ಚಿತ್ರದುರ್ಗ ಜಿಲ್ಲಾಡಳಿತ ಭವನ ವಿವಾದ: ಅವೈಜ್ಞಾನಿಕ ಕಟ್ಟಡವೆಂದು ರಿಜೆಕ್ಟ್; ಕೋಟ್ಯಂತರ ರೂ ನೀರಲ್ಲಿ ಹೋಮ – Kannada News | Chitradurga Admin Building Row: Rejected Site, New Plan Sparks Environmental Clash

ಚಿತ್ರದುರ್ಗ, ಮಾರ್ಚ್​​ 01: ಚಿತ್ರದುರ್ಗದಲ್ಲಿ (Chitradurga) ನೂತನ ಜಿಲ್ಲಾಡಳಿತ ಭವನ ಆಗಬೇಕೆಂಬುದು ದುರ್ಗದ ಜನರ ಬಹು ಕಾಲದ ಕನಸು. ಹಾಗಾಗಿ ಕಣಿವೆ ಪ್ರದೇಶದಲ್ಲಿ ಜಿಲ್ಲಾಡಳಿತ ಭವನ ಕಟ್ಟಡವೇನೋ ನಿರ್ಮಾಣವಾಗಿದೆ. ಆದರ  ಉದ್ಘಾಟನೆಗೂ ಮುನ್ನವೇ ಅವೈಜ್ಞಾನಿಕ ಕಟ್ಟಡ ಎಂಬ ಕಾರಣಕ್ಕೆ ಜಿಲ್ಲಾಡಳಿತವೇ ತಿರಸ್ಕರಿಸಿ ಮಾಡಿದ್ದು, ಬೇರೆಡೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಆ ಮೂಲಕ ಕೋಟ್ಯಂತರ ರೂ ನೀರಲ್ಲಿ ಹೋಮ ಮಾಡಿದಂತಾಗಿದೆ. ಸದ್ಯ ಹೊಸ ವಿವಾದವೊಂದು ಸೃಷ್ಟಿ ಆಗಿದೆ.

ಕೋಟೆನಾಡು ಚಿತ್ರದುರ್ಗದಲ್ಲಿ ಒಂದೇ ಸೂರಿನಡಿ ಎಲ್ಲಾ ಕಚೇರಿಗಳು ಇರುವಂತ ಜಿಲ್ಲಾಡಳಿತ ಭವನ ನಿರ್ಮಾಣ ಆಗಬೇಕೆಂಬುದು ದುರ್ಗದ ಜನರ ಬಹುಕಾಲದ ಕನಸು. ಅಂತೆಯೇ 2020-21ರಲ್ಲಿ ಚಿತ್ರದುರ್ಗ ಬಳಿಯ ಕಣಿವೆ ಪ್ರದೇಶದಲ್ಲಿ ಜಾಗ ಗುರುತಿಸಿ ಜಿಲ್ಲಾಡಳಿತ ಭವನ ಕಟ್ಟಡ ಶುರು ಮಾಡಲಾಗಿತ್ತು. ಆರೇಳು ತಿಂಗಳ ಹಿಂದೆ ಕಟ್ಟಡ ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ.

ಇದನ್ನೂ ಓದಿ: ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ವಿಳಂಬ: ಸಿಡಿದೆದ್ದ ರೈತರಿಂದ ನಾಳೆ ಬಂದ್‌ಗೆ ಕರೆ

ಅವೈಜ್ಞಾನಿಕ ಕಟ್ಟಡ, ಸೂಕ್ತ ಮೂಲಕ ಸೌಕರ್ಯಗಳ ಕೊರತೆ ಹಾಗೂ ನಗರದಿಂದ ಮೂರ್ನಾಲ್ಕು ಕಿ.ಮೀ ದೂರ ಎನ್ನುವ ಕಾರಣಕ್ಕೆ ಜಿಲ್ಲಾಡಳಿತವೇ ರಿಜೆಕ್ಟ್ ಮಾಡಿದೆ. ಉಸ್ತುವಾರಿ ಸಚಿವ ಡಿ ಸುಧಾಕರ್, ಶಾಸಕ ಕೆಸಿ ವಿರೇಂದ್ರ ಪಪ್ಪಿ ನಿರ್ಮಾಣವಾದ ಕಟ್ಟಡ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಬಿಟ್ಟುಕೊಡಲು ನಿರ್ಧರಿಸಿದ್ದು, ಈಗಾಗಲೇ ಹಸ್ತಾಂತರಿಸಿದ್ದಾರೆ. ಚಿತ್ರದುರ್ಗ ನಗರದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಜಾಗದಲ್ಲಿ ಆರು ಎಕರೆ ಪ್ರದೇಶದಲ್ಲಿ ಹೊಸ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಪ್ಲ್ಯಾನ್​​ ಮಾಡಲಾಗಿದ್ದು, ತೋಟಗಾರಿಕೆ ಇಲಾಖೆ ಸಚಿವ ಎಸ್​​.ಎಸ್ ಮಲ್ಲಿಕಾರ್ಜುನ್​​​ ಕೂಡ ಸೈ ಎಂದಿದ್ದಾರೆ.

ಪರಿಸರ ಪ್ರಿಯರು ಹಾಗೂ ಬಿಜೆಪಿ ನಾಯಕರು ವಿರೋಧ

ಇನ್ನು ದುರ್ಗದ ಪರಿಸರ ಪ್ರಿಯರು ಹಾಗೂ ಬಿಜೆಪಿ ನಾಯಕರು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತೋಟಗಾರಿಕೆ ಇಲಾಖೆ ಪ್ರದೇಶದಲ್ಲಿ ನೂರಾರು ಗಿಡ ಮರಗಳಿವೆ, ಸಸಿಗಳನ್ನು ಬೆಳೆಸಲಾಗುತ್ತದೆ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೆ ರೈತರಿಗೆ ಅನುಕೂಲಕರವಾಗಿದೆ. ಆರು ಎಕರೆಯಷ್ಟು ಪ್ರದೇಶದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಸರಿಯಲ್ಲ. ಕಟ್ಟಡ ನಿರ್ಮಾಣಕ್ಕಾಗಿ ಗಿಡ ಮರಗಳಿಗೆ ಕೊಡಲಿ ಪೆಟ್ಟು ನೀಡಬೇಕಾಗುತ್ತದೆ. ಪರಿಸರ ಹಾನಿ ಮಾಡಿ ಕಟ್ಟಡ ನಿರ್ಮಾಣ ಅಗತ್ಯವಿಲ್ಲ ಎಂದಿದ್ದಾರೆ.

ಸಂಸದ ಗೋವಿಂದ ಕಾರಜೋಳ ಹೇಳಿದ್ದಿಷ್ಟು 

ಅಲ್ಲದೆ ಮುಂದಿನ 50 ವರ್ಷದ ಪ್ಲ್ಯಾನ್​ ಇಟ್ಟುಕೊಂಡು ಸೂಕ್ತ ಸ್ಥಳದಲ್ಲಿ ವಿಶಾಲವಾದ ಕಟ್ಟಡ ನಿರ್ಮಿಸಬೇಕು. ಈಗಾಗಲೇ ಹತ್ತಾರು ಕೋಟಿ ರೂ ಖರ್ಚು ಮಾಡಿ ಕಣಿವೆ ಪ್ರದೇಶದಲ್ಲಿ ನಿರ್ಮಿಸಲಾದ ಜಿಲ್ಲಾಡಳಿತ ಭವನ ಕಟ್ಟಡವನ್ನೇ ಬಳಸಬೇಕು. ಆಡಳಿತ ಭವನ ಮೆಡಿಕಲ್ ಕಾಲೇಜಿಗೆ ಸೂಕ್ತ ಆಗದು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲೊಂದು ವಿಶೇಷ ಗ್ರಾಮ: ಮಾರಮ್ಮ ಜಾತ್ರೆಗೆ ಪ್ರತಿ ರಸ್ತೆಗೆ ಮುಳ್ಳಿನ ಬೇಲಿ ಹಾಕಿ ದಿಗ್ಭಂಧನ

ಒಟ್ಟಾರೆ ಚಿತ್ರದುರ್ಗ ನಗರದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಈಗ ವಿವಾದ ಸೃಷ್ಟಿಸಿದೆ. ಜಿಲ್ಲಾಡಳಿತ, ಸರ್ಕಾರ ಮತ್ತು ಅಧಿಕಾರಿಗಳು ಸೂಕ್ತ ಪ್ಲ್ಯಾನ್​ ಇಲ್ಲದೆ ಹತ್ತಾರು ಕೋಟಿ ರೂ ವೆಚ್ಚದಲ್ಲಿ ಈಗಾಗಲೇ ಕಣಿವೆ ಬಳಿ ಕಟ್ಟಡ ನಿರ್ಮಿಸಿದ್ದಾರೆ. ಕಟ್ಟಡ ನಿರ್ಮಾಣದ ಬಳಿಕ ರಿಜೆಕ್ಟ್ ಮಾಡುತ್ತಿರುವುದು ವಿವಾದ ಹುಟ್ಟುಹಾಕಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಕೊನೆಯದಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs WI T20 WC Live Score: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ – Kannada News | India vs West Indies T20 World Cup 2026 Live Cricket Score IND vs WI Today Match at Eden Gardens Kolkata Live Cricket Score and Updates in Kannada

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯವು ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ ಏಕೆಂದರೆ ಈ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸುತ್ತದೋ ಆ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗಲಿದೆ. ಸೋತ ತಂಡದ ಪ್ರಯಾಣ ಇಲ್ಲಿಗೆ ಅಂತ್ಯವಾಗುತ್ತದೆ. ಹೀಗಾಗಿ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನೀಡುವುದನ್ನು ನಿರೀಕ್ಷಿಸಲಾಗಿದೆ.

Source link

ಪಾಕಿಸ್ತಾನ ಆಯ್ತು, ಇರಾನ್ ದೇಶಕ್ಕೂ ಕೈಕೊಟ್ಟಿತಾ ಚೀನಾದ ಏರ್ ಡಿಫೆನ್ಸ್ ಸಿಸ್ಟಂ? – Kannada News | China’s air defence system HQ 9B in Iran allegedly failed to stop US air strikes

ನವದೆಹಲಿ, ಮಾರ್ಚ್ 1: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್​ನಿಂದ ವ್ಯಾಪಕ ಮಿಲಿಟರಿ ದಾಳಿ ಆಗಿದೆ. ಇರಾನ್ ಸರ್ವೇಚ್ಚ ನಾಯಕ ಆಯತುಲ್ಲಾ ಅಲಿ ಖಮೇನೀ (Ayatollah Ali Khamenei) ಸೇರಿದಂತೆ 200ಕ್ಕೂ ಹೆಚ್ಚು ಜನರು ದಾಳಿಯಲ್ಲಿ ಹತರಾಗಿದ್ದಾರೆ. ಈ ಮಧ್ಯೆ ಚೀನಾದ ಎಚ್​ಕ್ಯೂ-9ಬಿ (HQ-9B) ಎನ್ನುವ ಏರ್ ಡಿಫೆನ್ಸ್ ಸಿಸ್ಟಂನ ಸುದ್ದಿ ಚಾಲನೆಗೆ ಬಂದಿದೆ. ಸುದ್ದಿಯ ಪ್ರಕಾರ, ಇರಾನ್ ದೇಶ ಇತ್ತೀಚೆಗಷ್ಟೇ ಚೀನಾದ ಎಚ್​ಕ್ಯೂ-9ಬಿ ಅನ್ನು ಪಡೆದಿತ್ತು ಎನ್ನಲಾಗಿದೆ. ಇದು ನಿಜವೇ ಆದಲ್ಲಿ ಚೀನಾಗೆ ಮುಜುಗರ ತರಬಹುದಾದಂತಹ ಮತ್ತು ಕಳವಳಪಡಬೇಕಾದಂತಹ ಸಂಗತಿಯಾಗುತ್ತದೆ.

ಅಮೆರಿಕ ಮತ್ತು ಇಸ್ರೇಲ್​ನ ಜಂಟಿ ದಾಳಿಗಳನ್ನು ತಡೆಯಲು ಇರಾನ್​ಗೆ ಸಾಧ್ಯವಾಗಿಲ್ಲ. ಅಂದರೆ ಚೀನಾ ನೀಡಿದ ಎಚ್​ಕ್ಯೂ-9ಬಿ ಏರ್ ಡಿಫೆನ್ಸ್ ಸಿಸ್ಟಂ ಪೂರ್ಣ ವಿಫಲಗೊಂಡಿರಬಹುದು. ಅಥವಾ ಅಮೆರಿಕ ಇಸ್ರೇಲ್​ನ ಸಂಯೋಜಿತ ದಾಳಿ ಎದುರಿಸಲು ಇದು ವಿಫಲವಾಗಿರಬಹುದು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಆಯಿಲ್ ಟ್ಯಾಂಕರ್ ಮೇಲೆ ಇರಾನ್ ದಾಳಿ; ತೈಲ ಹಡಗಿನಲ್ಲಿದ್ದರು 15 ಮಂದಿ ಭಾರತೀಯರು

ಆಪರೇಷನ್ ಸಿಂದೂರ್ ವೇಳೆಯೂ ಎಚ್​ಕ್ಯೂ-9ಬಿ ಏರ್ ಡಿಫೆನ್ಸ್ ಸಿಸ್ಟಂ ಮುನ್ನೆಲೆಗೆ ಬಂದಿತ್ತು. ಭಾರತದ ವಾಯು ದಾಳಿಗಳನ್ನು ತಡೆಯಲು ಈ ಚೀನೀ ಸಿಸ್ಟಂ ವಿಫಲವಾಗಿತ್ತು. ಈಗ ಮತ್ತೊಂದು ಯುದ್ಧ ಸಂದರ್ಭದಲ್ಲಿ ಅದರ ವೈಫಲ್ಯ ಕಂಡು ಬಂದಿರುವುದು ಗಮನಾರ್ಹ ಸಂಗತಿ.

ಚೈನಾ ಏರೋಸ್ಪೇಸ್ ಸೈನ್ಸ್ ಅಂಡ್ ಇಂಡಸ್ಟ್ರಿ ಕಾರ್ಪೊರೇಶನ್ ಸಂಸ್ಥೆ ಅಭಿವೃದ್ದಿಪಡಿಸಿದ ಎಚ್​ಕ್ಯೂ-9ಬಿ ಏರ್ ಡಿಫೆನ್ಸ್ ಸಿಸ್ಟಂ 2006ರಲ್ಲಿ ಮೊದಲ ಪರೀಕ್ಷೆಗೆ ಒಳಪಟ್ಟಿತು. ಇದು ರಷ್ಯಾದ ಎಸ್-300 ಪಿಎಂಯು ಮತ್ತು ಅಮೆರಿಕದ ಪೇಟ್ರಿಯಟ್ ಪ್ಯಾಕ್-2 ಸಿಸ್ಟಂ ಮಾದರಿಯಲ್ಲಿ ಚೀನಾ ತಯಾರಿಸಿದ ಸಿಸ್ಟಂ. ಇದರ ದಾಳಿ ಶ್ರೇಣಿ 260 ಕಿಮೀ ಇದೆ. 50 ಕಿಮೀ ಎತ್ತರದ ಗುರಿಯನ್ನೂ ಇದು ಮುಟ್ಟಬಲ್ಲುದು. ಶತ್ರುಗಳ ವಂಚಕ ಏರ್​ಕ್ರಾಫ್ಟ್​ಗಳನ್ನು ಪತ್ತೆ ಮಾಡುವ ಸಾಮರ್ಥ್ಯ ಇದಕ್ಕಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಆಯತುಲ್ಲಾ ಖಮೇನಿ ಮೇಲೆ ದಾಳಿಗೆ ಶನಿವಾರ ಬೆಳಗಿನ ಸಮಯ ಆರಿಸಿದ್ದು ಯಾಕೆ? ಬೇರೆ ಇದ್ದ ಪ್ಲಾನ್ ಬದಲಾಗಿದ್ದು ಯಾಕೆ?

ಗಮನಾರ್ಹ ಸಂಗತಿ ಎಂದರೆ, ಭಾರತದ ಗಡಿ ಭಾಗದಲ್ಲಿರುವ ಟಿಬೆಟ್, ಚೀನಾದ ರಾಜಧಾನಿ ನಗರಿಯಾದ ಬೀಜಿಂಗ್, ಆಯಕಟ್ಟಿನ ಪ್ರದೇಶವಾದ ಸೌತ್ ಚೀನಾ ಜಾಗಗಳಲ್ಲಿ ಎಚ್​ಕ್ಯೂ-9ಬಿ ಏರ್ ಡಿಫೆನ್ಸ್ ಸಿಸ್ಟಂಗಳನ್ನು ಅಳವಡಿಸಲಾಗಿದೆ. ತಜ್ಞರ ಪ್ರಕಾರ, ಇದು ಚೀನಾದ ಪ್ರಮುಖ ರಕ್ಷಣಾ ಕೋಟೆ ಎನಿಸಿದೆ. ಇಂಥ ಡಿಫೆನ್ಸ್ ಸಿಸ್ಟಂ ಆಪರೇಷನ್ ಸಿಂದೂರ್ ಮತ್ತು ಇರಾನ್ ಯುದ್ಧದಲ್ಲಿ ವಿಫಲವಾಗಿರುವುದು ಚೀನಾದ ದೌರ್ಬಲ್ಯವನ್ನು ಜಾಹೀರುಗೊಳಿಸಿದಂತಾಗಿರಬಹುದು.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿರ್ಮಾಣ ಸಂಸ್ಥೆಗೆ ದಾಖಲೆಯ 10 ಲಕ್ಷ ಕೋಟಿ ಆಫರ್, ಓಕೆ ಆಗುತ್ತಾ ಡೀಲ್? – Kannada News | Netflix walks away from Warner Bros deal paramount wins 111 billion bid details in Kannada

ಹಾಲಿವುಡ್‌ನ (Hollywood) ಅತಿದೊಡ್ಡ ವ್ಯವಹಾರವೊಂದು ನಡೆಯುತ್ತಿದೆ. ಕಳೆದ ಕೆಲ ತಿಂಗಳುಗಳಿಂದಲೂ ಹಾಲಿವುಡ್​​ನ ಸಿನಿಮಾ ಪ್ರೇಮಿಗಳು, ದೊಡ್ಡ ಸಿನಿಮಾ ಉದ್ಯಮಿಗಳು, ತೆರಿಗೆ ಇಲಾಖೆಯವರು ಇನ್ನೂ ಹಲವು ಕ್ಷೇತ್ರದವರು ಈ ವ್ಯವಹಾರದ ಮೇಲೆ ಕಣ್ಣಿಟ್ಟಿದ್ದಾರೆ. ಹಾಲಿವುಡ್​ನ ಅತ್ಯಂತ ಯಶಸ್ವಿ, ಜನಪ್ರಿಯ ಮತ್ತು ಹಳೆಯ ನಿರ್ಮಾಣ ಸಂಸ್ಥೆಯಾದ ವಾರ್ನರ್ಸ್ ಬ್ರದರ್ಸ್​​ ನ ಮಾರಾಟ ಆಗಲಿಕ್ಕಿದೆ. ನೆಟ್​​ಫ್ಲಿಕ್ಸ್​ ಸೇರಿದಂತೆ ಕೆಲವು ದೊಡ್ಡ ನಿರ್ಮಾಣ ಸಂಸ್ಥೆಗಳು, ಉದ್ಯಮಪತಿಗಳು ಈ ನಿರ್ಮಾಣ ಸಂಸ್ಥೆಯ ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಆದರೆ ಇದೀಗ ಈ ವ್ಯವಹಾರದಲ್ಲಿ ಭಾರಿ ದೊಡ್ಡ ಬದಲಾವಣೆಯಾಗಿದೆ.

ವಾರ್ನರ್ ಬ್ರದರ್ಸ್ ಅನ್ನು ಪ್ರಸಿದ್ಧ ಸ್ಟ್ರೀಮಿಂಗ್ ಸಂಸ್ಥೆ ನೆಟ್‌ಫ್ಲಿಕ್ಸ್ ಖರೀದಿ ಮಾಡಲಿದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ನೆಟ್​​ಫ್ಲಿಕ್ಸ್​ ಸಹ ವಾರ್ನರ್ ಬ್ರದರ್ಸ್​​ನ ಪ್ರತಿ ಷೇರಿಗೆ 27 ಡಾಲರ್ ಹಣ ಪಾವತಿಸಲು ತಯಾರಿರುವುದಾಗಿ ಬಿಡ್ ಹೂಡಿತ್ತು. ಅಲ್ಲಿಗೆ ಒಟ್ಟು ವಾರ್ನರ್ ಬ್ರದರ್ಸ್​​ಗೆ 9.97 ಲಕ್ಷ ಕೋಟಿ ಹಣದ ಆಫರ್ ಅನ್ನು ನೀಡಿತ್ತು. ಇನ್ನೇನು ವಾರ್ನರ್ ಬ್ರದರ್ಸ್ ಅನ್ನು ನೆಟ್​ಫ್ಲಿಕ್ಸ್ ಖರೀದಿಸಿಯೇ ಬಿಟ್ಟಿತು ಎಂದುಕೊಳ್ಳುತ್ತಿರುವಾಗ ಹಾಲಿವುಡ್​ನ ಮತ್ತೊಂದು ಜನಪ್ರಿಯ ಮತ್ತು ಯಶಸ್ವಿ ಸಿನಿಮಾ ನಿರ್ಮಾಣ ಸಂಸ್ಥೆಯಾದ ಪ್ಯಾರಾಮೌಂಟ್ ಅಖಾಡಕ್ಕೆ ಧುಮುಕಿದ್ದು ನೆಟ್​​ಫ್ಲಿಕ್ಸ್​​ಗಿಂತಲೂ ಉತ್ತಮ ಆಫರ್ ಅನ್ನು ನೀಡಿದೆ.

ಕಳೆದ ಕೆಲವು ತಿಂಗಳುಗಳಿಂದ ನೆಟ್‌ಫ್ಲಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ನಡುವೆ ಮಾತುಕತೆ ನಡೆಯುತ್ತಿತ್ತು. ವಾರ್ನರ್ ಬ್ರದರ್ಸ್‌ನ ಸ್ಟುಡಿಯೋ ಮತ್ತು ಸ್ಟ್ರೀಮಿಂಗ್ ವ್ಯವಹಾರವನ್ನು ಖರೀದಿಸಲು ನೆಟ್‌ಫ್ಲಿಕ್ಸ್ ಸುಮಾರು ಸುಮಾರು ಏಳು ಲಕ್ಷ ಕೋಟಿ ರೂಪಾಯಿ (83 ಬಿಲಿಯನ್ ಡಾಲರ್) ಬಿಡ್ ಮಾಡಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪ್ಯಾರಾಮೌಂಟ್ ಸಂಸ್ಥೆಯು ಇದಕ್ಕಿಂತ ಹೆಚ್ಚಿನ ಮೊತ್ತದ ಆಫರ್ ನೀಡಿದ್ದರಿಂದ, ನೆಟ್‌ಫ್ಲಿಕ್ಸ್ ಈ ರೇಸ್‌ನಿಂದ ಹೊರಬರಲು ನಿರ್ಧರಿಸಿದೆ. ‘ಹೆಚ್ಚಿನ ಬೆಲೆ ತೆತ್ತು ಈ ಕಂಪನಿಯನ್ನು ಖರೀದಿಸುವುದು ಆರ್ಥಿಕವಾಗಿ ಲಾಭದಾಯಕವಲ್ಲ’ ಎಂದು ನೆಟ್‌ಫ್ಲಿಕ್ಸ್‌ನ ಸಿಇಒಗಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ಆ ಡೀಲ್​​ನಿಂದ ಅಸಮಾಧಾನಗೊಂಡ ‘ಟೈಟಾನಿಕ್’ ನಿರ್ದೇಶಕ; ಹಾಲಿವುಡ್​​ಗೆ ಎಚ್ಚರಿಕೆ ಕೊಟ್ಟ ಜೇಮ್ಸ್ ಕ್ಯಾಮೆರಾನ್

ಪ್ಯಾರಾಮೌಂಟ್ ಸಂಸ್ಥೆಯು ವಾರ್ನರ್ ಬ್ರದರ್ಸ್ ಕಂಪನಿಯನ್ನು ಪೂರ್ತಿಯಾಗಿ ಖರೀದಿಸಲು ಸುಮಾರು 10 ಲಕ್ಷ ಕೋಟಿ ರೂಪಾಯಿ (111 ಬಿಲಿಯನ್ ಡಾಲರ್) ಮೊತ್ತದ ಬಿಡ್ ಮಾಡಿದೆ. ಇದು ನೆಟ್‌ಫ್ಲಿಕ್ಸ್ ನೀಡಿದ್ದ ಆಫರ್ಗಿಂತ ಸುಮಾರು 2.4 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚು. ಈ ಮೊತ್ತದಲ್ಲಿ ಕಂಪನಿಯ ಸಾಲಗಳೂ ಸೇರಿವೆ. ಆದರೆ ಈ ಆಫರ್ ಅನ್ನು ವಾರ್ನರ್ಸ್ ಬ್ರದರ್ಸ್ ಕಂಪೆನಿಯ ಹೂಡಿಕೆದಾರರು, ಆಡಳಿತ ವರ್ಗ ಒಪ್ಪಿಕೊಳ್ಳುವುದು ಬಾಕಿ ಇದೆ. ಒಂದೊಮ್ಮೆ ಈ ಡೀಲ್ ನಡೆದರೆ ಪ್ಯಾರಾಮೌಂಟ್ ಹಾಲಿವುಡ್‌ನ ಅತ್ಯಂತ ಶಕ್ತಿಶಾಲಿ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಲಿದೆ.

ಪ್ಯಾರಾಮೌಂಟ್ ಈಗ ವಾರ್ನರ್ ಬ್ರದರ್ಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದರಿಂದ, ಪ್ರಪಂಚದ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳು ಒಂದೇ ಸೂರಿನಡಿ ಬರಲಿವೆ. ‘ಹ್ಯಾರಿ ಪಾಟರ್’, ‘ಗೇಮ್ ಆಫ್ ಥ್ರೋನ್ಸ್’ ನಂತಹ ಜನಪ್ರಿಯ ಸರಣಿಗಳು ಈಗ ಪ್ಯಾರಾಮೌಂಟ್ ಪಾಲಾಗಲಿವೆ. ಸುದ್ದಿ ವಾಹಿನಿ ಸಿಎನ್​​ಎನ್​, ಡಿಸಿ ಕಾಮಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ಸ್ಟುಡಿಯೋಗಳು ಪ್ಯಾರಾಮೌಂಟ್‌ ಪಾಲಾಗಲಿವೆ. ಕಂಟೆಂಟ್ ಕ್ಷೇತ್ರದಲ್ಲಿ ನೆಟ್​​ಫ್ಲಿಕ್ಸ್​​ಗೆ ಇದು ದೊಡ್ಡ ಹಿನ್ನಡೆಯನ್ನು ಮೂಡಿಸಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿಲ್ಲದ ಮಾನವ-ಆನೆ ಸಂಘರ್ಷ: ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ, ಭುಗಿಲೆದ್ದ ಆಕ್ರೋಶ – Kannada News | Kodagu Tragedy: Wild Elephant Kills PUC Student; Human Elephant Conflict Escalates

ಕೊಡಗು, ಮಾರ್ಚ್​​ 01: ಆ ವಿದ್ಯಾರ್ಥಿನಿ ಈಗಷ್ಟೇ ಪಿಯುಸಿ ಪರೀಕ್ಷೆ ಬರೆದಿದ್ದಳು. ಇನ್ನೆರಡು ತಿಂಗಳು ರಜೆಯನ್ನ ಆರಾಮವಾಗಿ ಕಳೆಯುವ ಆಸೆಯಲ್ಲಿದ್ದಳು. ನಿನ್ನೆ ಕೂಡ ಅಪ್ಪ-ಅಮ್ಮನ ಜೊತೆಗೆ ಬೇಗ ಮನೆ ಸೇರುವ ಆಸೆಯಲ್ಲಿದ್ದಳು. ಆದರೆ ಕಾಡಾನೆ (Elephant) ರೂಪದಲ್ಲಿ ಬಂದ ಯಮರಾಯ ಆ ಮುಗ್ಧ ಯುವತಿಯನ್ನ ಬಲಿ (death) ಪಡೆದಿದೆ. ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಘಟನೆ ನಡೆದಿದೆ.

ಕ್ಷಣಾರ್ಧದಲ್ಲಿ ವಿದ್ಯಾರ್ಥಿನಿಯ ಜೀವ ತೆಗೆದ ಕಾಡಾನೆ

ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಾರಕಕ್ಕೇರಿದೆ. ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ದಾರುಣ ಬಲಿಯಾಗಿದ್ದಾಳೆ. ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ನಿನ್ನೆ ಸಂಜೆ ನಡೆದ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಪೂಜ್ಯ ಸಾವನ್ನಪ್ಪಿದ್ದಾಳೆ. ಸಂಜೆ ತನ್ನ ತಂದೆ-ತಾಯಿ ಜೊತೆ ಬೈಕ್​ನಲ್ಲಿ ಬಂದ ಪೂಜ್ಯ, ಬೈಕ್​ನಿಂದ ಇಳಿದಿದ್ದೇ ತಡ ಅಷ್ಟರಲ್ಲಿ ಕತ್ತಲಿನಲ್ಲಿ ಹಿಂಬಂದಿಯಿಂದ ದಾಳಿ ನಡೆಸಿದ ಕಾಡಾನೆ, ಪೂಜ್ಯಳ ದೇಹವನ್ನ ತುಳಿದು ಸ್ಥಳದಲ್ಲೇ ಸಾಯಿಸಿದೆ. ಮಗಳ ಕಿರುಚಾಟ ಕಂಡು ತಾಯಿ ಎಷ್ಟೇ ಬೊಬ್ಬೆ ಹೊಡೆದರೂ ಪ್ರಯೋಜನವಾಗಿಲ್ಲ, ಕ್ಷಣಾರ್ಧದಲ್ಲಿ ಕಾಡಾನೆ ವಿದ್ಯಾರ್ಥಿನಿಯ ಜೀವ ತೆಗೆದಿದೆ.

ಇದನ್ನೂ ಓದಿ: ವಿರಾಜಪೇಟೆ: ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!

ಪತ್ನಿ ಮತ್ತು ಮಗಳನ್ನ ಬೈಕ್​ನಿಂದ ಇಳಿಸಿ ಬೈಕ್​ ನಿಲ್ಲಿಸಲು ಸ್ವಲ್ಪ ದೂರು ಹೋಗಿದ್ದ ತಂದೆ ಚಂಗಪ್ಪ ಅವರಿಗೆ ಪತ್ನಿ ಮತ್ತು ಮಗಳ ಕಿರುಚಾಟ ಕೇಳಿ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ಅನಾಹುತ ನಡೆದು ಹೋಗಿತ್ತು. ಮಗಳ ರಕ್ತಸಿಕ್ತ ದೇಹವನ್ನ ಅಪ್ಪಿಕೊಂಡು ಪತ್ನಿ ದೇವಕಿ ರೋಧಿಸುತ್ತಿದ್ದರು. ಈ ಭಾಗದಲ್ಲಿ ಈ ಒಂಟಿ ಆನೆ ನಿರಂತರವಾಗಿ ಓಡಾಡುತ್ತಿದೆ. ಜನರು ಕಾಡಾನೆಯಿಂದ ಈ ಹಿಂದೆಯೂ ಬಹಳಷ್ಟು ಬಾರಿ ತಪ್ಪಿಸಿಕೊಂಡಿದ್ದರು. ಆದರೆ ಇಂದು ಪೂಜ್ಯಳ ಅದೃಷ್ಟ ಸರಿ ಇರಲಿಲ್ಲ.

ಸರ್ಕಾರದಿಂದ 20 ಲಕ್ಷ ರೂ ಪರಿಹಾರ 

ಮಡಿಕೇರಿ ಡಿಎಫ್​ಒ ಅಭಿಷೇಕ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಕಾಡಾನೆಯನ್ನ ಸೆರೆ ಹಿಡಿಯಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮೃತಳ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರೂ ಪರಿಹಾರ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನ ಸಾಯುವುದೇ ಕಾಡು ಪ್ರಾಣಿ ದಾಳಿಯಿಂದ!

ಕಾಡಾನೆಗಳು ಮಾನವರು ವಾಸಿಸುವ ಪ್ರದೇಶಗಳತ್ತ ಬಾರದಂತೆ ತಡೆಯಲು ವೈಜ್ಞಾನಿಕ ಕ್ರಮ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಇಂತಹ ಅನ್ಯಾಯದ ಸಾವುಗಳು ಮುಂದುವರಿಯುತ್ತವೆ. ಒಟ್ಟಾರೆ ಕಾಡು ನಾಡು ಸಂಘರ್ಷದಲ್ಲಿ ಅಮಾಯಕ ವಿದ್ಯಾರ್ಥಿನಿ ಬಲಿಯಾಗಿದ್ದು ಮಾತ್ರ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

185 ರನ್‌ಗಳಿಂದ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ; ಹೀಲಿಗೆ ಸ್ಮರಣೀಯ ವಿದಾಯ – Kannada News | India Women’s ODI Series Loss: Australia Sweeps 3 0, Healy Bids Farewell with 158

ಆಸ್ಟ್ರೇಲಿಯಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಿಶ್ವ ಚಾಂಪಿಯನ್ ಭಾರತೀಯ ಮಹಿಳಾ ತಂಡ ಹೀನಾಯವಾಗಿ ಸೋತಿದೆ. ಇಡೀ ಸರಣಿಯಲ್ಲಿ ಪಾರುಪತ್ಯ ಸಾಧಿಸಿದ ಆತಿಥೇಯ ಆಸ್ಟ್ರೇಲಿಯಾ, ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಮಾರ್ಚ್ 1 ರ ಭಾನುವಾರ ಹೋಬಾರ್ಟ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 409 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 224 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯವನ್ನು 185 ರನ್‌ಗಳ ಬೃಹತ್ ಅಂತರದಿಂದ ಸೋತಿತು. ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾದ ನಾಯಕಿ ಮತ್ತು ವಿಕೆಟ್‌ಕೀಪರ್-ಬ್ಯಾಟರ್ ಅಲಿಸಾ ಹೀಲಿ ತಮ್ಮ ಏಕದಿನ ವೃತ್ತಿಜೀವನಕ್ಕೆ ವಿದಾಯ ಹೇಳಿದರು.

ಹೀಲಿ-ಮೂನಿ ಸ್ಫೋಟಕ ಶತಕ

ಸರಣಿ ಆರಂಭವಾಗುವ ಮೊದಲೇ, ಅಲಿಸಾ ಹೀಲಿ ಇದು ತಮ್ಮ ಕೊನೆಯ ಸರಣಿ ಎಂದು ಘೋಷಿಸಿದ್ದರು. ಅದರಂತೆ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯದಲ್ಲಿ ಸಂಚಲನ ಮೂಡಿಸಿದ ಹೀಲಿ ತಮ್ಮ ತಂಡಕ್ಕೆ ತ್ವರಿತ ಆರಂಭವನ್ನು ನೀಡಿದರು. ಹೀಲಿ ಅಬ್ಬರದ ಪರಿಣಾಮದಿಂದಾಗಿ ಆಸೀಸ್ ತಂಡ 16 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿತು. ಇದೇ ವೇಳೆ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹೀಲಿ, 79 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಶತಕ ಪೂರೈಸಿದ ಬಳಿಕ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಹೀಲಿ ಕೇವಲ 98 ಎಸೆತಗಳಲ್ಲಿ 158 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಹೀಲಿ ಅವರ ಈ ಇನ್ನಿಂಗ್ಸ್‌ನಲ್ಲಿ 27 ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು.

ಹೀಲಿ ಜೊತೆಗೆ ಬೆತ್ ಮೂನಿ ಕೂಡ ಅದ್ಭುತ ಶತಕ ಬಾರಿಸಿ ತಂಡವನ್ನು 400 ರನ್​ಗಳ ಗಡಿ ದಾಟಿಸಿದರು. ಮೂನಿ 106 ರನ್ ಗಳಿಸಿ ಅಜೇಯರಾಗಿ ಉಳಿದರೆ, ಜಾರ್ಜಿಯಾ ವಾಲ್ ಕೂಡ 62 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ, ನಿಕೋಲಾ ಕ್ಯಾರಿ ಕೇವಲ 15 ಎಸೆತಗಳಲ್ಲಿ 34 ರನ್ ಬಾರಿಸಿದರು. ಭಾರತದ ಪರ ಸ್ನೇಹ್ ರಾಣಾ 10 ಓವರ್‌ಗಳಲ್ಲಿ 66 ರನ್‌ ನೀಡಿ 2 ವಿಕೆಟ್‌ಗಳನ್ನು ಕಬಳಿಸಿದರು.

ಸತತ 3ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ

ಈ ಗುರಿ ಭಾರತ ತಂಡಕ್ಕೆ ಎಂದಿಗೂ ಸುಲಭವಾಗಿರಲಿಲ್ಲ, ಆದರೆ ಈ ಗುರಿಯನ್ನು ಬೆನ್ನಟ್ಟುವಲ್ಲಿ ಅವರಿಗಿದ್ದ ಯಾವುದೇ ಭರವಸೆ ಎರಡನೇ ಓವರ್‌ನಲ್ಲಿ ಸ್ಮೃತಿ ಮಂಧಾನ ಖಾತೆ ತೆರೆಯದೆಯೇ ಔಟಾದಾಗ ಮಾಯವಾಯಿತು. ನಂತರ ಪ್ರತೀಕಾ ರಾವಲ್ ಮತ್ತು ಜೆಮಿಮಾ ರೊಡ್ರಿಗಸ್ ಆಕ್ರಮಣಕಾರಿ ಜೊತೆಯಾಟವನ್ನು ರೂಪಿಸಿದರು. ಆದರೆ ಪ್ರತೀಕಾ ಔಟಾದ ನಂತರ ತಂಡದ ವಿಕೆಟ್‌ಗಳು ನಿಯಮಿತ ಅಂತರದಲ್ಲಿ ಪತನಗೊಂಡವು. ಅಂತಿಮವಾಗಿ ಹಾಲಿ ಏಕದಿನ ಚಾಂಪಿಯನ್ ಟೀಂ ಇಂಡಿಯಾ 45.1 ಓವರ್‌ಗಳಲ್ಲಿ ಕೇವಲ 224 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ನಾಯಕಿ ಹೀಲಿಗೆ ಸ್ಮರಣೀಯ ವಿದಾಯ ನೀಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫಾರೂಕ್ ಸನದಿ ಕೊಲೆ ರಹಸ್ಯ ಬಯಲು: ಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಹತ್ಯೆಗೈದ ಪ್ರಿಯಕರ – Kannada News | Big Twist To Gadag faruq sanadi Murder Case: Man murder For engagement with His Girl

ಗದಗ, (ಮಾರ್ಚ್ 01): ಜಿಲ್ಲೆಯ ಲಕ್ಷ್ಮೇಶ್ವರ ಹೊರವಲಯದ ಜಮೀನಲ್ಲಿ ಯುವಕ ಫಾರೂಕ್ ಸನದಿ (faruq sanadi Murder Case) ಎನ್ನುವಾತನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿಶ್ವಿತಾರ್ಥ ಮಾಡಿಕೊಂಡಿದ್ದ ಹುಡುಗಿ ಪ್ರಿಯಕರನೇ ಫಾರೂಕ್ ಸನದಿಯನ್ನು ಕೊಲೆ ಮಾಡಿರುವುದು ಎಂದು ಗೊತ್ತಾಗಿದೆ. ಪ್ರಿಯಕರ ದಾವಲಸಾಬ್ ಹಾಗೂ ಸ್ನೇಹಿತ ಮಕ್ಕಬೂಲ್ ಸಾಬ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿಕೊಂಡು ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಹತ್ಯೆ ನಡೆದ 24 ಗಂಟೆಯಲ್ಲಿ ನಾಲ್ಕು ಜನರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ಹಂತಕರನ್ನು ವಿಚಾರಣೆಗೊಳಪಡಿಸಿದಾಗ ತನ್ನ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಫಾರೂಕ್ ಸನದಿ ಕೊಲೆ ಮಾಡಿದ್ದಾಗಿ ದಾವಲಸಾಬ್ ಬಾಯ್ಬಿಟ್ಟಿದ್ದಾನೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ಶಿಗ್ಲಿ ಗ್ರಾಮದ ನಿವಾಸಿಯಾದ‌ 25 ವರ್ಷದ ಫಾರೂಕ್ ಸನದಿ ಎನ್ನುವಾತ ಮೂರು ತಿಂಗಳ ಹಿಂದೆ ಯುವತಿ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಆದ್ರೆ ಯುವತಿ ಹಾಗೂ ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ನಿವಾಸಿಯಾದ ದಾವಲಸಾಬ್ ಮಕಂದಾರ್ ಲವ್ ಮಾಡುತ್ತಿದ್ದಳು. ಹೀಗಾಗಿ ದಾವಲಸಾಬ್, ನಿಶ್ವಿತಾರ್ಥ ಮಾಡಿಕೊಡಿದ್ದ ಫಾರೂಕ್ ಸನದಿಯನ್ನು ಮಾತನಾಡಲೆಂದು ಜಮೀನಿಗೆ ಕರೆಯಿಸಿಕೊಂಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ಗಲಾಟ ವಿಕೋಪಕ್ಕೆ ತಿರುಗಿದ್ದು, ಇದೇ ಕೋಪದಲ್ಲಿ ಕೊಡಲಿಯಿಂದ ಫಾರೂಕ್ ಸವದಿಯನ್ನು ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ: ಭೀಕರ ಅಪಘಾತ : ದೇವರ ದರ್ಶನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ಸ್ಥಳದಲ್ಲೇ ಸಾವು

ಘಟನೆ ಹಿನ್ನೆಲೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಜಮೀನುವೊಂದರಲ್ಲಿ ನಿನ್ನೆ (ಫೆಬ್ರವರಿ 28) ಫಾರೂಕ್ ಸನದಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಕತ್ತು ಕೊಯ್ದು ಬಳಿಕ ಹತ್ಯೆ ಮಾಡಿದ್ದರು. ಕೊಲೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು ಹಂತಕರ ಸುಳಿವಿಗಾಗಿ ತೀವ್ರ ಶೋಧ ನಡೆಸಿದ್ದರು. ಸ್ಥಳಕ್ಕೆ ಗದಗ ಎಸ್ಪಿ ರೋಹನ‌್ ಜಗದೀಶ್, ಡಿವೈಎಸ್ಪಿ ಮುರ್ತುಜ ಖಾದ್ರಿ ಸೇರಿ ಅಧಿಕಾರಿಗಳು ದೌಡಾಯಿಸಿ ಹಂತಕರ ಪತ್ತೆಗೆ ತಂಡಗಳು ರಚನೆ ಮಾಡಿದ್ದರು. ಬಳಿಕ ಪೊಲೀಸರು ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಸಿ ಅಂತಿಮವಾಗಿ ಘಟನೆ ನಡೆದ 24 ಗಂಟೆಗಳಲ್ಲಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದುವೆಯಾಗಿ ಸುಂದರ ಜೀವನ ಮಾಡಬೇಕು ಎಂದು ಕನಸು ಕಂಡಿದ್ದ ಫಾರೂಕ್ ಸಾವಿನ ಮನೆ ಸೇರಿದ್ದಾನೆ. ಏನು ತಪ್ಪು ಮಾಡದ ಯುವಕ ಹತ್ಯೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್ ಜಲಸಂಧಿಯಲ್ಲಿ ಆಯಿಲ್ ಟ್ಯಾಂಕರ್ ಮೇಲೆ ಇರಾನ್ ದಾಳಿ; ತೈಲ ಹಡಗಿನಲ್ಲಿದ್ದರು 15 ಮಂದಿ ಭಾರತೀಯರು – Kannada News | Oil tanker with 15 Indian crew members attacked at Strait of Hormuz

ಮಸ್ಕಟ್, ಮಾರ್ಚ್ 1: ಓಮನ್​ನ ಡುಕಮ್ ಬಂದರಿನ (Duqm Port) ಮೇಲೆ ಇರಾನ್​ನ ಡ್ರೋನ್ ದಾಳಿ ನಡೆದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಸಾಗಿ ಹೋಗುತ್ತಿದ್ದ ತೈಲ ಹಡಗೊಂದರ ಮೇಲೆ ದಾಳಿಯಾದ ಘಟನೆ ವರದಿಯಾಗಿದೆ. ಆಗ್ನೇಯ ಏಷ್ಯನ್ ದೇಶವಾದ ಪಲಾವ್​ಗೆ ಸೇರಿದ ಆಯಿಲ್ ಟ್ಯಾಂಕರ್ ಓಮನ್​ ಮುಸಂದಮ್ ಬಳಿ ಕಿರಿದಾದ ಸಮುದ್ರ ಮಾರ್ಗದಲ್ಲಿ ಸಾಗುತ್ತಿದ್ದಾಗ ಈ ದಾಳಿಯಾಗಿದೆ. ಆದರೆ, ಅದರ ಮೇಲೆ ಇರಾನ್ ದಾಳಿ ಮಾಡಿದ್ದಾ ಎಂಬುದು ಖಚಿತವಿಲ್ಲ.

ಪಲಾವ್ ಬಾವುಟವಿದ್ದ ಮತ್ತು ಸ್ಕೈಲೈಟ್ ಹೆಸರಿನ ಈ ಆಯಿಲ್ ಟ್ಯಾಂಕರ್​ನಲ್ಲಿ 20 ಮಂದಿ ಸಿಬ್ಬಂದಿ ಇದ್ದು, ಅವರಲ್ಲಿ 15 ಮಂದಿ ಭಾರತೀಯರೇ ಇದ್ದಾರೆ. ಇನ್ನೈದು ಮಂದಿ ಇರಾನೀಯರೇ ಆಗಿದ್ದಾರೆ. ಮುಸನ್​ಡಮ್​ನ ಖಸಬ್ ಪೋರ್ಟ್​ನಿಂದ ಐದು ನಾಟಿಕಲ್ ಮೈಲಿಯ ದೂರದಲ್ಲಿ ಈ ದಾಳಿಯಾಗಿದ್ದು, ಓಮನ್ ಪಡೆಗಳು ಕೂಡಲೇ ಆ ಹಡಗು ಹಾಗೂ ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ. ಸಿಬ್ಬಂದಿ ಪೈಕಿ ನಾಲ್ವರಿಗೆ ವಿವಿಧ ತೀವ್ರತೆಯ ಗಾಯಗಳಾಗಿರುವುದು ಗೊತ್ತಾಗಿದೆ. ಅವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ.

ಇದನ್ನೂ ಓದಿ: ಆಯತುಲ್ಲಾ ಖಮೇನಿ ಮೇಲೆ ದಾಳಿಗೆ ಶನಿವಾರ ಬೆಳಗಿನ ಸಮಯ ಆರಿಸಿದ್ದು ಯಾಕೆ? ಬೇರೆ ಇದ್ದ ಪ್ಲಾನ್ ಬದಲಾಗಿದ್ದು ಯಾಕೆ?

ಕುತೂಹಲ ಎಂದರೆ, ಇರಾನ್ ಮತ್ತು ಅಮೆರಿಕದ ನಡುವೆ ಚಕಮಕಿ ಶುರುವಾದ ಬಳಿಕ ಓಮನ್ ಬಳಿ ದಾಳಿಯಾಗಿದ್ದು ಇದೇ ಮೊದಲು. ಇತರ ಗಲ್ಫ್ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ, ಕತಾರ್, ಕುವೇತ್ ಮೇಲೆ ಇರಾನ್ ಪ್ರತಿದಾಳಿ ನಡೆಸುತ್ತಾ ಬಂದಿದೆಯಾದರೂ ಓಮನ್ ಅನ್ನು ಗುರಿ ಮಾಡಿದ್ದು ಇದೇ ಮೊದಲು. ಆದರೆ, ಓಮನ್​ನ ಮುಖ್ಯ ಭಾಗದ ಮೇಲೆ ಯಾವುದೇ ದಾಳಿಯಾಗಿಲ್ಲ.

ಹಾರ್ಮುಜ್ ಜಲಸಂಧಿ ಅಥವಾ ಸಮುದ್ರ ಮಾರ್ಗ ಬಹಳ ಕಿರಿದಾಗಿರುವ ಹಾದಿ. ಪರ್ಷಿಯಲ್ ಕೊಲ್ಲಿಯಿಂದ ಆರಂಭವಾಗಿ ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರವನ್ನು ಇದು ಹಾದು ಹೋಗುತ್ತದೆ. ಇದು ಪ್ರಮುಖ ತೈಲ ಹಡಗುಗಳ ಸಾಗಣೆ ಮಾರ್ಗವಾಗಿದೆ. ಬಹಳ ಕಿರಿದಾದ್ದರಿಂದ ಸೂಕ್ಷ್ಮವೆಂದೂ ಪರಿಗಣಿಸಲಾಗಿದೆ.

ಇದನ್ನೂ ಓದಿ: ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ?

ಜಗತ್ತಿನ ಐದನೇ ಒಂದು ಭಾಗದ ತೈಲ ಪೂರೈಕೆಗೆ ಬೇಕಾಗುವ ಸರಕು ಹಾರ್ಮುಜ್ ಸ್ಟ್ರೇಟ್ ಮೂಲಕವೇ ಸಾಗುತ್ತದೆ. ಹೀಗಾಗಿ, ಬಹಳ ಮಹತ್ವದ ಜಲಸಂಧಿ ಇದು. ಈ ಜಲಸಂಧಿಯ ಹೆಚ್ಚಿನ ನಿಯಂತ್ರಣವು ಇರಾನ್ ಮತ್ತು ಓಮನ್​ಗೆ ಇದೆ. ಯುಎಇ ಕೂಡ ಇದೇ ಜಲಸಂಧಿಯ ಒಂದು ಬದಿಯಲ್ಲಿ ಇದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CBSE Exams Postponed: ಇರಾನ್-ಇಸ್ರೇಲ್ ಸಂಘರ್ಷ; ಈ ರಾಷ್ಟ್ರಗಳಲ್ಲಿ CBSE 10, 12 ನೇ ತರಗತಿ ಪರೀಕ್ಷೆ ಮುಂದೂಡಿಕೆ – Kannada News | CBSE Exams Postponed in Middle East Amid Iran Israel Tensions, 10th and 12th Boards

ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ನಡೆಯಬೇಕಿದ್ದ ಸಿಬಿಎಸ್‌ಇ (Central Board of Secondary Education) 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿರುವ ಸಿಬಿಎಸ್‌ಇ ಮಂಡಳಿ, ಗಲ್ಫ್ ದೇಶಗಳಲ್ಲಿ ಪರೀಕ್ಷೆ ಬರೆಯಲಿದ್ದ ಸಾವಿರಾರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ನಾಳೆಯಿಂದ(ಮಾರ್ಚ್ 2)  ಆರಂಭವಾಗಬೇಕಿದ್ದ ಪರೀಕ್ಷೆಗಳು ಮಧ್ಯಪ್ರಾಚ್ಯದ ಇರಾನ್, ಬಹ್ರೇನ್, ಕುವೈತ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಓಮನ್, ಕತಾರ್ ಈ ಏಳು ಪ್ರಮುಖ ದೇಶಗಳಲ್ಲಿ ಮುಂದೂಡಲಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕವೇ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಅಧಿಕೃತ ಪ್ರಕಟಣೆಯಲ್ಲಿ, “ವಿದ್ಯಾರ್ಥಿಗಳ ಸುರಕ್ಷತೆಯೇ ನಮಗೆ ಅತ್ಯಂತ ಮುಖ್ಯ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 2ರ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು” ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ದ್ವಿತೀಯ ಪಿಯು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಆತಂಕ; ಪ್ರಶ್ನೆ ಪತ್ರಿಕೆ ಬೇಕಾದರೆ ಮೆಸೇಜ್ ಮಾಡಿ ಎಂಬ ಪೋಸ್ಟ್ ವೈರಲ್!

ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳು ಅಥವಾ ನಕಲಿ ಸುತ್ತೋಲೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಂಡಳಿ ಮನವಿ ಮಾಡಿದೆ. ಪರೀಕ್ಷೆಗಳ ಕುರಿತು ನಿಖರ ಮತ್ತು ಅಧಿಕೃತ ಮಾಹಿತಿಗಾಗಿ ಕೇವಲ ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ cbse.gov.in ಅನ್ನು ಮಾತ್ರ ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ನಿರ್ಧಾರವು ತಾತ್ಕಾಲಿಕವಾದದ್ದಾಗಿದ್ದು, ಪರಿಸ್ಥಿತಿ ಸಾಮಾನ್ಯಗೊಂಡ ಬಳಿಕ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ: 

Source link

ಭೀಕರ ಅಪಘಾತ : ದೇವರ ದರ್ಶನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ಸ್ಥಳದಲ್ಲೇ ಸಾವು – Kannada News | A Haveri based Newly Married Couple Dies In Road Accident in nh 48 Kadadahalli

ಹಾವೇರಿ, (ಮಾರ್ಚ್ 01): ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿ (New Couple) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಕಾರ್ತಿಕ್ ಹೂಗಾರ(34), ಐಶ್ವರ್ಯಾ(30) ಮೃತ ದುರ್ದೈವಿಗಳು. ಕಾರ್ತಿಕ್​, ಐಶ್ವರ್ಯಾ 15 ದಿನಗಳಿಂದ ಅಷ್ಟೇ ಮದುವೆಯಾಗಿದ್ದು, ಹೊಸ ಸಂಸಾರ ಪ್ರಾರಂಭಿಸುವ ಮುನ್ನ ದೇವರ ದರ್ಶನಕ್ಕೆ ಹೋಗಿ ಒಳ್ಳೇದು ಮಾಡಪ್ಪ ಎಂದು ಬೇಡಿಕೊಂಡು ಊರಿಗೆ ವಾಪಸ್ ಆಗುತ್ತಿದ್ದರು. ಆದ್ರೆ, ವಿಧಿ ಅರ್ಧ ದಾರಿಯಲ್ಲೇ ನವದಂಪತಿಯನ್ನು ಬಲಿ ಪಡದುಕೊಂಡಿದೆ.

ಹಾವೇರಿ ನಗರದ ನಿವಾಸಿಯಾಗಿರುವ ಕಾರ್ತಿಕ್ ಹೂಗಾರ ಹಾಗೂ ಐಶ್ವರ್ಯಾ 15 ದಿನದ ಹಿಂದೆ ಹೊಸ ಬಾಳಿಗೆ ಕಾಲಿಟ್ಟಿದ್ದು, ಹೊಸತರಲ್ಲಿ ದೇವರ ಆಶೀರ್ವಾದ ಇರಲಿ ಎಂದು ದೇವಸ್ಥಾನಕ್ಕೆ ಹೋಗಿದ್ದರು. ಆದ್ರೆ, ನಿನ್ನೆ (ಫೆಬ್ರವರಿ 28) ದೇವರ ದರ್ಶನಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮದುವೆಯಾಗಿ ಕೇವಲ 15 ದಿನಗಳು ಆಗಿತ್ತು ಅಷ್ಟೇ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಚರಣೆ ನಡೆಸಿ ಕಾರಿನಿಂದ ಮೃತದೇಹ ಹೊರಕ್ಕೆ ತೆಗೆದಿದ್ದಾರೆ.

ಇದನ್ನೂ ನೋಡಿ: Lunar Eclipse: ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!

ಜೋಡಿ KA-63 M-0522 ವ್ಯಾಗನಾರ್ ಕಾರಿನಲ್ಲಿ ಹುಬ್ಬಳ್ಳಿ ಕಡೆಯಿಂದ ಶಿಗ್ಗಾಂವಿ ಕಡೆಗೆ ತೆರಳುತ್ತಿದ್ದು, ಈ ವೇಳೆ ಕಾರು ವೇಗವಾಗಿ ಹೋಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಕಾರಿನಲ್ಲಿದ್ದ ಇನ್ನಿಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ರವಾನೆ ಮಾಡಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೊಂದೆಡೆ ಇತ್ತ ಎರಡೂ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version