ಟಿ20 ವಿಶ್ವಕಪ್ನ 50ನೇ ಪಂದ್ಯದಲ್ಲಿ ಫೀಲ್ಡ್ ಅಂಪೈರ್ ನೀಡಿದ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 212 ರನ್ ಕಲೆಹಾಕಿದ್ದರು.
ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾಕ್ಕೆ ಕೊನೆಯ ಓವರ್ನಲ್ಲಿ 28 ರನ್ಗಳ ಅಗತ್ಯವಿತ್ತು. ಶ್ರೀಲಂಕಾ ನಾಯಕ ದಸುನ್ ಶಾನಕ, ಶಾಹೀನ್ ಅಫ್ರಿದಿ ಎಸೆದ ಮೊದಲ ನಾಲ್ಕು ಎಸೆತಗಳಲ್ಲಿ 22 ರನ್ (4, 6, 6, 6) ಚಚ್ಚಿದರು. ಅದರಂತೆ ಕೊನೆಯ 2 ಎಸೆತಗಳಲ್ಲಿ ಶ್ರೀಲಂಕಾಕ್ಕೆ ಗೆಲ್ಲಲು 6 ರನ್ ಬೇಕಿತ್ತು.
5ನೇ ಎಸೆತವನ್ನು ಶಾಹೀನ್ ಅಫ್ರಿದಿ ಆಫ್-ಸ್ಟಂಪ್ನಿಂದ ಬಹಳ ಹೊರಗೆ ಫುಲ್ ಟಾಸ್ ಎಸೆದರು. ಇದಾಗ್ಯೂ ಅಂಪೈರ್ ರಾಡ್ ಟಕರ್ ಅದನ್ನು ‘ಲೀಗಲ್ ಡೆಲಿವರಿ’ (ವೈಡ್ ಅಲ್ಲ) ಎಂದು ಘೋಷಿಸಿದರು.
ಇನ್ನು ಕೊನೆಯ ಎಸೆತವೂ ಸಹ ಆಫ್-ಸ್ಟಂಪ್ನ ಗೆರೆಯ ಹತ್ತಿರವೇ ಇತ್ತು. ಶಾನಕ ಅದನ್ನು ವೈಡ್ ಎಂದು ಬಿಟ್ಟರು, ಆದರೆ ಅಂಪೈರ್ ಅದನ್ನೂ ಸಹ ವೈಡ್ ನೀಡಲಿಲ್ಲ. ಪರಿಣಾಮ ಪಾಕಿಸ್ತಾನ ಈ ಪಂದ್ಯವನ್ನು 5 ರನ್ಗಳಿಂದ ಗೆದ್ದುಕೊಂಡಿತು.
ಇತ್ತ ಕೊನೆಯ ಎರಡು ಎಸೆತಗಳಲ್ಲಿ ವೈಡ್ ನೀಡದಿರುವ ಬಗ್ಗೆ ಶ್ರೀಲಂಕಾ ತಂಡದ ಮುಖ್ಯ ಕೋಚ್ ಸನತ್ ಜಯಸೂರ್ಯ ಅವರು ಪಂದ್ಯದ ನಂತರ ಮೈದಾನಕ್ಕೆ ಬಂದು ಅಂಪೈರ್ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಟಿವಿಯ ರೀಪ್ಲೇನಲ್ಲಿ ಚೆಂಡು ವೈಡ್ ಗೆರೆಯಿಂದ ಹೊರಗಿದ್ದರೂ ಅಂಪೈರ್ ನೀಡದ ತೀರ್ಪು ವಿವಾದಕ್ಕೆ ಕಾರಣವಾಯಿತು.
ಇದೀಗ ಈ ಶಾಹೀನ್ ಅಫ್ರಿದಿ ಎಸೆದ ಕೊನೆಯ ಎಸೆತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಂಪೈರ್ ತೀರ್ಪಿನ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಅಲ್ಲದೆ ಶ್ರೀಲಂಕಾ ಸೋಲಿಗೆ ಅಂಪೈರ್ ತೀರ್ಪು ಕಾರಣ ಎಂದು ಲಂಕಾ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ.
Published On – 9:38 am, Sun, 1 March 26