ಬೋನ್ ಬಳಿ ನಿಂತಿದ್ದ ಬಾಲಕಿ ಮೇಲೆ ಹೇಗೆ ಸಿಂಹ ದಾಳಿ ಮಾಡ್ತು ನೋಡಿ – Kannada News | Child Injured After Getting Too Close to Lion Enclosure in Viral Clip

ಮೃಗಾಲಯಕ್ಕೆ ಭೇಟಿ ನೀಡಿದಾಗ ಮೈಯಲ್ಲಾ ಕಣ್ಣಾಗಿರಬೇಕು, ಯಾವ ಪ್ರಾಣಿಗಳು ಎಲ್ಲಿಂದ ಹೇಗೆ ಬಂದು ದಾಳಿ ಮಾಡುತ್ತವೆ ಎಂದು ಹೇಳುವುದು ಕಷ್ಟ. ಹಾಗೆಯೇ ಆನ್​ಲೈನ್​​ ಅಲ್ಲಿ ವೈರಲ್ ಆದ ವಿಡಿಯೋದಲ್ಲಿ ಬೋನ್ ಬಳಿ ನಿಂತಿದ್ದ ಬಾಲಕಿ ಮೇಲೆ ಸಿಂಹ(Lion) ಹೇಗೆ ದಾಳಿ ಮಾಡಿತು ಎಂಬುದನ್ನು ನೋಡಬಹುದು.
ಬಾಲಕಿ ಬೋನ್ ಬಳಿ ನಿಂತು ಸಿಂಹಗಳನ್ನು ವೀಕ್ಷಿಸುತ್ತಿರುವಾಗ ಬೋನ್​ ಆಚೆಗೆ ಸಿಂಹ ತನ್ನ ಕೈಚಾಚಿ ಬಾಲಕಿಯನ್ನು ಹಿಡಿದಿದೆ.

ಆಕೆ ಅದರಿಂದ ಬಿಡಿಸಿಕೊಳ್ಳಲು ಹರಸಾಹಸ ಪಡುತ್ತಿರುವಾಗ ಆಕೆಯ ತಂದೆ ಕೂಡಲೇ ಓಡಿ ಬಂದು ಹೇಗೋ ಆಕೆಯನ್ನು ಕಾಪಾಡಿದ್ದಾರೆ. ಈ ಪೋಸ್ಟ್ ಅನ್ನು ‘ಕ್ಲಿಪ್ಸ್ ಯೂನಿವರ್ಸ್’ ಹ್ಯಾಂಡಲ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.

ಈ ವೈರಲ್ ಪೋಸ್ಟ್ ಅನ್ನು ನಿನ್ನೆ ಹಂಚಿಕೊಳ್ಳಲಾಗಿದ್ದು, 3 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಪೋಷಕರು ಮಗುವನ್ನು ಅಷ್ಟು ಹತ್ತಿರ ಬರಲು ಎಂದಿಗೂ ಬಿಡಬಾರದಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇನ್ನೂ ಕೆಲವರು ಮಾಂಸಾಹಾರಿ ಪ್ರಾಣಿಗಳ ಆಸು ಪಾಸು ಇರುವಾಗ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಬಾಲಕಿಗೆ ಏನಾಯ್ತೋ ಎಂದು ಚಿಂತಿಸುವ ಬದಲು ಜನರು ಪೋಷಕರಿಗೆ ಬೈದಿದ್ದೇ ಹೆಚ್ಚು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ಇವಿ ಬೈಕ್​ ಸಬ್ಸಿಡಿ ಯೋಜನೆ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ – Kannada News | Aapki EV Fraud: Bengaluru Customers Duped Rs35 Cr in Electric Bike Loan Scam with Bank Collusion

ಬೆಂಗಳೂರು, ಮಾ.3: ಸಿಲಿಕಾನ್ ಸಿಟಿಯಲ್ಲಿ ಎಲೆಕ್ಟ್ರಿಕ್ ಬೈಕ್ ವಿತರಿಸುವ ನೆಪದಲ್ಲಿ ಬರೋಬ್ಬರಿ 35 ಕೋಟಿ ರೂಪಾಯಿ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ‘ಆಪ್ಕಿ ಇವಿ’ (Aapki EV) ಶೋರೂಂ ಮಾಲೀಕರು ಸುಮಾರು 3,250 ಜನರಿಗೆ ಸಬ್ಸಿಡಿ ಆಸೆ ತೋರಿಸಿ ಲೋನ್ ಸುಳಿಗೆ ಸಿಲುಕಿಸಿದ್ದಾರೆ. ಕೇವಲ 20,000 ರೂ. ಡಿಪಾಸಿಟ್ ಮಾಡಿದರೆ ಸಾಕು, ಉಳಿದ ಹಣ ಕೇಂದ್ರ ಸರ್ಕಾರದ ಸಬ್ಸಿಡಿಯಡಿ ಪಾವತಿಯಾಗುತ್ತದೆ ಎಂದು ನಂಬಿಸಲಾಗಿತ್ತು. ಬೈಕ್ ನೀಡುವ ನೆಪದಲ್ಲಿ ಗ್ರಾಹಕರಿಂದ ಆಧಾರ್, ಪಾನ್ ಕಾರ್ಡ್ ಪಡೆದ ಶೋರೂಂ ಮಾಲೀಕರು, ಗ್ರಾಹಕರಿಗೆ ತಿಳಿಯದಂತೆ ಕೊಟಕ್ ಮಹೀಂದ್ರಾ ಬ್ಯಾಂಕ್ ಮೂಲಕ ಲೋನ್ ಮಾಡಿಸಿದ್ದಾರೆ.

ಕೇವಲ 35,000 ರೂ. ಬೆಲೆಬಾಳುವ ಸಾಧಾರಣ ಇವಿ ಬೈಕ್‌ಗೆ ಬರೋಬ್ಬರಿ 1.50 ಲಕ್ಷ ರೂಪಾಯಿ ಲೋನ್ ಮಾಡಿಸಿ ಬ್ಯಾಂಕ್‌ನಿಂದ ಹಣ ಪಡೆದುಕೊಳ್ಳಲಾಗಿದೆ. ಈ ವಂಚನೆಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಮ್ಯಾನೇಜರ್ ಕೂಡ ಭಾಗಿಯಾಗಿದ್ದು, ಗ್ರಾಹಕರ ಅನುಮತಿಯಿಲ್ಲದೆ ಲೋನ್ ಮಂಜೂರು ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಧಾರವಾಡ ಆಯ್ತು, ಈಗ ರಾಜ್ಯಾದ್ಯಂತ ಹೋರಾಟಕ್ಕೆ ಧುಮುಕಲಿರುವ ಉದ್ಯೋಗಾಕಾಂಕ್ಷಿಗಳು!

ಇಲ್ಲಿದೆ ನೋಡಿ ವಿಡಿಯೋ:

ತಮ್ಮ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಇರುವುದನ್ನು ಕಂಡು ಬೆಚ್ಚಿಬಿದ್ದ ಗ್ರಾಹಕರು ಇಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಎಂ.ಜಿ. ರಸ್ತೆವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿ ಪ್ರತಿಭಟಿಸಿದರು. 500ಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿ, ತಮಗೆ ನ್ಯಾಯ ಕೊಡಿಸುವಂತೆ ಮತ್ತು ಆರೋಪಿಗಳಾದ ರವಿ ಹಾಗೂ ಹನುಮಂತರಾಜು ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಗುಂಟೆ ಮತ್ತು ಪೀಣ್ಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಾಗಲಗುಂಟೆ ಠಾಣಾಧಿಕಾರಿಗಳು, ಶೀಘ್ರವೇ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದುಬೈನಿಂದ ಜೀವಂತ ಮರಳಿದ್ದೇ ಪವಾಡ: ಭಯಾನಕ ಅನುಭವ ಬಿಚ್ಚಿಟ್ಟ ಎಂಎಲ್ಸಿ ಭೋಜೇಗೌಡ – Kannada News | War in the Middle East: MLC Bhojegowda Reveals Harrowing Experience in Dubai

ಬೆಂಗಳೂರು, ಮಾರ್ಚ್​ 03: ದುಬೈನಿಂದ ಭಾರತಕ್ಕೆ ವಾಪಸ್ ಆಗಿರುವ ಎಂಎಲ್ಸಿ ಭೋಜೇಗೌಡರು, ಇಸ್ರೇಲ್-ಇರಾನ್ ಸಂಘರ್ಷದ ಕಾರಣದಿಂದ ಉಂಟಾದ ಆತಂಕಕಾರಿ ಪರಿಸ್ಥಿತಿಯ ಬಗ್ಗೆ ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಜೀವಂತವಾಗಿ ಭಾರತಕ್ಕೆ ಮರಳುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಹೋಟೆಲ್‌ಗಳಲ್ಲಿ ಉಳಿಯಲು ಭಯದ ವಾತಾವರಣ ಇತ್ತು. ಪ್ರತಿಯೊಬ್ಬರೂ ಆತಂಕದಲ್ಲಿದ್ದರು. ವಿಮಾನ ಸುರಕ್ಷಿತವಾಗಿ ನಮ್ಮ ನೆಲದಲ್ಲಿ ಲ್ಯಾಂಡ್ ಆದಾಗ ಎಲ್ಲ ಪ್ರಯಾಣಿಕರೂ ಚಪ್ಪಾಳೆ ತಟ್ಟಿ ತಮ್ಮ ಸಂತಸ ವ್ಯಕ್ತಪಡಿಸಿರೋದಾಗಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Mahakali Temple: ಗ್ರಹಣ ಕಾಲದಲ್ಲಿ ಬೆಂಗಳೂರಿನ ಈ ಕಾಳಿ ದೇವಾಲಯದಲ್ಲಿ ನಡೆಯುತ್ತೆ ವಿಶೇಷ ಪೂಜೆ – Kannada News | Bengaluru’s Bande Mahakali Temple: Special Eclipse Pujas and Graha Dosha Remedies

ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನImage Credit source: Pinterest

ಸಾಮಾನ್ಯವಾಗಿ ಗ್ರಹಣ ಕಾಲದಲ್ಲಿ ಬಹುತೇಕ ದೇವಸ್ಥಾನಗಳ ಬಾಗಿಲು ಮುಚ್ಚಿದರೆ, ಬೆಂಗಳೂರಿನ ಈ ಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಯಾಕೆಂದರೆ ಗ್ರಹಣ ಎಂದರೆ ಕತ್ತಲು. ಮಹಾಕಾಳಿಯು ಕತ್ತಲೆಯ ಅಧಿದೇವತೆ ಮತ್ತು ಕಾಲದ ಸಂಹಾರಕಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣಕ್ಕೆ ಕಾರಣರಾದ ರಾಹು ಮತ್ತು ಕೇತುಗಳು ತಾಮಸಿಕ ಗ್ರಹಗಳು. ಇವುಗಳ ಪ್ರಭಾವವನ್ನು ನಿಯಂತ್ರಿಸುವ ಶಕ್ತಿ ಕೇವಲ ಮಹಾಕಾಳಿಗೆ ಮಾತ್ರ ಇದೆ. ಆದ್ದರಿಂದ ಗ್ರಹಣ ಕಾಲದಲ್ಲಿ ಕಾಳಿಯ ಉಪಾಸನೆ ಮಾಡುವುದರಿಂದ ಜಾತಕದಲ್ಲಿನ ಗ್ರಹದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.

ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಗ್ರಹಣ ಕಾಲದಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಭಕ್ತರು ಸೇರುವುದನ್ನು ಕಾಣಬಹುದು. ಚಂದ್ರಗ್ರಹಣದ ದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ಮಧ್ಯಾಹ್ನ 3 ಗಂಟೆಯಿಂದ ಗ್ರಹಣ ಸಂದರ್ಭ ವಿಶೇಷ ಚಂದ್ರ ಶಾಂತಿ ಹೋಮ ನಡೆಯಲಿದ್ದು, ಗ್ರಹಣ ನಂತರ ಬಂಡೆಮಹಾಕಾಳಿ ಅಮ್ಮನಿಗೆ ಕುಂಭಾಭಿಷೇಕ ನೆರವೇರಲಿದೆ.

ಈ ಬಗ್ಗೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ಶಶಿಕುಮಾರ್ ಅವರು ಟಿವಿ9 ಜೊತೆ ಮಾತಾಡಿದ್ದು, ಮಂಗಳವಾರ ಹುಣ್ಣಿಮೆ ಮತ್ತು ಚಂದ್ರಗ್ರಹಣದ ದಿನದಂದು ದೇವಾಲಯವು ಎಂದಿನಂತೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಅನಾದಿ ಕಾಲದಿಂದಲೂ ಗ್ರಹಣದಂತಹ ಸಂದರ್ಭಗಳಲ್ಲಿ ಪೂಜೆ, ಪುನಸ್ಕಾರ ಮತ್ತು ಜಪತಪಗಳನ್ನು ಮಾಡುವುದರಿಂದ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ, ಗ್ರಹಣ ನಡೆಯುವ ಅವಧಿಯಲ್ಲಿ ದೇವಾಲಯವನ್ನು ಮುಚ್ಚಲಾಗುವುದಿಲ್ಲ ಎಂದು ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ. ಭಕ್ತರು ದೇವಾಲಯಕ್ಕೆ ಬಂದು ದರ್ಶನ ಪಡೆಯಬಹುದು ಅಥವಾ ಮನೆಯಲ್ಲಿಯೇ ಜಪತಪಗಳನ್ನು ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಈ ದಿನ ವಿಶೇಷವಾಗಿ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ. ಇದರೊಂದಿಗೆ ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ಚಂದ್ರ ಶಾಂತಿ ಮತ್ತು ಕೇತು ಶಾಂತಿ ಹೋಮಗಳು ನಡೆಯಲಿವೆ. ಹೋಮದ ನಂತರ, ಹೋಮದ ಕಲಶದ ನೀರನ್ನು ತಾಯಿಗೆ ಅಭಿಷೇಕ ಮಾಡಲಾಗುವುದು. ಭೂಮಿಗೆ ಮತ್ತು ಮನುಷ್ಯರಿಗೆ ಉಂಟಾಗಬಹುದಾದ ತೊಂದರೆಗಳು ಮತ್ತು ಅವಘಡಗಳನ್ನು ನಿವಾರಿಸಲು ಈ ಪೂಜೆಗಳನ್ನು ಸಲ್ಲಿಸಲಾಗುತ್ತದೆ ಎಂದು ಅರ್ಚಕರು ವಿವರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಂದ್ರ ಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳು ನಿತ್ಯ ಪೂಜೆಯ ಬಳಿಕ ಬಂದ್ – Kannada News | Lunar Eclipse 2026: Major Karnataka Temples Closed After Noon Pooja; Reopening After Grahana Moksha

ಬೆಂಗಳೂರು, ಮಾರ್ಚ್​ 3: ಚಂದ್ರ ಗ್ರಹಣದ ಕಾರಣ ಕರ್ನಾಟಕದಾದ್ಯಂತ ಹಲವು ಪ್ರಮುಖ ದೇವಾಲಯಗಳು ಮಧ್ಯಾಹ್ನದ ಪೂಜೆಯ ಬಳಿಕ ಬಂದ್ ಆಗಿವೆ. ಬೆಂಗಳೂರಿನ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳ ನಂತರ ಮಧ್ಯಾಹ್ನ 12:30ಕ್ಕೆ ಬಾಗಿಲು ಮುಚ್ಚಲಾಯಿತು. ಸಂಜೆ 6:48ಕ್ಕೆ ಗ್ರಹಣ ಮೋಕ್ಷವಾದ ನಂತರ ಶುದ್ಧೀಕರಣ ಪೂಜೆಗಳೊಂದಿಗೆ ಮತ್ತೆ ತೆರೆಯಲಾಗುತ್ತದೆ. ಬೆಳಗಾವಿಯ ಪ್ರಸಿದ್ಧ ಕಪಿಲೇಶ್ವರ ದೇಗುಲದಲ್ಲಿ ಶಿವಲಿಂಗವನ್ನು ಬಿಲ್ವಪತ್ರೆಯಿಂದ ಮುಚ್ಚಿ, ಗರ್ಭಗುಡಿಯನ್ನು ಬಂದ್ ಮಾಡಲಾಗಿದೆ. ಸಂಜೆ 7 ಗಂಟೆಯ ನಂತರ ವಿಶೇಷ ಪೂಜೆಗಳೊಂದಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಅದೇ ರೀತಿ ಕೊಡಗಿನ ಮಡಿಕೇರಿಯ ಓಂಕಾರೇಶ್ವರ, ಪಾಡಿ ಇಗ್ಗುತ್ತಪ್ಪ, ತಲಕಾವೇರಿ ಸನ್ನಿಧಿ, ಮತ್ತು ಭಾಗಮಂಡಲ ಭಗಂಡೇಶ್ವರ ದೇಗುಲಗಳು ಬೆಳಿಗ್ಗೆ 9 ಗಂಟೆಯಿಂದಲೇ ಬಂದ್ ಆಗಿ, ಸಂಜೆ 7:15ಕ್ಕೆ ಶುದ್ಧೀಕರಣದ ನಂತರ ತೆರೆಯಲಿವೆ. ಚಿಕ್ಕಬಳ್ಳಾಪುರದ ಗಿರಿಜಾಂಬಾ ದೇವಿ ಮತ್ತು ಹಾಸನದ ಚೆನ್ನಕೇಶವಸ್ವಾಮಿ ದೇಗುಲಗಳು ಗ್ರಹಣ ಮೋಕ್ಷವಾದ ನಂತರ ಮರುದಿನ ಬೆಳಿಗ್ಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಿವೆ. ಆದರೆ, ಧಾರವಾಡದ ನುಗ್ಗಿಕೇರಿ ಆಂಜನೇಯ ದೇಗುಲ ಮತ್ತು ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನ ಗ್ರಹಣದ ಅವಧಿಯಲ್ಲೂ ಎಂದಿನಂತೆ ತೆರೆದಿರಲಿದೆ. ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

15 ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವ ಕೊನೆಗೂ ಸೆರೆ: 1.40 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಹಣ ವಶಕ್ಕೆ – Kannada News | Notorious Burglar Wanted in 15 Theft Cases Arrested in Bengaluru; Gold and Cash Worth Rs 1.4 Crore Seized

ಬೆಂಗಳೂರು, ಮಾರ್ಚ್​ 3: ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರು 15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಳವಳ್ಳಿ ಮೂಲದ ಸಿದ್ದು ಅಲಿಯಾಸ್ ನಾಗರಾಜ್ ಎಂಬಾತನೇ ಬಂಧಿತ ಆರೋಪಿ. ಈತನಿಂದ ಬರೋಬ್ಬರಿ 1.40 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 19.5 ಲಕ್ಷ ರೂಪಾಯಿ ನಗದು ಮತ್ತು 711 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ನಾಗರಾಜ್ ಸುಮಾರು ಏಳೆಂಟು ವರ್ಷಗಳಿಂದ ಕಳ್ಳತನವನ್ನೇ ಮಾಡಿಕೊಂಡಿದ್ದ. ಈತನ ವಿರುದ್ಧ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಮಾದಪ್ಪನ ಬೆಟ್ಟಕ್ಕೆ ದೇವರ ದರ್ಶನ ಪಡೆಯಲು ಹೋಗಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಒಟ್ಟಾರೆ 15 ಕಳ್ಳತನ ಪ್ರಕರಣಗಳಲ್ಲಿ ಈತ ಶಾಮೀಲಾಗಿದ್ದ ಎಂದು ತಿಳಿದುಬಂದಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Iran Earthquake: ಇರಾನ್​​ನಲ್ಲಿ ಅಮೆರಿಕ, ಇಸ್ರೇಲ್ ದಾಳಿ ಮದ್ಯೆ 4.3 ತೀವ್ರತೆಯ ಭೂಕಂಪ – Kannada News | Iran Earthquake: 4.3 Magnitude Quake Hits Iran, Epicenter Reported in Gerash Amid Tensions With United States and Israel

ಟೆಹ್ರಾನ್, ಮಾರ್ಚ್​ 03: ಇರಾನ್​ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಕಳೆದ ಮೂರು ದಿನಗಳಿಂದ ನಿರಂತರ ದಾಳಿ ನಡೆಸುತ್ತಿವೆ. ಇದರ ನಡುವೆ ಇಂದು 4.3 ತೀವ್ರತೆಯ ಭೂಕಂಪ(Earthquake) ಸಂಭವಿಸಿದೆ. ದಕ್ಷಿಣ ಇರಾನ್​​ನ ಗೆರಾಶ್ ನಗರದ ಬಳಿ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಭೂಕಂಪವು ಸುಮಾರು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ಸಂಘಟಿತ ಮಿಲಿಟರಿ ದಾಳಿಗಳಿಂದಾಗಿ ಈ ಪ್ರದೇಶದಲ್ಲಿ ತೀವ್ರ ಸಂಘರ್ಷದ ಅವಧಿಯ ಮಧ್ಯೆ ಈ ಭೂಕಂಪ ಸಂಭವಿಸಿದೆ, ದಾಳಿ ಭಾನುವಾರ ಇರಾನಿನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಕಾರಣವಾಗಿತ್ತು.

ಗೆರಾಶ್ ದಕ್ಷಿಣ ಇರಾನ್‌ನಲ್ಲಿ ಪ್ರಮುಖ ಇಂಧನ, ಬಂದರು ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಸಂಪರ್ಕಿಸುವ ಕಾರಿಡಾರ್‌ನಲ್ಲಿದೆ. ಗ್ಚೈನ್ ಯುರೇನಿಯಂ ಗಣಿ (ಬಂದರ್ ಅಬ್ಬಾಸ್ ಬಳಿ) – ಗೆರಾಶ್‌ನಿಂದ ಸುಮಾರು 150–180 ಕಿಮೀ ಆಗ್ನೇಯದಲ್ಲಿದೆ, ಗ್ಚೈನ್ ಇರಾನ್‌ನ ದೇಶೀಯ ಯುರೇನಿಯಂ ಅದಿರು ಮೂಲಗಳಲ್ಲಿ ಒಂದಾಗಿದೆ.

ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರ- ಗೆರಾಶ್‌ನಿಂದ ವಾಯುವ್ಯಕ್ಕೆ ಸರಿಸುಮಾರು 250–300 ಕಿ.ಮೀ ದೂರದಲ್ಲಿರುವ ಬುಶೆಹರ್, ಪರ್ಷಿಯನ್ ಕೊಲ್ಲಿ ಕರಾವಳಿಯಲ್ಲಿ ಇರಾನ್‌ನ ಏಕೈಕ ಕಾರ್ಯಾಚರಣಾ ನಾಗರಿಕ ಪರಮಾಣು ವಿದ್ಯುತ್ ಸ್ಥಾವರವಾಗಿದೆ.

ಮತ್ತಷ್ಟು ಓದಿ: ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ, 23 ಮಂದಿಗೆ ಗಾಯ

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್‌ ಮೇಲೆ ವೈಮಾನಿಕ ದಾಳಿ ನಡಸಿವೆ. ಫೆಬ್ರವರಿ 28 ರಂದು ಅಮೆರಿಕವು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರನ್ನು ದಾಳಿಯಲ್ಲಿ ಹತ್ಯೆ ಮಾಡಿತು. ಇದರೊಂದಿಗೆ, ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಇರಾನ್‌ನಲ್ಲಿ 600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದಾಗ್ಯೂ, ಇರಾನ್ ಈಗ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ನಿರಂತರವಾಗಿ ಡ್ರೋನ್ ದಾಳಿ ನಡೆಸುತ್ತಿದೆ.

ಕಳೆದ 15 ದಿನಗಳಲ್ಲಿ ಇರಾನ್‌ನಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಫೆಬ್ರವರಿ 19 ರಂದು ದಕ್ಷಿಣ ಇರಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5 ರಷ್ಟು ತೀವ್ರತೆ ದಾಖಲಾಗಿದೆ. ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರ (GFZ) ಪ್ರಕಾರ, ಕೇಂದ್ರಬಿಂದುವು 27.36 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 52.60 ಡಿಗ್ರಿ ಪೂರ್ವ ರೇಖಾಂಶದಲ್ಲಿದ್ದು, ಫಾರ್ಸ್ ಪ್ರಾಂತ್ಯದ ಮೊಹರ್ ನಗರದ ನೈಋತ್ಯಕ್ಕೆ ಸುಮಾರು 36 ಕಿಲೋಮೀಟರ್ ದೂರದಲ್ಲಿದೆ. ಭೂಕಂಪದ ಆಳ ಕೇವಲ 10 ಕಿಲೋಮೀಟರ್ ಆಗಿದ್ದು, ಅದು ಸಾಕಷ್ಟು ಪ್ರಬಲವಾಗಿದೆ. ಇಂದಿನ ಭೂಕಂಪವೂ ಅದೇ ಆಳದಲ್ಲಿದೆ.

ಇರಾನ್‌ನ ಗೆರಾಶ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಇಲ್ಲಿಯವರೆಗೆ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂಬುದು ಸಮಾಧಾನಕರ ಸಂಗತಿ. ಇರಾನ್‌ನಲ್ಲಿ ಭೂಕಂಪದ ಸಮಯದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಇರಾನ್ ಪರಮಾಣು ಪರೀಕ್ಷೆ ನಡೆಸಿದೆಯೇ ಮತ್ತು ಈ ಭೂಕಂಪವು ಅದರ ಪರಿಣಾಮವೇ ಎಂಬುದು ಒಂದು ಪ್ರಶ್ನೆ.

ಇರಾನ್ ನಿರಂತರವಾಗಿ ಪರಮಾಣು ಪರೀಕ್ಷೆಗಳನ್ನು ನಡೆಸುತ್ತದೆ, ಇದು ಸಂಭವಿಸದಂತೆ ತಡೆಯಲು ಅಮೆರಿಕ ಬಯಸುತ್ತದೆ. ಅದಕ್ಕಾಗಿಯೇ ಅದು ಫೆಬ್ರವರಿ 28 ರಂದು ಇರಾನ್ ಮೇಲೆ ದಾಳಿ ಮಾಡಿ ಖಮೇನಿಯನ್ನು ಕೊಂದಿತ್ತು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಧಾರವಾಡ ಆಯ್ತು, ಈಗ ರಾಜ್ಯಾದ್ಯಂತ ಹೋರಾಟಕ್ಕೆ ಧುಮುಕಲಿರುವ ಉದ್ಯೋಗಾಕಾಂಕ್ಷಿಗಳು! – Kannada News | Karnataka Govt Jobs: Statewide Protests Erupt Demanding Vacancy Fill and FRBM Act Repeal

ಧಾರವಾಡ ಆಯ್ತು, ಈಗ ರಾಜ್ಯಾದ್ಯಂತ ಹೋರಾಟಕ್ಕೆ ಧುಮುಕಲಿರುವ ಉದ್ಯೋಗಾಕಾಂಕ್ಷಿಗಳು!

ಧಾರವಾಡ, ಮಾರ್ಚ್​ 03: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ (Dharwad) ಬೃಹತ್ ಪ್ರತಿಭಟನೆ ಮಾಡಿದ ಬೆನ್ನಲ್ಲೇ ರಾಜ್ಯಾದ್ಯಂತ ಹೋರಾಟಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಧಾರವಾಡದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಜನಸಾಮಾನ್ಯರ ವೇದಿಕೆ, ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಹಾಗೂ ರೈತ ಸೇನಾ ಮುಖಂಡರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರು ತಿಂಗಳಿನಿಂದ ನೀವು ಏನು ಮಾಡುತ್ತಿದ್ದಿರಿ ಎಂದ ವೇದಿಕೆ ಸಂಚಾಲಕ

ಜನಸಾಮಾನ್ಯರ ವೇದಿಕೆ ಸಂಚಾಲಕ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಖಾಲಿ ಹುದ್ದೆಗಳ ಅಧಿಸೂಚನೆ ಹೊರಡಿಸಬೇಕು. ಕಳೆದ ಆರು ತಿಂಗಳಿನಿಂದ 21 ಜಿಲ್ಲೆಗಳಲ್ಲಿ ಹೋರಾಟ ರೂಪಿಸಿದ್ದೇವೆ. ಅದರ ಪರಿಣಾಮವಾಗಿ ಬೆಳಗಾವಿ ಅಧಿವೇಶನದಲ್ಲಿ 24 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಲಾಯಿತು. ಆದರೆ ಮೂರು ತಿಂಗಳು ಕಳೆದರೂ ಅಧಿಸೂಚನೆ ಹೊರಬಂದಿಲ್ಲ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಸರ್ಕಾರ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದರೂ, ಅದಕ್ಕೆ ಸ್ಪಷ್ಟ ವೇಳಾಪಟ್ಟಿಯಿಲ್ಲ. ಪ್ರತಿಪಕ್ಷ ನಾಯಕರು ತಮ್ಮ ಹೋರಾಟದ ಫಲವೇ ಇದು ಎಂದು ಹೇಳಿಕೊಳ್ಳುತ್ತಿರುವುದನ್ನು ಪ್ರಶ್ನಿಸಿದ ಅವರು, ಆರು ತಿಂಗಳಿನಿಂದ ನೀವು ಏನು ಮಾಡುತ್ತಿದ್ದಿರಿ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಯುವಕರನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಇದನ್ನೂ ಓದಿ ಖಾಲಿ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರದ ಮುಂದಿರುವ ಸವಾಲುಗಳೇನು? ಇಲ್ಲಿದೆ ಮಾಹಿತಿ

2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯಡಿ (FRBM) ಸರ್ಕಾರಿ ಹುದ್ದೆಗಳ ಕಡಿತ ನಡೆಯುತ್ತಿದೆ ಎಂದು ಅವರು ಆಕ್ಷೇಪಿಸಿದರು. ಗುತ್ತಿಗೆ ಆಧಾರಿತ ನೇಮಕಾತಿ, ಅತಿಥಿ ಉಪನ್ಯಾಸಕರ ವ್ಯವಸ್ಥೆ ಇವೆಲ್ಲವೂ ಇದೇ ಕಾಯ್ದೆಯ ಪರಿಣಾಮ ಎಂದು ಹೇಳಿದರು. ಆಡಳಿತ ಸುಧಾರಣೆ ಹೆಸರಿನಲ್ಲಿ ಹುದ್ದೆಗಳ ಕಡಿತ ನಡೆಯುತ್ತಿದ್ದು, ಇದರಿಂದ ಉದ್ಯೋಗ ಭದ್ರತೆ ಹದಗೆಟ್ಟಿದೆ ಎಂದು ವಾದಿಸಿದರು.

ಹೀಗಾಗಿ FRBM ಕಾಯ್ದೆ ರದ್ದುಪಡಿಸಬೇಕು ಎಂದು ಆಗ್ರಹಿಸಿ, ಮಾರ್ಚ್ 6ರಿಂದ 22ರವರೆಗೆ ರಾಜ್ಯಾದ್ಯಂತ ಯುವ ಅಧಿವೇಶನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಪ್ರತಿದಿನ ಒಂದೊಂದು ಜಿಲ್ಲೆಯಲ್ಲಿ ಯುವ ಅಧಿವೇಶನ ನಡೆಸಲಾಗುತ್ತಿದ್ದು, ಈ ಹೋರಾಟ ಧಾರವಾಡದ ಡಿಸಿ ಕಚೇರಿ ಎದುರು ಆರಂಭವಾಗಲಿದೆ. ಧಾರವಾಡದಿಂದ ಆರಂಭವಾದ ಈ ಚಳವಳಿ ಈಗ ರಾಜ್ಯಾದ್ಯಂತ ವಿಸ್ತರಿಸಲು ಸಜ್ಜಾಗಿದ್ದು, ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಹೊಸ ವೇಗ ಸಿಕ್ಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೀಗಾದ್ರೆ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ಫೈನಲ್! – Kannada News | If semi finals washed out south africa and England Will Play Final

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಜರುಗಲಿರುವ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

ಈ ಎರಡು ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಫೈನಲ್​ಗೆ ಪ್ರವೇಶಿಸಲಿದೆ. ಒಂದು ವೇಳೆ ಸೆಮಿಫೈನಲ್ ಪಂದ್ಯವು ಕಾರಣಾಂತರಗಳಿಂದ ರದ್ದಾದರೆ ಯಾರು ಫೈನಲ್​ಗೆ ಅರ್ಹತೆ ಪಡೆಯಲಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿರುವ ತಂಡಗಳು.

ಐಸಿಸಿ ನಿಯಮವೇನು?

ಐಸಿಸಿ ನಿಯಮದ ಪ್ರಕಾರ, ಸೆಮಿಫೈನಲ್ ಪಂದ್ಯಗಳು ನಿಗದಿತ ದಿನ ಮತ್ತು ಮೀಸಲು ದಿನದಂದು (Reserve Day) ಮಳೆಯಿಂದಾಗಿ ನಡೆಯದಿದ್ದರೆ ಅಥವಾ ಇನ್ನತರೆ ಕಾರಣಗಳಿಂದ ಪಂದ್ಯ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಈ ಹಿಂದಿನ ಅಂಕ ಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಇಲ್ಲಿ ಸೆಮಿಫೈನಲ್​ಗೂ ಮುನ್ನ ಸೂಪರ್-8 ಪಂದ್ಯಗಳು ನಡೆದಿದ್ದವು. ಹೀಗಾಗಿ ಸೂಪರ್-8 ಸುತ್ತಿನ ಅಂಕ ಪಟ್ಟಿಯನ್ನು ಪರಿಗಣಿಸಲಾಗುತ್ತದೆ. ಅದರಂತೆ ಸೂಪರ್-8 ಸುತ್ತಿನ ಗ್ರೂಪ್-1 ರ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸೌತ್ ಆಫ್ರಿಕಾ ಹಾಗೂ ಗ್ರೂಪ್-2 ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ ತಂಡಗಳು ಫೈನಲ್​ಗೇರಲಿದೆ.

  • ಸೆಮಿಫೈನಲ್ 1 (ಸೌತ್ ಆಫ್ರಿಕಾ vs ನ್ಯೂಜಿಲೆಂಡ್): ಸೂಪರ್ 8ರ ಗ್ರೂಪ್ 1ರಲ್ಲಿ ಸೌತ್ ಆಫ್ರಿಕಾ ತಂಡವು ಎಲ್ಲಾ 3 ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನ್ಯೂಝಿಲೆಂಡ್ ಎರಡನೇ ಸ್ಥಾನದಲ್ಲಿದೆ. ಹಾಗಾಗಿ ಮಳೆಯಿಂದಾಗಿ ಪಂದ್ಯ ರದ್ದಾದರೆ ಸೌತ್ ಆಫ್ರಿಕಾ ಫೈನಲ್ ತಲುಪುತ್ತದೆ.
  • ಸೆಮಿಫೈನಲ್ 2 (ಭಾರತ vs ಇಂಗ್ಲೆಂಡ್): ಸೂಪರ್ 8ರ ಗ್ರೂಪ್ 2ರಲ್ಲಿ ಇಂಗ್ಲೆಂಡ್ ತಂಡವು 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತವು 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆ ಮಳೆಯಿಂದ ಈ ಪಂದ್ಯ ರದ್ದಾದರೆ, ಇಂಗ್ಲೆಂಡ್ ಫೈನಲ್‌ಗೆ ಮುನ್ನಡೆಯುತ್ತದೆ.

ಐಸಿಸಿ ಮಳೆಯ ನಿಯಮಗಳು:

  • ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯದ ವೇಳೆ ಮಳೆ ಬಂದರೆ ಮ್ಯಾಚ್​ನ ಫಲಿತಾಂಶ ನಿರ್ಧರಿಸಲು ಎರಡೂ ತಂಡಗಳು ಕನಿಷ್ಠ 10 ಓವರ್‌ಗಳನ್ನು ಆಡಲೇಬೇಕು.
  • ಒಂದು ವೇಳೆ ಮಳೆಯ ಕಾರಣ ಅಥವಾ ಇನ್ನಿತರೆ ಕಾರಣಗಳಿಂದಾಗಿ ಪಂದ್ಯ ಶುರುವಾಗುವುದು ವಿಳಂಬವಾದರೆ ಅಥವಾ ಪಂದ್ಯಕ್ಕೆ ಅಡಚಣೆಯುಂಟಾದರೆ ನಿಗದಿತ ದಿನದಂದು 90 ನಿಮಿಷಗಳನ್ನು ನೀಡಲಾಗುತ್ತದೆ.
  • ನಿಗದಿತ ದಿನದಂದು ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಇದ್ದರೆ ಮಾತ್ರ ಮೀಸಲು ದಿನದಂದು ಮ್ಯಾಚ್ ಮುಂದುವರೆಸಲಾಗುತ್ತದೆ.
  • ಮೀಸಲು ದಿನದಂದು ಕೂಡ ಪಂದ್ಯ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿರುವ ತಂಡಗಳು ಫೈನಲ್​ಗೆ ಅರ್ಹತೆ ಪಡೆಯಲಿದೆ.

ಇದನ್ನೂ ಓದಿ: OTD: ಭಯೋತ್ಪಾದಕರ ದಾಳಿ: ಕ್ರಿಕೆಟ್ ಇತಿಹಾಸದ ಕರಾಳ ದಿನ

ಅಂದರೆ ಸೌತ್ ಆಫ್ರಿಕಾ-ನ್ಯೂಝಿಲೆಂಡ್, ಭಾರತ-ಇಂಗ್ಲೆಂಡ್ ನಡುವಣ ಸೆಮಿಫೈನಲ್ ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್​ಗೇರಲಿದೆ.

Source link

Srikalahasti Temple: ಗ್ರಹಣ ಕಾಲದಲ್ಲೂ ತೆರೆದಿರುವ ಶ್ರೀಕಾಳಹಸ್ತಿ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ – Kannada News | Srikalahasti Temple: Open During Eclipses? Rahu Ketu’s Abode and Unique Grahan Pujas

ಗ್ರಹಣ ಕಾಲದಲ್ಲೂ ತೆರೆದಿರುವ ಶ್ರೀಕಾಳಹಸ್ತಿ ದೇವಸ್ಥಾನ

ಸಾಮಾನ್ಯವಾಗಿ ಗ್ರಹಣ ಬಂತೆಂದರೆ ಸಾಕು, ಇಡೀ ಭಾರತದಾದ್ಯಂತ ಆಧ್ಯಾತ್ಮಿಕ ಮೌನ ಆವರಿಸುತ್ತದೆ. ಆಕಾಶದಲ್ಲಿ ಚಂದ್ರ ಅಥವಾ ಸೂರ್ಯ ಮರೆಯಾಗುತ್ತಿದ್ದಂತೆ, ಭೂಮಿಯ ಮೇಲಿನ ಪ್ರಸಿದ್ಧ ದೇವಸ್ಥಾನಗಳ ಬಾಗಿಲುಗಳು ಮುಚ್ಚಲ್ಪಡುತ್ತವೆ. ಗ್ರಹಣಕ್ಕೆ ಕನಿಷ್ಠ ಆರು ಗಂಟೆಗಳ ಮೊದಲೇ ಗರ್ಭಗುಡಿಯ ದ್ವಾರಗಳನ್ನು ಮುಚ್ಚುವುದು, ಗ್ರಹಣ ಮುಗಿದ ನಂತರ ದೇವಸ್ಥಾನವನ್ನು ಶುದ್ಧೀಕರಿಸಿ ‘ಸಂಪ್ರೋಕ್ಷಣೆ’ ಮಾಡುವುದು ಶತಮಾನಗಳಿಂದ ನಡೆದು ಬಂದ ಪದ್ಧತಿ. ಆದರೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿ ಎಂಬ ಪವಿತ್ರ ಕ್ಷೇತ್ರದಲ್ಲಿ ಮಾತ್ರ ದೃಶ್ಯವೇ ಬೇರೆ!

ರಾಹು-ಕೇತುಗಳ ಅಧಿಪತಿ ನೆಲೆಸಿರುವ ತಾಣ:

ಶ್ರೀಕಾಳಹಸ್ತಿಯನ್ನು ‘ದಕ್ಷಿಣ ಕಾಶಿ’ ಎಂದೇ ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ಈ ಕ್ಷೇತ್ರವು ರಾಹು ಮತ್ತು ಕೇತುಗಳ ಪ್ರಭಾವಕ್ಕೆ ಮೀರಿದ್ದು. ಗ್ರಹಣಕ್ಕೆ ಕಾರಣರಾದವರೇ ಈ ರಾಹು-ಕೇತುಗಳಾದ್ದರಿಂದ, ಅವರ ಅಧಿಪತಿಯಾದ ಶ್ರೀಕಾಳಹಸ್ತೀಶ್ವರನಿಗೆ ಗ್ರಹಣದ ದೋಷ ತಟ್ಟುವುದಿಲ್ಲ ಎಂಬುದು ಇಲ್ಲಿನ ಅಚಲ ನಂಬಿಕೆ. ಹೀಗಾಗಿಯೇ, ಇಡೀ ದೇಶದ ದೇವಸ್ಥಾನಗಳು ಗ್ರಹಣದ ಸಮಯದಲ್ಲಿ ಭಕ್ತರಿಗಾಗಿ ಬಾಗಿಲು ಹಾಕಿದ್ದರೆ, ಶ್ರೀಕಾಳಹಸ್ತಿಯಲ್ಲಿ ಮಾತ್ರ ಶಿವ ಮತ್ತು ಜ್ಞಾನಪ್ರಸೂನಾಂಬಿಕೆಯ ದರ್ಶನ ಎಂದಿನಂತೆ ಲಭ್ಯವಿರುತ್ತದೆ.

ಗ್ರಹಣ ಕಾಲದ ವಿಶೇಷ ‘ಶಾಂತಿ ಅಭಿಷೇಕ’:

ಚಂದ್ರಗ್ರಹಣದ ಸಂದರ್ಭದಲ್ಲಿ ಇಲ್ಲಿನ ವಾತಾವರಣ ಭಕ್ತಿಯ ಪರಾಕಾಷ್ಠ ತಲುಪಿರುತ್ತದೆ. ಉದಾಹರಣೆಗೆ, ಮಧ್ಯಾಹ್ನದಿಂದ ಸಂಜೆಯವರೆಗೆ ಗ್ರಹಣ ಕಾಲವಿದ್ದಾಗ, ಅರ್ಚಕರು ದೇವರಿಗೆ ವಿಶೇಷವಾದ ಶಾಂತಿ ಅಭಿಷೇಕ ವನ್ನು ನೆರವೇರಿಸುತ್ತಾರೆ. ವಿಜ್ಞಾನ ಮತ್ತು ಜ್ಯೋತಿಷ್ಯದ ಪ್ರಕಾರ ಗ್ರಹಣದ ಕಿರಣಗಳು ಹಾನಿಕಾರಕ ಎಂದು ಭಾವಿಸಲಾಗುತ್ತದೆಯಾದರೂ, ಆ ಸಮಯದಲ್ಲಿ ಇಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಂಡರೆ ಸಕಲ ಪಾಪಗಳು ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಈ ವಿಶಿಷ್ಟ ಪೂಜೆಯನ್ನು ಕಣ್ಣಾರೆ ಕಾಣಲು ಭಕ್ತಸಾಗರವೇ ಹರಿದುಬರುತ್ತದೆ.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಭಕ್ತರ ದಟ್ಟಣೆ ಮತ್ತು ಸಿದ್ಧತೆ:

ಗ್ರಹಣದ ನಿಯಮಗಳಿಗೆ ಹೆದರಿ ಜಗತ್ತು ಮನೆ ಸೇರಿಕೊಂಡರೆ, ಶ್ರೀಕಾಳಹಸ್ತಿಯಲ್ಲಿ ಮಾತ್ರ ಭಕ್ತರ ಸಂಭ್ರಮ ಮನೆಮಾಡಿರುತ್ತದೆ. ವಿಶೇಷವಾಗಿ ರಾಹು-ಕೇತು ದೋಷ ನಿವಾರಣಾ ಪೂಜೆಗಾಗಿ ಸಾವಿರಾರು ಜನರು ಈ ಸಮಯದಲ್ಲಿ ಇಲ್ಲಿಗೆ ಧಾವಿಸುತ್ತಾರೆ. ಈ ದಟ್ಟಣೆಯನ್ನು ನಿಭಾಯಿಸಲು ದೇವಸ್ಥಾನದ ಮಂಡಳಿಯು ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡುತ್ತದೆ. ಶಿವನ ಧ್ಯಾನದಲ್ಲಿ ಮಗ್ನರಾದ ಭಕ್ತರಿಗೆ ಗ್ರಹಣದ ಕಿರಣಗಳ ಭಯವಿರುವುದಿಲ್ಲ; ಬದಲಾಗಿ ಆ ಪರಶಿವನ ಕೃಪೆಯ ಮೇಲೆ ಅಪಾರ ನಂಬಿಕೆಯಿರುತ್ತದೆ.

ಶ್ರೀಕಾಳಹಸ್ತಿಯು ಕೇವಲ ಒಂದು ದೇವಸ್ಥಾನವಲ್ಲ, ಅದು ಪ್ರಕೃತಿಯ ನಿಯಮಗಳನ್ನೂ ಮೀರಿದ ಭಕ್ತಿಯ ಸಂಕೇತ. ಗ್ರಹಣದ ಸಮಯದಲ್ಲಿ ಭೂಮಿಯ ಮೇಲೆ ಉಳಿದ ಎಲ್ಲವೂ ಸ್ಥಗಿತಗೊಂಡರೂ, ಇಲ್ಲಿನ ಶಿವನ ಆರಾಧನೆ ಮಾತ್ರ ನಿರಂತರವಾಗಿ ಹರಿಯುವ ಗಂಗೆಯಂತೆ ಮುಂದುವರಿಯುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:05 pm, Tue, 3 March 26

Source link

Exit mobile version