‘ಸಲ್ಮಾನ್​ಗೆ ಹೆದರಿ ಪಾದದ ಧೂಳನ್ನು ನೆಕ್ಕಲು ಹೊರಟಿದ್ದಾರೆ’; ಕಾಲಾ ಹಿರಣ್ ನಿರ್ಮಾಪಕರ ಆರೋಪ – Kannada News | Kaala Hiran Film Controversy: Govind Namdev vs. Producer on Salman Khan Blackbuck Case

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿ ಸಿದ್ಧವಾಗುತ್ತಿರುವ ‘ಕಾಲಾ ಹಿರಣ್’ ಚಿತ್ರದ ಸುತ್ತಲಿನ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಟೀಸರ್ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಚಿತ್ರದಲ್ಲಿ ವಕೀಲರ ಪಾತ್ರ ಮಾಡಿರುವ ಹಿರಿಯ ನಟ ಗೋವಿಂದ್ ನಾಮ್‌ದೇವ್ ನಿರ್ಮಾಪಕರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆದರೆ, ಈಗ ನಿರ್ಮಾಪಕ ಅಮಿತ್ ಜಾನಿ ಅವರು ನಟನ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ್ದು, ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಗೋವಿಂದ್ ನಾಮ್‌ದೇವ್ ಮಾಡಿದ್ದ ಆರೋಪವೇನು?

ಸಲ್ಮಾನ್ ಖಾನ್ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಗೋವಿಂದ್ ನಾಮ್‌ದೇವ್, “ಈ ಚಿತ್ರವು ಸಲ್ಮಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿದೆ ಎಂಬ ಸತ್ಯವನ್ನು ನಿರ್ಮಾಪಕರು ನನ್ನಿಂದ ಮರೆಮಾಚಿದ್ದರು. ಸುಳ್ಳು ಹೇಳಿ ನನ್ನಿಂದ ಶೂಟಿಂಗ್ ಮಾಡಿಸಿಕೊಂಡಿದ್ದಾರೆ. ಒಂದು ವೇಳೆ ಈ ವಿಷಯ ನನಗೆ ಮೊದಲೇ ತಿಳಿದಿದ್ದರೆ, ನಾನು ಖಂಡಿತ ಈ ಸಿನಿಮಾದಲ್ಲಿ ನಟಿಸುತ್ತಿರಲಿಲ್ಲ. ಸಲ್ಮಾನ್ ನನ್ನ ಆತ್ಮೀಯ ಸ್ನೇಹಿತ, ಅವರ ವಿರುದ್ಧ ಹೋಗುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ನಟನ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಿರ್ಮಾಪಕ ಅಮಿತ್ ಜಾನಿ, ’ಇದೆಲ್ಲ ಶುದ್ಧ ಸುಳ್ಳು. ಅವರು ಎಷ್ಟು ದುರ್ಬಲರಾಗಿದ್ದಾರೆ ಎಂದರೆ, ಈಗ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೆ ಹೆದರಿ ಅವರ ಪಾದದ ಧೂಳನ್ನು ನೆಕ್ಕಲು ಹೊರಟಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ಇಡೀ ಸ್ಕ್ರಿಪ್ಟ್ ಅನ್ನು ಅವರಿಗೆ ಓದಿಸಲಾಗಿತ್ತು. 1998 ರಿಂದ 2018 ರವರೆಗೆ ಜೋಧ್‌ಪುರ ನ್ಯಾಯಾಲಯದಲ್ಲಿ ನಡೆದ 20 ವರ್ಷಗಳ ಹಳೆಯ ಕೃಷ್ಣಮೃಗ ಬೇಟೆ ಪ್ರಕರಣದ ಸನ್ನಿವೇಶಗಳನ್ನೇ ಆ ವ್ಯಕ್ತಿ ಸತತ ಮೂರು-ನಾಲ್ಕು ದಿನಗಳ ಕಾಲ ಶೂಟಿಂಗ್ ಮಾಡಿದ್ದಾರೆ. ಜೀಪಿನ ಮೇಲಿದ್ದ ರಕ್ತದ ಕಲೆ, ಟೈರ್‌ನಲ್ಲಿ ಸಿಲುಕಿಕೊಂಡಿದ್ದ ಕೃಷ್ಣಮೃಗದ ಕೂದಲು.. ಇವೆಲ್ಲ ಕಣ್ಣಿಗೆ ಕಾಣುತ್ತಿದ್ದರೂ ತಮಗೆ ಏನೂ ಗೊತ್ತಿರಲಿಲ್ಲ ಎನ್ನುತ್ತಿರುವುದು ನಗು ತರಿಸುತ್ತದೆ’ ಎಂದು ಟೀಕಿಸಿದ್ದಾರೆ.

ಬಂದೂಕು ತೋರಿಸಿ ಶೂಟಿಂಗ್ ಮಾಡಿಸಿಲ್ಲ!

ಚಿತ್ರದಲ್ಲಿ ಅಯಾನ್ ಖಾನ್ ಎಂಬ ಪಾತ್ರ ಮಾಡಿರುವ ಗೋವಿಂದ್ ನಾಮ್‌ದೇವ್, ಸೆಟ್‌ನಲ್ಲಿ ತಾವೇ ಸ್ವತಃ ಈ ಪ್ರಕರಣಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಕೂಲಂಕಷವಾಗಿ ವಿಚಾರಿಸಿದ್ದರು ಎಂದು ನಿರ್ಮಾಪಕರು ಹೇಳಿದ್ದಾರೆ. “ಅವರು ಚಿತ್ರದ ಪ್ರಮುಖ ಸಂಭಾಷಣೆಗಳನ್ನು ಪದೇ ಪದೇ ಹೇಳಿ ಅಭ್ಯಾಸ ಮಾಡಿದ್ದರು. ಅಷ್ಟೊಂದು ದೊಡ್ಡ ನಟರು ಸ್ಕ್ರಿಪ್ಟ್ ಇಲ್ಲದೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ನಾವೇನು ಅವರ ತಲೆಗೆ ಬಂದೂಕು ಇಟ್ಟು, ಬಲವಂತವಾಗಿ ಶೂಟಿಂಗ್ ಮಾಡಿಸಿದ್ದೇವಾ? ಚಿತ್ರದ ಹೆಸರೇ ‘ಕಾಲಾ ಹಿರಣ್’ (ಕೃಷ್ಣಮೃಗ) ಎಂದಿರುವಾಗ ಇಲ್ಲಿ ಮೋಸ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಗೋವಿಂದ್ ನಾಮ್‌ದೇವ್ ಅವರು ಸಿನಿಮಾ ಮತ್ತು ನಮ್ಮ ಪ್ರೊಡಕ್ಷನ್ ಹೌಸ್ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ನಾವು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅಮಿತ್ ಜಾನಿ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ರಾಮನಗರ ಕಾಂಗ್ರೆಸ್​​ ಶಾಸಕ ಇಕ್ಬಾಲ್ ಹುಸೇನ್

ಬೆಂಗಳೂರು, ಜೂನ್​​ 15: ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಅವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯದ ಬ್ಲಾಕೇಜ್ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಬೆಂಗಳೂರಿನ ಮಲ್ಲಯ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾರ್ಟ್ ಬ್ಲಾಕ್ ಹಿನ್ನೆಲೆ ಈ ಹಿಂದೆ ಶಾಸಕರಿಗೆ ಸ್ಟಂಟ್​ ಹಾಕಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಈ ನಡುವೆ ಆಗಾಗ ಬಿಪಿಯಲ್ಲಿ ವ್ಯತ್ಯಯ ಹಿನ್ನೆಲೆ ಇಂದು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಸಿಎಂ ಡಿ.ಕೆ. ಶಿವಕುಮಾರ್​​ ಆಸ್ಪತ್ರೆಗೆ ಭೇಟಿ ನೀಡಿ ಇಕ್ಬಾಲ್ ಹುಸೇನ್ ಆರೋಗ್ಯ ವಿಚಾರಿಸಲಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಾಂತ್ರಿಕ ದೌರ್ಬಲ್ಯ ಬಹಿರಂಗ? ಮತ್ತೆ ವಿಫಲನಾದ ವೈಭವ್ ಸೂರ್ಯವಂಶಿ..! – Kannada News | Vaibhav Sooryavanshi Failed In 4th ODI Tri Nation A Series

ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಎ ಸರಣಿಯ 4ನೇ ಪಂದ್ಯದಲ್ಲೂ ಟೀಮ್ ಇಂಡಿಯಾದ ಯುವ ದಾಂಡಿಗ ವೈಭವ್ ಸೂರ್ಯವಂಶಿ (Vaibhav Sooryavanshi) ನಿರಾಶೆ ಮೂಡಿಸಿದ್ದಾರೆ. ಭಾರತ ಎ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಎ ತಂಡದ ನಾಯಕ ಸಹನ್ ಅರಾಚ್ಚಿ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್ ಮಾಡುತ್ತಿರುವ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿದೆ.

ವೈಭವ್ ಸೂರ್ಯವಂಶಿ ಔಟ್!

ಈ ಪಂದ್ಯದಲ್ಲೂ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸ್ಫೋಟಕ ಇನಿಂಗ್ಸ್ ಆಡಲು ಮುಂದಾಗಿದ್ದರು. ಆದರೆ ಬಿರುಸಿನಾಟ ಕೇವಲ 14 ಎಸೆತಗಳಿಗೆ ಸೀಮಿತವಾಯಿತು. ಮೊದಲ ಓವರ್​ನಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ ವೈಭವ್ ದ್ವಿತೀಯ ಓವರ್​ನಲ್ಲಿ ಫೋರ್ ಹಾಗೂ ಸಿಕ್ಸ್​ಗಳನ್ನು ಬಾರಿಸಿದರು.

ಅಲ್ಲದೆ ಮೂರನೇ ಹಾಗೂ ನಾಲ್ಕನೇ ಓವರ್​ಗಳಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಶ್ರೀಲಂಕಾ ನಾಯಕ ಸಹನ್ ಅರಾಚ್ಚಿ ಎಸೆದ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿ ಕ್ಯಾಚ್ ನೀಡಿ ಹೊರ ನಡೆದರು.  ಇದರೊಂದಿಗೆ 14 ಎಸೆತಗಳಲ್ಲಿ 1 ಸಿಕ್ಸ್,​ 3 ಫೋರ್​ನೊಂದಿಗೆ 21 ರನ್​ ಬಾರಿಸಿದ ವೈಭವ್ ಸೂರ್ಯವಂಶಿ ಇನಿಂಗ್ಸ್ ಅಂತ್ಯಗೊಂಡಿತು.

ಸರಣಿಯಲ್ಲಿ ವೈಫಲ್ಯ:

ಈ ಬಾರಿಯ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ 776 ರನ್ ಕಲೆಹಾಕಿದ್ದ ವೈಭವ್ ಸೂರ್ಯವಂಶಿ ಅದೇ ಫಾರ್ಮ್​ ಅನ್ನು ಪ್ರಸ್ತುತ ಸರಣಿಯಲ್ಲಿ ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು…

  • ಮೊದಲ ಪಂದ್ಯ (vs ಶ್ರೀಲಂಕಾ ಎ): 12 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 14 ರನ್ ಗಳಿಸಿ ಮೊಹಮ್ಮದ್ ಶಿರಾಜ್ ಬೌಲಿಂಗ್‌ನಲ್ಲಿ ಮಿಡ್-ಆಫ್‌ನಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು.
  • ಎರಡನೇ ಪಂದ್ಯ (vs ಅಫ್ಘಾನಿಸ್ತಾನ್ ಎ): ಅತ್ಯಂತ ಆಕ್ರಮಣಕಾರಿಯಾಗಿ ಆಡಿ 22 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 44 ರನ್ ಬಾರಿಸಿದ್ದರು. ಆದರೆ ಹಾಫ್-ಸೆಂಚುರಿ ಸನಿಹದಲ್ಲಿ ಶಾರ್ಟ್ ಬಾಲ್‌ಗೆ ಅಪ್ಪರ್ ಕಟ್ ಮಾಡಲು ಹೋಗಿ ಕೀಪರ್ ಕೈಗೆ ಕ್ಯಾಚ್ ನೀಡಿದ್ದರು.
  •  ಮೂರನೇ ಪಂದ್ಯ (vs ಶ್ರೀಲಂಕಾ ಎ): ಇಂದಿನ ಪಂದ್ಯದಲ್ಲಿ 21 ರನ್ ಗಳಿಸಿ ಆಡುತ್ತಿದ್ದಾಗ, ಸ್ಪಿನ್ನರ್ ಎದುರು ಶಾಟ್ ಟೈಮಿಂಗ್ ಮಿಸ್ ಮಾಡಿಕೊಂಡು ಪಾಯಿಂಟ್‌ನಲ್ಲಿ ಕ್ಯಾಚ್ ನೀಡಿದ್ದಾರೆ.

ತಾಂತ್ರಿಕ ದೌರ್ಬಲ್ಯ ಬಹಿರಂಗ?

ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿ ಅತ್ಯಂತ ಆಕ್ರಮಣಕಾರಿಯಾಗಿದ್ದು, ಪವರ್‌ಪ್ಲೇ ಓವರ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ. ಆದರೆ, ಶಾರ್ಟ್ ಪಿಚ್ ಎಸೆತಗಳು ಮತ್ತು ಆಫ್-ಸ್ಟಂಪ್ ಹೊರಗಿನ ಚೆಂಡುಗಳನ್ನು ಆಡುವಾಗ ಅವರು ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ. ಇವರ ಈ ದೌರ್ಬಲ್ಯವನ್ನು ಎದುರಾಳಿ ತಂಡಗಳು ಅರಿತುಕೊಂಡಂತೆ ಕಾಣುತ್ತಿದ್ದು, ಶಾರ್ಟ್ ಬಾಲ್ ತಂತ್ರದ ಮೂಲಕ ಅವರನ್ನು ಕಟ್ಟಿಹಾಕುತ್ತಿದ್ದಾರೆ. ಹೀಗಾಗಿಯೇ ಕಳೆದ ಮೂರು ಪಂದ್ಯಗಳಲ್ಲಿ ವೈಭವ್ ಬೇಗನೆ ಔಟಾಗಿದ್ದಾರೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.

ಟೀಮ್ ಇಂಡಿಯಾ ಸ್ಕೋರ್:

ಶ್ರೀಲಂಕಾ ಎ ವಿರುದ್ಧ ಬ್ಯಾಟಿಂಗ್ ಮುಂದುವರೆಸಿರುವ ಟೀಮ್ ಇಂಡಿಯಾ 15 ಓವರ್​ಗಳ ಮುಕ್ತಾಯದ ವೇಳೆಗೆ 85 ರನ್ ಕಲೆಹಾಕಿದೆ. ಈಗಾಗಲೇ ವೈಭವ್ ಸೂರ್ಯವಂಶಿ (21) ಹಾಗೂ ಪ್ರಭ್​ಸಿಮ್ರಾನ್ ಸಿಂಗ್ (11) ಔಟಾಗಿದ್ದು, ರುತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್ ಮುಂದುವರೆಸಿದ್ದಾರೆ.

ಶ್ರೀಲಂಕಾ ಎ ಪ್ಲೇಯಿಂಗ್ 11: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್) , ಅವಿಷ್ಕಾ ಫೆರ್ನಾಂಡೊ , ವಿಷೇನ್ ಹಾಲಂಬಗೆ , ಸದೀರ ಸಮರವಿಕ್ರಮ , ಅಹಾನ್ ವಿಕ್ರಮಸಿಂಘೆ , ಸಹನ್ ಅರಚ್ಚಿಗೆ (ನಾಯಕ) , ವನುಜಾ ಸಹನ್ , ವಿಜಯಕಾಂತ್ ವಿಯಸ್ಕಾಂತ್ , ಕುಗಥಾಸ್ ಮಥುಲನ್ , ಮೊಹಮ್ಮದ್ ಶಿರಾಜ್ , ಚಾಮಿಕಾ ಗುಣಶೇಖರ.

ಇದನ್ನೂ ಓದಿ: ಮೊದಲ ಪಂದ್ಯದಲ್ಲೇ 7 ಗೋಲು ಬಾರಿಸಿ ವಿಶ್ವ ದಾಖಲೆ ಬರೆದ ಜರ್ಮನಿ!

ಭಾರತ ಎ ಪ್ಲೇಯಿಂಗ್ 11: ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್ ), ವೈಭವ್ ಸೂರ್ಯವಂಶಿ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ) , ಆಯುಷ್ ಬದೋನಿ , ಸೂರ್ಯಾಂಶ್ ಶೆಡ್ಗೆ , ನಿಶಾಂತ್ ಸಿಂಧು , ಅನುಕೂಲ್ ರಾಯ್ , ಅರ್ಷದ್ ಖಾನ್ , ವಿಪ್ರಾಜ್ ನಿಗಮ್ , ಯಶ್ ಠಾಕೂರ್.

Source link

Gold Rate: 15,000 ರೂ ಗಡಿ ದಾಟಿದ ಅಪರಂಜಿ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ – Kannada News | Gold Price Today on 15th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 15: ಕಳೆದ ಒಂದೆರಡು ವಾರಗಳಿಂದ ಸತತವಾಗಿ ಇಳಿಯುತ್ತಿದ್ದ ಚಿನ್ನದ ಬೆಲೆ (gold rates) ಎರಡ್ಮೂರು ದಿನಗಳಿಂದ ಸತತ ಏರಿಕೆಯ ಹಾದಿಯಲ್ಲಿದೆ. ಎರಡು ದಿನದಲ್ಲಿ 300ಕ್ಕೂ ಹೆಚ್ಚು ರೂಗಳಷ್ಟು ಏರಿಕೆ ಆಗಿದ್ದ ಚಿನ್ನದ ಬೆಲೆ ಇವತ್ತು ಸೋಮವಾರ 225 ರೂ ಹೆಚ್ಚಿದೆ. ಅಪರಂಜಿ ಚಿನ್ನದ ಬೆಲೆ 15,000 ರೂ ಗಡಿ ದಾಟಿದೆ. ಬೆಳ್ಳಿ ಬೆಲೆಯಲ್ಲೂ ಗ್ರಾಮ್​ಗೆ 5 ರೂ ಹೆಚ್ಚಿದೆ. ಆದರೆ, ವಿದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚಿನ ವ್ಯತ್ಯಯ ಕಂಡಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,51,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 15ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,153 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,890 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,365 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,153 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,890 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,890 ರೂ
  • ಚೆನ್ನೈ: 14,070 ರೂ
  • ಮುಂಬೈ: 13,890 ರೂ
  • ದೆಹಲಿ: 13,905 ರೂ
  • ಕೋಲ್ಕತಾ: 13,890 ರೂ
  • ಕೇರಳ: 13,890 ರೂ
  • ಅಹ್ಮದಾಬಾದ್: 13,895 ರೂ
  • ಜೈಪುರ್: 13,905 ರೂ
  • ಲಕ್ನೋ: 13,905 ರೂ
  • ಭುವನೇಶ್ವರ್: 13,890 ರೂ

ಇದನ್ನೂ ಓದಿ: ಆಂತ್ರೋಪಿಕ್​ನ ಬಲಿಷ್ಠ ಎಐ ಮಾಡಲ್​ಗಳು ಅಮೆರಿಕನ್ನೇತರರಿಗೆ ಅಲಭ್ಯ; ಭಾರತಕ್ಕೆ ಇದು ಎಚ್ಚರಿಕೆಯ ಕರೆಗಂಟೆಯಾ?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 575 ರಿಂಗಿಟ್ (13,440 ರುಪಾಯಿ)
  • ದುಬೈ: 508.50 ಡಿರಾಮ್ (13,100 ರುಪಾಯಿ)
  • ಅಮೆರಿಕ: 138.50 ಡಾಲರ್ (13,105 ರುಪಾಯಿ)
  • ಸಿಂಗಾಪುರ: 190 ಸಿಂಗಾಪುರ್ ಡಾಲರ್ (14,024 ರುಪಾಯಿ)
  • ಕತಾರ್: 509.50 ಕತಾರಿ ರಿಯಾಲ್ (13,244 ರೂ)
  • ಸೌದಿ ಅರೇಬಿಯಾ: 523 ಸೌದಿ ರಿಯಾಲ್ (13,187 ರುಪಾಯಿ)
  • ಓಮನ್: 53.45 ಒಮಾನಿ ರಿಯಾಲ್ (13,136 ರುಪಾಯಿ)
  • ಕುವೇತ್: 42.71 ಕುವೇತಿ ದಿನಾರ್ (13,153 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 275 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 275 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 275 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಅಮೆರಿಕ-ಇರಾನ್ ಶಾಂತಿ ಒಪ್ಪಂದ: 108 ದಿನಗಳ ಯುದ್ಧಕ್ಕೆ ತೆರೆ, ಪ್ರಮುಖ ಷರತ್ತುಗಳೇನು? – Kannada News | US Iran Peace Deal: 14 Point Memorandum Ends Conflict, Trump Blasts Israel

ಟೆಹ್ರಾನ್, ಜೂನ್ 15: ಅಮೆರಿಕ ಮತ್ತು ಇರಾನ್ ನಡುವೆ ಸುಮಾರು 108 ದಿನಗಳ ಕಾಲ ನಡೆದ ಭೀಕರ ಸಂಘರ್ಷಕ್ಕೆ ಕೊನೆಗೂ ತೆರೆ ಬಿದ್ದಿದೆ. ಜೂನ್ 19 ರಂದು ಸ್ವಿಟ್ಜರ್ಲ್ಯಾಂಡ್‌ನ ಜಿನೇವಾದಲ್ಲಿ ಉಭಯ ರಾಷ್ಟ್ರಗಳ ನಡುವೆ ಬಹು ನಿರೀಕ್ಷಿತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಅಮೆರಿಕದ ರಾಜತಾಂತ್ರಿಕ ಪ್ರಯತ್ನಗಳು ಯಶಸ್ವಿಯಾಗಿದ್ದು, ಎರಡೂ ಕಡೆಯಿಂದ ಸಮ್ಮತಿ ದೊರೆತಿರುವ ಹಿನ್ನೆಲೆಯಲ್ಲಿ ಈ ಒಪ್ಪಂದ ನಿರ್ಣಾಯಕ ಘಟ್ಟ ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಜಿನೇವಾದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ವೈಯಕ್ತಿಕವಾಗಿ ಭಾಗವಹಿಸಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.

ಈ ಐತಿಹಾಸಿಕ ಒಪ್ಪಂದವು ಒಟ್ಟು 14 ಪ್ರಮುಖ ಷರತ್ತುಗಳನ್ನು ಒಳಗೊಂಡಿದ್ದು, ಎರಡೂ ದೇಶಗಳ ಹಿತಾಸಕ್ತಿಗಳನ್ನು ಸಮತೋಲನಗೊಳಿಸಲು ಪ್ರಯತ್ನಿಸಲಾಗಿದೆ. ಅಮೆರಿಕದ ಪ್ರಮುಖ ಷರತ್ತುಗಳಲ್ಲಿ ಇರಾನ್ ತನ್ನ ಸಂವರ್ಧಿತ ಯುರೇನಿಯಂ ಅನ್ನು ಮುಂದಿನ ಎರಡು ತಿಂಗಳೊಳಗೆ ಸಂಪೂರ್ಣವಾಗಿ ನಾಶಪಡಿಸಬೇಕು ಎಂಬುದು ಪ್ರಮುಖವಾಗಿದೆ. ಪರಮಾಣು ವಸ್ತ್ರಗಳನ್ನು ಅಭಿವೃದ್ಧಿಪಡಿಸುವ ಇರಾನ್‌ನ ಸಾಮರ್ಥ್ಯವನ್ನು ತಡೆಯುವುದು ಅಮೆರಿಕದ ದೀರ್ಘಕಾಲದ ಉದ್ದೇಶವಾಗಿದೆ.

ಯುರೇನಿಯಂ ನಾಶಪಡಿಸಿದ ನಂತರವೇ ಇರಾನ್ ಮೇಲಿನ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ತೆರವುಗೊಳಿಸಲಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಜಪ್ತಿ ಮಾಡಲಾದ ಇರಾನ್‌ನ ಸಂಪತ್ತನ್ನು ಕೂಡ ಬಿಡುಗಡೆ ಮಾಡುವುದಾಗಿ ಅಮೆರಿಕ ಭರವಸೆ ನೀಡಿದೆ. ಷರತ್ತುಗಳ ಬಗ್ಗೆ ಹೆಚ್ಚಿನ ಮಾಹಿತಿ ಈ ವಿಡಿಯೋದಲ್ಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಮೊದಲ ಪಂದ್ಯದಲ್ಲೇ 7 ಗೋಲು ಬಾರಿಸಿ ವಿಶ್ವ ದಾಖಲೆ ಬರೆದ ಜರ್ಮನಿ! – Kannada News | Fifa World Cup 2026: Germany vs Curacao Highlights

ಫಿಫಾ ವಿಶ್ವಕಪ್ 2026 ರಲ್ಲಿ ಜರ್ಮನಿ ತಂಡ ಶುಭಾರಂಭ ಮಾಡಿದೆ. ಹೂಸ್ಟನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಜರ್ಮನಿ (Germany) ಮತ್ತು ಕುರಾಸಾವೊ (Curaçao) ತಂಡಗಳು ಮುಖಾಮುಖಿಯಾಗಿದ್ದವು. ಫಿಫಾ ರ್ಯಾಂಕಿಂಗ್​ನಲ್ಲಿ 82ನೇ ಸ್ಥಾನದಲ್ಲಿರುವ ಕುರಾಸಾವೊ ವಿರುದ್ಧ ಆರಂಭದಲ್ಲೇ ಸಂಪೂರ್ಣ ಹಿಡಿತ ಸಾಧಿಸಿದ ಜರ್ಮನಿ ಪಡೆ ಗೋಲುಗಳ ಮೇಲೆ ಗೋಲು ಬಾರಿಸಿದರು. ಈ ಮೂಲಕ 7-1 ಅಂತರದಿಂದ ಪಂದ್ಯ ಗೆದ್ದುಕೊಂಡಿದ್ದಾರೆ. ಈ ಗೆಲುವಿನೊಂದಿಗೆ ಜರ್ಮನಿ ತಂಡವು ಫುಟ್​ಬಾಲ್ ವಿಶ್ವಕಪ್​ನಲ್ಲಿ ಹೊಸ ವಿಶ್ವ ದಾಖಲೆಯನ್ನೂ ಕೂಡ ಬರೆದಿದ್ದಾರೆ.

ಜರ್ಮನಿ ವರ್ಲ್ಡ್​ ರೆಕಾರ್ಡ್​:

ಈ ಪಂದ್ಯದಲ್ಲಿ 7 ಗೋಲುಗಳನ್ನು ಬಾರಿಸುವ ಮೂಲಕ ಜರ್ಮನಿ ತಂಡವು ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಒಟ್ಟು 239 ಗೋಲುಗಳೊಂದಿಗೆ ಜರ್ಮನಿಯು ಬ್ರೆಝಿಲ್ (238 ಗೋಲುಗಳು) ತಂಡದ ಸಾರ್ವಕಾಲಿಕ ದಾಖಲೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಸೋತರೂ ಇತಿಹಾಸ ಬರೆದ ಕುರಾಸಾವೊ:

ಫಿಫಾ ವಿಶ್ವಕಪ್​ನಲ್ಲಿ ಆಡಿದ ಅತ್ಯಂತ ಕಡಿಮೆ ಜನಸಂಖ್ಯೆಯ ಸಣ್ಣ ದೇಶ ಎಂಬ ಹೆಗ್ಗಳಿಕೆಯುವ ಇದೀಗ ಕುರಾಸಾವೊ ಪಾಲಾಗಿದೆ. ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯಾ ದಾಖಲೆಗಳ ಆಧಾರದ ಮೇಲೆ Worldometer ಸಂಸ್ಥೆಯು ಕುರಾಸಾವೊದ 2026 ರ ಮಧ್ಯಭಾಗದ ಜನಸಂಖ್ಯೆಯನ್ನು 1,85,440 ಎಂದು ಅಂದಾಜಿಸಿದೆ.

ಅಂದರೆ 2 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿರುವ ದ್ವೀಪ ರಾಷ್ಟ್ರ ಕುರಾಸಾವೊ ಫಿಫಾ ವಿಶ್ವಕಪ್ ಅಂಗಳದಲ್ಲಿ ಕಣಕ್ಕಿಳಿಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಫುಟ್​ಬಾಲ್ ವಿಶ್ವಕಪ್​ ಆಡಿದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.

ಇನ್ನು ಈ ಪಂದ್ಯದ ಆರಂಭದಲ್ಲಿ ಜರ್ಮನಿ ಮುನ್ನಡೆ ಪಡೆದರೂ, ಕುರಾಸಾವೊ ತಂಡದ ಲಿವಾನೊ ಕೊಮೆನೆನ್ಸಿಯಾ ಗಳಿಸಿದ ಐತಿಹಾಸಿಕ ಗೋಲು ಪಂದ್ಯವನ್ನು 1–1 ರಿಂದ ಸಮಬಲಗೊಳಿಸಿತು. ಇದು ವಿಶ್ವಕಪ್ ಇತಿಹಾಸದಲ್ಲಿ ಕುರಾಸಾವೊ ದೇಶದ ಮೊದಲ ಗೋಲು ಎಂಬುದು ವಿಶೇಷ.

 ನುಯೆರ್ ಹೊಸ ದಾಖಲೆ:

ಜರ್ಮನಿಯ ಅನುಭವಿ ಗೋಲ್‌ಕೀಪರ್ ಮ್ಯಾನುಯೆಲ್ ನುಯೆರ್ ತಮ್ಮ 40ನೇ ವಯಸ್ಸಿನಲ್ಲೂ (40 ವರ್ಷ, 79 ದಿನಗಳು) ಕಣಕ್ಕಿಳಿಯುವ ಮೂಲಕ ಜರ್ಮನಿ ಪರ ವಿಶ್ವಕಪ್ ಆಡಿದ ಅತ್ಯಂತ ಹಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಪಂದ್ಯದ ಮುಖ್ಯಾಂಶಗಳು:

ಕೋಚ್ ಜೂಲಿಯನ್ ನಾಗೆಲ್ಸ್‌ಮನ್ ಮಾರ್ಗದರ್ಶನದಲ್ಲಿ ಕಣಕ್ಕಿಳಿದ ಜರ್ಮನಿ ಪಡೆಯು ಪಂದ್ಯದುದ್ದಕ್ಕೂ ಶೇ. 64.7 ರಷ್ಟು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಅಲ್ಲದೆ ಕುರಾಸಾವೊ ರಕ್ಷಣಾ ಕೋಟೆಯನ್ನು ಸುಲಭವಾಗಿ ಭೇದಿಸಿದ ಜರ್ಮನ್ ಮುನ್ಪಡೆ ಆಟಗಾರರು ಬ್ಯಾಕ್ ಟು ಬ್ಯಾಕ್ ಗೋಲು ದಾಖಲಿಸಿದ್ದಾರೆ.

  • ಜರ್ಮನಿ ಪರ ಗೋಲು ಬಾರಿಸಿದವರು: ಕೈ ಹಾವರ್ಟ್ಜ್ (2), ಫೆಲಿಕ್ಸ್ ನ್ಮೆಚಾ, ನಿಕೋ ಶ್ಲೋಟರ್‌ಬೆಕ್, ಜಮಾಲ್ ಮುಸಿಯಾಲಾ, ನಥಾನಿಯಲ್ ಬ್ರೌನ್ ಮತ್ತು ಡೆನಿಜ್ ಉಂದಾವ್.
  • ಕುರಾಸಾವೊ ಪರ ಗೋಲು ಬಾರಿಸಿದವರು: ಲಿವಾನೊ ಕೊಮೆನೆನ್ಸಿಯಾ.

ಈ ಭರ್ಜರಿ ಗೆಲುವಿನೊಂದಿಗೆ ಜರ್ಮನಿ ತಂಡವು ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ಮುಂದಿನ ಪಂದ್ಯಗಳಲ್ಲಿ ಐವರಿ ಕೋಸ್ಟ್ ಮತ್ತು ಈಕ್ವೆಡಾರ್ ತಂಡಗಳನ್ನು ಎದುರಿಸಲಿದೆ.

ಇದನ್ನೂ ಓದಿ: BBL ಆಡಲು ಆಸ್ಟ್ರೇಲಿಯಾ ಆಟಗಾರರ ಹೊಸ ಡಿಮ್ಯಾಂಡ್..!

ಸಾರ್ವಕಾಲಿಕ ವಿಶ್ವ ದಾಖಲೆ:

ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಒಂದು ತಂಡ ತನ್ನ ಮೊದಲ ಪಂದ್ಯದಲ್ಲಿ ಅತ್ಯಂತ ಹೆಚ್ಚು ಗೋಲು ಬಾರಿಸಿದ ಸಾರ್ವಕಾಲಿಕ ದಾಖಲೆ ಹಂಗೇರಿ ತಂಡದ ಹೆಸರಿನಲ್ಲಿದೆ. 1982ರ ವಿಶ್ವಕಪ್‌ನ ತನ್ನ ಮೊದಲ ಗ್ರೂಪ್ ಪಂದ್ಯದಲ್ಲಿ ಹಂಗೇರಿಯು ಎಲ್ ಸಾಲ್ವಡಾರ್ ವಿರುದ್ಧ 10 ಗೋಲುಗಳನ್ನು ಬಾರಿಸಿ 10-1 ರಿಂದ ಐತಿಹಾಸಿಕ ಜಯ ಸಾಧಿಸಿತ್ತು. ಕಳೆದ 44 ವರ್ಷಗಳಿಂದ ಈ ದಾಖಲೆಯನ್ನು ಮುರಿಯಲು ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ. ಇದೀಗ ಮೊದಲ ಮ್ಯಾಚ್​ನಲ್ಲಿ 7 ಗೋಲು ದಾಖಲಿಸಿ ಮಿಂಚಿರುವ ಜರ್ಮನಿ ಪಡೆ ಮುಂದಿನ ಪಂದ್ಯದಲ್ಲಿ ಈ ದಾಖಲೆಯನ್ನು ಮುರಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Published On – 10:36 am, Mon, 15 June 26

Source link

ಆಗಸದಲ್ಲೇ ಸಿಲುಕಿದ ಮುಂಗಾರು ಎಕ್ಸ್​ಪ್ರೆಸ್, ದೇಶಾದ್ಯಂತ ಸಾಮಾನ್ಯಕ್ಕಿಂತ ಶೇ.28ರಷ್ಟು ಕಡಿಯಾದ ಮಳೆ, ಜೂ. 20ರ ನಂತರ ಭಾರಿ ಮಳೆ – Kannada News | Monsoon Rain 2026: India’s Rain Down 28 Percent, Heavy Showers Forecast After June 20

ನವದೆಹಲಿ, ಜೂನ್ 15: ಧರಗೆ ಧಾರಾಕಾರವಾಗಿ ಮಳೆ ತರಬೇಕಿದ್ದ ಮುಂಗಾರು(Monsoon) ಎಕ್ಸ್​​ಪ್ರೆಸ್ ಆಗಸದಲ್ಲೇ ನಿಂತುಬಿಟ್ಟಿದೆ. ತೀವ್ರ ಬೇಸಿಗೆಯಿಂದ ಕಂಗಾಲಾಗಿದ್ದ ಭಾರತಕ್ಕೆ ಕಳೆದ ಒಂದು ವಾರದಿಂದ ಮಳೆ ಸ್ವಲ್ಪ ಮುದ ನೀಡಿದೆ. ಆದರೂ ಕೂಡ ಜೂನ್ ಮೊದಲ ಎರಡು ವಾರಗಳಲ್ಲಿ (ಜೂನ್ 4 ರಿಂದ ಜೂನ್ 14) ದೇಶಾದ್ಯಂತ ಮಳೆ ಸಾಮಾನ್ಯಕ್ಕಿಂತ ಶೇ. 28 ರಷ್ಟು ಕಡಿಮೆಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಈ ಅವಧಿಯಲ್ಲಿ ದೇಶದಲ್ಲಿ ಸರಾಸರಿ 47.7 ಮಿಮೀ ಮಳೆಯಾಗಬೇಕಿತ್ತು, ಆದರೆ ವಾಸ್ತವದಲ್ಲಿ 34.3 ಮಿಮೀ ದಾಖಲಾಗಿದೆ. ವಿಜ್ಞಾನಿಗಳ ಪ್ರಕಾರ, ಸಾಗರದಲ್ಲಿ ತೇವಾಂಶದ ಕೊರತೆಯೇನೂ ಇಲ್ಲ. ಬದಲಿಗೆ, ಮೇಲಿನ ವಾತಾವರಣದಲ್ಲಿ ಉಂಟಾಗಿರುವ ಅಸಾಮಾನ್ಯ ಗಾಳಿಯ ಸೆಳೆತವು ಮೋಡಗಳ ಮುನ್ನಡೆಯನ್ನು ತಾತ್ಕಾಲಿಕವಾಗಿ ತಡೆದಿದೆ.

ಜೂನ್ 20 ರ ನಂತರ ಕಳೆದುಹೋದ ವೇಗ ಪಡೆದುಕೊಳ್ಳಲಿರುವ ಮುಂಗಾರು
ಮೇ ತಿಂಗಳ ದೀರ್ಘಾವಧಿ ಮುನ್ಸೂಚನೆಗಳಲ್ಲಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಊಹಿಸಲಾಗಿತ್ತು, ಆದರೆ ಮಳೆ ಕಡಿಮೆಯಾಗಿತ್ತು, ಸಮುದ್ರದಲ್ಲಿರುವ ಸಕಾರಾತ್ಮಕ ಪರಿಸ್ಥಿತಿಗಳು ಇಂದಿಗೂ ಹಾಗೇ ಇರುವುದರಿಂದ, ಸದ್ಯ ಎದುರಾಗಿರುವ ವಾತಾವರಣದ ಅಡಚಣೆ ಶೀಘ್ರದಲ್ಲೇ ದೂರವಾಗಲಿದೆ ಎಂದು ಹವಾಮಾನ ಮುನ್ಸೂಚಕರು ಆಶಾವಾದ ವ್ಯಕ್ತಪಡಿಸಿದ್ದಾರೆ.

ಜೂನ್ 20ರಿಂದ ಮುಂಗಾರು ಕಳೆದುಹೋದ ತನ್ನ ಸಂಪೂರ್ಣ ಆವೇಗವನ್ನು ಪುನಃ ಪಡೆದುಕೊಳ್ಳಲಿದೆ. ಹವಾಮಾನ ಇಲಾಖೆಯ ವಿಜ್ಞಾನಿಗಳು ವಾತಾವರಣದ ಪ್ರಸ್ತುತ ಬದಲಾವಣೆಗಳನ್ನು ಜಾಗರೂಕತೆಯಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜೂನ್ ದ್ವಿತೀಯಾರ್ಧದಲ್ಲಿ ಪ್ರಕೃತಿಯು ಮರುಸೃಷ್ಟಿಸಲಿರುವ ಈ ಸಕಾರಾತ್ಮಕ ಬದಲಾವಣೆಯು ಕೃಷಿ ಚಟುವಟಿಕೆಗಳಿಗೆ ಭಾರಿ ವೇಗವನ್ನು ನೀಡಲಿದ್ದು, ಮುಂಬರುವ ದಿನಗಳಲ್ಲಿ ದೇಶದ ಜಲಮೂಲಗಳು ತುಂಬಿ ತುಳುಕಲಿವೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಮತ್ತು ಮಧ್ಯ ಭಾರತದ ಕೆಲವು ಭಾಗಗಳಿಗೆ ಮಾನ್ಸೂನ್ ಮತ್ತಷ್ಟು ಪ್ರವೇಶಿಸುತ್ತಿದ್ದರೂ ಸಹ ಈ ನಿಧಾನಗತಿ ಕಂಡುಬಂದಿದೆ.

ಮತ್ತಷ್ಟು ಓದಿ: ಬೆಂಗಳೂರು: ಮುಂಗಾರು ಮಳೆಯ ಅಬ್ಬರಕ್ಕೆ ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ

ಕರ್ನಾಟಕದಲ್ಲಿ ಮಳೆ
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದ್ದು, ಮುಂದಿನ ಒಂದು ವಾರಗಳ ಕಾಲ ಮಳೆಯಾಗಲಿದೆ.
ಬೆಂಗಳೂರು, ಬ್ರಹ್ಮಾವರ, ಕುಂದಾಪುರ, ಗೇರುಸೊಪ್ಪ, ಗೋಕರ್ಣ, ಕಾರವಾರ, ಕೋಟಾ, ಮಾನ್ವಿ, ಆಗುಂಬೆ, ಚಿಕ್ಕನಹಳ್ಳಿಮ ಕುಡತಿನಿ, ರಾಯಚೂರು, ಸೈದಾಪುರ, ಪರಶುರಾಂಪುರ, ಗುರುಮಿಟ್ಕಲ್, ಅಂಕೋಲಾ, ಮಾಣಿ, ಮುನೀರಾಬಾದ್, ಸೋಮವಾರಪೇಟೆಯಲ್ಲಿ ಮಳೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:46 am, Mon, 15 June 26

Source link

ಸುಕುಮಾರ್ ಹೊಸ ಸಿನಿಮಾ ಮತ್ತಷ್ಟು ತಡ? ಪೆದ್ದಿ ನಟನಿಗೆ ವರವಾಯ್ತು ವಿಳಂಬ – Kannada News | Ram Charan Sukumar Film Delayed: Script Refinement and RC’s Injury Recovery Time

ರಾಮ್ ಚರಣ್ (Ram Charan) ಮತ್ತು ಸುಕುಮಾರ್ ಕಾಂಬಿನೇಷನ್‌ ಅಲ್ಲಿ ‘ರಂಗಸ್ಥಳಂ’ ಸಿನಿಮಾ ಮೂಡಿ ಬಂದಿತ್ತು. ಇದಕ್ಕೆ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯ ಸುದ್ದಿಯೊಂದು ಕೇಳಿಬಂದಿದೆ. ಇವರಿಬ್ಬರ ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಆರಂಭವಾಗುವುದು ಮತ್ತಷ್ಟು ತಡವಾಗಲಿದೆ ಎಂದು ಸಿನಿಮಾ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಆದರೆ, ಇದು ರಾಮ್ ಚರಣ್​​ಗೆ ವರದಾನವಾಗಿದೆ.

ಮೂಲಗಳ ಪ್ರಕಾರ, ನಿರ್ದೇಶಕ ಸುಕುಮಾರ್ ಅವರು ಈ ಚಿತ್ರದ ಚಿತ್ರಕಥೆಯನ್ನು ಇನ್ನೂ ಸಂಪೂರ್ಣವಾಗಿ ಫೈನಲ್ ಮಾಡಿಲ್ಲ ಎನ್ನಲಾಗಿದೆ. ಕಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಮತ್ತು ಪ್ರತಿಯೊಂದು ದೃಶ್ಯವನ್ನು ಅಚ್ಚುಕಟ್ಟಾಗಿ ರೂಪಿಸಲು ಸುಕುಮಾರ್ ಅವರು ಇನ್ನೂ ಸ್ವಲ್ಪ ಸಮಯಾವಕಾಶ ಕೇಳಿದ್ದಾರಂತೆ. ಹೀಗಾಗಿ, ಈ ಮೆಗಾ ಪ್ರಾಜೆಕ್ಟ್‌ನ ಅಧಿಕೃತ ಲಾಂಚ್ ಈ ವರ್ಷದ ದಸರಾ ಹಬ್ಬದ ನಂತರವಷ್ಟೇ ನಡೆಯುವ ಸಾಧ್ಯತೆ ಇದೆ.

ಈ ವಿಳಂಬ ನಟ ರಾಮ್ ಚರಣ್ ಅವರಿಗೆ ಒಂದು ರೀತಿಯಲ್ಲಿ ವರವಾಗಲಿದೆ ಎನ್ನಲಾಗುತ್ತಿದೆ. ಏಕೆಂದರೆ, ರಾಮ್ ಚರಣ್ ಸದ್ಯಕ್ಕೆ ತಮ್ಮ ಇತ್ತೀಚಿನ ಸೆನ್ಸೇಷನಲ್ ಬ್ಲಾಕ್‌ಬಸ್ಟರ್ ‘ಪೆದ್ದಿ’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಜೂನ್ 4 ರಂದು ಬಿಡುಗಡೆಯಾದ ‘ಪೆದ್ದಿ’ ಸಿನಿಮಾ 2026ರಲ್ಲಿ ದಕ್ಷಿಣ ಭಾರತದಲ್ಲೇ ನಂಬರ್ ಒನ್ ಗಳಿಕೆ ಮಾಡಿ ಭರ್ಜರಿ ದಾಖಲೆ ಬರೆಯುತ್ತಿದ್ದು, ರಾಮ್ ಚರಣ್ ಸದ್ಯ ಅದರ ಸಕ್ಸಸ್ ಸಂಭ್ರಮದಲ್ಲಿದ್ದಾರೆ.

ಇದರ ಜೊತೆಗೆ, ರಾಮ್ ಚರಣ್ ಇತ್ತೀಚೆಗೆ ಮಣಿಕಟ್ಟಿನ ಗಾಯದಿಂದ ಬಳಲುತ್ತಿದ್ದು, ಸುಕುಮಾರ್ ಸಿನಿಮಾ ತಡವಾಗುತ್ತಿರುವುದರಿಂದ ಅವರಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಉತ್ತಮ ಬ್ರೇಕ್ ಸಿಕ್ಕಂತಾಗಿದೆ. ಗಾಯದಿಂದ ಪೂರ್ತಿಯಾಗಿ ಗುಣಮುಖರಾದ ಬಳಿಕವೇ ಅವರು ಸುಕುಮಾರ್ ಅವರ ಬಿಗ್ ಬಜೆಟ್ ಚಿತ್ರದ ಸೆಟ್‌ಗೆ ಜಾಯಿನ್ ಆಗಲಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಅವಳಿ ಮಕ್ಕಳ ಫೋಟೋ ಹಂಚಿಕೊಂಡ ರಾಮ್ ಚರಣ್-ಉಪಾಸನಾ

ನಿರ್ದೇಶಕರು ಕಥೆಗಾಗಿ ಸಮಯ ತೆಗೆದುಕೊಳ್ಳುತ್ತಿರುವುದು ಮತ್ತು ನಟನಿಗೆ ಗಾಯದಿಂದ ಚೇತರಿಸಿಕೊಳ್ಳಲು ಗ್ಯಾಪ್ ಸಿಕ್ಕಿರುವುದು ಇಬ್ಬರಿಗೂ ಪ್ಲಸ್ ಪಾಯಿಂಟ್ ಆಗಿದೆ. ಸಿನಿಮಾ ತಡವಾದರೂ ಇವರಿಬ್ಬರ ಕಾಂಬಿನೇಷನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರುವುದರಿಂದ, ಗಲ್ಲಾಪೆಟ್ಟಿಗೆಯಲ್ಲಿ ಮತ್ತೊಂದು ಧೂಳೆಬ್ಬಿಸುವ ಸಿನಿಮಾ ಬರುವುದು ಗ್ಯಾರಂಟಿ ಎಂಬ ನಂಬಿಕೆಯಲ್ಲಿ ಅಭಿಮಾನಿಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:43 am, Mon, 15 June 26

Source link

ಸೋಮವಾರ ಅಮಾವಾಸ್ಯೆ: ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ – Kannada News | Male Mahadeshwara Betta Crowded on Amavasya: Lakhs of Devotees Offer Prayers to Madappa on Monday

ಚಾಮರಾಜನಗರ, ಜೂನ್ 15: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪವಿತ್ರ ಪುಣ್ಯಕ್ಷೇತ್ರವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರದ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಭಕ್ತರ ಮಹಾಪೂರವೇ ಹರಿದುಬಂದಿದೆ. ಸಾಮಾನ್ಯವಾಗಿ ಪ್ರತಿ ಸೋಮವಾರದಂದು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತವೆ. ಆದರೆ, ಈ ಬಾರಿ ಸೋಮವಾರದಂದೇ ಅಮಾವಾಸ್ಯೆ ಒದಗಿ ಬಂದಿರುವುದರಿಂದ ಮಾದಪ್ಪನ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದ್ದಾರೆ.

ಅಮಾವಾಸ್ಯೆಯ ವಿಶೇಷ ದಿನವಾದ ಇಂದು ಮುಂಜಾನೆಯಿಂದಲೇ ಶ್ರೀ ಮಹದೇಶ್ವರ ಸ್ವಾಮಿಗೆ ಸಾಂಪ್ರದಾಯಿಕವಾಗಿ ವಿಶೇಷ ಎಣ್ಣೆ ಮಜ್ಜನ (ಅಭಿಷೇಕ) ಹಾಗೂ ಅತ್ಯಂತ ಆಕರ್ಷಕ ಪುಷ್ಪಾಲಂಕಾರಗಳನ್ನು ನೆರವೇರಿಸಲಾಯಿತು. ಸಹಸ್ರಾರು ಭಕ್ತರು ಏಕಕಾಲದಲ್ಲಿ ಬೆಟ್ಟಕ್ಕೆ ಲಗ್ಗೆ ಇಟ್ಟಿರುವುದರಿಂದ ಮಲೆ ಮಹದೇಶ್ವರ ಬೆಟ್ಟದ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣವು ಸಂಪೂರ್ಣವಾಗಿ ಜನಸಾಗರದಿಂದ ತುಂಬಿ ತುಳುಕುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ – Kannada News | Union Minister HD Kumaraswamy Begins Sabarimala Pilgrimage After Wearing Ayyappa Mala

ಬೆಂಗಳೂರು, ಜೂನ್​​ 15: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಇಂದು ಬೆಳಗಿನ ಜಾವವೇ ಕೊಚ್ಚಿನ್ ನಗರದ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ಸಚಿವರು, ನಂತರ ದೇಗುಲದಲ್ಲಿಯೇ ಇರುಮುಡಿ ಒತ್ತು ಶಬರಿಮಲೆಗೆ ಯಾತ್ರೆ ಹೊರಟಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಪಂಪಾ ನದಿ ತೀರವನ್ನು ತಲುಪಲಿರುವ ಸಚಿವರು ಹಾಗೂ ಅವರೊಡನೆ ತೆರಳಿರುವ ಭಕ್ತರ ತಂಡ, ಪುಣ್ಯ ಸ್ನಾನ ಮಾಡಿ ಶಬರಿಮಲೆಯತ್ತ ಸಾಗಲಿದೆ. ಸಂಜೆ ಅಯ್ಯಪ್ಪ ಸನ್ನಿಧಿಯಲ್ಲಿ ಪಡಿ ಪೂಜೆಯಲ್ಲಿ ಪಾಲ್ಗೊಳಿರುವ ಸಚಿವರು ನಂತರ ಅಯ್ಯಪ್ಪ ಸ್ವಾಮಿಗೆ ಪುಷ್ಪ ಅಭಿಷೇಕದಲ್ಲಿ ಭಾಗಿಯಾಗಲಿದ್ದಾರೆ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾದ ನಂತರ ಶಬರಿಮಲೆಗೆ ಕೈಗೊಂಡ ಮೊದಲ ಯಾತ್ರೆ ಇದಾಗಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಮಾಜಿ ಮಂತ್ರಿಗಳಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡರ, ಶಾಸಕರಾದ ಶರಣಗೌಡ ಕಂದಕೂರ, ಮಾಜಿ ಶಾಸಕರಾದ ಮಾಗಡಿ ಮಂಜುನಾಥ್, ಹೆಚ್.ಎಂ. ರಮೇಶ್ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಜನರ ತಂಡದೊಂದಿಗೆ ಹೆಚ್ಡಿಕೆ​​ ಯಾತ್ರೆ ಕೈಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version