ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಪಿಂಕ್ ಲೈನ್ ಹಳಿ ಮೇಲೆ ಆರ್‌ಡಿಎಸ್‌ಒ ಪರೀಕ್ಷೆ ಆರಂಭ! – Kannada News | Namma Metro Pink Line Update: RDSO Testing Begins on Kalena Agrahara Tavarekere Stretch

ಪಿಂಕ್ ಲೈನ್ ಹಳಿ ಮೇಲೆ ಆರ್‌ಡಿಎಸ್‌ಒ ಪರೀಕ್ಷೆ ಆರಂಭ!
Image Credit source: MediaForge AI

ಬೆಂಗಳೂರು, ಏಪ್ರಿಲ್ 28: ರಾಜಧಾನಿಯ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಸಜ್ಜಾಗುತ್ತಿರುವ ನಮ್ಮ ಮೆಟ್ರೋದ ‘ಪಿಂಕ್ ಲೈನ್’ (Pink Line) ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು ತಲುಪಲಾಗಿದೆ. ಇಂದಿನಿಂದ (ಏ.28) ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆಯ (RDSO) ತಜ್ಞರು ಈ ಮಾರ್ಗದಲ್ಲಿ ತಾಂತ್ರಿಕ ಪರೀಕ್ಷೆಗಳನ್ನು ಆರಂಭಿಸಲಿದ್ದು, ಮೇ 12ರವರೆಗೆ ತಪಾಸಣೆ ಮುಂದುವರಿಯಲಿದೆ.

ವೇಗ ಪರೀಕ್ಷೆ

ಬಿಎಂಆರ್‌ಸಿಎಲ್ (BMRCL) ಮೂಲಗಳ ಪ್ರಕಾರ, ಆರ್‌ಡಿಎಸ್‌ಒ ತಂಡವು ಈ ಪರೀಕ್ಷಾ ದತ್ತಾಂಶಗಳನ್ನು ವಿಶ್ಲೇಷಿಸಿ ಮಧ್ಯಂತರ ವೇಗ ಪ್ರಮಾಣಪತ್ರವನ್ನು (Interim Speed Certification) ನೀಡಲಿದೆ. ಇದಾದ ನಂತರ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ (CRS) ತಪಾಸಣೆ ನಡೆಯಲಿದ್ದು, ಅವರ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗುತ್ತದೆ. ತಾಂತ್ರಿಕ ಅನುಮೋದನೆ ಪಡೆದ ನಂತರವಷ್ಟೇ ರೈಲು ಸಂಚಾರಕ್ಕೆ ಮುಕ್ತವಾಗಲಿದೆ. ಈ ಸಂಪೂರ್ಣ ಪ್ರಕ್ರಿಯೆಗೆ ಕನಿಷ್ಠ ಎರಡರಿಂದ ಮೂರು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಯೋಜನೆಯ ಪ್ರಗತಿ

ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗಿನ 7 ಕಿ.ಮೀ ಎತ್ತರಿಸಿದ ಮಾರ್ಗಕ್ಕಾಗಿ ಈಗಾಗಲೇ 5 ರೈಲುಗಳು ಬಂದಿವೆ. ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ಸುರಂಗ ಮಾರ್ಗ ಸೇರಿದಂತೆ ಒಟ್ಟು 21 ಕಿ.ಮೀ ಉದ್ದದ ಈ ಕಾರಿಡಾರ್ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮತ್ತೊಂದೆಡೆ, ‘ಹಳದಿ ಲೈನ್’ (Yellow Line) ಮಾರ್ಗಕ್ಕೆ ಟೀಟಾಘರ್ ರೈಲ್ ಸಿಸ್ಟಮ್ಸ್‌ನಿಂದ 10ನೇ ರೈಲು ಸೆಟ್ ಸೋಮವಾರ ಬಂದಿಳಿದಿದೆ. ಇದರಿಂದ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಸಂಚಾರ ಇನ್ನಷ್ಟು ಸುಗಮವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಂಗ್​ಟಕ್​​ನಲ್ಲಿ ಮಕ್ಕಳೊಂದಿಗೆ ಫುಟ್​ಬಾಲ್ ಆಡಿದ ಪ್ರಧಾನಿ ಮೋದಿ – Kannada News | Narendra Modi Shares Football Moments with Youth in Gangtok

ನವದೆಹಲಿ, ಏಪ್ರಿಲ್ 28: ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮುಗಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಸಿಕ್ಕಿಂಗೆ ಆಗಮಿಸಿದ್ದಾರೆ. ಗ್ಯಾಂಗ್​ಟಕ್​ನಲ್ಲಿ ಮಕ್ಕಳೊಂದಿಗೆ ಫುಟ್​ಬಾಲ್ ಆಡಿರುವ ಫೋಟೊಗಳನ್ನು ಖುದ್ದಾಗಿ ಪ್ರಧಾನಿಯವರೇ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗ್ಯಾಂಗ್ಟಕ್‌ನಲ್ಲಿ ಒಂದು ಸುಂದರವಾದ ಬೆಳಗ್ಗೆಯಲ್ಲಿ ನನ್ನ ಯುವ ಸ್ನೇಹಿತರೊಂದಿಗೆ ಫುಟ್ಬಾಲ್ ಆಡುವುದಕ್ಕಿಂತ ಖುಷಿ ಬೇರೇನೂ ಇಲ್ಲ ಎಂದು ಬರೆದುಕೊಂಡಿದ್ದಾರೆ. 4,000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಾಗುವುದು.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಸಿಕ್ಕಿಂ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರು ರಾಜ್ಯದ 50ನೇ ಸಂಸ್ಥಾಪನಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಮತ್ತು 4,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮತ್ತು ಸಿಕ್ಕಿಂನಲ್ಲಿ ಫುಟ್ಬಾಲ್ ಬಹಳ ಜನಪ್ರಿಯವಾಗಿದೆ . ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ಭಾರತದಲ್ಲಿ ಕ್ಲಬ್ ಫುಟ್ಬಾಲ್‌ಗೆ ಪ್ರಮುಖ ಕೇಂದ್ರವಾಗಿದೆ. ಗ್ರಾಮೀಣ ಮಟ್ಟದಲ್ಲಿಯೂ ಫುಟ್ಬಾಲ್ ಕ್ಲಬ್‌ಗಳು ಅಸ್ತಿತ್ವದಲ್ಲಿವೆ. ತಮ್ಮ ಭೇಟಿಯ ಮೊದಲ ದಿನವಾದ ಸೋಮವಾರ, ಪ್ರಧಾನಿ ನರೇಂದ್ರ ಮೋದಿ ಗ್ಯಾಂಗ್ಟಕ್‌ನಲ್ಲಿ ಮೆಗಾ ರೋಡ್ ಶೋ ನಡೆಸಿದರು ಪ್ರಧಾನಿ ಮೋದಿ ಅವರನ್ನು ನೋಡಲು ದೊಡ್ಡ ಜನಸಮೂಹ ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿತ್ತು.

ಮತ್ತಷ್ಟು ಓದಿ: ಮೊದಲ ಹಂತದ ಚುನಾವಣೆ ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ಯಾಂಗಾಂಗ್‌ನಲ್ಲಿರುವ ಸಿಕ್ಕಿಂ ವಿಶ್ವವಿದ್ಯಾಲಯದ ಕ್ಯಾಂಪಸ್, ಚಾಕುಂಗ್‌ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಶ್ರೇಷ್ಠತಾ ವಿಶ್ವವಿದ್ಯಾಲಯದ ಆಡಳಿತ ಬ್ಲಾಕ್, ಸೋಚೆಗ್ಯಾಂಗ್‌ನಲ್ಲಿರುವ ಹೆಲೆನ್ ಲೆಪ್ಚಾ ವೈದ್ಯಕೀಯ ಕಾಲೇಜು ಮತ್ತು ಗ್ಯಾಲ್ಶಿಂಗ್ ಜಿಲ್ಲೆಯ ಡೆಂಟಮ್ ವೃತ್ತಿಪರ ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ.

ಹೆಚ್ಚುವರಿಯಾಗಿ, 160 ಶಾಲೆಗಳಲ್ಲಿ ಐಟಿ ಆಧಾರಿತ ಮೂಲಸೌಕರ್ಯ ಯೋಜನೆಗಳನ್ನು ಪ್ರಾರಂಭಿಸಲಾಗುವುದು. ಸಂಪರ್ಕವನ್ನು ಹೆಚ್ಚಿಸಲು, ಪ್ರಧಾನಿ ಮೋದಿ ಅವರು ಸಿರ್ವಾನಿ ಮತ್ತು ಲೋವರ್ ಸ್ಯಾಮ್‌ಡಾಂಗ್‌ನಲ್ಲಿ ತೀಸ್ತಾ ನದಿಗೆ ಅಡ್ಡಲಾಗಿ ಎರಡು ಡಬಲ್-ಲೇನ್ ಉಕ್ಕಿನ ಕಮಾನು ಸೇತುವೆಗಳಿಗೆ ಅಡಿಪಾಯ ಹಾಕಲಿದ್ದಾರೆ ಮತ್ತು ಬರ್ಡ್‌ಹ್ಯಾಂಗ್‌ನಿಂದ ಕಿಚುಡುಮ್ರಾ ಮೂಲಕ ನಾಮ್ಚಿಯ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಿತ್ರದುರ್ಗ: 44 ಪ್ರಯಾಣಿಕರಿದ್ದ ಸಾರಿಗೆ ಬಸ್ ಪಲ್ಟಿ, ತಪ್ಪಿದ ಭಾರಿ ದುರಂತ – Kannada News | KKRTC Bus Overturns Near Challakere in Chitradurga: 44 Passengers Narrowly Escape Major Accident

ಚಿತ್ರದುರ್ಗ, ಏಪ್ರಿಲ್ 28: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಕಲ್ಯಾಣ ಕರ್ನಾಟಕ ಸಾರಿಗೆ (ಕೆಕೆಆರ್‌ಟಿಸಿ) ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿ 44 ಮಂದಿ ಪ್ರಯಾಣಿಸುತ್ತಿದ್ದರು. ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಸಾರಿಗೆ ಬಸ್ ಪಲ್ಟಿಯಾಗಿದ್ದು, ದೊಡ್ಡ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ. ಅಪಘಾತದಲ್ಲಿ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಾಹಿತಿ ಪ್ರಕಾರ, ಐವರು ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯು ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಸ್ ಅಪಘಾತಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸದ್ದಿಲ್ಲದೆ ತೆಲುಗಿನಲ್ಲಿ ರಿಲೀಸ್ ಆಗೋಕೆ ರೆಡಿ ಆಯ್ತು ರಿಷಬ್ ಶೆಟ್ಟಿ ಸಿನಿಮಾ – Kannada News | Why Rishab Shetty’s ‘A Film by Giri’ is Releasing in Telugu States Now?

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಹಾಗೂ ‘ಕಾಂತಾರ: ಚಾಪ್ಟರ್ 1’ ರಿಲೀಸ್ ಬಳಿಕ ಸೂಪರ್ ಸ್ಟಾರ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರ ಜನಪ್ರಿಯತೆ ಹಬ್ಬಿದೆ. ಅವರ ಸಿನಿಮಾ ತೆರೆಗೆ ಬರುತ್ತಿದೆ ಎಂದರೆ ಜನರು ತುಂಬಾನೇ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಾರೆ. ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಕೂಡ ಆಗುತ್ತಿದೆ. ಆದರೆ, ಈಗ ಅವರ ಚಿತ್ರವೊಂದು ಸದ್ದಿಲ್ಲದೆ ತೆರೆಗೆ ಬರೋಕೆ ರೆಡಿ ಆಗಿದೆ. ಅದುವೇ ‘ಎ ಫಿಲ್ಮ್ ಬೈ ಗಿರಿ’.

‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ 2022ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಜಿಯೋ ಹಾಟ್​​ಸ್ಟಾರ್​ ಅಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದು ‘ಕಾಂತಾರ’ ರಿಲೀಸ್​​ಗೂ ಮೊದಲೇ ತೆರೆಗೆ ಬಂದ ಚಿತ್ರ. ಈ ಸಿನಿಮಾ ಸಾಧಾರಣ ಯಶಸ್ಸು ಕಂಡಿತ್ತು. ಈಗ ಚಿತ್ರ ತೆಲುಗಿಗೆ ಡಬ್ ಆಗಿದೆ! ಮೇ 8ರಂದು ಸಿನಿಮಾ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ತೆರೆಗೆ ಬರಲಿದೆ. ಈ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಯಿತು ಎಂದು ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಸದ್ಯ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.

ರಿಷಬ್ ಶೆಟ್ಟಿ ಅವರು ಈಗ ಕೇವಲ ಕನ್ನಡದ ಹೀರೋ ಮಾತ್ರ ಅಲ್ಲ. ತೆಲುಗು ರಾಜ್ಯಗಳಲ್ಲಿ ಅವರ ಪರಿಚಯ ಅನೇಕರಿಗೆ ಇದೆ. ಅವರು ‘ಜೈ ಹನುಮಾನ್’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಕಾರಣದಿಂದ ‘ಎ ಫಿಲ್ಮ್ ಬೈ ಗಿರಿ’ ಈಗ ರಿಲೀಸ್ ಮಾಡಿದರೆ ಜನ ನೋಡಬಹುದು ಎಂಬ ನಂಬಿಕೆ ಇರಬಹುದು.

ಇದನ್ನೂ ಓದಿ: ಐಎನ್​​ಸಿಎ ಅವಾರ್ಡ್ ಫಂಕ್ಷನ್​ನಲ್ಲಿ ಮಿಂಚಿದ ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ: ವಿಡಿಯೋ

ಕರಣ್ ಆನಂದ್ ಹಾಗೂ ಅನಿರುದ್ಧ ಮಹೇಶ್ ಅವರು ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ನಿರ್ದೇಶನ ಮಾಡಿದ್ದಾರೆ. ಗಿರಿ ಕೃಷ್ಣ ಕಥೆ ಬರೆದಿದ್ದು, ರಿಷಬ್ ಶೆಟ್ಟಿ, ತಪಸ್ವಿನಿ ಪೂಣಚ್ಚ, ರಚನಾ ಇಂದರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಹಾಗೂ ರಿಷಬ್ ಶೆಟ್ಟಿ ಫಿಲ್ಮ್ಸ್ ಇದನ್ನು ನಿರ್ಮಾಣ ಮಾಡಿತ್ತು. ಎಂಜಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಚ್ಚಿಬಾಬು ಎಂಬುವವರು ಚಿತ್ರವನ್ನು ಡಬ್ ಮಾಡಿ ತೆಲುಗು ರಾಜ್ಯಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆ ಚೀಟಿಗಳಲ್ಲಿದೆಯಾ ಸಾವಿನ ಸೀಕ್ರೆಟ್? ಯುವತಿಯ ನಗ್ನ ಮೃತದೇಹ ಪತ್ತೆ ಪ್ರಕರಣದ ಹಿಂದೆ ಹಲವು ಅನುಮಾನ – Kannada News | Bengaluru Adugodi Death Mystery: Secret Notes Found on Walls of Pooja Dutta’s House; Mental Depression Suspected

ಪೂಜಾ ದತ್ತಾ ರೂಮ್​ನ ಗೋಡೆಯಲ್ಲಿ ಹಲವು ಚೀಟಿಗಳು ಅಂಟಿಸಿರುವುದು ಹಾಗೂ ಪೂಜಾ ದತ್ತಾImage Credit source: tv9

ಬೆಂಗಳೂರು, ಏಪ್ರಿಲ್ 28: ಬೆಂಗಳೂರಿನ (Bengaluru) ಆಡುಗೋಡಿಯ ಬಾಡಿಗೆ ಮನೆಯಲ್ಲಿ ನಗ್ನ ಸ್ಥಿತಿಯಲ್ಲಿ ಪತ್ತೆಯಾದ ಪೂಜಾ ದತ್ತಾ ಸಾವಿನ ಪ್ರಕರಣವು (Mystery Death Case) ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಾಥಮಿಕ ತನಿಖೆಯ ವೇಳೆ, ಪೂಜಾ ವಾಸವಿದ್ದ ಮನೆಯ ಸ್ಥಿತಿಯನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. ಇದರಿಂದಾಗಿ, ಪೂಜಾ ತೀವ್ರ ಮಾನಸಿಕ ಖಿನ್ನತೆಗೆ (Mental Depression) ಒಳಗಾಗಿದ್ದಳೇ ಎಂಬ ಅನುಮಾನ ಈಗ ದಟ್ಟವಾಗಿದೆ.

ಸಾವಿನ ಮನೆಯಲ್ಲಿ ಕಸದ ರಾಶಿ, ಗೋಡೆ ಮೇಲೆ ಚೀಟಿ!

ಪೂಜಾ ವಾಸವಿದ್ದ 1 ಆರ್​​​ಕೆ ಮನೆಯ ದೃಶ್ಯಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ. ಮನೆಯ ಗೋಡೆಗಳ ತುಂಬೆಲ್ಲಾ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದ ಚೀಟಿಗಳನ್ನು ಅಂಟಿಸಲಾಗಿದೆ. ಅಷ್ಟೇ ಅಲ್ಲದೆ, ಚಿತ್ರಗಳನ್ನು ಬಿಡಿಸಿ ಗೋಡೆಗೆ ಹಾಕಲಾಗಿದೆ. ಮನೆಯ ಒಂದು ಕೋಣೆಯ ಪೂರ್ತಿ ಕಸ ಮತ್ತು ಹರಿದ ಕಾಗದದ ಹಾಳೆಗಳನ್ನೇ ತುಂಬಿಸಿಟ್ಟುಕೊಳ್ಳಲಾಗಿತ್ತು. ಸುಮಾರು ಐದಾರು ಮೂಟೆಗಳಷ್ಟು ಹಳೆಯ ಕಾಗದಗಳು ಮನೆಯಲ್ಲಿ ಪತ್ತೆಯಾಗಿದ್ದು, ಪೂಜಾ ವಿಚಿತ್ರ ವರ್ತನೆಯನ್ನು ಹೊಂದಿದ್ದಳು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ಘಟನೆಯ ಹಿನ್ನೆಲೆ

ಜಾರ್ಖಂಡ್ ಮೂಲದ ಪೂಜಾ ದತ್ತಾ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಆಡುಗೋಡಿಯಲ್ಲಿ ವಾಸವಿದ್ದಳು. ಕಳೆದ ಮೂರು ದಿನಗಳಿಂದ ಆಕೆಯ ಮನೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಮನೆಯಿಂದ ಭಾರಿ ದುರ್ನಾತ ಬರಲಾರಂಭಿಸಿದಾಗ ಮನೆ ಮಾಲೀಕರು ಬಾಗಿಲು ಒಡೆದು ನೋಡಿದಾಗ, ಪೂಜಾಳ ಮೃತದೇಹ ನಗ್ನ ಸ್ಥಿತಿಯಲ್ಲಿ ಅರೆಕೊಳೆತ ರೀತಿ ಪತ್ತೆಯಾಗಿತ್ತು.

ಸ್ಥಳೀಯರ ಹೇಳಿಕೆ ಮತ್ತು ನಿಗೂಢ ಯುವಕ


ಪೂಜಾ ಆಗಾಗ ರಸ್ತೆಯಲ್ಲಿ ಒಬ್ಬಳೇ ಬೈದಾಡಿಕೊಂಡು ಹೋಗುತ್ತಿದ್ದಳು ಎಂದು ಸ್ಥಳೀಯ ನಿವಾಸಿ ಕಿರಣ್ ತಿಳಿಸಿದ್ದಾರೆ. ಆಕೆ ಮಾನಸಿಕವಾಗಿ ಕುಗ್ಗಿದಂತೆ ಕಾಣುತ್ತಿದ್ದಳು ಎಂಬುದು ಸ್ಥಳೀಯರ ಅಭಿಪ್ರಾಯ. ಇನ್ನು ಪೂಜಾ ಮನೆಗೆ ಓರ್ವ ಯುವಕ ಬಂದು ಹೋಗುತ್ತಿದ್ದ ಎಂದು ಮನೆ ಮಾಲೀಕರು ತಿಳಿಸಿದ್ದು, ಆತನ ಬೈಕ್ ಸದಾ ಮನೆ ಮುಂದೆ ನಿಂತಿರುತ್ತಿತ್ತು ಎಂದು ಹೇಳಿದ್ದಾರೆ. ಸದ್ಯ ಪೂಜಾಳ ಫೋನ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಸಿಡಿಆರ್ (Call Detail Record) ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಯುವತಿಯ ಬೆತ್ತಲೆ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮನೆ ಮಾಲಕಿ ಸ್ಫೋಟಕ ಹೇಳಿಕೆ

ಪೂಜಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಲ ಬೇಗೆಗೆ ಬೆಂದ ಬೆಂಗಳೂರು: ಎಸಿ, ಕೂಲರ್ ಹಾಗೂ ಮಣ್ಣಿನ ಮಡಿಕೆಗಳಿಗೆ ಫುಲ್ ಡಿಮ್ಯಾಂಡ್! – Kannada News | Bengaluru Heatwave: High Demand for ACs, Coolers, and Earthen Pots as Temperatures Soar

ಎಸಿ, ಕೂಲರ್ ಹಾಗೂ ಮಣ್ಣಿನ ಮಡಿಕೆಗಳಿಗೆ ಫುಲ್ ಡಿಮ್ಯಾಂಡ್!

ಬೆಂಗಳೂರು, ಏಪ್ರಿಲ್ 28: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಪ್ರತಾಪ (Weather) ಹೆಚ್ಚಾಗುತ್ತಿದ್ದು, ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಸುಡುವ ಬಿಸಿಲಿನಿಂದ ಹೈರಾಣಾಗಿರುವ ನಗರದ ಜನತೆ ಈಗ ‘ಕೂಲ್’ ಆಗಿರಲು ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಮಣ್ಣಿನ ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಏಪ್ರಿಲ್ ತಿಂಗಳ ಆರಂಭದಲ್ಲೇ ಸೆಕೆ ತಾಳಲಾರದೆ ಜನರು ಎಸಿ, ಕೂಲರ್ ಮತ್ತು ಮಣ್ಣಿನ ಮಡಿಕೆಗಳನ್ನು ಖರೀದಿಸಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ.

ಶೋರೂಮ್‌ಗಳಲ್ಲಿ ಸ್ಟಾಕ್ ಖಾಲಿ

ನಗರದ ಎಲೆಕ್ಟ್ರಾನಿಕ್ ಶೋರೂಮ್‌ಗಳಲ್ಲಿ ಎಸಿ ಮತ್ತು ಕೂಲರ್‌ಗಳಿಗೆ ಹಿಂದೆಂದೂ ಇಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಮನೆಯೊಳಗೆ ಫ್ಯಾನ್ ಇದ್ದರೂ ಬೆವರಿನಿಂದ ಮುಕ್ತಿ ಸಿಗದ ಕಾರಣ, ಗ್ರಾಹಕರು ಬಜೆಟ್‌ಗೆ ತಕ್ಕಂತೆ ಕೂಲರ್ ಅಥವಾ ಎಸಿ ಖರೀದಿಸಲು ಮುಗಿಬೀಳುತ್ತಿದ್ದಾರೆ. ಆದರೆ, ಬೇಡಿಕೆ ವಿಪರೀತವಾಗಿರುವ ಕಾರಣ ಹಲವು ಕಡೆಗಳಲ್ಲಿ ಸ್ಟಾಕ್ ಖಾಲಿಯಾಗಿದ್ದು, ಹೊಸ ಉಪಕರಣಗಳಿಗಾಗಿ ಗ್ರಾಹಕರು ಒಂದು ವಾರ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಹಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ

ಬಡವರ ಫ್ರಿಡ್ಜ್‌ಗೆ ಭರ್ಜರಿ ಬೇಡಿಕೆ

ಒಂದೆಡೆ ಆಧುನಿಕ ಉಪಕರಣಗಳ ಹವಾ ಇದ್ದರೆ, ಇನ್ನೊಂದೆಡೆ ಪರಿಸರ ಸ್ನೇಹಿ ‘ಮಣ್ಣಿನ ಮಡಿಕೆ’ಗಳ ವ್ಯಾಪಾರವೂ ಚೇತರಿಸಿಕೊಂಡಿದೆ. ‘ಬಡವರ ಫ್ರಿಡ್ಜ್’ ಎಂದೇ ಕರೆಯಲ್ಪಡುವ ಮಣ್ಣಿನ ಮಡಿಕೆಗಳು, ಜಗ್ಗುಗಳು ಹಾಗೂ ಬಾಟಲಿಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿರುವ ಕಾರಣ ಜನರು ಮಡಿಕೆ ನೀರನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲವಾದರೂ, ಕುಂಬಾರರು ಮತ್ತು ವ್ಯಾಪಾರಿಗಳ ಮುಖದಲ್ಲಿ ಲಾಭದ ಮಂದಹಾಸ ಮೂಡಿದೆ.

ವರದಿ: ಅರುಣ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Breaking Engagement: ಶಾಸ್ತ್ರೋಕ್ತವಾಗಿ ಎಂಗೇಜ್​ಮೆಂಟ್ ಆಗಿ ಮದುವೆಯಾಗದಿದ್ರೆ ದೋಷ ಕಾಡುತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Nischaya Tambula: The Spiritual Impact of Breaking an Engagement in Sanatana Dharma

“ಮ್ಯಾರೇಜಸ್ ಆರ್ ಮೇಡ್ ಇನ್ ಹೆವೆನ್” ಎಂಬ ನುಡಿಯಂತೆ, ವಿವಾಹ ಬಂಧವು ಕೇವಲ ಮಾನವ ಸಂಬಂಧವಲ್ಲ, ಅದೊಂದು ದೈವಿಕ ಸಂಪರ್ಕ. ಮನುಷ್ಯನ ಜೀವನದಲ್ಲಿ ವಿವಾಹವು ಒಂದು ಪ್ರಮುಖ ಪರಿವರ್ತನೆಯ ಕಾಲವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿವಾಹ ಮತ್ತು ಅದರ ಪೂರ್ವಭಾವಿ ಸಂಸ್ಕಾರಗಳಿಗೆ ನೀಡುವ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದಾಗಿ ವಾಗ್ದಾನಗಳ ಮಹತ್ವವನ್ನು ಮರೆಯಲಾಗುತ್ತಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ನಿಶ್ಚಿತಾರ್ಥ (ನಿಶ್ಚಯ ತಾಂಬೂಲ) ಪ್ರಕ್ರಿಯೆಗೆ ಬಂದಾಗ, ಹುಡುಗ-ಹುಡುಗಿಯ ಕುಟುಂಬಗಳು ಒಪ್ಪಿಗೆ ನೀಡಿ, ಮಾತುಕತೆ ಮುಂದುವರಿಸಿ ಅಥವಾ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿ ವಾಗ್ದಾನ ಮಾಡುತ್ತಾರೆ. ಈ ವಾಗ್ದಾನಕ್ಕೆ ಭಗವಂತನೇ ಸಾಕ್ಷಿಯಾಗಿರುತ್ತಾನೆ. ಯಾವುದೇ ಕಾಗದಪತ್ರಗಳಿಲ್ಲದೆ ಮಾಡುವ ಈ ಪ್ರತಿಜ್ಞೆಗೆ ಅತೀವ ಪಾವಿತ್ರತೆಯಿದೆ. ಆದರೆ, ನಿಶ್ಚಯ ತಾಂಬೂಲವನ್ನು ಸ್ವೀಕರಿಸಿ, ನಂತರ ಯಾವುದೇ ಸಬೂಬುಗಳು ಅಥವಾ ಅನುಮಾನಗಳನ್ನು ಮುಂದಿಟ್ಟು ವಿವಾಹವನ್ನು ನಿರಾಕರಿಸಿದರೆ, ಅದು ಭಾರೀ ದೋಷಗಳಿಗೆ ಕಾರಣವಾಗುತ್ತದೆ.

ನಿಶ್ಚಯ ತಾಂಬೂಲದ ಸಮಯದಲ್ಲಿ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಹೂವುಗಳು, ಅರಿಶಿನ ಮತ್ತು ಕುಂಕುಮಗಳಂತಹ ಮಂಗಳಕರ ವಸ್ತುಗಳನ್ನು ಬಳಸಲಾಗುತ್ತದೆ. ಈ ಪ್ರತಿಯೊಂದು ವಸ್ತುವಿಗೂ ದೈವಿಕ ಪ್ರಾಮುಖ್ಯತೆಯಿದೆ. ವೀಳ್ಯದೆಲೆಯಲ್ಲಿ ಸಾಕ್ಷಾತ್ ಪಾರ್ವತಿ ದೇವಿಯ ಸಾನಿಧ್ಯವಿರುತ್ತದೆ. ಬಾಳೆಹಣ್ಣು ಮಂಗಳಕರ ಫಲವನ್ನು ಪ್ರತಿನಿಧಿಸುತ್ತದೆ. ತೆಂಗಿನಕಾಯಿಯನ್ನು “ಪೂರ್ಣ ಫಲ” ಎಂದು ಕರೆಯಲಾಗುತ್ತದೆ. ಅಡಿಕೆ ಮಂಗಳಕರವಾದ ವಸ್ತುವಾಗಿದೆ. ಅರಿಶಿನ ಮತ್ತು ಕುಂಕುಮಗಳಲ್ಲಿ ಮಹಾಕಾಳಿಯ ಸ್ವರೂಪ ಅಡಗಿದೆ ಎಂದು ನಂಬಲಾಗಿದೆ. ಕೇವಲ ಅರಿಶಿನ ಕುಂಕುಮವನ್ನು ಮಂತ್ರಿಸಿ ಯಾವುದೇ ಕಾರ್ಯಕ್ಕೆ ಬಳಸಿದರೆ ಅದು ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಸನಾತನ ಸಂಸ್ಕೃತಿಯಲ್ಲಿದೆ. ಇಷ್ಟೆಲ್ಲಾ ಮಂಗಳ ದ್ರವ್ಯಗಳು ಮತ್ತು ಸುಮಂಗಲಿಯರು ಇರುವ ಒಂದು ಕಾರ್ಯಕ್ರಮದಲ್ಲಿ ಸರ್ವ ದೇವತೆಗಳು ಸಹ ಸಾಕ್ಷಿಯಾಗಿರುತ್ತಾರೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಅಂತಹ ಪವಿತ್ರವಾದ ನಿಶ್ಚಯ ತಾಂಬೂಲವನ್ನು ಒಪ್ಪಿ, ನಂತರ ತಿರಸ್ಕರಿಸಿದರೆ, ಅದನ್ನು ಮಹಾಪಾಪ ಎಂದು ಪರಿಗಣಿಸಲಾಗುತ್ತದೆ. ಈ ಪಾಪದಿಂದಾಗಿ ವ್ಯಕ್ತಿಯ ಕುಟುಂಬದಲ್ಲಿ ಹಲವು ದೋಷಗಳು ಅಂಟಿಕೊಳ್ಳುತ್ತವೆ. ತಿರಸ್ಕರಿಸಿದ ಗಂಡಾಗಲಿ ಅಥವಾ ಹೆಣ್ಣಾಗಲಿ, ಅವರ ಜೀವನದ ಕೊನೆಯ ಭಾಗದಲ್ಲಿ ಅತಿ ಹೆಚ್ಚು ದೋಷಗಳನ್ನು ಎದುರಿಸುತ್ತಾರೆ. ಇದು ಕೇವಲ ವ್ಯಕ್ತಿಗಳಿಗೆ ಕೊಟ್ಟ ವಾಗ್ದಾನ ಭಂಗವಲ್ಲ, ದೈವಿಕ ಶಕ್ತಿಗಳಿಗೇ ಮಾಡಿದ ಅಗೌರವ. ಇದರ ಫಲವಾಗಿ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ, ಅದೃಷ್ಟ ಕುಂದುತ್ತದೆ, ಸ್ಥಾನಪಲ್ಲಟಗಳು ಸಂಭವಿಸುತ್ತವೆ. ಮುಂದಿನ ದಿನಗಳಲ್ಲಿ ಕುಲದೇವರ ಅಸಮಾಧಾನಕ್ಕೂ ಇದು ಕಾರಣವಾಗುತ್ತದೆ.

ಅನೇಕರು ತಮ್ಮ ಜಾತಕ ಚೆನ್ನಾಗಿದ್ದರೂ, ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದರೂ, ಅದೃಷ್ಟ ಕೈಕೊಟ್ಟಿದೆ ಎಂದು ಹೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ, ನಿಶ್ಚಯ ತಾಂಬೂಲದಂತಹ ಪವಿತ್ರ ವಾಗ್ದಾನಗಳನ್ನು ಮುರಿದಿರುವುದು ಆಗಿರಬಹುದು. ಸನಾತನ ಧರ್ಮದ ನಂಬಿಕೆಗಳ ಪ್ರಕಾರ, “ಮಾಡಿದ್ದುಣ್ಣೋ ಮಾರಾಯ” ಎನ್ನುವಂತೆ, ಈ ಕರ್ಮದ ಫಲವನ್ನು ಅನುಭವಿಸಲೇಬೇಕು. ಇದು ಭಗವಂತನ ಶಿಕ್ಷೆ, ಎಲ್ಲಾ ಶಿಕ್ಷೆಗಳಿಗಿಂತ ದೊಡ್ಡದು. ಆದ್ದರಿಂದ, ಗಂಡಾಗಲಿ ಅಥವಾ ಹೆಣ್ಣಾಗಲಿ, ನಿಶ್ಚಯ ತಾಂಬೂಲವನ್ನು ಸ್ವೀಕರಿಸುವ ಮೊದಲು ಕೂಲಂಕಷವಾಗಿ, ಎಲ್ಲವನ್ನೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕ. ಒಮ್ಮೆ ಒಪ್ಪಿಕೊಂಡ ನಂತರ, ಅದನ್ನು ತಿರಸ್ಕರಿಸಬಾರದು. ಇಲ್ಲವಾದರೆ, ಕುಲದೇವರ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಂಜಾಬ್‌ನಲ್ಲಿ ಸ್ಫೋಟ, ರೈಲ್ವೆ ಹಳಿಗೆ ಹಾನಿ, ಅಪರಿಚಿತ ಶವ ಪತ್ತೆ – Kannada News | Patiala Railway Track Explosion: Damaged Line, Dead Body Found, Probe On

ಪಟಿಯಾಲ, ಏಪ್ರಿಲ್ 28: ಪಂಜಾಬ್‌ನ ಪಟಿಯಾಲದಲ್ಲಿ ಸೋಮವಾರ ತಡರಾತ್ರಿ ಸ್ಫೋಟ(Blast) ಸಂಭವಿಸಿದ್ದು  ರೈಲ್ವೆ ಹಳಿ ಹಾನಿಗೊಳಗಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಂಭು-ಅಂಬಾಲ ರೈಲು ಹಳಿಯಲ್ಲಿ ಸ್ಫೋಟದ ಸ್ಥಳದ ಬಳಿ ಒಂದು ಮೃತದೇಹ ಪತ್ತೆಯಾಗಿದ್ದು, ತನಿಖೆ ಆರಂಭಿಸಲಾಗಿದೆ. ಆದರೆ, ಸ್ಫೋಟಕ್ಕೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಪೊಲೀಸರ ಪ್ರಕಾರ, ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಸರಕು ರೈಲುಗಳಿಗೆ ಮೀಸಲಾಗಿರುವ ರೈಲ್ವೆ ಹಳಿಯ ಬಳಿ ಸ್ಫೋಟ ಸಂಭವಿಸಿದೆ.

ಸ್ಫೋಟದ ನಂತರ, ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿಪಿ) ಮತ್ತು ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.
ಸರ್ಕಾರಿ ರೈಲ್ವೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ತಂಡಗಳು ಕೂಡ ತನಿಖೆಗಾಗಿ ಸ್ಥಳಕ್ಕೆ ತಲುಪಿದವು. ವಿಧಿವಿಜ್ಞಾನ ತಜ್ಞರ ತಂಡವೂ ಮಾದರಿಗಳನ್ನು ಸಂಗ್ರಹಿಸಲು ಅಲ್ಲಿಗೆ ತಲುಪಿತ್ತು.

ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ ಎಂದು ಪಟಿಯಾಲ ಎಸ್‌ಎಸ್‌ಪಿ ವರುಣ್ ಶರ್ಮಾ ಹೇಳಿದ್ದಾರೆ, ಹಳಿಗಳ ಬಳಿ ಪತ್ತೆಯಾದ ಶವದ ಬಗ್ಗೆ ಕೇಳಿದಾಗ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು, ಆದರೆ ಶವವು ಛಿದ್ರಗೊಂಡ ಸ್ಥಿತಿಯಲ್ಲಿದೆ ಎಂದು ಹೇಳಿದರು.

ಮತ್ತಷ್ಟು ಓದಿ: ಕೇರಳದ ತ್ರಿಶೂರ್‌ನಲ್ಲಿ ಪಟಾಕಿಗಳ ಸ್ಫೋಟ; 10 ಜನ ಸಾವು, ಹಲವರಿಗೆ ಗಾಯ

ಜನವರಿಯ ಆರಂಭದಲ್ಲಿ, ಪಂಜಾಬ್‌ನ ಫತೇಘರ್ ಸಾಹಿಬ್ ಜಿಲ್ಲೆಯ ಸಿರ್ಹಿಂದ್‌ನಲ್ಲಿರುವ ಸರಕು ಸಾಗಣೆ ಕಾರಿಡಾರ್ ಕೂಡ ಆಗಿರುವ ರೈಲ್ವೆ ಹಳಿಯಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆ ಜನವರಿ 24 ರಂದು, ಗಣರಾಜ್ಯೋತ್ಸವಕ್ಕೆ ಕೇವಲ ಎರಡು ದಿನಗಳ ಮೊದಲು ನಡೆದಿದ್ದು, ಲೋಕೋ ಪೈಲಟ್ ಗಾಯಗೊಂಡಿದ್ದರು.

ಗಾಯಗೊಂಡ ಲೋಕೋ ಪೈಲಟ್ ಅನ್ನು ಅನಿಲ್ ಶರ್ಮಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಹಾನಿಗೊಳಗಾದ ರೈಲು ಫುಟ್‌ಪ್ಲೇಟ್ ತಪಾಸಣೆಯಲ್ಲಿದ್ದು, ಗೋಬಿಂದ್‌ಗಢದಿಂದ ಸಿರ್ಹಿಂದ್ ಕಡೆಗೆ ಬರುತ್ತಿತ್ತು ಎಂದು ಹೇಳಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ದಾಳಿಯನ್ನು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ ನಡೆಸಿದೆ ಎನ್ನುವ ಮಾಹಿತಿ ಹರಿದಾಡಿತ್ತು. ಆದರೆ, ಪೊಲೀಸರು ಈ ಆರೋಪಗಳನ್ನು ಪರಿಶೀಲಿಸಲು ನಿರಾಕರಿಸಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದರು. ಲೋಕೋ ಪೈಲಟ್ ಅವರ ಕೆನ್ನೆಗೆ ಸಣ್ಣ ಗಾಯವಾಗಿದೆ. ಅವರು ಅಪಾಯದಿಂದ ಪಾರಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:42 am, Tue, 28 April 26

Source link

ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ! ಮಹಿಳೆಯರನ್ನ ದಂಧೆಗೆ ಇಳಿಸ್ತಿದ್ದ ಕಿಂಗ್ ಪಿನ್ ಸೇರಿ 11 ಜನ ಅರೆಸ್ಟ್ – Kannada News | Manvi Police Bust Prostitution Racket: 11 Arrested for Trapping Unemployed Women in Raichur

ರಾಯಚೂರು, ಏಪ್ರಿಲ್ 28: ಉದ್ಯೋಗ ನೀಡುವ ನೆಪದಲ್ಲಿ ನಿರುದ್ಯೋಗಿ ಮಹಿಳೆಯರನ್ನು ದಂಧೆಗೆ ಇಳಿಸುತ್ತಿದ್ದ ಜಾಲವನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೊಲೀಸರು ಭೇದಿಸಿದ್ದಾರೆ. ಹಿರೇಕೊಟ್ನೆಕಲ್ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ (Prostitution) ದಂಧೆಯ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕಿಂಗ್‌ಪಿನ್ ತಾಯಪ್ಪ ಸೇರಿದಂತೆ ಒಟ್ಟು 11 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಸ್ಟರ್ ಮೈಂಡ್ ತಾಯಪ್ಪ!

ಮಾನ್ವಿ ಪಟ್ಟಣದ ಇಂದಿರಾನಗರದ ನಿವಾಸಿಯಾದ ತಾಯಪ್ಪ ಈ ದಂಧೆಯ ಮಾಸ್ಟರ್ ಮೈಂಡ್ ಆಗಿದ್ದು, ಆಂಧ್ರಪ್ರದೇಶ, ತೆಲಂಗಾಣ, ಬೆಳಗಾವಿ ಹಾಗೂ ಮಹಾರಾಷ್ಟ್ರದ ನಿರುದ್ಯೋಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ. ಅವರಿಗೆ ಉತ್ತಮ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು, ನಂತರ ಬಲವಂತವಾಗಿ ದಂಧೆಗೆ ತಳ್ಳುತ್ತಿದ್ದ ಎನ್ನಲಾಗಿದೆ. ಹಿರೇಕೊಟ್ನೆಕಲ್ ಗ್ರಾಮದ ಹೊರವಲಯದ ಜಮೀನುಗಳನ್ನು ಈ ಅಕ್ರಮ ಚಟುವಟಿಕೆಗೆ ಅಡ್ಡೆಯನ್ನಾಗಿ ಮಾಡಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ ಮನೆ, ಸ್ಪಾಗಳಲ್ಲಿ ವೇಶ್ಯಾವಾಟಿಕೆ: ನಾಲ್ವರು ಆರೋಪಿಗಳ ಬಂಧನ, 6 ಮಹಿಳೆಯರ ರಕ್ಷಣೆ

ಆರೋಪಿಗಳು ಸೆರೆ

ವಿಷಯ ತಿಳಿದ ಮಾನ್ವಿ ಪೊಲೀಸರು ಜಮೀನಿನ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಈ ವೇಳೆ ಕಿಂಗ್‌ಪಿನ್ ತಾಯಪ್ಪ, ಅಮರೇಶ್, ಹುಸೇನಪ್ಪ, ಪ್ರಕಾಶ್, ಆದೇಶ್, ವಿಜಯಕುಮಾರ್, ಶರಣಬಸವ ಹಾಗೂ ಮಲ್ಲಿಕಾರ್ಜುನ ಸೇರಿದಂತೆ 11 ಮಂದಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರನ್ನು ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಟಿಕೆಟ್ ಬ್ಲಾಕ್ ದಂಧೆಗೆ ಪೊಲೀಸರ ಬ್ರೇಕ್: 24 ಮಂದಿ ಅರೆಸ್ಟ್, 17 ಕೇಸ್ ದಾಖಲು! – Kannada News | IPL 2026: Bengaluru Police Crack Down on Ticket Black Marketing; 24 Arrested and 37 Tickets Seized

ಬೆಂಗಳೂರು, ಏಪ್ರಿಲ್ 28: ಐಪಿಎಲ್ ಪಂದ್ಯಾವಳಿಗಳ ಸಂದರ್ಭದಲ್ಲಿ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಬ್ಲಾಕ್ ಮಾರ್ಕೆಟ್ ದಂಧೆಕೋರರಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ, ಪೊಲೀಸರು 17 ಪ್ರಕರಣಗಳನ್ನು ದಾಖಲಿಸಿದ್ದು, ಈ ಸಂಬಂಧ 24 ಮಂದಿಯನ್ನು ಬಂಧಿಸಿದ್ದಾರೆ. ಇವರಿಂದ 37 ಐಪಿಎಲ್ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ಪ್ರಕರಣಗಳು ದಾಖಲಾಗಿದ್ದರೆ, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಕ್ರಿಕೆಟ್ ಪ್ರೇಮಿಗಳ ಆಸೆಯನ್ನು ದುರುಪಯೋಗಪಡಿಸಿಕೊಂಡು ಹೆಚ್ಚಿನ ಲಾಭ ಗಳಿಸಲು ಯತ್ನಿಸುತ್ತಿದ್ದ ದಂಧೆಕೋರರನ್ನು ಸಿಸಿಬಿ ಅಧಿಕಾರಿಗಳು ಸಹ ದಾಳಿ ನಡೆಸಿ ಬಂಧಿಸಿದ್ದಾರೆ. ಈ ಮೂಲಕ ಐಪಿಎಲ್ ಟಿಕೆಟ್ ಬ್ಲಾಕ್ ಮಾರ್ಕೆಟ್​​ಗೆ ಕಡಿವಾಣ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version