ನಿದ್ರೆಗೆ ಭಂಗ ಉಂಟಾಗಲು ನಿಮ್ಮ ಈ ಅಭ್ಯಾಸಗಳೇ ಕಾರಣ – Kannada News

ಆಹಾರ, ನೀರಿನಂತೆ ಮನುಷ್ಯನಿಗೆ ನಿದ್ರೆಯೂ (sleep) ತುಂಬಾ ಮುಖ್ಯ. 8 ರಿಂದ 9 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಉತ್ತಮವಾಗಿರುತ್ತದೆ. ಆದರೆ ಇಂದು ಹೆಚ್ಚಿನವರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೌದು ಅನೇಕರಿಗೆ ಎಷ್ಟೇ ಪ್ರಯತ್ನಪಟ್ಟರೂ ರಾತ್ರಿ ನಿದ್ರೆ ಮಾಡಲು ಸಖತ್‌ ಕಷ್ಟಕರವಾಗುತ್ತದೆ. ನಿದ್ರಾಹೀನತೆಗೆ ಈ ಕೆಲವೊಂದು ಅಭ್ಯಾಸಗಳೇ ಕಾರಣವಂತೆ. ಈ ಅಭ್ಯಾಸಗಳನ್ನು ತ್ಯಜಿಸಿದರೆ ನೀವು ಸಹ ರಾತ್ರಿಯಲ್ಲಿ ಉತ್ತಮವಾಗಿ ನಿದ್ರೆ ಮಾಡಬಹುದು. ನಿದ್ರೆಗೆ ಭಂಗ ತರುವಂತಹ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ನಿದ್ರಾಹೀನತೆಗೆ ಈ ಅಭ್ಯಾಸಗಳೇ ಮುಖ್ಯ ಕಾರಣ:

ಫೋನ್‌ ನೋಡುವುದು: ಮಲಗುವ ಮುನ್ನ ಅತಿಯಾಗಿ ಫೋನ್‌ ಬಳಸುವ ಅಭ್ಯಾಸ ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹೌದು ಫೋನ್‌ನಿಂದ ಹೊರಸೂಸುವ ನೀಲಿ ಬೆಳಕು  ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ ಮತ್ತು ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಈ ನೀಲಿ ಬೆಳಕು  ನಿದ್ರೆ-ಎಚ್ಚರ ಚಕ್ರವನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ನಿಗ್ರಹಿಸಬಹುದು. ಮೆಲಟೋನಿನ್ ಕೊರತೆಯು ನಿದ್ರಾಹೀನತೆ, ಕಿರಿಕಿರಿ ಮತ್ತು ಹಗಲಿನ ನಿದ್ರೆಗೆ ಕಾರಣವಾಗಬಹುದು.

ಕಾಫಿ, ಮದ್ಯಪಾನ  ಸೇವನೆ: ಕಾಫಿ ಮತ್ತು ಆಲ್ಕೋಹಾಲ್ ನಲ್ಲಿರುವ ಕೆಫೀನ್ ನಿಮ್ಮ ನಿದ್ರೆಯ ಮಾದರಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಲಗುವ ನಾಲ್ಕು ಗಂಟೆಗಳ ಮುನ್ನ ಕಾಫಿ ಅಥವಾ ಟೀ ಕುಡಿಯುವುದರಿಂದ ನಿದ್ರೆ ಮಾಡಲು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ರಾತ್ರಿ ಹೊತ್ತು ಮಧ್ಯಪಾನ, ಕೆಫೀನ್‌ ಸೇವನೆಯನ್ನು  ತಪ್ಪಿಸಿ.

ಭಾರವಾದ ಆಹಾರ ಸೇವನೆ: ಮಲಗುವ ಸ್ವಲ್ಪ ಅಥವಾ ಒಂದು ಗಂಟೆ ಮೊದಲು ಭಾರವಾದ ಊಟ ಮಾಡುವ ಅಣ್ಯಾಸವು ನಿದ್ರೆಗೆ ಅಡ್ಡಿಯುಂಟುಮಾಡುತ್ತದೆ. ಭಾರವಾದ ಆಹಾರ ಸೇವಿಸಿದರೆ ಅದು ನೀವು ಹಾಸಿಗೆಯಲ್ಲಿ ಮಲಗಿದ ನಂತರವೂ ನಿಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ನಿದ್ರೆ ಅಡ್ಡಿಯುಂಟಾಗುತ್ತದೆ.

ಹಗಲಿನಲ್ಲಿ ಮಲಗುವ ಅಭ್ಯಾಸ: ಕೆಲವು ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸ  ರಾತ್ರಿಯಲ್ಲಿ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸ್ಪಷ್ಟವಾಗಿ ಹಾಳುಮಾಡುತ್ತದೆ.

ಇದನ್ನೂ ಓದಿ: ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?

ಸಿಗರೇಟ್‌ ಸೇವನೆ: ಮಲಗುವ ಮುನ್ನ ಸಿಗರೇಟ್‌ ಸೇದುವುದರಿಂದ ನಿದ್ರೆಗೆ ಭಂಗ ಬರಬಹುದು. ತಂಬಾಕಿನಲ್ಲಿರುವ ನಿಕೋಟಿನ್‌ ಅಂಶ ಮೆದುಳನ್ನು ಉತ್ತೇಜಿಸುತ್ತದೆ. ಇದು ನಿದ್ರೆಗೆ ಭಂಗ ಉಂಟುಮಾಡುತ್ತದೆ.

ಅತಿಯಾದ ಯೋಚನೆ: ಹೆಚ್ಚು ಯೋಚಿಸುವ ಅಭ್ಯಾಸ ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಅತಿಯಾದ ಯೋಚನೆ ಮತ್ತು ಒತ್ತಡವು ನಿದ್ರಾಹೀನತೆಗೆ ಕಾರಣವಾಗಬಹುದು.

ಒತ್ತಡ: ಹೆಚ್ಚಿನ ಮಟ್ಟದ ಒತ್ತಡವು ನಿದ್ರೆಗೆ ಭಂಗ ತರುತ್ತದೆ. ನಿದ್ರೆಯ ಕೊರತೆಯು ನಮ್ಮ ದೇಹದ ಒತ್ತಡ ಪ್ರತಿಕ್ರಿಯೆ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ, ಇದು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದು ನಿದ್ರೆಯನ್ನು ಮತ್ತಷ್ಟು ಅಡ್ಡಿಪಡಿಸುತ್ತದೆ. ಇದಲ್ಲದೆ, ಜಡ ಜೀವನಶೈಲಿಯು ನಿದ್ರಾಹೀನತೆಗೆ ಪ್ರಮುಖ ಕಾರಣವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು – Kannada News

ಕನ್ನಡದಲ್ಲಿ ‘ಬಾಸ್’ ಹೆಸರಿನ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಸಿನಿಮಾದ ಟ್ರೈಲರ್ (Trailer) ಕೆಲ ವಾರಗಳ ಮುಂಚೆ ಬಿಡುಗಡೆ ಆಗಿತ್ತು. ಸಿನಿಮಾದ ಟ್ರೈಲರ್ ನೋಡಿದವರಿಗೆ ಇದು ನಟ ದರ್ಶನ್ ಅವರ ರೇಣುಕಾ ಸ್ವಾಮಿ ಪ್ರಕರಣ ಕುರಿತಾದದ್ದೇ ಕತೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಆದರೆ ಚಿತ್ರತಂಡ ಅದನ್ನು ಉದ್ದೇಶಪೂರ್ವಕವಾಗಿ ಅಲ್ಲಗಳೆಯುತ್ತಲೇ ಬಂದಿತ್ತು. ಕೆಲ ವಾರಗಳ ಹಿಂದೆ ದರ್ಶನ್ ಕಡೆಯಲು ಚಿತ್ರತಂಡಕ್ಕೆ ನೊಟೀಸ್ ಕಳಿಸಿ ಟ್ರೈಲರ್ ತೆಗೆಯುವಂತೆ ಆಗ್ರಹಿಸಿದ್ದರು. ಇದೀಗ ‘ಬಾಸ್’ ಚಿತ್ರತಂಡವು ಈ ಸುದ್ದಿಗೋಷ್ಠಿ ನಡೆಸಿದ್ದು, ದರ್ಶನ್ ಕಡೆಯವರ ನೊಟೀಸ್ ಬಗ್ಗೆ, ತಮ್ಮ ಕಾನೂನು ಹೋರಾಟದ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಸ್ ಸ್ಟೋವ್ ಮನೆಯೊಳಗಿನ ಗಾಳಿಯನ್ನು ಮಾಲಿನ್ಯಗೊಳಿಸಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ? – Kannada News

ಇಂದಿನ ಬಹುತೇಕ ಮನೆಗಳಲ್ಲಿ ಅಡುಗೆ ಮಾಡಲು ಗ್ಯಾಸ್ ಸ್ಟೋವ್ (Gas Stove) ಬಳಸಲಾಗುತ್ತದೆ. ಆದರೆ ಮನೆಯ ಒಳಗಿನ ಗಾಳಿಯ ಗುಣಮಟ್ಟವೂ ಆರೋಗ್ಯಕ್ಕೆ ಬಹಳ ಮುಖ್ಯ ಎನ್ನಲಾಗುತ್ತದೆ. ವಿಶೇಷವಾಗಿ ಅಡುಗೆ ಮನೆಯಲ್ಲಿ ಉಂಟಾಗುವ ಹೊಗೆ ಮತ್ತು ಅನಿಲಗಳು ಮನೆಯ ಗಾಳಿಯನ್ನು ದುಷಿತಗೊಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ (EPA) ಹೇಳಿರುವ ಪ್ರಕಾರ, ಗ್ಯಾಸ್ ಸ್ಟೋವ್ ಬಳಸುವ ವೇಳೆ ಕೆಲವು ಹಾನಿಕಾರಕ ಅನಿಲಗಳು ಮತ್ತು ಸೂಕ್ಷ್ಮ ಕಣಗಳು ಹೊರಬರುತ್ತವೆ. ಇದರಲ್ಲಿ ನೈಟ್ರೋಜನ್ ಡೈಆಕ್ಸೈಡ್ (NO₂), ಕಾರ್ಬನ್ ಮೋನಾಕ್ಸೈಡ್ (CO) ಮತ್ತು PM2.5 ಮಾದರಿಯ ಸೂಕ್ಷ್ಮ ಮಾಲಿನ್ಯ ಕಣಗಳು ಸೇರಿವೆ. ಇವು ಮನೆಯ ಒಳಗಿನ ಗಾಳಿಯ ಗುಣಮಟ್ಟವನ್ನು ಹಾಳು ಮಾಡಬಹುದು. ಹಾಗಾದರೆ ಮನೆಯೊಳಗಿನ ಗಾಳಿ ಹರಿವನ್ನು ಸ್ವಚ್ಛವಾಗಿಡಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

ಅಡುಗೆ ಮನೆಯಲ್ಲಿ ಸರಿಯಾದ ಗಾಳಿಯ ಹರಿವು ಇಲ್ಲದಿದ್ದರೆ ಈ ಮಾಲಿನ್ಯಕಾರಿ ಕಣಗಳು ಮನೆಯೊಳಗೆ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಮಕ್ಕಳು, ವಯೋವೃದ್ಧರು ಮತ್ತು ಈಗಾಗಲೇ ಉಸಿರಾಟದ ಸಮಸ್ಯೆ ಹೊಂದಿರುವವರಿಗೆ ಇದು ಹೆಚ್ಚು ತೊಂದರೆ ಉಂಟುಮಾಡಬಹುದು. ಗ್ಯಾಸ್ ಸ್ಟೋವ್‌ನಿಂದ ಹೊರಬರುವ ಮಾಲಿನ್ಯಕಾರಕಗಳು ಉಸಿರಾಟದ ತೊಂದರೆ, ಗಂಟಲಿನ ಕೆರಡು, ಕಣ್ಣಿನ ಉರಿಯೂತ ಮತ್ತು ಅಲರ್ಜಿಗೆ ಕಾರಣವಾಗಬಹುದು. ಕೆಲವರಲ್ಲಿ ಅಸ್ತಮಾ ಸಮಸ್ಯೆಯನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ. ದೀರ್ಘಕಾಲ ಇಂತಹ ವಾತಾವರಣದಲ್ಲಿ ಇರುವುದರಿಂದ ಶ್ವಾಸಕೋಶದ ಆರೋಗ್ಯದ ಮೇಲೂ ಪರಿಣಾಮ ಬೀಳಬಹುದು.

ಇದನ್ನೂ ಓದಿ: GBA 1KmChallenge: ಬೆಂಗಳೂರಲ್ಲಿ ಮಾಲಿನ್ಯ ತಡೆಯಲು ಜಿಬಿಎ ಮಾಸ್ಟರ್ ಪ್ಲಾನ್; ಮೊದಲು ಫುಟ್‌ಪಾತ್ ಸರಿ ಮಾಡಿ ಎಂದ ಜನ!

ಮನೆಯೊಳಗಿನ ಗಾಳಿ ಹರಿವನ್ನು ಸ್ವಚ್ಛವಾಗಿಡಲು ಏನು ಮಾಡಬೇಕು?

ಅಡುಗೆ ಮಾಡುವಾಗ ಮನೆಯ ಕಿಟಕಿಗಳನ್ನು ತೆರೆದಿಡುವುದು ಬಹಳ ಉತ್ತಮ. ಚಿಮ್ನಿ ಅಥವಾ ಎಗ್ಜಾಸ್ಟ್ ಫ್ಯಾನ್ ಬಳಸುವುದರಿಂದ ಹೊಗೆ ಮತ್ತು ಅನಿಲಗಳು ಹೊರಗೆ ಹೋಗಲು ಸಹಾಯವಾಗುತ್ತದೆ. ಗ್ಯಾಸ್ ಸ್ಟೋವ್ ಅನ್ನು ನಿಯಮಿತವಾಗಿ ಪರಿಶೀಲಿಸಿ ಸ್ವಚ್ಛವಾಗಿಡುವುದು ಕೂಡ ಮುಖ್ಯ. ಇದಲ್ಲದೆ, ಮನೆಯ ಒಳಗೆ ಮತ್ತು ಹೊರಗೆ ಗಾಳಿಯ ಹರಿವು ಇರಲು ಆದಷ್ಟು ಗಿಡಗಳನ್ನು ಬೆಳೆಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಆರ್​ಸಿಬಿ ಪರ ಆಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ – Kannada News

ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯ ಇದೇ ಜೂನ್ 6 ರಿಂದ ಆರಂಭವಾಗಲಿದೆ. ಇದಕ್ಕಾಗಿ ಉಭಯ ತಂಡಗಳು ಕೂಡ ತಯಾರಿ ನಡೆಸುತ್ತಿವೆ. ಈ ನಡುವೆ ಟೀಂ ಇಂಡಿಯಾ (Team India) ಪರ ಟೆಸ್ಟ್ ಪಂದ್ಯವನ್ನಾಡಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಶ್ರೀಕರ್ ಭರತ್ (KS Bharat) ಕೇವಲ 32 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆಂಧ್ರಪ್ರದೇಶ ಪರ ದೇಶಿ ಕ್ರಿಕೆಟ್ ಆಡುತ್ತಿದ್ದ ಭರತ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಹೆಚ್ಚು ಕಾಲ ಇರದಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್​ ಕೀಪಿಂಗ್​ನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. 2014 ರಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ಭರತ್​ಗೆ, ಅಂದಿನಿಂದ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ.

ನಿವೃತ್ತಿ ಘೋಷಿಸಿದ ಭರತ್

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿರುವ ಕೆಎಸ್ ಭರತ್, ಭಾರತದ ಇಬ್ಬರು ಶ್ರೇಷ್ಠ ನಾಯಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಇಬ್ಬರು ದಂತಕಥೆಗಳ ನಾಯಕತ್ವದಲ್ಲಿ ಆಡುವುದು ಮತ್ತು ಅವರಿಂದ ಕಲಿಯುವುದು ನನ್ನ ವೃತ್ತಿಜೀವನದ ಅತ್ಯುತ್ತಮ ಅನುಭವವಾಗಿತ್ತು. ಡ್ರೆಸ್ಸಿಂಗ್ ಕೋಣೆಯಲ್ಲಿ ಈ ಹಿರಿಯ ಆಟಗಾರರಿಂದ ಪಡೆದ ಬೆಂಬಲ ಮತ್ತು ಮಾರ್ಗದರ್ಶನ ಯಾವಾಗಲೂ ಸ್ಮರಣೀಯವಾಗಿರುತ್ತದೆ.

ನಾನು ಹೆಮ್ಮೆಯಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತೇನೆ. ನನ್ನ ದೇಶಕ್ಕಾಗಿ ಆಡುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ. ಈ ಪ್ರಯಾಣಕ್ಕೆ ಅಪಾರ ತಾಳ್ಮೆ ಮತ್ತು ಶಕ್ತಿಯ ಅಗತ್ಯವಿತ್ತು, ಆದರೆ ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸುವುದು ಮತ್ತಷ್ಟು ವಿಶಿಷ್ಟವಾಗಿದೆ. ಬಿಸಿಸಿಐ, ಮತ್ತು ನನ್ನ ವೃತ್ತಿಜೀವನದುದ್ದಕ್ಕೂ ನನಗೆ ತರಬೇತಿ ನೀಡಿದ ಎಲ್ಲಾ ತರಬೇತುದಾರರು ಮತ್ತು ಆಡಳಿತ ಮಂಡಳಿಗೆ ಧನ್ಯವಾದಗಳು, ಇವರೆಲ್ಲರು ನನ್ನನ್ನು ಬೇಷರತ್ತಾಗಿ ಬೆಂಬಲಿಸಿದರು. ನನ್ನ ಎಲ್ಲಾ ತಂಡದ ಸದಸ್ಯರಿಗೆ, ನಾವು ಒಟ್ಟಿಗೆ ಹಂಚಿಕೊಂಡ ಎಲ್ಲಾ ಕ್ಷಣಗಳು ಮತ್ತು ಸಾಧನೆಗಳಿಗಾಗಿ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಹೇಳುತ್ತೇನೆ. ನೀವೆಲ್ಲರೂ ಇಲ್ಲದೆ, ನನ್ನ ಕನಸನ್ನು ನನಸಾಗಿಸಲು ಮತ್ತು ಇಷ್ಟು ವರ್ಷಗಳ ಕಾಲ ಈ ಆಟವನ್ನು ಆಡಲು ನನಗೆ ಸಾಧ್ಯವಾಗುತ್ತಿರಲಿಲ್ಲ’ ಎಂದಿದ್ದಾರೆ.

ಭರತ್ ಅಂತರರಾಷ್ಟ್ರೀಯ ವೃತ್ತಿಜೀವನ

ಶ್ರೀಕರ್ ಭರತ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಟೀಂ ಇಂಡಿಯಾ ಪರ ಒಟ್ಟು 7 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 20.09 ಸರಾಸರಿಯಲ್ಲಿ 221 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಅಥವಾ ಅರ್ಧಶತಕ ಸೇರಿಲ್ಲದಿದ್ದರೂ, ಶ್ರೀಕರ್ ಭರತ್ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಅವರಿಗೆ 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ ಅವಕಾಶವೂ ಸಿಕ್ಕಿತ್ತು. ಇನ್ನು ಭರತ್ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (2021), ದೆಹಲಿ ಕ್ಯಾಪಿಟಲ್ಸ್ (2022), ಗುಜರಾತ್ ಟೈಟಾನ್ಸ್ (2023), ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (2024) ಪರವೂ ಆಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:03 pm, Thu, 4 June 26

Source link

ಅವರಿಗೆ ಹೇಳಿ ಪಿಚ್ಚರ್ ಅಭಿ ಬಾಕಿ ಹೈ, ಇದು ಕೇವಲ ಟ್ರೈಲರ್ ಅಷ್ಟೇ: ಹರಿಪ್ರಸಾದ್ ಎಚ್ಚರಿಕೆ ಕೊಟ್ಟಿದ್ಯಾರಿಗೆ? – Kannada News

ಬೆಂಗಳೂರು, (ಜೂನ್ 04): ಹಳೇ ಸಿನಿಮಾಗೆ ಹೊಸ ಪೋಸ್ಟರ್ ಹಾಕಿದ್ದಾರೆ ಎಂಬ ವಿಪಕ್ಷ ನಾಯಕ ಆರ್ ಅಶೋಕ್ (R Ashoka) ಹೇಳಿಕೆಗೆ ಕೆಪಿಸಿಸಿಯ ನೂತನ ಅಧ್ಯಕ್ಷ ಬಿಕೆ ಹರಿಪ್ರಸಾದ್ (BK Hariprasad)  ಖಡಕ್ ಎಚ್ಚರಿಕೆ ಮೂಲಕ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,  ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹರಿದಾಡುವ ಪ್ರತಿಯೊಂದು ಸುದ್ದಿಗೂ ಉತ್ತರ ನೀಡಲು ಸಾಧ್ಯವಿಲ್ಲ.  “ಅಶೋಕ್​​​ಗೆ ಹೇಳಿ, ಪಿಕ್ಚರ್ ಅಭಿ ಬಾಕಿ ಹೈ. ಇದು ಕೇವಲ ಟ್ರೇಲರ್ ಮಾತ್ರ” ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ ಹರಿಪ್ರಸಾದ್, “ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹರಿದಾಡುವ ಪ್ರತಿಯೊಂದು ಸುದ್ದಿಗೂ ಉತ್ತರ ನೀಡಲು ಸಾಧ್ಯವಿಲ್ಲ” ಎಂದು ಪರೋಕ್ಷವಾಗಿ ವ್ಯಂಗ್ಯವಡಿದರು. ಅಲ್ಲದೇ ವಿಪಕ್ಷ ನಾಯಕ ಆರ್. ಅಶೋಕ್ ಅವರು “ಹಳೇ ಸಿನಿಮಾಗೆ ಹೊಸ ಪೋಸ್ಟರ್ ಹಾಕಿದ್ದಾರೆ” ಎಂಬ ಹೇಳಿಕೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, “ಅವರಿಗೆ ಹೇಳಿ, ಪಿಕ್ಚರ್ ಅಭಿ ಬಾಕಿ ಹೈ. ಇದು ಕೇವಲ ಟ್ರೇಲರ್ ಮಾತ್ರ” ಎಂದು ಗುಡುಗಿದರು.

ಇದನ್ನೂ ಓದಿ: “ಅಧಿಕಾರ ಬೇಕಾದವರು ಡಿಕೆಶಿ ಜತೆ ಹೋಗಿ, ಪಕ್ಷ ಕಟ್ಟುವವರು ನನ್ನೊಂದಿಗೆ ಬನ್ನಿ”: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಖಡಕ್ ಮಾತು

ಅಷ್ಟಕ್ಕೂ ಅಶೋಕ್ ಹೇಳಿದ್ದೇನು?

ಡಿಕೆ ಶಿವಕುಮಾರ್ ಸರ್ಕಾರದ ಬಗ್ಗೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಹೊಸ ಸಚಿವ ಸಂಪುಟದಲ್ಲಿ ಹಳೆಯ ಮುಖಗಳೇ ಇವೆ. ಜನರು ಹೊಸ ಶಕ್ತಿ ಮತ್ತು ಹೊಸ ದಿಕ್ಕನ್ನು ನಿರೀಕ್ಷಿಸಿದ್ದರು. ಆದರೆ ಇದು ಒಂದೇ ರೀತಿಯ ನಾಯಕರ ಗುಂಪಾಗಿದೆ. ಹೊಸ ಮುಖಗಳಿಲ್ಲ. ಇದು ಹೊಸ ವೇಷದಲ್ಲಿರುವ ಹಳೆಯ ಸರ್ಕಾರ ವ್ಯಂಗ್ಯವಾಡಿದ್ದರು.

ಕುತೂಹಲ ಕೆರಳಿಸಿದ ಡಿಕೆ-ಬಿಕೆ ಭೇಟಿ

ಬಿಕೆ ಹರಿಪ್ರಸಾದ್ ಅವರು ಅಧ್ಯಕ್ಷರಾಗಿ ನೇಮಕವಾದ ಮರು ದಿನವೇ ಕುಮಾರಕೃಪ ರಸ್ತೆಯಲ್ಲಿನ ಸಿಎಂ ಸರ್ಕಾರಿ ನಿವಾಸದಲ್ಲಿ ಡಿಕೆ ಶಿವಕುಮಾರ್‌ (DK Shivakumar) ಅವರನ್ನ ಭೇಟಿಯಾಗಿ ಸಭೆ ನಡೆಸಿದ್ದಾರೆ. ʻಅಧಿಕಾರ ಬೇಕಾದವರು ಡಿಕೆಶಿ ಹಿಂದೆ ಹೋಗಿ, ಸಂಘಟನೆ ಮಾಡೋರು ನನ್ನ ಜೊತೆ ಬನ್ನಿʼ ಎಂದು ಬಿ.ಕೆ ಹರಿಪ್ರಸಾದ್ ಅವರು ಹೇಳಿದ ಕೆಲ ಗಂಟೆಗಳಲ್ಲೇ ಉಭಯ ನಾಯಕರ ಭೇಟಿ ಕುತೂಹಲ ಕೆರಳಿಸಿದೆ.

ಇನ್ನು ಡಿಕೆಶಿ ಭೇಟಿ ಬಳಿಕ ಪ್ರತಿಕ್ರಿಯಿಸಿದ ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷರು, ಸಿಎಂ ಸೌಜನ್ಯದ ಭೇಟಿಯಾಗುವುದು ಸಹಜ. ಅದೇ ರೀತಿಯ ಸೌಜನ್ಯ ಭೇಟಿಯಷ್ಟೇ, ಯಾವುದೇ ಅಜೆಂಡಾ ಇಲ್ಲ. ಖಾತೆ ಯಾರಿಗೆ ಹಂಚಿಕೆ ಮಾಡಬೇಕು ಅನ್ನೋದು ಸಿಎಂ ನೋಡುತ್ತಾರೆ. ಖಾತೆ ಹಂಚಿಕೆ ಪಕ್ಷದ ಚೌಕಟ್ಟಿಗೆ ಬರೋದಿಲ್ಲ ಎಂದು ಹೇಳಿದರು.

ಹರಿಪ್ರಸಾದ್ ಆಯ್ಕೆ ಬಗ್ಗೆ ರಾಜಣ್ಣ ಹೇಳಿದ್ದಿಷ್ಟು

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ಆಯ್ಕೆ ಮಾಡಿರುವ ಬಗ್ಗೆ ಕೆಎನ್ ರಾಜಣ್ಣ ಮಾತನಾಡಿದ್ದು, ಈ ಆಯ್ಕೆ ಬಹಳ ಸಂತಸ. ನಾವಿಬ್ಬರು ಯುವ ಕಾಂಗ್ರೆಸ್​ನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೇವೆ. ಹೋರಾಟಗಾರ ಬಿ.ಕೆ.ಹರಿಪ್ರಸಾದ್​ಗೆ ಸಾಕಷ್ಟು ಅನುಭವ ಇದೆ.ಬಿ.ಕೆ.ಹರಿಪ್ರಸಾದ್​ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದವರು. ಬೇರೆ ಬೇರೆ ರಾಜ್ಯಗಳ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದಾರೆ. ಹರಿಪ್ರಸಾದ್ ಹರಿಯಾಣ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದು, ಕೇಂದ್ರದ ರಾಜಕೀಯ ವಿದ್ಯಮಾನಗಳ ಬಗ್ಗೆ ಅರಿವಿದೆ. ಅನುಭವಿ, ಹಿಂದುಳಿದ ವರ್ಗದ ವ್ಯಕ್ತಿಗೆ ಹೈಕಮಾಂಡ್ ಅವಕಾಶ ನೀಡಿದ್ದು, ಪಕ್ಷ ಸಂಘಟನೆ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’, ‘ವಾರಣಾಸಿ’ ಚಿತ್ರಗಳ ಬಜೆಟ್ ಒಂದು ಗಿಮಿಕ್ ಎಂದ ಮನೋಜ್ ಬಾಜಪೇಯಿ – Kannada News

ಸದ್ಯ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಮತ್ತು ಮಹೇಶ್ ಬಾಬು ಅಭಿನಯದ ‘ವಾರಣಾಸಿ’ (Varanasi) ಚಿತ್ರಗಳ ಬಜೆಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಗಳ ಬಜೆಟ್ ಹೈಪ್ ಕುರಿತು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಮನೋಜ್ ಬಾಜಪೇಯಿ (Manoj Bajpayee) ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಿನಿಮಾ ಕಥೆಗಿಂತ ಬಜೆಟ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಪ್ರೇಕ್ಷಕರ ಬಗ್ಗೆ ಅವರು ಮಾತನಾಡಿದ್ದಾರೆ.

ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಸಿನಿಮಾಗಳ ಭಾರಿ ಬಜೆಟ್ ಪ್ರಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮನೋಜ್, ‘ಇದೆಲ್ಲವೂ ಕೇವಲ ಒಂದು ಪಿಆರ್ ತಂತ್ರ. ಕಳೆದ 15 ವರ್ಷಗಳಿಂದ ಇಂತಹ ಬಜೆಟ್ ಹೈಪ್ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಲೇ ಇವೆ’ ಎಂದು ನೇರವಾಗಿ ಹೇಳಿದ್ದಾರೆ. ಚಿತ್ರದ ಕಲೆಕ್ಷನ್ ಮತ್ತು ಬಜೆಟ್ ನೋಡಿ ಸಿನಿಮಾವನ್ನು ಹೈಪ್ ಮಾಡುವ ಪ್ರೇಕ್ಷಕರ ಮನಸ್ಥಿತಿಯನ್ನು ಅವರು ಖಂಡಿಸಿದ್ದಾರೆ.

‘ಈ ಬಜೆಟ್ ಮತ್ತು ಬಾಕ್ಸ್ ಆಫೀಸ್ ನಂಬರ್‌ಗಳ ಹುಚ್ಚು ಜನರಿಗೆ ಎಷ್ಟು ಹಿಡಿದಿದೆ ಎಂದರೆ, ಏರ್‌ಪೋರ್ಟ್‌ನಲ್ಲಿ ಯಾರಾದರೂ ಪ್ರೇಕ್ಷಕರು ಸಿಕ್ಕರೆ ಸಾಕು ಚಿತ್ರದ ಕಲೆಕ್ಷನ್ ಲೆಕ್ಕದ ಬಗ್ಗೆ ಮಾತನಾಡುತ್ತಾರೆ. ಅಂತವರಿಗೆ ನಾನು ಹಲವು ಬಾರಿ ಬೈದಿದ್ದೇನೆ. ಈ ಕೋಟಿ ಕೋಟಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆಯೇ? ಒಂದು ರೂಪಾಯಿಯೂ ನಿಮಗೆ ಸಿಗುವುದಿಲ್ಲ ಎಂದಮೇಲೆ ಬಾಕ್ಸ್ ಆಫೀಸ್ ನಂಬರ್ ಬಗ್ಗೆ ನಿಮಗೇಕೆ ಚಿಂತೆ? ಸಿನಿಮಾ ನಿಮಗೆ ಇಷ್ಟವಾಯಿತೋ ಇಲ್ಲವೋ ಎಂಬುದರ ಬಗ್ಗೆ ಮಾತ್ರ ಮಾತನಾಡಿ ಎಂದು ಹೇಳಿ ಅವರ ಬಾಯಿ ಮುಚ್ಚಿಸಿದ್ದೇನೆ’ ಎಂದಿದ್ದಾರೆ ಮನೋಜ್ ಬಾಜಪೇಯಿ.

‘ರಾಮಾಯಣ’ ಸಿನಿಮಾದ ಬಜೆಟ್ 4,000 ಕೋಟಿ ರೂಪಾಯಿ ಎನ್ನಲಾಗಿದೆ. ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತೆ), ಸನ್ನಿ ಡಿಯೋಲ್ (ಹನುಮಂತ) ಮತ್ತು ರಾಕಿಂಗ್ ಸ್ಟಾರ್ ಯಶ್ (ರಾವಣ) ನಟಿಸುತ್ತಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಪ್ರಾಜೆಕ್ಟ್ ಎನ್ನಲಾಗಿದೆ. ಇದರ ಮೊದಲ ಭಾಗ ಈ ವರ್ಷದ ದೀಪಾವಳಿಗೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರಕ್ಕೆ ಪಾಶ್ಚಿಮಾತ್ಯ ಶೈಲಿಯ ಸ್ಪರ್ಶ: ಸಮರ್ಥನೆ ಮಾಡಿಕೊಂಡ ಯಶ್

‘ವಾರಣಾಸಿ’ ಚಿತ್ರದ ಬಜೆಟ್ 1,400 ಕೋಟಿ ರೂಪಾಯಿ ಎಂದು ವರದಿ ಆಗಿದೆ. ಎಸ್‌ಎಸ್ ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸುತ್ತಿರುವ ಈ ಚಿತ್ರ ಕೂಡ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಪ್ರಿಯಾಂಕಾ ಚೋಪ್ರಾ ಕಂಬ್ಯಾಕ್ ಮಾಡುತ್ತಿರುವ ಈ ಸಿನಿಮಾ, ಸಂಪೂರ್ಣವಾಗಿ ‘1.43:1 IMAX’ ಫಾರ್ಮ್ಯಾಟ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಕಲಿ ಉದ್ಯೋಗದ ಜಾಹೀರಾತು ಮೂಲಕ ಬೇರೆ ದೇಶಗಳ ರಹಸ್ಯ ಮಾಹಿತಿ ಕದಿಯಲು ಚೀನಾ ಯತ್ನ! – Kannada News

ಲಂಡನ್, ಜೂನ್ 4: ವಿಶ್ವದ ಅತ್ಯಂತ ಶಕ್ತಿಶಾಲಿ ಗುಪ್ತಚರ ಮಾಹಿತಿ ಹಂಚಿಕೆ ಒಕ್ಕೂಟವಾದ ‘ಫೈವ್ ಐಸ್’ (ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಬ್ರಿಟನ್ ಮತ್ತು ಅಮೆರಿಕ) ದೇಶಗಳ ಸರ್ಕಾರಿ ಮತ್ತು ಮಿಲಿಟರಿ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಚೀನಾ (China) ಆನ್‌ಲೈನ್‌ನಲ್ಲಿ ನಕಲಿ ಉದ್ಯೋಗದ ಜಾಲ ಬೀಸಿದೆ ಎಂದು ಒಕ್ಕೂಟವು ಗಂಭೀರ ಎಚ್ಚರಿಕೆ ನೀಡಿದೆ. ಲಿಂಕ್ಡ್‌ಇನ್ (LinkedIn), ಇಂಡೀಡ್​ನಂತಹ ವೃತ್ತಿಪರ ಜಾಲತಾಣಗಳ ಮೂಲಕ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಗಳನ್ನು ಪಡೆಯಲು ಚೀನಾ ಈ ಕುತಂತ್ರ ನಡೆಸುತ್ತಿದೆ ಎನ್ನಲಾಗಿದೆ.

ಚೀನಾದ ಮಿಲಿಟರಿ ಗುಪ್ತಚರ ಇಲಾಖೆಯ ಏಜೆಂಟ್‌ಗಳು ಖಾಸಗಿ ಉದ್ಯಮಗಳು ಅಥವಾ ಥಿಂಕ್ ಟ್ಯಾಂಕ್‌ಗಳ ಮಾನವ ಸಂಪನ್ಮೂಲ (HR) ಸಲಹೆಗಾರರಂತೆ ನಟಿಸುತ್ತಾರೆ. ಲಿಂಕ್ಡ್‌ಇನ್ (LinkedIn), ಇಂಡೀಡ್ (Indeed) ಮತ್ತು ಅಪ್‌ವರ್ಕ್ (Upwork)ನಂತಹ ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ವಿದೇಶಾಂಗ ನೀತಿ ವಿಶ್ಲೇಷಕರು ಅಥವಾ ರಕ್ಷಣಾ ವಿಶ್ಲೇಷಕರ ಹುದ್ದೆಗಳಿಗಾಗಿ ನಕಲಿ ಜಾಹೀರಾತುಗಳನ್ನು ಪೋಸ್ಟ್ ಮಾಡುತ್ತಾರೆ.

ಇದನ್ನೂ ಓದಿ: ಚೀನಾದಿಂದ ತಪ್ಪಿಸಿಕೊಂಡು ಸಮುದ್ರದಲ್ಲಿ ರಬ್ಬರ್ ದೋಣಿಯಲ್ಲಿ 30 ಗಂಟೆಗಳ ಕಾಲ ಪ್ರಯಾಣಿಸಿ ದಕ್ಷಿಣ ಕೊರಿಯಾ ತಲುಪಿದ ಮಾಜಿ ಪೊಲೀಸ್

ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಆನ್‌ಲೈನ್ ಸಂದರ್ಶನದ ಮೂಲಕ ಸಂಪರ್ಕಿಸಿ, ನಂತರ ಸಾರ್ವಜನಿಕವಾಗಿ ಲಭ್ಯವಿಲ್ಲದ ರಹಸ್ಯ ಮತ್ತು ಆಂತರಿಕ ಮಾಹಿತಿಗಳನ್ನು ಒದಗಿಸುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ಚೀನಾದ ಈ ನೇಮಕಾತಿ ತಂತ್ರಕ್ಕೆ ಉನ್ನತ ಮಟ್ಟದ ಭದ್ರತಾ ಅನುಮತಿ ಹೊಂದಿರುವ ಸರ್ಕಾರಿ ಅಧಿಕಾರಿಗಳು, ಮಿಲಿಟರಿ ಸಿಬ್ಬಂದಿ, ಸರ್ಕಾರದ ಮಾಹಿತಿಗಳಿಗೆ ಪರೋಕ್ಷ ಸಂಪರ್ಕ ಹೊಂದಿರುವ ಪತ್ರಕರ್ತರು ಮತ್ತು ಥಿಂಕ್ ಟ್ಯಾಂಕ್ ಉದ್ಯೋಗಿಗಳೇ ಮುಖ್ಯ ಟಾರ್ಗೆಟ್ ಎನ್ನಲಾಗಿದೆ.

ಚೀನಾದ ಏಜೆಂಟ್‌ಗಳು ಅಭ್ಯರ್ಥಿಗಳ ಬಯೋಡೇಟಾವನ್ನು ಪರಿಶೀಲಿಸಿ ಸೂಕ್ಷ್ಮ ಮಾಹಿತಿ ಹೊಂದಿರುವವರನ್ನು ಗುರುತಿಸುತ್ತಾರೆ. ಬಳಿಕ ಚೀನಾದ ವಿದೇಶಾಂಗ ಸಂಬಂಧಗಳು, ರಕ್ಷಣೆ ಅಥವಾ ವ್ಯಾಪಾರದ ಕುರಿತು ವರದಿ ಬರೆಯಲು ಸೂಚಿಸುತ್ತಾರೆ. ನಂತರ ದೇಶದ ರಹಸ್ಯ ಮಾಹಿತಿಗಳನ್ನು ಕೇಳಲು ಆರಂಭಿಸುತ್ತಾರೆ. ಈ ಪ್ರತಿಯೊಂದು ವರದಿಗೂ ಅಭ್ಯರ್ಥಿಗಳಿಗೆ ಪೇಪಾಲ್ ವೆಸ್ಟರ್ನ್ ಯೂನಿಯನ್ ಅಥವಾ ಕ್ರಿಪ್ಟೋಕರೆನ್ಸಿ ಮೂಲಕ ನೂರಾರು ಅಥವಾ ಸಾವಿರಾರು ಡಾಲರ್ ಹಣವನ್ನು ಪಾವತಿಸಲಾಗುತ್ತಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ; ಪಾಕಿಸ್ತಾನ-ಚೀನಾಗೆ ವಿದೇಶಾಂಗ ಸಚಿವಾಲಯ ಚಾಟಿ

ಈ ಬಗ್ಗೆ ಮಾತನಾಡಿದ ಬ್ರಿಟನ್‌ನ ಭದ್ರತಾ ಸಚಿವ ಡಾನ್ ಜಾರ್ವಿಸ್, “ಚೀನಾದ ಗುಪ್ತಚರ ಸಂಸ್ಥೆಗಳ ಗುರಿಯಾಗಬಹುದಾದ ಪ್ರತಿಯೊಬ್ಬರೂ ಇಂತಹ ಆನ್‌ಲೈನ್ ಆಮಿಷಗಳ ಬಗ್ಗೆ ತೀವ್ರ ಜಾಗರೂಕರಾಗಿರಬೇಕು. ನಮ್ಮ ದೇಶದ ಭದ್ರತೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು” ಎಂದು ವಿನಂತಿಸಿದ್ದಾರೆ. ಆದರೆ, ಚೀನಾ ಈ ಆರೋಪವನ್ನು ನಿರಾಕರಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ರಿಸರ್ವ್ ಬ್ಯಾಂಕ್ ಎಂಪಿಸಿ ಸಭೆ; ರೆಪೋ ದರ ಇಳಿಕೆಯಾಗುತ್ತಾ? ಶುಕ್ರವಾರ ನಿರ್ಧಾರ ಪ್ರಕಟಿಸಲಿದ್ದಾರೆ ಆರ್​ಬಿಐ ಗವರ್ನರ್ – Kannada News

ನವದೆಹಲಿ, ಜೂನ್ 4: ತೈಲ ಬಿಕ್ಕಟ್ಟು ಮುಂದುವರಿದಿರುವುದು, ಹಾಗು ಹಣದುಬ್ಬರ ಒತ್ತಡ ಎದುರಿಸುತ್ತಿರುವುದು, ಈ ಪರಿಸ್ಥಿತಿಯಲ್ಲಿ ಎಲ್ಲರ ಚಿತ್ತ ಆರ್​ಬಿಐನ ಎಂಪಿಸಿ ಸಭೆ ಮೇಲೆ ನೆಟ್ಟಿದೆ. ನಿನ್ನೆ (ಜೂನ್ 3) ಆರಂಭವಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್​ನ (RBI) ಹಣಕಾಸು ನೀತಿ ಸಮಿತಿ (MPC) ಸಭೆಯ ನಿರ್ಧಾರಗಳು ಜೂನ್ 5ರಂದು ಹೊರಬರಲಿವೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರೆಪೋ ದರ (Repo Rate) ಮತ್ತು ಇತರ ಪ್ರಮುಖ ಆರ್ಥಿಕ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.

ರೆಪೋ ದರದಲ್ಲಿ ಬದಲಾವಣೆ ಇಲ್ಲ?

ಹೆಚ್ಚಿನ ಆರ್ಥಿಕ ತಜ್ಞರು ಮತ್ತು ಎಸ್‌ಬಿಐ (SBI) ರಿಸರ್ಚ್ ವರದಿಗಳ ಪ್ರಕಾರ, ಆರ್‌ಬಿಐ ಈ ಬಾರಿಯೂ ಸಹ ರೆಪೋ ದರವನ್ನು ಶೇ. 5.25 ಮಟ್ಟದಲ್ಲೇ ಮುಂದುವರಿಸುವ (ಯಾವುದೇ ಬದಲಾವಣೆ ಮಾಡದ) ಸಾಧ್ಯತೆಯಿದೆ.

ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ, ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಭೀತಿಯಿಂದಾಗಿ ಆರ್‌ಬಿಐ ಸದ್ಯಕ್ಕೆ ದರ ಕಡಿತ ಮಾಡುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎನ್ನಲಾಗಿದೆ. ಹಾಗೆಯೆ, ಆರ್‌ಬಿಐ ತನ್ನ ‘Neutral’ (ತಟಸ್ಥ) ನಿಲುವನ್ನು ಮುಂದುವರಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಂಪೂರ್ಣ ಎಥನಾಲ್ ಇಂಧನದಲ್ಲಿ ಓಡಬಲ್ಲ ಭಾರತದ ಮೊದಲ ಪ್ಯಾಸೆಂಜರ್ ಕಾರು ಬಿಡುಗಡೆ

ಸಾಮಾನ್ಯ ಜನರ ಮೇಲಾಗುವ ಪರಿಣಾಮಗಳು

ರೆಪೋ ದರದಲ್ಲಿ ಯಾವುದೇ ಕಡಿತವಾಗದಿದ್ದರೆ, ನಿಮ್ಮ ಹೋಮ್ ಲೋನ್ (ಗೃಹ ಸಾಲ), ಕಾರ್ ಲೋನ್ ಅಥವಾ ಪರ್ಸನಲ್ ಲೋನ್‌ಗಳ ಇಎಂಐ ಸದ್ಯಕ್ಕೆ ಕಡಿಮೆಯಾಗುವುದಿಲ್ಲ. ಸಾಲದ ಮೇಲಿನ ಬಡ್ಡಿ ದರಗಳು ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ. ಬ್ಯಾಂಕುಗಳಲ್ಲಿ ನೀವು ಇಡುವ ಎಫ್‌ಡಿ (Fixed Deposit) ಗಳ ಮೇಲಿನ ಬಡ್ಡಿ ದರಗಳು ಸಹ ಸದ್ಯಕ್ಕೆ ಸ್ಥಿರವಾಗಿರಲಿವೆ. ಹೂಡಿಕೆದಾರರಿಗೆ ಬಡ್ಡಿ ದರ ಹೆಚ್ಚಳದ ನಿರೀಕ್ಷೆಯಿದ್ದರೂ, ಆರ್‌ಬಿಐ ನಿರ್ಧಾರದ ಮೇಲೆಯೇ ಇದು ನಿರ್ಧಾರವಾಗಲಿದೆ.

ಆರ್​ಬಿಐ ಮುಂದಿರುವ ಪ್ರಮುಖ ಸವಾಲುಗಳು

ಇತ್ತೀಚಿನ ದಿನಗಳಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ತೀವ್ರ ಕುಸಿತ ಕಂಡಿದೆ. ಇದನ್ನು ನಿಯಂತ್ರಿಸುವುದು ಆರ್‌ಬಿಐ ಮುಂದಿರುವ ದೊಡ್ಡ ಸವಾಲಾಗಿದೆ.

ದೇಶದಲ್ಲಿ ರೀಟೇಲ್ ಹಣದುಬ್ಬರವು ಆರ್‌ಬಿಐನ ನಿಯಂತ್ರಣ ಮಿತಿಯಲ್ಲಿದ್ದರೂ (ಶೇ. 4 ರ ಗುರಿ), ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯು ಆತಂಕ ಮೂಡಿಸುತ್ತಿದೆ. ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರ ದರವು ಶೇ. 5 ಅನ್ನು ದಾಟಬಹುದು ಎಂದು ಎಸ್​ಬಿಐ ರಿಸರ್ಚ್​ನ ತಜ್ಞರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು

ಎಂಪಿಸಿ ಸಭೆಯಲ್ಲಿ ಈ ಹಣದುಬ್ಬರ, ಜಿಡಿಪಿ ದರಗಳು ಮುಂದಿನ ಒಂದು ವರ್ಷದಲ್ಲಿ ಎಷ್ಟಿರಬಹುದು ಎನ್ನುವ ಲೆಕ್ಕಾಚಾರವನ್ನು ಮಾಡಲಾಗಿರುತ್ತದೆ. ಅದನ್ನು ಆರ್​ಬಿಐ ಗವರ್ನರ್ ಬಹಿರಂಗಪಡಿಸಲಿದ್ದಾರೆ.

ಒಟ್ಟಾರೆ, ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯಕ್ಕೆ ರೆಪೊ ದರದಲ್ಲಿ ಬದಲಾವಣೆ ಮಾಡುವ ಮಟ್ಟಕ್ಕೆ ಕ್ರಮ ತೆಗೆದುಕೊಳ್ಳದೆ ಕಾದು ನೋಡುವ ತಂತ್ರ ಅನುಸರಿಸುವ ಸಾಧ್ಯತೆ ಇದೆ. ಜಾಗತಿಕ ತೈಲ ಬಿಕ್ಕಟ್ಟು ಶಮನಗೊಂಡ ಪಕ್ಷದಲ್ಲಿ ಮುಂಬರುವ ಎಂಪಿಸಿ ಸಭೆಗಳಲ್ಲಿ ರೆಪೋ ದರ ಕಡಿತದ ಸಾಹಸಕ್ಕೆ ಕೈಹಾಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಎಸ್​​ಬಿಐ ಬ್ಯಾಂಕ್ ಒಕ್ಕೂಟಕ್ಕೆ ಕೋಟ್ಯಂತರ ರೂ ವಂಚನೆ: ದೀಪಕ್ ಕೇಬಲ್ಸ್ ಲಿಮಿಟೆಡ್ ನಿರ್ದೇಶಕ ಅರೆಸ್ಟ್​ – Kannada News

ಪ್ರಾತಿನಿಧಿಕ ಚಿತ್ರImage Credit source: Getty images

ಬೆಂಗಳೂರು, ಜೂನ್​ 04: ಎಸ್​ಬಿಐ ಬ್ಯಾಂಕ್ ಒಕ್ಕೂಟಕ್ಕೆ 899.35 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಕೇಬಲ್ಸ್(ಇಂಡಿಯಾ) ಲಿಮಿಟೆಡ್ (Deepak Cables (India) Limited) ನಿರ್ದೇಶಕ ಕರುಟೂರಿ ವೆಂಕಟೇಶ್ವರ್ ರಾವ್​​ರನ್ನು ಬೆಂಗಳೂರು ವಲಯದ ಇಡಿ (ED) ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಇಡಿ ಅಧಿಕಾರಿಗಳು ದೀಪಕ್ ಕೇಬಲ್ಸ್ ಮೇಲೆ ದಾಳಿ ಮಾಡಿ ಕೋಟ್ಯಂತರ ನಗದು, ಆಸ್ತಿ ಜಪ್ತಿ ಮಾಡಿದ್ದರು.

ಮುಖ್ಯಾಂಶಗಳು

  • SBI ಬ್ಯಾಂಕ್ ಒಕ್ಕೂಟಕ್ಕೆ 899.35 ಕೋಟಿ ರೂ. ವಂಚನೆ
  • ಇಡಿ ಅಧಿಕಾರಿಗಳಿಂದ ಕರುಟೂರಿ ವೆಂಕಟೇಶ್ವರ್ ರಾವ್ ಬಂಧನ
  • 10 ದಿನ ಇಡಿ ಕಸ್ಟಡಿಗೆ ನೀಡಿದ ಕೋರ್ಟ್​

ಇದನ್ನೂ ಓದಿ: ಬೆಂಗಳೂರಿನ ದೀಪಕ್ ಕೇಬಲ್ಸ್ ಲಿಮಿಟೆಡ್ ಮೇಲೆ ಇಡಿ ದಾಳಿ: ನಗದು, ಚಿನ್ನಾಭರಣ ಸೇರಿದಂತೆ 18 ಕೋಟಿ ರೂ ಫ್ರೀಜ್

ಎಸ್​​​ಬಿಐ ಬ್ಯಾಂಕ್ ಒಕ್ಕೂಟಕ್ಕೆ 899.35 ಕೋಟಿ ರೂ. ವಂಚನೆ ಆರೋಪ ಬೆನ್ನಲ್ಲೇ ಮೇ 19 ಮತ್ತು 29ರಂದು ದೀಪಕ್ ಕೇಬಲ್ಸ್(ಇಂಡಿಯಾ) ಲಿಮಿಟೆಡ್​ ಕಂಪನಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ವೇಳೆ ಕೋಟ್ಯಂತರ ನಗದು ಸೇರಿದಂತೆ ಆಸ್ತಿ ಜಪ್ತಿ ಮಾಡಿದ್ದರು. ಅಷ್ಟೇ ಅಲ್ಲದೆ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿದ್ದ 18 ಕೋಟಿ ರೂ ಹಣವನ್ನು ಫ್ರೀಜ್ ಮಾಡಲಾಗಿತ್ತು. ಇದೀಗ ನಿರ್ದೇಶಕ ಕರುಟೂರಿ ವೆಂಕಟೇಶ್ವರ್ ರಾವ್​​ರನ್ನು ಬಂಧಿಸಲಾಗಿದೆ. ಸದ್ಯ 10 ದಿನ ಇ.ಡಿ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಚಿತ್ರದುರ್ಗ: ಮಾಜಿ ಜಿಪಂ ಸದಸ್ಯನಿಂದಲೇ ಖಾದಿ ಸಹಕಾರ ಸಂಘದ ಕೋಟ್ಯಂತರ ಆಸ್ತಿ ಕಬಳಿಕೆ

ಬರೋಬ್ಬರಿ 899 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಕೇಬಲ್ಸ್ ಇಂಡಿಯಾ ಲಿಮಿಟೆಡ್ ಕಂಪನಿ ವಿರುದ್ಧ ಇಡಿ ತನಿಖೆ ಚುರುಕುಗೊಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಕ್ಕೂಟಗಳಿಂದ ಪಡೆದಿದ್ದ ಬೃಹತ್ ಮೊತ್ತದ ಸಾಲವನ್ನು ನಿಯಮಬಾಹಿರವಾಗಿ ಇತರೆಡೆಗೆ ವರ್ಗಾಯಿಸಿ, ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಇದೆ. ಇನ್ನು ಈ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಆ ಬೆನ್ನಲ್ಲೇ ಇಡಿ ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs AFG: ಏಕದಿನ ಸರಣಿಯಿಂದ ಕೊಹ್ಲಿ ಜೊತೆಗೆ ರೋಹಿತ್ ಕೂಡ ಔಟ್? – Kannada News

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರಿಂದ ಆರಂಭವಾಗಲಿದೆ. ಅದಾದ ನಂತರ, ಜೂನ್ 14 ರಿಂದ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿರುವುದರಿಂದ, ಅಭಿಮಾನಿಗಳು ಅವರನ್ನು ಟೀಂ ಇಂಡಿಯಾ ಜೆರ್ಸಿಯಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಆದಾಗ್ಯೂ, ಈ ಸರಣಿ ಪ್ರಾರಂಭವಾಗುವ ಮೊದಲು, ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ವಿರಾಟ್ ಕೊಹ್ಲಿ ಈ ಸರಣಿಯಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರೋಹಿತ್ ಶರ್ಮಾ ಕೂಡ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಕೊಹ್ಲಿ ಜೊತೆಗೆ ರೋಹಿತ್​ಗೂ ಇಂಜುರಿ

ವಿರಾಟ್ ಕೊಹ್ಲಿಯಂತೆಯೇ ರೋಹಿತ್ ಕೂಡ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ರೋಹಿತ್ ಕೂಡ ಐಪಿಎಲ್ 2026 ರಲ್ಲಿ ಕೆಲವು ಪಂದ್ಯಗಳನ್ನು ಆಡಲಿಲ್ಲ. ವಿರಾಟ್ ಕೊಹ್ಲಿ ಸರಣಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದ್ದರೂ, ರೋಹಿತ್ ಇನ್ನೂ ಫಿಟ್ನೆಸ್ ಕ್ಲಿಯರೆನ್ಸ್ ಪಡೆಯಬೇಕಾಗಿದೆ. ಒಂದು ವೇಳೆ ಇವರಿಬ್ಬರು ಆಡದಿದ್ದರೆ, ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಅವರು ಏಕದಿನ ತಂಡದಲ್ಲಿ ಆಡುವ ಅವಕಾಶ ಪಡೆಯಬಹುದು.

ಜೂನ್ 6 ರಂದು ನಿರ್ಧಾರ

ಜೂನ್ 6 ರಂದು ಆಯ್ಕೆದಾರರು ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ, ಅಫ್ಘಾನಿಸ್ತಾನ ಸರಣಿಗೆ ಹಾಗೂ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ರೋಹಿತ್ ಮತ್ತು ವಿರಾಟ್ ಅವರ ಫಿಟ್ನೆಸ್ ವರದಿಗಳನ್ನು ಪರಿಶೀಲಿಸಿದ ನಂತರವೇ ಆಯ್ಕೆದಾರರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಯಾವಾಗ?

ಭಾರತ-ಅಫ್ಘಾನಿಸ್ತಾನ ಸರಣಿ

  • ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರಿಂದ ನ್ಯೂ ಚಂಡೀಗಢದಲ್ಲಿ ನಡೆಯಲಿದೆ.
  • ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜೂನ್ 13 ರಂದು ಧರ್ಮಶಾಲಾದಲ್ಲಿ ನಡೆಯಲಿದೆ.
  • ಎರಡನೇ ಏಕದಿನ ಪಂದ್ಯ ಜೂನ್ 17 ರಂದು ಲಕ್ನೋದಲ್ಲಿ ನಡೆಯಲಿದೆ.
  • ಮೂರನೇ ಏಕದಿನ ಪಂದ್ಯ ಜೂನ್ 20 ರಂದು ಚೆನ್ನೈನಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಹಗಲು-ರಾತ್ರಿ ಪಂದ್ಯಗಳಾಗಿರುತ್ತವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version