TV9 ಬಿಗ್ ಇಂಪ್ಯಾಕ್ಟ್: ಮುಚ್ಚಿದ್ದ ಕಾಳಜಿ ಕೇಂದ್ರ 24 ಗಂಟೆಯಲ್ಲೇ ರೀ-ಓಪನ್! – Kannada News | Gadag Flood Victims Get Aid as Admin Reopens Care Center After TV9 News Report

ಗದಗ, ಮೇ.23: ಗದಗ ನಗರದ ಗಂಗಿಮಡಿ ಭಾಗದ ಸಂತ್ರಸ್ತರ ಪರವಾಗಿ ಟಿವಿ೯ (TV9) ಸುದ್ದಿ ಸಂಸ್ಥೆ ಬಿತ್ತರಿಸಿದ ವಿಸ್ತೃತ ವರದಿಗೆ ಕೊನೆಗೂ ಭರ್ಜರಿ ಜಯ ಸಿಕ್ಕಿದೆ. ನಿನ್ನೆ ಮಧ್ಯಾಹ್ನ ಸಂತ್ರಸ್ತರನ್ನು ಹೊರಹಾಕಿ ದಿಢೀರನೆ ಬಂದ್ ಮಾಡಲಾಗಿದ್ದ ಕಾಳಜಿ ಕೇಂದ್ರವನ್ನು, ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತವು ಇಂದು ಮಧ್ಯಾಹ್ನವೇ ಪುನರಾರಂಭಿಸಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಸಂತ್ರಸ್ತರು, “ಟಿವಿ9 ವರದಿಯಿಂದಲೇ ಇಂದು ನಮ್ಮ ಹೊಟ್ಟೆಗೆ ಅನ್ನ ಮತ್ತು ತಲೆಗೊಂದು ಆಸರೆ ಸಿಕ್ಕಿದೆ” ಎಂದು ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ.

ಮಾಧ್ಯಮಗಳ ವರದಿ ಬೆನ್ನಲ್ಲೇ ಅಲರ್ಟ್ ಆದ ಗದಗ ಉಪವಿಭಾಗಾಧಿಕಾರಿ (AC) ಗಂಗಪ್ಪ ಹಾಗೂ ನಗರಸಭೆ ಆಯುಕ್ತ ರಾಜಾರಾಮ್ ಪವಾರ್ ಅವರು ಗಂಗಿಮಡಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳನ್ನು ಮುತ್ತಿಗೆ ಹಾಕಿದ ಸಂತ್ರಸ್ತರು, ತಮಗಾದ ಅನ್ಯಾಯವನ್ನು ನೆನೆದು ಕಣ್ಣೀರು ಹಾಕಿ ಗೋಳು ತೋಡಿಕೊಂಡರು. “ನಿನ್ನೆ ಕಾಳಜಿ ಕೇಂದ್ರ ಬಂದ್ ಮಾಡಿರುವ ಕುರಿತು ನಮಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ” ಎಂದು ಸ್ಪಷ್ಟನೆ ನೀಡಿದ ಎಸಿ ಗಂಗಪ್ಪ ಅವರು, ಈ ಬೇಜವಾಬ್ದಾರಿತನಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸದ್ಯ ಸಂತ್ರಸ್ತರಿಗೆ ಸರ್ಕಾರಿ ಶಾಲೆಯಲ್ಲೇ ವಾಸ್ತವ್ಯ ಹಾಗೂ ಊಟದ ಅಧಿಕೃತ ವ್ಯವಸ್ಥೆಯನ್ನು ಮಾಡಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಭೀತಿ?!: ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನ ಠಾಣೆಗೆ ತಂದ ಪೊಲೀಸರು

ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಎಂಎಲ್‌ಸಿ (MLC) ಎಸ್.ವಿ. ಸಂಕನೂರ್ ಅವರು ನಿಯೋಗದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಡಳಿತದ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರು ತಕ್ಷಣ ಮಧ್ಯಪ್ರವೇಶಿಸಿ ಈ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಸಂತ್ರಸ್ತರಿಗೆ ಮಧ್ಯಾಹ್ನದ ಅವಧಿಗೆ ಬಿಜೆಪಿಯಿಂದಲೇ ವಿಶೇಷ ಪುಲಾವ್ ಮತ್ತು ಸಿರಾ ಊಟದ ವ್ಯವಸ್ಥೆ ಮಾಡಲಾಗಿತ್ತು. ಗಂಗಿಮಡಿ ನಿವಾಸಿಗಳ ತಗಡಿನ ಶೆಡ್‌ಗಳು ಸಂಪೂರ್ಣವಾಗಿ ದುರಸ್ತಿಯಾಗುವವರೆಗೂ ಈ ಕಾಳಜಿ ಕೇಂದ್ರ ಮುಂದುವರಿಯಲಿದ್ದು, ಸಾರ್ವಜನಿಕ ವಲಯದಲ್ಲಿ ಟಿವಿ೯ ವರದಿಗಾರಿಕೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *