ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಶಿವನ ಆರಾಧನೆಗಾಗಿ ಮೀಸಲಾದ ಈ ಪವಿತ್ರ ತಿಂಗಳಿನಲ್ಲಿ ಭಕ್ತರು ಶಿವನ ಕೃಪೆಗೆ ಪಾತ್ರರಾಗಲು ಉಪವಾಸ (fasting) ವ್ರತಾಚರಣೆಯನ್ನು ಮಾಡುತ್ತಾರೆ. ಶ್ರಾವಣ ಸೋಮವಾರ, ಶ್ರಾವಣ ಮಂಗಳವಾರ, ಶುಕ್ರವಾರ, ಶ್ರಾವಣ ಶನಿವಾರದಂದು ಉಪವಾಸ ಮಾಡುತ್ತಾರೆ. ಉಪವಾಸದ ಸಮಯದಲ್ಲಿ ಹಣ್ಣುಗಳು, ಸಾಬುದಾನ ಅಂದರೆ ಸಬ್ಬಕ್ಕಿ ಕಿಚಡಿಯಂತಹ ಸಾತ್ವಿಕ ಆಹಾರವನ್ನು ಸೇವನೆ ಮಾಡುತ್ತಾರೆ. ಸಾಬುದಾನ ಕಿಚಡಿ ಜನಪ್ರಿಯ ಉಪವಾಸದ ಆಹಾರವಾಗಿದೆ. ಕಿಚಡಿ ಮಾತ್ರವಲ್ಲ ಸಾಬುದಾನದಿಂದ ಈ ಎಲ್ಲಾ ಆರೋಗ್ಯಕರ ರೆಸಿಪಿಗಳನ್ನು ತಯಾರಿಸಬಹುದು. ಈ ಸಾಬುದಾನ ಭಕ್ಷ್ಯಗಳು ಬಹಳ ಹೊತ್ತಿನವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ, ಸುಸ್ತಾಗುವುದನ್ನು ತಡೆಗಟ್ಟಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಜೊತೆಗೆ ಇದು ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಈ ಬಾರಿ ಶ್ರಾವಣ ಮಾಸದಲ್ಲಿ ನೀವು ಉಪವಾಸ ವ್ರತಾಚರಣೆ ಮಾಡುತ್ತಿದ್ದರೆ, ಸಾಬುದಾನದ ಈ ಭಕ್ಷ್ಯಗಳನ್ನು ಸವಿಯಿರಿ.
ಶ್ರಾವಣ ಉಪವಾಸ ಮಾಡುವವರು ತಿನ್ನಬಹುದಾದ ಸಾಬುದಾನ ಖಾದ್ಯಗಳು:
ಸಬುದಾನ ದೋಸೆ: ಶ್ರಾವಣ ಉಪವಾಸ ವ್ರತಾಚರಣೆಯನ್ನು ಮಾಡುತ್ತಿದ್ದರೆ ನೀವು ಉಪವಾಸಕ್ಕೂ ಮುನ್ನ ಸಾಬುದಾನ ದೋಸೆಯನ್ನು ತಿನ್ನಬಹುದು. ಈ ದೋಸೆಯನ್ನು ತಯಾರಿಸಲು ನೆನೆಸಿದ ಸಾಬುದಾನ, ಊದಲು ಅಕ್ಕಿ, ಮೊಸರು ಬೇಕಾಗುತ್ತದೆ. ಈ ಮೂರು ಪದಾರ್ಥವನ್ನು ನಯವಾಗಿ ರುಬ್ಬಿ ದೋಸೆ ಹಿಟ್ಟನ್ನು ತಯಾರಿಸಿಕೊಳ್ಳಿ. ನಂತರ ತೆಳುವಾದ ದೋಸೆಯನ್ನು ಮಾಡಿ, ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಿರಿ. ಈ ದೋಸೆ ಹಗುರವಾದ ಆಹಾರವಾಗಿದ್ದು, ಹೆಚ್ಚು ಹೊತ್ತು ಹಸಿವಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.
ಸಬುದಾನ ಇಡ್ಲಿ: ಮೃದುವಾದ ಸಾಬುದಾನ ಇಡ್ಲಿಯು ಉತ್ತಮ ಉಪವಾಸ ಆಹಾರವಾಗಿದೆ. ಸಾಬುದಾನ ದೋಸೆಗೆ ಹಿಟ್ಟನ್ನು ತಯಾರಿಸುವಂತೆ ನೆನೆಸಿದ ಸಾಬುದಾನ, ಊದಲು ಅಕ್ಕಿ ಮತ್ತು ಮೊಸರನ್ನು ಹಾಕಿ ಹಿಟ್ಟನ್ನು ತಯಾರಿಸಿ, ಈ ಹಿಟ್ಟನ್ನು ಇಡ್ಲಿ ಪಾತ್ರೆಗಳಿಗೆ ಹಾಕಿ ಬೇಯಿಸಿಕೊಳ್ಳಿ. ಈ ಆರೋಗ್ಯಕರ ಇಡ್ಲಿ ಜೀರ್ಣಿಸಿಕೊಳ್ಳಲು ಸುಲಭ ಮತ್ತು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಮಾಡುತ್ತದೆ.
ಸಾಬುದಾನಾ ಖಿಚಡಿ: ಉಪವಾಸದ ಸಮಯದಲ್ಲಿ ಸಾಬುದಾನ ಕಿಚಡಿ ಇರಲೇಬೇಕು. ಇದು ಜನಪ್ರಿಯ ಉಪವಾಸ ಭಕ್ಷ್ಯವಾಗಿದೆ. ರಾತ್ರಿಯಿಡಿ ನೆನೆಸಿದ ಸಾಬುದಾನ, ಹುರಿದ ಕಡಲೆಕಾಯಿ, ಜೀರಿಗೆ, ಹಸಿ ಮೆಣಸಿನಕಾಯಿ, ಬೇಯಿಸಿದ ಆಲೂಗಡ್ಡೆ ಮತ್ತು ಸೌಮ್ಯ ಮಸಾಲೆಗಳನ್ನೆಲ್ಲಾ ಬೇಯಿಸಿ ಈ ಕಿಚಡಿಯನ್ನು ತಯಾರಿಸಲಾಗುತ್ತದೆ. ಪೌಷ್ಟಿದಾಯಕವಾದ ಮತ್ತು ಹಗುರವಾದ ಈ ಭಕ್ಷ್ಯ ಪರಿಪೂರ್ಣ ಉಪವಾಸ ಊಟವಾಗಿದೆ.
ಸಾಬುದಾನ ವಡೆ: ಶ್ರಾವಣ ಉಪವಾಸ ಮಾಡುವವರು ಸಾಬುದಾನ ವಡೆಯನ್ನು ಸಹ ಸವಿಯಬಹುದು. ನೆನೆಸಿದ ಸಾಬುದಾನವನ್ನು, ಬೇಯಿಸಿದ ಆಲೂಗಡ್ಡೆ, ಕಡ್ಲೆ ಹಿಟ್ಟು, ವಿವಿಧ ಮಸಾಲೆಗಳೊಂದಿಗೆ ಬೆರೆಸಿ ನಂತರ ಕೈಯಲ್ಲಿ ವಡೆ ಆಕಾರಕ್ಕೆ ತಟ್ಟಿ, ಎಣ್ಣೆಯಲ್ಲಿ ಕರಿಯಲಾಗುತ್ತದೆ.
ಇದನ್ನೂ ಓದಿ: ಬಂದೇ ಬಿಟ್ಟಿದೆ ಆಷಾಢ; ಈ ಮಾಸದಲ್ಲಿ ನವ ವಧುವನ್ನು ತವರು ಮನೆಗೆ ಕಳುಹಿಸುವುದೇಕೆ ಗೊತ್ತಾ?
ಸಾಬುದಾನ ಖೀರ್: ಸಿಹಿ ತಿನ್ನಲು ಬಯಸುವವರಿಗೆ ಸಾಬುದಾನ ಖೀರ್ ಉತ್ತಮ, ಆರೋಗ್ಯಕರ ಆಯ್ಕೆಯಾಗಿದೆ. ನೆನೆಸಿದ ಸಬ್ಬಕ್ಕಿಯನ್ನು ಹಾಲು ಮತ್ತು ಸಕ್ಕರೆ ಅಥವಾ ಬೆಲ್ಲದೊಂದಿಗೆ ಬೇಯಿಸಿ, ಅದಕ್ಕೆ ಏಲಕ್ಕಿ ಪುಡಿ ಮತ್ತು ಡ್ರೈ ನಟ್ಸ್ ಮತ್ತು ಕೇಸರಿ ದಳವನ್ನು ಸೇರಿಸಿದರೆ ಸಾಬುದಾನ ಖೀರ್ ರೆಡಿ. ಇದು ಜನಪ್ರಿಯ ಉಪವಾಸ ಸಿಹಿಖಾದ್ಯವಾಗಿದೆ.
ಸಾಬುದಾನ ಭೇಲ್: ಉಪವಾಸದ ದಿನ ನೀವು ಸಾಬುದಾನ ಭೇಲ್ ಕೂಡ ತಿನ್ನಬಹುದು. ಇದಕ್ಕಾಗಿ ಸಾಬುದಾನವನ್ನು ಹುರಿದಿಟ್ಟುಕೊಂಡು ಅದಕ್ಕೆ ಬೇಯಿಸಿದ ಆಲೂಗಡ್ಡೆ, ಹುಡಿದ ಕಡಲೆಕಾಯಿ, ಹಸಿ ಮೆಣಸಿನಕಾಯಿ, ನಿಂಬೆ ರಸ, ರಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಸಾಬುದಾನ ಭೇಲ್ ಸಿದ್ದವಾಗುತ್ತದೆ. ಈ ಹಗುವಾದ ಖಾದ್ಯ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ