ಕನ್ನಡ ಚಿತ್ರರಂಗದ ಖ್ಯಾತ ನಟಿ ನಿಮಿಕಾ ರತ್ನಾಕರ್ ಅವರು ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಖ್ಯಾತ ಕ್ರಿಕೆಟರ್ಗಳ ಜೊತೆ ಅವರಿಗೆ ಸ್ನೇಹ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಹೊಸ ಫೋಟೋಗಳು ಲಭ್ಯವಾಗಿವೆ.
ಕ್ರಿಕೆಟರ್ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭಕ್ಕೆ ನಿಮಿಕಾ ರತ್ನಾಕರ್ ಕೂಡ ಕುಟುಂಬ ಸಮೇತರಾಗಿ ಹಾಜರಿ ಹಾಕಿದ್ದರು.
ಈ ಸಮಾರಂಭಕ್ಕೆ ಶ್ರೇಯಸ್ ಅಯ್ಯರ್ ಕೂಡಾ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶ್ರೇಯಸ್ ಮತ್ತು ನಿಮಿಕಾ ಅಚಾನಕ್ಕಾಗಿ ಭೇಟಿಯಾಗಿ ಸಂಭ್ರಮಿಸಿದ್ದಾರೆ. ಫೋಟೋ ಹಂಚಿಕೊಂಡು ಅವರು ಖುಷಿಪಟ್ಟಿದ್ದಾರೆ.
ನಿಮಿಕಾ ಕ್ರಿಕೆಟ್ ಪ್ರೇಮಿಯೂ ಹೌದು. ಕಳೆದ ಬಾರಿ ಆರ್ಸಿಬಿ ಫೈನಲ್ ಪಂದ್ಯ ನಡೆದಾಗ ಅಹಮದಾಬಾದ್ಗೆ ತೆರಳಿ ಗೆಲುವಿನ ಖುಷಿಯಲ್ಲಿ ಭಾಗಿಯಾಗಿದ್ದರು. ಹಾಗಾಗಿ ಕ್ರಿಕೆಟ್ ಜಗತ್ತಿನ ಜೊತೆ ಅವರಿಗೆ ನಂಟು ಇದೆ.
ಮಂಗಳೂರಿನ ಬೆಡಗಿ ನಿಮಿಕಾ ರತ್ನಾಕರ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಟಿಯಾಗಿ ಖ್ಯಾತಿ ಪಡೆದುಕೊಂಡಿರುವ ಅವರು ಸಿನಿಮಾ ಮಾತ್ರವಲ್ಲದೇ ಹಲವು ವಿಷಯಗಳಲ್ಲಿ ಕ್ರಿಯಾಶೀಲವಾಗಿ ಗುರುತಿಸಿಕೊಂಡಿದ್ದಾರೆ.
ಬೆಂಗಳೂರು, ಮಾರ್ಚ್ 15: ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಹೆಚ್ಚಾದ ತಾಪಮಾನದೊಂದಿಗೆ ಒಣ ಹವೆ (Weather Forecast) ಆವರಿಸಿದ್ದು, ಇಂದೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿ ಮಾತ್ರ ತುಂತುರು ಮಳೆಯಾಗಲಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನ ಇದೇ ರೀತಿಯ ಶುಷ್ಕ ವಾತಾವರಣ ಇರಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಒಣ ಹವೆ?
ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಾರ್ಚ್ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ
ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.
ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.
2008 ರಿಂದ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಶ್ರೀಮಂತ ಲೀಗ್. ಯುವ ಪ್ರತಿಭೆಗಳನ್ನು ಸ್ಟಾರ್ ಆಟಗಾರರನ್ನಾಗಿ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಕೂಡ ಐಪಿಎಲ್ಗೆ ಸಲ್ಲಬೇಕು. ಅನೇಕ ಆಟಗಾರರು ಐಪಿಎಲ್ ಮೂಲಕವೇ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಇದೇ ಕಾರಣದಿಂದಾಗಿ ಯುವ ಆಟಗಾರರು ಕೂಡ ಐಪಿಎಲ್ನಲ್ಲಿ ಭಾಗವಹಿಸುವುದನ್ನು ಎದುರು ನೋಡುತ್ತಿರುತ್ತಾರೆ.
ಅದರಂತೆ ಐಸಿಸಿ ಸ್ಥಾನಮಾನ ಹೊಂದಿರುವ ಬಹುತೇಕ ರಾಷ್ಟ್ರಗಳ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಪಾಕಿಸ್ತಾನದ 11 ಸ್ಟಾರ್ ಆಟಗಾರರು 2008ರ ಐಪಿಎಲ್ನಲ್ಲಿ ಭಾಗವಹಿಸಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗಿದ್ರೆ ಐಪಿಎಲ್ ಆಡಿದ್ದ ಪಾಕ್ ಆಟಗಾರರು ಯಾರೆಲ್ಲಾ ನೋಡೋಣ…
ಮೊಹಮ್ಮದ್ ಹಫೀಜ್: ಪಾಕಿಸ್ತಾನದ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಮೊಹಮ್ಮದ್ ಆಸಿಫ್: ಪಾಕ್ ವೇಗಿ ಮೊಹಮ್ಮದ್ ಆಸಿಫ್ ಡೆಲ್ಲಿ ಡೇರ್ ಡೆವಿಲ್ಸ್ ಪರ 8 ಪಂದ್ಯಗಳನ್ನು ಆಡಿದ್ದರು.
ಕಮ್ರಾನ್ ಅಕ್ಮಲ್: ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕಮ್ರಾನ್ ಅಕ್ಮಲ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಸಲ್ಮಾನ್ ಬಟ್: ಪಾಕ್ ತಂಡದ ಆರಂಭಿಕ ಆಟಗಾರನಾಗಿದ್ದ ಸಲ್ಮಾನ್ ಬಟ್ 2008 ರಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದರು.
ಶೋಯೆಬ್ ಅಖ್ತರ್: ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ 3 ಪಂದ್ಯಗಳನ್ನು ಆಡಿದ್ದರು.
ಶೋಯೆಬ್ ಮಲಿಕ್: ಪಾಕ್ ಆಲ್ರೌಂಡರ್ ಶೋಯೆಬ್ ಮಲಿಕ್ ಐಪಿಎಲ್ನಲ್ಲಿ ವೀರೇಂದ್ರ ಸೆಹ್ವಾಗ್ ನಾಯಕತ್ವದ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದರು.
ಉಮರ್ ಗುಲ್: ಪಾಕ್ ವೇಗಿ ಉಮರ್ ಗುಲ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದರು.
ಸೊಹೈಲ್ ತನ್ವೀರ್: ಚೊಚ್ಚಲ ಐಪಿಎಲ್ನ ಅತ್ಯಂತ ಯಶಸ್ವಿ ಆಟಗಾರನೆಂದರೆ ಸೊಹೈಲ್ ತನ್ವೀರ್. ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ತನ್ವೀರ್ ಮೊದಲ ಐಪಿಎಲ್ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು.
ಮಿಸ್ಬಾ-ಉಲ್-ಹಕ್: ಅನಿಲ್ ಕುಂಬ್ಳೆ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪಾಕಿಸ್ತಾನದ ಆಟಗಾರ ಮಿಸ್ಬಾ ಉಲ್ ಹಕ್ ಪ್ರತಿನಿಧಿಸಿದ್ದರು. ಅಲ್ಲದೆ ಆರ್ಸಿಬಿ ಪರ 8 ಪಂದ್ಯಗಳನ್ನು ಆಡಿದ್ದ ಮಿಸ್ಬಾ ಗಳಿಸಿದ್ದು ಒಟ್ಟಾರೆ 117 ರನ್ಗಳನ್ನು ಮಾತ್ರ.
ಯೂನಿಸ್ ಖಾನ್: 2008ರಲ್ಲಿ ಪಾಕ್ ತಂಡದ ಮಾಜಿ ನಾಯಕ ಯೂನಿಸ್ ಖಾನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಶಾಹಿದ್ ಅಫ್ರಿದಿ: ಐಪಿಎಲ್ನ ಮೊದಲ ಆವೃತ್ತಿಯಲ್ಲಿ ಆಡಂ ಗಿಲ್ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಶಾಹಿದ್ ಅಫ್ರಿದಿ ಕಾಣಿಸಿಕೊಂಡಿದ್ದರು.
2008 ರಲ್ಲಿ ನಡೆದ ಮುಂಬೈ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ್ ಆಟಗಾರರನ್ನು ಐಪಿಎಲ್ನಿಂದ ನಿಷೇಧಿಸಲಾಗಿತ್ತು. ಅದರಂತೆ ಪಾಕ್ ಆಟಗಾರರ ಮೇಲಿನ ಐಪಿಎಲ್ ಬ್ಯಾನ್ ಈಗಲೂ ಮುಂದುವರೆದಿದೆ.
ಟೆಹ್ರಾನ್, ಮಾರ್ಚ್ 15:ಇಸ್ರೇಲ್ ಮತ್ತು ಅಮೆರಿಕ ನಿರಂತರವಾಗಿ ಇರಾನ್(Iran) ಮೇಲೆ ದಾಳಿ ಮಾಡುತ್ತಿವೆ. ಈ ದಾಳಿಗಳಿಗೆ ಇರಾನ್ ಕೂಡ ಪ್ರತಿಕ್ರಿಯಿಸುತ್ತಿದೆ. ಏತನ್ಮಧ್ಯೆ, ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯ ಬಗ್ಗೆ ಇರಾನ್ ಹೇಳಿಕೆ ನೀಡಿದೆ.ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಬಗ್ಗೆ ಇರಾನ್ ವಿದೇಶಾಂಗ ಸಚಿವ ಅರಘ್ಚಿ ಸ್ಪಷ್ಟನೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಎಲ್ಲಾ ದೇಶಗಳಿಗೆ ಮುಚ್ಚಲಾಗಿಲ್ಲ, ತಮ್ಮ ಶತ್ರುಗಳಿಗೆ ಮಾತ್ರ ಮುಚ್ಚಲಾಗಿದೆ.
ನಮ್ಮ ಮತ್ತು ನಮ್ಮ ಮಿತ್ರರಾಷ್ಟ್ರಗಳ ಮೇಲೆ ದಾಳಿ ಮಾಡುವ ಟ್ಯಾಂಕರ್ಗಳು ಮತ್ತು ಹಡಗುಗಳಿಗೆ ಜಲಸಂಧಿಯನ್ನು ಮುಚ್ಚಲಾಗುವುದು ಎಂದು ಹೇಳಿದರು. ಹಲವಾರು ಭಾರತೀಯ ಹಡಗುಗಳು ಸೇರಿದಂತೆ ನೂರಾರು ಹಡಗುಗಳು ಪರ್ಷಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿಯ ನಡುವಿನ ಕಿರಿದಾದ ಸಮುದ್ರ ಮಾರ್ಗದಲ್ಲಿ ಸಿಲುಕಿಕೊಂಡಿರುವ ಸಮಯದಲ್ಲಿ ಇರಾನಿನ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿ ಕೇವಲ ಅಮೆರಿಕ ಹಾಗೂ ಇಸ್ರೇಲ್ಗೆ ಮಾತ್ರ ಮುಚ್ಚಿದೆ ಎಂದರು. ಭದ್ರತಾ ಕಾಳಜಿ ಯಿಂದಾಗಿ ಈ ಮಾರ್ಗವನ್ನು ಮುಚ್ಚಲಾಗಿದೆ ಎಂದು ಹೇಳಿದ್ದಾರೆ.ಅನೇಕರು ತಮ್ಮ ಭದ್ರತಾ ಕಾಳಜಿಯಿಂದಾಗಿ ಈ ಮಾರ್ಗದ ಮೂಲಕ ಹಾದುಹೋಗಲು ಬಯಸುವುದಿಲ್ಲ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಮತ್ತೊಂದೆಡೆ, ಅನೇಕ ಟ್ಯಾಂಕರ್ಗಳು ಮತ್ತು ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತಿವೆ ಎಂದಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕ ನಡುವೆ ಇರಾನ್ ಜೊತೆ ನಡೆಯುತ್ತಿರುವ ಯುದ್ಧ 16ನೇ ದಿನಕ್ಕೆ ಕಾಲಿಟ್ಟಿದೆ. ಹಾರ್ಮುಜ್ ಜಲಸಂಧಿಯ ಭದ್ರತೆಗೆ ಸಹಾಯ ಮಾಡಲು ಹಡಗುಗಳನ್ನು ಕಳುಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವದ ಇತರ ಹಲವು ದೇಶಗಳನ್ನು ಒತ್ತಾಯಿಸಿದ್ದಾರೆ.
ಇರಾನ್ನ ಮಿಲಿಟರಿ ಸಾಮರ್ಥ್ಯ ಸಂಪೂರ್ಣವಾಗಿ ನಾಶವಾಗಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿಕೊಂಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಅಮೆರಿಕವು ಅತಿಯಾದ ಬಲಪ್ರಯೋಗ ಮಾಡುತ್ತದೆ ಎಂದು ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ.
ಬೆಂಗಳೂರು,ಮಾರ್ಚ್ 15: ಕರ್ನಾಟಕದಲ್ಲಿ (Karnataka) ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ (LPG) ಕೊರತೆ ತೀವ್ರವಾಗುತ್ತಿದ್ದು, ಇದರ ಪರಿಣಾಮವಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಒಂದೇ ಒಂದು ಮಿಸ್ಡ್ ಕಾಲ್ಗೆ ಸಿಗುತ್ತಿದ್ದ ಗ್ಯಾಸ್ ಸಿಲಿಂಡರ್ಗಾಗಿ ಈಗ ಹೋಟೆಲ್ ಮಾಲೀಕರು ಪರದಾಡುವಂತ ಸ್ಥಿತಿ ಎದುರಾಗಿದೆ. ಈ ಕೊರತೆಯನ್ನು ಕೆಲವು ದಂಧೆಕೋರರು ದುರುಪಯೋಗಪಡಿಸಿಕೊಂಡು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಬೆಂಗಳೂರಿನಲ್ಲಿ 1,900 ರೂಪಾಯಿ ಬೆಲೆಯ ವಾಣಿಜ್ಯ ಸಿಲಿಂಡರ್ ಅನ್ನು ಕಾಳಸಂತೆಯಲ್ಲಿ ಸುಮಾರು 7 ಸಾವಿರ ರೂಪಾಯಿಗೆ ಮಾರಲಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಆರೋಪಿಸಿದ್ದಾರೆ. ಮೀನಾಕ್ಷಿ ಕಾಫಿ ಬಾರ್ ಮಾಲೀಕ ಸುನೀಲ್ ಮಾತನಾಡಿ, ಇದು ಕೃತಕ ಅಭಾವ ಸೃಷ್ಟಿಸಿ ನಡೆಯುತ್ತಿರುವ ದಂಧೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಮೈಸೂರಿನಲ್ಲೂ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಂದು ಸಿಲಿಂಡರ್ಗೆ 4 ರಿಂದ 5 ಸಾವಿರ ರೂಪಾಯಿ ವರೆಗೆ ಹಣ ಪಡೆದು ಮಾರಾಟ ಮಾಡಲಾಗುತ್ತಿದೆ ಎಂದು ಕೆಲ ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಬೆಂಗಳೂರು ಹೋಟೆಲ್ಗಳಲ್ಲಿ ತಿಂಡಿ ದರ ಹೆಚ್ಚಳ
ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕೀಡಾದ ಹೋಟೆಲ್ ಮಾಲೀಕರು ಅದರ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಶಿವಾನಂದ ಸರ್ಕಲ್ನಲ್ಲಿರುವ ಬೆಂಗಳೂರು ಕಫೆಯಲ್ಲಿ ಉಪಾಹಾರಗಳ ಬೆಲೆಯನ್ನು 10 ರೂಪಾಯಿವರೆಗೆ ಹೆಚ್ಚಿಸಲಾಗಿದೆ. ಲಾಲ್ಬಾಗ್ ರಸ್ತೆಯಲ್ಲಿರುವ ಸತ್ಕಾರ್ ಹೋಟೆಲ್ನಲ್ಲಿ ಗ್ಯಾಸ್ ಕೊರತೆಯಿಂದ ಸೌದೆ ಒಲೆ ಬಳಸಿ ಅಡುಗೆ ಮಾಡಲಾಗುತ್ತಿದೆ. ಜೊತೆಗೆ ಊಟ ಮತ್ತು ತಿಂಡಿಗಳ ಬೆಲೆಯನ್ನೂ 5 ರಿಂದ 20 ರೂಪಾಯಿ ತನಕ ಹೆಚ್ಚಿಸಲಾಗಿದೆ.
ಗೃಹ ಬಳಕೆಯ ಎಲ್ಪಿಜಿ ವಾಣಿಜ್ಯ ಉದ್ದೇಶಕ್ಕೆ ಬಳಕೆ: ಹಲವೆಡೆ ದಾಳಿ
ಇನ್ನೂ ಕೆಲವು ಕಡೆ ವಾಣಿಜ್ಯ ಸಿಲಿಂಡರ್ ಸಿಗದ ಕಾರಣ ಗೃಹಬಳಕೆಯ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯಾದ್ಯಂತ ದಾಳಿ ನಡೆಸಿ ಹಲವು ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದೆ. ಬೆಂಗಳೂರಿನ ಪೀಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209, ಶಿವಮೊಗ್ಗದಲ್ಲಿ 3, ಯಾದಗಿರಿಯಲ್ಲಿ 46 ಮತ್ತು ದಾವಣಗೆರೆಯಲ್ಲಿ 13 ಸಿಲಿಂಡರ್ ಸೇರಿ ಒಟ್ಟು 316 ಸಿಲಿಂಡರ್ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆಯಂತೆ ವಾಣಿಜ್ಯ ಸಿಲಿಂಡರ್ಗಳ ಪೂರೈಕೆಯಲ್ಲಿ 20 ಶೇಕಡಾವರೆಗೆ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣದ ಕ್ಯಾಂಟೀನ್ಗಳು, ದೇವಸ್ಥಾನಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಬೆಂಗಳೂರಿನ ಹಲವು ಹೋಟೆಲ್ಗಳು ಬಂದ್
ಸಿಲಿಂಡರ್ ಕೊರತೆಯಿಂದ ಕೆಲವು ಹೋಟೆಲ್ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಿಸಿದೆ. ಬೆಂಗಳೂರಿನ ಆನಂದ್ ರಾವ್ ಸರ್ಕಲ್ನಲ್ಲಿರುವ ಕೃಷ್ಣಸಾಗರ್ ಹೋಟೆಲ್, ಶೇಷಾದ್ರಿಪುರಂನ ಹೋಟೆಲ್ ಸನ್ಮಾನ್ ಮತ್ತು ಬಸವನಗುಡಿಯ ಬೈಟು ಕಾಫಿ ಹೋಟೆಲ್ ತಾತ್ಕಾಲಿಕವಾಗಿ ಬಂದ್ ಆಗಿವೆ.
ಆದರೆ ಕೆಲ ಹೋಟೆಲ್ ಮಾಲೀಕರು ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದಾರೆ. ಶಿವಮೊಗ್ಗದ ದುರ್ಗಿಗುಡಿಯಲ್ಲಿ ಇರುವ ಶುಭಂ ಹೋಟೆಲ್ನಲ್ಲಿ ಇದ್ದಿಲು ಬಳಸಿ ಅಡುಗೆ ಮಾಡಲಾಗುತ್ತಿದೆ. ಚಿತ್ರದುರ್ಗದ ಕೆಲವು ಹೋಟೆಲ್ಗಳಲ್ಲಿ ಆಧುನಿಕ ಒಲೆಗಳನ್ನು ಬಳಸಿ ಅಡುಗೆ ಸಿದ್ಧಪಡಿಸಲಾಗುತ್ತಿದೆ.
ಇನ್ನೂ ಕಲಬುರಗಿಯ ಶರಣಬಸವೇಶ್ವರ ಮಠದಲ್ಲಿ ನಿತ್ಯ ಸಾವಿರಾರು ಭಕ್ತರಿಗೆ ನೀಡಲಾಗುತ್ತಿದ್ದ ದಾಸೋಹಕ್ಕೂ ಸಿಲಿಂಡರ್ ಕೊರತೆಯ ಪರಿಣಾಮ ತಟ್ಟಿದೆ. ಸದ್ಯ ಮಠದಲ್ಲಿ ಸೌದೆ ಒಲೆ ಬಳಸಿ ಅಡುಗೆ ಮಾಡಲಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲೂ ಪ್ರಸಾದ ಸಿದ್ಧಪಡಿಸಲು ಸೌದೆ ಒಲೆ ಬಳಸಲಾಗುತ್ತಿದೆ.
ಸಿಲಿಂಡರ್ ಬುಕ್ ಮಾಡುವಾಗ ಸೈಬರ್ ವಂಚಕರ ಬಗ್ಗೆ ಎಚ್ಚರ
ಇದೇ ಸಂದರ್ಭದಲ್ಲಿ ಸೈಬರ್ ವಂಚಕರು ಕೂಡ ಜನರ ಸಂಕಷ್ಟವನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ. ‘ನಿಮ್ಮ ಹೆಸರಲ್ಲಿ ಗ್ಯಾಸ್ ಬುಕ್ ಆಗಿದೆ’ ಎಂಬಂತೆ ಕಳ್ಳ ಲಿಂಕ್ಗಳನ್ನು ಕಳುಹಿಸಿ ವಂಚಿಸಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಬೆಂಗಳೂರು ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.
ಅಡುಗೆ ಎಣ್ಣೆ ದರವೂ ಏರಿಕೆ
ಇನ್ನೊಂದೆಡೆ ಯುದ್ಧದ ಪರಿಣಾಮವಾಗಿ ಕೇವಲ ಗ್ಯಾಸ್ ಸಿಲಿಂಡರ್ ಮಾತ್ರವಲ್ಲ, ಅಡುಗೆ ಎಣ್ಣೆಯ ದರವೂ ಏರಿಕೆಯಾಗಿದೆ. 15 ಕೆಜಿ ಟಿನ್ಗೆ ಸುಮಾರು 150 ರೂಪಾಯಿ ಮತ್ತು ಲೀಟರ್ಗೆ 10 ರಿಂದ 15 ರೂಪಾಯಿ ತನಕ ಏರಿಕೆಯಾಗಿದೆ. ಆದರೆ ಮೊಟ್ಟೆಗಳ ರಫ್ತು ಕಡಿಮೆಯಾಗಿರುವ ಕಾರಣ ಅವುಗಳ ಬೆಲೆ ಇಳಿಕೆಯಾಗಿದೆ. ಮೊದಲು 6 ರಿಂದ 7 ರೂಪಾಯಿ ಇದ್ದ ಮೊಟ್ಟೆ ಈಗ 3 ರಿಂದ 4 ರೂಪಾಯಿಗೆ ಮಾರಾಟವಾಗುತ್ತಿದೆ.
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಕ್ಕಳ ನಾಲಿಗೆ ಮೇಲೆ ಓಂಕಾರ ಬರೆಯುವುದರ ಹಿಂದಿನ ರಹಸ್ಯವೇನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ ಸಂಪ್ರದಾಯಗಳು ಮತ್ತು ಸಂಸ್ಕಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಜನನದ ನಂತರ ಮಗುವಿಗೆ ನೀಡಲಾಗುವ ಸಂಸ್ಕಾರಗಳಲ್ಲಿ, ಅಕ್ಷರಾಭ್ಯಾಸದ ಸಂದರ್ಭದಲ್ಲಿ ಮಗುವಿನ ನಾಲಿಗೆಯ ಮೇಲೆ ಓಂಕಾರ ಬರೆಯುವುದು ಒಂದು ಪ್ರಮುಖ ಆಚರಣೆಯಾಗಿದೆ. ಓಂಕಾರವು ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನಮಾನವನ್ನು ಹೊಂದಿರುವ ಒಂದು ಶಬ್ದ. ಅಕಾರ, ಉಕಾರ, ಮಕಾರಗಳ ಸಮ್ಮಿಲನವೇ ಓಂಕಾರವಾಗಿದ್ದು, ಇದನ್ನು ಬ್ರಹ್ಮಾಂಡದ ಪ್ರಪ್ರಥಮ ಶಬ್ದ ಮತ್ತು ಪ್ರಣವ ಮಂತ್ರ ಎಂದು ಪರಿಗಣಿಸಲಾಗುತ್ತದೆ.
ಈ ಓಂಕಾರವನ್ನು ಮಗುವಿನ ನಾಲಿಗೆ ಮೇಲೆ ಬರೆಯುವುದರಿಂದ ಸರಸ್ವತಿ, ಗಣೇಶ, ಹಯಗ್ರೀವ ಹಾಗೂ ಜ್ಞಾನದ ಅಧಿದೇವತೆಗಳ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆಯಿದೆ. ತುಪ್ಪ ಮತ್ತು ಜೇನುತುಪ್ಪವನ್ನು ಬೆರೆಸಿ, ಬಂಗಾರ, ತುಳಸಿ, ಶ್ರೀಗಂಧ ಅಥವಾ ಬಿಲ್ವಪತ್ರೆಯ ಕಡ್ಡಿಯಿಂದ ಓಂಕಾರವನ್ನು ಬರೆಯಲಾಗುತ್ತದೆ. ಇದರಿಂದ ಮಗುವಿನ ಸಪ್ತ ಚಕ್ರಗಳು ಜಾಗೃತಗೊಂಡು, ಮಧುರ ಮಾತುಗಳು, ದೇಹದ ಕಾಂತಿ, ಜ್ಞಾನ ವೃದ್ಧಿ ಮತ್ತು ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಅಲ್ಲದೆ, ನಕಾರಾತ್ಮಕ ಶಕ್ತಿಗಳು ದೂರವಾಗಿ ಮಗು ಆರೋಗ್ಯವಂತವಾಗಿರುತ್ತದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 15, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷದ ಏಕಾದಶಿ ತಿಥಿ, ಶ್ರವಣ ನಕ್ಷತ್ರ, ಪರಿಘ ಯೋಗ ಮತ್ತು ಬಾಲವ ಕರಣ ಇರುತ್ತದೆ. ರಾಹುಕಾಲ ಸಂಜೆ 4:59 ರಿಂದ 6:30 ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭ ಕಾಲ ಬೆಳಿಗ್ಗೆ 10:58 ರಿಂದ ಮಧ್ಯಾಹ್ನ 12:28 ರವರೆಗೆ ಇರುತ್ತದೆ. ಈ ಪರ್ವ ದಿನದಂದು ಸೂರ್ಯನು ಕುಂಭ ರಾಶಿಯಿಂದ ಮೀನ ರಾಶಿಗೆ ಬೆಳಗಿನ ಜಾವ 1:08ಕ್ಕೆ ಪ್ರವೇಶಿಸುತ್ತಾನೆ. ಚಂದ್ರನು ಮಕರ ರಾಶಿಯಲ್ಲಿ ಶ್ರವಣ ನಕ್ಷತ್ರದಲ್ಲಿ ಸಂಚರಿಸುತ್ತಾನೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಬಹುಭಾಷಾ ನಟ ಆರ್. ಮಾಧವನ್ ಅವರ ಹೆಸರಿನಲ್ಲಿ ಕಿಡಿಗೇಡಿಯೊಬ್ಬ ನಕಲಿ ಸೋಶಿಯಲ್ ಮೀಡಿಯಾ (Fake Account) ಖಾತೆಯನ್ನು ತೆರೆದು ಜನರ ದಾರಿ ತಪ್ಪಿಸುತ್ತಿದ್ದಾನೆ. ಈ ವಿಷಯದ ಬಗ್ಗೆ ಸ್ವತಃ ಮಾಧವನ್ ಅವರೇ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಹೆಸರನ್ನು ಬಳಸಿಕೊಂಡು ಜನರನ್ನು ಸಂಪರ್ಕಿಸುತ್ತಿರುವ ಈ ವ್ಯಕ್ತಿಯೊಂದಿಗೆ ತಮಗಾಗಲಿ ಅಥವಾ ತಮ್ಮ ತಂಡಕ್ಕಾಗಲಿ ಯಾವುದೇ ಸಂಬಂಧವಿಲ್ಲ ಎಂದು ಮಾಧವನ್ (R. Madhavan) ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಮಾಧವನ್ ಅವರು, ‘ಇದು ವಂಚನೆಯ ಖಾತೆ. ಈ ವ್ಯಕ್ತಿ ನನ್ನ ಅಥವಾ ನನ್ನ ತಂಡದ ಪರವಾಗಿ ಮಾತನಾಡುತ್ತಿಲ್ಲ. ಇನ್ಸ್ಟಾಗ್ರಾಮ್ ಅಥವಾ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ನನ್ನ ಪರವಾಗಿ ಮಾತನಾಡಲು ಬೇರೆ ಯಾವುದೇ ಖಾತೆಗಳಿಲ್ಲ. ದಯವಿಟ್ಟು ಇಂತಹ ಖಾತೆಗಳ ಬಗ್ಗೆ ಜಾಗರೂಕರಾಗಿರಿ” ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳು ಮೋಸ ಹೋಗಬಾರದು ಎಂಬ ಉದ್ದೇಶದಿಂದ ಮಾಧವನ್ ಅವರು ಆ ನಕಲಿ ಖಾತೆಯ ಸ್ಕ್ರೀನ್ಶಾಟ್ ಸಹ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇಂಥ ಸೋಶಿಯಲ್ ಮೀಡಿಯಾ ಖಾತೆಗಳನ್ನು ನಂಬಿ ಜನರು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಾಧವನ್ ಮೊದಲೇ ಎಚ್ಚರಿಕೆ ನೀಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಮಾರ್ಚ್ 19ರಂದು ರಿಲೀಸ್ ಆಗಲಿರುವ ‘ಧುರಂಧರ್ 2’ ಚಿತ್ರದಲ್ಲಿ ಆರ್. ಮಾಧವನ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ಅಜಯ್ ಸಾನ್ಯಾಲ್ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ಅವರ ನಟನೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಈಗ ಎರಡನೇ ಭಾಗದ ಮೇಲೂ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ.
ಪುಣೆ, ಮಾರ್ಚ್ 15: ಲಿಫ್ಟ್ನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ತುಂಬಾ ಜಾಗೃತೆಯಾಗಿರಬೇಕು. ಲಿಫ್ಟ್ನಿಂದ ಹೊರ ಬರಬೇಕು ಎನ್ನುವಾಗ ಅಜ್ಜಿಯ ಕೈಲಿದ್ದ ಮಗುವಿನ ಕೈ ಲಿಫ್ಟ್ ಬಾಗಿಲಲ್ಲಿ ಸಿಲುಕಿ ಒದ್ದಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ತಾಯಿ ಮತ್ತು ಅಜ್ಜಿ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಲಿಫ್ಟ್ ಹತ್ತಿದ್ದಾರೆ, ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಮಗುವಿನ ಕೈ ಲಿಫ್ಟ್ ಬಾಗಿಲೊಳಗೆ ಸಿಲುಕಿದೆ. ಲಿಫ್ಟ್ನಲ್ಲಿದ್ದವರು ಹರಸಾಹಸ ಪಟ್ಟು ಅಂತೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವರು ದಿನಗಳ ಹಿಂದೆ ಇಂಥದ್ದೇ ಘಟನೆ ನಡೆದಿತ್ತು. ವ್ಯಕ್ತಿಯೊಬ್ಬರು ಇನ್ನೇನು ಲಿಫ್ಟ್ ಇಳಿಯಬೇಕು ಎನ್ನುವಷ್ಟರಲ್ಲಿ ಬಾಗಿಲು ತೆಗೆದಾಕ್ಷಣ ಲಿಫ್ಟ್ ಕೆಳಗೆ ಹೋಗಿತ್ತು, ವ್ಯಕ್ತಿ ನೇರವಾಗಿ ಕೆಳಗೆ ಬಿದ್ದಿದ್ದರು.
ಬೆಂಗಳೂರು, ಮಾರ್ಚ್ 15: ಭಾರತದಲ್ಲಿ ವಿಮಾನ ಪ್ರಯಾಣವು ಮತ್ತಷ್ಟು ದುಬಾರಿಯಾಗಿದ್ದು, ಇಂಡಿಗೋ, ಏರ್ ಇಂಡಿಯಾ ಮತ್ತು ಆಕಾಸ ಏರ್ಲೈನ್ಸ್ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳು ಇಂಧನ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿವೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಮಧ್ಯಪ್ರಾಚ್ಯದಲ್ಲಿ ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರಿದ್ದು, ಭಾರತೀಯ ಜನಸಾಮಾನ್ಯರ ಮೇಲೆ ನೇರವಾಗಿ ಪ್ರಭಾವ ಬೀರಿದೆ. ಈ ನಿರ್ಧಾರದಿಂದಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ದರಗಳು ಏರಿಕೆಯಾಗಿವೆ.
ಇಂಡಿಗೋ ವಿಮಾನಯಾನ ಸಂಸ್ಥೆಯು ಭಾರತದೊಳಗಿನ ಪ್ರಯಾಣಕ್ಕೆ ಪ್ರತಿ ಟಿಕೆಟ್ಗೆ 425 ರೂ. ಇಂಧನ ಶುಲ್ಕವನ್ನು ವಿಧಿಸುತ್ತಿದೆ. ಮಧ್ಯಪ್ರಾಚ್ಯಕ್ಕೆ 900 ರೂ., ಆಗ್ನೇಯ ಏಷ್ಯಾ, ಚೀನಾ, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದಂತಹ ಪ್ರದೇಶಗಳಿಗೆ 1,800 ರೂ. ಮತ್ತು ಯುರೋಪ್ಗೆ ತೆರಳುವ ವಿಮಾನಗಳಿಗೆ 2,300 ರೂ. ಶುಲ್ಕ ನಿಗದಿಪಡಿಸಲಾಗಿದೆ. ವಿಮಾನ ದರಗಳ ಈ ಹಠಾತ್ ಏರಿಕೆಗೆ ಪ್ರಯಾಣಿಕರು ತೀವ್ರ ಅಸಮಾಧಾನಕ್ಕೆ ವ್ಯಕ್ತಪಡಿಸುತ್ತಿದ್ದಾರೆ. ಅನಿವಾರ್ಯ ಕಾರಣಗಳಿಂದ ಪ್ರಯಾಣಿಸಬೇಕಾದವರು ಹೆಚ್ಚಿನ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.