ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ: ಎರಡೂ ಟ್ರಸ್ಟ್‌ಗಳ ವಿರುದ್ಧ ಯತ್ನಾಳ್ ಗಂಭೀರ ಆರೋಪ – Kannada News | Vijayapura MLA Basangouda Patil Yatnal Reacts On Vachanananda Swamiji Expelled And Panchamasali peeta

ವಿಜಯಪುರ, (ಏಪ್ರಿಲ್ 14): ಹರಿಹರ ಪಂಚಮಸಾಲಿ ಗುರುಪೀಠದಿಂದ ವಚನಾನಂದಶ್ರೀ ಉಚ್ಚಾಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪರ ವಿರೋಧಗಳು ವ್ಯಕ್ತವಾಗುತ್ತಿವೆ. ಇನ್ನು ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಪ್ರತಿಕ್ರಿಯಿಸಿದ್ದು, ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ, ಎರಡೂ ಟ್ರಸ್ಟ್‌ಗಳನ್ನು ಖಾಸಗಿ ಆಸ್ತಿ ಮಾಡಿಕೊಂಡಿದ್ದಾರೆ. ಕೂಡಲಸಂಗಮ ಪೀಠಗಳ ಟ್ರಸ್ಟ್​ ನಂಬಿಕೆ ಕಳೆದುಕೊಂಡಿದೆ. ಪ್ರಾಮಾಣಿಕವಾಗಿ ಸಮುದಾಯಕ್ಕಾಗಿ ಕೆಲಸ ಮಾಡುವವರು ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿಂದು ಮಾಧ್ಯಮಗಳಿಗೆ ಮಾತನಾಡಿದ ಯತ್ನಾಳ್, ಟ್ರಸ್ಟ್​ಗಳು ಸರ್ಕಾರವನ್ನು ಬ್ಲ್ಯಾಕ್​ಮೇಲ್​ ಮಾಡುವುದಕ್ಕೆ ಇವೆ. ಬಿ.ಎಸ್​.ಯಡಿಯೂರಪ್ಪ ಸಿಎಂ ಆಗಿದ್ದಾಗ 11 ಕೋಟಿ ರೂ. ಕೊಟ್ಟಿದ್ದರು. ಆದರೆ ಹಣಕಾಸಿನ ದಾಖಲೆಗಳು ನಕಲಿಯಾಗಿವೆ. 2 ಟ್ರಸ್ಟ್​ಗಳ ಮೇಲೆ ಜನರು ನಂಬಿಕೆ ವಿಶ್ವಾಸ ಕಳೆದುಕೊಂಡಿದ್ದಾರೆ. ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರ ಅಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ನನಗೆ ಅವಕಾಶ ನೀಡಲಿಲ್ಲ. ನಮ್ಮದೇ ಸರ್ಕಾರ ಇದ್ದರೂ ಮಾತನಾಡಲು ಅವಕಾಶ ನೀಡಲಿಲ್ಲ. ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಇದ್ದಾಗ ಹಣ ನೀಡಲಾಗಿತ್ತು. ಇವರ ಮನೆ ಬೆಕ್ಕು, ನಾಯಿ ಇವರ ಮಾತು ಕೇಳಲ್ಲ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೂಕ ಇಳಿಕೆ ಮತ್ತು ಹೊಳೆಯುವ ಚರ್ಮಕ್ಕಾಗಿ ಸಮಂತಾ ಮಾಡುತ್ತಾರೆ ಈ 8 ಕಾರ್ಯ – Kannada News | Samantha Ruth Prabhu shared her 8 step morning routine

ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣದ ಸ್ಟಾರ್ ನಟಿ. 16 ವರ್ಷಗಳಿಂದಲೂ ಅವರು ಚಿತ್ರರಂಗದಲ್ಲಿದ್ದಾರೆ. ಸಮಂತಾ ಮೊದಲಿನಿಂದಲೂ ಫಿಟ್​​ನೆಸ್​​ ಒತ್ತು ನೀಡುವ ನಟಿಯಾಗಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಉಂಟಾದ ಅನಾರೋಗ್ಯದ ಬಳಿಕ ಫಿಟ್​​ನೆಸ್ ಅನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದ್ದು ಮಾತ್ರವೇ ಅಲ್ಲದೆ, ಫಿಟ್​​ನೆಸ್​ ಬಗ್ಗೆ ಖುದ್ದು ಜಾಗೃತಿ ಮೂಡಿಸಲು ಆರಂಭಿಸಿದರು. ಪಾಡ್​ಕಾಸ್ಟ್​​ಗಳ್ನು ಮಾಡಿದರು. ಬೇರೆಯವರ ಪಾಡ್​​ಕಾಸ್ಟ್​​ಗೆ ಹೋಗಿ ಫಿಟ್​​ನೆಸ್​ನ ಅವಶ್ಯಕತೆಗಳ ಬಗ್ಗೆ ಹೇಳಿದರು. ಇದೀಗ ಸಮಂತಾ, ತಾವು ಫಿಟ್ ಆಗಿರಲು ಮತ್ತು ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಮಾಡುವ ಎಂಟು ಕಾರ್ಯಗಳನ್ನು ವಿವರಿಸಿದ್ದಾರೆ. ಇದನ್ನು ಅವರು ‘ಪವರ್ ಮಾರ್ನಿಂಗ್’ ಎಂದು ಕರೆದಿದ್ದಾರೆ. ಆ ಎಂಟು ಸ್ಟೆಪ್ಸ್ ಹೀಗಿವೆ…

ಸಮಂತಾ ಪ್ರತಿದಿನ ಪಾಲಿಸುವ ಎಂಟು ಸ್ಟೆಪ್ಸ್

  • ಬೆಳಿಗ್ಗೆ ಎದ್ದ ತಕ್ಷಣ ಮೊದಲ ಒಂದು ಗಂಟೆ ಕಾಲ ಮೊಬೈಲ್ ಫೋನ್, ಇಮೇಲ್ ಅಥವಾ ಸುದ್ದಿಯಿಂದ ದೂರವಿರಿ. ಇದು ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಸಮಂತಾ ಮೊಬೈಲ್ ಅನ್ನು ಕಡಿಮೆ ಬಳಸುತ್ತಾರಂತೆ.
  • ಎದ್ದ ಬಳಿಕ ಕನಿಷ್ಠ ಐದು ನಿಮಿಷಗಳ ಕಾಲ ಪ್ರಶಾಂತವಾಗಿ ಕುಳಿತು ಆಳವಾಗಿ ಉಸಿರಾಡಿ. ಇದು ನರಮಂಡಲವನ್ನು ಶಾಂತಗೊಳಿಸುತ್ತದೆ ಮತ್ತು ದೇಹವು ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ.
  • ಎದ್ದ 10 ನಿಮಿಷಗಳ ಒಳಗೆ ಮುಖದ ಮೇಲೆ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಿ. ಇದು ದೇಹದ ಜೈವಿಕ ಗಡಿಯಾರವನ್ನು (Body Clock) ಸರಿಪಡಿಸುತ್ತದೆ. ಸಮಂತಾ ಇದನ್ನು ತಪ್ಪದೇ ಮಾಡುತ್ತಾರಂತೆ.
  • ಬೆಳಿಗ್ಗೆ ಉಗುರುಬೆಚ್ಚಗಿನ ನೀರಿಗೆ ಲಿಂಬೆ ರಸ, ಹಳದಿ, ಆಪಲ್ ಸೈಡರ್ ವಿನೆಗರ್ ಮತ್ತು ಸ್ವಲ್ಪ ಆಲಿವ್ ಎಣ್ಣೆಯನ್ನು ಬೆರೆಸಿ ಕುಡಿಯಿರಿ. ಇದು ದೇಹದ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುವ ಪ್ರೋಟೀನ್ ಮತ್ತು ಫೈಬರ್ ಭರಿತ ಉಪಹಾರವನ್ನು ಸೇವಿಸಿ. ಇದರಿಂದ ಜಂಕ್ ಫುಡ್ ತಿನ್ನುವ ಬಯಕೆ ಕಡಿಮೆಯಾಗುತ್ತದೆ. ಜಂಕ್ ಫುಡ್ ಅನ್ನು ತಿನ್ನಲೇಬೇಡಿ ಎಂಬುದು ಸಮಂತಾರ ಮನವಿ.
  • ಬೆಳಿಗ್ಗೆ 11 ಗಂಟೆಯೊಳಗೆ ಯಾವುದಾದರೊಂದು ವ್ಯಾಯಾಮ ಅಥವಾ ಕನಿಷ್ಠ ದೈಹಿಕ ಚಟುವಟಿಕೆಯನ್ನು ಮಾಡಿ. ಇದರಿಂದ ದೇಹ ಫಿಟ್ ಆಗಿರುತ್ತದೆ. ಸಮಂತಾ ದಿನದ ಎರಡು ಗಂಟೆ ಜಿಮ್​​ನಲ್ಲಿ ಕಳೆಯುತ್ತಾರೆ.
  • ಉಪಹಾರ ಸೇವಿಸಿದ ನಂತರವೇ ಕಾಫಿ ಅಥವಾ ಟೀ ಕುಡಿಯಿರಿ. ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವನೆಯನ್ನು ತಪ್ಪಿಸಿ.
  • ಅಂದು ನೀವು ಸಾಧಿಸಬೇಕಾದ ಕೆಲಸಗಳನ್ನು ಮೊದಲೇ ನಿರ್ಧರಿಸಿ ಬರೆದಿಡಿ. ಇದು ಮೆದುಳನ್ನು ಅನಗತ್ಯ ವಿಷಯಗಳತ್ತ ಹೋಗದಂತೆ ತಡೆದು ಏಕಾಗ್ರತೆ ಹೆಚ್ಚಿಸುತ್ತದೆ.

ಸಮಂತಾ ಅವರು ಈ ಹಂತಗಳನ್ನು ಕನಿಷ್ಠ 21 ದಿನಗಳ ಕಾಲ ಸತತವಾಗಿ ಪಾಲಿಸುವಂತೆ ಸಲಹೆ ನೀಡಿದ್ದಾರೆ. ಇದು ಕೇವಲ ತೂಕ ಇಳಿಕೆಗೆ ಮಾತ್ರವಲ್ಲದೆ, ಮಾನಸಿಕ ಆರೋಗ್ಯ ಮತ್ತು ಚರ್ಮದ ಕಾಂತಿಗೂ ಸಹಕಾರಿ ಎಂದು ಅವರು ತಿಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೌಲಿಂಗ್ ನೀಡುವುದು ಅಪಾಯಕಾರಿ… ಜಡೇಜಾಗೆ ಓವರ್​ ನೀಡದ ಪರಾಗ್..! – Kannada News | Why ravindra jadeja is not bowled Against SRH

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸೋಲನುಭವಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಆರ್​ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಹೆಚ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.

ಅದರಲ್ಲೂ ನಾಯಕ ಇಶಾನ್ ಕಿಶನ್ 44 ಎಸೆತಗಳಲ್ಲಿ 91 ರನ್ ಬಾರಿಸಿದರೆ, ಅನುಭವಿ ದಾಂಡಿಗ ಹೆನ್ರಿಕ್ ಕ್ಲಾಸೆನ್ 26 ಎಸೆತಗಳಲ್ಲಿ 40 ರನ್​ ಚಚ್ಚಿದರು. ಈ ಇಬ್ಬರು ಬ್ಯಾಟರ್​ಗಳ ಸಿಡಿಲಬ್ಬರದ ಹೊರತಾಗಿಯೂ ರಿಯಾನ್ ಪರಾಗ್ ಅನುಭವಿ ಸ್ಪಿನ್ ಆಲ್​ರೌಂಡರ್ ರವೀಂದ್ರ ಜಡೇಜಾಗೆ ಚೆಂಡು ನೀಡಿರಲಿಲ್ಲ ಎಂಬುದೇ ಅಚ್ಚರಿ.

ಅಂದರೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಒಂದೇ ಒಂದು ಓವರ್ ಎಸೆದಿರಲಿಲ್ಲ. ಇತ್ತ ಎಸ್​ಆರ್​ಹೆಚ್ ಬ್ಯಾಟರ್​ಗಳು ಅಬ್ಬರಿಸುತ್ತಿದ್ದರೂ ರಿಯಾನ್ ಪರಾಗ್​, ಜಡೇಜಾಗೆ ಓವರ್ ನೀಡಿಲ್ಲ ಏಕೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.  ಈ ಪ್ರಶ್ನೆಗೆ ಖುದ್ದು ರಿಯಾನ್ ಪರಾಗ್ ಸ್ಪಷ್ಟನೆ ನೀಡಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್ ಪರ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಇತ್ತ ಇಶಾನ್ ಎಡಗೈ ಬ್ಯಾಟರ್ ಆಗಿರುವುದರಿಂದ, ಎಡಗೈ ಸ್ಪಿನ್ನರ್ ಆದ ರವೀಂದ್ರ ಜಡೇಜಾ ಅವರಿಗೆ ಬೌಲಿಂಗ್ ನೀಡುವುದು ಅಪಾಯಕಾರಿ ಎಂದು ಭಾವಿಸಿದೆ. ಹೀಗಾಗಿ ಜಡೇಜಾಗೆ ಓವರ್​ ನೀಡಿ ರನ್ ಬಿಟ್ಟುಕೊಡಲು ನಾನು ಬಯಸಲಿಲ್ಲ ಎಂದು ರಿಯಾನ್ ಪರಾಗ್ ಹೇಳಿದ್ದಾರೆ.

ಅಚ್ಚರಿಯ ವಿಷಯವೆಂದರೆ, ರವೀಂದ್ರ ಜಡೇಜಾ ಅವರಿಗೆ ಬೌಲಿಂಗ್ ನೀಡುವ ಬದಲು ರಿಯಾನ್ ಪರಾಗ್ ಅವರೇ ಒಂದು ಓವರ್ ಬೌಲಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ರವಿ ಬಿಷ್ಣೋಯ್ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಇವೆಲ್ಲವೂ ಕೇವಲ ಒಂದು ‘ಕ್ಷಣಿಕ ನಿರ್ಧಾರ’ ಆಗಿತ್ತು ಎಂದು ರಿಯಾನ್ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು  ಹೈದರಾಬಾದ್‌ನ ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್‌ಗೆ ಪೂರಕವಾಗಿತ್ತು. ಸ್ಪಿನ್ನರ್‌ಗಳಿಗೆ ಹೆಚ್ಚಿನ ತಿರುವು ಸಿಗುತ್ತಿರಲಿಲ್ಲ. ಇಂತಹ ‘ಬೆಲ್ಟರ್’ ಪಿಚ್‌ನಲ್ಲಿ ಜಡೇಜಾ ಅವರ ವೇಗದ ಸ್ಪಿನ್ ಹೆಚ್ಚು ಎಫೆಕ್ಟಿವ್ ಆಗದಿರಬಹುದು ಎಂಬ ಭಯ ಟೀಮ್ ಮ್ಯಾನೇಜ್‌ಮೆಂಟ್‌ನಲ್ಲಿತ್ತು. ಹೀಗಾಗಿ ಅವರನ್ನು ಬೌಲಿಂಗ್​ನಿಂದ ಹೊರಗಿಡಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

ಟೀಕೆಗಳ ಸುರಿಮಳೆ:

ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಸೇರಿದಂತೆ ಹಲವು ತಜ್ಞರು ರಿಯಾನ್ ಪರಾಗ್ ಹಾಗೂ ರಾಜಸ್ಥಾನ್ ರಾಯಲ್ಸ್ ಟೀಮ್ ಮ್ಯಾನೇಜ್ಮೆಂಟ್​ನ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.

“ವಿಶ್ವದ ಶ್ರೇಷ್ಠ ಆಲ್-ರೌಂಡರ್ ಒಬ್ಬರು ತಂಡದಲ್ಲಿದ್ದಾಗ, ಎದುರಾಳಿಗಳು 200ಕ್ಕೂ ಹೆಚ್ಚು ರನ್ ಗಳಿಸುತ್ತಿದ್ದರೂ ಅವರಿಗೆ ಬೌಲಿಂಗ್ ನೀಡದಿರುವುದು ದೊಡ್ಡ ತಪ್ಪು,” ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಟಿಂಗ್‌ನಲ್ಲಿ ಮಿಂಚಿದ ‘ಜಡ್ಡು’

ಬೌಲಿಂಗ್‌ನಲ್ಲಿ ಅವಕಾಶ ಸಿಗದಿದ್ದರೂ, ಬ್ಯಾಟಿಂಗ್‌ನಲ್ಲಿ ರವೀಂದ್ರ ಜಡೇಜಾ ತಮ್ಮ ತಾಕತ್ತು ಪ್ರದರ್ಶಿಸಿದರು. ಕೇವಲ 32 ಎಸೆತಗಳಲ್ಲಿ 45 ರನ್ ಸಿಡಿಸುವ ಮೂಲಕ ರಾಜಸ್ಥಾನ್ ರಾಯಲ್ಸ್​ ತಂಡವನ್ನು ಗೆಲುವಿನ ಹತ್ತಿರ ತರಲು ಪ್ರಯತ್ನಿಸಿದರು. ಆದರೆ ತಂಡ ಅಂತಿಮವಾಗಿ ಗುರಿ ತಲುಪಲು ವಿಫಲವಾಯಿತು.

ಇದೀಗ ರಾಜಸ್ಥಾನ್ ರಾಯಲ್ಸ್​ ತಂಡದ ಸೋಲಿಗೆ ನಾಯಕ ರಿಯಾನ್ ಪರಾಗ್ ತೆಗೆದುಕೊಂಡ ನಿರ್ಧಾರವೇ ಕಾರಣ ಎನ್ನಲಾಗುತ್ತಿದೆ. ಅಂದರೆ ಅನುಭವಿ ಆಟಗಾರನಾಗಿ ರವೀಂದ್ರ ಜಡೇಜಾ ಅವರನ್ನು ಬಳಸಿಕೊಳ್ಳದೇ ಇರುವುದರಿಂದ ಸನ್​ರೈಸರ್ಸ್ ಹೈದರಾಬಾದ್ ತಂಡ 216 ರನ್​ಗಳ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ RCB

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 19 ಓವರ್​ಗಳಲ್ಲಿ 159 ರನ್​​ಗಳಿಸಿ ಆಲೌಟ್ ಆಗುವ ಮೂಲಕ 57 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

Source link

ಗರ್ಭದಿಂದ ಹೊರಬಂದ ಶಿಶುವನ್ನು ಬಲವಾಗಿ ಎಳೆದ ಆಶಾ ಕಾರ್ಯಕರ್ತೆ, ಮಗು ಎರಡು ತುಂಡಾಯ್ತು, ತಲೆ ಗರ್ಭದಲ್ಲೇ ಉಳೀತು – Kannada News | Ambulance Delivery Horror: Baby Decapitated in UP Due to ASHA worker’s Negligence

ಮಗು-ಸಾಂದರ್ಭಿಕ ಚಿತ್ರImage Credit source: Daily Mom

ಬಸ್ತಿ, ಏಪ್ರಿಲ್ 14: ವೈದ್ಯಕೀಯ ಲೋಕವೇ ತಲೆತಗ್ಗಿಸುವಂತಹ, ಮನುಕುಲವೇ ಬೆಚ್ಚಿಬೀಳುವಂತಹ ಘೋರ ಘಟನೆಯೊಂದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಆಂಬ್ಯುಲೆನ್ಸ್ ಸಿಬ್ಬಂದಿಯ ಅತಿಯಾದ ಆತ್ಮವಿಶ್ವಾಸ ಮತ್ತು ಅಮಾನವೀಯ ನಿರ್ಲಕ್ಷ್ಯಕ್ಕೆ ಏಳು ತಿಂಗಳ ಹಸುಗೂಸು ಬಲಿಯಾಗಿದ್ದಲ್ಲದೆ, ಮಗುವಿನ ಕತ್ತರಿಸಿದ ತಲೆ ತಾಯಿ(Mother)ಯ ಗರ್ಭದಲ್ಲೇ ಉಳಿದ ಭೀಕರ ಘಟನೆ ವರದಿಯಾಗಿದೆ.

ಏಳು ತಿಂಗಳ ಗರ್ಭಿಣಿ ಪ್ರೇಮಾ ದೇವಿಗೆ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಕುದ್ರಾಹಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿತ್ತು. ಆಸ್ಪತ್ರೆಗೆ ತಲುಪಲು ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ, ಮಹಿಳೆಯ ನೋವು ತೀವ್ರಗೊಂಡಿದೆ.

ಆಂಬ್ಯುಲೆನ್ಸ್‌ನಲ್ಲಿದ್ದ ಆಶಾ ಕಾರ್ಯಕರ್ತೆ, ವೈದ್ಯರಿಗಾಗಿ ಕಾಯುವ ಬದಲು ತಾನೇ ಹೆರಿಗೆ ಮಾಡಿಸಲು ಮುಂದಾಗಿದ್ದಾಳೆ. ಮಹಿಳೆಗೆ ನೋವು ನಿವಾರಕ ಇಂಜೆಕ್ಷನ್ ನೀಡಿ, ಬಲವಂತವಾಗಿ ಸಾಮಾನ್ಯ ಹೆರಿಗೆ (Normal Delivery) ಮಾಡಲು ಪ್ರಯತ್ನಿಸಿದ್ದಾಳೆ. ಈ ಸಂದರ್ಭದಲ್ಲಿ ಮಗುವಿನ ದೇಹ ಹೊರಬಂದರೂ, ತಲೆ ಮಾತ್ರ ಗರ್ಭದ ಒಳಗೇ ಸಿಲುಕಿಕೊಂಡಿದೆ. ಸಿಬ್ಬಂದಿ ಬಲವಂತವಾಗಿ ಎಳೆದ ಪರಿಣಾಮ, ಮಗುವಿನ ದೇಹ ಮತ್ತು ತಲೆ ಬೇರ್ಪಟ್ಟು, ದೇಹ ಮಾತ್ರ ಕೈಗೆ ಬಂದಿದೆ!

ತಮ್ಮ ತಪ್ಪಿನಿಂದ ಮಗು ಸಾವನ್ನಪ್ಪಿದ್ದನ್ನು ಕಂಡು ಭಯಭೀತರಾದ ಆರೋಗ್ಯ ಕಾರ್ಯಕರ್ತರು, ಸತ್ಯವನ್ನು ಮರೆಮಾಚಿ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿಂದ ಅವರನ್ನು ಜಿಲ್ಲಾ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು.

ಮತ್ತಷ್ಟು ಓದಿ:

ಮನೆಯಲ್ಲಿ ಗರ್ಭಿಣಿ ಹೆಂಡತಿಗೆ ಬೇರೆ ಜಾತಿ ಎಂದು ಕಿರುಕುಳ: ಹೆತ್ತವರ ಮೇಲೆ ದೂರು ನೀಡಿದ ಮಗ

ಜಿಲ್ಲಾಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಮಾಡಿದ ವೈದ್ಯರು ದಂಗಾಗಿ ಹೋಗಿದ್ದಾರೆ. ತಾಯಿಯ ಗರ್ಭದೊಳಗೆ ಮಗುವಿನ ಕತ್ತರಿಸಿದ ತಲೆ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ತಲೆಯನ್ನು ಹೊರತೆಗೆದಿದ್ದಾರೆ. ಅದೃಷ್ಟವಶಾತ್ ತಾಯಿ ಪ್ರಸ್ತುತ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಆದರೆ, ಇಷ್ಟು ದೊಡ್ಡ ಅನಾಹುತ ನಡೆದರೂ ಜಿಲ್ಲಾಡಳಿತ ಮಾತ್ರ ಇನ್ನೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:14 pm, Tue, 14 April 26

Source link

ವೇಗವಾಗಿ ಹೋಗುತ್ತಿದ್ದ ಕ್ಯಾಂಟರ್ ಟೈರ್ ಸ್ಫೋಟ! ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಾಯ – Kannada News | Dwarlu Bridge Accident: KSRTC Bus Collision After Canter Tire Burst Injures Passengers

ತುಮಕೂರು, ಏ.14: ಇಂದು (ಮಂಗಳವಾರ) ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಕ್ಯಾಂಟರ್ ವಾಹನ ವೇಗವಾಗಿ ಚಲಿಸುತ್ತಿದ್ದಾಗ ದ್ವಾರಾಳು ಬ್ರಿಡ್ಜ್ ಸಮೀಪ ಟೈರ್ ಸ್ಫೋಟಗೊಂಡಿದೆ. ಈ ವೇಳೆ ಕ್ಯಾಂಟರ್‌ನ ಹಿಂದೆಯೇ ಬರುತ್ತಿದ್ದ ಸರ್ಕಾರಿ ಬಸ್‌ಗೆ ನಿಯಂತ್ರಣ ತಪ್ಪಿ ಕ್ಯಾಂಟರ್‌ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗ ಜಖಂಗೊಂಡಿದ್ದು, ಬಸ್‌ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ತುಂಡು ಭೂಮಿಗಾಗಿ ದಾಯಾದಿಗಳ ಕಲಹ: ಅಣ್ಣನ ಕೊಲೆಗೆ ಪ್ರತೀಕಾರವಾಗಿ ಆರೋಪಿಗಳ ಮನೆಗೆ ಬೆಂಕಿ ಹಚ್ಚಿದ ತಮ್ಮ! – Kannada News | Mavinamatti Land Feud: Yadgir Murder Triggers Arson, Revenge Cycle Continues

ಯಾದಗಿರಿ, ಏ.14: ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಕೇವಲ ಎರಡು ಎಕರೆ ಜಮೀನಿಗಾಗಿ ಶುರುವಾದ ಜಗಳ ಈಗ ಹತ್ತಾರು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಜಮೀನು ವಿವಾದಕ್ಕೆ ಯುವಕನೋರ್ವನ ಭೀಕರ ಕೊಲೆಯಾಗಿದ್ದರೆ, ಅದರ ಪ್ರತೀಕಾರವಾಗಿ ಆರೋಪಿಗಳ ಮನೆಗೆ ಬೆಂಕಿ ಹಚ್ಚಿದ ಕೊಲೆಯಾದವನ ಸಹೋದರ ಕೂಡ ಈಗ ಜೈಲು ಪಾಲಾಗಿದ್ದಾನೆ. ಮಲ್ಲಪ್ಪ ಮತ್ತು ಅವರ ಅಣ್ಣ ಹನುಮಂತರಾಯನ ಕುಟುಂಬಗಳ ಮಧ್ಯೆ ಕಳೆದ ನಾಲ್ಕು ವರ್ಷಗಳಿಂದ 2 ಎಕರೆ ಜಮೀನಿನ ದಾರಿ ವಿಚಾರವಾಗಿ ನಿರಂತರ ಜಗಳ ನಡೆಯುತ್ತಿತ್ತು.

ಹಳೆ ದ್ವೇಷದ ಹಿನ್ನೆಲೆಯಲ್ಲಿ ಹನುಮಂತರಾಯನ ಕುಟುಂಬ ಮತ್ತು ಸಂಬಂಧಿಕರು ಸೇರಿ 27 ವರ್ಷದ ಪರಮೇಶ್ವರ ಎಂಬಾತನನ್ನು ತಲ್ವಾರ್ ಮತ್ತು ದೊಣ್ಣೆಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದರು. ಈ ವೇಳೆ ಅಣ್ಣನನ್ನು ಕಾಪಾಡಲು ಹೋದ ರೇವಣಸಿದ್ದನಿಗೂ ಗಂಭೀರ ಗಾಯಗಳಾಗಿದ್ದವು. ಘಟನೆ ನಡೆದ ಒಂದೇ ದಿನದಲ್ಲಿ ಕೆಂಭಾವಿ ಪೊಲೀಸರು ಪ್ರಮುಖ ಆರೋಪಿಗಳಾದ ಪರಮಣ್ಣ, ದೇವಿಂದ್ರಪ್ಪ, ಚನ್ನಪ್ಪ ಮತ್ತು ಮಹಾದೇವಪ್ಪ ಸೇರಿ ನಾಲ್ವರನ್ನು ಬಂಧಿಸಿದ್ದರು.

ಇದನ್ನೂ ಓದಿ: ದಾವಣಗೆರೆ ದಂಗಲ್: ಸಿಎಂ ಆಪ್ತ ನಸೀರ್ ತಲೆದಂಡ, ಸಚಿವ ಜಮೀರ್​ಗೂ ತೂಗುತ್ತಿ

ಅಣ್ಣನ ಸಾವಿನಿಂದ ಕೆರಳಿದ್ದ ಸಹೋದರ ರೇವಣಸಿದ್ದ, ಆರೋಪಿಗಳ ಕುಟುಂಬ ಊರು ಬಿಟ್ಟಿದ್ದ ಸಮಯ ಸಾಧಿಸಿ ಅವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅಗ್ನಿಕಾಂಡದಲ್ಲಿ ಮನೆಯಲ್ಲಿದ್ದ ಧಾನ್ಯಗಳು, ಬಟ್ಟೆ ಬರೆ ಸೇರಿ ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ರೇವಣಸಿದ್ದನನ್ನು ಕೂಡ ಪೊಲೀಸರು ಬಂಧಿಸಿದ್ದು, ಅಣ್ಣನ ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬದ ಮತ್ತೊಬ್ಬ ಸದಸ್ಯ ಈಗ ಕಂಬಿ ಎಣಿಸುವಂತಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ದಂಗಲ್​, ಕಾಂಗ್ರೆಸ್ ಕಂಗಾಲು: ‘ಕೈ’ಕೊಡ್ತಾ ಉಪಚುನಾವಣೆ ರಿಸಲ್ಟ್? – Kannada News | Davanagere South By Election Turmoil: Why Congress Sacked Naseer Ahmed, Jabbar Resigned, Know complete details here

ಕರ್ನಾಟಕ ಕಾಂಗ್ರೆಸ್ ಬಿಕ್ಕಟ್ಟು (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಏಪ್ರಿಲ್ 14: ದಾವಣಗೆರೆ (Davanagere) ದಕ್ಷಿಣದ ಉಪಚುನಾವಣೆಯಲ್ಲಿನ ಒಳಪೆಟ್ಟು ಈಗ ಕರ್ನಾಟಕ ಕಾಂಗ್ರೆಸ್​ನ (Congress) ಕೆಲ ನಾಯಕರಿಗೆ ಸಂಕಷ್ಟ ತಂದಿಡುತ್ತಿದೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್​ ರಾಜೀನಾಮೆ ಬೆನ್ನಲ್ಲೇ ನಸೀರ್​ ಅಹ್ಮದ್​ಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಸ್ವತಃ ಹೈಕಮಾಂಡ್​ ಸೂಚನೆ ನೀಡಿದರೂ ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್​​ರನ್ನು ಹುದ್ದೆಯಿಂದ ಬಿಡುಗಡೆಗೊಳಿಸುವ ಮೂಲಕ ಹೈಕಮಾಂಡ್ ತಲೆದಂಡದ ರುಚಿ ತೋರಿಸಿದೆ.

ಅಲ್ಪಸಂಖ್ಯಾತ ಮತಗಳು ಏನಿದ್ದರೂ ಕಾಂಗ್ರೆಸ್​ಗೇ ಸಿಗುತ್ತವೆ ಎಂಬ ಮಾತು ರಾಜಕೀಯ ವಲಯದಲ್ಲಿ ಜನಜನಿತ. ಆದರೆ, ಉಪಚುನಾವಣೆಯ ನಂತರ ಫಲಿತಾಂಶ ಬರುವುದಕ್ಕೂ ಮುನ್ನವೇ ಆಡಳಿತಾರೂಢ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಉಪಚುನಾವಣೆ ಘೋಷಣೆಯಾದ ನಂತರ ಏನೇನಾಯ್ತು ಎಂಬ ಸಮಗ್ರ ವಿವರ ಇಲ್ಲಿದೆ.

ಟಿಕೆಟ್​ಗಾಗಿ ಪೈಪೋಟಿ, ಅಲ್ಪಸಂಖ್ಯಾತರ ಕೈತಪ್ಪಿದ ಚಾನ್ಸ್

ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಗೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರು ಹಾಗೂ ಅಲ್ಪಸಂಖ್ಯಾತ ನಾಯಕ ಸಾಧಿಕ್ ಪೈಲ್ವಾನ್ ಮಧ್ಯೆ ಜಿದ್ದಾಜಿದ್ದಿ ಮೂಡಿತ್ತು. ಕೊನೆಯ ಕ್ಷಣದಲ್ಲಿ ಟಿಕೆಟ್ ಸಮರ್ಥ್ ಪಾಲಾಯಿತು. ಇದರಿಂದ ಅಲ್ಪಸಂಖ್ಯಾತ ಮುಖಂಡರು ರೊಚ್ಚಿಗೆದ್ದಿದ್ದರು. ಸಾಧಿಕ್ ಪೈಲ್ವಾನ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯುವ ದಿನ ಮುಕ್ತಾಯವಾದ ನಂತರ ಸಿಎಂ ಸಿದ್ದರಾಮಯ್ಯ ಮತ್ತು ಇತರ ಮುಖಂಡರು ಯಶಸ್ವಿಯಾಗಿದ್ದರು. ಆದರೂ ಅಲ್ಪಸಂಖ್ಯಾತರ ಆಕ್ರೋಶವನ್ನು ಸಂಪೂರ್ಣ ತಣ್ಣಗಾಗಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿಲ್ಲವೇ ಎಂಬ ಅನುಮಾನ ಚುನಾವಣಾ ಪ್ರಚಾರದ ವೇಳೆ ಬಲವಾಗಿತ್ತು.

ಪ್ರಚಾರದಲ್ಲಿ ನಿರಾಸಕ್ತಿ?

ಈ ಬಾರಿ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರು ಪಾಠ ಕಲಿಸಲಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣ ಸೇರಿದಂತೆ ಚುನಾವಣಾ ಕಣದಲ್ಲೂ ಕೇಳಿಬಂದಿತ್ತು. ಕೊನೆಯ ಕ್ಷಣದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರಚಾರಕ್ಕೆ ತೆರಳಿದ್ದರು.

ಮತದಾನ ಮುಗಿಯುತ್ತಿದ್ದಂತೆಯೇ ಬೇಗುದಿ ಸ್ಫೋಟ

ಉಪಚುನಾವಣೆಯ ಮತದಾನ ಮುಗಿದ ನಂತರ ಅಲ್ಪಸಂಖ್ಯಾತ ನಾಯಕರ ಬೇಗುದಿ ಸ್ಪೋಟಗೊಂಡಿತು. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದರು. ಇದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಂಗೀಕರಿಸಿದ್ದು, ಅದರ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ರಾಜೀನಾಮೆಗೆ ಖುದ್ದು ಹೈಕಮಾಂಡ್ ಸೂಚಿಸಿತ್ತು. ಆದರೂ ಅವರು ರಾಜೀನಾಮೆ ನೀಡಿರಲಿಲ್ಲ. ಇದೀಗ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.

ಜಬ್ಬಾರ್ ಪ್ರಚಾರಕ್ಕೆ ಹೋಗದ್ದೇಕೆ? ಜಮೀರ್ ಹೇಳಿದ್ದೇನು?

ಸಂವಹನದ ಕೊರತೆ, ಬೇಸರದಿಂದ ಮನನೊಂದು ಜಬ್ಬಾರ್ ಮನೆಯಲ್ಲೇ ಉಳಿದಿದ್ದರು ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ. ಅಲ್ಲದೆ, ಅನಾರೋಗ್ಯವೂ ಇದಕ್ಕೆ ಕಾರಣ ಎಂದಿದ್ದಾರೆ. ಪಕ್ಷದ ಅಭ್ಯರ್ಥಿಯ ಗೆಲುವು ಮುಖ್ಯ ಎಂದು ಜಬ್ಬಾರ್‌ಗೆ ಮನವಿ ಮಾಡಿದ್ದರೂ, ಅಭ್ಯರ್ಥಿ ಸಮರ್ಥ್ ತಂದೆ ಎಸ್​ಎಸ್ ಮಲ್ಲಿಕಾರ್ಜುನ ಪಕ್ಕದ ಮನೆಗೇ ಬಂದು ತಮ್ಮ ಮನೆಗೆ ಭೇಟಿ ನೀಡಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಜಮೀರ್ ತಿಳಿಸಿದ್ದಾರೆ.

ನಸೀರ್​ಗೆ ಬಾಗಲಕೋಟೆ ಜವಾಬ್ದಾರಿ ವಹಿಸಿದ್ದ ಸಿಎಂ

ನಸೀರ್ ಅಹ್ಮದ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆ ಉಪಚುನಾವಣೆಯ ಜವಾಬ್ದಾರಿ ವಹಿಸಿದ್ದರು. ನಸೀರ್ ಅಹ್ಮದ್ ಹತ್ತು ದಿನಗಳ ಕಾಲ ಬಾಗಲಕೋಟೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ದಾವಣಗೆರೆಗೆ ಬಂದು ಹೋಗಲು ಅನುಮತಿ ಕೇಳಿದಾಗ, ಅಲ್ಲಿಯೇ ಉಳಿದು ಕೆಲಸ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದ್ದರು. ಹೀಗಾಗಿ ಅವರು ದಾವಣಗೆರೆ ಪ್ರಚಾರಕ್ಕೆ ಹೋಗಲು ಸಾಧ್ಯವಿರಲಿಲ್ಲ ಎಂದು ಜಮೀರ್ ಹೇಳಿದ್ದಾರೆ.

ತಡರಾತ್ರಿ ಮನೆಯ ಬಳಿ ಬೆಂಬಲಿಗರ ಹೈಡ್ರಾಮಾ, ಬೆಳಗ್ಗೆ ತಲೆದಂಡ!

ಬೆಂಗಳೂರಿನ ನಸೀರ್ ಅಹ್ಮದ್ ನಿವಾಸದಲ್ಲಿ ಸೋಮವಾರ ರಾತ್ರಿ ಬೆಂಬಲಿಗರು ಸೇರಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಅದಾದ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್​ ರನ್ನು ಬಿಡುಗಡೆ ಮಾಡಲಾಗಿದೆ.

ಸಚಿವ ಜಮೀರ್​ಗೆ ಸಿಎಂ ಸಿದ್ದರಾಮಯ್ಯ ತುರ್ತು ಬುಲಾವ್

ಒಂದೆಡೆ ನಸೀರ್​ ತಲೆದಂಡವಾಗುತ್ತಿದ್ದಂತೆಯೇ ಸಿಎಂ ನಿವಾಸ ಕಾವೇರಿಗೆ ಆಪ್ತ ಸಚಿವರು ದೌಡಾಯಿಸಿದ್ದಾರೆ. ಹೆಚ್.ಸಿ.ಮಹದೇವಪ್ಪ, ಭೈರತಿ ಸುರೇಶ್ ಹಾಗೂ ಪ್ರಿಯಾಂಕ್ ಖರ್ಗೆ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಭಾರೀ ಕುತೂಹಲ ಹುಟ್ಟಿಸಿದೆ. ಈ ಮಧ್ಯೆ ಸಿಎಂ ತುರ್ತು ಬುಲಾವ್ ನೀಡಿದ್ದಕ್ಕೆ ಜಮೀರ್​ ಕೂಡ ಸಿಎಂ ನಿವಾಸಕ್ಕೆ ಭೇಟಿ ನೀಡಿ ಕೆಲಹೊತ್ತು ಚರ್ಚಿಸಿದ್ದಾರೆ. ಅಲ್ಲದೆ, ಸಂಜೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಯಿದೆ.

ಇನ್ನು ದಾವಣಗೆರೆ ಟಿಕೆಟ್ ವಿಚಾರವಾಗಿ ಮಾತಾಡಿದ ಜಮೀರ್, ಮೊದಲು ಜಬ್ಬಾರ್​ಗೆ ಟಿಕೆಟ್ ಕೇಳಿದ್ದು ನಿಜ. ಆದರೆ ಅವರು ಎಂಎಲ್​ಸಿ ಆದ ಕಾರಣ ಕೈಬಿಟ್ಟು ಇನ್ನುಳಿದ ಏಳರಲ್ಲಿ ಒಬ್ಬರಿಗೆ ಟಿಕೆಟ್ ಕೇಳಿದ್ದೆವು. ಅದೂ ಆಗಿರಲಿಲ್ಲ. ಕೊನೆಗೆ ಬೇಸರ ಹಾಗೂ ನಿರ್ಲಕ್ಷ್ಯ, ಅನಾರೋಗ್ಯದ ಕಾರಣ ಜಬ್ಬಾರ್ ಪ್ರಚಾರಕ್ಕೆ ಹೋಗಿರಲಿಲ್ಲ ಎಂದು ಹೇಳಿದ್ದಾರೆ.

ಸಿಎಂ ಆಪ್ತವಲಯದವರ ತಲೆದಂಡ ಇದೇ ಮೊದಲಲ್ಲ!

ಈ ಹಿಂದೆ ಬೆಂಗಳೂರಿನಲ್ಲಿ ಆರ್​ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ್ದ ಕಾಲ್ತುಳಿತ ನಂತರ ಆಗ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜು ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿತ್ತು. ಇದೀಗ ನಸೀರ್ ಅಹ್ಮದ್ ಸರದಿ. ಇದರೊಂದಿಗೆ ಪಕ್ಷಕ್ಕೆ, ಸರ್ಕಾರಕ್ಕೆ ದೊಡ್ಡಮಟ್ಟದ ತಲೆನೋವಾದ ಸಂದರ್ಭದಲ್ಲಿ ಅದು ಮತ್ತೆ ಸಿಎಂ ಬುಡಕ್ಕೇ ಬಂದಂತಾಗಿದೆ.

ಇದನ್ನೂ ಓದಿ: ಜಬ್ಬಾರ್, ನಸೀರ್ ಅಹ್ಮದ್​ ರಾಜೀನಾಮೆಗೆ ಹೈಕಮಾಂಡ್ ಸೂಚಿಸಿದ್ದೇಕೆ? ಕಾರಣ ತಿಳಿಸಿದ ಜಮೀರ್!

ಸದ್ಯ, ಕಾಂಗ್ರೆಸ್​​​ನ ಈ ಬೆಳವಣಿಗೆ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಜಬ್ಬಾರ್​ ರಾಜೀನಾಮೆ ಮತ್ತು ನಸೀರ್ ಅಹ್ಮದ್​ ತಲೆದಂಡ ಕೇವಲ ಆರಂಭ ಇರಬಹುದು. ಆದರೆ, ಇದು ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟದ ದೊಡ್ಡ ಮಟ್ಟದ ಬದಲಾವಣೆಗೆ ಹೈಕಮಾಂಡ್ ಹಾಕಿಕೊಟ್ಟ ಪೀಠಿಕೆಯಂತೆ ಕಾಣಿಸುತ್ತಿದೆ ಎಂಬ ಚರ್ಚೆಯೂ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಟರಿ ಸ್ವಾವಲಂಬನೆಗೆ 3.5 ಲಕ್ಷ ಕೋಟಿ ರೂ ಯೋಜನೆ; ಬ್ಯಾಟರಿ ತಯಾರಕರ ಪಟ್ಟಿ ರೂಪಿಸಲು ಸರ್ಕಾರ ಸಜ್ಜು – Kannada News | India’s ALBM: Boosting Domestic Battery Production & Cutting Imports by 2047

ನವದೆಹಲಿ, ಏಪ್ರಿಲ್ 14: ಭಾರತವು ಸರ್ಕಾರಿ ಬೆಂಬಲಿತ ಇಂಧನ ಸಂಗ್ರಹಣಾ ಯೋಜನೆಗಳಿಗಾಗಿ ‘ಅಧಿಕೃತ ಬ್ಯಾಟರಿ ತಯಾರಕರ ಪಟ್ಟಿ’ಯನ್ನು (ALBM – Approved List of Battery Manufacturers) ಪರಿಚಯಿಸಲು ಯೋಜಿಸುತ್ತಿದೆ ಎಂದು ಮಿಂಟ್ ವರದಿ ಮಾಡಿದೆ. ಸೌರಶಕ್ತಿ ಕ್ಷೇತ್ರದಲ್ಲಿ ಜಾರಿಯಲ್ಲಿರುವ ಪಟ್ಟಿಯ ಮಾದರಿಯಲ್ಲೇ ಇದು ಇರಲಿದ್ದು, ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು ಮತ್ತು ವಿದೇಶಿ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಸರ್ಕಾರದ ಈ ಯೋಜನೆಯ ಪ್ರಮುಖ ಮುಖ್ಯಾಂಶಗಳಿವು…

ಸ್ಥಳೀಯತೆಗೆ ಆದ್ಯತೆ: ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದೊಳಗೆ ಈ ALBM ಚೌಕಟ್ಟು ಮತ್ತು ಸ್ಥಳೀಯ ಉತ್ಪಾದನಾ ನಿಯಮಗಳ ಕರಡನ್ನು ಹೊರತರುವ ನಿರೀಕ್ಷೆಯಿದೆ. ತಯಾರಕರು ಮತ್ತು ಯೋಜನೆ ಅಭಿವೃದ್ಧಿಪಡಿಸುವವರು ಹಂತ-ಹಂತವಾಗಿ ಸ್ಥಳೀಯ ಮೂಲಗಳಿಗೆ ಬದಲಾಗಲು ಇದು ಸಹಕಾರಿಯಾಗಲಿದೆ.

ಇದನ್ನೂ ಓದಿ: ಫೆಬ್ರುವರಿಯಲ್ಲಿ ಶೇ. 3.21 ಇದ್ದ ರೀಟೇಲ್ ಹಣದುಬ್ಬರ ಮಾರ್ಚ್​ನಲ್ಲಿ ಶೇ. 3.4ಕ್ಕೆ ಏರಿಕೆ

ಇಂಡಿಯಾ ಬ್ಯಾಟರಿ ವಿಷನ್ 2047: ಈ ಉಪಕ್ರಮವು ಭಾರೀ ಕೈಗಾರಿಕೆ ಮತ್ತು ಇಂಧನ ಸಚಿವಾಲಯಗಳ ನೇತೃತ್ವದ ‘ಇಂಡಿಯಾ ಬ್ಯಾಟರಿ ವಿಷನ್ 2047’ ಮಾರ್ಗಸೂಚಿಯ ಭಾಗವಾಗಿದೆ. ಇದು ಖನಿಜಗಳ ಪೂರೈಕೆಯಿಂದ ಹಿಡಿದು ಬ್ಯಾಟರಿ ಮರುಬಳಕೆಯವರೆಗಿನ ಸಂಪೂರ್ಣ ವ್ಯವಸ್ಥೆಯನ್ನು ಒಳಗೊಂಡಿದೆ.

ಚೀನಾದ ಮೇಲಿನ ಅವಲಂಬನೆಗೆ ಬ್ರೇಕ್: ಪ್ರಸ್ತುತ ಭಾರತವು ಬ್ಯಾಟರಿ ಘಟಕಗಳಿಗಾಗಿ ಚೀನಾದಂತಹ ದೇಶಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ. ALBM ಪಟ್ಟಿಯು ಸರ್ಕಾರಿ ಟೆಂಡರ್‌ಗಳಲ್ಲಿ ಅನುಮೋದಿತ ತಯಾರಕರಿಗೆ ಮಾತ್ರ ಅವಕಾಶ ನೀಡುವ ಮೂಲಕ ಪೂರೈಕೆ ಸರಪಳಿಯ ಅಪಾಯಗಳನ್ನು ತಗ್ಗಿಸಲಿದೆ.

ಬೃಹತ್ ಹೂಡಿಕೆ: ಭಾರತವು ಸುಮಾರು 47 ಗಿಗಾವಾಟ್ (GW) ಬ್ಯಾಟರಿ ಸಂಗ್ರಹಣಾ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಇದಕ್ಕೆ ಅಂದಾಜು 38 ಬಿಲಿಯನ್ ಡಾಲರ್ (3.5 ಲಕ್ಷ ಕೋಟಿ ರೂ) ಹೂಡಿಕೆಯ ಅಗತ್ಯವಿದೆ.

ಇದನ್ನೂ ಓದಿ: ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸುಂಕದಲ್ಲಿ ಭರ್ಜರಿ ಹೆಚ್ಚಳ; ಡೀಸಲ್​ಗೆ 55.5 ರೂ, ಎಟಿಎಫ್​ಗೆ 42 ರೂ ಸುಂಕ

ಸರ್ಕಾರದ ದೂರದೃಷ್ಟಿ ಆಲೋಚನೆ

2047ರ ವೇಳೆಗೆ ಭಾರತವು ಸುಮಾರು 3 ಟೆರಾವಾಟ್-ಅವರ್ (TWh) ಬ್ಯಾಟರಿ ಸಂಗ್ರಹಣಾ ಸಾಮರ್ಥ್ಯವನ್ನು ತಲುಪುವ ಗುರಿ ಹೊಂದಿದೆ. ಎಲೆಕ್ಟ್ರಿಕ್ ವಾಹನಗಳು, ಗ್ರಿಡ್ ಸ್ಟೋರೇಜ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ACC) ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ತಜ್ಞರ ಪ್ರಕಾರ, ನಿರ್ಣಾಯಕ ಖನಿಜಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ನೈಪುಣ್ಯ ಹೊಂದಿದ ಕಾರ್ಯಪಡೆಯನ್ನು ಸಿದ್ಧಪಡಿಸುವುದು ಈ ಗುರಿ ತಲುಪಲು ಅತಿ ಮುಖ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 1:06 pm, Tue, 14 April 26

Source link

ಇಲಿಯಾನಾ ದಕ್ಷಿಣ ಭಾರತ ಚಿತ್ರರಂಗದಿಂದ ಬ್ಯಾನ್ ಆಗಿದ್ದೇಕೆ? ರಹಸ್ಯ ಬಿಚ್ಚಿಟ್ಟ ನಿರ್ಮಾಪಕ – Kannada News | Why Ileana D’Cruz left South India film Industry

ಇಲಿಯಾನ ಡಿ ಕ್ರೂಜ್ (ileana d’cruz) , ಒಂದು ಸಮಯದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಮೆರೆದವರು. ಅದರಲ್ಲೂ ತೆಲುಗಿನಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದರು, ತೆಲುಗಿನ ಹಲವಾರು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದರು. ಅವರ ಸಪೂರ ದೇಹ, ಕೋಲು ಮುಖ, ಒಳ್ಳೆಯ ನಟನೆ ಅವರಿಗೆ ಸಾಕಷ್ಟು ಅಭಿಮಾನಿಗಳು ಮತ್ತು ಅವಕಾಶಗಳನ್ನು ತಂದುಕೊಟ್ಟಿತ್ತು. ಒಟ್ಟೊಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದ ಇಲಿಯಾನಾ ಡಿ ಕ್ರೂಜ್, ಇದ್ದಕ್ಕಿಂತಲೇ ತೆಲುಗು ಚಿತ್ರರಂಗದಿಂದ ಮರೆಯಾದರು. ಇದಕ್ಕೆ ಕಾರಣ ಏನೆಂದು ಇದೀಗ ನಿರ್ಮಾಪಕರೊಬ್ಬರು ಹೆಳಿದ್ದಾರೆ.

ಇಲಿಯಾನಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ತೆಲುಗಿನ ‘ದೇವದಾಸು’ ಚಿತ್ರದ ಮೂಲಕ. ‘ಪೋಕಿರಿ’ ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳ ಮೂಲಕ ಯುವಕರ ಮನಗೆದ್ದ ಇಲಿಯಾನಾ, ಮಹೇಶ್ ಬಾಬು, ಎನ್.ಟಿ.ಆರ್, ಪ್ರಭಾಸ್, ರವಿತೇಜ ಅಂತಹ ಸ್ಟಾರ್ ನಟರ ಜೊತೆ ನಟಿಸಿ ದಕ್ಷಿಣ ಭಾರತದಲ್ಲಿ ಭಾರಿ ಕ್ರೇಜ್ ಹೊಂದಿದ್ದರು. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಅವರು ಸದ್ದಿಲ್ಲದೆ ಚಿತ್ರರಂಗದಿಂದ ದೂರವಾದರು. ಅಸಲಿಗೆ ಇಲಿಯಾನಾ ಬೇಕೆಂದೆ ತೆಲುಗು ಚಿತ್ರರಂಗ ಬಿಡಲಿಲ್ಲ, ಬದಲಿಗೆ ಬಿಸಿಲಾಯ್ತು. ನಿರ್ಮಾಪಕ ಕಟಗಡ್ಡ ಪ್ರಸಾದ್ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ನಿರ್ಮಾಪಕರ ಹೇಳಿರುವ ಪ್ರಕಾರ, ಇಲಿಯಾನಾ ತಮಿಳು ಸಿನಿಮಾದ ನಿರ್ಮಾಪಕರೊಬ್ಬರಿಂದ ಸುಮಾರು 40 ಲಕ್ಷ ರೂಪಾಯಿ ಹಣವನ್ನು ಮುಂಗಡ ಸಂಭಾವನೆಯಾಗಿ ಪಡೆದಿದ್ದರು. ಆದರೆ, ಆ ಚಿತ್ರದಲ್ಲಿ ನಟಿಸಲಿಲ್ಲ ಮತ್ತು ಪಡೆದ ಹಣವನ್ನೂ ಹಿಂತಿರುಗಿಸಲಿಲ್ಲ. ಈ ವಿಚಾರವಾಗಿ ಸಂಬಂಧಪಟ್ಟ ನಿರ್ಮಾಪಕರು ‘ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ’ಗೆ ದೂರು ನೀಡಿದ್ದರು. ತಾನು ಚಿತ್ರಕ್ಕಾಗಿ ಕಾಲ್‌ಶೀಟ್ ನೀಡಿದ್ದೆ ಎಂದು ಇಲಿಯಾನಾ ವಾದಿಸಿದ್ದರು. ಆದರೆ ನಿರ್ಮಾಪಕರು ಆ ದಿನಾಂಕಗಳನ್ನು ಬಳಸಿಕೊಳ್ಳದ ಕಾರಣ ಹಣ ಹಿಂತಿರುಗಿಸುವ ಅಗತ್ಯವಿಲ್ಲ ಎಂದು ಇಲಿಯಾನಾ ವಾದಿಸಿದರಂತೆ.

ಇದನ್ನೂ ಓದಿ:ಬಾಲಿವುಡ್ ನಟಿ ಸಾರಾಗೆ ಕೇದಾರನಾಥ, ಬದ್ರಿನಾಥ್​​ ದೇವಾಲಯಕ್ಕೆ ಪ್ರವೇಶವಿಲ್ಲ

ಚಲನಚಿತ್ರ ಮಂಡಳಿಯು ದಾಖಲೆಗಳನ್ನು ಪರಿಶೀಲಿಸಿದಾಗ, ಇಲಿಯಾನಾ ಅವರು ಆ ನಿರ್ದಿಷ್ಟ ದಿನಾಂಕಗಳಲ್ಲಿ ಬೇರೆ ಚಿತ್ರಗಳಿಗಾಗಿ ಕೆಲಸ ಮಾಡುತ್ತಿದ್ದರು ಎಂಬುದು ಸಾಬೀತಾಯಿತು. ಚಿತ್ರಕ್ಕಾಗಿ ಮೇಕಪ್ ಹಾಕಿಕೊಳ್ಳದಿದ್ದಲ್ಲಿ ಅಥವಾ ಶೂಟಿಂಗ್ ಸ್ಥಳಕ್ಕೆ ಬರದಿದ್ದಲ್ಲಿ ಮುಂಗಡ ಹಣವನ್ನು ಹಿಂತಿರುಗಿಸಬೇಕು ಎಂಬ ನಿಯಮದ ಅಡಿಯಲ್ಲಿ ಮಂಡಳಿಯು ಇಲಿಯಾನಾಗೆ ಸೂಚನೆ ನೀಡಿತು.

ಆ 40 ಲಕ್ಷ ರೂಪಾಯಿಗಳನ್ನು ಹಿಂತಿರುಗಿಸುವವರೆಗೂ ದಕ್ಷಿಣ ಭಾರತದ ಯಾವುದೇ ಸಿನಿಮಾಗಳಲ್ಲಿ ನಟಿಸದಂತೆ ಅವರಿಗೆ ನಿಷೇಧ ಹೇರಲಾಯಿತು. ಈ ಹಣವನ್ನು ಪಾವತಿಸದ ಕಾರಣ ಇಲಿಯಾನಾ ದಕ್ಷಿಣದ ಚಿತ್ರರಂಗದಿಂದ ದೂರ ಉಳಿಯಬೇಕಾಯಿತು ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ವಿವಾದದ ನಂತರ ಅವರು ಬಾಲಿವುಡ್‌ನತ್ತ ಗಮನ ಹರಿಸಿದರು ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಯಿತು.

2012 ರವರೆಗೆ ಇಲಿಯಾನಾ ಸತತವಾಗಿ ಸಿನಿಮಾಗಳಲ್ಲಿ ನಟಿಸಿದರು. ಆದರೆ ಅದಾದ ಬಳಿಕ ಹಠಾತ್ತನೆ ಅವರು ಬಾಲಿವುಡ್ ಸಿನಿಮಾಗಳತ್ತ ಹೊರಳಿದರು. 2024ರ ಬಳಿಕ ಅವರು ಯಾವುದೇ ಭಾಷೆಯ ಸಿನಿಮಾಗಳಲ್ಲಿ ನಟಿಸಿಲ್ಲ. 2023 ರಲ್ಲಿ ಮೈಖಲ್ ಡೋಲನ್ ಎಂಬುವರನ್ನು ವಿವಾಹವಾದ ಇಲಿಯಾನಾ, ಇಬ್ಬರು ಮಕ್ಕಳ ತಾಯಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಜನೀಕಾಂತ್ ಸಿನಿಮಾ: ಮೂರನೇ ಬಾರಿ ನಿರ್ದೇಶಕ ಬದಲು – Kannada News | Rajinikanth 173 movie director changed again

ರಜನೀಕಾಂತ್ (Rajinikanth) ಸಿನಿಮಾ ನಿರ್ಮಿಸಲು, ನಿರ್ದೇಶಿಸಲು ಜನ ಸಾಲು ಗಟ್ಟಿ ನಿಂತಿದ್ದಾರೆ. ಆದರೆ ಯಾಕೋ ರಜನೀಕಾಂತ್ ಅವರ ಹೊಸ ಸಿನಿಮಾಕ್ಕೆ ನಿರ್ದೇಶಕರುಗಳೇ ಸೆಟ್ ಆಗುತ್ತಿಲ್ಲ. ರಜನೀಕಾಂತ್ ಪ್ರಸ್ತುತ ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಕಮಲ್ ಹಾಸನ್ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಅವರ 173ನೇ ಸಿನಿಮಾ ಸೆಟ್ಟೇರಲಿಕ್ಕಿದೆ. ಈಗ ಸಮಸ್ಯೆ ಆಗಿರುವುದು ಇದೇ ಸಿನಿಮಾಕ್ಕೆ. ಈಗಾಗಲೇ ಎರಡು ನಿರ್ದೇಶಕರನ್ನು ಬದಲಾಯಿಸಲಾಗಿತ್ತು. ಈಗ ಮೂರನೇ ನಿರ್ದೇಶಕರೂ ಸಹ ಸಿನಿಮಾದಿಂದ ಹೊರನಡೆದಿದ್ದಾರೆ.

ರಜನೀಕಾಂತ್ ಅವರ 173ನೇ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದು, ಸಿನಿಮಾಕ್ಕೆ ಮೊದಲು ಸುಂದರ್ ಸಿ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಖುದ್ದು ಸುಂದರ್ ಅವರು ಸಿನಿಮಾದಿಂದ ಹೊರನಡೆದರು. ಬಳಿಕ ಇದೇ ಸಿನಿಮಾವನ್ನು ‘ಡಾನ್’ ಸಿನಿಮಾ ನಿರ್ದೇಶಿಸಿದ್ದ ಸಿಬಿಲ್ ಚಕ್ರವರ್ತಿ ನಿರ್ದೇಶಿಸಲಿದ್ದಾರೆ ಎನ್ನಲಾಯ್ತು. ಸಿನಿಮಾದ ಪ್ರೀ ಪ್ರೊಡಕ್ಷನ್ ಸಹ ಶುರು ಆಗಿತ್ತು. ಆದರೆ ಅವರೂ ಸಹ ಸಿನಿಮಾದಿಂದ ಹೊರ ನಡೆದಿದ್ದಾರೆ.

ಸಿಬಿಲ್ ಚಕ್ರವರ್ತಿ, ಚಿತ್ರತಂಡದ ಜೊತೆಗೆ ಭಿನ್ನಾಭಿಪ್ರಾಯದ ಕಾರಣದಿಂದ ಸಿನಿಮಾದಿಂದ ಹೊರ ನಡೆದಿದ್ದು, ಅವರ ಎಕ್ಸಿಟ್ ಬಳಿಕ ಸಿನಿಮಾಕ್ಕೆ ಅಶ್ವತ್ ಮಾರಿಮುತ್ತು ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಪ್ರದೀಪ್ ರಂಗನಾಥ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಡ್ರ್ಯಾಗನ್’ ನಿರ್ದೇಶಿಸಿದ್ದ ಅಶ್ವತ್ಥ್ ಅವರನ್ನು ಕಮಲ್ ಹಾಸನ್ ಅವರು ಈ ಸಿನಿಮಾಕ್ಕೆ ಆಯ್ಕೆ ಮಾಡಿದ್ದರು. ಆದರೆ ಈಗ ಹರಿದಾಡುತ್ತಿರುವ ಸುದ್ದಿಯಂತೆ ಅಶ್ವತ್ಥ್ ಅವರೂ ಸಹ ಸಿನಿಮಾದಿಂದ ಹೊರ ನಡೆದಿದ್ದಾರೆ.

ಇದನ್ನೂ ಓದಿ:ರಜನೀಕಾಂತ್ ಋಣ ತೀರಿಸಿದ ಶಾರುಖ್ ಖಾನ್, ಎಸ್​​ಆರ್​​ಕೆ ಜೊತೆ ಎಸ್​​ಆರ್​​ಕೆ

ಅಶ್ವತ್ಥ್ ಅವರು ತೆಲುಗು ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದು, ಆ ಸಿನಿಮಾದ ನಿರ್ದೇಶನದ ಬಳಿಕವಷ್ಟೆ ರಜನೀಕಾಂತ್ ಮತ್ತು ಕಮಲ್ ಹಾಸನ್ ಅವರ ಸಿನಿಮಾ ನಿರ್ದೇಶಿಸಬೇಕಿದೆ. ಆದರೆ ನಿರ್ಮಾಣ ಸಂಸ್ಥೆ ಈಗಲೇ ಸಿನಿಮಾ ಶುರು ಮಾಡುವ ಉಮೇದಿನಲ್ಲಿರುವ ಕಾರಣ ಅಶ್ವತ್ಥ್ ಸಹ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಗೆ ಮೂವರು ನಿರ್ದೇಶಕರು ರಜನೀಕಾಂತ್ ಅವರ ಸಿನಿಮಾದಿಂದ ಹೊರನಡೆದಂತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version