿಷಯದಲ್ಲಿ ನಿಧಾನ ನಿರ್ಧಾರ ಉತ್ತಮ. ಆರೋಗ್ಯದ ಕಡೆ ಸ್ವಲ್ಪ ಗಮನ ನೀಡಿದರೆ ದಿನ ಸುಗಮವಾಗಿ ಸಾಗುತ್ತದೆ.
ಕುಂಭ ರಾಶಿ :ವಿಭಿನ್ನ ಚಿಂತನೆಗಳಿಗೆ ಬೆಂಬಲ ದೊರೆಯುತ್ತದೆ. ಸ್ನೇಹ ವಲಯ ವಿಸ್ತಾರವಾಗುವ ಸಾಧ್ಯತೆ ಇದೆ. ತಾಂತ್ರಿಕ ಅಥವಾ ಸೃಜನಶೀಲ ಕಾರ್ಯಗಳಲ್ಲಿ ಯಶಸ್ಸು. ಇಂದು ಎಲ್ಲೇ ಇದ್ದರೂ ಕಾರ್ಯದ ಪ್ರಗತಿಯನ್ನು ಪಡೆದುಕೊಳ್ಳುವಿರಿ. ಒಂದೇ ಉದ್ದೇಶ ಹೊಂದಿದ ಹಲವರನ್ನು ಭೇಟಿ ಮಾಡುವಿರಿ. ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಆಗದು. ಕೆಲವು ಸನ್ನಿವೇಶವು ನಿಮಗೆ ಇಷ್ಟವಾಗದು. ಅದರೂ ಅನಿವಾರ್ಯ ಎನಿಸೀತು. ಕೋಪವನ್ನು ಬಿಟ್ಟೆನೆಂದರೂ ಮತ್ತೆ ಹೇಗಾದರೂ ನಿಮ್ಮ ಬಳಿ ಬರುವುದು. ಯಾವುದಾದರೂ ರೀತಿಯಲ್ಲಿ ಮತ್ತೆ ನಿಮ್ಮನ್ನು ಸೇರಿಕೊಳ್ಳುವುದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಸಮಾಧಾನದ ಚಿತ್ತವು ಅನೇಕ ವಿಚಾರಕ್ಕೆ ಪೂರಕ. ನಿದ್ರೆಯ ಕೊರತೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ. ಸಮಯ ನಿರ್ವಹಣೆ ಮುಖ್ಯ. ಸುಮ್ಮನೇ ವಾಗ್ವಾದವನ್ನು ಮಾಡಲು ಹೋಗಿ ಸಮಯವನ್ನು ಹಾಗೂ ಇತರರ ಸಮಯವನ್ನೂ ಹಾಳು ಮಾಡುವಿರಿ. ಹಲವರ ಕಾರಣದಿಂದ ನಿಮ್ಮ ಗುರಿಯು ಬದಲಾಗಬಹುದು. ಹೃದಯ ವೈಶಾಲ್ಯವನ್ನು ತೋರಿಸುವಿರಿ.
ಮೀನ ರಾಶಿ :ಸಹಾನುಭೂತಿ ಇಂದು ನಿಮ್ಮ ಪ್ರಮುಖ ಗುಣವಾಗಿರುತ್ತದೆ. ಕಲಾತ್ಮಕ ಅಥವಾ ಸೃಜನಶೀಲ ಕಾರ್ಯಗಳಲ್ಲಿ ಮನಸ್ಸು ತೊಡಗುತ್ತದೆ. ನಿಮ್ಮನ್ನು ಕಂಡರೆ ಆಗದವರ ಎದುರೇ ನೀವು ಗರ್ವದಿಂದ ಇರುವಿರಿ. ನೀವು ಇಂದು ಅಕಾರಣವಾಗಿ ಚಿಂತೆ ಮಾಡುವಿರಿ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದ್ದು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಮಾಡಲು ಸರಿಯಾದ ವ್ಯಕ್ತಿಗಳು ಸಿಗುವರು. ಕಾರ್ಯದಲ್ಲಿ ಶ್ರದ್ಧೆಯಿರುವ ಕಾರಣ ಅನ್ಯ ಆಲೋಚನೆಯನ್ನು ಮಾಡಲಾರಿರಿ. ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಹರಡುವುದು. ಇಂದು ಸೌಂದರ್ಯಕ್ಕೆ ಬೆಲೆ ಕೊಡುವಿರಿ. ನಿಮ್ಮಿಂದ ಉಪಕಾರವನ್ನು ಪಡೆದವರೇ ನಿಮ್ಮ ಶತ್ರುಗಳಾದಾರು. ಸಂಬಂಧಗಳಲ್ಲಿ ಭಾವನಾತ್ಮಕ ಬಾಂಧವ್ಯ ಗಟ್ಟಿಯಾಗುತ್ತದೆ. ಅನಾವಶ್ಯಕ ಚಿಂತೆ ಬಿಡಿ. ಆಧ್ಯಾತ್ಮಿಕ ಚಿಂತನೆ ಮನಸ್ಸಿಗೆ ಆಳವಾದ ಶಾಂತಿ ನೀಡುತ್ತದೆ. ನಿಮ್ಮ ಬಗ್ಗೆ ನಿಮಗೇ ನಂಬಿಕೆ ಕಡಿಮೆ ಆಗಬಹುದು. ಮುದುವಾದ ಮಾತು ಕೃತಕತೆಯಂತೆ ತೋರಬಹುದು. ನೀವೊಬ್ಬ ಸುಳ್ಳುಗಾರರೆನ್ನುವಂತೆ ಇತರರು ಬಿಂಬಿಸುವರು. ಬಂಧುಗಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.