Gold Rates: ಚಿನ್ನ, ಬೆಳ್ಳಿ ಬೆಲೆ ಮತ್ತೂ ಕುಸಿತ; ಇಲ್ಲಿದೆ ದರಪಟ್ಟಿ

Gold Rates: ಚಿನ್ನ, ಬೆಳ್ಳಿ ಬೆಲೆ ಮತ್ತೂ ಕುಸಿತ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 15: ಇರಾನ್ ಯುದ್ಧದ ಪರಿಣಾಮವೆಂಬಂತೆ ಚಿನ್ನದ ಬೆಲೆ (Gold Rates) ಸತತವಾಗಿ ಇಳಿಯುತ್ತಿದೆ. ಬೆಳ್ಳಿ ಬೆಲೆಯೂ ತಗ್ಗುತ್ತಿದೆ. ಚಿನ್ನದ ಬೆಲೆ ಕಳೆದ ಈ ತಿಂಗಳು ಒಂದು ಗ್ರಾಮ್​​ಗೆ 1,230 ರೂನಷ್ಟು ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ 15,865 ರೂನಿಂದ 14,635 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 16,000 ರೂ ಗಡಿಯೊಳಗೆ ಬಂದಿದೆ. ಮಾರ್ಚ್ ಆರಂಭದಲ್ಲಿ ಬೆಳ್ಳಿ ಬೆಲೆ ಗ್ರಾಮ್​ಗೆ 315 ರೂ ಇತ್ತು. ಎರಡು ವಾರದಲ್ಲಿ ಬೆಲೆ ಗ್ರಾಮ್​​ಗೆ ಬರೋಬ್ಬರಿ 40 ರೂ ತಗ್ಗಿದೆ. ವಾರಾಂತ್ಯದಲ್ಲಿ 5-10 ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,46,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,59,660 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,46,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 15ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,966 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,635 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,974 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,966 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,635 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,635 ರೂ
  • ಚೆನ್ನೈ: 14,760 ರೂ
  • ಮುಂಬೈ: 14,635 ರೂ
  • ದೆಹಲಿ: 14,650 ರೂ
  • ಕೋಲ್ಕತಾ: 14,635 ರೂ
  • ಕೇರಳ: 14,635 ರೂ
  • ಅಹ್ಮದಾಬಾದ್: 14,640 ರೂ
  • ಜೈಪುರ್: 14,650 ರೂ
  • ಲಕ್ನೋ: 14,650 ರೂ
  • ಭುವನೇಶ್ವರ್: 14,635 ರೂ

ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್; ಫಲಾನುಭವಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ; ನಿಮಗೆ ಹಣ ಬಂದಿಲ್ಲದಿದ್ದರೆ ಏನು ಮಾಡಬೇಕು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 614 ರಿಂಗಿಟ್ (14,423 ರುಪಾಯಿ)
  • ದುಬೈ: 561.75 ಡಿರಾಮ್ (14,155 ರುಪಾಯಿ)
  • ಅಮೆರಿಕ: 158 ಡಾಲರ್ (14,624 ರುಪಾಯಿ)
  • ಸಿಂಗಾಪುರ: 200.80 ಸಿಂಗಾಪುರ್ ಡಾಲರ್ (14,478 ರುಪಾಯಿ)
  • ಕತಾರ್: 561 ಕತಾರಿ ರಿಯಾಲ್ (14,243 ರೂ)
  • ಸೌದಿ ಅರೇಬಿಯಾ: 571 ಸೌದಿ ರಿಯಾಲ್ (14,084 ರುಪಾಯಿ)
  • ಓಮನ್: 59.65 ಒಮಾನಿ ರಿಯಾಲ್ (14,342 ರುಪಾಯಿ)
  • ಕುವೇತ್: 46.01 ಕುವೇತಿ ದಿನಾರ್ (13,894 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 275 ರೂ
  • ಚೆನ್ನೈ: 280 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 280 ರೂ
  • ಅಹ್ಮದಾಬಾದ್: 275 ರೂ
  • ಜೈಪುರ್: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 280 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೆಗ್ಗೆರೆ ಬಳಿ ಕಾರು-ಲಾರಿ ಭೀಕರ ಅಪಘಾತ; ಮೂವರು ರಿಸರ್ವ್ ಸಬ್‌ ಇನ್ಸ್‌ಪೆಕ್ಟರ್‌ಗಳು ಸ್ಥಳದಲ್ಲೇ ಸಾವು!

ಚಿತ್ರದುರ್ಗ, ಮಾರ್ಚ್​ 15: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ರಿಸರ್ವ್ ಸಬ್‌ ಇನ್ಸ್‌ಪೆಕ್ಟರ್‌ಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ರಿಸರ್ವ್ ಸಬ್‌ ಇನ್ಸ್‌ಪೆಕ್ಟರ್‌ಗಳು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ವೇಳೆ ಘಟನೆ

ಮೃತರನ್ನು ಮಂಜುನಾಥ್, ಅಂಬರೀಷ್ ಮತ್ತು ಸಚಿನ್ ಎಂದು ಗುರುತಿಸಲಾಗಿದೆ. ಇದೇ ವೇಳೆ ಕಾರಿನಲ್ಲಿ ಇದ್ದ ಪಿಎಸ್‌ಐ ಈಶ್ವರ್ ಹಾಗೂ ರಿಸರ್ವ್ ಸಬ್‌ ಇನ್ಸ್‌ಪೆಕ್ಟರ್ ಮಹಾಂತೇಶ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದು ಐಮಂಗಲ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇಂದು ಕೇರಳ, ಬಂಗಾಳ, ತಮಿಳುನಾಡು, ಅಸ್ಸಾಂ, ಪುದುಚೇರಿ ಚುನಾವಣಾ ವೇಳಾಪಟ್ಟಿ ಘೋಷಣೆ ಸಾಧ್ಯತೆ

ನವದೆಹಲಿ, ಮಾರ್ಚ್​ 15:ಭಾರತ ಚುನಾವಣಾ ಆಯೋಗವು (ECI) ಇಂದು(ಮಾರ್ಚ್​ 15) ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ(Assembly Election)ಯ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.ಇದು ದೇಶಾದ್ಯಂತ ಪ್ರಮುಖ ಚುನಾವಣಾ ಸ್ಪರ್ಧೆಗೆ ವೇದಿಕೆಯನ್ನು ಸಿದ್ಧಪಡಿಸುತ್ತದೆ. ಚುನಾವಣಾ ಆಯೋಗವು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿಯನ್ನು ನಡೆಸಲಿದೆ.

ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಮೇ ತಿಂಗಳ ಆರಂಭದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ, ಏಕೆಂದರೆ ಆ ವೇಳೆಗೆ ಹಲವಾರು ರಾಜ್ಯಗಳ ವಿಧಾನಸಭೆಗಳ ಅವಧಿ ಮುಕ್ತಾಯಗೊಳ್ಳಲಿದೆ.

ಚುನಾವಣಾ ಸಿದ್ಧತೆಯನ್ನು ಪರಿಶೀಲಿಸುವುದು, ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವುದು ಮತ್ತು ಭದ್ರತಾ ವ್ಯವಸ್ಥೆಗಳನ್ನು ನಿರ್ಣಯಿಸುವುದು ಸೇರಿದಂತೆ ಪ್ರಮುಖ ಸಿದ್ಧತೆಗಳನ್ನು ಚುನಾವಣಾ ಸಂಸ್ಥೆ ಈಗಾಗಲೇ ಪೂರ್ಣಗೊಳಿಸಿದೆ. ಪಶ್ಚಿಮ ಬಂಗಾಳಕ್ಕೆ ವಿಶೇಷ ಗಮನ ನೀಡಲಾಗಿದ್ದು, ಸುಗಮ ಮತದಾನವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಪಡೆಗಳನ್ನು ವ್ಯಾಪಕವಾಗಿ ನಿಯೋಜಿಸುವ ನಿರೀಕ್ಷೆಯಿದೆ.ಚುನಾವಣಾ ದಿನಾಂಕಗಳನ್ನು ಘೋಷಿಸಿದ ನಂತರ, ಮಾದರಿ ನೀತಿ ಸಂಹಿತೆ ರಾಜ್ಯಗಳಾದ್ಯಂತ ತಕ್ಷಣದಿಂದ ಜಾರಿಗೆ ಬರುತ್ತದೆ.

ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳ ಅವಧಿ ಮೇ ಮತ್ತು ಜೂನ್ ನಡುವೆ ಕೊನೆಗೊಳ್ಳುತ್ತದೆ. ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 7 ರಂದು, ತಮಿಳುನಾಡು ಮೇ 10 ರಂದು, ಅಸ್ಸಾಂ ಮೇ 20 ರಂದು, ಕೇರಳ ಮೇ 23 ರಂದು ಮತ್ತು ಪುದುಚೇರಿಯ ವಿಧಾನಸಭೆಯ ಅವಧಿ ಜೂನ್ 15 ರಂದು ಕೊನೆಗೊಳ್ಳುತ್ತದೆ.

ಮತ್ತಷ್ಟು ಓದಿ: ಚುನಾವಣಾ ಆಯೋಗ ಮಾರ್ಚ್​ 16ರಂದು ಪಶ್ಚಿಮ ಬಂಗಾಳ ಚುನಾವಣಾ ದಿನಾಂಕ ಘೋಷಿಸುವ ಸಾಧ್ಯತೆ

ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಚುನಾವಣೆಗಳನ್ನು ಸಾಮಾನ್ಯವಾಗಿ ಒಂದೇ ಹಂತದಲ್ಲಿ ನಡೆಸಲಾಗುತ್ತದೆ, ಆದರೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಅವುಗಳ ಗಾತ್ರ ಮತ್ತು ಭದ್ರತಾ ಪರಿಗಣನೆಗಳಿಂದಾಗಿ ಬಹು ಹಂತದ ಮತದಾನ ನಡೆಯುತ್ತದೆ. ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಬಿಗ್ ಬಾಸ್ ಖ್ಯಾತಿಯ ಅನುರಾಗ್ ದೊಭಾಲ್ ಸ್ಥಿತಿ ಗಂಭೀರ: ಹೆಚ್ಚಿದೆ ಶ್ವಾಸಕೋಶದ ಸೋಂಕು

ಖ್ಯಾತ ಯೂಟ್ಯೂಬರ್ ಹಾಗೂ ಬಿಗ್ ಬಾಸ್ 17ರ ಸ್ಪರ್ಧಿ ಅನುರಾಗ್ ದೊಭಾಲ್ (Anurag Dobhal) ಅಲಿಯಾಸ್ ಯುಕೆ 07 ರೈಡರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇತ್ತೀಚೆಗಷ್ಟೇ ಅವರನ್ನು ಐಸಿಯುನಿಂದ ಹೊರತಂದು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ಈಗ ಅವರನ್ನು ಮತ್ತೆ ಐಸಿಯುಗೆ (ICU) ದಾಖಲಿಸಲಾಗಿದೆ. ಇತ್ತೀಚೆಗಷ್ಟೇ ಅಪಘಾತಕ್ಕೀಡಾಗಿದ್ದ ಅವರ ಶ್ವಾಸಕೋಶದಲ್ಲಿ ತೀವ್ರ ಸೋಂಕು ಕಾಣಿಸಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಅನುರಾಗ್ ಅವರ ಮ್ಯಾನೇಜರ್ ರೋಹಿತ್ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ (Anurag Dobhal Health Update) ಹಂಚಿಕೊಂಡಿದ್ದಾರೆ.

‘ಇಂದು ಬೆಳಿಗ್ಗೆಯವರೆಗೆ ಅನುರಾಗ್ ಅವರ ಸ್ಥಿತಿ ಸ್ಥಿರವಾಗಿತ್ತು. ಆದರೆ ಅಪಘಾತದ ಸಮಯದಲ್ಲಿ ಅವರ ಶ್ವಾಸಕೋಶಕ್ಕೆ ಪೆಟ್ಟಾಗಿದ್ದರಿಂದ, ಈಗ ಅಲ್ಲಿ ತೀವ್ರವಾದ ಸೋಂಕು ಉಂಟಾಗಿದೆ. ಅವರಿಗೆ ತೀವ್ರವಾದ ನ್ಯುಮೋನಿಯಾ ಕಾಣಿಸಿಕೊಂಡಿದೆ. ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ’ ಎಂದು ರೋಹಿತ್ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಐಸಿಯುನಿಂದ ಹೊರಗೆ ಬಂದಿದ್ದ ಅನುರಾಗ್ ದೊಭಾಲ್ ಅವರ ಫೋಟೋವನ್ನು ಮ್ಯಾನೇಜರ್ ರೋಹಿತ್ ಪಾಂಡೆ ಪೋಸ್ಟ್ ಮಾಡಿದ್ದರು. ಆ ಫೋಟೋದಲ್ಲಿ ಅವರು ನಗುಮುಖದಿಂದ ವಿಕ್ಟರಿ ಸಿಂಬಲ್ ತೋರಿಸುತ್ತಿದ್ದು ನೋಡಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಹಠಾತ್ತನೆ ಆರೋಗ್ಯ ಹದಗೆಟ್ಟಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ.

ಅಪಘಾತದ ಹಿನ್ನೆಲೆ: ಕೆಲವು ದಿನಗಳ ಹಿಂದೆ ಅನುರಾಗ್ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಕಾರು ಅಪಘಾತ ಸಂಭವಿಸಿತ್ತು. ಅದಕ್ಕೂ ಮುನ್ನ ಅವರು ಒಂದು ವಿಡಿಯೋ ಹಂಚಿಕೊಂಡು, ತಮ್ಮ ಕುಟುಂಬದವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ರಿತಿಕಾ ಅವರೊಂದಿಗಿನ ತಮ್ಮ ಅಂತರ್​ ಜಾತಿ ವಿವಾಹದ ವಿಚಾರವಾಗಿ ಪೋಷಕರು ಮತ್ತು ಸಹೋದರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ: ಲೈವ್ ಬಂದು ಸಾಯಲು ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ; ಪರಿಸ್ಥಿತಿ ಚಿಂತಾಜನಕ

ಕುಟುಂಬದಲ್ಲಿ ಕಿರಿಕ್ ಮತ್ತು ಬೆದರಿಕೆ: ಅನುರಾಗ್ ಅವರ ಸಹೋದರ ಕಲಮ್ ಪ್ರಕಾರ, ಅನುರಾಗ್ ಅಭಿಮಾನಿಗಳು ತಮ್ಮ ಮನೆಯ ಮುಂದೆ ಜಮಾಯಿಸಿ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮ್ಯಾನೇಜರ್ ರೋಹಿತ್, ‘ನಮಗೆ ಈಗ ಅನುರಾಗ್ ಅವರ ಆರೋಗ್ಯ ಮತ್ತು 9 ತಿಂಗಳ ಗರ್ಭಿಣಿಯಾಗಿರುವ ಅವರ ಪತ್ನಿ ರಿತಿಕಾ ಅವರ ಕ್ಷೇಮವೇ ಮುಖ್ಯ. ಅನುರಾಗ್ ಚೇತರಿಸಿಕೊಂಡ ನಂತರವೇ ನಾವು ಈ ಬಗ್ಗೆ ಅಧಿಕೃತ ಹೇಳಿಕೆ ನೀಡುತ್ತೇವೆ’ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐಪಿಎಲ್​ನಿಂದ ಆಫರ್… ಪಿಎಸ್​ಎಲ್​ಗೆ ಕೈಕೊಟ್ಟ ವಿಂಡೀಸ್ ಆಟಗಾರ

Source link

ಕ್ರಿಕೆಟ್​ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ: ಅಮಿರ್ ಆಕ್ರೋಶ

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ (13 ಮಾರ್ಚ್ 2026) ನಡೆದ ಸಲ್ಮಾನ್ ಅಲಿ ಅಘಾ ಅವರ ವಿವಾದಾತ್ಮಕ ರನ್-ಔಟ್ ಬಗ್ಗೆ ಪಾಕ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮಿರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಢಾಕಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊಹಮ್ಮದ್ ರಿಝ್ವಾನ್ ಹೊಡೆದ ಚೆಂಡನ್ನು ತಡೆಯಲು ಬೌಲರ್ ಮೆಹದಿ ಹಸನ್ ಮಿರಾಝ್ ಪ್ರಯತ್ನಿಸಿದರು. ಈ ವೇಳೆ ಕ್ರೀಸ್​ನಿಂದ ಹೊರಗಿದ್ದ ಅಘಾ ಚೆಂಡು ಬೌಲರ್‌ಗೆ ನೀಡಲು ಮುಂದಾಗಿದ್ದರು.

ಸಲ್ಮಾನ್ ಅಲಿ ಅಘಾ ಅವರು ಚೆಂಡನ್ನು ಎತ್ತಿ ಕೊಡಲು ಮುಂದಾದಾಗ, ಮೆಹದಿ ಹಸನ್ ಅವರು ತಕ್ಷಣವೇ ಚೆಂಡನ್ನು ಎತ್ತಿ ಸ್ಟಂಪ್‌ಗಳಿಗೆ ಎಸೆದರು. ಅಘಾ ಕ್ರೀಸ್‌ನಿಂದ ಹೊರಗಿದ್ದ ಕಾರಣ ಮೂರನೇ ಅಂಪೈರ್ ಅವರನ್ನು ‘ಔಟ್’ ಎಂದು ಘೋಷಿಸಿದರು. ಅಂಪೈರ್ ತೀರ್ಪಿನಿಂದ ಕೆರಳಿದ ಸಲ್ಮಾನ್ ಅಲಿ ಅಘಾ ಕ್ರೀಸ್‌ನಲ್ಲೇ ತಮ್ಮ ಹೆಲ್ಮೆಟ್ ಮತ್ತು ಗ್ಲೌಸ್‌ಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದರು.

ಇದೀಗ ಈ ಘಟನೆ ಕುರಿತು ಮೊಹಮ್ಮದ್ ಅಮಿರ್ ಮಾತನಾಡಿದ್ದು, ಕ್ರಿಕೆಟ್​ನಲ್ಲಿ ಅಂಪೈರಿಂಗ್ ಮಟ್ಟ ದಿನೇ ದಿನೇ ಕುಸಿಯುತ್ತಿದೆ ಎಂದು ದೂರಿದ್ದಾರೆ. ಮೆಹದಿ ಹಸನ್ ಅವರು ಅಘಾ ಕ್ರೀಸ್‌ಗೆ ಮರಳದಂತೆ ಅಡ್ಡಿಪಡಿಸಿದರು. ಇದನ್ನು ಅಂಪೈರ್‌ಗಳು ಗಮನಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ರನ್-ಔಟ್ ನಿಯಮದ ಪ್ರಕಾರ ಸರಿ ಇರಬಹುದು. ಆದರೆ ಕ್ರಿಕೆಟ್‌ನ ‘ಕ್ರೀಡಾ ಸ್ಫೂರ್ತಿ’ಯ  ದೃಷ್ಟಿಯಿಂದ ಇದು ತಪ್ಪು. ಬಾಂಗ್ಲಾದೇಶ ತಂಡವು ಸೌಜನ್ಯ ಮೆರೆಯಬಹುದಿತ್ತು ಎಂದು ಅಮಿರ್ ಹೇಳಿದ್ದಾರೆ. ಅಘಾ ಅವರನ್ನು ಬೌಲರ್ ತಡೆದಿದ್ದರಿಂದ, ಇದರ ಲಾಭವನ್ನು  ಬ್ಯಾಟರ್‌ಗೆ ನೀಡಬೇಕಿತ್ತು. ಆದರೆ ಇದ್ಯಾವುದನ್ನೂ ಅಂಪೈರ್ ಗಮನಿಸಲೇ ಇಲ್ಲ.

ಕ್ರಿಕೆಟ್ ಎಂಬುದು ಜಂಟಲ್​ಮ್ಯಾನ್ ಗೇಮ್. ಆದರೆ ಇಲ್ಲಿ ಬಾಂಗ್ಲಾದೇಶ್ ಆಟಗಾರ ಮೆಹದಿ ಹಸನ್ ಮಿರಾಝ್ ಕ್ರೀಡಾ ಸ್ಫೂರ್ತಿಯನ್ನೇ ಮರೆತಿದ್ದಾರೆ. ಅವರು ಕ್ರಿಕೆಟ್​ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ ಎಂದು ಮೊಹಮ್ಮದ್ ಅಮಿರ್ ಆಕ್ರೋಶ ಹೊರಹಾಕಿದ್ದಾರೆ.

 

Source link

ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ

ನಟ ಧ್ರುವ ಸರ್ಜಾ ಅವರು ‘ಕೆಡಿ’ ಸಿನಿಮಾದ (KD Movie) ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಹೊಸ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಅದರಲ್ಲಿ ಭಾಗಿಯಾದ ಧ್ರುವ ಸರ್ಜಾ (Dhruva Sarja) ಅವರಿಗೆ ಹಲವು ಪ್ರಶ್ನೆಗಳು ಎದುರಾದವು. ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುವುದು ಯಾಕೆ ಎಂಬುದನ್ನು ಕೂಡ ಅವರ ವಿವರಿಸಿದರು. ‘ಈ ಗೆಜೆಟ್ಸ್ ಯುಗದಲ್ಲಿ ಪರಸ್ಪರ ಭೇಟಿ ಆಗುವುದೇ ಕಡಿಮೆ ಆಗಿದೆ. ಹಾಗಾಗಿ ನನ್ನನ್ನು ಇಷ್ಟಪಡುವ ಜನರನ್ನು ನಾನು ಪ್ರತಿ ಭಾನುವಾರ ಭೇಟಿ ಆಗಲು ಇಷ್ಟಪಡುತ್ತೇನೆ. ಅವರು ತಮ್ಮ ಕುಟುಂಬವನ್ನು ಬಿಟ್ಟು ನಮಗೆ ಟೈಮ್ ಕೊಡುತ್ತಿದ್ದಾರೆ ಎಂದರೆ ಬಹಳ ಖುಷಿ ಆಗುತ್ತದೆ. ಇನ್ನೊಂದು ರೀತಿ ಯೋಚನೆ ಮಾಡುತ್ತೇನೆ, ಒಂದು ಭಾನುವಾರ ಎಲ್ಲರೂ ಬರೋದು ನಿಲ್ಲಿಸಿಬಿಟ್ಟರೆ ಹೆಂಗೆ? ಅಂತಹ ದಿನ ಯಾವತ್ತೂ ಬರಬಾರದು ಅಂತ ಪ್ರತಿ ದಿನ ಕಷ್ಟಪಡುತ್ತಿದ್ದೇನೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐಪಿಎಲ್​ ಆರಂಭಕ್ಕೂ ಮುನ್ನವೇ ಹೊಸ ಕಂಡೀಷನ್ ಹಾಕಿದ ರೋಹಿತ್ ಶರ್ಮಾ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ಉಳಿದಿರುವುದು ದಿನಗಳು ಮಾತ್ರ. ಇತ್ತ ಎಲ್ಲಾ ಫ್ರಾಂಚೈಸಿಗಳು ಪ್ರೀ ಸೀಸನ್ ಕ್ಯಾಂಪ್ ಶುರು ಮಾಡಿದೆ. ಈ ಕ್ಯಾಂಪ್​ಗೆ ಸೇರುವ ಮುನ್ನವೇ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್​ಗೆ ಹೊಸ ಕಂಡೀಷನ್ ಹಾಕಿದ್ದಾರೆ ಎಂದು ವರದಿಯಾಗಿದೆ. ಆ ಕಂಡೀಷನ್ ಏನೆಂದರೆ ‘ ನೋ ಇಂಪ್ಯಾಕ್ಟ್ ಪ್ಲೇಯರ್’.

ಅಂದರೆ ಐಪಿಎಲ್ 2026 ರಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಆಡಲು ರೋಹಿತ್ ಶರ್ಮಾ ನಿರಾಕರಿಸಿದ್ದಾರೆ. ಈ ಬಗ್ಗೆ ಅವರು ಮುಂಬೈ ಇಂಡಿಯನ್ಸ್  ಮ್ಯಾನೇಜ್‌ಮೆಂಟ್‌ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

ಮುಂಬರುವ ಐಪಿಎಲ್​ನಲ್ಲಿ  ಕೇವಲ ಬ್ಯಾಟಿಂಗ್‌ಗೆ ಸೀಮಿತವಾಗದೆ, ಫೀಲ್ಡಿಂಗ್ ಒಳಗೊಂಡಂತೆ ಪೂರ್ಣ 40 ಓವರ್‌ಗಳ ಕಾಲ ಮೈದಾನದಲ್ಲಿ ಇರಲು ಬಯಸುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ. ಐಪಿಎಲ್ 2025 ರಲ್ಲಿ ಹಿಟ್​ಮ್ಯಾನ್ ಅವರನ್ನು  ಹೆಚ್ಚಾಗಿ ಸಬ್‌ಸ್ಟಿಟ್ಯೂಟ್ ಆಗಿ ಬಳಸಲಾಗಿತ್ತು, ಇದು ಅವರಿಗೆ ಸರಿ ಎನಿಸಿಲ್ಲ ಎನ್ನಲಾಗಿದೆ.

ಈ ಸೀಸನ್‌ಗಾಗಿ ರೋಹಿತ್ ಶರ್ಮಾ ಸುಮಾರು 11 ಕೆಜಿ ತೂಕ ಇಳಿಸಿಕೊಂಡು ಅತ್ಯಂತ ಫಿಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ಪಂದ್ಯ ಆಡುವ ಸಾಮರ್ಥ್ಯ ನನಗಿದೆ ಎಂದು ಅವರು ಈ ಮೂಲಕ ಸಾಬೀತುಪಡಿಸಿದ್ದಾರೆ. ಹೀಗಾಗಿ ಟೂರ್ನಿ ಆರಂಭಕ್ಕೂ ಮುನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸದಂತೆ ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಮೈದಾನದಲ್ಲಿ ಹಿರಿಯ ಆಟಗಾರನಾಗಿ ಸಲಹೆ ನೀಡಲು ರೋಹಿತ್ ಪೂರ್ಣ ಸಮಯ ಮೈದಾನದಲ್ಲಿ ಇರುವುದು ತಂಡಕ್ಕೆ ಪ್ಲಸ್ ಆಗಲಿದೆ ಎಂದು ಹರ್ಭಜನ್ ಸಿಂಗ್ ಅವರಂತಹ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಇತ್ತ ರೋಹಿತ್ ಶರ್ಮಾ ಕೇವಲ ಬ್ಯಾಟರ್. ಅವರ ವಯಸ್ಸು 38 ವರ್ಷ. ಹೀಗಾಗಿಯೇ ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಂಡಿತ್ತು. ಇದೀಗ ಹಿಟ್​ಮ್ಯಾನ್ ತಾನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲು ಇಚ್ಛಿಸುತ್ತಿಲ್ಲ ಎಂದಿರುವುದು ಮುಂಬೈ ಇಂಡಿಯನ್ಸ್ ತಂಡದ ಚಿಂತೆಗೆ ಕಾರಣವಾಗಿದೆ.

ಏಕೆಂದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಹುತೇಕ ಆಲ್​ರೌಂಡರ್​ಗಳಿದ್ದಾರೆ. ಇಲ್ಲಾ ಯಂಗ್​ ಸ್ಟರ್ ಪ್ಲೇಯರ್ ಗಳಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಇತರೆ ಆಯ್ಕೆಗಳತ್ತ ಮುಖ ಮಾಡಬೇಕಾಗುತ್ತದೆ. ಇದರಿಂದ ಯುವ ಆಟಗಾರರನ್ನು ಕೈ ಬಿಡಬೇಕಾದ ಅನಿವಾರ್ಯತೆ ಮುಂಬೈ ಇಂಡಿಯನ್ಸ್​ಗೆ ಎದುರಾಗಲಿದೆ.

ನಿಯಮದ ಬಗ್ಗೆ ಅಸಮಾಧಾನ:

ರೋಹಿತ್ ಶರ್ಮಾ ಮೊದಲಿನಿಂದಲೂ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವನ್ನು ವಿರೋಧಿಸುತ್ತಾ ಬಂದಿದ್ದಾರೆ. ಈ ನಿಯಮದಿಂದಾಗಿ ಭಾರತೀಯ ಆಲ್‌ರೌಂಡರ್‌ಗಳ ಬೆಳವಣಿಗೆಗೆ ಹಿನ್ನಡೆಯಾಗುತ್ತದೆ ಎಂಬುದು ಅವರ ವಾದ. ಇದಾಗ್ಯೂ ಅವರ ಮೇಲೆಯೇ ಕಳೆದ ಸೀಸನ್​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯನ್ನು ಬಳಸಲಾಗಿತ್ತು.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರಿಗೆ ಈ ವಿಷಯದಲ್ಲಿ ‘ಹೊಟ್ಟೆಕಿಚ್ಚು’ ಇದೆ!

ಇದೀಗ ಟೂರ್ನಿ ಆರಂಭಕ್ಕೂ ಮುನ್ನವೇ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್​​ಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಈ ಮೂಲಕ  ಕೇವಲ ಬ್ಯಾಟರ್ ಆಗಿ ಮಾತ್ರವಲ್ಲದೆ, ಒಬ್ಬ ಸಂಪೂರ್ಣ ಆಟಗಾರನಾಗಿ ಕಣಕ್ಕಿಳಿಯಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ಈ ಬಾರಿ ಯಾರ ಮೇಲೆ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆ ಬಳಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

 

Source link

ಇಸ್ರೇಲ್-ಇರಾನ್ ಯುದ್ಧ ಪರಿಣಾಮ: ಯಾದಗಿರಿ ಆಯ್ತು ಈಗ ರಾಯಚೂರಿನ ರೈಸ್ ಮಿಲ್​ಗಳಿಗೂ ಆರ್ಥಿಕ ಸಂಕಷ್ಟ!

ರಾಯಚೂರು, ಮಾರ್ಚ್ 15: ಇಸ್ರೇಲ್-ಇರಾನ್ ಯುದ್ಧದ ಪರಿಣಾಮವಾಗಿ, ಕರ್ನಾಟಕದ ಭತ್ತದ ನಾಡು ರಾಯಚೂರಿನ ರೈಸ್ ಮಿಲ್‌ಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ವಿದೇಶಗಳಿಗೆ ರಫ್ತಾಗುತ್ತಿದ್ದ ಅಪಾರ ಪ್ರಮಾಣದ ಅಕ್ಕಿ ಸಾಗಾಟ ಸಂಪೂರ್ಣ ಸ್ಥಗಿತಗೊಂಡಿದ್ದು, ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಆತಂಕ ವ್ಯಕ್ತಪಡಿಸಿದೆ. ರಾಯಚೂರಿನಿಂದ ಯುರೋಪ್, ಅರಬ್, ಆಫ್ರಿಕಾ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಸೋನಾಮಸೂರಿ ಮತ್ತು ಆರ್.ಎನ್.ಆರ್‌ನಂತಹ ಉತ್ತಮ ಗುಣಮಟ್ಟದ ಅಕ್ಕಿ ರಫ್ತಾಗುತ್ತಿತ್ತು.

ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದರಿಂದ ಲಕ್ಷಾಂತರ ಟನ್ ಅಕ್ಕಿ ಮಿಲ್‌ಗಳಲ್ಲಿ ದಾಸ್ತಾನಾಗಿದೆ. ಇದು ಮುಂದುವರಿದರೆ ಮಿಲ್‌ಗಳು ಬಂದ್ ಆಗುವ ಅಪಾಯವಿದೆ. ಸಾಲಗಳು, ನೌಕರರ ವೇತನ ಮತ್ತು ನಿರ್ವಹಣಾ ವೆಚ್ಚಗಳು ರೈಸ್ ಮಿಲ್ ಮಾಲೀಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿವೆ. ಈ ಪರಿಸ್ಥಿತಿ ಏಪ್ರಿಲ್‌ನಲ್ಲಿ ಹೊಸ ಬತ್ತದ ಫಸಲು ಬಂದಾಗ ರೈತರಿಗೂ ಆರ್ಥಿಕ ಸಂಕಷ್ಟ ತರಲಿದೆ ಎಂದು ರೈಸ್ ಮಿಲ್ಲರ್ಸ್ ಅಸೋಸಿಯೇಷನ್‌ನ ರಾಜ್ಯ ಕಾರ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ್ ತಿಳಿಸಿದ್ದಾರೆ. ಯುದ್ಧ ಪರಿಸ್ಥಿತಿ ಮುಂದುವರಿದರೆ ರಾಜ್ಯದಾದ್ಯಂತ 2000ಕ್ಕೂ ಹೆಚ್ಚು ರೈಸ್ ಮಿಲ್‌ಗಳು ಮತ್ತು ಲಕ್ಷಾಂತರ ರೈತರು ತೀವ್ರವಾಗಿ ಬಾಧಿತರಾಗಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಳುನಾಡಿನಲ್ಲೇ ದೈವಕ್ಕೆ ಅಪಚಾರ? ಕ್ರಿಶ್ಚಿಯನ್ ಹುಡುಗನಿಂದ ದೈವ ನರ್ತನ ಆರೋಪ!

ಮಂಗಳೂರು, ಮಾರ್ಚ್​ 15: ತುಳುನಾಡಿನ ಪ್ರಸಿದ್ಧ ದೈವಾರಾಧನೆಯ ದೈವ ನರ್ತನ (Daiva Nartana)ಇದೀಗ ಭಾರೀ ವಿವಾದದಕ್ಕೆ ಕಾರಣವಾಗಿದೆ. ಮಂಗಳೂರಿನ ಪ್ರಸಿದ್ಧ ದೈವಸ್ಥಾನದಲ್ಲಿ ನಡೆದ ನೇಮೋತ್ಸವದ ವೇಳೆ ಬಂಟ ದೈವಕ್ಕೆ ಕ್ರೈಸ್ತ ಧರ್ಮದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ತುಳುನಾಡಿನ ದೈವಾರಾಧನೆ ಪರಂಪರೆಯ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ತಂದೆ ಹಿಂದೂ, ತಾಯಿ ಕ್ರಿಶ್ಚಿಯನ್!

ಜನವರಿ 31ರಂದು ಮಂಗಳೂರಿನ ಪ್ರಸಿದ್ಧ ದೈವಕ್ಷೇತ್ರದಲ್ಲಿ ಶ್ರೀ ಜಾರಂದಾಯ ಹಾಗೂ ಬಂಟ ದೈವಕ್ಕೆ ನೇಮೋತ್ಸವ ನಡೆದಿತ್ತು. ಸಂಪ್ರದಾಯದಂತೆ ದೈವ ನರ್ತನ ಸೇವೆಯನ್ನು ನಲಿಕೆ, ಪರವ ಹಾಗೂ ಪಂಬದ ಸಮುದಾಯದವರು ಮಾತ್ರ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಈ ಬಾರಿ ಬಂಟ ದೈವಕ್ಕೆ ಕ್ರೈಸ್ತ ಧರ್ಮದ ಯುವಕನಿಂದ ನರ್ತನ ಮಾಡಿಸಲಾಗಿದೆ ಎಂದು ಪಂಬದ ಸಮುದಾಯದ ಸಂಶೋಧಕಿ‌ ಡಾ.ರತಿ ಆರೋಪಿಸಿದ್ದಾರೆ.

ಜಾರಂದಾಯ ದೈವದ ನರ್ತನವನ್ನು ಪ್ರಸಿದ್ಧ ದೈವ ನರ್ತಕ ಚಿಪ್ಪಾರು ಗಣೇಶ್ ಪಂಬದ ನೆರವೇರಿಸಿದ್ದಾರೆ. ಇದೇ ವೇಳೆ ಬಂಟ ದೈವದ ನರ್ತನ ಸೇವೆಯನ್ನು ಕ್ರೈಸ್ತ ಧರ್ಮದ ಯುವಕನಿಗೆ ನೀಡಲಾಗಿದೆ ಎಂಬ ಆರೋಪ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ನರ್ತನ ಮಾಡಿದ ಯುವಕನ ತಂದೆ ಪಂಬದ ಸಮುದಾಯದವರಾಗಿದ್ದು, ತಾಯಿ ಕ್ರೈಸ್ತ ಧರ್ಮದವರು ಎಂಬ ವಿಚಾರ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಸಂಶೋಧಕಿ ಮಾಡಿದ ಆರೋಪಗಳೇನು?

ಈ ವಿಚಾರವಾಗಿ ಸಂಶೋಧಕಿ ಡಾ. ರತಿ ಟಿವಿ9 ಜೊತೆ ಮಾತನಾಡಿ ಜಾರಂದಾಯ ದೈವಕ್ಕೆ ಗಣೇಶ್ ಪಂಬದ ನೇಮ ಕಟ್ಟಿದರೂ, ಬಂಟ ದೈವಕ್ಕೆ ಕ್ರೈಸ್ತ ಯುವಕನಿಂದ ನರ್ತನ ಮಾಡಿಸಲಾಗಿದೆ. ಆ ಯುವಕನ ತಂದೆ ಪಂಬದ ಸಮುದಾಯದವರಾದರೂ ತಾಯಿ ಕ್ರೈಸ್ತ ಧರ್ಮಕ್ಕೆ ಸೇರಿದವರು. ನಮ್ಮ ಪರಂಪರೆಯ ಪ್ರಕಾರ ಬೇರೆ ಧರ್ಮ ಅಥವಾ ಸಮುದಾಯದವರನ್ನು ದೈವ ನರ್ತನ ಪ್ರಕ್ರಿಯೆಯಲ್ಲಿ ಬಳಸುವುದಿಲ್ಲ ಎಂದು ಹೇಳಿದ್ದಾರೆ.

ಇದರಿಂದ ದೊಡ್ಡ ಅಪಚಾರವಾಗಿದೆ ಎಂದ ಸಂಶೋಧಕಿ, ದೈವಸ್ಥಾನದ ಆಡಳಿತ ಮಂಡಳಿಗೂ ಈ ವಿಚಾರ ಮೊದಲಿಗೆ ತಿಳಿದಿರಲಿಲ್ಲ. ಯಾರು‌ ಕೂಡಾ ಇದನ್ನು ನಿರೀಕ್ಷಿಸಿರಲೂ ಇಲ್ಲ. ಗಣೇಶ ಪಂಬದ ನಂಬಿಕೆ ದ್ರೋಹ ಮಾಡಿದ್ದಾರೆ. ನಮ್ಮ ಸಮುದಾಯದಲ್ಲಿ ಪರಂಪರೆಯ ಪಂಬದರು ತುಂಬಾ ಜನ ಇದ್ದಾರೆ. ಅಂತವರಿಗೆ ಇದು ತುಂಬಾ ನೋವಾಗಿದೆ.ಇದನ್ನು‌ ಸಮಾಜದ ಮುಂದೆ ಇಡುತ್ತಿದ್ದೇವೆ. ತೀರ್ಮಾನ ಜನರಿಗೆ ಬಿಟ್ಟಿದ್ದು. ದೈವ ನರ್ತಕನ ಆವೇಷ ನೋಡಿದ್ರೆ ನೇಮ‌ ಎಂದು ಅನ್ನಿಸಲ್ಲ. ಕ್ರೈಸ್ತ ಹುಡುಗ ಕುಣಿಯೋದು ನೋಡಿ ನಮಗೆ ಇದು ನಾಟಕವೇನೋ ಎನ್ನಿಸಿತು. ನಮ್ಮದು ಅಳಿಯಕಟ್ಟು ಆದ್ದರಿಂದ ನಮ್ಮಲ್ಲಿ ಬೇರೆ ಜಾತಿ, ಧರ್ಮದವರು ಬಂದು ನೇಮ‌ ಕಟ್ಟುವಂತಿಲ್ಲ. ನಾವು ಇದನ್ನು ಪ್ರಶ್ನೆ ಮಾಡಿದಾಗ ನಾವು ಯಾರನ್ನು ಬೇಕಾದರೂ ಕರ್ಕೊಂಡು ಬಂದು ದೈವ ಕಟ್ಟಿಸುತ್ತೇವೆ ಎಂದು ಉತ್ತರ ಕೊಟ್ಟಿದ್ದಾರೆ. ಹೆಂಗಸಾದ ನಿನಗೆ ಬಣ್ಣ ಹಚ್ಚಿ ದೈವ ನರ್ತನ‌ ಮಾಡಲು‌ ಆಗುತ್ತಾ ಎಂದು ನನ್ನನ್ನೇ ಪ್ರಶ್ನಿಸಿದ್ದಾರೆ ಎಂದು ಹಲವು ಆರೋಪಗಳನ್ನು ಮಾಡಿದ್ದಾರೆ.

ಇದನ್ನೂ ಓದಿ ತುಳು ಸಂಸ್ಕೃತಿಯಲ್ಲಿ‌ ಮಾಯವಾಗುವುದು ಎಂದರೆ ಸಾಯುವುದಲ್ಲ, ಹಾಗಿದ್ದರೆ ಮಾಯವಾದವರು ಏನಾಗುತ್ತಾರೆ? ಇಲ್ಲಿದೆ ನೋಡಿ ಮಾಹಿತಿ

ಘಟನೆ ಹೊರಬಿದ್ದ ನಂತರ ತುಳುನಾಡಿನಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು, ದೈವಾರಾಧನೆ ಸಂಪ್ರದಾಯದ ಬಗ್ಗೆ ಹೊಸ ವಿವಾದ ಎದ್ದಿದೆ. ಇದೀಗ ಈ ವಿಷಯದ ಅಂತಿಮ ತೀರ್ಮಾನವನ್ನು ಸಮಾಜದ ಮುಂದೆ ಇಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version