ಹೆಲ್ತಿ, ಸೂಪರ್‌ ಫಿಟ್‌ ಆಗಿರಲು ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ – Kannada News | If you do these things in your morning routine, you will be active throughout the day

ದಿನದ ಆರಂಭದಲ್ಲಿ ಸಕಾರಾತ್ಮಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿಟ್ಟುಕೊಳ್ಳಬಹುದು. ಹೌದು ಬೆಳಗಿನ ಅಭ್ಯಾಸಗಳು ನಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ. ಅದಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡುವ ಬದಲು ಉತ್ತಮ ದಿನಚರಿಯನ್ನು (morning routine)  ಪಾಲಿಸಬೇಕು, ಇದು ನಿಮ್ಮನ್ನು ದಿನವಿಡೀ ಆಕ್ಟಿವ್‌ ಆಗಿರಲು ಸಹಾಯ ಮಾಡುವುದು ಮಾತ್ರವಲ್ಲದೆ, ಮಾನಸಿಕ ಸಮತೋಲನ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಿದ್ರೆ ಸದೃಢವಾಗಿರಲು, ಸೂಪರ್‌ ಆಕ್ಟಿವ್‌ ಆಗಿರಲು ಯಾವ ಬೆಳಗಿನ ದಿನಚರಿಯಲ್ಲಿ ಯಾವ ಅಭ್ಯಾಸಗಳನ್ನು ಪಾಲಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಪಾಲಿಸಿ:

ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯ ಕಳೆಯಿರಿ: ಬೆಳಗಿನ ಸೂರ್ಯನ ಬೆಳಕು ದೇಹದಲ್ಲಿ ವಿಟಮಿನ್ ಡಿ ಅನ್ನು ಉತ್ಪಾದಿಸುತ್ತದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.  ಹಾಗಾಗಿ ಬೆಳಿಗ್ಗೆ 10 ರಿಂದ 15 ನಿಮಿಷಗಳ ಕಾಲ ಸೂರ್ಯನ ಬೆಳಕಿನಡಿಯಲ್ಲಿ ಕುಳಿತುಕೊಳ್ಳಿ.  ಇದು ದಿನವನ್ನು ತಾಜಾತನದಿಂದ ಪ್ರಾರಂಭಿಸಲು ಸಹಾಯ ಮಾಡುವುದಲ್ಲದೆ  ಆಯಾಸವನ್ನು ಕಡಿಮೆ ಮಾಡುತ್ತದೆ.

ಧ್ಯಾನ ಮಾಡಿ: ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಧ್ಯಾನ ಮಾಡಿ.  ಆಳವಾದ ಉಸಿರಾಟದ ವ್ಯಾಯಾಮ, ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವುದು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ದಿನವಿಡೀ ನೀವು ಆಕ್ಟಿವ್‌ ಆಗಿರಲು ಸಹಾಯ ಮಾಡುತ್ತದೆ.

ವ್ಯಾಯಾಮ ಮಾಡಿ: ಬೆಳಗಿನ ದಿನಚರಿಯಲ್ಲಿ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. 20 ರಿಂದ 30 ನಿಮಿಷಗಳ ಕಾಲ ಲಘು ಯೋಗ, ಸ್ಟ್ರೆಚಿಂಗ್, ವಾಕಿಂಗ್ ಅಥವಾ ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡಿ. ವ್ಯಾಯಾಮವು ದೇಹವನ್ನು ಸದೃಢವಾಗಿರಿಸುತ್ತದೆ, ತೂಕವನ್ನು ನಿಯಂತ್ರಿಸುತ್ತದೆ, ಮತ್ತು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ವ್ಯಾಯಾಮವು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ಊಟದ ಬಳಿಕ ವೀಳ್ಯದೆಲೆ ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಆರೋಗ್ಯಕರ ಅಹಾರ ಸೇವನೆ: ಬೆಳಗಿನ ಉಪಕಾರಕ್ಕೆ ಆರೋಗ್ಯಕರ ಆಹಾರ ಸೇವನೆ ಮಾಡಿ. ಅದರಲ್ಲೂ ಹಸಿರು ತರಕಾರಿಗಳನ್ನು ತಿನ್ನುವುದು ತುಂಬಾನೇ ಮುಖ್ಯ. ಪಾಲಕ್, ಮೆಂತ್ಯ, ಬ್ರೊಕೊಲಿಯಂತಹ ಹಸಿರು ತರಕಾರಿಗಳು ಜೀವಸತ್ವಗಳು, ಖನಿಜಗಳು ಮತ್ತು ನಾರಿನಂಶದಿಂದ ಸಮೃದ್ಧವಾಗಿವೆ. ಇವು ಕಣ್ಣುಗಳು, ಚರ್ಮ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿ, ಇದರಿಂದ ದೇಹವು ನಿರ್ವಿಷಗೊಳ್ಳುತ್ತದೆ.

ನೀರು ಕುಡಿಯಿರಿ: ಬೆಳಿಗ್ಗೆ ಎದ್ದ ತಕ್ಷಣ 1-2 ಗ್ಲಾಸ್ ನೀರು ಕುಡಿಯಿರಿ ಮತ್ತು ದಿನವಿಡೀ 8-10 ಗ್ಲಾಸ್ ನೀರು ಕುಡಿಯಿರಿ. ನೀರು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ, ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. ಹೀಗೆ ಈ ಎಲ್ಲಾ ಅಭ್ಯಾಸಗಳನ್ನು ನಿಮ್ಮ ಬೆಳಗಿನ ದಿನಚರಿಯಲ್ಲಿ ಪಾಲಿಸುವ ಮೂಲಕ ನೀವು ಸದೃಢವಾಗಿರಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BJP-JDS ಮೈತ್ರಿ ಗೊಂದಲಕ್ಕೆ ಶಿಘ್ರವೇ ಇತಿಶ್ರೀ: ಸಮನ್ವಯ ಸಭೆಗೆ ನಾಯಕರ ನಿರ್ಧಾರ – Kannada News | Karnataka BJP JDS Leaders Meet to Iron Out Local Body Election Alliance Issues

ಬೆಂಗಳೂರು, ಫೆಬ್ರವರಿ 19: ಮೈತ್ರಿ ನಡುವೆ ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರ ಸೇರಿ ಕೆಲ ವಿಷಯಗಳಲ್ಲಿ ಉಂಟಾಗಿರುವ ಗೊಂದಲಗಳಿಗೆ ಮದ್ದರೆಯಲು BJP ಮತ್ತು JDS ನಾಯಕರು ಮುಂದಾಗಿದ್ದಾರೆ. ಕುಮಾರಸ್ವಾಮಿ, ಆರ್.ಅಶೋಕ್, ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶೀಘ್ರವೇ ಬೆಂಗಳೂರಿನಲ್ಲಿ ಮೈತ್ರಿ ನಾಯಕರ ಸಮನ್ವಯ ಸಭೆ ನಡೆಸಲು ಸಿದ್ಧತೆ ನಡೆದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ನಾಯಕರ ಗೊಂದಲದ ಹೇಳಿಕೆ ಹಿನ್ನೆಲೆ ಸಭೆ ನಡೆಸಲು ಉದ್ದೇಶಿಸಿರುವ ಮಾಹಿತಿ ಇದೆ.

ಉಭಯ ಪಕ್ಷಗಳ ನಾಯಕರು ಒಂದೊಂದು ರೀತಿ ಹೇಳಿಕೆ ನೀಡುತ್ತಿರೋದು ಕಾಂಗ್ರೆಸ್ ನಾಯಕರಿಗೆ ಅಸ್ತ್ರವಾಗುವ ಸಾಧ್ಯತೆ ಇದೆ. ಅಲ್ಲದೆ ಸ್ಥಳೀಯ ಸಂಸ್ಥೆ ಚುನಾವಣೆಯ ಮೇಲೂ ಇದು ಪರಿಣಾಮ ಬೀರಬುದಾದ ಹಿನ್ನೆಲೆ ಮೈತ್ರಿ ನಾಯಕರಲ್ಲಿ ಏನೇ ಮನಸ್ತಾಪ, ಗೊಂದಲಗಳಿದ್ದರೂ ಅದನ್ನು ಬಗೆಹರಿಸಲು ನಾಯಕರು ತೀರ್ಮಾನಿಸಿದ್ದಾರೆ. ಜಿಬಿಎ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಹೊಂದಾಣಿಕೆ ವಿಚಾರ ಸಂಬಂಧ ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ವಿಪಕ್ಷ ನಾಯಕ ಆರ್​. ಅಶೋಕ್​​, ಕೇಂದ್ರ ಸಚಿವ ಹೆಚ್​. ಡಿ. ಕುಮಾರಸ್ವಾಮಿ ಜತೆ ಮಾತಾಡಿದ್ದು, ಸುಲಲಿತವಾಗಿ ಜೆಡಿಎಸ್ ಜತೆ ಹೊಂದಾಣಿಕೆ ಆಗಲಿದೆ. ಆದಷ್ಟು ಬೇಗ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇವೆ. ನಮ್ಮ‌ ನಡುವೆ ಯಾವುದೇ ದೊಡ್ಡ ದೊಡ್ಡ ಸಮಸ್ಯೆಗಳು ಇಲ್ಲ. ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಹೈಕಮಾಂಡ್ ‌ತೀರ್ಮಾನ ಅಂತಿಮ ಎಂದು ಹೇಳಿದ್ದರು.

ಇದನ್ನೂ ಓದಿ: ದೋಸ್ತಿ ನಾಯಕರ ನಡುವೆ ದಂಗಲ್​; ಜಿಬಿಎ ಎಲೆಕ್ಷನ್​​ಗೆ ಜೆಡಿಎಸ್ ಪ್ರತ್ಯೇಕ ಸ್ಪರ್ಧೆ?

ಅತ್ತ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಕೂಡ ಈ ಬಗ್ಗೆ ಅದಾಗಲೇ ಮಾತನಾಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಮತ್ತು ಲೋಪಗಳಿಲ್ಲ. ವೈಯಕ್ತಿಕವಾಗಿ ಮಾತಾಡುವುದಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲ. ರಾಷ್ಟ್ರಮಟ್ಟದಲ್ಲಿ ನಾವು NDA ಸೇರಿರುವುದರಿಂದ ಬೇರೆ ವಿಚಾರ ಬರೋದಿಲ್ಲ. ನಾನು ನೂರಾರು ಬಾರಿ ಹೇಳಿದ್ದೀನಿ, ಜನ ಮುಂದಿನ ಸಿಎಂ ಎಂದು ಕೂಗ್ತಾರೆ. ಜನ ಮುಂದಿನ ಸಿಎಂ ಎಂದು ಕೂಗ್ತಾರೆಂದು ಭ್ರಮೆಯಲ್ಲಿ ಹೋಗಬಾರದು. ಜನ ನಮ್ಮ ಮೇಲಿನ ಪ್ರೀತಿಯಿಂದ ಮಾತಾಡ್ತಾರೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಅನ್ನುವಂತಾಗಬಾರದು. ಸಿಎಂ ಆಗುತ್ತೇನೆ ಎಂದು ನಾನು ಕನಸು ಕಾಣಲು ಆಗುತ್ತಾ? ನಾನು 2 ಬಾರಿ ಸಿಎಂ ಆಗಿದ್ದೆ. ಯಾರ ಹಣೆಯಲ್ಲಿ ಏನೇನ್ ಬರೆದಿರುತ್ತೋ ಹಾಗೆಯೇ ಆಗುತ್ತದೆ. ನನ್ನ ಮೊದಲ ಆದ್ಯತೆ ರಾಜ್ಯದಲ್ಲಿರುವ ಕೆಟ್ಟ ಸರ್ಕಾರವನ್ನು ತೆಗೆಯುವುದು. ಕೆಟ್ಟ ಸರ್ಕಾರ ತೆಗೆಯಲು ಬಿಜೆಪಿ, ಜೆಡಿಎಸ್ ಮೈತ್ರಿ ಮುಂದುವರಿಯಬೇಕು ಎಂದು ಹೇಳಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

90 ದಿನಗಳ ಬಳಿಕ ಜೈಲಿನಿಂದ ಹೊರಬಂದ ಪೈರಸಿ ಕಿಂಗ್ ಐಬೊಮ್ಮ ರವಿ – Kannada News | Ibomma Ravi got Interim bail after 90 days of arrest

ಪೈರಸಿ (Piracy) ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ರವಿ ಅಲಿಯಾಸ್ ಐಬೊಮ್ಮ ರವಿ ನಿನ್ನೆ ಚಂಚಗುಡ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಐಬೊಮ್ಮ ಸೇರಿದಂತೆ ಕೆಲವು ಪೈರಸಿ ವೆಬ್​​ಸೈಟ್ ಮತ್ತು ಅಪ್ಲಿಕೇಶನ್​​ಗಳನ್ನು ನಡೆಸುತ್ತದ್ದ ರವಿಯನ್ನು ಮೂರು ತಿಂಗಳ ಹಿಂದೆ ಪೊಲೀಸರು ಬಂದಿಸಿದ್ದರು. ಐಬೊಮ್ಮ ರವಿ ವಿರುದ್ಧ ಪೈರಸಿಯ ಹಲವಾರು ಕೇಸುಗಳು ದಾಖಲಾಗಿದ್ದವು. ವಿದೇಶದಲ್ಲಿ ಕೂತು ಪೈರಸಿ ವೆಬ್​​ಸೈಟ್ ನಡೆಸುತ್ತಿದ್ದ ರವಿ, ಕೌಟುಂಬಿಕ ಕಾರಣಗಳಿಗಾಗಿ ಹೈದರಾಬಾದ್​​ಗೆ ಬಂದಾಗ ಆತನನ್ನು ಪೊಲೀಸರು ಬಂಧಿಸಿದ್ದರು.

ಆದರೆ ಬಂಧಿಸಿದ 90 ದಿನಗಳ ಬಳಿಕವೂ ಪೊಲೀಸರು ರವಿ ವಿರುದ್ಧ ಚಾರ್ಜ್​​ ಶೀಟ್ ದಾಖಲು ಮಾಡಿರಲಿಲ್ಲ. ಇದರ ಆಧಾರದ ಮೇಲೆ ಐಬೊಮ್ಮ ರವಿ ಜಾಮೀನು ಪಡೆದಿದ್ದಾರೆ. ಕೆಲವು ಕಠಿಣ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ರವಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪ್ರತಿ ದಿನವೂ ತನಿಖಾಧಿಕಾರಿ ಎದುರು ಹಾಜರಾಗಿ ಸಹಿ ಹಾಕುವುದು, ತನ್ನ ಪಾಸ್​​ಪೋರ್ಟ್ ಮತ್ತು ವಿಸಾಗಳನ್ನು ಪೊಲೀಸರಿಗೆ ಒಪ್ಪಿಸಬೇಕು, ದೇಶ ಬಿಟ್ಟು ಹೊರ ಹೋಗುವ ಪ್ರಯತ್ನ ಮಾಡುವಂತಿಲ್ಲ ಮತ್ತು ಪೈರಸಿ ವೆಬ್​ಸೈಟ್​​ಗಳ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ಹಾಕಿದೆ.

ಪೊಲೀಸರ ಪರವಾಗಿ ವಾದಿಸಿದ ವಕೀಲರು, ‘ರವಿ ಸಾವಿರಾರು ಕೋಟಿ ನಷ್ಟಕ್ಕೆ ಕಾರಣವಾಗಿದ್ದು, ಆತ ವಿದೇಶಿ ನಾಗರೀಕ ಸಹ ಆಗಿದ್ದಾನೆ. ಹಾಗಾಗಿ ಆತ ಪಲಾಯನ ಮಾಡುವ ಅಪಾಯ ಇದೆ’ ಎಂದಿದ್ದರು. ಆದರೆ 90 ದಿನಗಳ ಬಳಿಕವೂ ಚಾರ್ಜ್ ಶೀಟ್ ಸಲ್ಲಿಸದೇ ಇರುವುದನ್ನೇ ಮುಖ್ಯವಾಗಿ ಪರಿಗಣಿಸಿದ ನ್ಯಾಯಾಧೀಶರು ರವಿಗೆ ಷರತ್ತುಗಳನ್ನು ವಿಧಿಸಿ ಮಧ್ಯಂತರ ಜಾಮೀನು ನೀಡಿದ್ದಾರೆ.

ಇದನ್ನೂ ಓದಿ:‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?

ಐಬೊಮ್ಮ ರವಿ, ಸಾವಿರಾರು ಸಿನಿಮಾಗಳನ್ನು ಪೈರಸಿ ಮಾಡಿದ್ದ. ವಿದೇಶದಲ್ಲೇ ಕೂತು ತನ್ನ ಐಬೊಮ್ಮ ಸೇರಿದಂತೆ ಹಲವು ವೆಬ್​​ಸೈಟ್​​ಗಳಿಗೆ ಉಚಿತವಾಗಿ ಸಿನಿಮಾಗಳನ್ನು ಅಪ್​ಲೋಡ್ ಮಾಡುತ್ತಿದ್ದ. ಕೆಲವು ಬಾರಿಯಂತೂ ಸಿನಿಮಾಗಳು ಬಿಡುಗಡೆ ಆಗುವ ಮುಂಚೆಯೇ ಅವುಗಳನ್ನು ವೆಬ್​​ಸೈಟ್​​ಗೆ ಅಪ್​ಲೋಡ್ ಮಾಡಿಬಿಡುತ್ತಿದ್ದ. ತೆಲುಗು ಸಿನಿಮಾಗಳೇ ಹೆಚ್ಚಾಗಿ ಐಬೊಮ್ಮ ರವಿಯ ಟಾರ್ಗೆಟ್ ಆಗಿರುತ್ತಿದ್ದವು. ಕೆಲ ವರದಿಗಳ ಪ್ರಕಾರ, ಐಬೊಮ್ಮ ರವಿ ಒಬ್ಬನಿಂದಲೇ ತೆಲುಗು ಚಿತ್ರರಂಗಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ತೆಲುಗು ಚಿತ್ರರಂಗದ ಹಲವು ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರ ಸಂಘ, ಫಿಲಂ ಚೇಂಬರ್​​ಗಳು ರವಿ ವಿರುದ್ಧ ಹಲವು ಬಾರಿ ದೂರು ನೀಡಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕದ್ದ ಚಿನ್ನವನ್ನು ಗೋಲ್ಡ್ ಲೋನ್ ಕಂಪನಿಗೆ ಮಾರುವ ವೇಳೆ ರೆಡ್​​​ ಹ್ಯಾಂಡ್​​​ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ – Kannada News | Karnataka Gold Crime: Hubballi Woman and KGF Soil Thieves Arrested*

ರಾಣೇಬೆನ್ನೂರು, ಫೆ.19: ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ ಬಂಗಾರವನ್ನು ಮಾರಾಟ ಮಾಡಲು ನಗರದ ಗೋಲ್ಡ್ ಲೋನ್ ಕಂಪನಿಗೆ ಬಂದಿದ್ದ ಮಹಿಳೆಯೊಬ್ಬಳನ್ನು ರಾಣೇಬೆನ್ನೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಹುಬ್ಬಳ್ಳಿ ಮೂಲದ ಶ್ರೀದೇವಿ ಸಂಜೀವ ಕಟ್ಟೇಕಾರ ಎಂದು ಗುರುತಿಸಲಾಗಿದೆ. ಈಕೆ ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ ಸುಮಾರು 236 ಗ್ರಾಂ ಚಿನ್ನಾಭರಣಗಳನ್ನು (ಅಂದಾಜು 16 ಲಕ್ಷ ರೂ. ಮೌಲ್ಯ) ಮಾರಾಟ ಮಾಡಲು ರಾಣೇಬೆನ್ನೂರಿನ ಖಾಸಗಿ ಗೋಲ್ಡ್ ಕಂಪನಿಗೆ ಬಂದಿದ್ದಳು.

ಚಿನ್ನ ಮಾರಾಟ ಮಾಡಲು ಬಂದ ಮಹಿಳೆಯ ನಡವಳಿಕೆ ಮತ್ತು ಆಕೆಯ ಬಳಿಯಿದ್ದ ಚಿನ್ನದ ದಾಖಲೆಗಳ ಬಗ್ಗೆ ಗೋಲ್ಡ್ ಕಂಪನಿಯ ಸಿಬ್ಬಂದಿಗೆ ತೀವ್ರ ಅನುಮಾನ ಮೂಡಿದೆ. ತಕ್ಷಣವೇ ಈ ಬಗ್ಗೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ರಾಣೇಬೆನ್ನೂರು ನಗರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯ ಬಳಿ ಒಟ್ಟು 236 ಗ್ರಾಂ ಚಿನ್ನ ಇರುವುದು ತಿಳಿದುಬಂದಿದೆ. ಅದರಲ್ಲಿ ಆಕೆ 40 ಗ್ರಾಂ ಚಿನ್ನವನ್ನು (ಸುಮಾರು 6 ಲಕ್ಷ ರೂ. ಮೌಲ್ಯ) ಮಾರಾಟ ಮಾಡಲು ಮುಂದಾಗಿದ್ದಳು ಎನ್ನಲಾಗಿದೆ. ಸದ್ಯ ಪೊಲೀಸರು ಚಿನ್ನವನ್ನು ವಶಪಡಿಸಿಕೊಂಡಿದ್ದು, ಈಕೆಯ ಹಿಂದೆ ಬೇರೆ ಜಿಲ್ಲೆಯ ಕಳ್ಳರ ಗ್ಯಾಂಗ್ ಇದೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ಉದ್ಯಮಿ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಬಿಗ್​​​​ ಟ್ವಿಸ್ಟ್​: ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಖೈದಿಯಿಂದಲ್ಲೇ ಕನ್ನ!

ಕೋಲಾರದಲ್ಲಿ ಪ್ರತ್ಯೇಕ ಘಟನೆ:

ಕೆಜಿಎಫ್‌ನ ಐತಿಹಾಸಿಕ ಚಿನ್ನದ ಗಣಿ ಪ್ರದೇಶದಲ್ಲಿ ಅಕ್ರಮವಾಗಿ ಚಿನ್ನ ಮಿಶ್ರಿತ ಮಣ್ಣನ್ನು ಕದಿಯುತ್ತಿದ್ದ ಎಂಟು ಜನರ ತಂಡವನ್ನು ಉರಿಗಾಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್‌ನ ಗಿಫ್ಫಾರ್ಟ್ ಶಾಪ್ಟ್ ಪ್ರದೇಶದಲ್ಲಿ ಈ ಗ್ಯಾಂಗ್ ಅಕ್ರಮವಾಗಿ ಪ್ರವೇಶಿಸಿತ್ತು. ಗಣಿಯ ಆಳದಿಂದ ಚಿನ್ನದ ಅಂಶವಿರುವ ಮಣ್ಣನ್ನು ಹೊರತೆಗೆದು ಸಾಗಿಸಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳಿಂದ ಒಟ್ಟು 8 ಚೀಲಗಳಲ್ಲಿ ತುಂಬಿದ್ದ ಚಿನ್ನ ಮಿಶ್ರಿತ ಮಣ್ಣನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಈ ಮಣ್ಣಿನ ಮೌಲ್ಯ ಸುಮಾರು 40,000 ರೂಪಾಯಿ ಎಂದು ಅಂದಾಜಿಸಲಾಗಿದೆ.

ಬಂಧಿತ ಎಂಟು ಆರೋಪಿಗಳ ವಿರುದ್ಧ ಉರಿಗಾಂ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಕೆಜಿಎಫ್ ಗಣಿ ಮುಚ್ಚಲ್ಪಟ್ಟಿದ್ದರೂ, ಇಂದಿಗೂ ಅದರ ಮಣ್ಣಿನಲ್ಲಿ ಚಿನ್ನದ ಅಂಶವಿರುವ ಕಾರಣ ಇಂತಹ ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ಈ ಜಾಲದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:21 am, Thu, 19 February 26

Source link

Vasthu Tips: ಮನೆಯ ಮುಂದೆ ಹುಣಸೆ ಮರ ಇದ್ದರೆ ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Tamarind Tree and Vastu: Why Avoid It Near Home? Impact and Remedies

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಸುತ್ತಮುತ್ತಲಿನ ಪರಿಸರವು ಕುಟುಂಬದ ಸುಖ, ಸಮೃದ್ಧಿ ಮತ್ತು ಮಾನಸಿಕ ಶಾಂತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ಅನೇಕರು ತಮ್ಮ ಮನೆಗಳ ಮುಂದೆ ಹಣ್ಣಿನ ಮರಗಳು, ಹೂವಿನ ಗಿಡಗಳು ಮತ್ತು ತರಕಾರಿ ಸಸ್ಯಗಳನ್ನು ನೆಟ್ಟು ಮನೆಗೆ ಹಸಿರಿನ ಸೊಬಗು ನೀಡುತ್ತಾರೆ. ಸಾಮಾನ್ಯವಾಗಿ ಇದು ಒಳ್ಳೆಯದ್ದೇ. ಆದರೆ ವಾಸ್ತು ತಜ್ಞರ ಪ್ರಕಾರ, ಕೆಲವು ಮರಗಳು ತಪ್ಪು ಸ್ಥಳದಲ್ಲಿ ಇದ್ದರೆ ವಾಸ್ತು ದೋಷಗಳಿಗೆ ಕಾರಣವಾಗಬಹುದು.

ವಿಶೇಷವಾಗಿ ಮನೆಯ ಮುಂದೆ ಅಥವಾ ಮನೆಯ ಹತ್ತಿರ ಹುಣಸೆ ಮರ ಇರುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭ ಎಂದು ಹೇಳಲಾಗುತ್ತದೆ. ಹುಣಸೆ ಮರವು ಗಾಢ ನೆರಳನ್ನು ನೀಡುವ ಮರವಾಗಿದ್ದು, ಇದರ ನೆರಳು ಮನೆಯ ಮೇಲೆ ಶುಭವಲ್ಲ ಎಂದು ತಜ್ಞರು ಸಲಹೆ ನೀಡುತ್ತಾರೆ. ಮನೆಯ ಮುಖ್ಯ ಬಾಗಿಲಿನ ಎದುರು ಹುಣಸೆ ಮರ ಇದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ವಾಸ್ತು ನಂಬಿಕೆಗಳ ಪ್ರಕಾರ, ಮನೆಯ ಮುಂದೆ ಹುಣಸೆ ಮರ ಇರುವುದು ಮನೆಯ ಸದಸ್ಯರಿಗೆ ಆರ್ಥಿಕ ಸಮಸ್ಯೆ, ಕುಟುಂಬ ಕಲಹಗಳು ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ವಿಶೇಷವಾಗಿ ಮನೆಯ ಪ್ರವೇಶ ದ್ವಾರದ ಮುಂದೆ ಈ ಮರ ಇರುವುದರಿಂದ ಬಡತನ, ಸಾಲದ ಸಮಸ್ಯೆಗಳು ಮತ್ತು ಅಭಿವೃದ್ಧಿಯಲ್ಲಿ ವಿಳಂಬ ಉಂಟಾಗಬಹುದು ಎಂದು ಎಚ್ಚರಿಸಲಾಗಿದೆ.

ಆದ್ದರಿಂದ, ಮನೆಯ ಆವರಣದಲ್ಲಿ ಹುಣಸೆ ಮರ ನೆಡುವುದನ್ನು ತಪ್ಪಿಸುವುದು ಉತ್ತಮ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಈಗಾಗಲೇ ಹುಣಸೆ ಮರ ಇದ್ದರೆ, ಅದರ ನೆರಳು ಮನೆ ಮೇಲೆ ಬೀಳದಂತೆ ಕ್ರಮ ಕೈಗೊಳ್ಳುವುದು ಅಥವಾ ವಾಸ್ತು ಪರಿಹಾರಗಳನ್ನು ಅನುಸರಿಸುವುದು ಒಳಿತು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AI Impact Summit: ಭಾರತಕ್ಕೆ ಎಐ ಬಗ್ಗೆ ಭಯ ಇಲ್ಲ, ಭಾಗ್ಯ ಕಾಣುತ್ತೆ, ಭವಿಷ್ಯ ಕಾಣುತ್ತೆ: ಪ್ರಧಾನಿ ಮೋದಿ – Kannada News | AI Impact Summit: India’s Vision for AI Blessing, Future, Responsibility and Transparency

ನವದೆಹಲಿ, ಫೆಬ್ರವರಿ 19: ಎಐ ಎಂದರೆ ಕೆಲವರಿಗೆ ಭಯ ಕೆಲವರು ಅದು ನಮ್ಮ ಭಾಗ್ಯವೆಂದು ಪರಿಗಣಿಸುತ್ತಾರೆ. ನಾನು ಕೂಡ ಗರ್ವದಿಂದ ಹೇಳುತ್ತೇನೆ, ನಮಗೆ ಎಐ ಎಂದರೆ ಭಯ ಇಲ್ಲ, ಭಾಗ್ಯ ಕಾಣುತ್ತೆ, ಭಾರತದ ಭವಿಷ್ಯ ಕಾಣುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಇಂದು ನವದೆಹಲಿಯ ಭಾರತ್ ಮಂಪಟದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್​ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ.

ಮೂರು ಭಾರತೀಯ ಕಂಪನಿಗಳು ಎಐ ಮಾಡೆಲ್ ಆ್ಯಪ್ ಲಾಂಚ್ ಮಾಡಿದ್ದಾರೆ. ಈ ಮಾಡೆಲ್​ಗಳು ಯುವಕರ ಟ್ಯಾಲೆಂಟ್ ಏನಿದೆ ಎಂಬುದನ್ನು ತೋರಿಸುತ್ತದೆ. ಕೆಲವರು ಎಐ ಮುಂದಿಟ್ಟುಕೊಂಡು ಜಗತ್ತನ್ನೇ ಆಳುವ ಮನಸ್ಥಿತಿಯಲ್ಲಿದ್ದಾರೆ. ಆದರೆ ಭಾರತ ಅದನ್ನು ಭವಿಷ್ಯವೆಂದಷ್ಟೇ ಪರಿಗಣಿಸುತ್ತಿದೆ ಎಂದರು.

ಯಂತ್ರ ಕಲಿಕೆಯಿಂದ ಕಲಿಕೆ ಯಂತ್ರದವರೆಗೆ, ಅಂದರೆ ಯಂತ್ರವನ್ನು ಮನುಷ್ಯನೇ ನಡೆಸಬೇಕು. ನಾವು ದೊಡ್ಡ ದೃಷ್ಟಿಕೋನವನ್ನು ಹೊಂದಿರಬೇಕು ಮತ್ತು ಅಷ್ಟೇ ದೊಡ್ಡ ಜವಾಬ್ದಾರಿಯನ್ನು ಹೊರಬೇಕು. ಭವಿಷ್ಯದ ಪೀಳಿಗೆಗೆ ನಾವು ಯಾವ ರೀತಿಯ AI ಅನ್ನು ಬಿಟ್ಟುಬಿಡುತ್ತೇವೆ ಎಂಬುದರ ಬಗ್ಗೆಯೂ ನಾವು ಕಾಳಜಿ ವಹಿಸಬೇಕಾಗಿದೆ.

ಆದ್ದರಿಂದ, ಇಂದಿನ ನಿಜವಾದ ಪ್ರಶ್ನೆಯೆಂದರೆ ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ಏನು ಮಾಡಬಹುದು ಎಂಬುದು ಅಲ್ಲ, ಆದರೆ ವರ್ತಮಾನದಲ್ಲಿ ನಾವು ಅದನ್ನು ಬಳಸಿಕೊಂಡು ಏನು ಮಾಡುತ್ತೇವೆ ಎಂಬುದು ನಿಜವಾದ ಪ್ರಶ್ನೆ. ಅತ್ಯಂತ ಶಕ್ತಿಶಾಲಿ ಉದಾಹರಣೆಯೆಂದರೆ ಪರಮಾಣು ಶಕ್ತಿ. ಅದರ ವಿನಾಶ ಮತ್ತು ಅದರ ಸಕಾರಾತ್ಮಕ ಕೊಡುಗೆಯನ್ನು ನಾವು ನೋಡಿದ್ದೇವೆ. ಎಐ ಕೂಡ ಒಂದು ಪರಿವರ್ತಕ ಶಕ್ತಿಯಾಗಿದೆ.

ಎಐಯಲ್ಲಿ ಅಥೆಂಟಿಸಿಟಿ ಹಾಗೂ ಪಾರದರ್ಶಕತೆ ಎಂಬುದು ಮುಖ್ಯ, ಯಾವುದು ಎಐ ವಿಡಿಯೋ ಯಾವುದು ಬೇರೆ ವಿಡಿಯೋ ಎಂದು ತಿಳಿಯಲು ವಾಟರ್​ ಮಾರ್ಕ್​ ಇರುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ

Source link

ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಹೃದಯಾಘಾತ – Kannada News | Valmiki Gurupeetha Swamiji Health: Prasannananda Puri Responding to Hyderabad Treatment

ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ

ರಾಯಚೂರು, ಫೆ.19: ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರಿಗೆ ಲಘು ಹೃದಯಾಘಾತ ಆಗಿದೆ. ಸದ್ಯ ಸ್ವಾಮೀಜಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ವಾಲ್ಮೀಕಿ ಸಮುದಾಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಯಚೂರು ಜಿಲ್ಲೆಗೆ ಆಗಮಿಸಿದ್ದ ಶ್ರೀಗಳು, ನಿನ್ನೆ ರಾತ್ರಿ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅವರಿಗೆ ಏಕಾಏಕಿ ಎದೆನೋವು ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿದೆ.ಅಸ್ವಸ್ಥಗೊಂಡ ಶ್ರೀಗಳನ್ನು ಕೂಡಲೇ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ವೈದ್ಯರ ಸಲಹೆಯಂತೆ, ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಗಳನ್ನು ರಾಯಚೂರಿನಿಂದ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಸದ್ಯ ಶ್ರೀಗಳು ಹೈದರಾಬಾದ್‌ನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಠದ ಮೂಲಗಳು ಮತ್ತು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: KSRTC ಬಸ್​​ನ ಟಿಕೆಟ್ ಮೆಷಿನ್​​ನನ್ನೇ ಕದ್ದೊಯ್ದ ಕಳ್ಳ!

ಶ್ರೀಗಳ ಆರೋಗ್ಯ ಹದಗೆಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದ ಭಕ್ತರು ಮತ್ತು ಅನುಯಾಯಿಗಳಲ್ಲಿ ಆತಂಕ ಮೂಡಿದೆ. ಶ್ರೀಗಳು ಶೀಘ್ರವಾಗಿ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರ ಹೋರಾಟ: ನಾಳೆಯಿಂದಲೇ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತ? – Kannada News | Karnataka Transport Workers Reject Govt Offer, Statewide Disruption Likely Friday

ಬೆಂಗಳೂರು, ಫೆಬ್ರವರಿ 19: ಕರ್ನಾಟಕ ರಾಜ್ಯ ಸಾರಿಗೆ ನೌಕರರು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಇಂದು ಬೆಂಗಳೂರು ಚಲೋ ಪ್ರತಿಭಟನೆ ನಡೆಸಿದ್ದಾರೆ. 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮತ್ತು 2024ರ ಜನವರಿ 1ರಿಂದ ವೇತನ ಪರಿಷ್ಕರಣೆ ಮಾಡಬೇಕೆಂದು ನೌಕರರು ಬಿಗಿಪಟ್ಟು ಹಿಡಿದಿದ್ದು, ಸರ್ಕಾರದ 26 ತಿಂಗಳ ಹಿಂಬಾಕಿ ಮತ್ತು 2025ರ ಏಪ್ರಿಲ್‌ನಿಂದ ವೇತನ ಪರಿಷ್ಕರಣೆಯ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಚಲೋ ಪ್ರತಿಭಟನೆ ನಡೆಯುತ್ತಿದ್ದು, ಸಂಜೆ 4 ಗಂಟೆಗೆ ಜಂಟಿ ಕ್ರಿಯಾ ಸಮಿತಿ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದೆ. ಶುಕ್ರವಾರ (ನಾಳೆ) ಬೆಳಗ್ಗೆಯಿಂದ ರಾಜ್ಯಾದ್ಯಂತ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಸಂಪೂರ್ಣ ಮುಷ್ಕರಕ್ಕೆ ಕರೆ ನೀಡುವ ಸಾಧ್ಯತೆ ದಟ್ಟವಾಗಿದೆ. ನಾವು ಕಷ್ಟದಲ್ಲಿ ದುಡಿಯುವ ವರ್ಗ. ನಮ್ಮ ದುಡಿಮೆಗೆ ತಕ್ಕ ಪ್ರತಿಫಲವನ್ನು ಕೇಳುತ್ತಿದ್ದೇವೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವ ಪ್ರಶ್ನೆಯಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ನಾಯಕರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು

ಈ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 26 ತಿಂಗಳ ಹಿಂಬಾಕಿ ನೀಡಲು ನಿರ್ಧರಿಸಲಾಗಿದೆ. ನೌಕರರು ಇದರಿಂದ ಸಂತೋಷಪಡಬೇಕು ಮತ್ತು ಸರ್ಕಾರದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. 38 ತಿಂಗಳು ಕೇಳಿದ್ದರು, 26 ತಿಂಗಳು ಕೊಟ್ಟಿದ್ದೇವೆ. ಸದ್ಯ ಅಷ್ಟು ಕೊಟ್ಟಿದ್ದಾರಲ್ಲ ಎಂದು ಸಂತೋಷಪಡಬೇಕು. ಸರ್ಕಾರದ ಪರಿಸ್ಥಿತಿ ಅರ್ಥಮಾಡಿಕೊಳ್ಳಿ. ದಯವಿಟ್ಟು ಸಾರಿಗೆ ನೌಕರರೆಲ್ಲ ಸಹಕಾರ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ, ಸಾರಿಗೆ ನೌಕರರ ಸಂಘವು ಸರ್ಕಾರದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಸಲು ನಿರ್ಧರಿಸಿದೆ. ಇಂದಿನ ಸಂಜೆ ಸಭೆಯ ನಂತರ ಬಸ್ ಸಂಚಾರದ ಭವಿಷ್ಯ ನಿರ್ಧಾರವಾಗಲಿದೆ.

ಇಂದು ಎಂದಿನಂತೆ ಬಸ್​​ ಸಂಚಾರ

ಇಂದು ನಾಲ್ಕು ಸಾರಿಗೆ ನಿಗಮಗಳಿಂದ ಬೆಂಗಳೂರು ಚಲೋಗೆ ಕರೆ ಹಿನ್ನೆಲೆ ರಾಜ್ಯಾದ್ಯಂತ ಸಾರಿಗೆ ಬಸ್‌ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಬೆಳಿಗ್ಗೆಯಿಂದ ಇಲ್ಲಿಯವರೆಗೂ ಎಲ್ಲಿಯೂ ಅನಾನುಕೂಲಗಳು ಆಗಿರುವ ಬಗ್ಗೆ ವರದಿ ಆಗಿಲ್ಲ. ಬಸ್ ಸಂಚಾರದಲ್ಲಿ ವ್ಯತ್ಯಯ ಆಗದಂತೆ ಕ್ರಮಕೈಗೊಳ್ಳಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಆದೇಶ ಮಾಡಿದ್ದು, ತುರ್ತು ಮತ್ತು ಅನಿವಾರ್ಯ ಸಂದರ್ಭ ಹೊರತು ಯಾವುದೇ ರಜೆ ನೀಡಬೇಡಿ ಎಂದು ಸೂಚಿಸಿದ್ದಾರೆ.

ವರದಿ: ಪ್ರದೀಪ್​​ ಚಿಕ್ಕಾಟಿ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:24 am, Thu, 19 February 26

Source link

Video: ನೋಡ ನೋಡುತ್ತಿದ್ದಂತೆ ಮಹಿಳೆಯ ತಲೆಯಲ್ಲಿದ್ದ ಟೋಪಿಯನ್ನು ಮೆಲ್ಲನೆ ಎಗರಿಸಿದ ಆನೆ – Kannada News | Woman makes a request to an elephant who threw her hat

ಆನೆಗಳ (elephants) ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲದು. ತನ್ನನ್ನು ಆರೈಕೆ ಮಾಡುವ ವ್ಯಕ್ತಿಗಳ ಜೊತೆಗೆ ಪ್ರೀತಿಯಿಂದ ಗುದ್ದಾಡುತ್ತವೆ. ಕೆಲವೊಮ್ಮೆ ಅತ್ಯಂತ ಸಲುಗೆಯಿಂದ ವರ್ತಿಸುತ್ತವೆ. ಇದೀಗ ಇಂತಹದ್ದೇ ತಮಾಷೆಯೆನಿಸುವ ವಿಡಿಯೋ ವೈರಲ್ ಆಗಿದೆ. ಆನೆಯೊಂದು ಮಹಿಳೆಯ (woman) ತಲೆಯಲ್ಲಿದ್ದ ಟೋಪಿಯನ್ನು ಮೆಲ್ಲನೆ ಎಗರಿಸಿದ್ದು, ಆಮೇಲೆ ಆಗಿದ್ದು ನೋಡಿದ್ರೆ ನೀವು ಶಾಕ್ ಆಗ್ತೀರಾ. ಗಜರಾಜನ ಈ ಕ್ಯೂಟ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಎನಿವೇ ಮನ್ಯವಿ (Anyway Manyawi) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆನೆಯ ತುಂಟಾಟವನ್ನು ನೋಡಬಹುದು. ಆನೆಯೊಂದು ಮಹಿಳೆಯ ಹಿಂಬದಿಯಲ್ಲಿ ನಿಂತುಕೊಂಡ ಆಕೆಯ ತಲೆಯಲ್ಲಿದ್ದ ಟೋಪಿಯನ್ನು ಸೊಂಡಿಲಿನಿಂದ ಮೆಲ್ಲನೆ  ಎಗರಿಸಿದೆ. ಆ ಬಳಿಕ ತಾನು ಏನು ಮಾಡಿಲ್ಲ ಎಂಬಂತೆ ಗಂಭೀರವಾಗಿ ನಿಂತು ಕೊಂಡಿದೆ. ಅಲ್ಲೇ ಇದ್ದವರು ಈ ಗಜರಾಜನ ತುಂಟಾಟ ಕಂಡು ನಕ್ಕಿದ್ದಾರೆ. ತನ್ನ ಟೋಪಿಯನ್ನು ಎಗರಿಸಿದ ಆನೆಯ ಬಳಿ ಮಹಿಳೆಯೂ ಟೋಪಿ ಕೊಡುವಂತೆ ಮನವಿ ಮಾಡಿದ್ದಾಳೆ. ಮಹಿಳೆಯ ಮಾತಿಗೆ ಕರಗಿದ ಆನೆಯೂ ಮೆಲ್ಲನೆ ಟೋಪಿಯನ್ನು ಹಿಂದಿರುಗಿಸುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ಮೂಕ ಜೀವಿಗಳ ಶುದ್ಧ ಗೆಳೆತನ; ತನ್ನ ಸ್ನೇಹಿತ ಡಾಲಿಯೊಂದಿಗೆ ತುಂಟಾಟಕ್ಕೆ ಇಳಿದ ಆನೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಖತರ್ನಾಕ್ ಆನೆ ಎಂದರೆ, ಮತ್ತೊಬ್ಬರು, ತುಂಬಾನೇ ಮುದ್ದಾಗಿದೆ, ಆನೆ ನೋಡಲು ಗಂಭೀರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬುದ್ದಿವಂತ ಗಜರಾಜ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Astrological Guide: ಮನೆ ನಿರ್ಮಾಣದ ಸಮಯದಲ್ಲಿ ಗ್ರಹಗಳ ಗೋಚಾರ ಪರಿಗಣಿಸುವುದು ಏಕೆ ಮುಖ್ಯ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Unlocking Your Homes Lifespan: An Astrological Guide to House Longevity

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮನೆಗೆ ಎಷ್ಟು ಆಯಸ್ಸು ಇರುತ್ತದೆ ಮತ್ತು ಅದನ್ನು ಹೇಗೆ ತಿಳಿದುಕೊಳ್ಳಬಹುದು ಎಂಬ ವಿಷಯದ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ. ಪ್ರತಿಯೊಂದಕ್ಕೂ ಆದಿ ಅಂತ್ಯ ಇರುವಂತೆ, ಮನೆಗೂ ಒಂದು ನಿರ್ದಿಷ್ಟ ಆಯಸ್ಸು ಇರುತ್ತದೆ ಎಂಬುದು ಜ್ಯೋತಿಷ್ಯ ಮತ್ತು ವಾಸ್ತು ನಂಬಿಕೆಯಾಗಿದೆ. ಮನೆ ಕಟ್ಟಲು ಪ್ರಾರಂಭಿಸುವಾಗ ಜಾತಕದ ಶುಭಯೋಗಗಳು, ವಾಸ್ತುಪುರುಷನ ಸ್ಥಾನಮಾನ, ಮತ್ತು ಧ್ವಜಾಯ, ಧೂಮ್ರಾಯ, ಕಾಕಾಯ, ಸಿಂಹಾಯ, ವೃಷಭಾಯ, ಗಜಾಯ, ಖರಾಯ ಎಂಬ ಎಂಟು ಆಯಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಈ ಆಯಗಳು ಮನೆಯ ದೀರ್ಘಾಯುಷ್ಯದ ಬಗ್ಗೆ ಸೂಚನೆ ನೀಡುತ್ತವೆ ಎಂದು ಹೇಳಲಾಗುತ್ತದೆ.

ಆದರೆ, ಕೇವಲ ಜಾತಕ ಅಥವಾ ಆಯಗಳ ಆಧಾರದ ಮೇಲೆ ಮನೆಯ ಆಯಸ್ಸನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟಕರ. ಅನೇಕ ಸಂದರ್ಭಗಳಲ್ಲಿ, ಜನರು ಒಂದೇ ವರ್ಷದಲ್ಲಿ ಮನೆ ಖಾಲಿ ಮಾಡುವುದು, ಐದು ವರ್ಷಗಳಲ್ಲಿ ಮನೆ ಮಾರಾಟ ಮಾಡುವುದು ಅಥವಾ ಮನೆ ಬಿಟ್ಟು ಹೋಗುವುದು ಸಂಭವಿಸುತ್ತದೆ. ಇವೆಲ್ಲವನ್ನು ಗಮನಿಸಿದಾಗ, ಮನೆಯ ನಿಜವಾದ ಆಯಸ್ಸು ನಿರ್ಧಾರವಾಗುವುದು ಕೇವಲ ಜಾತಕ ಮತ್ತು ಆಯಗಳಿಂದಲ್ಲ, ಬದಲಾಗಿ ಮನೆ ನಿರ್ಮಾಣವನ್ನು ಪ್ರಾರಂಭಿಸುವಾಗ ಗ್ರಹಗಳ ಗೋಚಾರದ ಪ್ರಭಾವವನ್ನು ಅವಲಂಬಿಸಿರುತ್ತದೆ ಎಂದು ಹೇಳಲಾಗಿದೆ. ಈಗಲೂ ಸಹ, 200, 400, ಅಥವಾ 500 ವರ್ಷಗಳ ಹಿಂದೆ ನಿರ್ಮಿಸಲಾದ ಮನೆಗಳು ಸುಭದ್ರವಾಗಿರುವುದು, ಅಂದು ಕಟ್ಟಿದವರು ಜಾತಕದ ಜೊತೆಗೆ ಗೋಚಾರದಲ್ಲಿರುವ ಗ್ರಹಗಳ ಪ್ರಭಾವವನ್ನು ಸರಿಯಾಗಿ ಪರಿಗಣಿಸಿದ್ದರೆ ಎಂಬುದನ್ನು ಸೂಚಿಸುತ್ತದೆ.

ಅಪಾರ್ಟ್‌ಮೆಂಟ್‌ಗಳ ವಿಷಯಕ್ಕೆ ಬಂದಾಗ, ಅವುಗಳ ಆಯಸ್ಸನ್ನು ನಿರ್ಧರಿಸುವುದು ಮತ್ತಷ್ಟು ಸಂಕೀರ್ಣವಾಗುತ್ತದೆ. ಏಕೆಂದರೆ ಒಂದೇ ಪಾಯದ ಮೇಲೆ ಹಲವಾರು ಫ್ಲ್ಯಾಟ್‌ಗಳು ಇರುತ್ತವೆ. ಹಾಗಾಗಿ ಒಂದು ನಿರ್ದಿಷ್ಟ ಫ್ಲ್ಯಾಟ್‌ನ ಆಯಸ್ಸನ್ನು ಪ್ರತ್ಯೇಕವಾಗಿ ಹೇಳುವುದು ಕಷ್ಟ. ಇಡೀ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಆಯಸ್ಸು ಅನ್ವಯವಾಗುತ್ತದೆ. ಫ್ಲ್ಯಾಟ್‌ಗಳಿಗೆ ಪೂರ್ಣಾಯುಸ್ಸು (120 ವರ್ಷ) ಇರುವುದು ಕಷ್ಟಸಾಧ್ಯ. ಅವುಗಳಿಗೆ ಹೆಚ್ಚೆಂದರೆ 60 ವರ್ಷಗಳವರೆಗೆ ಆಯಸ್ಸು ಇರಬಹುದು ಎಂದು ಹೇಳಲಾಗುತ್ತದೆ. ಭೂಮಿಯ ಬಲ ಮತ್ತು ಆಕಾಶದ ಬಲವನ್ನು ಫ್ಲ್ಯಾಟ್‌ಗಳಿಗೆ ಸಂಪೂರ್ಣವಾಗಿ ನಿರ್ಧರಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮನೆಯ ದೀರ್ಘಾಯುಷ್ಯವನ್ನು ಜ್ಯೋತಿಷ್ಯದ ಮೂಲಕ ತಿಳಿಯಲು ಕೆಲವು ಗ್ರಹ ಸ್ಥಾನಗಳನ್ನು ಪರಿಗಣಿಸಲಾಗುತ್ತದೆ. ಲಗ್ನದಲ್ಲಿ ಬುಧ ಗ್ರಹವಿದ್ದರೆ ಆ ಮನೆಗೆ 50 ವರ್ಷಗಳ ಆಯಸ್ಸು ಇರುತ್ತದೆ. ಲಗ್ನದಿಂದ ನಾಲ್ಕನೇ ಮನೆಯಲ್ಲಿ ಗುರು ಗ್ರಹ ಮತ್ತು 11ನೇ ಮನೆಯಲ್ಲಿ ಚಂದ್ರ ಗ್ರಹವಿದ್ದರೆ ಆ ಮನೆಗೆ 80 ವರ್ಷಗಳ ಆಯಸ್ಸು ಇರುತ್ತದೆ ಎಂದು ಹೇಳಲಾಗುತ್ತದೆ. ಪೂರ್ಣಾಯುಸ್ಸು, ಅಂದರೆ 120 ವರ್ಷಗಳ ದೀರ್ಘಾಯುಷ್ಯಕ್ಕಾಗಿ, ಲಗ್ನದಲ್ಲಿ ಗುರು, ನಾಲ್ಕನೇ ಮನೆಯಲ್ಲಿ ಶುಕ್ರ ಮತ್ತು ಆರನೇ ಮನೆಯಲ್ಲಿ ರವಿ ಗ್ರಹಗಳು ಇರಬೇಕು ಎಂದು ಶಾಸ್ತ್ರಗಳು ತಿಳಿಸುತ್ತವೆ. ಇದಲ್ಲದೆ, ಲಗ್ನದಿಂದ 1, 4, 7, 10ನೇ ಸ್ಥಾನಗಳಲ್ಲಿ ಶುಭ ಗ್ರಹಗಳು ಇದ್ದು, ಅವುಗಳ ಶುಭ ದೃಷ್ಟಿ ಇದ್ದರೆ, ಅಂತಹ ಮನೆಗೂ ಪೂರ್ಣಾಯುಸ್ಸು ಇರುತ್ತದೆ. ಆದ್ದರಿಂದ, ಕೇವಲ ಜಾತಕ ಮತ್ತು ಆಯಗಳ ಮೇಲೆ ಅವಲಂಬಿತವಾಗದೆ, ಗೋಚಾರವನ್ನು ಆಧರಿಸಿ ಮನೆ ನಿರ್ಮಿಸುವುದು ಉತ್ತಮ ಫಲಿತಾಂಶ ನೀಡುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:33 am, Thu, 19 February 26

Source link

Exit mobile version