12 Aug 2026 10:59 AM (IST)
ಚಾಕಲೇಟ್ ಹೆಸರಿನಲ್ಲಿ ಗಾಂಜಾ ದಂಧೆ, ಯುಪಿ ಮೂಲದ ಆರೋಪಿ ಬಂಧನ
ಬೆಳಗಾವಿ ನಗರದ ಉದ್ಯಮಬಾಗದಲ್ಲಿ ಖಾಸಗಿ ಕಾಲೇಜು ಎದುರು ಸಿಹಿ ಚಾಕಲೇಟ್ನಲ್ಲಿ ಗಾಂಜಾ ಬೆರೆಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಭೋಲು ಪ್ರಜಾಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 5 ಗ್ರಾಂ ಗಾಂಜಾ ಮಿಶ್ರಿತ ಚಾಕಲೇಟ್ಗೆ ರೂ. 50ರಂತೆ ಮಾರಲಾಗುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 7 ಕೆಜಿ ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳು, ಮೊಬೈಲ್ ಹಾಗೂ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
12 Aug 2026 10:58 AM (IST)
ಡಿಸಿ ಕಚೇರಿ ಮುಂದೆ ನಕಲಿ ದಾಖಲೆ ಪ್ರಶ್ನಿಸಿ ದೂರು ನೀಡಿದವರ ಮೇಲೆ ಹಲ್ಲೆ
ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರಿಗೆ ಶೈಲಾ ಹಾಗೂ ಚಂದ್ರಮಾನ್ ದೂರು ನೀಡಿದ್ದರು. ಇದರ ಕೋಪದಿಂದ ಕಟ್ಟಡ ನಿರ್ಮಿಸುತ್ತಿರುವ ಶಾಂತಾ ಎಂಬ ಮಹಿಳೆ, ಪೊಲೀಸರ ಎದುರಲ್ಲೇ ದೂರುದಾರರ ಮೇಲೆ ಹಲ್ಲೆ ನಡೆಸಿ ಕಪಾಳಮೋಕ್ಷ ಮಾಡಿದ್ದು, ಈ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
12 Aug 2026 10:57 AM (IST)
13 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ, ಹಾಸ್ಟೆಲ್ ಮುಖ್ಯಸ್ಥನ ಬಂಧನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹಾಸ್ಟೇಲ್ನಲ್ಲಿ 13 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮುಖ್ಯಸ್ಥ ಜಾನ್ ಶಾಮೈಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ತನ್ನ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ ಬಳಿಕ ದೂರು ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
12 Aug 2026 10:56 AM (IST)
ಬೀದರ್ ಮೂಲದ ಕೂಲಿ ಕಾರ್ಮಿಕರ ದುರ್ಮರಣ: ಸಚಿವ ಈಶ್ವರ ಖಂಡ್ರೆ ಭೇಟಿ
ತೆಲಂಗಾಣದಲ್ಲಿ ನಡೆದ ಅಪಘಾತದಲ್ಲಿ ಬೀದರ್ನ 6 ಕೂಲಿ ಕಾರ್ಮಿಕರು ಮೃತಪಟ್ಟಿರುವುದು ಅತ್ಯಂತ ದುಃಖಕರ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಲಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಸಂತ್ರಸ್ತರ ಬೆನ್ನೆಲುಬಾಗಿ ಸರ್ಕಾರ ನಿಲ್ಲಲಿದೆ.
12 Aug 2026 10:56 AM (IST)
ಅಯೋಧ್ಯೆ ರಾಮಮಂದಿರ ಸಿಇಒ ಹುದ್ದೆ
‘ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ಸಿಇಒ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬಂದ 5200 ಅರ್ಜಿಗಳಲ್ಲಿ 18 ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿಗಳೂ ಸೇರಿದಂತೆ ಅಭ್ಯರ್ಥಿಗಳಿಗೆ ಜನಿವಾರ ಧರಿಸುವಿಕೆ, ಶಿಕಾ, ಸಸ್ಯಾಹಾರ, ಮದ್ಯಪಾನ ನಿಷೇಧ, ರಾಮಭಕ್ತಿ ಹಾಗೂ ಸಾಂಪ್ರದಾಯಿಕ ಉಡುಗೆಯಂತಹ ಧಾರ್ಮಿಕ ಆಚರಣೆ ಮತ್ತು ಜೀವನಶೈಲಿಯ ಕುರಿತು ಕಠಿಣ ಪ್ರಶ್ನೆಗಳನ್ನು ಗೂಗಲ್ ಫಾರ್ಮ್ ಮೂಲಕ ಕೇಳಲಾಗಿದೆ. ಟ್ರಸ್ಟ್ನ ಪಾರದರ್ಶಕ ಆಡಳಿತಕ್ಕಾಗಿ ಈ ಹುದ್ದೆಯನ್ನು ಸೃಷ್ಟಿಸಲಾಗಿದ್ದು, ಸೆಪ್ಟೆಂಬರ್ 2ರೊಳಗೆ ಮೂರು ಹೆಸರುಗಳನ್ನು ಅಂತಿಮ ಶಿಫಾರಸು ಮಾಡಲಾಗುತ್ತದೆ. ಮತ್ತಷ್ಟು ಓದಿ
12 Aug 2026 10:55 AM (IST)
ಯುವಕರು ದೇಶದ ವರ್ತಮಾನದ ದೊಡ್ಡ ಶಕ್ತಿ ಎಂದ ಪ್ರಧಾನಿ ಮೋದಿ
ಅಂತರರಾಷ್ಟ್ರೀಯ ಯುವ ದಿನದ ಹಿನ್ನೆಲೆಯಲ್ಲಿ ದೇಶದ ಯುವಜನತೆಯನ್ನು ಉದ್ದೇಶಿಸಿ ಸಂದೇಶ ಹಂಚಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, “ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ಇಂದಿನ ಭಾರತದ ಅತ್ಯಂತ ದೊಡ್ಡ ಶಕ್ತಿ” ಎಂದು ಶ್ಲಾಘಿಸಿದ್ದಾರೆ. ಅಲ್ಲದೆ, ಸಂಸ್ಕೃತ ಶ್ಲೋಕದ ಮೂಲಕ ದೃಷ್ಟಿ, ಮಾತು ಮತ್ತು ಕಾಯಕದ ಮಹತ್ವವನ್ನು ಯುವ ಸಮೂಹಕ್ಕೆ ತಿಳಿಸಿದ್ದಾರೆ. ಮತ್ತಷ್ಟು ಓದಿ
12 Aug 2026 10:04 AM (IST)
ಪ್ರಜ್ವಲ್ ರೇವಣ್ಣ ಜೈಲು ಮೊಬೈಲ್ ಪ್ರಕರಣ: ಅಸಿಸ್ಟೆಂಟ್ ಸೂಪರಿಂಡೆಂಟ್ ಸಸ್ಪೆಂಡ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಆಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪದ ಹಿನ್ನೆಲೆ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಜೈಲು ಎಸ್ಪಿ ಅನ್ಶುಕುಮಾರ್ಗೆ ಡಿಜಿಪಿ ಅಲೋಕ್ ಕುಮಾರ್ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.