ಉಂಡ ಮನೆಗೆ ಕನ್ನ ಹಾಕಿದ ಆಸಾಮಿ: ಕರ್ನಾಟಕ ಬ್ಯಾಂಕ್​ಗೆ 16 ಲಕ್ಷ ರೂ ವಂಚನೆ – Kannada News | Bengaluru: Karnataka Bank Defrauded of Rs 16 Lakh by Gold Appraiser

ಬೆಂಗಳೂರು, ಮೇ 24: ನಗರದ ವರ್ತೂರಿನಲ್ಲಿರುವ ಕರ್ನಾಟಕ ಬ್ಯಾಂಕ್‌ನಲ್ಲಿ 16.53 ಲಕ್ಷ ರೂ ಮೊತ್ತದ ನಕಲಿ ಚಿನ್ನ ಅಡಮಾನ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಚಿನ್ನ ಮೌಲ್ಯಮಾಪಕ ರವಿಕುಮಾರ್ ಈ ವಂಚನೆಯ ಸೂತ್ರಧಾರಿಯಾಗಿದ್ದು, ನಾಲ್ವರ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿಕುಮಾರ್ ಹಲವು ನಕಲಿ ಗ್ರಾಹಕರೊಂದಿಗೆ ಸೇರಿಕೊಂಡು ನಕಲಿ ಚಿನ್ನವನ್ನು ಅಸಲಿ ಚಿನ್ನ ಎಂದು ಹೇಳಿ ಬ್ಯಾಂಕ್‌ಗೆ ವಂಚಿಸಿದ್ದಾನೆ. ಚಿನ್ನ ಮೌಲ್ಯಮಾಪಕ ರವಿಕುಮಾರ್ ಬ್ಯಾಂಕ್‌ಗೆ ಸಲ್ಲಿಸಿದ ನಕಲಿ ಚಿನ್ನವನ್ನು ಅಡಮಾನವಾಗಿ ಇಟ್ಟು, ನಕಲಿ ಗ್ರಾಹಕರಿಗೆ ಸಾಲ ನೀಡುವಂತೆ ಮಾಡಿದ್ದಾನೆ. ಈ ಮೂಲಕ ಬ್ಯಾಂಕ್‌ಗೆ ಮೋಸ ಮಾಡಿದ್ದಾನೆ. ಈತನ ಮೇಲೆ ಅನುಮಾನ ಬಂದು ಪರಿಶೀಲಿಸಿದಾಗ ನಕಲಿ ಚಿನ್ನದ ಕಳ್ಳಾಟ ಬಯಲಾಗಿದೆ. ಸದ್ಯ ಪೊಲೀಸರು ರವಿಕುಮಾರ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವರದಿ: ವಿಕಾಸ್​​ ಕ್ರೈಂ 

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ: ಕೋಚ್ ಎಂಟ್ರಿಗೆ ಅವಕಾಶ! – Kannada News | ICC New Rules: Head Coaches May Soon Enter Field During ODI Drinks

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಏಕದಿನ ಕ್ರಿಕೆಟ್ (ODI) ಇತಿಹಾಸದಲ್ಲೇ ಅತ್ಯಂತ ಪ್ರಮುಖ ಹಾಗೂ ಕ್ರಾಂತಿಕಾರಕ ನಿಯಮ ಬದಲಾವಣೆಯೊಂದನ್ನು ತರಲು ಗಂಭೀರ ಆಲೋಚನೆ ನಡೆಸಿದೆ. ಪಂದ್ಯದ ಮಧ್ಯದಲ್ಲಿ ತಂತ್ರಗಳನ್ನು ರೂಪಿಸಲು ಮತ್ತು ಆಟಗಾರರಿಗೆ ನೇರ ಮಾರ್ಗದರ್ಶನ ನೀಡಲು, ಇನ್ಮುಂದೆ ‘ಡ್ರಿಂಕ್ಸ್ ಬ್ರೇಕ್’ (ಪಾನೀಯ ವಿರಾಮ) ಸಮಯದಲ್ಲಿ ತಂಡದ ಮುಖ್ಯ ತರಬೇತುದಾರರು ನೇರವಾಗಿ ಮೈದಾನದೊಳಗೆ ಪ್ರವೇಶಿಸಲು ಅನುಮತಿ ನೀಡುವ ಬಗ್ಗೆ ಚರ್ಚಿಸಲಾಗಿದೆ.

ಐಸಿಸಿ ಮುಖ್ಯ ಕಾರ್ಯನಿರ್ವಾಹಕರ ಸಮಿತಿ (CEC) ಸಭೆಯಲ್ಲಿ ಈ ವಿಷಯ ಈಗಾಗಲೇ ಚರ್ಚೆಯಾಗಿದ್ದು, 2026ರ ಮೇ 30 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಐಸಿಸಿ ಮಂಡಳಿ ಸಭೆಯಲ್ಲಿ ಇದಕ್ಕೆ ಅಂತಿಮ ಅನುಮೋದನೆ ಸಿಗುವ ಸಾಧ್ಯತೆಯಿದೆ.

ಪ್ರಸ್ತಾವಿತ ನಿಯಮದ ಪ್ರಮುಖ ಅಂಶಗಳು:

  • ನೇರ ಸಂವಹನ: ಪ್ರಸ್ತುತ ನಿಯಮಗಳ ಪ್ರಕಾರ, ಹೆಚ್ಚುವರಿ ಆಟಗಾರರು (Substitutes) ಮಾತ್ರ ಮೈದಾನಕ್ಕೆ ನೀರು ಮತ್ತು ಕಿಟ್‌ಗಳನ್ನು ಕೊಂಡೊಯ್ಯಬಹುದು. ಹೊಸ ನಿಯಮ ಜಾರಿಗೆ ಬಂದರೆ, ಕೋಚ್‌ಗಳು ನೇರವಾಗಿ ಪಿಚ್ ಬಳಿ ಬಂದು ನಾಯಕ ಮತ್ತು ಆಟಗಾರರೊಂದಿಗೆ ಮುಖಾಮುಖಿ ಚರ್ಚೆ ನಡೆಸಬಹುದು.
  • ಒಡಿಐನಲ್ಲಿ ಎರಡು ಬಾರಿ ಅವಕಾಶ: ಏಕದಿನ ಪಂದ್ಯಗಳ ಪ್ರತಿ ಇನ್ನಿಂಗ್ಸ್‌ನಲ್ಲಿ ತಲಾ 2 ಡ್ರಿಂಕ್ಸ್ ಬ್ರೇಕ್‌ಗಳನ್ನು ನೀಡಲಾಗುತ್ತದೆ. ಕೋಚ್‌ಗಳಿಗೆ ಈ ಎರಡೂ ವಿರಾಮಗಳಲ್ಲಿ ಮೈದಾನಕ್ಕಿಳಿಯುವ ಅವಕಾಶ ಸಿಗಲಿದೆ.
  •  ಟಿ20 ಪ್ರೇರಿತ ಬದಲಾವಣೆ: ಈಗಾಗಲೇ ಟಿ20 ಅಂತರರಾಷ್ಟ್ರೀಯ ಪಂದ್ಯಗಳು ಹಾಗೂ ಐಪಿಎಲ್‌ನಂತಹ ಲೀಗ್‌ಗಳಲ್ಲಿ ‘ಸ್ಟ್ರಾಟೆಜಿಕ್ ಟೈಮ್‌ಔಟ್’ ವೇಳೆ ಕೋಚ್‌ಗಳು ಮೈದಾನಕ್ಕೆ ಬರುವ ನಿಯಮವಿದೆ. ಇದನ್ನು ಈಗ 50 ಓವರ್‌ಗಳ ಕ್ರಿಕೆಟ್‌ಗೂ ವಿಸ್ತರಿಸಲಾಗುತ್ತಿದೆ.
  • ಅನುಷ್ಠಾನದ ಸಮಯ: ಮೇ 30ರ ಸಭೆಯಲ್ಲಿ ಮಂಡಳಿಯು ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದರೆ, ಈ ಹೊಸ ನಿಯಮವು ಅಕ್ಟೋಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಚರ್ಚೆಯಲ್ಲಿರುವ ಇತರ ಪ್ರಮುಖ ನಿಯಮಗಳು:

ಹೆಡ್ ಕೋಚ್ ಪ್ರವೇಶದ ಜೊತೆಗೆ, ಕ್ರಿಕೆಟ್‌ನ ಸ್ವರೂಪವನ್ನೇ ಬದಲಿಸಬಲ್ಲ ಇನ್ನೂ ಕೆಲವು ಪ್ರಮುಖ ಪ್ರಸ್ತಾಪಗಳು ಐಸಿಸಿ ಮುಂದಿವೆ:

  • ಟೆಸ್ಟ್ ಪಂದ್ಯದಲ್ಲಿ ಪಿಂಕ್ ಬಾಲ್ ಬಳಕೆ: ಹವಾಮಾನ ವೈಪರೀತ್ಯ ಅಥವಾ ಮಂದ ಬೆಳಕಿನಿಂದಾಗಿ ಟೆಸ್ಟ್ ಪಂದ್ಯಗಳು ರದ್ದಾಗುವುದನ್ನು ತಪ್ಪಿಸಲು, ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಿಗೆ ಫ್ಲಡ್‌ಲೈಟ್‌ಗಳ ಅಡಿಯಲ್ಲಿ ‘ಪಿಂಕ್ ಬಾಲ್’ ಬಳಸಿ ಪಂದ್ಯ ಮುಂದುವರಿಸಲು ಉಭಯ ತಂಡಗಳ ಒಪ್ಪಿಗೆಯೊಂದಿಗೆ ಅವಕಾಶ ನೀಡುವ ಚಿಂತನೆ ಇದೆ.
  •  ಟಿ20 ಇನ್ನಿಂಗ್ಸ್ ವಿರಾಮ ಕಡಿತ: ಟಿ20 ಪಂದ್ಯಗಳ ವೇಗವನ್ನು ಹೆಚ್ಚಿಸಲು ಎರಡು ಇನ್ನಿಂಗ್ಸ್‌ಗಳ ನಡುವಿನ ವಿರಾಮದ ಸಮಯವನ್ನು 20 ನಿಮಿಷಗಳಿಂದ 15 ನಿಮಿಷಗಳಿಗೆ ಇಳಿಸಲು ಉದ್ದೇಶಿಸಲಾಗಿದೆ.
  • ಅಕ್ರಮ ಬೌಲಿಂಗ್ ಆಕ್ಷನ್‌ಗೆ ಹಾಕ್-ಐ: ಮೈದಾನದಲ್ಲಿರುವ ಅಂಪೈರ್‌ಗಳಿಗೆ ಇನ್ಮುಂದೆ ರಿಯಲ್-ಟೈಮ್ ಹಾಕ್-ಐ ತಂತ್ರಜ್ಞಾನದ ಪ್ರವೇಶ ಸಿಗಲಿದೆ. ಇದರಿಂದ ಬೌಲರ್‌ಗಳ ಶಂಕಾಸ್ಪದ ಅಥವಾ ಅಕ್ರಮ ಬೌಲಿಂಗ್ ಆಕ್ಷನ್ ಅನ್ನು ಪಂದ್ಯದ ಮಧ್ಯದಲ್ಲೇ ಗುರುತಿಸಿ ಕ್ರಮ ಕೈಗೊಳ್ಳಬಹುದು.

ಇದನ್ನೂ ಓದಿ: 27 ಕ್ರೀಡೆಗಳು: ಕರ್ನಾಟಕದ ಹೊಸ ಕ್ರಿಕೆಟ್ ಸ್ಟೇಡಿಯಂ ವಿಶೇಷತೆಗಳೇನು ಗೊತ್ತಾ?

ಒಟ್ಟಾರೆಯಾಗಿ ಹೇಳುವುದಾದರೆ, ಐಸಿಸಿಯ ಈ ಪ್ರಸ್ತಾಪಗಳು ಜಾರಿಗೆ ಬಂದರೆ ಕ್ರಿಕೆಟ್‌ನ ಸ್ವರೂಪವೇ ಬದಲಾಗಲಿದೆ. ಕೇವಲ ಡ್ರೆಸ್ಸಿಂಗ್ ರೂಮ್‌ಗೆ ಸೀಮಿತವಾಗಿದ್ದ ತರಬೇತುದಾರರು, ಇನ್ಮುಂದೆ ಲೈವ್ ಪಂದ್ಯದ ಗತಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಫುಟ್‌ಬಾಲ್‌ನಂತೆ ಕ್ರಿಕೆಟ್‌ನಲ್ಲೂ ತಂತ್ರಜ್ಞಾನ ಮತ್ತು ತರಬೇತುದಾರರ ನೇರ ಹಸ್ತಕ್ಷೇಪ ಹೆಚ್ಚಾಗುತ್ತಿರುವುದು ಆಟವನ್ನು ಮತ್ತಷ್ಟು ರೋಚಕಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Source link

Tv9 Kannada News Live: GBA ಚುನಾವಣೆಗೆ ಜೆಡಿಎಸ್​​ ಪ್ರತ್ಯೇಕ ಸ್ಪರ್ಧೆ, ಪಾಕ್​​ನಲ್ಲಿ ಬಾಂಬ್ ಸ್ಫೋಟಕ್ಕೆ 23 ಮಂದಿ ಬಲಿ; ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು – Kannada News | Tv9 Kannada News Live: JDS to Discuss Solo GBA Poll Strategy Today; 23 Killed in Pakistan Blast

ಬೆಂಗಳೂರು, ಮೇ 24: ಬಿಜೆಪಿ ಜೊತೆಗಿನ ಮೈತ್ರಿ ನಡುವೆಯೂ ಗ್ರೇಟರ್​​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಪ್ರತ್ಯೇಕವಾಗಿ ಸ್ಫರ್ಧಿಸಲು ಜೆಡಿಎಸ್​​ ಪ್ಲ್ಯಾನ್​​ ಮಾಡಿದೆ. ಇದರ ನಡುವೆ ಕೇಂದ್ರ ಸಚಿವ ಮತ್ತು ಜೆಡಿಎಸ್​​ ನಾಯಕ ಹೆಚ್​​.ಡಿ. ಕುಮಾರಸ್ವಾಮಿ ಜಿಬಿಎ ಜಿಬಿಎ ಚುನಾವಣೆ ಸಂಬಂಧ ಇಂದು (ಮೇ 24) ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ JDS ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಬೆಂಗಳೂರು ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಧ್ಯಕ್ಷರು, ಪದಾಧಿಕಾರಿಗಳು, ಪಾಲಿಕೆ ಮಾಜಿ ಸದಸ್ಯರು ಭಾಗಿಯಾಗಲಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಆಯ್ಕೆ ಹಾಗೂ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಯಲಿದೆ ಎನ್ನಲಾಗಿದೆ.

ರಸ್ತೆ ಗುಂಡಿಗಳನ್ನು ಮುಚ್ಚಿದ ಪೊಲೀಸರು

ವಿಜಯನಗರ ಜಿಲ್ಲೆ ಹೂವಿನ ಹಡಗಲಿಯ ತಾಲೂಕಿನ ಇಟಗಿ ಮೂಲಕ ಹಾದು ಹೋಗುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಗುಂಡಿಗಳಿಂದಲೇ ತುಂಬಿದ್ದು, ಮೇಲಿಂದ ಮೇಲೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ವಿಷಯವನ್ನು PWD ಗಮನಕ್ಕೆ ತಂದರೂ ಪ್ರಯೋಜನವಾಗದ ಕಾರಣ ಸ್ಥಳೀಯರ ಸಹಾಯದಿಂದ ರಸ್ತೆ ಗುಂಡಿಗಳನ್ನು ಪೊಲೀಸರೇ ಮುಚ್ಚಿರುವ ಪ್ರಸಂಗ ನಡೆದಿದೆ. ಇಟಗಿ ಪೊಲೀಸ್ ಠಾಣೆ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮುಖ್ಯಾಂಶಗಳು

ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ

ಬಸ್‌ನಲ್ಲಿ ಪ್ರಯಾಣಿಕ ಮರೆತು ಹೋಗಿದ್ದ ಬ್ಯಾಗ್ ಮರಳಿಸಿ ಬೀದರ್​​ನ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬಸವಕಲ್ಯಾಣದಿಂದ ನಲಂಡಿ ಗ್ರಾಮಕ್ಕೆ ಹೋಗುವಾಗ ಚಾವನ್ ಹಿಪ್ಪರ್ಗಾ ಗ್ರಾಮದ ಮಸೀದ್ ಅಲ್ಲಾವುದ್ದೀನ್ ಶೇಕ್ ಎಂಬವರು ಬಸ್​​ನಲ್ಲಿಯೇ ನಗದು ಮತ್ತು ಲಕ್ಷಾಂತರ ಮೌಲ್ಯದ ಆಭರಣಗಳಿದ್ದ ಬ್ಯಾಗ್ ಮರೆತು ತೆರಳಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಗ್ರಾಮದಲ್ಲಿ ಪ್ರಯಾಣಿಕನನ್ನು ಹುಡುಕಿರುವ ಸಾರಿಗೆ ಸಿಬ್ಬಂದಿ ಭಜರಂಗ ಮತ್ತು ನಿರ್ವಾಹಕ ವೀರಪ್ಪ ಕಾಳೆ ಬ್ಯಾಗ್​​ನ ಹಿಂತಿರುಗಿಸಿದ್ದಾರೆ. ಸಾರಿಗೆ ಸಿಬ್ಬಂದಿಯ ಈ ಮಾನವೀಯ ಕಾರ್ಯ ಕಂಡು ಗ್ರಾಮಸ್ಥರು ಹೂವಿನ ಹಾರ ಹಾಕಿ ಅವರನ್ನು ಸನ್ಮಾನಿಸಿದ್ದಾರೆ.

ಇದನ್ನೂ ಓದಿ: ಕಾರ್ಮಿಕರ ವೇತನ ಹೆಚ್ಚಳ, ತೆಲಂಗಾಣದಲ್ಲಿ ಉಷ್ಣ ಅಲೆ ಮತ್ತು ಚೇತನ್ ಅಹಿಂಸಾ ಹೇಳಿಕೆ ವಿವಾದ! ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ಬಾಂಬ್ ಸ್ಫೋಟಕ್ಕೆ 23 ಮಂದಿ ಬಲಿ

ಪಾಕಿಸ್ತಾನದ ಕ್ವೆಟ್ಟಾ ನಗರದ ರೈಲ್ವೆ ಟ್ರ್ಯಾಕ್​ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ 23 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ 47 ಜನರಿಗೆ ಗಂಭೀರ ಗಾಯಗಳಾಗಿದ್ದರೆ, ಬ್ಲಾಸ್ಟ್​​ ತೀವ್ರತೆಗೆ ರೈಲ್ವೆ ಹಳಿ ಬಳಿಯಿದ್ದ 10 ವಾಹನಗಳು ಸುಟ್ಟು ಭಸ್ಮವಾಗಿವೆ. ಘಟನೆ ಬೆನ್ನಲ್ಲೇ ಪಾಕ್​ನ ಕ್ವೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯೂತ್​​ ಕಾಂಗ್ರೆಸಿಗರ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್​​: ಸ್ಫೋಟಕ ಹೇಳಿಕೆ ಕೊಟ್ಟ ಉಪಾಧ್ಯಕ್ಷೆ

ಬೆಂಗಳೂರು, ಮೇ 24: ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ವಿಚಾರ ಸಂಬಂಧ ದೀಪಿಕಾ ರೆಡ್ಡಿ ಮಾಡಿರುವ ಆರೋಪ ಸುಳ್ಳು ಎಂದು ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದಿವ್ಯಾ ಹೇಳಿದ್ದಾರೆ. ಸಭೆ ಶುರುವಾದಾಗ ಗಲಾಟೆ ಮಾಡಬೇಕಂತಲೇ ಬಂದು ಕೆಲವರು ಸುಳ್ಳು ಆರೋಪ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ ಎಂಬುದನ್ನು ನಾವು ಒಪ್ಪಲ್ಲ. ದೀಪಿಕಾ ರೆಡ್ಡಿ 12 ಲಕ್ಷ ಮತ​ ತೆಗೆದುಕೊಂಡಿದ್ದೇನೆ ಅಂತಾರೆ. JDSಗೆ ಹೋಗಿದ್ದ ದೀಪಿಕಾ ರೆಡ್ಡಿ ಮತ್ತೆ ಕಾಂಗ್ರೆಸ್​ಗೆ ಬಂದಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರು ಚೆನ್ನಾಗಿ ಕೆಲಸ ಮಾಡ್ತಿದ್ದಾರೆ ಎಂದು ದಿವ್ಯಾ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದರ್ಶನ್ ಕೇಸ್: ಚುರುಕುಗೊಳ್ಳಲಿದೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕೋರ್ಟ್ ವಿಚಾರಣೆ – Kannada News | Darshan Case Court hearing of Renukaswamy murder case to speed up

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲು ಆಗಿರುವ ನಟ ದರ್ಶನ್ (Darshan) ಅವರಿಗೆ ಸಾಕಷ್ಟು ಆತಂಕ ಇದೆ. ಒಂದು ವರ್ಷದ ಒಳಗೆ ಎಲ್ಲ ಸಾಕ್ಷಿಗಳ ವಿಚಾರಣೆ ಮುಗಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ವಾರಕ್ಕೆ 2 ಬಾರಿ ವಿಚಾರಣೆ ನಡೆಸಲು ಸ್ಥಳೀಯ ಕೋರ್ಟ್ ಮುಂದಾಗಿದೆ. ದರ್ಶನ್ ಅವರು ಜೈಲು ಸೇರಿ ಹಲವು ತಿಂಗಳು ಕಳೆದಿದೆ. ಇನ್ನೊಂದು ವರ್ಷ ಜಾಮೀನು (Bail) ಸಿಗಲ್ಲ ಎಂಬ ವಿಚಾರದಿಂದ ಅವರಿಗೆ ಚಿಂತೆ ಶುರುವಾಗಿದೆ. ಸುಪ್ರೀಂ ಕೋರ್ಟ್​​ನಲ್ಲಿ ಜಾಮೀನು ಅರ್ಜಿ ವಜಾಗೊಂಡಿದ್ದರಿಂದ ಅವರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಒಂದು ವರ್ಷದ ಒಳಗೆ ವಿಚಾರಣೆ ಮುಗಿಸಬೇಕು ಎಂಬ ಸುಪ್ರೀಂ ಕೋರ್ಟ್ (Supreme Court) ಆದೇಶದ ಪ್ರತಿಯನ್ನು ವಕೀಲರು ಸೆಷನ್ಸ್ ಕೋರ್ಟ್​ಗೆ ಸಲ್ಲಿಸಿದ್ದಾರೆ. ಪ್ರತಿ ದಿನ ಅಥವಾ ವಾರದಲ್ಲಿ 4 ದಿನ ವಿಚಾರಣೆ ನಡೆಸುವ ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕಿಸ್ತಾನದ ಸೈನಿಕರನ್ನು ಕರೆದೊಯ್ಯುತ್ತಿದ್ದ ರೈಲಿನ ಮೇಲೆ ಆತ್ಮಾಹುತಿ ಬಾಂಬ್ ದಾಳಿ; 24 ಜನ ಸಾವು, 70 ಮಂದಿಗೆ ಗಾಯ – Kannada News | 24 killed 70 injured as car with explosives rams train carrying pakistan soldiers in quetta

ಇಸ್ಲಮಾಬಾದ್, ಮೇ 24: ಪಾಕಿಸ್ತಾನದ (Pakistan) ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿಯಾದ ಕ್ವೆಟ್ಟಾ ನಗರದ ರೈಲ್ವೆ ಹಳಿ ಬಳಿ ಇಂದು ಭೀಕರ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಭೀಕರ ದುರಂತದಲ್ಲಿ 24 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮತ್ತು ರಕ್ಷಣಾ ಪಡೆಗಳ ಮೂಲಗಳು ಖಚಿತಪಡಿಸಿವೆ. ಕ್ವೆಟ್ಟಾದ ಚಮನ್ ಫಾಟಕ್ (Chaman Phatak) ರೈಲ್ವೆ ನಿಲ್ದಾಣದ ಬಳಿ ಈ ಸ್ಫೋಟ ಸಂಭವಿಸಿದೆ.

ಭದ್ರತಾ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಒಬ್ಬನೇ ಬಂದಿದ್ದ ಆತ್ಮಾಹುತಿ ಬಾಂಬರ್ ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಸೀದಾ ಮಿಲಿಟರಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆಸಿದ್ದಾನೆ ಎನ್ನಲಾಗಿದೆ. ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ರೈಲಿನ 2 ಬೋಗಿಗಳು ಸಂಪೂರ್ಣವಾಗಿ ಜಖಂಗೊಂಡು ರಸ್ತೆಗೆ ಉರುಳಿಬಿದ್ದಿದೆ. ಆಗ ಅದಕ್ಕೆ ಬೆಂಕಿ ಹೊತ್ತಿಕೊಂಡಿದೆ.

ಇದನ್ನೂ ಓದಿ: ಬಲೂಚಿಸ್ತಾನದ ಗಣಿಯಲ್ಲಿ ಉಗ್ರರ ದಾಳಿ; ಟರ್ಕಿಶ್ ಪ್ರಜೆ ಸೇರಿದಂತೆ 10 ಜನ ಸಾವು

ಸುತ್ತಮುತ್ತಲಿನ ಹಲವು ಕಿಲೋಮೀಟರ್ ದೂರದವರೆಗೆ ಸ್ಫೋಟದ ಭೀಕರ ಸೌಂಡ್ ಕೇಳಿಸಿದೆ. ಬಲೂಚಿಸ್ತಾನ್ ಪ್ರಾಂತ್ಯದ ರಕ್ಷಣಾ ತಂಡಗಳು ಮತ್ತು ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಗಾಯಗೊಂಡವರನ್ನು ತಕ್ಷಣವೇ ಕ್ವೆಟ್ಟಾದ ಮಿಲಿಟರಿ ಆಸ್ಪತ್ರೆ ಮತ್ತು ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ರಕ್ತದಾನ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

ಈ ಬಾಂಬ್ ಸ್ಫೋಟದ ತೀವ್ರತೆಗೆ ರೈಲ್ವೆ ಹಳಿಯ ಪಕ್ಕದಲ್ಲಿದ್ದ 10ಕ್ಕೂ ಹೆಚ್ಚು ವಾಹನಗಳು ಮತ್ತು ಹಲವು ನಾಗರಿಕರ ಮನೆಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಆತಂಕವಿದೆ. ಬಲೂಚಿಸ್ತಾನ್ ಗೃಹ ಸಚಿವಾಲಯದ ವಕ್ತಾರ ಬಾಬರ್ ಯೂಸುಫ್‌ಜಾಯ್ ಅವರು, ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಎಲ್ಲಾ ಇಲಾಖೆಗಳನ್ನು ಹೈ ಅಲರ್ಟ್‌ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕರಾಚಿ ವಿಶ್ವವಿದ್ಯಾಲಯದಲ್ಲಿನ ಸ್ಫೋಟದ ಹೊಣೆ ಹೊತ್ತ ಬಲೂಚಿಸ್ತಾನ್​​ ಲಿಬರೇಶನ್​​ ಆರ್ಮಿ; ಕೃತ್ಯವೆಸಗಿದ್ದು ಮಹಿಳಾ ಬಾಂಬರ್​​

ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಸ್ಥಳೀಯ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಈ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ರೈಲಿನಲ್ಲಿದ್ದ ಪಾಕಿಸ್ತಾನಿ ಸೇನಾ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ತಮ್ಮ ಸಂಘಟನೆಯ ಆತ್ಮಾಹುತಿ ದಳದ ಸದಸ್ಯ ಈ ದಾಳಿ ನಡೆಸಿದ್ದಾನೆ ಎಂದು ಬಿಎಲ್‌ಎ ಹೇಳಿಕೊಂಡಿದೆ. ಸ್ಫೋಟದ ಬೆನ್ನಲ್ಲೇ ಆ ಪ್ರದೇಶದಲ್ಲಿ ಭಾರಿ ಗುಂಡಿನ ಚಕಮಕಿ ನಡೆದಿದೆ ಎಂದೂ ವರದಿಯಾಗಿದೆ.

ಖನಿಜ ಸಂಪತ್ತಿನಿಂದ ಸಮೃದ್ಧವಾಗಿರುವ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಚೀನಾದ ಒಡೆತನದ ‘ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್’ (CPEC) ಯೋಜನೆಗಳ ವಿರುದ್ಧ ದೀರ್ಘಕಾಲದಿಂದ ಪ್ರತ್ಯೇಕತಾವಾದಿ ಬಂಡುಕೋರರು ಮತ್ತು ಉಗ್ರಗಾಮಿ ಸಂಘಟನೆಗಳು ನಿರಂತರವಾಗಿ ಇಂತಹ ಭೀಕರ ದಾಳಿಗಳನ್ನು ನಡೆಸುತ್ತಾ ಬಂದಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ನಮ್ಮ ನಿಮ್ಮ ಎಸ್​ಐಪಿಗಳು ವಿದೇಶೀ ಹೂಡಿಕೆದಾರರಿಗೆ ಆಹಾರವಾಗುತ್ತಿವೆಯಾ? ಜೆಫರೀಸ್ ಏಜೆನ್ಸಿ ಬಿಚ್ಚಿಟ್ಟಿದೆ ಘೋರ ಸತ್ಯ – Kannada News | Indians SIPs main reason behind falling rupee and exiting of FPIs, says Jefferies

ನವದೆಹಲಿ, ಮೇ 24: ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ (Jefferies), ಭಾರತೀಯ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಯಲ್ಲಿ ಸದ್ಯ ನಡೆಯುತ್ತಿರುವ ಮೂರು ಪ್ರಮುಖ ವಿದ್ಯಮಾನಗಳ ನಡುವಿನ ಆಸಕ್ತಿದಾಯಕ ನಂಟನ್ನು ಬಿಚ್ಚಿಟ್ಟಿದೆ. ಭಾರತೀಯರಲ್ಲಿ ಹೆಚ್ಚುತ್ತಿರುವ ಮ್ಯೂಚುಯಲ್ ಫಂಡ್ ಎಸ್‌ಐಪಿ (SIP) ಹೂಡಿಕೆ, ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರ (FPI) ಭಾರಿ ಪ್ರಮಾಣದ ಹಣದ ಹಿಂತೆಗೆತ (FPI outflows), ಮತ್ತು ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ ಕುಸಿತ, ಈ ಮೂರು ಬೆಳವಣಿಗೆಗಳ ಮಧ್ಯೆ ಒಂದಕ್ಕೊಂಡು ನಂಟು ಬೆಸೆದುಕೊಂಡಿರುವುದನ್ನು ಜೆಫರೀಸ್ ಗಮನಿಸಿದೆ. ಈ ಮೂರು ಅಂಶಗಳು ಹೇಗೆ ಒಂದಕ್ಕೊಂದು ಹೇಗೆ ಸಂಬಂಧ ಹೊಂದಿವೆ? ಜೆಫರೀಸ್ ಪ್ರಕಾರ, ಸಾಕಷ್ಟು ಗಮನ ಸೆಳೆದಿರುವ ವಿದೇಶೀ ಹೂಡಿಕೆಗಳ ನಿರ್ಗಮನ ಹಾಗೂ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ, ಈ ಎರಡು ವಿದ್ಯಮಾನಗಳಿಗೆ ಎಸ್​ಐಪಿಗಳೇ ಪ್ರಮುಖ ಕಾರಣವಂತೆ. ಬಹಳ ಕುತೂಹಲವೆನಿಸುವ ವಿಶ್ಲೇಷಣೆಯನ್ನು ನೀಡಿದೆ.

ದಾಖಲೆಯ ಎಸ್‌ಐಪಿ (SIP) ಹರಿವು ಮತ್ತು ಸ್ಥಳೀಯ ಶಕ್ತಿ

ಭಾರತದಲ್ಲಿ ಪ್ರಸ್ತುತ ದೇಶೀಯ ಹೂಡಿಕೆದಾರರು ಮ್ಯೂಚುಯಲ್ ಫಂಡ್‌ಗಳ ಮೂಲಕ (ವಿಶೇಷವಾಗಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ – SIP) ದಾಖಲೆ ಪ್ರಮಾಣದ ಹಣವನ್ನು ಷೇರು ಮಾರುಕಟ್ಟೆಗೆ ಹರಿಸುತ್ತಿದ್ದಾರೆ. ಜೆಫರೀಸ್ ಪ್ರಕಾರ, ಈ ನಿರಂತರ ದೇಶೀಯ ಹಣದ ಹರಿವು (Domestic Liquidity) ಭಾರತೀಯ ಷೇರು ಮಾರುಕಟ್ಟೆಗೆ ಭದ್ರವಾದ ರಕ್ಷಣೆ ನೀಡಿದೆ. ಆದರೆ, ಅದೇ ವೇಳೆ ಮಾರುಕಟ್ಟೆ ಮೌಲ್ಯೀಕರಣ ಅಸಹಜವಾಗಿ ಹೆಚ್ಚಿಸಿದೆಯಂತೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; ನೊಂದಣಿ, ಆದಾಯ, ಫಲಾನುಭವಿಗಳ ಸಂಖ್ಯೆ ಇತ್ಯಾದಿ ಮಾಹಿತಿ

ಎಫ್‌ಪಿಐ (FPI) ನಿರ್ಗಮನಕ್ಕೆ ಹಾದಿ ಸುಗಮ

ಸಾಮಾನ್ಯವಾಗಿ ವಿದೇಶಿ ಹೂಡಿಕೆದಾರರು (FPIs) ಭಾರತೀಯ ಮಾರುಕಟ್ಟೆಯಿಂದ ದೊಡ್ಡ ಮಟ್ಟದಲ್ಲಿ ಹಣವನ್ನು ಹಿಂತೆಗೆದುಕೊಂಡಾಗ (ಷೇರುಗಳನ್ನು ಮಾರಿದಾಗ), ಷೇರು ಮಾರುಕಟ್ಟೆ ತೀವ್ರವಾಗಿ ಕುಸಿಯುತ್ತದೆ. ಆದರೆ, ಪ್ರಸ್ತುತ ಎಫ್​ಪಿಐಗಳು ಭಾರೀ ಪ್ರಮಾಣದಲ್ಲಿ ನಿರ್ಗಮಿಸುತ್ತಿದ್ದರೂ ಮಾರುಕಟ್ಟೆಯಲ್ಲಿ ಅದಕ್ಕೆ ಅನುಗುಣವಾದ ಕುಸಿತ ಆಗುತ್ತಿಲ್ಲ. ಇದಕ್ಕೆ ಕಾರಣ ಎಸ್​ಐಪಿಯಿಂದ ಹರಿದುಬರುತ್ತಿರುವ ಬಂಡವಾಳ. ಇದರಿಂದ ವಿದೇಶೀ ಹೂಡಿಕೆದಾರರು ಮನಸೋಯಿಚ್ಛೆ ನಿರ್ಗಮಿಸಲು ಒಳ್ಳೆಯ ವಾತಾವರಣ ನಿರ್ಮಾಣವಾದಂತಾಗಿದೆ. ಯಾವುದೇ ದೊಡ್ಡ ಆತಂಕವಿಲ್ಲದೆ ತಮ್ಮ ಹೂಡಿಕೆಯನ್ನು ಮಾರಿ ಹೊರಹೋಗಲು ಸಾಧ್ಯವಾಗುತ್ತಿದೆ. ಏಕೆಂದರೆ ಅವರು ಮಾರುವ ಷೇರುಗಳನ್ನು ಖರೀದಿಸಲು ದೇಶೀಯ ಮ್ಯೂಚುಯಲ್ ಫಂಡ್‌ಗಳ ಬಳಿ ಸಾಕಷ್ಟು ಹಣವಿದೆ.

ರೂಪಾಯಿ ದೌರ್ಬಲ್ಯಕ್ಕೆ ಕಾರಣವೇನು?

ಜೆಫರೀಸ್ ವಿಶ್ಲೇಷಣೆಯ ಪ್ರಕಾರ, ಎಸ್‌ಐಪಿ ಹಣವು ಮಾರುಕಟ್ಟೆಯನ್ನು ಕುಸಿಯದಂತೆ ತಡೆದಿದೆಯಾದರೂ, ಅದು ರೂಪಾಯಿಯ ಮೌಲ್ಯ ಕುಸಿತವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣಗಳೂ ಇವೆ. ಎಫ್‌ಪಿಐಗಳು ಭಾರತೀಯ ಷೇರುಗಳನ್ನು ಮಾರಿದಾಗ ಅವರಿಗೆ ರೂಪಾಯಿಗಳಲ್ಲಿ ಹಣ ಸಿಗುತ್ತದೆ. ಈ ಹಣವನ್ನು ಅವರು ತಮ್ಮ ದೇಶಗಳಿಗೆ ಕೊಂಡೊಯ್ಯಲು ರೂಪಾಯಿಯನ್ನು ನೀಡಿ ಡಾಲರ್ ಖರೀದಿಸಬೇಕಾಗುತ್ತದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಹೆಚ್ಚಿ, ರೂಪಾಯಿಯ ಮೌಲ್ಯವು ಡಾಲರ್ ಎದುರು ದುರ್ಬಲಗೊಳ್ಳುತ್ತಿದೆ.

ಇದನ್ನೂ ಓದಿ: ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಬೆಂಗಳೂರಲ್ಲಿ ಎಷ್ಟಿದೆ?

ಜೆಫರೀಸ್ ಸಂಸ್ಥೆಯ ಪ್ರಮುಖ ಅಭಿಪ್ರಾಯಗಳು

ಭಾರತೀಯ ಚಿಲ್ಲರೆ ಹೂಡಿಕೆದಾರರ (Retail Investors) ಎಸ್‌ಐಪಿ ಬಲವು ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದ ಭಾರತೀಯ ಷೇರು ಮಾರುಕಟ್ಟೆಯನ್ನು ರಕ್ಷಿಸುತ್ತಿದೆ.

ಷೇರು ಮಾರುಕಟ್ಟೆ ಸ್ಥಿರವಾಗಿದ್ದರೂ, ವಿದೇಶಿ ಹೂಡಿಕೆದಾರರು ಹಣವನ್ನು ಹೊರಗೆ ಕೊಂಡೊಯ್ಯುತ್ತಿರುವುದರಿಂದ ಕರೆನ್ಸಿ ಮಾರುಕಟ್ಟೆಯ ಮೇಲೆ ಒತ್ತಡ ಮುಂದುವರಿದಿದ್ದು, ರೂಪಾಯಿ ಸಾರ್ವಕಾಲಿಕ ಕುಸಿತವನ್ನು ಕಾಣುತ್ತಿದೆ.

ಆರ್‌ಬಿಐ (RBI) ತನ್ನ ವಿದೇಶಿ ವಿನಿಮಯ ಮೀಸಲು (Forex Reserves) ನಿಧಿಯನ್ನು ಬಳಸಿಕೊಂಡು ರೂಪಾಯಿಯ ತೀವ್ರ ಕುಸಿತವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದು ಜೆಫರೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಿಂಚಿನ ವೇಗ… ಹೊಸ ಇತಿಹಾಸ ಬರೆದ ಗುರಿಂದರ್ವೀರ್ ಸಿಂಗ್ – Kannada News | Gurindervir singh smashes 100m national record with historic 10 09s

ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ 2026ರ ನ್ಯಾಷನಲ್ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಂಜಾಬ್‌ನ 25 ವರ್ಷದ ಓಟಗಾರ ಗುರಿಂದರ್ವೀರ್ ಸಿಂಗ್ ಕೇವಲ 10.09 ಸೆಕೆಂಡುಗಳಲ್ಲಿ ಗುರಿ ತಲುಪಿ, ಪುರುಷರ 100 ಮೀಟರ್ ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲೇ 10.10 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಓಡಿದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭರ್ಜರಿ ಪೈಪೋಟಿ:

ನ್ಯಾಷನಲ್ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ 100 ಮೀಟರ್ ಓಟದಲ್ಲಿ ಗುರಿಂದರ್ವೀರ್ ಸಿಂಗ್ ಮತ್ತು ಒಡಿಶಾದ ಅನಿಮೇಶ್ ಕುಜುರ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಸೆಮಿಫೈನಲ್​ನಿಂದ ಶುರುವಾದ ಈ ಪೈಪೋಟಿಯು ಫೈನಲ್​ನಲ್ಲೂ ಮುಂದುವರೆಯಿತು. ಪರಿಣಾಮ ಗುರಿಂದರ್ವೀರ್ ಸಿಂಗ್ ಹೊಸ ದಾಖಲೆಯೊಂದಿಗೆ ಗುರಿ ತಲುಪಿದರು.

  • ಸೆಮಿಫೈನಲ್ ಹೀಟ್ 1: ಗುರಿಂದರ್ವೀರ್ 10.17 ಸೆಕೆಂಡುಗಳಲ್ಲಿ ಓಡಿ ಮೊದಲ ದಾಖಲೆ ಬರೆದರು.
  • ಸೆಮಿಫೈನಲ್ ಹೀಟ್ 2: ಕೆಲವೇ ನಿಮಿಷಗಳ ನಂತರ ಅನಿಮೇಶ್ ಕುಜುರ್ 10.15 ಸೆಕೆಂಡುಗಳಲ್ಲಿ ಗುರಿ ತಲುಪಿ ಆ ದಾಖಲೆಯನ್ನು ಮುರಿದರು.
  •  ಫೈನಲ್ ಫೈಟ್: ಅಂತಿಮ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಗುರಿಂದರ್ವೀರ್, 10.09 ಸೆಕೆಂಡುಗಳ ಐತಿಹಾಸಿಕ ಸಮಯದೊಂದಿಗೆ ಚಿನ್ನದ ಪದಕ ಮತ್ತು ರಾಷ್ಟ್ರೀಯ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಪುರುಷರ 100 ಮೀಟರ್ ಫೈನಲ್ ಫಲಿತಾಂಶಗಳು:

  • 🥇 ಚಿನ್ನ: ಗುರಿಂದರ್ವೀರ್ ಸಿಂಗ್ (ಪಂಜಾಬ್) – 10.09 ಸೆಕೆಂಡ್ (ಹೊಸ ರಾಷ್ಟ್ರೀಯ ದಾಖಲೆ)
  • 🥈 ಬೆಳ್ಳಿ: ಅನಿಮೇಶ್ ಕುಜುರ್ (ಒಡಿಶಾ) – 10.20 ಸೆಕೆಂಡ್
  • 🥉 ಕಂಸ: ಪ್ರಣವ್ ಗುರವ್ (ಮಹಾರಾಷ್ಟ್ರ) – 10.29 ಸೆಕೆಂಡ್

ಇತರೆ ಪ್ರಮುಖ ದಾಖಲೆಗಳು:

ನ್ಯಾಷನಲ್ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಕ್ರೀಡಾಕೂಟದಲ್ಲಿ ಇನ್ನು ಎರಡು ಪ್ರಮುಖ ರಾಷ್ಟ್ರೀಯ ದಾಖಲೆಗಳು ನಿರ್ಮಾಣವಾದವು:

  •  ವಿಶಾಲ್ ಟಿಕೆ (400 ಮೀಟರ್): 400  ಮೀಟರ್ ರೇಸ್​ನಲ್ಲಿ ವಿಶಾಲ್ ಟಿಕೆ ಕೇವಲ 44.98 ಸೆಕೆಂಡುಗಳಲ್ಲಿ ಗುರಿ ತಲುಪಿ ಹೊಸ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು.
  • ತೇಜಸ್ವಿನ್ ಶಂಕರ್ (ಡೆಕಥ್ಲಾನ್): ಡೆಕಥ್ಲಾನ್​ನಲ್ಲಿ ತೇಜಸ್ವಿನ್ ಶಂಕರ್ ತಮ್ಮದೇ ಹಳೆಯ ದಾಖಲೆಯನ್ನು ಮುರಿದು 8057 ಅಂಕಗಳೊಂದಿಗೆ ಹೊಸ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು.

ಇದನ್ನೂ ಓದಿ: 27 ಕ್ರೀಡೆಗಳು: ಕರ್ನಾಟಕದ ಹೊಸ ಕ್ರಿಕೆಟ್ ಸ್ಟೇಡಿಯಂ ವಿಶೇಷತೆಗಳೇನು ಗೊತ್ತಾ?

ಕಾಮನ್​ವೆಲ್ತ್​ ಗೇಮ್ಸ್​ಗೆ ಎಂಟ್ರಿ:

ಈ ಭರ್ಜರಿ ಪ್ರದರ್ಶನದೊಂದಿಗೆ ಗುರಿಂದರ್ವೀರ್ ಸಿಂಗ್ 2026ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ಗೆ ನೇರ ಅರ್ಹತೆ ಪಡೆದಿದ್ದಾರೆ. ಹೀಗಾಗಿ ಮುಂಬರುವ ಕಾಮನ್​ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತವು ಪದಕವನ್ನು ನಿರೀಕ್ಷಿಸಬಹುದು.

Source link

ಎಷ್ಟು ಕಾದ್ರೂ ಡಾಕ್ಟ್ರೇ ಬರ್ತಿಲ್ಲ! ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ – Kannada News | Patients Face Severe Neglect and Delays at Bagalakotes Bilagi Taluk Hospital

ಬಾಗಲಕೋಟೆ, ಮೇ 24: ಜಿಲ್ಲೆಯ ಬೀಳಗಿ ತಾಲ್ಲೂಕಾಸ್ಪತ್ರೆಯಲ್ಲಿ ರೋಗಿಗಳು ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದ್ದು, ರೋಗಿಗಳು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೀಳಗಿಯಿಂದ ಬಂದ ರೋಗಿಗಳು, ಬೆಳಗ್ಗೆ ಆರು ಗಂಟೆಯಿಂದ ಎಂಟು ಗಂಟೆಯವರೆಗಿನ ಡೋಸ್ ನೀಡಬೇಕಾಗಿತ್ತು, ಆದರೆ ಎಂಟೂವರೆ ಆದರೂ ಯಾರೂ ಬಂದು ನೋಡಿಕೊಳ್ಳಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಕೇಳಿದಾಗ, ಸಿಬ್ಬಂದಿಯೊಬ್ಬರು ಡೋಸ್‌ಗಳು ಖಾಲಿಯಾಗಿವೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ಯಾವುದೇ ಭಾಗದಲ್ಲಿ ನರ್ಸ್‌ಗಳು ಸಹ ಕಾಣಿಸುತ್ತಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ. ರಾತ್ರಿ ಪಾಳಿಯ ನಂತರ ಬೆಳಗ್ಗೆ ಆರು ಗಂಟೆಗೆ ಬಂದ ಒಬ್ಬ ನರ್ಸ್‌ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಇದರಿಂದ ಜ್ವರ ಮತ್ತು ಇನ್ನಿತರ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ರೋಗಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ವೈದ್ಯರು ಇಲ್ಲದಿರುವುದು ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ ರೋಗಿಗಳ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿವಾನಂದ ನೀಲಣ್ಣವರ್ ದರೋಡೆ ಮಾಡಿಲ್ಲ! ಹೂಡಿಕೆದಾರರ ವೀಡಿಯೋ ವೈರಲ್ – Kannada News | Belagavi Ponzi Scam: Investors Rally to Defend Shivanand Neelannavar

ಬೆಳಗಾವಿ, ಮೇ 24: ಜಿಲ್ಲೆಯಲ್ಲಿ 4,500 ಕೋಟಿ ರೂಪಾಯಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಶಿವಾನಂದ ನೀಲಣ್ಣವರ್ ಬಂಧನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಶಿವಾನಂದ ಅವರು ಯಾರಿಗೂ ದ್ರೋಹ ಮಾಡಿಲ್ಲ, ಯಾರ ಜೇಬಿಗೂ ಕತ್ತರಿ ಹಾಕಿಲ್ಲ ಎಂದು ಹಲವು ಹೂಡಿಕೆದಾರರು ಕಣ್ಣೀರು ಹಾಕಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನೀಲಣ್ಣವರ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದ್ದು, ನಿವೃತ್ತ ಸೈನಿಕರು ಮತ್ತು ವಯೋವೃದ್ಧ ಮಹಿಳೆಯರು ನೀಲಣ್ಣವರ್‌ರನ್ನು ನೆನಪಿಸಿಕೊಂಡು ಭಾವುಕರಾಗಿ ಮಾತನಾಡಿದ್ದಾರೆ. ತಾವು ಲಾಭ ಪಡೆದಿರುವುದಾಗಿ ಹೂಡಿಕೆದಾರರು ಹೇಳುತ್ತಿದ್ದು, ಅವರ ಬಂಧನದ ಕುರಿತು ಸಿಐಡಿ ತನಿಖೆ ಮುಂದುವರೆದಿದ್ದರೂ, ಹೂಡಿಕೆದಾರರಿಂದ ವ್ಯಕ್ತವಾಗುತ್ತಿರುವ ಈ ಬಲವಾದ ಬೆಂಬಲ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ಸಿಐಡಿ ಅಧಿಕಾರಿಗಳು ಹಣ ವರ್ಗಾವಣೆ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದು, ಹೆಚ್ಚಿನ ಲಾಭಾಂಶ ಪಡೆದವರಿಂದ ಹಣ ವಸೂಲಿಗೆ ಸಿದ್ಧತೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Exit mobile version