Headlines

Ujjwala Yojana: ಉಜ್ವಲ ಫಲಾನುಭವಿಗಳಿಗೆ ಶಾಕ್, 9 ಅಲ್ಲ, ಇನ್ಮುಂದೆ ಸಿಗಲಿದೆ ನಾಲ್ಕೇ ನಾಲ್ಕು ಸಿಲಿಂಡರ್​ಗಳು – Kannada News

ನವದೆಹಲಿ, ಜೂನ್ 09: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಸರ್ಕಾರವು ಈಗ ವಾರ್ಷಿಕವಾಗಿ ಸಬ್ಸಿಡಿ ಹೊಂದಿರುವ LPG ಸಿಲಿಂಡರ್ ಮರುಪೂರಣಗಳ ಸಂಖ್ಯೆಯನ್ನು ಒಂಬತ್ತರಿಂದ ನಾಲ್ಕಕ್ಕೆ ಇಳಿಸಿದೆ. ಇದರರ್ಥ ಉಜ್ವಲ ಯೋಜನೆಯಡಿಯಲ್ಲಿ ಬರುವ ಕುಟುಂಬಗಳು ವರ್ಷಕ್ಕೆ ನಾಲ್ಕು ಸಿಲಿಂಡರ್‌ಗಳ ಮೇಲಿನ ಹೆಚ್ಚುವರಿ ಸಬ್ಸಿಡಿಯನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯಡಿಯಲ್ಲಿ, ದೇಶದಲ್ಲಿ 10.60 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿದೆ ಮತ್ತು ಇಲ್ಲಿಯವರೆಗೆ ಅವರಿಗೆ ವರ್ಷಕ್ಕೆ ಒಂಬತ್ತು ಸಿಲಿಂಡರ್‌ಗಳನ್ನು ನೀಡಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಅಂತಾರಾಷ್ಟ್ರೀಯ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿಯ ಮಾರ್ಗದಲ್ಲಿ ಎದುರಾಗಿರುವ ಸವಾಲುಗಳ ನಡುವೆಯೂ, ಭಾರತ ಸರ್ಕಾರವು ದೇಶದ ನಾಗರಿಕರಿಗೆ ಇಂಧನ ಭದ್ರತೆಯನ್ನು ಖಚಿತಪಡಿಸುವಲ್ಲಿ ಅದ್ಭುತ ಯಶಸ್ಸು ಕಂಡಿದೆ. ಜಾಗತಿಕವಾಗಿ ಎಲ್‌ಪಿಜಿ ಬೆಲೆಗಳು ಶೇ. 46 ರಷ್ಟು ಭಾರಿ ಏರಿಕೆ ಕಂಡಿದ್ದರೂ, ಭಾರತೀಯ ತೈಲ ಸಂಸ್ಕರಣಾಗಾರಗಳು ದೇಶೀಯ ಉತ್ಪಾದನೆಯನ್ನು ಶೇಕಡಾ 60 ರಷ್ಟು ಹೆಚ್ಚಿಸುವ ಮೂಲಕ ಇಂಧನ ಸ್ವಾವಲಂಬನೆಯ ಹೊಸ ಮೈಲಿಗಲ್ಲು ಸ್ಥಾಪಿಸಿವೆ.

ಸರಾಸರಿ ಮನೆಯ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. 2016 ರಲ್ಲಿ ಪ್ರಾರಂಭವಾದ ಈ ಯೋಜನೆಯಡಿಯಲ್ಲಿ, ಫಲಾನುಭವಿಗಳು ಆರಂಭದಲ್ಲಿ ವರ್ಷಕ್ಕೆ ತಲಾ 14.2 ಕಿಲೋಗ್ರಾಂಗಳಷ್ಟು 12 ಸಬ್ಸಿಡಿ ಸಿಲಿಂಡರ್‌ಗಳನ್ನು ಪಡೆದರು. ಆದಾಗ್ಯೂ, ಕಳೆದ ವರ್ಷ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಒಂಬತ್ತಕ್ಕೆ ಇಳಿಸಲಾಯಿತು, ಮತ್ತು ಈಗ ಅದನ್ನು ನಾಲ್ಕಕ್ಕೆ ಇಳಿಸಲಾಗಿದೆ.

ಮತ್ತಷ್ಟು ಓದಿ: ಪಿಎಂ ಉಜ್ವಲ ಯೋಜನೆ: ಆರೋಗ್ಯ, ಸಮಾನತೆ ಮತ್ತು ಶುದ್ಧ ವಾತಾವರಣ ಉಳಿಸುವ ಸ್ಕೀಮ್

ಇದೇ ವೇಳೆ, ದೇಶದ ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ತಂತ್ರಜ್ಞಾನ ಆಧಾರಿತ ಹಾಗೂ ಪಾರದರ್ಶಕ ಸೌಲಭ್ಯ ಒದಗಿಸಲು ಪೆಟ್ರೋಲಿಯಂ ಸಚಿವಾಲಯವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಸಬ್ಸಿಡಿಗಳ ಮರುಹಂಚಿಕೆಯ ಅತ್ಯಂತ ವ್ಯವಸ್ಥಿತ ನಿರ್ಧಾರವನ್ನು ಪ್ರಕಟಿಸಿದೆ.

ದೇಶೀಯ ಉತ್ಪಾದನೆ 60% ಹೆಚ್ಚಳ; ಓಮನ್, ಅಮೆರಿಕದಿಂದ ಪೂರೈಕೆ ಸುಗಮ
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಆರಂಭಿಕ ದಿನಗಳಲ್ಲಿ ಎಲ್‌ಪಿಜಿ ಆಮದು ಪ್ರಕ್ರಿಯೆಗೆ ಸಣ್ಣಮಟ್ಟದ ಹಿನ್ನಡೆಯಾಗಿತ್ತು. ಆದರೆ, ಭಾರತ ಸರ್ಕಾರವು ಅತ್ಯಂತ ಚಾಣಾಕ್ಷ ರಾಜತಾಂತ್ರಿಕತೆ ಹಾಗೂ ಪರ್ಯಾಯ ಮಾರ್ಗಗಳ ಮೂಲಕ ದೇಶಕ್ಕೆ ಇಂಧನದ ಕೊರತೆಯಾಗದಂತೆ ನೋಡಿಕೊಂಡಿದೆ.

ಹೊಸ ದೇಶಗಳೊಂದಿಗೆ ಒಪ್ಪಂದ: ಭಾರತವು ತನ್ನ ಒಟ್ಟು ಎಲ್‌ಪಿಜಿ ಅಗತ್ಯದ ಶೇ. 70 ರಷ್ಟನ್ನು ಹಾರ್ಮುಜ್ ಜಲಸಂಧಿಯ ಮೂಲಕ ಆಮದು ಮಾಡಿಕೊಳ್ಳುತ್ತಿತ್ತು. ಆ ಮಾರ್ಗದಲ್ಲಿ ಸದ್ಯ ನಿರ್ಬಂಧ ಇರುವುದರಿಂದ, ಸರ್ಕಾರವು ತ್ವರಿತವಾಗಿ ಓಮನ್, ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಮತ್ತು ಆಸ್ಟ್ರೇಲಿಯಾ ದೇಶಗಳಿಂದ ಇಂಧನವನ್ನು ಯಶಸ್ವಿಯಾಗಿ ಆಮದು ಮಾಡಿಕೊಳ್ಳಲು ಆರಂಭಿಸಿದೆ.

ದಾಖಲೆಯ ಬುಕಿಂಗ್ ಹಾಗೂ ಸಪ್ಲೈ: ಕಳೆದ ನಾಲ್ಕು ದಿನಗಳಲ್ಲಿ ದೇಶಾದ್ಯಂತ ದಿನಕ್ಕೆ ಸರಾಸರಿ 4.2 ಮಿಲಿಯನ್ (42 ಲಕ್ಷ) ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್ ಆಗಿದ್ದರೆ, ಭಾರತೀಯ ತೈಲ ಕಂಪನಿಗಳು ಅದಕ್ಕಿಂತಲೂ ಹೆಚ್ಚು ಅಂದರೆ 4.4 ಮಿಲಿಯನ್ (44 ಲಕ್ಷ) ಸಿಲಿಂಡರ್‌ಗಳನ್ನು ಪೂರೈಕೆ ಮಾಡುತ್ತಿವೆ. ದೇಶೀಯ ಸಂಸ್ಕರಣಾಗಾರಗಳು ಶೇ. 60 ರಷ್ಟು ಹೆಚ್ಚುವರಿ ಉತ್ಪಾದನೆ ಮಾಡುತ್ತಿರುವುದರಿಂದ ಪೂರೈಕೆ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖನುಜಾ ಮಾತನಾಡಿ, ನಮ್ಮ ಅಂಕಿ-ಅಂಶಗಳ ಪ್ರಕಾರ, ಉಜ್ವಲ ಯೋಜನೆಯಡಿ ಸಂಪರ್ಕ ಪಡೆದಿರುವ ದೇಶದ 10.60 ಕೋಟಿ ಗ್ರಾಹಕರು ವಾರ್ಷಿಕವಾಗಿ ಸರಾಸರಿ 4 ರಿಂದ 5 ಸಿಲಿಂಡರ್‌ಗಳನ್ನು ಮಾತ್ರ ಬಳಸುತ್ತಾರೆ. ಹೀಗಾಗಿ, ನೈಜ ಬಳಕೆಯ ಮಟ್ಟವನ್ನು ಪರಿಗಣಿಸಿ ವರ್ಷಕ್ಕೆ 4 ಸಿಲಿಂಡರ್‌ಗಳಿಗೆ 300 ರೂ. ನೇರ ಸಬ್ಸಿಡಿಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಇದರಿಂದ ಸಾಮಾನ್ಯ ಬಡ ಕುಟುಂಬಗಳ ದೈನಂದಿನ ಬಜೆಟ್‌ಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಗ್ರಾಹಕಸ್ನೇಹಿ ಸಬ್ಸಿಡಿ ಆಧಾರ ಮತ್ತು ಬೆಲೆ ವ್ಯವಸ್ಥೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಒಂದು ಸಿಲಿಂಡರ್‌ನ ನೈಜ ಪೂರೈಕೆ ವೆಚ್ಚವು ತೈಲ ಕಂಪನಿಗಳಿಗೆ 1,600ರೂ.ದಾಟಿದೆ. ಆದಾಗ್ಯೂ, ಸರ್ಕಾರವು ಸಾಮಾನ್ಯ ಗ್ರಾಹಕರಿಗೆ ಕೇವಲ 942 ರೂ. ಚಿಲ್ಲರೆ ಬೆಲೆಯಲ್ಲಿ ಸಿಲಿಂಡರ್ ಒದಗಿಸುತ್ತಿದೆ. ಅಂದರೆ, ಉಜ್ವಲ ಮತ್ತು ಉಜ್ವಲವಲ್ಲದ ಸಾಮಾನ್ಯ ಗ್ರಾಹಕರಿಬ್ಬರಿಗೂ ಸರ್ಕಾರವು ಪ್ರತಿ ಸಿಲಿಂಡರ್ ಮೇಲೆ ಈಗಾಗಲೇ ಸರಿಸುಮಾರು 700 ರೂ. ಗಳ ಭಾರಿ ಆಡಳಿತಾತ್ಮಕ ರಿಯಾಯಿತಿಯನ್ನು ನೀಡುತ್ತಿದೆ.

ಇದರ ಜೊತೆಗೆ, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಗುವ ವಿಶೇಷ 300 ರೂ. ಸಬ್ಸಿಡಿಯಿಂದಾಗಿ, ಅವರು ಮೊದಲ 4 ಸಿಲಿಂಡರ್‌ಗಳನ್ನು ಕೇವಲ 642 ರೂ. ಅತ್ಯಂತ ಕಡಿಮೆ ದರದಲ್ಲಿ ಪಡೆಯಲಿದ್ದಾರೆ. ಉಳಿದ ಸಿಲಿಂಡರ್‌ಗಳು ಅವರಿಗೆ 942 ರೂ. ಸಾಮಾನ್ಯ ಸಬ್ಸಿಡಿ ದರದಲ್ಲೇ ಲಭ್ಯವಿರುತ್ತವೆ.

52,000 ಕೋಟಿ ರೂ. ಆರ್ಥಿಕ ನೆರವು; ಸುಸ್ಥಿರ ಇಂಧನ ಅಭಿವೃದ್ಧಿ

ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸಾಮಾನ್ಯ ಬಜೆಟ್‌ನಿಂದ ಬರೋಬ್ಬರಿ 52,000 ರೂ. ಕೋಟಿಗಳನ್ನು ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಆರ್ಥಿಕ ಸಹಾಯವಾಗಿ ನೀಡಿದೆ. ಪೆಟ್ರೋಲ್ ಮೇಲೆ ಲೀಟರ್‌ಗೆ 6 ರೂ. ಮತ್ತು ಡೀಸೆಲ್ ಮೇಲೆ 30 ರೂ. ರವರೆಗೆ ಕಂಪನಿಗಳು ನಷ್ಟ ಅನುಭವಿಸುತ್ತಿದ್ದರೂ, ದೇಶದ ಜನಸಾಮಾನ್ಯರಿಗೆ ಇಂಧನ ಬೆಲೆ ಏರಿಕೆಯ ಬಿಸಿ ತಟ್ಟದಂತೆ ಸರ್ಕಾರವು ಬೆಲೆಗಳನ್ನು ಸ್ಥಿರವಾಗಿಟ್ಟಿದೆ.

ಗ್ರಾಮೀಣ ಭಾಗದ ಮಹಿಳೆಯರು ಮರ ಮತ್ತು ಸಗಣಿಯಂತಹ ಅಪಾಯಕಾರಿ ಹೊಗೆಯಿಂದ ಮುಕ್ತರಾಗಿ, ಎಲ್‌ಪಿಜಿಯಂತಹ ಶುದ್ಧ ಇಂಧನವನ್ನು ಬಳಸುವುದನ್ನು ಮುಂದುವರಿಸಲು ಈ ಸುಧಾರಿತ ನೀತಿಯು ದೀರ್ಘಾವಧಿಯಲ್ಲಿ ದೇಶದ ಆರ್ಥಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ಬಲಪಡಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *