ವಿಷ್ಣುವರ್ಧನ್ (Vishnuvardhan) ನಟನೆಯ ಸೂಪರ್ ಹಿಟ್ ಸಿನಿಮಾ ‘ಕೋಟಿಗೊಬ್ಬ’ ಬಿಡುಗಡೆ ಆಗಿ 25 ವರ್ಷಗಳಾಗಿವೆ. ಸಿನಿಮಾ, ವಿಷ್ಣುವರ್ಧನ್ ವೃತ್ತಿ ಜೀವನದಲ್ಲಿ ಮಾತ್ರವೇ ಅಲ್ಲದೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೂ ಪ್ರಮುಖವಾದ ಸಿನಿಮಾ ಆಗಿದೆ. ಸಿನಿಮಾ ಬಿಡುಗಡೆ ಆಗಿ 25 ವರ್ಷಗಳಾದ ಕಾರಣ ಚಿತ್ರತಂಡ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಸಿನಿಮಾನಲ್ಲಿ ನಟಿಸಿದ ಕಲಾವಿದರು, ತಂತ್ರಜ್ಞರ ಜೊತೆಗೆ ಉಪೇಂದ್ರ, ಗಣೇಶ್ ಸೇರಿದಂತೆ ಇನ್ನೂ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಹೂಗಳು ಸಮರ್ಪಿಸುವ ಮೂಲಕ ಕಾರ್ಯಕ್ರಮದ ಆರಂಭ ಮಾಡಲಾಯ್ತು. ವಿಡಿಯೋ ನೋಡಿ…
ಜೂ ಎನ್ಟಿಆರ್ (Jr NTR), ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ‘ಆರ್ಆರ್ಆರ್’ ಸಿನಿಮಾದ ಬಳಿಕವಂತೂ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಜೂ ಎನ್ಟಿಆರ್ ಅವರ ನಂದಮೂರಿ ಕುಟುಂಬ ಹಲವು ದಶಕಗಳಿಂದಲೂ ತೆಲುಗು ಚಿತ್ರರಂಗ ಮತ್ತು ರಾಜಕೀಯದ ಮೇಲೆ ಪ್ರಭಾವ ಬೀರುತ್ತಲೇ ಬಂದಿದೆ. ಸ್ವತಃ ಜೂ ಎನ್ಟಿಆರ್ ಸಹ ಕೆಲವು ವರ್ಷಗಳ ಹಿಂದಿನ ವರೆಗೂ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ತಮ್ಮ ಕುಟುಂಬದ ಪಕ್ಷವಾದ ಟಿಡಿಪಿ (ತೆಲುಗು ದೇಶಂ ಪಾರ್ಟಿ)ಯ ತಾರಾ ಪ್ರಚಾರಕ ಆಗಿದ್ದರು. ಆದರೆ ಇತ್ತೀಚೆಗೆ ಅವರನ್ನು ಕುಟುಂಬದಿಂದ ತುಸು ದೂರ ಇರಿಸಲಾಗಿದೆ. ಟಿಡಿಪಿಯಿಂದಲೂ ಜೂ ಎನ್ಟಿಆರ್ ದೂರ ಸರಿದಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ತಮ್ಮ ನಾಯಕ ಸಿಎಂ ಆಗಲಿ ಮತ್ತು ಆಗಿಯೇ ಆಗುತ್ತಾರೆ ಎಂಬ ಭರವಸೆಯಲ್ಲಿದ್ದು, ಅದನ್ನು ಅಭಿವ್ಯಕ್ತಿಪಡಿಸಿದ್ದಾರೆ.
ನಟ ಜೂ ಎನ್ಟಿಆರ್ ಅವರು ಇಂದು (ಮಾರ್ಚ್ 08) ಬೆಂಗಳೂರಿಗೆ ಬಂದಿದ್ದರು. ಇಲ್ಲಿನ ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗೆಂದು ಜೂ ಎನ್ಟಿಆರ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಜೂ ಎನ್ಟಿಆರ್ ಅವರನ್ನು ನೋಡಲು ನೂರಾರು ಮಂದಿ ಅಭಿಮಾನಿಗಳು ಧಾವಿಸಿದ್ದರು. ಬಳಿಕ ಕಿಮ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೂ ಎನ್ಟಿಆರ್ ಅವರನ್ನು ‘25 ವರ್ಷಗಳ ಬಳಿಕ ನಿಮ್ಮನ್ನು ನೀವು ಎಲ್ಲಿ ನೋಡಲು ಬಯಸುತ್ತೀರಿ’ ಎಂದು ಕೇಳಿದರು. ಜೂ ಎನ್ಟಿಆರ್ ಸಹಜವಾಗಿಯೇ ತಮ್ಮ ಹಾಸ್ಯಮಯ ಶೈಲಿಯಲ್ಲಿ ಆಗ ನನಗೆ 67 ವರ್ಷ ವಯಸ್ಸಾಗಿರುತ್ತದೆ ಎಂದಷ್ಟೆ ಹೇಳಿದರು.
ಆದರೆ ಅಭಿಮಾನಿಗಳು ಸುಮ್ಮಿರಲಿಲ್ಲ, ‘ಸಿಎಂ ಸಿಎಂ’ ಎಂದು ಕೂಗಲು ಆರಂಭಿಸಿದರು. ಜೂ ಎನ್ಟಿಆರ್ ಅವರು ಅಭಿಮಾನಿಗಳ ಕೂಗಾಟ ಗಮನಿಸಿದರಾದರೂ ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಭಿಮಾನಿಗಳ ಕೂಗು ಕೇಳಿದರೂ ಸಹ ಸುಮ್ಮನೇ ಇದ್ದರು ಜೂ ಎನ್ಟಿಆರ್. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಟಿಡಿಪಿ ಪಕ್ಷದ ಸ್ಟಾರ್ ಪ್ರಚಾರಕ ಆಗಿದ್ದರು ಜೂ ಎನ್ಟಿಆರ್. ಆದರೆ ಇತ್ತೀಚೆಗೆ ಚಂದ್ರಬಾಬು ನಾಯ್ಡು ಮತ್ತು ಜೂ ಎನ್ಟಿಆರ್ ಅವರ ಚಿಕ್ಕಪ್ಪ ಆಗಿರುವ ನಂದಮೂರಿ ಬಾಲಕೃಷ್ಣ ಅವರು ಜೂ ಎನ್ಟಿಆರ್ ಅನ್ನು ಪಕ್ಷದಿಂದ ಮತ್ತು ನಂದಮೂರಿ ಕುಟುಂಬದಿಂದ ದೂರ ಇರಿಸಿದ್ದಾರೆ. ಚಂದ್ರಬಾಬು ನಾಯ್ಡುಗೆ ಪುತ್ರ, ಬಾಲಕೃಷ್ಣಗೆ ಅಳಿಯ (ಮಗಳ ಗಂಡ) ಆಗಿರುವ ನಾರಾ ಲೋಕೇಶ್ ಅನ್ನು ರಾಜಕೀಯದಲ್ಲಿ ಬೆಳೆಸಬೇಕೆಂದು ಜೂ ಎನ್ಟಿಆರ್ ಅವರನ್ನು ಪಕ್ಕಕ್ಕೆ ಸರಿಸಲಾಗಿದೆ. ಜೂ ಎನ್ಟಿಆರ್, ಪಕ್ಷಕ್ಕೆ ಬಂದರೆ ಅವರ ಜನಪ್ರಿಯತೆ ಮುಂದೆ ನಾರಾ ಲೋಕೇಶ್ ಮಂಕಾಗುವುದು ಖಾತ್ರಿ. ಹಾಗಾಗಿ ಜೂ ಎನ್ಟಿಆರ್ ಮಾತ್ರವಲ್ಲ ಅವರ ಸಹೋದರ ಕಲ್ಯಾಣ್ ರಾಮ್ ಅವರನ್ನೂ ಸಹ ಪಕ್ಷದಿಂದ ದೂರ ಇರಿಸಲಾಗಿದೆ.
ನವದೆಹಲಿ, ಮಾರ್ಚ್ 08: ಹೊಲಸು ರಾಜಕೀಯ, ದುರಹಂಕಾರ ತೃಣಮೂಲ ಕಾಂಗ್ರೆಸ್ ಅನ್ನು ನಾಶಪಡಿಸುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕಿಡಿಕಾರಿದ್ದಾರೆ. ಡಾರ್ಜಿಲಿಂಗ್ ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗಾದ ಅವಮಾನದ ಬಗ್ಗೆ ಅವರು ಮಾತನಾಡಿದ್ದಾರೆ.
ದ್ರೌಪದಿ ಮುರ್ಮು ಭಾಗವಹಿಸಿದ್ದ 9 ನೇ ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ನಡೆದ ದುರಾಡಳಿತವನ್ನು ಉಲ್ಲೇಖಿಸಿದ ಮೋದಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ದುರಹಂಕಾರಿ ಎಂದು ಕರೆದರು.
ಪಕ್ಷದ ಅಹಂಕಾರ ಮತ್ತು ಕೊಳಕು ರಾಜಕೀಯವನ್ನು ಬಂಗಾಳದ ಜನರು ಶೀಘ್ರದಲ್ಲೇ ಛಿದ್ರಗೊಳಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅವನು ಅಂತಿಮವಾಗಿ ಅಹಂಕಾರದಿಂದ ನಾಶವಾಗುತ್ತಾನೆ ಎಂದು ಹೇಳಲಾಗುತ್ತದೆ. ಇಂದು, ದ್ರೌಪದಿ ಮುರ್ಮು ಅವರ ಘನತೆಗೆ ಅವಮಾನ ಮಾಡಿದ ಟಿಎಂಸಿಯ ಕೊಳಕು ರಾಜಕೀಯ ಮತ್ತು ಅಧಿಕಾರದ ದುರಹಂಕಾರವು ಶೀಘ್ರದಲ್ಲೇ ಛಿದ್ರವಾಗಲಿದೆ ಎಂದರು.
ಪಶ್ಚಿಮ ಬಂಗಾಳದ ಪ್ರಬುದ್ಧ ಜನರು ಒಬ್ಬ ಮಹಿಳೆ, ಬುಡಕಟ್ಟು ಜನಾಂಗದವರು, ದೇಶದ ರಾಷ್ಟ್ರಪತಿಯನ್ನು ಅವಮಾನಿಸಿದ್ದಕ್ಕಾಗಿ ಟಿಎಂಸಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ದೆಹಲಿ ಮೆಟ್ರೋ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡುವಾಗ ಇದನ್ನು ಉಲ್ಲೇಖಿಸಿದ್ದಾರೆ.
ಸಮಾವೇಶ ನಡೆದ ಗೋಸೈನ್ಪುರದಲ್ಲಿ ಹೆಚ್ಚಿನ ಕುರ್ಚಿಗಳು ಖಾಲಿ ಇದ್ದವು. ಇಲ್ಲಿ ಅಂತಾರಾಷ್ಟ್ರೀಯ ಸಂತಾಲ್ ಸಮಾವೇಶ ನಡೆಯುತ್ತಿದೆ ಎಂದು ಯಾವ ಕಡೆಯಿಂದಲೂ ಅನಿಸುತ್ತಿಲ್ಲ. ಖಾಲಿ ಇರುವ ಪ್ರೇಕ್ಷಕರನ್ನು ನೋಡಿದರೆ, ಸಂತಾಲ್ ಸಮುದಾಯಕ್ಕೆ ಯಾವುದೇ ಸರ್ಕಾರಿ ಸವಲತ್ತುಗಳು ಸಿಗುತ್ತವೆಯೇ ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದು ರಾಷ್ಟ್ರಪತಿ ಆಕ್ರೋಶ ವ್ಯಕ್ತಪಡಿಸಿದ್ದರು.
ನಾನು ಕೂಡ ಬಂಗಾಳದ ಮಹಿಳೆ, ಮಮತಾ ನೀವು ನನ್ನ ಸಹೋದರಿ ಇದ್ದಂತೆ, ನಾನು ಕೂಡ ಬಂಗಾಳದ ಮಗಳು, ಇಲ್ಲಿಗೆ ಬರಲು ನನಗೇಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಮಮತಾ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವಲ್ಲಿನ ವಿಳಂಬ, ಸ್ಥಳ ಬದಲಾವಣೆ ಮತ್ತು ಪ್ರೋಟೋಕಾಲ್ ಪಾಲನೆಯಲ್ಲಿನ ಲೋಪಗಳ ಬಗ್ಗೆ ರಾಷ್ಟ್ರಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಮುರ್ಮು ಭಾಷಣ ಮಾಡುವಾಗ ಹಾಜರಿದ್ದ ಸ್ಥಳೀಯ ಬಿಜೆಪಿ ಸಂಸದ ರಾಜು ಬಿಸ್ತಾ, ರಾಜ್ಯ ಸರ್ಕಾರ ಕಾರ್ಯಕ್ರಮಕ್ಕೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ್ದರು.
ಕೋಲಾರ, ಮಾರ್ಚ್ 08: ಅದು ರಾಜ್ಯ ಹೆದ್ದಾರಿ ಜಿಲ್ಲಾ ಕೇಂದ್ರದಿಂದ ಪಕ್ಕದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಆ ರಸ್ತೆಯಲ್ಲಿ ಬರುವ ಅದೊಂದು ದೊಡ್ಡ ಕೆರೆಯ ಎರಡು ಬದಿಯಲ್ಲಿ ತಡೆಗೋಡೆ ಇಲ್ಲದ ಪರಿಣಾಮ ಭೀಕರ ಅವಘಡವೊಂದು (car accident) ನಡೆದಿದ್ದು, ಕೆರೆಗೆ ಕಾರು ಬಿದ್ದು ರೈತ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಸಾವನ್ನಪ್ಪಿದ್ದಾರೆ.
ಕಳೆದ ರಾತ್ರಿ 1.30 ಸುಮಾರಿನಲ್ಲಿ ಕೋಲಾರ ತಾಲ್ಲೂಕಿನ ತೊರಾಂಡಹಳ್ಳಿ ಗ್ರಾಮದ ಕಡೆಗೆ ಹೋಗುತ್ತಿದ್ದ ವೇಳೆ ಕಾರು ಕೆರೆಗೆ ಬಿದ್ದ ಪರಿಣಾಮ ಕಾರ್ ನಲ್ಲಿದ್ದ ತೊರಾಂಡಹಳ್ಳಿ ಗ್ರಾಮದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್ ಮೃತಪಟ್ಟಿದ್ದಾರೆ.
ನಡೆದಿದ್ದೇನು?
ಅಷ್ಟಕ್ಕೂ ಆಗಿದ್ದೇನು ಅಂತ ನೋಡುವುದಾದರೆ, ನಾಳೆಯಿಂದ ಕೋಲಾರ ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಪಿಎಂ ಪಕ್ಷ ರಾಜ್ಯ ಸಮಾವೇಶ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಒಂದು ಗಂಟೆವರೆಗೂ ಜಿಲ್ಲಾಧ್ಯಕ್ಷ ಕಾಮ್ರೆಡ್ ವೆಂಕಟೇಶ್ ಹಾಗೂ ಹಲವು ಕಾರ್ಯಕರ್ತರು ನಗರದಲ್ಲಿ ಬ್ಯಾನರ್, ಬಂಟಿಂಗ್ಸ್ಗಳನ್ನು ಕಟ್ಟಿ ನಂತರ ವೆಂಕಟೇಶ್, ತಮ್ಮ ಇಂಡಿಕಾ ಕಾರಿನಲ್ಲಿ ತಮ್ಮೂರು ತೊರಾಂಡಳ್ಳಿ ಕಡೆಗೆ ಹೊರಟಿದ್ದಾರೆ. ಈ ವೇಳೆ ಮುದುವಾಡಿ ಗ್ರಾಮದ ಬಳಿ ಬರುತ್ತಿರುವಾಗ ತಿರುವಿನಲ್ಲಿ ಕಾರಿಗೆ ಯಾವುದಾದರೂ ವಾಹನ ಡಿಕ್ಕಿ ಹೊಡೆಯಿತೋ ಅಥವಾ ಆಯತಪ್ಪಿತ್ತೋ ಗೊತ್ತಿಲ್ಲ ವೆಂಕಟೇಶ್ ಅವರು ಚಲಾಯಿಸುತ್ತಿದ್ದ ಕಾರು ಕೆರೆಗೆ ಬಿದ್ದಿದೆ.
ವೆಂಕಟೇಶ್ ಕಾರಿನಿಂದ ಹೊರಬರಲು ಪ್ರಯತ್ನ ಮಾಡಿದ್ದಾರೆ, ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ವೆಂಕಟೇಶ್ ಕಾರಿನಲ್ಲೇ ಮೃತಪಟ್ಟಿದ್ದಾರೆ. ಇನ್ನು ಕಾರು ಅಪಘಾತವಾಗಿ ಕೆರೆಗೆ ಬಿದ್ದಿರುವ ವಿಷಯ ಬೆಳಿಗ್ಗೆ 9 ಗಂಟೆಯವರೆಗೂ ಯಾರಿಗೂ ತಿಳಿದಿಲ್ಲ. ಈ ವೇಳೆ ವೆಂಕಟೇಶ್ ರಾತ್ರಿ ಮನೆಗೆ ಬಂದಿಲ್ಲ. ಅವರ ಮೊಬೈಲ್ ಕೂಡ ಕೆಲಸ ಮಾಡುತ್ತಿವೆಂದು ಹುಡುಕಾಡುವ ವೇಳೆ ವೆಂಕಟೇಶ್ ಅವರ ಕಾರಿನ ಮುಂಭಾಗದ ನಂಬರ್ ಪ್ಲೇಟ್ ಇದ್ದ ಮಡ್ ಗಾರ್ಡ್ ಕೆರೆಯ ಕಟ್ಟೆ ಮೇಲೆ ಬದಿಯಲ್ಲಿ ಬಿದ್ದಿತ್ತು, ಅದನ್ನ ನೋಡಿದ ಕೆಲವರು ಕೆರೆಯಲ್ಲಿ ನೋಡಲಾಗಿ ಕಾರಿನಿಂದ ಡೀಸೆಲ್ ಲೀಕ್ ಆಗುತ್ತಿರುವುದು ಕಂಡುಬಂದಿದೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ ನಂತರ ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಕೆರೆಯಲ್ಲಿ ಕಾರು ಹಾಗೂ ವೆಂಕಟೇಶ್ ಶವ ಇರುವುದು ತಿಳಿದು ಬಂದಿದೆ.
ಅಧಿಕಾರಿಗಳ ನಿರ್ಲ್ಯಕ್ಷ: ಕೆರೆಗಿಲ್ಲ ತಡೆಗೋಡೆ
ಇನ್ನು ಕೋಲಾರ ತಾಲ್ಲೂಕಿನ ಮುದುವಾಡಿ ಕೆರೆ ಕೋಲಾರ ಜಿಲ್ಲೆಯಲ್ಲೇ ದೊಡ್ಡ ಕೆರೆ. ಈ ರಸ್ತೆ ಕೋಲಾರ ಮತ್ತು ಶ್ರೀನಿವಾಸಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಆಂಧ್ರದ ಮದನಪಲ್ಲಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕೂಡ ಇದಾಗಿದ್ದು, ಇಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲ್ಯಕ್ಷ ಹಾಗೂ ಕೆರೆಯನ್ನು ನಿರ್ವಹಣೆ ಮಾಡುವ ಸಣ್ಣ ನೀರಾವರಿ ಇಲಾಖೆ ನಿರ್ಲ್ಯಕ್ಷದಿಂದ ಮುದುವಾಡಿ ಕರೆಯ ಮೇಲೆ ತಡೆಗೋಡೆ ನಿರ್ಮಾಣ ಮಾಡದೆ ಇರುವುದು ಇಂಥಾದೊಂದು ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.
ನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆ ಇದಾಗಿದ್ದು, ಮುದುವಾಡಿ ಕೆರೆಯ ಕಟ್ಟೆಯ ಮೇಲೆ ತಡೆಗೋಡೆ ನಿರ್ಮಾಣ ಮಾಡುವ ಜೊತೆಗೆ ರಸ್ತೆ ಅಗಲೀಕರಣ ಮಾಡುವ ಕೆಲಸ ಮಾಡಬೇಕಿತ್ತು. ಆದರೆ ಹಲವು ವರ್ಷಗಳಿಂದ ಈ ರಸ್ತೆ ಕಿರಿದಾಗಿದ್ದು, ಕೆರೆಗೆ ತಡೆಗೋಡೆ ಇಲ್ಲದಿರುವುದು ಈ ಅಪಘಾತಕ್ಕೆ ಕಾರಣ. ಒಂದು ವೇಳೆ ತಡೆಗೋಡೆ ಇದ್ದಿದ್ದರೆ ವೆಂಕಟೇಶ್ ಸಾವಾಗುತ್ತಿರಲಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಕಾರು ಅಪಘಾತದ ಕುರಿತು ಅನುಮಾನ?
ಇನ್ನು ಕಳೆದ ರಾತ್ರಿ ವೆಂಕಟೇಶ್ ಅವರಿದ್ದ ಕಾರು ಅಪಘಾತದ ಕುರಿತು ಕೂಡ ಅನುಮಾನ ವ್ಯಕ್ತವಾಗಿದೆ. ವೆಂಕಟೇಶ್ ಅವರಿದ್ದ ಕಾರು ತಾವಾಗಿ ಆಯತಪ್ಪಿ ಅಪಘಾತಕ್ಕೀಡಾಯಿತಾ ಅಥವಾ ಯಾವುದಾದರೂ ವಾಹನ ಡಿಕ್ಕಿಯಾಗಿ ಅವಘಡ ಸಂಭವಿಸಿದೆಯಾ ಅನ್ನೋದರ ಕುರಿತು ತನಿಖೆ ನಡೆಯಬೇಕಿದೆ. ಜೊತೆಗೆ ಕೂಡಲೇ ಈ ಕೆರೆಗೆ ಕಟ್ಟೆಯ ಮೇಲಿನ ರಸ್ತೆ ಅಗಲೀಕರಣ ಮಾಡಿ ಕೆರೆಯ ಎರಡೂ ಕಡೆ ತಡೆಗೋಡೆ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹ ಕೇಳಿಬಂದಿದೆ.
ಒಟ್ಟಾರೆ ತಮ್ಮ ಜೀವನದುದ್ದಕ್ಕೂ ಹತ್ತಾರು ಹೋರಾಟಗಳನ್ನು ಮಾಡಿ ಹತ್ತಾರು ಸಮಸ್ಯೆಗೆ ಪರಿಹಾರ ಕೊಡಿಸಿದ್ದ ವೆಂಕಟೇಶ್ ಅವರು ಸಾವಿಗೀಡಾಗಿದ್ದಾರೆ. ಅವರ ಸಾವಿನ ಮೂಲಕವಾದರೂ ಮುದುವಾಡಿ ಕೆರೆಗೆ ತಡೆಗೋಡೆ ನಿರ್ಮಾಣ ಮಾಡಿ ಮುಂದೆ ಆಗಬಹುದಾದ ಅಪಘಾತಗಳಿಗೆ ಶಾಶ್ವತ ಪರಿಹಾರ ಸೂಚಿಸುವ ಮೂಲಕ ಹೋರಾಟಗಾರನ ಸಾವಿಗೆ ನ್ಯಾಯ ಒದಗಿಸಬೇಕಿದೆ.
ವಿಜಯ್ ಸೇತುಪತಿ, ಅರವಿಂದ ಸ್ವಾಮಿ, ಅದಿತಿ ರಾವ್ ಹೈದರಿ ಸೇರಿದಂತೆ ಹಲವು ಪ್ರತಿಭಾವಂತ ನಟ, ನಟಿಯರು ನಟಿಸಿರುವ ಮೂಕಿ ಸಿನಿಮಾ ‘ಗಾಂಧಿ ಟಾಕ್ಸ್’ ಇದೇ ವಾರ ಒಟಿಟಿಗೆ ಬಂದಿದೆ. ಈ ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಬಹುದಾಗಿದೆ.
‘ಲಾಲೊ: ಕೃಷ್ಣ ಸದಾ ಸಹಾಯತೆ’ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ಇದು ಗುಜರಾತಿ ಸಿನಿಮಾ ಆಗಿದ್ದು, ಅತ್ಯಂತ ಕಡಿಮೆ ಬಜೆಟ್ನಲ್ಲಿ ನಿರ್ಮಾಣ ಆದ ಈ ಸಿನಿಮಾ ಗಳಿಕೆಯಲ್ಲಿ ದಾಖಲೆಗಳನ್ನು ಬರೆದಿದೆ. ಈ ಸಿನಿಮಾ ಇದೀಗ ಸೋನಿ ಲಿವ್ನಲ್ಲಿ ಬಿಡುಗಡೆ ಆಗಿದೆ.
ಬಾಲಿವುಡ್ನ ಹಿರಿಯ ನಟ ಅನಿಲ್ ಕಪೂರ್ ನಟಿಸಿರುವ ಆಕ್ಷನ್-ಡ್ರಾಮಾ ಕತೆಯುಳ್ಳ ‘ಸುಬೇಧಾರ್’ ಸಿನಿಮಾ ಈ ವಾರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ನಿವೃತ್ತ ಸೈನಿಕನೊಬ್ಬ ತನ್ನ ಕುಟುಂಬಕ್ಕಾಗಿ ನಿಯಮಗಳನ್ನು ಗಾಳಿಗೆ ತೂರಿ ತನ್ನ ಮಿಲಿಟರಿ ತಂತ್ರಗಳನ್ನು ಬಳಸಿ ಶತ್ರುಗಳನ್ನು ಸೆದೆಬಡಿಯುವ ಕತೆ ಇದರಲ್ಲಿದೆ. ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು.
ತಾಜ್ ಮಹಲ್ ಮೂಲದ ಬಗ್ಗೆ ಅನುಮಾನ, ಪ್ರಶ್ನೆ ಎತ್ತುವ ಸಿನಿಮಾ ಆಗಿರುವ ‘ದಿ ತಾಜ್ ಸ್ಟೋರಿ’ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ‘ದಿ ತಾಜ್ ಸ್ಟೋರಿ’ ಸಿನಿಮಾ ಲಯನ್ಸ್ ಗೇಟ್ ಒಟಿಟಿಯಲ್ಲಿ ಮಾರ್ಚ್ 13ಕ್ಕೆ ಬಿಡುಗಡೆ ಆಗಲಿದೆ.
‘ಜಾಕ್ ರೀಚರ್’ ವೆಬ್ ಸರಣಿ (ಸಿನಿಮಾ ಅಲ್ಲ)ಯಿಂದ ಜನಪ್ರಿಯವಾದ ಅಲೆನ್ ರಿಟ್ಷನ್ ನಟನೆಯ ‘ವಾರ್ ಮಷಿನ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ನೇರವಾಗಿ ಬಿಡುಗಡೆ ಆಗಿದೆ. ಇದೊಂದು ಸೈ-ಫೈ ಆಕ್ಷನ್ ಸಿನಿಮಾ ಆಗಿದೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ನೋಡಬಹುದು.
ಜನಪ್ರಿಯ ಹಾಲಿವುಡ್ ಕಾರ್ಟೂನ್ ಸಿನಿಮಾ ‘ಜುಟೋಫಿಯಾ’ದ ಎರಡನೇ ಭಾಗ ‘ಜುಟೋಫಿಯಾ 2’ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ 10 ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಸಿತು. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ಮಾರ್ಚ್ 13 ರಂದು ಈ ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ನಲ್ಲಿ ನೋಡಬಹುದು.
ಅಂತರಾಷ್ಟ್ರೀಯ ರಾಜಕೀಯದ ಇಬ್ಬರು ಪ್ರಭಾವಿ ವ್ಯಕ್ತಿಗಳ ಮಕ್ಕಳನ್ನು ಜೋಡಿಸಿ ನೆಟ್ಟಿಗರು ಹೊಸದೊಂದು ಡಿಜಿಟಲ್ ಲವ್ ಸ್ಟೋರಿಯನ್ನು ಸೃಷ್ಟಿಸಿದ್ದಾರೆ. ಇಬ್ಬರ ಸಿದ್ಧಾಂತಗಳೇ ಬೇರೆ, ಆಡಳಿತ ಕೂಡ ಬೇರೆಯಾಗಿರುವಾಗ ಈ ಮದುವೆ ಹೇಗೆ ಸಾಧ್ಯ ಎಂಬ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಪುತ್ರ 19 ವರ್ಷದ ಬ್ಯಾರನ್ ಟ್ರಂಪ್ ಮತ್ತು ಕಿಮ್ ಜೊಂಗ್ ಉನ್ ಅವರ ಹದಿಹರೆಯದ ಪುತ್ರಿ ಕಿಮ್ ಜು ಏ ನಡುವೆ ಸಂಬಂಧವಿದೆ ಎಂಬಂತೆ ಬಿಂಬಿಸುವ ಮೀಮ್ಗಳು ಈಗ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿವೆ. ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಡಿದೆ. ಇನ್ನು ಇಸ್ರೇಲ್ ಹಾಗೂ ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದ್ದಾರೆ. ಈ ಕಾರಣಕ್ಕೆ ಉತ್ತರ ಕೊರಿಯಾ ನಮಗೆ ಬೆಂಬಲ ನೀಡಬೇಕು ಎಂಬ ಉದ್ದೇಶದಿಂದ ಟ್ರಂಪ್ ಈ ಸಂಬಂಧ ಬೆಳೆಸಿಕೊಂಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಟ್ರಂಪ್ ಮತ್ತು ಕಿಮ್ ಜೊಂಗ್ ಉನ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಸದಾ ಸುದ್ದಿಯಲ್ಲಿರುತ್ತವೆ. ಆದರೆ, ನೆಟ್ಟಿಗರು ಈಗ ಅವರ ಮಕ್ಕಳನ್ನು ಇಟ್ಟುಕೊಂಡು “ರೋಮಿಯೋ-ಜೂಲಿಯೆಟ್” ಮಾದರಿಯ ಮೀಮ್ಗಳನ್ನು ತಯಾರಿಸುತ್ತಿದ್ದಾರೆ. ಎಐ (AI) ಮೂಲಕ ಸೃಷ್ಟಿಸಲಾದ ಚಿತ್ರಗಳಲ್ಲಿ ಬ್ಯಾರನ್ ಮತ್ತು ಕಿಮ್ ಜು ಏ ಒಟ್ಟಿಗೆ ಇರುವುದನ್ನು ತೋರಿಸಲಾಗುತ್ತಿದೆ. “ಜಗತ್ತಿನ ಎರಡು ಬದ್ಧ ವೈರಿ ರಾಷ್ಟ್ರಗಳನ್ನು ಈ ಪ್ರೇಮಕಥೆ ಒಂದು ಮಾಡಬಹುದು” ಎಂಬ ಹಾಸ್ಯದ ಸಾಲುಗಳೊಂದಿಗೆ ಈ ಚಿತ್ರಗಳು ಹಂಚಿಕೆಯಾಗುತ್ತಿವೆ.
ಎಕ್ಸ್ (X), ಇನ್ಸ್ಟಾಗ್ರಾಮ್ ಮತ್ತು ರೆಡ್ಡಿಟ್ನಂತಹ ವೇದಿಕೆಗಳಲ್ಲಿ ಈ ಮೀಮ್ಗಳು ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದಿವೆ. ವಿಶೇಷವಾಗಿ ಇಬ್ಬರೂ ನಾಯಕರು ಇತ್ತೀಚೆಗೆ ರಾಜತಾಂತ್ರಿಕವಾಗಿ ಚರ್ಚೆಯಲ್ಲಿರುವುದರಿಂದ ಈ ಮೀಮ್ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಇದು ಕೇವಲ ಇಂಟರ್ನೆಟ್ ಬಳಕೆದಾರರ ಕಲ್ಪನೆ ಮತ್ತು ತಮಾಷೆಯಷ್ಟೇ. ಬ್ಯಾರನ್ ಟ್ರಂಪ್ ಸದ್ಯ ಅಮೆರಿಕದಲ್ಲಿ ತಮ್ಮ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರೆ, ಕಿಮ್ ಜು ಏ ಉತ್ತರ ಕೊರಿಯಾದಲ್ಲಿ ತನ್ನ ತಂದೆಯ ಉತ್ತರಾಧಿಕಾರಿಯಾಗಿ ಸಿದ್ಧಗೊಳ್ಳುತ್ತಿದ್ದಾರೆ. ಇವರಿಬ್ಬರ ನಡುವೆ ಯಾವುದೇ ರೀತಿಯ ವೈಯಕ್ತಿಕ ಪರಿಚಯ ಅಥವಾ ಸಂಬಂಧವಿಲ್ಲ ಎಂಬುದು ಸ್ಪಷ್ಟ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಯುಗಾದಿಯ ಪರಾಭವನಾಮ ಸಂವತ್ಸರದ ತುಲಾ ರಾಶಿಯ ಭವಿಷ್ಯವನ್ನು ವಿವರಿಸಿದ್ದಾರೆ. ಶುಕ್ರ ಅಧಿಪತಿಯಾದ ತುಲಾ ರಾಶಿಯವರಿಗೆ (ಚಿತ್ತಾ, ಸ್ವಾತಿ, ವಿಶಾಖ ನಕ್ಷತ್ರ) ಈ ವರ್ಷ ಬಹಳಷ್ಟು ಅದೃಷ್ಟಗಳು ಕೂಡಿಬರುವ ಸಾಧ್ಯತೆ ಇದೆ. ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ, ಅನೇಕ ಹೊಸ ಅವಕಾಶಗಳು ಲಭಿಸುತ್ತವೆ. ರೈತರು, ವ್ಯಾಪಾರಸ್ಥರು, ಉದ್ಯೋಗದಲ್ಲಿರುವವರಿಗೆ ಶುಭಫಲಗಳಿವೆ. ಕೆಲವರಿಗೆ ಸರ್ಕಾರಿ ನೌಕರಿ ಮತ್ತು ಬಡ್ತಿ ಲಭಿಸುತ್ತದೆ ಎಂದು ಸಲಹೆ ನೀಡಿದ್ದಾರೆ.
ಆರೋಗ್ಯದಲ್ಲಿ ಚೇತರಿಕೆ ಮತ್ತು ತಂದೆ-ತಾಯಿಗಳಿಂದ ಆಶೀರ್ವಾದ ಸಿಗಲಿದೆ. ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರಿಗೆ ಉತ್ತಮ ಫಲಗಳಿವೆ. ಆತಂಕಗಳು ಮತ್ತು ಒತ್ತಡಗಳು ಕಡಿಮೆಯಾಗುತ್ತವೆ, ಆಸ್ತಿ ಕಲಹಗಳು ಇತ್ಯರ್ಥವಾಗುತ್ತವೆ. ಕಾನೂನು ವಿಷಯಗಳಲ್ಲಿ ಜಯ ಲಭಿಸುತ್ತದೆ ಮತ್ತು ಸಂತಾನ ಯೋಗವೂ ಇದೆ. ಮಹಿಳೆಯರಿಗೆ ವಿವಾಹ ವಿಷಯಗಳಲ್ಲಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಪ್ರೇಮ ವ್ಯವಹಾರಗಳಲ್ಲಿಯೂ ಅಡೆತಡೆಗಳಿರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 08: ಪೊಲೀಸರ ಹೆಸರಲ್ಲಿ ಮನೆಗೆ ಎಂಟ್ರಿಕೊಟ್ಟ ಗ್ಯಾಂಗ್ ಒಂದು ರಿಯಲ್ ಎಸ್ಟೇಟ್ ಉದ್ಯಮಿ ಮನೆಯಿಂದ ಬರೋಬ್ಬರಿ 20 ಲಕ್ಷ ರೂಪಾಯಿ ನಗದು ಮತ್ತು ಸುಮಾರು ಅರ್ಧ ಕೆಜಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಿಇಎಲ್ ಲೇಔಟ್ನಲ್ಲಿ ನಡೆದಿತ್ತು. ಈ ಪ್ರಕರಣವನ್ನು ಭೇದಿಸಿರುವ ಬ್ಯಾಡರಹಳ್ಳಿ ಪೊಲೀಸರು ಈ ಹಿಂದೆ ನಾಗೇಂದ್ರ ಹಾಗೂ ಬಚ್ಚನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ತನಿಖೆ ಮುಂದುವರಿದಾಗ ಅಸಲಿ ಸತ್ಯ ಬಯಲಾಗಿದ್ದು, ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಹೆಸರು ರಿವೀಲ್ ಆಗಿದೆ.
ಸ್ನೇಹಿತನ ಮನೆಯಲ್ಲೇ ರಾಬರಿ ಮಾಡಿಸಿದವ ಲಾಕ್
ಹೊಂಬೇಗೌಡ ಮನೆಯಲ್ಲಿ ನಡೆದ ದರೋಡೆ ಹಿಂದೆ ಅವರ ಪ್ರಾಣ ಸ್ನೇಹಿತ ಬೆಟ್ಟೇಗೌಡ ಎಂಬಾತನ ಪಾತ್ರ ಇರೋದೀಗ ಬಯಲಾಗಿದೆ. ಸೈಟ್ ಮಾರುವ ಸಂಬಂಧ ಸ್ಟಾಂಪ್ ವೆಂಡರ್ ಆಗಿರುವ ಬೆಟ್ಟೇಗೌಡನ ಬಳಿಯೇ ಹೊಂಬೇಗೌಡರು ಪೇಪರ್ ಮಾಡಿಸಿದ್ದರು. ಹೀಗಾಗಿ ಸ್ನೇಹಿತನ ಬಳಿ ಸೈಟ್ ಮಾರಿದ ಹಣ ಇದೆ ಎಂದು ತಿಳಿದಿದ್ದ ಆರೋಪಿ, ದರೋಡೆ ಮಾಡುವಂತೆ ಜೈಲಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ನಾಗೇಂದ್ರನಿಗೆ ಐಡಿಯಾ ಕೊಟ್ಟಿದ್ದ. ಶಿವಾಜಿನಗರದಲ್ಲಿ ಶೂಟಿಂಗ್ಗೆ ಎಂದು ಹೇಳಿ ಸಬ್ ಇನ್ಸ್ಪೆಕ್ಟರ್ ಡ್ರೆಸ್ ಬಾಡಿಗೆಗೆ ತಂದಿದ್ದ ನಾಗೇಂದ್ರ, ಅದೇ ಡ್ರೆಸ್ ಹಾಕಿಕೊಂಡು ಮನೆಗೆ ನುಗ್ಗಿ ದರೋಡೆ ನಡೆಸಿದ್ದ ಎಂಬುದು ಗೊತ್ತಾಗಿದೆ.
ಹೊಂಬೇಗೌಡ ಅವರು ಪತ್ನಿ ಮಂಗಳಮ್ಮ ಹಾಗೂ ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ಇದ್ದ ವೇಳೆ ಪೊಲೀಸರಂತೆ ವೇಷಧರಿಸಿ ಮನೆಗೆ ಎಂಟ್ರಿ ಕೊಟ್ಟಿದ್ದ ಆರೋಪಿಗಳು , ತಾವು ಯಲಹಂಕ ಠಾಣೆಯಿಂದ ಬಂದಿದ್ದೇವೆ ಎಂದು ತಿಳಿಸಿದ್ದರು. ಇವರು ಬ್ಯಾಗ್ ಮತ್ತು ಡೈರಿಯನ್ನೂ ಹಿಡಿದು ಬಂದಿದ್ದ ಕಾರಣ ಆರಂಭದಲ್ಲಿ ಮನೆಯವರೂ ಆರೋಪಿಗಳ ಮಾತು ನಂಬಿದ್ದರು. ಆದರೆ ಬಳಿಕ ಆರೋಪಿಗಳು ವೃದ್ಧ ದಂಪತಿಯನ್ನು ಬಂದೂಕು ಮತ್ತು ಚಾಕುವಿನಿಂದ ಬೆದರಿಸಿದ್ದರು. ಅಲ್ಲದೆ ಅವರ ಕೈಕಾಲುಗಳನ್ನು ಕಟ್ಟಿ. ನಗದು ಮತ್ತು ಚಿನ್ನಾಭರಣ ದೋಚಿದ್ದರು.
ಬಳ್ಳಾರಿ, ಮಾರ್ಚ್ 08: ಹಾಸ್ಟೆಲ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಿಂದ ಹಲವರ ಮೇಲೆ ರಾಡ್ನಿಂದ ಹಲ್ಲೆ ಮಾಡಿದ್ದು ಈ ವೇಳೆ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಘಟನೆ ಕುರಿತು ಬಳ್ಳಾರಿ ಎಸ್ಪಿ ಸುಮನ್ ಪನ್ನಕೇರ್ ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಆಧಾರದಲ್ಲಿ ಪೊಲೀಸರು FIR ದಾಖಲಿಸಿದ್ದಾರೆ. ಖಾಸಗಿ ವಿದ್ಯಾಸಂಸ್ಥೆಯಲ್ಲೇ ಇದ್ದ ವಿದ್ಯಾರ್ಥಿಯೊಬ್ಬ ಇತರೆ ವಿದ್ಯಾರ್ಥಿಗಳ ಮೇಲೆ ರಾಡ್ನಿಂದ ಹಲ್ಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಲ್ಲಿ ಗಾಯಗೊಂಡಿದ್ದ ಓರ್ವ ಬಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಹಲ್ಲೆ ಬಾಲಕ ಎಸ್ಕೇಪ್ ಆಗಿರುವ ಬಾಲಕನಿಗಾಗಿ ನಗರದ ವಿವಿಧ ಕಡೆಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು 2026ರ ಪರಾಭವ ನಾಮ ಸಂವತ್ಸರದ ಕಟಕ ರಾಶಿ ಫಲಾಫಲಗಳನ್ನು ವಿವರಿಸಿದ್ದಾರೆ. ಈ ವರ್ಷ ಕಟಕ ರಾಶಿಯವರಿಗೆ ಮಿಶ್ರ ಫಲಗಳು ಕಂಡುಬರಲಿವೆ. ಗುರು ಒಂದರಿಂದ ಎರಡನೇ ಮನೆಗೆ ಸಾಗಿದರೆ, ಶನಿಗ್ರಹ ವರ್ಷವಿಡೀ ಒಂಬತ್ತನೇ ಮನೆಯಲ್ಲಿ ಸಂಚರಿಸಲಿದೆ. ರಾಹು ಎಂಟರಿಂದ ಏಳಕ್ಕೆ, ಕೇತು ಒಂದರಿಂದ ಎರಡನೇ ಮನೆಗೆ ಚಲಿಸಲಿದೆ. ವರ್ಷದ ಕಡೆಯ ಭಾಗದಲ್ಲಿ ಕೇತು ಗ್ರಹ ಜನ್ಮಕ್ಕೆ ಬರುವುದು ಹೋರಾಟದ ಬದುಕನ್ನು ಸೂಚಿಸುತ್ತದೆ.
ಆದಾಯ ಎಂಟು ಪಾಲು ಮತ್ತು ವ್ಯಯ ಎರಡು ಪಾಲು ಇರುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯದಲ್ಲಿ ಅಲ್ಪ ಸಮಸ್ಯೆಗಳು ಎದುರಾದರೂ, ಸುಖ ಏಳು ಮತ್ತು ದುಃಖ ನಾಲ್ಕು ಪ್ರಮಾಣದಲ್ಲಿರುತ್ತದೆ. ವ್ಯಾಪಾರದಲ್ಲಿ ಕಿರಿಕಿರಿಗಳು, ರಾಜಕೀಯದಲ್ಲಿ ಹಿನ್ನಡೆ, ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಮಾನಸಿಕ ಒತ್ತಡ ಎದುರಾಗಬಹುದು. ಆದಾಗ್ಯೂ, ಜುಲೈ-ಆಗಸ್ಟ್ ನಂತರ ಆಕಸ್ಮಿಕ ಧನಯೋಗವಿದೆ. ವಾಹನ ಯೋಗ ಉತ್ತಮವಾಗಿದ್ದು, ರೈತಾಪಿ ವರ್ಗದವರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಶುಭವಾಗಲಿದೆ. ಮಕ್ಕಳ ವಿಚಾರ, ವಿವಾಹ ಮತ್ತು ಧರ್ಮ ಕಾರ್ಯಗಳಲ್ಲಿ ಶುಭಫಲಗಳಿವೆ. ಹಣಕಾಸಿನ ಮುಗ್ಗಟ್ಟುಗಳನ್ನು ಎದುರಿಸಬೇಕಾದರೂ, ಸಿಕ್ಕಿಬಿದ್ದ ಹಣದಲ್ಲಿ ಶೇ.50 ಮರಳಿ ಬರಲಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ