ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ – Kannada News | Ashwini Gowda Ask Fans to Watch Hayagriva Movie

ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಗೌಡ ಅವರು ಈಗ ಅಭಿಮಾನಿಗಳ ಬಳಿ ಒಂದು ವಿಶೇಷ ಮನವಿ ಇಟ್ಟಿದ್ದಾರೆ. ಅಷ್ಟಕ್ಕೂ ಏನದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಅಶ್ವಿನಿ ಗೌಡ, ಧನ್ವೀರ್, ಸುನೀಲ್ ಮೊದಲಾದವರು ನಟಿಸಿರುವ ‘ಹಯಗ್ರೀವ’ ಹೆಸರಿನ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆರಂಭಿಸಿದೆ. ಈ ಚಿತ್ರವನ್ನು ನೋಡುವಂತೆ ಅವರು ಅಭಿಮಾನಿಗಳಲ್ಲಿ ಕೋರಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಶ್ವಿನಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Twisha Sharma Case: ತ್ವಿಶಾ ಶರ್ಮಾ ಸಾವು: ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್​ ಆದೇಶ – Kannada News | Central Bureau of Investigation Likely to Take Over Twisha Sharma Death Probe Soon

ನವದೆಹಲಿ, ಮೇ 25: ಮಾಡೆಲ್ ತ್ವಿಶಾ ಶರ್ಮಾ(Twisha Sharma) ಸಾವು ಪ್ರಕರಣ ಇದೀಗ ಸುಪ್ರೀಂಕೋರ್ಟ್​ ತಲುಪಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಳ್ಳಲಿದ್ದು, ಇಂದೇ ಅದಕ್ಕೆ ಬೇಕಾದ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಖಚಿತಪಡಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರಿದ್ದ ಪೀಠವು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಸಂತ್ರಸ್ತೆಯ ಪತಿ ಸಮರ್ಥ್ ಸಿಂಗ್ ವಕೀಲರಾಗಿದ್ದು, ಆಕೆಯ ಅತ್ತೆ ಗಿರಿಬಾಲಾ ಸಿಂಗ್ ಮಾಜಿ ಜಿಲ್ಲಾ ನ್ಯಾಯಾಧೀಶರಾಗಿದ್ದಾರೆ. ಆರೋಪಿಗಳು ಕಾನೂನು ಹಿನ್ನೆಲೆಯುಳ್ಳ ಪ್ರಭಾವಿಗಳಾಗಿರುವುದರಿಂದ ಸ್ಥಳೀಯ ಮಟ್ಟದಲ್ಲಿ ತನಿಖೆಯ ಪಕ್ಷಪಾತ ನಡೆಯುವ ಸಾಧ್ಯತೆ ಇದೆ ಎಂಬ ನಿರೂಪಣೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ಕ್ರಮ ಕೈಗೊಂಡಿದೆ.

ಸಂತ್ರಸ್ತ ಕುಟುಂಬ ಅಥವಾ ಆರೋಪಿಗಳ ವೈಯಕ್ತಿಕ ಹೇಳಿಕೆಗಳು, ಊಹಾಪೋಹಗಳನ್ನು ಪ್ರಕಟಿಸದಂತೆ ನಮ್ಮ ಮಾಧ್ಯಮ ಸ್ನೇಹಿತರನ್ನು ವಿನಂತಿಸುತ್ತೇವೆ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದರು.

ಮತ್ತಷ್ಟು ಓದಿ: ದೆಹಲಿ ಏಮ್ಸ್​​ನಿಂದ ತ್ವಿಶಾ ಶರ್ಮಾ 2ನೇ ಮರಣೋತ್ತರ ಪರೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ

ವಿಚಾರಣೆ ವೇಳೆ ಎಸ್‌ಜಿ ತುಷಾರ್ ಮೆಹ್ತಾ ವಾದ ಮಂಡಿಸಿ, ಸಂಭಾವ್ಯ ಆರೋಪಿಯಾದ ತ್ವಿಷಾ ಅವರ ಅತ್ತೆ ಗಿರಿಬಾಲಾ ಸಿಂಗ್, ಒಂದು ಚಾನೆಲ್‌ನಿಂದ ಮತ್ತೊಂದು ಚಾನೆಲ್‌ಗೆ ಜಿಗಿಯುತ್ತಾ ಸಂತ್ರಸ್ತೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.

ನೋಯ್ಡಾ ನಿವಾಸಿಯಾಗಿದ್ದ 33 ವರ್ಷದ ತ್ವಿಶಾ ಶರ್ಮಾ ಮತ್ತು ಭೋಪಾಲ್‌ನ ವಕೀಲ ಸಮರ್ಥ್ ಸಿಂಗ್ ಸುಮಾರು ಐದು ತಿಂಗಳ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾಗಿ ವಿವಾಹವಾಗಿದ್ದರು. ಆದರೆ, ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಪತಿಯ ನಿವಾಸದಲ್ಲಿ ತ್ವಿಷಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು. ತ್ವಿಷಾ ಕುಟುಂಬಸ್ಥರು ಅತ್ತೆ-ಮಾವನ ವಿರುದ್ಧ ನಿರಂತರ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ ಹೊರಿಸಿದ್ದಾರೆ.

ಸ್ಥಳೀಯ ಪೊಲೀಸರು ಮೂರು ದಿನಗಳ ಕಾಲ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎಂದು ಸಂತ್ರಸ್ತರ ಪರ ವಕೀಲ ಸಿದ್ಧಾರ್ಥ್ ಲೂತ್ರಾ ವಾದಿಸಿದರು. ಸಾವಿನ ನಿಜವಾದ ಕಾರಣ ತಿಳಿಯಲು ಎರಡನೇ ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರು ಒತ್ತಾಯಿಸಿದ್ದರು. ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದ ಮೇರೆಗೆ ಭೋಪಾಲ್‌ನ ಏಮ್ಸ್ (AIIMS) ವೈದ್ಯರ ತಂಡವು ನಿನ್ನೆ ಮೃತದೇಹದ ಎರಡನೇ ಶವಪರೀಕ್ಷೆ ನಡೆಸಿದೆ.

ಪ್ರಸ್ತುತ, ಪತಿ ಸಮರ್ಥ್ ಸಿಂಗ್ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಿದ್ದು, ಆತನನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅತ್ತೆ ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್‌ಗೆ ನೀಡಲಾದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಮಧ್ಯಪ್ರದೇಶ ಪೊಲೀಸರು ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ. ದೇಶದ ಪ್ರಮುಖ ಸಂಸ್ಥೆಯಾದ ಸಿಬಿಐ ತನಿಖೆಯನ್ನು ನಂಬುವಂತೆ ಮತ್ತು ಊಹಾಪೋಹಗಳಿಂದ ದೂರವಿರುವಂತೆ ಸುಪ್ರೀಂ ಕೋರ್ಟ್ ಸಾರ್ವಜನಿಕರಲ್ಲಿ ವಿನಂತಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:35 pm, Mon, 25 May 26

Source link

ಶೃಂಗೇರಿ ಶಾರದಾಂಬೆಯ ದರ್ಶನ ಹೋಗುವ ಭಕ್ತರಿಗೆ ಗುಡ್​​​ ನ್ಯೂಸ್: ಮಂಗಳೂರಿಗೆ ಡಬಲ್​ ಧಮಾಕ ನೀಡಿದ ರೈಲ್ವೆ ಇಲಾಖೆ – Kannada News | Karnataka Rail Revolution: Shivamogga Mangaluru and Hassan Line Doubling Projects

ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗImage Credit source: pinterest

ಮಂಗಳೂರು, ಮೇ.25: ಮಲೆನಾಡು ಮತ್ತು ಕರಾವಳಿ ಭಾಗದ ಜನತೆಯ ದಶಕಗಳ ರೈಲು ಸಂಪರ್ಕದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಬಹುನಿರೀಕ್ಷಿತ ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹೇಳಿಕೆ ನೀಡಿದ್ದಾರೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ‘ಅಮೃತ್ ಭಾರತ್’ ಯೋಜನೆಯಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಈ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

3,300 ಕೋಟಿ ವೆಚ್ಚದ ಭಾರಿ ಯೋಜನೆ:

ಪ್ರಸ್ತಾವಿತ ಶಿವಮೊಗ್ಗ-ಮಂಗಳೂರು ಹೊಸ ರೈಲು ಮಾರ್ಗವು ಒಟ್ಟು 332 ಕಿಲೋಮೀಟರ್ ಉದ್ದವಿರಲಿದ್ದು, ಇದಕ್ಕೆ ಅಂದಾಜು 3,300 ಕೋಟಿ ರೂಪಾಯಿ ಯೋಜನಾ ವೆಚ್ಚವನ್ನು ನಿಗದಿಪಡಿಸಲಾಗಿದೆ. ಈ ಮಾರ್ಗದ ಫೈನಲ್ ಲೊಕೇಶನ್ ಸರ್ವೆ (FLS) ಈಗಾಗಲೇ ಯಶಸ್ವಿಯಾಗಿ ಮುಗಿದು ಇಲಾಖೆಯಿಂದ ಅನುಮೋದನೆ ಕೂಡ ದೊರೆತಿದೆ. ತಾಂತ್ರಿಕ ಪ್ರಕ್ರಿಯೆಗಳು ಮುಗಿದ ತಕ್ಷಣವೇ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಈ ಮಾರ್ಗವು ಜಾರಿಗೆ ಬಂದರೆ ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಮತ್ತು ಕರಾವಳಿ-ಮಲೆನಾಡಿನ ವಾಣಿಜ್ಯ ಸಂಪರ್ಕಕ್ಕೆ ಭಾರಿ ದೊಡ್ಡ ಬೂಸ್ಟ್ ಸಿಗಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶುಕ್ರವಾರದವರೆಗೆ ಗುಡುಗು ಸಹಿತ ಭಾರೀ ಮಳೆ

ಹಾಸನ-ಮಂಗಳೂರು ಹಳಿ ದ್ವಿಗುಣಗೊಳಿಸಲು 8,300 ಕೋಟಿ!:

ಇದೇ ವೇಳೆ ಕರಾವಳಿಯ ಮತ್ತೊಂದು ಪ್ರಮುಖ ರೈಲ್ವೆ ಯೋಜನೆಗೆ ವೇಗ ನೀಡಿರುವ ಸಚಿವರು, ಹಾಸನ ಮತ್ತು ಮಂಗಳೂರು ನಡುವಿನ 247 ಕಿಲೋಮೀಟರ್ ರೈಲು ಹಳಿಯನ್ನು ದ್ವಿಗುಣಗೊಳಿಸುವ (Doubling of Railway Line) ಬೃಹತ್ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು. ಈ ಯೋಜನೆಗಾಗಿ ಒಟ್ಟು 8,300 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಸದ್ಯ ಇದರ ಫೈನಲ್ ಲೊಕೇಶನ್ ಸರ್ವೆ (FLS) ಪರಿಶೀಲನಾ ಹಂತದಲ್ಲಿದೆ ಎಂದು ವಿ. ಸೋಮಣ್ಣ ತಿಳಿಸಿದ್ದಾರೆ. ಈ ಎರಡು ಮೆಗಾ ಯೋಜನೆಗಳು ಕರಾವಳಿ ಕರ್ನಾಟಕದ ಸಾರಿಗೆ ಇತಿಹಾಸದಲ್ಲೇ ಹೊಸ ಕ್ರಾಂತಿ ಸೃಷ್ಟಿಸಲಿವೆ.

ರಾಜ್ಯದ ಸುದ್ದಿಗಳನ್ನು ಇದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್ ಇತಿಹಾಸದಲ್ಲೇ ಈ ರೀತಿಯ ಪ್ಲೇಆಫ್ ಇದೇ ಮೊದಲು..! – Kannada News | IPL 2026 Playoffs: Each of the four qualifying teams have won the IPL only once

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿವೆ. ಮೊದಲ ಸುತ್ತಿನಲ್ಲಿ ಕಣಕ್ಕಿಳಿದ 10 ತಂಡಗಳಲ್ಲಿ 4 ಟೀಮ್​ಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಅದರಂತೆ ಪ್ಲೇಆಫ್ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ತಂಡಗಳು ಕಣಕ್ಕಿಳಿಯಲಿವೆ. ವಿಶೇಷ ಎಂದರೆ ಈ ಬಾರಿಯ ಪ್ಲೇಆಫ್ ಹಂತವು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ಅಪರೂಪದ ಹಾಗೂ ಕುತೂಹಲಕಾರಿ ಮುಖಾಮುಖಿಗೆ ಸಾಕ್ಷಿಯಾಗಲಿದೆ.

ಅಂದರೆ ಟೂರ್ನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪ್ಲೇಆಫ್ ತಲುಪಿರುವ ನಾಲ್ಕೂ ತಂಡಗಳು ಈ ಹಿಂದೆ ತಲಾ ಒಂದೊಂದು ಬಾರಿ  ಐಪಿಎಲ್ ಟ್ರೋಫಿ ಗೆದ್ದಿವೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಕೊಲ್ಕತ್ತಾ ನೈಟ್​ ರೈಡರ್ಸ್​ನಂತಹ ಬಹು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ದೈತ್ಯ ತಂಡಗಳಿಲ್ಲದ ಈ ಪ್ಲೇಆಫ್ ಕಣದಲ್ಲಿ ಪ್ರತಿಯೊಂದು ತಂಡಕ್ಕೂ ಎರಡನೇ ಬಾರಿ ಚಾಂಪಿಯನ್ ಆಗುವ ಸುವರ್ಣಾವಕಾಶ ಎದುರಾಗಿದೆ.

 ‘ಒಂದೇ ಒಂದು’ ಟ್ರೋಫಿ ಇತಿಹಾಸ:

ಈ ಬಾರಿ ಅಂತಿಮ ನಾಲ್ಕರ ಘಟ್ಟ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಗುಜರಾತ್ ಟೈಟಾನ್ಸ್ (GT), ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳ ಹಿಂದಿನ ಚಾಂಪಿಯನ್ ಹಾದಿ ಹೀಗಿದೆ:

  • ರಾಜಸ್ಥಾನ್ ರಾಯಲ್ಸ್ (2008): ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡವು ಐಪಿಎಲ್‌ನ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿತ್ತು.
  • ಸನ್‌ರೈಸರ್ಸ್ ಹೈದರಾಬಾದ್ (2016): ಡೇವಿಡ್ ವಾರ್ನರ್ ಸಾರಥ್ಯದ ಸನ್​ರೈಸರ್ಸ್ ಹೈದರಾಬಾದ್ ತಂಡ ಫೈನಲ್​ನಲ್ಲಿ ಆರ್​​ಸಿಬಿ ತಂಡವನ್ನು ಮಣಿಸಿ ತನ್ನ ಏಕೈಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
  • ಗುಜರಾತ್ ಟೈಟಾನ್ಸ್ (2022): ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಗುಜರಾತ್ ಟೈಟಾನ್ಸ್ ಚೊಚ್ಚಲ ಸೀಸನ್‌ನಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು (2025): ಐಪಿಎಲ್​ 2025ರ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಕೋಟ್ಯಂತರ ಅಭಿಮಾನಿಗಳ ಸುದೀರ್ಘ ಕಾಯುವಿಕೆಗೆ ಬ್ರೇಕ್ ಹಾಕಿ ಆರ್​ಸಿಬಿ ತಂಡವು ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ಇದೀಗ ಈ ನಾಲ್ಕು ತಂಡಗಳೇ ಪ್ಲೇಆಫ್ ಪಂದ್ಯಗಳನ್ನಾಡಿದೆ. ಇದರೊಂದಿಗೆ ಈ ನಾಲ್ಕು ತಂಡಗಳಲ್ಲಿ ಒಂದು ಟೀಮ್ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವುದು ಕೂಡ ಖಚಿತವಾಗಿದೆ. ಅದರಂತೆ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ತಂಡ ಯಾವುದು ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಮೈದಾನದಲ್ಲೇ ಕೊನೆಯುಸಿರೆಳೆದ ಕರ್ನಾಟಕದ ಕ್ರಿಕೆಟಿಗ!

ಪ್ಲೇಆಫ್ ಸುತ್ತಿನ ವೇಳಾಪಟ್ಟಿ:

ಪಂದ್ಯ ದಿನಾಂಕ ಮುಖಾಮುಖಿ ಕ್ರೀಡಾಂಗಣ / ಸ್ಥಳ
ಕ್ವಾಲಿಫೈಯರ್ 1  ಮೇ 26, ಮಂಗಳವಾರ  ರಾಯಲ್ ಚಾಲೆಂಜರ್ಸ್​ ಬೆಂಗಳೂರು vs ಗುಜರಾತ್ ಟೈಟಾನ್ಸ್ ಹೆಚ್​ಪಿಸಿಎ ಸ್ಟೇಡಿಯಂ, ಧರ್ಮಶಾಲಾ
ಎಲಿಮಿನೇಟರ್  ಮೇ 27, ಬುಧವಾರ ಸನ್​ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ ಮುಲ್ಲನ್‌ಪುರ್ ಸ್ಟೇಡಿಯಂ, ನ್ಯೂ ಚಂಡೀಗಢ್
ಕ್ವಾಲಿಫೈಯರ್ 2  ಮೇ 29, ಶುಕ್ರವಾರ ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ vs ಎಲಿಮಿನೇಟರ್ ವಿಜೇತ ತಂಡ ಮುಲ್ಲನ್‌ಪುರ್ ಸ್ಟೇಡಿಯಂ, ನ್ಯೂ ಚಂಡೀಗಢ್
ಫೈನಲ್  ಮೇ 31, ಭಾನುವಾರ ಕ್ವಾಲಿಫೈಯರ್ 1 ವಿಜೇತರು vs ಕ್ವಾಲಿಫೈಯರ್ 2 ವಿಜೇತರು ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

Source link

ವಾಯುಸೇನೆಗೆ ಭರ್ಜರಿ ಬಲ; ಫ್ರಾನ್ಸ್​ನಿಂದ ಇನ್ನೂ 114 ರಫೇಲ್ ಜೆಟ್ ಖರೀದಿಗೆ ಸಜ್ಜು; 90 ವಿಮಾನಗಳು ಭಾರತದಲ್ಲೇ ಜೋಡಣೆ – Kannada News | Massive Indian Air Force Boost: India Prepares LoR for 114 Rafale Fighter Jets, Made in India Focus

ರಫೇಲ್ ಯುದ್ಧ ವಿಮಾನImage Credit source: Indian Air Force

ನವದೆಹಲಿ, ಮೇ 25: ಭಾರತೀಯ ವಾಯುಸೇನೆಯನ್ನು (IAF) ಮತ್ತಷ್ಟು ಬಲಪಡಿಸಲು ಮತ್ತು ದೇಶೀಯ ರಕ್ಷಣಾ ಉತ್ಪಾದನೆಗೆ ಭಾರಿ ಉತ್ತೇಜನ ನೀಡಲು ಭಾರತ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಫ್ರಾನ್ಸ್‌ನಿಂದ ಹೆಚ್ಚುವರಿ 114 ರಫೇಲ್ ಯುದ್ಧ ವಿಮಾನಗಳನ್ನು (Rafale fighter aircraft) ಖರೀದಿಸಲು ಭಾರತವು ಔಪಚಾರಿಕ ವಿನಂತಿ ಪತ್ರವನ್ನು (Letter of Request – LoR) ಸಿದ್ಧಪಡಿಸಿದ್ದು, ಮುಂದಿನ ಕೆಲವು ವಾರಗಳಲ್ಲಿ ಇದನ್ನು ಫ್ರಾನ್ಸ್‌ಗೆ ಕಳುಹಿಸಲಾಗುವುದು. ಈ ಬೃಹತ್ ಒಪ್ಪಂದದ ಅಂದಾಜು ಮೌಲ್ಯ ಸುಮಾರು 3.25 ಲಕ್ಷ ಕೋಟಿ ರೂ (39 ಬಿಲಿಯನ್ ಡಾಲರ್) ಎನ್ನಲಾಗಿದೆ. ಇದು ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ರಕ್ಷಣಾ ಖರೀದಿಗಳಲ್ಲಿ ಒಂದಾಗಲಿದೆ.

ಒಟ್ಟು 114 ಯುದ್ಧ ವಿಮಾನಗಳ ಪೈಕಿ, ಸುಮಾರು 90 ವಿಮಾನಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. ಫ್ರಾನ್ಸ್‌ನ ಪ್ರಮುಖ ರಕ್ಷಣಾ ಸಂಸ್ಥೆಯಾದ ‘ಡಸಾಲ್ಟ್ ಏವಿಯೇಷನ್’ (Dassault Aviation) ಭಾರತೀಯ ಕಂಪನಿಯೊಂದರ ಜೊತೆ ಕೈಜೋಡಿಸಿ ಇವುಗಳನ್ನು ದೇಶೀಯವಾಗಿ ಉತ್ಪಾದಿಸಲಿದೆ. ಇನ್ನುಳಿದ ವಿಮಾನಗಳನ್ನು ನೇರವಾಗಿ ಫ್ರಾನ್ಸ್‌ನಿಂದ ಹಾರಾಟದ ಸ್ಥಿತಿಯಲ್ಲಿ (Fly-away condition) ಖರೀದಿಸಲಾಗುತ್ತದೆ. ಈ ಖರೀದಿ ಪೂರ್ಣಗೊಂಡರೆ ಭಾರತದ ವಾಯುಪಡೆಯ ಬತ್ತಳಿಕೆಯಲ್ಲಿ ರಫೇಲ್ ಯುದ್ಧವಿಮಾನಗಳ ಸಂಖ್ಯೆ 150 ಆಗಲಿದೆ.

ಇದನ್ನೂ ಓದಿ: 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್‌ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು?

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು ಈಗಾಗಲೇ ಈ ಪ್ರಸ್ತಾವನೆಗೆ ಪ್ರಾಥಮಿಕ ಅನುಮೋದನೆ (Acceptance of Necessity) ನೀಡಿದೆ. ಈ ಹೊಸ ರಫೇಲ್ ವಿಮಾನಗಳಲ್ಲಿ ಶೇ. 50 ರಷ್ಟು ದೇಶೀಯ ಬಿಡಿಭಾಗಗಳನ್ನು (Indigenous content) ಬಳಸುವ ಗುರಿ ಹೊಂದಲಾಗಿದೆ. ಅಷ್ಟೇ ಅಲ್ಲದೆ, ಭಾರತದ ಹೆಮ್ಮೆಯ ‘ಅಸ್ತ್ರ’ (Astra) ಕ್ಷಿಪಣಿ ಮತ್ತು ‘ಬ್ರಹ್ಮೋಸ್-ಎನ್‌ಜಿ’ (BrahMos-NG) ನಂತಹ ಸ್ವದೇಶಿ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಈ ವಿಮಾನಗಳಲ್ಲಿ ಅಳವಡಿಸಲು ಅನುವು ಮಾಡಿಕೊಡುವ ‘ಇಂಟರ್ಫೇಸ್ ಕಂಟ್ರೋಲ್ ಡಾಕ್ಯುಮೆಂಟ್ಸ್’ (ICD) ಪಡೆಯಲು ಭಾರತ ಮಾತುಕತೆ ನಡೆಸುತ್ತಿದೆ.

ವಾಯುಸೇನೆಯ ಸಾಮರ್ಥ್ಯ ವೃದ್ಧಿ

ಪ್ರಸ್ತುತ ಭಾರತೀಯ ವಾಯುಸೇನೆಯು ತೀವ್ರ ಸ್ಕ್ವಾಡ್ರನ್ ಕೊರತೆಯನ್ನು ಎದುರಿಸುತ್ತಿದೆ. ಅನುಮೋದಿತ 42 ಸ್ಕ್ವಾಡ್ರನ್‌ಗಳ ಎದುರು ಸದ್ಯ ವಾಯುಸೇನೆಯಲ್ಲಿ ಕೇವಲ 29 ಸ್ಕ್ವಾಡ್ರನ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಎದುರಾಗುತ್ತಿರುವ ಭದ್ರತಾ ಸವಾಲುಗಳನ್ನು ಎದುರಿಸಲು ಈ ಹೆಚ್ಚುವರಿ ರಫೇಲ್ ವಿಮಾನಗಳು ವಾಯುಸೇನೆಗೆ ಸಂಜೀವಿನಿಯಾಗಲಿವೆ.

ವಾಯುಸೇನೆಯ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಮುಂದಿನ ತಿಂಗಳು ಫ್ರಾನ್ಸ್‌ಗೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜೂನ್ ತಿಂಗಳ ಫ್ರಾನ್ಸ್ ಪ್ರವಾಸಕ್ಕೂ ಮುನ್ನ ಈ ಪ್ರಕ್ರಿಯೆಗೆ ಮತ್ತಷ್ಟು ವೇಗ ಸಿಗಲಿದೆ. ಈ ವರ್ಷದ ಅಂತ್ಯದ ವೇಳೆಗೆ ವಾಣಿಜ್ಯ ಮಾತುಕತೆಗಳನ್ನು ಮುಗಿಸಿ ಅಂತಿಮ ಒಪ್ಪಂದಕ್ಕೆ ಸಹಿ ಹಾಕುವ ಗುರಿಯನ್ನು ಸರ್ಕಾರ ಹೊಂದಿದೆ.

ಇದನ್ನೂ ಓದಿ: ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು!

ಪ್ರಸ್ತುತ ಭಾರತೀಯ ವಾಯುಸೇನೆಯು ಈಗಾಗಲೇ 36 ರಫೇಲ್ ವಿಮಾನಗಳನ್ನು ಯಶಸ್ವಿಯಾಗಿ ಕಾರ್ಯಾಚರಣೆಗೆ ಬಳಸುತ್ತಿದ್ದು, ನೌಕಾಸೇನೆಗಾಗಿ (Indian Navy) 26 ರಫೇಲ್-ಎಂ (Naval variant) ವಿಮಾನಗಳ ಖರೀದಿಯ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.

ಫ್ರಾನ್ಸ್ ನಂತರ ಭಾರತದಲ್ಲೇ ಇರಲಿದೆ ಅತಿಹೆಚ್ಚು ರಫೇಲ್ ವಿಮಾನಗಳು

ರಫೇಲ್ ಯುದ್ಧವಿಮಾನದ ಮಾತೃದೇಶವಾದ ಫ್ರಾನ್ಸ್​ನ ಮಿಲಿಟರಿ ಬಳಿ 234 ವಿಮಾನಗಳನ್ನು ಹೊಂದುತ್ತಿದೆ. ಅದರ ವಾಯುಸೇನೆ ಮತ್ತು ನೌಕಾಸೇನೆ ಹೀಗೆ ಎಲ್ಲಾ ಸೇನಾ ವಿಭಾಗಗಳಿಂದ ಸೇರಿಸಿದರೆ ರಫೇಲ್ ವಿಮಾನಗಳ ಸಂಖ್ಯೆ 234 ಆಗುತ್ತದೆ. ಈಜಿಪ್ಟ್ ಈಗಾಗಲೇ 54 ಜೆಟ್​ಗಳನ್ನು ಪಡೆದಿದೆ. ಭಾರತ ಸದ್ಯ 36 ವಿಮಾನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ, ಈಗ ಆರ್ಡರ್ ಕೊಡಲಾಗಿರುವ 114 ವಿಮಾನಗಳು ಹಾಗೂ ನೌಕಾಸೇನೆ ಆರ್ಡರ್ ಕೊಟ್ಟಿರುವ 26 ವಿಮಾನಗಳನ್ನು ಸೇರಿಸಿದರೆ ಭಾರತದಲ್ಲಿರುವ ಒಟ್ಟು ರಫೇಲ್ ಜೆಟ್​ಗಳ ಸಂಖ್ಯೆ 176ಕ್ಕೆ ಏರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:50 am, Mon, 25 May 26

Source link

Video: ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ಕೊಟ್ಟು ಉಪಚರಿಸುವ ಮಹಿಳೆ – Kannada News | Bengaluru: Bengaluru woman gives tea and biscuits to civic workers cleaning the city.

ಬೆಂಗಳೂರು, ಮೇ 25: ಸ್ವಾರ್ಥಿಗಳೇ (selfish) ತುಂಬಿರುವ ಜನರ ನಡುವೆ ಬೇರೆಯವರಿಗೆ ಸಹಾಯ ಮಾಡುವ ಗುಣ, ಒಳ್ಳೆಯ ಮನಸ್ಸು ಕಾಣಸಿಗುವುದು ಕಡಿಮೆಯೇ. ಇದೆಲ್ಲದರ ನಡುವೆ ಒಳ್ಳೆಯ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಖುಷಿಯಾಗುತ್ತದೆ. ತಾವು ಮಾಡುವ ಸಣ್ಣ ಪುಟ್ಟ ಕೆಲಸಗಳಿಂದಲೇ ಹೀರೋಗಳಾಗುತ್ತಾರೆ. ಇದಕ್ಕೆ ಉದಾಹರಣೆಯಂತಿದ್ದಾರೆ ಬೆಂಗಳೂರಿನ (Bengaluru) ಈ ಮಹಿಳೆ. ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ನೀಡಿ ಉಪಚರಿಸುತ್ತಿದ್ದಾರೆ ಈ ಮಹಿಳೆ. ಅವರ ಈ ಒಳ್ಳೆಯ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.

ಜಗದೀಶ್ ನಡನಳ್ಳಿ (Jagadish Nadanalli) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಂಗಳೂರಿನ ಮಹಿಳೆಯ ಒಳ್ಳೆಯ ಕಾರ್ಯದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ ಕಸ ತೆಗೆದುಕೊಂಡು ಹೋಗಲು ಮನೆಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ಕೊಟ್ಟು ಉಪಚರಿಸುವುದನ್ನು ಕಾಣಬಹುದು. ಈ ವೇಳೆ ಪೌರ ಕಾರ್ಮಿಕರು, ಮಹಿಳೆಯೊಂದಿಗೆ ಪ್ರೀತಿಯಿಂದ ಮಾತನಾಡುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದೊಂದಿಗೆ ಜಗದೀಶ್ ಅವರು, ಈ ಮಹಿಳೆಯ ಮಾಡುವ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಉಲ್ಲೇಖಿಸಿದ್ದಾರೆ. ನಾವು ನೀವುಗಳು ಬಡವರು, ವೃದ್ಧ ನಾಗರಿಕರು, ಆಟೋ ಚಾಲಕರು ಮತ್ತು ರಸ್ತೆಬದಿಯ ಮಾರಾಟಗಾರರಿಗೆ ಸಹಾಯ ಮಾಡುವವರ ಬಗ್ಗೆ ಕೇಳಿದ್ದೇವೆ. ಆದರೆ ಇವರು ಮಾತ್ರ ಭಿನ್ನವಾಗಿ ಕಾಣುತ್ತಾರೆ. ಯಾವುದೇ ಪ್ರಚಾರ ಬಯಸದೇ ಅಥವಾ ಹಣ ಗಳಿಸುವ ಉದ್ದೇಶವಿಲ್ಲದೆ ಕಳೆದ ಕೆಲವು ವರ್ಷಗಳಿಂದ ಇತರರಿಗೆ ಸಹಾಯ ಮಾಡುತ್ತಿದ್ದಾರೆ. ಅವರು ಈ ಕೆಲಸವನ್ನು ಕೇವಲ ಅವರ ಆತ್ಮತೃಪ್ತಿಗಾಗಿ ಮಾಡುತ್ತಾರೆ ಎಂದು ಹೇಳಿದ್ದಾರೆ.

ಈ ಪ್ರದೇಶಕ್ಕೆ ಬರುವ ನೈರ್ಮಲ್ಯ ಕಾರ್ಮಿಕರಿಗೆ ಅವರು ನಿಯಮಿತವಾಗಿ ಕಾಫಿ, ಬ್ರೆಡ್, ಬಿಸ್ಕೆಟ್ ಹಾಗೂ ಬಾಳೆಹಣ್ಣುಗಳನ್ನು ನೀಡುತ್ತಾರೆ. ಕೆಲವೊಮ್ಮೆ ಬಗೆಬಗೆಯ ತಿನಿಸುಗಳು, ಅಗತ್ಯ ವಸ್ತುಗಳನ್ನು ಕೂಡ ನೀಡುತ್ತಾರೆ. ಇನ್ನು ಬೀದಿ ನಾಯಿಗಳು ಮತ್ತು ಬೆಕ್ಕುಗಳಿಗಾಗಿ ಹಾಲು, ಅನ್ನ ಹಾಕಿ ಹೊಟ್ಟೆ ತುಂಬಿಸುತ್ತಾರೆ. ಮನೆಯ ಟೆರೇಸ್‌ ಮೇಲೆ ಪಕ್ಷಿಗಳಿಗೆ ಧಾನ್ಯಗಳು, ನೀರನ್ನು ಕೂಡ ಇಡುವುದು ಅವರ ನಿತ್ಯದ ಕಾಯಕಗಳಲ್ಲಿ ಒಂದಾಗಿದೆ ಎಂದು ಮಹಿಳೆಯ ಕೆಲಸವನ್ನು ಶ್ಲಾಘಿಸಿದ್ದಾರೆ.

ಹಸು, ಕರುಗಳೊಂದಿಗೆ ಮನೆ ಬಾಗಿಲಿಗೆ ಬರುವವರನ್ನು ಮಾತನಾಡಿಸುತ್ತಾರೆ. ತರಕಾರಿ, ಹೂವು ಹಾಗೂ ಹಣ್ಣು ಮಾರಾಟಗಾರರನ್ನು ತಮ್ಮ ಕುಟುಂಬ ಸದಸ್ಯರಂತೆ ಭಾವಿಸುತ್ತಾರೆ. ಕೆಲವು ಸಲ ಅವರಿಗೆ ಮಾರಾಟಗಾರರಿಂದ ಖರೀದಿಸಲು ಏನು ಇರಲ್ಲ. ಈ ವ್ಯಾಪಾರಿಗಳೊಂದಿಗೆ ಮಾತನಾಡಲೆಂದೇ ಅವರ ಮನೆಗೆ ಭೇಟಿ ನೀಡುತ್ತಾರೆ. ಪ್ರತಿದಿನ ಇತರರಿಗೆ ಸಹಾಯ ಮಾಡುವ ಇಂತಹ ವ್ಯಕ್ತಿಯನ್ನು ನಾನು ಎಂದಿಗೂ ನೋಡಿಲ್ಲ. ಆಕೆ ಒಬ್ಬ ಮಹಾನ್ ತಾಯಿಯಂತೆ ಕಾಣಿಸುತ್ತಾಳೆ ಎಂದು ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: 4 ಕಿ.ಮೀ ಕ್ರಮಿಸಲು 45 ನಿಮಿಷಗಳು ತೆಗೆದುಕೊಂಡೆ; ಟ್ರಾಫಿಕ್‌ ಸಮಸ್ಯೆ ಬಗ್ಗೆ ಅಸಮಾಧಾನ ಹೊರಹಾಕಿದ ಗೂಗಲ್ ಟೆಕ್ಕಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ವಿಡಿಯೋ ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ಆಕೆಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಮ್ಮ ಸುತ್ತಲೂ ಇಂತಹ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈಗಿನ ಕಾಲದಲ್ಲಿ ಇಂತಹ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಕಾಣಸಿಗುವುದೇ ವಿರಳ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದು ಕ್ಯಾಬ್ ಚಾಲಕನ ಕಿಡ್ನ್ಯಾಪ್, ದರೋಡೆ! – Kannada News | Bengaluru: Gang in Mercedes Benz Kidnaps and Robs Cab Driver Over Women Dispute

ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಬಂದು ಕ್ಯಾಬ್ ಚಾಲಕನ ಕಿಡ್ನ್ಯಾಪ್, ದರೋಡೆ!
Image Credit source: nationworldnews.com

ಬೆಂಗಳೂರು, ಮೇ 25: ನಗರದ ಹೊರವಲಯದಲ್ಲಿ ತಡರಾತ್ರಿ ಭೀಕರ ಘಟನೆಯೊಂದು ಸಂಭವಿಸಿದೆ. ವಿಮಾನ ನಿಲ್ದಾಣಕ್ಕೆ ಹೋಗಿದ್ದ ಕ್ಯಾಬ್ ಚಾಲಕ ಮತ್ತು ಆತನ ಸ್ನೇಹಿತನನ್ನು ಮರ್ಸಿಡಿಸ್ ಬೆಂಜ್ (Mercedes-Benz) ಕಾರಿನಲ್ಲಿ ಬಂದ ಗ್ಯಾಂಗ್‌ವೊಂದು ಅಪಹರಿಸಿ, ಚಾಕು ಹಾಗೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಲ್ಲದೆ ನಗದು ಹಾಗೂ ಮೊಬೈಲ್ ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮರ್ಸಿಡಿಸ್ ಕಾರಿನಲ್ಲಿ ಬಂದ ಗ್ಯಾಂಗ್‌ನಿಂದ ಕ್ಯಾಬ್ ಚಾಲಕನ ಅಪಹರಣ.
  • ಮಹಿಳೆಯ ವಿಚಾರದ ಜಗಳಕ್ಕಾಗಿ ಚಾಕು ತೋರಿಸಿ ಭೀಕರ ದರೋಡೆ ನಡೆಸಿದ ದುಷ್ಕರ್ಮಿಗಳು.
  • ಗಾಯಗೊಂಡ ಸ್ನೇಹಿತ ಆಸ್ಪತ್ರೆಗೆ ದಾಖಲು, ಬಾಗಲೂರು ಪೊಲೀಸರಿಂದ ಶಂಕಿತರ ತೀವ್ರ ವಿಚಾರಣೆ.

ಏನಿದು ಘಟನೆ?

ಮೊಹಮ್ಮದ್ ರಫೀಕ್ (30) ಮೂಲತಃ ಕೇರಳದವರಾಗಿದ್ದು, ಕಳೆದ ಆರು ತಿಂಗಳಿನಿಂದ ಬೆಂಗಳೂರಿನಲ್ಲಿ ಬಾಡಿಗೆ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮೇ 21ರ ತಡರಾತ್ರಿ 1 ಗಂಟೆ ಸುಮಾರಿಗೆ ರಫೀಕ್ ತಮ್ಮ ಸ್ನೇಹಿತ ದೀಪಕ್‌ನನ್ನು ಪಿಕ್ ಅಪ್ ಮಾಡಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಹೋಗಿದ್ದರು. ದೀಪಕ್‌ನನ್ನು ಕರೆದುಕೊಂಡು ವಾಪಸ್ ಬರುತ್ತಿದ್ದಾಗ, ಬೇಗೂರು ಸಮೀಪ ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದ 5 ರಿಂದ 6 ಜನರ ಗ್ಯಾಂಗ್ ಇವರ ಕ್ಯಾಬ್ ಅನ್ನು ಅಡ್ಡಗಟ್ಟಿದೆ.

ಚಾಕು ತೋರಿಸಿ ಕಿಡ್ನ್ಯಾಪ್, ದರೋಡೆ

ಕಾರಿನಿಂದ ಇಳಿದ ದುಷ್ಕರ್ಮಿಗಳು ಚಾಕು ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ರಫೀಕ್‌ನನ್ನು ಬಲವಂತವಾಗಿ ಬೆಂಜ್ ಕಾರಿಗೆ ಎಳೆದುಕೊಂಡಿದ್ದಾರೆ. ಅವರ ಬಳಿಯಿದ್ದ 21,000 ರೂ. ನಗದು ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ನಗರದ ಕಡೆಗೆ ಚಲಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ರಫೀಕ್‌ನಿಂದ ಆತನ ಮತ್ತೊಬ್ಬ ಸ್ನೇಹಿತ ಜಾಬಿರ್ ಎಂಬುವವನಿಗೆ ಕರೆ ಮಾಡಿಸಿದ್ದಾರೆ. ತನಗೆ ಅಪಘಾತವಾಗಿದೆ ಎಂದು ಸುಳ್ಳು ಹೇಳಿಸಿ ಜಾಬಿರ್‌ನನ್ನು ಸ್ಥಳಕ್ಕೆ ಬರುವಂತೆ ಪ್ಲಾನ್ ಮಾಡಿದ್ದರು.

ಸ್ನೇಹಿತ ಕರೆ ಮಾಡಿದ್ದಕ್ಕೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಾಬಿರ್‌ನನ್ನೂ ಸಹ ಈ ಗ್ಯಾಂಗ್ ಕಬ್ಬಿಣದ ರಾಡ್‌ಗಳಿಂದ ಬೆದರಿಸಿ, ಇಬ್ಬರನ್ನೂ ಖಾಲಿ ಸೈಟ್‌ವೊಂದಕ್ಕೆ ಕರೆದೊಯ್ದು ಮನಬಂದಂತೆ ಥಳಿಸಿದೆ. ಈ ವೇಳೆ ರಫೀಕ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಆಟೋರಿಕ್ಷಾ ಮೂಲಕ ಕೊಠಡಿಗೆ ಬಂದು ತಲುಪಿದ್ದಾರೆ. ನಂತರ ಮುಂಜಾನೆ 5 ಗಂಟೆ ಸುಮಾರಿಗೆ ಮತ್ತೊಬ್ಬ ಸ್ನೇಹಿತನ ಫೋನ್ ಬಳಸಿ ಪೊಲೀಸ್ ಹೆಲ್ಪ್‌ಲೈನ್ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸ ಬೆನ್ನಲ್ಲೇ ಹೈ ಅಲರ್ಟ್​: ಇಂದಿನಿಂದ 3 ದಿನ ಇಡೀ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

ಪೊಲೀಸ್ ಕಾರ್ಯಾಚರಣೆ

ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಸಂಪಿಗೆಹಳ್ಳಿ ಪೊಲೀಸರು ಗಾಯಗೊಂಡಿದ್ದ ಜಾಬಿರ್‌ನನ್ನು ರಕ್ಷಿಸಿ ಯಲಹಂಕದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಯಿಂದಾಗಿ ಜಾಬಿರ್ ಕಿಿವಿಗೆ ಬಲವಾದ ಗಾಯಗಳಾಗಿವೆ. ಸದ್ಯ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ಮಾಡಿದವರು ಮತ್ತು ದೂರುದಾರರಿಗೆ ಮುಂಚಿತವಾಗಿ ಪರಿಚಯ ಇರಲಿಲ್ಲ. ಆದರೆ ಮಹಿಳೆಯೊಬ್ಬರ ವಿಚಾರದಲ್ಲಿ ಇವರ ನಡುವೆ ಗಲಾಟೆಯಾಗಿದ್ದು, ಇದೇ ದ್ವೇಷದಲ್ಲಿ ಅಪಹರಣ ಮತ್ತು ದರೋಡೆ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈಗಾಗಲೇ ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:02 pm, Mon, 25 May 26

Source link

Video: ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ – Kannada News | Dog Runs Off With Bag Allegedly Containing Cash in Bijnor

ಬಿಜ್ನೋರ್, ಮೇ 25: ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಸಾರ್ವಜನಿಕರನ್ನು ಕಂಗಾಲು ಮಾಡುವಂತಹ ವಿಲಕ್ಷಣ ಮತ್ತು ನಂಬಲಾರದ ಘಟನೆಯೊಂದು ನಡೆದಿದೆ. ಇಲ್ಲಿನ ಬೀದಿನಾಯಿಯೊಂದು ಸಾರ್ವಜನಿಕರ ಕಣ್ಣೆದುರೇ ಬರೋಬ್ಬರಿ 1 ಲಕ್ಷ ರೂಪಾಯಿ ನಗದು ಹಣವಿದ್ದ ಬ್ಯಾಗ್‌ ಅನ್ನು ಹೊತ್ತೊಯ್ದಿದೆ.

ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಮತ್ತು ಅವುಗಳ ಕಡಿತದಿಂದ ಮನುಷ್ಯರು ಹೇಗೋ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ಆದರೆ, ಇದೀಗ ನಾಯಿಗಳನ್ನು ಮುಂದಿಟ್ಟುಕೊಂಡು ಹಗಲು ದರೋಡೆ ಮಾಡುವ ಕೆಲವು ವಿಕೃತ ಮನಸ್ಸಿನ ಗ್ಯಾಂಗ್‌ಗಳು ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ. ಈ ಖದೀಮರು ಮನುಷ್ಯರಿಂದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕದಿಯಲು ಬೀದಿನಾಯಿಗಳಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಹಣದ ಬ್ಯಾಗ್ ಕಳೆದುಕೊಂಡ ವ್ಯಕ್ತಿ ತಕ್ಷಣವೇ ನಾಯಿಯ ಹಿಂದೆ ಓಡಿದರಾದರೂ, ಚಾಣಾಕ್ಷ ನಾಯಿ ಹಣದೊಂದಿಗೆ ಮರೆಯಾಗಿದೆ. ಸದ್ಯ ಈ ವಿಚಿತ್ರ ಕಳ್ಳತನದ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಾಣಿಗಳನ್ನು ಈ ರೀತಿ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವ ಕಿಡಿಗೇಡಿಗಳ ಪತ್ತೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ ಎಂ. ದೀಪನ್ – Kannada News | Bhatkal Murinkatte Row: Police Arrests Six, Files Four Cases Amidst Misinformation

ಕಾರವಾರ, ಮೇ 25: ಭಟ್ಕಳದಲ್ಲಿನ ಮೂರಿನ್ ಕಟ್ಟೆ ಮರುನಿರ್ಮಾಣದ ಕುರಿತ ವಿವಾದದಲ್ಲಿ ಆರು ಜನರನ್ನು ಬಂಧಿಸಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕಾರವಾರದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎಂ. ದೀಪನ್ ಮಾಹಿತಿ ನೀಡಿದ್ದಾರೆ. ಹೆದ್ದಾರಿ ವಿಸ್ತರಣೆ ಕಾರಣದಿಂದ ಮೂಲ ಮೂರಿನ್ ಕಟ್ಟೆಯನ್ನು ಸ್ಥಳಾಂತರಿಸಬೇಕಾಗಿತ್ತು, ರಸ್ತೆಯ ಪಕ್ಕದಲ್ಲಿ ಮರುನಿರ್ಮಾಣಕ್ಕೆ ಜಾಗ ನೀಡಲಾಗಿತ್ತು. ಆದರೆ, ಈ ನಿರ್ಮಾಣದ ವಿಡಿಯೋ ವೈರಲ್ ಆಗಿ ತಪ್ಪು ಮಾಹಿತಿ ಹರಡಿದ ಪರಿಣಾಮ ಯುವಕರು ಜಮಾಯಿಸಿ ಗೊಂದಲ ಸೃಷ್ಟಿಸಿದ್ದಾರೆ. ಮೂಲ ಮೂರಿನ್ ಕಟ್ಟೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗಿಲ್ಲ, ಅದು ತನ್ನ ಸ್ಥಳದಲ್ಲಿಯೇ ಸುರಕ್ಷಿತವಾಗಿದೆ ಎಂದು ದೀಪನ್ ಸ್ಪಷ್ಟಪಡಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ, ಸಾರ್ವಜನಿಕರ ಮೇಲೆ ಹಲ್ಲೆ ಹಾಗೂ ಹೆದ್ದಾರಿ ತಡೆಗಟ್ಟಿದ ಸಂಬಂಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸುಳ್ಳು ಸುದ್ದಿಗಳನ್ನು ಹರಡದಂತೆ ಸಾರ್ವಜನಿಕರಿಗೆ ಅವರು ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬದಲಾಗಲಿದ್ದಾರೆ ದರ್ಶನ್ ಕೇಸ್ ವಿಚಾರಣೆ ನಡೆಸುತ್ತಿರುವ ಜಡ್ಜ್; ಕಾರಣ ಇಲ್ಲಿದೆ – Kannada News | Renukaswamy Murder Case: Darshan’s Case Trail Court and Judge Changed

ದರ್ಶನ್-ರೇಣುಕಾಸ್ವಾಮಿ Image Credit source: Darshan Instagram

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ಗೆ (Darshan) ಸದ್ಯಕ್ಕೆ ಜಾಮೀನು ಸೀಗೋದಿಲ್ಲ ಎಂಬುದು ಖಾತ್ರಿಯಾಗಿದೆ. ಮುಂದಿನ ವರ್ಷ ಮೇ ಒಳಗೆ ಪ್ರಕರಣದ ವಿಚಾರಣೆ ಪೂರ್ಣಗೊಳ್ಳದಿದ್ದರೆ ದರ್ಶನ್ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಹೇಳಿದೆ. ಈ ಬೆನ್ನಲ್ಲೇ ಒಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೋರ್ಟ್ ಮತ್ತು ಜಡ್ಜ್ ಬದಲಾಗಲಿದ್ದಾರೆ.

ಕೆಲ ಕೋರ್ಟ್​ಗಳ ಪೊಲೀಸ್ ಠಾಣೆ ವ್ಯಾಪ್ತಿ ಮರು ನಿಗದಿ ಆಗಿದೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಈ ಕೇಸ್ ಸಿಸಿಹೆಚ್ 57ರನಿಂದ ಸಿಸಿಹೆಚ್ 59ನೇ ಕೋರ್ಟ್‌ಗೆ ವರ್ಗಾವಣೆಯಾಗಲಿದೆ. ಸಿಟಿ ಸಿವಿಲ್ ಕೋರ್ಟ್‌ನ ಡೆಪ್ಯುಟಿ ರಿಜಿಸ್ಟ್ರಾರ್ ಈ ಕುರಿತು ಆದೇಶ ಹೊರಡಿಸಿದ್ದು, ಜೂನ್ 1ರಿಂದ ಅಧಿಕೃತವಾಗಿ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಹೊಸದಾಗಿ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಈ ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

ಒಂದು ವರ್ಷದ ಒಳಗಾಗಿ ಈ ಪ್ರಕರಣದ ಎಲ್ಲಾ ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಕಡಕ್ ಸೂಚನೆ ನೀಡಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶದ ಪ್ರತಿಯನ್ನು ದರ್ಶನ್ ಪರ ವಕೀಲರು ಈಗಾಗಲೇ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕೋರ್ಟ್ ವಾರಕ್ಕೆ ಕನಿಷ್ಠ ಎರಡು ಬಾರಿ, ಅಥವಾ ವಾರದಲ್ಲಿ ನಾಲ್ಕು ದಿನಗಳ ಕಾಲ ನಿರಂತರವಾಗಿ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ದರ್ಶನ್​ಗೆ ಸಿಗಲಿಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?

ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಜಾಮೀನು ಅರ್ಜಿ ವಜಾಗೊಂಡಿರುವುದು ದರ್ಶನ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರ ಬೆನ್ನಲ್ಲೇ ಒಂದು ವರ್ಷದವರೆಗೆ ಜಾಮೀನು ಸಿಗುವುದಿಲ್ಲ ಎಂಬುದು ಖಾತ್ರಿಯಾಗಿರುವುದರಂದ ಅವರು ಹಾಗೂ ಅವರ ಕುಟುಂಬ ಆತಂಕದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version