ದೇವರ ಚಿತ್ರವನ್ನು ಕಾಲಿಗೆ ತಾಗಿಸಿಕೊಂಡು ಓಡಾಡಿದ ರಶ್ಮಿಕಾ ಮಂದಣ್ಣ: ನೆಟ್ಟಿಗರ ಆಕ್ರೋಶ

ದೇವರ ಚಿತ್ರವನ್ನು ಕಾಲಿಗೆ ತಾಗಿಸಿಕೊಂಡು ಓಡಾಡಿದ ರಶ್ಮಿಕಾ ಮಂದಣ್ಣ: ನೆಟ್ಟಿಗರ ಆಕ್ರೋಶ

ಪ್ಯಾನ್ ಇಂಡಿಯಾ ಸ್ಟಾರ್ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ವಿವಾಹದ ಸಂಭ್ರಮ ಜೋರಾಗಿತ್ತು. ಇತ್ತೀಚೆಗಷ್ಟೇ ಈ ಜೋಡಿಯು ತಮ್ಮ ಮೆಹಂದಿ ಶಾಸ್ತ್ರದ ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಈ ಖುಷಿಯ ನಡುವೆಯೇ ರಶ್ಮಿಕಾ ತೊಟ್ಟಿದ್ದ ಉಡುಪಿನ ವಿನ್ಯಾಸ ಈಗ ವಿವಾದಕ್ಕೆ ಕಾರಣವಾಗಿದೆ. ಲಕ್ಷ್ಮಿ ದೇವಿಯ ಚಿತ್ರವಿರುವ ಉಡುಪು ಧರಿಸಿದ್ದಕ್ಕೆ ಕೆಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ (Rashmika Mandanna) ಅವರ ಅಪ್ಪಟ ಅಭಿಮಾನಿಗಳು ನಟಿಯ ಬೆಂಬಲಕ್ಕೆ ನಿಂತಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಮತ್ತು ವಿಜಯ್ ಹಂಚಿಕೊಂಡ ಫೋಟೋಗಳಲ್ಲಿ ರಶ್ಮಿಕಾ ಆಕರ್ಷಕವಾಗಿ ಕಾಣುತ್ತಿದ್ದಾರೆ. ಆದರೆ ಅವರು ತೊಟ್ಟಿದ್ದ ಉಡುಪಿನ ಮೇಲೆ ಲಕ್ಷ್ಮಿ ದೇವಿಯ ಚಿತ್ರ ಇರುವುದನ್ನು ಗಮನಿಸಿದ ಹಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವತೆಗಳ ಚಿತ್ರಗಳನ್ನು ಉಡುಪಿನ ಕೆಳಭಾಗದಲ್ಲಿ ಅಥವಾ ಸೊಂಟದ ಭಾಗದಲ್ಲಿ ಬಳಸುವುದು ದೇವರಿಗೆ ಮಾಡುವ ಅಪಮಾನ ಎಂದು ಕೆಲವರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಬಳಕೆದಾರರು, ‘ದೇವರು ಮತ್ತು ದೇವತೆಗಳು ನಿಮ್ಮ ಉಡುಪಿಗಾಗಿ ಇರುವವರಲ್ಲ. ಇದೊಂದು ಅತ್ಯಂತ ಕೆಟ್ಟ ಡ್ರೆಸ್’ ಎಂದು ಕಮೆಂಟ್ ಮಾಡಿದ್ದಾರೆ. ‘ದೇವಿಯ ಚಿತ್ರವಿರುವ ಬಟ್ಟೆಯನ್ನು ಕಾಲಿನ ಹತ್ತಿರ ಮತ್ತು ಸೊಂಟಕ್ಕೆ ಸುತ್ತಿಕೊಳ್ಳುವುದು ದೇವತೆಗೆ ಮಾಡುವ ಅಗೌರವ’ ಎಂದು ಮತ್ತೊಬ್ಬರು, ಆಕ್ಷೇಪಿಸಿದ್ದಾರೆ. ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆದಿದೆ.

ರಶ್ಮಿಕಾ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ‘ಇದು ಕೇವಲ ಒಂದು ಫ್ಯಾಷನ್. ರಶ್ಮಿಕಾ ಅವರು ಈ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ವಿನಾಕಾರಣ ಟೀಕೆ ಮಾಡುವ ಅಗತ್ಯವಿಲ್ಲ’ ಎಂದು ಅಭಿಮಾನಿಗಳು ನಟಿಯ ಪರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಮದುವೆಗೆ ಕರೆದಿಲ್ಲ ಅಂತ ಕೋಪ ಮಾಡಿಕೊಂಡ ರಶ್ಮಿಕಾ, ವಿಜಯ್ ಅಭಿಮಾನಿ

‘ಭಾರತೀಯ ಕಲ್ಪನೆಯಲ್ಲಿ, ವಧುವಿನ ಆಗಮನವನ್ನು ಹೆಚ್ಚಾಗಿ ಸಮೃದ್ಧಿ, ಸೌಂದರ್ಯ ಮತ್ತು ಹೊಸ ಆರಂಭದ ದೇವತೆಯಾದ ಲಕ್ಷ್ಮಿ ದೇವಿಯ ಆಗಮನಕ್ಕೆ ಹೋಲಿಸಲಾಗುತ್ತದೆ. ಆಕೆಯ ಉಪಸ್ಥಿತಿಯು ಹೊಸ ಮನೆಗೆ ಶಾಂತಿ, ಐಶ್ವರ್ಯ ಮತ್ತು ಸಾಮರಸ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಇದೇ ಭಾವನೆಯು ರಶ್ಮಿಕಾ ಮಂದಣ್ಣ ಅವರ ಉಡುಪಿನ ವಿನ್ಯಾಸಕ್ಕೆ ಪ್ರಮುಖ ಪ್ರೇರಣೆ ಮತ್ತು ಭಾವನಾತ್ಮಕ ಆಧಾರವಾಯಿತು’ ಎಂದು ಈ ಬಟ್ಟೆಯನ್ನು ವಿನ್ಯಾಸ ಮಾಡಿದ ಕಂಪನಿ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?

2026ರ ಪರಾಭವನಾಮ ಸಂವತ್ಸರದ ಯುಗಾದಿಯಂದು ಮೀನ ರಾಶಿಯವರ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು ವಿಶ್ಲೇಷಿಸಿದ್ದಾರೆ. ಈ ರಾಶಿಯವರಿಗೆ ಶನಿ ಸಾಡೇ ಸಾತಿಯ ಗರ್ಭ ಭಾಗ ನಡೆಯುತ್ತಿದ್ದು, ಗುರು ನಾಲ್ಕರಿಂದ ಐದಕ್ಕೆ, ಶನಿ ಒಂದರಲ್ಲಿ, ರಾಹು 12ರಿಂದ 11ರಲ್ಲಿ ಮತ್ತು ಕೇತು ಆರರಿಂದ ಐದರಲ್ಲಿ ಇರುತ್ತಾರೆ. ಆದಾಯ 14 ಮತ್ತು ವ್ಯಯ 7 ಇರಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾದರೂ ಆರ್ಥಿಕವಾಗಿ ಉತ್ತಮ ಪರಿಸ್ಥಿತಿ ಇರುತ್ತದೆ.

ಸರ್ಕಾರಿ ಉದ್ಯೋಗ, ವ್ಯಾಪಾರ, ಪಾಲುದಾರಿಕೆ ಹಾಗೂ ಉದ್ಯೋಗದಲ್ಲಿ ಶುಭ ಫಲಗಳಿವೆ. ಆದರೆ ಮಕ್ಕಳ ಚಿಂತೆ ಮತ್ತು ಅಪವಾದಗಳ ಕುರಿತು ಜಾಗ್ರತೆಯಾಗಿರಲು ಸಲಹೆ ನೀಡಲಾಗಿದೆ. ಕಾನೂನು ವಿಷಯಗಳಲ್ಲಿ ಮೋಸ ಹೋಗದಂತೆ ಎಚ್ಚರ ವಹಿಸಬೇಕು. ದೈವಾನುಗ್ರಹಕ್ಕಾಗಿ ದೇವಿಯ ಮೊರೆ ಹೋಗುವುದು ಮತ್ತು ಶ್ರೀರಾಮ ಸ್ತೋತ್ರ ಪಠಿಸುವುದು ಶುಭಕರ. ಮೀನ ರಾಶಿಯವರಿಗೆ ಈ ವರ್ಷ ಶೇ. 65 ರಷ್ಟು ಶುಭಫಲಗಳು ದೊರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ಕೊಪ್ಪಳ ಜನರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ: ಕಾರ್ಖಾನೆಗಳಿಗೆ ಬೀಗ ಫಿಕ್ಸ್

ಕೊಪ್ಪಳ, ಮಾರ್ಚ್​​ 11: ಜಿಲ್ಲೆಯ ಜನತೆಗೆ ಈಗ ಉಸಿರಾಡುವುದೇ ದೊಡ್ಡ ಸಾಹಸವಾಗಿದೆ. ಕಾರ್ಖಾನೆಗಳು (Factory) ಹೊರಸೂಸುವ ವಿಷಕಾರಿ ಹೊಗೆಗೆ ರೋಸಿ ಹೋಗಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ಜಿಲ್ಲಾಡಳಿತ ಈಗ ಎಚ್ಚೆತ್ತುಕೊಂಡಿದೆ. ನಿಯಮ ಉಲ್ಲಂಘಿಸಿದ 5 ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದ್ದು, 3 ಕಾರ್ಖಾನೆಗಳಿಗೆ ಬೀಗ ಬೀಳುವುದು ಫಿಕ್ಸ್ ಆಗಿದೆ. ಕಪ್ಪು ಹೊಗೆ ಉಗಳೋ ಕಾರ್ಖಾನೆಗಳು ಬಹುತೇಕ ಬಂದ್ ಆಗೋ ಸಾಧ್ಯತೆ ಇದೆ. ಕಾರ್ಖಾನೆಗಳು ಬಂದ್ ಆಗಿದ್ದೆ ನಿಜವಾದರೆ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

ಗವಿಸಿದ್ದೇಶ್ವರನ ನಾಡು ಕೊಪ್ಪಳದಲ್ಲಿ ಒಂದು ಕಡೆ ಅಭಿವೃದ್ಧಿಯ ಹೆಸರಿನಲ್ಲಿ ತಲೆಯೆತ್ತಿರುವ ಬೃಹತ್ ಕಾರ್ಖಾನೆಗಳು, ಮತ್ತೊಂದು ಕಡೆ ಆ ಕಾರ್ಖಾನೆಗಳು ಕಾರುತ್ತಿರುವ ವಿಷಕಾರಿ ಹೊಗೆ. ಹಗಲು ಹೊತ್ತಿನಲ್ಲೇ ಇಲ್ಲಿನ ಆಕಾಶ ಕಪ್ಪಾಗಿ ಕಾಣುತ್ತಿದೆ. ಜನರ ಶ್ವಾಸಕೋಶಕ್ಕೆ ಗಾಳಿಯ ಬದಲು ವಿಷಕಾರಿ ಕೆಮಿಕಲ್ ಮಿಶ್ರಿತ ಧೂಳು ಸೇರುತ್ತಿದೆ. ಸ್ಥಳೀಯರ ಮನೆಯ ಅಂಗಳ, ಕುಡಿಯುವ ನೀರು, ರೈತರು ಬೆಳೆದ ಬೆಳೆಗಳ ಮೇಲೂ ಕಪ್ಪು ಬಣ್ಣದ ಬೂದಿ ಕುಳಿತುಕೊಳ್ಳುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಸ್ತಮಾ, ಚರ್ಮ ವ್ಯಾಧಿ ಮತ್ತು ಉಸಿರಾಟದ ತೊಂದರೆಗಳು ಕಾಡುತ್ತಿವೆ.

ಇದನ್ನೂ ಓದಿ: ಕಾರ್ಖಾನೆಗಳು ವಾಯುಮಾಲಿನ್ಯ ಕಡಿಮೆ ಮಾಡಬೇಕು: ಇಲ್ಲಾಂದ್ರೆ ಬಂದ್​​ ನಿಶ್ಚಿತ; ಶಾಸಕ ಎಚ್ಚರಿಕೆ

ವರ್ಷಗಳಿಂದ ಮನವಿ ಮಾಡಿದರೂ ಕೇಳದ ಅಧಿಕಾರಿಗಳ ವಿರುದ್ಧ ಜನತೆ ಈಗ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದೀಗ ಜನರ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶಾಸಕರು, ಡಿಸಿ ಸಭೆ ಮಾಡಿದ್ದಾರೆ. ಎಲ್ಲವೂ ಇದೆ, ಆದರೆ ಆರೋಗ್ಯ ಇಲ್ಲ ಎಂದು ಹಿರಿಯರೊಬ್ಬರು ಸಭೆಯಲ್ಲಿ ಅಳಲು ತೋಡಿಕೊಂಡಿದ್ದಾರೆ.

ಶೋಕಾಸ್ ನೋಟಿಸ್ ಜಾರಿ: 3 ಫ್ಯಾಕ್ಟರಿಗಳ ಬಂದ್​​ಗೆ ಆದೇಶ

ಜನರ ಆಕ್ರೋಶಕ್ಕೆ ಬೆದರಿದ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ, ಕೊನೆಗೂ ಕಾರ್ಯಾಚರಣೆಗೆ ಇಳಿದಿದೆ. ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಮಾಲಿನ್ಯ ಉಂಟುಮಾಡುತ್ತಿದ್ದ 5 ಪ್ರಮುಖ ಕಾರ್ಖಾನೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲ, ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಮಾಲಿನ್ಯ ಹರಡುತ್ತಿದ್ದ 3 ಫ್ಯಾಕ್ಟರಿಗಳನ್ನು ತಕ್ಷಣವೇ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.

ಡಿಸಿ ಸುರೇಶ್ ಇಟ್ನಾಳ್ ಹೇಳಿದ್ದಿಷ್ಟು 

ನಾವು ನಿರಂತರವಾಗಿ ಮಾನಿಟರ್ ಮಾಡುತ್ತಿದ್ದೇವೆ. ಯಾವ ಕಾರ್ಖಾನೆಗಳು ಫಿಲ್ಟರ್ ಬಳಸದೆ ಹೊಗೆ ಬಿಡುತ್ತವೆಯೋ ಅವುಗಳ ಮೇಲೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಈಗಾಗಲೆ 3 ಫ್ಯಾಕ್ಟರಿಗಳಿಗೆ ಕ್ಲೋಸರ್ ಆರ್ಡರ್ ನೀಡಿದ್ದೇವೆ ಎಂದು ಡಿಸಿ ಸುರೇಶ್ ಇಟ್ನಾಳ್ ಹೇಳಿದ್ದಾರೆ.

ಕೊಪ್ಪಳ ತಾಲೂಕಿನಲ್ಲಿರುವ ಪಿಬಿಕೆಎಸ್, ಇಸ್ಪಾತ್, ವನ್ಯ ಸ್ಟೀಲ್ ಒಂದು ಎರಡು, ಹೆಆರ್​ಜಿಗೆ ನೋಟಿಸ್ ಕೊಡಲಾಗಿದೆ. ಈಗಾಗಲೇ ಮೂರು ಕಾರ್ಖಾನೆಗಳ ತಪಾಸಣೆ ಮುಗದಿದ್ದು, ಎರಡು ಕಾರ್ಖಾನೆಗೆ ಕ್ಲೋಸರ್ ನೋಟಿಸ್​ ನೀಡಲಾಗಿದೆ. ಇನ್ನೊಂದು ಕೂಡ ಕ್ಲೋಸ್ ಆಗಲಿದೆ ಎನ್ನುತ್ತಿದ್ದಾರೆ ಡಿಸಿ.

ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ವಿರುದ್ಧ ಸಿಡಿದ ರೈತರು: ಸರ್ಕಾರದ ಶವಯಾತ್ರೆ, ಜನಪ್ರತಿನಿಧಿಗಳಿಗೆ ತರಾಟೆ

ಕೈಗಾರಿಕೆಗಳು ಬೇಕು, ಆದರೆ ಜನರ ಜೀವ ಬಲಿ ಕೊಟ್ಟು ಅಲ್ಲ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿರುವುದು ಸಮಾಧಾನದ ಸಂಗತಿ. ಆದರೆ ಈ ನೋಟಿಸ್ ಮತ್ತು ಬಂದ್ ಕೇವಲ ಕಣ್ಣೊರೆಸುವ ತಂತ್ರವಾಗಬಾರದು ಎಂಬುದು ಕೊಪ್ಪಳ ಜಿಲ್ಲೆಯ ಜನರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ತೆಲುಗು ರಾಜ್ಯಗಳಲ್ಲಿ ಫ್ಯಾನ್ಸ್ ವಾರ್​​ಗಳು ಸಾಮಾನ್ಯ. ಕರ್ನಾಟಕಕ್ಕೆ ಹೋಲಿಸಿದರೆ ತುಸು ಹೆಚ್ಚೇ ಎನ್ನಬಹುದು. ಮೆಗಾಸ್ಟಾರ್ ಅಭಿಮಾನಿಗಳು ಮತ್ತು ನಂದಮೂರಿ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್​​ಗೆ ದಶಕಗಳ ಇತಿಹಾಸವಿದೆ. ಇವುಗಳ ನಡುವೆ ಜೂ ಎನ್​​ಟಿಆರ್ vs ಪವನ್ ಕಲ್ಯಾಣ್, ಪವನ್ ಕಲ್ಯಾಣ್ (Pawan Kalyan) vs ಮಹೇಶ್ ಬಾಬು ಹೀಗೆ ಬೇರೆ ಬೇರೆ ಫ್ಯಾನ್ಸ್ ವಾರ್​​ಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಮ್ಮೆ ಪವನ್ ಕಲ್ಯಾಣ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ನಡುವೆ ಕಿರಿಕ್ ಶುರುವಾಗಿದೆ. ಇದಕ್ಕೆ ಕಾರಣ ಆಗಿರುವುದು ಪವನ್ ಕಲ್ಯಾಣ್ ಅವರ ಆಪ್ತ ನಿರ್ದೇಶಕರೊಬ್ಬರ ಟ್ವೀಟ್.

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಮಾರ್ಚ್ 19 ರಂದು ‘ಧುರಂಧರ್ 2’ ಸಿನಿಮಾದ ಎದುರು ಅದು ರಿಲೀಸ್ ಆಗುತ್ತಿದೆ. ಈ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶನ ಮಾಡಿದ್ದು, ಪವನ್ ಕಲ್ಯಾಣ್​​ರ ಆಪ್ತ ನಿರ್ದೇಶಕರುಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ಸಹಜವಾಗಿಯೇ ಪವನ್ ಕಲ್ಯಾಣ್ ಅಭಿಮಾನಿಗಳು ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ.

ಇತ್ತೀಚೆಗೆ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿ, ಮಹೇಶ್ ಬಾಬು ಸಿನಿಮಾಗಳ ರೆಕಾರ್ಡ್ ಅನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬ್ರೇಕ್ ಮಾಡಬೇಕು ಎಂದಿದ್ದ. ಮಹೇಶ್ ಬಾಬು ಎಂದು ನೇರವಾಗಿ ಹೆಸರು ಬಳಸುವ ಬದಲಿಗೆ ಮಹೇಶ್ ಬಾಬು ಅಡ್ಡ ಹೆಸರಾದ ‘ಬಾಬ್’ ಎಂದು ಬರೆದಿದ್ದ. ಆ ಟ್ವೀಟ್​​ಗೆ ಪ್ರತಿಕ್ರಿಯೆ ನೀಡಿದ್ದ ಹರೀಶ್ ಶಂಕರ್ ‘ತಥಾಸ್ತು’ ಎಂದಿದ್ದರು. ಆ ಮೂಲಕ ಮಹೇಶ್ ಬಾಬು ರೆಕಾರ್ಡ್​​ಗಳನ್ನು ಬ್ರೇಕ್ ಮಾಡುತ್ತೇನೆ ಎಂದಿದ್ದರು. ಹರೀಶ್ ಶಂಕರ್ ಅವರ ಈ ಟ್ವೀಟ್ ಮಹೇಶ್ ಅಭಿಮಾನಿಗಳನ್ನು ಕೆರಳಿಸಿದೆ.

ಆದರೆ ಶೀಘ್ರವೇ ತಮ್ಮ ತಪ್ಪು ತಿಳಿದುಕೊಂಡ ಹರೀಶ್ ಶಂಕರ್ ಕೂಡಲೇ ತಮ್ಮ ‘ತಥಾಸ್ತು’ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಲ್ಲದೆ, ತಾವು ಟ್ವೀಟ್​​ ಅನ್ನು ಪೂರ್ಣವಾಗಿ ಓದದೆ ಹಾಗೂ ಸರಿಯಾಗಿ ಅರ್ಥೈಸಿಕೊಳ್ಳದೆ ಪ್ರತಿಕ್ರಿಯೆ ನೀಡಿದ್ದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ಟ್ವೀಟ್​​ನಿಂದ ಮಹೇಶ್ ಬಾಬು ಅಭಿಮಾನಿಗಳಿಗೆ ಬೇಸರ ಉಂಟಾಗಿದ್ದರೆ ಕ್ಷಮೆ ಕೇಳುವುದಾಗಿ ಸಹ ಹರೀಶ್ ಶಂಕರ್ ಹೇಳಿದ್ದಾರೆ.

ಇದನ್ನೂ ಓದಿ:ತೆಲುಗು ರಾಜ್ಯಗಳಲ್ಲಿ ಪವನ್ ಕಲ್ಯಾಣ್ ಚಿತ್ರಕ್ಕೆ ಹೊಡೆತ ಕೊಟ್ಟ ‘ಧುರಂಧರ್ 2’

ಟಾಲಿವುಡ್ ಖ್ಯಾತ ನಿರ್ದೇಶಕ ಹರೀಶ್ ಶಂಕರ್ ಅವರು ತಮ್ಮ ಮುಂಬರುವ ಚಿತ್ರ ‘ಉಸ್ತಾದ್ ಭಗತ್ ಸಿಂಗ್’ (ಪವನ್ ಕಲ್ಯಾಣ್ ನಟನೆಯ ಸಿನಿಮಾ) ಪ್ರಚಾರದ ಸಂದರ್ಭದಲ್ಲಿ ಮಾಡಿದ್ದ ಒಂದು ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಅವರು ಮಹೇಶ್ ಬಾಬು ಮತ್ತು ಅವರ ಅಭಿಮಾನಿಗಳಿಗೆ ಬೇಷರತ್ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಟ್ವೀಟ್ ಮಾಡಿರುವ ಹರೀಶ್ ಶಂಕರ್, ‘ಸೆನ್ಸಾರ್ ಮಂಡಳಿ ಅಧಿಕಾರಿಗಳ ಭೇಟಿ, ಪೆದ್ದಮ್ಮ ದೇವಸ್ಥಾನದ ದರ್ಶನ ಮತ್ತು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತಾನು ತುಂಬಾ ಬ್ಯುಸಿಯಾಗಿದ್ದೆ. ಆ ಹಡಬಡಿಕೆಯಲ್ಲಿ ಅಭಿಮಾನಿಗಳ ಶುಭಾಶಯಗಳಿಗೆ ಪ್ರತಿಕ್ರಿಯಿಸುವಾಗ, ಟ್ವೀಟ್ ಅನ್ನು ಪೂರ್ತಿಯಾಗಿ ಓದದೆ ಕೇವಲ ಮೊದಲ ಅರ್ಧ ಭಾಗವನ್ನು ನೋಡಿ ‘ತಥಾಸ್ತು’ ಎಂದು ಉತ್ತರಿಸಿದ್ದೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮೇಲೆ ನನಗೆ ಅಪಾರ ಗೌರವವಿದೆ. ರಾಜಮೌಳಿ-ಮಹೇಶ್ ಬಾಬು ಅವರ ‘ವಾರಣಾಸಿ’ ಸಿನಿಮಾ ದೊಡ್ಡ ದಾಖಲೆ ಬರೆಯಲಿದೆ ಎಂಬ ನಂಬಿಕೆ ನನಗಿದೆ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿಲ್ಲ. ಸಿನಿಮಾ ಬಿಡುಗಡೆಗೆ ಕೇವಲ 10 ದಿನಗಳಿರುವಾಗ ಉದ್ದೇಶಪೂರ್ವಕವಾಗಿ ಇಂತಹ ತಪ್ಪು ಮಾಡುವಷ್ಟು ಅಜ್ಞಾನಿ ನಾನಲ್ಲ. ತಿಳಿಯದೇ ಮಾಡಿದ ಈ ತಪ್ಪಿಗೆ ಕ್ಷಮೆಯಿರಲಿ ಎಂದು ಕೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್​​: ತನಿಖೆ ವೇಳೆ ಸಿಸಿಟಿವಿ ರಹಸ್ಯ ಬಯಲು

ಬೆಂಗಳೂರು, ಮಾರ್ಚ್​​ 11: ನಗರದ ಅಮೃತಹಳ್ಳಿಯ ವಿಲ್ಲಾದಲ್ಲಿ ಕಾಲೇಜು ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಪೊಲೀಸ್​​ ತನಿಖೆ ವೇಳೆ ಬಗೆದಷ್ಟು ಸ್ಫೋಟಕ ವಿಚಾರಗಳು ಬಯಲಾಗುತ್ತಲೇ ಇವೆ. ಬೆಂಗಳೂರಿನ ಬೇರೆ ಬೇರೆ ಕಡೆ, ಗೋವಾ ಮತ್ತು ವಿದೇಶದಲ್ಲಿಯೂ ಆರೋಪಿಗಳು ಪಾರ್ಟಿ ನಡೆಸಿದ್ದು, ಈ ವೇಳೆ ಡ್ರಗ್ಸ್​​ ಬಳಸಿರೋದು ದೃಢಪಟ್ಟಿದೆ. ಆರೋಪಿಗಳ ಮೆಡಿಕಲ್ ಟೆಸ್ಟ್ ವರದಿಯೂ ಪಾಸಿಟಿವ್​​ ಬಂದಿದ್ದು, ಗೋವಾದಿಂದ ಇವರಿಗೆ ಮಾದಕ ವಸ್ತು ಸರಬರಾಜಾಗಿತ್ತು ಎಂಬ ವಿಷಯವೂ ಪೊಲೀಸರಿಗೆ ಗೊತ್ತಾಗಿದೆ.

ಸಿಸಿಟಿವಿ ದೃಶ್ಯಗಳು ಪತ್ತೆ

ಗ್ಯಾಂಗ್​​ ರೇಪ್​​ ನಡೆದಿರುವ ಅಮೃತಹಳ್ಳಿಯ ವಿಲ್ಲಾಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಡಿವಿಆರ್​​ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪಾರ್ಟಿಯಲ್ಲೇ ಇದ್ದರು ಎಂಬುದು ದೃಢಪಟ್ಟಿದ್ದು, ಸದ್ಯ ಆರೋಪಿಗಳ ಚಹರೆ ಮ್ಯಾಚ್ ಮಾಡಲು ಸಿಸಿಟಿವಿ ದೃಶ್ಯವಳಿಗಳನ್ನು FSLಗೆ ರವಾನೆ ಮಾಡಲಾಗಿದೆ. ಇನ್ನು ಈ ವಿಲ್ಲಾದಲ್ಲಿ ಎಷ್ಟು ದಿನ ಪಾರ್ಟಿ ನಡೆದಿತ್ತು? ಪಾರ್ಟಿಗೆ ಯಾರು ಯಾರು ಬಂದಿದ್ದರು? ಎಂಬ ಬಗ್ಗೆಯೂ ತನಿಖೆ ನಡೆದಿದೆ. ಗುತ್ತಿಗೆದಾರನಾಗಿದ್ದ ಆರೋಪಿ ಅನಿರುದ್​​ ಪಾರ್ಟಿಗೆ ತಗಲುವ ವೆಚ್ಚವನ್ನು ಭರಿಸಿದ್ದ. ಆತನೇ ವಿಲ್ಲಾ ಬುಕ್​​ ಮಾಡಿದ್ದ ಎಂಬುದು ಪತ್ತೆಯಾಗಿರುವ ಹಿನ್ನೆಲೆ ಆತ ಈ ಹಿಂದೆ ಯಾವೆಲ್ಲ ವಿಲ್ಲಾಗಳನ್ನು ಬುಕ್​​ ಮಾಡಿದ್ದ ಎಂಬ ಪರಿಶೀಲನೆಗೆ ಖಾಕಿ ಮುಂದಾಗಿದೆ.

ಇದನ್ನೂ ಓದಿ: ಕೊಲೆ ಆರೋಪಿಯನ್ನು 68 ಬಾರಿ ಮಾರಕಾಸ್ತ್ರಗಳಿಂದ ಕೊಚ್ಚಿದ ಪುಂಡರು; ವ್ಯಕ್ತಿ ಬದುಕಿದ್ದೇ ಪವಾಡ!

ಆರೋಪಿಗಳನ್ನು ಮತ್ತೆ ಐದು ದಿನ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದು, ಆರೋಪಿಗಳ ಆದಾಯದ ಮೂಲ ಪತ್ತೆಗೂ ಪೊಲೀಸರು ಮುಂದಾಗಿದ್ದಾರೆ. ಡಿಕ್ಸನ್ ಮತ್ತು ಶ್ರವಣ್ ಹುಡುಗಿಯರನ್ನು ಪಟಾಯಿಸಿ ಪಾರ್ಟಿಗೆ ಕರೆಸುತ್ತಿದ್ದರು. ಇವರಿಬ್ಬರಿಗೂ ಕಾಲೇಜು ಹುಡುಗಿಯರ ಪಟಾಯಿಸಲು ಖರ್ಚಾಗುವ ಹಣವನ್ನು ನಿಖಿಲ್ ಮತ್ತು ಅನಿರುದ್ ನೀಡುತ್ತಿದ್ದರು ಎನ್ನಲಾಗಿದೆ. ಬಳಿಕ ಯುವತಿಯರನ್ನು ವಿಲ್ಲಾಗೆ ಕರೆತಂದು ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದರು. ಗೋವಾದಿಂದ ಎಕ್ಸ್‌ಟೆಸಿ ಮಾತ್ರೆಗಳನ್ನು ತರಿಸಿಕೊಂಡು, ಅವುಗಳನ್ನು ಯುವತಿಯರಿಗೆ ನೀಡಿ ಮತ್ತು ಬರುವಂತೆ ಮಾಡುತ್ತಿದ್ದರು. ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಯುವತಿಯರ ಮೇಲೆ ಈ ಗ್ಯಾಂಗ್ ಅತ್ಯಾಚಾರ ಎಸಗುತ್ತಿತ್ತು ಎಂದು ತಿಳಿದುಬಂದಿದೆ. ಹೀಗಾಗಿ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಲೈಕಾ ಫೋಟೋ ವೈರಲ್: ‘ನಮ್ಮ ಸಂಬಂಧ ಆ ರೀತಿ ಇಲ್ಲ’ ಎಂದ ಸೋರಬ್ ಬೇಡಿ

ಬಾಲಿವುಡ್‌ನ ಗ್ಲಾಮರಸ್ ನಟಿ ಮಲೈಕಾ ಅರೋರಾ (Malaika Arora)  ಮತ್ತು Splitsvilla X6 ಸ್ಪರ್ಧಿ ಸೋರಬ್ ಬೇಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿತ್ತು. ಇತ್ತೀಚೆಗೆ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಈ ಚರ್ಚೆ ಶುರುವಾಗಿತ್ತು. ಈಗ ಈ ಎಲ್ಲಾ ವದಂತಿಗಳಿಗೆ ಸೋರಬ್ ಬೇಡಿ (Sorab Bedi) ತೆರೆ ಎಳೆದಿದ್ದಾರೆ. ‘ನಾವಿಬ್ಬರೂ ಕೇವಲ ಸ್ನೇಹಿತರು’ ಎಂದು ಅವರು ಹೇಳಿದ್ದಾರೆ. ಟ್ರೋಲ್ ಮಾಡುವವರ ವಿರುದ್ಧ ಸೋರಬ್ ಬೇಡಿ ಗರಂ ಆಗಿದ್ದಾರೆ.

ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ಸೋರಬ್ ಬೇಡಿ, ‘ನಾವಿಬ್ಬರೂ ಕೇವಲ ಸ್ನೇಹಿತರು ಅಷ್ಟೇ. ಜನರು ಯಾವುದನ್ನಾದರೂ ಕಾಮೆಂಟ್ ಮಾಡುವ ಮೊದಲು ಯೋಚಿಸಬೇಕು. ನಮಗೆ ಕಳೆದ 4 ವರ್ಷಗಳಿಂದ ಪರಿಚಯವಿದೆ. 2022ರಲ್ಲಿ ನನ್ನ ಮಾಡೆಲಿಂಗ್ ದಿನಗಳಲ್ಲಿ ನಾನು ಮೊದಲ ಬಾರಿಗೆ ಮಲೈಕಾರನ್ನು ಭೇಟಿಯಾಗಿದ್ದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಸಭ್ಯ ಕಾಮೆಂಟ್‌ಗಳ ಬಗ್ಗೆ ಸೋರಬ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ಜನರು ತಮಗೆ ಅನಿಸಿದ್ದೇ ಸತ್ಯ ಎಂದು ಬಿಂಬಿಸುತ್ತಿದ್ದಾರೆ. ನಾವು ಈ ಹಿಂದೆಯೂ ಹಲವು ಬಾರಿ ಪಾರ್ಟಿ ಮಾಡಿದ್ದೇವೆ. ನಾನು ಅವರ ಜೊತೆಗಿನ ಫೋಟೋ-ವಿಡಿಯೋಗಳನ್ನು ಈ ಮೊದಲೇ ಹಂಚಿಕೊಂಡಿದ್ದೆ. ಆಗ ನಾನು ಯಾರಿಗೂ ಪರಿಚಯವಿರಲಿಲ್ಲ. ಆದರೆ ಇಂದು ಜನರು ನನ್ನನ್ನು ಗುರುತಿಸುತ್ತಿದ್ದಾರೆ ಅಷ್ಟೇ ವ್ಯತ್ಯಾಸ’ ಎಂದಿದ್ದಾರೆ.

‘ನಮ್ಮ ಬಗ್ಗೆ ಮತ್ತು ಮಲೈಕಾ ಬಗ್ಗೆ ಬರುತ್ತಿರುವ ಕೀಳುಮಟ್ಟದ ಕಾಮೆಂಟ್‌ಗಳನ್ನು ಓದಿದಾಗ ನೋವಾಗುತ್ತದೆ. ಅವರೊಬ್ಬ ಮಹಿಳೆ, ಅವರ ಬಗ್ಗೆ ಇಷ್ಟು ಕೀಳಾಗಿ ಮಾತನಾಡಲು ಹೇಗೆ ಸಾಧ್ಯ? ನಿಮ್ಮ ಮನೆಯಲ್ಲೂ ಸಹೋದರಿ ಅಥವಾ ಮಗಳು ಇರುತ್ತಾರೆ ಅಲ್ವೇ? ಸತ್ಯ ತಿಳಿಯದೆ ಮಾತನಾಡುವುದು ಸರಿಯಲ್ಲ’ ಎಂದು ಸೋರಬ್ ಬೇಡಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: 52ರ ವಯಸ್ಸಲ್ಲೂ ಮಲೈಕಾ ಅರೋರಾ ಫಿಟ್ ಆಗಿರುವುದು ಹೇಗೆ? ಡಯಟ್ ಏನು?

ಸೋರಬ್ ಬೇಡಿ ಪ್ರಸಿದ್ಧ ಮಾಡೆಲ್ ಮತ್ತು ನಟ. ಇವರು ‘ದಿಲ್ವಾಲಿ ದುಲ್ಹಾ ಲೇ ಜಾಯೇಗಿ’ ಮತ್ತು ‘ಚಾಂದ್ ಜಲ್ನೇ ಲಗಾ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 16ರಲ್ಲಿ ಸ್ಪರ್ಧಿಯಾಗಿದ್ದಾರೆ. ಈ ಹಿಂದೆ ಅಪೂರ್ವ ರಾಮ್​ಪಾಲ್ ಅವರೊಂದಿಗೆ 9 ವರ್ಷಗಳ ಕಾಲ ರಿಲೇಷನ್​ಶೀಪ್​ನಲ್ಲಿ ಇದ್ದರು. ಬಳಿಕ ಬ್ರೇಕಪ್​ ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚೀನಾ ಲಿಂಕ್ ಹೊಂದಿರುವ ಮಂಗಳೂರಿನ ಸೈಬರ್ ವಂಚಕರ ಬಂಧನ

ಬೆಂಗಳೂರು, ಮಾರ್ಚ್​ 11: ಮ್ಯೂಲ್ ಅಕೌಂಟ್​ಗಳ ವಿರುದ್ಧದ ಕಾರ್ಯಾಚರಣೆ ವೇಳೆ ಚೀನಾ ಲಿಂಕ್ ಹೊಂದಿದ್ದ ಮಂಗಳೂರಿನ ಸೈಬರ್ ವಂಚಕರಿಬ್ಬರನ್ನು (cyber fraud) ರಾಜ್ಯ ಸೈಬರ್ ಕಮಾಂಡ್ ಯೂನಿಟ್​​ ಬಂಧಿಸಿದೆ. ಡಿಜಿಪಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಮೊಹಮ್ಮದ್ ಅನೀಸ್ ಮತ್ತು ಸಲೀತ್ ಅಹ್ಮದ್​​​ರನ್ನ ಬಂಧಿಸಲಾಗಿದೆ.

ಬಂಧಿತ ವಂಚಕರು ಟ್ರೇಡಿಂಗ್ ಬಿಸಿನೆಸ್ ಹೆಸರಲ್ಲಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯುತ್ತಿದ್ದರು. ಬಳಿಕ ಸೈಬರ್ ವಂಚನೆಗೆ ಬ್ಯಾಂಕ್ ಖಾತೆಗಳ ವಿವರ ಬಳಕೆ ಮಾಡುತ್ತಿದ್ದರು. ನಿಖರ ಮಾಹಿತಿ‌ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 4 ಮೊಬೈಲ್ ಫೋನ್‌ಗಳು, 18 ಬಿಟ್ ಕಾರ್ಡ್‌ಗಳು, 17 ಬ್ಯಾಂಕ್ ಪಾಸ್‌ಬುಕ್‌ಗಳು, 6 ಚೆಕ್ ಪುಸ್ತಕಗಳು, 1,479.31 USDT (ಕ್ರಿಪ್ಟೋಕರೆನ್ಸಿ) 1 ಕಾರನ್ನು ವಶಕ್ಕೆ ಪಡೆಯಲಾಗಿದೆ.

ಚೀನಾ ಲಿಂಕ್ ಮ್ಯೂಲ್ ಅಕೌಂಟ್ ದಂಧೆ ಹೇಗೆ ನಡೆಯುತ್ತಿತ್ತು?

ಚೀನಾ ಲಿಂಕ್ ಮ್ಯೂಲ್ ಅಕೌಂಟ್ ದಂಧೆ ಒಂದು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಚೀನಾದ ಸೈಬರ್ ವಂಚಕರಿಗೆ ಕಡಿಮೆ ಬೆಲೆಗೆ ಕ್ರಿಪ್ಟೋಕರೆನ್ಸಿ ಬೇಕಾಗಿದ್ದರಿಂದ, ಬಂಧಿತ ಆರೋಪಿಗಳು ಭಾರತೀಯರಿಂದ ಕಡಿಮೆ ಬೆಲೆಗೆ ಕ್ರಿಪ್ಟೋಕರೆನ್ಸಿಯನ್ನು ಖರೀದಿ ಮಾಡುತ್ತಿದ್ದರು. ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಅವರು ಚೀನಾದ ಸೈಬರ್ ವಂಚಕರೊಂದಿಗೆ ಸಂಪರ್ಕದಲ್ಲಿದ್ದು, ಬಳಿಕ ಅದೇ ಕ್ರಿಪ್ಟೋಕರೆನ್ಸಿಯನ್ನು ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕ್ರಿಪ್ಟೊ ವ್ಯವಹಾರದ ಬದಲಾಗಿ ಆರೋಪಿಗಳು ರೂಪಾಯಿ ರೂಪದಲ್ಲಿ ಹಣವನ್ನು ವಾಪಸ್ ಪಡೆಯುತ್ತಿದ್ದರು. ಇದಕ್ಕಾಗಿ ಮಂಗಳೂರು ನಗರದ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ಸಂಗ್ರಹಿಸುತ್ತಿದ್ದರು.

ಸುಮಾರು 70ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸಂಗ್ರಹಿಸಿ ಚೀನಾದವರಿಗೆ ನೀಡಲಾಗಿತ್ತು. ನಂತರ ಚೀನಾದ ಸೈಬರ್ ವಂಚಕರು ಆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದರು. ಆದರೆ ಆ ಹಣ ಸೈಬರ್ ವಂಚನೆಯ ಮೂಲಕ ಪಡೆದದ್ದಾಗಿತ್ತು ಎಂದು ತಿಳಿದುಬಂದಿದೆ. ಚೀನಾದವರ ಸೈಬರ್ ವಂಚನೆ ಬಗ್ಗೆ ಆರೋಪಿಗಳಿಗೆ ತಿಳಿದಿದ್ದರೂ ಸಹ, ಹಣದ ಆಸೆಗೆ ಅವರು ಅವರಿಗೆ ಸಾಥ್​ ನೀಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು​: ತನಿಖೆಯಲ್ಲಿ ಹಣದ ರಹಸ್ಯ ಬಯಲು

ಇನ್ನು ಈ ಪ್ರಕರಣದಲ್ಲಿ ಬಳಸಲಾಗಿದ್ದ 37 ಬ್ಯಾಂಕ್ ಖಾತೆಗಳ ವಿರುದ್ಧ ದೇಶದಾದ್ಯಂತ 88ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಸದ್ಯ ಈ ಖಾತೆಗಳ ಮೂಲಕ ನಡೆದಿರುವ ಹಣಕಾಸು ವಹಿವಾಟುಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ

2026ರ ಪರಾಭವನಾಮ ಸಂವತ್ಸರದ ಯುಗಾದಿಯು ಕುಂಭ ರಾಶಿಯವರಿಗೆ ಉತ್ಸಾಹ ಮತ್ತು ಪ್ರಗತಿಯ ವರ್ಷ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಭವಿಷ್ಯ ನುಡಿದಿದ್ದಾರೆ. ಧನಿಷ್ಠ, ಶತಭಿಷಾ, ಪೂರ್ವಾಭಾದ್ರ ನಕ್ಷತ್ರಗಳನ್ನೊಳಗೊಂಡ ಈ ರಾಶಿಗೆ ಗುರುವು ಐದರಿಂದ ಆರನೇ ಮನೆಗೆ, ಶನಿ ಎರಡನೇ ಮನೆಯಲ್ಲಿ, ರಾಹು ವ್ಯಯ ಸ್ಥಾನಕ್ಕೆ ಹಾಗೂ ಕೇತು ಆರನೇ ಮನೆಗೆ ಸಾಗಲಿದೆ.

ಸಾಡೆ ಸಾತಿಯ ಕಟ್ಟ ಕಡೆಯ ಭಾಗದಲ್ಲಿದ್ದರೂ, ಈ ವರ್ಷ ಆದಾಯ 6, ವ್ಯಯ 4; ಆರೋಗ್ಯ 8, ಅನಾರೋಗ್ಯ 3; ಸುಖ 7, ದುಃಖ 3ರ ಅನುಪಾತದಲ್ಲಿರುತ್ತವೆ. ಕುಟುಂಬದಲ್ಲಿ ಪ್ರಗತಿ, ಅಣ್ಣತಮ್ಮಂದಿರ ಬೆಂಬಲ, ಆರ್ಥಿಕ ಸ್ಥಿತಿ ಸುಧಾರಣೆ ಹಾಗೂ ಅಧಿಕಾರ ಪ್ರಾಪ್ತಿಯ ಯೋಗವಿದೆ. ಹೊಸ ಉದ್ಯೋಗಾವಕಾಶಗಳು, ವಿಶೇಷವಾಗಿ ರೈಲ್ವೆ, ಎಲೆಕ್ಟ್ರಾನಿಕ್, ಸಾಫ್ಟ್‌ವೇರ್, ವಿದ್ಯುತ್ ಮತ್ತು ನೀರಾವರಿ ಇಲಾಖೆಗಳಲ್ಲಿ ಹೊಸ ಅನುಭವಗಳು ಸಿಗಬಹುದು. ರೈತರು, ಗುತ್ತಿಗೆದಾರರು ಮತ್ತು ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ವಿವಾಹ ಯೋಗ ಚೆನ್ನಾಗಿದ್ದರೂ, ಪ್ರೇಮ ವ್ಯವಹಾರಗಳಿಗೆ ಈ ವರ್ಷ ಅಷ್ಟು ಅನುಕೂಲಕರವಾಗಿಲ್ಲ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ, ಸರ್ಕಾರಿ ನೌಕರರಿಗೆ ಹಳೆ ಬಾಕಿ ವಸೂಲಿ ಹಾಗೂ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದ ಕೀರ್ತಿ ಪ್ರತಿಷ್ಠೆಗಳು ಲಭಿಸಲಿವೆ. ಒಟ್ಟಾರೆ, ಈ ವರ್ಷ ಶೇ. 70 ಶುಭ ಫಲಗಳನ್ನು ನೀಡಲಿದೆ. ಬುಧವಾರ ಮತ್ತು ಶುಕ್ರವಾರ ಅದೃಷ್ಟದ ದಿನಗಳಾಗಿದ್ದು, ಕೇಸರಿ, ಬೂದು ಮತ್ತು ತಿಳಿ ಬಣ್ಣಗಳು ಮಂಗಳಕರವಾಗಿವೆ. ನಾಗರ ದರ್ಶನ, ನವನಾಗ ಸ್ತೋತ್ರ ಪಠಣ ಮತ್ತು ಅನ್ನದಾನ ಮಾಡುವುದು ಶುಭ ಫಲಗಳನ್ನು ಹೆಚ್ಚಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Video: ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ, ಫುಕೆಟ್​ನ ರನ್​ವೇನಲ್ಲಿ ಸಿಲುಕಿದ ಏರ್ ಇಂಡಿಯಾ

ಫುಕೆಟ್, ಮಾರ್ಚ್​ 11:ಹೈದರಾಬಾದ್‌ನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಂದು ಥೈಲ್ಯಾಂಡ್‌ನ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಮಾಡಿದೆ. ಇದರ ಪರಿಣಾಮವಾಗಿ ಚಕ್ರ ಪುಡಿ ಪುಡಿಯಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳೀಯ ಸಮಯ ಸಂಜೆ 6 ಗಂಟೆಯವರೆಗೆ ರನ್‌ವೇ ಮುಚ್ಚುವಂತೆ NOTAM (ವಾಯು ಕಾರ್ಯಾಚರಣೆಗೆ ಸೂಚನೆ) ಹೊರಡಿಸಿದ್ದಾರೆ. ಬೋಯಿಂಗ್ 737 MAX 8 ವಿಮಾನದಲ್ಲಿ 133 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಮತ್ತು ಪ್ರಯಾಣಿಕರ ಕಾಯುವ ಪ್ರದೇಶಕ್ಕೆ ಕರೆದೊಯ್ಯಲಾಯಿತು.

ವಿಮಾನವು ಲ್ಯಾಂಡಿಂಗ್ ಮಾಡುವಾಗ ಸಮಸ್ಯೆ ಎದುರಾಗಿದ್ದು, ನೋಸ್ ಲ್ಯಾಂಡಿಂಗ್ ಗೇರ್ ಮುರಿದು ವಿಮಾನವು ರನ್‌ವೇ ಉದ್ದಕ್ಕೂ ಜಾರಿದೆ ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳದ ಛಾಯಾಚಿತ್ರಗಳು ಮುರಿದ ನೋಸ್ ವೀಲ್ ರನ್‌ವೇ ಮೇಲೆ ಬಿದ್ದಿರುವುದನ್ನು ತೋರಿಸುತ್ತವೆ. ವಿಮಾನ IX 938 ಹೈದರಾಬಾದ್‌ನಿಂದ ಬೆಳಗ್ಗೆ 6.20 ಕ್ಕೆ ಬದಲಾಗಿ ಬೆಳಗ್ಗೆ 6.42 ಕ್ಕೆ ಹೊರಟಿತ್ತು ಮತ್ತು ಸ್ಥಳೀಯ ಸಮಯ ಬೆಳಗ್ಗೆ 11.40 ಕ್ಕೆ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ನಿಂತಲ್ಲೇ ನಿಂತ ಆಟೋಗಳು

ಬೆಂಗಳೂರು, (ಮಾರ್ಚ್ 11): ಅಮೆರಿಕ –ಇಸ್ರೇಲ್‌ ಮತ್ತು ಇರಾನ್‌ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಏರಿಕೆ ಕಂಡಿದ್ದರಿಂದ, ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆ ಗಣನೀಯವಾಗಿ ಇಳಿಕೆ ಕಂಡಿದೆ. ಇದರಿಂದ ಭಾರತದಾದ್ಯಂತ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇನ್ನು ಹೋಟೆಲ್ ಉದ್ಯಮಕ್ಕೆ ಭಾರಿ ಸಮಸ್ಯೆಯಾಗುತ್ತಿದೆ. ಇನ್ನು ಎಲ್​​ಪಿಜಿ ಗ್ಯಾಸ್ ಆಟೋಗೂ ಸಹ ಇದರ ಬಿಸಿ ತಟ್ಟಿದ್ದು, ಬೆಂಗಳೂರಿನ ಹಲವು ಗ್ಯಾಸ್ ಬಂಕ್​ಗಳು ಬಂದ್ ಆಗಿವೆ. ಇನ್ನೊಂದೆಡೆ ಗ್ಯಾಸ್ ಇಲ್ಲಿದೆ ಆಟೋಗಳು ಸಹ ನಿಂತಲ್ಲೇ ನಿಂತುಕೊಂಡಿವೆ.

Source link

Exit mobile version