LSG vs PBKS: ಶ್ರೇಯಸ್ ಶತಕ; ಪಂಜಾಬ್ ಪ್ಲೇಆಫ್‌ ಆಸೆ ಜೀವಂತ

ಐಪಿಎಲ್ 2026 ರ 68 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿತ್ತು. ಪ್ಲೇಆಫ್‌ ದೃಷ್ಟಿಯಿಂದ ಈ ಪಂದ್ಯ ಪಂಜಾಬ್ ಕಿಂಗ್ಸ್​ಗೆ ಬಹುಮುಖ್ಯವಾಗಿತ್ತು. ಅದರಂತೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಲಕ್ನೋ ತಂಡವನ್ನು ಮಣಿಸಿದ ಪಂಜಾಬ್ ತಂಡ ತನ್ನ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ 197 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರ ಅಬ್ಬರದ ಬ್ಯಾಟಿಂಗ್​ನಿಂದ ಸುಲಭವಾಗಿ ಜಯ ಸಾಧಿಸಿತು.

Source link

ನನ್ನ ತಮ್ಮ ಹಾಗೂ ಶಿವಣ್ಣನ ನಂಬಿ ರೈತರು ಸ್ಟೇಡಿಯಂಗೆ ಜಮೀನು ಕೊಟ್ಟಿದ್ದಾರೆ: ಡಿಕೆ ಶಿವಕುಮಾರ್

ಬೆಂಗಳೂರು, ಮೇ.23: ನಗರಕ್ಕೆ ಹೊಸ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಯೋಜನೆಗೆ ಆನೇಕಲ್ ತಾಲ್ಲೂಕಿನ ಸೂರ್ಯ ನಗರದಲ್ಲಿ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಶಾಸಕ ಶಿವಲಿಂಗೇಗೌಡ, ಆನೇಕಲ್ ಶಿವಣ್ಣ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಉಪಸ್ಥಿತರಿದ್ದರು. ಡಿಕೆ ಶಿವಕುಮಾರ್ ಅವರು ಮಾತನಾಡಿ, ಈ ಯೋಜನೆ ಬೆಂಗಳೂರಿಗೆ ಹೊಸ ಕೊಡುಗೆಯಾಗಲಿದೆ ಎಂದು ಹೇಳಿದರು. ಲಕ್ಷಾಂತರ ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಬೆಂಗಳೂರಿನ ಹೊರಗೆ ಭವ್ಯವಾದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮತ್ತು ಇತರ ಕ್ರೀಡೆಗಳನ್ನು ನೋಡಲು ಅವಕಾಶವನ್ನು ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ಇದು ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ ಎಂದು ಅವರು ತಿಳಿಸಿದರು. ಈ ಐತಿಹಾಸಿಕ ಕಾರ್ಯಕ್ರಮವು ಸರ್ಕಾರ ಮತ್ತು ಜನರ ಸಹಕಾರದಿಂದ ಸಾಧ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ರೈತರ ಸಹಕಾರ ಹಾಗೂ ಸ್ಥಳೀಯ ನಾಯಕರಾದ ಡಿ.ಕೆ. ಸುರೇಶ್ ಮತ್ತು ಶಿವಣ್ಣ ಅವರ ಪ್ರಯತ್ನಗಳು ಈ ಯೋಜನೆಗೆ ಪೂರಕವಾಗಿವೆ ಎಂದು ಡಿಕೆ ಶಿವಕುಮಾರ್ ಶ್ಲಾಘಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ಗೆ ಶುರುವಾಯ್ತು ಸಂಕಷ್ಟ, ಚರ್ಚೆ ಬಳಿಕವೂ ಪ್ರದರ್ಶಕರ ವಿರೋಧ – Kannada News | Telangana Exhibitors oppose price hike for Ram Charan’s Peddi movie

ತೆಲುಗು ಚಿತ್ರರಂಗದಲ್ಲಿ (Tollywood) ಕಳೆದ ಒಂದೆರಡು ವರ್ಷಗಳಿಂದಲೂ ಸಿನಿಮಾ ನಿರ್ಮಾಪಕರು, ಪ್ರದರ್ಶಕರು ಮತ್ತು ವಿತರಕರ ನಡುವೆ ಭಿನ್ನಾಭಿಪ್ರಾಯಗಳು ಚಾಲ್ತಿಯಲ್ಲಿವೆ. ಲಾಭ ಹಂಚಿಕೆ ವಿಚಾರವಾಗಿ ಪದೇ-ಪದೇ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಭಿನ್ನಾಭಿಪ್ರಾಯಗಳು ಮೂಡುತ್ತಲೇ ಇವೆ. ಹಲವು ಸುತ್ತುಗಳ ಚರ್ಚೆಗಳು ಸಹ ನಡೆದಿವೆ. ಇತ್ತೀಚೆಗಂತೂ ಕೆಲ ನಿರ್ಮಾಪಕರು, ವಿತರಕರು ಬಹಿರಂಗವಾಗಿ ಏಕವಚನದಲ್ಲಿ ಬೈದಾಡಿಕೊಂಡಿದ್ದೂ ಸಹ ಇದೆ. ಆದರೆ ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಮಾಪಕರು, ಪ್ರದರ್ಶಕರು ಲಾಭ ಹಂಚಿಕೆ ಷರತ್ತಿಗೆ ಒಪ್ಪಿಕೊಂಡಿದ್ದರು. ಆದರೆ ಲಾಭ ಹಂಚಿಕೆಯು ‘ಪೆದ್ದಿ’ ಸಿನಿಮಾ ಬಿಡುಗಡೆ ನಂತರ ಎನ್ನಲಾಗಿತ್ತು. ಸರಿ ಎಂದು ಒಪ್ಪಿಕೊಂಡಿದ್ದ ಪ್ರದರ್ಶಕರು ಈಗ ಮತ್ತೆ ತಕರಾರು ತೆಗೆದಿದ್ದಾರೆ.

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಆದರೆ ಇದೀಗ ತೆಲಂಗಾಣ ಸಿನಿಮಾ ಪ್ರದರ್ಶಕರು ಸಿನಿಮಾದ ವಿರುದ್ಧ ನಿಂತಿದ್ದಾರೆ. ‘ಪೆದ್ದಿ’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ತೆಲಂಗಾಣದ ಪ್ರದರ್ಶಕರು ವಿರೋಧಿಸಿರುವುದು ಮಾತ್ರವೇ ಅಲ್ಲದೆ, ‘ಪೆದ್ದಿ’ ಸಿನಿಮಾ ಮೂಲಕವೇ ಲಾಭಾಂಶ ಹಂಚಿಕೆ ಪ್ರಾರಂಭವಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ತೆಲಂಗಾಣ ಪ್ರದರ್ಶಕರ ಸಂಘವು ಪತ್ರಿಕಾಗೋಷ್ಠಿ ನಡೆಸಿ, ಏಕ-ಪರದೆ ಚಿತ್ರಮಂದಿರಗಳಲ್ಲಿ ಇನ್ನು ಮುಂದೆ ದೊಡ್ಡ ಸಿನಿಮಾಗಳ ಟಿಕೆಟ್ ದರಗಳನ್ನು ಹೆಚ್ಚಿಸುವುದಿಲ್ಲ ಎಂದಿದ್ದಾರೆ. ಟಿಕೆಟ್ ದರಗಳನ್ನು ಅತಿಯಾಗಿ ಹೆಚ್ಚಿಸುವುದರಿಂದ ಸಾಮಾನ್ಯ ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಸೆಳೆಯಲು ಟಿಕೆಟ್ ದರಗಳನ್ನು ಸಾಮಾನ್ಯ ಮಟ್ಟದಲ್ಲೇ ಇಡಲು ನಿರ್ಧರಿಸಲಾಗಿದ್ದು, ಈ ಕುರಿತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೂ ಪತ್ರ ಬರೆಯಲಾಗಿದ್ದು, ‘ಪೆದ್ದಿ’ ಸೇರಿದಂತೆ ಯಾವುದೇ ದೊಡ್ಡ ಸಿನಿಮಾಗಳ ಟಿಕೆಟ್ ದರ ಹೆಚ್ಚಿಸದಂತೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ತೆಲುಗು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ

ಈ ವಿವಾದದ ಮುಖ್ಯ ಕಾರಣ ‘ಬಾಡಿಗೆ ಪದ್ಧತಿ’ ಮತ್ತು ‘ಲಾಭ ಹಂಚಿಕೆ ಪದ್ಧತಿ’ ನಡುವಿನ ಸಂಘರ್ಷವಾಗಿದೆ. ಚಿತ್ರಮಂದಿರಗಳ ಮಾಲೀಕರು ಹಳೆಯ ಬಾಡಿಗೆ ಪದ್ಧತಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದು, ಮಲ್ಟಿಪ್ಲೆಕ್ಸ್‌ಗಳಂತೆ ತಮಗೂ ಶೇಕಡಾವಾರು ಆದಾಯ ಹಂಚಿಕೆ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಮೊದಲ ವಾರದಲ್ಲಿ ಶೇಕಡಾ 60, ಎರಡನೇ ವಾರದಲ್ಲಿ ಶೇಕಡಾ 50 ಮತ್ತು ಆನಂತರ ಶೇಕಡಾ 40 ರಷ್ಟು ಆದಾಯದ ಪಾಲನ್ನು ತಮಗೆ ನೀಡಬೇಕು, ಇಲ್ಲದಿದ್ದರೆ ಚಿತ್ರವನ್ನು ಪ್ರದರ್ಶಿಸುವುದಿಲ್ಲ ಎಂದು ಅವರು ಕಟ್ಟುನಿಟ್ಟಾದ ಆದೇಶವನ್ನು ನೀಡಿದ್ದಾರೆ.

ಇತ್ತೀಚೆಗಷ್ಟೇ ತೆಲುಗು ಫಿಲ್ಮ್ ಚೇಂಬರ್ ನೇತೃತ್ವದಲ್ಲಿ ನಡೆದ ಸಭೆಯೊಂದರಲ್ಲಿ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಮತ್ತು ‘ಪೆದ್ದಿ’ ಚಿತ್ರದ ಬಿಡುಗಡೆಗೆ ಹಾದಿ ಸುಗಮವಾಗಿದೆ ಎಂದು ಹೇಳಲಾಗಿತ್ತು. ಆದರೆ, ಆ ನಂತರ ತೆಲಂಗಾಣ ರಾಜ್ಯ ಚಲನಚಿತ್ರ ಚೇಂಬರ್ ಅಧ್ಯಕ್ಷ ಸುನಿಲ್ ನಾರಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಚಿತ್ರರಂಗದೊಳಗಿನ ಭಿನ್ನಾಭಿಪ್ರಾಯಗಳು ಮತ್ತೆ ಬಹಿರಂಗಗೊಂಡಿವೆ. ಪ್ರದರ್ಶಕರು ತಮ್ಮ ಪಟ್ಟು ಸಡಿಲಿಸದ ಕಾರಣ ‘ಪೆದ್ದಿ’ ಚಿತ್ರದ ವಿವಾದವು ಮತ್ತೆ ಮೊದಲಿನ ಸ್ಥಿತಿಗೆ ಬಂದು ತಲುಪಿದೆ.

ತೆಲಂಗಾಣವು ತೆಲುಗು ಚಿತ್ರರಂಗಕ್ಕೆ ಅತ್ಯಂತ ದೊಡ್ಡ ಮಾರ್ಕೆಟ್ ಆಗಿರುವುದರಿಂದ, ಪ್ರದರ್ಶಕರ ಈ ಹಠಾತ್ ನಿರ್ಧಾರವು ‘ಪೆದ್ದಿ’ ಚಿತ್ರದ ಆರಂಭಿಕ ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಭಾರಿ ಹೊಡೆತ ನೀಡುವ ಸಾಧ್ಯತೆಯಿದೆ. ಆಂಧ್ರಪ್ರದೇಶದಲ್ಲಿ ಚಿತ್ರದ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ಸಿಕ್ಕಿದ್ದರೂ, ತೆಲಂಗಾಣದಲ್ಲಿ ಹಳೆಯ ದರದಲ್ಲೇ ಟಿಕೆಟ್ ಮಾರಾಟ ಮಾಡಿದರೆ ನಿರ್ಮಾಪಕರಿಗೆ ನಷ್ಟವಾಗಲಿದೆ. ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಎದುರಾಗಿರುವ ಈ ಬಿಕ್ಕಟ್ಟನ್ನು ಬಗೆಹರಿಸಲು ಮೆಗಾಸ್ಟಾರ್ ಚಿರಂಜೀವಿ ಅವರು ಮಧ್ಯಸ್ಥಿಕೆ ವಹಿಸುತ್ತಾರೆಯೇ ಎಂಬುದನ್ನು ಇಡೀ ಚಿತ್ರರಂಗ ಕುತೂಹಲದಿಂದ ನೋಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೆತ್ತವರಿಗೆ ಮರ್ಯಾದೆ ಕೊಡಲ್ಲವೆಂದು ಬೈದ ಪತಿ: ಕ್ವಾರ್ಟರ್ಸ್​ನಲ್ಲೇ ಆತ್ಮಹತ್ಯೆಗೆ ಶರಣಾದ ಕಾನ್ಸ್​ಟೇಬಲ್​​ನ ಪತ್ನಿ – Kannada News | Constable’s Wife Dies in Quarters After Family Dispute

ಬೆಂಗಳೂರು, ಮೇ 23: ತಂದೆ-ತಾಯಿಗೆ ಮರ್ಯಾದೆ ಕೊಡುವುದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿಯೊಂದಿಗೆ ಉಂಟಾದ ಜಗಳದಿಂದ ಮನನೊಂದ ಪೊಲೀಸ್ ಕಾನ್ಸ್‌ಟೇಬಲ್ ಪತ್ನಿ (wife) ಪೊಲೀಸ್ ಕ್ವಾರ್ಟರ್ಸ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಕೆ.ಆರ್.ಪುರಂನಲ್ಲಿ ನಡೆದಿದೆ. ಹೆಚ್‌ಎಎಲ್ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ರಾಜೇಶ್ ಆರಾಧ್ಯ ಪತ್ನಿ ಲಕ್ಷ್ಮೀಪ್ರಿಯಾ (27) ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಮುಖ್ಯಾಂಶಗಳು

  • ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಕಾನ್ಸ್​ಟೇಬಲ್ ಪತ್ನಿ ಆತ್ಮಹತ್ಯೆ
  • ಪತಿ ಮತ್ತು ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ
  • ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲು

ನಡೆದಿದ್ದೇನು?

ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ರಾಜೇಶ್ ಆರಾಧ್ಯ ಮತ್ತು ಲಕ್ಷ್ಮೀಪ್ರಿಯಾ ಅವರಿಗೆ 2023ರಲ್ಲಿ ಮೈಸೂರಿನಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ಸದ್ಯ 8 ತಿಂಗಳ ಹಸುಗೂಸಿದೆ. ಕೆ.ಆರ್.ಪುರಂನಲ್ಲಿರುವ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಈ ಕುಟುಂಬ ವಾಸವಾಗಿತ್ತು. ನಿನ್ನೆ (ಮೇ 22) ಬೆಳಿಗ್ಗೆ ದಂಪತಿ ನಡುವೆ ಕೌಟುಂಬಿಕ ವಿಷಯಕ್ಕೆ ದೊಡ್ಡ ಜಗಳ ಉಂಟಾಗಿದೆ. “ನನ್ನ ತಂದೆ-ತಾಯಿಗೆ ನೀನು ಸರಿಯಾಗಿ ಮರ್ಯಾದೆ ಕೊಡುವುದಿಲ್ಲ” ಎಂದು ಪತಿ ರಾಜೇಶ್ ಪತ್ನಿಗೆ ಬೈದಿದ್ದರು. ಇದೇ ಕಾರಣಕ್ಕೆ ತೀವ್ರ ಬೇಸರಗೊಂಡಿದ್ದ ಲಕ್ಷ್ಮೀಪ್ರಿಯಾ, ನಿನ್ನೆ ರಾತ್ರಿ ರಾಜೇಶ್ ನೈಟ್ ಡ್ಯೂಟಿಗೆ ತೆರಳಿದ್ದಾಗ ಇತ್ತ ಕ್ವಾರ್ಟರ್ಸ್‌ನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.

ಪತಿ ಮತ್ತು ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

ಇನ್ನು ಘಟನೆ ನಡೆದ ಬೆನ್ನಲ್ಲೇ ಮೃತ ಲಕ್ಷ್ಮೀಪ್ರಿಯಾ ಪೋಷಕರು, ರಾಜೇಶ್​ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮದುವೆಯಾದಾಗಿನಿಂದಲೂ ರಾಜೇಶ್ ಆರಾಧ್ಯ ಹಾಗೂ ಆತನ ಕುಟುಂಬ ಸದಸ್ಯರು ಲಕ್ಷ್ಮೀಪ್ರಿಯಾಗೆ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕವಾಗಿ ತೀವ್ರ ಹಿಂಸೆ ನೀಡುತ್ತಿದ್ದರು. ನಿನ್ನೆ ನಡೆದ ಜಗಳ ಹಾಗೂ ಈ ಹಿಂದಿನ ಕಿರುಕುಳವೇ ಮಗಳ ಆತ್ಮಹತ್ಯೆಗೆ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಕೆ.ಆರ್.ಪುರಂ ಠಾಣೆಯಲ್ಲಿ ಕೇಸ್ ದಾಖಲು

ಮೃತ ಲಕ್ಷ್ಮೀಪ್ರಿಯಾ ಪೋಷಕರು ನೀಡಿದ ದೂರಿನ ಅನ್ವಯ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪತಿ ರಾಜೇಶ್ ಆರಾಧ್ಯ ಹಾಗೂ ಆತನ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶಕ್ತಿಮಾನ್ ಕತೆಯನ್ನೇ ಅಲ್ಲು ಅರ್ಜುನ್​ಗಾಗಿ ಹೆಣೆಯುತ್ತಿರುವ ಬಾಸಿಲ್ ಜೋಸೆಫ್? – Kannada News | Basil Joseph not doing Shaktiman movie with Allu Arjun

ಪುಷ್ಪ 2’ (Pushpa 2) ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ಗೆ ಒಂದರ ಹಿಂದೊಂದು ದೊಡ್ಡ ದೊಡ್ಡ ನಿರ್ದೇಶಕರುಗಳ ಆಫರ್ ಬಂದಿದ್ದು, ಈಗಾಗಲೇ ಕೆಲವು ನಿರ್ದೇಶಕರುಗಳೊಟ್ಟಿಗೆ ಸಿನಿಮಾ ಒಪ್ಪಿಕೊಂಡಿದ್ದಾರೆ ಸಹ. ಇದೀಗ ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಮಲಯಾಳಂ ಸ್ಟಾರ್ ನಟ ಬಾಸಿಲ್ ಜೋಸೆಫ್ ನಿರ್ದೇಶನದ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಸಂದೀಪ್ ರೆಡ್ಡಿ ವಂಗಾ ಸಿನಿಮಾ ಅದರ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ, ಅದಾದ ಬಳಿಕ ಮತ್ತೆ ಸುಕುಮಾರ್. ಒಟ್ಟಾರೆ ಮುಂದಿನ ಕೆಲ ವರ್ಷಗಳ ಕಾಲ ಅಲ್ಲು ಅರ್ಜುನ್ ಬ್ಯುಸಿ.

ಆದರೆ ಇಷ್ಟು ಸಿನಿಮಾಗಳಲ್ಲಿ ಮಲಯಾಳಂ ನಟ ಬಾಸಿಲ್ ನಿರ್ದೇಶನ ಮಾಡಲಿರುವ ಸಿನಿಮಾ ಸಖತ್ ಕುತೂಹಲ ಮೂಡಿಸಿತ್ತು. ಏಕೆಂದರೆ ಬಾಸಿಲ್ ಅವರು ಅಲ್ಲು ಅರ್ಜುನ್​​ಗಾಗಿ ಸೂಪರ್ ಹೀರೋ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಬಾಸಿಲ್ ಅವರು ‘ಮಿನ್ನಲ್ ಮುರಲಿ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಅದು ಭಾರತದ ಅತ್ಯುತ್ತಮ ಸೂಪರ್ ಹೀರೋ ಸಿನಿಮಾಗಳಲ್ಲಿ ಒಂದಾಗಿದೆ. ಈಗ ಅದೇ ಬಾಸಿಲ್, ಅಲ್ಲು ಅರ್ಜುನ್​​ಗೆ ಸೂಪರ್ ಹೀರೋ ಸಿನಿಮಾ ನಿರ್ದೇಶಿಸಲು ಮುಂದಾಗಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ: 35 ಲಕ್ಷ ಮೌಲ್ಯದ ಟ್ಯಾಂಕರ್ ಜಪ್ತಿ, ಓರ್ವನ ಬಂಧನ!

ಆದರೆ ಬಾಸಿಲ್ ಜೋಸೆಫ್, ಅಲ್ಲು ಅರ್ಜುನ್ ಅವರಿಗೆ ಶಕ್ತಿಮಾನ್ ಕತೆಯನ್ನು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದಕ್ಕೆ ಕಾರಣವೆಂದರೆ ಬಾಸಿಲ್ ಜೋಸೆಫ್, ಬಾಲಿವುಡ್ ನಟ ರಣ್ವೀರ್ ಸಿಂಗ್ ಜೊತೆಗೆ ‘ಶಕ್ತಿಮಾನ್’ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಆ ಸಿನಿಮಾ ರದ್ದಾದ ಬಳಿಕ ಬಾಸಿಲ್ ಜೋಸೆಫ್, ಅಲ್ಲು ಅರ್ಜುನ್ ಜೊತೆ ಸಿನಿಮಾ ಘೋಷಿಸಿದರು. ಅದೂ ಸೂಪರ್ ಹೀರೋ ಸಿನಿಮಾ ಹಾಗಾಗಿ ಅದು ಶಕ್ತಿಮಾನ್ ಕತೆಯೇ ಆಗಿರಬೇಕು ಎಂಬ ಅನುಮಾನ ಅಭಿಮಾನಿಗಳಿಗೆ ಇತ್ತು. ಆದರೆ ಅದು ಸುಳ್ಳಾಗಿದೆ. ಬಾಸಿಲ್ ಅವರು, ಅಲ್ಲು ಅರ್ಜುನ್​​ಗಾಗಿ ಶಕ್ತಿಮಾನ್ ಕತೆಯನ್ನು ಸಿನಿಮಾ ಮಾಡುತ್ತಿಲ್ಲವಂತೆ.

ಬಾಸಿಲ್ ಅವರು ಅಲ್ಲು ಅರ್ಜುನ್​​ಗೆ ಯಾವ ರೀತಿಯ ಕತೆಯನ್ನು ಸಿನಿಮಾ ಮಾಡಲಿದ್ದಾರೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಆದರೆ ಅದೊಂದು ಸೂಪರ್ ಹೀರೋ ಮಾದರಿಯ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ‘ಶಕ್ತಿಮಾನ್’ಗಾಗಿ ಮಾಡಿದ್ದ ಕತೆಯನ್ನೇ ಬೇರೊಬ್ಬ ಸೂಪರ್ ಹೀರೋ ರೀತಿ ಬಾಸಿಲ್ ಪ್ರೆಸೆಂಟ್ ಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ‘ಶಕ್ತಿಮಾನ್’ ಪಾತ್ರದ ಮೇಲೆ ಈಗಾಗಲೇ ಬೇರೊಬ್ಬ ನಿರ್ಮಾಪಕರ ಹಕ್ಕಿದೆ. ಎಲ್ಲದಕ್ಕೂ ಸಮಯ ಉತ್ತರ ನೀಡಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭೂಪಾಲ್​ನಲ್ಲಿ ‘ಪೆದ್ದಿ ಹವಾ, ರಾಮ್ ಚರಣ್ ಜೊತೆ ಇನ್ಯಾರೆಲ್ಲ ಹಾಜರಿ – Kannada News | Ram Charan starrer Peddi musical event organized in Bhopal

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರವನ್ನು ಚಿತ್ರತಂಡ ಈಗಾಗಲೇ ಆರಂಭಿಸಿದೆ. ಇಂದು (ಮೇ 23) ಮಧ್ಯ ಪ್ರದೇಶದ ಭೂಪಾಲ್​​ನಲ್ಲಿ ‘ಪೆದ್ದಿ’ ಸಿನಿಮಾದ ದೊಡ್ಡ ಇವೆಂಟ್ ಅನ್ನು ಆಯೋಜಿಸಲಾಗಿದ್ದು, ಎಆರ್ ರೆಹಮಾನ್ ಮ್ಯೂಸಿಕಲ್ ನೈಟ್ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಮಧ್ಯ ಪ್ರದೇಶದ ಕೆಲವು ಸಚಿವರ ಜೊತೆಗೆ ರಾಮ್ ಚರಣ್, ಜಾನ್ಹವಿ ಕಪೂರ್, ನಟ, ಸಂಸದ ರವಿ ಕಿಶನ್, ದಿವ್ಯಾಂದು ಇನ್ನೂ ಹಲವರು ಭಾಗಿ ಆಗಿದ್ದರು. ಈ ವೇಳೆ ನಟ ರಾಮ್ ಚರಣ್ ಚುಟುಕಾಗಿ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದರು. ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಮಗಳೇ ಹೋಗಿದ್ದಾಳೆ, ಇನ್ಯಾರ ಮೇಲೆ ದೂರೋಣ!’: ನೀಟ್ ಪರೀಕ್ಷೆಯ ಒತ್ತಡಕ್ಕೆ ಬಲಿಯಾಯ್ತಾ ಮತ್ತೊಂದು ಜೀವ? ಕಣ್ಣೀರಿಟ್ಟ ತಂದೆ – Kannada News | Kalaburagi Student Suicide: NEET Dream Crushed by Exam Pressure, Awaits Results

ಕಲಬುರಗಿ, ಮೇ,23: ವೈದ್ಯಕೀಯ ಶಿಕ್ಷಣದ (Medical Education) ದೊಡ್ಡ ಕನಸು ಹೊತ್ತಿದ್ದ 18 ವರ್ಷದ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಅತ್ಯಂತ ದಾರುಣ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಮೇ 2ರಂದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಬರೆದಿದ್ದ ಭಾಗ್ಯಶ್ರೀ (18) ಮೃತಪಟ್ಟ ದುರ್ದೈವಿ. ಕಲಬುರಗಿ ನಗರದ ಕೋರ್ಟ್ ವೃತ್ತದ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ಸಂಭವಿಸಿದೆ.

ಮೃತ ಭಾಗ್ಯಶ್ರೀ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 92 ರಷ್ಟು ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಳು. ವೈದ್ಯಕೀಯ ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಮತ್ತು ನಿರೀಕ್ಷೆ ಹೊಂದಿದ್ದ ಆಕೆ, ಇತ್ತೀಚೆಗಷ್ಟೇ ನೀಟ್ ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಪರೀಕ್ಷೆಯ ಫಲಿತಾಂಶದ ಕುರಿತಾದ ಆತಂಕ ಅಥವಾ ಒತ್ತಡವೇ ಇದಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ನೀಟ್ ಹಗರಣಕ್ಕೆ ಮತ್ತೊಂದು ಬಲಿ; ಪತ್ರಿಕೆ ಸೋರಿಕೆಯಿಂದ ಪರೀಕ್ಷೆ ರದ್ದಾಗಿದ್ದಕ್ಕೆ 22 ವರ್ಷದ ವಿದ್ಯಾರ್ಥಿ ಸಾವು

ಘಟನೆ ಕುರಿತು ಮಾಧ್ಯಮಗಳ ಎದುರು ಕಣ್ಣೀರು ಹಾಕಿದ ಮೃತಳ ತಂದೆ ರಾಜಶೇಖರ್, “ಮಗಳಿಗೂ ನಮಗೂ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ, ಕುಟುಂಬಸ್ಥರ ಜೊತೆ ಅತ್ಯಂತ ಚೆನ್ನಾಗಿಯೇ ಇದ್ದಳು. ಪಿಯುಸಿಯಲ್ಲಿ 92% ಅಂಕ ಬಂದಿತ್ತು, ಇವಾಗ ಆಕೆಯೇ ನಮ್ಮನ್ನು ಬಿಟ್ಟು ಹೋಗಿದ್ದಾಳೆ. ನಾವು ಯಾರ ಮೇಲೆಯೂ ಆಪಾದನೆ ಮಾಡುವುದಿಲ್ಲ ಮತ್ತು ಯಾರ ಮೇಲೂ ದೂರಲು ಹೋಗುವುದಿಲ್ಲ” ಎಂದು ಭಾವುಕರಾಗಿ ಹೇಳಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:46 pm, Sat, 23 May 26

Source link

ಪ್ಲೇಆಫ್‌ಗೂ ಮುನ್ನ ಆರ್​ಸಿಬಿಗೆ ಆಘಾತ; ಐಪಿಎಲ್‌ನಿಂದ ಹೊರಬಿದ್ದ ಸ್ಟಾರ್ ಆರಂಭಿಕ – Kannada News | IPL 2026 Playoffs: RCB Faces Setback as jacob bethell Out, Phil Salt Returns to Boost Squad

ಐಪಿಎಲ್ 2026 (IPL 2026) ರ ಪ್ಲೇಆಫ್‌ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಹಾಲಿ ಚಾಂಪಿಯನ್ ಆರ್​ಸಿಬಿ ಇದೇ ಮೇ 26 ರಂದು ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಆರ್​ಸಿಬಿ ಸಕಲ ತಯಾರಿಯನ್ನು ನಡೆಸುತ್ತುದೆ. ಈ ನಡುವೆ ತಂಡಕ್ಕೆ ಹಿನ್ನಡೆಯುಂಟಾಗಿದ್ದು, ತಂಡದ ಯುವ ಇಂಗ್ಲಿಷ್ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್ (Jacob Bethell) ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಬೆರಳಿನ ಗಾಯದಿಂದ ಬಳಲುತ್ತಿರುವ ಬೆಥೆಲ್ ತಂಡವನ್ನು ತೊರೆದು ತವರಿಗೆ ಮರಳಿದ್ದಾರೆ. ಅಂದರೆ ಆರ್​ಸಿಬಿ ಬೆಥೆಲ್ ಇಲ್ಲದೆ ಪ್ಲೇಆಫ್‌ ಆಡಲಿದೆ.

ಐಪಿಎಲ್​ನಿಂದ ಹೊರಬಿದ್ದ ಬೆಥೆಲ್

ಗಾಯದ ಕಾರಣದಿಂದಾಗಿ ಬೆಥೆಲ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಲೀಗ್ ಪಂದ್ಯವನ್ನು ಆಡಿರಲಿಲ್ಲ. ಅವರ ಸ್ಥಾನದಲ್ಲಿ ವೆಂಕಟೇಶ್ ಅಯ್ಯರ್ ಆರಂಭಿಕರಾಗಿ ಆಡಿದ್ದರು. ವಾಸ್ತವವಾಗಿ ಬೆಥೆಲ್ ಕೂಡ ಫಿಲ್ ಸಾಲ್ಟ್ ಗಾಯಗೊಂಡ ಕಾರಣ ತಂಡದಲ್ಲಿ ಆಡುವ ಅವಕಾಶ ಪಡೆದರು. ಅದರಂತೆ ಆಡಿದ ಏಳು ಪಂದ್ಯಗಳಲ್ಲಿ ಕೇವಲ 96 ರನ್ ಕಲೆಹಾಕಲಷ್ಟೇ ಶಕ್ತರಾದರು. ಬೆಥೆಲ್ ಈಗ ಇಂಗ್ಲೆಂಡ್​ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿದ್ದಾರೆ.

ಕೊಹ್ಲಿ ಜೊತೆ ಆರಂಭಿಕರು ಯಾರು?

ಬೆಥೆಲ್ ತಂಡ ತೊರೆದಿರುವುದರಿಂದ ಅವರ ಸ್ಥಾನದಲ್ಲಿ ಯಾರು ಆಡುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಗಾಯದಿಂದ ತಂಡ ತೊರೆದಿದ್ದ ಫಿಲ್ ಸಾಲ್ಟ್ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಮೇ 22 ರಂದು ಹೈದರಾಬಾದ್‌ನಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯಕ್ಕೂ ಮುನ್ನ ಸಾಲ್ಟ್ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಅವರು ಪ್ಲೇಆಫ್‌ ಸುತ್ತಿನಲ್ಲಿ ಕಣಕ್ಕಿಳಿಯುವುದು ಖಚಿತ. ಇಲ್ಲಿಯವರೆಗೆ ಆರು ಪಂದ್ಯಗಳನ್ನು ಆಡಿರುವ ಸಾಲ್ಟ್ ಸರಾಸರಿ 33.66 ಮತ್ತು 168 ಸ್ಟ್ರೈಕ್ ರೇಟ್‌ನಲ್ಲಿ 202 ರನ್ ಗಳಿಸಿದ್ದಾರೆ. ಗಾಯಗೊಳ್ಳುವ ಮೊದಲು ಅವರು ಎರಡು ಅರ್ಧಶತಕಗಳನ್ನು ಬಾರಿಸಿದ್ದರು. ಹೀಗಾಗಿ ಸಾಲ್ಟ್ ಆಗಮನ ಆರ್​ಸಿಬಿಗೆ ಆನೆಬಲ ತಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:19 pm, Sat, 23 May 26

Source link

ತುಮಕೂರು ಮೆಟ್ರೋ ವಿಸ್ತರಣೆ ಬಗ್ಗೆ ಬಿಗ್​​​​ ಅಪ್ಡೇಟ್​ ನೀಡಿದ ಗೃಹಸಚಿವ ಡಾ. ಜಿ. ಪರಮೇಶ್ವರ್ – Kannada News | Tumakuru Metro Link: Decades Long Dream Nears Reality, PPP Model for RS.20,000 Cr Project

ಬೆಂಗಳೂರು, ಮೇ 23: ತುಮಕೂರು ಮತ್ತು ಬೆಂಗಳೂರು ನಡುವೆ ದಿನನಿತ್ಯ ಸಂಚರಿಸುವ ಲಕ್ಷಾಂತರ ಪ್ರಯಾಣಿಕರ ದಶಕಗಳ ಕನಸು ಕೊನೆಗೂ ನನಸಾಗುವತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಮಾದಾವರದಿಂದ ತುಮಕೂರು ನಗರದವರೆಗೆ ‘ನಮ್ಮ ಮೆಟ್ರೋ’ (Namma Metro) ರೈಲು ಯೋಜನೆಯನ್ನು ವಿಸ್ತರಿಸುವ ಕುರಿತು ವಿಸ್ತೃತ ಯೋಜನಾ ವರದಿ (DPR) ಸಿದ್ಧವಾಗಿದ್ದು, ಶೀಘ್ರದಲ್ಲೇ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಬೇಕೆಂದು ಬಹಳ ದಿನಗಳಿಂದ ತೀವ್ರ ದೊಡ್ಡ ಮಟ್ಟದ ಪ್ರಯತ್ನಗಳು ನಡೆಯುತ್ತಿದ್ದವು. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಯ ಫೀಸಿಬಿಲಿಟಿ (ಸಾಧ್ಯತೆಗಳ) ಅಧ್ಯಯನ ನಡೆಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಹೈದರಾಬಾದ್ ಮೂಲದ ಸಂಸ್ಥೆಯೊಂದಕ್ಕೆ 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಜವಾಬ್ದಾರಿ ನೀಡಲಾಗಿತ್ತು. ಆ ಸಂಸ್ಥೆಯು ನೀಡಿರುವ ವರದಿಯಲ್ಲಿ “ಮಾದಾವರದಿಂದ ತುಮಕೂರಿನವರೆಗೆ ಮೆಟ್ರೋ ಮಾರ್ಗ ನಿರ್ಮಿಸುವುದು ಸಂಪೂರ್ಣ ಸಾಧ್ಯ ಹಾಗೂ ಲಾಭದಾಯಕ” ಎಂದು ಸ್ಪಷ್ಟಪಡಿಸಲಾಗಿದೆ.

ಇನ್ನು ಇದರ ಸಾಧ್ಯತೆಗಳ ವರದಿ ಬಂದ ನಂತರ ಬಿಎಂಆರ್‌ಸಿಎಲ್ ಸಂಸ್ಥೆಯು ಮತ್ತೊಂದು ಖಾಸಗಿ ಏಜೆನ್ಸಿ ಮೂಲಕ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿಕೊಂಡಿದೆ. ಈ ಡಿಪಿಆರ್ ವರದಿಯ ಪ್ರಕಾರ ಮಾದಾವರ-ತುಮಕೂರು ಮೆಟ್ರೋ ಲೈನ್ ನಿರ್ಮಾಣಕ್ಕೆ ಅಂದಾಜು 20,000 ಕೋಟಿ ರೂಪಾಯಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಬೃಹತ್ ಮೊತ್ತದ ಯೋಜನೆಯನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಅಂದರೆ ಪಿಪಿಪಿಮಾಡೆಲ್ ಮೂಲಕ ಜಾರಿಗೆ ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಸಿಲಿಗೆ 16 ಜನ ಸಾವು! ಭೀಕರ ಉಷ್ಣಗಾಳಿಗೆ ನಡುಗಿದ 7 ಜಿಲ್ಲೆಗಳು

“ಡಿಪಿಆರ್ ವರದಿ ಕೈಸೇರಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಅಧಿಕೃತ ಅನುಮೋದನೆ ಪಡೆದುಕೊಳ್ಳಲಿದ್ದೇವೆ. ಆ ನಂತರ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭವಾಗಲಿದೆ” ಎಂದು ಸಚಿವ ಪರಮೇಶ್ವರ್ ಭರವಸೆ ನೀಡಿದ್ದಾರೆ. ಈ ಯೋಜನೆಯಿಂದಾಗಿ ತುಮಕೂರು ಜಿಲ್ಲೆಯ ಕೈಗಾರಿಕಾ ವಲಯ ಹಾಗೂ ಉದ್ಯೋಗಿಗಳಿಗೆ ಭಾರಿ ಅನುಕೂಲವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather forecast: ಮೇ 29ರವರೆಗೆ ಕರ್ನಾಟಕದಾದ್ಯಂತ ಮಳೆ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – Kannada News | Karnataka Weather Forecast: Rain Likely Till May 29; Yellow Alert in Bengaluru, 17 Districts

ಬೆಂಗಳೂರು, ಮೇ 23: ಕರ್ನಾಟಕದಲ್ಲಿ (Karnataka) ಮೇ 29ರವರೆಗೆ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ಘೋಷಿಸಲಾಗಿದೆ. ಒಟ್ಟು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ.

ಮುಖ್ಯಾಂಶಗಳು

  • ರಾಜ್ಯಾದ್ಯಂತ ಮೇ 29ರವರೆಗೆ ಮಳೆ ಮುನ್ಸೂಚನೆ
  • 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
  • ಮುಂದಿನ 48 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ

ಬೆಂಗಳೂರಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿಯಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ವಿಜಯನಗರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ: 166.4 ಹೆಕ್ಟೇರ್ ಬೆಳೆ ನಾಶ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಸುರಿದಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ವಿಶೇಷವಾಗಿ ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಗಾಳಿ ಸಹಿತ ಮಳೆಯಿಂದ ವ್ಯಾಪಕ ಬೆಳೆ ಹಾನಿಯಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ನೀಡಿದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 166.4 ಹೆಕ್ಟೇರ್ ಬೆಳೆ ನಾಶವಾಗಿದೆ. ಇದರಲ್ಲಿ 165.2 ಹೆಕ್ಟೇರ್ ತೋಟಗಾರಿಕಾ ಬೆಳೆಗಳಾದ ಬಾಳೆ ಮತ್ತು ವೀಳ್ಯದೆಲೆ ಬೆಳೆಗಳು ಸೇರಿವೆ. ಇದರ ಜೊತೆಗೆ, ಸುಮಾರು 1.5 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕಬ್ಬು ಸಹ ಮಳೆಯಿಂದ ಹಾನಿಗೊಳಗಾಗಿದೆ. ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆಗಾಗಿ ಈಗಾಗಲೇ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದಾರೆ.

ಇದನ್ನೂ ಓದಿ: Bengaluru Weather Update: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆ: ತಂಪಾದ ಉದ್ಯಾನ ನಗರಿ!

ಇನ್ನು ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಆರೆಂಜ್ ಅಲರ್ಟ್ ನೀಡಲಾಗಿದೆ. ನಾಗರಿಕರು ಸುರಕ್ಷಿತವಾಗಿರಲು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಇಲಾಖೆ ಸೂಚಿಸಿದೆ. ಹವಾಮಾನ ವೈಪರೀತ್ಯದಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:50 pm, Sat, 23 May 26

Source link

Exit mobile version