ದಾವಣಗೆರೆ, (ಮಾರ್ಚ್ 10): ತಮ್ಮ ಪ್ರೀತಿಗೆ (Love) ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದೂ ಮುಸ್ಲಿಂ (Hindu Muslim) ಜೋಡಿಯೊಂದು ತುಂಗಾಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ಪಟ್ಟಣದ ತುಂಗಭದ್ರ ಸೇತುವೆ ಬಳಿ ನಡೆದಿದೆ. ಅದೃಷ್ಟವಶಾತ್ ನದಿಯಲ್ಲಿ ನೀರು ಕಡಿಮೆ ಇದ್ದರಿಂದ ಪ್ರೇಮಿಗಳು ಬದುಕುಳಿದಿದ್ದಾರೆ. ಸಾಯಲು ಯತ್ನಿಸಿದವರನ್ನು ದಾವಣಗೆರೆ ನಗರದ ಬಾಡಾ ಕ್ರಾಸ್ ಬಳಿ ಇರುವ ಆಂಜನೇಯ ಕಾಟಲ್ ಮಿಲ್ ಪ್ರದೇಶ ನಿವಾಸಿಗಳಾದ ಸಿಂಚನ ಹಾಗೂ ಸಮೀರ್ ಎಂದು ಗುರುತಿಸಲಾಗಿದೆ. ಇನ್ನು ಈ ಜೋಡಿ ಈಜಿ ನದಿಯ ಮಧ್ಯ ದ್ವೀಪದಂತಿದ್ದ ನಡುಗಡ್ಡೆಯಲ್ಲಿ ಆಶ್ರಯ ಪಡೆದು ಗಮನ ಸೆಳೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಸೇರಿದ ಸಮೀರ್ ಹಾಗೂ ಹಿಂದೂ ಧರ್ಮದ ಸಿಂಚನ ಪರಸ್ಪರ ಪ್ರೀತಿಸುತ್ತಿದ್ದು, ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಆದ್ರೆ, ಇಬ್ಬರು ಪರಸ್ಪರ ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ಇವರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಡಿ ಸಾಯುವುದಕ್ಕೆ ಮುಂದಾಗಿದ್ದರು ಎಂದು ತಿಳಿದುಬಂದಿದೆ.
ಇದಕ್ಕೂ ಮೊದಲು ಈ ಜೋಡಿ ಮನೆ ಬಿಟ್ ಹೋಗಿದ್ದು, ಮೈಸೂರು, ಶಿವಮೊಗ್ಗ ಸುತ್ತಾಡಿ ಬಳಿಕ ಹೊನ್ನಾಳಿಗೆ ಬಂದಿದ್ದು, ಬಳಿಕ ತುಂಗಭದ್ರ ಸೇತುವೆ ಮೇಲಿಂದ ನದಿಗೆ ಹಾರಿದೆ. ಆದ್ರೆ, ಅದೃಷ್ಟವಶಾತ್ ನದಿಯಲ್ಲಿ ನೀರು ಕಡಿಮೆ ಇದ್ದರಿಂದ ಈಜಿ ಹೋಗಿ ನಡುಗಡ್ಡೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಪ್ರೇಮಿಗಳನ್ನು ರಕ್ಷಿಸಿ ನಡುಗಡ್ಡೆಯಿಂದ ದಡಕ್ಕೆ ಕರೆತಂದಿದ್ದಾರೆ.
ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀಮಿಯರ್ ಶೋಗೆ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ಸಿನಿಮಾದ ಟ್ರೈಲರ್ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಯೂಟ್ಯೂಬ್ನಲ್ಲಿ ಸಖತ್ ಟ್ರೆಂಡ್ ಸಹ ಆಗುತ್ತಿದೆ. ಸಿನಿಮಾದ ಟ್ರೈಲರ್ ಹಿಂದಿ ಮಾತ್ರವೇ ಅಲ್ಲದೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಆಗಿದೆ. ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸುತ್ತಿದೆ. ಹಾಗಿದ್ದರೂ ಸಹ ಟಾಪ್ 10 ಪಟ್ಟಿ ಸೇರಲು ವಿಫಲವಾಗಿದೆ.
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar: The Revenge) ಚಿತ್ರದ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ಕೇವಲ 48 ಗಂಟೆಗಳಲ್ಲಿ ಎಲ್ಲಾ ಭಾಷೆಗಳಿಂದ ಸೇರಿ ಬರೋಬ್ಬರಿ 312 ಮಿಲಿಯನ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಈ ಸಿನಿಮಾ ಬಾಲಿವುಡ್ ಇತಿಹಾಸದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಇಷ್ಟು ದೊಡ್ಡ ಸಂಖ್ಯೆಯ ವೀವ್ಸ್ ಅನ್ನು ಬಾಲಿವುಡ್ನ ಇನ್ಯಾವುದೇ ಸಿನಿಮಾ ಪಡೆದಿಲ್ಲ. ಆದರೆ ನೆನಪಿರಲಿ, 312 ಮಿಲಿಯನ್, ಕೇವಲ ಒಂದು ಭಾಷೆಯ ಟ್ರೈಲರ್ನಿಂದ ಬಂದಿರುವ ವೀವ್ಸ್ ಅಲ್ಲ ಬದಲಿಗೆ ಎಲ್ಲ ಭಾಷೆಗಳ ಟ್ರೈಲರ್ಗೆ ಸಿಕ್ಕಿರುವ ವೀವ್ಸ್ ಸಂಖ್ಯೆ ಆಗಿದೆ.
ಮಾರ್ಚ್ 7 ರಂದು ಬಿಡುಗಡೆಯಾದ ಈ ಚಿತ್ರದ ಹಿಂದಿ ಟ್ರೈಲರ್ ಮೊದಲ 24 ಗಂಟೆಗಳಲ್ಲಿ 39.2 ಮಿಲಿಯನ್ (39,200,000) ವೀಕ್ಷಣೆಗಳನ್ನು ಪಡೆದುಕೊಂಡಿತ್ತು. ಆದರೆ, ಈ ಸಂಖ್ಯೆಯು ಬಾಲಿವುಡ್ನ ಟಾಪ್ 10 ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ಗಳ ಪಟ್ಟಿಗೆ ಸೇರಲು ಸ್ವಲ್ಪದರಲ್ಲಿ ವಿಫಲವಾಯಿತು. 24 ಗಂಟೆಗಳಲ್ಲಿ ಅತಿ ಹೆಚ್ಚು ವೀವ್ಸ್ ಪಡೆದ ಟ್ರೈಲರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ‘ಸಲಾರ್’ ಸಿನಿಮಾ, ಎರಡನೇ ಸ್ಥಾನದಲ್ಲಿರುವುದು ಕನ್ನಡದ ‘ಕೆಜಿಎಫ್’, ಮೂರನೇ ಸ್ಥಾನದಲ್ಲಿ ‘ಪುಷ್ಪ 2’ ಸಿನಿಮಾ ಇದ್ದರೆ ನಾಲ್ಕನೇ ಸ್ಥಾನದಲ್ಲಿ ‘ಆದಿಪುರುಷ್’ ಸಿನಿಮಾ ಇದೆ. ಈ ಪಟ್ಟಿಯ ಹತ್ತನೇ ಸ್ಥಾನದಲ್ಲಿ ಶಾರುಖ್ ಖಾನ್ ಅವರ ‘ಜವಾನ್’ ಸಿನಿಮಾ ಇದೆ. ಈ ಸಿನಿಮಾದ ಟ್ರೈಲರ್ 24 ಗಂಟೆಗಳಲ್ಲಿ 55 ಮಿಲಿಯನ್ ವೀವ್ಸ್ ಗಳಿಸಿತ್ತು. ಈ ದಾಖಲೆಯನ್ನು ಸಹ ‘ಧುರಂಧರ್ 2’ ಮುರಿದಿಲ್ಲ.
ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಅಡ್ವಾನ್ಸ್ ಬುಕಿಂಗ್ ಕೂಡ ಭರ್ಜರಿಯಾಗಿ ಆರಂಭವಾಗಿದೆ. ವರದಿಗಳ ಪ್ರಕಾರ, ಮಾರ್ಚ್ 09ರ ವೇಳೆಗಾಗಲೆ ಸುಮಾರು 2 ಲಕ್ಷಕ್ಕೂ ಅಧಿಕ ಪ್ರೀಮಿಯರ್ ಶೋ ಟಿಕೆಟ್ಗಳು ಮಾರಾಟವಾಗಿವೆ. ಮಾರ್ಚ್ 18 ರಂದು ಪೇಯ್ಡ್ ಪ್ರೀಮಿಯರ್ ಪ್ರದರ್ಶಿತವಾಗಲಿದೆ. ಮಾರ್ಚ್ 19 ರಂದು ವಿಶ್ವಾದ್ಯಂತ ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ. ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಅವರಂತಹ ಬಲಿಷ್ಠ ತಾರಾಗಣವಿರುವ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಹಲವು ಹಳೆಯ ದಾಖಲೆಗಳನ್ನು ಧೂಳೀಪಟ ಮಾಡುವುದು ಖಚಿತ ಎಂದು ಸಿನಿ ಪಂಡಿತರು ಭವಿಷ್ಯ ನುಡಿದಿದ್ದಾರೆ.
ಬಾಲಿವುಡ್ ಆಮಿರ್ ಖಾನ್ (Aamir Khan) ಅವರು ಪರ್ಫೆಕ್ಷನಿಸ್ಟ್ ಎನಿಸಿಕೊಂಡಿದ್ದಾರೆ. ಅವರು ಪ್ರೇಕ್ಷಕರನ್ನು ಸಾಕಷ್ಟು ಗೌರವಿಸುತ್ತಾರೆ. ಈಗ ಅವರು ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ. ‘ಸಿತಾರೆ ಜಮೀನ್ಪರ್’ ಸಿನಿಮಾ ಈ ಮೊದಲು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಆ ಬಳಿಕ ಯೂಟ್ಯೂಬ್ನಲ್ಲಿ ರಿಲೀಸ್ ಆಯಿತು. ಈ ವೇಳೆ ಆಮಿರ್ ಖಾನ್ ಹೇಳಿದ ಸುಳ್ಳು ಈಗ ಹೊರ ಬಿದ್ದಿದೆ. ಅವರನ್ನು ಸಾಕಷ್ಟು ಟ್ರೋಲ್ ಮಾಡುತ್ತಾ ಇದ್ದಾರೆ.
ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಒಟಿಟಿಗೆ ಮಾರಾಟ ಮಾಡಲಿರಲಿಲ್ಲ. ಚಿತ್ರಮಂದಿರಗಳಲ್ಲಿ ಭಾರಿ ಹಿಟ್ ಆದ ಈ ಚಿತ್ರ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಯಿತು. ಯೂಟ್ಯೂಬ್ನಲ್ಲಿ ಯಾರು ಬೇಕಾದರೂ ಕೇವಲ 100 ರೂಪಾಯಿ ನೀಡಿ ಸಿನಿಮಾ ನೋಡಬಹುದಿತ್ತು. ಒಮ್ಮೆ ಪಾವತಿಸಿದರೆ 48 ಗಂಟೆಗಳವರೆಗೆ ಈ ಚಿತ್ರ ನೋಡುವ ಅವಕಾಶ ಇತ್ತು. ಹೆಚ್ಚು ಜನರಿಗೆ ತಲುಪಬೇಕು ಎಂಬ ಕಾರಣಕ್ಕೆ ನಾವು ಈ ರೀತಿ ಮಾಡಿದ್ದೆವು ಎಂದು ಅವರು ಹೇಳಿದ್ದರು.
ಆ ಸಮಯದಲ್ಲಿ ಆಮಿರ್ ಖಾನ್ ಮಾತನಾಡಿದ್ದು ಕೇಳಿ, ಸಿನಿಮಾ ಒಟಿಟಿಗೆ ಬರೋದಿಲ್ಲ, ಅವರಿಗೆ ಜನರ ಬಗ್ಗೆ ಸಾಕಷ್ಟು ಪ್ರೀತಿ ಇದೆ ಎಂದೆಲ್ಲ ಜನರು ಅಂದುಕೊಂಡಿದ್ದರು. ಆದರೆ, ಇದು ಇದು ಸುಳ್ಳು ಎಂಬುದು ಈಗ ಗೊತ್ತಾಗಿದೆ. ಏಕೆಂದರೆ, ಸೋನಿ ಲಿವ್ ಅಲ್ಲಿ ಈ ಸಿನಿಮಾ ಪ್ರಸಾರ ಕಾಣಲಿದೆ. ದಿನಾಂಕ ಇನ್ನೂ ಫೈನಲ್ ಆಗಿಲ್ಲ.
ಸದ್ಯ ಆಮಿರ್ ಖಾನ್ ಅವರನ್ನು ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ. ಅವರು ನಡೆದುಕೊಂಡ ರೀತಿ ಸರಿ ಅಲ್ಲ ಎಂದು ಅನೇಕರು ಹೇಳಿದ್ದಾರೆ. ದುಡ್ಡಿಗಾಗಿ ಅವರು ಸುಳ್ಳು ಹೇಳಿದ್ದಾರೆ ಎಂದೆಲ್ಲ ಅವರು ಆರೋಪಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ, ಮಾರ್ಚ್ 10: ಕೇವಲ 40 ದಿನದ ಹಸುಗೂಸನ್ನು ಹತ್ಯೆಗೈದಿದ್ದ (kill) ಅಜ್ಜಿಯನ್ನು (grandmother) ಚೇಳೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕತ್ತು ಹಿಸುಕಿ ಮರಿ ಮೊಮ್ಮಗನನ್ನೇ ಮೆಹಬೂಬಿ ಹತ್ಯೆಗೈದಿದ್ದರು. ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 2025ರ ಡಿಸೆಂಬರ್ 24ರಂದು ಘಟನೆ ನಡೆದಿತ್ತು. ತಡವಾಗಿ ಬೆಳಕಿಗೆ ಬಂದಿದೆ. ಎಫ್ಎಸ್ಎಲ್ ವರದಿಯಲ್ಲಿ ಮಗುವಿನ ಕೊಲೆ ರಹಸ್ಯ ಬಯಲಾಗಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಕೇವಲ 40 ದಿನದ ಗಂಡು ಮಗು, ಮರಿ ಮೊಮ್ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದ ಅಜ್ಜಿ ಮೆಹಬೂಬಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಡಿಸೆಂಬರ್ 24ರಂದು ಚೇಳೂರು ಪಟ್ಟಣದಲ್ಲಿ ಮೆಹಮೂಬಿ ಎಂಬಾಕೆಯ ಮನೆಯಲ್ಲಿ ಈಕೆಯ ಮೊಮ್ಮಗಳ 40 ದಿನದ ಗಂಡು ಮಗು ಸಾವನ್ನಪ್ಪಿತ್ತು. ಅನಾರೋಗ್ಯ ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ಅಜ್ಜಿ ಮಣ್ಣು ಸಹ ಮಾಡಿಸಿಬಿಟ್ಟಿದ್ದಳು.
ಆದರೆ ಅಜ್ಜಿಯ ಮೇಲೆ ಅನುಮಾನಗೊಂಡ ಮೊಮ್ಮಗಳು, ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಮೇರೆಗೆ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಎಫ್ಎಸ್ಎಲ್ ವರದಿಗೆ ಕಳುಹಿಸಲಾಗಿತ್ತು. ಎಫ್ಎಸ್ಎಲ್ ವರದಿಯಲ್ಲಿ ಮಗು ಉಸಿರುಗಟ್ಟಿಸಿ ಕೊಂದಿರುವುದಾಗಿ ಬೆಳಕಿಗೆ ಬಂದಿದೆ. ಹೀಗಾಗಿ ಮಗುವಿನ ಅಜ್ಜಿಯೇ ಕೊಲೆ ಮಾಡಿರುವುದು ಬಯಲಾಗಿದ್ದು, ಮೆಹಬೂಬಿಯನ್ನ ಬಂಧಿಸಿ ಜೈಲಿಗಟ್ಟಲಾಗಿದೆ.
ಅಜ್ಜಿಯ ಮೊಮ್ಮಗಳು ಅನ್ಯಧರ್ಮದ ಯುವಕನೊಂದಿಗೆ ಪ್ರೇಮವಿವಾಹವಾಗಿದ್ದು, ಬಾಣಂತನಕ್ಕೆ ಅಂತ ಅಜ್ಜಿಯ ಮನೆಗೆ ಬಂದಿದ್ದಳು. ಅಜ್ಜಿಗೆ ಅನ್ಯಧರ್ಮದ ಯುವಕನೊಂದಿಗೆ ಪ್ರೇಮ ವಿವಾಹವಾಗಿರುವುದು ಇಷ್ಟವಿರಲಿಲ್ಲ. ಹಾಗೂ ಮಗುವನ್ನ ನೋಡಿಕೊಳ್ಳಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ.
ಒಟ್ಟಿನಲ್ಲಿ ಪ್ರಪಂಚ ನೋಡವ ಮೊದಲೇ ಹಸುಗೂಸನ್ನು ಹತ್ಯೆಗೈಯುವ ಮೂಲಕ ಅಜ್ಜಿ ಜೈಲುಪಾಲಾದರೆ, ಇತ್ತ 9 ತಿಂಗಳ ನವ ಮಾಸ ಹೊತ್ತು ಹೆತ್ತ ತಾಯಿ ತನ್ನ ಮಗನನ್ನ ಕಳೆದುಕೊಂಡು ಜೀವನಪರ್ಯಂತ ನೋವು ಅನುಭವಿಸುವಂತಾಗಿದೆ.
ಪುಟ್ಟ ಮಕ್ಕಳನ್ನು (little kids) ನೋಡಿಕೊಳ್ಳುವಾಗ ಅವರ ಮೇಲೆ ಎಷ್ಟು ಕಣ್ಣು ಇಟ್ಟಿದ್ದರೂ ಕಡಿಮೆಯೇ. ಪುಟಾಣಿ ಮಕ್ಕಳೇ ಹಾಗೆ, ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳ ವಿಷಯದಲ್ಲಿ ಹೆತ್ತವರು ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಇನ್ನು ಹೆತ್ತವರ ಕೆಲವು ಬೇಜವಾಬ್ದಾರಿತನದಿಂದ ಪುಟಾಣಿಗಳು ಸಮಸ್ಯೆಗೆ ಸಿಲುಕಿ ಕೊಳ್ಳುವುದಿದೆ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಮಹಿಳೆಯೂ ಹಾಲಿನ ಬಾಟಲಿಯನ್ನು ಮಗುವಿನ ಬಾಯಿಗೆ ಇಡೋ ಬದಲು ಕಿವಿಗೆ ಇಟ್ಟಿದ್ದಾಳೆ. ಈ ದೃಶ್ಯ ನೋಡಿದ ನೆಟ್ಟಿಗರು ಈ ಮಹಿಳೆಯ ವಿರುದ್ಧ ಗರಂ ಆಗಿದ್ದಾರೆ.
dr_abhinandan_ tripathi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಡಿಲಲ್ಲಿ ಚಿಕ್ಕ ಮಗುವನ್ನು ಹಿಡಿದುಕೊಂಡು, ಆರಾಮವಾಗಿ ಕುಳಿತುಕೊಂಡಿದ್ದಾಳೆ. ಬಾಟಲಿಯಿಂದ ಮಗುವಿಗೆ ಹಾಲುಣಿಸುತ್ತಿರುವುದನ್ನು ನೋಡಬಹುದು. ಆದರೆ ಇದೇ ವೇಳೆ ಈ ಮಹಿಳೆ ಎಡವಟ್ಟು ಮಾಡಿಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ
ಪುಟ್ಟ ಮಗುವಿನ ಬಾಯಿಗೆ ಹಾಲಿನ ಬಾಟಲಿ ಇಡುವುದನ್ನು ಬಿಟ್ಟು ಕಿವಿಗೆ ಇಟ್ಟಿದ್ದಾಳೆ. ಈ ಪುಟ್ಟ ಕಂದಮ್ಮನಿಗೂ ತಾಯಿ ಏನು ಮಾಡುತ್ತಿದ್ದಾಳೆ ಎಂದು ತಿಳಿಯದೇ ಅಳಲು ಶುರು ಮಾಡಿದೆ. ಅದಲ್ಲದೇ ಮಗು ಹಸಿವಿನಿಂದ ಹಾಲಿಗಾಗಿ ಸುತ್ತಲೂ ಹುಡುಕಲು ಪ್ರಾರಂಭಿಸಿದೆ. ಈ ಮಹಿಳೆಯ ಸಂಪೂರ್ಣ ಗಮನವು ತನ್ನ ಮುಂಭಾಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಮೇಲಿದೆ.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮಗುವಿನ ಮೇಲೆ ತಾಯಿಗೆ ಜ್ಞಾನನೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತಾಯಿ ಅಂದ್ರೆ ಹೀಗೆ ಇರ್ಬೇಕು ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು,
ಮಗು ಮೇಲೆ ಗಮನ ಕೊಡದೇ ಆ ಕಡೆ ಏನು ನೋಡ್ತಾ ಇದ್ದಿಯಾ ಸುಂದ್ರಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನೀರಿನಾಂಶದಿಂದ ಸಮೃದ್ಧವಾಗಿರುವ ಕಲ್ಲಂಗಡಿ ಹಣ್ಣನ್ನು (watermelon) ಬೇಸಿಗೆಯ ಸಮಯದ ಅಮೃತವೆಂದೇ ಹೇಳಬಹುದು. ಹೌದು ರುಚಿಕರ, ರಸಭರಿತವಾದ ಈ ಹಣ್ಣು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುವುದು ಮಾತ್ರವಲ್ಲದೆ, ನಿರ್ಜಲೀಕರಣವನ್ನೂ ತಡೆಯುತ್ತದೆ. ಅದಕ್ಕಾಗಿಯೇ ಈ ಸಮಯದಲ್ಲಿ ಕಲ್ಲಂಗಡಿ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ದೇಹವನ್ನು ತಂಪಾಗಿರಿಸಲು, ದೇಹವನ್ನು ಹೈಡ್ರೇಟ್ ಆಗಿರಿಸಲು ಜನ ಈ ಹಣ್ಣನ್ನೇ ಹೆಚ್ಚಾಗಿ ಖರೀದಿಸುತ್ತಾರೆ. ಆದ್ರೆ ಅನೇಕ ಸಂದರ್ಭದಲ್ಲಿ ನಾವು ಖರೀದಿಸುವಂತಹ ಕಲ್ಲಂಗಡಿ ಹಣ್ಣು ಅಷ್ಟೇನು ರುಚಿಕರವಾಗಿರುವುದಿಲ್ಲ, ಜೊತೆಗೆ ಅನೇಕರಿಗೆ ರಸಭರಿತ ಕಲ್ಲಂಗಡಿ ಹಣ್ಣನ್ನು ಹೇಗೆ ಆಯ್ಕೆ ಮಾಡೋದು ಅನ್ನೋದು ಸಹ ಗೊತ್ತಿಲ್ಲ. ಹೀಗಿರುವಾಗ ಈ ಕೆಲವೊಂದು ಸರಳ ಸಲಹೆಗಳನ್ನು ಪಾಲಿಸುವ ಮೂಲಕ ರಸಭರಿತ, ರುಚಿಕರ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡಬಹುದು.
ಮಾಗಿದ, ರಸಭರಿತ ಕಲ್ಲಂಗಡಿ ಹಣ್ಣನ್ನು ಈ ರೀತಿ ಆರಿಸಿ ಖರೀದಿಸಿ:
ಹಳದಿಯಾಗಿದೆಯೇ ಗಮನಿಸಿ: ಕಲ್ಲಂಗಡಿಯ ಬುಡ ಭಾಗದಲ್ಲಿ ತಿಳಿ ಹಳದಿ ಚುಕ್ಕೆ ಕಾಣಿಸಿಕೊಂಡರೆ, ಅದನ್ನು ಹಣ್ಣಾದ ಬಳಿಕವೇ ಕೊಯ್ಲು ಮಾಡಲಾಗಿದೆ ಎಂದರ್ಥ. ಇಂತಹ ಕಲ್ಲಂಗಡಿ ತುಂಬಾನೇ ರುಚಿಕರವಾಗಿರುತ್ತವೆ.
ಲಘುವಾಗಿ ಟ್ಯಾಪ್ ಮಾಡಿ: ಕಲ್ಲಂಗಡಿ ಹಣ್ಣನ್ನು ಖರೀದಿಸುವ ಮುನ್ನ ನಿಮ್ಮ ಬೆರಳುಗಳಿಂದ ಆ ಹಣ್ಣುಗಳನ್ನು ಟ್ಯಾಪ್ ಮಾಡಿ ಶಬ್ದವನ್ನು ಆಲಿಸಿ. ಆಳವಾದ, ಪ್ರತಿಧ್ವನಿಸುವ ಢಕ್ ಢಕ್ ಎನ್ನುವ ಶಬ್ದವನ್ನು ಕೇಳಿದರೆ, ಆ ಹಣ್ಣು ತುಂಬಾನೇ ಸಿಹಿಯಾಗಿದೆ ಎಂದರ್ಥ.
ತೂಕ ನೋಡಿ: ರಸಭರಿತ, ಸಿಹಿ ಮತ್ತು ಮಾಗಿದ ಕಲ್ಲಂಗಡಿ ಯಾವಾಗಲೂ ಭಾರವಾಗಿರುತ್ತವೆ. ಕಲ್ಲಂಗಡಿ ಹಗುರವಾಗಿದ್ದರೆ, ಆ ಕಲ್ಲಂಗಡಿ ಒಳಗಿನಿಂದ ಒಣಗಿದೆ, ಅವುಗಳು ರುಚಿಕರವಾಗಿಲ್ಲ ಎಂದರ್ಥ. ಹಾಗಾಗಿ ಯಾವಾಗಲೂ ಭಾರವಾಗಿರುವ ಹಣ್ಣನ್ನೇ ಖರೀದಿಸಿ.
ಕಂದು ಗುರುತುಗಳು: ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಮೇಲಿನ ವಿನ್ಯಾಸಗಳು ಅಥವಾ ಮಾದರಿಗಳನ್ನು ನೋಡಿ. ನೀವು ಕಂದು, ಒರಟಾದ, ಬಲೆ ತರಹದ ಗುರುತುಗಳನ್ನು ನೋಡಿದರೆ, ಆ ಕಲ್ಲಂಗಡಿ ಹಣ್ಣು ತುಂಬಾನೇ ಸಿಹಿಯಾಗಿರುತ್ತದೆ ಎಂದರ್ಥ.
ಹೊಳಪಾಗಿದೆಯೇ ಎಂಬುದನ್ನು ನೋಡಿ: ಕಲ್ಲಂಗಡಿ ಹಣ್ಣು ತುಂಬಾ ಹೊಳೆಯುತ್ತಿದ್ದರೆ, ಅದು ಹಣ್ಣಾಗದೇ ಇರಬಹುದು. ಅದು ಹಣ್ಣಾಗುತ್ತಿದ್ದಂತೆ, ಅದರ ಬಣ್ಣ ಮಸುಕಾಗಲು ಪ್ರಾರಂಭವಾಗುತ್ತದೆ. ಆದ್ದರಿಂದ, ಯಾವಾಗಲೂ ಮಸುಕಾದ ಬಣ್ಣದ ಕಲ್ಲಂಗಡಿ ಹಣ್ಣನ್ನೇ ಖರೀದಿಸಿ.
ಬೇಸಿಗೆಯಲ್ಲಿ ನಿರ್ಜಲೀಕರಣದ ಸಮಸ್ಯೆ ಸಾಮಾನ್ಯ. ಕಲ್ಲಂಗಡಿಯಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ, ಇದು ದೇಹದ ನೀರಿನ ಕೊರತೆಯನ್ನು ನೀಗಿಸುತ್ತದೆ ಮತ್ತು ಶಾಖದ ಹೊಡೆತದಿಂದ ನಮ್ಮನ್ನು ರಕ್ಷಿಸುತ್ತದೆ.
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹವು ಒಳಗಿನಿಂದ ತುಂಬಾನೇ ತಂಪಾಗಿರುತ್ತದೆ.
ಕಲ್ಲಂಗಡಿಯಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಮತ್ತು ಫೈಬರ್ ಅಧಿಕವಾಗಿರುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುವಂತೆ ಭಾಸವಾಗುತ್ತದೆ. ಈ ಮೂಲಕ ಇದು ತೂಕ ಇಳಿಸಿಕೊಳ್ಳಲೂ ಸಹಾಯ ಮಾಡುತ್ತದೆ.
ಕಲ್ಲಂಗಡಿಯಲ್ಲಿ ‘ಲೈಕೋಪೀನ್’ ಎಂಬ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಿದೆ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಕಲ್ಲಂಗಡಿಯಲ್ಲಿರುವ ನೀರಿನಾಂಶ ಮತ್ತು ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ ಮತ್ತು ಹೊಟ್ಟೆಯನ್ನು ತಂಪಾಗಿಸುತ್ತದೆ.
ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾಗಿರುವ ಕಲ್ಲಂಗಡಿ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ, ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಚರ್ಮವನ್ನು ಸುಕ್ಕು ರಹಿತವಾಗಿರಿಸುತ್ತದೆ ಮತ್ತು ಇದು ಕೂದಲನ್ನು ಬಲಪಡಿಸಲು ಸಹಕಾರಿ.
ಬೆಂಗಳೂರು, ಮಾರ್ಚ್ 10:ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ದೇಶದ ಹಲವೆಡೆ ಈಗಾಗಲೇ LPG ಸಿಲಿಂಡರ್ಗಳ ಕೊರತೆ ಎದುರಾಗಿದೆ. ಈ ನಡುವೆ ಪೆಟ್ರೋಲ್, ಡೀಸೆಲ್ ಸೇರಿ ಇಂಧನಗಳ ಕೊರತೆಯೂ ಉಂಟಾಗುವ ಸಾಧ್ಯತೆ ಹಿನ್ನೆಲೆ ಜನ ಸಾಮಾನ್ಯರು ಆತಂಕಗೊಂಡಿದ್ದಾರೆ. ಮುಂಚಿತವಾಗಿ ಅಗತ್ಯ ಇಂಧನ ದಾಸ್ತಾನಿಗೆ ಮುಂದಾಗ್ತಿದ್ದು, ಕೆಲವೆಡೆ ಪೆಟ್ರೋಲ್ ಬಂಕ್ಗಳಿಗೆ ವಾಹನಗಳ ಮಾಲಕರು ಮುಗಿಬಿದ್ದ ಘಟನೆಗಳು ವರದಿಯಾಗಿವೆ. ಕೆಲವರು ನೀರಿನ ಟ್ಯಾಂಕ್ಗಳಲ್ಲಿ ಇಂಧನ ತುಂಬಿಸಿಕೊಂಡು ಹೋಗುತ್ತಿರುವ ವಿಡಿಯೋಗಳೂ ವೈರಲ್ ಆಗಿವೆ. ಈ ನಡುವೆ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ ಎಂದು ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ (AKFPT) ತಿಳಿಸಿದೆ.
ರಾಜ್ಯದ ಎಲ್ಲಿಯೂ ಪೆಟ್ರೋಲ್(MS), ಡೀಸೆಲ್(HSD) ಕೊರತೆ ಇಲ್ಲ. ಭಾರತ ಪೆಟ್ರೋಲಿಯಂ(BPCL), ಹಿಂದೂಸ್ತಾನ್ ಪೆಟ್ರೋಲಿಯಂ(HPCL) ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಷನ್(IOCL) ಸೇರಿ ಸಾರ್ವಜನಿಕ ಕ್ಷೇತ್ರದ ಮೂರು ತೈಲ ಮಾರಾಟ ಸಂಸ್ಥೆಗಳಲ್ಲಿ ತೈಲ ಸಂಗ್ರಹವಿದೆ. ರಾಜ್ಯದ ಎಲ್ಲಾ ಟರ್ಮಿನಲ್ಗಳು ಮತ್ತು ಡಿಪೋಗಳಲ್ಲಿ ಸಮರ್ಪಕ, ನಿರಂತರ ಇಂಧನ ಸಂಗ್ರಹವನ್ನು ಮಾಡಲಾಗಿದೆ. ಇದಕ್ಕೂ ಮೇಲಾಗಿ ಕರ್ನಾಟಕದಾದ್ಯಂತ ಇರುವ ಎಲ್ಲ ಪೆಟ್ರೋಲ್ ಬಂಕ್ಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ. ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದ್ದು, ಗ್ರಾಹಕರ ನಿಯಮಿತ ಬೇಡಿಕೆಯನ್ನು ಪೂರೈಸಲು ಸಿದ್ಧವಿದ್ದೇವೆ ಎಂದು ತಿಳಿಸಿದೆ.
ಇಂಧನಗಳ ಅಭಾವ ಉಂಟಾಗುವ ಬಗ್ಗೆ ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಇಂಧನ ಖರೀದಿ ಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ ರಾಜ್ಯದಾದ್ಯಂತ ಇಂಧನ ಸರಬರಾಜು ವ್ಯವಸ್ಥೆ ಸ್ಥಿರವಾಗಿ, ಸಮನ್ವಯ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ತೈಲ ಮಾರಾಟ ಕಂಪನಿಗಳ ಜೊತೆ ಫೆಡರೇಷನ್ ನಿರಂತರ ಸಂಪರ್ಕದಲ್ಲಿದೆ. ಪೆಟ್ರೋಲ್ ಡೀಲರ್ಗಳು ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸಬೇಕು ಎಂದೂ ಮನವಿ ಮಾಡುತ್ತೇವೆ ಎಂದು AKFPT ಹೇಳಿದೆ. ಅಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಗ್ರಾಹಕರಿಗೆ ಸಮಸ್ಯೆ ಆಗದಂತೆ ಇಂಧನ ಪೂರೈಸುವ ಭರವಸೆಯನ್ನೂ ಮಾಧ್ಯಮ ಪ್ರಕಟಣೆ ಮೂಲಕ AKFPT ನೀಡಿದೆ.
ಬೆಂಗಳೂರು, ಮಾರ್ಚ್ 10: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ (Commercial LPG Cylinder) ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಇತ್ತೀಚೆಗೆ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಎಲ್ಪಿಜಿ ಉತ್ಪಾದನೆಗೆ ಗೃಹ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆಗೆ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
ಬೆಂಗಳೂರಿನ ಹಲವು ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಹಲವಾರು ಹೋಟೆಲ್ಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಕಮರ್ಷಿಯಲ್ ಸಿಲಿಂಡರ್ ಪೂರೈಕೆ ವ್ಯತ್ಯಯದಿಂದ ಲಕ್ಷಾಂತರ ಜನರ ಮೇಲೆ ಪರಿಣಾಮ
ಬೆಂಗಳೂರು ನಗರದಲ್ಲಿ ಸಾವಿರಾರು ಸಣ್ಣ ಹೋಟೆಲ್ಗಳು, ಮೆಸ್ಸುಗಳು ಮತ್ತು ಕೇಟರಿಂಗ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಲಕ್ಷಾಂತರ ಜನರು ಇವುಗಳ ಮೇಲೆ ಅವಲಂಬಿತರಿದ್ದಾರೆ. ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕಾಗಿ ಹೊರನಗರಗಳಿಂದ ಬಂದಿರುವ ಅನೇಕರು ದಿನನಿತ್ಯದ ಆಹಾರಕ್ಕಾಗಿ ಇಂತಹ ಹೋಟೆಲ್ ಮತ್ತು ಮೆಸ್ಸುಗಳನ್ನೇ ನಂಬಿಕೊಂಡಿದ್ದಾರೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಾಮಾನ್ಯವಾಗಿ ರಾಜ್ಯದ ಕಮರ್ಷಿಯಲ್ ಎಲ್ಪಿಜಿ ಬೇಡಿಕೆಯನ್ನು ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್ (IOCL), ಎಚ್ಪಿಸಿಎಲ್ (HPCL) ಮತ್ತು ಬಿಪಿಸಿಎಲ್ (BPCL) ಮೂಲಕ ಪೂರೈಸಲಾಗುತ್ತದೆ. ಇದರಲ್ಲಿ ಐಒಸಿಎಲ್ ಪ್ರತಿದಿನ ಸುಮಾರು 500–550 ಮೆಟ್ರಿಕ್ ಟನ್, ಎಚ್ಪಿಸಿಎಲ್ 300 ಮೆಟ್ರಿಕ್ ಟನ್ ಮತ್ತು ಬಿಪಿಸಿಎಲ್ 230 ಮೆಟ್ರಿಕ್ ಟನ್ ವರೆಗೆ ಪೂರೈಕೆ ಮಾಡುತ್ತಿತ್ತು. ಆದರೆ ಈ ಪೂರೈಕೆಯಲ್ಲಿ ಉಂಟಾದ ಅಚಾನಕ್ ವ್ಯತ್ಯಯದಿಂದ ಈಗ ಬಳಕೆದಾರರಿಗೆ ದೊಡ್ಡ ಸಮಸ್ಯೆ ಎದುರಾಗಿದೆ ಎಂದು ಸಿಎಂ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್ ಹಾಗೂ ಕೇಟರಿಂಗ್ ಉದ್ಯಮಕ್ಕೆ ಅಗತ್ಯವಿರುವ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯನ್ನು ಶೀಘ್ರದಲ್ಲೇ ಪುನಃಸ್ಥಾಪಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ವಿನಂತಿಸಿದ್ದಾರೆ.
ಒಟ್ಟಿನಲ್ಲಿ, ವಾಣಿಜ್ಯ ಎಲ್ಪಿಜಿ ಕೊರತೆಯಿಂದ ಬೆಂಗಳೂರಿನ ಹೋಟೆಲ್ ಉದ್ಯಮ ಮಾತ್ರವಲ್ಲದೆ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಸಾಮಾನ್ಯ ಜನರ ದಿನನಿತ್ಯದ ಬದುಕಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಚಾಮರಾಜನಗರ, ಮಾರ್ಚ್ 10: ಜಿಲ್ಲೆಯ ಕೊಳ್ಳೇಗಾಲ ವೃತ್ತ ನಿರೀಕ್ಷಕರ (ಸಿಪಿಐ) ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಭಾರಿ ಅಗ್ನಿ ಅನಾಹುತ ಸಂಭವಿಸಿದೆ. ಈ ಘಟನೆಯಲ್ಲಿ ಕಚೇರಿಯಲ್ಲಿದ್ದ ಕಂಪ್ಯೂಟರ್ಗಳು ಮತ್ತು ಪ್ರಮುಖ ದಾಖಲೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಚೇರಿಯ ಸಿಬ್ಬಂದಿಗಳು ನೀರು ಹಾಕಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.
ಈ ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ, ಘಟನಾ ಸ್ಥಳಕ್ಕೆ ಡಿವೈಎಸ್ಪಿ ಧರ್ಮೇಂದ್ರ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಬೆಂಕಿ ಆಕಸ್ಮಿಕ ಘಟನೆಯೇ ಅಥವಾ ಪೂರ್ವನಿಯೋಜಿತ ಕೃತ್ಯವೇ ಎಂಬ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಅಧಿಕಾರಿಗಳು ಸಿಪಿಐ ಕಚೇರಿಯಲ್ಲಿ ಪರಿಶೀಲನೆ ನಡೆಸಿ ಬೆಂಕಿಗೆ ಕಾರಣವಾದ ಶಾರ್ಟ್ ಸರ್ಕ್ಯೂಟ್ನ ನಿಖರ ಕಾರಣವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಮುಂಬೈ, ಮಾರ್ಚ್ 10: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಮೂರು ಬಾರಿ ವಿಷ ಹಾಕಲು ಯತ್ನಿಸಿ ವಿಫಲವಾಗಿದ್ದ, ನಾಲ್ಕನೇ ಪ್ರಯತ್ನದಲ್ಲಿ ಕಾರು ಗುದ್ದಿಸಿ ಹತ್ಯೆ(Murder) ಮಾಡಿಸಿರುವ ಘಟನೆ ಮಹಾರಾಷ್ಟ್ರದ ಬುಲ್ದಾನದಲ್ಲಿ ನಡೆದಿದೆ. 1 ಲಕ್ಷ ರೂ. ಕೊಟ್ಟು ಹಿಟ್ಮ್ಯಾನ್ ನೇಮಿಸಿಕೊಂಡು ಅಪಘಾತದಂತೆ ಕಾಣುವ ರೀತಿಯಲ್ಲೇ ಬಿಂಬಿಸಿ ಕೊಲೆ ಮಾಡಿಸಿದ್ದ.
ಪೊಲೀಸರ ಪ್ರಕಾರ, ಪ್ರಕಾಶ್ ಗವಾಂಡೆ ಎಂಬ ಆರೋಪಿ, ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ತನ್ನ ಪತ್ನಿ ವೃಶಾಲಿಯನ್ನು ಕೊಲೆ ಮಾಡಲು ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡಿದ್ದ. ಮಾರ್ಚ್ 2 ರಂದು ಈ ಘಟನೆ ನಡೆದಿದ್ದು, ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಬಿಳಿ ಬಣ್ಣದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ರಸ್ತೆ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆರಂಭದಲ್ಲಿ, ಅಪಘಾತದಂತೆ ಕಂಡಿತ್ತು. ಆದರೆ ತನಿಖೆಯ ಸಮಯದಲ್ಲಿ, ಮಹಿಳೆಯ ಬಳಿ ಸುಳಿದಾಡುತ್ತಿದ್ದ MH 28 BB 5753 ನಂಬರ್ ಪ್ಲೇಟ್ ಹೊಂದಿರುವ ಕಾರಿನ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು.
ಆ ಕಾರು ಮನೀಶ್ ಸೂರ್ಯವಂಶಿ ಎಂಬ ವ್ಯಕ್ತಿಗೆ ಸೇರಿದ್ದು ಎಂದು ತಿಳಿದುಬಂದಿದೆ ನಂತರ ಆತನನ್ನು ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಸೂರ್ಯವಂಶಿ ಮಹಿಳೆಯ ಪತಿಯೇ ಕೊಲೆಗೆ ಸಂಚು ರೂಪಿಸಿದ್ದನ್ನು ಹೇಳಿದ್ದಾನೆ.
ತನ್ನ ಪತ್ನಿಯನ್ನು ಕೊಲ್ಲಲು ಪ್ರಕಾಶ್ ಮಂಗೇಶ್ ಚುಲ್ಕರ್ ಎಂಬಾತನನ್ನು 1 ಲಕ್ಷ ರೂ.ಗೆ ನೇಮಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಚುಲ್ಕರ್ ಬಂಧಿತ ಚಾಲಕ ಸೂರ್ಯವಂಶಿಯನ್ನು ಆಕೆಯ ವಾಹನಕ್ಕೆ ಡಿಕ್ಕಿ ಹೊಡೆಯಲೆಂದೇ ನೇಮಿಸಿಕೊಂಡಿದ್ದ.
ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಪರಾಧದ ಹಿಂದೆ ಕೌಟುಂಬಿಕ ಕಲಹ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ, ಆದರೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.